ಹೊರಗೆ ಸಿಗುವ ಮಾವಿನ ಜ್ಯೂಸ್ ಇಷ್ಟಪಟ್ಟು ಕುಡಿಯುತ್ತೀರಾ? ಹಾಗಿದ್ರೆ ನೀವು ಈ ಸ್ಟೋರಿ ಓದಲೇಬೇಕು – Kannada News

ಇತ್ತೀಚೆಗೆ ಗುಜರಾತ್‌ನಲ್ಲಿ ಹಾಳಾಗಿರುವ, ಹುಳ ಬಿದ್ದ ಮಾವಿನ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಹಾಳಾದ ಹಣ್ಣುಗಳನ್ನು ವಶಪಡಿಸಿಕೊಂಡಿದ್ದರು. ಈ ಘಟನೆ ಬಳಿಕ ಹೊರಗೆ ಸಿಗುವ ಜ್ಯೂಸ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ಸ್ವಲ್ಪ ಹೆಚ್ಚು ಹಣ್ಣಾದದ್ದು ಸಾಮಾನ್ಯವಾಗಿ ದೊಡ್ಡ ಸಮಸ್ಯೆ ಉಂಟುಮಾಡದೇ ಇರಬಹುದು. ಆದರೆ ಕೊಳೆತ ಅಥವಾ ಸಣ್ಣ ಹುಳ ಇರುವ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಕೀಟಗಳು ವೇಗವಾಗಿ ಬೆಳೆಯುತ್ತವೆ. ಮೇಲ್ನೋಟಕ್ಕೆ ಸ್ವಲ್ಪ ಭಾಗದಲ್ಲಿ ಮಾತ್ರ ಕಾಣಿಸಿಕೊಂಡರೂ ಅದರ ವಿಷಕಾರಿ ಅಂಶ ಹಣ್ಣಿನ ಒಳಭಾಗಕ್ಕೂ ಹರಡಿರಬಹುದು. ಹಾಗಾದರೆ ಈ ರೀತಿ ಹೊರಗಡೆ ಕುಡಿಯುವ ಜ್ಯೂಸ್ ಎಷ್ಟು ಆರೋಗ್ಯಕ್ಕೆ ಒಳ್ಳೆಯದು, ಒಂದು ವೇಳೆ ಹಾಳಾಗಿರುವ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ ಏನಾಗಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಳಾದ ಜ್ಯೂಸ್ ಕುಡಿದರೆ ಏನಾಗಬಹುದು?

ತಜ್ಞರ ಪ್ರಕಾರ, ಸ್ವಲ್ಪ ಹಾಳಾದ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿದರೂ ಕೂಡ ದೇಹಕ್ಕೆ ಹಾನಿಕರ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶಗಳು ದೇಹದೊಳಗೆ ಹೋಗಬಹುದು. ಜೊತೆಗೆ ಹೊಟ್ಟೆನೋವು, ವಾಂತಿ, ಹೊಟ್ಟೆ ಉಬ್ಬರ, ಜ್ವರ, ಫುಡ್ ಪಾಯ್ಸನಿಂಗ್ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಫಂಗಸ್‌ನಿಂದ ಕಂಡುಬರುವ “ಮೈಕೋಟಾಕ್ಸಿನ್” ಎಂಬ ವಿಷಕಾರಿ ಅಂಶ ಯಕೃತ್ ಮತ್ತು ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಮಕ್ಕಳಿಗೆ ಮತ್ತು ವೃದ್ಧರಿಗೆ ಹೆಚ್ಚು ಅಪಾಯ

ಹುಳು ಬಿದ್ದ ಹಣ್ಣುಗಳಲ್ಲಿ ಅಪಾಯಕಾರಿ ಕೀಟಾಣುಗಳು ಇರುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ.

ಇದನ್ನೂ ಓದಿ: ಹಾಲು ಹಾಕಿದ ಚಹಾ ಕುಡಿದರೆ ಅಸಿಡಿಟಿ ಆಗುತ್ತಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ ಪಾಲಿಸಿ ನೋಡಿ

ರಾಸಾಯನಿಕಗಳಿಂದ ಹಣ್ಣನ್ನು ಗುರುತಿಸುವುದು ಹೇಗೆ?

ಕೆಲ ವ್ಯಾಪಾರಿಗಳು “ಕ್ಯಾಲ್ಸಿಯಂ ಕಾರ್ಬೈಡ್” ಬಳಸಿ ಕೃತಕವಾಗಿ ಹಣ್ಣಾಗಿಸುತ್ತಾರೆ. ಇಂತಹ ಹಣ್ಣುಗಳಲ್ಲಿ ಒಂದೇ ತರದ ಗಾಢ ಹಳದಿ ಬಣ್ಣ, ರುಚಿಯಲ್ಲಿ ಅಸಹಜತೆ, ಕಡಿಮೆ ರಸ, ನೀರಿನಲ್ಲಿ ತೇಲುವ ಗುಣ ಕಾಣಿಸಬಹುದು.

ಜ್ಯೂಸ್ ಕುಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?

