ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ‘ಬ್ಯಾಲೆಟ್ ಪೇಪರ್ʼ ಬಳಕೆ: ಸಂಪುಟ ನಿರ್ಧಾರ – Kannada News | Karnataka Cabinet Decides Used ballot papers In Local Body Polls instead of evm

ಬೆಂಗಳೂರು, (ಫೆಬ್ರವರಿ, 05): ಕರ್ನಾಟಕದ  (Karnataka) ಬಹುತೇಕ ಗ್ರಾಮ ಪಂಚಾಯಿತಿಗಳ   ಅಧಿಕಾರಾವಧಿ ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯಲಿದೆ. ಹೀಗಾಗಿ ಚುನಾವಣೆ ನಡೆಯುವವರೆಗೂ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಆದೇಶ ಹೊರಡಿಸಿದೆ. ಮತ್ತೊಂದೆಡೆ  2026ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ (Gram Panchayt Elections) ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪೂರ್ವಸಿದ್ಧತೆಗೆ ನಿರ್ದೇಶನ ನೀಡಲಾಗಿದೆ. ಈ ಎಲ್ಲಾ ಬೆಳವಣಿಗಗಳ ನಡುವೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಇಂದಿನ ಸಚಿವ ಸಂಪುಟ  ಸಭೆಯಲ್ಲಿ ನಿರ್ಧರಿಸಲಾಗಿದೆ.

ಇಂದು (ಫೆಬ್ರವರಿ 05) ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2026ಕ್ಕೆ ಅನುಮೋದನೆ ದೊರೆತ್ತಿದೆ. ಇದರೊಂದಿಗೆ ಸ್ಥಳೀಯ ಸಂಸ್ಥೆ ಅಂದ್ರೆ ಜಿಲ್ಲಾ, ತಾಲೂಕು, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಗೆ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೂಹುರ್ತ ಫಿಕ್ಸ್: ಗರಿಗೆದರಿದ ಹಳ್ಳಿ ರಾಜಕೀಯ

ಮತಗಳ್ಳತನದ ಪ್ರಕರಣಗಳು ಬಯಲಾದ ಬಳಿಕ ಜನಸಾಮಾನ್ಯರಲ್ಲಿ ಇವಿಎಂ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಮತಗಳ್ಳತನಕ್ಕೆ ಸಂಬಂಧಿಸಿದಂತೆ ಹಲವಾರು ದೂರುಗಳು ಬಂದಿವೆ. ಆದ್ದರಿಂದ ಸಚಿವ ಸಂಪುಟವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೇಟ್ ಪೇಪರ್ ಮೂಲಕ ನಡೆಸುವಂತೆ ಚುನಾವಣೆ ಆಯೋಗಕ್ಕೆ ತಿಳಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಗ್ರೇಟರ್ ಬೆಂಗಳೂರು (ಜಿಬಿಎ) ಚುನಾವಣೆಯನ್ನೂ ಸಹ ಬ್ಯಾಲೆಟ್ ಪೇಪರ್ ನಡೆಸಲು ನಿರ್ಣಯಿಸಿದ್ದು, ಈ ಬಗ್ಗೆ ರಾಜ್ಯ ಚುನಾವಣೆ ಆಯೋಗವೂ ಸಹ ಜಿಬಿಎ ಎಲೆಕ್ಷನ್ ನಲ್ಲಿ ಇವಿಎಂ ಬಳಸದಿರಲು ತಿಳಿಸಿದೆ.  ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಹ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ಏಪ್ರಿಲ್-ಮೇನಲ್ಲಿ ಸ್ಥಳೀಯ ಸಂಸ್ಥೆ ಎಲೆಕ್ಷನ್?

ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ 2026ರ ಏಪ್ರಿಲ್‌- ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರಕಾರ ಸಜ್ಜಾಗಿದ್ದು, ಪೂರ್ವಸಿದ್ಧತೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಅವಧಿ ಪೂರ್ಣಗೊಂಡ ಗ್ರಾಪಂಗಳಿಗೆ ನಿಗದಿತ ಕಾಲಮಿತಿಯಲ್ಲಿ ಮೀಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ.

ರಾಜ್ಯದ 5,948 ಗ್ರಾಪಂಗಳ ಪೈಕಿ 5,698 ಗ್ರಾಪಂಗಳಿಗೆ 2020 ಡಿಸೆಂಬರ್‌ನಲ್ಲಿ ಚುನಾವಣೆ ಆಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 2021- 22ರಲ್ಲಿ ನಡೆದಿದ್ದರಿಂದ 2026ರ ಫೆಬ್ರವರಿ ಎರಡನೇ ವಾರಕ್ಕೆ ಈ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿದೆ. ಇದರೊಟ್ಟಿಗೆ 2026ರ ಮಾರ್ಚ್ಗೆ ಮುಗಿಯುವ 92 ಗ್ರಾಪಂಗಳನ್ನು ಸೇರಿಸಿ ಚುನಾವಣೆ ನಡೆಸಲು ಸರಕಾರ ತಯಾರಿ ನಡೆಸಿದೆ. ಈಗಾಗಲೇ ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್‌ ಅವಧಿ ಮುಗಿದಿದೆ. 2021ರಿಂದಲೇ ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 240 ತಾಲೂಕು ಪಂಾಯಿತಿಗಳಿಗೆ ಎಲೆಕ್ಷನ್ ನಡೆದಿರುವುದರಿಂದ ಚುನಾಯಿತ ಪ್ರತಿನಿಧಿಗಳಿಲ್ಲ. ಹೀಗಾಗಿ ಏಪ್ರಿಲ್, ಮೇನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಚಿತ್ರೋತ್ಸವ: ಹಂಸಲೇಖಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ – Kannada News | Lifetime Achievement Award for Hamsalekha at Bengaluru International Film Festival

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ (Lifetime Achievement Award) ನೀಡಿ ಗೌರವಿಸಲಾಗುತ್ತದೆ. ಕಳೆದ ಗುರುವಾರ (ಜನವರಿ 29) ಪ್ರಾರಂಭವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು (Bengaluru Film Festival) ಶುಕ್ರವಾರ (ಫೆಬ್ರವರಿ 6) ಸಮಾರೋಪ ಕಾಣಲಿದ್ದು, ಈ ಸಮಾರಂಭದಲ್ಲಿ ಹಂಸಲೇಖ (Hamsalekha) ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಸಂಬಂಧ ಇಂದು (ಫೆಬ್ರವರಿ 5) ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದರು.

