ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ಅಜಿತ್; ಅಪರೂಪದ ನಡೆ – Kannada News

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajit Kumar) ಅವರ ಶೈಲಿಯೇ ವಿಭಿನ್ನ. ಸಾಮಾನ್ಯವಾಗಿ ಅವರು ತಮ್ಮ ಸಿನಿಮಾಗಳ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ, ಆಡಿಯೋ ಲಾಂಚ್‌ಗೆ ಬರೋದಿಲ್ಲ, ಅಭಿಮಾನಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಂಟರ್‌ಟೇನ್ ಮಾಡಲು ಹೋಗುವುದಿಲ್ಲ. ಸ್ಟಾರ್ ಇಮೇಜ್‌ನಿಂದ ಯಾವಾಗಲೂ ದೂರ ಉಳಿಯುವ ಅಜಿತ್, ಇತ್ತೀಚೆಗೆ ತಮ್ಮ ಪುಟ್ಟ ಅಭಿಮಾನಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಸದಾ ಸೈಲೆಂಟ್ ಆಗಿರುವ ನಟನ ಈ ಅಪರೂಪದ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಹೊರತುಪಡಿಸಿ ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ಅಜಿತ್ ಕುಮಾರ್, ಇತ್ತೀಚೆಗೆ ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಸ್ನೇಹಿತನ ಮಕ್ಕಳು ಅಜಿತ್ ಅವರ ದೊಡ್ಡ ಅಭಿಮಾನಿಗಳು. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋದಲ್ಲಿ, ರೇಸಿಂಗ್ ಡ್ರೆಸ್ ಧರಿಸಿರುವ ಅಜಿತ್ ಹೆಲ್ಮೆಟ್ ಹಿಡಿದುಕೊಂಡು ವಿಡಿಯೋ ಕಾಲ್ ಬಂದಾಗ ಅವರ ಖುಷಿಗೆ ಪಾರವೇ ಇರಲಿಲ್ಲ.
ಅಜಿತ್ ಕುಮಾರ್ ಅವರು ತಮ್ಮ ಗೆಳೆಯನ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಮಾತನಾಡುವಾಗ ಅಜಿತ್ ಅವರು ಆ ಇಬ್ಬರು ಮಕ್ಕಳ ದಿನಚರಿ ಮತ್ತು ಓದಿನ ಬಗ್ಗೆ ಅತ್ಯಂತ ಪ್ರೀತಿಯಿಂದ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ‘ಮುಂದಿನ ಬಾರಿ ನಾನು ಖಂಡಿತಾ ನಿಮ್ಮನ್ನು ಖುದ್ದಾಗಿ ಬಂದು ಭೇಟಿ ಮಾಡುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಜೀವನ ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ. ವಿಡಿಯೋ ಕಾಲ್ ಮುಗಿಯುತ್ತಿದ್ದಂತೆ ಆ ಅಣ್ಣ-ತಂಗಿ ಇಬ್ಬರೂ ಸೂಪರ್‌ಸ್ಟಾರ್ ಜೊತೆ ಮಾತನಾಡಿದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕಕ್ಕೆ ಸಿಗದ ನಟನ ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ವಿಡಿಯೋ ಕೆಳಗೆ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ‘ನೀವೇ ಅತ್ಯಂತ ಅದೃಷ್ಟವಂತ ಹುಡುಗಿ’ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ‘ನಿಮ್ಮ ತಂದೆ ಸಾಕ್ಷಾತ್ ಆ ದೇವರ (ಅಜಿತ್) ಜೊತೆಯೇ ಸ್ನೇಹ ಬೆಳೆಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ‘ಇದು ಗಾಡ್ ಲೆವೆಲ್ ಫ್ಯಾಮಿಲಿ ಫ್ರೆಂಡ್‌ಶಿಪ್’ ಎಂದು ಅಭಿಮಾನಿಗಳು ಅಜಿತ್ ಅವರ ಸರಳತೆಯನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಫೀಲ್ಡ್​​ನಲ್ಲಿ ನಟ ಅಜಿತ್ ಕುಮಾರ್ ವಿಡಿಯೋ ನೋಡಿ

90ರ ದಶಕದಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಜಿತ್, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರೂ ಅದ್ದೂರಿ ಪ್ರಚಾರದಿಂದ ದೂರವೇ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರೇಸಿಂಗ್ ಸೀಸನ್‌ನ ಬ್ರೇಕ್ ಸಮಯದಲ್ಲಿ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2025ರಲ್ಲಿ ಅವರ ನಟನೆಯ ‘ವಿದಾಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ತೆರೆಕಂಡಿದ್ದವು. ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಅಜಿತ್, ದುಃಖದ ನಡುವೆಯೂ ಮತ್ತೆ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು ಗೊತ್ತಾ? – Kannada News

ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆImage Credit source: Pinterest

ಇಂದಿನ ವೇಗದ ಜಗತ್ತಿನಲ್ಲಿ ಮೊಬೈಲ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಈ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಮ್ಮ ವ್ಯಕ್ತಿತ್ವ, ಅದೃಷ್ಟ ಮತ್ತು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಎಷ್ಟು ಪ್ರಭಾವ ಬೀರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ಈ ಅಂಕೆಗಳು ನಮ್ಮ ಬದುಕಿನ ಅನೇಕ ನಿರ್ಣಾಯಕ ಅಂಶಗಳನ್ನು ಪ್ರಭಾವಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ, ಅನೇಕರು ತಮ್ಮ ಹುಟ್ಟಿದ ದಿನಾಂಕವನ್ನೇ ಅದೃಷ್ಟ ಸಂಖ್ಯೆ ಎಂದು ಭಾವಿಸುತ್ತಾರೆ. ಆದರೆ, ಸಂಖ್ಯಾಶಾಸ್ತ್ರವು ಮೊಬೈಲ್ ಸಂಖ್ಯೆಗಳ ಕೊನೆಯ ಎರಡು ಅಂಕೆಗಳಿಗೂ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಏಕೆಂದರೆ, ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ಒಂದು ಸಂಖ್ಯೆ ಇರುತ್ತದೆ – ವಾಹನ, ಮನೆ, ವಿದ್ಯುತ್ ಬಿಲ್ ಹೀಗೆ ಎಲ್ಲದಕ್ಕೂ. ಅದೇ ರೀತಿ, ನಮ್ಮ ಮೊಬೈಲ್ ಸಂಖ್ಯೆಯು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಕನ್ನಡ ಮಾಧ್ಯಮದಲ್ಲಿ ಬಿಡಿ, ಹತ್ತು, ನೂರು ಎಂದು ಬಲಭಾಗದಿಂದ ಎಡಭಾಗಕ್ಕೆ ಲೆಕ್ಕ ಹಾಕಿದಂತೆ, ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು (ಬಿಡಿ ಮತ್ತು ಹತ್ತರ ಸ್ಥಾನ) ಅತ್ಯಂತ ಪ್ರಭಾವಶಾಲಿ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

ವಿವಿಧ ಅಂಕೆಗಳ ಸಂಯೋಜನೆ ಮತ್ತು ಅವುಗಳ ಪ್ರಭಾವ:

