ತುಮಕೂರಿನ ಶಿರಾದಲ್ಲೇ ಎರಡನೇ ವಿಮಾನ ನಿಲ್ದಾಣ ಯಾಕೆ? ಮಧ್ಯ-ಉತ್ತರ ಕರ್ನಾಟಕ ಅಭಿವೃದ್ಧಿಗೆ ಇದು ಅಗತ್ಯ ಎಂದ ಸೋಮಣ್ಣ – Kannada News | Why Tumkur’s Sira is the Best Choice for Bengaluru’s Second Airport? Union Minister V Somanna Explains

ವಿ. ಸೋಮಣ್ಣ Image Credit source: Facebook

ಬೆಂಗಳೂರು, ಜುಲೈ 18: ಬೆಂಗಳೂರಿನಲ್ಲಿ (Bengaluru) ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, ನೂತನ ಏರ್​ಪೋರ್ಟ್​ಗೆ ತುಮಕೂರು ಜಿಲ್ಲೆಯ ಶಿರಾ ಸೂಕ್ತ ಸ್ಥಳವೆಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಪಾದಿಸಿದ್ದಾರೆ. ಈ ಕುರಿತು ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರಿನ ಸಮೀಪ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವುದಕ್ಕಿಂತ ಶಿರಾದಲ್ಲಿ ನಿರ್ಮಾಣ ಮಾಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಶಿರಾದಲ್ಲಿ ವಿಮಾನ ನಿಲ್ದಾಣ ಯಾಕೆ? ಸೋಮಣ್ಣ ಕೊಟ್ಟ ಕಾರಣ ಏನು?

ಸೋಮಣ್ಣ ಪ್ರಕಾರ, ಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕೈಗಾರಿಕೆ, ವ್ಯಾಪಾರ, ಹೂಡಿಕೆ ಮತ್ತು ಸಾರಿಗೆ ವ್ಯವಸ್ಥೆಗೆ ದೊಡ್ಡ ಉತ್ತೇಜನ ಸಿಗಲಿದೆ. ಈಗಾಗಲೇ ಅಭಿವೃದ್ಧಿ ಬೆಂಗಳೂರು ಕೇಂದ್ರಿತವಾಗಿರುವ ಹಿನ್ನೆಲೆಯಲ್ಲಿ, ಹೊಸ ಮೂಲಸೌಕರ್ಯಗಳನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಶಿರಾಕ್ಕೆ ಇರುವ ಪ್ರಮುಖ ಅನುಕೂಲಗಳು

ಶಿರಾ ಭಾಗದಲ್ಲಿ ಈಗಾಗಲೇ ಮುಂಬೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ) ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

ಇದಲ್ಲದೆ, ರಸ್ತೆ ಮತ್ತು ರೈಲು ಸಂಪರ್ಕವೂ ಉತ್ತಮವಾಗಿದ್ದು, ಭೂಮಿ ಲಭ್ಯತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ದೃಷ್ಟಿಯಿಂದಲೂ ಶಿರಾ ಸೂಕ್ತ ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿಜಿಸಿಎ ನಿಯಮಕ್ಕೂ ಅನುಕೂಲ

ಡಿಜಿಸಿಎ (DGCA) ನಿಯಮಗಳ ಪ್ರಕಾರ, ಶಿರಾ ನಗರವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ಅಡ್ಡಿಯೂ ಇರುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಸಲಹೆ

ಬೆಂಗಳೂರು ಸುತ್ತಮುತ್ತ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಿದರೆ ಅಭಿವೃದ್ಧಿ ಮತ್ತೆ ಒಂದೇ ಭಾಗಕ್ಕೆ ಸೀಮಿತವಾಗುವ ಸಾಧ್ಯತೆ ಇದೆ. ಆದರೆ ಶಿರಾದಲ್ಲಿ ನಿರ್ಮಿಸಿದರೆ ಮಧ್ಯ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ರಾಜ್ಯದ ಸಮತೋಲಿತ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಕೇಂದ್ರಿತ ದೃಷ್ಟಿಕೋನದಿಂದ ಹೊರಬಂದು, ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ವಿ. ಸೋಮಣ್ಣ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:10 pm, Sat, 18 July 26

Source link

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರ ಕೇಳಿದ್ರೆ ದಂಗಾಗುವುದು ಗ್ಯಾರೆಂಟಿ! – Kannada News | FIFA World Cup 2026 Final Tickets Spark Price Records

ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳು ಗಗನಕ್ಕೇರಿವೆ. ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 19) ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಈ ಮಹಾಸಮರ ಕ್ರೀಡಾ ಲೋಕದ ಅತ್ಯಂತ ದುಬಾರಿ ಈವೆಂಟ್ ಆಗಿ ಹೊರಹೊಮ್ಮಿದೆ. ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಈ ಪಂದ್ಯವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕೋಟಿ ಕೋಟಿ ಖರ್ಚು ಮಾಡಲು ಸಿದ್ಧರಾಗಿದ್ದಾರೆ.

ಫಿಫಾ ಟಿಕೆಟ್​ಗಳ ಮಾರಾಟ ವಿವರ:

  • ಅತ್ಯಂತ ಕನಿಷ್ಠ ದರ: ಕ್ರೀಡಾಂಗಣದ ಅತ್ಯಂತ ಮೇಲಿನ ಸ್ಟ್ಯಾಂಡ್‌ನ (300 ಲೆವೆಲ್) ಒಂದು ಸೀಟಿನ ಬೆಲೆ $6,943 ರಿಂದ $7,600 ಕ್ಕೆ (ಸುಮಾರು ₹5.8 ಲಕ್ಷದಿಂದ ₹6.3 ಲಕ್ಷ) ಮಾರಾಟವಾಗಿದೆ.
  • ಸರಾಸರಿ ಟಿಕೆಟ್ ಬೆಲೆ: ಅಭಿಮಾನಿಗಳು ಪಂದ್ಯ ವೀಕ್ಷಿಸಲು ಖರೀದಿಸಿರುವ ಸರಾಸರಿ ಟಿಕೆಟ್ ಬೆಲೆ ಬರೋಬ್ಬರಿ $11,327 (ಸುಮಾರು ₹9.4 ಲಕ್ಷ) ಆಗಿದೆ. ಇದು ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸರಾಸರಿಯಾಗಿದೆ.
  • ಪ್ರೀಮಿಯಂ/ವಿಐಪಿ ಟಿಕೆಟ್: ಮೈದಾನಕ್ಕೆ ಅತ್ಯಂತ ಹತ್ತಿರವಿರುವ ಫ್ರಂಟ್ ಸೆಕ್ಷನ್‌ನ (115A) ಒಂದು ಟಿಕೆಟ್ $28,479 (ಸುಮಾರು ₹23.7 ಲಕ್ಷ) ಗೆ ಮಾರಾಟವಾಗಿದೆ. ಕೆಲವು ವಿಐಪಿ ಟ್ರೋಫಿ ಲಾಂಜ್ ಪ್ಯಾಕೇಜ್‌ಗಳ ಬೆಲೆ ₹30 ಲಕ್ಷದ ಗಡಿ ದಾಟಿದೆ.

ಬ್ಲ್ಯಾಕ್ ಮಾರ್ಕೆಟ್ ಹಾಗೂ ಅಧಿಕೃತ ರಿಸೇಲ್ ವೆಬ್‌ಸೈಟ್‌ಗಳಲ್ಲಿ (ಉದಾಹರಣೆಗೆ TickPick) ಟಿಕೆಟ್ ಬೆಲೆಗಳು ಸೃಷ್ಟಿಸಿರುವ ಹೊಸ ದಾಖಲೆಯ ವಿವರಗಳು ಹೀಗಿವೆ.