  • ನಿಮ್ಮ ಎದುರಲ್ಲೇ ಹಣ್ಣು ಕತ್ತರಿಸಿ ಜ್ಯೂಸ್ ಮಾಡಿಸಿಕೊಳ್ಳಿ
  • ಮುಂಚಿತವಾಗಿ ತಯಾರಿಸಿದ ಪಲ್ಪ್ ಅಥವಾ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ
  • ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸಿ
  • ಸಾಧ್ಯವಾದರೆ ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸಿ ಕುಡಿಯಿರಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜೈಲರ್ 2’ ಚಿತ್ರತಂಡಕ್ಕೆ ಸೇರ್ಪಡೆಯಾದ ಹೃತಿಕ್ ರೋಷನ್; ರಜನಿ ಜೊತೆ 2 ದಿನ ಶೂಟಿಂಗ್ – Kannada News

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದ ಸೀಕ್ವೆಲ್ ‘ಜೈಲರ್ 2’ (Jailer 2) ಬಗ್ಗೆ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ತಲೈವಾ ಜೊತೆ ಬಾಲಿವುಡ್‌ನ ಯಾವ ಸ್ಟಾರ್ ನಟ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ತಾಜಾ ವರದಿಗಳ ಪ್ರಕಾರ, ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ (Hrithik Roshan) ಈ ಚಿತ್ರದ ಪ್ರಮುಖ ಅತಿಥಿ ಪಾತ್ರಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಈ ಪಾತ್ರಕ್ಕಾಗಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಶಾರುಖ್ ಖಾನ್ ಅವರು ಸದ್ಯ ತಮ್ಮ ಮುಂಬರುವ ಚಿತ್ರ ‘ಕಿಂಗ್’ ಸೇರಿದಂತೆ ಹಲವು ಪೂರ್ವ ನಿಯೋಜಿತ ಶೂಟಿಂಗ್ ಶೆಡ್ಯೂಲ್‌ಗಳಲ್ಲಿ ಬ್ಯುಸಿಯಾಗಿರುವುದರಿಂದ, ಡೇಟ್ಸ್ ಹೊಂದಿಸಲು ಸಾಧ್ಯವಾಗದೆ ‘ಜೈಲರ್ 2’ ಸಿನಿಮಾದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಶಾರುಖ್ ಅವರ ನಿರ್ಗಮನದ ಬೆನ್ನಲ್ಲೇ ಚಿತ್ರತಂಡ ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಿದ್ದು, ಅವರು ಚಿತ್ರಕಥೆ ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

‘ವೆರೈಟಿ ಇಂಡಿಯಾ’ ವರದಿಯ ಪ್ರಕಾರ, ಹೃತಿಕ್ ರೋಷನ್ ಜೂನ್ 22 ಮತ್ತು 23ರಂದು ಚೆನ್ನೈನಲ್ಲಿ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹೃತಿಕ್ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ರಹಸ್ಯವಾಗಿಡಲಾಗಿದ್ದರೂ, ಇದು ಕೇವಲ ಬಂದು ಹೋಗುವ ಸಾಧಾರಣ ಅತಿಥಿ ಪಾತ್ರವಲ್ಲ ಎನ್ನಲಾಗಿದೆ. ಚಿತ್ರದ ಕಥೆ ಒಂದು ಪ್ರಮುಖ ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ಅವರ ಪಾತ್ರದ ಎಂಟ್ರಿಯಾಗಲಿದೆ.

ರಜನಿಕಾಂತ್ ಅವರ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರಕ್ಕೆ ಸಹಾಯ ಮಾಡುವ ಮೂಲಕ ಇಡೀ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಈ ಪಾತ್ರ ಅತ್ಯಂತ ನಿರ್ಣಾಯಕವಾಗಿರಲಿದೆ. ಇದಕ್ಕಾಗಿ ಚಿತ್ರತಂಡ ಹೃತಿಕ್ ರೋಷನ್ ಅವರಿಗೆ ಸಂಪೂರ್ಣವಾಗಿ ವಿಭಿನ್ನ ಹಾಗೂ ಹೊಸ ಲುಕ್ ವಿನ್ಯಾಸಗೊಳಿಸುತ್ತಿದೆ. ಜೂನ್ 22ರಂದು ಕ್ಯಾಮೆರಾ ಮುಂದೆ ನಿಲ್ಲುವ ಮುನ್ನವೇ ಹೃತಿಕ್ ಅವರಿಗೆ ವಿಶೇಷ ಲುಕ್ ಟೆಸ್ಟ್ ಕೂಡ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ಹೃತಿಕ್ ರೋಷನ್ ‘ಜೈಲರ್ 2’ ಚಿತ್ರತಂಡ ಸೇರಿರುವುದು ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಹೌದು, ಬರೋಬ್ಬರಿ 40 ವರ್ಷಗಳ ಹಿಂದೆ ಅಂದರೆ 1986ರಲ್ಲಿ ತೆರೆಕಂಡ ‘ಭಗವಾನ್ ದಾದಾ’ ಚಿತ್ರದಲ್ಲಿ ಹೃತಿಕ್ ರೋಷನ್ ಬಾಲನಟನಾಗಿ ರಜನಿಕಾಂತ್ ಜೊತೆ ನಟಿಸಿದ್ದರು. ಆ ಸಿನಿಮಾದಲ್ಲಿ ರಜನಿಕಾಂತ್ ಅವರ ಸಾಕುಮಗನ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಂಡಿದ್ದರು. ಈಗ ದಶಕಗಳ ನಂತರ ಇಬ್ಬರು ಸೂಪರ್ ಸ್ಟಾರ್‌ಗಳು ಮತ್ತೆ ಒಟ್ಟಿಗೆ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್​​ಗೆ ಈಗಾಗಲೇ ಹಣ ಕಟ್ಟಿದ್ರೆ ವಾಪಸ್ ಸಿಗಲಿದೆ; ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ – Kannada News

ಬೆಂಗಳೂರು, ಜೂ.11: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಶಕ್ತಿ ಯೋಜನೆಯಡಿ ಇದುವರೆಗೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು, ಇದೀಗ ಗಂಡು ಮಕ್ಕಳಿಗೂ ವಿಸ್ತರಿಸುವ ಮೂಲಕ ರಾಜ್ಯದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿಗಳಿಗೆ ಈ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಣೆ ಮಾಡಿದ್ದರು. ಅದರಂತೆ ಈಗ ಸಾರಿಗೆ ಇಲಾಖೆಯು ಯೋಜನೆ ಜಾರಿಗೆ ಸಂಪೂರ್ಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಗೈಡ್‌ಲೈನ್ಸ್ ಬಿಡುಗಡೆಯಾಗಲಿದೆ. ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ನೆರವು ಸಿಗಲಿದೆ.

