Weather Report: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ – Kannada News | Karnataka Weather Update: Monsoon Intensifies, Coastal and Malenadu on High Alert

ಬೆಂಗಳೂರು, ಜೂ,13: ಕರ್ನಾಟಕದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಇಂದು (ಶನಿವಾರ, ಜೂನ್ 13) ರಾಜ್ಯಾದ್ಯಂತ ಮಿಶ್ರ ಹವಾಮಾನ ವಾತಾವರಣ ಕಂಡುಬರಲಿದೆ. ಸದ್ಯ ರಾಜ್ಯದಲ್ಲಿ ಪ್ರಸ್ತುತ 24°C ತಾಪಮಾನ ದಾಖಲಾಗಿದ್ದು, ಭಾಗಶಃ ಬಿಸಿಲಿನ ವಾತಾವರಣವಿದೆ. ಆದರೆ ಮಧ್ಯಾಹ್ನದ ನಂತರ ಹವಾಮಾನದಲ್ಲಿ ತೀವ್ರ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ದೈನಂದಿನ ಮುನ್ಸೂಚನೆ ತಿಳಿಸಿದೆ.

ಇಂದಿನ ಮುನ್ಸೂಚನೆಯ ಪ್ರಕಾರ, ಹಗಲಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಶೇಕಡಾ 50 ರಷ್ಟು ಸಾಧ್ಯತೆಯಿದೆ. ಹಗಲಿನಲ್ಲಿ ಗರಿಷ್ಠ ತಾಪಮಾನವು 32°C ವರೆಗೆ ತಲುಪಲಿದ್ದು, ಉಷ್ಣಾಂಶ ಮತ್ತು ಸೆಖೆಯ ವಾತಾವರಣದ ನಡುವೆಯೇ ದಿಢೀರ್ ಮಳೆ ಸುರಿಯುವ ಮುನ್ಸೂಚನೆ ಇದೆ.

ಇನ್ನು ರಾತ್ರಿಯ ವೇಳೆಗೆ ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ, ಆಕಾಶವು ಸಂಪೂರ್ಣವಾಗಿ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ. ರಾತ್ರಿಯ ಅವಧಿಯಲ್ಲಿ ಕನಿಷ್ಠ ತಾಪಮಾನವು 24°C ಗೆ ಕುಸಿಯಲಿದ್ದು, ತಂಪಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಹಗಲಿನ ವೇಳೆ ಹೊರಗಡೆ ಹೋಗುವಾಗ ಛತ್ರಿ ಹಾಗೂ ರೇನ್‌ಕೋಟ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಒಳಿತು.

ಇನ್ನು ಕರಾವಳಿಯ ಈ ಅವಳಿ ಜಿಲ್ಲೆಗಳಲ್ಲಿ ಇಂದು ಮುಂಗಾರು ಮಳೆ ಅತ್ಯಂತ ಪ್ರಬಲವಾಗಿರಲಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ತೀರದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ದಿನದ ತಾಪಮಾನವು ಗರಿಷ್ಠ 28°C ಮತ್ತು ಕನಿಷ್ಠ 24°C ಆಸುಪಾಸಿನಲ್ಲಿರಲಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇಂದು ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಕಾರವಾರ, ಅಂಕೋಲಾ, ಕುಮಟಾ ಸೇರಿದಂತೆ ಕರಾವಳಿ ಭಾಗ ಹಾಗೂ ಶಿರಸಿ, ಸಿದ್ದಾಪುರ ಸೇರಿದಂತೆ ಘಟ್ಟದ ಮೇಲಿನ ಪ್ರದೇಶಗಳಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣವಿದ್ದು, ಬಿಟ್ಟು ಬಿಟ್ಟು ಮಳೆ ಸುರಿಯಲಿದೆ. ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆಯು ನಿಗಾ ವಹಿಸಿದೆ.

ಇದನ್ನೂ ಓದಿ: ಮುಂದಿನ 7 ದಿನ ರಾಜ್ಯಾದ್ಯಂತ ವರುಣನ ಆರ್ಭಟ: ಕರಾವಳಿಯಲ್ಲಿ ಜೂನ್ 15ರವರೆಗೆ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಮಲೆನಾಡು ಭಾಗದಲ್ಲಿ ಮುಂಗಾರು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಹಾಸನ ಜಿಲ್ಲೆಯೂ ಸೇರಿದಂತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಘಟ್ಟ ಪ್ರದೇಶಗಳಲ್ಲಿ ಇಂದು ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಹಾಗೂ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿ ಹಾಗೂ ಹಳ್ಳಕೊಳ್ಳಗಳಲ್ಲಿ ನೀರಿನ ಒಳಹರಿವು ಹೆಚ್ಚಾಗತೊಡಗಿದೆ. ಈ ಭಾಗದಲ್ಲಿ ತಾಪಮಾನವು ಗರಿಷ್ಠ 26°C ನಿಂದ 30°C ವರೆಗೆ ಇರಲಿದ್ದು, ರಾತ್ರಿ ವೇಳೆ ತಂಪಾದ ಹವಾಮಾನ ಇರಲಿದೆ. ಮಲೆನಾಡು ಮತ್ತು ಕರಾವಳಿ ಭಾಗದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ವಾಹನ ಸವಾರರು ಬಿರುಗಾಳಿ-ಮಳೆಯ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಲು ಕರಾವಳಿ ಮತ್ತು ಮಲೆನಾಡು ಜಿಲ್ಲಾಡಳಿತಗಳು ಹೈ-ಅಲರ್ಟ್ ಘೋಷಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಅನ್ಯರ ಕಾರ್ಯದಲ್ಲಿ ತೊಡಗಿ, ಸ್ವಕಾರ್ಯ ನಷ್ಟ – Kannada News | June 13 Daily Horoscope: Uncover Your Zodiac Predictions and Astrological Insights Today

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಶನಿವಾರದಂದು ಅಧಿಕಾರಕ್ಕೆ ಪ್ರಯತ್ನ, ವಸ್ತು ದಾನ, ವಾಹನ ದುರಸ್ತಿ, ಲೆಕ್ಕಪತ್ರ ಸಿದ್ಧತೆ, ಅಸ್ಪಷ್ಟ ಚಿಂತನೆ, ಧಾರ್ಮಿಕ ನಂಬಿಕೆ ಇವೆಲ್ಲ ಈ ದಿನದ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:11 – 10:48, ಯಮಗಂಡ ಕಾಲ 14:01 – 15:38, ಗುಳಿಕ ಕಾಲ 05:57 – 07:34

ಮೇಷ ರಾಶಿ :

ಧಾರ್ಮಿಕಶ್ರದ್ಧೆಯಿಂದ ನಿಮಗೆ ಅನುಕೂಲವಿದ್ದರೂ ಅದನ್ನು ಮಾಡಲು ನಿಮಗೆ ಶ್ರದ್ಧೆ, ಭಕ್ತಿಯ ಕೊರತೆ ಹೆಚ್ಚಿರಲಿದೆ‌. ಅತಿಯಾದ ಕಾಯುವಿಕೆಯಿಂದ ನಿಮ್ಮ ಗೌರವವೇ ಕಡಿಮೆಯಾಗುವುದು. ಮನೆಯಲ್ಲಿ ಸಾಕಷ್ಟು ಚಟುವಟಿಕೆಗಳಿದ್ದು, ದಿನವನ್ನು ಅತಿ ಉತ್ಸಾಹದಿಂದ ಮತ್ತು ಮುದದಿಂದ ಕೂಡಿರುತ್ತದೆ. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ.

ವೃಷಭ ರಾಶಿ :

ಹೊಸತನವನ್ನು ಹುಡುಕಲು ಆರಂಭಿಸುವಿರಿ. ವೈಯಕ್ತಿಕ ವಿಚಾರಕ್ಕೆ ಅನ್ಯರು ಪ್ರವೇಶ ಮಾಡುವುದು ಸರಿಕಾಣದು. ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ನಿಮಗೆ ಬೇಡದ್ದನ್ನು ಕೊಟ್ಟು ದಾನಶೂರತೆಯನ್ನು ಮೆರೆಯುವಿರಿ. ತನ್ನದು ಇಷ್ಟೇ ಸಾಮರ್ಥ್ಯ ಎಂಬ ತೀರ್ಮಾನಕ್ಕೆ ಬರುವಿರಿ. ಪತ್ನಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿರುವುದು.