ಟಿಕೆಟ್ ವಿಭಾಗ USD INR
ಅಧಿಕೃತ ಆರಂಭಿಕ ಹಂತದ ಟಿಕೆಟ್ $2,030 – $7,600 ₹1.95 ಲಕ್ಷ – ₹6.3 ಲಕ್ಷ
ಸ್ಟ್ಯಾಂಡರ್ಡ್ ಟಾಪ್-ಟೈರ್ $10,990 ₹10.58 ಲಕ್ಷ
ಸರಾಸರಿ ಮರುಮಾರಾಟ ಖರೀದಿ ಬೆಲೆ $11,327 ₹10.90 ಲಕ್ಷ
 ಆನ್-ಫೀಲ್ಡ್ ಹಾಸ್ಪಿಟಾಲಿಟಿ (12 ಜನರ ಖಾಸಗಿ ಬಾಕ್ಸ್) $1,000,000+ ₹9.62 ಕೋಟಿ+
ಗರಿಷ್ಠ ಮರುಮಾರಾಟ ಮಾರುಕಟ್ಟೆ ದರ $2,300,000 ₹22.14 ಕೋಟಿ

22 ಕೋಟಿ ರೂ.!

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ (Block 124, Row 45) ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ತಲಾ $2.3 ಮಿಲಿಯನ್ ಅಂದರೆ ಸುಮಾರು ₹21.68 ಕೋಟಿಯಿಂದ ₹22.14 ಕೋಟಿ ಬೆಲೆಗೆ ಫಿಫಾ ರಿಸೇಲ್ ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗಿದೆ.

ಫಿಫಾ ರಿಸೇಲ್ ಮಾರುಕಟ್ಟೆಯಲ್ಲಿ ಬರೋಬ್ಬರಿ ₹22.14 ಕೋಟಿಗೆ (ಸುಮಾರು $2.3 ಮಿಲಿಯನ್) ಲಿಸ್ಟ್ ಆಗಿರುವ ಆ ಪ್ರೀಮಿಯಂ ಟಿಕೆಟ್‌ಗಳ ಅಸಲಿ ಮೂಲ ಬೆಲೆ ಕೇವಲ ₹5.36 ಲಕ್ಷದಿಂದ ₹10.18 ಲಕ್ಷ ($5,785 ರಿಂದ $10,990) ಆಗಿತ್ತು.

ಇದೀಗ ಸ್ಟೇಡಿಯಂನ ಲೋವರ್ ಡೆಕ್‌ನ ಬ್ಲಾಕ್ 124, ರೋ 45 ರಲ್ಲಿರುವ (Block 124, Row 45) ಇಂತಹ ನಾಲ್ಕು ಪ್ರೀಮಿಯಂ ಟಿಕೆಟ್‌ಗಳನ್ನು ಒಟ್ಟಾರೆಯಾಗಿ ಬರೋಬ್ಬರಿ ₹88 ಕೋಟಿ ರೂಪಾಯಿಗೆ ಮರುಮಾರಾಟಕ್ಕಿಡಲಾಗಿದೆ.

ಟಿಕೆಟ್ ದುಬಾರಿಯಾಗಲು ಕಾರಣವೇನು?

39 ವರ್ಷದ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಇದಾಗುವ ಸಾಧ್ಯತೆ ಇರುವುದರಿಂದ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಜಗತ್ತಿನಾದ್ಯಂತ ಜನರು ಮುಗಿಬಿದ್ದಿದ್ದಾರೆ.

ಹಾಗೆಯೇ ಫುಟ್‌ಬಾಲ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮೆಸ್ಸಿ ಒಂದು ಕಡೆಯಿದ್ದರೆ, ಮತ್ತೊಂದು ಕಡೆ ಸ್ಪೇನ್‌ನ 19 ವರ್ಷದ ಹೊಸ ಸೆನ್ಸೇಷನ್ ಲಾಮಿನ್ ಯಮಾಲ್ ಇದ್ದಾರೆ. ಇದು ‘ಸೌತ್ ಅಮೆರಿಕ vs ಯುರೋಪ್’ ಕದನ ಮಾತ್ರವಲ್ಲದೆ, ಇಬ್ಬರು ತಲೆಮಾರುಗಳ ಶ್ರೇಷ್ಠ ಆಟಗಾರರ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ.

ಮತ್ತೊಂದೆಡೆ, ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರಗಳನ್ನು ಹೆಚ್ಚಿಸುವ ಫಿಫಾದ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ರಿಸೇಲ್ ಮಾರುಕಟ್ಟೆಯಲ್ಲಿ ಬೆಲೆಗಳು ರಾಕೆಟ್ ವೇಗದಲ್ಲಿ ಜಿಗಿದಿವೆ.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಫೈನಲ್ ಪಂದ್ಯ ಯಾವಾಗ?

ಫಿಫಾ ವಿಶ್ವಕಪ್​ನ ಫೈನಲ್​ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ, ಜುಲೈ 20ರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದೆ. ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿದ್ದರೆ, ಸ್ಪೇನ್ 16 ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಲು ಕಾಯುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Source link

ಕೊಪ್ಪಳ: ಕಲ್ಯಾಣಿ ಸ್ಟೀಲ್ಸ್‌ಗೆ ಷರತ್ತುಬದ್ಧ ಅನುಮತಿ; ಜಿಲ್ಲಾಡಳಿತದ ನಡೆಗೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನ! – Kannada News | Koppal Kalyani Steels Gets Conditional Permission to Reopen Amid Controversy

ಕಲ್ಯಾಣಿ ಸ್ಟೀಲ್ಸ್‌ಗೆ ಷರತ್ತುಬದ್ಧ ಅನುಮತಿ

ಕೊಪ್ಪಳ, ಜುಲೈ 18: ತಾಲೂಕಿನ ಗಿಣಗೇರಾ ಬಳಿ ಇರುವ ಪ್ರಸಿದ್ಧ ‘ಕಲ್ಯಾಣಿ ಸ್ಟೀಲ್ಸ್ ಆಂಡ್ ಪವರ್ ಲಿಮಿಟೆಡ್’ ಕಾರ್ಖಾನೆಗೆ ಕೊನೆಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪುನರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಕಾರ್ಖಾನೆ ಬಂದ್ ಮಾಡುವ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ನಡೆದುಕೊಂಡ ರೀತಿಯು ಸಾರ್ವಜನಿಕರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಪರಿಸರ ನಿಯಮ ಉಲ್ಲಂಘನೆ: ಏನಿದು ಹಿನ್ನೆಲೆ?

ಕಲ್ಯಾಣಿ ಸ್ಟೀಲ್ ಕಾರ್ಖಾನೆಯು ವಾಟರ್ ಆ್ಯಕ್ಟ್ (ಜಲ ಮಾಲಿನ್ಯ ತಡೆ ಕಾಯ್ದೆ) ಹಾಗೂ ವಾಯು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕಾರ್ಖಾನೆಯಿಂದ ಹೊರಬೀಳುವ ಹೊಗೆ ಮತ್ತು ಧೂಳಿನಿಂದಾಗಿ ಸ್ಥಳೀಯರ ಆರೋಗ್ಯ ಹಾಗೂ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಜುಲೈ 3ರಂದೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ (Closure Notice) ಕಡಕ್ ಆದೇಶ ಹೊರಡಿಸಿತ್ತು.

