ಕೊಪ್ಪಳ, ಜೂನ್ 10: ನಗರದ ಹೊಸಪೇಟೆ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಟಿಎಂ ಕೇಂದ್ರದಲ್ಲಿ ನಸುಕಿನ ಜಾವ ಭೀಕರ ದರೋಡೆ ಯತ್ನವೊಂದು ನಡೆದಿದೆ. ನಸುಕಿನ 3 ರಿಂದ 3:30 ರ ಸುಮಾರಿಗೆ ಕಳವಿಗೆ ಬಂದ ಖದೀಮರು, ಮೊದಲು ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ (Black Spray) ಹೊಡೆದು ದೃಶ್ಯಾವಳಿಗಳು ಸೆರೆಯಾಗದಂತೆ ತಡೆದಿದ್ದಾರೆ. ಬಳಿಕ ಗ್ಯಾಸ್ ಕಟರ್ ಯಂತ್ರದ ಸಹಾಯದಿಂದ ಎಟಿಎಂ ಯಂತ್ರದ ಮೊದಲ ಕಬ್ಬಿಣದ ಬಾಗಿಲನ್ನು ಕತ್ತರಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಗ್ಯಾಸ್ ಕಟರ್ನ ಕಿಡಿಯಿಂದಾಗಿ ಎಟಿಎಂ ಯಂತ್ರಕ್ಕೆ ದಿಢೀರನೆ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಹಣ ದೋಚುವ ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಎಟಿಎಂ ಕೇಂದ್ರದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಬರುತ್ತಿರುವುದನ್ನು ಗಮನಿಸಿದ ಕಟ್ಟಡದ ಮಾಲೀಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾಬೂಲ್, ಜೂನ್ 10: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ(Airstrike) ನಡೆಸಿದೆ. ಈ ಘಟನೆಯಲ್ಲಿ 11 ಮಂದಿ ಮಕ್ಕಳು ಸೇರಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಧ್ಯ ಏಷ್ಯಾದ ಪ್ರಾದೇಶಿಕ ಸ್ಥಿರತೆ ಮತ್ತು ಗಡಿ ಭದ್ರತೆಯ ದೃಷ್ಟಿಯಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಗಡಿ ಪ್ರದೇಶಗಳಲ್ಲಿ ಇತ್ತೀಚೆಗೆ ಕಂಡುಬಂದಿರುವ ಮಿಲಿಟರಿ ಚಟುವಟಿಕೆಗಳು ಜಾಗತಿಕ ಗಮನ ಸೆಳೆದಿವೆ. ಗಡಿಯಲ್ಲಿ ಶಾಂತಿ ಮೂಡಿಸಲು ಮತ್ತು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಪ್ರಯತ್ನಗಳು ಆರಂಭವಾಗಿವೆ.
ವೈಮಾನಿಕ ದಾಳಿ
ಅಫ್ಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ಅಧಿಕೃತ ಪ್ರಕಟಣೆಯ ಪ್ರಕಾರ, ಗಡಿ ಭಾಗದ ಪ್ರಾಂತ್ಯಗಳಾದ ಕುನಾರ್, ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಇತ್ತೀಚೆಗೆ ವೈಮಾನಿಕ ನಿಗಾ ಮತ್ತು ಬಾಂಬ್ ದಾಳಿಗಳು ನಡೆದಿವೆ. ಈ ದುರದೃಷ್ಟಕರ ಘಟನೆಯಲ್ಲಿ ಕೆಲವು ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ ಎಂದು ಅಫ್ಘಾನ್ ಆಡಳಿತ ತಿಳಿಸಿದೆ. ಗಡಿ ಭಾಗದಲ್ಲಿ ಉಂಟಾಗಿರುವ ಈ ಉದ್ವಿಗ್ನತೆಯನ್ನು ನಿಯಂತ್ರಿಸಲು ಉಭಯ ದೇಶಗಳ ರಕ್ಷಣಾ ವಿಭಾಗಗಳು ಪರಿಶೀಲನೆ ನಡೆಸುತ್ತಿವೆ.
ತನ್ನ ದೇಶದೊಳಗೆ ಅಶಾಂತಿ ಸೃಷ್ಟಿಸುತ್ತಿರುವ ನಿಷೇಧಿತ ಸಂಘಟನೆಗಳಿಗೆ ಗಡಿ ಭಾಗದಲ್ಲಿ ಆಶ್ರಯ ಸಿಗುತ್ತಿರುವುದನ್ನು ತಡೆಯಲು ತಾನು ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ. ತಾನು ಯಾವುದೇ ವಿದೇಶಿ ಸಂಘಟನೆಗಳಿಗೆ ತನ್ನ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಮತ್ತು ಗಡಿಯಲ್ಲಿನ ನುಸುಳುವಿಕೆಯನ್ನು ತಡೆಯಲು ಬದ್ಧನಾಗಿರುವುದಾಗಿ ಅಫ್ಘಾನಿಸ್ತಾನ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆ ಮತ್ತು ಭಾರತದ ಶಾಂತಿ ಮಂತ್ರ
ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದಿಂದ ಇರುವ ಮಾನವೀಯ ಬಿಕ್ಕಟ್ಟನ್ನು ನೀಗಿಸಲು ಮತ್ತು ಅಲ್ಲಿನ ನಾಗರಿಕರ, ಅದರಲ್ಲೂ ಮುಖ್ಯವಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ವಿಶ್ವಸಂಸ್ಥೆ (UN) ನಿರಂತರವಾಗಿ ಶ್ರಮಿಸುತ್ತಿದೆ. ಭಾರತವು ಕೂಡ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಅಫ್ಘಾನ್ ನಾಗರಿಕರ ರಕ್ಷಣೆ ಮತ್ತು ಆ ಭಾಗದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ.