ಮಿಥುನ ರಾಶಿ :

ನಂಬಿಕೆಯ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಸಹೋದರ ಜೊತೆ ನಿಮಗೆ ಯೋಗ್ಯ ಸಲಹೆಯು ಸಿಗಬಹುದು. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಹೊಸ ಮನೆಗಿಂತ ಹಳೆಯ ಮನೆಯೇ ಸುಖವೆನಿಸಿ, ಅಲ್ಲಿಗೇ ಬರುವಿರಿ. ನಿಮ್ಮ ಕಾಳಜಿ ಹಿಂಸೆಯಾಗಬಹುದು. ಕೆಲಸದಲ್ಲಿ ನಿರತವಾಗಿದ್ದರೆ ನೀವು ಹೆಚ್ಚು ಶಾಂತ ವಾತಾವರಣವನ್ನು ಬಯಸುವಿರಿ. ವಾಹನಭೀತಿಯಿಂದ ಮನೆಯಲ್ಲಿ ಇರುವಿರಿ. ಅಮೂಲ್ಯವಸ್ತುವಿನ ಕಳ್ಳತನವಾಗಬಹುದು.

ಕರ್ಕಾಟಕ ರಾಶಿ :

ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ಕೇಳಬಹುದು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ಹೊಸ ಕೆಲಸಗಳನ್ನು ತಂದುಕೊಳ್ಳುವ ಬಗ್ಗೆ ಯೋಜನೆ ಹಾಕುವಿರಿ. ನಿಮಗೆ ಇಂದು ಪ್ರೇಮವಿವಾಹದಿಂದ ಆಗುವ ತೊಂದರೆಗಳ ಅರಿವಾಗಬಹುದು. ವ್ಯವಹಾರದಿಂದ ಅರ್ಧಕ್ಕೆ ಕೈಬಿಡುವ ಸಾಧ್ಯತೆ ಇದೆ. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ಉತ್ಸಾಹಕ್ಕೆ ಮನೆಯಲ್ಲಿ ಹಿನ್ನಡೆಯಾಗಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡಬಹುದು.

ಸಿಂಹ ರಾಶಿ :

ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ಇಂದು ನೀವು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ. ಖಾಸಗಿ ಉದ್ಯೋಗದವರಿಗೆ ಬಡ್ತಿ ಬರಬಹುದು. ಮಲಗಿದಾಗ ಮೇಲಿಂದ ಬೀಳಬಹುದು. ಕುಟುಂಬದ ಕಾರ್ಯಕ್ರಮದಲ್ಲಿ ನಿಮ್ಮನ್ನು ಕಡೆಗಣಿಸಿದ ಅನುಭವವಾಗಲಿದೆ. ಒತ್ತಡವಿರುವ ಸಂದರ್ಭದಲ್ಲಿ ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಲೆಂದು ಏನನ್ನಾದರೂ ಹೇಳಬಹುದು.

ಕನ್ಯಾ ರಾಶಿ :

ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಕೌಶಲ್ಯಗಳು ಕೆಲಸದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಅಮೂಲ್ಯ ವಸ್ತುಗಳನ್ನು ಎಲ್ಲಿಯೂ ಪ್ರಕಟಿಸಲಾರಿರಿ. ಸ್ತ್ರೀಯರು ಕಲಹದ ಸಂದರ್ಭದಲ್ಲಿ ವಿಷಯಗಳನ್ನು ಬದಲಾಯಿಸಲು ಹಾಗೂ ಎಲ್ಲವನ್ನೂ ಮರೆಯಲು ಸುತ್ತಾಡಲು ಬಯಸಬಹುದು. ಕರ್ತವ್ಯವನ್ನು ಬಿಡಸೇ ನಿರ್ವಹಿಸಿ. ಅಪರಿಚಿತ ವ್ಯಕ್ತಿಯ ಜೊತೆ ಜಗಳವಾಡಿ ದ್ವೇಷ ಬರುವಂತೆ ಮಾಡಿಕೊಳ್ಳುವಿರಿ.

ತುಲಾ ರಾಶಿ :

ಇಂದು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನೂ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಳ್ಳುರಿ. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಆಸ್ತಿಯ ಹಂಚಿಕೆಯ ವ್ಯವಹಾರವನ್ನು ಮುಕ್ತಾಯಗೊಳಿಸಲು ಇದು ಉತ್ತಮ ದಿನ. ಎಲ್ಲದಕ್ಕೂ ಸುಲಭ ದಾರಿ ಸಿಗದು. ಕೆಲವು ಒತ್ತಡಗಳು ನಿಮ್ಮನ್ನು ಆಧ್ಯಾತ್ಮಿಕ ಸ್ಥಳದ ಕಡೆಗೆ ಹೋಗುವಂತೆ ಮಾಡಬಹುದು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿದ್ದು ಅನುಭವಿಗಳಿಂದ ಸ್ಪಷ್ಟತೆಯನ್ನು ತಂದುಕೊಳ್ಳುವಿರಿ.

ವೃಶ್ಚಿಕ ರಾಶಿ :

ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡುಹೋಗುವ ಸನ್ನಿವೇಶ ಬರಬಹುದು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ನಿಮ್ಮ ಭಕ್ತಿಯ ಪ್ರಾರ್ಥನೆಗೆ ಫಲ ಸಿಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು. ಕೆಲಸದ ಕಾರ್ಯಕ್ಷಮತೆಯು ಉನ್ನತ ಅಧಿಕಾರಿಗಳನ್ನು ಗೆಲ್ಲುತ್ತಿದೆ. ಮನಸ್ಸನ್ನು ಸುಮ್ಮನೆ ಬಿಡದೇ ಅನ್ಯ ಕಾರ್ಯದಲ್ಲಿ ತೊಡಗಿಸಿ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು.

ಧನು ರಾಶಿ :

ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಕೆಲಸದಲ್ಲಿ ಪ್ರಶಂಸೆ ನಿಮ್ಮನ್ನು ಇನ್ನೂ ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತದೆ. ಪ್ರಗತಿಯ ಪರಿಶೀಲನೆಗೆ ತೆರಳುವಿರಿ. ನೀವು ಕುಟುಂಬದ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡಬಹುದು. ಮಕ್ಕಳಿಂದ‌ ಸಂತೋಷವಾರ್ತೆ ಬರಲಿದೆ. ಮೇಲಧಿಕಾರಿಗಳ ಪ್ರಶಂಸೆಯಿಂದ ಕೆಲಸದಲ್ಲಿ ಆಸಕ್ತಿ ಬರಲಿದೆ. ಮನಸ್ಸನ್ನು ಏಕಾಗ್ರಗೊಳಿಸುವತ್ತ ಗಮನಹರಿಸಿ.

ಮಕರ ರಾಶಿ :

ನಿಮಗೆ ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಸಾಲದ ವಸೂಲಿಯನ್ನು ಬಹಳ ತಾಳ್ಮೆಯಿಂದ ಸಿಟ್ಟನ್ನೆಲ್ಲ ನಿಯಂತ್ರಣದಲ್ಲಿ ಇರಿಸಿಕೊಂಡು ಮಾಡಬೇಕಾಗುತ್ತದೆ. ನಿಮ್ಮ ಎಲ್ಲ ತಿಳಿವಳಿಕೆಯನ್ನೂ ಇನ್ನೊಬ್ಬರ ಮೇಲೆ ಹೇರುವುದು ಬೇಡ. ಹೆಚ್ಚಿನ ವೇತನದ ಯೋಜನೆ ನಿಮ್ಮ ತೆಕ್ಕೆಗೆ ಸಿಗಲಿದೆ, ಸ್ಥಿರವಾಗಿರಿ. ನೀವು ಇಂದು ಮನೆಯಲ್ಲಿನ ವಿಷಯಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಸಂಗಾತಿಯ ಜೊತೆ ಹರಟೆ ಹೊಡೆಯುವಷ್ಟು ಅವಕಾಶ ಸಿಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ಕುಂಭ ರಾಶಿ :

ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ನಿಮ್ಮ ವ್ಯವಹಾರ ಪಾಲುದಾರರನ್ನು ನಿಮ್ಮ ಕಲ್ಪನೆಗೆ ಸೇರಿಸಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನೆ ಬದಲಾವಣೆಗೆ ನಿಮ್ಮ ಸಲಹೆಯನ್ನು ಸ್ವೀಕರಿಸಲಾಗುತ್ತದೆ. ಇಂದು ಸಮಯಯನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೂ ಸುಮ್ಮನಿರುವಿರಿ. ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು.

