ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ – Kannada News

ನವದೆಹಲಿ, ಜೂನ್ 4: ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki), ದೇಶದ ಮೊದಲ 100% ಎಥನಾಲ್ ಆಧಾರಿತ ‘ಫ್ಲೆಕ್ಸ್ ಫ್ಯುಯೆಲ್’ (Flex-Fuel) ಕಾರು ವ್ಯಾಗನ್ಆರ್ (WagonR) ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ 100% ಶುದ್ಧ ಎಥನಾಲ್ (E100) ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮೊದಲ ಮಾಸ್-ಮಾರ್ಕೆಟ್ (ಸಾಮಾನ್ಯ ಜನರಿಗಾಗಿ ಬಿಡುಗಡೆಯಾದ) ಪ್ಯಾಸೆಂಜರ್ ಕಾರ್ ಆಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಈ ಕಾರನ್ನು ಅನಾವರಣಗೊಳಿಸಲಾಯಿತು. ಈ ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ಅನ್ನು ಶೇ. 20 ರಿಂದ ಹಿಡಿದು ಶೇ. 100 ರಷ್ಟು ಎಥನಾಲ್ ಮಿಶ್ರಣದ ಇಂಧನದಲ್ಲೂ ಸುಲಭವಾಗಿ ಚಲಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಇಂಜಿನ್‌ನ ಫ್ಯುಯೆಲ್ ಲೈನ್‌ಗಳು, ಇಂಜೆಕ್ಟರ್‌ಗಳು ಮತ್ತು ಸೀಲ್‌ಗಳನ್ನು ತುಕ್ಕು ನಿರೋಧಕವಾಗಿ (Corrosion-resistant) ಮಾರ್ಪಡಿಸಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಈ ಫ್ಲೆಕ್ಸ್ ಫ್ಯುಯೆಲ್ ಕಾರುಗಳ ತಯಾರಿಕಾ ವೆಚ್ಚ ಸುಮಾರು ₹40,000 ದಿಂದ ₹50,000 ದಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಫ್ಲೆಕ್ಸ್ ಫುಯೆಲ್ ಕಾರಿನಿಂದ ಲಾಭಗಳೇನು?

  • ಮಾಲಿನ್ಯ ಇಳಿಕೆ: ಎಥನಾಲ್ ಪರಿಸರಸ್ನೇಹಿ ಇಂಧನವಾಗಿದ್ದು, ಇದು ಪೆಟ್ರೋಲ್‌ಗಿಂತ ಅತ್ಯಂತ ಕಡಿಮೆ ಪ್ರಮಾಣದ ಇಂಗಾಲದ ಹೊರಸೂಸುವಿಕೆಯನ್ನು (Carbon emissions) ಹೊಂದಿರುತ್ತದೆ. ಇದರಿಂದ ಮಹಾನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಆಮದು ವೆಚ್ಚದ ಉಳಿತಾಯ: ಪ್ರಸ್ತುತ ಭಾರತವು ತನ್ನ ತೈಲ ಅಗತ್ಯದ 87% ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯವಾಗಿ ಎಥನಾಲ್ ಬಳಕೆ ಹೆಚ್ಚಾದಂತೆ ಕಚ್ಚಾ ತೈಲದ ಆಮದು ಕಡಿಮೆಯಾಗಿ, ದೇಶದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.
  • ರೈತರಿಗೆ ಆರ್ಥಿಕ ಬಲ: ಎಥನಾಲ್ ಅನ್ನು ಕಬ್ಬಿನ ಕಾಕಂಬಿ (Molasses), ಜೋಳ, ನುಚ್ಚಕ್ಕಿ ಮತ್ತು ಕೃಷಿ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ತಂತ್ರಜ್ಞಾನದಿಂದ ದೇಶದ ರೈತರ ಆದಾಯ ಹೆಚ್ಚಾಗಲಿದ್ದು, ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?

ಇಂಧನ ಲಭ್ಯತೆಯ ಸವಾಲು

ಪ್ರಸ್ತುತ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಸಿದ್ಧವಾಗಿದ್ದರೂ, ದೇಶಾದ್ಯಂತ 100% ಎಥನಾಲ್ ಇಂಧನ ಸಿಗುವ ಪಂಪ್‌ಗಳ ಕೊರತೆಯಿದೆ. ಸದ್ಯಕ್ಕೆ ದೆಹಲಿ ಮತ್ತು ಮುಂಬೈ-ನಾಗ್ಪುರ ಕಾರಿಡಾರ್‌ಗಳಲ್ಲಿ ಕೇವಲ 50 ರಿಂದ 100 ಬಂಕುಗಳಲ್ಲಿ ಮಾತ್ರ ಇಂತಹ ಇಂಧನ ಲಭ್ಯವಿದೆ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಇಂತಹ ಸುಮಾರು 5,000 ಫುಯೆಲ್ ಸೆಂಟರ್​ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುರುಗ್ರಾಮದ ಮಹಾನಗರ ಪಾಲಿಕೆ ಕಚೇರಿಗೆ ಬಾಂಬ್ ಬೆದರಿಕೆ; ಮೇಯರ್ ಕಚೇರಿ ಖಾಲಿ, ಹೈ ಅಲರ್ಟ್ ಘೋಷಣೆ – Kannada News

ಗುರುಗ್ರಾಮ, ಜೂನ್ 4: ಹರಿಯಾಣದ ಗುರುಗ್ರಾಮದಲ್ಲಿರುವ ಮಹಾನಗರ ಪಾಲಿಕೆ ಪ್ರಧಾನ ಕಚೇರಿಗೆ ಇಂದು ಬಾಂಬ್ ಬೆದರಿಕೆ (Bomb Threat) ಬಂದಿದೆ. ಪಾಲಿಕೆಯ ಮುಖ್ಯ ಕಚೇರಿ ಹಾಗೂ ಮೇಯರ್ ಅವರ ಕಾರ್ಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಬಂದ ಅನಾಮಧೇಯ ಕರೆಯಿಂದಾಗಿ ಇಡೀ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಂದು ಮಧ್ಯಾಹ್ನ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಫೋನ್ ಕರೆ ಬಂದಿದ್ದು, ಕಟ್ಟಡದ ಆವರಣದಲ್ಲಿ ಮತ್ತು ಮೇಯರ್ ಕಚೇರಿಯ ಸಮೀಪದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದ.

ಬೆದರಿಕೆ ಕರೆ ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮೇಯರ್, ಹಿರಿಯ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿ ಸೇರಿದಂತೆ ಇಡೀ ಕಟ್ಟಡದಲ್ಲಿದ್ದವರನ್ನು ತಕ್ಷಣವೇ ಹೊರಗೆ ಕಳುಹಿಸಿ ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಗುರುಗ್ರಾಮ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ್ದರು.