ಪ್ರಸ್ತುತ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸದೆ, ಉಭಯ ದೇಶಗಳು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಗಡಿ ನಿಯಮಾವಳಿಗಳನ್ನು ಗೌರವಿಸಿ, ಪ್ರಾದೇಶಿಕ ಶಾಂತಿಯನ್ನು ಮರುಸ್ಥಾಪಿಸಬೇಕು ಎಂಬುದು ಜಾಗತಿಕ ನಾಯಕರ ಆಶಯವಾಗಿದೆ. ಇದು ಇಡೀ ಮಧ್ಯ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಹೊಸ ಮುನ್ನುಡಿ ಬರೆಯಲಿದೆ.
ಬಹುಭಾಷಾ ಹಿರಿಯ ನಿರ್ದೇಶಕ ಮತ್ತು ನಟ ಭಾರತಿ ರಾಜ (86) ನಿಧನರಾಗಿದ್ದಾರೆ. ವೃದ್ಧಾಪ್ಯ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ (ಜೂನ್ 10) ಮುಂಜಾನೆ ಅವರು ಕೊನೆಯುಸಿರೆಳೆದರು. ಅವರ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
1977ರ ತಮಿಳು ಚಿತ್ರ ’16 ವಯತಿನಿಲೆ’ ಮೂಲಕ ಭಾರತಿ ರಾಜ ನಿರ್ದೇಶಕರಾದರು. ಅದಾದ ನಂತರ, ಅವರು ‘ಕಿಲಕ್ಕೆ ಪೋಗಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’, ‘ಮುದಲ್ ಮರಿಯಥೈ’ ಮತ್ತು ಇತರ ಸೂಪರ್ ಹಿಟ್ ಚಿತ್ರಗಳನ್ನು ತಮಿಳು ಪ್ರೇಕ್ಷಕರಿಗೆ ನೀಡಿದರು.
ವಿಶೇಷ ಎಂದರೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ಭಾರತಿ ರಾಜ ಕೆಲಸ ಕಲಿತಿದ್ದರು. ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕ ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದರು. ಆದಾಗ್ಯೂ ಭಾರತಿ ರಾಜ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ.
ದಂತಕಥೆಯ ನಿರ್ದೇಶಕರು ತೆಲುಗಿನಲ್ಲಿ ಅನೇಕ ಕ್ಲಾಸಿಕ್ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈತರಂ ಇಲ್ಲು’, ‘ಎರ್ರಾ ಗುಲಾಬಿಲು’, ‘ಟಿಕ್ ಟಿಕ್ ಟಿಕ್’, ‘ಕೊತ್ತ ಜೀವನಲು’, ‘ಯುವತರಂ ಪಿರಿದಿಂಡಿ’ ಹೀಗೆ ಹಲವು ಉತ್ತಮ ಚಿತ್ರಗಳನ್ನು ತೆಲುಗು ಪ್ರೇಕ್ಷಕರಿಗೆ ಭಾರತಿರಾಜ ನೀಡಿದ್ದಾರೆ.
ಭಾರತಿ ರಾಜಾ ಕೊನೆಯದಾಗಿ ‘ಮೀಂದುಮ್ ಒರು ಮರಿಯಾದೈ’ ಚಿತ್ರವನ್ನು ನಿರ್ದೇಶಿಸಿದರು. 2020 ರಲ್ಲಿ ಬಿಡುಗಡೆಯಾದ ಈ ಚಿತ್ರವು ಸಾಧಾರಣ ಪ್ರದರ್ಶನ ನೀಡಿತು. ಇದರ ನಂತರ, ಅವರು ಸಿನಿಮಾ ಮಾಡಿಲ್ಲ. ಅವರು ನಟನಾಗಿಯೂ ಗುರುತಿಸಿಕೊಂಡಿದ್ದಾರೆ.
ಭಾರತಿರಾಜ ಅವರ ಏಕೈಕ ಪುತ್ರ ಮನೋಜ್ ಭಾರತಿರಾಜ ಕಳೆದ ವರ್ಷ ನಿಧನರಾದರು. ನಟ ಮತ್ತು ನಿರ್ದೇಶಕರಾಗಿ ಬೆಳೆಯುತ್ತಿದ್ದ ಮನೋಜ್ ಅವರ ಹಠಾತ್ ಸಾವು ಭಾರತಿರಾಜ ಅವರನ್ನು ತೀವ್ರವಾಗಿ ಬಾಧಿಸಿತು. ಈ ದುರಂತದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ಆ ದುರಂತವನ್ನು ಮರೆಯಲು ಭಾರತಿರಾಜ ತಮ್ಮ ಕುಟುಂಬ ಸದಸ್ಯರೊಂದಿಗೆ ವಿದೇಶದಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ನಂತರ ಚೆನ್ನೈಗೆ ಮರಳಿದರು.
ನರೇಂದ್ರ ಮೋದಿ-ನೆಹರುImage Credit source: The Siasat Daily
ನವದೆಹಲಿ, ಜೂನ್ 10: ಭಾರತದ ರಾಜಕೀಯ ಇತಿಹಾಸದಲ್ಲಿ ಇಂದು( ಜೂನ್ 10, 2026) ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಪ್ರಧಾನಿ ನರೇಂದ್ರ ಮೋದಿ( Narendra Modi)ಅವರು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಅಧಿಕೃತವಾಗಿ ಹಿಂದಿಕ್ಕುವ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪರಮೋಚ್ಚ ಪ್ರಧಾನಿ ಎಂಬ ಅಭೂತಪೂರ್ವ ಇತಿಹಾಸ ಬರೆದಿದ್ದಾರೆ.
ಬುಧವಾರದ ಇಂದಿನ ದಿನಕ್ಕೆ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳ ಸುಸ್ಥಿರ ಆಡಳಿತವನ್ನು ಪೂರ್ಣಗೊಳಿಸಿದ್ದು, ಜಾಗತಿಕ ರಂಗದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
1952 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಜವಾಹರಲಾಲ್ ನೆಹರು, ಆ ವರ್ಷ ಮೇ 13 ರಂದು ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಮೇ 27, 1964 ರವರೆಗೆ ಆ ಹುದ್ದೆಯಲ್ಲಿ 4,398 ದಿನಗಳ ಕಾಲ ನಿರಂತರ ಅಧಿಕಾರಾವಧಿಯನ್ನು ಪೂರೈಸಿದ್ದರು. 1947 ರಿಂದ 1952 ರವರೆಗಿನ ಅವರ ಹಿಂದಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದರು, ಆಗ ಸಾರ್ವತ್ರಿಕ ಚುನಾವಣೆಗಳು ಇನ್ನೂ ನಡೆದಿರಲಿಲ್ಲ.
