‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ದಾಖಲೆಯ ಅಡ್ವಾನ್ಸ್ ಬುಕಿಂಗ್ – Kannada News | Spider Man Brand New Day creating record in India

ಇತ್ತೀಚೆಗೆ ಬಿಡುಗಡೆ ಆದ ‘ದಿ ಆಡಸ್ಸಿ’ (The Odyssey) ಸಿನಿಮಾ ಭಾರತದಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ಕಳೆದ ಶನಿವಾರ ಸಹ ಭಾರತದಲ್ಲಿ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಈಗ ಅದರ ಸ್ಥಾನ ತುಂಬಲು ಮತ್ತೊಂದು ಹಾಲಿವುಡ್ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆ ಆಗುತ್ತಿದೆ. ‘ದಿ ಆಡಸ್ಸಿ’ ಸಿನಿಮಾ ಅನ್ನೂ ಸಹ ಮೀರಿಸುವ ರೀತಿಯ ಅಡ್ವಾನ್ಸ್ ಬುಕಿಂಗ್ ಮಾಡಿದೆ. ಭಾರತದಲ್ಲೂ ಸಹ ‘ಸ್ಪೈಡರ್​​ ಮ್ಯಾನ್’ ಸಿನಿಮಾ ದಾಖಲೆ ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ.

‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ಅಧಿಕೃತವಾಗಿ ಜುಲೈ 30 ರಂದು ಭಾರತೀಯ ಥಿಯೇಟರ್‌ಗಳಲ್ಲಿ ಮತ್ತು ಜುಲೈ 31 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಭಾರತದಲ್ಲಿ ಒಂದು ದಿನ ಮುಂಚಿತವಾಗಿಯೇ ಬಿಡುಗಡೆ ಆಗಲಿದೆ. ಜುಲೈ 30 ರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿರುವ ಈ ಚಿತ್ರವು, ಬಿಡುಗಡೆಗೆ ಮೂರು ದಿನಗಳ ಮುಂಚೆಯೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. 2023 ರ ನಂತರ ‘ಬುಕ್‌ಮೈಶೋ’ (BookMyShow) ನಲ್ಲಿ ಅತಿ ಹೆಚ್ಚು ಮುಂಗಡ ಬುಕಿಂಗ್ ದಾಖಲಿಸಿದ ಹಾಲಿವುಡ್ ಚಿತ್ರ ಎನಿಸಿಕೊಂಡಿದೆ ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’.

ಮಾರ್ವೆಲ್-ಸೋನಿ ನಿರ್ಮಾಣದ ಈ ಚಿತ್ರವು ಅಡ್ವಾನ್ಸ್ ಬುಕಿಂಗ್​​ನಲ್ಲಿ 8,00,000 ಟಿಕೆಟ್‌ಗಳನ್ನು ದಾಟಿ ದಾಖಲೆ ಬರೆದಿದೆ. ಹಾಲಿವುಡ್​​ನ ಇನ್ಯಾವುದೇ ಸಿನಿಮಾ ಮುಂಗಡವಾಗಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್​​ಗಳನ್ನು ಭಾರತದಲ್ಲಿ ಮಾರಾಟ ಮಾಡಿರಲಿಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಡೆಡ್‌ಪೂಲ್ & ವೊಲ್ವೆರಿನ್’ ಚಿತ್ರದ ಒಟ್ಟು ಟಿಕೆಟ್ ಸಂಖ್ಯೆಯನ್ನು ಕೇವಲ ಮುಂಗಡ ಬುಕಿಂಗ್​​ನಲ್ಲಿಯೇ ಹಿಂದಿಕ್ಕಿದೆ ‘ಸ್ಪೈಡರ್​ ಮ್ಯಾನ್’. ಆ ಮೂಲಕ ಭಾರತದಲ್ಲಿ ಈ ಸಿನಿಮಾ ಭಾರಿ ದೊಡ್ಡ ಓಪನಿಂಗ್ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದೆ.

ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

‘ದಿ ಆಡಸ್ಸಿ’ ಇನ್ನೂ ಒಳ್ಳೆಯ ಪ್ರದರ್ಶನ ಮಾಡುತ್ತಿದ್ದರೂ ಸಹ ‘ಸ್ಪೈಡರ್ ಮ್ಯಾನ್’ ಬಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜುಲೈ 17 ರಂದು ಸುಮಾರು 43,000 ಇದ್ದ ಟಿಕೆಟ್ ಮಾರಾಟವು, ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಜುಲೈ 26 ರಂದು ಗರಿಷ್ಠ 141,000 ಕ್ಕೆ ಏರಿಕೆಯಾಗಿದ್ದು, ಬೇಡಿಕೆಯಲ್ಲಿ ಭಾರಿ ಹೆಚ್ಚಳ ಆಗುತ್ತಲೇ ಸಾಗಿದೆ. ಬೆಂಗಳೂರಿನಲ್ಲಿ ಸಹ ಈಗಾಗಲೇ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳ ಬಹುತೇಕ ಶೋಗಳು ಹೌಸ್​ ಫುಲ್ ಆಗಿಬಿಟ್ಟಿವೆ.

ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಸರಪಳಿಗಳಲ್ಲಿಯೂ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿವಿಆರ್ (PVR), ಐನಾಕ್ಸ್ (INOX) ಮತ್ತು ಸಿನಿಪೊಲಿಸ್ (Cinepolis) ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಈಗಾಗಲೇ ಸುಮಾರು 3.19 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಮುಂಗಡವಾಗಿ ಒಟ್ಟು 16 ಕೋಟಿ ರೂ. ಗಳಿಕೆ ಮಾಡಿದೆ. ಪಿವಿಆರ್ 8.35 ಕೋಟಿ ರೂ. ಮೌಲ್ಯದ 1.57 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಅತಿ ಹೆಚ್ಚು ಕೊಡುಗೆ ನೀಡಿದೆ. ಇದರ ನಂತರ ಐನಾಕ್ಸ್ 4.70 ಕೋಟಿ ರೂ. ಮೌಲ್ಯದ 1.02 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಸಿನಿಪೊಲಿಸ್ ಮತ್ತೊಂದು 60,000 ಟಿಕೆಟ್‌ಗಳೊಂದಿಗೆ 2.95 ಕೋಟಿ ರೂ. ಗಳಿಸಿದೆ. ಈ ಚಿತ್ರವು 4,000 ಕ್ಕೂ ಹೆಚ್ಚು ಶೋಗಳಲ್ಲಿ ಶೇಕಡಾ 36 ರಷ್ಟು ಮುಂಗಡ ಆಕ್ಯುಪೆನ್ಸಿ ದಾಖಲಿಸುತ್ತಿದೆ.

ಟಾಮ್ ಹಾಲೆಂಡ್ ನಟಿಸಿರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’, ‘ಸ್ಪೈಡರ್ ಮ್ಯಾನ್’ ಸರಣಿಯ 12ನೇ ಸಿನಿಮಾ ಆಗಿದೆ. ಹಾಗೂ ಟಾಮ್ ಹಾಲೆಂಡ್ ಅವರ ಏಳನೇ ಸಿನಿಮಾ ಆಗಿದೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ‘ಸ್ಪೈಡರ್ ಮ್ಯಾನ್’ ಅನ್ನು ಇಡೀ ಜಗತ್ತು ಮರೆತು ಹೋಗಿದೆ, ಆತನ ಗೆಳೆಯ, ಗರ್ಲ್​​ಫ್ರೆಂಡ್ ಸಹ ಸ್ಪೈಡರ್ ಮ್ಯಾನ್ ಬಗ್ಗೆ ಮರೆತು ಹೋಗಿದ್ದಾರೆ. ಜೊತೆಗೆ ಸ್ಪೈಡರ್​ ಮ್ಯಾನ್​​ಗೆ ಹಲವು ಹೊಸ ವೈರಿಗಳು ಹುಟ್ಟುಕೊಂಡಿದ್ದಾರೆ. ಹಲ್ಕ್ ಸಹ ಸ್ಪೈಡರ್​ ಮ್ಯಾನ್​​ಗೆ ಎದುರಾಳಿ ಆಗಿದ್ದಾನೆ. ಸಿನಿಮಾ ಜುಲೈ 30ರಂದು ಭಾರತದಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ: ಸಂವಾದದಲ್ಲಿ ಭಾಗಿಯಾಗಲಿರುವ ಪ್ರಿಯಾಂಕ್ ಖರ್ಗೆ – Kannada News | Priyank Kharge to Participate in Delhi Conclave on National RSS Registration Campaign

ಬೆಂಗಳೂರು/ದೆಹಲಿ, ಜುಲೈ 28: ಆರ್‌ಎಸ್‌ಎಸ್‌ ನೋಂದಣಿಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಅಭಿಯಾನವೊಂದು ಚುರುಕುಗೊಂಡಿದೆ. ಈ ಅಭಿಯಾನದ ಭಾಗವಾಗಿ, ದೆಹಲಿಯ ಸುರ್ಜಿತ್ ಭವನದಲ್ಲಿ “ಆರ್‌ಎಸ್‌ಎಸ್‌ ನೋಂದಣಿ ಯಾಕೆ ಅಗತ್ಯ?” ಎಂಬ ವಿಷಯದ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಾಜವಾದಿ ಸಂಗಮ್ ಸಂಸ್ಥೆಯು ಮಧ್ಯಾಹ್ನ 3:30ಕ್ಕೆ ಈ ಸಂವಾದವನ್ನು ಹಮ್ಮಿಕೊಂಡಿದ್ದು, ಕರ್ನಾಟಕದ ಸಚಿವರಾದ ಪ್ರಿಯಾಂಕ್ ಖರ್ಗೆ ಇದರಲ್ಲಿ ಭಾಗವಹಿಸಲಿದ್ದಾರೆ. ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಆರ್‌ಎಸ್‌ಎಸ್‌ ಸಂಸ್ಥೆಯು ಏಕೆ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅದರ ಅಗತ್ಯತೆ ಏನು ಎಂಬುದರ ಬಗ್ಗೆ ಪ್ರಮುಖವಾಗಿ ಚರ್ಚೆ ನಡಡೆಯಲಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೋದಿ ವಿಡಿಯೋ ಡಿಲೀಟ್, ಮೆಟಾ ಸಂಸ್ಥೆಯ ಗ್ಲೋಬಲ್ ಪಬ್ಲಿಕ್ ಪಾಲಿಸಿ ಹೆಡ್‌ಗೆ ಸಮನ್ಸ್: ‘ಮೆಟಾ’ ವಿವರಣೆಗೆ ಕೇಂದ್ರ ಅಸಮಾಧಾನ – Kannada News | Centre Seeks Explanation From Meta Over Removal of PM Modi’s Facebook Post

ನವದೆಹಲಿ, ಜುಲೈ 28: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಪರೀಕ್ಷಾ ಸುಧಾರಣೆ ಕುರಿತ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಸಂಸ್ಥೆಯ ಗ್ಲೋಬಲ್ ಪಬ್ಲಿಕ್ ಪಾಲಿಸಿ ಹೆಡ್​ಗೆ ಅಧಿಕೃತ ಸಮನ್ಸ್ ಜಾರಿಗೊಳಿಸಿದೆ. ಇನ್ನೊಂದೆಡೆ, ಈ ತಡೆಹಿಡಿಯುವಿಕೆಗೆ ಮೆಟಾ ಸಂಸ್ಥೆಯು ನೀಡಿರುವ ತಾಂತ್ರಿಕ ದೋಷ ಎಂಬ ಸಮಜಾಯಿಷಿ ಹಾಗೂ ವಿವರಣೆಯ ಕುರಿತು ಭಾರತ ಸರ್ಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥರಿಗೆ ಸಮನ್ಸ್ ನೀಡಿರುವ ಸಚಿವಾಲಯ, ಈ ಘಟನೆ ಹೇಗೆ ಸಂಭವಿಸಿತು ಹಾಗೂ ಯಾವ ಆಧಾರದ ಮೇಲೆ ಪ್ರಧಾನಿಯವರ ಅಧಿಕೃತ ಹೇಳಿಕೆಯ ವೀಡಿಯೊವನ್ನು ‘ಕಾನೂನುಬದ್ಧ ವಿನಂತಿ’ ಎಂಬ ಸಂದೇಶದೊಂದಿಗೆ ತಡೆಹಿಡಿಯಲಾಯಿತು ಎಂಬುದರ ಕುರಿತು ಖುದ್ದು ಹಾಜರಾಗಿ ಸಂಪೂರ್ಣ ತಾಂತ್ರಿಕ ವಿವರಣೆ ನೀಡುವಂತೆ ಆದೇಶಿಸಿದೆ

ಅಕಸ್ಮಾತ್ತಾಗಿ ಹಾಗೂ ತಾಂತ್ರಿಕ ದೋಷದಿಂದ ವೀಡಿಯೊ ಡಿಲೀಟ್ ಆಗಿತ್ತು ಎಂಬ ಮೆಟಾದ ಕ್ಷಮಾಯಾಚನೆಯನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಸ್ವತಃ ದೇಶದ ಪ್ರಧಾನಿಯವರ ಸಂದೇಶವನ್ನು ಭಾರತೀಯ ಬಳಕೆದಾರರಿಗೆ ಲಭ್ಯವಾಗದಂತೆ ನಿರ್ಬಂಧಿಸುವುದು ಸಾಮಾನ್ಯ ತಾಂತ್ರಿಕ ಎಡವಟ್ಟಾಗಲು ಸಾಧ್ಯವಿಲ್ಲ, ಇದರ ಹಿಂದೆ ಬೇರೆ ಯಾವುದಾದರೂ ತಾಂತ್ರಿಕ ಅಥವಾ ನಿರ್ವಹಣಾ ಲೋಪವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಓದಿ: ಫೇಸ್​ಬುಕ್​​ನಿಂದ ಪ್ರಧಾನಿ ಮೋದಿ ವೀಡಿಯೊ ಡಿಲೀಟ್: ತಾಂತ್ರಿಕ ದೋಷ ಎಂದು ಸರ್ಕಾರಕ್ಕೆ ಮೆಟಾ ಕ್ಷಮೆಯಾಚನೆ

ವೀಡಿಯೊದಲ್ಲೇನಿತ್ತು?: ಜುಲೈ 23 ರಂದು ಪ್ರಧಾನಿ ಮೋದಿ ಅವರು ‘ಜೆನ್​ ಝಿ’ಯುವಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದ ವೀಡಿಯೊದಲ್ಲಿ, ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದಾಗಿ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ, ಭಾರತದ ಯುವಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಅಪ್‌ಲೋಡ್ ಮಾಡಿದ ಮೊದಲ ಸೆಲ್ಫಿ ವೀಡಿಯೊವನ್ನು ಫೇಸ್‌ಬುಕ್ ನಿರ್ಬಂಧಿಸುತ್ತದೆ ಎಂದರೆ ಏನರ್ಥ? ಲಕ್ಷಾಂತರ ಭಾರತೀಯರು ಏನನ್ನು ನೋಡಬೇಕು ಅಥವಾ ನೋಡಬಾರದು ಎಂದು ನಿರ್ಧರಿಸುವ ಅಧಿಕಾರವನ್ನು ಮೆಟಾಗೆ ಕೊಟ್ಟವರು ಯಾರು?” ಎಂದು ಬಿಜೆಪಿ ಕಾರ್ಯಕರ್ತೆ ಪ್ರೀತಿ ಗಾಂಧಿ ಖಾರವಾಗಿ ಪ್ರಶ್ನಿಸಿದ್ದರು.

ಜುಲೈ 28 ರ ಮುಂಜಾನೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ವೀಡಿಯೊವನ್ನು ‘ತಪ್ಪಾಗಿ’ ತೆಗೆದುಹಾಕಲಾಗಿತ್ತು ಮತ್ತು ತಕ್ಷಣವೇ ದೋಷ ಸರಿಪಡಿಸಿ ಮರುಸ್ಥಾಪಿಸಲಾಗಿದೆ ಎಂದು ಮೆಟಾ ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ಆಯೋಜಿಸಿದ್ದ 26 ದಿನಗಳ ಸತತ ವಿದ್ಯಾರ್ಥಿ ಆಂದೋಲನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದರು.

ಪಶ್ನೆ ಪತ್ರಿಕೆ ಸೋರಿಕೆ ಸಾಮಾನ್ಯ ವಿಚಾರವಲ್ಲ, ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಭಾರಿ ನೋವು ತಂದಿದೆ ಎಂದು ಒಪ್ಪಿಕೊಂಡಿದ್ದ ಪ್ರಧಾನಿ, ಪರೀಕ್ಷಾ ಮಾಫಿಯಾ ತಡೆಯಲು ವಿಶೇಷ ‘ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು’ ಸ್ಥಾಪಿಸುವುದಾಗಿ ಹಾಗೂ ಕಠಿಣ ಕಾನೂನು ತರುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು. 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷಕ್ಕೆ ಧಕ್ಕೆಯಾಗದಂತೆ ಸರ್ಕಾರ ಶ್ರಮಿಸಲಿದೆ ಎಂದು ಪ್ರಧಾನಿ ಪ್ರಕಟಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫೇಸ್​ಬುಕ್​​ನಿಂದ ಪ್ರಧಾನಿ ಮೋದಿ ವೀಡಿಯೊ ಡಿಲೀಟ್: ತಾಂತ್ರಿಕ ದೋಷ ಎಂದು ಸರ್ಕಾರಕ್ಕೆ ಮೆಟಾ ಕ್ಷಮೆಯಾಚನೆ – Kannada News | Meta Acknowledges Technical Issue Behind Temporary Restriction on PM Modi’s Facebook Video

ನವದೆಹಲಿ,ಜುಲೈ 28: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಪರೀಕ್ಷಾ ಸುಧಾರಣೆ ಕುರಿತ ಭಾಷಣದ ವೀಡಿಯೊವನ್ನು ಭಾರತದಲ್ಲಿ ವೀಕ್ಷಿಸದಂತೆ ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿದ ಘಟನೆಗೆ ಸಂಬಂಧಿಸಿದಂತೆ, ಮೆಟಾ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಕ್ಷಮೆಯಾಚಿಸಿದೆ ಎಂದು ಮೂಲಗಳು ತಿಳಿಸಿವೆ. ತಾಂತ್ರಿಕ ದೋಷದಿಂದಾಗಿ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿತ್ತು. ತಕ್ಷಣವೇ ದೋಷವನ್ನು ಸರಿಪಡಿಸಿ ವೀಡಿಯೊವನ್ನು ಮತ್ತೆ ಮರುಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ವಿದೇಶಿ ಸಾಮಾಜಿಕ ಜಾಲತಾಣ ವೇದಿಕೆಯೊಂದು ಭಾರತದ ಪ್ರಧಾನಿಯವರ ಪೋಸ್ಟ್ ನಿರ್ಬಂಧಿಸಿರುವುದನ್ನು ಕೇಂದ್ರ ಸರ್ಕಾರ ತೀವ್ರವಾಗಿ ಪರಿಗಣಿಸಿದೆ. ಮೆಟಾ ನೀಡಿರುವ ವಿವರಣೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಮೆಟಾ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಯಿದೆ.

ವೀಡಿಯೊದಲ್ಲೇನಿತ್ತು?: ಜುಲೈ 23 ರಂದು ಅಪ್‌ಲೋಡ್ ಮಾಡಲಾಗಿದ್ದ ಈ ವೀಡಿಯೊದಲ್ಲಿ, ಜಿರಳೆ ಜನತಾ ಪಕ್ಷ ಆಯೋಜಿಸಿದ್ದ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜೆನ್​ ಝಿ ಯುವಜನತೆಗೆ ನೀಡಿದ ಮೊದಲ ಸಂದೇಶವಿತ್ತು. ಇದರಲ್ಲಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ತರುವುದಾಗಿ ಅವರು ಘೋಷಿಸಿದ್ದರು. ವೀಡಿಯೊವನ್ನು ತಡೆಹಿಡಿಯುವ ಮೊದಲು ಅದು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ ಭಾರಿ ಸದ್ದು ಮಾಡಿತ್ತು. ಮೆಟಾ ನಿರ್ಬಂಧವನ್ನು ತೆರವುಗೊಳಿಸಿದ ನಂತರ ಕ್ಲಿಪ್ ಮತ್ತೆ ಸಾರ್ವಜನಿಕರಿಗೆ ಲಭ್ಯವಾಗಿದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಪೋಸ್ಟ್ ತಡೆಹಿಡಿದ ಫೇಸ್‌ಬುಕ್: ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ, ತಜಿಂದರ್ ಬಗ್ಗಾ ಆಕ್ರೋಶ

ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ 36 ದಿನಗಳ ಸತತ ಆಂದೋಲನ ಹಾಗೂ ಜುಲೈ 25 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಪ್ರಧಾನಿ ಮೋದಿ ಅಧಿಕೃತ ಸಂದೇಶದ ವೀಡಿಯೊವನ್ನೇ ನಿರ್ಬಂಧಿಸಿರುವ ಮೆಟಾ ಸಂಸ್ಥೆಯ ನಡೆಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಶೀಘ್ರದಲ್ಲೇ ಮೆಟಾ ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಪೋಸ್ಟ್​

ಭಾರತೀಯ ಐಟಿ ಕಾಯ್ದೆಯಡಿ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನೀಡಲಾಗಿರುವ ‘ಸೇಫ್ ಹಾರ್ಬರ್’ ಸೌಲಭ್ಯವನ್ನು ಮೆಟಾ ಇಂತಹ ತಾಂತ್ರಿಕ ಎಡವಟ್ಟುಗಳಿಂದ ದುರುಪಯೋಗಪಡಿಸಿಕೊಳ್ಳುತ್ತಿದೆಯೇ ಎಂಬ ಕುರಿತು ಡಿಜಿಟಲ್ ನೀತಿ ತಜ್ಞರ ನಡುವೆ ಸಾರ್ವಜನಿಕ ಚರ್ಚೆ ಶುರುವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಎಲಿಜಬೆತ್’ ಪಾತ್ರದ ಹೊಸ ಪೋಸ್ಟರ್ ರಿಲೀಸ್ ಮಾಡಿದ ‘ಟಾಕ್ಸಿಕ್’ ತಂಡ – Kannada News | Toxic beauty Huma Qureshi celebrating her Birthday

ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಅತ್ಯಂತ ನಿರೀಕ್ಷಿತ ಎನಿಸಿಕೊಂಡಿದೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಟಾಪ್ ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಟಿಸುತ್ತಿದ್ದಾರೆ. ಹುಮಾ ಖುರೇಷಿ ಅವರು ಈ ಸಿನಿಮಾ ಎಲಿಜಿಬೆತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇಂದು (ಜುಲೈ 28) ಹುಮಾ ಖುರೇಷಿ ಅವರ ಹುಟ್ಟುಹಬ್ಬವಾಗಿದ್ದು, ‘ಟಾಕ್ಸಿಕ್’ ಚಿತ್ರತಂಡವು ಹುಮಾ ಖುರೇಷಿ ಅವರಿಗೆ ಶುಭಾಶಯ ತಿಳಿಸುವ ಜೊತೆಗೆ ಅವರ ಪಾತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.

1950-60ರ ದಶಕದಲ್ಲಿ ನಡೆಯುವ ಕತೆಯನ್ನು ಒಳಗೊಂಡಿರುವ ‘ಟಾಕ್ಸಿಕ್’ ಸಿನಿಮಾನಲ್ಲಿ ಹುಮಾ ಖುರೇಷಿ ‘ಎಲಿಜಬೆತ್’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಹುಮಾ ಅವರ ಪೋಸ್ಟರ್​​ನಲ್ಲಿ ನಟಿಯು ಕಪ್ಪು ಬಣ್ಣದ ವಿಂಟೇಜ್ ಕಾರಿನ ಪಕ್ಕ ಬ್ರಿಟೀಷ್ ರಾಣಿಯರ ರೀತಿಯ ಕಪ್ಪು ಬಣ್ಣದ ಉಡುಗೆ ಧರಿಸಿ ನಿಂತಿದ್ದರು. ಆ ಫೋಟೊ ಸಖತ್ ಗಮನ ಸೆಳೆದ ಜೊತೆಗೆ ಹುಮಾ ಅವರ ಪಾತ್ರದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಮತ್ತೊಂದು ಪೋಸ್ಟರ್ ಅನ್ನು ಇತ್ರತಂಡ ಹಂಚಿಕೊಂಡಿದೆ.

ಇದನ್ನೂ ಓದಿ: ಇದನ್ನೂ ಓದಿ:ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ

ಗೌನ್ ಮಾದರಿಯ ಗ್ಲಾಮರಸ್ ಉಡುಗೆ ತೊಟ್ಟು ಹುಮಾ ಖುರೇಷಿ ನಿಂತಿರುವ ಚಿತ್ರವನ್ನು ಇದೀಗ ಚಿತ್ರತಂಡ ಹಂಚಿಕೊಂದಿದೆ. ಜೊತೆಗೆ ‘ಟಾಕ್ಸಿಕ್’ ತಂಡವು ನಟಿ ಹುಮಾ ಖುರೇಷಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಿದೆ. ಹುಮಾ ಖುರೇಷಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಅವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರಂತೆ. ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರಂತೆ. ಹುಮಾ ಖುರೇಷಿ ಅವರು ಈ ಹಿಂದೆ ಹೇಳಿದ್ದಂತೆ, ಸಿನಿಮಾನಲ್ಲಿ ಪ್ರತಿ ಮುಖ್ಯ ಪಾತ್ರಕ್ಕೂ ಪ್ರಾಧಾನ್ಯತೆ ಇದೆಯಂತೆ. ಪ್ರತಿಯೊಬ್ಬರಿಗೂ ತೆರೆ ಮಿಂಚಲು ಅವಕಾಶಗಳು ಇವೆಯಂತೆ.

ಹುಮಾ ಖುರೇಷಿ ಈ ಜುಲೈ 28ಕ್ಕೆ ಅವರ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1986 ರಲ್ಲಿ ಜನಿಸಿರುವ ಹುಮಾ, ಭಾರತ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿರುವ ‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಈಗ ಬಾಲಿವುಡ್​​ನ ಬೇಡಿಕೆಯ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಈ ಹಿಂದೆ ಹುಮಾ ಅವರು ಒಂದು ಮಲಯಾಳಂ, ಎರಡು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈಗ ‘ಟಾಕ್ಸಿಕ್’ ಮೂಲಕ ಕನ್ನಡದ ಪ್ಯಾನ್ ವರ್ಲ್ಡ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Tue, 28 July 26

Source link

ಶ್ರೀ ಶ್ರೀ ರವಿಶಂಕರ್ ಬಯೋಪಿಕ್ ‘ವೈಟ್​’ ಚಿತ್ರದ ಡಬ್ಬಿಂಗ್ ಪೂರ್ಣ; ಶೀಘ್ರವೇ ತೆರೆಗೆ – Kannada News | Vikrant Massey Completes Dubbing for White Producer Calls It Indias Precious Gift to the World

ಬಾಲಿವುಡ್‌ನ ಪ್ರತಿಭಾವಂತ ನಟ ವಿಕ್ರಾಂತ್ ಮಾಸ್ಸಿ (Vikrant Massey)  ಸದ್ಯ ಯಶಸ್ಸಿನ ಅಲೆಯಲ್ಲಿದ್ದಾರೆ. ‘ಪ್ರೀತಮ್ ಆ್ಯಂಡ್ ಪೆಡ್ರೋ’ ಸರಣಿ ಮೆಚ್ಚುಗೆ ಪಡೆದಿದೆ. ಇದರಲ್ಲಿ ವಿಲನ್ ಶೇಡ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೊಂದು ದೊಡ್ಡ ಸಿನಿಮಾಗೆ ಸಜ್ಜಾಗಿದ್ದಾರೆ. ಅವರ ನಟನೆಯ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ‘ವೈಟ್’ ಚಿತ್ರದ ಡಬ್ಬಿಂಗ್ ಕೆಲಸಗಳು ಈಗ ಅಧಿಕೃತವಾಗಿ ಪೂರ್ಣಗೊಂಡಿವೆ. ಚಿತ್ರದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಜಾಗತಿಕ ಆಧ್ಯಾತ್ಮ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಗುರು ಪೂರ್ಣಿಮೆಯ ದಿನದಂದೇ ‘ವೈಟ್’ ಚಿತ್ರದ ಡಬ್ಬಿಂಗ್ ಮುಕ್ತಾಯಗೊಂಡಿರುವುದು ವಿಶೇಷ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಮಹಾವೀರ್ ಜೈನ್ ಅವರು ಸಿನಿಮಾದ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಪ್ರಸ್ತುತ ಜಗತ್ತು ಯುದ್ಧ ಮತ್ತು ಸಂಘರ್ಷಗಳಿಗೆ ಪರಿಹಾರವನ್ನು ಹುಡುಕುತ್ತಿದೆ. ಇಂತಹ ಸಮಯದಲ್ಲಿ ‘ವೈಟ್’ ಸಿನಿಮಾ ಬಿಡುಗಡೆಯಾಗುತ್ತಿರುವುದು ಸೂಕ್ತವಾಗಿದೆ. ಈ ಚಿತ್ರವು ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸಲಿದೆ. ಇದು ಭಾರತದಿಂದ ಇಡೀ ವಿಶ್ವಕ್ಕೆ ಸಿಗಲಿರುವ ಒಂದು ಅಪೂರ್ವ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ಬಯೋಪಿಕ್ ಮಾಡಬೇಕು ಎಂದರೆ ಎಚ್ಚರಿಕೆ ಬೇಕು. ನಟನೆ ಪರಿಪೂರ್ಣತೆಯಿಂದ ಕೂಡಿರಬೇಕು. ಇದನ್ನು ವಿಕ್ರಾಂತ್ ಯಶಸ್ವಿಯಾಗಿ ನಟಿಸಿದ್ದಾರೆ ಎಂಬ ಭರವಸೆಯನ್ನು ನಿರ್ಮಾಪಕರು ಹೊರಹಾಕಿದ್ದಾರೆ. ಅವರ ಈ ಶಕ್ತಿಶಾಲಿ ಅಭಿನಯ ಮತ್ತು ಚಿತ್ರದ ಕಥೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ ಎಂದು ನಿರ್ಮಾಪಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿತ್ರದ ಹಿನ್ನೆಲೆ ಏನು?

ವಿಶ್ವದ ಅತ್ಯಂತ ದೀರ್ಘಾವಧಿಯ ಮತ್ತು ಭೀಕರ ಸಂಘರ್ಷವಾದ ಕೊಲಂಬಿಯಾದ ಆಂತರಿಕ ಯುದ್ಧದ ಕಥೆಯನ್ನು ಇದು ಒಳಗೊಂಡಿದೆ. ಭಾರತದ ಆಧ್ಯಾತ್ಮಿಕ ಗುರು ರವಿಶಂಕರ್ ಅವರು ತಮ್ಮ ಜ್ಞಾನದ ಮೂಲಕ ಈ ಯುದ್ಧವನ್ನು ಹೇಗೆ ಬಗೆಹರಿಸಿದರು ಎಂಬುದು ಚಿತ್ರದ ಪ್ರಮುಖ ಕಥಾವಸ್ತು.

ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ

ಅಂತರರಾಷ್ಟ್ರೀಯ ತಾರಾಗಣ:

ಈ ಚಿತ್ರದಲ್ಲಿ ಜಾಗತಿಕ ಮಟ್ಟದ ತಂತ್ರಜ್ಞರು ಮತ್ತು ಕಲಾವಿದರು ಕೆಲಸ ಮಾಡಿದ್ದಾರೆ. ‘ನಾರ್ಕೋಸ್’ ಸರಣಿ ಖ್ಯಾತಿಯ ಜುವಾನ್ ಕಾರ್ಲೋಸ್ ಗಿಲ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದಾರೆ. ಮೆಕ್ಸಿಕನ್ ನಟ ಡಾರಿಯೊ ಯಾಜ್ಬೆಕ್ ಬರ್ನಾಲ್ ಮತ್ತು ಪನಾಮದ ನಟ ಜೈಮ್ ನ್ಯೂಬಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಖ್ಯಾತ ಆ್ಯಡ್ ಫಿಲ್ಮ್ ಮೇಕರ್ ಮೊಂಟೂ ಬಸ್ಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್ ಆನಂದ್, ಪೀಸ್‌ಕ್ರಾಫ್ಟ್ ಪಿಕ್ಚರ್ಸ್ ಮತ್ತು ಮಹಾವೀರ್ ಜೈನ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ವರ್ಷದ ಕೊನೆಯ ಭಾಗದಲ್ಲಿ ‘ವೈಟ್’ ಸಿನಿಮಾವು ಹಲವು ಅಂತರರಾಷ್ಟ್ರೀಯ ಮತ್ತು ಭಾರತೀಯ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:59 am, Tue, 28 July 26

Source link

Video: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್ – Kannada News | Para Athletes Karnataka girl Shilpa Win Bronze in Shot Put at Commonwealth Games

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ವನಿತಾ ಪ್ಯಾರಾ ಅಥ್ಲೀಟ್‌ಗಳು ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಇಬ್ಬರು ಕ್ರೀಡಾಪಟುಗಳು ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಪ್ಯಾರಾ ಶಾಟ್‌ಪುಟ್ F57 ಸ್ಪರ್ಧೆಯಲ್ಲಿ ಶರ್ಮಿಳಾ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಕನ್ನಡತಿ ಕೆ. ಶಿಲ್ಪಾ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಅವರು 7.26 ಮೀಟರ್ ಗುಂಡು ಎಸೆದು ಪದಕ ಗೆದ್ದಿದ್ದಾರೆ. ಕೆ.ಆರ್. ನಗರದ ಕಂಚುಗಾರನಕೊಪ್ಪಲು ಎಂಬ ಪುಟ್ಟ ಗ್ರಾಮದಿಂದ ಬಂದಿರುವ ಶಿಲ್ಪಾ, ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಬಡ ರೈತ ಕುಟುಂಬದ ಹಿನ್ನೆಲೆಯ ಹೊರತಾಗಿಯೂ, ಅವರು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾರೆ. ಅವರ ಈ ವಿಜಯವು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಇಬ್ಬರು ಪ್ಯಾರಾ ಅಥ್ಲೀಟ್‌ಗಳ ಸಾಧನೆ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಟಿ20 ವಿಶ್ವಕಪ್​ಗೆ 14 ಆತಿಥ್ಯ ನಗರಗಳ ಪಟ್ಟಿ ರೆಡಿ! – Kannada News | T20 World Cup 2028: 14 Host Cities Shortlisted

2028ರ ಟಿ20 ವಿಶ್ವಕಪ್ ಟೂರ್ನಿಯ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ. ಇದರ ಮೊದಲ ಹೆಜ್ಜೆಯಾಗಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಒಟ್ಟು 14 ನಗರಗಳ ಪಟ್ಟಿಯನ್ನು ಸಿದ್ಧಪಡಿಸಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದೆ ಇಟ್ಟಿವೆ ಎಂದು ಪ್ರಮುಖ ಕ್ರೀಡಾ ಮಾಧ್ಯಮ ಸಂಸ್ಥೆ ‘ಕೋಡ್ ಸ್ಪೋರ್ಟ್ಸ್’ ವರದಿ ಮಾಡಿದೆ. ಆದರೆ, ಐಸಿಸಿ ಕೇವಲ 8 ರಿಂದ 10 ಕ್ರೀಡಾಂಗಣಗಳನ್ನು ಮಾತ್ರ ಅಂತಿಮವಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಇದರರ್ಥ ಬಿಡ್ ಸಲ್ಲಿಸಿರುವ ನಗರಗಳ ಪೈಕಿ 4 ರಿಂದ 6 ನಗರಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ರೇಸ್‌ನಿಂದ ಹೊರಬೀಳಲಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (CA) ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಜಂಟಿಯಾಗಿ ಈ ಮೆಗಾ ಟೂರ್ನಿಯನ್ನು 2028ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಆಯೋಜಿಸಲಿವೆ. ನ್ಯೂಝಿಲೆಂಡ್ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಸಹ-ಆತಿಥ್ಯ ನೀಡುತ್ತಿರುವುದು ವಿಶೇಷ.

  • ಆಸ್ಟ್ರೇಲಿಯಾದ ಆತಿಥ್ಯ: ಆಸ್ಟ್ರೇಲಿಯಾವು ಸುಮಾರು 5 ನಗರಗಳಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ. ಈ ಹಿಂದೆ 2022ರ ಟಿ20 ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಯಶಸ್ವಿಯಾಗಿ ನಡೆಸಿತ್ತು.
  • ನ್ಯೂಝಿಲೆಂಡ್‌ನ ಆತಿಥ್ಯ: ನ್ಯೂಝಿಲೆಂಡ್ ಕನಿಷ್ಠ 3 ಪ್ರಮುಖ ನಗರಗಳಾದ ಆಕ್ಲೆಂಡ್, ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗುತ್ತಿದೆ.

14 ಆತಿಥ್ಯ ನಗರಗಳ ಪಟ್ಟಿ:

  • ಆಸ್ಟ್ರೇಲಿಯಾ ನಗರಗಳು: ಮೆಲ್ಬೋರ್ನ್, ಸಿಡ್ನಿ, ಅಡಿಲೇಡ್, ಪರ್ತ್, ಬ್ರಿಸ್ಬೇನ್, ಹೋಬಾರ್ಟ್, ಗೀಲಾಂಗ್, ಕ್ಯಾನ್ಬೆರಾ ಮತ್ತು ಡಾರ್ವಿನ್ ನಗರಗಳು ಬಿಡ್ ಸಲ್ಲಿಸಿದೆ.
  • ನ್ಯೂಝಿಲೆಂಡ್‌ ನಗರಗಳು: ಆಕ್ಲೆಂಡ್, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ಹ್ಯಾಮಿಲ್ಟನ್ ಮತ್ತು ಡುನೆಡಿನ್ ನಗರಗಳು ಈ ಪಟ್ಟಿಯಲ್ಲಿವೆ.

ಫೈನಲ್ ಪಂದ್ಯಕ್ಕೆ ಪೈಪೋಟಿ:

ದಶಕಗಳಿಂದ ಆಸ್ಟ್ರೇಲಿಯಾದಲ್ಲಿ ನಡೆಯುವ ಎಲ್ಲಾ ಪ್ರಮುಖ ವಿಶ್ವಕಪ್ ಫೈನಲ್ ಪಂದ್ಯಗಳಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನ (MCG) ವೇದಿಕೆಯಾಗುತ್ತಿತ್ತು. ಆದರೆ ಈ ಬಾರಿ ಎಂಸಿಜಿಗೆ ಫೈನಲ್ ಪಂದ್ಯದ ಆತಿಥ್ಯ ಖಚಿತವಾಗಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಸೂಚಿಸಿದ್ದಾರೆ.

ಸೌತ್ ಆಸ್ಟ್ರೇಲಿಯಾ ಸರ್ಕಾರವು ಅಡಿಲೇಡ್ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಆರ್ಥಿಕ ಪ್ರಸ್ತಾಪದೊಂದಿಗೆ ಭರ್ಜರಿ ತಯಾರಿ ನಡೆಸುತ್ತಿದೆ. ಇದರೊಂದಿಗೆ ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಕ್ವೀನ್ಸ್‌ಲ್ಯಾಂಡ್ ರಾಜ್ಯಗಳು ಕೂಡ ಪ್ರಮುಖ ಪಂದ್ಯಗಳಿಗಾಗಿ ಪೈಪೋಟಿ ನಡೆಸುತ್ತಿವೆ.

ಹೊಸ ಮಾದರಿಯ ಟೂರ್ನಿ:

2028ರ ಟಿ20 ವಿಶ್ವಕಪ್ ಒಟ್ಟು 20 ತಂಡಗಳ ನಡುವೆ ನಡೆಯಲಿದ್ದು, ಒಟ್ಟು 55 ಪಂದ್ಯಗಳು ಜರುಗಲಿವೆ. ಐಸಿಸಿ ಈ ಬಾರಿ ಟೂರ್ನಿಯ ಮಾದರಿಯನ್ನು ಪರಿಷ್ಕರಿಸಿದ್ದು, ಐಪಿಎಲ್ ಶೈಲಿಯ ‘ಎಲಿಮಿನೇಟರ್’ ಪಂದ್ಯಗಳನ್ನು ಪರಿಚಯಿಸುತ್ತಿದೆ. ಕಮರ್ಷಿಯಲ್ ಮೌಲ್ಯ, ಪ್ರಸಾರಕರ ಬೇಡಿಕೆ, ಹವಾಮಾನ ಪರಿಸ್ಥಿತಿ ಮತ್ತು ಸರ್ಕಾರದ ಬೆಂಬಲವನ್ನು ಆಧರಿಸಿ ಐಸಿಸಿ ಶೀಘ್ರದಲ್ಲೇ ಅಂತಿಮ 8-10 ಕ್ರೀಡಾಂಗಣಗಳ ಪಟ್ಟಿಯನ್ನು ಪ್ರಕಟಿಸಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲೂ ಎಲಿಮಿನೇಟರ್ ರೌಂಡ್: ಸೆಮಿಫೈನಲ್ ಎಂಟ್ರಿ ಮತ್ತಷ್ಟು ರೋಚಕ!

ಒಟ್ಟಾರೆಯಾಗಿ, 2028ರ ಟಿ20 ವಿಶ್ವಕಪ್ ಆತಿಥ್ಯದ ರೇಸ್ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. 14 ನಗರಗಳ ಪೈಕಿ ಐಸಿಸಿಯ ಕಠಿಣ ಮಾನದಂಡಗಳನ್ನು ಪಾಸ್ ಮಾಡಿ, ಅಂತಿಮ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಆ 8-10 ಅದೃಷ್ಟದ ನಗರಗಳು ಯಾವುವು ಎಂಬುದನ್ನು ಕಾದು ನೋಡಬೇಕಿದೆ.

Source link

ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ – Kannada News | Divorced Woman Loses 1.7 Crore After Falling Victim to Facebook Friend’s Fraud Scheme

ಬೆಂಗಳೂರು, ಜುಲೈ 28: ಸೈಬರ್​​ ವಂಚನೆ (Cyber Fraud) ದಿನಕ್ಕೊಂದು ರೂಪ ಪಡೆಯುತ್ತಿರುವ ನಡುವೆ ವಿಚ್ಚೇದಿತ ಮಹಿಳೆಯರನ್ನ ಟಾರ್ಗೆಟ್ ಮಾಡಿ ದೋಖಾ ಎಸಗುತ್ತಿರುವ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಫೇಸ್‌ಬುಕ್ ಸ್ನೇಹಿತನ ಬಲೆಗೆ‌ಬಿದ್ದು ಯಶವಂತಪುರದ ಮಹಿಳೆಯೋರ್ವರು 1.7 ಕೋಟಿ ರೂಪಾಯಿ ಕಳೆದುಕೊಂಡಿದ್ದು, ಮೋಸ ಹೋಗಿರೋದು ಅರಿವಾಗುತ್ತಿದ್ದಂತೆ ಈ ಸಂಬಂಧ ಉತ್ತರ ವಿಭಾಗ ಸೈಬರ್ ಠಾಣೆಗೆ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.

ಗಿಫ್ಟ್​​ಗಳ ಫೋಟೋ ಹಂಚಿಕೊಂಡಿದ್ದ ಆರೋಪಿ

ಗಂಡನಿಂದ ದೂರುವಾಗಿದ್ದ ಯಶವಂತಪುರದ ಮಹಿಳೆಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೋರ್ವ ತಾನು ಯುಕೆ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪರಸ್ಪರ ಮೊಬೈಲ್​​ ನಂಬರ್​​ ಬದಲಾಯಿಸಿಕೊಂಡಿದ್ದರು. ಇದು ವಾಟ್ಸ್ಯಾಪ್​​ ಚಾಟ್​​ ಹಂತಕ್ಕೂ ಹೋಗಿತ್ತು. ಈ ನಡುವೆ ಯುಕೆಯಿಂದ ಚಿನ್ನ, ಡೈಮಂಡ್​​ ಸೀರೆ ಮತ್ತು ಗಿಫ್ಟ್​​ಗಳನ್ನು ಮಹಿಳೆಗೆ ಕಳುಹಿಸೋದಾಗಿ ಆರೋಪಿ ಆಸೆ ಹುಟ್ಟಿಸಿದ್ದ. ಉಡುಗೊರೆಗಳ ಫೋಟೋಗಳನ್ನು ಕೂಡ ಆಕೆಯ ಜೊತೆ ಹಂಚಿಕೊಂಡಿದ್ದ. ತನ್ನ ಮಾತಿನ ಬಗ್ಗೆ ಆಕೆಗೆ ನಂಬಿಕೆ ಬರುವಂತೆ ಮಾಡಲು ನಕಲಿ ಕೊರಿಯರ್​​ ರಸೀದಿಗಳನ್ನೂ ಕಳುಹಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಆನ್​​ಲೈನ್​​ ವಂಚನೆ; ಮೊಬೈಲ್, ಸಿಮ್​​ ಬದಲಿಸಿಯೂ 48.5 ಲಕ್ಷ ಕಳೆದುಕೊಂಡ ಖಾಸಗಿ ಸಂಸ್ಥೆಯ ಉದ್ಯೋಗಿ

ದೆಹಲಿಯಲ್ಲಿ ಕಸ್ಟಮ್ಸ್​​ನಲ್ಲಿ ಗಿಫ್ಟ್ ಗಳಿದ್ದು, ಅವುಗಳನ್ನು ರಿಲೀಸ್ ಮಾಡಲು ಹಣಪಾವತಿ ಮಾಡಬೇಕು. ಆದರೆ ತನ್ನ ಬಳಿ ಇಂಡಿಯನ್‌ ಕರೆನ್ಸಿ ಇಲ್ಲ. ಹೀಗಾಗಿ ಭಾರತಕ್ಕೆ ಬಂದ ಮೇಲೆ ಹಣ ನೀಡುತ್ತೇನೆ ಎಂದು ಮಹಿಳೆಗೆ ಆರೋಪಿ ತಿಳಿಸಿದ್ದ. ಆ ಬಳಿಕ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ಮಹಿಳೆಗೆ ದೂರವಾಣಿ ಕರೆ ಬಂದಿದ್ದು, ಆ ಸಂದರ್ಭ 40 ಲಕ್ಷ ರೂಪಾಯಿ ಹಣವನ್ನು RTGS ಮೂಲಕ ಮಹಿಳೆ ಪಾವತಿಸಿದ್ದಳು. ಬ್ಯಾಂಕ್ ವರ್ಗಾವಣೆ ಮಾತ್ರವಲ್ಲದೆ, ಖುದ್ದಾಗಿ ಬಂದು ವಂಚಕರು ನಗದು ಸಂಗ್ರಹಿಸಿದ್ದರು. ಪದೇ ಪದ ಈ ರೀತಿಯಲ್ಲಿ ಸೈಬರ್ ವಂಚಕರು ಹಣ ಸಂಗ್ರಹ ಮಾಡಲು ಆರಂಭಿಸಿದಾಗ ಅನುಮಾನಗೊಂಡು ಮಹಿಳೆ ಯುಕೆ ವ್ಯಕ್ತಿಗೆ ಕರೆ ಮಾಡಿದ್ದಾಳೆ. ಆ ವೇಳೆ ಆತನ ನಂಬರ್​​ ಸ್ವಿಚ್ ಆಫ್ ಬಂದಿದೆ. ತಾನು ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಈ ಸಂಬಂಧ ಮಹಿಳೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:43 am, Tue, 28 July 26

Source link

ಕೊಡಗಿನ ಮಾಲ್ದಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ: ದೇವಾಲಯದ ಆವರಣದಲ್ಲಿ ‘ಸಮಾಧಿ ಪೂಜೆ’? ಭಾರಿ ಪ್ರತಿಭಟನೆ – Kannada News | Tension in Kodagu After Tomb Like Structure Found Inside Temple Premises, Villagers Stage Massive Protest

ಗದ್ದಿಗೆಬೆಟ್ಟ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣImage Credit source: The New Indian Express

ಮಡಿಕೇರಿ, ಜುಲೈ 28: ಕೊಡಗು (Kodagu) ಜಿಲ್ಲೆಯ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮದಲ್ಲಿರುವ ಗದ್ದಿಗೆಬೆಟ್ಟ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾಧಿ ಮಾದರಿಯ ರಚನೆ (‘ಸಮಾಧಿ ಪೂಜೆ’ ಮಾಡಿದ ಕುರುಹು) ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ನೂರಾರು ಗ್ರಾಮಸ್ಥರು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳೊಂದಿಗೆ ಸೇರಿ ದೇವಾಲಯದ ಎದುರು ಪ್ರತಿಭಟನೆ ನಡೆಸಿ, ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ದೇವಾಲಯದ ಆವರಣದಲ್ಲಿ ‘ಸಮಾಧಿ ಪೂಜೆ’!

ದೇವಾಲಯದ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ಭಾನುವಾರ ಬೆಳಗ್ಗೆ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿದ ವೇಳೆ ಹೂಗಳಿಂದ ಅಲಂಕರಿಸಲಾದ ಸಮಾಧಿ ಮಾದರಿಯ ರಚನೆ ದೇವಾಲಯದ ಆವರಣದಲ್ಲಿ ಕಂಡುಬಂದಿದೆ. ಇದರಿಂದ ಮುಸ್ಲಿಂ ಸಂಪ್ರದಾಯದ ‘ಸಮಾಧಿ ಪೂಜೆ’ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಲಾಗಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಹಾಗೂ ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಆರೋಪಿಸಿದೆ. ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ತಿಳಿಸಿದ್ದು, ಅದರ ದೃಶ್ಯಾವಳಿಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.

ಭಾರಿ ಪ್ರತಿಭಟನೆ, ರಸ್ತೆ ತಡೆ

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ಸೋಮವಾರ ದೇವಾಲಯದ ಎದುರು ಭಾರಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ, ಆರೋಪಿಗಳನ್ನು ಇನ್ನೂ ಬಂಧಿಸದಿರುವುದಕ್ಕೆ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಘಟನೆ ನಡೆದ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದು, ಪ್ರತಿಭಟನಾಕಾರರು ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಧಿ ಮಾದರಿಯ ರಚನೆ ತೆರವುಗೊಳಿಸಿದ ಪ್ರತಿಭಟನಾಕಾರರು

ಪ್ರತಿಭಟನೆಯ ವೇಳೆ ಸ್ಥಳದಲ್ಲಿದ್ದ ಸಮಾಧಿ ಮಾದರಿಯ ರಚನೆಯನ್ನು ಪ್ರತಿಭಟನಾಕಾರರು ತೆರವುಗೊಳಿಸಿದರು. ಅದರೊಳಗೆ ಯಾವುದೇ ವಸ್ತು ಇರಲಿಲ್ಲ ಎಂದು ಅವರು ಹೇಳಿದ್ದು, ಹೂವುಗಳನ್ನು ತೆರವುಗೊಳಿಸಿದರು. ಇದೇ ವೇಳೆ, ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವಿಸಲಾಗಿದೆ ಎಂಬ ಆರೋಪವನ್ನೂ ಪ್ರತಿಭಟನಾಕಾರರು ಮಾಡಿದ್ದು, ಈ ಎಲ್ಲ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೊಲೀಸರಿಂದ ಕಠಿಣ ಕ್ರಮದ ಭರವಸೆ

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಅರಣ್ಯ ಇಲಾಖೆಯ ಆರ್‌ಎಫ್‌ಒ ನವೀನ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚುವ ಭರವಸೆ ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಬಿನ್ ದೇವಯ್ಯ, ರವಿ ಕುಶಾಲಪ್ಪ ಸೇರಿದಂತೆ ಆರ್‌ಎಸ್‌ಎಸ್ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:36 am, Tue, 28 July 26

Source link

Exit mobile version