20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

ಬೆಂಗಳೂರು, ಏಪ್ರಿಲ್ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರಚನೆಯ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಶಾಸಕರು ಈ ವಿಷಯವಾಗಿ ದೆಹಲಿಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಯಾವುದೇ ನಿರ್ದಿಷ್ಟ ನಾಯಕತ್ವ ಹೆಸರಿನಲ್ಲಲ್ಲದೆ, ಮೂರು, ನಾಲ್ಕು, ಐದು ಬಾರಿ ಶಾಸಕರಾಗಿರುವ ಅನುಭವಿಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಶಾಸಕರ ದೆಹಲಿ ಪ್ರವಾಸದ ಬಗ್ಗೆ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸಚಿವ ಸಂಪುಟದ ಅವಧಿ ಮೂರು ವರ್ಷಗಳನ್ನು ಪೂರೈಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ರಾಜಕೀಯ ಏರುಪೇರುಗಳನ್ನು ಗಮನದಲ್ಲಿಟ್ಟುಕೊಂಡು ಇತರರಿಗೂ ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಮನವಿಯನ್ನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಮಂಡಿಸಲಾಗುವುದು ಎಂದು ಜಯಚಂದ್ರ ತಿಳಿಸಿದ್ದಾರೆ.

ಸಚಿವ ಸಂಪುಟ ಪುನರಚನೆಗೆ ರಾಜಕೀಯ ಲೆಕ್ಕಾಚಾರಗಳು ಪ್ರಮುಖ ಕಾರಣವಾಗಿದ್ದು, 2028ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು ಮುಖ್ಯ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ. ವರಿಷ್ಠರ ನಿರ್ಧಾರವೇ ಅಂತಿಮವಾಗಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಈ ಭೇಟಿಯ ವಿಷಯವನ್ನು ತರಲಾಗಿದ್ದು, ಅವರು ಮುಕ್ತ ಮನಸ್ಸಿನಿಂದ ಸಮ್ಮತಿಸಿದ್ದಾರೆ ಎಂದು ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ

ಗಾಯಕಿ ಮಂಗ್ಲಿ (Mangli) ಅವರು ತೆಲುಗಿನವರಾದರೂ ಕನ್ನಡದಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಅವರು ಕನ್ನಡದಲ್ಲೂ ಹಾಡು ಹೇಳಿದ್ದಾರೆ. ಅವರು ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರ ಮೇಲೆ 10 ಕೋಟಿ ರೂಪಾಯಿ ಮೋಸದ ಕೇಸ್ ದಾಖಲಾಗಿದೆ. ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಮಂಗ್ಲಿ ಹಾಗೂ ಅವರ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ. ಮಂಗ್ಲಿ ತಮಗೆ ಮೋಸ ಮಾಡಿದ್ದಾರೆ ಮತ್ತು ಅವರಿಂದ ಅಪಾಯವಿದೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಮಂಗ್ಲಿ, ಅವರ ಸಹೋದರ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 351 (2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಂಗ್ಲಿ ಮೈಕ್ರೋ ಫೈನಾನ್ಸ್ ಮಾಡುತ್ತಿದ್ದರು ಎನ್ನಲಾಗಿದೆ. ಮಂಗ್ಲಿ, ಅವರ ಸಹೋದರ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಸುಮಾರು 100 ಜನರಿಂದ ಭಾರಿ ಹಣವನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಸೆ ತೋರಿಲಾಗಿತ್ತು. ಇದನ್ನು ನಂಬಿ ಅನೇಕರು ಹಣ ನೀಡಿದ್ದರು. ಮಂಗ್ಲಿ ಕಡೆಯಿಂದ ಸುಮಾರು 10 ಕೋಟಿ ರೂಪಾಯಿ ಮೋಸ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ನಿಗದಪಡಿಸಿದ ಸಮಯ ಕಳೆದರೂ ಲಾಭ ನೀಡಿಲ್ಲ, ಅಸಲನ್ನು ಕೂಡ ಕೊಟ್ಟಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಸಂತ್ರಸ್ತರು ವಕೀಲ ಸುಬ್ಬರಾವ್ ಅವರ ಸಂಪರ್ಕಿಸಿ ಸಹಾಯ ಕೇಳಿದ್ದರು. ಈ ವೇಳೆ ಹಣ ಕೊಡುವಂತೆ ಕೇಳಿದಾಗ ಮಂಗ್ಲಿ ಮತ್ತು ಆಕೆಯ ಸಹೋದರ ಶಿವ ವಕೀಲರಿಗೆ ಬೆದರಿಕೆ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು

ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿ ತಂಡವು ಕರಾಚಿ ಕಿಂಗ್ಸ್ ವಿರುದ್ಧ 159 ರನ್‌ಗಳ ಬೃಹತ್ ಅಂತರದಿಂದ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ. ಇದು ರನ್‌ಗಳ ಅಂತರದ ಆಧಾರದ ಮೇಲೆ PSL ಇತಿಹಾಸದಲ್ಲೇ ದಾಖಲಾದ ಅತಿದೊಡ್ಡ ವಿಜಯವಾಗಿದೆ.

ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪೇಶಾವರ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 246 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕರಾಚಿ ಕಿಂಗ್ಸ್ ತಂಡವು 16.1 ಓವರ್​ಗಳಲ್ಲಿ 87 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪೇಶಾವರ್ ಝಲ್ಮಿ ತಂಡವು ಬರೋಬ್ಬರಿ 159 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಭರ್ಜರಿ ಗೆಲುವಿನೊಂದಿಗೆ ಪೇಶಾವರ್ ಝಲ್ಮಿ ತಂಡವು ತನ್ನದೇ ದಾಖಲೆ ಮುರಿದಿರುವುದು ವಿಶೇಷ. ಅಂದರೆ ಪಿಎಸ್​ಎಲ್ 2025 ರಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಪೇಶಾವರ್ ಝಲ್ಮಿ 120 ರನ್‌ಗಳ ಅಂತರದಿಂದ ಗೆದ್ದಿದ್ದು ಈವರೆಗಿನ ಶ್ರೇಷ್ಠ ಗೆಲುವಾಗಿತ್ತು. ಇದೀಗ ಬರೋಬ್ಬರಿ 159 ರನ್​ಗಳ ಅಮೋಘ ಗೆಲುವಿನೊಂದಿಗೆ ಪೇಶಾವರ್ ಝಲ್ಮಿ ಹೊಸ ಇತಿಹಾಸ ನಿರ್ಮಿಸಿದೆ.

ಈ ಮೂಲಕ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ 150 ರನ್​ಗಳ ಅಂತರದಿಂದ ಗೆದ್ದ ಮೊದಲ ತಂಡವೆಂಬ ಭರ್ಜರಿ ದಾಖಲೆಯೊಂದನ್ನು ಪೇಶಾವರ್ ಝಲ್ಮಿ ತಂಡ ತನ್ನದಾಗಿಸಿಕೊಂಡಿದೆ.

 

 

Source link

‘ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!’: ಸ್ಫೋಟಕ ಮಾಹಿತಿ ಬಿಚ್ಚಟ್ಟ ಫೈರೋಜ್ ತಾಯಿ!

ಧಾರವಾಡ, ಏಪ್ರಿಲ್ 11: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್​ನನ್ನು ಆತನ ಮನೆಗೇ ನುಗ್ಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇನ್ನು 15 ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮನೆಮಾಡಿದೆ. ಈ ಬಗ್ಗೆ ಫೈರೋಜ್ ತಾಯಿ ಮಾತನಾಡಿದ್ದು, ಮನೆಗೆ ಬಂದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಮೃತನ ತಾಯಿ ಸೇರಿದಂತೆ ಇನ್ನೊಬ್ಬ ಯುವತಿಯ ಮೇಲೂ ಹಲ್ಲೆ ಮಾಡಿರುವ ಆರೋಪಿಗಳು ಎರಡು ಮೊಬೈಲ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಫೈರೋಜ್​ನ ತಾಯಿ ಹೇಳಿದ್ದಾರೆ. ಅವನ ಮತ್ತು ಅವನ ಸ್ನೇಹಿತರ ನಡುವೆ ಯಾವ ಕಾರಣಕ್ಕೆ ವೈಷಮ್ಯವಿತ್ತು ಎಂದು ನಮಗೆ ತಿಳಿದಿಲ್ಲವೆಂದ ಆಕೆ, ಅವನ ಸ್ನೇಹಿತರು ಸರಿಯಿಲ್ಲ ಎಂದು ತಿಳಿಸಿದ್ದಾರೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

