ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ – Kannada News

ಹಾವೇರಿ, ಜೂ.10: “ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದಿಸಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿದ ನೂರಾರು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಭಾರಿ ವಂಚನೆಯಾಗಿರುವ ಆಘಾತಕಾರಿ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಹಾವೇರಿಯ ಅಶ್ವಿನಿ ನಗರದಲ್ಲಿರುವ ‘SLV ಮಹಿಳಾ ಮಾರ್ಟ್’ ಎಂಬ ಹೆಸರಿನ ಕಂಪನಿಯು ಸ್ವಯಂ ಉದ್ಯೋಗ ನೀಡುವ ಆಸೆ ತೋರಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದ ಜನರಿಂದ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿ ಹಣವನ್ನು ದೋಚಿ ರಾತ್ರೋರಾತ್ರಿ ಪರಾರಿಯಾಗಿದೆ.

ವಿನಾಯಕ ಆನ್ವೇರಿ ಹಾಗೂ ರಮ್ಯ ಎಂಬುವವರು ಈ SLV ಮಹಿಳಾ ಮಾರ್ಟ್ ಕಂಪನಿಯ ಮಾಲೀಕರಾಗಿದ್ದು, “ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ (ರೊಟ್ಟಿ ಕಸಬರಗಿ) ಹಾಗೂ ಮೇಣದಬತ್ತಿಗಳನ್ನು ಪ್ಯಾಕ್ ಮಾಡುವ ಗೃಹ ಕೆಲಸ ನೀಡುತ್ತೇವೆ. ಇದಕ್ಕೆ ಲಕ್ಷ ಲಕ್ಷ ಬಂಡವಾಳ ಹೂಡಿಕೆ ಮಾಡಬೇಕು” ಎಂದು ಈ ವಂಚಕರು ನಂಬಿಸಿದ್ದರು. ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದವರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡುವ ನಾಟಕವಾಡಿ ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿದ್ದರು.

ಕಂಪನಿಯ ನಂಬಿಕೆ ಹೆಚ್ಚಾಗುತ್ತಿದ್ದಂತೆ ಹಾವೇರಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ನೂರಾರು ಮಹಿಳೆಯರು ಲಕ್ಷಾಂತರ ರೂಪಾಯಿ ಹಣವನ್ನು ತಂದು ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟಾರೆ ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆಯೇ ಮಾಲೀಕರಾದ ವಿನಾಯಕ ಮತ್ತು ರಮ್ಯ ಕಂಪನಿಗೆ ಬೀಗ ಜಡಿದು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ. ಇತ್ತ ತಾವು ಕಷ್ಟಪಟ್ಟು ಹೂಡಿಕೆ ಮಾಡಿದ ಅಸಲು ಹಣವೂ ಸಿಗದೆ, ಇತ್ತ ಕೆಲಸ ಮಾಡಿದ ಕೂಲಿಯೂ ಸಿಗದೆ ನೂರಾರು ಮಹಿಳೆಯರು ಬೀದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ: 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ

ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ನೂರಾರು ಮಹಿಳೆಯರು ಹಾವೇರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಂಚಕ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಕಣ್ಣೀರು ಹಾಕುತ್ತಲೇ SLV ಮಹಿಳಾ ಮಾರ್ಟ್ ಕಂಪನಿಗೆ ಹಿಡಿಶಾಪ ಹಾಕುತ್ತಿರುವ ನೊಂದ ಮಹಿಳೆಯರು, “ನಮ್ಮ ಜೀವಮಾನದ ಉಳಿತಾಯದ ಹಣವನ್ನು ನಂಬಿಸಿ ದೋಚಿದ್ದಾರೆ. ಪೊಲೀಸರು ತಕ್ಷಣವೇ ಆ ಮೋಸಗಾರರನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಬೇಕು ಮತ್ತು ನಮ್ಮ ಹಣವನ್ನು ವಾಪಸ್ ಕೊಡಿಸಬೇಕು” ಎಂದು ಒತ್ತಾಯಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ.

ವರದಿ: ಅಣ್ಣಪ್ಪ ಬರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Wed, 10 June 26

Source link

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ – Kannada News

ನವದೆಹಲಿ, ಜೂನ್ 9: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಒಳಗಿನ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಾಲು ಸಾಲು ಸಂಸದರು, ಶಾಸಕರು ಟಿಎಂಸಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇದು 15 ವರ್ಷಗಳ ಕಾಲ ಬಂಗಾಳವನ್ನು ಆಳಿದ ಮಮತಾ ಬ್ಯಾನರ್ಜಿಗೆ (Mamata Banerjee) ದೊಡ್ಡ ಹೊಡೆತ ನೀಡಿದೆ. ಇದೀಗ ಟಿಎಂಸಿಯ ಆಂತರಿಕ ಬಂಡಾಯದ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಟಿಎಂಸಿ ಹಿರಿಯ ನಾಯಕಿ ಸುಶ್ಮಿತಾ ದೇವ್ ಇಂದು ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರದ ಮೂಲಕ ಸುಶ್ಮಿತಾ ದೇವ್ ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅವರ ರಾಜಕೀಯ ಭವಿಷ್ಯದ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸುಶ್ಮಿತಾ ದೇವ್ ದೆಹಲಿಯ ನಿವಾಸದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ಮುಗುಳ್ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ.

ಇದನ್ನೂ ಓದಿ: ಟಿಎಂಸಿಯಲ್ಲೇ ಇದ್ದಿದ್ದರೆ ನನ್ನ ಕೊಲ್ಲುತ್ತಿದ್ದರು; ಮಮತಾ ಬ್ಯಾನರ್ಜಿ ವಿರುದ್ಧ ಸುಖೇಂದು ಶೇಖರ್ ರಾಯ್ ಗಂಭೀರ ಆರೋಪ

“ನಾನು ಟಿಎಂಸಿ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಬೇಕು. ರಾಜ್ಯಸಭಾ ಸದಸ್ಯೆಯಾಗಿ ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡಿದ ಉಪರಾಷ್ಟ್ರಪತಿಗಳು, ಗೌರವಾನ್ವಿತ ಉಪಸಭಾಪತಿಗಳು ಮತ್ತು ರಾಜ್ಯಸಭಾ ಸಚಿವಾಲಯದ ಎಲ್ಲಾ ಪದಾಧಿಕಾರಿಗಳಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಸುಶ್ಮಿತಾ ದೇವ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಶ್ಮಿತಾ ದೇವ್, ರಾಜೀನಾಮೆ ನೀಡುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿದ್ದು, ಇದಕ್ಕೆ ಯಾರ ಪ್ರಭಾವವೂ ಇಲ್ಲ ಎಂದು ತಿಳಿಸಿದ್ದಾರೆ. ತಮ್ಮ ಈ ಹೆಜ್ಜೆಯ ಹಿಂದೆ ಹಲವು ಕಾರಣಗಳಿವೆಯಾದರೂ, ಅವುಗಳನ್ನೆಲ್ಲಾ ಸಾರ್ವಜನಿಕವಾಗಿ ಬಹಿರಂಗಪಡಿಸುವ ಅಗತ್ಯವಿಲ್ಲ. ಅದೊಂದು ದೊಡ್ಡ ಕತೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಈ ರಾಜೀನಾಮೆಯು ತೃಣಮೂಲ ಕಾಂಗ್ರೆಸ್‌ಗೆ ಒಂದೇ ವಾರದಲ್ಲಿ ಎದುರಾಗಿರುವ ಎರಡನೇ ರಾಜ್ಯಸಭಾ ಹಿನ್ನಡೆಯಾಗಿದೆ. ಕಳೆದ 13 ವರ್ಷಗಳಿಂದ ಮೇಲ್ಮನೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಖೇಂದು ಶೇಖರ್ ರಾಯ್ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸುಶ್ಮಿತಾ ದೇವ್ ಕೂಡ ರಾಜೀನಾಮೆ ನೀಡಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ಆಘಾತವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭುಗಿಲೆದ್ದ ಬಂಡಾಯದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಧಾನಸಭೆಯಲ್ಲಿ ಟಿಎಂಸಿಯ 58 ಶಾಸಕರು ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದರಾಗಿದ್ದ ಸುಶ್ಮಿತಾ ದೇವ್ ಅವರು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ 2021ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸುತ್ತಾ, ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ICC Test Rankings: ಟಾಪ್ 10 ರೊಳಗೆ ಇಬ್ಬರು ಭಾರತೀಯರು; ಅಗ್ರಸ್ಥಾನದಲ್ಲಿ ಉಳಿದ ಬುಮ್ರಾ