ಜನಾದೇಶದ ಭದ್ರ ಬುನಾದಿ: ಮೋದಿಯವರ ವಿಜಯಯಾತ್ರೆ
ಮೇ 26, 2014 ರಂದು ದೇಶದ ಜನಸಾಮಾನ್ಯರ ಆಕಾಂಕ್ಷೆಗಳ ಪ್ರತಿರೂಪವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡರು. ತದನಂತರ ಅವರ ಜನಪ್ರಿಯತೆ ಮತ್ತು ಸುಧಾರಣಾವಾದಿ ಆಡಳಿತಕ್ಕೆ ಮನಸೋತ ಭಾರತದ ಜನತೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತಷ್ಟು ಭಾರಿ ಬಹುಮತದೊಂದಿಗೆ ಅವರನ್ನು ದ್ವಿತೀಯ ಅವಧಿಗೆ (ಮೇ 30, 2019) ಆಯ್ಕೆ ಮಾಡಿದರು. ಮುಂದುವರಿದು, ಜೂನ್ 9, 2024 ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದಲ್ಲಿ ರಾಜಕೀಯ ಸ್ಥಿರತೆ ಮತ್ತು ನಿರಂತರ ಅಭಿವೃದ್ಧಿಯ ಹೊಸ ಯುಗಕ್ಕೆ ಅವರು ನಾಂದಿ ಹಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವುದು ಮತ್ತು ಅವರು ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿರುವುದನ್ನು ಸಂಭ್ರಮಿಸಲು ಎನ್ಡಿಎ ಭಾರತ್ ಮಂಟಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ದೇಶದ 22 ಎನ್ಡಿಎ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮೈತ್ರಿಕೂಟದ ಎಲ್ಲಾ ಘಟಕ ಪಕ್ಷಗಳ ಅಧ್ಯಕ್ಷರು ಸೇರಿದಂತೆ 25ಕ್ಕೂ ಹೆಚ್ಚು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ರಾಜಕೀಯ ಪಕ್ಷದ ನಾಯಕರಾಗಿ ಉಳಿಯದೆ, ದೇಶದ ಪ್ರತಿಯೊಂದು ವರ್ಗದ, ಅದರಲ್ಲೂ ಮುಖ್ಯವಾಗಿ ಯುವಕರು, ಮಹಿಳೆಯರು ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕವೇ ಈ ಅತ್ಯುನ್ನತ ಜಾಗತಿಕ ಮೈಲಿಗಲ್ಲನ್ನು ತಲುಪಿರುವುದು ಇಡೀ ನವ ಭಾರತದ ಹೆಮ್ಮೆಯ ಸಂಕೇತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಕೊಂಡಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ ಪಿಎಂ ಜವಾಹರ್ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸುದೀರ್ಘ ಅವಧಿಗೆ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ದಾಖಲೆ ಇದೀಗ ಮೋದಿ ಅವರದ್ದಾಗಿದೆ. ಮತ್ತೊಂದೆಡೆ, ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿರುವುದು ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಸಚಿವ ಸಂಪುಟದ ಖಾತೆ ಕ್ಯಾತೆ ಮುಂದುವರಿದಿರುವುದರ ಜತೆಗೆ, ಸಂಪುಟ ವಿಸ್ತರಣೆ ವೇಳೆ ಸಚಿವರಾಗಲು ಲಾಬಿ ಜೋರಾಗಿದೆ. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಟ್ಟದಲ್ಲಿ, ಇರಾನ್ ಹಾಗೂ ಇಸ್ರೆಲ್ ಸಂಘರ್ಷ ಮತ್ತೆ ತೀವ್ರಗೊಳ್ಳುವ ಸುಳಿವು ದೊರೆತಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ನಾವು ಬೆಳಿಗ್ಗೆ ಹೇಗೆ ಪ್ರಾರಂಭಿಸುತ್ತೇವೆ ಎಂಬುದು ನಮ್ಮ ಇಡೀ ದಿನದ ಯಶಸ್ಸು ಮತ್ತು ಶಾಂತಿಯನ್ನು ನಿರ್ಧರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಂಜಾನೆಯ ಸಮಯದಲ್ಲಿ ನಮ್ಮ ಮನಸ್ಸು ಮತ್ತು ಸುತ್ತಮುತ್ತಲಿನ ಪರಿಸರವು ಅತ್ಯಂತ ಸೂಕ್ಷ್ಮ ಹಾಗೂ ಗ್ರಹಣಶೀಲವಾಗಿರುತ್ತವೆ. ಈ ಪವಿತ್ರ ಸಮಯದಲ್ಲಿ ಧನಾತ್ಮಕ ಶಕ್ತಿಯನ್ನು ವೃದ್ಧಿಸಲು ಮತ್ತು ನಕಾರಾತ್ಮಕತೆಯನ್ನು ದೂರವಿಡಲು ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಮಾಡುವ ಸಣ್ಣ ತಪ್ಪುಗಳು ದಿನದ ಶಕ್ತಿಯನ್ನು ಕುಂದಿಸಬಹುದು, ಹಾಗೆಯೇ ಕೆಲವು ಒಳ್ಳೆಯ ಅಭ್ಯಾಸಗಳು ನಮ್ಮ ಇಡೀ ದಿನವನ್ನು ಅದ್ಭುತವಾಗಿ ಪರಿವರ್ತಿಸಬಲ್ಲವು.
