ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ; ರೆಪೋ ದರ ಇಳಿಕೆಯಾಗುತ್ತಾ? ಶುಕ್ರವಾರ ನಿರ್ಧಾರ ಪ್ರಕಟಿಸಲಿದ್ದಾರೆ ಆರ್​ಬಿಐ ಗವರ್ನರ್ – Kannada News

ನವದೆಹಲಿ, ಜೂನ್ 4: ತೈಲ ಬಿಕ್ಕಟ್ಟು ಮುಂದುವರಿದಿರುವುದು, ಹಾಗು ಹಣದುಬ್ಬರ ಒತ್ತಡ ಎದುರಿಸುತ್ತಿರುವುದು, ಈ ಪರಿಸ್ಥಿತಿಯಲ್ಲಿ ಎಲ್ಲರ ಚಿತ್ತ ಆರ್​ಬಿಐನ ಎಂಪಿಸಿ ಸಭೆ ಮೇಲೆ ನೆಟ್ಟಿದೆ. ನಿನ್ನೆ (ಜೂನ್ 3) ಆರಂಭವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ಹಣಕಾಸು ನೀತಿ ಸಮಿತಿ (MPC) ಸಭೆಯ ನಿರ್ಧಾರಗಳು ಜೂನ್ 5ರಂದು ಹೊರಬರಲಿವೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರೆಪೋ ದರ (Repo Rate) ಮತ್ತು ಇತರ ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ರೆಪೋ ದರದಲ್ಲಿ ಬದಲಾವಣೆ ಇಲ್ಲ?

ಹೆಚ್ಚಿನ ಆರ್ಥಿಕ ತಜ್ಞರು ಮತ್ತು ಎಸ್‌ಬಿಐ (SBI) ರಿಸರ್ಚ್ ವರದಿಗಳ ಪ್ರಕಾರ, ಆರ್‌ಬಿಐ ಈ ಬಾರಿಯೂ ಸಹ ರೆಪೋ ದರವನ್ನು ಶೇ. 5.25 ಮಟ್ಟದಲ್ಲೇ ಮುಂದುವರಿಸುವ (ಯಾವುದೇ ಬದಲಾವಣೆ ಮಾಡದ) ಸಾಧ್ಯತೆಯಿದೆ.

ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಭೀತಿಯಿಂದಾಗಿ ಆರ್‌ಬಿಐ ಸದ್ಯಕ್ಕೆ ದರ ಕಡಿತ ಮಾಡುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನಲಾಗಿದೆ. ಹಾಗೆಯೆ, ಆರ್‌ಬಿಐ ತನ್ನ ‘Neutral’ (ತಟಸ್ಥ) ನಿಲುವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ

ಸಾಮಾನ್ಯ ಜನರ ಮೇಲಾಗುವ ಪರಿಣಾಮಗಳು

ರೆಪೋ ದರದಲ್ಲಿ ಯಾವುದೇ ಕಡಿತವಾಗದಿದ್ದರೆ, ನಿಮ್ಮ ಹೋಮ್ ಲೋನ್ (ಗೃಹ ಸಾಲ), ಕಾರ್ ಲೋನ್ ಅಥವಾ ಪರ್ಸನಲ್ ಲೋನ್‌ಗಳ ಇಎಂಐ ಸದ್ಯಕ್ಕೆ ಕಡಿಮೆಯಾಗುವುದಿಲ್ಲ. ಸಾಲದ ಮೇಲಿನ ಬಡ್ಡಿ ದರಗಳು ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಬ್ಯಾಂಕುಗಳಲ್ಲಿ ನೀವು ಇಡುವ ಎಫ್‌ಡಿ (Fixed Deposit) ಗಳ ಮೇಲಿನ ಬಡ್ಡಿ ದರಗಳು ಸಹ ಸದ್ಯಕ್ಕೆ ಸ್ಥಿರವಾಗಿರಲಿವೆ. ಹೂಡಿಕೆದಾರರಿಗೆ ಬಡ್ಡಿ ದರ ಹೆಚ್ಚಳದ ನಿರೀಕ್ಷೆಯಿದ್ದರೂ, ಆರ್‌ಬಿಐ ನಿರ್ಧಾರದ ಮೇಲೆಯೇ ಇದು ನಿರ್ಧಾರವಾಗಲಿದೆ.

ಆರ್​ಬಿಐ ಮುಂದಿರುವ ಪ್ರಮುಖ ಸವಾಲುಗಳು

ಇತ್ತೀಚಿನ ದಿನಗಳಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ತೀವ್ರ ಕುಸಿತ ಕಂಡಿದೆ. ಇದನ್ನು ನಿಯಂತ್ರಿಸುವುದು ಆರ್‌ಬಿಐ ಮುಂದಿರುವ ದೊಡ್ಡ ಸವಾಲಾಗಿದೆ.

ದೇಶದಲ್ಲಿ ರೀಟೇಲ್ ಹಣದುಬ್ಬರವು ಆರ್‌ಬಿಐನ ನಿಯಂತ್ರಣ ಮಿತಿಯಲ್ಲಿದ್ದರೂ (ಶೇ. 4 ರ ಗುರಿ), ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯು ಆತಂಕ ಮೂಡಿಸುತ್ತಿದೆ. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ ದರವು ಶೇ. 5 ಅನ್ನು ದಾಟಬಹುದು ಎಂದು ಎಸ್​ಬಿಐ ರಿಸರ್ಚ್​ನ ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಎಂಪಿಸಿ ಸಭೆಯಲ್ಲಿ ಈ ಹಣದುಬ್ಬರ, ಜಿಡಿಪಿ ದರಗಳು ಮುಂದಿನ ಒಂದು ವರ್ಷದಲ್ಲಿ ಎಷ್ಟಿರಬಹುದು ಎನ್ನುವ ಲೆಕ್ಕಾಚಾರವನ್ನು ಮಾಡಲಾಗಿರುತ್ತದೆ. ಅದನ್ನು ಆರ್​ಬಿಐ ಗವರ್ನರ್ ಬಹಿರಂಗಪಡಿಸಲಿದ್ದಾರೆ.

ಒಟ್ಟಾರೆ, ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯಕ್ಕೆ ರೆಪೊ ದರದಲ್ಲಿ ಬದಲಾವಣೆ ಮಾಡುವ ಮಟ್ಟಕ್ಕೆ ಕ್ರಮ ತೆಗೆದುಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆ ಇದೆ. ಜಾಗತಿಕ ತೈಲ ಬಿಕ್ಕಟ್ಟು ಶಮನಗೊಂಡ ಪಕ್ಷದಲ್ಲಿ ಮುಂಬರುವ ಎಂಪಿಸಿ ಸಭೆಗಳಲ್ಲಿ ರೆಪೋ ದರ ಕಡಿತದ ಸಾಹಸಕ್ಕೆ ಕೈಹಾಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ: ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್​ – Kannada News

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಜೂನ್​ 04: ಎಸ್​ಬಿಐ ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ಸ್(ಇಂಡಿಯಾ) ಲಿಮಿಟೆಡ್ (Deepak Cables (India) Limited) ನಿರ್ದೇಶಕ ಕರುಟೂರಿ ವೆಂಕಟೇಶ್ವರ್ ರಾವ್​​ರನ್ನು ಬೆಂಗಳೂರು ವಲಯದ ಇಡಿ (ED) ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಇಡಿ ಅಧಿಕಾರಿಗಳು ದೀಪಕ್ ಕೇಬಲ್ಸ್ ಮೇಲೆ ದಾಳಿ ಮಾಡಿ ಕೋಟ್ಯಂತರ ನಗದು, ಆಸ್ತಿ ಜಪ್ತಿ ಮಾಡಿದ್ದರು.