  • ಕೋಪ ಮತ್ತು ಆವೇಶ: ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು 4 ಮತ್ತು 8 ರ ಸಂಯೋಜನೆಯಲ್ಲಿ ಬಂದಾಗ, ಅದು ಕೋಪ, ತಾಳ್ಮೆ ಮತ್ತು ಆವೇಶವನ್ನು ಹೆಚ್ಚಿಸಬಹುದು. ಇದು ಎಲ್ಲಾ ರಾಶಿಗಳಿಗೂ ಅನ್ವಯಿಸುತ್ತದೆ.
  • ಸಂತೋಷ ಮತ್ತು ತೃಪ್ತಿ: 3 ಮತ್ತು 7 (ಅಥವಾ 7 ಮತ್ತು 3) ರ ಸಂಯೋಜನೆಗಳು ಎಲ್ಲಾ ರಾಶಿಗಳಿಗೂ ಸಂತೋಷ ಮತ್ತು ತೃಪ್ತಿಯನ್ನು ತರುತ್ತವೆ. ಇದು ಬಹಳ ಶುಭಕರವಾದ ಸಂಯೋಜನೆ.
  • ಅದೃಷ್ಟ ಮತ್ತು ಪ್ರಗತಿ: 5 ಮತ್ತು 6 (ಅಥವಾ 6 ಮತ್ತು 5) ಸಂಯೋಜನೆಗಳು ಅದೃಷ್ಟ, ಭೂಯೋಗ, ಕೆಲಸ ಕಾರ್ಯಗಳಲ್ಲಿ ಶುಭ, ಕೀರ್ತಿ ಮತ್ತು ಪ್ರತಿಷ್ಠೆಯನ್ನು ತರುತ್ತವೆ.
  • ವಿದ್ಯಾರ್ಥಿಗಳಿಗೆ: ವಿದ್ಯಾರ್ಥಿಗಳಿಗೆ ಮೊಬೈಲ್ ಕೊಡಿಸುವಾಗ, ಕೊನೆಯ ಅಂಕೆಗಳು 3 ಮತ್ತು 2 (ಅಥವಾ 2 ಮತ್ತು 3) ಇರುವುದು ಒಳ್ಳೆಯದು. ಇದು ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ರಾಜಯೋಗ: 9 ಮತ್ತು 1 (ಅಥವಾ 1 ಮತ್ತು 9) ಸಂಯೋಜನೆಗಳು ರಾಜಯೋಗವನ್ನು ತರುತ್ತವೆ ಎಂದು ನಂಬಲಾಗಿದೆ.
    ಒತ್ತಡ: 4 ಮತ್ತು 3 (ಅಥವಾ 3 ಮತ್ತು 4) ಹಾಗೂ 1 ಮತ್ತು 8 (ಅಥವಾ 8 ಮತ್ತು 1) ಸಂಯೋಜನೆಗಳು ಕೆಲವೊಮ್ಮೆ ಒತ್ತಡ ಮತ್ತು ಆತಂಕವನ್ನು ಉಂಟುಮಾಡಬಹುದು.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸಂಖ್ಯೆಗಳು ನಮ್ಮ ಗುಣಗಳನ್ನು, ನಾವು ಹುಟ್ಟಿದ ವಂಶವನ್ನು, ಮತ್ತು ನಮ್ಮ ಹೆಸರನ್ನು ಅವಲಂಬಿಸಿ ಪ್ರಭಾವ ಬೀರುತ್ತವೆ. ಸಾತ್ವಿಕ ಗುಣದವರಿಗೆ ಸಾತ್ವಿಕ ಸಂಖ್ಯೆಗಳು ಸಿಕ್ಕರೆ ಅದು ಸಕಾರಾತ್ಮಕ ಪ್ರಭಾವವನ್ನು ದ್ವಿಗುಣಗೊಳಿಸುತ್ತದೆ. ಒಂದು ವೇಳೆ ಒಳ್ಳೆಯ ವ್ಯಕ್ತಿಗಳಿಗೆ ರಜೋಗುಣದ ಸಂಖ್ಯೆಗಳು ಸಿಕ್ಕರೆ, ಅದು ಅವರ ಕೋಪವನ್ನು ಹೆಚ್ಚಿಸಿ, ಗುಣಗಳಲ್ಲಿ ಬದಲಾವಣೆಯನ್ನು ತರಬಹುದು.

ವೃತ್ತಿಪರರಿಗೆ ನಿರ್ದಿಷ್ಟ ಸಂಖ್ಯೆಗಳು:

  • ವ್ಯಾಪಾರಸ್ಥರು: ವ್ಯಾಪಾರದಲ್ಲಿ ಯಶಸ್ಸು ಮತ್ತು ಹಣ ಗಳಿಕೆಗೆ 5 (ಬುಧನ ಸಂಖ್ಯೆ) ಮತ್ತು 3 (ಗುರುವಿನ ಸಂಖ್ಯೆ) ಸಂಯೋಜನೆಗಳು ಅತ್ಯಂತ ಶುಭಕರ.
  • ವೈದ್ಯರು: ವೈದ್ಯ ವೃತ್ತಿಯಲ್ಲಿರುವವರಿಗೆ 1 ಮತ್ತು 9 ಸಂಖ್ಯೆಗಳು ಒಳ್ಳೆಯದು.
  • ವಿದ್ಯಾಸಂಸ್ಥೆಗಳ ಸಿಬ್ಬಂದಿ: ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ 2 ಮತ್ತು 5 ಸಂಖ್ಯೆಗಳು ಹೆಚ್ಚು ಶುಭವನ್ನು ತರುತ್ತವೆ.
  • ಸಿನಿಮಾ ರಂಗ (ಸಾಹಿತಿಗಳು, ನಿರ್ದೇಶಕರು): ಸಿನಿಮಾ ಕ್ಷೇತ್ರದಲ್ಲಿರುವ ಸಾಹಿತಿಗಳು, ನಿರ್ದೇಶಕರಿಗೆ 2 ಮತ್ತು 6 ಸಂಖ್ಯೆಗಳು ಶುಭಕರ ಎಂದು ಹೇಳಲಾಗುತ್ತದೆ.

ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದ್ದರೂ, ಪ್ರತಿಯೊಂದು ಸಂಖ್ಯೆಯೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ, ನಿಮ್ಮ ಜೀವನದ ಹಾದಿಯನ್ನು ಮತ್ತಷ್ಟು ಶುಭಕರವಾಗಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಮಳೆ ಬೆನ್ನಲ್ಲೇ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ – Kannada News

ಮಳೆ ಬೆನ್ನಲ್ಲೇ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ

ಬೆಂಗಳೂರು, ಜೂನ್ 10: ಇಂದು ಕರ್ನಾಟಕದ ಪ್ರಮುಖ ನಗರಗಳು ಹಾಗೂ ರಾಜಧಾನಿ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ತೃಪ್ತಿಕರವಾಗಿದೆ. ಇತ್ತೀಚಿನ ಮಳೆಯ ಕಾರಣದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವಂತಾಗಿದೆ.

ಮುಖ್ಯಾಂಶಗಳು

  • ಇಂದಿನ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಉತ್ತಮ ಶ್ರೇಣಿಯಲ್ಲಿದೆ.
  • ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಕುಸಿದಿದೆ.
  • ಮೈಸೂರು, ಮಂಗಳೂರು ಮತ್ತು ಗದಗದ ಗಾಳಿಯ ಗುಣಮಟ್ಟ ಆರೋಗ್ಯಕರವಾಗಿದೆ.