ಇದನ್ನೂ ಓದಿ: ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ

ಮೇಯರ್ ಕಚೇರಿ, ಕೌನ್ಸಿಲರ್ ಗಳ ಕೊಠಡಿಗಳು, ಬೇಸ್‌ಮೆಂಟ್ ಪಾರ್ಕಿಂಗ್ ಸೇರಿದಂತೆ ಇಡೀ 5 ಅಂತಸ್ತಿನ ಕಟ್ಟಡವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕಚೇರಿಯ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಇದುವರೆಗಿನ ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಹುಸಿ ಬಾಂಬ್ ಕರೆ ಇರಬಹುದು ಎಂದು ಶಂಕಿಸಲಾಗಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ವಹಿಸದೆ ಸಂಪೂರ್ಣ ತಪಾಸಣೆ ಮುಂದುವರಿಸಲಾಗಿದೆ. ಸದ್ಯ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗ: ಮಾಜಿ ಜಿಪಂ ಸದಸ್ಯನಿಂದಲೇ ಖಾದಿ ಸಹಕಾರ ಸಂಘದ ಕೋಟ್ಯಂತರ ಆಸ್ತಿ ಕಬಳಿಕೆ – Kannada News

ಖಾದಿ ಪರಸ್ಪರ ಸಹಕಾರ ಸಂಘImage Credit source: tv9 kannada

ಚಿತ್ರದುರ್ಗ, ಜೂನ್​ 04: ಅದು ಗ್ರಾಮೋದ್ಯೋಗ ಕನಸಿನನೊಂದಿಗೆ ಹುಟ್ಟಿದ ಖಾದಿ ಸಹಕಾರ ಸಂಘ. ಅನೇಕರ ಸೇವೆಯಿಂದ ಸಂಘದ ಹೆಸರಿನಲ್ಲಿರುವ ಕೋಟ್ಯಂತರ ರೂ ಮೌಲ್ಯದ ಆಸ್ತಿಯಿದೆ. ಆದರೆ ಇದೀಗ ಸುಮಾರು 4 ಕೋಟಿ ರೂ ಮೌಲ್ಯದ ಸಂಘದ ಆಸ್ತಿ (Property) ಭೂಗಳ್ಳರ ಪಾಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸಂಘದ ಆಸ್ತಿಯನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಲಪಟಾಯಿಸಿರುವ ಆರೋಪ ಕೇಳಿ ಬಂದಿದೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘದಲ್ಲಿ ಗೋಲ್​ ಮಾಲ್​​
  • ಸಂಘದ ಹೆಸರಿನಲ್ಲಿರುವ ಕೋಟ್ಯಂತರ ರೂ ಮೌಲ್ಯದ ಆಸ್ತಿ ಕಬಳಿಕೆ
  • ಮಾಜಿ ಜಿಲ್ಲಾ ಪಂಚಾಯತಿ ಸದಸ್ಯನಿಂದಲೇ ಕಬಳಿಕೆ ಆರೋಪ

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ

ಮಹಾತ್ಮ ಗಾಂಧೀಜಿ ಅವರ ಗ್ರಾಮ ಭಾರತದ ಕನಸಿನೊಂದಿಗೆ ಚಿತ್ರದುರ್ಗದಲ್ಲಿ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘ ನಿರ್ಮಾಣವಾಗಿತ್ತು. ಚಿತ್ರದುರ್ಗ, ಭರಮಸಾಗರ ಸೇರಿದಂತೆ ವಿವಿಧೆಡೆ ಸಂಘದ ಬೆಲೆ ಬಾಳುವ ಆಸ್ತಿಯಿದೆ. ಆದರೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್​ಎಂಎಲ್​ ತಿಪ್ಪೇಸ್ವಾಮಿ ಎಂಬುವವರು ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿರುವ ಆಸ್ತಿ ಲಪಟಾಯಿಸಿದ್ದಾರೆ. ಸಂಘದ ಮಾಜಿ ಉದ್ಯೋಗಿ ಜಯಪ್ಪ ಎಂಬುವರನ್ನು ಬಳಸಿಕೊಂಡು 4 ಕೋಟಿ ರೂ ಮೌಲ್ಯದ ಆಸ್ತಿಯನ್ನು ಖಾಲಿ ಜಾಗ ಎಂದು ನಕಲಿ ದಾಖಲೆ ಸೃಷ್ಟಿಸಿ 40 ಲಕ್ಷ ರೂಪಾಯಿಗೆ ಖರೀದಿಸಿದ್ದಾಗಿ ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.

ಸೂಕ್ತ ಕ್ರಮಕ್ಕೆ ಸಂಘದ ಸದಸ್ಯರು ಆಗ್ರಹ

ಇನ್ನು ಚಿತ್ರದುರ್ಗ ನಗರ, ಮಾಳಪ್ಪನಹಟ್ಟಿ, ಮಾನಂಗಿ, ಭರಮಸಾಗರ ಸೇರಿ ವಿವಿಧೆಡೆ ಸಂಘದ ಆಸ್ತಿ ಇದೆ. ಗ್ರಾಮದ ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಎಲ್ಲಾ ಕಡೆ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಆದರೆ ಭರಮಸಾಗರದಲ್ಲಿ ಮಾತ್ರ ಗ್ರಾಮ ಪಂಚಾಯತಿ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಸೇರಿದಂತೆ ಇತರೆ ಅಧಿಕಾರಿಗಳು ಶಾಮೀಲಾಗಿ ಸಹಕಾರ ಸಂಘದ ಆಸ್ತಿ ಕಬಳಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಹಕಾರ ಸಂಘದ ಆಸ್ತಿ ಉಳಿಸಬೇಕು ಎಂದು ಸಂಘದ ಸದಸ್ಯ ತಿಮ್ಮಣ್ಣ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ ಬಿಡಿಎ ಸೈಟ್ ಕಬಳಿಕೆ ಪ್ರಕರಣ ಬೆಳಕಿಗೆ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗದಲ್ಲಿ ಗಾಂಧೀಜಿ ಗ್ರಾಮ ಭಾರತ ಕನಸಿನೊಂದಿಗೆ ಹುಟ್ಟಿದ ಖಾದಿ ಸಹಕಾರ ಸಂಘದ ಆಸ್ತಿಯನ್ನ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ ಆರೋಪ ಕೇಳಿ ಬಂದಿದೆ. ಅದರಲ್ಲೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್​ಎಂಎಲ್​ ತಿಪ್ಪೇಸ್ವಾಮಿ ಮತ್ತು ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಹೀಗಾಗಿ, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾನು 3ನೇ ಮದುವೆ ಆಗುತ್ತಿರುವುದು ನಿಜ’; ನೇರವಾಗಿ ಒಪ್ಪಿಕೊಂಡ ಆಮಿರ್ ಖಾನ್ – Kannada News

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ತಮ್ಮ ಜೊತೆಗಿರುವ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಅವರನ್ನು ಜುಲೈ 5ರಂದು ವಿವಾಹವಾಗುತ್ತಿರುವುದಾಗಿ ನಟ ಆಮೀರ್ ಖಾನ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಅವರು, ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ, ‘ಮದುವೆ ಸುದ್ದಿ ನಿಜ. ಜುಲೈ 5ರಂದು ವಿವಾಹ ನಡೆಯಲಿದೆ. ನಾನೀಗ ಅಮೆರಿಕದಲ್ಲಿ ಪ್ರಯಾಣ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇತರೆ ಸೆಲೆಬ್ರಿಟಿಗಳಂತೆ ಅದ್ಧೂರಿ ಮದುವೆಯ ಬದಲಾಗಿ, ಈ ಜೋಡಿಯು ಅತ್ಯಂತ ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿರ್ಧರಿಸಿದೆ. ಇವರ ಮನೆಯಲ್ಲೇ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ವರದಿ ಆಗಿದೆ.