ಮುಖ್ಯಾಂಶಗಳು

  • SBI ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ
  • ಇಡಿ ಅಧಿಕಾರಿಗಳಿಂದ ಕರುಟೂರಿ ವೆಂಕಟೇಶ್ವರ್ ರಾವ್ ಬಂಧನ
  • 10 ದಿನ ಇಡಿ ಕಸ್ಟಡಿಗೆ ನೀಡಿದ ಕೋರ್ಟ್​

ಇದನ್ನೂ ಓದಿ: ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಎಸ್​​​ಬಿಐ ಬ್ಯಾಂಕ್ ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ ಆರೋಪ ಬೆನ್ನಲ್ಲೇ ಮೇ 19 ಮತ್ತು 29ರಂದು ದೀಪಕ್ ಕೇಬಲ್ಸ್(ಇಂಡಿಯಾ) ಲಿಮಿಟೆಡ್​ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಕೋಟ್ಯಂತರ ನಗದು ಸೇರಿದಂತೆ ಆಸ್ತಿ ಜಪ್ತಿ ಮಾಡಿದ್ದರು. ಅಷ್ಟೇ ಅಲ್ಲದೆ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿದ್ದ 18 ಕೋಟಿ ರೂ ಹಣವನ್ನು ಫ್ರೀಜ್ ಮಾಡಲಾಗಿತ್ತು. ಇದೀಗ ನಿರ್ದೇಶಕ ಕರುಟೂರಿ ವೆಂಕಟೇಶ್ವರ್ ರಾವ್​​ರನ್ನು ಬಂಧಿಸಲಾಗಿದೆ. ಸದ್ಯ 10 ದಿನ ಇ.ಡಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಚಿತ್ರದುರ್ಗ: ಮಾಜಿ ಜಿಪಂ ಸದಸ್ಯನಿಂದಲೇ ಖಾದಿ ಸಹಕಾರ ಸಂಘದ ಕೋಟ್ಯಂತರ ಆಸ್ತಿ ಕಬಳಿಕೆ

ಬರೋಬ್ಬರಿ 899 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ವಿರುದ್ಧ ಇಡಿ ತನಿಖೆ ಚುರುಕುಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟಗಳಿಂದ ಪಡೆದಿದ್ದ ಬೃಹತ್ ಮೊತ್ತದ ಸಾಲವನ್ನು ನಿಯಮಬಾಹಿರವಾಗಿ ಇತರೆಡೆಗೆ ವರ್ಗಾಯಿಸಿ, ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಇದೆ. ಇನ್ನು ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆ ಬೆನ್ನಲ್ಲೇ ಇಡಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs AFG: ಏಕದಿನ ಸರಣಿಯಿಂದ ಕೊಹ್ಲಿ ಜೊತೆಗೆ ರೋಹಿತ್ ಕೂಡ ಔಟ್? – Kannada News

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ಆರಂಭವಾಗಲಿದೆ. ಅದಾದ ನಂತರ, ಜೂನ್ 14 ರಿಂದ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ, ಅಭಿಮಾನಿಗಳು ಅವರನ್ನು ಟೀಂ ಇಂಡಿಯಾ ಜೆರ್ಸಿಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದಾಗ್ಯೂ, ಈ ಸರಣಿ ಪ್ರಾರಂಭವಾಗುವ ಮೊದಲು, ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ವಿರಾಟ್ ಕೊಹ್ಲಿ ಈ ಸರಣಿಯಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಶರ್ಮಾ ಕೂಡ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಕೊಹ್ಲಿ ಜೊತೆಗೆ ರೋಹಿತ್​ಗೂ ಇಂಜುರಿ

ವಿರಾಟ್ ಕೊಹ್ಲಿಯಂತೆಯೇ ರೋಹಿತ್ ಕೂಡ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ರೋಹಿತ್ ಕೂಡ ಐಪಿಎಲ್ 2026 ರಲ್ಲಿ ಕೆಲವು ಪಂದ್ಯಗಳನ್ನು ಆಡಲಿಲ್ಲ. ವಿರಾಟ್ ಕೊಹ್ಲಿ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದ್ದರೂ, ರೋಹಿತ್ ಇನ್ನೂ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಾಗಿದೆ. ಒಂದು ವೇಳೆ ಇವರಿಬ್ಬರು ಆಡದಿದ್ದರೆ, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರು ಏಕದಿನ ತಂಡದಲ್ಲಿ ಆಡುವ ಅವಕಾಶ ಪಡೆಯಬಹುದು.

ಜೂನ್ 6 ರಂದು ನಿರ್ಧಾರ

ಜೂನ್ 6 ರಂದು ಆಯ್ಕೆದಾರರು ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ, ಅಫ್ಘಾನಿಸ್ತಾನ ಸರಣಿಗೆ ಹಾಗೂ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ರೋಹಿತ್ ಮತ್ತು ವಿರಾಟ್ ಅವರ ಫಿಟ್ನೆಸ್ ವರದಿಗಳನ್ನು ಪರಿಶೀಲಿಸಿದ ನಂತರವೇ ಆಯ್ಕೆದಾರರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?

ಭಾರತ-ಅಫ್ಘಾನಿಸ್ತಾನ ಸರಣಿ

  • ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ನಡೆಯಲಿದೆ.
  • ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜೂನ್ 13 ರಂದು ಧರ್ಮಶಾಲಾದಲ್ಲಿ ನಡೆಯಲಿದೆ.
  • ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದಲ್ಲಿ ನಡೆಯಲಿದೆ.
  • ಮೂರನೇ ಏಕದಿನ ಪಂದ್ಯ ಜೂನ್ 20 ರಂದು ಚೆನ್ನೈನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿರುತ್ತವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಗಂಡ ಹೆಂಡತಿ ನಡುವಿನ ಜಗಳಗಳಿಗೆ ನಿಜವಾದ ಕಾರಣವೇ ಈ ಅಂಶಗಳು – Kannada News