‘ಉತ್ತಮ’ ಶ್ರೇಣಿಯಲ್ಲಿ ಸಿಲಿಕಾನ್ ಸಿಟಿ!

ರಾಜಧಾನಿ ಬೆಂಗಳೂರಿನಲ್ಲಿ ಇಂದು ಜೂನ್ 10 ರಂದು ವಾಯು ಗುಣಮಟ್ಟ ಸೂಚ್ಯಂಕವು 15 ರಿಂದ 18 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಉತ್ತಮ ಶ್ರೇಣಿಗೆ ಸೇರುತ್ತದೆ. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಬೀಸುತ್ತಿರುವ ತಂಪಾದ ಗಾಳಿಯಿಂದಾಗಿ ವಾತಾವರಣದಲ್ಲಿನ ಮಾಲಿನ್ಯಕಾರಕ ಕಣಗಳ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.

ಪ್ರಮುಖ ಮಾಲಿನ್ಯಕಾರಕಗಳಾದ PM2.5 ಕೇವಲ 8 µg/m³ ಮತ್ತು PM10 ಪ್ರಮಾಣ 13 µg/m³ ನಷ್ಟಿದೆ. ಸಾಮಾನ್ಯವಾಗಿ ಬಿಟಿಎಂ ಲೇಔಟ್, ಹೆಬ್ಬಾಳ ಮತ್ತು ಜಯನಗರದಂತಹ ಜನನಿಬಿಡ ಪ್ರದೇಶಗಳಲ್ಲೂ ಇಂದು ವಾಯು ಗುಣಮಟ್ಟವು ಅತ್ಯಂತ ಆರೋಗ್ಯಕರವಾಗಿದೆ. ಇದರಿಂದಾಗಿ ವೃದ್ಧರು, ಮಕ್ಕಳು ಹಾಗೂ ಉಸಿರಾಟದ ತೊಂದರೆ ಇರುವವರು ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಕರ್ನಾಟಕದ ಇತರೆ ನಗರಗಳ AQI ಸ್ಥಿತಿ ಹೀಗಿದೆ

  • ಗದಗ: 20 (ಅತ್ಯಂತ ಉತ್ತಮ)
  • ಚಿಕ್ಕಮಗಳೂರು: 25 (ಉತ್ತಮ)
  • ಮೈಸೂರು: 33 (ಉತ್ತಮ)
  • ಬಾಗಲಕೋಟೆ ಮತ್ತು ಬೆಳಗಾವಿ: 35 – 45 ರ ಆಸುಪಾಸು (ಉತ್ತಮ)
  • ಮಂಗಳೂರು: 28 (ಉತ್ತಮ – ಕರಾವಳಿ ತೀರದ ತಂಗಾಳಿ)

ವಾಯು ಗುಣಮಟ್ಟ ಸೂಚ್ಯಂಕವು 0-50 ರ ಒಳಗಿದ್ದರೆ ಅದನ್ನು ‘ಉತ್ತಮ’ (Good) ಎಂದೂ, 51-100 ರಷ್ಟಿದ್ದರೆ ‘ಸಾಧಾರಣ’ (Moderate) ಎಂದೂ ಪರಿಗಣಿಸಲಾಗುತ್ತದೆ. ರಾಜ್ಯದ ಬಹುತೇಕ ಜಿಲ್ಲೆಗಳು ಇಂದು 50 ಕ್ಕಿಂತ ಕಡಿಮೆ ಸೂಚ್ಯಂಕವನ್ನು ಹೊಂದುವ ಮೂಲಕ ಹಸಿರು ವಲಯದಲ್ಲಿ ಗುರುತಿಸಿಕೊಂಡಿವೆ. ಮುಂಬರುವ ದಿನಗಳಲ್ಲಿ ಮಳೆ ಮುಂದುವರಿಯುವುದರಿಂದ ಗಾಳಿಯ ಗುಣಮಟ್ಟ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದೇ ಓವರ್​ನಲ್ಲಿ 3 ವಿಕೆಟ್​: ಟೀಮ್ ಇಂಡಿಯಾಗೆ ರೋಚಕ ಜಯ – Kannada News

ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ರೋಚಕ ಜಯ ಸಾಧಿಸಿದೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರುತುರಾಜ್ ಗಾಯಕ್ವಾಡ್ (101) ಶತಕ ಸಿಡಿಸಿದರು. ಈ ಶತಕದ ನೆರವಿನೊಂದಿಗೆ ಭಾರತ ಎ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 277 ರನ್​ ಕಲೆಹಾಕಿತು.

278 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಂತೆ 43 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡ 237 ರನ್ ಕಲೆಹಾಕಿದ್ದರು. ಕೊನೆಯ 7 ಓವರ್​ಗಳಲ್ಲಿ ಕೇವಲ 40 ರನ್​ಗಳ ಗುರಿ ಹೊಂದಿದ್ದ ಶ್ರೀಲಂಕಾ ತಂಡವು ನಾಟಕೀಯ ಕುಸಿತಕ್ಕೊಳಗಾಯಿತು.

ಅದರಲ್ಲೂ ಅಂತಿಮ 12 ಎಸೆತಗಳಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ ಬೇಕಿದದ್ದು ಕೇವಲ 9 ರನ್​ಗಳು ಮಾತ್ರ. ಈ ಹಂತದಲ್ಲಿ ದಾಳಿಗಿಳಿದ ಎಡಗೈ ವೇಗಿ ಅರ್ಷದ್ ಖಾನ್ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಪಡೆದರು. ಮತ್ತೊಂದೆಡೆ ವಿಜಯಕಾಂತ್ ರನೌಟ್ ಆದರು.

ಪರಿಣಾಮ 48.5 ಓವರ್​ಗಳಲ್ಲಿ 269 ರನ್​ಗಳಿಸಿ ಶ್ರೀಲಂಕಾ ಎ ತಂಡವು ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 8 ರನ್​ಗಳ ರೋಚಕ ಜಯ ಸಾಧಿಸಿದೆ. ಈ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ತಂಡವು ಅಫ್ಘಾನಿಸ್ತಾನ್ ಎ ತಂಡವನ್ನು ಎದುರಿಸಲಿದ್ದು, ಈ ಮ್ಯಾಚ್ ಗುರುವಾರ (ಜೂ.11) ನಡೆಯಲಿದೆ.

ಭಾರತ ‘ಎ’ ಪ್ಲೇಯಿಂಗ್ XI: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಆಯುಷ್ ಬದೋನಿ, ಅನ್ಕುಲ್ ರಾಯ್, ಸೂರ್ಯಂಶ್ ಶೆಡ್ಗೆ, ಅನ್ಶುಲ್ ಕಂಬೋಜ್, ಅರ್ಷಾದ್ ಖಾನ್, ವಿಪ್ರಾಜ್ ನಿಗಮ್.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರ ಔಟ್: ಕನ್ನಡಿಗ ಎಂಟ್ರಿ!