IPL 2026: ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸುತ್ತಿದ್ದಾರೆ. ಏಪ್ರಿಲ್ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವೈಭವ್‌ಗೆ, ಪಂದ್ಯದ ನಂತರ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ (Virat Kohli) ಸ್ಮರಣೀಯ ಉಡುಗೊರೆಯೊಂದನ್ನು ನೀಡಿದ್ದಾರೆ.

ಕೊಹ್ಲಿಯಿಂದ ‘ಸ್ಪೆಷಲ್’ ಸಂದೇಶ:

ಪಂದ್ಯ ಮುಗಿದ ನಂತರ ವೈಭವ್ ಸೂರ್ಯವಂಶಿ ಅವರನ್ನು ಭೇಟಿಯಾದ ವಿರಾಟ್ ಕೊಹ್ಲಿ, ಅವರ ಅದ್ಭುತ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ. ಈ ವೇಳೆ ವೈಭವ್ ಧರಿಸಿದ್ದ ರಾಜಸ್ಥಾನ್ ರಾಯಲ್ಸ್ ಟೋಪಿಯ ಮೇಲೆ ಕೊಹ್ಲಿ ಸಹಿ ಹಾಕಿ, “ಡಿಯರ್ ವೈಭವ್, ವೆಲ್ ಡನ್” (Dear Vaibhav, Well Done) ಎಂದು ಬರೆದು ಶುಭ ಹಾರೈಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

RR vs RCB ಪಂದ್ಯದ ಮುಖ್ಯಾಂಶಗಳು:

ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಕಲೆಹಾಕಿದ್ದು 201 ರನ್​ಗಳನ್ನು.

ಈ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಕೇವಲ 26 ಎಸೆತಗಳನ್ನು ಎದುರಿಸಿದ ವೈಭವ್ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳನ್ನು ಒಳಗೊಂಡಂತೆ 78 ರನ್ ಬಾರಿಸಿದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.

ಈ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 202 ರನ್‌ಗಳ ಗುರಿಯನ್ನು 12 ಎಸೆತಗಳು ಬಾಕಿ ಇರುವಂತೆಯೇ ತಲುಪಿತು. ಅಲ್ಲದೆ ಈ ಮ್ಯಾಚ್​ನಲ್ಲಿ ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ  ವೈಭವ್ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: IPL 2026: ಐಪಿಎಲ್​ಗೆ ಸೌತ್ ಆಫ್ರಿಕಾ ಆಲ್​ ರೌಂಡರ್ ಎಂಟ್ರಿ..!

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವೈಭವ್:

ಈ ಅಮೋಘ ಇನ್ನಿಂಗ್ಸ್‌ನೊಂದಿಗೆ ವೈಭವ್ ಸೂರ್ಯವಂಶಿ ಪ್ರಸ್ತುತ ಐಪಿಎಲ್ 2026ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈವರೆಗೆ ಆಡಿದ 4 ಪಂದ್ಯಗಳಿಂದ ಒಟ್ಟು 200 ರನ್ ಗಳಿಸಿರುವ ಅವರು ಸದ್ಯ ‘ಆರೆಂಜ್ ಕ್ಯಾಪ್’ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಈ ಬಾರಿ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ಗೆದ್ದರೆ, ಐಪಿಎಲ್ ಇತಿಹಾಸದಲ್ಲೇ ಆರೆಂಜ್ ಕ್ಯಾಪ್ ಪಡೆದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

 

Source link

ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು

ತುಮಕೂರು, ಏಪ್ರಿಲ್ 11: ನಿವೃತ್ತಿ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ ಪ್ರಕರಣ ತುಮಕೂರು (Tumkur) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಅವರನ್ನು ಅಮಾನತು ಮಾಡಲಾಗಿದೆ.