ಗಂಡ ಹೆಂಡತಿ (husband and wife) ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಆದರೆ ಈಗಿನ ಕಾಲದಲ್ಲಿ ಗಂಡ ಹೆಂಡತಿಯ ಜಗಳ ಡಿವೋರ್ಸ್‌ ತನಕ ಎಂಬಂತಾಗಿದೆ. ಹೌದು ಈಗಂತೂ ಗಂಡ ಹೆಂಡತಿಯರ ನಡುವೆ ಹೊಂದಾಣಿಕೆಯ ಗುಣವೇ ಇಲ್ಲ, ಸಣ್ಣಪುಟ್ಟ ವಿಚಾರಗಳಿಗೂ ದೊಡ್ಡದಾಗಿ ಜಗಳವಾಡಿ ಸುಂದರ ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಎಲ್ಲಾ ಜಗಳಗಳಿಗೆ ಈ ಅಂಶಗಳೇ ಮುಖ್ಯ ಕಾರಣವಾಗಿದ್ದು, ಗಂಡ ಹೆಂಡತಿ ಕೂತು ಅದನ್ನು ಬಗೆಹರಿಸಿದರೆ ಸಂಸಾರವನ್ನು ಸುಂದರವಾಗಿ ಸಾಗಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ಅಂಶಗಳು ಪತಿ ಪತ್ನಿಯರ ಜಗಳಕ್ಕೆ ಮುಖ್ಯ ಕಾರಣ ಎಂಬುದನ್ನು ನೋಡೋಣ ಬನ್ನಿ.

ಗಂಡ-ಹೆಂಡತಿ ಜಗಳಕ್ಕೆ ನಿಜವಾದ ಕಾರಣವೇನು?

ಅನ್ಯೋನ್ಯತೆಯ ಕೊರತೆ: ಚಾಣಕ್ಯರ ಪ್ರಕಾರ, ಪರಸ್ಪರ ಪ್ರೀತಿ, ಸ್ನೇಹ ಮತ್ತು ಗೌರವವು ದಾಂಪತ್ಯದಲ್ಲಿ ಮುಖ್ಯ. ಇವುಗಳಿಲ್ಲದೆ, ಸಂಬಂಧವು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ತಿಳುವಳಿಕೆಯ ಕೊರತೆ, ಸಂಬಂಧದಲ್ಲಿ ಮೋಸ ಮಾಡುವುದು ಮತ್ತು ಸಣ್ಣ ವಿಷಯಗಳನ್ನೂ ದೊಡ್ಡದಾಗಿಸುವುದು ಈ ಎಲ್ಲಾ ಅಂಶಗಳು ಸಂಬಂಧವನ್ನು ಹಾನಿಗೊಳಿಸುತ್ತದೆ. ಸಣ್ಣ ಭಿನ್ನಾಭಿಪ್ರಾಯಗಳು ಮತ್ತು ಅನಗತ್ಯ ವಾದಗಳು ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ. ಚಾಣಕ್ಯರ  ಪ್ರಕಾರ, ಪರಸ್ಪರರ ಅಗತ್ಯತೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದ ದಂಪತಿಗಳ ನಡುವೆ ಯಾವಾಗಲೂ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ.

ಹಣಕಾಸಿನ ಸಮಸ್ಯೆಗಳು: ಚಾಣಕ್ಯರ ಪ್ರಕಾರ, ಹಣದ ವಿಷಯದಲ್ಲಿ ಯಾವಾಗಲೂ ಜಾಗರೂಕರಾಗಿರಬೇಕು. ಸಾಲ, ಆದಾಯದ ಕೊರತೆಗಳಂತಹ ಹಣಕಾಸಿನ ಸಮಸ್ಯೆಗಳು ಪತಿ ಮತ್ತು ಪತ್ನಿಯ ನಡುವಿನ ಉದ್ವಿಗ್ನತೆ ಹೆಚ್ಚಿಸುತ್ತದೆ. ಹೌದು ಆದಾಯ ಕಮ್ಮಿಯಾಗಿ ಗಂಡ ಅಥವಾ ಹೆಂಡತಿ ತಮ್ಮ ಖರ್ಚನ್ನು ತೀರಾ ಹೆಚ್ಚು ಮಾಡಿದರೆ ಇದು ಇವರಿಬ್ಬರ ನಡುವೆ ವಾಗ್ವಾದವನ್ನು ಉಂಟು ಮಾಡುತ್ತವೆ. ಇವೇ ಜಗಳಗಳು ನಡೆಯಲು ಮುಖ್ಯ ಕಾರಣವಾಗುತ್ತದೆ.

ಇದನ್ನೂ ಓದಿ: ಎಲ್ಲರೂ ನಿಮ್ಮನ್ನು ಗೌರವಿಸಬೇಕೆಂದರೆ ತಕ್ಷಣವೇ ಅಭ್ಯಾಸಗಳನ್ನು ತ್ಯಜಿಸಿ

ಪ್ರಾಮಾಣಿಕತೆಯ ಕೊರತೆ: ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಯಾರೇ ಒಬ್ಬರು ಪ್ರಾಮಾಣಿಕವಾಗಿಲ್ಲದಿದ್ದರೂ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಸಂಬಂಧದಲ್ಲಿ ಪ್ರೀತಿ, ನಂಬಿಕೆ ಕಡಿಮೆಯಾದಾಗ ಜಗಳಗಳು ಉಂಟಾಗುತ್ತವೆ. ಹಾಗಾಗಿ ಏನೇ ಆದರೂ ಗಂಡ ಮತ್ತು ಹೆಂಡತಿ ಸಂಬಂಧದಲ್ಲಿ ಪ್ರಾಮಾಣಿಕವಾಗಿರಬೇಕು. ಯಾವುದೇ ವಿಚಾರಗಳನ್ನು ಮುಚ್ಚುಮರೆ ಮಾಡಬಾರದು.

ಜವಾಬ್ದಾರಿಯ ಕೊರತೆ:  ಚಾಣಕ್ಯನ ಪ್ರಕಾರ, ಗಂಡ ಮತ್ತು ಹೆಂಡತಿ ಸಮಾನ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಒಬ್ಬರಿಗೊಬ್ಬರು ನೆರಳಿನಂತಿರಬೇಕು. ಇನ್ನೊಬ್ಬರನ್ನು ನಿರ್ಲಕ್ಷಿಸಿದರೆ, ಸಂಬಂಧವು ಮುರಿದು ಬೀಳುವುದು ಸಹಜ. ವಿಶೇಷವಾಗಿ ಮಕ್ಕಳನ್ನು ಬೆಳೆಸುವಲ್ಲಿ, ಮನೆಯನ್ನು ನಿರ್ವಹಿಸುವಲ್ಲಿ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಸಹಕಾರವಿಲ್ಲದಿದ್ದರೆ, ಜವಾಬ್ದಾರಿಯ ಹೊರೆ ಒಬ್ಬ ವ್ಯಕ್ತಿಯ ಮೇಲೆ ಬೀಳುತ್ತದೆ. ಆಗ ಮನಸ್ತಾಪ ಮೂಡಲು ಕಾರಣವಾಗುತ್ತದೆ. ಹಾಗಾಗಿ ಸಂಬಂಧ ಚೆನ್ನಾಗಿರಬೇಕೆಂದರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಚಾಣಕ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೇಯಸ್ ಅಯ್ಯರ್​ಗೆ ಟಿ20 ತಂಡದ ನಾಯಕತ್ವ; ಯಾರಿಗೆ ಸಿಗಲಿದೆ ಉಪನಾಯಕತ್ವ? – Kannada News

ಇದೇ ಜೂನ್ 6 ರಿಂದ ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ಟೆಸ್ಟ್ ಹಾಗೂ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿ ಮುಗಿದ ಬಳಿಕ ಜೂನ್ 26 ರಿಂದ ಐರ್ಲೆಂಡ್ ವಿರುದ್ಧ ಮತ್ತು ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಏಕೆಂದರೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದಿಂದ ಕೈಬಿಡುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಅದಕ್ಕೂ ಮುನ್ನ ನಾಯಕನ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.

ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಮುಂದಿನ ಟಿ20 ನಾಯಕರಾಗಲಿದ್ದು, ಈ ಬಗ್ಗೆ ಗುರುವಾರ ಅಧಿಕೃತ ಘೋಷಣೆ ಹೊರಬೀಳಬಹುದು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಗುರುವಾರ ನಡೆಯಲಿರುವ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್‌ನ ಆನ್‌ಲೈನ್ ಸಭೆಯಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕರನ್ನಾಗಿ ನೇಮಿಸುವ ಸಾಧತ್ಯೆಗಳಿವೆ.

ಶ್ರೇಯಸ್​ಗೆ ಟಿ20 ತಂಡದ ನಾಯಕತ್ವ

ಇನ್ನೊಂದು ವರದಿಯ ಪ್ರಕಾರ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಅವರನ್ನು ಟಿ20 ನಾಯಕರನ್ನಾಗಿ ನೇಮಿಸುವ ಇರಾದೆಯಲ್ಲಿದ್ದರು. ಆದರೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಇದಕ್ಕೆ ಒಪ್ಪಲಿಲ್ಲ ಎಂಬ ವರದಿಗಳಿವೆ. ಪರಸ್ಪರ ಒಪ್ಪಿಗೆಯ ಮೇರೆಗೆ, ಶ್ರೇಯಸ್ ಅಯ್ಯರ್ ಅವರನ್ನು ಭಾರತದ ಮುಂದಿನ ಟಿ20 ನಾಯಕನನ್ನಾಗಿ ನೇಮಿಸಲಾಗುತ್ತಿದೆ. ಹೀಗಾಗಿ ಅಯ್ಯರ್ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಎರಡೂ ಪ್ರವಾಸಗಳಿಗೆ ತಂಡದ ಆಯ್ಕೆ ಸಭೆಗಳು ಜೂನ್ 6 ರ ಶನಿವಾರ ನಡೆಯಲಿದ್ದು, ಶ್ರೇಯಸ್ ಅಯ್ಯರ್ ಹಾಜರಿರುವ ನಿರೀಕ್ಷೆಯಿದೆ.

ನಾಯಕನಾಗಿ ಅಯ್ಯರ್ ಪ್ರದರ್ಶನ

ಶ್ರೇಯಸ್ ಅಯ್ಯರ್ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು, 2018 ರಿಂದ ಐಪಿಎಲ್​ನ ಭಾಗವಾಗಿರುವ ಅಯ್ಯರ್ 101 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ನಾಯಕನಾಗಿ 55 ಪಂದ್ಯಗಳನ್ನು ಗೆದ್ದಿರುವ ಅಯ್ಯರ್ 54.45 ರ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಹಾಗೆಯೇ ಅಯ್ಯರ್ ನಾಯಕತ್ವದಲ್ಲಿ, ತಂಡವು 41 ಪಂದ್ಯಗಳನ್ನು ಸೋತಿದೆ, ಎರಡು ಪಂದ್ಯಗಳು ಟೈ ಆಗಿದ್ದರೆ, ಮೂರು ಪಂದ್ಯಗಳು ಡ್ರಾದೊಂದಿಗೆ ಕೊನೆಗೊಂಡಿವೆ. ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಮುನ್ನಡೆಸಿದ್ದಾರೆ. ಹಾಗೆಯೇ ಅಯ್ಯರ್ ಅವರ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಪ್ರಶಸ್ತಿಯನ್ನು ಗೆದ್ದಿತು. ಇದಾದ ಬಳಿಕ 2025 ರ ಐಪಿಎಲ್‌ನಲ್ಲಿ ಅಯ್ಯರ್ ಪಂಜಾಬ್ ತಂಡವನ್ನು ಫೈನಲ್​ಗೇರಿಸಿದ್ದರು.

ತಿಲಕ್​ಗೆ ಉಪನಾಯಕತ್ವ

ಮಾಧ್ಯಮ ವರದಿಗಳ ಪ್ರಕಾರ, ತಿಲಕ್ ವರ್ಮಾಗೆ ಉಪನಾಯತ್ವ ನೀಡುವುದು ಕೂಡ ಖಚಿತವಾಗಿದೆ. ಹೀಗಾಗಿ ತಿಲಕ್ ವರ್ಮಾ, ಅಕ್ಷರ್ ಪಟೇಲ್ ಬದಲಿಗೆ ತಂಡದ ಉಪನಾಯಕರಾಗಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಸ್ತುಗಳನ್ನು ಗ್ಯಾಸ್‌ ಒಲೆ ಪಕ್ಕ ಇಡಲೇಬೇಡಿ; ಯಾಕೆ ಗೊತ್ತಾ? – Kannada News

ಅಡುಗೆ ಮಾಡುವಾಗ ಕೆಲಸ ಇನ್ನಷ್ಟು ಸುಲಭವಾಗಲಿ ಎಂದು ಕೆಲವೊಂದು ವಸ್ತುಗಳನ್ನು ಕೈಗೆಟಕುವಂತೆ ಗ್ಯಾಸ್‌ ಸ್ಟೌವ್‌ (gas stove) ಪಕ್ಕವೇ ಇಟ್ಟುಬಿಡುತ್ತೇವೆ. ಈ ರೀತಿ ಕೆಲವು ವಸ್ತುಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕ ಇಡಲೇಬಾರದಂತೆ, ಏಕೆಂದರೆ ಒಂದು ಸಣ್ಣ ನಿರ್ಲಕ್ಷ್ಯ ಕೂಡ ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಹೌದು ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿ ಈ ಕೆಲವೊಂದು ವಸ್ತುಗಳನ್ನಿಟ್ಟರೆ ಅವುಗಳಿಗೆ ಬಹುಬೇಗನೆ ಬೆಂಕಿಗೆ ತಗಲುತ್ತವೆ, ಅಲ್ಲದೆ ಆ ವಸ್ತುಗಳ ಗುಣಮಟ್ಟವೂ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಿಳಿದೋ ತಿಳಿಯದೆಯೋ ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿ  ಈ ಕೆಲವೊಂದು ವಸ್ತುಗಳನ್ನು ಇಟ್ಟಿದ್ದರೆ ಅವುಗಳನ್ನು ತಕ್ಷಣವೇ ತೆಗೆದು ಬಿಡಿ. ಆ ವಸ್ತುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಗ್ಯಾಸ್‌ ಸ್ಟೌವ್‌ ಪಕ್ಕ ಈ ವಸ್ತುಗಳನ್ನು ಇಡಲೇಬೇಡಿ:

 ಅಡುಗೆಮನೆ ಬಟ್ಟೆಗಳು: ಕೆಲವೊಮ್ಮೆ, ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ, ನಾವು ನಮ್ಮ ಕೈಗಳನ್ನು ಒರೆಸಲು ಅಥವಾ ಬಿಸಿ ಪಾತ್ರೆಗಳನ್ನು ಹಿಡಿಯಲು ಬಟ್ಟೆಗಳನ್ನು ಬಳಸುತ್ತೇವೆ. ಹೆಚ್ಚಿನವರು ಈ ಬಟ್ಟೆಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಅಡುಗೆ ಮಾಡುವಾಗ ಆತುರದಲ್ಲಿ, ಈ ಬಟ್ಟೆಗಳು ಆಕಸ್ಮಿಕವಾಗಿ ಜ್ವಾಲೆಗಳು ಅಥವಾ ಬಿಸಿ ಪಾತ್ರೆಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅವುಗಳಿಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು. ಆದ್ದರಿಂದ ನ್ಯಾಪ್ಕಿನ್‌ ಅಥವಾ ಅಡುಗೆ ಬಟ್ಟೆಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕ ಇಡಬೇಡಿ.

ಅಡುಗೆ ಎಣ್ಣೆ ಬಾಟಲಿಗಳು: ಅಡುಗೆಗೆ ಎಣ್ಣೆ ಅತ್ಯಗತ್ಯ. ಅಡುಗೆ ಕೆಲಸ ಆದಷ್ಟು ಸುಲಭವಾಗಿ ಆಗಲಿ ಎಂದು ಬಹುತೇಕ ಎಲ್ಲರೂ ಈ ಎಣ್ಣೆ  ಬಾಟಲಿಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ.  ಒಲೆಯ ಬಳಿ ಇಟ್ಟ ಎಣ್ಣೆ ಬಾಟಲಿಗಳು ಬೇಗನೆ ಬಿಸಿಯಾಗುತ್ತವೆ. ಅದರಲ್ಲೂ  ಅವು ಪ್ಲಾಸ್ಟಿಕ್ ಆಗಿದ್ದರೆ, ಅವು ಕರಗಿ ಎಣ್ಣೆ ಸೋರಿಕೆಯಾಗುವ ಅಪಾಯವಿದೆ. ಇದಲ್ಲದೆ, ಬೆಂಕಿ ಜ್ವಾಲೆಗೆ ಎಣ್ಣೆ ತಾಕಿದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.

ಪೇಪರ್ ಮತ್ತು ಶಾಪಿಂಗ್ ಬ್ಯಾಗ್‌ಗಳು: ಅನೇಕರು ಅಂಗಡಿಯಿಂದ ವಸ್ತುಗಳನ್ನು ತಂದ ಬಳಿಕ ಆ ವಸ್ತುಗಳ ಪೇಪರ್‌ ಮತ್ತು ಪ್ಲಾಸ್ಟಿಕ್‌ ಕವರ್‌ಗಳಲ್ಲೂ ಅಡುಗೆ ಮನೆಯಲ್ಲೇ ಇಟ್ಟುಬಿಡುತ್ತಾರೆ. ಕೆಲವು ಮನೆಗಳಲ್ಲಿ ಗ್ಯಾಸ್‌ ಒಲೆ ಪಕ್ಕವೇ ಪೇಪರ್‌, ಬ್ಯಾಗ್‌ಗಳನ್ನು ಇಟ್ಟುಬಿಡುತ್ತಾರೆ. ಈ ವಸ್ತುಗಳಿಗೆ ಸುಲಭವಾಗಿ ಬೆಂಕಿ ತಾಕುವ ಕಾರಣ ಅವುಗಳನ್ನು ಗ್ಯಾಸ್‌ ಒಲೆಯಿಂದ ಸಾಧ್ಯವಾದಷ್ಟು ದೂರವಿಡಿ.

ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳು: ಗ್ಯಾಸ್ ಹೊತ್ತಿಸಲು ಒಲೆಯ ಬಳಿ ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳನ್ನು ಇಡುವುದು ಸಾಮಾನ್ಯ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಏಕೆಂದರೆ ಶಾಖದ ನೇರ ಸಂಪರ್ಕವು ಲೈಟರ್‌ಗೆ ಹಾನಿಯಾಗಬಹುದು  ಆದ್ದರಿಂದ ಈ ವಸ್ತುಗಳನ್ನು  ಸುರಕ್ಷಿತ ಸ್ಥಳದಲ್ಲಿ ಇಡಬೇಕು.

ಇದನ್ನೂ ಓದಿ: ಅಡುಗೆ ಮಾಡುವಾಗ ಎಲ್​ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು!

ಮರದ ಚಮಚಗಳು ಮತ್ತು ಚಾಪ್ ಬೋರ್ಡ್‌ಗಳು: ಮರದ ಚಮಚಗಳು ಮತ್ತು ಚಾಪ್ ಬೋರ್ಡ್‌ಗಳು ಅಡುಗೆಮನೆಯಲ್ಲಿ ತುಂಬಾ ಉಪಯುಕ್ತವಾಗಿರುವ ವಸ್ತುಗಳು, ಆದ್ದರಿಂದ ಹೆಚ್ಚಿನವರು ಅವುಗಳನ್ನು ಗ್ಯಾಸ್‌ ಒಲೆಯ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಈ ರೀತಿ ಬಿಸಿ ಬರ್ನರ್ ಬಳಿ ಮರದ ವಸ್ತುಗಳನ್ನು ಇಟ್ಟರೆ ಅವು ಕಪ್ಪಾಗಬಹುದು, ಬಿರುಕು ಬಿಡಬಹುದು ಅಥವಾ ಅವುಗಳಿಗೆ ಬೆಂಕಿ ಹಿಡಿದುಕೊಳ್ಳಬಹುದು.

ಉಪ್ಪು, ಸಕ್ಕರೆ ಮತ್ತು ಮಸಾಲೆ ಜಾಡಿಗಳು: ಅಡುಗೆ ಮಾಡುವಾಗ ಸುಲಭವಾಗಿ ಲಭ್ಯವಾಗುವಂತೆ ಅನೇಕ ಜನರು ಉಪ್ಪು, ಮೆಣಸು, ಅರಿಶಿನ ಮತ್ತು ಗರಂ ಮಸಾಲೆ ಸೇರಿಂದ ಅಡುಗೆಗೆ ಉಪಯುಕ್ತವಾದ ಬಹುತೇಕ ಎಲ್ಲಾ ವಸ್ತುಗಳನ್ನು ಒಲೆಯ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಗ್ಯಾಸ್‌ ಒಲೆಯ ತೀವ್ರವಾದ ಶಾಖ ಮತ್ತು ಅನಿಲದಿಂದ ಬರುವ ಉಗಿಯ ತೇವಾಂಶವು ಮಸಾಲೆ ಡಬ್ಬಿಗಳ ಒಳಗೆ ಸುಲಭವಾಗಿ ಪ್ರವೇಶಿಸುತ್ತದೆ. ಪರಿಣಾಮವಾಗಿ, ದುಬಾರಿ ಮಸಾಲೆಗಳು ಬೇಗನೆ ಹಾಳಾಗುತ್ತವೆ, ಅವುಗಳ ಪರಿಮಳವೂ ಹೋಗಿಬಿಡುತ್ತದೆ.