ಶ್ರೀಲಂಕಾ ‘ಎ’ ಪ್ಲೇಯಿಂಗ್ XI: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಸದೀರ ಸಮರವಿಕ್ರಮ, ಸಹನ್ ಅರಾಚಿಂಗೆ (ನಾಯಕ), ಚಾಮಿಕ ಕರುಣಾರತ್ನೆ, ರವಿಂದು ಫೆರ್ನಾಂಡೋ, ವನುಜಾ ಸಹನ್, ವಿಜಯಕಾಂತ್ ವಿಯಾಸ್ಕಾಂತ್, ಮೊಹಮ್ಮದ್ ಶಿರಾಜ್, ಗರುಕ ಸಂಕೇತ್.

 

Source link

ಜೂನ್ 13 ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ,ಜಿ-7 ಶೃಂಗಸಭೆ, ಫ್ರಾನ್ಸ್ ಮತ್ತು ಸ್ಲೋವಾಕಿಯಾ ಭೇಟಿ, ಟ್ರಂಪ್ ಜತೆಯೂ ಮಾತುಕತೆ – Kannada News

ನವದೆಹಲಿ: ಭಾರತದ ಜಾಗತಿಕ ಪ್ರಭಾವ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಜೂನ್ 13ರಿಂದ 18ರವರೆಗೆ ಯುರೋಪ್​ನ ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್​ ಮತ್ತು ಸ್ಲೋವಾಕಿಯಾಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಈ ಆರು ದಿನಗಳ ಸುದೀರ್ಘ ಪ್ರವಾಸದಲ್ಲಿ ಪ್ರಧಾನಿಯವರು ಉಭಯ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ, ಜಿ-7 ಶೃಂಗಸಭೆಯಲ್ಲಿ ಭಾಗಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ವಲಯದಲ್ಲಿ ಭಾರತದ ಹೆಜ್ಜೆಯನ್ನು ಗಟ್ಟಿಗೊಳಿಸುವ ಮಹತ್ತರ ಕಾರ್ಯಸೂಚಿಗಳನ್ನು ಹೊಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಜತೆಯೂ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಫ್ರಾನ್ಸ್‌ನ ನೈಸ್ ಭೇಟಿ ಮತ್ತು ‘ಇಂಡಿಯಾ ಇನ್ನೋವೇಟ್ಸ್’ ಉದ್ಘಾಟನೆ (ಜೂನ್ 13-14)
ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್‌ನ ನೈಸ್ ನಗರಕ್ಕೆ ಆಗಮಿಸಲಿದ್ದಾರೆ. ಇಲ್ಲಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಕಾರ್ಯತಂತ್ರದ ಪರಿಶೀಲನೆ: ಉಭಯ ನಾಯಕರು ಭಾರತ-ಫ್ರಾನ್ಸ್ ನಡುವಿನ ವಿಶೇಷ ಜಾಗತಿಕ ಮತ್ತು ರಕ್ಷಣಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಪರಿಶೀಲಿಸಲಿದ್ದಾರೆ.

ಮತ್ತಷ್ಟು ಓದಿ: 12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

ನವೋದ್ಯಮಕ್ಕೆ ಉತ್ತೇಜನ: ಭಾರತ, ಫ್ರಾನ್ಸ್ ಮತ್ತು ಇತರ ಪ್ರಮುಖ ದೇಶಗಳ ಸ್ಟಾರ್ಟ್‌ಅಪ್‌ಗಳು ಹಾಗೂ ಸಾಹಸೋದ್ಯಮ ಬಂಡವಾಳ ನಿಧಿಗಳನ್ನು ಒಟ್ಟುಗೂಡಿಸುವ ಇಂಡಿಯಾ ಇನ್ನೋವೇಟ್ಸ್ ಜಾಗತಿಕ ಕಾರ್ಯಕ್ರಮವನ್ನು ಉಭಯ ನಾಯಕರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

ಸ್ಲೋವಾಕಿಯಾಗೆ ಭೇಟಿ; ಆಟೋಮೊಬೈಲ್ ಮತ್ತು ರಕ್ಷಣಾ ವಲಯಕ್ಕೆ ಬಲ (ಜೂನ್ 14-16)
ಜೂನ್ 14 ರಂದು ಪ್ರಧಾನಿ ಮೋದಿ ಅವರು ಸ್ಲೋವಾಕಿಯಾಕ್ಕೆ ಐತಿಹಾಸಿಕ ರಾಜ್ಯ ಭೇಟಿ ನೀಡಲಿದ್ದಾರೆ. 1993 ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಈ ಭೇಟಿಯ ವೇಳೆ ಅವರು ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೊ ಮತ್ತು ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಅವರನ್ನು ಭೇಟಿಯಾಗಲಿದ್ದಾರೆ.

ಸರಿಸುಮಾರು 55 ಲಕ್ಷ ಜನಸಂಖ್ಯೆ ಹೊಂದಿರುವ ಸ್ಲೋವಾಕಿಯಾವು ವೋಕ್ಸ್‌ವ್ಯಾಗನ್, ಕಿಯಾ, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಸ್ಟೆಲ್ಲಾಂಟಿಸ್‌ನಂತಹ ಜಾಗತಿಕ ದೈತ್ಯ ಕಂಪನಿಗಳ ಬೃಹತ್ ಉತ್ಪಾದನಾ ಘಟಕಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕಾರು ಉತ್ಪಾದನಾ ಕೇಂದ್ರವಾಗಿದೆ. ಉತ್ಪಾದನೆ, ಆಟೋ ಬಿಡಿಭಾಗಗಳು ಮತ್ತು ಎಲೆಕ್ಟ್ರಿಕ್ ವಾಹನ (EV) ತಂತ್ರಜ್ಞಾನದಲ್ಲಿ ಸಹಕಾರವನ್ನು ವಿಸ್ತರಿಸಲು ಭಾರತ ನಿರ್ಧರಿಸಿದೆ.

ಸ್ಲೋವಾಕಿಯಾ ಯುರೋಪಿಯನ್ ಒಕ್ಕೂಟದ (EU) ಪ್ರಮುಖ ಸದಸ್ಯ ರಾಷ್ಟ್ರವಾಗಿರುವುದರಿಂದ, ಅದರೊಂದಿಗಿನ ಬಲವಾದ ಸಂಬಂಧವು ಭಾರತ-ಇಯು ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಭದ್ರ ಬುನಾದಿ ಹಾಕಲಿದ್ದು, ಮಧ್ಯ ಮತ್ತು ಪೂರ್ವ ಯುರೋಪಿನ ಮಾರುಕಟ್ಟೆಗಳಿಗೆ ಭಾರತೀಯ ಉತ್ಪನ್ನಗಳ ಪ್ರವೇಶ ಸುಲಭವಾಗಲಿದೆ.

ರಕ್ಷಣಾ ರಫ್ತು ಮತ್ತು ಇಂಧನ ಸುರಕ್ಷತೆ: ರಷ್ಯಾ-ಉಕ್ರೇನ್ ಯುದ್ಧದ ನಂತರ ಯುರೋಪಿಯನ್ ರಾಷ್ಟ್ರಗಳು ತಮ್ಮ ರಕ್ಷಣಾ ಮೂಲಸೌಕರ್ಯವನ್ನು ಆಧುನೀಕರಿಸುತ್ತಿವೆ. ಈ ಸಂದರ್ಭದಲ್ಲಿ ಭಾರತವು ತನ್ನ ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳ ರಫ್ತಿಗೆ ಹೊಸ ಮಾರುಕಟ್ಟೆ ಕಂಡುಕೊಳ್ಳಲಿದೆ. ಇದರೊಂದಿಗೆ, ಪರಮಾಣು ಶಕ್ತಿಯಿಂದ ಭಾರಿ ವಿದ್ಯುತ್ ಉತ್ಪಾದಿಸುವ ಸ್ಲೋವಾಕಿಯಾದೊಂದಿಗೆ ಶುದ್ಧ ಇಂಧನ ಮತ್ತು ಪರಮಾಣು ತಂತ್ರಜ್ಞಾನದ ಕುರಿತು ಪ್ರಮುಖ ಒಪ್ಪಂದಗಳು ನಡೆಯಲಿವೆ.