ಕಳೆದ ಒಂದು ವಾರದಿಂದ ಸಿನಿಮಾಸಕ್ತರ ಮನಸ್ಸು ಗೆದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ, ಸಂಜೆ 6ಕ್ಕೆ ಲುಲು ಮಾಲ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಎಂಬ ಮೂರು ಸ್ಪರ್ಧಾ ವಿಭಾಗಗಳಿದ್ದು, ಈ ವಿಭಾಗಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಗೆದ್ದವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಕಾರ್ಯಕಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗೂಂಡೂರಾವ್‌ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಮುಂತಾದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ನಟಿ, ನಿರ್ಮಾಪಕಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪಾರ್ವತಮ್ಮ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್​ಕುಮಾರ್, ಎಸ್. ರಾಮಚಂದ್ರ ಪರವಾಗಿ ಅವರ ಪುತ್ರಿ ಉಷಾ ಗೌರವ ಸ್ವೀಕರಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆನ್ ಸ್ಟೋಕ್ಸ್​ಗೆ ಕಣ್ಣು, ಮುಖಕ್ಕೆ ಗಂಭೀರ ಗಾಯ – Kannada News | Ben Stokes’ Facial Injury: England Captain Narrowly Escapes Permanent Eye Damage

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಗಾಯದ ತೀವ್ರತೆ ಹೇಗಿದೆ ಎಂದರೇ ಸ್ಟೋಕ್ಸ್ ಅವರ ಮುಖವೇ ವಿರೂಪಗೊಂಡಿದೆ. ಬೆನ್ ಸ್ಟೋಕ್ಸ್ ಅವರ ಬಲ ಕಣ್ಣು ಹಾಗೂ ಕಣ್ಣಿನ ಕೆಳ ಭಾಗಕ್ಕೆ ಗಾಯವಾಗಿದೆ. ಸ್ವತಃ ಈ ವಿಚಾರವನ್ನು ಬೆನ್​ ಸ್ಟೋಕ್ಸ್ ಅವರೇ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಸ್ಟೋಕ್ಸ್ ಅವರ ಮುಖಕ್ಕೆ ಚೆಂಡು ಬಲವಾಗಿ ಬಡಿದಿದೆ ಎಂಬುದು ಸ್ಟೋಕ್ಸ್ ಅವರು ನೀಡಿರುವ ಮಾಹಿತಿಯಿಂದಲೇ ಖಚಿತವಾಗಿದೆ.

ಬೆನ್ ಸ್ಟೋಕ್ಸ್​ಗೆ ಗಂಭೀರ ಗಾಯ

ತಮ್ಮ ಗಾಯದ ಫೋಟೋವನ್ನು ಇನ್ಸ್​ಟಾಗ್ರಾಮ್​ ಫೋಸ್ಟ್​ನಲ್ಲಿ ಹಂಚಿಕೊಂಡಿರುವ ಸ್ಟೋಕ್ಸ್ ‘ನೀವು ಕ್ರಿಕೆಟ್ ಚೆಂಡಿನ ಸ್ಥಿತಿಯನ್ನು ಸಹ ಪರಿಶೀಲಿಸಬೇಕು’ ಎಂದು ಬರೆದಿದ್ದಾರೆ. ಸ್ಟೋಕ್ಸ್ ಕ್ರಿಕೆಟ್ ಆಡುವ ಸಮಯದಲ್ಲಿ ಈ ಗಾಯಕ್ಕೆ ತುತ್ತಾಗಿದ್ದಾರೆ ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ. ಬೆನ್ ಸ್ಟೋಕ್ಸ್ ಅವರ ಕಣ್ಣಿನ ಕೆಳಗೆ ರಕ್ತ ಹೆಪ್ಪುಗಟ್ಟಿರುವುದನ್ನು ಮತ್ತು ಅವರ ಕೆನ್ನೆಯ ಬಳಿ ಕೆಂಪು ಗಲೆ ಇರುವುದನ್ನು ಕಾಣಬಹುದು. ಸ್ಟೋಕ್ಸ್ ಅವರ ಮೂಗಿನ ಕೆಳಗೂ ಗಾಯ ಆಗಿದೆ.

ಗಾಯದ ಸ್ಥಿತಿಯನ್ನು ನೋಡಿದರೆ ಸ್ಟೋಕ್ಸ್, ಕೂದಲೆಳೆ ಅಂತರದಿಂದ ದೊಡ್ಡ ಅವಘಡದಿಂದ ಪಾರಾಗಿದ್ದಾರೆ ಎನ್ನಬಹುದು. ಒಂದು ವೇಳೆ ಚೆಂಡು ಇನ್ನು ಸ್ವಲ್ಪ ಮೇಲ್ಬಾಗಕ್ಕೆ ಬಡಿದಿದ್ದರೆ, ಅವರ ಕಣ್ಣಿಗೆ ಗಂಭೀರ ಗಾಯವಾಗುತ್ತಿತ್ತು. ಇದರಿಂದ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದರು. ಇದರಿಂದ ಅವರ ವೃತ್ತಿಜೀವನ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. ಆದರೆ ಸಧ್ಯದ ಪರಿಸ್ಥಿತಿ ನೋಡಿದರೆ, ಸ್ಟೋಕ್ಸ್ ಗಂಡಾಂತರದಿಂದ ಪಾರಾಗಿದ್ದಾರೆ ಎನ್ನಬಹುದು.