ಉಚಿತ ಬಸ್ ಪಾಸ್ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಇನ್ನು ಒಂದೆರಡು ದಿನಗಳಲ್ಲಿ ತಮ್ಮ ಹತ್ತಿರದ ‘ಕರ್ನಾಟಕ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಲ್ಲಿಸುವ ದಾಖಲಾತಿಗಳು ಹಾಗೂ ಅರ್ಜಿಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ, ಸಂಪೂರ್ಣ ಉಚಿತವಾಗಿ ಬಸ್ ಪಾಸ್‌ಗಳನ್ನು ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಹಣ ಪಾವತಿ ಮಾಡಿ ಬಸ್ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಸಚಿವರು ಮತ್ತೊಂದು ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಅಂತಹ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ, ಅವರು ಪಾಸ್‌ಗಾಗಿ ಪಾವತಿಸಿರುವ ಸಂಪೂರ್ಣ ಹಣವನ್ನು ಸರ್ಕಾರವೇ ನೇರವಾಗಿ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ಐತಿಹಾಸಿಕ ಗ್ಯಾರಂಟಿ ನಡೆಗೆ ವಿದ್ಯಾರ್ಥಿ ವಲಯ ಹಾಗೂ ಪೋಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ? – Kannada News

ಬೆಂಗಳೂರು, (ಜೂನ್ 11): ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ(Guarantee scheme)ಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ (Gruhalakshmi) ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಫಿಲ್ಟರ್ ಮಾಡಿದ್ದು, ನೋಂದಣಿಯಾದ 1.30 ಕೋಟಿ ಮಂದಿ ಪೈಕಿ 3.89 ಲಕ್ಷ ಮಂದಿಯನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. 1.94 ಲಕ್ಷ ಫನಾನುಭವಿಗಳು ಐಟಿ ಜಿಎಸ್​ಟಿ ಪಾವತಿಸುವವರು ಆಗಿದ್ದರೆ, 1.95 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು 3.89 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಬಂದ್ ಮಾಡಲಾಗಿದೆ. ಅದರಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ 47,871 ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ. ತಾಂತ್ರಿಕ ಲೋಪ ತಡೆಯಲು ಶೀಘ್ರದಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬರಲಿದ್ದು, ಈ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಮಾಸಿಕ ಬರೋಬ್ಬರಿ 77 ಕೋಟಿ ರೂ. ಉಳಿತಾಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿ ಮಾಡ್ತಿದ್ರೆ, ತನ್ನನ್ನು ಎತ್ತಿಕೊಳ್ಳಲು ಕೈ ಚಾಚಿದ ಪುಟಾಣಿ – Kannada News

ಅಜ್ಜಿ ಮೊಮ್ಮಗ ಕ್ಯೂಟ್‌ ಸಂಭಾಷಣೆImage Credit source: Instagram

ಕೆಲವರಿಗೆ ತಮ್ಮ ಹೆತ್ತವರಿಗಿಂತ ತಮ್ಮ ಅಜ್ಜ ಅಜ್ಜಿಯೇ (grand parents) ಎಲ್ಲವೂ ಆಗಿರುತ್ತಾರೆ. ಈ ಹಿರಿಜೀವಗಳ ಪ್ರೀತಿ, ಕಾಳಜಿಯೊಂದಿಗೆ ಬೆಳೆಯುತ್ತಾರೆ. ಇದೀಗ ಪುಟಾಣಿಯೊಂದು ತನ್ನ ಅಜ್ಜಿಯ ಮಾತಿಗೆ ಕ್ಯೂಟ್ ರಿಯಾಕ್ಷನ್ ನೀಡಿದೆ. ಅಡುಗೆ ಮನೆಯಲ್ಲಿ ಅಜ್ಜಿ ಹಾಗೂ ಮೊಮ್ಮಗನ ಸಿಹಿಯಾದ ಸಂವಾದವು ಹೃದಯಸ್ಪರ್ಶಿ ಕ್ಷಣವಾಗಿ ಮಾರ್ಪಟ್ಟಿದೆ. ಅಜ್ಜಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ರೆ ಪುಟ್ಟ ಕಂದಮ್ಮ ತನ್ನನ್ನು ಎತ್ತಿಕೊಳ್ಳುವಂತೆ ಕೈ ಚಾಚಿರುವ  ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಂದನಾ ವರ್ಮ (@vandanaverma911) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಅಜ್ಜಿ ಹಾಗೂ ಪುಟಾಣಿ ಕ್ಯೂಟ್ ಸಂಭಾಷಣೆಯನ್ನು ನೋಡಬಹುದು. ಅಡುಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊಮ್ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂಭಾಷಣೆಯಲ್ಲಿ ತೊಡಗಿದ್ದಾರೆ. ಪುಟಾಣಿ ಅಜ್ಜಿ ಏನು ಮಾಡುತ್ತಿದ್ದಾಳೆಂದು ಬಹಳ ಕುತೂಹಲದಿಂದ ನೋಡುತ್ತಿದ್ದಾನೆ.