ಮೀನ ರಾಶಿ :

ಇಂದು ನಿಮಗೆ ಬರುವ ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಮನಸ್ಸು ಶಾಂತವಾದ ಬಳಿಕ ನಿಮ್ಮ ಕಾರ್ಯಗಳನ್ನು ಆರಂಭಿಸುವುದೇ ಉತ್ತಮ.‌ ಯಾಮಾರಿದರೆ ಇರುವ ಸಂಪತ್ತು ನಷ್ಟ. ನಿರೀಕ್ಷಿತ ಹಣವು ಅಂತಿಮವಾಗಿ ನಿಮ್ಮನ್ನು ತಲುಪಬಹುದು. ವ್ಯವಹಾರದಲ್ಲಿ ನಿಮಗಾಗಿ ಒಂದು ಸುವರ್ಣ ಅವಕಾಶ ಕಾಯುತ್ತಿರಬಹುದು. ಕುಟುಂಬದ ಸದಸ್ಯರು ಆನಂದದ ಆಶ್ಚರ್ಯವನ್ನು ಕಾಯ್ದಿರಿಸುವೆರು. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಪಾ ವೈರಸ್ ಭೀತಿ ಹೆಚ್ಚಳ; ಕೇರಳ-ತಮಿಳುನಾಡು ಗಡಿಯಲ್ಲಿ ತೀವ್ರ ಕಟ್ಟೆಚ್ಚರ – Kannada News | Nipah Virus Scare; Intensifies High Alert Along Kerala Tamil Nadu Karnataka Border

ನವದೆಹಲಿ, ಜೂನ್ 12: ಕೇರಳದಲ್ಲಿ ನಿಪಾ (Nipah) ವೈರಸ್ ಹರಡಿದ ನಂತರ ರಾಜ್ಯ ಆರೋಗ್ಯ ಅಧಿಕಾರಿಗಳು ಕೇರಳ- ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಕರ್ನಾಟಕದ ಗಡಿಯಲ್ಲೂ ಹೆಚ್ಚಿನ ಅಲರ್ಟ್ ವಹಿಸಲಾಗಿದೆ. ಕೇರಳದಿಂದ ಬರುವ ಜನರಿಗೆ ಪರೀಕ್ಷೆ ನಡೆಸಿದ ನಂತರವೇ ತಮಿಳುನಾಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ ಒಬ್ಬ ವ್ಯಕ್ತಿಗೆ ನಿಪಾ ವೈರಸ್ ತಗುಲಿರುವುದು ದೃಢಪಟ್ಟಿದೆ . ಆತನ ಸಂಪರ್ಕಕ್ಕೆ ಬಂದ ಸುಮಾರು 77 ಜನರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಕೇರಳದ ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನಲ್ಲಿ ಹೆಚ್ಚಿನ ಎಚ್ಚರ ವಹಿಸಲಾಗಿದೆ.

ರಕ್ಷಣಾತ್ಮಕ ಸೂಟ್‌ಗಳು ಮತ್ತು ಫೇಸ್ ಮಾಸ್ಕ್ ಧರಿಸಿದ ಆರೋಗ್ಯ ಇಲಾಖೆಯ ಕಾರ್ಯಕರ್ತರು ಕೇರಳ -ತಮಿಳುನಾಡು ಗಡಿಯಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಕೇರಳದಿಂದ ಬರುವ ವಾಹನಗಳನ್ನು ನಿಲ್ಲಿಸಿ, ಅವುಗಳಲ್ಲಿ ಪ್ರಯಾಣಿಸುವ ಜನರಲ್ಲಿ ಜ್ವರ ಮತ್ತು ನಿಪಾ ವೈರಸ್ ಸೋಂಕಿದೆಯೇ ಎಂದು ಪರೀಕ್ಷಿಸಲಾಗುತ್ತಿದೆ. ಇದರ ನಂತರವೇ ಅವರನ್ನು ತಮಿಳುನಾಡಿಗೆ ಬರಲು ಅನುಮತಿಸಲಾಗುತ್ತದೆ.

ಇದನ್ನೂ ಓದಿ: ಕೇರಳದ ಶಾಲೆಯಲ್ಲಿ 150 ವಿದ್ಯಾರ್ಥಿಗಳಿಗೆ ದಿಢೀರನೆ ಅನಾರೋಗ್ಯ; ಕಾರಣ ನಿಗೂಢ

2018ರಲ್ಲಿ ಕೇರಳದ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಪ್ರದೇಶಗಳಲ್ಲಿ ನಿಪಾ ವೈರಸ್ ಮೊದಲು ಪತ್ತೆಯಾಗಿತ್ತು. ಪ್ರಸ್ತುತ, 43 ವರ್ಷದ ವ್ಯಕ್ತಿಯೊಬ್ಬರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ವ್ಯಕ್ತಿಯಿಂದ ತೆಗೆದ ಮಾದರಿಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಅಲ್ಲಿ ನಡೆಸಲಾದ ಪರೀಕ್ಷೆಗಳ ಆಧಾರದ ಮೇಲೆ, ಅವರಿಗೆ ನಿಪಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದರ ನಂತರ, ಅವರಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕುಟುಂಬ ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ಇತರರನ್ನು ಸಹ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ನಡುವೆ ಕೇರಳದಲ್ಲಿ ಶಿಗೆಲ್ಲಾ ವೈರಸ್ ಕೂಡ ಹರಡುತ್ತಿದೆ. ಪರೀಕ್ಷೆಯ ಆಧಾರದ ಮೇಲೆ, ವಯನಾಡ್ ಪ್ರದೇಶದ ಶಾಲಾ ಬಾಲಕಿಯೊಬ್ಬರಿಗೆ ಈ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಪ್ರಸ್ತುತ, ಈ ವಿದ್ಯಾರ್ಥಿನಿ ಸೇರಿದಂತೆ ಸುಮಾರು 9 ಜನರು ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ: Nipah Virus: ವಯನಾಡಿನ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದು ದೃಢ; ಕೇರಳದಲ್ಲಿ ಕಟ್ಟೆಚ್ಚರ

ನಿಪಾ ವೈರಸ್ ಸೋಂಕು ಬಾವಲಿಗಳು ಮತ್ತು ಹಂದಿಗಳು ಸೇರಿದಂತೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳ ಮಲ ಅಥವಾ ಲಾಲಾರಸದಿಂದ ಕಲುಷಿತಗೊಂಡ ಹಣ್ಣುಗಳನ್ನು ಮನುಷ್ಯರು ತಿಳಿಯದೆ ಸೇವಿಸಿದಾಗ ಅಥವಾ ವೈರಸ್ ಸೋಂಕಿತ ಹಂದಿಗಳು, ಕುದುರೆಗಳು ಮತ್ತು ನಾಯಿಗಳು ಸೇರಿದಂತೆ ಪ್ರಾಣಿಗಳ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ.

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಹಾಗೂ ತಮಿಳುನಾಡಿನ ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರುವ ಪ್ರಯಾಣಿಕರಿಗೆ ಜ್ವರ, ತಲೆನೋವು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಇವೆಯೇ ಎಂದು ಗಡಿಗಳಲ್ಲೇ ತಪಾಸಣೆ ನಡೆಸಲಾಗುತ್ತಿದೆ. ತರಕಾರಿ ಅಥವಾ ಹಣ್ಣುಗಳನ್ನು ಹೊತ್ತ ವಾಹನಗಳ ಮೇಲೂ ನಿಗಾ ಇಡಲಾಗಿದೆ.