ಪ್ಲಾಸ್ಟಿಕ್ ವಸ್ತುಗಳು: ಅಡುಗೆ ಮನೆಯಲ್ಲಿ ನೀವು ಬಳಸುವಂತಹ ಪ್ಲಾಸ್ಟಿಕ್‌ ವಸ್ತುಗಳನ್ನು ಯಾವುದೇ ಕಾರಣಕ್ಕೂ ಗ್ಯಾಸ್‌ ಒಲೆ ಪಕ್ಕದಲ್ಲಿ ಇಡಬೇಡಿ. ಇದರಿಂದ ಆ ವಸ್ತಗಳು ಬೇಗನೆ ಹಾಳಾಗುತ್ತವೆ.ಗ್ಯಾಸ್ ಸ್ಟೌವ್ ಸುತ್ತಲಿನ ಪ್ರದೇಶವನ್ನು ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳಿ ಮತ್ತು ಸ್ವಚ್ಛವಾಗಿಡಿ. ಸ್ಟೌವ್ ಬಳಿ ಅನಗತ್ಯ ಪ್ಲಾಸ್ಟಿಕ್ ಮತ್ತು ಕಾಗದದ ವಸ್ತುಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಜೊತೆ ಬ್ರೇಕಪ್; ಇಂಡಿಯ ಒಕ್ಕೂಟದ ಸಭೆ ಬಹಿಷ್ಕರಿಸಲು ಡಿಎಂಕೆ ನಿರ್ಧಾರ – Kannada News

ಚೆನ್ನೈ, ಜೂನ್ 4: ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಇಂಡಿಯ (INDIA) ಒಕ್ಕೂಟದ ಸಭೆಯಿಂದ ದೂರ ಉಳಿಯಲು ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿರ್ಧರಿಸಿದ್ದಾರೆ. ಇದು ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳ ಮೈತ್ರಿಗೆ ದೊಡ್ಡ ಹಿನ್ನಡೆಯಾಗಿದೆ.

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸಿರಲಿಲ್ಲ. ವಿಜಯ್ ನೇತೃತ್ವದ ಟಿವಿಕೆ ತಮಿಳುನಾಡಿನ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲು ಬೇಕಾದ ಬಹುಮತವಿರಲಿಲ್ಲ. ಈ ವೇಳೆ ಡಿಎಂಕೆ ಜೊತೆಗಿನ ದಶಕಗಳ ಮೈತ್ರಿ ಮುರಿದುಕೊಂಡ ಕಾಂಗ್ರೆಸ್​ ಟಿವಿಕೆಗೆ ಬೆಂಬಲ ಸೂಚಿಸಿತ್ತು. ಇದರಿಂದ ಡಿಎಂಕೆ ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದಿಂದ ಹೊರಬರಲು ನಿರ್ಧರಿಸಿದೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು

ರಾಷ್ಟ್ರ ಮಟ್ಟದ ಮೈತ್ರಿಗಿಂತ ತಮಿಳುನಾಡಿನಲ್ಲಿ ತಮ್ಮ ಪಕ್ಷದ ಹಿತಾಸಕ್ತಿ ಮತ್ತು ಪ್ರಾದೇಶಿಕ ಅಸ್ತಿತ್ವವೇ ತಮಗೆ ಮುಖ್ಯ ಎಂಬುದನ್ನು ಡಿಎಂಕೆ ಈ ನಿರ್ಧಾರದ ಮೂಲಕ ಸ್ಪಷ್ಟಪಡಿಸಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದ ಈ ಮೈತ್ರಿಯಲ್ಲಿ ಈಗ ಬಿರುಕು ಮೂಡಿರುವುದು ಇಂಡಿಯ ಒಕ್ಕೂಟದ ಇತರ ನಾಯಕರಲ್ಲಿ ಆತಂಕ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರ್ವಜನಿಕರ ಕುಂದು ಕೊರತೆಗಳ ನಿರ್ವಹಣೆಗೆ, NRIಗೆ ಪ್ರತ್ಯೇಕ ಸಚಿವಾಲಯ: ಸಿಎಂ ಡಿಕೆಶಿ ಮಹತ್ವ ಘೋಷಣೆ – Kannada News

ಬೆಂಗಳೂರು, (ಜೂನ್ 04): ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.ಇದಕ್ಕೆ ಪೂರಕವೆಂಬಂತೆ ಇಂದು (ಜೂನ್ 04) ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ವಿಶೇಷ ಸಭೆ ನಡೆಸಿದ್ದು, ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ರಾಜ್ಯದ ಅಭಿವೃದ್ಧಿ, ಕಾನೂನು ಸುವ್ಯಸ್ಥೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕುರಿತು ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಾರ್ವಜನಿಕ ಕುಂದು ಕೊರತೆಗಳ ನಿರ್ವಹಣೆಗೆ ಮತ್ತು ಅನಿವಾಸಿ ಭಾರತೀಯರಿಗೆ (ಎನ್ಆರ್‌ಐ) ಸಂಬಂಧಪಟ್ಟಂತೆ ಪ್ರತ್ಯೇಕ ಸಚಿವಾಲಯಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.

ಮುಖ್ಯಾಂಶಗಳು

  • ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅಧಿಕಾರಿಗಳ ಜೊತೆ ಮೊದಲ ಮಹತ್ವದ ಸಭೆ
  • ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಜತೆ ಸಭೆ ಮಾಡಿ ಆಡಳಿತ ಯಂತ್ರಕ್ಕೆ ಚುರುಕು
  • ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ ಸಿಎಂ ಡಿಕೆ ಶಿವಕುಮಾರ್
  • ಸಾರ್ವಜನಿಕರು ಕುಂದುಕೊರತೆ ಆಲಿಸಲು ಪ್ರತ್ಯೇಕ ಸಚಿವಾಲಯ ಘೋಷಣೆ

ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುವುದು. ದಿನಕ್ಕೆ ಎರಡು ಮೂರು ತಂಡ ಪ್ರತಿಭಟನೆ ಮಾಡುತ್ತಿರುತ್ತದೆ. ಅವರ ಅಹವಾಲು ಕೇಳಬೇಕಾಗಿದೆ. ಯಾಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಅವರ ಬೇಡಿಕೆಗಳೇನು? ಸಮಸ್ಯೆಗಳೇನು? ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಳಿಕ ಅವರ ಸಮಸ್ಯೆಗೆ ಸ್ಪಂದಿಸಲು, ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು?