ತನ್ನ ಮೊಮ್ಮಗನ ಬಳಿ ಅಜ್ಜಿ ಏನು ಮಾಡ್ತಾ ಇದ್ದಾಳೆ ಎಂದು ಕೇಳುತ್ತಾಳೆ. ಕೊನೆಗೆ ಉಪ್ಪಿನಕಾಯಿ ಮಾಡುತ್ತಿದ್ದಾಳೆ ಎಂದು ಉತ್ತರಿಸಿದ್ದಾಳೆ. ಆ ಬಳಿಕ ಕತ್ತರಿಸಿಟ್ಟ ಮಾವಿನಕಾಯಿ ತುಂಡುಗಳಲ್ಲಿ ಸಣ್ಣ ತುಂಡನ್ನು ಮೊಮ್ಮಗ ಕೈಗೆ ಕೊಟ್ಟು ತಿನ್ನಲು ಹೇಳುವುದನ್ನು ನೀವು ನೋಡಬಹುದು. ತದನಂತರ ಕೀಟಲೆ ಮಾಡುತ್ತಾ ನನ್ನ ಬಾಯಲ್ಲಿ ನೀರೂರುತ್ತಿದೆ ಎಂದು ಹೇಳುವುದನ್ನು ಕಾಣಬಹುದು. ಈ ಪುಟಾಣಿಗೆ ಮಾವಿನಕಾಯಿ ತಿನ್ನುವಂತೆ ಅಜ್ಜಿ ಹೇಳಿದ್ದಾಳೆ. ಆದರೆ ಪುಟಾಣಿ ತನ್ನ ಎರಡು ಕೈಗಳನ್ನು ಚಾಚಿ ಮುಂದಕ್ಕೆ ಬಾಗಿದ್ದು ಅಜ್ಜಿಯ ಅಪ್ಪುಗೆಯನ್ನು ಬಯಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ಈ ವಿಡಿಯೋ ತೊಂಭತ್ತು ಸಾವಿರಕ್ಕೂ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಪ್ರೀತಿಸುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಇನ್ನೊಬ್ಬರು, ಈ ಪುಟಾಣಿ ತುಂಬಾ ಒಳ್ಳೆಯವನು. ಈ ವಯಸ್ಸಿನ ಮಕ್ಕಳು ತಮ್ಮ ಕೈಯಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಜ್ಜ ಅಜ್ಜಿಯ ಪ್ರೀತಿ ಸಿಕ್ಕಿರುವವರೇ ಪುಣ್ಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:55 pm, Thu, 11 June 26

Source link

ಜೈಲಿನಲ್ಲಿ ಕುಳಿತು ಪತ್ನಿ ಕೊಲೆಗೆ ಸ್ಕೆಚ್: ಶಿವಮೊಗ್ಗದಲ್ಲಿ ನಾಲ್ವರು ಬುರ್ಖಾ ಹಾಕಿಕೊಂಡು ಬಂದವರಿಗೆ ಸಾರ್ವಜನಿಕರಿಂದ ಧರ್ಮದೇಟು – Kannada News

ಶಿವಮೊಗ್ಗ, ಜೂ.11: ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬ ತನ್ನ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಸ್ವಂತ ಪತ್ನಿಯ ಮೇಲೆಯೇ ದಾಳಿ ನಡೆಸಲು ಬುರ್ಖಾಧಾರಿ ಗ್ಯಾಂಗ್ ಕಳುಹಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗದ ಕೆ.ಆರ್. ಪುರಂನಲ್ಲಿ ನಡೆದಿದೆ. ಆದರೆ, ಸ್ಥಳೀಯ ನಾಗರಿಕರ ಸಮಯಪ್ರಜ್ಞೆಯಿಂದಾಗಿ ಬುರ್ಖಾ ಧರಿಸಿ ಬಂದಿದ್ದ ಗ್ಯಾಂಗ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಹಿಗ್ಗಾಮುಗ್ಗಾ ಧರ್ಮದೇಟು ತಿಂದು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ಒಂದು ವರ್ಷದಿಂದ ಕೊಲೆ ಪ್ರಕರಣವೊಂದರ ವಿಚಾರಣಾಧೀನ ಖೈದಿಯಾಗಿರುವ ವ್ಯಕ್ತಿಯೇ ಈ ಇಡೀ ಷಡ್ಯಂತ್ರದ ಮಾಸ್ಟರ್ ಮೈಂಡ್. ಜೈಲಿನಲ್ಲಿರುವ ತನಗೆ ಐಷಾರಾಮಿ ಜೀವನ ನಡೆಸಲು ಮತ್ತು ಖರ್ಚಿಗೆ ಹಣ ನೀಡುತ್ತಿಲ್ಲ ಹಾಗೂ ತನ್ನನ್ನು ನೋಡಲು ಜೈಲಿಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ಈತ ಪತ್ನಿ ತಬಸ್ಸುಮ್ ಬಾನು ವಿರುದ್ಧ ತೀವ್ರ ಆಕ್ರೋಶಗೊಂಡಿದ್ದನು. ಪತ್ನಿ ಮತ್ತು ಮಕ್ಕಳು ಜೀವನ ನಡೆಸುವುದೇ ಕಷ್ಟವಾಗಿರುವಾಗ ಪತಿಯ ಈ ಬೇಡಿಕೆಗಳಿಗೆ ಸ್ಪಂದಿಸಿರಲಿಲ್ಲ. ಇದರಿಂದ ಸೇಡು ತೀರಿಸಿಕೊಳ್ಳಲು ಜೈಲಿನಿಂದಲೇ ತನ್ನ ಸಹಚರರಿಗೆ ಪತ್ನಿಗೆ ಹೆದರಿಸಿ, ಮುಗಿಸುವಂತೆ ಸುಪಾರಿ ನೀಡಿದ್ದನು.