ನಿಪಾ ವೈರಸ್ ಸೋಂಕಿನ ಪ್ರಮುಖ ಲಕ್ಷಣಗಳು:

  • ತೀವ್ರ ಜ್ವರ ಮತ್ತು ತೀವ್ರ ತಲೆನೋವು
  • ಸ್ನಾಯು ನೋವು ಮತ್ತು ಗಂಟಲು ನೋವು
  • ತಲೆತಿರುಗುವಿಕೆ ಮತ್ತು ವಾಂತಿ, ಅಸ್ವಸ್ಥತೆ
  • ಉಸಿರಾಟದ ತೊಂದರೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮರನಾಥ ಯಾತ್ರೆ ಭದ್ರತೆ ಪರಿಶೀಲನೆ; ಯಾತ್ರಾರ್ಥಿಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಅಮಿತ್ ಶಾ ಆದೇಶ – Kannada News | Home Minister Amit Shah Reviews Amarnath Yatra Preparation and Security in delhi

ನವದೆಹಲಿ, ಜೂನ್ 12: ಅಮರನಾಥ ಯಾತ್ರೆಯ ಭದ್ರತೆ ಕುರಿತು ಗೃಹ ಸಚಿವ ಅಮಿತ್ ಶಾ (Amit Shah) ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥರಂತಹ ಅಧಿಕಾರಿಗಳು ಭಾಗವಹಿಸಿದ್ದರು. ಈ ಯಾತ್ರೆಯ ಮಾರ್ಗದಲ್ಲಿ ಬಹು-ಪದರದ ಭದ್ರತಾ ಗ್ರಿಡ್ ಸ್ಥಾಪನೆ, ಡ್ರೋನ್‌ಗಳು ಮತ್ತು ಸಿಸಿಟಿವಿಗಳಂತಹ ಆಧುನಿಕ ತಂತ್ರಜ್ಞಾನಗಳ ವ್ಯಾಪಕ ಬಳಕೆ ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯವನ್ನು ಸುಧಾರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಯಾತ್ರಿಕರಿಗೆ ಅತ್ಯಂತ ಭದ್ರತೆ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳಿನಿಂದ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಗೃಹ ಸಚಿವಾಲಯವು ಭದ್ರತಾ ತಂತ್ರಗಳನ್ನು ರೂಪಿಸಿದೆ. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಕಣ್ಗಾವಲು ಹೆಚ್ಚಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅಮಿತ್ ಶಾ ಸೂಚಿಸಿದ್ದಾರೆ. ಅವಗಳೆಂದರೆ,

RFID ಟ್ಯಾಗ್‌ಗಳ ಕಡ್ಡಾಯ ಬಳಕೆ:

ಪ್ರತಿಯೊಬ್ಬ ಯಾತ್ರಾರ್ಥಿ ಮತ್ತು ಅವರ ವಾಹನಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಲು ‘ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್’ (RFID) ಟ್ಯಾಗ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಯಾರಾದರೂ ದಾರಿ ತಪ್ಪಿದರೆ ಅಥವಾ ಸಂಕಷ್ಟಕ್ಕೆ ಸಿಲುಕಿದರೆ ತಕ್ಷಣ ಪತ್ತೆಹಚ್ಚಬಹುದು.

ಇದನ್ನೂ ಓದಿ: ಅಮರನಾಥ ಯಾತ್ರೆಗೆ ಹೋಗಬೇಕಾ? ಏಪ್ರಿಲ್ 15ರಿಂದ ನೋಂದಣಿ ಆರಂಭ

ಡ್ರೋನ್ ಮತ್ತು ಸಿಸಿಟಿವಿ ಕಣ್ಗಾವಲು:

ಯಾತ್ರಾ ಮಾರ್ಗಗಳು, ತಂಗುದಾಣಗಳು ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ದಿನದ 24 ಗಂಟೆಯೂ ನಿಗಾ ಇಡಲು ಅತ್ಯಾಧುನಿಕ ಡ್ರೋನ್‌ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಆ್ಯಂಟಿ-ಡ್ರೋನ್ ವ್ಯವಸ್ಥೆ:

ಗಡಿ ನಿಯಂತ್ರಣ ರೇಖೆಯ (LoC) ಸಮೀಪದಿಂದ ಎದುರಾಗಬಹುದಾದ ಡ್ರೋನ್ ದಾಳಿಗಳ ಭೀತಿಯನ್ನು ಎದುರಿಸಲು ಪ್ರಮುಖ ಸ್ಥಳಗಳಲ್ಲಿ ಆ್ಯಂಟಿ-ಡ್ರೋನ್ ತಂತ್ರಜ್ಞಾನವನ್ನು ನಿಯೋಜಿಸಲಾಗುವುದು.

ಇದನ್ನೂ ಓದಿ: ಅಮರನಾಥ ಯಾತ್ರೆ ಮಾರ್ಗವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಣೆ

ಇದರ ಜೊತೆಗೆ ಯಾತ್ರಾ ಮಾರ್ಗದಲ್ಲಿ ಆಮ್ಲಜನಕದ ಕೊರತೆಯಾಗದಂತೆ ಅಗತ್ಯ ಸಿಲಿಂಡರ್‌ಗಳು ಹಾಗೂ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗುವುದು. ಹವಾಮಾನ ವೈಪರೀತ್ಯ ಅಥವಾ ಭೂಕುಸಿತ ಸಂಭವಿಸಿದರೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಯನ್ನು ಸನ್ನದ್ಧ ಸ್ಥಿತಿಯಲ್ಲಿಡುವುದು. ಯಾತ್ರಾರ್ಥಿಗಳಿಗೆ ನಿರಂತರ ವಿದ್ಯುತ್, ಕುಡಿಯುವ ನೀರು ಮತ್ತು ಸುಸಜ್ಜಿತ ರಸ್ತೆ ಸಂಪರ್ಕವನ್ನು ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಂದಿನ ಸಭೆಯಲ್ಲಿ ಸೂಚನೆ ನೀಡಲಾಯಿತು.
2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಗೃಹ ಸಚಿವ ಅಮಿತ್ ಶಾ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ಭದ್ರತಾ ಗ್ರಿಡ್ ಅನ್ನು ಬಲಪಡಿಸಲು ಮತ್ತು ಉತ್ತಮ ಸಮನ್ವಯದ ಮೂಲಕ ಬಾಬಾ ಬರ್ಫಾನಿ ಭೇಟಿಗೆ ಪ್ರಯಾಣಿಸುವ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದರು. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಮರನಾಥ ಯಾತ್ರೆಯಲ್ಲಿ ಯಾತ್ರಾರ್ಥಿಗಳಿಗೆ ಅತ್ಯುನ್ನತ ಭದ್ರತೆ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಾಲಾ ಹಿರಣ್’ ಚಿತ್ರದ ತಡೆ ಕೋರಿ ಸಲ್ಮಾನ್ ಖಾನ್ ಅರ್ಜಿ: ದೆಹಲಿ ಹೈಕೋರ್ಟ್‌ನಲ್ಲಿ ಜೂನ್ 19ರಂದು ವಿಚಾರಣೆ – Kannada News | Salman Khan Vs Kala Hiran Case Delhi High Court to hear actors Plea on 19 June

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದ ಹಿನ್ನೆಲೆಯನ್ನು ಆಧರಿಸಿ ಸಿದ್ಧವಾಗುತ್ತಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran: The Battle for Legacy) ಸಿನಿಮಾ ವಿವಾದ ಈಗ ನ್ಯಾಯಾಲಯದ ಅಂಗಳ ತಲುಪಿದೆ. ಸಲ್ಮಾನ್ ಖಾನ್ ಸಲ್ಲಿಸಿರುವ ತುರ್ತು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜೂನ್ 19ಕ್ಕೆ ನಿಗದಿಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ (Salman Khan) ಮತ್ತು ‘ಕಾಲಾ ಹಿರಣ್’ ಸಿನಿಮಾ ನಿರ್ಮಾಪಕ ನಡುವೆ ಕಾನೂನಿನ ಸಮರ ಶುರುವಾಗಿದೆ.

ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಸಲ್ಮಾನ್ ಖಾನ್ ಅವರು ಚಿತ್ರದ ನಿರ್ಮಾಣ, ಪ್ರಚಾರ ಹಾಗೂ ಬಿಡುಗಡೆಗೆ ತಕ್ಷಣವೇ ತಡೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾದ ಟೀಸರ್‌ನಲ್ಲಿ ಸಲ್ಮಾನ್ ಖಾನ್ ಅವರ ಸಾರ್ವಜನಿಕ ಇಮೇಜ್, ಅವರ ಐಕಾನಿಕ್ ಬ್ರೇಸ್‌ಲೆಟ್ ಮತ್ತು ಅವರ ವೈಯಕ್ತಿಕ ಕಾನೂನು ಹೋರಾಟದ ವಿವರವನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದಾರೆ.

ಚಿತ್ರದ ಪ್ರಚಾರದ ಉದ್ದೇಶಕ್ಕಾಗಿ ಚಿತ್ರತಂಡವು ಪರೋಕ್ಷವಾಗಿ ಸಲ್ಮಾನ್ ಖಾನ್ ಹೆಸರನ್ನು ಬಳಸಿಕೊಳ್ಳುತ್ತಿದ್ದು, ಇದರಿಂದ ಅವರ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿ, ಚಿತ್ರದ ಕೆಲಸಗಳನ್ನು ನಿಲ್ಲಿಸುವಂತೆ ಹಾಗೂ ಪ್ರಚಾರದ ವಸ್ತುಗಳನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ ನಿರ್ಮಾಪಕ ಅಮಿತ್ ಜಾನಿ ನೇತೃತ್ವದ ಚಿತ್ರತಂಡ ಇದಕ್ಕೆ ಕಿವಿಕೊಡದೆ ಸಿನಿಮಾದ ಕೆಲಸವನ್ನು ಮುಂದುವರಿಸಿದೆ.

‘ಕಾಲಾ ಹಿರಣ್’ ಚಿತ್ರದ ಟೀಸರ್:

ಅಮಿತ್ ಜಾನಿ ನಿರ್ಮಾಣದ ಈ ಚಿತ್ರವು ಸಲ್ಮಾನ್ ಖಾನ್ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ಹಗೆತನದ ಕಥೆಯನ್ನು ಹೋಲುತ್ತಿರುವುದರಿಂದ ಈಗಾಗಲೇ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಜೂನ್ 19ರಂದು ನಡೆಯಲಿರುವ ದೆಹಲಿ ಹೈಕೋರ್ಟ್ ವಿಚಾರಣೆಯು ಈ ಬಹುಚರ್ಚಿತ ಸಿನಿಮಾದ ಭವಿಷ್ಯವನ್ನು ನಿರ್ಧರಿಸಲಿದ್ದು, ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ‘ಕಾಲಾ ಹಿರನ್’ ಚಿತ್ರದ ಟೀಸರ್ ಅತ್ಯಂತ ವಿವಾದಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಸಲ್ಮಾನ್ ಖಾನ್ ಅವರನ್ನೇ ಹೋಲುವ ‘ಅಯಾನ್ ಖಾನ್’ ಪಾತ್ರವು ರಾತ್ರಿಯಲ್ಲಿ ಕಾಡಿನ ಮಧ್ಯೆ ಕೃಷ್ಣಮೃಗವನ್ನು ಬೇಟೆಯಾಡುವ ದೃಶ್ಯಗಳು ಮತ್ತು ಆ ಘಟನೆಯ ನಂತರ ಜೈಲಿನ ಒಳಗಿನಿಂದಲೇ ‘ಲಯನ್ ಬಿಷ್ಣೋಯ್’ ಎಂಬ ಪಾತ್ರವು ಮುಂಬೈ ಅಂಡರ್‌ವರ್ಲ್ಡ್‌ಗೆ ಸವಾಲು ಹಾಕುತ್ತಾ ಕೊಲೆ ಬೆದರಿಕೆ ಒಡ್ಡುವ ಡೈಲಾಗ್‌ಗಳು ಟೀಸರ್‌ನ ಹೈಲೈಟ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs AFG: ಧರ್ಮಶಾಲಾದಲ್ಲಿ ಭಾರೀ ಮಳೆ; ಮೊದಲ ಏಕದಿನ ಪಂದ್ಯ ನಡೆಯುವುದು ಅನುಮಾನ! – Kannada News | IND vs AFG ODI: Rain Threatens Dharamshala Opener; Match Preview and Weather Update

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಜೂನ್ 13 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದಾಗ್ಯೂ, ಈ ಪಂದ್ಯ ನಡೆಯುವುದು ಅನುಮಾನವಾಗಿದೆ. ಏಕೆಂದರೆ ಪಂದ್ಯ ಪ್ರಾರಂಭವಾಗುವ ಮೊದಲೇ, ಧರ್ಮಶಾಲಾದಲ್ಲಿ ಭಾರೀ ಮಳೆಯಾಗುತ್ತಿದ್ದು (Rain threat Dharamshala), ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ಪಂದ್ಯದ ದಿನ ಎಲ್ಲೋ ಅಲರ್ಟ್

ಧರ್ಮಶಾಲಾದಲ್ಲಿ ಇಂದು ಅಂದರೆ ಶುಕ್ರವಾರದಂದು ಹವಾಮಾನ ಸ್ಪಷ್ಟವಾಗಿತ್ತು. ಅಂದರೆ ಈ ದಿನ ಮಳೆಯಾಗಿರಲಿಲ್ಲ, ಬದಲಿಗೆ ಮೋಡ ಕವಿದ ವಾತಾವರಣವಿತ್ತು. ಆದಾಗ್ಯೂ, ಗುರುವಾರ ಧರ್ಮಶಾಲಾದಲ್ಲಿ ಮಳೆಯಾಗಿತ್ತು. ಇನ್ನು ಜೂನ್ 13 ರಂದು ಅಂದರೆ ಪಂದ್ಯ ನಡೆಯುವ ದಿನದಂದು ಭಾರತ ಹವಾಮಾನ ಇಲಾಖೆ ಧರ್ಮಶಾಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಎಲ್ಲೋ ಅಲರ್ಟ್​ ನೀಡಿದೆ. ಹೀಗಾಗಿ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಭೀತಿ ಉಂಟಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಜೂನ್ 13 ರಂದು ಈ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಆದಾಗ್ಯೂ, ಅಕ್ಯೂವೆದರ್ ಪ್ರಕಾರ, ದಿನದ ಶೇ. 90 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದ್ದರಿಂದ, ಪಂದ್ಯದ ಸಮಯದಲ್ಲಿ ಮಳೆಯಿಂದ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಅಭಿಮಾನಿಗಳು ಟಾಸ್ ವಿಳಂಬ ಮತ್ತು ಓವರ್‌ಗಳ ಸಂಖ್ಯೆಯಲ್ಲಿ ಕಡಿತವನ್ನು ಸಹ ನಿರೀಕ್ಷಿಸಬಹುದು.

ಪಿಚ್ ಮೇಲೆ ಪರಿಣಾಮ

ಮಳೆ ಬಂದರೆ, ಅದು ಪಿಚ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗುತ್ತದೆ. ಧರ್ಮಶಾಲಾದ ಹವಾಮಾನವು ಸಾಮಾನ್ಯವಾಗಿ ತಂಪಾಗಿರುತ್ತದೆ. ಹೀಗಾಗಿ ಗಾಳಿಯಲ್ಲಿನ ಆರ್ದ್ರತೆಯು ಚೆಂಡು ಹೆಚ್ಚು ಸ್ವಿಂಗ್ ಆಗಲು ಕಾರಣವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡೂ ತಂಡಗಳು ತಮ್ಮ ಆಡುವ ಹನ್ನೊಂದನ್ನು ಆಯ್ಕೆ ಮಾಡಬೇಕಾಗುತ್ತದೆ.