ಜಿ-7 ಶೃಂಗಸಭೆ, ಕೃತಕ ಬುದ್ಧಿಮತ್ತೆ (AI) ಮತ್ತು ಆರ್ಥಿಕ ಬೆಳವಣಿಗೆಗೆ ಆದ್ಯತೆ (ಜೂನ್ 16-17)
ಪ್ರವಾಸದ ಮೂರನೇ ಹಂತದಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್‌ನ ಎವಿಯನ್ (Evian) ನಗರದಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ ಜಿ-7 ಶೃಂಗಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶೃಂಗಸಭೆಯ ಪ್ರಮುಖ ಜಾಗತಿಕ ಕಾರ್ಯಸೂಚಿಗಳು ಹೀಗಿವೆ:

ವಿಶ್ವದ ಪ್ರಮುಖ ಜಿ-7 ದೇಶಗಳ ನಾಯಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ಮೋದಿ ಅವರು ಜಾಗತಿಕ ಪಾಲುದಾರಿಕೆ, ಸಮಗ್ರ ಆರ್ಥಿಕ ಬೆಳವಣಿಗೆ ಮತ್ತು ಇಂದಿನ ಆಧುನಿಕ ಅಗತ್ಯವಾಗಿರುವ ಕೃತಕ ಬುದ್ಧಿಮತ್ತೆಯ (AI) ಸುರಕ್ಷಿತ, ನೈತಿಕ ಮತ್ತು ಪರಿಣಾಮಕಾರಿ ಬಳಕೆಯ ಕುರಿತು ಭಾರತದ ದೂರದೃಷ್ಟಿಯನ್ನು ಮಂಡಿಸಲಿದ್ದಾರೆ. ಇದೇ ವೇಳೆ ಅವರು ವಿಶ್ವದ ಪ್ರಮುಖ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಪ್ಯಾರಿಸ್‌ನಲ್ಲಿ ‘ವಿವಾ ಟೆಕ್ ಶೃಂಗಸಭೆ’ ಮತ್ತು ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ (ಜೂನ್ 18)
ಜೂನ್ 18 ರಂದು ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ಮೋದಿ ಪ್ಯಾರಿಸ್ ತಲುಪಲಿದ್ದಾರೆ. ಅಲ್ಲಿ ಅವರು ಯುರೋಪಿನ ಅತಿ ದೊಡ್ಡ ತಂತ್ರಜ್ಞಾನ ಮತ್ತು ನವೋದ್ಯಮ ಮೇಳವಾದ ವಿಶ್ವಪ್ರಸಿದ್ಧ ವಿವಾ ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತೀಯ ಡಿಜಿಟಲ್ ತಂತ್ರಜ್ಞಾನ ಹಾಗೂ ಯುವ ಉದ್ಯಮಿಗಳಿಗೆ ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಸುವರ್ಣಾವಕಾಶ ಒದಗಿಸಲಿದೆ. ಕೊನೆಯದಾಗಿ ಪ್ರಧಾನಿಯವರು ಪ್ಯಾರಿಸ್‌ನಲ್ಲಿರುವ ಅನಿವಾಸಿ ಭಾರತೀಯ ಸಮುದಾಯದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೆಳತಿ ಸಾವಿನ ನೋವಲ್ಲಿ ಸಲ್ಮಾನ್ ಖಾನ್; ಅಂತಿಮ ನಮನ ಸಲ್ಲಿಸಿದ ನಟ – Kannada News

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸ್ನೇಹಿತರನ್ನು ಹಾಗೂ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಅವರು ತಮ್ಮ ಸ್ನೇಹಿತರ ಸಂತೋಷ ಮತ್ತು ದುಃಖದಲ್ಲಿ ಅವರ ಜೊತೆ ನಿಲ್ಲುತ್ತಾರೆ. ಈಗ ಸಲ್ಮಾನ್ ಖಾನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಸಲ್ಮಾನ್ ತುಂಬಾ ದುಃಖಿತನಾಗಿ ಕಾಣುತ್ತಿದ್ದಾರೆ. ಅವರ ಕುಟುಂಬ ಸ್ನೇಹಿತ ಕುಮುದ್ ರಾಣೆ ನಿಧನರಾಗಿದ್ದಾರೆ. ಇದರಿಂದಾಗಿ, ಸಲ್ಮಾನ್ ತುಂಬಾ ದುಃಖಿತರಾಗಿದ್ದರು. ಸಲ್ಮಾನ್ ತನ್ನ ಸ್ನೇಹಿತನಿಗೆ ಅಂತಿಮ ವಿದಾಯ ಹೇಳಲು ಬಂದಿದ್ದಾರೆ. ಆ ಸಮಯದಲ್ಲಿ, ಅವರು ತಮ್ಮ ಭಾವನೆಗಳನ್ನು ತಡೆದುಕೊಳ್ಳುವಲ್ಲಿ ತುಂಬಾ ಕಷ್ಟಪಡುತ್ತಿದ್ದರು.

ಕುಮುದ್ ಸಾವಿನಿಂದ ಸಲ್ಮಾನ್ ಆಘಾತಕ್ಕೆ ಒಳಗಾಗಿದ್ದಾರೆ. ಕುಮುದ್ ಓರ್ವ ಕೇಶ ವಿನ್ಯಾಸಕಿ. ಅವರು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಲೂನ್ ಹೊಂದಿದ್ದಾರೆ. ಕುಮುದ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಸಲ್ಮಾನ್ ಮಾತ್ರವಲ್ಲದೆ, ಅರ್ಬಾಜ್ ಖಾನ್, ಸೊಹೈಲ್ ಖಾನ್, ಅವರ ತಾಯಂದಿರಾದ ಸಲ್ಮಾ ಮತ್ತು ಹೆಲೆನ್, ಸೊಹೈಲ್ ಅವರ ಪುತ್ರರಾದ ನಿರ್ವಾಣ ಮತ್ತು ಅರ್ಬಾಜ್ ಖಾನ್ ಅವರ ಪುತ್ರ ಅರ್ಹಾನ್ ಕೂಡ ಕುಮುದ್ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದರು.

ನಿರ್ವಾಣಕ್ಕೆ ಬಂದು ಅಳು..
ಸೊಹೈಲ್ ಖಾನ್ ಅವರ ಮಗ ನಿರ್ವಾಣ ಅಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅರ್ಹಾನ್ ಅವರಿಗೆ ಬೆಂಬಲ ನೀಡುತ್ತಿರುವುದು ಕಂಡುಬರುತ್ತದೆ. ಕುಮುದ್ ರಾಣೆ ಸಲ್ಮಾನ್ ಅವರ ಇಡೀ ಕುಟುಂಬದ ಆಪ್ತ ಸದಸ್ಯರಾಗಿದ್ದರು. ಅವರ ಸಾವು ಸಲ್ಮಾನ್ ಖಾನ್ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.