ಪತಿಯ ಆದೇಶದಂತೆ ಅಸ್ಲಾಂ (25), ಮಹೇಶ್ (20), ದರ್ಶನ್ (20) ಮತ್ತು ಮುನ್ನಾ (24) ಎಂಬ ನಾಲ್ವರು ಯುವಕರು ತಮ್ಮ ಗುರುತು ಸಿಗದಂತೆ ಸಂಪೂರ್ಣ ಬುರ್ಖಾ ಧರಿಸಿ ಕೆ.ಆರ್. ಪುರಂನಲ್ಲಿರುವ ಮಹಿಳೆಯ ಮನೆ ಬಳಿ ಬಂದಿದ್ದಾರೆ. ಆದರೆ, ಇವರ ವಿಚಿತ್ರ ನಡವಳಿಕೆ ಮತ್ತು ಚಲನವಲನಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳಿಗೆ ತಕ್ಷಣವೇ ಅನುಮಾನ ಬಂದಿದೆ. ತಡಮಾಡದ ಸಾರ್ವಜನಿಕರು ಒಟ್ಟಾಗಿ ನಾಲ್ವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರು ತಪಾಸಣೆ ನಡೆಸಿದಾಗ ಬುರ್ಖಾ ಒಳಗಿದ್ದ ಗಂಡಸರ ಅಸಲಿ ಮುಖವಾಡ ಬಯಲಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ನಾಲ್ವರಿಗೂ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಗಲಾಟೆಯ ನಡುವೆ ಮುನ್ನಾ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ, ಉಳಿದ ಮೂವರು ಆರೋಪಿಗಳಾದ ಅಸ್ಲಾಂ, ಮಹೇಶ್ ಮತ್ತು ದರ್ಶನ್‌ನನ್ನು ಹಿಡಿದು ದೊಡ್ಡಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಅಡ್ಡ ಬಂದ ನಾಗರ ಹಾವು: ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್

ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿದಿದೆ ಎಂದು ಕುಟುಂಬದವರು ಹೇಳಿದ್ದಾರೆ. ಬುರ್ಖಾ ಧರಿಸಿ ಇಂತಹ ಅಪರಾಧ ಕೃತ್ಯಗಳಿಗೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Thu, 11 June 26

Source link

ಒಮಾನ್ ಬಳಿ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡ ಅಮೆರಿಕ – Kannada News

ವಾಷಿಂಗ್ಟನ್, ಜೂನ್ 11: ಒಮಾನ್ (Oman) ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ವಾಣಿಜ್ಯ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ, ಆ ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿ 2 ‘ಹೆಲ್‌ಫೈರ್ ಕ್ಷಿಪಣಿ’ಗಳನ್ನು ಉಡಾಯಿಸಿದ್ದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಒಪ್ಪಿಕೊಂಡಿದೆ. ಗಲ್ಫ್ ವಲಯದಲ್ಲಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಹಡಗಿನ ಮೇಲೆ ಈ ವಾರ ನಡೆದ ಮೂರನೇ ದಾಳಿ ಇದಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಾಮಾಜಿಕ ಮಾಧ್ಯಮವಾದ ಎಕ್ಸ್​​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಗಿನಿ-ಬಿಸೌ ದೇಶದ ಧ್ವಜವನ್ನು ಹೊಂದಿದ್ದ ‘ಎಂ/ಟಿ ಜಲವೀರ್’ (M/T Jalveer) ಎಂಬ ತೈಲ ಟ್ಯಾಂಕರ್ ಒಮಾನ್ ಕೊಲ್ಲಿಯ ಮೂಲಕ ಇರಾನ್‌ನ ತೈಲವನ್ನು ಸಾಗಿಸಲು ಪ್ರಯತ್ನಿಸುತ್ತಿತ್ತು ಎಂದು ಹೇಳಿಕೊಂಡಿದೆ. ಅಮೆರಿಕ ಪಡೆಗಳು ನೀಡಿದ ಸರಣಿ ಸೂಚನೆಗಳನ್ನು ಹಡಗಿನ ಸಿಬ್ಬಂದಿ ಪಾಲಿಸಲು ವಿಫಲರಾದ ಹಿನ್ನೆಲೆಯಲ್ಲಿ ಅಮೆರಿಕದ ಯುದ್ಧ ವಿಮಾನವು ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎಂದು ಅದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ವಾಣಿಜ್ಯ ನೌಕೆಗಳ ಮೇಲಿನ ಸರಣಿ ದಾಳಿಗಳ ಮಧ್ಯೆ ಈ ಆಘಾತಕಾರಿ ಬೆಳವಣಿಗೆ ನಡೆದಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಾರತೀಯ ನಾವಿಕರಿದ್ದ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಯನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದು, ಇವು ಅತ್ಯಂತ ಆತಂಕಕಾರಿ ಎಂದು ಟೀಕಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ. ಗಲ್ಫ್ ಪ್ರದೇಶದಲ್ಲಿ ಸಂಚರಿಸುವ ಕಡಲ ಸಾರಿಗೆ ಮತ್ತು ನಾಗರಿಕ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಶಸ್ತ್ರ ಪಡೆಗಳು ಸಂಯಮವನ್ನು ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: ಒಮಾನ್​ನ ಶಿನಾಸ್ ಬಂದರು ಬಳಿ 20 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕದ ಮತ್ತೊಂದು ದಾಳಿ

ಕಳೆದ ಕೆಲವು ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳಿಗೆ ಸಂಬಂಧಿಸಿದಂತೆ ಹಲವಾರು ಘಟನೆಗಳು ನಡೆದಿವೆ. ನಮ್ಮ ನಾವಿಕರ ಸಮುದಾಯದ ಕಲ್ಯಾಣ ಮತ್ತು ಸುರಕ್ಷತೆಗೆ ನಾವು ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಈ ಅಂಶವನ್ನು ನಾವು ಪದೇ ಪದೇ ಒತ್ತಿಹೇಳುವ ಅಗತ್ಯವಿಲ್ಲ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Chanakya Niti: ಅತಿಯಾದ ಒಳ್ಳೆಯತನ ಒಳ್ಳೆಯದಲ್ಲ; ಏಕೆ ಗೊತ್ತಾ? – Kannada News

ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬಾಳುವುದು ತುಂಬಾನೇ ಮುಖ್ಯ. ಆದರೆ ಅತಿಯಾದ ಒಳ್ಳೆಯತನ  (honesty) ಎಂದಿಗೂ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿಯಾದ ಒಳ್ಳೆಯತನದಿಂದ ನಾವೇ ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಒಳ್ಳೆಯ ಗುಣಕ್ಕೂ ಒಂದು ಮಿತಿ ಇರಬೇಕು, ಜಾಸ್ತಿ ಒಳ್ಳೆಯತನವನ್ನು ತೋರಿದರೆ  ಕೆಲವೊಮ್ಮೆ ಅದೇ ಗುಣವು ದೌರ್ಬಲ್ಯವಾಗಿ ಬದಲಾಗಬಹುದು ಮತ್ತು ಜನ  ನಮ್ಮ ಈ ಒಳ್ಳೆಯತನ ಲಾಭವನ್ನು ಪಡೆಯಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.  ಅತಿಯಾದ ಒಳ್ಳೆಯತನ ಏಕೆ ಒಳ್ಳೆಯದಲ್ಲ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅತಿಯಾದ ಒಳ್ಳೆಯತನ ಏಕೆ ಒಳ್ಳೆಯದಲ್ಲ?

ಸುಲಭವಾಗಿ ಮೋಸ ಹೋಗಬಹುದು: ಎಲ್ಲದಕ್ಕೂ ಹೌದು ಎಂದು ಹೇಳುವುದು ಅಥವಾ ನಾನು ಇಲ್ಲ ಎಂದು ಹೇಳಿದರೆ ಅವರ ಭಾವನೆಗಳಿಗೆ ನೋವಾಗಬಹುದೇನೋ ಎಂದು ಭಾವಿಸಿ ಎಲ್ಲದಕ್ಕೂ ಹೌದು ಹೇಳಿ ಅತಿಯಾದ ಒಳ್ಳೆಯತನ ತೋರಿಸುತ್ತಾ ಹೋದರೆ ನೀವು ಸುಲಭವಾಗಿ ಮೋಸ ಹೋಗುತ್ತೀರಿ. ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ನಿಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ಇತರರು ನಿಮ್ಮನ್ನು ದುರ್ಬಲರೆಂದು ನೋಡುತ್ತಾರೆ.

ಇತರರ ಸ್ವಾರ್ಥಕ್ಕಾಗಿ ಬಲಿಯಾಗಬೇಕಾಗುತ್ತದೆ: ತುಂಬಾ ಒಳ್ಳೆಯವರಾಗಿದ್ದರೆ ನೀವು ಇತರರ ಸ್ವಾರ್ಥಕ್ಕೆ ಬಹುಬೇಗನೇ ಬಲಿಯಾಗುತ್ತೀರಿ. ಜಾಸ್ತಿ ಒಳ್ಳೆಯತನವನ್ನು ತೋರಿದರೆ  ಕೆಲವೊಮ್ಮೆ ಅದೇ ಗುಣವು ದೌರ್ಬಲ್ಯವಾಗಿ ಬದಲಾಗಬಹುದು ಆದ್ದರಿಂದ, ಪರಿಸ್ಥಿತಿಯ ಬಗ್ಗೆ ಯೋಚಿಸಿ ಸಮತೋಲನದಿಂದ ವರ್ತಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಚಾಣಕ್ಯರ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ

ಅವಕಾಶಗಳು ಕಳೆದುಹೋಗುತ್ತವೆ: ಯಾವಾಗಲೂ ಒಳ್ಳೆಯತನ ತೋರುವುದರಿಂದ ಇತರರಿಗೆ ಒಳ್ಳೆಯದಾಗಲಿ ಎಂದು ನೀವು ಅವರಿಗಾಗಿ ಅವಕಾಶಗಳನ್ನು ಬಿಟ್ಟುಕೊಟ್ಟಾಗ ನಿಮ್ಮ ಪಾಲಿಗೆ ಬರುವಂತಹ ಒಳ್ಳೊಳ್ಳೆ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಇದರಿಂದ ಇತರರು ಜೀವನದಲ್ಲಿ ಮುಂದೆ ಸಾಗುತ್ತಾರೆ ನೀವು ಹಿಂದೆಯೇ ಉಳಿಯಬೇಕಾಗುತ್ತದೆ. ಹಾಗಾಗಿ ಯಾವತ್ತಿಗೂ ಅತಿಯಾಗಿ ಒಳ್ಳೆಯವರಾಗಿರಬೇಡಿ

ಒಳ್ಳೆಯತನ ಒಳ್ಳೆಯದೆ ಆದರೆ ಅತಿಯಾದ ಒಳ್ಳೆಯತನ ನಿಮಗೆಯೇ ಮುಳುವಾಗಿ ಪರಿಣಮಿಸುತ್ತದೆ. ಆದ್ದರಿಂದ ನಿಮ್ಮ ಯಶಸ್ಸಿಗಾಗಿ ನೀವು ಶ್ರಮಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Thu, 11 June 26

Source link

ಪಿಒಕೆಯಲ್ಲಿ ರಕ್ತಪಾತ; ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು – Kannada News