ಈ ಹಿಂದೆಯೂ ಗಾಯಕ್ಕೆ ತುತ್ತಾಗಿದ್ದ ಸ್ಟೋಕ್ಸ್

ಬೆನ್ ಸ್ಟೋಕ್ಸ್ ಈ ರೀತಿಯ ಗಾಯಕ್ಕೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಗಂಭೀರ ಗಾಯಗಳಿಂದ ಬಳಲಿದ್ದರು. 2014 ರಲ್ಲಿ, ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಶೂನ್ಯಕ್ಕೆ ಔಟಾಗಿದ್ದಕ್ಕೆ ತಾಳ್ಮೆ ಕಳೆದುಕೊಂಡಿದ್ದ ಸ್ಟೋಕ್ಸ್ ಡ್ರೆಸ್ಸಿಂಗ್ ರೂಮ್ ಲಾಕರ್‌ಗೆ ತಮ್ಮ ಬಲಗೈನಿಂದ ಗುದ್ದಿದ್ದರು. ಇದರಿಂದ ಅವರ ಬಲ ಮಣಿಕಟ್ಟು ಮುರಿದುಕೊಂಡಿತು. ಇದರಿಂದಾಗಿ ಅವರು ಮೂರು ತಿಂಗಳ ಕಾಲ ಆಟದಿಂದ ಹೊರಗುಳಿಯಬೇಕಾಯಿತು. ಜೊತೆಗೆ 2014 ರ ಟಿ20 ವಿಶ್ವಕಪ್​ನಿಂದಲೂ ಹೊರಬಿದ್ದಿದ್ದರು.

2021 ರಲ್ಲಿಯೂ ಸ್ಟೋಕ್ಸ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. 2023-24 ರ ದಿ ಹಂಡ್ರೆಡ್ ಲೀಗ್​ನಲ್ಲಿಯೂ ಸ್ಟೋಕ್ಸ್ ಎಡ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. 2025 ರಲ್ಲಿ ಅವರಿಗೆ ಮತ್ತೆ ಅದೇ ಗಾಯಕ್ಕೆ ತುತ್ತಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಮೂರು ತಿಂಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದರು. 2025 ರಲ್ಲಿ ಭುಜದ ಗಾಯದಿಂದ ಬಳಲುತ್ತಿದ್ದ ಸ್ಟೋಕ್ಸ್ ಭಾರತದ ವಿರುದ್ಧ ಐದನೇ ಟೆಸ್ಟ್​ನಿಂದ ಹೊರಬಿದ್ದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:50 pm, Thu, 5 February 26

Source link

ಬೆಂಗಳೂರು ಚಿತ್ರೋತ್ಸವದ ಕೊನೆಯ ದಿನ ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ – Kannada News | 10 Best movies to watch on last day in 17th Bengaluru International Film Festival

ಜನವರಿ 29ರಿಂದ ಫೆಬ್ರವರಿ 6ರ ತನಕ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival) ನಡೆದಿದೆ. ಫೆಬ್ರವರಿ 6ರಂದು ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ನಟಿ, ನಿರ್ಮಾಪಕಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪಾರ್ವತಮ್ಮ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್​ಕುಮಾರ್, ಎಸ್. ರಾಮಚಂದ್ರ ಪರವಾಗಿ ಅವರ ಪುತ್ರಿ ಉಷಾ ಗೌರವ ಸ್ವೀಕರಿಸಲಿದ್ದಾರೆ. ಫೆ.6ರಂದು ಲುಲು ಮಾಲ್​ನಲ್ಲಿ ನೋಡಬಹುದಾದ 10 ಅತ್ಯುತ್ತಮ ಸಿನಿಮಾಗಳಿವು.

  1. ನೌವೆಲ್ ವಾಗ್ : ರಾತ್ರಿ 8:20 ಸ್ಕ್ರೀನ್ 3, ರಾತ್ರಿ 7:30 ಸ್ಕ್ರೀನ್ 6, ಸಂಜೆ 7:20 ಸ್ಕ್ರೀನ್ 8. ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.
  2. ಶಂಕರ್ ಗುರು: ಮಧ್ಯಾಹ್ನ 2:00 ಸ್ಕ್ರೀನ್ 6. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರವನ್ನು ‘ಜನಪ್ರಿಯ ಮನರಂಜನಾ ಸಿನಿಮಾ’ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.
  3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್: ಸಮಯ ಸಂಜೆ 4:10, ವಿಐಪಿ ಸ್ಕ್ರೀನ್ 1. ಅಪಿಚತ್‌ಪಾಂಗ್ ವೀರಸೇತಕುಲ್ ನಿರ್ದೇಶನದ ಈ ಥಾಯ್ ಚಿತ್ರವು ಆಧ್ಯಾತ್ಮಿಕ ಮತ್ತು ಪುನರ್ಜನ್ಮದ ಕುರಿತಾದ ಜಾಗತಿಕ ಮಟ್ಟದ ಶ್ರೇಷ್ಠ ಕಲಾಕೃತಿಯಾಗಿದೆ.
  4. ದಿ ಪ್ರೆಸಿಡೆಂಟ್ಸ್ ಕೇಕ್: ಸಂಜೆ 5:40, ಸ್ಕ್ರೀನ್ 4. ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.
  5. ಮ್ಯಾನ್ ಆಫ್ ಮಾರ್ಬಲ್: ಸಂಜೆ 6:50, ವಿಐಪಿ ಸ್ಕ್ರೀನ್ 1. ಪೋಲಿಷ್ ನಿರ್ದೇಶಕ ಅಂದ್ರೆಜ್ ವಾಜ್ದಾ ಅವರ ಈ 1977ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
  6. ಡಿವೈನ್ ಕಾಮಿಡಿ: ಮಧ್ಯಾಹ್ನ 12:30, ಸ್ಕ್ರೀನ್ 5. ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
  7. ದಿ ಮಾಸ್ಟರ್ ಮೈಂಡ್: ಮಧ್ಯಾಹ್ನ 2:30, ಸ್ಕ್ರೀನ್ 5. ಕೆಲ್ಲಿ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.
  8. ಡ್ರಾಗನ್‌ಫ್ಲೈ: ಬೆಳಗ್ಗೆ 11:30, ಸ್ಕ್ರೀನ್ 3. ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.
  9. ಗಣರಾಜ್: ಮಧ್ಯಾಹ್ನ 3:00. ವಿಐಪಿ ಸ್ಕ್ರೀನ್ 2. ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.
  10. ಕ್ಯಾಟನೇ: ಸಂಜೆ 4:50, ಸ್ಕ್ರೀನ್ 1. ಅಯೋನಾ ಮಿಸ್ಚೀ ನಿರ್ದೇಶನದ ಈ 2025ರ ರೋಮೇನಿಯನ್ ಚಿತ್ರವು ಯುರೋಪಿಯನ್ ಸಿನಿಮಾದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೀದರ್​​​ನ ಅದೊಂದು ಗ್ರಾಮದಲ್ಲಿ ಭೂಮಿಯಿಂದ ಹೊರಹೊಮ್ಮುತ್ತಿದೆ ವಿಚಿತ್ರ ಶಬ್ಧ – Kannada News | Dokulagi Village Mystery: Strange Ground Sounds Terrify Bidar Residents, Officials Investigate