2025 ರಲ್ಲಿ, ಕುಮುದ್ ರಾಣೆ ಮತ್ತು ಅವರ ಪತಿ ಜಗ್ಗಿ ರಾಣೆ ಸಲ್ಮಾನ್ ಖಾನ್ ಅವರೊಂದಿಗೆ ಹೊಸ ವರ್ಷವನ್ನು ಆಚರಿಸಿದರು. ಕುಮುದ್ ಇನ್ಸ್ಟಾಗ್ರಾಮ್ನಲ್ಲಿ ಸಲ್ಮಾನ್ ಜೊತೆಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ ಸಲ್ಮಾನ್ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ

ಸಲ್ಮಾನ್ ಖಾನ್ ಪ್ರಸ್ತುತ ಆಕ್ಷನ್-ಡ್ರಾಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ವಂಶಿ ಪೆಡಿಪಲ್ಲಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ನಯನತಾರಾ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಹೆಸರನ್ನು ಇನ್ನೂ ಘೋಷಿಸಲಾಗಿಲ್ಲ. ಸಲ್ಮಾನ್ ಅವರ ‘ಮಾತೃಭೂಮಿ’ ಚಿತ್ರ ಕೂಡ ಈ ವರ್ಷ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ರಾಜ್ಯದ ಈ ಜಿಲ್ಲೆಗಳಲ್ಲಿ ಜೋರಾಗಲಿದೆ ಮಳೆಯ ಅಬ್ಬರ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ! – Kannada News

ರಾಜ್ಯದ ಈ ಜಿಲ್ಲೆಗಳಲ್ಲಿ ಜೋರಾಗಲಿದೆ ಮಳೆಯ ಅಬ್ಬರ

ಬೆಂಗಳೂರು, ಜೂನ್ 10: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
  • ಉತ್ತರ ಕನ್ನಡ, ಚಾಮರಾಜನಗರ ಸೇರಿದಂತೆ ಹನ್ನೊಂದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
  • ಬೆಂಗಳೂರು ಹಾಗೂ ಮೈಸೂರಿನ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಕರ್ನಾಟಕಕ್ಕೆ ‘ಆರೆಂಜ್ ಅಲರ್ಟ್’

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ‘ಅತಿ ಭಾರೀ ಮಳೆ’ಯಾಗುವ ಮುನ್ಸೂಚನೆ ಇರುವುದರಿಂದ ಈ ಭಾಗಕ್ಕೆ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ತೀವ್ರ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಹಲವೆಡೆ ವರುಣಾರ್ಭಟ

ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೂ ಹವಾಮಾನ ಇಲಾಖೆ **ಯೆಲ್ಲೋ ಅಲರ್ಟ್** ಪ್ರಕಟಿಸಿದೆ. ಉಳಿದಂತೆ ಉತ್ತರ ಒಳನಾಡಿನ ಬೆಳಗಾವಿ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಅನ್ವಯಿಸಲಿದೆ.

ಬೆಂಗಳೂರಿನಲ್ಲೂ ಮಳೆ

ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಅಥವಾ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ತೀರದಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಗ್ಗು ಪ್ರದೇಶಗಳ ನಿವಾಸಿಗಳು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:53 am, Wed, 10 June 26

Source link

94ನೇ ವಯಸ್ಸಿಗೆ ನಿರ್ದೇಶನ; ‘ಸಿಂಗ್ ಗೀತಂ’ ಸಿನಿಮಾ ಈ ವಾರ ರಿಲೀಸ್ – Kannada News

‘ಬದುಕಿರುವಾಗಲೇ ಏನಾದರೂ ಸಾಧಿಸಬೇಕು’ ಎಂಬ ಮಾತು ಈ ಒಬ್ಬ ದಂತಕಥೆ ನಿರ್ದೇಶಕರಿಗೆ ಅಕ್ಷರಶಃ ಸರಿಹೊಂದುತ್ತದೆ. ಒಂಬತ್ತೂವರೆ ದಶಕಗಳ ವಯಸ್ಸಿನಲ್ಲೂ ಮಗುವಿನ ಉತ್ಸಾಹದಿಂದ ಬದುಕುವ, ಸಿನಿಮಾವನ್ನೇ ಉಸಿರಾಡುವ ಆ ಅದ್ಭುತ ನಿರ್ದೇಶಕ ಬೇರೆ ಯಾರೂ ಅಲ್ಲ, ಸಿಂಗೀತಂ ಶ್ರೀನಿವಾಸ ರಾವ್.

ವಯಸ್ಸು ಕೇವಲ ದೇಹಕ್ಕಷ್ಟೇ ಹೊರತು, ಸೃಜನಶೀಲತೆ ಮತ್ತು ಕನಸುಗಳಿಗಲ್ಲ ಎಂಬುದನ್ನು ಅವರು ತಮ್ಮ ಪ್ರತಿ ಹೆಜ್ಜೆಯಲ್ಲೂ ಸಾಬೀತುಪಡಿಸುತ್ತಿದ್ದಾರೆ. ಇಂದಿನ ಯುವಕರು ಮೂವತ್ತರಲ್ಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೇಗನೆ ದಣಿಯುತ್ತಿರುವ ಈ ದಿನಗಳಲ್ಲಿ, 94ನೇ ವಯಸ್ಸಿನಲ್ಲೂ ಅವರ ಶಕ್ತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲ, ಇಂದಿನ ಜನರೇಷನ್-ಜಿ (Gen-Z) ಪ್ರೇಕ್ಷಕರ ನಾಡಿಮಿಡಿತಕ್ಕೆ ತಕ್ಕಂತೆ ಹೊಸ ಪರಿಕಲ್ಪನೆಯ ಸಿನಿಮಾ ಹಿಡಿದು ಅವರು ನಮ್ಮ ಮುಂದೆ ಬರುತ್ತಿದ್ದಾರೆ.

‘ನೀತಿ ನಿಜಾಯಿತಿ’ ಅವರ ಮೊದಲ ಸಿನಿಮಾ. ‘ಹಾಲು ಜೇನು’ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’ ಸಿನಿಮಾ ಮಾಡಿ ಭೇಷ್ ಎನಿಸಿಕೊಂಡರು. ಅವರ ಶೈಲಿ ಎಂದಿಗೂ ಟ್ರೆಂಡ್‌ಗಳನ್ನು ಅನುಸರಿಸಿದ್ದಲ್ಲ, ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸಿದ್ದು. ಈಗ ತಮ್ಮ ಸುದೀರ್ಘ ವೃತ್ತಿಜೀವನದಲ್ಲೇ ಅತ್ಯಂತ ಧೈರ್ಯಶಾಲಿ ಪ್ರಯೋಗಕ್ಕೆ ಕೈಹಾಕಿದ್ದಾರೆ.