Source link

ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ, ವಿಡಿಯೋ ವೈರಲ್

ಕಲಬುರಗಿ, (ಜೂನ್ 10): ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಅನೂಕೂಲವಾಗಲೆಂದು ಸರ್ಕಾರಗಳು ವಸತಿ ನಿಲಯಗಳನ್ನು (ಹಾಸ್ಟೆಲ್​) ನಿರ್ಮಿಸುತ್ತಿವೆ. ಆದ್ರೆ, ಕಲಬುರಗಿಯಲ್ಲಿ (Kalaburagi) ಬಿಸಿಎಂ ಮಹಿಳಾ ಹಾಸ್ಟೆಲ್ ನಲ್ಲಿ ಬಿಂದಾಸ್ ಆಗಿ ಮಧ್ಯ ಸೇವೆನೆ ಮಾಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಹೌದು… ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಹಾಸ್ಟೆಲ್ ನದ್ದು ಎನ್ನಲಾಗುತ್ತಿರೋ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇನ್ನು ವಿದ್ಯಾರ್ಥಿನಿ ಬೀಯರ್ ಕುಡಿಯುತ್ತಿರೋ ದೃಶ್ಯ ವೈರಲ್ ಬೆನ್ನಲ್ಲೇ ಇದನ್ನೇ ವಾರ್ಡನ್ ಬಂಡವಾಳ ಮಾಡಿಕೊಂಡಿಕೊಂಡಿದ್ದು, ಪ್ರಕರಣ ಮುಚ್ಚಿಹಾಕಲು ಹಣ ವಸೂಲಿಳಿದಿದ್ದಾರೆ. ಅಲ್ಲದೇ ಮೂರ್ನಾಲ್ಕು ವಾರ್ಡನ್​​ಗಳು ವಿದ್ಯಾರ್ಥಿನಿಯರನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ. ಇನ್ನು ವಾರ್ಡನ್ ಹಾಗೂ ವಿದ್ಯಾರ್ಥಿನಿಯ ಆಡಿಯೋ ಕೂಡಾ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿಸಿಎಸ್​ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್​ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ – Kannada News

ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್Image Credit source: Tata Group

ನವದೆಹಲಿ, ಜೂನ್ 10: ಭಾರತದ ಐಟಿ ಕಂಪನಿಗಳು ಎಐ ಅಬ್ಬರಕ್ಕೆ ಬೇಗ ಹೊಂದಿಕೊಳ್ಳುತ್ತಿರುವಂತಿವೆ. ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನಲ್ಲಿ (TCS- Tata Consultancy Services) ಮುಂದಿನ ವರ್ಷದಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಸಮವಾಗಿ ಎಐ ಏಜೆಂಟ್​ಗಳ ಸಂಖ್ಯೆ ಇರುತ್ತದಂತೆ. ಹಾಗಂತ, ಸಂಸ್ಥೆಯ ಛೇರ್ಮನ್ ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಟಿಸಿಎಸ್​ನ ವಾರ್ಷಿಕ ಮಹಾಸಭೆಯಲ್ಲಿ (AGM) ಚೇರ್ಮನ್ ಎನ್. ಚಂದ್ರಶೇಖರನ್ ಅವರು ಎಐ ಏಜೆಂಟ್​ಗಳ ನಿಯುಕ್ತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಟಿಸಿಎಸ್‌ನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಕಂಪನಿಯು ಅಷ್ಟೇ ಸಂಖ್ಯೆಯ, ಅಂದರೆ 5 ಲಕ್ಷ ಎಐ ಏಜೆಂಟ್‌ಗಳನ್ನು ಹೊಂದಿರಲಿದೆ. “ಆ ದಿನ ತೀರಾ ದೂರವಿಲ್ಲ. ಟಿಸಿಎಸ್‌ನಲ್ಲಿ ಭೌತಿಕ ಕಾರ್ಮಿಕರಷ್ಟೇ ಎಐ ಕಾರ್ಮಿಕರೂ ಇರಲಿದ್ದಾರೆ. ಭವಿಷ್ಯದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಲಿದ್ದಾರೆ,” ಎಂದು ಚಂದ್ರಶೇಖರನ್ ಷೇರುದಾರರಿಗೆ ತಿಳಿಸಿದ್ದಾರೆ.

ಉದ್ಯೋಗ ನೇಮಕಾತಿಯಲ್ಲಿ ಕುಸಿತ

ಟಿಸಿಎಸ್ ಎಂದರೆ ನೇಮಕಾತಿಗಳಿಗೆ ಹೆಸರುವಾಸಿ. ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಟಿ ಸಂಸ್ಥೆಯದು. ಭಾರತದಲ್ಲಿ ಅತಿಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳ ಪೈಕಿ ಒಂದು. ಆದರೆ, ಈಗ ಎಐ ಏಜೆಂಟ್‌ಗಳ ಆಗಮನದಿಂದಾಗಿ ಕಂಪನಿಯು ಈ ಹಿಂದೆ ಮಾಡಿಕೊಳ್ಳುತ್ತಿದ್ದ ಬೃಹತ್ ಪ್ರಮಾಣದ ಉದ್ಯೋಗ ನೇಮಕಾತಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

ಎಚ್‌ಆರ್ ಮೆಟ್ರಿಕ್ ಬದಲಾವಣೆ: “ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಎಚ್‌ಆರ್ (HR) ವಿಭಾಗದ ಹಳೆಯ ಪದ್ಧತಿ ಇನ್ಮುಂದೆ ಇರುವುದಿಲ್ಲ” ಎಂದು ಎನ್ ಚಂದ್ರಶೇಖರನ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಸಂಪೂರ್ಣವಾಗಿ ನೇಮಕಾತಿ ನಿಲ್ಲುವುದಿಲ್ಲ; ಎಐ ತಂತ್ರಜ್ಞಾನಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲ ನುರಿತ ಪ್ರತಿಭೆಗಳ ಹುಡುಕಾಟ ಮುಂದುವರಿಯಲಿದೆಯಂತೆ.

ಲೇ-ಆಫ್ ಇಲ್ಲ, ಆದರೆ ಕೌಶಲ್ಯ ಅತ್ಯಗತ್ಯ

ಎಐ ಬಳಕೆಯಿಂದಾಗಿ ಈಗಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (Downsizing) ಯಾವುದೇ ಉದ್ದೇಶ ಕಂಪನಿಗೆ ಇಲ್ಲ. ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಉದ್ಯೋಗಿಗಳು ಕಡ್ಡಾಯವಾಗಿ ಎಐ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಎಐ ವ್ಯವಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.

ಎಐ ಮೂಲಕ ಹೆಚ್ಚುತ್ತಿರುವ ಆದಾಯ

ಟಿಸಿಎಸ್ ಸಂಸ್ಥೆಯು ಎಐ ತಂತ್ರಜ್ಞಾನದಿಂದ ಭಾರೀ ಆದಾಯ ಗಳಿಸುತ್ತಿದೆ. ಕಳೆದ ಆರ್ಥಿಕ ವರ್ಷದ (FY26) ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯ ವಾರ್ಷಿಕ ಎಐ ಆದಾಯವು ಸುಮಾರು 2.5 ಬಿಲಿಯನ್ ಡಾಲರ್ (ಅಂದಾಜು ₹20,000 ಕೋಟಿಗೂ ಅಧಿಕ) ತಲುಪಿದೆ. ಇದು ಪ್ರತಿ ತ್ರೈಮಾಸಿಕದಲ್ಲಿ ಶೇ. 22 ಕ್ಕಿಂತಲೂ ಹೆಚ್ಚು ಪ್ರಗತಿ ಕಾಣುತ್ತಿದೆ.

2028 ರಿಂದ 2030ರ ವೇಳೆಗೆ ಕಂಪನಿಯ ಶೇಕಡಾ 100ರಷ್ಟು ಆದಾಯವು ಯಾವುದಾದರೂ ಒಂದು ರೂಪದಲ್ಲಿ ಎಐ ತಂತ್ರಜ್ಞಾನದ ಅಂಶವನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಚಂದ್ರಶೇಖರನ್ ಅವರು ಗುರುತಿಸಿದ 5 ಪ್ರಮುಖ ಎಐ ಅವಕಾಶಗಳು

ಐಟಿ ವಲಯಕ್ಕೆ ಎಐ ಕೇವಲ ಒಂದು ಸವಾಲಲ್ಲ, ಬದಲಾಗಿ ಅದೊಂದು ಬಹುದೊಡ್ಡ ವ್ಯವಹಾರಿಕ ಅವಕಾಶ ಎಂದು ಚಂದ್ರಶೇಖರನ್ ವಾದಿಸಿದ್ದಾರೆ. ಅವರು ಪ್ರಮುಖವಾಗಿ 5 ಕ್ಷೇತ್ರಗಳನ್ನು ಪಟ್ಟಿ ಮಾಡಿದ್ದಾರೆ:

  1. ಲೆಗಸಿ ಸಿಸ್ಟಮ್ಸ್ ಆಧುನೀಕರಣ: ಹಳೆಯ ಐಟಿ ಮೂಲಸೌಕರ್ಯ ಮತ್ತು ಚದುರಿಹೋಗಿರುವ ಡೇಟಾ ವ್ಯವಸ್ಥೆಗಳನ್ನು ಎಐ ಮೂಲಕ ಆಧುನೀಕರಿಸುವುದು.
  2. ಬಿಸಿನೆಸ್ ಪ್ರೊಸೆಸ್ ಮರುವಿನ್ಯಾಸ: ಕಂಪನಿಗಳ ಸಪ್ಲೈ ಚೈನ್ ಮತ್ತು ಗ್ರಾಹಕರ ಸಂಪರ್ಕ ಪ್ರಕ್ರಿಯೆಗಳನ್ನು ಎಐ ತಂತ್ರಜ್ಞಾನದ ಮೂಲಕ ಸುಧಾರಿಸುವುದು.
  3. ಎಐ ಗವರ್ನೆನ್ಸ್ ಮತ್ತು ಮ್ಯಾನೇಜ್‌ಮೆಂಟ್: ಎಐ ಏಜೆಂಟ್‌ಗಳ ಸುರಕ್ಷತೆ, ವೆಚ್ಚ ಮತ್ತು ನಿಯಮಾವಳಿಗಳ ಉಸ್ತುವಾರಿ ವಹಿಸುವುದು.
  4. ಸೊವರೀನ್ ಎಐ (Sovereign AI): ಸರ್ಕಾರಗಳು ಮತ್ತು ಕಟ್ಟುನಿಟ್ಟಾದ ನಿಯಂತ್ರಣ ಹೊಂದಿರುವ ಸಂಸ್ಥೆಗಳಿಗಾಗಿ ಡೇಟಾ ಭದ್ರತೆಯುಳ್ಳ ಪ್ರತ್ಯೇಕ ಎಐ ಮೂಲಸೌಕರ್ಯ ನಿರ್ಮಿಸುವುದು. ಟಿಸಿಎಸ್ ಈಗಾಗಲೇ ಭಾರತ ಮತ್ತು ಯುರೋಪ್‌ನಲ್ಲಿ ಇಂತಹ ಯೋಜನೆಗಳನ್ನು ಆರಂಭಿಸಿದೆ.
  5. ಫಿಸಿಕಲ್ ಎಐ (Physical AI): ಕಾರ್ಖಾನೆಗಳು, ಗೋದಾಮುಗಳು ಮತ್ತು ವಾಹನಗಳಲ್ಲಿ ರೋಬೋಟಿಕ್ಸ್ ಹಾಗೂ ಎಐ ತಂತ್ರಜ್ಞಾನವನ್ನು ಸಮಿಶ್ರಗೊಳಿಸುವುದು.

ಟಿಸಿಎಸ್ ಸಿಇಒ ಕೆ. ಕೃತಿವಾಸನ್ ಅವರ ಪ್ರಕಾರ, ಕಂಪನಿಯು ಜಗತ್ತಿನ ಅತಿ ದೊಡ್ಡ ‘ಎಐ ಆಧಾರಿತ ತಂತ್ರಜ್ಞಾನ ಸೇವಾ ಸಂಸ್ಥೆ’ಯಾಗುವ ಗುರಿ ಹೊಂದಿದೆ. ಐಟಿ ಉದ್ಯಮದಲ್ಲಿ ಮಾನವ ಶ್ರಮ ಮತ್ತು ಕೃತಕ ಬುದ್ಧಿಮತ್ತೆ (AI) ಒಟ್ಟಾಗಿ ಸಾಗುವ ಹೊಸ ಯುಗಕ್ಕೆ ಟಿಸಿಎಸ್ ಮುನ್ನುಡಿ ಬರೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೈದ್ಯನ ಪಾತ್ರದಲ್ಲಿ ರಜನೀಕಾಂತ್, ಈ ಬಾರಿ ಮಾಸ್ ಅಲ್ಲ ಕ್ಲಾಸ್? – Kannada News

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಸದ್ಯಕ್ಕೆ ತಮ್ಮ ಬಹುನಿರೀಕ್ಷಿತ ಚಿತ್ರ ‘ತಲೈವರ್ 173’ ಗಾಗಿ ಸಜ್ಜಾಗುತ್ತಿದ್ದಾರೆ. ಯುವ ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಅವರು ರಜನೀಕಾಂತ್ ಅವರು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಹೊರ ಬಿದ್ದಿದೆ. ಅಶ್ವತ್ಥ್ ಮಾರಿಮುತ್ತು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ವಿಡಿಯೋ ಹಂಚಿಕೊಳ್ಳುವ ಮೂಲಕ ನಿರ್ಮಾಣ ಸಂಸ್ಥೆಯು ಅವರೇ ಈ ಚಿತ್ರದ ನಿರ್ದೇಶಕರು ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಲಾಗಿದೆ. ಈಗ ಬಂದಿರುವ ಹೊಸ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಮಾಡಲಿರುವ ಪಾತ್ರದ ಬಗ್ಗೆ ಒಂದು ಆಸಕ್ತಿದಾಯಕ ಅಪ್‌ಡೇಟ್ ಹೊರಬಿದ್ದಿದೆ.

ರಜನೀಕಾಂತ್ ತಮ್ಮ ಮುಂದಿನ ಸಿನಿಮಾನಲ್ಲಿ ಹಿರಿಯ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಸ್ ಪಾತ್ರಗಳಿಂದ ಅಭಿಮಾನಿಗಳ ಮನಗೆದ್ದಿರುವ ರಜನೀಕಾಂತ್ ಇದೀಗ ಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರ 173ನೇ ಸಿನಿಮಾ ಕಮರ್ಶಿಯಲ್ ಮಾಸ್ ಸಿನಿಮಾ ಆಗಿರುವುದಿಲ್ಲ ಬದಲಿಗೆ ಫ್ಯಾಮಿಲಿ ಡ್ರಾಮಾ ಜೊತೆಗೆ ಹಾಸ್ಯ ಪ್ರಧಾನವೂ ಆಗಿರಲಿದೆ ಎನ್ನಲಾಗುತ್ತಿದೆ. ಒಂದರ ಹಿಂದೊಂದು ಕಮರ್ಶಿಯಲ್, ಮಾಸ್ ಸಿನಿಮಾಗಳನ್ನೇ ಮಾಡಿಕೊಂಡು ಬರುತ್ತಿದ್ದ ರಜನೀಕಾಂತ್ ಖುದ್ದು ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಂಡಿದ್ದಾರೆ.

‘ಓ ಮೈ ಕಡವುಲೆ’ ಮತ್ತು ‘ಡ್ರಾಗನ್’ ಸಿನಿಮಾಗಳನ್ನು ನಿರ್ದೇಶಿಸಿರುವ ಅಶ್ವತ್ ಮಾರಿಮುತ್ತು ಸಿದ್ಧಪಡಿಸಿರುವ ಈ ಚಿತ್ರಕಥೆಯು, ಲಘು ಹಾಸ್ಯಭರಿತ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ಜೊತೆಗೆ ಬಲವಾದ ಭಾವನಾತ್ಮಕ ಕಥಾಹಂದರವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಕತೆ ಕೇಳಿದ ಬಳಿಕ ಸೂಪರ್‌ಸ್ಟಾರ್ ರಜನೀಕಾಂತ್​​ ಅವರಿಗೆ ಕತೆ ಬಹಳ ಇಷ್ಟವಾಗಿದ್ದು ಸಂಪೂರ್ಣವಾಗಿ ಮಾರುಹೋಗಿದ್ದರು ಮತ್ತು ಮುಖ್ಯವಾಗಿ ಚಿತ್ರದ ವಿಲನ್ ಪಾತ್ರವನ್ನು ವಿನ್ಯಾಸಗೊಳಿಸಿದ ರೀತಿಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ನಿರ್ದೇಶಕರು ತಿಳಿಸಿದ್ದಾರೆ. ಅಶ್ವತ್ ಅವರು ಈ ಹಿರಿಯ ನಟನನ್ನು ಸಂಪೂರ್ಣ ಹೊಸ ರೂಪದಲ್ಲಿ ಹೇಗೆ ತೋರಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಈಗಾಗಲೇ ತೀವ್ರ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಜೈಲರ್ 2: ರಜನಿಕಾಂತ್ ಸಿನಿಮಾದಲ್ಲಿ ಶಾರುಖ್ ಖಾನ್ ಬದಲು ಹೃತಿಕ್ ರೋಷನ್ ನಟನೆ?

‘ತಲೈವರ್ 173’ ಚಿತ್ರವನ್ನು ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಇದೇ ಪ್ರಾಜೆಕ್ಟ್​​ಗೆ ಈ ಹಿಂದೆ ಇಬ್ಬರು ನಿರ್ದೇಶಕರು ಬದಲಾಗಿದ್ದು, ಅಶ್ವತ್ಥ್ ಅವರು ಅಂತಿಮಗೊಂದಿದ್ದಾರೆ. ಇದಕ್ಕೂ ಮೊದಲು ನಿರ್ದೇಶಕರಾದ ಸುಂದರ್ ಸಿ ಮತ್ತು ಸಿಬಿ ಚಕ್ರವರ್ತಿ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತಾದರೂ, ಬೇರೆ ಬೇರೆ ಕಾರಣಕ್ಕೆ ಈ ನಿರ್ದೇಶಕರು ಬದಲಾದರು. ಸದ್ಯಕ್ಕೆ, ಅಶ್ವತ್ ಅವರು ಚಿತ್ರಕಥೆಯ ಸಂಪೂರ್ಣ ಡ್ರಾಫ್ಟ್ ಮುಗಿಯುವವರೆಗೂ ಯಾವುದೇ ದೊಡ್ಡ ಅಧಿಕೃತ ಪ್ರಕಟಣೆಗಳನ್ನು ಮಾಡದಂತೆ ನಿರ್ಮಾಪಕರಲ್ಲಿ ವಿನಂತಿಸಿದ್ದಾರೆ ಎನ್ನಲಾಗುತ್ತಿದೆ.