ಜಿಲ್ಲಾಡಳಿತದ ವಿಳಂಬ ನೀತಿ

ಕೇಂದ್ರ ಮಂಡಳಿಯು ಜುಲೈ 3ರಂದೇ ಆದೇಶ ನೀಡಿದ್ದರೂ, ಕೊಪ್ಪಳ ಜಿಲ್ಲಾಡಳಿತ ಮಾತ್ರ ಈ ಬಗ್ಗೆ ತಕ್ಷಣ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದೇಶ ಹೊರಬಿದ್ದ ಬರೋಬ್ಬರಿ 11 ದಿನಗಳ ಬಳಿಕ, ಅಂದರೆ ಜುಲೈ 14ರಂದು ಜಿಲ್ಲಾಧಿಕಾರಿಗಳು ಕಾರ್ಖಾನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜೆಸ್ಕಾಂ (GESCOM) ಸಿಬ್ಬಂದಿಗೆ ಸೂಚನೆ ನೀಡಿದರು. ಅದರಂತೆ ಜುಲೈ 15ರಂದು ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪವರ್ ಕಟ್ ಮಾಡಿದ್ದರು.

ಕೇಂದ್ರದ ಆದೇಶ ಜಾರಿಗೆ ತರಲು ಜಿಲ್ಲಾಡಳಿತ ಇಷ್ಟೊಂದು ದಿನ ವಿಳಂಬ ಮಾಡಿದ್ದೇಕೆ? ಕಾರ್ಖಾನೆಯ ಮ್ಯಾನೇಜ್‌ಮೆಂಟ್‌ಗೆ ಸಮಯಾವಕಾಶ ಮಾಡಿಕೊಡಲಾಯಿತೇ? ಎಂಬ ಪ್ರಶ್ನೆಗಳು ಈಗ ಜಿಲ್ಲಾಡಳಿತದ ಮೇಲೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.

ಪವರ್ ಕಟ್ ಆದ ಮರುದಿನವೇ ಸಿಕ್ಕಿತು ಅನುಮತಿ!

ಇನ್ನು ಎಲ್ಲಕ್ಕಿಂತ ರೋಚಕ ತಿರುವು ಸಿಕ್ಕಿದ್ದು ಜುಲೈ 16ರಂದು. ಜೆಸ್ಕಾಂ ಸಿಬ್ಬಂದಿ ಜುಲೈ 15ರಂದು ವಿದ್ಯುತ್ ಕಡಿತಗೊಳಿಸಿದ ಬೆನ್ನಲ್ಲೇ, ಮರುದಿನವೇ (ಜುಲೈ 16) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಯನ್ನು ಪುನರಾರಂಭಿಸಲು 3 ತಿಂಗಳ ಕಾಲಾವಧಿಯ ಷರತ್ತುಬದ್ಧ ಅನುಮತಿಯನ್ನು ನೀಡಿದೆ.

ಮಂಡಳಿ ವಿಧಿಸಿರುವ ಪ್ರಮುಖ ಷರತ್ತುಗಳು ಇವು

ಕಾರ್ಖಾನೆ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರೂ, ಮುಂದಿನ 3 ತಿಂಗಳು ತೀವ್ರ ನಿಗಾದಲ್ಲಿ ಇಡಲಾಗುತ್ತಿದ್ದು, ಈ ಕೆಳಗಿನ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.

  • ಕಾರ್ಖಾನೆಯಿಂದ ಹೊರಬರುವ ಹೊಗೆಯ ಪ್ರಮಾಣವನ್ನು ನಿರಂತರವಾಗಿ ಗಮನಿಸಬೇಕು.
  • ಕೈಗಾರಿಕೆಗೆ ಬಳಸುವ ಕಚ್ಚಾ ವಸ್ತುಗಳು ಗಾಳಿಗೆ ಹರಡದಂತೆ ಸಂಪೂರ್ಣವಾಗಿ ಮುಚ್ಚಿಡಬೇಕು.
  • ಹೊಗೆ ಗೂಡುಗಳ (Chimneys) ಮಾಲಿನ್ಯದ ದತ್ತಾಂಶವನ್ನು (Data) ಸರಿಯಾಗಿ ನಿರ್ವಹಿಸಬೇಕು ಹಾಗೂ ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್ ಸಮರ್ಪಕವಾಗಿರಬೇಕು.
  • ಕಚೇರಿ ಹಾಗೂ ಕಾರ್ಖಾನೆಯ ಸುತ್ತಮುತ್ತ ಸಾರ್ವಜನಿಕರಿಗೆ ತೊಂದರೆಯಾಗದಂತೆ ಧೂಳು ಹರಡದಂತೆ ಸೂಕ್ತ ಮೇಲ್ವಿಚಾರಣೆ ನಡೆಸಬೇಕು.
  • ತ್ಯಾಜ್ಯ ಸಂಗ್ರಹಿಸುವ ಹೂಳಿನ ಹೊಂಡದ (Sludge pond/Waste handling) ಬಾಕಿ ಇರುವ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು.

ಒಟ್ಟಿನಲ್ಲಿ, ಮಾಲಿನ್ಯದ ದೂರಿನ ಮೇರೆಗೆ ಬಂದ್ ಆಗಿದ್ದ ಕಲ್ಯಾಣಿ ಸ್ಟೀಲ್ಸ್ ಕೇವಲ ಮೂರೇ ದಿನಗಳಲ್ಲಿ ಮತ್ತೆ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಆದರೆ, ಇಡೀ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತದ ತಡವಾದ ನಡೆ ಮಾತ್ರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET UG 2026: ಕುರಿ ಕಾಯುತ್ತಲೇ ನೀಟ್‌ನಲ್ಲಿ ಅಪ್ರತಿಮ ಸಾಧನೆ; ದೇಶಕ್ಕೇ 694ನೇ ರ‍್ಯಾಂಕ್ ಪಡೆದ ಕೊಪ್ಪಳದ ಹಳ್ಳಿ ಹೈದ! – Kannada News | Koppal’s Puttaraj Bheemanur: Overcoming Poverty, Achieving Top NEET Rank

ಕೊಪ್ಪಳ: ಕಠಿಣ ಪರಿಶ್ರಮ ಮತ್ತು ಛಲವೊಂದಿದ್ದರೆ ಎಂತಹ ಬಡತನವೂ ಸಾಧನೆಗೆ ಅಡ್ಡಿಯಾಗಲ್ಲ ಎಂಬುದನ್ನು ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಭಾನ್ವಿತ ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಹಗಲಲ್ಲಿ ಕುರಿ ಕಾಯುತ್ತಾ, ಸಗಣಿ ಬಳಿಯುತ್ತಾ ಕಡು ಬಡತನದಲ್ಲೇ ಓದಿದ ಈ ಹಳ್ಳಿ ಹೈದ ಪುಟ್ಟರಾಜ್ ಭೀಮನೂರ ನೀಟ್ (NEET) ಪರೀಕ್ಷೆಯಲ್ಲಿ ದೇಶಕ್ಕೇ ಅದ್ಭುತ ರ್ಯಾಂಕ್ ಪಡೆಯುವ ಮೂಲಕ ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ.