ಮುಖಾಮುಖಿ ದಾಖಲೆ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಎರಡೂ ತಂಡಗಳು ಇಲ್ಲಿಯವರೆಗೆ ನಾಲ್ಕು ಏಕದಿನ ಪಂದ್ಯಗಳನ್ನು ಆಡಿವೆ. ಈ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಇದರರ್ಥ ಅಫ್ಘಾನಿಸ್ತಾನವು ಇದುವರೆಗೆ ಒಂದೇ ಒಂದು ಏಕದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರೇನ್ ಟ್ಯೂಮರ್ ಲಕ್ಷಣಗಳು ಹೇಗಿರುತ್ತೆ ಗೊತ್ತಾ? ಮೈಗ್ರೇನ್ ಅಥವಾ ಸ್ಟ್ರೆಸ್ ಎಂದು ನಿರ್ಲಕ್ಷ್ಯ ಮಾಡದಿರಿ – Kannada News | Early Signs Of Brain Tumor That People Commonly Ignore

ಇತ್ತೀಚಿನ ದಿನಗಳಲ್ಲಿ ತಲೆನೋವು, ಒತ್ತಡ ಮತ್ತು 0 (Migraine) ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಕೆಲವೊಮ್ಮೆ ಇದೇ ಲಕ್ಷಣಗಳು ಬ್ರೇನ್ ಟ್ಯೂಮರ್ (Brain Tumor) ಎಂಬ ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು, ಆರಂಭಿಕ ಹಂತದಲ್ಲಿ ಬ್ರೇನ್ ಟ್ಯೂಮರ್ ಲಕ್ಷಣಗಳು ಸಾಮಾನ್ಯ ತಲೆನೋವಿನಂತೆ ಕಾಣುವುದರಿಂದ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನ್ಯೂರೋ ಸರ್ಜನ್‌ಗಳ ಪ್ರಕಾರ, ನಿರಂತರ ತಲೆನೋವು, ದೃಷ್ಟಿ ಸಮಸ್ಯೆ, ವಾಂತಿ, ಸಮತೋಲನ ಕಳೆದುಕೊಳ್ಳುವುದು ಅಥವಾ ಮಾತಿನಲ್ಲಿ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಹಾಗಾದರೆ ಸಾಮಾನ್ಯ ತಲೆನೋವು ಮತ್ತು ಬ್ರೇನ್ ಟ್ಯೂಮರ್ ಗಿರುವ ವ್ಯತ್ಯಾಸವೇನು, ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯ ತಲೆನೋವಿಗಿಂತ ವಿಭಿನ್ನವಾದ ನೋವು:

ಬ್ರೇನ್ ಟ್ಯೂಮರ್‌ನಿಂದ ಉಂಟಾಗುವ ತಲೆನೋವು ಸಾಮಾನ್ಯ ಒತ್ತಡದ ತಲೆನೋವಿನಂತಿರದು. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಸಮಯದಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಕೆಮ್ಮಿದಾಗ, ತಲೆ ತಗ್ಗಿಸಿದಾಗ ಅಥವಾ ಮಲಗಿದಾಗ ನೋವು ಹೆಚ್ಚಾಗಬಹುದು. ಇದನ್ನು ನಿದ್ರಾಹೀನತೆ ಅಥವಾ ಮೈಗ್ರೇನ್ ಎಂದು ನಿರ್ಲಕ್ಷ್ಯ ಮಾಡುವುದು ಅಪಾಯಕಾರಿಯಾಗಿದೆ.

ನಿರಂತರ ವಾಂತಿ ಮತ್ತು ವಾಕರಿಕೆ:

ಬೆಳಿಗ್ಗೆ ಎದ್ದ ಕೂಡಲೇ ವಾಕರಿಕೆ ಅಥವಾ ವಾಂತಿ ಆಗುವುದು ಕೂಡ ಪ್ರಮುಖ ಲಕ್ಷಣವಾಗಿದೆ. ಮೆದುಳಿನ ಒಳಭಾಗದಲ್ಲಿ ಒತ್ತಡ ಹೆಚ್ಚಾದಾಗ ಈ ಸಮಸ್ಯೆ ಕಾಣಿಸಬಹುದು. ಹಲವರು ಇದನ್ನು ಅಜೀರ್ಣ ಅಥವಾ ಆಸಿಡ್ ಸಮಸ್ಯೆ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ.

ದೃಷ್ಟಿ ಸಮಸ್ಯೆ:

ಬ್ರೇನ್ ಟ್ಯೂಮರ್ ಮೆದುಳಿನ ದೃಷ್ಟಿಯನ್ನು ನಿಯಂತ್ರಿಸುವ ಭಾಗದ ಮೇಲೆ ಪರಿಣಾಮ ಬೀರಿದರೆ, ಮಸುಕಾಗಿ ಕಾಣುವುದು, ಡಬಲ್ ವಿಸನ್, ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು ಅಥವಾ ಕೆಲ ಕ್ಷಣ ದೃಷ್ಟಿ ಕಳೆದುಕೊಂಡಂತೆ ಆಗಬಹುದು. ಆದರೆ ಮೊಬೈಲ್ ಹೆಚ್ಚು ಬಳಸುವುದರಿಂದಲೂ ಈ ರೀತಿ ಆಗುತ್ತದೆ ಎಂದು ನಿರ್ಲಕ್ಷ್ಯ ಮಾಡಬಾರದು.

ಇದನ್ನೂ ಓದಿ: ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ

ನೆನಪಿನ ಶಕ್ತಿ ಮತ್ತು ಮಾತನಾಡುವಾಗ ಸಮಸ್ಯೆ:

ಯಾವುದಾದರೂ ಮುಖ್ಯ ವಿಷಯವನ್ನು ಮರೆತುಹೋಗುವುದು, ಸರಿಯಾಗಿ ಗಮನ ಕೇಂದ್ರೀಕರಿಸಲಾಗದಿರುವುದು ಅಥವಾ ಮಾತನಾಡುವಾಗ ಪದಗಳು ನೆನಪಿಗೆ ಬರದಿರುವುದು ಕೂಡ ಬ್ರೇನ್ ಟ್ಯೂಮರ್‌ನ ಸೂಚನೆಯಾಗಿರಬಹುದು.

ಸಮತೋಲನ ಕಳೆದುಕೊಳ್ಳುವುದು: ನಡೆಯುವಾಗ ವಾಲುವುದು, ತಲೆಸುತ್ತು, ದೇಹದ ಸಮತೋಲನ ತಪ್ಪುವುದು ಅಥವಾ ಬೇಗ ದಣಿವಾಗುವುದು ಕೂಡ ಎಚ್ಚರಿಕೆಯ ಲಕ್ಷಣಗಳಾಗಿವೆ.

ಚಿಕಿತ್ಸೆ ಹೇಗೆ?

ಬ್ರೇನ್ ಟ್ಯೂಮರ್ ಚಿಕಿತ್ಸೆಯು ಅದರ ಗಾತ್ರ, ಪ್ರಕಾರ ಮತ್ತು ಇರುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಸರ್ಜರಿ, ರೇಡಿಯೇಷನ್ ಥೆರಪಿ ಮತ್ತು ಕಿಮೋಥೆರಪಿ ಸೇರಿದಂತೆ ಹಲವು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ – Kannada News | Jailer Siddaramappa Dies In Dharwad, Wife alleges On DGP Alok Kumar