‘ತಲೈವರ್ 173’ ಮಾತ್ರವೇ ಅಲ್ಲದೆ ರಜನಿಕಾಂತ್ ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾ ಇದೇ ವರ್ಷದ ಅಂತ್ಯದ ವೇಳೆಗೆ ತೆರೆಗೆ ಬರಲು ಸಜ್ಜಾಗಿದೆ. ಇದರ ಜೊತೆಗೆ ಕಮಲ್ ಹಾಸನ್ ಜೊತೆಗೆ ರಜನೀಕಾಂತ್ ಅವರು ಸಿನಿಮಾ ಒಂದರಲ್ಲಿ ನಟಿಸಲಿದ್ದು, ಆ ಸಿನಿಮಾವನ್ನು ಸಹ ನೆಲ್ಸನ್ ಅವರೇ ನಿರ್ದೇಶನ ಮಾಡಲಿದ್ದಾರೆ. ‘ತಲೈವರ್ 173’ ಸಿನಿಮಾದ ಬಳಿಕ ಆ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Jagannath Rath Yatra: ಪುರಿ ಜಗನ್ನಾಥ ರಥಯಾತ್ರೆಗೆ ಹೋಗುವ ಮುನ್ನ ತಿಳಿಯಲೇಬೇಕಾದ ನಿಯಮ ಮತ್ತು ರಹಸ್ಯ! – Kannada News

ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಒಡಿಶಾದ ಪುರಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಪುರಿ ದೇವಾಲಯದ ಪವಿತ್ರ ಸಂಪ್ರದಾಯ ಮತ್ತು ಪಂಚಾಂಗದ ಪ್ರಕಾರ, ಈ ವರ್ಷದ ರಥಯಾತ್ರೆಯು ಜುಲೈ 16 ರಂದು ಪ್ರಾರಂಭವಾಗಿ ಜುಲೈ 27 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರಥಯಾತ್ರೆಯಲ್ಲಿ ಪೂರ್ಣ ಹೃದಯದಿಂದ ಭಾಗವಹಿಸುವ ಮತ್ತು ಭಗವಂತನ ರಥದ ಹಗ್ಗವನ್ನು ಎಳೆಯುವ ಭಕ್ತರು ಶಾಶ್ವತ ಪುಣ್ಯವನ್ನು ಪಡೆಯುವುದಲ್ಲದೆ, ತಮ್ಮ ಅನೇಕ ಜನ್ಮಗಳ ಪಾಪಗಳನ್ನು ತೊಡೆದುಹಾಕಿಕೊಂಡು ಮೋಕ್ಷಕ್ಕೆ ದಾರಿ ಮಾಡಿಕೊಳ್ಳುತ್ತಾರೆ. ಆದಾಗ್ಯೂ, ಇದು ಅತ್ಯಂತ ಶುಭ ಹಾಗೂ ಶಿಸ್ತಿನ ಹಬ್ಬವಾಗಿರುವುದರಿಂದ, ಇದರಲ್ಲಿ ಭಾಗವಹಿಸುವ ಭಕ್ತರಿಗೆ ಕೆಲವು ಕಠಿಣ ನಿಯಮಗಳು ಮತ್ತು ನಿಷೇಧಗಳಿವೆ. ನೀವು ಈ ಪವಿತ್ರ ಯಾತ್ರೆಯ ಭಾಗವಾಗಲು ಪುರಿಗೆ ಹೋಗುತ್ತಿದ್ದರೆ, ಈ ಕೆಳಗಿನ ವಿಷಯಗಳನ್ನು ತಪ್ಪದೇ ನೆನಪಿನಲ್ಲಿಡಿ.

ಮಹಾಪ್ರಸಾದವನ್ನು ಅಗೌರವಿಸುವುದು ಮಹಾಪಾಪ:

ಜಗನ್ನಾಥ ದೇವಾಲಯದ ಪ್ರಸಿದ್ಧ ಮತ್ತು ಭವ್ಯವಾದ ಒಲೆಯಲ್ಲಿ ತಯಾರಿಸಲಾದ ‘ಮಹಾ ಪ್ರಸಾದ’ವು ಸಾಕ್ಷಾತ್ ಬ್ರಹ್ಮನ ಸ್ವರೂಪವಾಗಿದೆ. ಈ ಪ್ರಸಾದವನ್ನು ಲಕ್ಷ್ಮಿ ದೇವಿಯ ನೇರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ ಎಂಬ ಅಚಲ ನಂಬಿಕೆಯಿದೆ. ನಿಮ್ಮ ಪ್ರಯಾಣದ ಸಮಯದಲ್ಲಿ ಅಥವಾ ದೇವಾಲಯದ ಆವರಣದಲ್ಲಿ ಯಾರಾದರೂ ನಿಮಗೆ ಈ ಪ್ರಸಾದವನ್ನು ಅರ್ಪಿಸಿದರೆ, ಅದನ್ನು ಎಂದಿಗೂ ನಿರಾಕರಿಸಬೇಡಿ. ಮಹಾ ಪ್ರಸಾದವನ್ನು ನೆಲದ ಮೇಲೆ ಬೀಳಿಸುವುದು, ಅದನ್ನು ತುಳಿಯುವುದು ಅಥವಾ ತಿಂದ ನಂತರ ತಟ್ಟೆಯಲ್ಲಿ ಎಂಜಲು ಇಡುವುದು ಭಗವಂತನಿಗೆ ಮಾಡುವ ಘೋರ ಅವಮಾನವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಅತ್ಯಂತ ಗೌರವದಿಂದ ತಲೆಬಾಗಿ ಪ್ರಸಾದವನ್ನು ಸ್ವೀಕರಿಸಿ.

ರಥ ಎಳೆಯುವಾಗ ದುರಹಂಕಾರ ಮತ್ತು ಜಗಳ ಸಲ್ಲದು:

ಪುರಿ ರಥಯಾತ್ರೆಯು ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಶ್ರೇಷ್ಠ ಸಂಕೇತವಾಗಿದೆ. ಭಗವಂತನ ಆಸ್ಥಾ
ನದಲ್ಲಿ ದೊಡ್ಡವರು-ಸಣ್ಣವರು, ರಾಜ-ಬಡವ ಎಂಬ ಯಾವುದೇ ಭೇದಭಾವವಿಲ್ಲ. ರಥದ ಹಗ್ಗವನ್ನು ಮುಟ್ಟುವುದರಿಂದಲೇ ಜನ್ಮ ಪಾವನವಾಗುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಈ ಹಗ್ಗವನ್ನು ಹಿಡಿಯುವ ಅಥವಾ ಎಳೆಯುವ ಗಡಿಬಿಡಿಯಲ್ಲಿ ಇತರ ಭಕ್ತರನ್ನು ನೋಯಿಸುವುದು, ಅವರನ್ನು ಬಲವಂತವಾಗಿ ತಳ್ಳುವುದು ಅಥವಾ ನಿಂದಿಸುವುದು ನೀವು ಗಳಿಸಿದ ಪುಣ್ಯವನ್ನು ತಕ್ಷಣವೇ ನಾಶಪಡಿಸುತ್ತದೆ. ಪ್ರತಿಯೊಬ್ಬರೂ ಭಗವಂತನ ರಥವನ್ನು ಅತ್ಯಂತ ನಮ್ರತೆ, ತಾಳ್ಮೆ ಮತ್ತು ಸೇವಾ ಮನೋಭಾವದಿಂದ ಎಳೆಯಬೇಕು.

ಚರ್ಮದ ವಸ್ತುಗಳು ಮತ್ತು ತಾಮಸಿಕ ಆಹಾರದಿಂದ ದೂರವಿರಿ:

ನೀವು ದರ್ಶನಕ್ಕಾಗಿ ಮುಖ್ಯ ರಥಗಳನ್ನು ಸಮೀಪಿಸುವಾಗ ಅಥವಾ ಹಗ್ಗ ಎಳೆಯುವಾಗ ಚರ್ಮದ ಬೆಲ್ಟ್‌ಗಳು, ಪರ್ಸ್‌ಗಳು, ಬೂಟುಗಳು ಅಥವಾ ಸ್ಯಾಂಡಲ್‌ಗಳಂತಹ ಅಶುದ್ಧ ವಸ್ತುಗಳನ್ನು ಒಯ್ಯುವುದನ್ನು ಸಂಪೂರ್ಣವಾಗಿ ತಪ್ಪಿಸಿ. ಇದರೊಂದಿಗೆ ದೈಹಿಕ ಮತ್ತು ಮಾನಸಿಕ ಶುದ್ಧತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಮಾಂಸ, ಮದ್ಯ ಅಥವಾ ಯಾವುದೇ ಇತರ ತಾಮಸಿಕ ಮತ್ತು ಮಾದಕ ವಸ್ತುಗಳನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಯಾತ್ರೆಯ ಸಮಯದಲ್ಲಿ ನಿರಂತರ ನಾಮಜಪ ಮತ್ತು ಸೇವೆ:

ರಥಯಾತ್ರೆಯ ಉದ್ದಕ್ಕೂ ನಿಮ್ಮ ಮನಸ್ಸು ಮತ್ತು ಮಾತನ್ನು ಪವಿತ್ರವಾಗಿಡುವುದು ಅವಶ್ಯಕ. ಮೆರವಣಿಗೆಯಲ್ಲಿ ಸಾಗುವಾಗ ಮನಸ್ಸಿನಲ್ಲೇ ಸದಾ “ಜೈ ಜಗನ್ನಾಥ” ಅಥವಾ “ಹರೇ ಕೃಷ್ಣ ಮಹಾಮಂತ್ರ”ವನ್ನು ಜಪಿಸುತ್ತಿರಿ. ಇದರೊಂದಿಗೆ, ದೂರದ ಊರುಗಳಿಂದ ಬರುವ ಭಕ್ತರಿಗೆ, ಮುಖ್ಯವಾಗಿ ವೃದ್ಧರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಅಥವಾ ಅನಾರೋಗ್ಯ ಪೀಡಿತರಿಗೆ ದಾರಿ ಮಾಡಿಕೊಡಿ ಮತ್ತು ಅಗತ್ಯವಿದ್ದಲ್ಲಿ ಅವರಿಗೆ ಸಹಾಯ ಹಸ್ತ ಚಾಚಿ. ಜಗನ್ನಾಥನು ತನ್ನ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಬಂದಾಗ, ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಸೇವಾಧಾರಿಗಳು ವಿಧಿಸಿರುವ ಸಾಂಪ್ರದಾಯಿಕ ದರ್ಶನ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಗೌರವಿಸಿ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಜಗನ್ನಾಥ ರಥಯಾತ್ರೆಯನ್ನು ಏಕೆ ನಡೆಸಲಾಗುತ್ತದೆ?

ದಂತಕಥೆಗಳ ಪ್ರಕಾರ, ವರ್ಷಕ್ಕೊಮ್ಮೆ ಜಗನ್ನಾಥ ಸ್ವಾಮಿಯು ಶ್ರೀಮಂದಿರದ ಗರ್ಭಗುಡಿಯಿಂದ ಹೊರಬಂದು ತನ್ನ ಭಕ್ತರಿಗೆ ಭೌತಿಕವಾಗಿ ದರ್ಶನ ನೀಡಿ ಅವರ ಕಷ್ಟಗಳನ್ನು ನಿವಾರಿಸುತ್ತಾನೆ. ಭಕ್ತನೊಬ್ಬನಿಗೆ ದೇವಾಲಯವನ್ನು ತಲುಪಲು ಸಾಧ್ಯವಾಗದಿದ್ದಾಗ, ಭಗವಂತನೇ ಬೀದಿಗಿಳಿದು ತನ್ನ ಭಕ್ತರನ್ನು ಭೇಟಿಯಾಗುತ್ತಾನೆ ಎಂಬುದಕ್ಕೆ ರಥಯಾತ್ರೆಯು ಜೀವಂತ ಸಾಕ್ಷಿಯಾಗಿದೆ. ಇದು ಭಗವಂತ ಮತ್ತು ಆತನ ಭಕ್ತರ ನಡುವಿನ ಅನನ್ಯ ಪ್ರೀತಿಯ ಸಂಕೇತವಾಗಿದೆ. ಈ ಯಾತ್ರೆಯ ಮತ್ತೊಂದು ಮುಖ್ಯ ಉದ್ದೇಶವೆಂದರೆ, ಭಗವಂತನು ತನ್ನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರೆಯ ಜೊತೆಗೆ ತನ್ನ ಅತ್ತೆಯ ಮನೆಗೆ (ಗುಂಡಿಚಾ ದೇವಸ್ಥಾನ) ಹೋಗಿ ಸುಮಾರು ಒಂಬತ್ತು ದಿನಗಳ ಕಾಲ ಅಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಅದಾದ ನಂತರ, ಆತ “ಬಹುಧಾ ಯಾತ್ರೆ” (ಮರಳಿ ಬರುವ ಪ್ರಯಾಣ) ಮೂಲಕ ತನ್ನ ಮುಖ್ಯ ದೇವಾಲಯಕ್ಕೆ ಹಿಂತಿರುಗುತ್ತಾನೆ.

ಸನಾತನ ಧರ್ಮದ ಭವ್ಯ ಸಾಂಸ್ಕೃತಿಕ ಸಂಗಮ:

ಜಗನ್ನಾಥ ರಥಯಾತ್ರೆ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ, ಇದು ಭಾರತದ ಅದ್ಭುತ ಸಾಂಸ್ಕೃತಿಕ ವೈವಿಧ್ಯತೆ, ಅಚಲ ನಂಬಿಕೆ ಮತ್ತು ಸಾಮಾಜಿಕ ಏಕತೆಯ ಭವ್ಯ ಸಂಗಮವಾಗಿದೆ. ಜುಲೈ 16 ರಂದು ಪ್ರಾರಂಭವಾಗುವ ಈ ಒಂಬತ್ತು ದಿನಗಳ ದಿವ್ಯ ಉತ್ಸವವು ಲಕ್ಷಾಂತರ ಭಕ್ತರಿಗೆ ಆಧ್ಯಾತ್ಮಿಕ ಜಾಗೃತಿಯನ್ನು ತರಲಿದೆ. ನೀವು ಸಹ ಈ ದೈವಿಕ ಆಚರಣೆಯ ಭಾಗವಾಗಲಿದ್ದರೆ, ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸಿ, ಮಹಾಪ್ರಭುಗಳ ಭಕ್ತಿಯಲ್ಲಿ ಲೀನವಾಗಿ ನಿಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನ ಅಭ್ಯರ್ಥಿಯ ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ – Kannada News

ನವದೆಹಲಿ, ಜೂನ್ 10: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರ ತಿರಸ್ಕೃತಗೊಂಡಿರುವ ವಿಷಯದ ಕುರಿತು ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮಧ್ಯಪ್ರದೇಶದಲ್ಲಿ ತನ್ನ ರಾಜ್ಯಸಭಾ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ನಂತರ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ರಾಜಕಾರಣವು ಆ ಪಕ್ಷದ ನಿಜವಾದ ಉದ್ದೇಶಗಳನ್ನು ಮತ್ತು ಅದರ ಆಂತರಿಕ ಪರಿಸ್ಥಿತಿಯನ್ನು ದೇಶದ ಮುಂದೆ ಸಂಪೂರ್ಣವಾಗಿ ಬಯಲು ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ವಿರುದ್ಧ ತೆಲಂಗಾಣದ ನ್ಯಾಯಾಲಯದಲ್ಲಿ ಪ್ರಕರಣವೊಂದು ಬಾಕಿ ಇತ್ತು ಎಂಬುದು ತೀರಾ ಸ್ಪಷ್ಟವಾದ ವಿಷಯ” ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಈ ಪ್ರಕರಣದ ಹಿನ್ನೆಲೆಯನ್ನು ವಿವರವಾಗಿ ಪ್ರಸ್ತಾಪಿಸಿದ ಸುಧಾಂಶು ತ್ರಿವೇದಿ, “ಅದು ತೆಲಂಗಾಣದ ಒಬ್ಬ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೇ ತನ್ನದೇ ರಾಜ್ಯದ ಮತ್ತೊಬ್ಬ ಕಾಂಗ್ರೆಸ್ ನಾಯಕನ ವಿರುದ್ಧ ಲೈಂಗಿಕ ಶೋಷಣೆ ಮತ್ತು ಅನುಚಿತ ವರ್ತನೆಯ ಆರೋಪ ಹೊರಿಸಿ ದಾಖಲಿಸಿದ್ದ ಪ್ರಕರಣವಾಗಿತ್ತು. ಆಕೆ ನೀಡಿದ್ದ ದೂರಿನಲ್ಲಿ ಆ ಸಮಯದಲ್ಲಿ ಉಸ್ತುವಾರಿಯಾಗಿದ್ದ ಮೀನಾಕ್ಷಿ ನಟರಾಜನ್ ಹೆಸರನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿದ್ದರು. ಕಾಂಗ್ರೆಸ್ ತನ್ನದೇ ಪಕ್ಷದ ಕಾರ್ಯಕರ್ತೆಯ ಮೇಲಾದ ದೌರ್ಜನ್ಯವನ್ನು ಮುಚ್ಚಿಟ್ಟಿತ್ತು” ಎಂದು ಟೀಕಿಸಿದ್ದಾರೆ.