ಮುಜಾಫರಾಬಾದ್, ಜೂನ್ 11: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಅತಿಯಾದ ಹಣದುಬ್ಬರ, ಹಿಂಸಾತ್ಮಕ ದಬ್ಬಾಳಿಕೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಸ್ಥಳೀಯ ನಾಗರಿಕರು ದೀರ್ಘಕಾಲದಿಂದ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಈ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನಿ ಸೇನೆಯು ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಇದರಿಂದ ಇಡೀ ಪ್ರದೇಶ ರಣರಂಗವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ಮನಬಂದಂತೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಿಂದ 16 ಜನರು ಸಾವನ್ನಪ್ಪಿದ್ದಾರೆ ಮತ್ತು 37ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಿಒಕೆಯಲ್ಲಿನ ಸ್ಥಳೀಯ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ಕೆಲವು ಪ್ರಮುಖ ಕಾರಣಗಳಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರು. ತಮಗೆ ಸಿಗಬೇಕಾದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದ್ದರೂ, ಸ್ಥಳೀಯರಿಗೆ ಅತಿಯಾದ ವಿದ್ಯುತ್ ಬಿಲ್ ಮತ್ತು ಗೋಧಿ ಹಿಟ್ಟಿನ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಲಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇಡೀ ಪ್ರದೇಶವನ್ನು ಪಾಕಿಸ್ತಾನಿ ಮಿಲಿಟರಿ ತನ್ನ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು ಸ್ಥಳೀಯರ ಧ್ವನಿಯನ್ನು ಹತ್ತಿಕ್ಕುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ

ಸ್ಥಳೀಯ ಹಕ್ಕುಗಳ ಒಕ್ಕೂಟದ ನೇರ ನಾಯಕತ್ವದಲ್ಲಿ ಸಾವಿರಾರು ನಿರಸ್ತ್ರ ನಾಗರಿಕರು, ಮಹಿಳೆಯರು ಮತ್ತು ಯುವಕರು ಮುಜಾಫರಾಬಾದ್ ಕಡೆಗೆ ಬೃಹತ್ ಮೆರವಣಿಗೆ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಮೊದಲು ಅಶ್ರುವಾಯು ಮತ್ತು ಲಾಠಿ ಚಾರ್ಜ್ ಮಾಡಿದ ಪಾಕಿಸ್ತಾನಿ ಅರೆಸೇನಾ ಪಡೆ ಮತ್ತು ಸೇನೆಯು, ನಂತರ ನೇರವಾಗಿ ಪ್ರತಿಭಟನಾಕಾರರ ಮೇಲೆ ಗುಂಡಿನ ಮಳೆಗರೆದಿದೆ.

ಈ ಪ್ರದೇಶದಲ್ಲಿ ಪಾಕಿಸ್ತಾನದ ನಿರಂತರ ಆಕ್ರಮಣ ಮತ್ತು ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಲು ಸುಮಾರು 60,000 ದಿಂದ 70,000 ಕ್ಕೂ ಹೆಚ್ಚು ಜನರು ರಾವಲಕೋಟ್‌ನಲ್ಲಿ ಜಮಾಯಿಸಿದ್ದರು. ಕಳೆದ ಮಂಗಳವಾರ ಪಿಒಕೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಮೃತಪಟ್ಟ 30 ಜನರಿಗೆ ನ್ಯಾಯ ಒದಗಿಸಬೇಕು ಹಾಗೂ ಗಾಯಗೊಂಡ 200 ಕ್ಕೂ ಹೆಚ್ಚು ಜನರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಇದನ್ನೂ ಓದಿ: ಪಿಒಕೆಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ; ಅಧಿಕಾರಿಗಳು ಸೇರಿದಂತೆ ಎಲ್ಲ ಸೈನಿಕರೂ ಸಜೀವದಹನ

ಸೇನೆಯ ಬರ್ಬರ ದಾಳಿಗೆ ಸಿಲುಕಿ 16 ನಿಶಸ್ತ್ರ ನಾಗರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 37ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಈ ಭೀಕರ ಹತ್ಯಾಕಾಂಡದ ನಂತರ ಇಡೀ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಈ ಘಟನೆಯ ಭೀಕರ ದೃಶ್ಯಗಳು ಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪಾಕಿಸ್ತಾನ ಸರ್ಕಾರವು ಇಡೀ ಪಿಒಕೆ ವಲಯದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಪ್ರಮುಖ ನಗರಗಳಲ್ಲಿ ಕಠಿಣ ಕರ್ಫ್ಯೂ ಹೇರಲಾಗಿದ್ದರೂ, ಆಕ್ರೋಶಗೊಂಡಿರುವ ಸಾರ್ವಜನಿಕರು ಮಿಲಿಟರಿ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೀನಾ ಏರ್​ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು – Kannada News

ಕೀನ್ಯಾ ಏರ್​ಪೋರ್ಟ್Image Credit source: Nairobinews

ನೈರೋಬಿ, ಜೂನ್ 11: ಭಾರತದ ಪ್ರಮುಖ ಉದ್ಯಮ ಸಂಸ್ಥೆಯಾದ ‘ಅದಾನಿ ಗ್ರೂಪ್’ (Adani Group) ಜೊತೆಗಿನ ಒಪ್ಪಂದ ರದ್ದಾದ ಬೆನ್ನಲ್ಲೇ, ಕೀನ್ಯಾ ದೇಶವು ತನ್ನ ಅತ್ಯಂತ ದೊಡ್ಡ ವಿಮಾನ ನಿಲ್ದಾಣದ ನವೀಕರಣ ಮತ್ತು ವಿಸ್ತರಣೆಯ ಬೃಹತ್ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಿದೆ. ಕೀನ್ಯಾ ರಾಜಧಾನಿನಗರಿ ನೈರೋಬಿಯಲ್ಲಿರುವ ‘ಜೋಮೋ ಕೆನ್ಯಾಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ (JKIA- Jomo Kenyatta International Airport) ನವೀಕರಣದ ಜವಾಬ್ದಾರಿಯನ್ನು ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ‘ಚೀನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಕೋ’ಗೆ (CCCC) ನೀಡಿದೆ.

ಈ ಇಡೀ ಯೋಜನೆಯ ಒಟ್ಟು ವೆಚ್ಚ 2.9 ಬಿಲಿಯನ್ ಡಾಲರ್ (ಸುಮಾರು ₹27,000 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.