ಧಾರವಾಡ, (ಜೂನ್ 12): ಅಮಾನತುಗೊಂಡು ಬಳಿಕ ಧಾರವಾಡದಿಂದ ಮೈಸೂರಿಗೆ ವರ್ಗಾವಣೆಗೊಂಡಿದ್ದ ಜೈಲರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಕಾರಾಗೃಹದ ಕ್ವಾರ್ಟರ್ಸ್​ ನಲ್ಲಿ ನಡೆದಿದೆ. ಸಿದ್ದರಾಮಪ್ಪ ವಡ್ಡರ್(37) ಆತ್ಮಹತ್ಯೆ ಮಾಡಿಕೊಂಡ ಜೈಲರ್. ಕರ್ತವ್ಯಲೋಪ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಸಿದ್ದರಾಮಪ್ಪನನ್ನು ಅಮಾನತ್ತು ಮಾಡಲಾಗಿತ್​ತು. ಬಳಿಕ ಧಾರವಾಡದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೂ ಸಹ ಮೈಸೂರಿನಲ್ಲಿ ವರದಿ ಮಾಡಿಕೊಂಡಿರಲಿಲ್ಲ. ಬದಲಿಗೆ ನೇಣಿಗೆ ಶರಣಾಗಿದ್ದಾನೆ. ಇನ್ನು ಈ ಆತ್ಮಹತ್ಯೆಗೆ ಕಾರಗೃಹ ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಸಿದ್ದರಾಮಪ್ಪನ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯೆಸಿದ ಮೃತ ಸಿದ್ದರಾಮಪ್ಪನ ಪತ್ನಿ ಲಕ್ಷ್ಮೀ, ಅಲೋಕ್ ಕುಮಾರ್ ಅವರೇ ನನ್ನ‌ ಗಂಡನ ಜೀವ ಪಡೆದರು. ಸಸ್ಪೆಂಡ್ ‌ಮಾಡಿದ್ದಾರೆ. ಮುಂದೆ ಜೈಲಿಗೆ ಕಳಿಸುತ್ತಾರೆ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಸಸ್ಪೆಂಡ್ ‌ಮಾಡಿದ್ದು, ಇದೀಗ ಮೈಸೂರಿಗೆ ವರ್ಗಾವಣೆ ‌ಮಾಡಿದ್ದರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದರು. ಆದರೆ ತಂದೆ, ತಾಯಿ ಮುಖ ನೋಡಿ ಹೋಗುತ್ತೇನೆ ಅಂದಿದ್ದರು. ಆದರೆ ಇದೀಗ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ‌ ಮೇಲೆ ಕ್ರಮ ಆಗುತ್ತೆ ಏನು ಮಾಡಬೇಕು ಅನ್ನುತ್ತಿದ್ದರು. ಯಾವಾಗಲೂ ನನ್ನ ಅಲೋಕ್ ‌ಕುಮಾರ್ ಜೈಲಿಗೆ ‌ಕಳಿಸುತ್ತಾರೆ ಅನ್ನುತ್ತಿದ್ದರು ಎಂದು ಎಂದು ಆರೋಪಿಸಿದ್ದಾರೆ.

Source link

‘ಧಮಾಲ್ 4’ ಟ್ರೇಲರ್ ರಿಲೀಸ್: ಅಜಯ್ ದೇವಗನ್ ಗ್ಯಾಂಗ್‌ನಿಂದ ಮತ್ತೆ ಕಾಮಿಡಿ ಹಂಗಾಮಾ – Kannada News | Ajay Devgn Arshad Warsi Dhamaal 4 Movie Trailer released

ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಫ್ರಾಂಚೈಸಿಗಳಲ್ಲಿ ಒಂದಾದ ‘ಧಮಾಲ್’ ಸರಣಿಯ ಬಹುನಿರೀಕ್ಷಿತ ‘ಧಮಾಲ್ 4’ ಚಿತ್ರದ ಟ್ರೇಲರ್ (Dhamaal 4 Trailer) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮುಂಬೈ ಹೊರವಲಯದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ‘ಇಮ್ಯಾಜಿಕಾ’ದಲ್ಲಿ ಚಿತ್ರತಂಡವು ವಿಭಿನ್ನವಾದ ಇಮರ್ಸಿವ್ ಶೈಲಿಯಲ್ಲಿ ಟ್ರೇಲರ್ ಲಾಂಚ್ ಮಾಡಿದ್ದು, ಸಿನಿಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಕಾಮಿಡಿ ಪ್ರಿಯರಿಗೆ ‘ಧಮಾಲ್ 4’ (Dhamaal 4) ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ.

ಚಿತ್ರದ ಟ್ರೇಲರ್ ಎಂದಿನಂತೆ ನಗು, ಸಾಹಸ ಮತ್ತು ಗೊಂದಲಗಳ ಮಹಾಪೂರವನ್ನೇ ಹೊತ್ತು ತಂದಿದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನಗುವಂತಹ ಕಚಗುಳಿ ಇಡುವ ದೃಶ್ಯಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿವೆ. ಈ ಬಾರಿ ಧಮಾಲ್ ಗ್ಯಾಂಗ್‌ಗೆ ಬಂಗಾರದ ಬೆಟ್ಟದಂತಹ ದೊಡ್ಡ ನಿಧಿಯೊಂದರ ಸುಳಿವು ಸಿಗುತ್ತದೆ. ಅದನ್ನು ಹುಡುಕಿಕೊಂಡು ಹೊರಡುವ ಇಡೀ ಗ್ಯಾಂಗ್ ಸಿಕ್ಕಿಬೀಳುವ ಹಾಸ್ಯಾಸ್ಪದ ಸನ್ನಿವೇಶಗಳು, ಕಾಡಿನ ಸಾಹಸಗಳು ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳು ಟ್ರೇಲರ್‌ನಲ್ಲಿ ಭರಪೂರ ಮನರಂಜನೆ ನೀಡುವ ಭರವಸೆ ಮೂಡಿಸಿವೆ.

‘ಧಮಾಲ್ 4’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಒಂದಾಗಿದೆ. ಅಜಯ್ ದೇವ್ಗನ್, ಅರ್ಶದ್ ವಾರ್ಸಿ, ರಿತೇಶ್ ದೇಶ್‌ಮುಖ್, ಜಾವೇದ್ ಜಾಫೇರಿ ಮತ್ತು ಸಂಜಯ್ ಮಿಶ್ರಾ ಮುಖ್ಯ ಭೂಮಿಕೆಯಲ್ಲಿ ಮರಳಿದ್ದಾರೆ. ಇವರ ಜೊತೆಗೆ ಇಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಾಯೆ, ವಿಜಯ್ ಪಾಟ್ಕರ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಧಮಾಲ್ 4’ ಸಿನಿಮಾದ ಟ್ರೇಲರ್:

ಈ ಚಿತ್ರವನ್ನು ಹಿರಿಯ ನಿರ್ದೇಶಕ ಇಂದ್ರ ಕುಮಾರ್ ನಿರ್ದೇಶಿಸಿದ್ದು, ಅಜಯ್ ದೇವ್ಗನ್, ಭೂಷಣ್ ಕುಮಾರ್, ಕ್ರಿಷಣ್ ಕುಮಾರ್ ಸೇರಿದಂತೆ ಪ್ರಮುಖರು ಜಂಟಿಯಾಗಿ ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಜುಲೈ 10ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮೊದಲಿನ 3 ಸಿನಿಮಾಗಳ ರೀತಿಯೇ ‘ಧಮಾಲ್ 4’ ಕೂಡ ಭರ್ಜರಿ ಮನರಂಜನೆ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ಧಮಾಲ್ ಸರಣಿಯ ಇತಿಹಾಸ:

ಧಮಾಲ್ (2007): ನಾಲ್ಕು ಜನ ಸೋಮಾರಿ ಗೆಳೆಯರು ಗೋವಾದಲ್ಲಿ ಬಚ್ಚಿಟ್ಟ ಕೋಟ್ಯಂತರ ರೂಪಾಯಿ ನಿಧಿಯನ್ನು ಹುಡುಕುವ ಕಥೆಯೊಂದಿಗೆ ಈ ಸರಣಿ ಆರಂಭವಾಗಿ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಸಂಜಯ್ ದತ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.

ಡಬಲ್ ಧಮಾಲ್ (2011): ಮೊದಲ ಭಾಗದ ಮುಂದುವರಿದ ಕಥೆಯಾಗಿ ತೆರೆಕಂಡು ಯಶಸ್ವಿಯಾಗಿತ್ತು.