“ಕಾನೂನಿನ ದೃಷ್ಟಿಯಿಂದ ನೋಡುವುದಾದರೆ, ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ವಿರುದ್ಧ ಬಾಕಿ ಇರುವ ಯಾವುದೇ ಪ್ರಕರಣದ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಕಡ್ಡಾಯವಾಗಿ ಬಹಿರಂಗಪಡಿಸಬೇಕಾಗುತ್ತದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ, ಹಾಗಿದ್ದಾಗ ಈ ಪ್ರಕರಣವನ್ನು ಮುಚ್ಚಲಾಗಿದೆ ಎಂದು ಅವರು ಲಿಖಿತ ಹೇಳಿಕೆಯನ್ನು ಏಕೆ ನೀಡಲಿಲ್ಲ? ತಮಗೆ ಈ ಚುನಾವಣೆಯಲ್ಲಿ ಸೋಲು ಖಚಿತ ಎಂಬುದನ್ನು ಮೊದಲೇ ಅರಿತಿದ್ದ ಕಾಂಗ್ರೆಸ್, ಉದ್ದೇಶಪೂರ್ವಕವಾಗಿಯೇ ತನ್ನ ಅಭ್ಯರ್ಥಿಯ ನಾಮಪತ್ರ ರದ್ದಾಗುವ ರೀತಿಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿತ್ತೇ?” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಮಾನ್-ಭಾರತ ಗ್ಯಾಸ್ ಪೈಪ್​ಲೈನ್ ಪ್ರಾಜೆಕ್ಟ್​ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ? – Kannada News

ಆಳಸಮುದ್ರ ಕೊಳವೆ ಮಾರ್ಗImage Credit source: Indiatoday

ನವದೆಹಲಿ, ಜೂನ್ 10: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಇಂಧನ ಭದ್ರತೆಯ ಕಾಳಜಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಮೂರು ದಶಕಗಳಷ್ಟು ಹಳೆಯದಾದ, ಮಹತ್ವಾಕಾಂಕ್ಷೆಯ ‘ಒಮಾನ್-ಗುಜರಾತ್ ಆಳಸಮುದ್ರದ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆ’ಗೆ (Middle East-India Deepwater Pipeline – MEIDP) ಮರುಜೀವ ನೀಡಿದೆ. ಸುಮಾರು 40,000 ಕೋಟಿ ರೂ ವೆಚ್ಚದ ಈ ಬೃಹತ್ ಯೋಜನೆಗಾಗಿ ವಿವರವಾದ ಸಾಧ್ಯತಾ ವರದಿ (Detailed Feasibility Report) ಸಿದ್ಧಪಡಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಪ್ರಮುಖ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಾದ ಗೇಲ್ (GAIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (EIL) ಗೆ ನಿರ್ದೇಶನ ನೀಡಿದೆ.

ದೆಲಿ ಮೂಲದ ಖಾಸಗಿ ಒಕ್ಕೂಟವಾದ ‘ಸೌತ್ ಏಷ್ಯಾ ಗ್ಯಾಸ್ ಎಂಟರ್‌ಪ್ರೈಸ್’ (SAGE) ಸಲ್ಲಿಸಿದ ಮುನ್ನೋಟ ವರದಿಯ ಆಧಾರದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಯೋಜನೆಯು ಒಮಾನ್‌ನ ರಾಸ್ ಅಲ್ ಜಿಫಾನ್ ಕರಾವಳಿಯಿಂದ ಭಾರತದ ಗುಜರಾತ್‌ನ ಪೋರಬಂದರ್ ಕರಾವಳಿಯವರೆಗೆ ಅರಬ್ಬಿ ಸಮುದ್ರದ ಆಳದಲ್ಲಿ ಸುಮಾರು 2,000 ಕಿಲೋಮೀಟರ್ ಉದ್ದದ ಪೈಪ್‌ಲೈನ್ ನಿರ್ಮಿಸುವುದನ್ನು ಒಳಗೊಂಡಿದೆ. ಪೂರ್ಣಗೊಂಡ ನಂತರ, ಇದು ಪ್ರತಿದಿನ ಸುಮಾರು 31 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (mmscmd) ನೈಸರ್ಗಿಕ ಅನಿಲವನ್ನು ನೇರವಾಗಿ ಭಾರತಕ್ಕೆ ಪೂರೈಸುವ ಸಾಮರ್ಥ್ಯ ಹೊಂದಿರಲಿದೆ.

ಮೂರು ದಶಕಗಳ ಹಿಂದಿನ ಕನಸು

ಭಾರತ ಮತ್ತು ಓಮನ್ ನಡುವೆ ಗ್ಯಾಸ್ ಪೈಪ್​ಲೈನ್ ಸ್ಥಾಪಿಸುವ ಇರಾದೆ ಇವತ್ತಿನದಲ್ಲ. ಇದು ಮೂರು ದಶಕಗಳ ಹಿಂದಿನ ಕನಸು. 20ನೇ ಶತಮಾನದ ಎಂಬತ್ತರ ದಶಕದಲ್ಲಿ ಮೊದಲ ಪ್ರಸ್ತಾವ ಆಗುತ್ತದೆ. ನಂತರ, 1993ರಲ್ಲಿ ಸಾಧ್ಯತಾ ವರದಿಗಾಗಿ ಅಧ್ಯಯನ ನಡೆಸಲಾಗುತ್ತದೆ. ಹಾಗೆಯೇ ಯೋಜನೆ ಬೆಳಕು ಕಾಣುವುದಿಲ್ಲ. ಈ ಮಧ್ಯೆ ಹಲವು ಬಾರಿ ಈ ಯೋಜನೆಗೆ ಜೀವ ಕೊಡುವ ಪ್ರಯತ್ನಗಳಾಗುತ್ತವಾದರೂ ಯೋಜನೆಯು ಕಡತ ಬಿಟ್ಟು ಅಲುಗಾಡುವುದಿಲ್ಲ. ಈಗ ಸರ್ಕಾರ ಮತ್ತೊಮ್ಮೆ ಆಸಕ್ತಿ ತೋರಿದೆ. ಹಾರ್ಮುಜ್ ಜಲಸಂಕಷ್ಟವು ಈ ಪೈಪ್​ಲೈನ್ ಯೋಜನೆಯ ಮಹತ್ವವನ್ನು ಎತ್ತಿ ತೋರಿಸಿದಂತಿದೆ.

ಭಾರತಕ್ಕೆ ಈ ಯೋಜನೆ ಏಕೆ ಮುಖ್ಯ?

ತೈಲ ಸರಬರಾಜಿಗೆ ಹಡಗಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ಈ ಪೈಪ್​ಲೈನ್ ಯೋಜನೆ ಸಹಕಾರಿಯಾಗುತ್ತದೆ. ಇಂಧನ ಸರಬರಾಜು ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಲು ಸಾಧ್ಯವಾಗುತ್ತದೆ. ಗಲ್ಫ್ ರಾಷ್ಟ್ರಗಳಿಂದ ತೈಲ ಹೊತ್ತುಬರುವ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಮೂಲಕವೇ ಬರಬೇಕು. ಕಳೆದ ಕೆಲ ತಿಂಗಳಿಂದ ಉಂಟಾದ ರೀತಿಯ ಬಿಕ್ಕಟ್ಟು ಉದ್ಭವವಾದಲ್ಲಿ ತೈಲಕ್ಕೆ ತತ್ವಾರ ಪಡಬೇಕಾಗುತ್ತದೆ. ಈ ಆಳಸಮುದ್ರದ ಪೈಪ್‌ಲೈನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವುದರಿಂದ ಭಾರತಕ್ಕೆ ಸುರಕ್ಷಿತ ಇಂಧನ ಕಾರಿಡಾರ್ ಸಿಗಲಿದೆ.

2030ರ ಇಂಧನ ಗುರಿ: ಭಾರತವು ತನ್ನ ಒಟ್ಟು ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನು 2030ರ ವೇಳೆಗೆ ಶೇ. 15 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಇಂಧನ, ರಸಗೊಬ್ಬರ ಮತ್ತು ವಿದ್ಯುತ್ ವಲಯಕ್ಕೆ ಇದು ಅತ್ಯಗತ್ಯ.

ಪಾಕಿಸ್ತಾನದ ಹಸ್ತಕ್ಷೇಪವಿಲ್ಲ: ಈ ಹಿಂದೆ ನೆಲದ ಮೇಲಿಂದ ಪೈಪ್​ಲೈನ್ ಹಾಕಲು ಯೋಜಿಸಲಾಗಿತ್ತು. ಆದರೆ, ಆ ಯೋಜನೆಯಲ್ಲಿ ಪೈಪ್​ಲೈನ್ ಪಾಕಿಸ್ತಾನದ ಮೂಲಕ ಹಾದುಹೋಗಬೇಕು. ಭದ್ರತಾ ದೃಷ್ಟಿಯಿಂದ ಇದು ಸಮಂಜಸ ಎನಿಸುವುದಿಲ್ಲ. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಅಂಡರ್​-ಸೀ ಕೊಳವೆ ಮಾರ್ಗವು ಸಂಪೂರ್ಣವಾಗಿ ಅಂತಾರಾಷ್ಟ್ರಿಯ ಜಲಪ್ರದೇಶದಲ್ಲಿ ಇರಲಿದೆ. ಯಾವುದೇ ಮೂರನೇ ದೇಶದ (Transit Country) ಹಸ್ತಕ್ಷೇಪ ಇರುವುದಿಲ್ಲ. ಯೋಜಿಸಲಾಗಿದ್ದ ಭೂಪ್ರದೇಶದ ಪೈಪ್‌ಲೈನ್‌ಗಳು ಪಾಕಿಸ್ತಾನದ ಮೂಲಕ ಹಾದುಹೋಗಬೇಕಿದ್ದರಿಂದ ಭದ್ರತಾ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿದ್ದವು.

ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

ಯೋಜನೆಯ ಸಾಧಕ ಮತ್ತು ಬಾಧಕಗಳು: ಯಾವುದೇ ಬೃಹತ್ ಮೂಲಸೌಕರ್ಯ ಯೋಜನೆಯಂತೆ, ಈ ಸಾಗರದಾಳದ ಪೈಪ್‌ಲೈನ್ ಕೂಡ ತನ್ನದೇ ಆದ ಅನುಕೂಲ ಮತ್ತು ಸವಾಲುಗಳನ್ನು ಹೊಂದಿದೆ:

ಆಳಸಮುದ್ರ ಪೈಪ್​ಲೈನ್ ಯೋಜನೆಯ ಸಾಧಕ (Pros) ಅಂಶಗಳು

ಹಡಗುಗಳ (LNG Tankers) ಮೂಲಕ ಅನಿಲವನ್ನು ದ್ರವೀಕರಿಸಿ, ಸಾಗಿಸಿ, ನಂತರ ಮತ್ತೆ ಅನಿಲ ರೂಪಕ್ಕೆ ತರುವ ಪ್ರಕ್ರಿಯೆಗೆ ಹೋಲಿಸಿದರೆ ಪೈಪ್‌ಲೈನ್ ಮೂಲಕ ನೇರ ಸರಬರಾಜು ತುಂಬಾ ಅಗ್ಗ. ಸಾಗಣೆ ವೆಚ್ಚವು ಪ್ರತಿ MMBtu ಗೆ ಕೇವಲ $2 ರಿಂದ $2.25 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಕಡಲ ಮಾರ್ಗದಲ್ಲಿ ಹಡಗುಗಳ ಬಾಡಿಗೆ ದರ (Freight Rates) ಮತ್ತು ಇಂಧನ ಬೆಲೆಗಳ ತೀವ್ರ ಏರಿಳಿತದಿಂದ ಭಾರತದ ಆರ್ಥಿಕತೆಗೆ ಆಗುವ ನಷ್ಟವನ್ನು ಇದು ತಪ್ಪಿಸುತ್ತದೆ.

ಈ ಪೈಪ್‌ಲೈನ್ ಕೇವಲ ಒಮಾನ್‌ಗೆ ಸೀಮಿತವಾಗದೆ, ಭವಿಷ್ಯದಲ್ಲಿ ಯುಎಇ, ಸೌದಿ ಅರೇಬಿಯಾ ಮತ್ತು ಕತಾರ್‌ನಂತಹ ಜಗತ್ತಿನ ಅತಿ ದೊಡ್ಡ ಅನಿಲ ನಿಕ್ಷೇಪ ಹೊಂದಿರುವ ದೇಶಗಳ ಗ್ರಿಡ್‌ಗಳೊಂದಿಗೆ ಸಂಪರ್ಕ ಸಾಧಿಸಲು ಭಾರತಕ್ಕೆ ಹೆಬ್ಬಾಗಿಲಾಗಲಿದೆ.

ಯೋಜನೆಯ ಬಾಧಕ (Cons) ಅಂಶಗಳು

ಈ ಪೈಪ್‌ಲೈನ್ ಅರಬ್ಬಿ ಸಮುದ್ರದ ಸುಮಾರು 3,450 ಮೀಟರ್ (3.5 ಕಿಮೀ) ಆಳದಲ್ಲಿ ಹಾದುಹೋಗಬೇಕು. ಇಷ್ಟು ಆಳದಲ್ಲಿ ನೀರಿನ ಒತ್ತಡವು ಅತಿಯಾಗಿರುತ್ತದೆ. ಜಗತ್ತಿನಲ್ಲೇ ಇಷ್ಟು ಆಳದಲ್ಲಿ ಪೈಪ್‌ಲೈನ್ ನಿರ್ಮಿಸಿದ ಉದಾಹರಣೆಗಳು ತೀರಾ ವಿರಳ.

ಈ ಮಾರ್ಗವು ಸಮುದ್ರದಾಳದ ಸಕ್ರಿಯ ಭೂಕಂಪನ ವಲಯಗಳು (Owen Fracture Zone) ಮತ್ತು ಕಡಿದಾದ ಇಳಿಜಾರುಗಳ ಮೂಲಕ ಹಾದುಹೋಗುವುದರಿಂದ, ನಡುಸಮುದ್ರದಲ್ಲಿ ಪೈಪ್‌ಲೈನ್ ದುರಸ್ತಿ ಮತ್ತು ನಿರ್ವಹಣೆ ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಕೆಲಸವಾಗಿದೆ.

ಈ ಯೋಜನೆಗೆ ಸರಣಿ ಅನುಮತಿಗಳು ಸಿಕ್ಕರೂ ಸಹ, ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡು ಭಾರತಕ್ಕೆ ಅನಿಲ ಪೂರೈಕೆಯಾಗಲು ಕನಿಷ್ಠ 5 ರಿಂದ 7 ವರ್ಷಗಳು ಬೇಕಾಗಬಹುದು.

₹40,000 ಕೋಟಿಗೂ ಅಧಿಕ ವೆಚ್ಚದ ಈ ಯೋಜನೆಗೆ ಬಂಡವಾಳ ಕ್ರೋಡೀಕರಣ ಮಾಡುವುದು ಮತ್ತು ದೀರ್ಘಾವಧಿಯ ಅನಿಲ ಖರೀದಿ ಒಪ್ಪಂದಗಳನ್ನು (Take-or-pay contracts) ಮಾಡಿಕೊಳ್ಳುವುದು ಆರ್ಥಿಕವಾಗಿ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಸಾಕಷ್ಟು ಸವಾಲುಗಳಿಂದ ಕೂಡಿರುವ ಭಾರತ-ಓಮನ್ ಆಳಸಮುದ್ರ ಪೈಪ್​ಲೈನ್ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯತಾ ವರದಿ ತಯಾರಿಸುವಂತೆ ಗೇಲ್ (ಜಿಎಐಎಲ್), ಎಂಜಿನಿಯರ್ಸ್ ಇಂಡಿಯಾ, ಇಂಡಿಯನ್ ಆಯಿಲ್ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಲಾಗಿದೆ. ಯೋಜನೆಯ ಎಲ್ಲಾ ಸಾಧಕ ಮತ್ತು ಬಾಧಕಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಕೊಡಲಾಗುತ್ತದೆ. ಅದರಲ್ಲಿರುವ ಅಂಶಗಳ ಮೇಲೆ ಸರ್ಕಾರದ ಮುಂದಿನ ನಡೆ ಇರುತ್ತದೆ.

ಭಾರತವು ಕೇವಲ ಸಮುದ್ರದ ಹಡಗು ಮಾರ್ಗಗಳನ್ನು ನೆಚ್ಚಿಕೊಳ್ಳದೆ, ತನ್ನ ಇಂಧನ ಭದ್ರತೆಯನ್ನು ಗಟ್ಟಿಗೊಳಿಸಲು ಭೌಗೋಳಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಿದ್ಧವಾಗುತ್ತಿದೆ ಎಂಬುದಕ್ಕೆ ಈ ಯೋಜನೆಯ ಮರುಜೀವವೇ ಸಾಕ್ಷಿ. ಮುಂಬರುವ ಸಾಧ್ಯತಾ ವರದಿಯ ಫಲಿತಾಂಶವು ಈ ಏಷ್ಯಾದ ಅತಿ ದೊಡ್ಡ ಇಂಧನ ಕಾರಿಡಾರ್‌ನ ಭವಿಷ್ಯವನ್ನು ನಿರ್ಧರಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಕ್ಕ 78 ಕೋಟಿ ರೂ. ಲಾಟರಿ ಹಣವನ್ನು ಸ್ನೇಹಿತರ ಜತೆ ಹಂಚಿಕೊಂಡ ಸೆಕ್ಯೂರಿಟಿ ಗಾರ್ಡ್​ – Kannada News

ದುಬೈ, ಜೂನ್ 10: ದುಬೈನ ಅಬುಧಾಬಿಯ ಯಾವುದೋ ಒಂದು ಅಪಾರ್ಟ್‌ಮೆಂಟ್‌ನ ಗೇಟಿನ ಬಳಿ ನಿಂತು ಬರುವ-ಹೋಗುವ ದಾರಿಹೋಕರನ್ನು ನಗುಮೊಗದಿಂದ ಸ್ವಾಗತಿಸುತ್ತಿದ್ದ 26 ವರ್ಷದ ನೇಪಾಳಿ ಯುವಕ   ತಯಾಬ್ ಖಾನ್‌ನ ಬದುಕು ಇಂದು ಜಗತ್ತೇ ತಿರುಗಿ ನೋಡುವಂತೆ ಬದಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೇವಲ ಭದ್ರತಾ ಸಿಬ್ಬಂದಿಯಾಗಿ (ಸೆಕ್ಯೂರಿಟಿ ಗಾರ್ಡ್) ದುಡಿಯುತ್ತಿದ್ದ ತಯಾಬ್,  ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಕೋಟಿ ಕೋಟಿ ಲಾಟರಿ(Lottery) ಹಣ ಕೈಗೆ ಬಂದಾಗ ಆ ಯುವಕ ಮೊದಲು ಮಾಡಿದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ.