ಮೂಲತಃ ಬೆಂಗಳೂರಿನವರಾದ ಗೌರಿ ಸ್ಪ್ರ್ಯಾಟ್ ಅವರು ಫ್ಯಾಷನ್, ಬ್ಯೂಟಿ ಮತ್ತು ವೆಲ್ನೆಸ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಒಬ್ಬ ಚಿಕ್ಕ ಮಗನಿದ್ದಾನೆ. ಇವರಿಬ್ಬರ ಪರಿಚಯ ಇಂದಿನದಲ್ಲ, ಬರೋಬ್ಬರಿ 25 ವರ್ಷಗಳ ಹಿಂದೆಯೇ ಇವರು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಸಂಪರ್ಕ ಕಳೆದುಕೊಂಡಿದ್ದ ಈ ಜೋಡಿ, ಕೆಲವು ವರ್ಷಗಳ ಹಿಂದೆ ಮತ್ತೆ ಒಂದಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿದೆ.

ಆಮಿರ್ ಖಾನ್ ಅವರಿಗೆ ಇದು ಮೂರನೇ ವಿವಾಹ. 1986ರಲ್ಲಿ ಮೊದಲು ರೀನಾ ದತ್ತಾ ಜೊತೆ ಅವರಿಗೆ ಮದುವೆ ಆಗಿತ್ತು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳು ಜನಿಸಿದರು. 2005ರಲ್ಲಿ ಚಿತ್ರನಿರ್ಮಾಪಕಿ ಕಿರಣ್ ರಾವ್ ಜೊತೆ ಆಮಿರ್ ಖಾನ್ ಅವರಿಗೆ ಎರಡನೇ ವಿವಾಹ ಆಯಿತು. ಇವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ.

ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು

ಹಳೆಯ ಎರಡೂ ಮದುವೆ ಮುರಿದುಬಿದ್ದಿದ್ದರೂ, ಆಮಿರ್ ಖಾನ್ ಅವರು ತಮ್ಮ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರೊಂದಿಗೆ ಇಂದಿಗೂ ಉತ್ತಮ ಸ್ನೇಹ ಹಾಗೂ ಗೌರವಯುತ ಬಾಂಧವ್ಯವನ್ನು ಕಾಯ್ದುಕೊಂಡಿದ್ದಾರೆ. ಸದ್ಯ ಗೌರಿ ಸ್ಪ್ರ್ಯಾಟ್ ಆಗಮನದಿಂದ ತಮ್ಮ ಜೀವನದಲ್ಲಿ ನೆಮ್ಮದಿ ಹಾಗೂ ಪರಿಪೂರ್ಣತೆ ಸಿಕ್ಕಿದೆ ಎಂದು ಆಮಿರ್ ಖಾನ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಯಾಣಿಕರೇ ಗಮನಿಸಿ: ರೈತರ ‘ವಿಧಾನಸೌಧ ಚಲೋ’ ಹಿನ್ನೆಲೆ ನಾಳೆ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ರಸ್ತೆ ಬಂದ್ ಭೀತಿ – Kannada News

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರುImage Credit source: tv9

ಬೆಂಗಳೂರು, ಜೂನ್ 4: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಿಮಾನ ಪ್ರಯಾಣಿಕರು ನಾಳೆ (ಶುಕ್ರವಾರ) ತೀವ್ರ ಜಾಗ್ರತೆ ವಹಿಸಬೇಕಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಐಎಡಿಬಿ (KIADB) ಭೂಸ್ವಾಧೀನ ಪ್ರಕ್ರಿಯೆ ಖಂಡಿಸಿ ರೈತರು ಹಮ್ಮಿಕೊಂಡಿರುವ ಬೃಹತ್ ‘ವಿಧಾನಸೌಧ ಚಲೋ’ ಪ್ರತಿಭಟನೆಯಿಂದಾಗಿ ನಾಳೆ ಇಡೀ ಏರ್‌ಪೋರ್ಟ್‌ ರಸ್ತೆ ಬಂದ್ ಆಗುವ ಅಥವಾ ಭಾರಿ ಪ್ರಮಾಣದಲ್ಲಿ ಸಂಚಾರ ದಟ್ಟಣೆ (Traffic Jam) ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಹೋಗುವವರು ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಹೊರಡುವುದು ಉತ್ತಮ.

ಮುಖ್ಯಾಂಶಗಳು

  • ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಬೃಹತ್ ಬೈಕ್ ರ್ಯಾಲಿ.
  • ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.
  • ಚಿಕ್ಕಬಳ್ಳಾಪುರದಿಂದ ವಿಧಾನಸೌಧದವರೆಗೆ ಸುಮಾರು 5,000 ಕ್ಕೂ ಹೆಚ್ಚು ಬೈಕ್‌ಗಳಲ್ಲಿ ರ್ಯಾಲಿ.

80 ದಿನಗಳ ಹೋರಾಟ ಈಗ ವಿಧಾನಸೌಧಕ್ಕೆ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಕಳೆದ 80 ದಿನಗಳಿಂದ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಜಂಗಮಕೋಟೆ ಭಾಗದ ಸುಮಾರು 2,800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ರೈತರು, ಈ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ ಈಗ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ನೇತೃತ್ವದಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ಏರ್‌ಪೋರ್ಟ್‌ ರಸ್ತೆಯಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಜಾಮ್?

ನಾಳೆ ಬೆಳಿಗ್ಗೆ ಚಿಕ್ಕಬಳ್ಳಾಪುರದಿಂದ ಹೊರಡಲಿರುವ ಈ ಬೃಹತ್ ಪ್ರತಿಭಟನಾ ಬೈಕ್ ರ್ಯಾಲಿಯಲ್ಲಿ 5,000 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಈ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಮೂಲಕ ದೇವನಹಳ್ಳಿ, ಯಲಹಂಕ, ಹೆಬ್ಬಾಳ ಫ್ಲೈಓವರ್ ಹಾಗೂ ಮೇಖ್ರಿ ಸರ್ಕಲ್ ರಸ್ತೆಯ ಮೂಲಕ ವಿಧಾನಸೌಧವನ್ನು ತಲುಪಲಿದೆ. ಸಾವಿರಾರು ದ್ವಿಚಕ್ರ ವಾಹನಗಳು ಏಕಕಾಲದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್, ವಿಡಿಯೋ ನೋಡಿ

ವಿಮಾನ ಪ್ರಯಾಣಿಕರು ಕೊನೆಯ ಕ್ಷಣದ ತಳಮಳ ತಪ್ಪಿಸಲು ರೈಲು ಸೌಲಭ್ಯ ಅಥವಾ ಪರ್ಯಾಯ ರಸ್ತೆಗಳನ್ನು ಬಳಸಲು ಹಾಗೂ ಅತ್ಯಂತ ಮುಂಚಿತವಾಗಿಯೇ ಮನೆಯಿಂದ ಹೊರಡಲು ಸಲಹೆ ನೀಡಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದ ದಾವೂದ್; ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡಿದ್ದ ಲಲಿತ್ ಮೋದಿ – Kannada News

ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ದೇಶ ತೊರೆದು ವಿದೇಶದಲ್ಲಿ ನೆಲೆಸಿರುವ ಐಪಿಎಲ್ (IPL) ಜನಕ ಲಲಿತ್ ಮೋದಿ (Lalit Modi) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಐಪಿಎಲ್ ಬಗ್ಗೆ ಕೆಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿರುವ ಲಲಿತ್ ಮೋದಿ, ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ವಿರುದ್ಧದ ತಮ್ಮ ಅಚಲ ನಿಲುವುಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಅವರ ಗ್ಯಾಂಗ್‌ನಿಂದ ತಮಗೆ ಬಂದಿರುವ ಕೊಲೆ ಬೆದರಿಕೆಗಳ ಬಗ್ಗೆ ಮತ್ತು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಆಘಾತಕ್ಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಶತಕೋಟಿ ಡಾಲರ್ ಬೆಟ್ಟಿಂಗ್

ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್ ಮೋದಿ, ‘ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನಿಂದ ಬಂದ ಕೊಲೆ ಬೆದರಿಕೆಗಳಿಂದಾಗಿ ನಾನು ಕ್ರಿಕೆಟ್​ನಿಂದ ದೂರವಾಗಬೇಕಾಯಿತು. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ನಾನು ಕಠಿಣ ನಿಲುವು ಹೊಂದಿದ್ದ ಕಾರಣದಿಂದಾಗಿ “ಡಿ ಕಂಪನಿ”ಯ ಶತಕೋಟಿ ಡಾಲರ್ ಅಕ್ರಮ ಬೆಟ್ಟಿಂಗ್ ಸಾಮ್ರಾಜ್ಯದ ಮೇಲೆ ನೇರವಾಗಿ ಪರಿಣಾಮ ಬೀರಿತು ಎಂದಿದ್ದಾರೆ.

‘ದಾವೂದ್ ಇಬ್ರಾಹಿಂ ಒಬ್ಬ ಕುಖ್ಯಾತ ಬುಕ್ಕಿ, ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಿಸುತ್ತಿದ್ದವನೇ ಅವನು. ಆ ದಿನಗಳಲ್ಲಿ, ಅದು 2 ಬಿಲಿಯನ್ ಭೂಗತ ಬೆಟ್ಟಿಂಗ್ ವ್ಯವಹಾರವಾಗಿತ್ತು. ಇಂದು, ಅದು ಪ್ರತಿ ಪಂದ್ಯಕ್ಕೆ 4 ಬಿಲಿಯನ್ ಭೂಗತ ಬೆಟ್ಟಿಂಗ್ ವ್ಯವಹಾರವಾಗಿದೆ. ಪ್ರತಿ ಚೆಂಡಿನ ಮೇಲೂ ಬೆಟ್ಟಿಂಗ್ ನಡೆಯುತ್ತದೆ. ಈಗ ಯಾರು ಪಂದ್ಯವನ್ನು ಫಿಕ್ಸ್ ಮಾಡಲು ಹೋಗುವುದಿಲ್ಲ. ಬದಲಿಗೆ, ಓವರ್‌ಗಳನ್ನು ಅಥವಾ ಚೆಂಡುಗಳನ್ನು ಫಿಕ್ಸಿಂಗ್ ಮಾಡಲಾಗುತ್ತದೆ.

ನನ್ನ ಮಗನನ್ನು ಅಪಹರಿಸಲಾಗಿತ್ತು

ನಾನು ಬೆಟ್ಟಿಂಗ್ ವಿರೋಧಿಸಿದಕ್ಕಾಗಿ ಎರಡನೇ ಆವೃತ್ತಿಯ ಐಪಿಎಲ್ ಅನ್ನು ನಡೆಸಲು ಬಿಡುವುದಿಲ್ಲ ಎಂದು ದಾವೂದ್ ಗ್ಯಾಂಗ್ ಬೆದರಿಕೆ ಹಾಕಿತ್ತು. ಹೀಗಾಗಿ ಮುಂಬೈ ಪೊಲೀಸರು ನನ್ನನ್ನು ಝಡ್-ಭದ್ರತೆಯಲ್ಲಿ ಇರಿಸಿದ್ದರು. ಮುಂಬೈನಲ್ಲಿ ನನ್ನ ಮನೆಯ ಹೊರಗೆ ಗುಂಡಿನ ದಾಳಿ ನಡೆಯಿತು, ನಾನು ಕೇಪ್ ಟೌನ್‌ನಲ್ಲಿದ್ದಾಗ ಜೋಹಾನ್ಸ್‌ಬರ್ಗ್‌ನಲ್ಲಿ ನನ್ನ ಮೇಲೆ ಕೊಲೆ ದಾಳಿ ನಡೆಯಿತು. ಮಾಂಟೆನೆಗ್ರೊದಲ್ಲಿ ನನ್ನ ಮೇಲೆ ದಾಳಿ ಮಾಡಲಾಯಿತು. ನನ್ನ ಮಗನನ್ನು ಸಹ ಲಂಡನ್‌ನಲ್ಲಿ ಅಪಹರಿಸಲಾಗಿತ್ತು. ಆದರೆ ನಾನು ಈವರೆಗೆ ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ನಾನು ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ನನ್ನ ಮೇಲೆ ದಾಳಿಗಳು ನಡೆದವು. ಐಪಿಎಲ್ ಪಂದ್ಯಾವಳಿಯನ್ನು ಸ್ಥಳಾಂತರಿಸಿದರಿಂದ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದವರಿಗೆ ಹೊಡೆತ ಬಿತ್ತು. ಇದರಿಂದ ಅವರಿಗೆ ಸಾಕಷ್ಟು ನಷ್ಟವುಂಟಾಯಿತು. ಹೀಗಾಗಿ ಅವರು ನನ್ನನ್ನು ನಷ್ಟಬರಿಸುವಂತೆ ಒತ್ತಾಯಿಸಿದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಳಿಲ್ಲ.