ಗ್ರಾಮಕ್ಕೆ ಅಧಿಕಾರಿಗಳ ಭೇಟಿImage Credit source: tv9 kannada

ಬೀದರ್, ಫೆಬ್ರವರಿ 05: ಜಿಲ್ಲೆಯ ಹುಮ್ನಾಬಾದ್ (Humnabad) ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಭೂಮಿಯಿಂದ ಬರುತ್ತಿದ್ದ ಭಯಂಕರ ಶಬ್ದದಿಂದಾಗಿ (sound) ಜನರು ಆತಂಕಗೊಂಡಿದ್ದಾರೆ. ಬುಧವಾರ ರಾತ್ರಿ ನಾಲ್ಕೈದು ಭಾರೀ ಭೂಮಿ ಒಳಗಡೆಯಿಂದ ಬರುತ್ತಿದ್ದ ಶಬ್ಧದಿಂದಾಗಿ ಜನ ಮನೆಯೊಳಗಿರಲು ಹೆದರುತ್ತಿದ್ದಾರೆ. ರಾತ್ರಿ ಭಯಂಕರ ಶಬ್ದ ಬಂದು ಭೂಮಿ ನಡುಗಿದಂತಾಗಿದ್ದು, ಜನರು ಮನೆಯಿಂದ ಹೊರ ಓಡಿಬಂದಿದ್ದಾರೆ. ಸದ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ಭೂಮಿಯಿಂದ ವಿಚಿತ್ರ ಶಬ್ಧ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಾಲ್ಕೈದು ಸಲ ಬಾಂಬ್ ಬಿದ್ದ ಹಾಗೆ ಸೌಂಡ್ ಆಗಿದ್ದು, ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ದೊಡ್ಡ ಮಟ್ಟದ ಸೌಂಡ್​ ಆಗಿದ್ದರಿಂದ ನಿನ್ನೆ ಇಡೀ ರಾತ್ರಿ ಗ್ರಾಮಸ್ಥರು ನಿದ್ರೆ ಮಾಡದೆ ರಾತ್ರಿ ಇಡೀ  ಜಾಗರಣೆ ಮಾಡಿದ್ದಾರೆ. ಭೂಮಿಯಿಂದ ವಿಚಿತ್ರ ಶಬ್ಧ ಬರುತ್ತಿದೆ. ಈ ರೀತಿಯ ಶಬ್ದ ಭೂಮಿಯಿಂದ ಬಂದಾಗ ಭೂಮಿ ಕಂಪನವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ

ಇನ್ನು ಈ ವಿಚಾರವನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪಿಡಿಓ, ತಹಶಿಲ್ದಾರ್, ತಾಲೂಕು ಪಂಚಾಯತ್ ಇಓ ಸೇರಿಕೊಂಡು ಗ್ರಾಮಕ್ಕೆ ಬಂದು ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಭೆಟ್ಟಿ ಕೊಟ್ಟಾಗಲೂ ಎರಡು ಸಲ ಭೂಮಿಯಿಂದ ಶಬ್ಧ ಕೇಳಿಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ, ಸ್ಥಳೀಯ ಶಾಸಕರ ಗನಮಕ್ಕೆ ಅಧಿಕಾರಿಗಳು ತಂದಿದ್ದಾರೆ.

ಈ ಬಗ್ಗೆ ತಹಶಿಲ್ದಾರ್ ಅಜುಂ ತಬಸುಮ್ ಮಾತನಾಡಿ, ಗ್ರಾಮಸ್ಥರು ಮಾಹಿತಿ ಕೊಟ್ಟ ತಕ್ಷಣ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಭೂಕಂಪನವಾದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ. ಆದರೆ ಪದೇ ಪದೇ ಭೂಮಿಯಿಂದ ಶಬ್ಧ ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಭೂಮಿಯಿಂದ ಏಕೆ ಸೌಂಡ್ ಬರುತ್ತಿದೆ ಎಂದು ಪತ್ತೆ ಹಚ್ಚಲು ತನಿಖಾ ತಂಡ ರಚನೆ ಮಾಡುತ್ತೇವೆ. ನೀವು ಯಾವುದೇ ಕಾರಣಕ್ಕೂ ಹೆದರಬೇಡಿ. ಭೂಮಿಯಲ್ಲಿ ನೀರು ಜಾಸ್ತಿಯಾಗಿ ಹೀಗೆ ಶಬ್ಧ ಬರುತ್ತಿದೆ. ಭಯಗೊಳ್ಳುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೀದರ್​ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಗಂಭೀರ ಗಾಯ

ಬಾಂಬ್ ಬ್ಲಾಸ್ಟ್ ಆದ ಹಾಗೆ ಭೂಮಿಯ ಒಳಗಡೆಯಿಂದ ಸೌಂಡ್ ಬರುತ್ತಿದೆ. ಜನರು ಹಗಲು-ರಾತ್ರಿ ಮನೆಯಿಂದ ಹೊರಗಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಏನು ಭಯಪಡುವ ಅವ್ಯಶ್ಯಕತೆಯಿಲ್ಲ ಎಂದಿದ್ದಾರೆ. ಆದರು ಕೂಡ ಸೌಂಡ್​​ ಬರುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Valentine’s Week 2026: ರೋಸ್‌ ಡೇಯಂದು ನಿಮ್ಮ ಲೈಫ್‌ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ – Kannada News | Valentine’s Week 2026: Prepare these special desserts made from roses for your partner on Rose Day

ಪ್ರೇಮಿಗಳ ದಿನಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ಫೆಬ್ರವರಿ 7 ರಿಂದ 13 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಈ ವ್ಯಾಲೆಂಟೈನ್‌ ವೀಕ್‌ ರೋಸ್‌ ಡೇ (Rose Day) ದಿನದೊಂದಿಗೆ ಆರಂಭವಾಗುತ್ತದೆ. ಈ ವಿಶೇಷ ದಿನದಂದು  ಪ್ರೇಮಿಗಳು ಪರಸ್ಪರ ಕೆಂಪು ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಕೆಲವರು ವಿಶೇಷ ಉಡುಗೊರೆಗಳನ್ನು ಸಹ ಪ್ರೇಮಿಗೆ ನೀಡುತ್ತಾರೆ. ನೀವು ಸಹ ಈ ಬಾರಿಯ ರೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಲು ಬಯಸಿದರೆ ರೆಡ್‌ ರೋಸ್‌ ನೀಡುವುದರ ಜೊತೆಗೆ ನಿಮ್ಮ ಸಂಗಾತಿಗೆ ನಿಮ್ಮ ಕೈಯಾರೇ ಪ್ರೀತಿಯಿಂದ ಗುಲಾಬಿ ಹೂವಿನ ಖಾದ್ಯಗಳನ್ನು ತಯಾರಿಸಬಹುದು. ಇಲ್ಲಿದೆ ನಿಮಗಾಗಿ ಈಸಿ ರೆಸಿಪಿ.

ರೋಸ್‌ ಡೇ ಯ ಸ್ಪೆಷಲ್‌ ರೆಸಿಪಿ ಲಿಸ್ಟ್:‌

ರೋಸ್ ಪುಡಿಂಗ್:

ಬೇಕಾಗುವ ಸಾಮಾಗ್ರಿಗಳು: ಹಾಲು – 100 ಮಿಲಿ, ಸಕ್ಕರೆ – 2 ಚಮಚ, ಚೈನಾ ಗ್ರಾಸ್‌ (ಅಗರ್‌ ಅಗರ್) – 2 ಗ್ರಾಂ, ಗುಲಾಬಿ ಸಿರಪ್ – 1 ಚಮಚ, ನೀರು.

ರೋಸ್ ಪುಡ್ಡಿಂಗ್ ತಯಾರಿಸುವ ವಿಧಾನ: ಮೊದಲು ಚೈನಾಗ್ರಾಸ್ ತೆಗೆದುಕೊಂಡು ಅದನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ, ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಕಡಿಮೆ ಉರಿಯಲ್ಲಿ ಒಲೆಯ ಮೇಲೆ ಇರಿಸಿ. ಚೈನಾಗ್ರಾಸ್ ಮತ್ತು ನೀರನ್ನು ಸೇರಿಸಿ. ಚೈನಾಗ್ರಾಸ್ ಸಂಪೂರ್ಣವಾಗಿ ಕರಗುವವರೆಗೆ ಕುದಿಸಿ. ಈಗ, ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು, ಹಾಲು ಮತ್ತು ಸಕ್ಕರೆಯನ್ನು ಸೇರಿಸಿ, ಬಿಸಿ ಮಾಡಿ. ಹಾಲು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ಚೈನಾಗ್ರಾಸ್ ನೀರು ಮತ್ತು ರೋಸ್ ಸಿರಪ್ ಸೇರಿಸಿ ಮತ್ತು ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣವನ್ನು 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ನಂತರ ಸ್ಟವ್‌ ಆಫ್‌ ಮಾಡಿ ಅದನ್ನು ಒಂದು ಬೌಲ್‌ಗೆ ಸರ್ವ್‌ ಮಾಡಿ ಅದರ ಮೇಲೆ ಗುಲಾಬಿ ದಳಗಳನ್ನು ಇಟ್ಟು ಅಲಂಕರಿಸಿ, ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟರೆ ರೋಸ್‌ ಪುಡ್ಡಿಂಗ್‌ ರೆಡಿ.

ರೋಸ್ ಖೀರ್:

ಬೇಕಾಗುವ ಸಾಮಾಗ್ರಿಗಳು: ಹಾಲು, ಗುಲಾಬಿ ದಳ, ಏಲಕ್ಕಿ ಪುಡಿ, ಸಕ್ಕರೆ, ಪಿಸ್ತಾ, ಬಾದಾಮಿ.

ರೋಸ್‌ ಖೀರ್‌ ತಯಾರಿಸುವ ವಿಧಾನ:  ರೋಸ್ ಖೀರ್ ಮಾಡಲು, ಮೊದಲು ಹಾಲನ್ನು ಕುದಿಸಿ, ಅದಕ್ಕೆ ಸ್ವಚ್ಛಗೊಳಿಸಿದ ಗುಲಾಬಿ ದಳಗಳನ್ನು ಸೇರಿಸಿ.  ನಂತರ ಅದಕ್ಕೆ ಏಲಕ್ಕಿ ಪುಡಿ ಮತ್ತು ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಈ ಮಿಶ್ರಣ ಹಾಲು ದಪ್ಪಗಾದ ನಂತರ ಗ್ಯಾಸ್‌ ಆಫ್‌ ಮಾಡಿ ತಣ್ಣಗಾದ ನಂತರ ಅದರ ಮೇಲೆ ಪಿಸ್ತಾ, ಬಾದಾಮಿ ಚೂರಗಳನ್ನು ಹಾಕಿ ಅಲಂಕರಿಸಿ.

ಇದನ್ನೂ ಓದಿ: ಪ್ರೇಮಿಗಳ ವಾರದಲ್ಲಿ ಯಾವೆಲ್ಲಾ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ; ಇಲ್ಲಿದೆ ಲಿಸ್ಟ್

ರೋಸ್‌ ಲಡ್ಡು:

ಬೇಕಾಗುವ ಸಾಮಾಗ್ರಿಗಳು: ಒಣ ಗುಲಾಬಿ ದಳ,ಖೋವಾ, ತೆಂಗಿನಕಾಯಿ ಪುಡಿ, ಜೇನು ತುಪ್ಪ

ರೋಸ್‌ ಲಡ್ಡು ತಯಾರಿಸುವ ವಿಧಾನ:  ಮೊದಲಿಗೆ ಒಣಗಿದ ಗುಲಾಬಿ ದಳಗಳನ್ನು ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಿ. ಈಗ ಖೋವಾವನ್ನು ಒಂದು ಪಾತ್ರೆಯಲ್ಲಿ ಲಘುವಾಗಿ ಹುರಿಯಿರಿ, ಅದಕ್ಕೆ ಗುಲಾಬಿ ಪುಡಿ, ತೆಂಗಿನಕಾಯಿ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ಈ ಮಿಶ್ರಣ ದಪ್ಪಗಾದ ಬಳಿಕ ಸಣ್ಣ ಉಂಡೆಗಳನ್ನು ಕಟ್ಟಿದರೆ, ರೋಸ್‌ ಲಡ್ಡು ರೆಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ; ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ – Kannada News | TMC Going To Supreme Court for Protect Illegal Immigrants PM Modi Attacks Mamata Banerjee in Rajya Sabha

ನವದೆಹಲಿ, ಫೆಬ್ರವರಿ 5: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾದ ಮಂಡಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ (PM Modi) ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ತೃಣಮೂಲ ಆಡಳಿತವನ್ನು “ಕ್ರೂರ ಸರ್ಕಾರ” ಎಂದು ಟೀಕಿಸಿದ ಮೋದಿ, “ವಿಶ್ವದ ಅತ್ಯಂತ ಶ್ರೀಮಂತ ದೇಶಗಳು ಸಹ ಅಕ್ರಮ ವಲಸಿಗರನ್ನು ತಮ್ಮ ಪ್ರದೇಶಗಳಿಂದ ಹೊರಹಾಕುತ್ತಿವೆ. ಆದರೆ, ನಮ್ಮ ದೇಶದಲ್ಲಿ ಕೆಲವು ಪಕ್ಷಗಳು ಒಳನುಸುಳುಕೋರರನ್ನು ರಕ್ಷಿಸಲು ಉದ್ದೇಶಪೂರ್ವಕ ಮತ್ತು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿವೆ. ಅಕ್ರಮ ವಲಸಿಗರ ಪರವಾಗಿ ವಕಾಲತ್ತು ವಹಿಸುವ ನಾಯಕರನ್ನು ನಮ್ಮ ದೇಶದ ಯುವಕರು ಹೇಗೆ ಸ್ವೀಕರಿಸಲು ಸಾಧ್ಯ?” ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

UPSC New Rule: ಸೇವೆಯಲ್ಲಿರುವ ಐಎಎಸ್​, ಐಎಫ್​ಎಸ್ ಅಧಿಕಾರಿಗಳಿಗೆ ಯುಪಿಎಸ್​ಸಿಯಿಂದ ಹೊಸ ನಿರ್ಬಂಧ – Kannada News | UPSC New Rules: IAS, IFS Officers Restricted from Reappearing for CSE 2026 Exams

ನವದೆಹಲಿ, ಫೆಬ್ರವರಿ 05: ಕೇಂದ್ರ ಲೋಕಸೇವಾ ಆಯೋಗ(UPSC) ತನ್ನ ನಾಗರಿಕ ಸೇವಾ ಪರೀಕ್ಷೆ (CSE)2026ರ ಅಧಿಸೂಚನೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಪರಿಚಯಿಸಿದೆ. ಇದು ಈಗಾಗಲೇ ಸೇವೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮರು-ಪ್ರಯತ್ನಗಳನ್ನು ಸೀಮಿತಗೊಳಿಸುತ್ತದೆ. ಸೇವೆ ಸಲ್ಲಿಸುತ್ತಿರುವ ಐಎಎಸ್​ ಮತ್ತು ಐಎಫ್​ಎಸ್ ಅಧಿಕಾರಿಗಳು ಸಿಎಸ್​ಇ 2026ರಲ್ಲಿ ಹಾಜರಾಗುವುದನ್ನು ನಿಷೇಧಿಸಲಾಗಿದೆ.

ಮುಂದಿನ ಪ್ರಯತ್ನದಲ್ಲಿ ತಮ್ಮ ಶ್ರೇಣಿಯನ್ನು ಸುಧಾರಿಸಲು ಬಯಸುವ ಐಪಿಎಸ್ ಅಧಿಕಾರಿಗಳು ಗ್ರೂಪ್ ಎ ಸೇವೆಗಳನ್ನು ಹಂಚಿಕೆ ಮಾಡಿದ ಅಭ್ಯರ್ಥಿಗಳ ಮೇಲೆ ಅಧಿಕಸೂಚನೆಯು ಷರತ್ತುಗಳನ್ನು ವಿಧಿಸುತ್ತದೆ. ಈ ಕ್ರಮವು ಒಂದು ಬಾರಿಯ ಸುಧಾರಣಾ ವಿಂಡೋವನ್ನು ಔಪಚಾರಿಕಗೊಳಿಸುತ್ತದೆ ಮತ್ತು ರಾಜೀನಾಮೆ ನೀಡದೆ ಪುನರಾವರ್ತಿತ ಪ್ರಯತ್ನಗಳಿಗೆ ಅವಕಾಶ ನೀಡುವ ಹಿಂದಿನ ಅವಕಾಶವನ್ನು ಮುಚ್ಚುತ್ತದೆ.
ಹಿಂದಿನ ಪರೀಕ್ಷೆಯ ಆಧಾರದ ಮೇಲೆ ಐಎಎಸ್ ಅಥವಾ ಐಎಫ್​ಎಸ್ ಆಗಿ ನೇಮಕಗೊಂಡಿರುವ ಮತ್ತು ಆ ಸೇವೆಯ ಸದಸ್ಯರಾಗಿ ಮುಂದುವರೆದ ಯಾವುದೇ ಅಭ್ಯರ್ಥಿಯು ಸಿಎಸ್​ಇ 2026ರಲ್ಲಿ ಕಾಣಿಸಿಕೊಳ್ಳಲು ಅರ್ಹರಾಗುವುದಿಲ್ಲ ಎಂದು ಅಧಿಸೂಚನೆ ಸ್ಪಷ್ಟವಾಗಿ ಹೇಳುತ್ತದೆ.

ಈ ನಿರ್ಬಂಧವು ಎಲ್ಲಾ ಹಂತಗಳಿಗೂ ಅನ್ವಯಿಸುತ್ತದೆ, ಪ್ರಾಥಮಿಕ ಪರೀಕ್ಷೆಯ ನಂತರ ಆದರೆ ಮುಖ್ಯ ಪರೀಕ್ಷೆಗೂ ಮೊದಲು ಅಬ್ಯಥರ್ಥಯನ್ನು ಐಎಎಸ್ ಅಥವಾ ಐಎಫ್​ಎಸ್ಗೆ ನೇಮಿಸಿದರೆ, ಅವರು ಮುಖ್ಯ ಪರೀಕ್ಷೆಯನ್ನು ಬರೆಯಲು ಸಾಧ್ಯವಿಲ್ಲ. ಮುಖ್ಯ ಪರೀಕ್ಷೆ ಪ್ರಾರಂಭವಾದ ನಂತರ ಆದರೆ ಅಂತಿಮ ಫಲಿತಾಂಶ ಘೋಷಣೆಯಾಗುವ ಮೊದಲು ನೇಮಕಗೊಂಡರೆ ಅವರನ್ನು ಸಿಎಸ್​ಎ 2026ರ ಅಡಿಯಲ್ಲಿ ಹಂಚಿಕೆಗೆ ಪರಿಗಣಿಸಲಾಗುವುದಿಲ್ಲ. ಇದು ಸೇವೆಯಲ್ಲಿರುವ ಐಎಎಸ್​ ಮತ್ತು ಐಎಫ್​ಎಸ್ ಅಧಿಕಾರಿಗಳು ರಾಜೀನಾಮೆ ನೀಡದ ಹೊರತು ಮತ್ತೆ ಪರೀಕ್ಷೆ ಬರೆಯುವುದನ್ನು ತಡೆಯುತ್ತದೆ.

ಹಿಂದಿನ ಪರೀಕ್ಷೆಯ ಮೂಲಕ ಈಗಾಗಲೇ ಆಯ್ಕೆಯಾದ ಅಥವಾ ಪೊಲೀಸ್ ಸೇವೆಗೆ ನೇಮಕಗೊಂಡ ಅಭ್ಯರ್ಥಿಗಳು ಸಿಎಸ್​ಇ2026ರ ಮೂಲಕ ಮತ್ತೆ ಐಪಿಎಸ್ ಆಯ್ಕೆ ಮಾಡಲು ಅಥವಾ ಹಂಚಿಕೆ ಮಾಡಲು ಸಾಧ್ಯವಿಲ್ಲ.

ಮತ್ತಷ್ಟು ಓದಿ: SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆ ಹೊಸ ಪ್ಲಾನ್; ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್!

ಸಿಎಸ್​ಇ 2025 ಅಥವಾ ಅದಕ್ಕಿಂತ ಹಿಂದೆ ಯಾವುದೇ ಸೇವೆಗೆ ನಿಯೋಜಿಸಲಾದ ಅಭ್ಯರ್ಥಿಗಳು ರಾಜೀನಾಮೆ ನೀಡದೆ ಸಿಎಸ್​ಇ2027 ಅಥವಾ ಸಿಎಸ್​ಇ 2027ರಲ್ಲಿ ಹಾಜರಾಗಲು ಒಂದು ಬಾರಿ ಅವಕಾಶವಿರುತ್ತದೆ. 2028ರಲ್ಲಿ ಸಿಎಸ್​ಇ ಅಥವಾ ಇನ್ಯಾವುದೇ ಪರೀಕ್ಷೆಗೆ ಹಾಜರಾಗುವವರು ಸೇವೆಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಿರುತ್ತದೆ.

ಫೆಬ್ರವರಿ 24 ರೊಳಗೆ UPSC ನೇಮಕಾತಿ ನಮೂನೆಗಳನ್ನು ಭರ್ತಿ ಮಾಡಿ
UPSC CSE 2026 ಅಧಿಸೂಚನೆಯ ಪ್ರಕಾರ , ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 4 ರಂದು ಪ್ರಾರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 24, 2026 ರವರೆಗೆ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಈ ನೇಮಕಾತಿ ಡ್ರೈವ್ ವಿವಿಧ ನಾಗರಿಕ ಸೇವೆಗಳಲ್ಲಿ ಸುಮಾರು 933 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎಪ್ಸ್ಟೀನ್ ಫೈಲ್ಸ್ ಒಳಗೆ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು: ಏನಿದು ಕರ್ಮಕಾಂಡ? – Kannada News | Nandita Das Anurag Kashyap and other celebrities name in Epstein Files

ಲೈಂಗಿಕ ಅಪರಾಧಗಳಲ್ಲಿ ಸಿಕ್ಕಿ ಹಾಕಿಕೊಂಡ ಜೆಫ್ರಿ ಎಪ್ಸ್ಟೀನ್ (Jeffrey Epstein) ಮತ್ತು ಆತನ ಕರ್ಮಕಾಂಡದ ಬಗ್ಗೆ ಇಡೀ ಜಗತ್ತಿನಲ್ಲಿ ಚರ್ಚೆ ಆಗುತ್ತಿದೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳಿಗಾಗಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಕೂಪಕ್ಕೆ ತಳ್ಳಿದ ಆರೋಪ ಆತನ ಮೇಲಿತ್ತು. ಜೆಫ್ರಿ ಎಪ್ಸ್ಟೀನ್ ನಡೆಸಿದ್ದ ಅಪರಾಧಿ ಚಟುವಟಿಕೆಗಳ ಬಗ್ಗೆ ಲಕ್ಷಾಂತರ ಪುಟಗಳ ದಾಖಲೆ (Epstein Files) ಕಲೆಹಾಕಲಾಗಿದೆ. ಈ ದಾಖಲೆಗಳಲ್ಲಿ ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬರುತ್ತಿರುವುದು ಆಘಾತಕಾರಿ ಸಂಗತಿ. ಆ ಬಗ್ಗೆ ಎಲ್ಲ ಕಡೆಗಳಲ್ಲಿ ಸುದ್ದಿ ಆಗುತ್ತಿದೆ.