ಆಡಿಟ್ ವೇಳೆ ಸತ್ಯ ಬಯಲು

ಪಂಚಾಯಿತಿ ವ್ಯಾಪ್ತಿಯ ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಮೊದಲಿಗೆ ಮೂಡಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಮಾಹಿತಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರಿಗೆ ತಲುಪಿದ ನಂತರ ಸಮಗ್ರ ಪರಿಶೀಲನೆ ಕೈಗೊಳ್ಳಲಾಯಿತು.

ತನಿಖೆಯಲ್ಲಿ ನೌಕರರ ರೆಸಿಪಿಯಂಟ್ ಐಡಿ ಮತ್ತು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಟ್ಟು 21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

5 ವರ್ಷಗಳಿಂದ ಅವ್ಯವಹಾರ

ಕಳೆದ ಐದು ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂಪಾಯಿ ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ.

ಈ ಪ್ರಕರಣದಲ್ಲಿ ಇತರ ಅಧಿಕಾರಿಗಳ ಭಾಗವಿರುವ ಸಾಧ್ಯತೆಯೂ ಇದ್ದು, ಅದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Wedding Invitations: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಲೇಬಾರದು ಯಾಕೆ ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗೆ ವಿಶೇಷ ಮಹತ್ವವಿದೆ. ಅದು ಕೇವಲ ಆಮಂತ್ರಣ ಪತ್ರವಲ್ಲ, ಬದಲಾಗಿ ಹೊಸ ಜೀವನದ ಆರಂಭವನ್ನು ಘೋಷಿಸುವ ಮೊದಲ ಅಧಿಕೃತ ಸಂದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳು ಕೇವಲ ಮಾಹಿತಿಯ ಮೂಲವಾಗಿ ಉಳಿದಿಲ್ಲ, ಅವು ಒಂದು ಶೈಲಿಯ ಸಂಕೇತವಾಗಿವೆ. ಡಿಜಿಟಲ್ ಯುಗದಲ್ಲಿ ಅನೇಕರು ತಮ್ಮ ಮದುವೆಯ ಕಾರ್ಡ್‌ಗಳಲ್ಲಿ ವಧು-ವರರ ಸುಂದರ ಫೋಟೋಗಳನ್ನು ಮುದ್ರಿಸುವುದು ಈಗಿನ ಟ್ರೆಂಡ್. ಆದರೆ, ಈ ರೀತಿ ಮಾಡುವುದು ವಾಸ್ತು ಶಾಸ್ತ್ರ ಮತ್ತು ಹಿರಿಯರ ನಂಬಿಕೆಯ ಪ್ರಕಾರ ಎಷ್ಟು ಸರಿ? ಆಮಂತ್ರಣ ಪತ್ರಿಕೆಯಲ್ಲಿ ಫೋಟೋ ಬಳಸಬಾರದು ಎಂದು ಯಾಕೆ ಹೇಳಲಾಗುತ್ತದೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ.

ದೃಷ್ಟಿ ದೋಷದ ಆತಂಕ (Evil Eye):

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, “ಕಣ್ಣಿನ ದೃಷ್ಟಿ” ಅಥವಾ ದೃಷ್ಟಿ ದೋಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮದುವೆಯ ಕಾರ್ಡ್‌ಗಳನ್ನು ನೂರಾರು ಜನರಿಗೆ ಹಂಚಲಾಗುತ್ತದೆ. ಈ ಕಾರ್ಡ್‌ಗಳು ಎಲ್ಲರ ಕೈಗೂ ಹೋಗುತ್ತವೆ. ವಧು-ವರರ ಫೋಟೋವನ್ನು ಎಲ್ಲರೂ ಒಂದೇ ರೀತಿಯ ಪ್ರೀತಿಯಿಂದ ನೋಡುವುದಿಲ್ಲ. ಕೆಲವರ ನಕಾರಾತ್ಮಕ ಆಲೋಚನೆಗಳು ಅಥವಾ ಅಸೂಯೆಯ ದೃಷ್ಟಿ ಹೊಸ ಜೋಡಿಯ ಮೇಲೆ ಬೀಳಬಹುದು, ಇದು ಮದುವೆಯ ಕಾರ್ಯಕ್ರಮ ಅಥವಾ ಅವರ ಭವಿಷ್ಯದ ಜೀವನದ ಮೇಲೆ ಪ್ರಭಾವ ಬೀರಬಹುದು ಎಂಬ ನಂಬಿಕೆ ಇದೆ.

ಕಾರ್ಡ್‌ಗಳ ವಿಲೇವಾರಿ:

ಮದುವೆ ಮುಗಿದ ನಂತರ ಆಮಂತ್ರಣ ಪತ್ರಿಕೆಗಳನ್ನು ಯಾರೂ ಜೋಪಾನವಾಗಿ ಇಟ್ಟುಕೊಳ್ಳುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆ ಕಾರ್ಡ್‌ಗಳು ಕಸದ ಬುಟ್ಟಿಗೆ ಸೇರುತ್ತವೆ ಅಥವಾ ಕಾಲ ಕೆಳಗೆ ಬೀಳುತ್ತವೆ. ವಧು-ವರರ ಫೋಟೋ ಇರುವ ಪತ್ರಿಕೆಗಳು ಈ ರೀತಿ ಕಸಕ್ಕೆ ಬಿದ್ದಾಗ ಅಥವಾ ಕಾಲಿನ ತುಳಿತಕ್ಕೆ ಒಳಗಾದಾಗ, ಅದು ಆ ವ್ಯಕ್ತಿಗಳಿಗೆ ಮಾಡುವ ಅಪಚಾರ ಎಂದು ಪರಿಗಣಿಸಲಾಗುತ್ತದೆ. ಇದು ದಂಪತಿಗಳ ಮೇಲೆ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು ಎನ್ನಲಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವಾಸ್ತು ಶಾಸ್ತ್ರದ ಮಿತಿಗಳು:

ವಾಸ್ತು ಶಾಸ್ತ್ರವು ಮಂಗಳ ಕಾರ್ಯದ ಆಮಂತ್ರಣವು ಸರಳ ಮತ್ತು ಪವಿತ್ರವಾಗಿರಬೇಕು ಎಂದು ಹೇಳುತ್ತದೆ. ಮದುವೆಯ ಪತ್ರಿಕೆಯಲ್ಲಿ ಗಣೇಶ ಅಥವಾ ಕುಲದೈವದ ಚಿತ್ರವಿರುವುದು ಶುಭದ ಸಂಕೇತ. ಆದರೆ ಜೀವಂತ ವ್ಯಕ್ತಿಗಳ (ವಧು-ವರರ) ಚಿತ್ರಗಳನ್ನು ಮುದ್ರಿಸುವುದು ವಾಸ್ತು ಪ್ರಕಾರ ಆಮಂತ್ರಣದ ಗಾಂಭೀರ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಅನಗತ್ಯ ದೋಷಗಳಿಗೆ ಆಹ್ವಾನ ನೀಡಿದಂತೆ ಎಂಬುದು ತಜ್ಞರ ಅಭಿಪ್ರಾಯ.

ಆಧುನಿಕ ಸವಾಲುಗಳು:

ಇಂದಿನ ಕಾಲದಲ್ಲಿ ಮದುವೆ ಕಾರ್ಡ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇದು ವೈಯಕ್ತಿಕ ಗೌಪ್ಯತೆಗೂ (Privacy) ಧಕ್ಕೆ ತರಬಹುದು. ಅಪರಿಚಿತರ ಕೈಗೆ ನಿಮ್ಮ ಫೋಟೋಗಳು ಸಿಗುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಷ್ಟೊಂದು ಸಮಂಜಸವಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

ಬೆಳಗಾವಿ, ಏಪ್ರಿಲ್ 11: ಬೆಳಗಾವಿಯ (Belagavi) ನಗರಾಭಿವೃದ್ಧಿ ಕೋಶದ (DUDC) ಎಇಇ ಅಜಯಸಿಂಗ್ ರಜಪೂತ್ (Ajay Singh Rajput) ಮೇಲೆ ನಡೆದ ಲೋಕಾಯುಕ್ತ ದಾಳಿಯ (Lokayukta Raid) ತನಿಖೆ ಮುಂದುವರಿದಂತೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿರುವ ಈ ಪ್ರಕರಣದಲ್ಲಿ, ಒಬ್ಬ ಸಾಮಾನ್ಯ ದಿನಗೂಲಿ ನೌಕರ ಕೋಟಿ ಕುಬೇರನಾಗಿ ಬೆಳೆದ ಹಾದಿ ಸಿನಿಮೀಯವಾಗಿದೆ.

ದಿನಗೂಲಿ ಟು ಕೋಟಿ ಕುಬೇರ!

ಅಜಯಸಿಂಗ್ ರಜಪೂತ್ ಅವರ ವೃತ್ತಿಜೀವನ ಆರಂಭವಾಗಿದ್ದು 1992ರಲ್ಲಿ ಒಬ್ಬ ಸಾಮಾನ್ಯ ದಿನಗೂಲಿ ನೌಕರನಾಗಿ. 1992ರಿಂದ 2006ರವರೆಗೆ ಸತತ 14 ವರ್ಷಗಳ ಕಾಲ ಇವರು ದಿನಗೂಲಿ ನೌಕರನಾಗಿಯೇ ಕಾರ್ಯನಿರ್ವಹಿಸಿದ್ದರು. ಆದರೆ, 2006ರಲ್ಲಿ ಪೌರಾಡಳಿತ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾಯಂ ನೇಮಕಾತಿ ಪಡೆದ ನಂತರ ಇವರ ಅದೃಷ್ಟದ ಬಾಗಿಲು ತೆರೆಯಿತು. ಐದು ವರ್ಷಗಳಲ್ಲೇ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಬಡ್ತಿ ಪಡೆದ ಇವರು, ನಗರಾಭಿವೃದ್ಧಿ ಕೋಶಕ್ಕೆ ಎಇಇ ಆಗಿ ವರ್ಗಾವಣೆಗೊಂಡ ನಂತರ ಅಕ್ರಮ ಆಸ್ತಿಯ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.

ವಜ್ರದ ಹಾರ, ಕೆಜಿಗಟ್ಟಲೆ ಚಿನ್ನದ ಗಟ್ಟಿ!

ಅಜಯಸಿಂಗ್ ಅವರು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಬ್ಯಾಂಕ್ ಲಾಕರ್‌ಗಳಲ್ಲೂ ಸಂಪತ್ತನ್ನು ಅಡಗಿಸಿಟ್ಟಿದ್ದರು. ಹೆಂಡತಿ ಮತ್ತು ಅತ್ತೆಯ ಹೆಸರಿನಲ್ಲಿರುವ ಎಸ್‌ಬಿಐ ಲಾಕರ್‌ಗಳನ್ನು ಅಧಿಕಾರಿಗಳು ತೆರೆದಾಗ ಕಣ್ಣು ಕೋರೈಸುವ ಆಭರಣಗಳು ಪತ್ತೆಯಾಗಿವೆ.

  • ವಜ್ರದ ನಕ್ಲೇಸ್: 25 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್ ಹಾಗೂ ವಜ್ರದ ಹರಳಿನ ಉಂಗುರಗಳು.
  • ಚಿನ್ನದ ರಾಶಿ: 5.96 ಕೆಜಿ ಚಿನ್ನ. ಇದರಲ್ಲಿ ಒಂದೂವರೆ ಕೆಜಿಯಷ್ಟು ಹಾಲ್‌ಮಾರ್ಕ್ ಚಿನ್ನದ ಗಟ್ಟಿಗಳು ಸೇರಿವೆ.
  • ಬೆಳ್ಳಿಯ ಸಂಪತ್ತು: ಸುಮಾರು 5 ಕೆಜಿ ಬೆಳ್ಳಿಯ ಆಭರಣ ಮತ್ತು ಗಟ್ಟಿಗಳು.
  • ಸ್ಥಿರಾಸ್ತಿ: ಹುಬ್ಬಳ್ಳಿ, ಸವದತ್ತಿ, ಹುಕ್ಕೇರಿ, ಗೋಕಾಕ್ ಮತ್ತು ಬೆಳಗಾವಿಯಲ್ಲಿ ಬರೋಬ್ಬರಿ 18 ನಿವೇಶನಗಳು.
  • ನಗದು: ಬ್ಯಾಂಕ್‌ಗಳಲ್ಲಿ 3.12 ಕೋಟಿ ರೂ. ಮೊತ್ತದ ಫಿಕ್ಸೆಡ್ ಡೆಪಾಸಿಟ್.

ಇದನ್ನೂ ಓದಿ: 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಸುಳ್ಳು ಆದಾಯದ ಮೂಲಗಳನ್ನು ತೋರಿಸಿ ಇಷ್ಟೊಂದು ಬೃಹತ್ ಪ್ರಮಾಣದ ಆಸ್ತಿ ಸಂಪಾದಿಸಿರುವ ಅಜಯಸಿಂಗ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆಂಜನೇಯ ನಗರದ ಮನೆಯಲ್ಲೇ ಅರ್ಧ ಕೆಜಿ ಚಿನ್ನ ಪತ್ತೆಯಾಗಿದ್ದರೆ, ವಿವಿಧ ಬ್ಯಾಂಕ್‌ಗಳ ಲಾಕರ್‌ನಲ್ಲಿ ಕೆಜಿಗಟ್ಟಲೆ ಚಿನ್ನದ ಬಿಸ್ಕೇಟ್‌ಗಳು ದೊರೆತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜನ ನಾಯಗನ್’ ಈ ಸ್ಥಿತಿಗೆ ಕಾರಣ ಯಾರು? ಸಿಕ್ಕಿತು ಉತ್ತರ

ಇಷ್ಟು ದಿನ ರಿಲೀಸ್ ಆದ ಸಿನಿಮಾಗಳಿಗೆ ಪೈರಸಿ ಆಗುತ್ತಿದೆ ಎಂದು ನಿರ್ಮಾಪಕರು ಒದ್ದಾಡುತ್ತಿದ್ದರು. ಆದರೆ, ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಗನ್’ ಚಿತ್ರಕ್ಕೆ ರಿಲೀಸ್​​ಗೂ ಮೊದಲೇ ಪೈರಸಿ ಕಾಟ ತಟ್ಟಿದೆ. ಈ ಸಿನಿಮಾದ ಥಿಯೇಟರ್​ ರಿಲೀಸ್ ನಾನಾ ಕಾರಣಗಳಿಂದ ವಿಳಂಬ ಆಗುತ್ತಿದೆ. ಈ ಮಧ್ಯೆ ‘ಜನ ನಾಯಗನ್’ ಸಿನಿಮಾದ ದೃಶ್ಯಗಳು ಲೀಕ್ ಆಗಿರುವುದು ಕೇವಲ ತಂಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಕೋಪಕ್ಕೆ ಕಾರಣ ಆಗಿದೆ. ಎಲ್ಲರೂ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಕಮಲ್ ಹಾಸನ್ ಅವರು ಆರೋಪಿಸಿದ್ದಾರೆ.

‘ಜನ ನಾಯಗನ್’ ಸಿನಿಮಾ ಜನವರಿಯಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿನಿಮಾದಲ್ಲಿನ ಕೆಲ ವಿಷಯಗಳಿಗೆ ಅಪಸ್ವರ ತೆಗೆಯಿತು. ಇದನ್ನು ಮುಂಬೈನ ಪುನರ್ ಪರಿಶೀಲನಾ ಸಮಿತಿಗೆ ಸಲ್ಲಿಕೆ ಮಾಡುವ ಸೂಚನೆ ನೀಡಿತು. ಈ ವೇಳೆ ತಂಡ ಕೋರ್ಟ್ ಮೆಟ್ಟಿಲೇರಿತು. ಒಂದು ತಿಂಗಳಾದರೂ ಕೋರ್ಟ್​​ನಲ್ಲಿ ಪ್ರಕರಣ ಇತ್ಯರ್ಥ ಆಗದ ಕಾರಣ ಸಿನಿಮಾ ತಂಡದವರು ಪ್ರಕರಣ ಹಿಂಪಡೆದು ಪುನರ್ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಲ್ಲಿ ಸಿನಿಮಾನ ಇನ್ನಷ್ಟೇ ವೀಕ್ಷಿಸಬೇಕಿದೆ.

ಹೀಗಿರುವಾಗಲೇ ‘ಜನ ನಾಯಗನ್’ ದೃಶ್ಯ ಲೀಕ್ ಆಗಿದೆ. ಇದನ್ನು ಕಮಲ್ ಹಾಸನ್ ಖಂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

‘ಜನ ನಾಯಗನ್ ಅಚಾನಕ್ಕಾಗಿ ಲೀಕ್ ಆಗಿದ್ದಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯದಿಂದ ಆಗಿದೆ. ಒಂದೊಮ್ಮೆ ಎಲ್ಲಾ ಪ್ರಕ್ರಿಯೆಗಳು (ಸೆನ್ಸಾರ್ ಪ್ರಕ್ರಿಯೆ) ನಡೆದರೆ ನಾವು ಇಂದು ಇಲ್ಲಿ ಇರುತ್ತಿರಲಿಲ್ಲ. ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆಗೆ ಅತಿಯಾದ ವಿಳಂಬ ಮಾಡಿದ್ದು ಇದಕ್ಕೆಲ್ಲ ಕಾರಣ. ಕಾನೂನು ತನ್ನ ಕೆಲಸ ನಿಲ್ಲಿಸಿದಾಗ ಕಾನೂನುಬಾಹಿರ ಚಟುವಟಿಕೆಗಳು ಮೇಲುಗೈ ಸಾಧಿಸುತ್ತವೆ’ ಎಂದಿದ್ದಾರೆ ಕಮಲ್ ಹಾಸನ್. ಈ ಮೂಲಕ ಸೆನ್ಸಾರ್ ಮಂಡಳಿ ವಿರುದ್ಧ ಗುಡುಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಿಕ್ತು ಗ್ರೀನ್ ಸಿಗ್ನಲ್!

ಬೆಂಗಳೂರು, ಏಪ್ರಿಲ್ 11: ದೇಶದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಸಂಪರ್ಕಕ್ಕೆ ಮಹತ್ವದ ಉತ್ತೇಜನ ದೊರೆತಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು (Vande Bharath Sleeper train) ಸೇವೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಹೊಸ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಚಲಿಸಲಿದೆ.

ಪಿ ಸಿ ಮೋಹನ್ ನಿರಂತರ ಪ್ರಯತ್ನ

ಈ ಹಿಂದೆ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರ ನಿರಂತರ ಪ್ರಯತ್ನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 2 ರಂದು ನೈಋತ್ಯ ರೈಲ್ವೆ (SWR) ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯ ಸಂದರ್ಭದಲ್ಲಿ, ಮೋಹನ್ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಲು ಒತ್ತಾಯಿಸಿದ್ದರು. ಅಲ್ಲದೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ಅನ್ನು ಮೂಲ ಅಥವಾ ಮುಕ್ತಾಯ ನಿಲ್ದಾಣವೆಂದು ಸೂಚಿಸಿದ್ದರು.

ಹೊಸ ರೈಲಿನಿಂದ ಪ್ರಯಾಣದ ಸಮಯ ಕಡಿಮೆಯಾಗುವ ನಿರೀಕ್ಷೆ

ಪ್ರಸ್ತುತ ಈ ಮಾರ್ಗದಲ್ಲಿ ಡಜನ್‌ಗಟ್ಟಲೆ ರೈಲುಗಳು ಸಂಚರಿಸುತ್ತಿದ್ದರೂ, ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ನೇರ ಸಂಪರ್ಕ ಕಲ್ಪಿಸುತ್ತಿದೆ. ಸುಮಾರು 1,136 ಕಿಮೀ ದೂರವನ್ನು ಈ ರೈಲು 23ರಿಂದ 24 ಗಂಟೆಗಳ ಅವಧಿಯಲ್ಲಿ ಸಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯದಿಂದ ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ವೇಗದ ಸೇವೆ ಲಭ್ಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Exit mobile version