PBKS vs SRH: ಯಾನ್ಸನ್ ಹಿಡಿದ ಕ್ಯಾಚ್​ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ

PBKS vs SRH: ಯಾನ್ಸನ್ ಹಿಡಿದ ಕ್ಯಾಚ್​ಗೆ ಬೆಚ್ಚಿ ಬೆರಗಾದ ಅರ್ಷದೀಪ್; ವಿಡಿಯೋ

ಭಾರತ ಟಿ20 ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಸಿಂಗ್​ಗೆ ಈ ಬಾರಿಯ ಐಪಿಎಲ್ ದುಃಸ್ವಪ್ನದಂತೆ ಕಾಡುತ್ತಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಅರ್ಷದೀಪ್​ಗೆ ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಇತ್ತ ಅರ್ಷದೀಪ್​ ರನ್​ಗೂ ಕಡಿವಾಣ ಹಾಕುತ್ತಿರಲಿಲ್ಲ. ಇದು ಪಂಜಾಬ್​ಗೆ ದೊಡ್ಡ ತಲೆನೋವಾಗಿತ್ತು. ಇಂದು ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ತುಂಬಾ ದುಬಾರಿಯಾದರು. ಆದರೆ ಕೊನೆಗೂ ತಮ್ಮ ವಿಕೆಟ್​ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ ಅರ್ಷದೀಪ್ ಬರೋಬ್ಬರಿ 50 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಅಂದರೆ ಅರ್ಷದೀಪ್ ವಿಕೆಟ್ ಪಡೆದರೂ ರನ್​ಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ಆವೃತ್ತಿಯಲ್ಲಿ ಅರ್ಷದೀಪ್ ಅವರ ಮೊದಲ ವಿಕೆಟ್ ಇಶಾನ್ ಕಿಶನ್ ಅವರ ರೂಪದಲ್ಲಿ ಬಂತು. ಅರ್ಷದೀಪ್ ಅವರ ಎಸೆತವನ್ನು ಕಿಶನ್ ಸಿಕ್ಸರ್​ಗಟ್ಟಲು ಯತ್ನಿಸಿದರು. ಆದರೆ ಬೌಂಡರಿ ಗೆರೆ ಬಳಿ ನಿಂತಿದ್ದ ಮಾರ್ಕೋ ಯಾನ್ಸನ್ 15 ಮೀಟರ್ ಓಡಿ ಬಂದು ಕೇವಲ ಒಂದೇ ಒಂದು ಕೈನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಂಡರು.

ಯಾನ್ಸನ್ ಹಿಡಿದ ಈ ಕ್ಯಾಚ್ ಅರ್ಷದೀಪ್ ಅವರಿಗೂ ಅಚ್ಚರಿಯನ್ನುಂಟು ಮಾಡಿತು. ಅರ್ಷದೀಪ್ ತಮ್ಮ ಎರಡನೇ ವಿಕೆಟ್ ರೂಪದಲ್ಲಿ ಸಲೀಲ್ ಅರೋರಾ ಅವರ ಭೇಟೆಯಾಡಿದರು. ಆದಾಗ್ಯೂ ಇದೇ ಪಂದ್ಯದಲ್ಲಿ ಅರ್ಷದೀಪ್ ಒಂದೇ ಓವರ್​ನಲ್ಲಿ ಬರೋಬ್ಬರಿ 24 ರನ್​ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಸಿಕ್ಸರ್​ಗಳಿಂದ 20ರನ್ ಕಲೆಹಾಕಿದರೆ, ಮಿಕ್ಕ 4 ರನ್​ಗಳು ವೈಡ್​ನಿಂದ ಬಂದವು.

Source link

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು

ಇಸ್ಲಮಾಬಾದ್, ಏಪ್ರಿಲ್ 11: ಇರಾನ್ ಜೊತೆಗಿನ ಮಾತುಕತೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ (JD Vance) ಅವರ ವಿಮಾನಕ್ಕೆ ಪಾಕಿಸ್ತಾನದ F-16 ಯುದ್ಧವಿಮಾನಗಳು ಬೆಂಗಾವಲು ಮಾಡಿವೆ. ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷದ ನಡುವೆ ಇರಾನ್‌ನೊಂದಿಗೆ ಮಾತುಕತೆ ನಡೆಸಲು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಪಾಕಿಸ್ತಾನದ F-16 ಯುದ್ಧವಿಮಾನಗಳು ಇಸ್ಲಾಮಾಬಾದ್‌ಗೆ ಬೆಂಗಾವಲು ಮಾಡಿದವು. ಇಸ್ಲಾಮಾಬಾದ್ ಬಳಿಯ ನೂರ್ ಖಾನ್ ವಾಯುನೆಲೆಯಲ್ಲಿ ಇಳಿಯುವ ಮೊದಲು ಪಾಕಿಸ್ತಾನ ವಾಯುಪ್ರದೇಶದಲ್ಲಿ 5 PAF F-16ಗಳು ಯುಎಸ್ ವಾಯುಪಡೆಯ ಬೋಯಿಂಗ್ C-32A ವಿಮಾನವನ್ನು ಬೆಂಗಾವಲು ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Video: ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮನೆಯಲ್ಲೇ ಮುದ್ದಾಗಿ ಬೆಳೆದ ಸಾಕು ಬೆಕ್ಕೊಂದು ತನ್ನ ಮಾಲೀಕಿಯ ಮೇಲೆ ಅನಿರೀಕ್ಷಿತವಾಗಿ ಭೀಕರ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಬೆಕ್ಕು ಮಹಿಳೆಯ ಕೈಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದು, ದಾಳಿಯ ತೀವ್ರತೆಗೆ ಕೊಠಡಿಯ ನೆಲದ ಮೇಲೆ ರಕ್ತ ಚೆಲ್ಲಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಬೆಕ್ಕಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ಮಹಿಳೆ, ಕೊನೆಯಲ್ಲಿ ಹೇಗೋ ಕೊಠಡಿಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ವಿಡಿಯೋ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದು, ಅತ್ಯಂತ ಶಾಂತ ಸ್ವಭಾವದ ಪ್ರಾಣಿಗಳೂ ಕೂಡ ಕೆಲವು ಸಂದರ್ಭಗಳಲ್ಲಿ ಹೀಗೆ ವಿಪರೀತ ಆಕ್ರಮಣಕಾರಿಯಾಗಿ ವರ್ತಿಸಬಹುದು ಎಂಬ ಸತ್ಯ ಈಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಮ್ಮನ ಮಡಿಲು ಸೇರಲು ಒದ್ದಾಡಿದ ಕಂದಮ್ಮ: ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ!

ಮಡಿಕೇರಿ, ಏ.11: ಜನ್ಮ ನೀಡಿದ ಹೆತ್ತವರೇ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಕರುಣಾಜನಕ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

ಇಂದು (ಏಪ್ರಿಲ್ 11) ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಶಿಶು ಕಂಡುಬಂದಿದೆ. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪಾಪಿ ಪೋಷಕರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆರಿಗೆಯಾದವರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ

ಕೊಲ್ಕತ್ತಾ, ಏಪ್ರಿಲ್ 11: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಇಂದು ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿಯ ಲೂಟಿ ಮತ್ತು ಸುಳ್ಳಿನ ರಾಜಕೀಯ, ಭಯದ ಆಳ್ವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ಹಾಗೇ, ಬಂಗಾಳಿಗಳು ಅಲ್ಪಸಂಖ್ಯಾತರಾಗಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಟಿಎಂಸಿಗೆ ಯಾವುದೇ ಉದ್ದೇಶ ಅಥವಾ ನೀತಿ ಇಲ್ಲದ ಕಾರಣದಿಂದಾಗಿ ಇತರ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಟಿಎಂಸಿ ಬಿಜೆಪಿಯನ್ನು ನಿರಂತರವಾಗಿ ನಿಂದಿಸುತ್ತಿದೆ, ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಆದರೆ, ಕಳೆದ 15 ವರ್ಷಗಳಲ್ಲಿ ಬಂಗಾಳದ ಅಭಿವೃದ್ಧಿಗಾಗಿ ಏನು ಮಾಡಿದೆ ಎಂದು ಹೇಳಲು ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಇದನ್ನೂ ಓದಿ: ನಮಸ್ತೆ, ಮುಗುಳ್ನಗು, ಉಭಯಕುಶಲೋಪರಿ; ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ

“ಇದು ಭಯವನ್ನು ಸೋಲಿಸುವ ಯುದ್ಧ, ಇದು ನಂಬಿಕೆಯ ಮೇಲೆ ಬಂಗಾಳವನ್ನು ಮುನ್ನಡೆಸುವ ಯುದ್ಧ. ಟಿಎಂಸಿಯ ಭಯದ ಆಳ್ವಿಕೆಯು ಇನ್ನೇನು ಸ್ವಲ್ಪ ದಿನಗಳಲ್ಲಿ ಕೊನೆಗೊಳ್ಳುತ್ತಿದೆ. ಟಿಎಂಸಿಯ ಸುಳ್ಳುಗಳು ಮತ್ತು ಲೂಟಿಯ ಅಂಗಡಿ ಮುಚ್ಚಲಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ‘ಮಹಾ’ ಪ್ರಣಾಳಿಕೆ: ಮಹಿಳೆಯರಿಗೆ 3,000 ರೂ. ಮಾಸಾಶನ, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

“ಪಶ್ಚಿಮ ಬಂಗಾಳದಲ್ಲಿ ಓಲೈಕೆ ರಾಜಕೀಯವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಿಜೆಪಿ ಯುಸಿಸಿಯನ್ನು ಜಾರಿಗೆ ತರಲು ಸಂಕಲ್ಪಿಸಿದೆ. ಬಂಗಾಳದಲ್ಲಿ ಬಂಗಾಳಿಗಳು ಅಲ್ಪಸಂಖ್ಯಾತರಾಗಲು ನಾವು ಅವಕಾಶ ನೀಡುವುದಿಲ್ಲ” ಎಂದು ಮೋದಿ ಹೇಳಿದ್ದಾರೆ. ರಾಜ್ಯ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ ಒಂದು ದಿನದ ನಂತರ ಮೋದಿಯ ಈ ಹೇಳಿಕೆಗಳು ಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ಬೆಂಗಳೂರು, ಏಪ್ರಿಲ್ 11: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಾವಣಗೆರೆ ಕಾಂಗ್ರೆಸ್ (congress) ಅಭ್ಯರ್ಥಿ ಸಮರ್ಥ್​​ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿ ಆರೋಪ ಸಂಬಂಧ ಹೈಕಮಾಂಡ್​ ಕೈಗೆ ವರದಿ ತಲುಪುತ್ತಿದ್ದಂತೆ ಖಡಕ್ ಆಗಿ ರಾಜೀನಾಮೆ ಕೊಡಿ ಅಂತಾ ಎಐಸಿಸಿ ಸೂಚನೆ ಕೊಟ್ಟಿದೆ. ಅದರಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ (Abdul Jabbar) ರಾಜೀನಾಮೆ ಕೊಟ್ಟಿದ್ದಾರೆ.

ನನ್ನಿಂದ ಅಂತಾ ತಪ್ಪು‌ ಏನಾಗಿದೆ: ಅಬ್ದುಲ್‌ ಜಬ್ಬಾರ್

ಬೆಂಗಳೂರಿನಲ್ಲಿ ಟಿವಿ9ಗೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್​​ ಪ್ರತಿಕ್ರಿಯಿಸಿದ್ದು, ಏಪ್ರಿಲ್‌ 3ರಂದೇ KPCC ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ. ನನ್ನಿಂದ ಅಂತಾ ತಪ್ಪು‌ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಈ ತಕ್ಷಣವೇ ರಾಜೀನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ಅತಿ ಬುದ್ಧಿವಂತಿಕೆ ಒಳ್ಳೆಯದಲ್ಲ. ಬೀಳಿಸಿ ಕಾಲು ಎಳೆಯುವ ಕೆಲಸ ಬೇಡ. ಹೈಕಮಾಂಡ್ ಹುದ್ದೆ ಕೊಟ್ಟಿತ್ತು, ಅರ್ಹತೆ ಇಲ್ಲದೆ ಏಕೆ ಕೊಡುತ್ತಾರೆಂದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಬಿಟ್ಟು ನಾನು ಬೇರೆ ಪಕ್ಷದ ಕಡೆ ಯೋಚನೆ ಮಾಡಲ್ಲ. ಪಕ್ಷದಲ್ಲಿ ನ್ಯಾಯ ನೀತಿ‌ ಇತ್ತು, ಅದನ್ನ ಮುಂದುವರಿಸಿ ಹೋಗಬೇಕು. ಸಮುದಾಯಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನ ವಿರೋಧ ಮಾಡುವುದಕ್ಕೆ ಆಗಲ್ಲ. ಇನ್ನು ಅವರು ಸಚಿವ ಸ್ಥಾನಕ್ಕಾಗಿಯೇ ಒಡಕು ಮೂಡಿಸುತ್ತಿದ್ದಾರೆ. ನನಗೆ ಸಚಿವ ಸ್ಥಾನ ಕೊಡಿ ಅಂತಾ ಕೇಳಿಲ್ಲ. ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಿ ಅಂತಾ ಪತ್ರದಲ್ಲಿ ಬರೆದಿದ್ದೇವೆ ಎಂದು ಹೇಳಿದ್ದಾರೆ.

ಅದನ್ನ ಪ್ರಶ್ನಿಸಿದ್ದೇ ತಪ್ಪಾ?

ಇನ್ನು ಬೈಎಲೆಕ್ಷನ್ ಸಂಬಂಧ ಯಾವೊಬ್ಬ ನಾಯಕರೂ ನನ್ನ ಜತೆ ಚರ್ಚಿಸಿಲ್ಲ. ನನ್ನ ಬಿಟ್ಟು ಚುನಾವಣೆಗೆ ಹೋಗಿದ್ದಾರೆ, ಆದರೂ ಗೆಲ್ಲಲಿ ಅಂತಾ ಹಾರೈಸುವೆ. ಕುರುಬ ಸಮುದಾಯ ಸೇರಿ ಬೇರೆಯವರಿಗೆ ಟಿಕೆಟ್ ಕೊಡಿ ಅಂದಿದ್ದೆ. ಒಂದೇ ಮನೆಯಲ್ಲಿ ನಾಲ್ವರಿಗೆ ಟಿಕೆಟ್ ಕೊಟ್ಟರೆ ಹೇಗೆ? ಅದನ್ನ ಪ್ರಶ್ನಿಸಿದ್ದೇ ತಪ್ಪಾ? ಸಚಿವ ಜಮೀರ್ ಬಂದ್ಮೇಲೆ ಶೇ.50ರಷ್ಟು ವಿರೋಧ ಕಡಿಮೆಯಾಗಿತ್ತು. ಯಾವ ನಾಯಕರೂ ಸ್ಪಷ್ಟೀಕರಣ ಕೇಳಿಲ್ಲ ಎಂದು ಅಬ್ದುಲ್‌ ಜಬ್ಬಾರ್ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

SECL Recruitment 2026: ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ; 1055 ಹುದ್ದೆಗಳಿಗೆ ಅರ್ಜಿ ಆಹ್ವಾನ; 47,330ರೂ. ಆರಂಭಿಕ ವೇತನ!

ಕೇಂದ್ರ ಕಲ್ಲಿದ್ದಲು ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ, ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL) ಖಾಲಿ ಇರುವ 1055 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಮೈನಿಂಗ್ ಸರ್ದಾರ್ (577), ಸಹಾಯಕ ಫೋರ್‌ಮನ್ (435) ಮತ್ತು ಡೆಪ್ಯೂಟಿ ಸರ್ವೇಯರ್ (43) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 15, ರಿಂದ ಮೇ 14 ರವರೆಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು. ಇದರೊಂದಿಗೆ ಮೈನಿಂಗ್ ಸರ್‌ಡಾರ್ಶಿಪ್, ಗ್ಯಾಸ್ ಟೆಸ್ಟಿಂಗ್ ಮತ್ತು ಪ್ರಥಮ ಚಿಕಿತ್ಸಾ ಪ್ರಮಾಣಪತ್ರಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದೊಳಗಿರಬೇಕು; ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಮತ್ತು ವೇತನದ ವಿವರ:

ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 1180 ರೂಪಾಯಿಗಳ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಎಸ್‌ಸಿ, ಎಸ್‌ಟಿ, ಮಹಿಳೆಯರು ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 47,330 ರೂಪಾಯಿಗಳ ವೇತನದ ಜೊತೆಗೆ ಸರ್ಕಾರದ ನಿಯಮಾವಳಿಯಂತೆ ಇತರ ಎಲ್ಲಾ ಭತ್ಯೆಗಳನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಭ್ಯರ್ಥಿಗಳ ಅಂತಿಮ ಆಯ್ಕೆಯು ಸಂಪೂರ್ಣವಾಗಿ ಆನ್‌ಲೈನ್ ಲಿಖಿತ ಪರೀಕ್ಷೆಯ ಮೇಲೆ ಆಧಾರಿತವಾಗಿರುತ್ತದೆ. ಪರೀಕ್ಷೆಯು ಒಟ್ಟು 100 ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಇದರಲ್ಲಿ ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿದ 80 ಪ್ರಶ್ನೆಗಳು ಮತ್ತು ಸಾಮಾನ್ಯ ಅರಿವು ಹಾಗೂ ಆಪ್ಟಿಟ್ಯೂಡ್‌ಗೆ ಸಂಬಂಧಿಸಿದ 20 ಪ್ರಶ್ನೆಗಳು ಇರುತ್ತವೆ. ಈ ಪರೀಕ್ಷೆಯ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ, ಇದು ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಡ್ಲೆ ಹಿಟ್ಟು ಹಚ್ಚುವುದರಿಂದ ನಿಜಕ್ಕೂ ಮುಖದ ಗ್ಲೋ ಹೆಚ್ಚುತ್ತದೆಯೇ? ಇಲ್ಲಿದೆ ನೋಡಿ ಅಸಲಿ ಸತ್ಯ

ಹಿಂದಿನ ಕಾಲದಿಂದಲೂ ಸೋಪ್‌ ಬದಲು ಸ್ನಾನಕ್ಕೆ, ತ್ವಚೆಯ ಆರೈಕೆಗಾಗಿ ಕಡ್ಲೆ ಹಿಟ್ಟನ್ನೇ (besan flour) ಬಳಸಲಾಗುತ್ತಿತ್ತು. ಇಂದಿನ ಈ ಮಾಡರ್ನ್‌ ಜಗತ್ತಿನಲ್ಲಿಯೂ ಸಹ ಅನೇಕರು ತ್ವಚೆಯ ಆರೈಕೆಗಾಗಿ ದುಬಾರಿ ಫೇಸ್‌ ಪ್ಯಾಕ್‌, ಕ್ರೀಮ್‌ಗಳ ಬದಲಿಗೆ ಕಡ್ಲೆ ಹಿಟ್ಟನ್ನೇ ಉಪಯೋಗಿಸುತ್ತಿದ್ದಾರೆ.  ಹೌದು ಚರ್ಮವನ್ನು ಸ್ವಚ್ಛವಾಗಿ, ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಅನೇಕ ಜನರು ಇದನ್ನು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಆದ್ರೆ ಇದು ನಿಜಕ್ಕೂ ಪರಿಣಾಮಕಾರಿಯೇ, ಕಡ್ಲೆ ಹಿಟ್ಟನ್ನು ಅತಿಯಾಗಿ ಮುಖಕ್ಕೆ ಹಚ್ಚುವುದರಿಂದ ಅಡ್ಡಪರಿಣಾಮಗಳನ್ನು ಬೀರಬಹುದೇ? ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟು ಪ್ರಯೋಜನಕಾರಿಯೇ?

ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ಅದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಮುಖದ ರಂಧ್ರಗಳನ್ನು ತೆರೆದು ತ್ವಚೆಯಲ್ಲಿ ಅಂಟಿಕೊಂಡಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಕಡಲೆ ಹಿಟ್ಟು ಸೌಮ್ಯವಾದ ಎಫ್ಫೋಲಿಯೇಟಿಂಗ್ ಗುಣಗಳನ್ನು ಹೊಂದಿದ್ದು, ಇದು ಇದು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ ಮತ್ತು ಮುಖವನ್ನು ರಿಫ್ರೆಶ್ ಮಾಡುತ್ತದೆ.

ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರ  ದೊಡ್ಡ ಪ್ರಯೋಜನವೆಂದರೆ ಅದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನಿಯಮಿತವಾಗಿ ಕಡ್ಲೆ ಹಿಟ್ಟನ್ನು ಹಚ್ಚುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದಲ್ಲದೆ, ಇದು ಚರ್ಮವನ್ನು ಸ್ವಚ್ಛವಾಗಿಡುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಲೆ ಹಿಟ್ಟನ್ನು ಹಚ್ಚುವುದರಿಂದ ಚರ್ಮಕ್ಕೆ ಸ್ವಲ್ಪ ಹೊಳಪು ಸಿಗುತ್ತದೆ ಮತ್ತು ಮೈಬಣ್ಣ ಸುಧಾರಿಸುತ್ತದೆ.

ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟನ್ನು ಬಳಸುವುದರಿಂದಾಗುವ ಅನಾನುಕೂಲಗಳೇನು?

ಕಡಲೆ ಹಿಟ್ಟು ಪ್ರಯೋಜನಗಳನ್ನು ಹೊಂದಿದ್ದರೂ, ಅದರ ತಪ್ಪಾದ ಬಳಕೆಯಿಂದ ತ್ವಚೆಗೆ ಅನಾನುಕೂಲಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೌದು ನಿಮ್ಮ ಚರ್ಮವು ತುಂಬಾ ಡ್ರೈ ಆಗಿದ್ದು, ನೀವೇನಾದರೂ ಮುಖಕ್ಕೆ ಕಡ್ಲೆ ಹಿಟ್ಟು ಹಚ್ಚಿದರೆ ಅದರಿಂದ ತ್ವಚೆ ಇನ್ನಷ್ಟು ಡ್ರೈ ಆಗಬಹುದು. ಅಲ್ಲದೆ ಇದನ್ನು ಹಚ್ಚುವುದರಿಂದ ಕೆಲವು ಜನರು ಅಲರ್ಜಿಯ ಪ್ರತಿಕ್ರಿಯೆಗಳು ಅಥವಾ ಕಿರಿಕಿರಿಯನ್ನು ಅನುಭವಿಸಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ, ಅದು ಚರ್ಮದಿಂದ ಅದರ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕಬಹುದು, ಮತ್ತು ಚರ್ಮವನ್ನು ಮಂದವಾಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ದಾಳಿಂಬೆ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯಲ್ಲೂ ಇವೆ ಸಾಕಷ್ಟು ಪ್ರಯೋಜನ

ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ಯಾವುದು?

ಬರೀ ಕಡ್ಲೆ ಹಿಟ್ಟನ್ನು ನೇರವಾಗಿ ಮುಖಕ್ಕೆ ಹಚ್ಚುವ ಬದಲು, ಅದನ್ನು ಬೇರೆ ಯಾವುದಾದರೂ ವಸ್ತುವಿನೊಂದಿಗೆ ಬೆರೆಸಿ ಮುಖಕ್ಕೆ ಅಪ್ಲೈ ಮಾಡುವುದು ಉತ್ತಮ. ಉದಾಹರಣೆಗೆ, ನೀವು ಮೊಸರು, ಹಾಲು ಅಥವಾ ರೋಸ್ ವಾಟರ್ ಅನ್ನು ಸೇರಿಸಬಹುದು. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ರೋಸ್ ವಾಟರ್ ಉತ್ತಮ. ತ್ವಚೆ ಡ್ರೈ ಆಗಿದ್ದರೆ ಮೊಸರು ಅಥವಾ ಹಾಲನ್ನು ಕಡ್ಲೆ ಹಿಟ್ಟಿಗೆ ಬೆರೆಸಿ ಹಚ್ಚುವುದು ಉತ್ತಮ.  ಕಡ್ಲೆ ಹಿಟ್ಟಿನ ಪ್ಯಾಕನ್ನು ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ, ನಂತರ ನಿಧಾನವಾಗಿ ತೊಳೆಯಿರಿ. ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸುವುದು ಸೂಕ್ತ.

ಕಡ್ಲೆ ಹಿಟ್ಟನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು?

ನಿಮ್ಮ ಚರ್ಮವು ಎಣ್ಣೆಯುಕ್ತ ಅಥವಾ ಸಾಮಾನ್ಯವಾಗಿದ್ದರೆ, ನೀವು ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟು ಬಳಸಬಹುದು. ಆದರೆ  ನಿಮ್ಮ ಚರ್ಮವು ತುಂಬಾ ಸೂಕ್ಷ್ಮ ಅಥವಾ ಒಣಗಿದ್ದರೆ, ಮೊದಲು ಪ್ಯಾಚ್ ಪ್ಯಾಚ್‌ ಟೆಸ್ಟ್‌ ಮಾಡಿ, ಚರ್ಮದ ಕಿರಿಕಿರಿ ಅಥವಾ ತುರಿಕೆ ಅನುಭವಿಸಿದರೆ ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚಲು ಹೋಗಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನಸು ಬೆಳಿಗ್ಗಿನ ಸಮಯದಲ್ಲಿಯೇ ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು ಗೊತ್ತಾ?

ರಾತ್ರಿ ನಿದ್ರೆಯಲ್ಲಿ (Sleep) ಕಾಣುವ ಕನಸುಗಳು ಕೇವಲ ಕಲ್ಪನೆ ಮಾತ್ರವಲ್ಲ, ಅವು ನಮ್ಮ ನಿದ್ರೆಯ ಗುಣಮಟ್ಟದ ಬಗ್ಗೆ ಪ್ರಮುಖ ಸೂಚನೆ ನೀಡುತ್ತವೆ ಎಂಬುದನ್ನು ಹೊಸ ಸಂಶೋಧನೆ ತಿಳಿಸಿದೆ. ಇಟಲಿಯ ಐಎಂಟಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕನಸುಗಳ ಸ್ಪಷ್ಟತೆ ಮತ್ತು ನಿದ್ರೆಯ ಗುಣಮಟ್ಟದ ನಡುವೆ ನೇರ ಸಂಬಂಧವಿದೆ. ಹೌದು, ಇದೆಲ್ಲಾ ಕೆಲವರಿಗೆ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯ. ಹಾಗಾದರೆ ಸಂಶೋಧನೆ ಹೇಳುವುದೇನು, ಇದೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಶೋಧನೆ ಹೇಳುವುದೇನು?

ಈ ಅಧ್ಯಯನದಲ್ಲಿ 44 ಆರೋಗ್ಯವಾಗಿರುವ ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಲಾಗಿದ್ದು, ಅವರ ನಿದ್ರೆಯ ಮಾದರಿಗಳನ್ನು ಗಮನಿಸಿ, ರಾತ್ರಿ ವಿವಿಧ ಸಮಯಗಳಲ್ಲಿ ಎಬ್ಬಿಸಿ, ಅವರು ಕಂಡ ಕನಸುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಈ ವೇಳೆ ಕನಸುಗಳ ಸ್ಪಷ್ಟತೆ ಮತ್ತು ನಿದ್ರೆಯ ಗುಣಮಟ್ಟದ ನಡುವೆ ಸಂಬಂಧವಿರುವುದು ಕಂಡುಬಂದಿದೆ. ಅಧ್ಯಯನದ ಪ್ರಕಾರ, ಗಾಢ ಮತ್ತು ಸ್ಪಷ್ಟ ಕನಸುಗಳನ್ನು ಕಾಣುವವರಿಗೆ ಉತ್ತಮ ನಿದ್ರೆ ದೊರೆಯುತ್ತದೆ. ಇಂತಹವರು ಬೆಳಗ್ಗೆ ಎದ್ದಾಗ ತಾಜಾತನವಿರುತ್ತದೆ.

ಇದನ್ನೂ ಓದಿ: ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ

ಮೆದುಳಿನ ಚಟುವಟಿಕೆ ಏನು ಹೇಳುತ್ತದೆ?

ಈ ಸಂಶೋಧನೆ ಪ್ರಕಾರ, ಕನಸುಗಳು ಗಾಢವಾಗಿದ್ದಷ್ಟು ನಿದ್ರೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅರ್ಧಸಿದ್ಧ ಕನಸುಗಳನ್ನು ಕಾಣುವವರಲ್ಲಿ ನಿದ್ರೆ ಅಷ್ಟಾಗಿ ಗಾಢವಾಗಿರುವುದಿಲ್ಲ. ಗಾಢ ಕನಸುಗಳ ವೇಳೆ ಮೆದುಳಿನಲ್ಲಿ ಕೆಲವು ರಾಸಾಯನಿಕಗಳು ಬಿಡುಗಡೆಯಾಗಿ ನಿದ್ರೆಯನ್ನು ಸುಧಾರಿಸುತ್ತವೆ. ಉತ್ತಮ ನಿದ್ರೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಬಹಳ ಮುಖ್ಯ. ಗಾಢ ನಿದ್ರೆಯಿಂದ ಒತ್ತಡ ಕಡಿಮೆಯಾಗುತ್ತದೆ, ತಲೆನೋವು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ಬೆಳಿಗ್ಗೆ ಕಾಣುವ ಕನಸುಗಳು ಹೆಚ್ಚು ಗಾಢವಾಗಿದ್ದು, ಆ ಸಮಯದಲ್ಲಿ ನಿದ್ರೆಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PBKS vs SRH: 18 ಎಸೆತಗಳಲ್ಲಿ ಅರ್ಧಶತಕ; ಅಭಿಷೇಕ್ ಅಬ್ಬರ ಹೇಗಿತ್ತು ನೋಡಿ

ಐಪಿಎಲ್ 2026 ರ 17 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಪರಿಣಾಮವಾಗಿ ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿಯೇ ಶತಕದ ಗಡಿ ದಾಟಿತು. ಅದರಲ್ಲೂ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 53 ರನ್ ಗಳಿಸಿದರು. ಇದರೊಂದಿಗೆ, ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದರು.

ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಮೂರನೇ ಅರ್ಧಶತಕ ಗಳಿಸಿದ್ದಾರೆ . ಇದಕ್ಕೂ ಮೊದಲು, ಅವರು ಐಪಿಎಲ್ 2024 ಮತ್ತು ಐಪಿಎಲ್ 2025 ರಲ್ಲಿ ಅರ್ಧಶತಕ ಗಳಿಸಿದ್ದರು. ಈಗ ಅವರು ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೂರನೇ ಅರ್ಧಶತಕ ಬಾರಿಸಿದ್ದಾರೆ. ಅಭಿಷೇಕ್ ಶರ್ಮಾ ಪವರ್‌ಪ್ಲೇನ 6 ಓವರ್‌ಗಳಲ್ಲಿ 22 ಎಸೆತಗಳನ್ನು ಆಡಿ 66 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಅಭಿ ಮತ್ತು ಹೆಡ್ ಆಟದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 6 ಓವರ್‌ಗಳಲ್ಲಿ 105 ರನ್ ಗಳಿಸಿತು. ಅಂತಿಮವಾಗಿ ಅಭಿಷೇಕ್ ಶರ್ಮಾ, ಶಶಾಂಕ್ ಸಿಂಗ್ ಬೌಲಿಂಗ್‌ನಲ್ಲಿ 28 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳ ಸಹಾಯದಿಂದ 74 ರನ್ ಗಳಿಸಿ ಔಟಾದರು.

ಇದರ ಜೊತೆಗೆ ಅಭಿಷೇಕ್ ಶರ್ಮಾ ಐಪಿಎಲ್ ಇನ್ನಿಂಗ್ಸ್‌ನಲ್ಲಿ 1 ರಿಂದ 6 ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ಪರ ಆಡುವಾಗ ಸನತ್ ಜಯಸೂರ್ಯ 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಜೋಸ್ ಬಟ್ಲರ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. 2022 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಜಾನಿ ಬೈರ್‌ಸ್ಟೋವ್ ಆರ್‌ಸಿಬಿ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಸನ್‌ರೈಸರ್ಸ್ ಹೈದರಾಬಾದ್ ಪರ ಆಅಭಿಷೇಕ್ ಶರ್ಮಾ ಪಂಜಾಬ್ ಕಿಂಗ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಅಂತಹ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version