ಕೊಪ್ಪಳ ತಾಲೂಕಿನ ನಿವಾಸಿಯಾದ ಪುಟ್ಟರಾಜ್ ಭೀಮನೂರ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವನು. ಇವರ ತಂದೆ ತಾಯಿ ಇಂದಿಗೂ ದಿನಗೂಲಿಗಾಗಿ ಕೃಷಿ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ. ಸ್ವಂತ ಸೂರಿಲ್ಲದೆ ಊರು ಬಿಟ್ಟು ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಬಡತನದ ಬೇಗೆಯ ನಡುವೆಯೂ ಮಗನ ಓದಿಗೆ ಪೋಷಕರು ಶಕ್ತಿ ಮೀರಿ ಪ್ರೋತ್ಸಾಹ ನೀಡಿದ್ದು, ಇದೀಗಾ ಮಗನ ಸಾಧನೆಯಿಂದ ಈ ಪುಟ್ಟ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ

ರಜೆಯಲ್ಲಿ ಕುರಿ ಕಾಯುತ್ತಲೇ ಸಾಗುತ್ತಿತ್ತು ಅಧ್ಯಯನ:

ಗಂಗಾವತಿಯ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದ ಪುಟ್ಟರಾಜುಗೆ ವೈದ್ಯೆಯಾಗಬೇಕೆಂಬ ಬಲವಾದ ಕನಸಿತ್ತು. ಕಾಲೇಜಿಗೆ ರಜೆ ಸಿಕ್ಕಾಗಲೆಲ್ಲಾ ಮನೆಗೆ ಬಂದು ಸುಮ್ಮನೆ ಕುಳಿತುಕೊಳ್ಳದೆ, ಪೋಷಕರಿಗೆ ಆಸರೆಯಾಗಲು ಕುರಿ ಕಾಯುವ ಮತ್ತು ಸಗಣಿ ಬಳಿಯುವ ಕೆಲಸ ಮಾಡುತ್ತಿದ್ದನು. ಕುರಿ ಮೇಯಿಸಲು ಹೋದಾಗಲೂ ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿದ್ದ ಈತನ ದೃಢ ಸಂಕಲ್ಪವೇ ಇಂದು ಈತನನ್ನು ಯಶಸ್ಸಿನ ಶಿಖರಕ್ಕೇರಿಸಿದೆ.

ಒಂದು ವರ್ಷದ ತಪಸ್ಸಿಗೆ ಸಿಕ್ಕಿತು ಪ್ರತಿಫಲ:

ಪಿಯುಸಿ ಮುಗಿದ ಬಳಿಕ ಡಾಕ್ಟರ್ ಆಗುವ ಹಂಬಲದಿಂದ ಪುಟ್ಟರಾಜ್ ಒಂದು ವರ್ಷ ಕಾಲ ‘ಲಾಂಗ್ ಟರ್ಮ್’ (Long Term Coaching) ಕೋಚಿಂಗ್ ಪಡೆದು ಕಠಿಣ ಅಭ್ಯಾಸ ನಡೆಸಿದ್ದನು. ದಿನದ ಬಹುಪಾಲು ಸಮಯವನ್ನು ಓದಿಗಾಗಿಯೇ ಮೀಸಲಿಟ್ಟ ಈತನ ಶ್ರಮ ವ್ಯರ್ಥವಾಗಲಿಲ್ಲ. ಇದೀಗ ಪ್ರಕಟಗೊಂಡಿರುವ ನೀಟ್ ಫಲಿತಾಂಶದಲ್ಲಿ ಪುಟ್ಟರಾಜ್ ಎಸ್‌ಟಿ (ST) ಕೆಟಗೇರಿಯಲ್ಲಿ ದೇಶಕ್ಕೇ 694ನೇ ರ್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾನೆ.

ಕುರಿ ಕಾಯುವ ಹುಡುಗ ಈಗ ದೇಶ ಮೆಚ್ಚುವ ರ್ಯಾಂಕ್ ಗಳಿಸಿ, ಡಾಕ್ಟರ್ ಆಗ ಹೊರಟಿರುವುದು ಇಡೀ ಕೊಪ್ಪಳ ಜಿಲ್ಲೆಗೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಸೌಲಭ್ಯಗಳ ಕೊರತೆಯ ನಡುವೆಯೂ ಕೇವಲ ಸ್ವಪ್ರಯತ್ನ ಮತ್ತು ನಿರಂತರ ಅಭ್ಯಾಸದಿಂದ ಪುಟ್ಟರಾಜ್ ಈ ಮೈಲಿಗಲ್ಲು ತಲುಪಿದ್ದಾನೆ. ವೈದ್ಯನಾಗಿ ಸಮಾಜದ ಸೇವೆ ಮಾಡಬೇಕೆಂಬ ಈ ಹಳ್ಳಿ ಹೈದನ ಕನಸು ನನಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:41 pm, Sat, 18 July 26

Source link

ಮೊದಲ ದಿನವೇ 480 ಕೋಟಿ ಗಳಿಸಿದ ‘ಆಡಸ್ಸಿ’, ಭಾರತದಲ್ಲಿ ಗಳಿಸ್ಸಿದ್ದೆಷ್ಟು? – Kannada News | The Odyssey movie first day collection in India and world box office

ಕ್ರಿಸ್ಟೋಫರ್ ನೋಲನ್ (christopher nolan) ನಿರ್ದೇಶನದ ‘ದಿ ಆಡಸ್ಸಿ’ (The Odyssey) ಸಿನಿಮಾ ಜುಲೈ 17ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ವಿಶ್ವದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿತ್ತು ‘ದಿ ಆಡಸ್ಸಿ’. ಈ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ವರ್ಷಕ್ಕೆ ಮುಂಚೆಯೇ ಮಾರಾಟವಾಗಿದ್ದವು. ಮ್ಯಾಟ್ ಡೇಮನ್, ಟಾಮ್ ಹಾಲೆಂಡ್, ಅನ್ನಾ ಹಾಥ್​​ವೇ, ಜೆಂಡೆಯಾ ಸೇರಿದಂತೆ ಇನ್ನೂ ಹಲವು ದೊಡ್ಡ ಸ್ಟಾರ್ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲೂ ಸಹ ದೊಡ್ಡ ಮೊತ್ತವನ್ನು ಗಳಿಕೆ ಮಾಡಿದೆ ‘ಆಡಸ್ಸಿ’.

‘ದಿ ಆಡಸ್ಸಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಮೊದಲ ದಿನವೇ 50 ಮಿಲಿಯನ್ ಡಾಲರ್ ಮೊತ್ತ ಗಳಿಕೆ ಮಾಡಿದೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಮೊದಲ ದಿನವೇ ಬರೋಬ್ಬರಿ 481 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಕ್ರಿಸ್ಟೊಫರ್ ನೋಲನ್ ನಿರ್ದೇಶನ ಮಾಡಿರುವ ಈ ವರೆಗಿನ ಸಿನಿಮಾಗಳಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದೆ ‘ದಿ ಆಡಸ್ಸಿ’.

‘ದಿ ಆಡಸ್ಸಿ’ ಸಿನಿಮಾ ಭಾರತದಲ್ಲಿ ಸಹ ದೊಡ್ಡ ಮೊತ್ತದ ಗಳಿಕೆಯನ್ನೇ ಮಾಡಿದೆ. ಬಹುತೇಕ ಮೆಟ್ರೋ ನಗರಗಳಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಮಾತ್ರವೇ ಬಿಡುಗಡೆ ಆಗಿರುವ ಸಿನಿಮಾ ಮೊದಲ ದಿನ 17.40 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಅಡ್ವಾನ್ಸ್ ಬುಕಿಂಗ್ ಎಲ್ಲವೂ ಸೇರಿ ಸುಮಾರು 20 ಕೋಟಿ ಗಳಿಕೆ ಮೊದಲ ದಿನವೇ ಆಗಿದೆ. ಹಾಲಿವುಡ್ ಸಿನಿಮಾ ಒಂದು ಭಾರತದಲ್ಲಿ ಮೊದಲ ದಿನ ಗಳಿಸಿದ ದೊಡ್ಡ ಮೊತ್ತಗಳಲ್ಲಿ ಇದೂ ಸಹ ಒಂದಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ಯನ್ನು ಹಿಂದಿಕ್ಕಿದ ‘ಸ್ಪೈಡರ್​​ಮ್ಯಾನ್’

‘ದಿ ಆಡಸ್ಸಿ’ ಸಿನಿಮಾ, ಭಾರತದಲ್ಲಿ ಇಂಗ್ಲೀಷ್​​ನಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಸಹ ಬಿಡುಗಡೆ ಆಗಿತ್ತು. ಸಿನಿಮಾದ ಇಂಗ್ಲೀಷ್ ಆವೃತ್ತಿ ಭಾರತೀಯ ಭಾಷೆಯ ಆವೃತ್ತಿಗಳಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಸಿನಿಮಾದ ಇಂಗ್ಲೀಷ್ ಆವೃತ್ತಿ 13.75 ಕೋಟಿ ರೂಪಾಯಿ ಗಳಿಕೆ ಮಾಡಿದ್ದರೆ. ಹಿಂದಿ ಆವೃತ್ತಿ ಸುಮಾರು ಎರಡು ಕೋಟಿ, ತೆಲುಗು ಆವೃತ್ತಿ 1.10 ಕೋಟಿ ಮತ್ತು ತಮಿಳು ಆವೃತ್ತಿ 65 ಲಕ್ಷ ರೂಪಾಯಿ ಗಳಿಸಿದೆ.

ಭಾರತದಲ್ಲಿ ಹಲವು ಹಾಲಿವುಡ್ ಸಿನಿಮಾಗಳು ದೊಡ್ಡ ಮೊತ್ತದ ಗಳಿಕೆ ಮಾಡಿವೆ. ‘ಅವತಾರ್’ ಸಿನಿಮಾ ಸರಣಿ, ‘ಅವೇಂಜರ್ಸ್’ ಸರಣಿ ಭಾರತದಲ್ಲಿ ಭರ್ಜರಿ ಗಳಿಕೆ ಮಾಡಿದ ಹಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲಲ್ಲಿವೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಡೆಡ್​​ಪೂಲ್-ವೋಲ್ವರಿನ್’ ಸಿನಿಮಾ ಮೊದಲ ದಿನವೇ 21 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೇ ತಿಂಗಳ ಅಂತ್ಯಕ್ಕೆ ‘ಸ್ಪೈಡರ್​​ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾ ಸಹ ಭಾರಿ ದೊಡ್ಡ ಗಳಿಕೆಯನ್ನೇ ಭಾರತದಲ್ಲಿ ಮಾಡುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಶರದ್ ಪವಾರ್ ಮೌನ: ಎನ್‌ಡಿಎ ಸೇರ್ಪಡೆ ಕುರಿತು ಹಿರಿಯ ಮುತ್ಸದ್ದಿ ಮಾರ್ಮಿಕ ನುಡಿ – Kannada News | Sharad Pawar’s Silence on NDA Entry Fuels Maharashtra Political Tensions

ಮುಂಬೈ,ಜುಲೈ 18: ಮಹಾರಾಷ್ಟ್ರ ರಾಜಕೀಯದ ಚದುರಂಗದಾಟ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಶರದ್ ಪವಾರ್(Sharad Pawar) ನೇತೃತ್ವದ ಎನ್‌ಸಿಪಿ ಬಣವು ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟವನ್ನು ಸೇರಲಿದೆಯೇ ಎಂಬ ಊಹಾಪೋಹಗಳು ದೇಶಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿರುವ ಬೆನ್ನಲ್ಲೇ, ಖುದ್ದಾಗಿ ಎನ್‌ಸಿಪಿ (SP) ಮುಖ್ಯಸ್ಥ ಶರದ್ ಪವಾರ್ ಈ ಬಗ್ಗೆ ನಿಗೂಢ ಮೌನ ವಹಿಸಿದ್ದಾರೆ. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದ ಅವರು, ಈ ಸಮಯದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಮಾರ್ಮಿಕವಾಗಿ ಹೇಳಿ ಜಾರಿಕೊಂಡಿದ್ದಾರೆ.

ಬಿಜೆಪಿಯ ಬಿಗಿ ಪಟ್ಟು: ಎರಡೂ ಬಣಗಳು ಒಂದಾದರೆ ಮಾತ್ರ ಎನ್‌ಡಿಎಗೆ ಎಂಟ್ರಿ
ತೆರೆಮರೆಯಲ್ಲಿ ನಡೆಯುತ್ತಿರುವ ಈ ರಾಜಕೀಯ ಸಂಧಾನಗಳ ನಡುವೆ ಕೇಂದ್ರ ಆಡಳಿತ ಪಕ್ಷವಾದ ಬಿಜೆಪಿ ಅತ್ಯಂತ ಚಾಣಾಕ್ಷ ಹೆಜ್ಜೆ ಇಟ್ಟಿದೆ.

ಷರತ್ತುಬದ್ಧ ಆಫರ್: ಶರದ್ ಪವಾರ್ ಬಣವನ್ನು ಪ್ರತ್ಯೇಕವಾಗಿ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಬದಲಿಗೆ, ಸದ್ಯ ಸರ್ಕಾರದ ಭಾಗವಾಗಿರುವ ಸುನೇತ್ರಾ ಪವಾರ್ ಬಣ ಮತ್ತು ಶರದ್ ಪವಾರ್ ಬಣ ಎರಡೂ ಒಂದಾಗಿ ‘ಮಹಾ ವಿಲೀನ’ ಮಾಡಿಕೊಂಡರೆ ಮಾತ್ರ ಎನ್‌ಡಿಎ ಒಳಗೆ ಪ್ರವೇಶ ನೀಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕತ್ವ ಸ್ಪಷ್ಟ ಸಂದೇಶ ರವಾನಿಸಿದೆ.

ಕೇಂದ್ರ ಸಚಿವ ಸಂಪುಟದ ಆಮಿಷ: ಒಂದು ವೇಳೆ ಎರಡೂ ಬಣಗಳು ಒಂದೇ ಪಕ್ಷವಾಗಿ ವಿಲೀನಗೊಂಡರೆ, ಅಧಿಕಾರ ಸಮತೋಲನಕ್ಕಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಎರಡು ಪ್ರಮುಖ ಸಚಿವ ಸ್ಥಾನಗಳನ್ನು ನೀಡುವುದಾಗಿ ಬಿಜೆಪಿ ಪ್ರಸ್ತಾಪಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಆ ಚರ್ಚೆ ಈಗ ಮುಗಿದ ಅಧ್ಯಾಯ ಎಂದ ಸುಪ್ರಿಯಾ ಸುಳೆ
ಇನ್ನೊಂದೆಡೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಸೋನಮ್ ವಾಂಗ್ಚುಕ್ ಅವರನ್ನು ಭೇಟಿ ಮಾಡಲು ಬಂದಿದ್ದ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ಮಾಧ್ಯಮಗಳ ಎದುರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಮತ್ತಷ್ಟು ಓದಿ: ಶರದ್ ಪವಾರ್ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್: ಮರಾಠಿ ನಟಿ ಕೇತಕಿ ಚಿತಾಲೆ ಬಂಧನ

‘‘ಅಜಿತ್ ಈಗ ನಮ್ಮೊಂದಿಗಿಲ್ಲ. ಹಾಗಾಗಿ ಅವರ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲಾ ವಿಲೀನದ ಚರ್ಚೆಗಳು ಈಗ ಸಂಪೂರ್ಣವಾಗಿ ನಿಂತುಹೋಗಿವೆ. ಎರಡೂ ಬಣಗಳು ಒಂದಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಬೇಕೆಂಬುದು ನನ್ನ ಸಹೋದರನ ಕೊನೆಯ ಆಸೆಯಾಗಿತ್ತು. ಅವರು ಬದುಕಿದ್ದಾಗಲೂ, ಅವರ ನಿಧನದ ನಂತರವೂ ಪಕ್ಷ ಒಂದಾಗಲಿ ಎಂಬ ಪ್ರಾಮಾಣಿಕ ಭಾವನೆ ನಮ್ಮಲ್ಲಿತ್ತು. ಆದರೆ ದುರದೃಷ್ಟವಶಾತ್ ಎದುರು ಬಣದಿಂದ ಅಂತಹ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ನಾವು ಈ ಅಧ್ಯಾಯವನ್ನು ಸಂಪೂರ್ಣವಾಗಿ ಮುಚ್ಚಿದ್ದೇವೆ.’’ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ನಿಧನರಾದ ದಿನವೇ ನಮ್ಮ ಕೆಲವು ಹಿರಿಯ ನಾಯಕರು ಒಗ್ಗಟ್ಟಿನ ಮಾತು ಆಡಿದ್ದರೂ, ಮರುದಿನವೇ ಸುನೇತ್ರಾ ಪವಾರ್ ಬಣದವರು ಅಂಥದ್ದೇನೂ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದು ನಮಗೆ ತೀವ್ರ ದುಃಖ ತಂದಿದೆ ಎಂದು ಸುಪ್ರಿಯಾ ಸುಳೆ ಬೇಸರ ವ್ಯಕ್ತಪಡಿಸಿದ್ದಾರೆ.

2023 ರಲ್ಲಿ ಶರದ್ ಪವಾರ್ ವಿರುದ್ಧ ಸೋದರಳಿಯ ಅಜಿತ್ ಪವಾರ್ ಬಂಡಾಯವೆದ್ದು, ಬಹುಸಂಖ್ಯಾತ ಶಾಸಕರೊಂದಿಗೆ ಬಿಜೆಪಿ-ಶಿವಸೇನೆ ಸರ್ಕಾರ ಸೇರಿದ್ದರು. ಚುನಾವಣಾ ಆಯೋಗವು ಅಜಿತ್ ಬಣಕ್ಕೆ ಅಧಿಕೃತ ‘ಗಡಿಯಾರ’ ಚಿಹ್ನೆ ನೀಡಿತ್ತು. ಶರದ್ ಪವಾರ್ ಬಣ ‘ಎನ್‌ಸಿಪಿ-ಶರದ್ಚಂದ್ರ ಪವಾರ್’ ಹೆಸರಿನಲ್ಲಿ ಉಳಿದುಕೊಂಡಿತ್ತು.

ಇತ್ತೀಚೆಗೆ ಹೆಲಿಕಾಪ್ಟರ್ ಅವಘಡದಲ್ಲಿ ಅಜಿತ್ ಪವಾರ್ ಹಠಾತ್ ನಿಧನರಾದ ನಂತರ ಪಕ್ಷದ ನಾಯಕತ್ವ ಅವರ ಪತ್ನಿ ಸುನೇತ್ರಾ ಪವಾರ್ ಕೈ ಸೇರಿದೆ. ಅಜಿತ್ ಪವಾರ್ ಬದುಕಿದ್ದಾಗಲೇ ಚಿಕ್ಕಪ್ಪ-ಸೋದರಳಿಯ ಮತ್ತೆ ಒಂದಾಗಲು ಪುಣೆ ಮುನ್ಸಿಪಲ್ ಚುನಾವಣೆಯಲ್ಲಿ ರಹಸ್ಯ ಮೈತ್ರಿ ಮಾಡಿಕೊಂಡಿದ್ದರು. ಮಾತುಕತೆ ಬಹುದೂರ ಸಾಗಿತ್ತು. ಆದರೆ, ಅಜಿತ್ ದಾದಾ ಅವರ ನಿಧನ ಇಡೀ ರಾಜಕೀಯ ಸಮೀಕರಣವನ್ನು ಬದಲಿಸಿದ್ದು, ಸದ್ಯಕ್ಕೆ ಮಹಾರಾಷ್ಟ್ರ ರಾಜಕೀಯದ ಭವಿಷ್ಯ ಅನಿಶ್ಚಿತತೆಯಲ್ಲೇ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಕಾಲು ಮುರಿತ: 6 ಅಡಿ ಆಳದ ಚರಂಡಿಗೆ ಬಿದ್ದ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ – Kannada News | Sanjayanagar Safety Scandal: Open Drain Injures BJP Leader, Exposing GBA’s Public Peril

ಬೆಂಗಳೂರು, ಜು.18: ರಾಜಧಾನಿಯ ಸಂಜಯನಗರದಲ್ಲಿ ಮಹಾನಗರ ಜಂಟಿ ಆಡಳಿತ (ಜಿಬಿಎ) ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮತ್ತೊಂದು ಸಾರ್ವಜನಿಕ ಅವಘಡ ಸಂಭವಿಸಿದೆ. ಚರಂಡಿಯ ಹೂಳು ಎತ್ತಿದ ಬಳಿಕ ಚೇಂಬರ್ ಅನ್ನು ಮುಚ್ಚದೇ ಹಾಗೇ ಬಿಟ್ಟಿದ್ದರಿಂದಾಗಿ, ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕರ್ನಾಟಕ ರಾಜ್ಯ ಕರಕುಶಲ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಆರು ಅಡಿ ಆಳದ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ನಿನ್ನೆ ರಾತ್ರಿ ಸಂಜಯನಗರದ ಡಾಲರ್ಸ್ ಕಾಲೋನಿ ಬಳಿ ಈ ಆಘಾತಕಾರಿ ಘಟನೆ ನಡೆದಿದ್ದು, ರಾಘವೇಂದ್ರ ಶೆಟ್ಟಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಬಿಎ ಸಿಬ್ಬಂದಿಗಳು ಇತ್ತೀಚೆಗೆ ಚರಂಡಿಯ ಹೂಳು ಎತ್ತಿ ಸ್ವಚ್ಛಗೊಳಿಸಿದ್ದರು. ಆದರೆ, ನಿಯಮದ ಪ್ರಕಾರ ಚೇಂಬರ್ ಅನ್ನು ಸರಿಯಾಗಿ ಮುಚ್ಚದೇ ಉದಾಸೀನತೆ ತೋರಿದ್ದರು. ನಿನ್ನೆ ರಾತ್ರಿ ಡಾಲರ್ಸ್ ಕಾಲೋನಿ ಮುಖ್ಯರಸ್ತೆಯ ಫುಟ್‌ಪಾತ್ ಮೇಲೆ ಬೇಳೂರು ರಾಘವೇಂದ್ರ ಶೆಟ್ಟಿ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಕತ್ತಲಲ್ಲಿ ತೆರೆದಿದ್ದ ಚರಂಡಿ ಕಾಣದೇ ನೇರವಾಗಿ ಒಳಗೆ ಬಿದ್ದಿದ್ದಾರೆ.

ಸುಮಾರು 6 ಅಡಿ ಆಳದ ಚರಂಡಿಗೆ ಬಿದ್ದ ರಭಸಕ್ಕೆ ರಾಘವೇಂದ್ರ ಶೆಟ್ಟಿ ಅವರ ಕಾಲಿನ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಬಿಎ ಅಧಿಕಾರಿಗಳ ಜೀವವಿರೋಧಿ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸಂಜಯನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುತ್ತಿರುವ ಜಿಬಿಎ ಕಮಿಷನರ್, ಸಂಬಂಧಪಟ್ಟ ಇಲಾಖೆಯ ಮುಖ್ಯ ಎಂಜಿನಿಯರ್, ಕಾಮಗಾರಿ ನಡೆಸಿದ ಕಂಟ್ರಾಕ್ಟರ್ ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದ ನಗರಾಭಿವೃದ್ಧಿ ಸಚಿವರ ಮೇಲೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: “ಬಟ್ಟೆ ಗಂಟು ಬಿಚ್ಚಿದರೆ ರಕ್ತ ವಾಂತಿ ಮಾಡಿ ಸಾಯ್ತೀಯಾ” ಎಂದು ಹೆದರಿಸಿ ಬಂಗಾರ, ನಗದು ದೋಚಿದ ಬೆಂಗಳೂರಿನ ನಕಲಿ ಸ್ವಾಮೀಜಿ

ಸಾರ್ವಜನಿಕರ ತೀವ್ರ ಆಕ್ರೋಶ:

ರಾಜಧಾನಿಯ ಫುಟ್‌ಪಾತ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಜಿಬಿಎ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರು ಓಡಾಡುವ ಫುಟ್‌ಪಾತ್‌ಗಳ ಮೇಲೆ ಬೀದಿ ವ್ಯಾಪಾರಿಗಳು ಅಕ್ರಮವಾಗಿ ಜಾಗ ಆಕ್ರಮಿಸಿಕೊಳ್ಳುತ್ತಿದ್ದಾರೆ, ಮತ್ತೊಂದೆಡೆ ಅಧಿಕಾರಿಗಳು ಇಂತಹ ಅಪಾಯಕಾರಿ ಚರಂಡಿಗಳನ್ನು ತೆರೆದಿಟ್ಟು ಪಾದಚಾರಿಗಳ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಕೂಡಲೇ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಇಡೀ ನಗರದಾದ್ಯಂತ ಫುಟ್‌ಪಾತ್‌ಗಳನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ವಿಕಾಸ್ ಟಿವಿ9 ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ – Kannada News | ICC Confirms 12 Direct Qualifiers and New Format for 2028 T20 World Cup

ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಜಂಟಿಯಾಗಿ ಆಯೋಜಿಸಲಿರುವ 2028ರ ಟಿ20 ವಿಶ್ವಕಪ್  ಟೂರ್ನಿಗೆ ಒಟ್ಟು 12 ತಂಡಗಳು ಈಗಾಗಲೇ ನೇರವಾಗಿ ಅರ್ಹತೆ ಪಡೆದುಕೊಂಡಿವೆ. ಇನ್ನುಳಿದ 8 ತಂಡಗಳ ಸ್ಥಾನಗಳಿಗಾಗಿ ಅರ್ಹತಾ ಸುತ್ತು ನಡೆಸುವುದಾಗಿ ಐಸಿಸಿ ತಿಳಿಸಿದೆ. ಅದರಂತೆ 2028ರ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆದ 12 ತಂಡಗಳ ಪಟ್ಟಿ ಈ ಕೆಳಗಿನಂತಿದೆ… (PC: ICC)

Source link

FIFA World Cup 2026: ಯಾರಿಗೆ ಸಿಗಲಿದೆ ಗೋಲ್ಡನ್ ಬೂಟ್? – Kannada News | FIFA World Cup 2026 Golden Boot Contenders

FIFA World Cup 2026: ಫಿಫಾ ವಿಶ್ವಕಪ್ ಮುಕ್ತಾಯದ ಹಂತಕ್ಕೆ ತಲುಪಿದೆ. ಇನ್ನುಳಿದಿರುವುದು ಕೇವಲ 2 ಪಂದ್ಯಗಳು ಮಾತ್ರ. ಈ ಪಂದ್ಯಗಳ ಮೂಲಕ ಈ ಬಾರಿಯ ಗೋಲ್ಡನ್ ಬೂಟ್ ಯಾರಿಗೆ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ. ಸದ್ಯ ಈ ಪ್ರಶಸ್ತಿಗಾಗಿ ಐವರು ಆಟಗಾರರ ನಡುವೆ ಪೈಪೋಟಿಯಿದ್ದು, ಇವರಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಮುಂಚೂಣಿಯಲ್ಲಿದ್ದಾರೆ.

ಏನಿದು ಗೋಲ್ಡನ್ ಬೂಟ್?

ಗೋಲ್ಡನ್ ಬೂಟ್ ಎಂಬುದು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಗೋಲುಗಳನ್ನು ಗಳಿಸಿದ ಆಟಗಾರನಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ.

ಇಡೀ ವಿಶ್ವಕಪ್ ಟೂರ್ನಿಯಲ್ಲಿ ಯಾವ ಆಟಗಾರ ಅತಿ ಹೆಚ್ಚು ಗೋಲು ಬಾರಿಸುತ್ತಾರೋ ಅವರಿಗೆ ಈ ಚಿನ್ನದ ಬೂಟ್ ಆಕಾರದ ಟ್ರೋಫಿ ಸಿಗುತ್ತದೆ.

ಇಬ್ಬರು ಆಟಗಾರರು ಸಮಾನ ಗೋಲು ಹೊಡೆದರೆ, ಯಾರು ಹೆಚ್ಚು ಅಸಿಸ್ಟ್ (ಗೋಲು ಹೊಡೆಯಲು ಸಹಾಯ) ಮಾಡಿದ್ದಾರೋ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದೂ ಸಮನಾಗಿದ್ದರೆ, ಮೈದಾನದಲ್ಲಿ ಅತಿ ಕಡಿಮೆ ನಿಮಿಷ ಆಡಿದವರಿಗೆ ಈ ಪ್ರಶಸ್ತಿ ಒಲಿಯುತ್ತದೆ.

ಐವರ ನಡುವೆ ಪೈಪೋಟಿ:

2026ರ ಫಿಫಾ ವಿಶ್ವಕಪ್‌ನ ಅತ್ಯುನ್ನತ ಸ್ಕೋರರ್ ಪ್ರಶಸ್ತಿಯಾದ ‘ಗೋಲ್ಡನ್ ಬೂಟ್’ ರೇಸ್ ಸದ್ಯ ಐವರು ಆಟಗಾರರ ನಡುವೆ ಪೈಪೋಟಿ ಇದೆ. ಆ ಐವರೆಂದರೆ…

ಸ್ಥಾನ ಆಟಗಾರ ದೇಶ ಗೋಲು ಅಸಿಸ್ಟ್ ಮುಂದಿನ ಪಂದ್ಯ
1 ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ 8 4 ಫೈನಲ್ (ಸ್ಪೇನ್ ವಿರುದ್ಧ)
2 ಕಿಲಿಯನ್ ಎಂಬಾಪೆ ಫ್ರಾನ್ಸ್ 8 3 3ನೇ ಸ್ಥಾನದ ಪಂದ್ಯ (ಇಂಗ್ಲೆಂಡ್ ವಿರುದ್ಧ)
3 ಹ್ಯಾರಿ ಕೇನ್ ಇಂಗ್ಲೆಂಡ್ 6 1 3ನೇ ಸ್ಥಾನದ ಪಂದ್ಯ (ಫ್ರಾನ್ಸ್ ವಿರುದ್ಧ)
4 ಜೂಡ್ ಬೆಲ್ಲಿಂಗ್‌ಹ್ಯಾಮ್ ಇಂಗ್ಲೆಂಡ್ 6 1 3ನೇ ಸ್ಥಾನದ ಪಂದ್ಯ (ಫ್ರಾನ್ಸ್ ವಿರುದ್ಧ)
5 ಉಸ್ಮಾನೆ ಡೆಂಬೆಲೆ ಫ್ರಾನ್ಸ್ 5 2 3ನೇ ಸ್ಥಾನದ ಪಂದ್ಯ (ಇಂಗ್ಲೆಂಡ್ ವಿರುದ್ಧ)

ಮೆಸ್ಸಿ vs ಎಂಬಾಪೆ:

ಲಿಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಾಪೆ ನಡುವಿನ ಗೋಲ್ಡನ್ ಬೂಟ್ ಪೈಪೋಟಿ ಅತ್ಯಂತ ರೋಮಾಂಚಕ ಘಟ್ಟವನ್ನು ತಲುಪಿದೆ. 2022ರ ಖತಾರ್ ವಿಶ್ವಕಪ್ ಫೈನಲ್‌ನ ಅದ್ಭುತ ಮುಖಾಮುಖಿಯ ನಂತರ, ಈಗ 2026ರ ವಿಶ್ವಕಪ್‌ನಲ್ಲೂ ಇವರಿಬ್ಬರೇ ಗೋಲ್ಡನ್ ಬೂಟ್ ರೇಸ್‌ನ ಅಗ್ರಸ್ಥಾನದಲ್ಲಿದ್ದಾರೆ.

ಸದ್ಯ ಮೆಸ್ಸಿ ಮತ್ತು ಎಂಬಾಪೆ ಇಬ್ಬರೂ ಪ್ರಸ್ತುತ ತಲಾ 8 ಗೋಲುಗಳನ್ನು ಗಳಿಸಿ ಜಂಟಿ ಮುನ್ನಡೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೆಸ್ಸಿ ಎರಡು ಅದ್ಭುತ ಅಸಿಸ್ಟ್‌ಗಳನ್ನು ಮಾಡುವ ಮೂಲಕ ಒಟ್ಟು 4 ಅಸಿಸ್ಟ್‌ಗಳನ್ನು ಹೊಂದಿದ್ದಾರೆ. ಎಂಬಾಪೆ 3 ಅಸಿಸ್ಟ್‌ಗಳನ್ನು ಹೊಂದಿದ್ದು, ಹೀಗಾಗಿ ಮೆಸ್ಸಿ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎನ್ನಬಹುದು.

  • ಕಿಲಿಯನ್ ಎಂಬಾಪೆ: ಜುಲೈ 19 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ 3ನೇ ಸ್ಥಾನದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
  • ಲಿಯೋನೆಲ್ ಮೆಸ್ಸಿ: ಜುಲೈ 20 ರಂದು ಸ್ಪೇನ್ ವಿರುದ್ಧದ ಮಹಾ ಫೈನಲ್ ಪಂದ್ಯದಲ್ಲಿ ಮೆಸ್ಸಿ ಕಣಕ್ಕಿಳಿಯಲಿದ್ದಾರೆ.

ಪ್ರಸ್ತುತ ಇಬ್ಬರೂ ದಿಗ್ಗಜರು ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುನ್ನಡೆಯಲ್ಲಿದ್ದಾರೆ. ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಇಂಗ್ಲೆಂಡ್ ವಿರುದ್ಧದ ಮೂರನೇ ಸ್ಥಾನದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಇಲ್ಲಿ ಗೋಲು ಗಳಿಸಿ ರೇಸ್‌ನಲ್ಲಿ ಮುನ್ನಡೆ ಸಾಧಿಸಲು ಅವರಿಗೆ ಮತ್ತೊಂದು ಸುವರ್ಣ ಅವಕಾಶವಿದೆ.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಮತ್ತೊಂದೆಡೆ, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಸ್ಪೇನ್ ವಿರುದ್ಧದ ಫೈನಲ್ ಪಂದ್ಯದ ಮೂಲಕ ಎಂಬಾಪೆ ಅವರನ್ನು ಹಿಂದಿಕ್ಕಿ ಗೋಲ್ಡನ್ ಬೂಟ್ ಅನ್ನು ತಮ್ಮದಾಗಿಸಿಕೊಳ್ಳಬಹುದು. ಹೀಗಾಗಿ, ಈ ಮುಂದಿನ ಎರಡು ಪಂದ್ಯಗಳ ರೋಮಾಂಚಕ ಪ್ರದರ್ಶನದ ಆಧಾರದ ಮೇಲೆಯೇ ಈ ಬಾರಿಯ ಗೋಲ್ಡನ್ ಬೂಟ್ ಯಾರ ಪಾಲಾಗಲಿದೆ ಎಂಬುದು ಅಂತಿಮವಾಗಿ ನಿರ್ಧಾರವಾಗಲಿದೆ.

Source link

PSI Recruitment 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ! – Kannada News | Karnataka PSI Recruitment 2026: 253 Civil Sub Inspector Vacancies Announced

ಬೆಂಗಳೂರು: ಪೊಲೀಸ್ ಇಲಾಖೆಗೆ ಸೇರಬಯಸುವ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಸಿಹಿ ಸುದ್ದಿ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಹುದ್ದೆಗಳ ಭರ್ತಿಗೆ ಭರ್ಜರಿ ಚಾಲನೆ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ತುಂಬಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಒಟ್ಟು 600 ಹುದ್ದೆಗಳಿಗೆ ಅನುಮತಿ, 253 ಹುದ್ದೆಗಳ ಭರ್ತಿ:

ರಾಜ್ಯ ಪೊಲೀಸ್ ಇಲಾಖೆಯಿಂದ ಒಟ್ಟು 600 ಪಿಎಸ್‌ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅಧಿಕೃತವಾಗಿ ಅನುಮತಿ ದೊರೆತಿದೆ. ಈ ಮಂಜೂರಾದ ಹುದ್ದೆಗಳ ಪೈಕಿ ಪ್ರಸ್ತುತ 253 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಮೊದಲ ಹಂತದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲು ಇಲಾಖೆಯು ಮುಂದಾಗಿದೆ.

ಡಿಜಿ ಮತ್ತು ಐಜಿಪಿ ಕಚೇರಿಯಿಂದ ಅಧಿಕೃತ ಆದೇಶ:

ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DG & IGP) ಕಚೇರಿಯಿಂದ ಮಹತ್ವದ ಆದೇಶ ಪತ್ರವೊಂದು ಹೊರಬಿದ್ದಿದೆ. ಕೆಸಿಎಸ್ ನಿಯಮ-32ರ ಅಡಿಯಲ್ಲಿ ಸದ್ಯ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಮುಂದಿನ ವರ್ಷದ ಹುದ್ದೆಗಳೂ ಸೇರ್ಪಡೆ:

ವರದಿಯ ಪ್ರಕಾರ, ಪ್ರಸ್ತುತ ಖಾಲಿ ಇರುವ ಹುದ್ದೆಗಳಷ್ಟೇ ಅಲ್ಲದೆ, ಮುಂದಿನ ವರ್ಷದಲ್ಲಿ ನೇರ ನೇಮಕಾತಿ ಅಡಿಯಲ್ಲಿ ಖಾಲಿಯಾಗಲಿರುವ ಹುದ್ದೆಗಳನ್ನೂ ಸಹ ಈಗಲೇ ಮುಂಚಿತವಾಗಿ ಗುರುತಿಸಲಾಗುತ್ತಿದೆ. ಆ ಹುದ್ದೆಗಳನ್ನೂ ಸಹ ಒಟ್ಟಿಗೆ ಸೇರಿಸಿಕೊಂಡು ಪಿಎಸ್‌ಐ (ಸಿವಿಲ್) ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲು ಜವಾಬ್ದಾರಿಯುತ ಅಧಿಕಾರಿಗಳಿಗೆ ಕಚೇರಿಯಿಂದ ಸೂಕ್ತ ಸೂಚನೆ ನೀಡಲಾಗಿದೆ. ಇಲಾಖೆಯ ಈ ಕ್ರಮದಿಂದಾಗಿ ಮುಂಬರುವ ದಿನಗಳಲ್ಲಿ ಪಿಎಸ್‌ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶ ಸಿಗುವಂತಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 12:43 pm, Sat, 18 July 26

Source link

Exit mobile version