Video: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ – Kannada News

ಗೋಲ್ಗಪ್ಪಾ (golgappa) ಎಲ್ಲರ ನೆಚ್ಚಿನ ಭಾರತದ ಸ್ಟ್ರೀಟ್ ಫುಡ್ ಗಳಲ್ಲಿ ಒಂದು. ಪುಟಾಣಿ ಮಕ್ಕಳಿಗೂ (little girl) ಗೋಲ್ಗಪ್ಪಾ ಅಂದ್ರೆ ಪಂಚ ಪ್ರಾಣ. ಇನ್ನು ಸಂಜೆ ವೇಳೆ ಫ್ರೆಂಡ್ಸ್ ಜತೆಗೆ ಹೊರಗಡೆ ಹೋದಾಗ ಯುವಕ ಯುವತಿಯರು ಗೋಲ್ಗಪ್ಪಾ ತಿನ್ನದೇ ಇರಲ್ಲ. ಇದೀಗ ಪುಟಾಣಿಯೊಬ್ಬಳು ಗೋಲ್ಗಪ್ಪಾ ತಿನ್ನುವ ಅಸಾಂಪ್ರದಾಯಿಕ ವಿಧಾನದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಪುಟಾಣಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಟೆನ್ಸಿಂಗ್ ಸೆಲ್ಡನ್ (tenz_seldon19) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿ ಗೋಲ್ಗಪ್ಪಾ ತಿನ್ನುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಿಹಿ ಹಾಗೂ ಖಾರ ಎರಡನ್ನೂ ಆಯ್ಕೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ನಾನು ಎರಡನ್ನೂ ಒಂದೇ ಸಮಯದಲ್ಲಿ ಸೇವಿಸುತ್ತಿದ್ದೇನೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಒಂದೇ ಬಾರಿಗೆ ಸಿಹಿ ಮತ್ತು ಮಸಾಲೆಯುಕ್ತ ಪದಾರ್ಥವನ್ನು ಒಟ್ಟಿಗೆ ಸವಿದಿದ್ದಾಳೆ. ಪುಟಾಣಿ ಪಾನಿ ಪುರಿ ಸ್ಟಾಲ್‌ನಲ್ಲಿ ಒಂದು ಕೈಯಲ್ಲಿ ಗೋಲ್ಗಪ್ಪಾದ ತಟ್ಟೆಯನ್ನು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಕ್ಯಾಂಡಿಯಂತೆ ಕಾಣುವ ಸಿಹಿ ತಿಂಡಿಯನ್ನು ಹಿಡಿದು ನಿಂತಿರುವುದು ಕಾಣಬಹುದು. ಗೋಲ್ಗಪ್ಪಾ ತಿನ್ನುವ ಮೊದಲು ಆಕೆ ಸಿಹಿ ತಿಂಡಿ ತಿನ್ನುತ್ತಾಳೆ. ಆ ಬಳಿಕ ಒಂದೇ ಬಾರಿಗೆ ಇಡೀ ಪಾನಿ ಪುರಿಯನ್ನು ಬಾಯಿಗೆ ಹಾಕುತ್ತಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಐಸ್ ಕ್ರೀಮ್ ಬೇಕೆಂದು ಹಠ ಹಿಡಿದ ಪುಟಾಣಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಪಾನಿ ಪುರಿಯನ್ನು ಈ ರೀತಿ ತಿನ್ನುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಹೊಸ ತಂತ್ರಗಳು ಅನ್‌ಲಾಕ್ ಆಗಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಪುಟಾಣಿ ಮುಂದೊಂದು ದಿನ ಕೋಟ್ಯಾಧಿಪತಿಯಾಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ ಹಣ ಪಡೆದ ಬಗ್ಗೆ SIT ಚಾರ್ಜ್​ಶೀಟ್​ನಲ್ಲಿ ಉಲ್ಲೇಖ – Kannada News

ಬೆಂಗಳೂರು, ಜೂನ್ 9: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ (Bitcoin) ಹಗರಣದ ತನಿಖೆ ತೀವ್ರಗೊಂಡಿದ್ದು, ಯುವ ಕಾಂಗ್ರೆಸ್ ಪ್ರಮುಖ ಮೊಹಮ್ಮದ್ ನಲಪಾಡ್ (Mohammed Nalapad) ಅವರಿಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದ್ದು, ಇದರಲ್ಲಿ ನಲಪಾಡ್ ಅವರಿಗೆ ಕೋಟ್ಯಂತರ ರೂಪಾಯಿ ಹಣ ಸಂದಾಯವಾಗಿರುವ ಬಗ್ಗೆ ಆಘಾತಕಾರಿ ವಿಚಾರ ಉಲ್ಲೇಖ ಮಾಡಲಾಗಿದೆ. ಹ್ಯಾಕರ್ ಶ್ರೀಕಿ ಜೊತೆಗಿನ ನಲಪಾಡ್ ಹಣಕಾಸು ವ್ಯವಹಾರಗಳು ಈಗ ಅಧಿಕೃತವಾಗಿ ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿವೆ.

ಮುಖ್ಯಾಂಶಗಳು

  • ನಲಪಾಡ್ ವಿರುದ್ಧ ಎಸ್‌ಐಟಿಯಿಂದ ಚಾರ್ಜ್‌ಶೀಟ್ ಸಲ್ಲಿಕೆ.
  • ಹವಾಲಾ ಮೂಲಕ ಬಿಟ್‌ಕಾಯಿನ್ ನಗದೀಕರಣದ ಆರೋಪ.
  • ಇಡಿಯಿಂದ 3ನೇ ನೋಟಿಸ್ ನೀಡಲು ಸಿದ್ಧತೆ.

ಶ್ರೀಕಿಯ ಬಿಟ್‌ಕಾಯಿನ್ ನಗದೀಕರಿಸಿದ್ದ ನಲಪಾಡ್ ಪಟಾಲಂ

ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರಕಾರ, ಮುಖ್ಯ ಆರೋಪಿ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಅಕ್ರಮವಾಗಿ ಗಳಿಸಿದ್ದ ಬಿಟ್‌ಕಾಯಿನ್‌ಗಳನ್ನು ಭಾರತೀಯ ರೂಪಾಯಿಗೆ ನಗದೀಕರಣ ಮಾಡಿಕೊಳ್ಳಲು ಮೊಹಮ್ಮದ್ ನಲಪಾಡ್ ಅವರನ್ನು ಸಂಪರ್ಕಿಸಿದ್ದ. ನಲಪಾಡ್ ತನ್ನ ಮುಂಬೈ ಮೂಲದ ಆಪ್ತ ಸ್ನೇಹಿತರು ಹಾಗೂ ರಾಬಿನ್ ಖಂಡೇವಾಲ ಮೂಲಕ ಈ ಬಿಟ್‌ಕಾಯಿನ್‌ಗಳನ್ನು ಹವಾಲಾ ರೂಪದಲ್ಲಿ ನಗದೀಕರಿಸಿಕೊಟ್ಟಿದ್ದ ಎನ್ನಲಾಗಿದೆ. ಈ ದಂಧೆಯಲ್ಲಿ ದೊಡ್ಡ ಮಟ್ಟದ ಕಮಿಷನ್ ಮೊಹಮ್ಮದ್ ನಲಪಾಡ್ ಅವರ ಕೈ ಸೇರಿತ್ತು ಎಂಬ ಬಲವಾದ ಸಾಕ್ಷ್ಯಗಳನ್ನು ಎಸ್‌ಐಟಿ ಪೊಲೀಸರು ಪತ್ತೆಹಚ್ಚಿ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದಾರೆ. ಈ ಹಿಂದೆ ನಲಪಾಡ್ ಅವರ ಖಾತೆಗೆ ನಡೆದಿದ್ದ 10 ಲಕ್ಷ ರೂಪಾಯಿಗಳ ಶಂಕಾಸ್ಪದ ವ್ಯವಹಾರವೇ ಈ ಇಡೀ ಜಾಲವನ್ನು ಬಯಲಿಗೆಳೆಯಲು ಪ್ರಮುಖ ಕಾರಣವಾಗಿತ್ತು.

ಮನೆ ಮೇಲಿನ ದಾಳಿ ಮತ್ತು ಇಡಿ ತನಿಖೆಯ ಚುರುಕು

ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸಗಳ ಮೇಲೆ ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದರು. ಈ ಹಗರಣದಲ್ಲಿ ಮನಿ ಲಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ನಡೆದಿರುವ ಹಿನ್ನೆಲೆಯಲ್ಲಿ ಇಡಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲ ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ಗೆ ಇಡಿ ಇಕ್ಕಳ, ವಿಚಾರಣೆಗೆ ಹಾಜರಾಗಲು ಕಟ್ಟುನಿಟ್ಟಿನ ಆದೇಶ

ದಾಳಿಯ ಬಳಿಕ ಇಡಿ ಅಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಎರಡು ಬಾರಿ ಅಧಿಕೃತ ನೋಟಿಸ್ ಜಾರಿ ಮಾಡಿದ್ದರು. ಆದರೆ ನಲಪಾಡ್ ಸಮರ್ಪಕವಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಇದೀಗ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರತಿಗಳನ್ನು ಆಧರಿಸಿ ನಲಪಾಡ್ ಅವರಿಗೆ 3ನೇ ಬಾರಿಗೆ ಇಡಿ ನೋಟಿಸ್ ನೀಡಲು ಅಧಿಕಾರಿಗಳು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನಲಪಾಡ್​ಗೆ ಬಂಧನದ ಭೀತಿಯೂ ಎದುರಾಗಬಹುದು.

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ujjwala Yojana: ಉಜ್ವಲ ಫಲಾನುಭವಿಗಳಿಗೆ ಶಾಕ್, 9 ಅಲ್ಲ, ಇನ್ಮುಂದೆ ಸಿಗಲಿದೆ ನಾಲ್ಕೇ ನಾಲ್ಕು ಸಿಲಿಂಡರ್​ಗಳು – Kannada News

ನವದೆಹಲಿ, ಜೂನ್ 09: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಸರ್ಕಾರವು ಈಗ ವಾರ್ಷಿಕವಾಗಿ ಸಬ್ಸಿಡಿ ಹೊಂದಿರುವ LPG ಸಿಲಿಂಡರ್ ಮರುಪೂರಣಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಿದೆ. ಇದರರ್ಥ ಉಜ್ವಲ ಯೋಜನೆಯಡಿಯಲ್ಲಿ ಬರುವ ಕುಟುಂಬಗಳು ವರ್ಷಕ್ಕೆ ನಾಲ್ಕು ಸಿಲಿಂಡರ್‌ಗಳ ಮೇಲಿನ ಹೆಚ್ಚುವರಿ ಸಬ್ಸಿಡಿಯನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯಡಿಯಲ್ಲಿ, ದೇಶದಲ್ಲಿ 10.60 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಲಾಗಿದೆ ಮತ್ತು ಇಲ್ಲಿಯವರೆಗೆ ಅವರಿಗೆ ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳನ್ನು ನೀಡಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಅಂತಾರಾಷ್ಟ್ರೀಯ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಎದುರಾಗಿರುವ ಸವಾಲುಗಳ ನಡುವೆಯೂ, ಭಾರತ ಸರ್ಕಾರವು ದೇಶದ ನಾಗರಿಕರಿಗೆ ಇಂಧನ ಭದ್ರತೆಯನ್ನು ಖಚಿತಪಡಿಸುವಲ್ಲಿ ಅದ್ಭುತ ಯಶಸ್ಸು ಕಂಡಿದೆ. ಜಾಗತಿಕವಾಗಿ ಎಲ್‌ಪಿಜಿ ಬೆಲೆಗಳು ಶೇ. 46 ರಷ್ಟು ಭಾರಿ ಏರಿಕೆ ಕಂಡಿದ್ದರೂ, ಭಾರತೀಯ ತೈಲ ಸಂಸ್ಕರಣಾಗಾರಗಳು ದೇಶೀಯ ಉತ್ಪಾದನೆಯನ್ನು ಶೇಕಡಾ 60 ರಷ್ಟು ಹೆಚ್ಚಿಸುವ ಮೂಲಕ ಇಂಧನ ಸ್ವಾವಲಂಬನೆಯ ಹೊಸ ಮೈಲಿಗಲ್ಲು ಸ್ಥಾಪಿಸಿವೆ.

ಸರಾಸರಿ ಮನೆಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. 2016 ರಲ್ಲಿ ಪ್ರಾರಂಭವಾದ ಈ ಯೋಜನೆಯಡಿಯಲ್ಲಿ, ಫಲಾನುಭವಿಗಳು ಆರಂಭದಲ್ಲಿ ವರ್ಷಕ್ಕೆ ತಲಾ 14.2 ಕಿಲೋಗ್ರಾಂಗಳಷ್ಟು 12 ಸಬ್ಸಿಡಿ ಸಿಲಿಂಡರ್‌ಗಳನ್ನು ಪಡೆದರು. ಆದಾಗ್ಯೂ, ಕಳೆದ ವರ್ಷ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತಕ್ಕೆ ಇಳಿಸಲಾಯಿತು, ಮತ್ತು ಈಗ ಅದನ್ನು ನಾಲ್ಕಕ್ಕೆ ಇಳಿಸಲಾಗಿದೆ.

ಮತ್ತಷ್ಟು ಓದಿ: ಪಿಎಂ ಉಜ್ವಲ ಯೋಜನೆ: ಆರೋಗ್ಯ, ಸಮಾನತೆ ಮತ್ತು ಶುದ್ಧ ವಾತಾವರಣ ಉಳಿಸುವ ಸ್ಕೀಮ್

ಇದೇ ವೇಳೆ, ದೇಶದ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ತಂತ್ರಜ್ಞಾನ ಆಧಾರಿತ ಹಾಗೂ ಪಾರದರ್ಶಕ ಸೌಲಭ್ಯ ಒದಗಿಸಲು ಪೆಟ್ರೋಲಿಯಂ ಸಚಿವಾಲಯವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಸಬ್ಸಿಡಿಗಳ ಮರುಹಂಚಿಕೆಯ ಅತ್ಯಂತ ವ್ಯವಸ್ಥಿತ ನಿರ್ಧಾರವನ್ನು ಪ್ರಕಟಿಸಿದೆ.

ದೇಶೀಯ ಉತ್ಪಾದನೆ 60% ಹೆಚ್ಚಳ; ಓಮನ್, ಅಮೆರಿಕದಿಂದ ಪೂರೈಕೆ ಸುಗಮ
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಆರಂಭಿಕ ದಿನಗಳಲ್ಲಿ ಎಲ್‌ಪಿಜಿ ಆಮದು ಪ್ರಕ್ರಿಯೆಗೆ ಸಣ್ಣಮಟ್ಟದ ಹಿನ್ನಡೆಯಾಗಿತ್ತು. ಆದರೆ, ಭಾರತ ಸರ್ಕಾರವು ಅತ್ಯಂತ ಚಾಣಾಕ್ಷ ರಾಜತಾಂತ್ರಿಕತೆ ಹಾಗೂ ಪರ್ಯಾಯ ಮಾರ್ಗಗಳ ಮೂಲಕ ದೇಶಕ್ಕೆ ಇಂಧನದ ಕೊರತೆಯಾಗದಂತೆ ನೋಡಿಕೊಂಡಿದೆ.

ಹೊಸ ದೇಶಗಳೊಂದಿಗೆ ಒಪ್ಪಂದ: ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಶೇ. 70 ರಷ್ಟನ್ನು ಹಾರ್ಮುಜ್ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಆ ಮಾರ್ಗದಲ್ಲಿ ಸದ್ಯ ನಿರ್ಬಂಧ ಇರುವುದರಿಂದ, ಸರ್ಕಾರವು ತ್ವರಿತವಾಗಿ ಓಮನ್, ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಇಂಧನವನ್ನು ಯಶಸ್ವಿಯಾಗಿ ಆಮದು ಮಾಡಿಕೊಳ್ಳಲು ಆರಂಭಿಸಿದೆ.

ದಾಖಲೆಯ ಬುಕಿಂಗ್ ಹಾಗೂ ಸಪ್ಲೈ: ಕಳೆದ ನಾಲ್ಕು ದಿನಗಳಲ್ಲಿ ದೇಶಾದ್ಯಂತ ದಿನಕ್ಕೆ ಸರಾಸರಿ 4.2 ಮಿಲಿಯನ್ (42 ಲಕ್ಷ) ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್ ಆಗಿದ್ದರೆ, ಭಾರತೀಯ ತೈಲ ಕಂಪನಿಗಳು ಅದಕ್ಕಿಂತಲೂ ಹೆಚ್ಚು ಅಂದರೆ 4.4 ಮಿಲಿಯನ್ (44 ಲಕ್ಷ) ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತಿವೆ. ದೇಶೀಯ ಸಂಸ್ಕರಣಾಗಾರಗಳು ಶೇ. 60 ರಷ್ಟು ಹೆಚ್ಚುವರಿ ಉತ್ಪಾದನೆ ಮಾಡುತ್ತಿರುವುದರಿಂದ ಪೂರೈಕೆ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನುಜಾ ಮಾತನಾಡಿ, ನಮ್ಮ ಅಂಕಿ-ಅಂಶಗಳ ಪ್ರಕಾರ, ಉಜ್ವಲ ಯೋಜನೆಯಡಿ ಸಂಪರ್ಕ ಪಡೆದಿರುವ ದೇಶದ 10.60 ಕೋಟಿ ಗ್ರಾಹಕರು ವಾರ್ಷಿಕವಾಗಿ ಸರಾಸರಿ 4 ರಿಂದ 5 ಸಿಲಿಂಡರ್‌ಗಳನ್ನು ಮಾತ್ರ ಬಳಸುತ್ತಾರೆ. ಹೀಗಾಗಿ, ನೈಜ ಬಳಕೆಯ ಮಟ್ಟವನ್ನು ಪರಿಗಣಿಸಿ ವರ್ಷಕ್ಕೆ 4 ಸಿಲಿಂಡರ್‌ಗಳಿಗೆ 300 ರೂ. ನೇರ ಸಬ್ಸಿಡಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಇದರಿಂದ ಸಾಮಾನ್ಯ ಬಡ ಕುಟುಂಬಗಳ ದೈನಂದಿನ ಬಜೆಟ್‌ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಗ್ರಾಹಕಸ್ನೇಹಿ ಸಬ್ಸಿಡಿ ಆಧಾರ ಮತ್ತು ಬೆಲೆ ವ್ಯವಸ್ಥೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಒಂದು ಸಿಲಿಂಡರ್‌ನ ನೈಜ ಪೂರೈಕೆ ವೆಚ್ಚವು ತೈಲ ಕಂಪನಿಗಳಿಗೆ 1,600ರೂ.ದಾಟಿದೆ. ಆದಾಗ್ಯೂ, ಸರ್ಕಾರವು ಸಾಮಾನ್ಯ ಗ್ರಾಹಕರಿಗೆ ಕೇವಲ 942 ರೂ. ಚಿಲ್ಲರೆ ಬೆಲೆಯಲ್ಲಿ ಸಿಲಿಂಡರ್ ಒದಗಿಸುತ್ತಿದೆ. ಅಂದರೆ, ಉಜ್ವಲ ಮತ್ತು ಉಜ್ವಲವಲ್ಲದ ಸಾಮಾನ್ಯ ಗ್ರಾಹಕರಿಬ್ಬರಿಗೂ ಸರ್ಕಾರವು ಪ್ರತಿ ಸಿಲಿಂಡರ್ ಮೇಲೆ ಈಗಾಗಲೇ ಸರಿಸುಮಾರು 700 ರೂ. ಗಳ ಭಾರಿ ಆಡಳಿತಾತ್ಮಕ ರಿಯಾಯಿತಿಯನ್ನು ನೀಡುತ್ತಿದೆ.

ಇದರ ಜೊತೆಗೆ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಗುವ ವಿಶೇಷ 300 ರೂ. ಸಬ್ಸಿಡಿಯಿಂದಾಗಿ, ಅವರು ಮೊದಲ 4 ಸಿಲಿಂಡರ್‌ಗಳನ್ನು ಕೇವಲ 642 ರೂ. ಅತ್ಯಂತ ಕಡಿಮೆ ದರದಲ್ಲಿ ಪಡೆಯಲಿದ್ದಾರೆ. ಉಳಿದ ಸಿಲಿಂಡರ್‌ಗಳು ಅವರಿಗೆ 942 ರೂ. ಸಾಮಾನ್ಯ ಸಬ್ಸಿಡಿ ದರದಲ್ಲೇ ಲಭ್ಯವಿರುತ್ತವೆ.

52,000 ಕೋಟಿ ರೂ. ಆರ್ಥಿಕ ನೆರವು; ಸುಸ್ಥಿರ ಇಂಧನ ಅಭಿವೃದ್ಧಿ

ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸಾಮಾನ್ಯ ಬಜೆಟ್‌ನಿಂದ ಬರೋಬ್ಬರಿ 52,000 ರೂ. ಕೋಟಿಗಳನ್ನು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಆರ್ಥಿಕ ಸಹಾಯವಾಗಿ ನೀಡಿದೆ. ಪೆಟ್ರೋಲ್ ಮೇಲೆ ಲೀಟರ್‌ಗೆ 6 ರೂ. ಮತ್ತು ಡೀಸೆಲ್ ಮೇಲೆ 30 ರೂ. ರವರೆಗೆ ಕಂಪನಿಗಳು ನಷ್ಟ ಅನುಭವಿಸುತ್ತಿದ್ದರೂ, ದೇಶದ ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಸರ್ಕಾರವು ಬೆಲೆಗಳನ್ನು ಸ್ಥಿರವಾಗಿಟ್ಟಿದೆ.

ಗ್ರಾಮೀಣ ಭಾಗದ ಮಹಿಳೆಯರು ಮರ ಮತ್ತು ಸಗಣಿಯಂತಹ ಅಪಾಯಕಾರಿ ಹೊಗೆಯಿಂದ ಮುಕ್ತರಾಗಿ, ಎಲ್‌ಪಿಜಿಯಂತಹ ಶುದ್ಧ ಇಂಧನವನ್ನು ಬಳಸುವುದನ್ನು ಮುಂದುವರಿಸಲು ಈ ಸುಧಾರಿತ ನೀತಿಯು ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಬಲಪಡಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅನ್​ಫಿಟ್​… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?

Source link

ಕನಸಿನ ಮನೆ ಕಾಗದಕ್ಕಷ್ಟೇ ಸೀಮಿತವಾಯ್ತು, 34ನೇ ಫ್ಲೋರ್​ನಲ್ಲಿ ಫ್ಲಾಟ್ ಖರೀದಿಸಿದ ವ್ಯಕ್ತಿಗೆ ಎದುರಾಯ್ತು ಸಂಕಷ್ಟ, ಕಟ್ಟದಲ್ಲಿದ್ದಿದ್ದೇ 32 ಮಹಡಿಗಳು – Kannada News

ಕಟ್ಟಡ-ಸಾಂದರ್ಭಿಕ ಚಿತ್ರImage Credit source: South China Morning Post

ಶಾಂಕ್ಸಿ, ಜೂನ್ 09: ಚೀನಾ(China)ದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದ ಶೆನ್ ಎಂಬ ವ್ಯಕ್ತಿಯ ಕಥೆ ಇದು. ಒಂದು ದಶಕದ ಹಿಂದೆ, ಮಧ್ಯಮ ವರ್ಗದ ಪ್ರತಿಯೊಬ್ಬ ಸಾಮಾನ್ಯನಂತೆ ತನಗೂ ಒಂದು ಸ್ವಂತ ಮನೆ ಇರಬೇಕು ಎಂಬ ಕನಸು ಕಂಡಿದ್ದ ಶೆನ್, ಇಂದು ಆ ಮನೆಯೂ ಇಲ್ಲದೆ, ಕಷ್ಟಪಟ್ಟು ದುಡಿದ ಹಣವೂ ಸಿಗದೆ ಅಸಹಾಯಕರಾಗಿ ನಿಂತಿದ್ದಾರೆ. ರಿಯಲ್ ಎಸ್ಟೇಟ್‌ನ ಹಪಾಹಪಿತನ ಮತ್ತು ಕಾನೂನುಬಾಹಿರ ಹಗರಣಗಳು ಹೇಗೆ ಒಬ್ಬ ಸಾಮಾನ್ಯ ಮನುಷ್ಯನ ಬದುಕನ್ನು ಬೀದಿಗೆ ತರಬಲ್ಲವು ಎಂಬುದಕ್ಕೆ ಇವರ ಜೀವನವೇ ಒಂದು ಕಣ್ಣೀರಿನ ಉದಾಹರಣೆ.

ಕೇವಲ ಮೂರನೇ ಒಂದು ಭಾಗದ ಬೆಲೆಗೆ ಸಿಕ್ಕ ಆಮಿಷ
2013 ರಲ್ಲಿ, ಷಿಯಾನ್ ಬಳಿಯ ಹಳ್ಳಿಯೊಂದರಲ್ಲಿ ಅಪಾರ್ಟ್ಮೆಂಟ್ ಯೋಜನೆಯೊಂದು ಆರಂಭವಾಗಿತ್ತು. ಅಲ್ಲಿನ ಮಾರುಕಟ್ಟೆ ದರಕ್ಕಿಂತ ಕೇವಲ ಮೂರನೇ ಒಂದು ಭಾಗದಷ್ಟು ಕಡಿಮೆ ಬೆಲೆಗೆ (ಪ್ರತಿ ಚದರ ಮೀಟರ್‌ಗೆ ಸುಮಾರು 37,431 ರೂ. ರಂತೆ) ಫ್ಲಾಟ್ ಸಿಗುತ್ತಿದೆ ಎಂದು ತಿಳಿದ ಶೆನ್ ಸಂತೋಷಪಟ್ಟಿದ್ದರು. 90 ಚದರ ಮೀಟರ್ ವಿಸ್ತೀರ್ಣದ ಸುಂದರ ಅಪಾರ್ಟ್ಮೆಂಟ್‌ನ ಒಟ್ಟು ಮೌಲ್ಯ ಸುಮಾರು 33.69 ಲಕ್ಷ ರೂ.ಆಗಿತ್ತು.

ಆದರೆ, ಈ ಕಡಿಮೆ ಬೆಲೆಯ ಹಿಂದೆ ‘ಸೀಮಿತ ಆಸ್ತಿ ಹಕ್ಕುಗಳು’ (Limited Property Rights) ಎಂಬ ರಿಯಲ್ ಎಸ್ಟೇಟ್‌ನ ಕರಾಳ ಜಾಲ ಅಡಗಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಇದು ನಗರದ ಭೂಮಿಯ ಬದಲಿಗೆ, ಗ್ರಾಮೀಣ ಸಾಮೂಹಿಕ ಭೂಮಿಯಲ್ಲಿ ಯಾವುದೇ ಸರ್ಕಾರಿ ಅನುಮೋದನೆ ಇಲ್ಲದೆ ಅಕ್ರಮವಾಗಿ ನಿರ್ಮಿಸುವ ವಸತಿಯಾಗಿತ್ತು. ಇಂತಹ ಮನೆಗಳಿಗೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ.

ಮನೆಯ ಆಸೆಗೆ ಬಿದ್ದ ಶೆನ್, ಭವಿಷ್ಯದಲ್ಲಿ ಎಲ್ಲಾ ದಾಖಲೆಗಳನ್ನು ನೀಡುವುದಾಗಿ ಡೆವಲಪರ್ ಕೊಟ್ಟ ಸುಳ್ಳು ಭರವಸೆಯನ್ನು ನಂಬಿ, ತನ್ನ ಜೀವಮಾನದ ಉಳಿತಾಯದಿಂದ 1,17,700 ಯುವಾನ್ (ಸುಮಾರು 16 ಲಕ್ಷ ರೂ.) ಹಣವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿದರು.

ಮತ್ತಷ್ಟು ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

34ನೇ ಮಹಡಿಯ ಫ್ಲಾಟ್, ಆದರೆ ಕಟ್ಟಡಕ್ಕೆ ಕೇವಲ 32 ಅಂತಸ್ತು
2015 ರಲ್ಲಿ ಕೈಗೆ ಸಿಗಬೇಕಾಗಿದ್ದ ಮನೆ ನಿರ್ಮಾಣ ವಿಳಂಬದ ಕಾರಣದಿಂದಾಗಿ ಮುಂದೂಡಲ್ಪಡುತ್ತಾ ಸಾಗಿತು. ಕೊನೆಗೆ 2017 ರಲ್ಲಿ ಶೆನ್ ಅವರಿಗೆ ಡೆವಲಪರ್ ಕಡೆಯಿಂದ ಬಂದ ಒಂದು ಕರೆ ಅವರ ಕಾಲ ಕೆಳಗಿನ ಭೂಮಿಯನ್ನೇ ಕುಸಿಯುವಂತೆ ಮಾಡಿತು.

ಡೆವಲಪರ್ ಅತ್ಯಂತ ನಿರ್ಲಕ್ಷ್ಯದಿಂದ, ನೀವು ಖರೀದಿಸಿರುವ 34ನೇ ಮಹಡಿಯ ಫ್ಲಾಟ್ ಅಸ್ತಿತ್ವದಲ್ಲೇ ಇಲ್ಲ. ಏಕೆಂದರೆ ನಾವು ನಿರ್ಮಿಸಿರುವ ಇಡೀ ಕಟ್ಟಡವೇ ಕೇವಲ 32 ಅಂತಸ್ತುಗಳದ್ದಾಗಿದೆ ಎಂದು ತಿಳಿಸಿದ್ದರು.

ಕಂಪನಿಯು ಅವರಿಗೆ ಪರ್ಯಾಯವಾಗಿ 32ನೇ ಮಹಡಿಯಲ್ಲಿ ಮತ್ತೊಂದು ಫ್ಲಾಟ್ ನೀಡುವುದಾಗಿ ಹೇಳಿತಾದರೂ, ಆ ಸಮಯದಲ್ಲಿ ಉಳಿದ ಬಾಕಿ ಹಣವನ್ನು ತಕ್ಷಣವೇ ಹೊಂದಿಸಲು ಶೆನ್ ಅವರಿಂದ ಸಾಧ್ಯವಾಗಲಿಲ್ಲ. ಕೇವಲ ಎರಡು ತಿಂಗಳ ಅವಧಿಯಲ್ಲಿ ಡೆವಲಪರ್ ಆ ಫ್ಲಾಟ್‌ಅನ್ನು ಬೇರೊಬ್ಬ ಖರೀದಿದಾರನಿಗೆ ಮಾರಿ ಶೆನ್ ಅವರನ್ನು ಸಂಪೂರ್ಣವಾಗಿ ಬೀದಿಗೆ ತಳ್ಳಿದ್ದರು.

ಹಣವೂ ಇಲ್ಲ, ಮನೆಯೂ ಇಲ್ಲ
ಮನೆ ಕಳೆದುಕೊಂಡ ಶೆನ್ ತನ್ನ ಪೂರ್ಣ ಹಣವನ್ನು ಮರಳಿ ಪಡೆಯಲು ಡೆವಲಪರ್ ಕಚೇರಿಗೆ ಅಲೆಯಲಾರಂಭಿಸಿದರು. ಆದರೆ ಕಂಪನಿಯು ತಾನು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇನೆ ಎಂದು ನೆಪ ಒಡ್ಡಿತು. ಸತತ ಒತ್ತಾಯದ ನಂತರ 2020 ರಲ್ಲಿ 20,000 ಯುವಾನ್ ಮತ್ತು 2022 ರಲ್ಲಿ 50,000 ಯುವಾನ್‌ಗಳ ಭಾಗಶಃ ಮರುಪಾವತಿ ಸಿಕ್ಕಿತಾದರೂ, ಆ ನಂತರ ಡೆವಲಪರ್ ಊರು ಬಿಟ್ಟು ದೂರ ಹೋಗಿದ್ದ, ಕರೆಗೂ ಸಿಗುತ್ತಿರಲಿಲ್ಲ.

ನೊಂದ ಶೆನ್ ಕೊನೆಗೆ ನ್ಯಾಯದ ಮೊರೆ ಹೋದರು. ಮಧ್ಯಸ್ಥಿಕೆ ಅಧಿಕಾರಿಗಳು ಮತ್ತು ಸ್ಥಳೀಯ ನ್ಯಾಯಾಲಯವು ಶೆನ್ ಅವರ ಪರವಾಗಿ ತೀರ್ಪು ನೀಡಿ, ಉಳಿದ 47,700 ಯುವಾನ್ ಡೌನ್ ಪೇಮೆಂಟ್, ಅದಕ್ಕೆ ತಕ್ಕ ಬಡ್ಡಿ (27,000 ಯುವಾನ್) ಹಾಗೂ ವಿಳಂಬಕ್ಕೆ ಹೆಚ್ಚುವರಿ 47,000 ಯುವಾನ್ ಪರಿಹಾರವನ್ನು ನೀಡುವಂತೆ ಸಾಲಗಾರ ಡೆವಲಪರ್‌ಗೆ ಆದೇಶಿಸಿತು.

ಇಂದಿಗೂ ಮುಂದುವರಿದ ಕಣ್ಣೀರಿನ ಪಯಣ
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶವಿದ್ದರೂ, ಈ ವರ್ಷದ ಮೇ ತಿಂಗಳವರೆಗೂ ಶೆನ್ ಅವರಿಗೆ ಬಿಡಿಗಾಸೂ ಸಿಕ್ಕಿಲ್ಲ. ಏಕೆಂದರೆ, ಆ ವಂಚಕ ಡೆವಲಪರ್ ತನ್ನ ಹೆಸರಿನಲ್ಲಿ ಯಾವುದೇ ನೋಂದಾಯಿತ ಆಸ್ತಿ ಅಥವಾ ಬ್ಯಾಂಕ್ ಉಳಿತಾಯವನ್ನು ಹೊಂದಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಕೋರ್ಟ್ ಆದೇಶವಿದ್ದರೂ ಅದನ್ನು ಜಾರಿಗೊಳಿಸುವುದು ಅಸಾಧ್ಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿಶೀಟರ್ ಎಣ್ಣೆ ಪಾರ್ಟಿ ಪ್ರಕರಣ: ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ಅಮಾನತು – Kannada News

ರೌಡಿಶೀಟರ್ ಎಣ್ಣೆ ಪಾರ್ಟಿ (ಎಡ ಚಿತ್ರ) ಹಾಗೂ ಮದ್ದೂರು ವಲಯ ಅರಣ್ಯಾಧಿಕಾರಿ ಡಿ. ಪುನೀತ್ ಕುಮಾರ್ Image Credit source: tv9

ಚಾಮರಾಜನಗರ, ಜೂನ್ 9: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶದಲ್ಲಿ ರೌಡಿಶೀಟರ್ ಮತ್ತು ಆತನ ಪಟಾಲಂ ನಡೆಸಿದ್ದ ಬಿಂದಾಸ್ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಬಂಡೀಪುರದ ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ (RFO) ಡಿ. ಪುನೀತ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಕರ್ತವ್ಯ ಲೋಪಕ್ಕೆ ಆರ್‌ಎಫ್‌ಒ ಪುನೀತ್ ಅಮಾನತು.
  • ರೌಡಿಶೀಟರ್ ಪಾರ್ಟಿಗೆ ಮೌನ ಸಮ್ಮತಿ ಆರೋಪ.
  • ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಶೋಧ.

ಸೌರ ಫಲಕವನ್ನೇ ಟೇಬಲ್ ಮಾಡಿಕೊಂಡಿದ್ದ ಕಿಡಿಗೇಡಿಗಳು

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ‘ಹುಲಿ ಕಟ್ಟೆ’ ಎಂಬಲ್ಲಿರುವ ಕಳ್ಳಬೇಟೆ ತಡೆ ಶಿಬಿರದ (Anti-Poaching Camp) ಮುಂಭಾಗದಲ್ಲೇ ಕುಖ್ಯಾತ ರೌಡಿಶೀಟರ್ ಸತೀಶ್ ಯಾನೆ ಮಹದೇವಪ್ರಸಾದ್ ಹಾಗೂ ಆತನ ಸ್ನೇಹಿತರಾದ ಗಂಗಾಧರ್ ಮತ್ತು ಚೇತನ್ ಅಕ್ರಮವಾಗಿ ಪ್ರವೇಶಿಸಿ ಮದ್ಯದ ಪಾರ್ಟಿ ಮಾಡಿದ್ದರು. ಶಿಬಿರದ ಸೌರ ಫಲಕವನ್ನೇ ಟೇಬಲ್ ಮಾಡಿಕೊಂಡು, ಅದರ ಮೇಲೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟ ಹಾಗೂ ತಿಂಡಿಯ ಪ್ಯಾಕೆಟ್‌ಗಳನ್ನು ಇಟ್ಟು ಮೋಜು ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಅತ್ಯಂತ ಸಂರಕ್ಷಿತ ಹಾಗೂ ವನ್ಯಜೀವಿಗಳ ಓಡಾಟವಿರುವ ಪ್ರಮುಖ ವಲಯದೊಳಗೆ ಇಂತಹ ಕೃತ್ಯ ನಡೆದಿದ್ದಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದ ಅಧಿಕಾರಿ

ಈ ಅಕ್ರಮ ಪಾರ್ಟಿಯ ಹಿಂದೆ ಸ್ಥಳೀಯ ಅರಣ್ಯ ಸಿಬ್ಬಂದಿಯ ಕೈವಾಡವಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಂದೀಶ್ ಅವರು ಎಸಿಎಫ್ ಸುರೇಶ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಎಸಿಎಫ್ ನೀಡಿದ ತನಿಖಾ ವರದಿಯಲ್ಲಿ, ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ಅವರು ತಮಗಿಂತ ಮೇಲಧಿಕಾರಿಗಳಿಗೆ ಈ ಗಂಭೀರ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿರುವುದು ಹಾಗೂ ಫೋಟೋಗಳಲ್ಲಿ ಗುರುತಿಸಲಾದ ಶಂಕಿತರ ಹೆಸರನ್ನು ಅಧಿಕೃತವಾಗಿ ದಾಖಲಿಸದೆ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಶಿಸ್ತು ಕ್ರಮಕ್ಕೆ ಬಾಕಿ ಇರುವಂತೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ವನ್ಯಜೀವಿ ಕಾಯ್ದೆಯಡಿ ಕೇಸ್: ಆರೋಪಿಗಳಿಗಾಗಿ ಪೊಲೀಸರ ಬಲೆ

ಪ್ರಸ್ತುತ ಅರಣ್ಯ ಇಲಾಖೆಯು ಈ ಮೂವರು ಕಿಡಿಗೇಡಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿದೆ. ಸದ್ಯ ತಲೆಮರೆಸಿಕೊಂಡಿರುವ ರೌಡಿಶೀಟರ್ ಸತೀಶ್ ಮತ್ತು ಆತನ ಪಟಾಲಂಗಾಗಿ ಅರಣ್ಯ ಇಲಾಖೆ ಹಾಗೂ ಗುಂಡ್ಲುಪೇಟೆ ಪೊಲೀಸರು ಜಂಟಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿ ಶೀಟರ್ ಎಣ್ಣೆ ಪಾರ್ಟಿ!

ಸಾಮಾನ್ಯ ಜನರಿಗೆ ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸಿ ಫೋಟೋ ತೆಗೆಯಲೂ ದಂಡ ವಿಧಿಸುವ ಇಲಾಖೆ, ರೌಡಿಶೀಟರ್‌ಗಳಿಗೆ ಪಾರ್ಟಿ ಮಾಡಲು ಬಿಟ್ಟಿದ್ದಕ್ಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಹೋರಾಟಗಾರರು ಆಗ್ರಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Khan Sir: ಬಿಹಾರದ ‘ಖಾನ್ ಸರ್’ಗೆ ದೊಡ್ಡ ರಿಲೀಫ್, ಗುಂಡಿನ ದಾಳಿ ಪ್ರಕರಣದಲ್ಲಿ ಫೈಸಲ್ ಖಾನ್ ಬಂಧನಕ್ಕೆ ಪಾಟ್ನಾ ನ್ಯಾಯಾಲಯ ತಡೆ – Kannada News

ಪಾಟ್ನಾ, ಜೂನ್ 09: ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿರುವ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಹಾಗೂ ಶಿಕ್ಷಣ ತಜ್ಞ ಫೈಸಲ್ ಖಾನ್ ( ಖಾನ್ ಸರ್) ಅವರಿಗೆ ಪಾಟ್ನಾ ನ್ಯಾಯಾಲಯದಿಂದ ಸಾಮಾಧಾನ ಸಿಕ್ಕಿದೆ. ಪಾಟ್ನಾದ ಕೋಚಿಂಗ್ ಇನ್‌ಸ್ಟಿಟ್ಯೂಟ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಖಾನ್ ಸರ್ ಬಂಧನಕ್ಕೆ ತಕ್ಷಣವೇ ಮಧ್ಯಂತರ ತಡೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನ್ಯಾಯಾಲಯದ ಈ ನಿರ್ಧಾರವು ಖಾನ್ ಸರ್ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ವಲಯದಲ್ಲಿ ಭಾರಿ ಹರ್ಷವನ್ನು ತಂದಿದೆ. ಜೂನ್ 6 ರಂದು ಪಾಟ್ನಾ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜೂನ್ 8ರಂದು ನಡೆದಿತ್ತು.

ವಿಚಾರಣೆಯ ಸಮಯದಲ್ಲಿ ಖಾನ್ ಸರ್ ಪರ ವಕೀಲರು ಅತ್ಯಂತ ಬಲವಾದ ವಾದ ಮಂಡಿಸಿದರು. ಕೋಚಿಂಗ್ ಇನ್‌ಸ್ಟಿಟ್ಯೂಟ್ ಬಳಿ ನಡೆದ ಗುಂಡಿನ ಘಟನೆಗೂ ಫೈಸಲ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ಅವರು ಯಾವುದೇ ಕ್ರಿಮಿನಲ್ ಕೃತ್ಯ ಎಸಗಿಲ್ಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಅವರನ್ನು ಈ ಪ್ರಕರಣದಲ್ಲಿ ಸಂಪೂರ್ಣವಾಗಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಮತ್ತಷ್ಟು ಓದಿ: Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ

ಪಾಟ್ನಾದ ಕಡಮ್‌ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಚಿಂಗ್ ಇನ್‌ಸ್ಟಿಟ್ಯೂಟ್ ಒಂದರ ವಿವಾದದ ವೇಳೆ ನಡೆದ ಗುಂಡಿನ ಚಕಮಕಿಯ ವೈರಲ್ ವೀಡಿಯೊದ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ, ಪೊಲೀಸ್ ತನಿಖೆಯಲ್ಲೇ ಸ್ಪಷ್ಟವಾಗಿರುವಂತೆ, ಈ ಗುಂಡಿನ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದವರು ಇನ್‌ಸ್ಟಿಟ್ಯೂಟ್‌ಗೆ ಸಂಬಂಧಿಸಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು (ಭದ್ರತಾ ಸಿಬ್ಬಂದಿ). ಆ ಇಬ್ಬರೂ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಲೆಮರೆಸಿಕೊಂಡಿದ್ದ ಖಾನ್ ಸರ್‌ಗೆ ಈಗ ಆಡಳಿತಾತ್ಮಕ ರಕ್ಷಣೆ
ವಿವಾದದ ನಂತರ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಿಂದಾಗಿ ಖಾನ್ ಸರ್ ಕಳೆದ ಕೆಲವು ದಿನಗಳಿಂದ ಪಾಟ್ನಾದಿಂದ ಹೊರಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಕಡೆ ಗಮನ ಹರಿಸಿದ್ದರು. ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕ್ ಶರ್ಮಾ ನೇರ ಉಸ್ತುವಾರಿಯಲ್ಲಿ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲೇ, ನ್ಯಾಯಾಲಯವು ಮಧ್ಯಸ್ಥಿಕೆ ವಹಿಸಿ ಖಾನ್ ಸರ್ ಅವರ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.

ನ್ಯಾಯಾಲಯದ ಈ ಪರಿಹಾರದ ಆದೇಶದೊಂದಿಗೆ ಖಾನ್ ಸರ್ ಅವರ ಬಂಧನದ ಭೀತಿ ಸಂಪೂರ್ಣವಾಗಿ ದೂರವಾಗಿದೆ. ಮುಂದಿನ ವಿಚಾರಣೆಯಲ್ಲಿ ಪೊಲೀಸ್ ತನಿಖಾ ವರದಿಯ ವಿವರವಾದ ಪರಿಶೀಲನೆ ನಡೆಯಲಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಇದರಿಂದಾಗಿ ಖಾನ್ ಸರ್ ಅವರು ಶೀಘ್ರದಲ್ಲೇ ಮರಳಿ ತರಗತಿಗಳಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಎಂದಿನಂತೆ ಮಾರ್ಗದರ್ಶನ ನೀಡಲು ಹಾದಿ ಸುಗಮವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

8 ತಿಂಗಳ ಬಳಿಕ ಕಲಬುರಗಿ-ಬೆಂಗಳೂರು ವಿಮಾನ ಸಂಚಾರ ನಾಳೆಯಿಂದ ಆರಂಭ – Kannada News

ಕಲಬುರಗಿ ವಿಮಾನ ನಿಲ್ದಾಣImage Credit source: tv9

ಕಲಬುರಗಿ, ಜೂನ್ 9: ಕಲಬುರಗಿ (Kalaburagi) ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಕೊನೆಗೂ ಸಂತಸದ ಸುದ್ದಿ ಸಿಕ್ಕಿದೆ. ಕಳೆದ 8 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ನಡುವಿನ ವಿಮಾನ ಸೇವೆ ಜೂನ್ 10ರಿಂದ (ನಾಳೆಯಿಂದ) ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಕಿಶೋರ್ ಕಿಲ್ಲಂಪಳ್ಳಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಆರ್ಥಿಕ ನೆರವು ವಿಸ್ತರಿಸಿದ ಬೆನ್ನಲ್ಲೇ ಸ್ಟಾರ್ ಏರ್ (Star Air) ಸಂಸ್ಥೆಯು ವಾರದ ಏಳೂ ದಿನಗಳೂ ಈ ಮಾರ್ಗದಲ್ಲಿ ವಿಮಾನ ಯಾನ ಸೇವೆ ನೀಡಲು ಮುಂದೆ ಬಂದಿದೆ.

ಮುಖ್ಯಾಂಶಗಳು

  • ಜೂನ್ 10ರಿಂದ ವಿಮಾನ ಸೇವೆ ಪುನರಾರಂಭ.
  • ವಾರದ ಏಳೂ ದಿನ ಸ್ಟಾರ್ ಏರ್ ಸಂಚಾರ.
  • ರನ್‌ವೇ ನವೀಕರಣ, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ.

ಕಲಬುರಗಿ ಬೆಂಗಳೂರು ವಿಮಾನ ಸಂಚಾರದ ಟೈಮಿಂಗ್ಸ್

ಈ ಎರಡು ನಗರಗಳ ನಡುವೆ ಸ್ಟಾರ್ ಏರ್ ಸಂಸ್ಥೆಯ 76 ಆಸನಗಳ ಸಾಮರ್ಥ್ಯದ ‘ಎಂಬ್ರೇಯರ್ 175 (E175)’ ಅತ್ಯಾಧುನಿಕ ವಿಮಾನ ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 7:40ಕ್ಕೆ ಕಲಬುರಗಿ ತಲುಪಲಿದೆ. ತದನಂತರ 30 ನಿಮಿಷಗಳ ಬಿಡುವಿನ ನಂತರ, ಬೆಳಗ್ಗೆ 8:10ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ವಾಪಸ್ ಆಗಲಿದೆ. ಈ ಮುಂಜಾನೆಯ ಸಮಯದ ಸೇವೆಯು ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ತುರ್ತು ಕೆಲಸದ ನಿಮಿತ್ತ ರಾಜಧಾನಿಗೆ ತೆರಳುವ ಸಾರ್ವಜನಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.

8 ತಿಂಗಳ ಸುದೀರ್ಘ ಕಾಯುವಿಕೆಗೆ ತೆರೆ

ಕಲಬುರಗಿ ಮತ್ತು ಬೆಂಗಳೂರು ನಡುವೆ ಕೊನೆಯ ವಿಮಾನ ಸಂಚಾರ 2025 ರ ಅಕ್ಟೋಬರ್ 8 ರಂದು ಸಂಚರಿಸಿತ್ತು. ಆ ಬಳಿಕ ವಿಮಾನ ನಿಲ್ದಾಣದ ಸೇವೆ ಕೇವಲ ಹೆಲಿಕಾಪ್ಟರ್‌ಗಳು ಮತ್ತು ವಿಶೇಷ ಚಾರ್ಟರ್ಡ್ ವಿಮಾನಗಳಿಗಷ್ಟೇ ಸೀಮಿತವಾಗಿತ್ತು. ಎರಡು ವಾರಗಳ ಹಿಂದಷ್ಟೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ತಾಂತ್ರಿಕ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ವಿಮಾನ ಸಂಚಾರ ಇಲ್ಲದಿದ್ದರೂ ನಿಲ್ದಾಣದ 3 ಕಿಲೋಮೀಟರ್ ಉದ್ದದ ರನ್‌ವೇಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸುತ್ತಮುತ್ತಲಿನ 9 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೀದಿದೀಪಗಳನ್ನು ಅಳವಡಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆ ಹಾಗೂ ‘ಫ್ಲೈಬ್ರರಿ’!

ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ ನಗರದಿಂದ ಮುಂಜಾನೆ 5:30ಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:15ಕ್ಕೆ ವಿಶೇಷ ಬಸ್ ಸೌಕರ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಕೋರಲಾಗಿದೆ. ಇದರೊಂದಿಗೆ ಪ್ರಯಾಣಿಕರ ಜ್ಞಾನಾರ್ಜನೆಗಾಗಿ ವಿಮಾನ ನಿಲ್ದಾಣದಲ್ಲಿ ‘ಫ್ಲೈಬ್ರರಿ (ಗ್ರಂಥಾಲಯ)’ ಸೌಲಭ್ಯವನ್ನು ಕೂಡ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ

2020 ರಿಂದ 2025 ರ ಅವಧಿಯಲ್ಲಿ ಈ ಮಾರ್ಗದಲ್ಲಿ ಒಟ್ಟು 5,792 ಬಾರಿ ವಿಮಾನ ಸಂಚಾರ ನಡೆದಿದ್ದು, 2.83 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಸದ್ಯ ಸ್ಥಳೀಯರಿಂದ ಮುಂಬೈ, ದೆಹಲಿ, ತಿರುಪತಿ ಹಾಗೂ ಗೋವಾ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ ಕೇಳಿಬಂದಿದ್ದು, ವಿಮಾನಯಾನ ಸಂಸ್ಥೆಗಳು ಮುಂದೆ ಬಂದರೆ ಆ ಮಾರ್ಗಗಳಲ್ಲೂ ಸೇವೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Visakhapatnam Tragedy: ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು, ಹೆಚ್​ಡಿಕೆ ಭೇಟಿ – Kannada News

ವಿಶಾಖಪಟ್ಟಣಂ, ಜೂನ್ 09: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಭೀಕರ ದುರಂತ ಸಂಭವಿಸಿದೆ. ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಘಟನೆಯು ಕಂಟಿನ್ಯೂಯಸ್ ಕ್ಯಾಸ್ಟಿಂಗ್ ಯಂತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದಿದೆ. ಇಪ್ಪತ್ತೆರಡು ಲ್ಯಾಡಲ್‌ಗಳ ಕಾರ್ಯಾಚರಣೆ ಮುಗಿದ ನಂತರ, ಮುಂದಿನ ಲ್ಯಾಡಲ್ ಅನ್ನು ಸೇರಿಸುವಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ, ಲ್ಯಾಡಲ್‌ನ ಮೇಲ್ಭಾಗದಿಂದ ಹಠಾತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಿಸಿ ಲೋಹ ಚೆಲ್ಲಿದೆ ಮತ್ತು ಕ್ರೇನ್‌ಗೂ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಹದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ಲೈಡ್ ಗೇಟ್ ವ್ಯವಸ್ಥೆಯಲ್ಲಿನ ವೈಫಲ್ಯವು ಈ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ತನಿಖೆ ನಡೆಯುತ್ತಿದ್ದು, ದುರಂತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ಸಾಗಿದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭರ್ಜರಿ ಬೌಲಿಂಗ್, ಸಿಡಿಲಬ್ಬರದ ಬ್ಯಾಟಿಂಗ್: ಅರ್ಜುನ್ ತೆಂಡೂಲ್ಕರ್ ಮಿಂಚಿಂಗ್! – Kannada News

ಮುಂಬೈ ಟಿ20 ಲೀಗ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಕ್ಸ್ ಅಂಧೇರಿ  ಹಾಗೂ ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಕ್ಸ್ ಅಂಧೇರಿ ತಂಡಕ್ಕೆ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಅತ್ಯುತ್ತಮ ಆರಂಭ ಒದಗಿಸಿದ್ದರು.

ಪಂದ್ಯದ ಮೊದಲ ಓವರ್‌ನಲ್ಲೇ ಎರಡು ಪ್ರಮುಖ ವಿಕೆಟ್ ಕಿತ್ತ ಅರ್ಜುನ್ ಬಾಂದ್ರಾ ಬ್ಲಾಸ್ಟರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಆಘಾತದಿಂದ ಪಾರಾಗಲು ಬ್ಲಾಸ್ಟರ್ಸ್​ ಪಡೆ ಪರದಾಡಬೇಕಾಯಿತು. ಪರಿಣಾಮ 20 ಓವರ್​ಗಳಲ್ಲಿ ಕೇವಲ 144 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಈ ಪಂದ್ಯದಲ್ಲಿ 3 ಓವರ್​ಗಳನ್ನು ಎಸೆದ ಅರ್ಜುನ್ ತೆಂಡೂಲ್ಕರ್ ಒಂದು ಓವರ್ ಮೇಡನ್ ಮಾಡಿದ್ದರು. ಅಲ್ಲದೆ ಮೂರು ಓವರ್​​ಗಳಲ್ಲಿ ನೀಡಿದ್ದು ಕೇವಲ 11 ರನ್​ಗಳು ಮಾತ್ರ. ಹಾಗೆಯೇ ಈ  3 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಬ್ಯಾಟಿಂಗ್​ನಲ್ಲೂ ಮಿಂಚಿಂಗ್:

145 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಅಂಧೇರಿ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲೂ ಆಸರೆಯಾದರು. ಈ ಬಾರಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅಲ್ಲದೆ ಯುವ ದಾಂಡಿಗ ಮುಶೀರ್ ಖಾನ್ (54*) ಅವರ ಜೊತೆಗೂಡಿ ಎರಡನೇ ವಿಕೆಟ್‌ಗೆ 116 ರನ್‌ಗಳ ಅಜೇಯ ಜೊತೆಯಾಟವಾಡಿದರು. ಈ ಮೂಲಕ ಕೇವಲ 13.5 ಓವರ್‌ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿ ಆರ್ಕ್ಸ್ ಅಂಧೇರಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಅರ್ಜುನ್ ಆಲ್​ರೌಂಡರ್:

  • ಬೌಲಿಂಗ್​ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಕರ್ 3 ಓವರ್​ಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು.
  • ಬ್ಯಾಟಿಂಗ್​ನಲ್ಲಿ 34 ಎಸೆತಗಳನ್ನು ಎದುರಿಸಿದ ಅರ್ಜುನ್, 5 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 66 ರನ್ ಬಾರಿಸಿದ್ದರು.
  • ಈ ಭರ್ಜರಿ ಆಲ್​ರೌಂಡರ್ ಪ್ರದರ್ಶನಕ್ಕೆ ಅರ್ಜುನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 3,542 ಕೋಟಿ ರೂ! ಕಿಂಗ್​​ ಖಾನ್​ನ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಐಪಿಎಲ್​ನಲ್ಲಿ ಒಂದೇ ಚಾನ್ಸ್​:

ಐಪಿಎಲ್​ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಸಲಾಗಿತ್ತು. ಅದು ಕೂಡ ಎಲ್​ಎಸ್​ಜಿ ತಂಡದ ಕೊನೆಯ ಮ್ಯಾಚ್​ನಲ್ಲಿ. ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ಅರ್ಜುನ್ 4 ಓವರ್​ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು.

Published On – 8:54 am, Tue, 9 June 26

Source link

Exit mobile version