ಮುಂಜಾನೆ ಎದ್ದ ತಕ್ಷಣ ದೂರವಿಡಬೇಕಾದ ಅಶುಭ ಸಂಗತಿಗಳು:
ಕನ್ನಡಿಯಲ್ಲಿ ಮುಖ ನೋಡುವುದನ್ನು ತಪ್ಪಿಸಿ:
ಬೆಳಿಗ್ಗೆ ಎದ್ದ ತಕ್ಷಣ ಮೊದಲು ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಬಾರದು. ರಾತ್ರಿಯ ನಿದ್ರೆಯ ನಂತರ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವವಿರುತ್ತದೆ ಎಂದು ನಂಬಲಾಗಿದೆ. ಎದ್ದ ತಕ್ಷಣ ಕನ್ನಡಿ ನೋಡುವುದರಿಂದ ಆ ನಕಾರಾತ್ಮಕ ಶಕ್ತಿಯು ಮರಳಿ ನಮಗೇ ಆಕರ್ಷಿತವಾಗಿ, ದಿನದ ಆರಂಭವನ್ನು ಅನಗತ್ಯ ಒತ್ತಡ ಮತ್ತು ಆಲಸ್ಯದಿಂದ ಕೂಡಿಸಬಹುದು.
ನಿಂತುಹೋದ ಗಡಿಯಾರದಿಂದ ದೂರವಿರಿ:
ಹಾಸಿಗೆಯಿಂದ ಎದ್ದೇಳುವಾಗ, ಮನೆಯಲ್ಲಿ ನಿಂತಿರುವ ಅಥವಾ ಮುರಿದ ಗಡಿಯಾರಗಳ ಕಡೆಗೆ ದೃಷ್ಟಿ ಹರಿಸಬಾರದು. ವಾಸ್ತು ಶಾಸ್ತ್ರದಲ್ಲಿ, ಚಲಿಸದ ಗಡಿಯಾರವನ್ನು ದುರದೃಷ್ಟದ ಸಂಕೇತ ಮತ್ತು ಜೀವನದ ಪ್ರಗತಿಗೆ ಬರುವ ದೊಡ್ಡ ಅಡಚಣೆ ಎಂದು ಪರಿಗಣಿಸಲಾಗುತ್ತದೆ. ಇದು ನಮ್ಮ ಸಮಯ ಮತ್ತು ಕಾರ್ಯಗಳು ನಿಧಾನವಾಗುವಂತೆ ಮಾಡುತ್ತದೆ.
ಅಡುಗೆಮನೆಯ ಕೊಳಕು ಪಾತ್ರೆಗಳನ್ನು ನೋಡಬೇಡಿ:
ರಾತ್ರಿಯ ಕೊಳಕು ಪಾತ್ರೆಗಳನ್ನು ಬೆಳಿಗ್ಗೆ ಅಡುಗೆಮನೆಯಲ್ಲಿ ಹಾಗೆಯೇ ನೋಡುವುದು ಶುಭವಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆರ್ಥಿಕ ತೊಂದರೆಗಳು ಮತ್ತು ದಾರಿದ್ರ್ಯವನ್ನು ಆಹ್ವಾನಿಸುವ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ರಾತ್ರಿಯೇ ಅಡುಗೆಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮ.
ನಿಮ್ಮ ಅಥವಾ ಇತರರ ನೆರಳು ನೋಡಬೇಡಿ:
ಎಚ್ಚರವಾದ ತಕ್ಷಣ ನಿಮ್ಮ ಸ್ವಂತ ಅಥವಾ ಇನ್ನೊಬ್ಬ ವ್ಯಕ್ತಿಯ ನೆರಳನ್ನು ನೋಡುವುದನ್ನು ತಪ್ಪಿಸಬೇಕು. ನೆರಳುಗಳನ್ನು ನೋಡುವುದು ಮಾನಸಿಕ ಗೊಂದಲ, ಭ್ರಮೆ ಮತ್ತು ಭೀತಿಯನ್ನು ಉಂಟುಮಾಡುತ್ತದೆ. ಇದು ಇಡೀ ದಿನ ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಅಥವಾ ಕಚೇರಿಯ ಕೆಲಸಗಳಲ್ಲಿ ಅನಗತ್ಯ ಸಂಘರ್ಷಗಳಿಗೆ ಕಾರಣವಾಗಬಹುದು.
ಕೋಪದಿಂದ ಪಾದಗಳನ್ನು ನೆಲಕ್ಕೆ ತುಳಿಯಬೇಡಿ:
ಹಾಸಿಗೆಯಿಂದ ಎದ್ದೇಳುವಾಗ ಕೋಪದಿಂದ ಅಥವಾ ಜೋರಾಗಿ ಪಾದಗಳನ್ನು ನೆಲಕ್ಕೆ ತುಳಿಯಬಾರದು. ಸನಾತನ ಸಂಸ್ಕೃತಿಯಲ್ಲಿ ನಾವು ಬದುಕುವ ಭೂಮಿಯನ್ನು ತಾಯಿ ಎಂದು ಪೂಜಿಸಲಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಭೂಮಿಗೆ ಗೌರವ ನೀಡಬೇಕೇ ಹೊರತು, ಕೋಪದಿಂದ ಪಾದಗಳನ್ನು ಜೋರಾಗಿ ಇಡುವುದರಿಂದ ದಿನದ ಶಾಂತಿ ಭಂಗವಾಗುತ್ತದೆ.
ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಮೊದಲು ನಿಮ್ಮ ಎರಡು ಅಂಗೈಗಳನ್ನು ಒಟ್ಟಿಗೆ ಸೇರಿಸಿ ನೋಡಬೇಕು. ‘ಕರಾಗ್ರೆ ವಸತೇ ಲಕ್ಷ್ಮಿ…’ ಶ್ಲೋಕವನ್ನು ಜಪಿಸುತ್ತಾ ಹಸ್ತಗಳನ್ನು ದರ್ಶಿಸುವುದರಿಂದ ದೈವಿಕ ಶಕ್ತಿ ಜಾಗೃತವಾಗುತ್ತದೆ. ನಂತರ ಹಸ್ತಗಳನ್ನು ಹಗುರವಾಗಿ ಉಜ್ಜಿ, ಮುಖದ ಮೇಲೆ ಇರಿಸಿಕೊಳ್ಳುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಪರಿಚಲನೆ ಸುಲಭವಾಗುತ್ತದೆ.