ಟೋಟಲ್ ಧಮಾಲ್ (2019): ಹೊಸ ಪಾತ್ರಗಳು ಮತ್ತು ಅಜಯ್ ದೇವ್ಗನ್ ಎಂಟ್ರಿಯೊಂದಿಗೆ ಸ್ಟ್ಯಾಂಡ್-ಅಲೋನ್ ರಿಬೂಟ್ ಆಗಿ ಬಂದು ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ ಅದೇ ಯಶಸ್ಸಿನ ಸರಣಿಯಲ್ಲಿ ನಾಲ್ಕನೇ ಭಾಗವಾಗಿ ‘ಧಮಾಲ್ 4’ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಡಿಕೆ ಶಿವಕುಮಾರ್ ಇಟ್ಟ 9 ಬೇಡಿಕೆಗಳು ಹೀಗಿವೆ

ನವದೆಹಲಿ, (ಜೂನ್ 12): ಡಿಕೆ ಶಿವಕುಮಾರ್ (DK Shivakumar)  ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದೆಹಲಿಯಲ್ಲಿ (New Delhi) ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದು, ತಮ್ಮ ಮೊದಲ ಸಭೆಯಲ್ಲಿ ಕೆಲ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಿ ಕರ್ನಾಟಕದ (Karnataka) ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಮಾಡಿದ್ದಾರೆ. ಇನ್ನು ಇಂದು (ಜೂನ್ 12) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನೂ ಸಹ ಭೇಟಿ ಮಾಡಿದ್ದು, ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಲು ಮನವಿ ಮಾಡಿದ್ದಾರೆ. ಅಲ್ಲದೇ ಈ ವೇಳೆ ಒಂಭತ್ತು ಬೇಡಿಕೆಗಳ ಮನವಿಯನ್ನೂ ಸಲ್ಲಿಕೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
  • ದೆಹಲಿಯ ಕರ್ತವ್ಯಭವನದಲ್ಲಿ ಅಮಿತ್ ಶಾ ಭೇಟಿಯಾಗಿ ಮಹತ್ವದ ಚರ್ಚೆ
  • ಇದೇ ವೇಳೆ ಅಮಿತ್ ಶಾ ಮುಂದೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಒಂಭತ್ತು ಬೇಡಿಕೆಗಳನ್ನಿಟ್ಟ ಡಿಕೆಶಿ

ಇದನ್ನೂ ಓದಿ: ಒಂದು ಭೇಟಿ, ಹತ್ತಾರು ಬೇಡಿಕೆ: ಪ್ರಧಾನಿ ಮೋದಿ ಮುಂದೆ ಡಿಕೆಶಿ ಇಟ್ಟ ಬೇಡಿಕೆಗಳಾವುವು? ಇಲ್ಲಿದೆ ಪಟ್ಟಿ

ಅಮಿತ್ ಶಾ ಮುಂದೆ ಡಿಕೆಶಿ ಇಟ್ಟ 9 ಬೇಡಿಕೆಗಳು

  1. ಕರ್ನಾಟಕ ರಾಜ್ಯ ಪೊಲೀಸ್‌ಗೆ ‘ಪ್ರೆಸಿಡೆಂಟ್ಸ್ ಕಲರ್’ (ರಾಷ್ಟ್ರಪತಿಗಳ ಅತ್ಯುನ್ನತ ಗೌರವ) ಪ್ರಶಸ್ತಿ:
    ಕರ್ನಾಟಕ ರಾಜ್ಯ ಪೊಲೀಸ್‌ಗೆ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿಯನ್ನು ನೀಡುವ ಕುರಿತಾದ ಪ್ರಸ್ತಾವನೆಯನ್ನು 08-05-2024 ರಂದು ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪ್ರಸ್ತುತ ಅದು ಪರಿಶೀಲನೆಯಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇನ್ನು ಸಹ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಬೇಕಾಗಿದೆ. ಈ ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ನೀಡಲು ಅನುಮೋದನೆ ನೀಡಬೇಕು.
  2. ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸೃಷ್ಟಿ: ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಇನ್ನೂ ಎರಡು ಹೆಚ್ಚುವರಿ ಐಆರ್‌ಬಿ (IRB) ಬೆಟಾಲಿಯನ್‌ಗಳನ್ನು ಸ್ಥಾಪಿಸಲು ಅಂದಾಜು 243.87 ಕೋಟಿ ರೂ.ಗಳ ವೆಚ್ಚದ ಹೊಸ ಪ್ರಸ್ತಾವನೆಯನ್ನು ಪತ್ರ ಸಂಖ್ಯೆ HD/133/POP/2024 ದಿನಾಂಕ 04-02-2025 ರ ಮೂಲಕ ಸಚಿವಾಲಯಕ್ಕೆ ಕಳುಹಿಸಲಾಗಿದೆ.ಇದಕ್ಕೆ ಶೀಘ್ರವಾಗಿ ಮಂಜೂರಾತಿ ನೀಡಬೇಕೆಂದು ನಾನು ವಿನಂತಿಸುತ್ತೇನೆ.
  3. ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು (ASUMP) – 2025-26:ನಾಲ್ಕು ಪ್ರಮುಖ ನಗರಗಳಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು ಹಾಗೂ ಸಂವಹನ ಉಪಕರಣಗಳ ಸ್ಥಾಪನೆಗಾಗಿ ASUMP ಯೋಜನೆಯಡಿ 280.00 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಮಂಜೂರಾತಿ ನೀಡಬೇಕು.
  4. ಕಂಪನಿಗಳ ಕಾಯ್ದೆ, 2013 ರ ಶೆಡ್ಯೂಲ್ VII ರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳ ಸೇರ್ಪಡೆ (CSR): ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕಂಪನಿಗಳ ಕಾಯ್ದೆ, 2013 ರ ಶೆಡ್ಯೂಲ್ VII ರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳನ್ನು ಸೇರಿಸುವ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಶೀಘ್ರವಾಗಿ ಅನುಮೋದನೆ ನೀಡಬೇಕು.
  5.  ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮೇಲ್ದರ್ಜೀಕರಣ:BPR&D ಯ ಗ್ಯಾಪ್ ಅನಾಲಿಸಿಸ್ (GAP Analysis) ಮಾರ್ಗಸೂಚಿಗಳ ಪ್ರಕಾರ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು 258.53 ಕೋಟಿ ರೂ.ಗಳ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗಿದೆಇದಕ್ಕೆ ನಿಮ್ಮ ಅನುಮೋದನೆ ಕೋರುತ್ತೇನೆ.
  6. ಕಾರಾಗೃಹಗಳ (ಜೈಲುಗಳ) ಆಧುನೀಕರಣ: ಕಾರಾಗೃಹಗಳ ಆಧುನೀಕರಣ ಯೋಜನೆಯಡಿ 2025-26 ರ ಆರ್ಥಿಕ ವರ್ಷಕ್ಕೆ (ಸಿಸಿಟಿವಿ, ವಾಕಿ-ಟಾಕಿ ಮತ್ತು ಇತರ ಭದ್ರತಾ ಉಪಕರಣಗಳ ಖರೀದಿಗೆ) 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೊತ್ತವನ್ನು ಶೀಘ್ರ ಮಂಜೂರು ಮಾಡಬೇಕು.
  7.  ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ರ ನಿಯಮ 52-A ಅನುಷ್ಠಾನದ ಗಡುವು ವಿಸ್ತರಣೆ: ಕರ್ನಾಟಕದಲ್ಲಿ ನಿಯಮ 52-A ಅನ್ನು ಅನುಷ್ಠಾನಗೊಳಿಸಲು ಗಡುವನ್ನು ವಿಸ್ತರಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ದಯವಿಟ್ಟು ತಾವು ಈ ವಿಷಯವನ್ನು ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸಿ, ಆದಷ್ಟು ಬೇಗ ಅನುಮೋದನೆ ಕೊಡಿಸಬೇಕು.
  8.  ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳ ಮೇಲ್ದರ್ಜೀಕರಣ: ಗೌರವಾನ್ವಿತ ಭಾರತದ ಸುಪ್ರೀಂ ಕೋರ್ಟ್ ಮುಂದೆ ನಡೆದ ಚರ್ಚೆಗಳ ಅನುಸಾರ, ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೆ ಏರಿಸಲು ASUMP ಅಡಿಯಲ್ಲಿ 278.26 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಪರಿಗಣಿಸಬೇಕು.
  9.  ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್ (K4C) ಸ್ಥಾಪನೆ: ಸೈಬರ್ ಅಪರಾಧಗಳು ಸಮಾಜ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಹಾಗೂ ನಿರಂತರ ಸವಾಲನ್ನು ಒಡ್ಡುತ್ತಿವೆ. ಇವುಗಳನ್ನು ನಿಗ್ರಹಿಸಲು ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆ ಅಗತ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version