ಪ್ರತಿನಿತ್ಯ ತಮ್ಮ ಹಕ್ಕುಗಳಿಗಾಗಿ ಅನೇಕ ಹೋರಾಟಗಾರರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತವೆ.ಅವರ ಸಮಸ್ಯೆಗಳನ್ನು ಆಲಿಸುವುದು ಸರ್ಕಾರದ ಕರ್ತವ್ಯ.ಹೀಗಾಗಿ ಹೋರಾಟಗಾರರ ಆಹವಾಲುಗಳನ್ನು ಆಲಿಸಲು ಪ್ರತ್ಯೇಕ ಮಂತ್ರಿ ಹಾಗೂ ಸಚಿವಾಲಯನ್ನು ಮಾಡಲಿದ್ದೇವೆ. ವಾರಕ್ಕೊಬ್ಬ ಸಚಿವರು ಭೇಟಿ ಮಾಡಿ ಮಾತನಾಡಲಿದ್ದಾರೆ. ಹೋರಾಟಗಾರರ ನೋವಿಗೆ ಸ್ಪಂದಿಸುವ ಕೆಲಸವನ್ನು ಈ ಸಚಿವಾಲಯ ಮಾಡಲಿದೆ ಎಂದು ವಿವರಿಸಿದರು.

ಎನ್ಆರ್‌ಐಗೆ ಪ್ರತ್ಯೇಕ ಸಚಿವಾಲಯ

ಇನ್ನು ಎನ್ಆರ್‌ಐಗೆ ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಹಲವು ಎನ್‌ಆರ್‌ಐಗಳು ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಸಮಸ್ಯೆಗಳು, ಅವರ ಹೂಡಿಕೆಗಳಿಗೆ ಬೇಕಾದ ಪೂರಕ ವಾತಾವರಣ, ಅವರ ಸಮಸ್ಯೆ ನಿವಾರಣೆಗಾಗಿ, ಸಮನ್ವಯತೆಗಾಗಿ ಪ್ರತ್ಯೇಕ ಎನ್ಆರ್‌ಐ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸಿಗುತ್ತಾ ಸ್ಪಂದನೆ?

ಇನ್ನು ಅನೇಕ ವಿಚಾರವಾಗಿ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಇರಲಿಲ್ಲ. ನಾಮಕಾಸ್ತೆವಾಗಿ ಆಯಾ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸುಮ್ಮನಾಗುತ್ತಿದ್ದರು. ಆದ್ರೆ, ಇದೀಗ ಪ್ರತ್ಯೇಕ ಸಚಿವಾಲಯ ರಚನೆಯಾದರೆ ಸಾರ್ವಜನಿಕರ ಕುಂದುಕೊರತೆಗಳನ್ನು ಕೇಳಲು ನಿರ್ಧಿಷ್ಟವಾದ ಸ್ಥಳ ಹಾಗೂ ಅದಕ್ಕೊಬ್ಬರು ಸಚಿವರು ಇರುತ್ತಾರೆ. ಹೀಗಾಗಿ ಜನರ ಕಷ್ಟಗಳನ್ನ ಆಲಿಸಲು ಒಂದು ಕಚೇರಿ ಇರುತ್ತೆ. ಆದ್ರೆ, ಅದು ಎಷ್ಟರ ಮಟ್ಟಿಗೆ ಜನರು ಕಷ್ಟಗಳನ್ನ ಆಲಿಸುತ್ತೆ ಎನ್ನುವುದನನ್ನು ಕಾದುನೋಡಬೇಕಿದೆ.

Source link

‘ಪೆದ್ದಿ’ ಸಿನಿಮಾಕ್ಕೆ ಬರಲಿದೆಯೇ ಸೀಕ್ವೆಲ್? ಕತೆಯಲ್ಲಿ ಇದೆಯೇ ಸುಳಿವು? – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 04) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಮ್ ಚರಣ್ ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೊದಲ ದಿನವೇ ದೇಶದಾದ್ಯಂತ ರಾಮ್ ಚರಣ್ ಅವರ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ. ರಾಮ್ ಚರಣ್ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಇಬ್ಬರೂ ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗುವ ದೊಡ್ಡ ಬಜೆಟ್​​ನ ಪ್ಯಾನ್ ಇಂಡಿಯಾ ಸಿನಿಮಾಗಳೆಲ್ಲ ಸೀಕ್ವೆಲ್​​ಗಳು ಬರುತ್ತಿವೆ. ಇತ್ತೀಚೆಗಂತೂ ಸೀಕ್ವೆಲ್​​ಗಳ ಕಾಲವಾಗಿದೆ. ಕೆಲವರಂತೂ ‘ಸಿನಿಮ್ಯಾಟಿಕ್ ಯೂನಿವರ್ಸ್​​’ ಸಹ ಮಾಡುತ್ತಿದ್ದಾರೆ. ಈಗ ‘ಪೆದ್ದಿ’ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಸೀಕ್ವೆಲ್ ಸಹ ಬರಲಿದೆಯೇ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಸಹಜವಾಗಿದೆ. ಈ ಪ್ರಶ್ನೆಗೆ ಕೆಲ ದಿನಗಳ ಹಿಂದೆಯೇ ನಿರ್ದೇಶಕ ಬುಚ್ಚಿಬಾಬು ಸನಾ ಉತ್ತರ ನೀಡಿದ್ದಾರೆ.

ಸಾಮಾನ್ಯವಾಗಿ ಸೀಕ್ವೆಲ್ ಮಾಡುವ ಉದ್ದೇಶವುಳ್ಳ ನಿರ್ದೇಶಕರು ಸಿನಿಮಾದ ಅಂತ್ಯದಲ್ಲಿ ಸುಳಿವು ನೀಡುತ್ತಾರೆ. ಆದರೆ ‘ಪೆದ್ದಿ’ ಸಿನಿಮಾದ ಅಂತ್ಯದಲ್ಲಿ ಸೀಕ್ವೆಲ್ ಬರುವುದರ ಬಗ್ಗೆ ಯಾವುದೇ ಸುಳಿವನ್ನು ನೀಡಲಾಗಿಲ್ಲ. ಕೆಲ ದಿನಗಳ ಹಿಂದಷ್ಟೆ ಈ ಬಗ್ಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬುಚ್ಚಿಬಾಬು ಸನಾ, ತಮಗೆ ‘ಪೆದ್ದಿ’ಯ ಕತೆ ಕೇವಲ ಒಂದು ಕತೆಯಾಗಿ ಹೊಳೆದಿತ್ತು, ಹಾಗಾಗಿ ಅದನ್ನು ಒಂದೇ ಸಿನಿಮಾ ಮಾಡಿದ್ದೇನೆ. ‘ಪೆದ್ದಿ’ ಬರುತ್ತಾನೆ, ಆತ ಸಾಧಿಸುತ್ತಾನೆ, ಆತನ ಕತೆ ಮುಗಿಯುತ್ತದೆ ಅಷ್ಟೆ, ಸೀಕ್ವೆಲ್​​ಗಾಗಿ ಅದನ್ನು ಹಿಗ್ಗಿಸುವ ಅವಶ್ಯಕತೆ ಇಲ್ಲ’ ಎಂದಿದ್ದರು.