ಮನಸ್ಸನ್ನು ಪ್ರಶಾಂತಗೊಳಿಸುವ ದೈವಿಕ ಸ್ಮರಣೆ:
ನಿಮ್ಮ ಇಷ್ಟದೇವತೆ ಅಥವಾ ದೇವರನ್ನು ನೆನೆಯುತ್ತಾ ಪ್ರಾರ್ಥನೆ ಅಥವಾ ಕನಿಷ್ಠ ಎರಡು ನಿಮಿಷಗಳ ಧ್ಯಾನದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಈ ಅಭ್ಯಾಸವು ಚಂಚಲವಾಗಿರುವ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಅಲ್ಲದೆ, ದಿನವಿಡೀ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಉತ್ಸಾಹದಿಂದ ಕೆಲಸ ಮಾಡಲು ಇದು ಅದ್ಭುತ ಆಂತರಿಕ ಶಕ್ತಿಯನ್ನು ಒದಗಿಸುತ್ತದೆ.
ಭೂಮಿ ದೇವಿಗೆ ಕೃತಜ್ಞತೆ ಮತ್ತು ನಮನ:
ಹಾಸಿಗೆಯಿಂದ ಕೆಳಗೆ ಇಳಿದು ಪಾದಗಳನ್ನು ನೆಲದ ಮೇಲಿಡುವ ಮುನ್ನ ಭೂಮಿ ತಾಯಿಗೆ ಕೈ ಮುಗಿದು ನಮಸ್ಕರಿಸಬೇಕು. ನಮಗೆ ಆಶ್ರಯ ನೀಡಿರುವ ಧರಿತ್ರಿಗೆ ಗೌರವ ಸೂಚಿಸುತ್ತಾ, ಪ್ರಕೃತಿಯು ನಮಗೆ ಕರುಣಿಸಿರುವ ಈ ಮತ್ತೊಂದು ಸುಂದರ ದಿನಕ್ಕಾಗಿ ಕೃತಜ್ಞತೆ ಸಲ್ಲಿಸಬೇಕು. ಈ ವಿನಮ್ರ ಭಾವನೆಯು ನಮ್ಮಲ್ಲಿ ಸಕಾರಾತ್ಮಕ ಯೋಚನೆಗಳನ್ನು ಬಿತ್ತುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕ್ರಿಕೆಟ್ನ ಕಾಶಿ ಎಂದೇ ಕರೆಯಲ್ಪಡುವ ಐತಿಹಾಸಿಕ ಲಾರ್ಡ್ಸ್ ಮೈದಾನದ ಇತಿಹಾಸದಲ್ಲೇ ಕಪ್ಪು ಚುಕ್ಕೆಯೊಂದು ಮೂಡಿದೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಪಿಚ್ ಗುಣಮಟ್ಟವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ‘ಅತೃಪ್ತಿಕರ’ ಎಂದು ಪರಿಗಣಿಸಿದೆ. ಅಷ್ಟೇ ಅಲ್ಲದೆ, ಲಾರ್ಡ್ಸ್ ಮೈದಾನಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಿದೆ.
ಲಾರ್ಡ್ಸ್ ಮೈದಾನದಲ್ಲಿ ಇದಕ್ಕೂ ಮುನ್ನ 149 ಟೆಸ್ಟ್ ಪಂದ್ಯಗಳು ನಡೆದಿವೆ. ಆದರೆ ಪಿಚ್ಗೆ ‘ಅತೃಪ್ತಿಕರ’ ರೇಟಿಂಗ್ ಸಿಗುತ್ತಿರುವುದು ಇದೇ ಮೊದಲು. ಅಂದರೆ 150ನೇ ಐತಿಹಾಸಿಕ ಪಂದ್ಯಕ್ಕಾಗಿ ಸಿದ್ಧಪಡಿಸಲಾದ ಪಿಚ್ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿತ್ತು ಎಂದು ಐಸಿಸಿ ತಿಳಿಸಿದೆ. ಹೀಗಾಗಿಯೇ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ.
ಕೇವಲ 166 ಓವರ್ಗಳಲ್ಲಿ 40 ವಿಕೆಟ್ ಪತನ!
ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಿನ ಈ ಪಂದ್ಯವು ಬ್ಯಾಟರ್ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿತ್ತು. ಮಳೆಯ ಅಡ್ಡಿಯ ನಡುವೆಯೂ ಕೇವಲ 996 ಎಸೆತಗಳಲ್ಲಿ (166 ಓವರ್ಗಳು) ಪಂದ್ಯದ ಎಲ್ಲಾ 40 ವಿಕೆಟ್ಗಳು ಉರುಳಿದ್ದವು. ಇದು ಲಾರ್ಡ್ಸ್ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯ ಎಂಬ ಕೆಟ್ಟ ದಾಖಲೆಗೆ ಪಾತ್ರವಾಯಿತು.
ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ತಮ್ಮ ವರದಿಯಲ್ಲಿ, “ಈ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಯಾವುದೇ ಸಮತೋಲನ ಹೊಂದಿರಲಿಲ್ಲ. ಚೆಂಡು ಅತಿಯಾಗಿ ಸೀಮ್ ಆಗುತ್ತಿತ್ತು ಮತ್ತು ಅನಿರೀಕ್ಷಿತವಾಗಿ ಬೌನ್ಸ್ ಆಗುತ್ತಿತ್ತು. ಕೆಲವು ಎಸೆತಗಳು ಅತ್ಯಂತ ಕೆಳಮಟ್ಟದಲ್ಲಿ ಸಾಗುತ್ತಿದ್ದವು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಬಿದ್ದ 40 ವಿಕೆಟ್ಗಳ ಪೈಕಿ 24 ವಿಕೆಟ್ಗಳು ಬೌಲ್ಡ್ ಅಥವಾ ಎಲ್ಬಿಡಬ್ಲ್ಯೂ ಮೂಲಕವೇ ಬಂದಿರುವುದು ಪಿಚ್ನ ವಿಚಿತ್ರ ವರ್ತನೆಗೆ ಸಾಕ್ಷಿಯಾಗಿದೆ.