ಮೂರೂವರೆ ದಶಕಗಳ ಹಿಂದೆ, ಅವರು ‘ಪುಷ್ಪಕ ವಿಮಾನ’ದಂತಹ ಅದ್ಭುತ ಮೂಕಿ ಚಿತ್ರವನ್ನು ನಿರ್ಮಿಸಿ, ಯಾವುದೇ ಮಾತಿಲ್ಲದೆ ಕೇವಲ ಮೌನದಿಂದಲೇ ಎಲ್ಲಾ ಭಾವನೆಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಇದನ್ನೂ ಓದಿ: 94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ

ಈಗ ಅವರು ‘ಸಿಂಗ್ ಗೀತಂ’ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಜೂನ್ 11ರಂದು ಸಿನಿಮಾ ರಿಲೀಸ್ ಆಗಲಿದೆ. ಈ ನಿರ್ದೇಶಕರು ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಚಿತ್ರದ ಕಥೆ ಗಣಿಗಾರಿಕೆ ನಡೆಯುವ ಪಟ್ಟಣದ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿ ಜನರು ಚಿನ್ನದ ಹುಡುಕಾಟದಲ್ಲಿ ತೊಡಗುತ್ತಾರೆ. ಪ್ರತಾಪ್ ಎಂಬ ಯುವಕ ವಿಚಿತ್ರ ಜಗತ್ತೊಂದಕ್ಕೆ ಪ್ರವೇಶಿಸಿದಾಗ ಎದುರಿಸುವ ಸವಾಲುಗಳು ಹಾಗೂ ಪ್ರಗತಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ಮುಜ್​ನಲ್ಲಿ ಭಾರಿ ಮಿಲಿಟರಿ ಸಂಘರ್ಷ, ಅಮೆರಿಕ ಇರಾನ್ ನಡುವೆ ದಾಳಿ, ಪ್ರತಿದಾಳಿ – Kannada News

ವಾಷಿಂಗ್ಟನ್, ಜೂನ್ 10: ಜಾಗತಿಕ ತೈಲ ಸಾಗಣೆಯ ಅತ್ಯಂತ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿ ಮತ್ತು ಓಮನ್ ಗಡಿ ಪ್ರದೇಶ ಪ್ರಸ್ತುತ ಜಾಗತಿಕ ಮಹಾಯುದ್ಧದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಓಮನ್ ಬಳಿ ಗಸ್ತು ತಿರುಗುತ್ತಿದ್ದ ಅಮೆರಿಕ ಸೇನೆಯ ಮೇಲೆ ಇರಾನ್(Iran) ದಾಳಿ ನಡೆಸಿದ ಬೆನ್ನಲ್ಲೇ ಯುಎಸ್ ಪಡೆಗಳು ದಕ್ಷಿಣ ಇರಾನ್​ನ ಮಿಲಿಟರಿ ನೆಲೆಗಳ ಮೇಲೆ ಭಾರಿ ವಾಯುದಾಳಿ ನಡೆಸಿವೆ.

ಇದಕ್ಕೆ ಪ್ರತಿಯಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ಫ್ಲೀಟ್ ನೌಕಾಪಡೆಯ ಕೇಂದ್ರದ ಮೇಲೆ ಸರಣಿ ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಮೂಡಿಸಿದೆ.

ಇರಾನ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸಗೊಳಿಸಿದ ಅಮೆರಿಕ
ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಅಮೆರಿಕದ ಅತ್ಯಾಧುನಿಕ ಫೈಟರ್ ಜೆಟ್‌ಗಳು ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಇರಾನಿನ ಮಿಲಿಟರಿ ಗುರಿಗಳ ಮೇಲೆ ಸ್ವ-ರಕ್ಷಣಾ ದಾಳಿ ನಡೆಸಿವೆ.

ಮತ್ತಷ್ಟು ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ದಕ್ಷಿಣ ಇರಾನ್‌ನ ಜಾಸ್ಕ್, ಸಿರಿಕ್ ಮತ್ತು ಆಯಕಟ್ಟಿನ ಕೆಶ್ಮ್ ದ್ವೀಪದ ಮೇಲಿದ್ದ ಇರಾನಿನ ವಾಯು ರಕ್ಷಣಾ ಕ್ಷಿಪಣಿ ನೆಲೆಗಳು, ಅತ್ಯಾಧುನಿಕ ಕಣ್ಗಾವಲು ರಾಡಾರ್ ವ್ಯವಸ್ಥೆಗಳು ಮತ್ತು ಡ್ರೋನ್ ನಿಯಂತ್ರಣ ಕೇಂದ್ರಗಳನ್ನು ಅಮೆರಿಕದ ಕ್ಷಿಪಣಿಗಳು ಯಶಸ್ವಿಯಾಗಿ ಧ್ವಂಸಗೊಳಿಸಿವೆ.

ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಹಡಗು ಸಾಗಣೆ ಮತ್ತು ಅಮೆರಿಕದ ಸೈನಿಕರ ಸುರಕ್ಷತೆಯನ್ನು ಖಚಿತಪಡಿಸಲು ಈ ಕಾರ್ಯಾಚರಣೆ ಅನಿವಾರ್ಯವಾಗಿತ್ತು ಮತ್ತು ಪ್ರಸ್ತುತ ಯೋಜಿತ ದಾಳಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ವಾಷಿಂಗ್ಟನ್ ತಿಳಿಸಿದೆ.

ಯುಎಸ್ ನೌಕಾಪಡೆಯ ಮೇಲೆ ಇರಾನ್ ಡ್ರೋನ್ ದಾಳಿ
ಅಮೆರಿಕದ ವಾಯುದಾಳಿಯನ್ನು ತೀವ್ರವಾಗಿ ಖಂಡಿಸಿರುವ ಟೆಹ್ರಾನ್, ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ ಭೀಕರ ಪ್ರತೀಕಾರದ ಕ್ರಮವನ್ನು ಜರಗಿಸಿದೆ. ಬಹ್ರೇನ್ ದೇಶದಲ್ಲಿ ನೆಲೆಗೊಂಡಿರುವ ಅಮೆರಿಕದ ನೌಕಾಪಡೆಯ ಪರಮೋಚ್ಚ ಕೇಂದ್ರವಾದ ‘ಐದನೇ ಫ್ಲೀಟ್’ ಅನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ಡ್ರೋನ್ ದಾಳಿಗಳನ್ನು ನಡೆಸಿವೆ.

ಅಮೆರಿಕವು ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿರುವ ಎಲ್ಲಾ ಅಮೆರಿಕನ್ ಹಡಗುಗಳನ್ನು ಮುಳುಗಿಸುವುದಾಗಿ ಇರಾನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ದಕ್ಷಿಣ ಇರಾನ್‌ನ ಪ್ರಮುಖ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದನ್ನು ಇರಾನಿನ ಅಧಿಕಾರಿಗಳು ದೃಢಪಡಿಸಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಗೆ ಭಾರಿ ಹೊಡೆತ ಮತ್ತು ಆರ್ಥಿಕ ಆತಂಕ
ಇರಾನ್ ಮತ್ತು ಇಸ್ರೇಲ್ ನಡುವೆ ಇತ್ತೀಚೆಗೆ ಏರ್ಪಟ್ಟಿದ್ದ ಕದನ ವಿರಾಮವು ಈ ಹೊಸ ಸಂಘರ್ಷದಿಂದಾಗಿ ಸಂಪೂರ್ಣವಾಗಿ ಹದಗೆಟ್ಟಿದೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜತಾಂತ್ರಿಕ ಸಂಧಾನ ಪ್ರಯತ್ನಗಳು ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಯುದ್ಧದ ವಾತಾವರಣದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಭಾರಿ ಭದ್ರತಾ ಆತಂಕ ಎದುರಾಗಿದೆ. ಇದು ವಿಶ್ವಾದ್ಯಂತ ಕಚ್ಚಾ ತೈಲ ಬೆಲೆಗಳ ತೀವ್ರ ಏರಿಕೆಗೆ ಕಾರಣವಾಗಲಿದ್ದು, ಜಾಗತಿಕ ಆರ್ಥಿಕತೆಯನ್ನು ಮತ್ತಷ್ಟು ಅನಿಶ್ಚಿತತೆಗೆ ತಳ್ಳುವ ಭೀತಿಯನ್ನು ಮೂಡಿಸಿದೆ. ಜಾಗತಿಕ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣವೇ ವಿಶ್ವಸಂಸ್ಥೆಯ ಮಧ್ಯಸ್ಥಿಕೆಗೆ ಒತ್ತಾಯಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಎಲ್ಲರೂ ನನ್ನ ಬಿಟ್ಟು ಹೋದರು’; ಅರ್ಜುನ್ ರಾಂಪಾಲ್ ಬದುಕಿನ ಕರಾಳ ಮುಖ – Kannada News

ನಟನೆಯ ಜೊತೆಗೆ ಅದ್ಭುತ ಡಿಜೆ ಆಗಿಯೂ ಗುರುತಿಸಿಕೊಂಡು ಮ್ಯೂಸಿಕ್ ಲೋಕದಲ್ಲೂ ಸಖತ್ ಆಕ್ಟಿವ್ ಆಗಿರುವ ಅರ್ಜುನ್ ರಾಂಪಾಲ್ (Arjun Rampal), ಇತ್ತೀಚೆಗೆ ಟಾಕ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಏರಿಳಿತಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅರ್ಜುನ್ ರಾಂಪಾಲ್ ಅವರ ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಸಮಯದಲ್ಲೇ, ಅವರ ಮೊದಲ ಪತ್ನಿ ಮೆಹರ್ ಜೆಸಿಯಾ ಜೊತೆಗಿನ ದಾಂಪತ್ಯ ಜೀವನ ಕೂಡ ಮುರಿದುಬಿದ್ದಿತ್ತು. ಆ ದಿನಗಳಲ್ಲಿ ಅರ್ಜುನ್ ರಾಂಪಾಲ್ ಕುಗ್ಗಿ ಹೋದರು.

‘ಅದು ನನ್ನ ಜೀವನದ ಅತ್ಯಂತ ಕರಾಳ ಮತ್ತು ಒಂಟಿತನದ ಹಂತವಾಗಿತ್ತು. ಒಂದು ಕಡೆ ನನ್ನ ಸಂಸಾರ ಮುರಿದುಬೀಳುತ್ತಿತ್ತು. ಮತ್ತೊಂದೆಡೆ ತಾಯಿ ಕ್ಯಾನ್ಸರ್‌ನಿಂದಾಗಿ ಸಾವಿನ ದವಡೆಯಲ್ಲಿದ್ದರು. ನನಗಿಂತ ಮೂರು ವರ್ಷಗಳ ಮುನ್ನವೇ ತಂದೆಯನ್ನು ಕಳೆದುಕೊಂಡಿದ್ದೆ. ನನ್ನ ಆಪ್ತರು, ಸ್ನೇಹಿತರು ಹಾಗೂ ನಾನು ಕಷ್ಟಪಟ್ಟು ಗಳಿಸಿದ ಎಲ್ಲವೂ ನನ್ನಿಂದ ದೂರವಾಗುತ್ತಿತ್ತು’ ಎಂದು ಆ ದಿನಗಳ ನೋವನ್ನು ಹಂಚಿಕೊಂಡಿದ್ದಾರೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅರ್ಜುನ್ ರಾಂಪಾಲ್ ಕೈಹಿಡಿದಿದ್ದು ಅವರ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್. ಗೇಬ್ರಿಯೆಲಾ ಕೂಡ ಆ ಸಮಯದಲ್ಲಿ ಒಂದು ಕಷ್ಟದ ಹಂತದಲ್ಲಿದ್ದರಂತೆ. ಆ ಬಳಿಕ ಇಬ್ಬರೂ ಮದುವೆ ಆದರು.
‘ನಾವಿಬ್ಬರೂ ಒಂದೇ ರೀತಿಯ ಪರಿಸ್ಥಿತಿಯಲ್ಲಿ ಇದ್ದೆವು. ಆದರೆ ಆ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸಿದೆವು. ನನ್ನ ತಾಯಿ ತೀರಿಕೊಂಡಾಗ ನಾನು ತೀವ್ರ ನೊಂದಿದ್ದೆ. ಆದರೆ ಆ ಬಳಿಕ ಮಗ ಅರಿಕ್ ನನ್ನ ಜೀವನಕ್ಕೆ ಬಂದಿದ್ದೇ ಒಂದು ದೊಡ್ಡ ಆಶೀರ್ವಾದ. ಅಲ್ಲಿಂದ ನನ್ನ ಜೀವನ ಸಂಪೂರ್ಣ 180 ಡಿಗ್ರಿ ಬದಲಾಯಿತು’ ಎಂದು ಅರ್ಜುನ್ ಹೇಳಿದ್ದಾರೆ.

‘ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಾಗ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಷ್ಟ ಬಂದಾಗ ಬೇರೆಯವರನ್ನು ದೂಷಿಸುತ್ತಾ ಕೂರಬಾರದು. ಹಾಗೆ ಮಾಡಿದರೆ ನಾವು ಮತ್ತಷ್ಟು ದುರ್ಬಲರಾಗುತ್ತೇವೆ. ನನ್ನಲ್ಲಿ ಏನು ತಪ್ಪುಗಳಿದ್ದವು, ನಾನು ಎಲ್ಲಿ ಅಸಡ್ಡೆ ತೋರಿದ್ದೆ ಎಂಬುದನ್ನು ಒಪ್ಪಿಕೊಂಡು, ಅದನ್ನು ತಿದ್ದಿಕೊಳ್ಳಲು ನಾನು ನಿರ್ಧರಿಸಿದೆ’ ಎಂದು ಅರ್ಜುನ್ ರಾಂಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

ಅರ್ಜುನ್ ರಾಂಪಾಲ್ ಅವರಿಗೆ ಡಿಜೆ ಆಗಬೇಕು ಎಂಬ ಕನಸು ಮೊದಲಿನಿಂದಲೂ ಇತ್ತು. ಸಿನಿಮಾ ಆಫರ್ ಕಡಿಮೆ ಆದ ಬಳಿಕ ಅವರು ತಮ್ಮ ಪ್ಯಾಷನ್ ಅನುಸರಿಸಿದರು. ಅವರು ಡಿಜೆ ಆಗಿಯೂ ಕೆಲಸ ಮಾಡುತ್ತಿದ್ದಾರೆ. ‘ಧುರಂಧರ್ 2’ ಸಿನಿಮಾದಲ್ಲಿ ಮೇಜರ್ ಇಕ್ಬಾಲ್ ಆಗಿ ಅವರು ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version