ಇದನ್ನೂ ಓದಿ:Peddi Movie review: ‘ಪೆದ್ದಿ’: ರಾಮ್ ಚರಣ್ ಸಿಕ್ಸರ್, ನಿರ್ದೇಶಕ ರನೌಟ್

‘ಪೆದ್ದಿ’ ಸಿನಿಮಾವು ಒಂದು ಘನ ಉದ್ದೇಶವನ್ನು ಈಡೇರಿಸಲೆಂದು ಕ್ರೀಡಾಪಟುವಾಗುವ ಸಣ್ಣ ಗ್ರಾಮದ ಮಾಮೂಲಿ ಯುವಕನೊಬ್ಬನ ಕತೆ. ಸಿನಿಮಾನಲ್ಲಿ ನಟ ರಾಮ್ ಚರಣ್ ಅವರು ಕ್ರಿಕೆಟ್, ಕುಸ್ತಿ ಮತ್ತು ಮತ್ತೊಂದು ಕ್ರೀಡೆಯನ್ನು ಆಡುತ್ತಾರೆ. ಆಟದ ಮೂಲಕ ತಮಗಾಗಿ ಒಂದು ಐಡೆಂಟಿಟಿಯನ್ನು ಕಟ್ಟಿಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಕುಸ್ತಿ ಗುರುವಾಗಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ರತ್ನವೇಲು ಕ್ಯಾಮೆರಾ ಇದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಂಪೂರ್ಣ ಎಥನಾಲ್ ಇಂಧನದಲ್ಲಿ ಓಡಬಲ್ಲ ಭಾರತದ ಮೊದಲ ಪ್ಯಾಸೆಂಜರ್ ಕಾರು ಬಿಡುಗಡೆ – Kannada News

ನವದೆಹಲಿ, ಜೂನ್ 4: ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki), ದೇಶದ ಮೊದಲ 100% ಎಥನಾಲ್ ಆಧಾರಿತ ‘ಫ್ಲೆಕ್ಸ್ ಫ್ಯುಯೆಲ್’ (Flex-Fuel) ಕಾರು ವ್ಯಾಗನ್ಆರ್ (WagonR) ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ 100% ಶುದ್ಧ ಎಥನಾಲ್ (E100) ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಮೊದಲ ಮಾಸ್-ಮಾರ್ಕೆಟ್ (ಸಾಮಾನ್ಯ ಜನರಿಗಾಗಿ ಬಿಡುಗಡೆಯಾದ) ಪ್ಯಾಸೆಂಜರ್ ಕಾರ್ ಆಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಈ ಕಾರನ್ನು ಅನಾವರಣಗೊಳಿಸಲಾಯಿತು. ಈ ಫ್ಲೆಕ್ಸ್ ಫ್ಯುಯೆಲ್ ಇಂಜಿನ್ ಅನ್ನು ಶೇ. 20 ರಿಂದ ಹಿಡಿದು ಶೇ. 100 ರಷ್ಟು ಎಥನಾಲ್ ಮಿಶ್ರಣದ ಇಂಧನದಲ್ಲೂ ಸುಲಭವಾಗಿ ಚಲಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಇಂಜಿನ್‌ನ ಫ್ಯುಯೆಲ್ ಲೈನ್‌ಗಳು, ಇಂಜೆಕ್ಟರ್‌ಗಳು ಮತ್ತು ಸೀಲ್‌ಗಳನ್ನು ತುಕ್ಕು ನಿರೋಧಕವಾಗಿ (Corrosion-resistant) ಮಾರ್ಪಡಿಸಲಾಗಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು

ಸಾಮಾನ್ಯ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಈ ಫ್ಲೆಕ್ಸ್ ಫ್ಯುಯೆಲ್ ಕಾರುಗಳ ತಯಾರಿಕಾ ವೆಚ್ಚ ಸುಮಾರು ₹40,000 ದಿಂದ ₹50,000 ದಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಫ್ಲೆಕ್ಸ್ ಫುಯೆಲ್ ಕಾರಿನಿಂದ ಲಾಭಗಳೇನು?

  • ಮಾಲಿನ್ಯ ಇಳಿಕೆ: ಎಥನಾಲ್ ಪರಿಸರಸ್ನೇಹಿ ಇಂಧನವಾಗಿದ್ದು, ಇದು ಪೆಟ್ರೋಲ್‌ಗಿಂತ ಅತ್ಯಂತ ಕಡಿಮೆ ಪ್ರಮಾಣದ ಇಂಗಾಲದ ಹೊರಸೂಸುವಿಕೆಯನ್ನು (Carbon emissions) ಹೊಂದಿರುತ್ತದೆ. ಇದರಿಂದ ಮಹಾನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಆಮದು ವೆಚ್ಚದ ಉಳಿತಾಯ: ಪ್ರಸ್ತುತ ಭಾರತವು ತನ್ನ ತೈಲ ಅಗತ್ಯದ 87% ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯವಾಗಿ ಎಥನಾಲ್ ಬಳಕೆ ಹೆಚ್ಚಾದಂತೆ ಕಚ್ಚಾ ತೈಲದ ಆಮದು ಕಡಿಮೆಯಾಗಿ, ದೇಶದ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.
  • ರೈತರಿಗೆ ಆರ್ಥಿಕ ಬಲ: ಎಥನಾಲ್ ಅನ್ನು ಕಬ್ಬಿನ ಕಾಕಂಬಿ (Molasses), ಜೋಳ, ನುಚ್ಚಕ್ಕಿ ಮತ್ತು ಕೃಷಿ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ತಂತ್ರಜ್ಞಾನದಿಂದ ದೇಶದ ರೈತರ ಆದಾಯ ಹೆಚ್ಚಾಗಲಿದ್ದು, ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?

ಇಂಧನ ಲಭ್ಯತೆಯ ಸವಾಲು

ಪ್ರಸ್ತುತ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಸಿದ್ಧವಾಗಿದ್ದರೂ, ದೇಶಾದ್ಯಂತ 100% ಎಥನಾಲ್ ಇಂಧನ ಸಿಗುವ ಪಂಪ್‌ಗಳ ಕೊರತೆಯಿದೆ. ಸದ್ಯಕ್ಕೆ ದೆಹಲಿ ಮತ್ತು ಮುಂಬೈ-ನಾಗ್ಪುರ ಕಾರಿಡಾರ್‌ಗಳಲ್ಲಿ ಕೇವಲ 50 ರಿಂದ 100 ಬಂಕುಗಳಲ್ಲಿ ಮಾತ್ರ ಇಂತಹ ಇಂಧನ ಲಭ್ಯವಿದೆ. ಆದರೆ, ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಇಂತಹ ಸುಮಾರು 5,000 ಫುಯೆಲ್ ಸೆಂಟರ್​ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version