ಪ್ರತಿಭಟನೆಗಳಿಂದಾಗಿ ಅದಾನಿ ಗ್ರೂಪ್‌ಗೆ ಕೈತಪ್ಪಿದ ಒಪ್ಪಂದ

ಇದಕ್ಕೂ ಮುನ್ನ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಕೀನ್ಯಾದ ಈ ವಿಮಾನ ನಿಲ್ದಾಣವನ್ನು 30 ವರ್ಷಗಳ ಕಾಲ ನಿರ್ವಹಿಸುವ ಮತ್ತು ನವೀಕರಿಸುವ ಸಂಬಂಧ 2.6 ಬಿಲಿಯನ್ ಡಾಲರ್ ಮೊತ್ತದ ಬಿಡ್ ಸಲ್ಲಿಸಿ ಒಪ್ಪಂದವೂ ಆಗಿತ್ತು. ಆದರೆ, ಈ ಒಪ್ಪಂದದಿಂದ ಕೀನ್ಯಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಮತ್ತು ಸ್ಥಳೀಯ ಉದ್ಯೋಗ ನಷ್ಟವಾಗುತ್ತದೆ ಎಂದು ಆರೋಪಿಸಿ ಅಲ್ಲಿನ ವಿಮಾನಯಾನ ಕಾರ್ಮಿಕರು ಭಾರಿ ಮುಷ್ಕರ ಮತ್ತು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ

ಸಾರ್ವಜನಿಕರು ಮತ್ತು ನಾಗರಿಕ ಸಂಘಟನೆಗಳಿಂದ ಬಂದ ತೀವ್ರ ವಿರೋಧ ಹಾಗೂ ನ್ಯಾಯಾಲಯದಲ್ಲಿ ಎದುರಾದ ಕಾನೂನು ಸವಾಲುಗಳ ಕಾರಣದಿಂದಾಗಿ, ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರ ಸರ್ಕಾರವು ಅದಾನಿ ಗ್ರೂಪ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು. ಈಗ ಚೀನೀ ಕಂಪನಿಗೆ ಗುತ್ತಿಗೆ ಸಿಕ್ಕಿದೆ.

ಕೀನ್ಯಾದಲ್ಲಿ ಚೀನಾದ ಪ್ರಭಾವ

ಈ ಹೊಸ ಒಪ್ಪಂದದೊಂದಿಗೆ ಕೀನ್ಯಾದ ಮೂಲಸೌಕರ್ಯ ವಲಯದ ಮೇಲೆ ಚೀನಾದ ಹಿಡಿತ ಮತ್ತಷ್ಟು ಬಲಗೊಂಡಿದೆ. ಚೀನಾದ ಇದೇ ‘CCCC’ ಕಂಪನಿಯು ಈಗಾಗಲೇ ಕೀನ್ಯಾದಲ್ಲಿ ಪ್ರಮುಖ ರೈಲ್ವೆ ಯೋಜನೆ, 60,000 ಆಸನಗಳ ಬೃಹತ್ ಕ್ರೀಡಾಂಗಣ, ಎಕ್ಸ್‌ಪ್ರೆಸ್‌ವೇ ಟೋಲ್ ರಸ್ತೆ ಮತ್ತು ದೊಡ್ಡ ಸಮಾವೇಶ ಕೇಂದ್ರವನ್ನು (Convention Center) ನಿರ್ಮಿಸಿದೆ.

ಯೋಜನೆಗೆ ಹಣಕಾಸು ಒದಗಿಸುವುದು ಹೇಗೆ?

ಕೀನ್ಯಾ ಸರ್ಕಾರವು ಈ ಯೋಜನೆಗೆ ತನ್ನ ಹೊಸ ‘ರಾಷ್ಟ್ರೀಯ ಮೂಲಸೌಕರ್ಯ ನಿಧಿ’ (National Infrastructure Fund) ಮತ್ತು ವಿಮಾನ ಪ್ರಯಾಣಿಕರ ಸೇವಾ ಶುಲ್ಕದಿಂದ (Air-passenger service charge) ಬರುವ ಆದಾಯದ ಆಧಾರದ ಮೇಲೆ ವಾಣಿಜ್ಯ ಸಾಲಗಳನ್ನು ಪಡೆದು ಹಣ ಹೂಡಿಕೆ ಮಾಡಲಿದೆ. ಯೋಜನೆಯ ಕಾಮಗಾರಿಗಳು ಇದೇ ತಿಂಗಳಿನಿಂದ ಆರಂಭವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

ನೆರೆಯ ದೇಶಗಳಿಂದ ಕೀನ್ಯಾಗೆ ಪೈಪೋಟಿ

ಪೂರ್ವ ಆಫ್ರಿಕಾದ ಪ್ರಮುಖ ವಾಯುಯಾನ ಹಬ್ ಆಗಿರುವ ಕೀನ್ಯಾ, ನೆರೆಹೊರೆಯ ದೇಶಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಇಥಿಯೋಪಿಯಾ ದೇಶವು ಈಗಾಗಲೇ 12.5 ಬಿಲಿಯನ್ ಡಾಲರ್ ವೆಚ್ಚದ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸುತ್ತಿದ್ದರೆ, ರುವಾಂಡಾ ದೇಶವು ‘ಕತಾರ್ ಏರ್ವೇಸ್’ ಸಹಭಾಗಿತ್ವದಲ್ಲಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೀಗಾಗಿ ಕೀನ್ಯಾ ತನ್ನ ಅತಿ ದೊಡ್ಡ ವಿಮಾನ ನಿಲ್ದಾಣವನ್ನು ನವೀಕರಿಸುವುದು ಬಹಳ ಅಗತ್ಯವೆನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version