ಆ ಒಂದು ಇ-ಮೇಲ್ ತಂದ ನಡುಕ
ಈದ್ ಅಲ್-ಅಧಾ ಹಬ್ಬದ ರಜಾದಿನಗಳ ಆ ರಾತ್ರಿ, ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ ತಯಾಬ್ ಮಾತ್ರ ಎಂದಿನಂತೆ ತನ್ನ ನೈಟ್ ಡ್ಯೂಟಿಯಲ್ಲಿದ್ದ. ಟಿವಿಯಲ್ಲಿ ಲಾಟರಿ ಡ್ರಾ ನೇರಪ್ರಸಾರವಾಗುತ್ತಿದ್ದರೂ, ತನಗೇನು ಸಿಗುತ್ತದೆ ಎಂಬ ಉದಾಸೀನತೆಯಿಂದ ಆತ ಕೆಲಸದಲ್ಲೇ ಮಗ್ನನಾಗಿದ್ದ. ಅಷ್ಟರಲ್ಲಿ ಮೊಬೈಲ್‌ಗೆ ಒಂದು ಇ-ಮೇಲ್ ಬಂತು.

ಸಾಮಾನ್ಯವಾಗಿ ಸಣ್ಣಪುಟ್ಟ ಬಹುಮಾನ ಬಂದಾಗ ಬರುವ ಇ-ಮೇಲ್ ಇರಬಹುದು ಎಂದುಕೊಂಡು ತಯಾಬ್ ಅದನ್ನು ತೆರೆದಾಗ ಅವರ ಕಣ್ಣುಗಳೇ ಮಂಜಾದವು. ಅಲ್ಲಿ ಬರೆದಿದ್ದ ಮೊತ್ತ ಬರೋಬ್ಬರಿ 30 ಮಿಲಿಯನ್ ದಿರ್ಹಮ್ಸ್ (ಸುಮಾರು 78 ಕೋಟಿಗೂ ಅಧಿಕ ರೂಪಾಯಿಗಳು!) ಆ ಮೊತ್ತವನ್ನು ನೋಡಿದಾಗ ನನ್ನ ಕೈಕಾಲುಗಳು ನಡುಗಲು ಆರಂಭಿಸಿದವು. ತಾನು ಎಚ್ಚರವಿದ್ದೇನೆಯೇ ಅಥವಾ ಕನಸು ಕಾಣುತ್ತಿದ್ದೇನೋ ನನಗೇ ಅರ್ಥವಾಗಲಿಲ್ಲ ಎಂದು ಆ ಕ್ಷಣದ ರೋಮಾಂಚನವನ್ನು ತಯಾಬ್ ನೆನಪಿಸಿಕೊಳ್ಳುತ್ತಾರೆ.

ಮತ್ತಷ್ಟು ಓದಿ: ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ

ಐದು ಜನ ಸ್ನೇಹಿತರು, 50 ದಿರ್ಹಮ್
ಈ ಪವಾಡದ ಹಿಂದೆ ಕೇವಲ ಅದೃಷ್ಟವಿರಲಿಲ್ಲ, ಐದು ಜನ ಜೀವದ ಗೆಳೆಯರ ಒಗ್ಗಟ್ಟಿನ ಶಕ್ತಿಯಿತ್ತು. 2024ರ ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಲಾಟರಿ ಬಗ್ಗೆ ತಿಳಿದುಕೊಂಡ ತಯ್ಯಾಬ್ ಮತ್ತು ಆತನ ನಾಲ್ವರು ಸ್ನೇಹಿತರು ಸೇರಿ ಒಂದು ನಿರ್ಧಾರ ಮಾಡಿದರು. ಪ್ರತಿಯೊಬ್ಬರೂ ತಲಾ 50 ದಿರ್ಹಮ್‌ಗಳನ್ನು (ಒಟ್ಟು 250 ದಿರ್ಹಮ್) ಒಟ್ಟುಗೂಡಿಸಿ ಪ್ರತಿ ವಾರ ಲಾಟರಿ ಟಿಕೆಟ್ ಖರೀದಿಸಲು ಆರಂಭಿಸಿದರು.

ವಾರ ವಾರವೂ ನಿರಾಸೆಯಾಗುತ್ತಿದ್ದರೂ, ಅವರು ಭರವಸೆ ಕಳೆದುಕೊಳ್ಳಲಿಲ್ಲ. ಪ್ರತಿ ವಾರ ಒಬ್ಬೊಬ್ಬ ಸ್ನೇಹಿತ ಒಂದೊಂದು ಅದೃಷ್ಟದ ಸಂಖ್ಯೆಯನ್ನು ಆರಿಸುತ್ತಿದ್ದ. ಅಂತಿಮವಾಗಿ ತಿಂಗಳುಗಳ ಅವರ ತಾಳ್ಮೆಗೆ, ಕಠಿಣ ಪರಿಶ್ರಮಕ್ಕೆ ವಿಧಿಯೇ ತಲೆಬಾಗಿತು. ಐದೂ ಜನ ಸ್ನೇಹಿತರು ಇಂದು ಒಟ್ಟಿಗೆ ಮಿಲಿಯನೇರ್‌ಗಳಾಗಿದ್ದಾರೆ.

ಇನ್ನು ಗುಲಾಮಗಿರಿ ಸಾಕು, ನಾನೀಗ ಉದ್ಯಮಿ
ನಾಲ್ಕು ವರ್ಷಗಳ ಕಾಲ ಬೇರೆಯವರ ಕೈಕೆಳಗೆ, ಕಟ್ಟುನಿಟ್ಟಿನ ನಿಯಮಗಳ ನಡುವೆ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿದ ತಯಾಬ್, ಇನ್ನು ಮುಂದೆ ತಾನು ಆ ಕೆಲಸಕ್ಕೆ ಮರಳುವುದಿಲ್ಲ ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ.

ಇಷ್ಟು ದಿನ ಇತರರಿಗಾಗಿ ದುಡಿದಿದ್ದು ಸಾಕು, ಆ ಗುಲಾಮಗಿರಿಯ ಬದುಕಿನಿಂದ ನನಗೆ ಮುಕ್ತಿ ಸಿಕ್ಕಿದೆ. ಈಗ ನನ್ನದೇ ಆದ ಹೊಸ ವ್ಯವಹಾರವನ್ನು (Business) ಆರಂಭಿಸುತ್ತೇನೆ ಎನ್ನುವ ತಯಾಬ್, ತನ್ನ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ ಒಬ್ಬ ಯಶಸ್ವಿ ಉದ್ಯಮಿಯಾಗುವ ಹಂಬಲ ಹೊಂದಿದ್ದಾರೆ.

ಹಣ ಬಂದ ತಕ್ಷಣ ತಯಾಬ್ಗೆ ನೆನಪಾಗಿದ್ದು ತನ್ನ ಹೆತ್ತವರು ಮತ್ತು ತನಗೆ ಬದುಕು ಕಟ್ಟಿಕೊಟ್ಟ ಚಿಕ್ಕಪ್ಪ. ವರ್ಷಗಳ ಹಿಂದೆ ತನಗೆ ಯುಎಇಗೆ ಬರಲು ಆರ್ಥಿಕವಾಗಿ ಸಹಾಯ ಮಾಡಿದ್ದ ಚಿಕ್ಕಪ್ಪನಿಗೆ ತಯಾಬ್ ಮೊದಲು ಫೋನ್ ಮಾಡಿ ವಿಷಯ ತಿಳಿಸಿದ. ಮೊತ್ತವನ್ನು ಕೇಳಿದ ತಕ್ಷಣ ಆತನ ಚಿಕ್ಕಪ್ಪನಿಗೆ ಮಾತು ಹೊರಡಲಿಲ್ಲ, ಫೋನಿನ ಆ ಕಡೆಯಿಂದ ಕೇವಲ ಆನಂದಬಾಷ್ಪದ ಸದ್ದಷ್ಟೇ ಕೇಳಿಸುತ್ತಿತ್ತು. ತಯಾಬ್ನ ಮೊದಲ ಆದ್ಯತೆ ನೇಪಾಳದಲ್ಲಿ ತನ್ನ ಕುಟುಂಬಕ್ಕಾಗಿ ಒಂದು ಸುಂದರವಾದ, ಐಷಾರಾಮಿ ಮನೆಯನ್ನು ನಿರ್ಮಿಸುವುದು. ಕಷ್ಟದಲ್ಲೇ ಕಾಲ ಕಳೆದ ಹೆತ್ತವರಿಗೆ ಜಗತ್ತಿನ ಎಲ್ಲಾ ಸುಖವನ್ನು ನೀಡಬೇಕೆಂಬುದು ಅವರ ಆಸೆ.

ಥಾರ್ ಜೀಪ್, ರೋಲೆಕ್ಸ್ ವಾಚ್ ಮತ್ತು ದುಬೈ ಪ್ರಾಪರ್ಟಿ
ಭವಿಷ್ಯದ ದೊಡ್ಡ ಬಿಸಿನೆಸ್ ಯೋಜನೆಗಳ ಜೊತೆಗೆ ತಯಾಬ್ ತನ್ನ ಮನಸ್ಸಿನ ಮೂಲೆಯಲ್ಲಿದ್ದ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ, ತುಂಬಾ ದಿನಗಳಿಂದ ಆತ ಆಸೆಪಟ್ಟಿದ್ದ ಎರಡು ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version