ಐಪಿಎಲ್ ತಂಡವನ್ನು ಖರೀದಿಸಬೇಕು

2012 ರಲ್ಲಿ ನಾನು ದೇಶ ತೊರೆದು ಲಂಡನ್​ನಲ್ಲಿ ವಾಸಿಸುತ್ತಿದ್ದೆ. ಆಗ ಪ್ರತಿ ಐಪಿಎಲ್ ಪಂದ್ಯದಲ್ಲೂ ಕಾಣಿಸಿಕೊಳ್ಳುವ ಒಬ್ಬ ಲಂಡನ್ ಮೂಲದ ವ್ಯಕ್ತಿಯಿಂದ ನನಗೆ ಬೆಳಗಿನ ಜಾವ 3:30 ಕ್ಕೆ ಕರೆ ಬಂತು. ಆತ ‘ನೀವು ಈಗಲೇ ಬಾಬಾನನ್ನು ಭೇಟಿಯಾಗಬೇಕು’ ಅಂದನು. ಹೀಗಾಗಿ ನಾನು ಬಾಬಾ ಅವರ ಮನೆಗೆ ಹೋದೆ. ನನ್ನೊಂದಿಗೆ ಮಾತಿಗೆ ಕೂತ ಆತ, ಲಲಿತ್ ಜೀ ನೀವು ಈಗಾಗಲೇ ಭಾರತವನ್ನು ತೊರೆದಿದ್ದಿರಿ, ಆದರೆ ನಾವು ಒಂದು ಐಪಿಎಲ್ ತಂಡವನ್ನು ಖರೀದಿಸಬೇಕು ಎಂದುಕೊಂಡಿದ್ದೇವೆ ಎಂದ. ಅದಕ್ಕೆ ನಾನು, ‘ಈಗ ನಾನು ಭಾರತದಲ್ಲಿ ಇಲ್ಲ. ನಿಮಗೆ ಐಪಿಎಲ್ ತಂಡ ಏಕೆ ಬೇಕು? ನೀವು ತಂಡವನ್ನು ಖರೀದಿಸಲು ಬಯಸಿದರೆ, ನೀವು ಬಿಡ್ಡಿಂಗ್ ಮಾಡಿ ಖರೀದಿ ಮಾಡಿ. ಇದಲ್ಲದೆ, ನಾನು ಭಾರತಕ್ಕೆ ಹಿಂತಿರುಗುವುದಿಲ್ಲ. ಅಲ್ಲಿ ನನಗೂ ದಾವೂದ್ ಇಬ್ರಾಹಿಂ ನಡುವೆ ಸಮಸ್ಯೆ ಇದೆ’ ಎಂದು ಹೇಳಿದೆ.

ಹಿಂದೆ ನಡೆದ ಎಲ್ಲವನ್ನೂ ಮರೆತುಬಿಡಿ

ಅದಕ್ಕೆ ಅವನು ಅದು ಏನೇ ಸಮಸ್ಯೆ ಇದ್ದರೂ ನಾನು ಅದನ್ನು ಒಂದು ನಿಮಿಷದಲ್ಲಿ ಪರಿಹರಿಸುತ್ತೇನೆ ಎಂದವನೇ ಮನೆಯ ಟೆರೇಸ್‌ಗೆ ಹೋಗಿ, ತನ್ನ ಸ್ಯಾಟಲೈಟ್ ಫೋನ್ ತೆಗೆದು, ದಾವೂದ್‌ಗೆ ಕರೆ ಮಾಡಿದ. ಇದನ್ನು ನೋಡುತ್ತಿದ್ದ ನನಗೆ ಪ್ಯಾಂಟ್‌ನಲ್ಲೆ ಮೂತ್ರ ಬಂತು. ಆತ ದಾವೂದ್ ಬಳಿ, ದಾವೂದ್ ಬಾಯ್ ಲಲಿತ್ ಬಾಯ್ ಬಂದಿದ್ದಾರೆ ಅವರೊಂದಿಗೆ ಮಾತನಾಡಿ ಎಂದವನೇ ನನಗೆ ಫೋನ್ ನೀಡಲು ಬಂದ. ಆದರೆ ನಾನು ದಾವೂದ್ ಜೊತೆಗೆ ಮಾತನಾಡಲು ನಿರಾಕರಿಸಿದೆ. ಹೀಗಾಗಿ ಆತ ಲೌಡ್ ಸ್ಫೀಕರ್ ಆನ್ ಮಾಡಿದ. ಆ ಕಡೆಯಿಂದ ಮಾತನಾಡಿದ ದಾವೂದ್, ‘ನೀವು ನಮ್ಮ ಸ್ನೇಹಿತ, ಹಿಂದೆ ನಡೆದ ಎಲ್ಲವನ್ನೂ ಮರೆತುಬಿಡಿ, ಮುಂದೆ ಎಲ್ಲವೂ ಸರಿಯಾಗುತ್ತದೆ’ ಎಂದು ಹೇಳಿ ಫೋನ್ ಕಟ್ ಮಾಡಿದ. ಮನೆಗೆ ಬಂದ ನಾನು ಇದನ್ನ ನನ್ನ ಮಡದಿ ಬಳಿ ಹೇಳಿದೆ. ಆ ಬಳಿಕ ಪೊಲೀಸ್ ಬಳಿಯೂ ಹೇಳಿದೆ. ಇದೆಲ್ಲ ಪೊಲೀಸ್ ರೆಕಾರ್ಡ್​ನಲ್ಲಿ ದಾಖಲಾಗಿದೆ.

ಇದಾದ ಬಳಿಕ ದಾವೂದ್ ಸಂದರ್ಶನವೊಂದರಲ್ಲಿ ಲಲಿತ್ ಮೋದಿ ಜೊತೆಗಿನ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ಹೇಳಿದ್ದ. ಆದರೆ ಯಾವುದೇ ಸಮಸ್ಯೆಗಳು ಬಗೆ ಹರಿದಿರಲಿಲ್ಲ. ಅಂತಿಮವಾಗಿ ನಾನು ಕ್ರಿಕೆಟ್​ನಿಂದ ದೂರ ಸರಿಯಲು ನಿರ್ಧರಿಸಿದೆ. ಅದರಂತೆ ಕ್ರಿಕೆಟ್​ನಂತೆ ದೂರಾದೆ. ನಾನು ಕ್ರಿಕೆಟ್​ನಿಂದ ದೂರವಾಗಲು ದಾವೂದ್ ಜೊತೆಗಿನ ಸಂಘರ್ಷ ಪ್ರಮುಖ ಕಾರಣವಾಗಿತ್ತು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು – Kannada News

ವಾಷಿಂಗ್ಟನ್, ಜೂನ್ 4: ಅಮೆರಿಕದಲ್ಲಿ (US) ವಲಸಿಗರು ಸ್ಥಾಪಿಸಿದ ಪ್ರತಿ 5 ಯೂನಿಕಾರ್ನ್‌ಗಳಲ್ಲಿ (Unicorns – $1 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್ ಕಂಪನಿಗಳು) ಒಂದು ಕಂಪನಿಯು ಭಾರತೀಯ ಮೂಲದ ಸಂಸ್ಥಾಪಕರನ್ನು (Indian Founders) ಹೊಂದಿದೆ. ಇದು ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ (ಎನ್​ಎಫ್​ಎಪಿ) ಪ್ರಸ್ತುತಪಡಿಸಿದ ವರದಿಯಿಂದ ತಿಳಿದುಬಂದಿದೆ. ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿ ಬಿಲಿಯನ್ ಡಾಲರ್ ಮೌಲ್ಯದ ಉದ್ಯಮಗಳನ್ನು ಸ್ಥಾಪಿಸಿರುವ ಭಾರತೀಯರ ಸಂಖ್ಯೆ 96 ಅಂತೆ.

ಅಮೆರಿಕದ ಪ್ರಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಭಾರತೀಯರ ಪ್ರಭಾವ ಎಷ್ಟಿದೆ ಎಂಬುದನ್ನು ಈ ವರದಿ ತೋರಿಸುತ್ತದೆ. ಅಲ್ಲಿನ ಒಟ್ಟು ವಲಸಿಗ-ಸ್ಥಾಪಿತ ಯೂನಿಕಾರ್ನ್‌ಗಳಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಕಂಪನಿಗಳನ್ನು ಭಾರತೀಯರೇ ಮುನ್ನಡೆಸುತ್ತಿದ್ದಾರೆ. ಯೂನಿಕಾರ್ನ್ ಮಟ್ಟದ ಕಂಪನಿಗಳನ್ನು ಸ್ಥಾಪಿಸಿರುವ ವಲಸಿಗರ ಮೂಲ 76 ದೇಶಗಳಿವೆ. ಈ ಪೈಕಿ ಭಾರತವೇ ಅಗ್ರಸ್ಥಾನದಲ್ಲಿದೆ. ವಲಸಿಗರ ಪೈಕಿ ಅತಿಹೆಚ್ಚು ಯುನಿಕಾರ್ನ್ ಸ್ಥಾಪಿಸಿರುವುದರಲ್ಲಿ ಭಾರತೀಯರೇ ಹೆಚ್ಚು.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?

ಈ ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನಗಳಲ್ಲಿ ಕೆನಡಾ, ಯುಕೆ (UK), ಇಸ್ರೇಲ್ ಮತ್ತು ಚೀನಾ ದೇಶಗಳು ಬರುತ್ತವೆ. ಆದರೆ ಭಾರತವು ಇವೆಲ್ಲಕ್ಕಿಂತ ಬಹುದೂರ ಮುಂದಿದೆ. ಭಾರತೀಯ ಮೂಲದ ಈ ಉದ್ಯಮಿಗಳು ಕೇವಲ ಕಂಪನಿಗಳನ್ನು ಸ್ಥಾಪಿಸಿಲ್ಲ, ಬದಲಿಗೆ ಅಮೆರಿಕದಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಾರೆ ಮತ್ತು ಜಾಗತಿಕ ತಂತ್ರಜ್ಞಾನ ಹಾಗೂ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಅಮೆರಿಕದಲ್ಲಿ ಅತಿಹೆಚ್ಚು ಬಿಲಿಯನ್ ಡಾಲರ್ ಸ್ಟಾರ್ಟಪ್​ಗಳನ್ನು ಸ್ಥಾಪಿಸಿರುವ ವಲಸಿಗರ ಮೂಲ ದೇಶ

  1. ಭಾರತ: 96
  2. ಇಸ್ರೇಲ್: 60
  3. ಯುಕೆ: 47
  4. ಚೀನಾ: 41
  5. ಕೆನಡಾ: 30
  6. ರಷ್ಯಾ: 23
  7. ಫ್ರಾನ್ಸ್: 21
  8. ಜರ್ಮನಿ: 18
  9. ಉಕ್ರೇನ್: 16
  10. ಆಸ್ಟ್ರೇಲಿಯಾ: 14

ಇದನ್ನೂ ಓದಿ: ವಿದೇಶಿ ಹೂಡಿಕೆದಾರರನ್ನು ಮರಳಿ ಆಕರ್ಷಿಸಲು ಸರ್ಕಾರದ ಯತ್ನ; ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ

ಈ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೂ ಪಾಕಿಸ್ತಾನೀ ಮೂಲದ ಯೂನಿಕಾರ್ನ್ ಉದ್ಯಮಿಗಳ ಸಂಖ್ಯೆ 10 ಇದೆ. ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ ಪಾಕಿಸ್ತಾನ. ಅಮೆರಿಕದಲ್ಲಿರುವ ವಲಸಿಗ ಸಮುದಾಯದ ಉದ್ಯಮಿಗಳಲ್ಲಿ ಬಹಳ ದೊಡ್ಡ ಹೆಸರೆಂದರೆ ಇಲಾನ್ ಮಸ್ಕ್. ಇವರು ಸೌತ್ ಆಫ್ರಿಕಾ ಮೂಲದವರು. ಇವರೂ ಒಳಗೊಂಡಂತೆ ವಲಸಿಗರು ಆರಂಭಿಸಿರುವ 455 ಯೂನಿಕಾರ್ನ್ ಕಂಪನಿಗಳ ಒಟ್ಟು ಮೌಲ್ಯ 5 ಟ್ರಿಲಿಯನ್ ಡಾಲರ್ ಎನ್ನಲಾಗಿದೆ.

ಪ್ರಮುಖ ಭಾರತೀಯರ ಪೈಕಿ ಮೋಹಿತ್ ಆರೋನ್, ಜ್ಯೋತಿ ಬನ್ಸಾಲ್, ಆಶುತೋಷ್ ಗರ್ಗ್, ಅರವಿಂದ್ ಜೈನ್, ಸಚಿನ್ ನಾಯ್ಯರ್, ಅಜೀತ್ ಸಿಂಗ್ ಮೊದಲಾದವರಿದ್ದಾರೆ. ಅಮೆರಿಕದ ಅತ್ಯಂತ ಯಶಸ್ವಿ ಮತ್ತು ಬಿಲಿಯನ್ ಡಾಲರ್ ಮೌಲ್ಯದ ನವೋದ್ಯಮಗಳ (Startups) ಹಿಂದೆ ಭಾರತೀಯರ ಬುದ್ಧಿಶಕ್ತಿ ಮತ್ತು ಪರಿಶ್ರಮ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಲ್ಲಿ ಯೂರಿನ್ ಟೆಸ್ಟ್ ಮಾಡಿ ಆಟಿಸಂ ಲಕ್ಷಣಗಳನ್ನು ಪತ್ತೆಹಚ್ಚಬಹುದೇ? ಏನ್ ಹೇಳುತ್ತೆ ಅಧ್ಯಯನ? – Kannada News

Early Autism Screening Through Urine Test: What Study RevealsImage Credit source: Getty Images

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಒಂದು ನ್ಯೂರೋಡೆವಲಪ್ಮೆಂಟಲ್ ಸಮಸ್ಯೆಯಾಗಿದ್ದು, ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಹಲವು ಬಾರಿ ಇದರ ಆರಂಭಿಕ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಹೊಸ ಅಧ್ಯಯನವೊಂದು, ಯೂರಿನ್ ಟೆಸ್ಟ್ ಮೂಲಕ ಕೇವಲ 2 ವರ್ಷದ ಮಕ್ಕಳಲ್ಲೇ ಆಟಿಸಂಗೆ ಸಂಬಂಧಿಸಿದ ಸೂಚನೆಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದೆ. ಮೊಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಹಾಗಾದರೆ ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ, ಈ ಅಧ್ಯಯನದಿಂದ ಯಾವ ರೀತಿ ಲಾಭವಿದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ?

ಸಾಮಾನ್ಯವಾಗಿ ಆಟಿಸಂ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಮಕ್ಕಳಿಗೆ ಸಮಯಕ್ಕೆ ಸರಿಯಾದ ಥೆರಪಿ, ಚಿಕಿತ್ಸೆ ಮತ್ತು ತಜ್ಞರ ಮಾರ್ಗದರ್ಶನ ದೊರೆಯಬಹುದು. ಆಟಿಸಂ ಪತ್ತೆ ಮಾಡಲು ಮಕ್ಕಳ ವರ್ತನೆ, ಮಾತಿನ ಬೆಳವಣಿಗೆ, ಸಾಮಾಜಿಕ ಪ್ರತಿಕ್ರಿಯೆ ಮತ್ತು ದೈನಂದಿನ ಚಟುವಟಿಕೆಗಳನ್ನು ಗಮನಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ಕಡಿಮೆ ವೆಚ್ಚದ, ಸರಳ ಯೂರಿನ್ ಟೆಸ್ಟ್ ಆರಂಭಿಕ ತಪಾಸಣೆಗೆ ಸಹಾಯವಾದರೆ ಅನೇಕ ಕುಟುಂಬಗಳಿಗೆ ಇದು ಉಪಯುಕ್ತವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನ ಹೇಳುವುದೇನು?

ಈ ಅಧ್ಯಯನದಲ್ಲಿ ಸಂಶೋಧಕರು ಆಟಿಸಂ ಇರುವ ಮತ್ತು ಆಟಿಸಂ ಇಲ್ಲದ ಮಕ್ಕಳ ಯೂರಿನ್ ಸ್ಯಾಂಪಲ್‌ಗಳನ್ನು ವಿಶ್ಲೇಷಿಸಿದ್ದಾರೆ. ಪರೀಕ್ಷೆಯ ವೇಳೆ ಕೆಲವು ವಿಶೇಷ ಜೈವಿಕ ಸೂಚನೆಗಳು (Biological Markers) ಎರಡು ಗುಂಪುಗಳಲ್ಲಿ ವಿಭಿನ್ನ ಮಟ್ಟದಲ್ಲಿ ಕಂಡುಬಂದಿದ್ದು ಈ ವ್ಯತ್ಯಾಸಗಳ ಆಧಾರದ ಮೇಲೆ ಆಟಿಸಂಗೆ ಸಂಬಂಧಿಸಿದ ಸಾಧ್ಯ ಲಕ್ಷಣಗಳನ್ನು ಗುರುತಿಸಲು ಸಂಶೋಧಕರು ಪ್ರಯತ್ನಿಸಿದ್ದಾರೆ. ಅಧ್ಯಯನದ ಪ್ರಕಾರ, ಈ ಯೂರಿನ್ ಟೆಸ್ಟ್ ಆಟಿಸಂ ಇರುವ ಮಕ್ಕಳನ್ನು ಗುರುತಿಸುವಲ್ಲಿ ಸಾಕಷ್ಟು ನಿಖರತೆ ಕಂಡುಬಂದಿದೆ. ಆದರೆ, ಇದರ ಪರಿಣಾಮಕಾರಿತ್ವವನ್ನು ದೃಢೀಕರಿಸಲು ಇನ್ನಷ್ಟು ದೊಡ್ಡ ಮಟ್ಟದ ಅಧ್ಯಯನಗಳು ಅಗತ್ಯವಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?

ಯೂರಿನ್ ಟೆಸ್ಟ್ ಹೇಗೆ ಕೆಲಸ ಮಾಡುತ್ತದೆ?

ಈ ಪರೀಕ್ಷೆಯಲ್ಲಿ ಮೂತ್ರದಲ್ಲಿರುವ ಕೆಲವು ವಿಶೇಷ ರಾಸಾಯನಿಕಗಳು ಮತ್ತು ಜೈವಿಕ ಸೂಚನೆಗಳನ್ನು ಪರಿಶೀಲಿಸಲಾಗುತ್ತದೆ. ಇವು ದೇಹ ಹಾಗೂ ಅಂತರಗಳಲ್ಲಿ ಇರುವ ಮೈಕ್ರೋಬ್ಸ್ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಯೂರಿನ್ ಸ್ಯಾಂಪಲ್ ಅನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿ, ಅದರಲ್ಲಿರುವ ವಿಶೇಷ ರಾಸಾಯನಿಕ ಮಾದರಿಗಳನ್ನು ವಿಶ್ಲೇಷಿಸಲಾಗುತ್ತದೆ. ಈ ಮಾದರಿಗಳು ಆಟಿಸಂಗೆ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಸಂಶೋಧಕರ ಪ್ರಕಾರ, ಈ ವಿಧಾನ ಸರಳವಾಗಿದ್ದು, ಕೇವಲ ಯೂರಿನ್ ಸ್ಯಾಂಪಲ್ ಸಾಕಾಗುತ್ತದೆ ಎಂಬುದು ಇದರ ಪ್ರಮುಖ ವಿಶೇಷತೆ. ಪ್ರಸ್ತುತ ಈ ಯೂರಿನ್ ಟೆಸ್ಟ್ ಇನ್ನೂ ಸಂಶೋಧನಾ ಹಂತದಲ್ಲಿದ್ದು, ಸಾಮಾನ್ಯ ವೈದ್ಯಕೀಯ ಪರೀಕ್ಷೆಯ ಭಾಗವಾಗಿಲ್ಲ. ತಜ್ಞರ ಪ್ರಕಾರ, ಆಟಿಸಂ ಪತ್ತೆಗಾಗಿ ಈಗಲೂ ಮಕ್ಕಳ ವರ್ತನೆ, ಬೆಳವಣಿಗೆ ಮತ್ತು ವೈದ್ಯರ ಪರಿಶೀಲನೆಯನ್ನೇ ಮುಖ್ಯವಾಗಿ ಅವಲಂಬಿಸಲಾಗುತ್ತಿದೆ. ಈ ಅಧ್ಯಯನದ ಫಲಿತಾಂಶಗಳು ಆಶಾದಾಯಕವಾಗಿದ್ದರೂ, ಇದನ್ನು ಅಧಿಕೃತ ವೈದ್ಯಕೀಯ ಪರೀಕ್ಷೆಯಾಗಿ ಬಳಸಲು ಇನ್ನಷ್ಟು ಸಂಶೋಧನೆ ಮತ್ತು ದೃಢೀಕರಣ ಅಗತ್ಯವಿದೆ.

ಪೋಷಕರು ಗಮನಿಸಬೇಕಾದ ಆರಂಭಿಕ ಲಕ್ಷಣಗಳು:

  • ಮಗು ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡದೇ ಇರಬಹುದು
  • ಹೆಸರು ಕರೆದಾಗ ಪ್ರತಿಕ್ರಿಯೆ ಕಡಿಮೆ ಇರಬಹುದು
  • ಮಾತಿನ ಬೆಳವಣಿಗೆ ತಡವಾಗಬಹುದು
  • ಇತರ ಮಕ್ಕಳೊಂದಿಗೆ ಬೆರೆಯಲು ಆಸಕ್ತಿ ತೋರದೇ ಇರಬಹುದು
  • ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುವ ಸ್ವಭಾವ ಕಂಡುಬರಬಹುದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

7.1 ಕೋಟಿ ರೂಪಾಯಿಗೆ 2 ಫ್ಲಾಟ್‌ ಮಾರಾಟ ಮಾಡಿದ ನಟ ಅಕ್ಷಯ್ ಕುಮಾರ್ – Kannada News

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಅವರು ಮುಂಬೈನ ಬೊರಿವಲಿ ಪ್ರದೇಶದಲ್ಲಿರುವ ತಮ್ಮ ಎರಡು ಐಷಾರಾಮಿ ಫ್ಲಾಟ್‌ಗಳನ್ನು ಬರೋಬ್ಬರಿ 7.1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮುಂಬೈನ ಒಬೆರಾಯ್ ಸ್ಕೈ ಸಿಟಿ (Oberoi Sky City) ಅಪಾರ್ಟ್‌ಮೆಂಟ್‌ನಲ್ಲಿರುವ ಈ ಮನೆಗಳ ಮಾರಾಟದ ನೋಂದಣಿ ಪ್ರಕ್ರಿಯೆಯು ಜೂನ್ 2ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂಬುದು ಆಸ್ತಿ ನೋಂದಣಿ ದಾಖಲೆಗಳಿಂದ (CRE Matrix) ತಿಳಿದುಬಂದಿದೆ. ಸುವರ್ಣ ರೂಪೇಶ್‌ಕುಮಾರ್ ಸಕ್ಪಾಲ್ ಎಂಬುವವರು ಅಕ್ಷಯ್ ಕುಮಾರ್ ಅವರಿಂದ ಈ ಎರಡೂ ಆಸ್ತಿಗಳನ್ನು ಖರೀದಿಸಿದ್ದಾರೆ.

ಅಕ್ಷಯ್ ಕುಮಾರ್ ಅವರು ಈ ಎರಡು ಫ್ಲಾಟ್‌ಗಳನ್ನು 2017ರ ನವೆಂಬರ್ ತಿಂಗಳಲ್ಲಿ ಇನ್‌ಕ್ಲೈನ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನಿಂದ ಖರೀದಿಸಿದ್ದರು. ಆಗ ಮೊದಲ ಫ್ಲಾಟ್‌ಗೆ 3 ಕೋಟಿ ರೂ. ಹಾಗೂ ಎರಡನೇ ಫ್ಲಾಟ್‌ಗೆ 67.55 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕಳೆದ ಎಂಟು ವರ್ಷಗಳಲ್ಲಿ ಈ ಆಸ್ತಿಗಳ ಮೌಲ್ಯವು ಶೇಕಡಾ 92ಕ್ಕಿಂತಲೂ ಹೆಚ್ಚು ಹೆಚ್ಚಾಗಿದ್ದು, ನಟನಿಗೆ ಭರ್ಜರಿ ರಿಟರ್ನ್ಸ್ ತಂದುಕೊಟ್ಟಿದೆ.

ಮೊದಲ ಫ್ಲಾಟ್: ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿರುವ 1,101 ಚದರ ಅಡಿ ಕಾರ್ಪೆಟ್ ಏರಿಯಾ ಹೊಂದಿರುವ ದೊಡ್ಡ ಫ್ಲಾಟ್ ಇದಾಗಿದೆ. ಇದನ್ನು 5.75 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಇದಕ್ಕೆ 28.75 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ (Stamp Duty) ಪಾವತಿಸಲಾಗಿದೆ. ಈ ಫ್ಲಾಟ್ ಜೊತೆಗೆ ಎರಡು ಕಾರ್ ಪಾರ್ಕಿಂಗ್ ಸ್ಥಳಗಳೂ ಸಿಗಲಿವೆ.

ಎರಡನೇ ಫ್ಲಾಟ್: ಅದೇ ಮಹಡಿಯಲ್ಲಿರುವ 252 ಚದರ ಅಡಿಯ ಮತ್ತೊಂದು ಸ್ಟುಡಿಯೋ ಅಪಾರ್ಟ್‌ಮೆಂಟ್ ಅನ್ನು 1.35 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದಕ್ಕೆ 6.75 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಲಾಗಿದ್ದು, ಒಂದು ಕಾರ್ ಪಾರ್ಕಿಂಗ್ ವ್ಯವಸ್ಥೆ ಇದರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರು ರಿಯಲ್ ಎಸ್ಟೇಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಮುಂಬೈನಲ್ಲಿರುವ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ, ಅಂದರೆ ಕಳೆದ 2025ರ ಜನವರಿಯಲ್ಲೂ ಸಹ ಅಕ್ಷಯ್ ಕುಮಾರ್ ಅವರು ಬೊರಿವಲಿ ಪ್ರದೇಶದಲ್ಲೇ ಇದ್ದ ತಮ್ಮ 1,073 ಚದರ ಅಡಿಯ ಮತ್ತೊಂದು ಫ್ಲಾಟ್ ಅನ್ನು 4.25 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊನೆಗೂ ಕೇರಳಕ್ಕೆ ಮುಂಗಾರು ಪ್ರವೇಶ: ಕರ್ನಾಟದಲ್ಲಿ 6 ದಿನ ಭಾರೀ ಮಳೆ, ಯೆಲ್ಲೋ- ಆರೇಂಜ್ ಅಲರ್ಟ್ – Kannada News

ಬೆಂಗಳೂರು, (ಜೂನ್ 04): ಕೊನೆಗೂ ಕೇರಳಕ್ಕೆ (Kerala) ಮುಂಗಾರು (Southwest Monsoon) ಪ್ರವೇಶಿಸಿದೆ. ಇಂದು (ಜೂನ್ 04) ಅಧಿಕೃತವಾಗಿ ನೈಋತ್ಯ ಮುಂಗಾರು ಕೇರಳ ಎಂಟ್ರಿಕೊಟ್ಟಿದ್ದು, ಕರ್ನಾಟಕದ (Karnataka) ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಇನ್ನುಳಿಂದಂತೆ ಇಂದಿನಿಂದ ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮುಂಗಾರು ಮಳೆ ವ್ಯಾಪಿಸಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಇಂದಿನಿಂದ ಜೂನ್ 9ರವರೆಗೂ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

6 ದಿನ ರಾಜ್ಯದಲ್ಲಿ ಮಳೆ ಮುನ್ಸೂಚನೆ

ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದರಿಂದ ಕರ್ನಾಟಕದಲ್ಲೂ ಮಳೆಗಾಲ ಆರಂಭವಾಗಲಿದ್ದು, ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ.  ಹೀಗಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.  ಇನ್ನು ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ ಕರ್ನಾಟಕ

ಜೂನ್ 4 ರಂದು ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ನಾಳೆಯಿಂದ ಅಂದರೆ ಜೂನ್ 5 ರಿಂದ ಜೂ. 10 ರವರೆಗೆ ಮಳೆಯ ತೀವ್ರತೆ ಗಮನಾರ್ಹವಾಗಿ ಹೆಚ್ಚಾಗಲಿದ್ದು, ಕರಾವಳಿ ಭಾಗದಲ್ಲಿ ವ್ಯಾಪಕ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡು (NIK)

ಜೂನ್ 4 ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 5 ರಿಂದ ಜೂನ್ 10ರ ವರೆಗೂ ಇಡೀ ಪ್ರದೇಶದಲ್ಲಿ ಅಲ್ಲಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆ ಮತ್ತು ಕೆಲವು ಕಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡು (SIK)

ಮುನ್ಸೂಚನೆಯ ಸಂಪೂರ್ಣ ಅವಧಿಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡು ಜಿಲ್ಲೆಗಳಲ್ಲಿ ಜೂನ್ 9 ರವರೆಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version