ಹಲವು ವಿಡಿಯೋಗಳು, ಫೋಟೋಗಳು ಹಾಗೂ ಇ-ಮೇಲ್ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಬಿಲ್ ಗೇಟ್ಸ್, ಅನಿಲ್ ಅಂಬಾನಿ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ಹೆಸರು ಕಾಣಿಸಿದೆ. ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಬಿಲ್ ಗೇಟ್ಸ್ ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರು ಕಾಣಿಸಿಕೊಂಡಿರುವುದು ಶಾಕಿಂಗ್ ಎನಿಸಿದೆ.

ನಂದಿತಾ ದಾಸ್, ಅನುರಾಗ್ ಕಶ್ಯಪ್, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮುಂತಾದ ಸೆಲೆಬ್ರಿಟಿಗಳ ಹೆಸರುಗಳು ಎಪ್ಸ್ಟೀನ್ ಫೈಲ್ಸ್​ ಪುಟಗಳಲ್ಲಿ ಪ್ರಸ್ತಾಪ ಆಗಿವೆ ಎಂಬ ಮಾಹಿತಿ ಕೇಳಿಬಂದಿದೆ. ಅಷ್ಟಕ್ಕೂ, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್​​ಗೂ ಈ ಸೆಲೆಬ್ರಿಟಿಗಳು ಯಾವ ರೀತಿಯ ನಂಟು ಇದೆ ಎಂಬ ಪ್ರಶ್ನೆ ಉದ್ಭವ ಆಗಿದೆ. ಅಭಿಮಾನಿಗಳಿಗೆ ಆಘಾತವಾಗಿದೆ.

ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ‘ನನ್ನನ್ನು ಅತಿಥಿಯಾಗಿ ಅನೇಕರು ಆಹ್ವಾನಿಸುತ್ತಾರೆ. ಆದರೆ ಬಹುತೇಕ ಆಹ್ವಾನಗಳಿಗೆ ನಾನು ಪ್ರತಿಕ್ರಿಯೆಯನ್ನೇ ನೀಡವುದಿಲ್ಲ’ ಎಂದು ಅನುರಾಗ್ ಕಶ್ಯಪ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಲ್ಲಿ ಮತ್ತೆ ಕಾಣಿಸಿಕೊಂಡ ಟ್ರಂಪ್ ಫೋಟೋ

ಎಪ್ಸ್ಟೀನ್ ಫೈಲ್ಸ್​ನಲ್ಲಿ ಹೆಸರು ಉಲ್ಲೇಖ ಆಗಿದೆ ಎಂದಮಾತ್ರಕ್ಕೆ ಅವರೆಲ್ಲರೂ ಅಪರಾಧಿಗಳು ಎಂದು ಅರ್ಥವಲ್ಲ. ಬೇರೆ ಬೇರೆ ಕಾರಣಗಳಿಂದ ಹೆಸರುಗಳು ಪ್ರಸ್ತಾಪ ಆಗಿರಬಹುದು. ಜೆಫ್ರಿ ಎಪ್ಸ್ಟೀನ್ ಪ್ರಭಾವಿ ವ್ಯಕ್ತಿ ಆಗಿದ್ದ. ಆತನ ಜೊತೆ ಜಗತ್ತಿನ ಪ್ರಖ್ಯಾತ ವ್ಯಕ್ತಿಗಳು ನಂಟು ಹೊಂದಿದ್ದರು. ಹಲವು ಕಾರ್ಯಕ್ರಮಗಳನ್ನು ಆತ ಆಯೋಜಿಸಿದ್ದ. ಅದಕ್ಕೆ ಸಂಬಂಧಿಸಿದಂತೆ ಹಲವರ ಹೆಸರು ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ವೇಳೆ ಸ್ಫೋಟ, 16 ಕಾರ್ಮಿಕರ ಸಾವು – Kannada News | 16 labourers from Assam killed many injured in illegal coal mine blast in Meghalaya

ಶಿಲ್ಲಾಂಗ್, ಫೆಬ್ರವರಿ 5: ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ (Coal Mining) ವೇಳೆ ಸಂಭವಿಸಿದ ಸ್ಫೋಟದಲ್ಲಿ ಅಸ್ಸಾಂನ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಥಾಂಗ್ಸ್ಕು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಣಿಯಿಂದ 16 ಶವಗಳನ್ನು ಹೊರತೆಗೆದಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ. ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ನಂತರ ಶಿಲ್ಲಾಂಗ್‌ಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಸಹಾಯ ಪಡೆದುಕೊಂಡರು. ಇನ್ನೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು; ಹಲವು ಕಾರ್ಮಿಕರು ಕಣ್ಮರೆ

ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ತನಿಖೆ ನಡೆಸಲಾಗುವುದು. ಪರಿಸರ ಹಾನಿ ಮತ್ತು ಗಂಭೀರ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014ರಲ್ಲಿ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಅವೈಜ್ಞಾನಿಕ ಗಣಿಗಾರಿಕೆ ಪದ್ಧತಿಗಳ ಮೇಲೆ ನಿಷೇಧ ಹೇರಿತ್ತು. ಆದರೂ ಮೇಘಾಲಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಲೇ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version