ನಾಯಕ ಬೆನ್ ಸ್ಟೋಕ್ಸ್ ಅಸಮಾಧಾನ!
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 115 ರನ್ಗಳ ಜಯ ಸಾಧಿಸಿದರೂ, ನಾಯಕ ಬೆನ್ ಸ್ಟೋಕ್ಸ್ ಪಿಚ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. “ಇಂತಹ ವಿಪರೀತ ಪರಿಸ್ಥಿತಿಗಳು ಟೆಸ್ಟ್ ಕ್ರಿಕೆಟ್ನ ಭವಿಷ್ಯಕ್ಕೆ ಒಳ್ಳೆಯದಲ್ಲ. ಇದು ಪಂದ್ಯವನ್ನು ಲಾಟರಿಯನ್ನಾಗಿ ಮಾಡುತ್ತದೆ” ಎಂದು ಸ್ಟೋಕ್ಸ್ ಎಚ್ಚರಿಸಿದ್ದಾರೆ.
ಲಾರ್ಡ್ಸ್ ಮೈದಾನದ ಉಸ್ತುವಾರಿ ಹೊತ್ತಿರುವ ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕಳಪೆ ಪಿಚ್ ತಯಾರಿಸಿದ್ದಕ್ಕಾಗಿ ಅಧಿಕೃತವಾಗಿ ಕ್ಷಮೆಯಾಚಿಸಿದೆ.
ಏನಿದು ಡಿಮೆರಿಟ್ ಪಾಯಿಂಟ್ ನಿಯಮ?
ಐಸಿಸಿ ನಿಯಮಾವಳಿಗಳ ಪ್ರಕಾರ, ಮೈದಾನವೊಂದಕ್ಕೆ ಸಿಗುವ ಡಿಮೆರಿಟ್ ಪಾಯಿಂಟ್ಗಳು 5 ವರ್ಷಗಳ ಕಾಲ ಸಕ್ರಿಯವಾಗಿರುತ್ತವೆ.
ಮುಂದಿನ 5 ವರ್ಷಗಳಲ್ಲಿ ಲಾರ್ಡ್ಸ್ ಮೈದಾನವು ಒಟ್ಟು 6 ಡಿಮೆರಿಟ್ ಪಾಯಿಂಟ್ಗಳನ್ನು ಪಡೆದರೆ, ಅಲ್ಲಿ 12 ತಿಂಗಳುಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸದಂತೆ ನಿಷೇಧ ಹೇರಲಾಗುತ್ತದೆ.
ಒಂದು ವೇಳೆ ಡಿಮೆರಿಟ್ ಪಾಯಿಂಟ್ಗಳ ಸಂಖ್ಯೆ 12ಕ್ಕೆ ತಲುಪಿದರೆ, ನಿಷೇಧದ ಅವಧಿ 24 ತಿಂಗಳುಗಳಿಗೆ (2 ವರ್ಷ) ವಿಸ್ತರಣೆಯಾಗುತ್ತದೆ.
ಲಾರ್ಡ್ಸ್ ಜೊತೆಗೆ, ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಲಾಹೋರ್ನ ಗದ್ದಾಫಿ ಕ್ರೀಡಾಂಗಣದ ಪಿಚ್ಗೂ ಐಸಿಸಿ ‘ಅತೃಪ್ತಿಕರ’ ರೇಟಿಂಗ್ ನೀಡಿದೆ. ಅಂದರೆ ಲಾಹೋರ್ ಪಿಚ್ ಕೂಡ ಮುಂದಿನ 5 ವರ್ಷಗಳಲ್ಲಿ 6 ಡಿಮೆರಿಟ್ ಪಾಯಿಂಟ್ ಪಡೆದರೆ, ಅಲ್ಲಿ ಒಂದು ವರ್ಷ ಅಂತಾರಾಷ್ಟ್ರೀಯ ಪಂದ್ಯವಾಡುವುದನ್ನು ನಿಷೇಧಿಸಲಾಗುತ್ತದೆ.
ಇಂದಿನಿಂದ 21 ದಿನಗಳ ಕಾಲ ಬೆಸ್ಕಾಂನ ಈ ಎಲ್ಲಾ ಸೇವೆಗಳಿಗೆ ಬ್ರೇಕ್! Image Credit source: gettyimages.com
ಬೆಂಗಳೂರು, ಜೂನ್ 10: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತನ್ನ ಗ್ರಾಹಕರಿಗೆ ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದೆ. ಗ್ರಾಹಕರ ಡೇಟಾವನ್ನು ‘ಟೋಟಲ್ ರೆವಿನ್ಯೂ ಮ್ಯಾನೇಜ್ಮೆಂಟ್’ ಸಾಫ್ಟ್ವೇರ್ನಿಂದ ‘ಇಂಟಿಗ್ರೇಟೆಡ್ ಪವರ್ ಡೆವಲಪ್ಮೆಂಟ್ ಸ್ಕೀಮ್’ ತಂತ್ರಜ್ಞಾನಕ್ಕೆ ವರ್ಗಾಯಿಸುವ ಸಲುವಾಗಿ, ಬೆಸ್ಕಾಂ ಒದಗಿಸುವ ಎಲ್ಲಾ ಆನ್ಲೈನ್ ಸೇವೆಗಳನ್ನು ಜೂನ್ 10 ರಿಂದ ಜೂನ್ 30 ರವರೆಗೆ ಒಟ್ಟು 21 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಮುಖ್ಯಾಂಶಗಳು
ಜೂನ್ 10 ರಿಂದ 30 ರವರೆಗೆ ಬೆಸ್ಕಾಂ ಆನ್ಲೈನ್ ಸೇವೆಗಳು ಇರುವುದಿಲ್ಲ.
ಸಾಫ್ಟ್ವೇರ್ ಡೇಟಾ ವರ್ಗಾವಣೆ ಪ್ರಕ್ರಿಯೆಗಾಗಿ ಈ ತಾಂತ್ರಿಕ ಸ್ಥಗಿತ ಅನಿವಾರ್ಯವಾಗಿದೆ.
ಗೂಗಲ್ ಪೇ, ಫೋನ್ಪೇ ಮೂಲಕ ಬಿಲ್ ಪಾವತಿಸಲು ಗ್ರಾಹಕರಿಗೆ ಅವಕಾಶವಿದೆ.
ಯಾವೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ?
ಈ 21 ದಿನಗಳ ಅವಧಿಯಲ್ಲಿ ಬೆಸ್ಕಾಂನ ಅಧಿಕೃತ ಪೋರ್ಟಲ್ ಹಾಗೂ ಆಪ್ಗಳ ಮೂಲಕ ಲಭ್ಯವಿರುವ ಈ ಕೆಳಗಿನ ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.
ಹೊಸ ವಿದ್ಯುತ್ ಸಂಪರ್ಕಕ್ಕಾಗಿ (New Connection) ಅರ್ಜಿ ಸಲ್ಲಿಕೆ.
ಮಾಲೀಕತ್ವದ ಹೆಸರು ವರ್ಗಾವಣೆ (Name Transfer).
ಲೋಡ್ ಹೆಚ್ಚಳದ ವಿನಂತಿ (Load Enhancement Request).
ಬೆಸ್ಕಾಂ ಅಧಿಕೃತ ವೆಬ್ಸೈಟ್/ಗ್ರಾಹಕ ಪೋರ್ಟಲ್ ಮೂಲಕ ಆನ್ಲೈನ್ ಬಿಲ್ ಪಾವತಿ.
ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಹಳೆಯ ಟಿಆರ್ಎಂ (TRM) ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಿ ಹೊಸ ಐಟಿ ಅಪ್ಲಿಕೇಶನ್ಗೆ ಸಂಪೂರ್ಣವಾಗಿ ಪರಿವರ್ತನೆಗೊಳ್ಳಲು ಈ ತಾಂತ್ರಿಕ ಪ್ರಕ್ರಿಯೆಯು ಅನಿವಾರ್ಯವಾಗಿದೆ.
ಬೆಸ್ಕಾಂನ ಸ್ವಂತ ಆನ್ಲೈನ್ ಪೋರ್ಟಲ್ಗಳು ಕಾರ್ಯನಿರ್ವಹಿಸದಿದ್ದರೂ, ಗ್ರಾಹಕರು ತಮ್ಮ ವಿದ್ಯುತ್ ಬಿಲ್ಗಳನ್ನು ಪಾವತಿಸಲು ಯಾವುದೇ ತೊಂದರೆಯಾಗುವುದಿಲ್ಲ. ಗ್ರಾಹಕರು ಪೇಮೆಂಟ್ಗಾಗಿ ಫೋನ್ ಪೇ (PhonePe), ಗೂಗಲ್ ಪೇ (Google Pay) ಅಥವಾ ಅಮೆಜಾನ್ ಪೇ ಮುಂತಾದ ಯುಪಿಐ (UPI) ಮಾಧ್ಯಮಗಳ ಮೂಲಕ ಎಂದಿನಂತೆ ತಮ್ಮ ವಿದ್ಯುತ್ ಬಿಲ್ಗಳನ್ನು ಪಾವತಿಸಬಹುದಾಗಿದೆ. ಅಲ್ಲದೆ, ಸಾಫ್ಟ್ವೇರ್ ಅಪ್ಗ್ರೇಡ್ ಪ್ರಕ್ರಿಯೆಯಿಂದಾಗಿ ಗ್ರಾಹಕರ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿ ಸೋಮಣ್ಣ ಹಾಗೂ ರೈಲ್ವೆ ಹಳಿಯ ಸಾಂದರ್ಭಿಕ ಚಿತ್ರImage Credit source: PTI
ಬೆಂಗಳೂರು, ಜೂನ್ 10: ರಾಜ್ಯದ ಅತ್ಯಂತ ಪ್ರಮುಖ ಹಾಗೂ ಬಹುನಿರೀಕ್ಷಿತ ರೈಲ್ವೆ ಯೋಜನೆಗಳಲ್ಲೊಂದಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ (Tumakuru-Chitradurga-Davangere Railway Line) ನಿರ್ಮಾಣ ಕಾರ್ಯಕ್ಕೆ ಕೊನೆಗೂ ವೇಗ ಸಿಕ್ಕಿದೆ. ಈ ಮಹತ್ವದ ಯೋಜನೆ 2028 ರ ಫೆಬ್ರವರಿ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದ್ದಾರೆ. ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ವಿವಿಧ ರೈಲ್ವೆ ಮೂಲಸೌಕರ್ಯ ಯೋಜನೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.
ಮುಖ್ಯಾಂಶಗಳು
2028ರ ಫೆಬ್ರವರಿಗೆ ನೇರ ರೈಲು ಮಾರ್ಗ ಓಪನ್.
ಶೇ 92 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣ.
ತುಮಕೂರಿನಲ್ಲಿ 32 ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿ.
1,801 ಕೋಟಿ ರೂ. ವೆಚ್ಚದ ಯೋಜನೆ: ಅಂತಿಮ ಹಂತದಲ್ಲಿ ಭೂಸ್ವಾಧೀನ
ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ ತಲಾ ಶೇ 50 ರಷ್ಟು ಆರ್ಥಿಕ ಸಹಭಾಗಿತ್ವದೊಂದಿಗೆ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಈ 191 ಕಿಲೋಮೀಟರ್ ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಒಟ್ಟು ಭೂಮಿಯ ಪೈಕಿ ಈಗಾಗಲೇ ಶೇಕಡಾ 92 ಕ್ಕೂ ಅಧಿಕ ಭೂಸ್ವಾಧೀನ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗದ ಊರುಕೆರೆ-ತಿಮ್ಮರಾಜನಹಳ್ಳಿ ನಡುವಿನ 13.31 ಕಿಲೋಮೀಟರ್ ಉದ್ದದ ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ತುಮಕೂರು-ರಾಯದುರ್ಗ ರೈಲು ಮಾರ್ಗವೂ ಸಿದ್ಧ
ಇದೇ ವೇಳೆ, ಕರ್ನಾಟಕ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ 2,496 ಕೋಟಿ ರೂಪಾಯಿ ವೆಚ್ಚದ 206 ಕಿಲೋಮೀಟರ್ ಉದ್ದದ ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಈ ಪೈಕಿ ಈಗಾಗಲೇ 83 ಕಿಲೋಮೀಟರ್ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ತುಮಕೂರು-ಊರುಕೆರೆ ನಡುವಿನ ಮಾರ್ಗದ ಸುರಕ್ಷತಾ ಪರಿಶೀಲನೆ (Safety Inspection) ಮುಗಿದಿದ್ದು, ಪಾವಗಡ-ದೊಡ್ಡಹಳ್ಳಿ ಸೆಕ್ಷನ್ ಕೂಡ ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ಯೋಜನೆಗೆ ಶೇಕಡಾ 97 ರಷ್ಟು ಭೂಸ್ವಾಧೀನ ಮುಗಿದಿದ್ದು, ಬಾಕಿ ಉಳಿದಿರುವ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.
ಸಚಿವ ವಿ. ಸೋಮಣ್ಣ ಅವರ ಲೋಕಸಭಾ ಕ್ಷೇತ್ರವಾದ ತುಮಕೂರಿನಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬರೋಬ್ಬರಿ 32 ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು, ನಂದಿಹಳ್ಳಿ ಗೇಟ್ ಸೇರಿದಂತೆ ಹಾಸನ ಮತ್ತು ಬಿದಿರಗುಡಿ ಮಾರ್ಗದ ಬಿ.ಹೆಚ್ ರಸ್ತೆಯ ಮೇಲ್ಸೇತುವೆಗಳನ್ನು ಒಳಗೊಂಡ ಈ ಎಲ್ಲಾ ಕಾಮಗಾರಿಗಳನ್ನು 2026-27ರ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅರಣ್ಯ ಇಲಾಖೆ ಅನುಮತಿ, ವಿದ್ಯುತ್ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್ಲೈನ್ ಸ್ಥಳಾಂತರದಂತಹ ತಾಂತ್ರಿಕ ಸವಾಲುಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಅವರಿಗೆ ಸಚಿವರು ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 21 ವರ್ಷಗಳ ಬಳಿಕ. ಅಂದರೆ ಕಳೆದ ಎರಡು ದಶಕಗಳಿಂದ ಬಾಂಗ್ಲಾದೇಶ್ ಪಾಲಿಗೆ ಮರೀಚಿಕೆಯಾಗಿದ್ದ ಆಸೀಸ್ ವಿರುದ್ಧದ ಗೆಲುವು ಕೊನೆಗೂ ದಕ್ಕಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಜೋಶ್ ಇಂಗ್ಲಿಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭಿಕ ದಾಂಡಿಗ ತಂಝೀದ್ ಹಸನ್ 54 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೇನ್ ಶಾಂತೊ 67 ರನ್ಗಳ ಕೊಡುಗೆ ನೀಡಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಸದ್ದೀಕ್ ಹೊಸೇನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 70 ಎಸೆತಗಳನ್ನು ಎದುರಿಸಿದ ಮೊಸದ್ದೀಕ್ 3 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 86 ರನ್ ಬಾರಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.
285 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಎಸೆತದಲ್ಲೇ ಆಘಾತ ನೀಡುವಲ್ಲಿ ಬಾಂಗ್ಲಾದೇಶ್ ಯಶಸ್ವಿಯಾಯಿತು. ತಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಮ್ಯಾಥ್ಯೂ ಶಾರ್ಟ್ (0) ಕ್ಲೀನ್ ಬೌಲ್ಡ್ ಆಗಿದ್ದರು.
ಈ ಆಘಾತದಿಂದ ಪಾರಾಗುವ ಮುನ್ನವೇ ಮಾರ್ನಸ್ ಲಾಬುಶೇನ್ (1) ವಿಕೆಟ್ ಕಳೆದುಕೊಂಡಿತು. ಇನ್ನು ಜೋಶ್ ಇಂಗ್ಲಿಸ್ 19 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಅಲೆಕ್ಸ್ ಕ್ಯಾರಿ (47) ಹಾಗೂ ಕ್ಯಾಮರೋನ್ ಗ್ರೀನ್ (52*) ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭರವಸೆ ಮೂಡಿಸಿದ್ದರು.
ಆದರೆ ಬಾಂಗ್ಲಾ ಬೌಲರ್ಗಳ ಸಂಘಟಿತು ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 42.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಹಂತದಲ್ಲಿ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಇನ್ನು ಪಂದ್ಯದ ಫಲಿತಾಂಶಕ್ಕೆ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಯಿತು. ಅದರಂತೆ ಬಾಂಗ್ಲಾದೇಶ್ ತಂಡವು 86 ರನ್ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಇದು ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ್ ತಂಡದ 2ನೇ ಗೆಲುವು.
ಇದಕ್ಕೂ ಮುನ್ನ ಬಾಂಗ್ಲಾದೇಶ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದು 2005 ರಲ್ಲಿ. ಇದಾದ ಬಳಿಕ ಒಮ್ಮೆಯೂ ಕಾಂಗರೂ ಪಡೆಯನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬರೋಬ್ಬರಿ 21 ವರ್ಷಗಳ ಬಳಿಕ ಗೆಲುವಿನ ನಗೆ ಬೀರುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿದೆ.