ಧುರಂಧರ್ ಕಥೆ ಕದ್ದ ಆರೋಪ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ – Kannada News | Bombay High Court suggests amicable resolution in Dhurandhar 2 script Plagiarism case

‘ಧುರಂಧರ್ 2’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಮೇಲೆ ಕೃತಿಚೌರ್ಯದ (Plagiarism) ಆರೋಪ ಎದುರಾಗಿತ್ತು. ನಿರ್ದೇಶಕ ಸಂತೋಷ್ ಕುಮಾರ್ ಅವರು ಈ ಆರೋಪ ಮಾಡಿದ್ದರು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂತೋಷ್ ಕುಮಾರ್ ಮೇಲೆ ಆದಿತ್ಯ ಧರ್ (Aditya Dhar) ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದೆ. ಪರಸ್ಪರ ಮಾತುಕತೆಯ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದೆ.

ಆದಿತ್ಯ ಧರ್ ಅವರು ‘ಧುರಂಧರ್ 2’ ಚಿತ್ರದ ಕಥೆಯನ್ನು ತಮ್ಮ ಸ್ಕ್ರಿಪ್ಟ್‌ನಿಂದ ನಕಲು ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ಅವರು ಬಹಿರಂಗವಾಗಿ ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿದ ನಿರ್ದೇಶಕ ಆದಿತ್ಯ ಧರ್, ‘ಇದು ನನ್ನ ಘನತೆಗೆ ಧಕ್ಕೆ ತರುವಂತಹ ಸುಳ್ಳು ಆರೋಪ’ ಎಂದು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ನ್ಯಾಯಮೂರ್ತಿ ಅರಿಫ್ ಡಾಕ್ಟರ್ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ಬೌದ್ಧಿಕ ಆಸ್ತಿ ಹಕ್ಕು ಅಥವಾ ಕಥೆಯ ಮಾಲೀಕತ್ವದ ಬಗ್ಗೆ ಗೊಂದಲವಿದ್ದರೆ ಅದನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಂತೋಷ್ ಕುಮಾರ್ ಅವರಿಗೆ ಈ ಸ್ಕ್ರಿಪ್ಟ್ ತಮ್ಮದು ಎಂಬ ನಂಬಿಕೆಯಿದ್ದರೆ, ಸಿವಿಲ್ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇದೆ. ಇಂತಹ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಂಡರೆ ಅದು ದೀರ್ಘಕಾಲದ ಕಾನೂನು ಹೋರಾಟವನ್ನು ತಪ್ಪಿಸುತ್ತದೆ ಎಂದು ಕೋರ್ಟ್ ಹೇಳಿದೆ. ಆದ್ದರಿಂದ ವಿವಾದ ಅಂತ್ಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಥೆ ಕದ್ದ ಆರೋಪ: ಆದಿತ್ಯ ಧರ್ ಬಗ್ಗೆ ಹೇಳಿಕೆ ನೀಡದಂತೆ ಸಂತೋಷ್​ ಕುಮಾರ್​ಗೆ ಕೋರ್ಟ್ ಆದೇಶ

ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸಂತೋಷ್ ಕುಮಾರ್ ಅವರು ಆದಿತ್ಯ ಧರ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡಬಾರದು ಎಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದಿತ್ಯ ಧರ್ ಪರ ಹಿರಿಯ ವಕೀಲ ಬೀರೇಂದ್ರ ಸರಫ್ ವಾದ ಮಂಡಿಸಿದ್ದರು. ಈಗ ಹೈಕೋರ್ಟ್ ನೀಡಿರುವ ಸಂಧಾನದ ಸಲಹೆಗೆ ಉಭಯ ಪಕ್ಷಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ – Kannada News | Chanakya Niti: Want to get success in life? Then follow these advice of Chanakya

ಯಶಸ್ಸಿನ ಏಣಿಯನ್ನು ಏರಲು ಪ್ರತಿಯೊಬ್ಬರೂ ಹಗಲಿರುಳು ಶ್ರಮಿಸುತ್ತಾರೆ. ಈ ಕಠಿಣ  ಹಾದಿಯಲ್ಲಿ ಕೆಲವರು ಬೇಗನೇ ಯಶಸ್ಸನ್ನು (success) ಗಳಿಸಿದರೆ, ಇನ್ನೂ ಅನೇಕರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸನ್ನು ಗಳಿಸಲು ಸಾಧ್ಯವೇ ಆಗುವುದಿಲ್ಲ. ನಿಮಗೂ ಕೂಡ ಇದೇ ರೀತಿ ನೀವು ಅಂದುಕೊಂಡ ರೀತಿಯಲ್ಲಿ ಯಶಸ್ಸು ಸಿಗುತ್ತಿಲ್ಲವೇ ಹಾಗಿದ್ರೆ ಚಾಣಕ್ಯರು ಹೇಳಿರುವ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.  ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ, ಯಾವುದೇ ವ್ಯಕ್ತಿಯು ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸಲು ಸಹಾಯ ಮಾಡುವ ಕೆಲವು ಅಭ್ಯಾಸಗಳು ಮತ್ತು ವಿಷಯಗಳನ್ನು ವಿವರಿಸಿದ್ದಾರೆ. ನಿಮ್ಮ ಜೀವನದಲ್ಲಿ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಲು ಬಯಸಿದರೆ  ನೀವು ಸಹ ಚಾಣಕ್ಯರು ಹೇಳಿರುವ ಈ ಒಂದಷ್ಟು ಸಲಹೆ ಸೂಚನೆಗಳನ್ನು ಪಾಲಿಸಿ.

ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸಲು ಏನು ಮಾಡಬೇಕು?

ನಿಮ್ಮ ಗುರಿಯನ್ನು ಯಾವಾಗಲೂ ಸ್ಪಷ್ಟವಾಗಿಟ್ಟುಕೊಳ್ಳಿ: ಆಚಾರ್ಯ ಚಾಣಕ್ಯರ ಪ್ರಕಾರ, ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸುವವರು ಯಾವಾಗಲೂ ಸ್ಪಷ್ಟ ಗುರಿಯನ್ನು ಹೊಂದಿರುತ್ತಾರೆ. ಅವರು ಜೀವನದಲ್ಲಿ ಏನನ್ನು ಸಾಧಿಸಲು ಬಯಸುತ್ತಾರೆ ಎಂಬುದನ್ನು ಯಾವುದೇ ಗೊಂದಲವಿಲ್ಲದೆ ಅರ್ಥಮಾಡಿಕೊಂಡಿರುತ್ತಾರೆ. ಇದೇ ರೀತಿ ನೀವು ಸಹ ನಿಮ್ಮ ಗುರಿಗಳ ಬಗ್ಗೆ ಸ್ಪಷ್ಟವಾಗಿದ್ದಾಗ,  ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಸುಲಭವಾಗುತ್ತದೆ ಮತ್ತು ಇದರಿಂದ ನೀವು ವೇಗವಾಗಿ ಜೀವನದಲ್ಲಿ ಮುಂದುವರೆಯಬಹುದು.

ಸಮಯದ ಸದುಪಯೋಗ ಮಾಡಿಕೊಳ್ಳಿ: ಜೀವನದಲ್ಲಿ ವೇಗವಾಗಿ ಮುನ್ನಡೆಯುವವರು ಸಮಯದ ಮೌಲ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಜನರು ತಮ್ಮ ಜೀವನದ ಒಂದು ಸೆಕೆಂಡನ್ನು ಸಹ ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡಲು ಬಿಡುವುದಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ,  ಸಮಯವೇ ನಮ್ಮ ದೊಡ್ಡ ಸಂಪತ್ತು. ಅದನ್ನು ಸರಿಯಾಗಿ ಸದುಪಯೋಗಪಡಿಸಿದರೆ ಮಾತ್ರ ಜೀವನದಲ್ಲಿ ವೇಗವಾಗಿ ಮುಂದುವರೆಯಬಹುದು.

ಕೆಟ್ಟ ಸಹವಾಸದಿಂದ ದೂರವಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ನಮ್ಮ ಸಹವಾಸವು ಸಹ ನಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸುವವರು ಯಾವಾಗಲೂ ಸಕಾರಾತ್ಮಕ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವವರೊಂದಿಗೆ ಸಹವಾಸ ಮಾಡುತ್ತಾರೆ. ಇದಲ್ಲದೆ, ಅವರು ಯಾವಾಗಲೂ ತಮ್ಮ ಸಮಯವನ್ನು ವ್ಯರ್ಥ ಮಾಡುವವರಿಂದ ದೂರವಿರುತ್ತಾರೆ. ಇದೇ ರೀತಿ ನೀವು ಸಹ ಸರಿಯಾದ ಸಹವಾಸದಲ್ಲಿದ್ದಾಗ ಯಶಸ್ವಿಯಾಗುವುದು ಸುಲಭವಾಗುತ್ತದೆ.

ಇದನ್ನೂ ಓದಿ: ನಿಮ್ಮ ಜೊತೆಗಿರುವವರು ನಿಮ್ಮನ್ನು ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಎಂಬುದರ ಚಿಹ್ನೆಗಳಿವು

ಕಲಿಯುತ್ತಲೇ ಇರಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ: ಜೀವನದಲ್ಲಿ ತ್ವರಿತವಾಗಿ ಯಶಸ್ಸನ್ನು ಸಾಧಿಸುವ ಜನರು ಕಲಿಯುವ ಅಭ್ಯಾಸವನ್ನು ಎಂದಿಗೂ ಬಿಡುವುದಿಲ್ಲ. ಅವರು ಪ್ರತಿಯೊಂದು ಅನುಭವದಿಂದಲೂ ಹೊಸದನ್ನು ಕಲಿಯಲು ಶ್ರಮಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ದೊಡ್ಡ ಶಕ್ತಿ ಆತನ ಜ್ಞಾನ. ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸುವವರು ಪುಸ್ತಕಗಳು, ತಮ್ಮ ಸ್ವಂತ ಅನುಭವಗಳು ಮತ್ತು ಇತರರ ತಪ್ಪುಗಳಿಂದ ಕಲಿಯಲು ಪ್ರಯತ್ನಿಸುತ್ತಾರೆ. ಈ ಅಭ್ಯಾಸವು ಇತರರಿಗಿಂತ ವೇಗವಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದೇ ರೀತಿ ನೀವು ಕೂಡ ಕಲಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಆತ್ಮವಿಶ್ವಾಸ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಆತ್ಮವಿಶ್ವಾಸವಿಲ್ಲದೆ ಯಾರೂ ಸಹ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಜೀವನದಲ್ಲಿ ತ್ವರಿತ ಯಶಸ್ಸನ್ನು ಸಾಧಿಸುವವರು ತಮ್ಮಲ್ಲಿ ತಾವು ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ ಮತ್ತು ಶಿಸ್ತುಬದ್ಧರಾಗಿರುತ್ತಾರೆ. ಈ ಆತ್ಮವಿಶ್ವಾಸ ಮತ್ತು ಶಿಸ್ತು ಪ್ರತಿಯೊಂದು ಕಠಿಣ ಪರಿಸ್ಥಿತಿಯಲ್ಲಿಯೂ ನೀವು ಬಲವಾಗಿ ಉಳಿಯಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲ ದೇಶಗಳ ಕಮರ್ಷಿಯಲ್ ಹಡಗಿಗೂ ಹಾರ್ಮುಜ್ ಜಲಸಂಧಿ ತೆರೆದಿದೆ; ಇರಾನ್ ಮಹತ್ವದ ಘೋಷಣೆ – Kannada News | Big Announcement Iran Opens Strait Of Hormuz For All Commercial Vessels

ಟೆಹ್ರಾನ್, ಏಪ್ರಿಲ್ 17: ವಿಶ್ವದಾದ್ಯಂತದ ಎಲ್ಲಾ ರಾಷ್ಟ್ರಗಳ ದೊಡ್ಡ ತಲೆನೋವೊಂದು ಬಗೆಹರಿದಂತಾಗಿದೆ. ನಿನ್ನೆ (ಗುರುವಾರ) ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆಯಾದ ನಂತರ ಕೊನೆಗೂ ಇಂದು ಇರಾನ್ ಎಲ್ಲಾ ದೇಶಗಳ ವಾಣಿಜ್ಯ ಹಡಗುಗಳ ಸಾಗಣೆಗೆ ಹಾರ್ಮುಜ್ ಜಲಸಂಧಿಯನ್ನು (Strait Of Hormuz) ತೆರೆಯುವುದಾಗಿ ಘೋಷಿಸಿದೆ. ಇದು ವಿಶ್ವದ ಅತ್ಯಂತ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ನಿರ್ಬಂಧಗಳಲ್ಲಿ ಗಮನಾರ್ಹ ಸಡಿಲಿಕೆಯನ್ನು ಸೂಚಿಸುತ್ತದೆ.

ಈ ಬಗ್ಗೆ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್‌ ಮಾಡಿರುವ ಇರಾನ್​ ವಿದೇಶಾಂಗ ಸಚಿವ ಅರಘ್ಚಿ, “ಲೆಬನಾನ್‌ನಲ್ಲಿನ ಕದನ ವಿರಾಮಕ್ಕೆ ಅನುಗುಣವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳಿಗೆ ಮಾರ್ಗವನ್ನು ಉಳಿದ ಕದನ ವಿರಾಮದ ಅವಧಿಗೆ ಸಂಪೂರ್ಣವಾಗಿ ಮುಕ್ತವೆಂದು ಘೋಷಿಸುತ್ತಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಇಸ್ರೇಲ್, ಲೆಬನಾನ್ 10 ದಿನಗಳ ಕದನವಿರಾಮಕ್ಕೆ ಒಪ್ಪಿಕೊಂಡಿವೆ; ಟ್ರಂಪ್ ಘೋಷಣೆ

ಇರಾನ್‌ನ ಈ ಘೋಷಣೆಯ ನಂತರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಇರಾನ್​ಗೆ ಧನ್ಯವಾದ ಅರ್ಪಿಸಿದ್ದಾರೆ. “ಇರಾನ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ಪೂರ್ಣ ಮಾರ್ಗಕ್ಕೆ ಸಿದ್ಧವಾಗಿದೆ ಎಂದು ಇರಾನ್ ಘೋಷಿಸಿದೆ. ಥ್ಯಾಂಕ್ಯೂ ಇರಾನ್” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಘೋಷಿಸಿದ ನಂತರ ಇರಾನ್ ಈ ಘೋಷಣೆ ಮಾಡಿದೆ. ಟ್ರಂಪ್ ಗುರುವಾರ ಲೆಬನಾನ್ ಮತ್ತು ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ್ದರು. ಹಾಗೇ, ಎರಡು ದೇಶಗಳ ನಾಯಕರ ನಡುವೆ ಮೊದಲ ಸಭೆಯನ್ನು ಸಂಘಟಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದರು. 10ನೇ ಯುದ್ಧವನ್ನು ನಿಲ್ಲಿಸಿದ ಹೆಮ್ಮೆ ನನಗಿದೆ ಎಂದು ಟ್ರಂಪ್ ತಾವೇ ತಮ್ಮ ಬೆನ್ನು ತಟ್ಟಿಕೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 7:23 pm, Fri, 17 April 26

Source link

ದಾವಣಗೆರೆ ಬೆನ್ನಲ್ಲೇ ಬಾಗಲಕೋಟೆ ಉಪಚುನಾವಣೆಯಲ್ಲೂ ಕಾಂಗ್ರೆಸ್​​ಗೆ​ ಒಳ ಏಟು – Kannada News | thress Congress Leaders anti party activities In Bagalkot By Election

ಬಾಗಲಕೋಟೆ, (ಏಪ್ರಿಲ್ 17): ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ (Davanagere south By Election)  ಕೆಲ ಮುಸ್ಲಿಂ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಅಬ್ದುಲ್ ಜಬ್ಬಾರ್ ಅವರನ್ನ ಕಾಂಗ್ರೆಸ್​​ನಿಂದ ಅಮಾನತು ಮಾಡಲಾಗಿದೆ. ಇನ್ನು ನಸೀರ್ ಅಹಮ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಬಾಗಲಕೋಟೆ ಬೈ ಎಲೆಕ್ಷನ್ ನಲ್ಲೂ (Bagalkot By Election) ಸಹ ಕಾಂಗ್ರೆಸ್ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಕಂಡುಬಂದಿದ್ದು, ಈ ಸಂಬಂಧ ಕಾಂಗ್ರೆಸ್ ಪಕ್ಷದ ಇಬ್ಬರು ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಓರ್ವ ಹಿರಿಯ ಮುಖಂಡರನ್ನು 6 ವರ್ಷಗಳ ಕಾಲ ಉಚ್ಚಾಟನೆಗೆ ಶಿಫಾರಸ್ಸು ಮಾಡಲಾಗಿದೆ.

ಮೂವರ ಉಚ್ಛಾಟನೆಗೆ ಶಿಫಾರಸ್ಸು

ಕಮತಗಿ ಪಟ್ಟಣ ಪಂಚಾಯತ ಸದಸ್ಯರಾದ ರಮೇಶ ಜಮಖಂಡಿ, ಗುರುಲಿಂಗಪ್ಪ ಪಾಟೀಲ್ ಹಾಗೂ ಹಿರಿಯ ಮುಖಂಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉಮೇಶ ಮೇಟಿ ಪರವಾಗಿ ಮತ ಕೇಳಿವುದು ಬಿಟ್ಟು, ಬಿಜೆಪಿಗೆ ಮತ ಹಾಕುವಂತೆ ಒಳಗೊಳಗೆ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ ಅವರು ಜಿಲ್ಲಾ ಕಾಂಗ್ರೆಸ್ ಕಮಿಟಿಗೆ ಶಿಫಾರಸ್ಸು ಮಾಡಿದ್ದಾರೆ.

ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಜಮೀರ್ ಆಪ್ತೆಗೆ ಗೇಟ್‌ಪಾಸ್, ಉಪಾಧ್ಯಕ್ಷೆ ಸ್ಥಾನದಿಂದ ಉಚ್ಚಾಟನೆ!

ಇದರ ಬೆನ್ನಲ್ಲೇ ಮೂವರ ವಿರುದ್ಧ ಸೂಕ್ತ ಕ್ರಮಕ್ಕೆ ಬಾಗಲಕೋಟೆ ಜಿಲ್ಲಾ ಕಮಿಟಿ ಮುಂದಾಗಿದೆ. ಪಟ್ಟಣ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ರಮೇಶ್ ಜಮಖಂಡಿ ಮತ್ತು ಗುರುಲಿಂಗಪ್ಪ ಪಾಟೀಲ್ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಜಿಲ್ಲಾಧಿಕಾರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೇಳಿದ್ದೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ,
ಬಾಗಲಕೋಟೆ ಮತಕ್ಷೇತ್ರದ ಕಮತಗಿ ಪಟ್ಟಣ ಪಂಚಾಯತಿ ಭಾಗದಲ್ಲಿ ಮಾತ್ರ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ದೂರು ಬಂದಿದೆ. ಇಬ್ಬರು ಪಟ್ಟಣ ಪಂಚಾಯತಿ ಸದಸ್ಯರು ಸೇರಿ ಒಟ್ಟು ಮೂವರ ವಿರುದ್ಧ ದೂರು ಬಂದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ ದೂರು ನೀಡಿದ್ದಾರೆ. ಅದನ್ನ ಪರಿಶೀಲಿಸಿ ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗುವುದು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಬಿಡುವುದಿಲ್ಲ. ಇಬ್ಬರು ಪಟ್ಟಣ ಪಂಚಾಯಿತಿ ಸದಸ್ಯರು ನಮ್ಮ ಕಾಂಗ್ರೆಸ್ ಪಕ್ಷದ ಬಿ ಫಾರ್ಮ ಮೇಲೆ ಆಯ್ಕೆಯಾದವರು. ರಮೇಶ ಜಮಖಂಡಿ ಮತ್ತು ಗುರುಲಿಂಗಪ್ಪ ಪಾಟೀಲ್ ವಿರುದ್ಧ ಅಮಾನತು ಕ್ರಮ ಕೈಗೊಳ್ಳುತ್ತೇವೆ. ಇನ್ನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ ಈಗ ಪಕ್ಷದಲ್ಲಿ ಯಾವುದೇ ಪದಾಧಿಕಾರಿ ಇಲ್ಲ. ಹೀಗಾಗಿ ಉಳಿದ ಇಬ್ಬರ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಸರಘಟ್ಟದಲ್ಲಿ ಹಕ್ಕಿಜ್ವರ ದೃಢ: ಸಾರ್ವಜನಿಕರಿಗೆ ಆತಂಕ ಬೇಡ, ಜಾಗರೂಕತೆ ಅಗತ್ಯ – Kannada News | Hesaraghatta Bird Flu H5N1: Ensures Precautions Implemented, says Dinesh Gundu Rao

ಬೆಂಗಳೂರು, ಏಪ್ರಿಲ್​ 17: ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ (H5N1) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao)​​ ಮಾಹಿತಿ ನೀಡಿದ್ದಾರೆ.

ಹಕ್ಕಿಜ್ವರ ದೃಢ: ಒಂದು ವರ್ಷದವರೆಗೆ ನಿಷೇಧ 

ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಭೋಪಾಲ್‌ನ NIHSAD ಪ್ರಯೋಗಾಲಯದ ವರದಿಯ ಪ್ರಕಾರ, ಏಪ್ರಿಲ್​​ 14 ರಂದು ಮತ್ಕೂರಿನ ಕೇಂದ್ರದಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಏಪ್ರಿಲ್ 16 ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ತ್ವರಿತ ಪ್ರತಿಕ್ರಿಯೆ ತಂಡಗಳು (RRT) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಈಗಾಗಲೇ ಮುತ್ಕೂರು ಗ್ರಾಮವನ್ನು ಸೋಂಕಿತ ವಲಯ (3km ವ್ಯಾಪ್ತಿ) ಮತ್ತು ಸುತ್ತಲಿನ 10 ಕಿ.ಮೀ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶವನ್ನು ಒಂದು ವರ್ಷದವರೆಗೆ ನಿಷೇಧಿತ ಪ್ರದೇಶವೆಂದು ಗುರುತಿಸಲಾಗಿದೆ.

ಸಚಿವ ದಿನೇಶ್ ಗುಂಡೂರಾವ್ ಟ್ವೀಟ್​

ಏಪ್ರಿಲ್ 15 ರಂದು ಪಶುಪಾಲನಾ ಇಲಾಖೆಯ ನೇತೃತ್ವದಲ್ಲಿ 7,444 ಕೋಳಿಗಳು, 14 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ಮತ್ತು 2,250 ಕೆಜಿ ಕೋಳಿ ಆಹಾರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ‘ಒಸೆಲ್ಟಾಮಿವಿರ್’ ಔಷಧ ನೀಡಿ ವೈದ್ಯಕೀಯ ನಿಗಾ ವಹಿಸಲಾಗಿದೆ.

ಇದನ್ನೂ ಓದಿ: Bird Flu: ಬೆಂಗಳೂರಿಗೂ ಕಾಲಿಟ್ಟ H5N1 ಹಕ್ಕಿ ಜ್ವರ; ಪೌಲ್ಟ್ರಿ ಫಾರಂ ಬಂದ್!

ಸೋಂಕಿತ ವಲಯದ ವ್ಯಾಪ್ತಿಯಲ್ಲಿ ಬರುವ 2 ಗ್ರಾಮಗಳ 3,422 ಜನಸಂಖ್ಯೆ ಹಾಗೂ ಕಣ್ಗಾವಲು ವಲಯದ 17 ಗ್ರಾಮಗಳ 22,395 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ಆಶಾ ಕಾರ್ಯಕರ್ತೆಯರು ಮುಂದಿನ 10 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಜ್ವರದ ತಪಾಸಣೆ ನಡೆಸಲಿದ್ದಾರೆ. ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್ ಮತ್ತು ಔಷಧಗಳನ್ನು ದಾಸ್ತಾನು ಇರಿಸಲು ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಸಲಹೆ

ಈವರೆಗೆ ಯಾವುದೇ ಮನುಷ್ಯರಲ್ಲಿ ಈ ಸೋಂಕು ವರದಿಯಾಗಿಲ್ಲ, ಹಾಗಾಗಿ ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಅಗತ್ಯ. ಈ ನಿಟ್ಟಿನಲ್ಲಿ ಅನಾರೋಗ್ಯ ಪೀಡಿತ ಅಥವಾ ಸತ್ತ ಹಕ್ಕಿಗಳ ಸಂಪರ್ಕದಿಂದ ದೂರ ಇರುವುದು. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು. ಯಾವುದೇ ಅನುಮಾನಾಸ್ಪದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಅಥವಾ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಹಕ್ಕಿಜ್ವರ ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್

ಇನ್ನು ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, H​​​​5N​​1 ವೈರಸ್​​ ಹಕ್ಕಿಗಳಲ್ಲಿ ಪತ್ತೆಯಾಗಿದೆ, ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ. ಹಕ್ಕಿಜ್ವರ ಬಂದ ಪ್ರದೇಶಗಳ 10 ಕಿ.ಮೀ. ವ್ಯಾಪ್ತಿಯಲ್ಲಿ ನಿಗಾ ಇಡಲಾಗಿದೆ. ಜ್ವರ ಸೇರಿದ್ದಂತೆ ಸೋಂಕಿನ ಲಕ್ಷಣಗಳ ಬಗ್ಗೆ ಗಮನ ಹರಿಸಲಾಗಿದೆ. ಮುನ್ನೆಚ್ಚರಿಕೆಯಿಂದ ಸರ್ವೆಲೆನ್ಸ್ ಮಾಡಲಾಗುತ್ತಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾದರೆ ಕ್ರಮವಹಿಸಲಾಗುವುದು. ರೋಗದ ಲಕ್ಷಣ ಕಂಡು ಬಂದ್ರೆ ಹತ್ತಿರದ ವೈದ್ಯರನ್ನ ಸಂಪರ್ಕಿಸಬೇಕು. ಪಶುಸಂಗೋಪನಾ ಇಲಾಖೆಯ ವರದಿ ಮೇಲೆ ನಾವು ಕ್ರಮವಹಿಸುತ್ತೇವೆ. ಪ್ರಕರಣಗಳು ಕಂಡು ಬಂದ್ರೆ ಟೆಸ್ಟಿಂಗ್ ಶುರು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಿದ್ದುಪಡಿಗೆ ಅಲ್ಲ, ಮಹಿಳಾ ಮೀಸಲಾತಿಗೇ ಪ್ರತಿಪಕ್ಷದ ವಿರೋಧ: ಗೃಹ ಸಚಿವ ಅಮಿತ್​​ ಶಾ – Kannada News | Amit Shah Slams Opposition on Women’s Reservation, Delimitation and Caste Census

ನವದೆಹಲಿ, ಏಪ್ರಿಲ್​​ 17: ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಬಗ್ಗೆ ಚರ್ಚೆ ಸಂಬಂಧ ಲೋಕಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ. ಯಾರೂ ಕೂಡ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಲ್ಲ. ಎಲ್ಲರೂ ಕೂಡ ಸ್ವಾಗತ ಮಾಡಿದ್ದಾರೆ. ಆದ್ರೆ, ಇಂಡಿಯಾ ಮೈತ್ರಿಕೂಟ ಪರೋಕ್ಷವಾಗಿ ಅದನ್ನು ವಿರೋಧಿಸಿದೆ. ಅವರ ವಿರೋಧ ತಿದ್ದುಪಡಿಗಳಿಗೆ ಅಲ್ಲ. ಬದಲಾಗಿ ಮಹಿಳಾ ಮೀಸಲಾತಿಗೇ ಪ್ರತಿಪಕ್ಷ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹೀಗಾಗಿ ವಿರೋಧ ಪಕ್ಷದವರು ಮಹಿಳಾ ವಿರೋಧಿ ಮನಸ್ಥಿತಿಯವರು ಎಂದು ಅಮಿತ್​​ ಶಾ ತಿವಿದಿದ್ದಾರೆ.

ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಸಮಾನ ಪ್ರತಿನಿಧಿತ್ವಕ್ಕಾಗಿ ಕ್ಷೇತ್ರ ಮರುವಿಂಗಡಣೆ ಅಗತ್ಯ. ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸುವುದು SC/ST ಸ್ಥಾನಗಳ ಹೆಚ್ಚಳಕ್ಕೂ ವಿರೋಧಿಸಿದಂತೆಯೇ ಎಂದಿದ್ದಾರೆ. ಅಲ್ಲದೆ 2029ರ ಚುನಾವಣೆಗೆ ಮೊದಲು ಬಿಲ್​​ಗಳನ್ನಯ ಜಾರಿಗೆ ತರುವ ಉದ್ದೇಶ ಸರ್ಕಾರದ್ದಾಗಿದೆ. 20 ಲಕ್ಷಕ್ಕೂ ಹೆಚ್ಚು ಮತದಾರರಿರುವ 127 ಲೋಕಸಭಾ ಕ್ಷೇತ್ರಗಳಿವೆ. ಇಷ್ಟು ಜನರ ಸಮಸ್ಯೆಗಳನ್ನು ಒಬ್ಬ ಸಂಸದ ಹೇಗೆ ನಿಭಾಯಿಸಬಹುದು ಮತ್ತು ಅವರ ಅಗತ್ಯಗಳನ್ನು ಪೂರೈಸಬಹುದು? ಎಂದು ಅವರು ಇದೇ ವೇಳೆ ಸದನವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಪರ ಮತ ಚಲಾಯಿಸಲು ಸಂಸದರಿಗೆ ಮೋದಿ ಮನವಿ

‘ಸುಳ್ಳನ್ನು ಜೋರಾಗಿ ಹೇಳಿದರೆ ಅದು ಸತ್ಯವಾಗಲ್ಲ’

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಲಾಗಿದೆ. ಆದರೆ ಉತ್ತರದವರಿಗೆ ಇರುವಷ್ಟೇ ಅಧಿಕಾರ ಈ ಸದನದಲ್ಲಿ ದಕ್ಷಿಣದವರಿಗೂ ಇದೆ. ಸುಳ್ಳನ್ನು ಜೋರಾಗಿ ಹೇಳಿದರೆ ಅದು ಸತ್ಯವಾಗಲ್ಲ. ಸತ್ಯ ಯಾವತ್ತೂ ಸತ್ಯವೇ. ಉತ್ತರ-ದಕ್ಷಿಣ ವಿಭಜನೆ ಬೇಕಿರೋದು ವಿಪಕ್ಷದವರಿಗೆ. ಯಾವುದೇ ರಾಜ್ಯಕ್ಕೂ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಲಕ್ಷದ್ವೀಪವಾಗಲಿ ಉತ್ತರ ಪ್ರದೇಶ ಆಗಲಿ, ಪ್ರತಿಯೊಂದು ರಾಜ್ಯಕ್ಕೂ ಸಂಸತ್ತಿನಲ್ಲಿ ನ್ಯಾಯಸಮ್ಮತ ಪ್ರತಿನಿಧಿತ್ವ ದೊರೆಯಲಿದೆ. ಅಧಿಕಾರದಲ್ಲಿದ್ದಾಗಲೂ, ವಿರೋಧ ಪಕ್ಷದಲ್ಲಿದ್ದಾಗಲೂ ಕಾಂಗ್ರೆಸ್ ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸಿದೆ ಎಂದು ಅಮಿತ್​​ ಶಾ ಆರೋಪಿಸಿದ್ದಾರೆ.

543 ಸಂಸತ್ ಸ್ಥಾನಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಈ ಐದು ರಾಜ್ಯಗಳಲ್ಲಿ ಪ್ರಸ್ತುತ 129 ಸ್ಥಾನಗಳಿದ್ದು, ಇದು ಶೇ. 23.76 ಆಗಿದೆ. ಶೇ.50 ಹೆಚ್ಚಳದ ನಂತರ ಸ್ಥಾನಗಳನ್ನು ಹಂಚಿದರೆ ಇದು 129ರಿಂದ 195ಕ್ಕೆ ಏರಿಕೆಗೊಂಡು, 816 ಸ್ಥಾನಗಳಲ್ಲಿ ಶೇ. 23.87 ಆಗುತ್ತದೆ. ಹೀಗಾಗಿ ಯಾರಿಗೂ ನಷ್ಟವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

‘ಜನಗಣತಿ ವೇಳೆಯೇ ಜಾತಿಗಣತಿ’

ಕೋವಿಡ್-19 ಮಹಾಮಾರಿಯ ಕಾರಣ 2021ರಲ್ಲಿ ಜನಗಣತಿ ನಡೆಸಲು ಸಾಧ್ಯವಾಗಲಿಲ್ಲ. 2024ರಲ್ಲಿ ಮಾಡಲು ಮುಂದಾದಾಗ ಹಲವರು ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದರು. ಅಂತಿಮವಾಗಿ  ಜಾತಿ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್​​ ನಿರ್ಣಯದಂತೆ ಜನಗಣತಿ ವೇಳೆ ಜಾತಿ ಗಣತಿಯೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:59 pm, Fri, 17 April 26

Source link

GT vs KKR IPL 2026 Live Score: ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ – Kannada News | Gujarat Titans vs Kolkata Knight Riders IPL 2026 Live Cricket Score GT vs KKR Match on 17th april latest news in Kannada

ಐಪಿಎಲ್ 2026 ರ 25 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಒಂದು ಪಾಯಿಂಟ್ ಹೊಂದಿದೆ. ಇತ್ತ ಗುಜರಾತ್ ಆಡಿರುವ 4 ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಸಾಧಿಸಿದೆ.

Source link

IPL 2026: ಮೊದಲ ಬಾರಿಗೆ ಬದಲಾದ ಸಮಯದಲ್ಲಿ ಪಂದ್ಯವನ್ನಾಡಲಿದೆ ಆರ್​ಸಿಬಿ – Kannada News | IPL 2026: RCB vs DC Match Preview, Live Stream and Prediction

ಐಪಿಎಲ್ 2026 (IPL 2026) ರ ಏಪ್ರಿಲ್ 18 ರ ಶನಿವಾರದಂದು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (RCB vs DC) ಎದುರಿಸಲಿದೆ. ಈ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್​ಸಿಬಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು, ಏಕೈಕ ಪಂದ್ಯದಲ್ಲಿ ಸೋಲನುಭವಿಸಿದೆ. ಇತ್ತ ಸತತ ಗೆಲುವಿನೊಂದಿಗೆ ಲೀಗ್ ಆರಂಭಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಎರಡು ಪಂದ್ಯಗಳನ್ನು ಸೋತಿದೆ. ಹೀಗಾಗಿ ಡೆಲ್ಲಿ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದ್ದರೆ, ಆರ್​ಸಿಬಿ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಏಪ್ರಿಲ್ 18 ರ ಶನಿವಾರದಂದು ನಡೆಯಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಮೊಬೈಲ್ ಫೋನ್‌ನಲ್ಲಿ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2026 ರ 26 ನೇ ಪಂದ್ಯವನ್ನು ನೀವು ವೀಕ್ಷಿಸಬಹುದು.

IPL 2026: ಆರ್​ಸಿಬಿ ವೇಗಿ ರಸಿಕ್ ಸಲಾಂಗೆ 2 ವರ್ಷ ನಿಷೇಧ ಹೇರಿದ್ದ ಬಿಸಿಸಿಐ..!

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್, ವಿಪ್ರಜ್ ನಿಗಮ್, ಅಶುತೋಷ್ ಶರ್ಮಾ, ಕರುಣ್ ನಾಯರ್, ಎಂ. ಅಜಯ್ ಜಾದವ್ ಮಂಡಲ್, ಪೃಥ್ವಿ ಶಾ, ತ್ರಿಪುರ ವಿಜಯ್, ಅಭಿಷೇಕ್ ಪೊರೆಲ್, ಸಾಹಿಲ್ ಪರಾಖ್, ಮಾಧವ್ ತಿವಾರಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಬಾಲಿವುಡ್ ನಟ – Kannada News | Bollywood actor Vidyut Jamwal chant Gayatri Mantra at CinemaCon 2026

ಸಿನಿಮಾ (Cinema) ಮಂದಿ, ವೀಶೇಷವಾಗಿ ಬಾಲಿವುಡ್​​ನವರು (Bollywood) ಧರ್ಮ, ಸಂಸ್ಕೃತಿಯಿಂದ ದೂರ. ಅವರದ್ದು ಗ್ಲಾಮರಸ್, ಸ್ಟೈಲಿಸ್ಟ್ ಬದುಕು ಎಂದೇ ಬಹುತೇಕರು ತಿಳಿದುಕೊಂಡಿದ್ದಾರೆ. ಆದರೆ ಇದೀಗ ಬಾಲಿವುಡ್​ನ ಜನಪ್ರಿಯ ನಟರೊಬ್ಬರು ಪ್ರತಿಷ್ಠಿತ ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನಟನ ಪ್ರಯತ್ನಕ್ಕೆ ಅನೇಕರು ಭೇಷ್ ಎಂದಿದ್ದಾರೆ. ಅಂದಹಾಗೆ ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವುದು ಬಾಲಿವುಡ್​​ನ ಜನಪ್ರಿಯ ನಟ ವಿದ್ಯುತ್ ಜಾಮ್​​ವಾಲ್.

ತಮ್ಮ ಅದ್ಭುತ ಫಿಟ್​ನೆಸ್​​ ಮತ್ತು ಮಾರ್ಷಲ್ ಆರ್ಟ್ ಕಲೆಯ ಮೂಲಕ ಜನಪ್ರಿಯರಾಗಿರುವ ವಿದ್ಯುತ್ ಜಮ್ವಾಲ್ ಮೊದಲ ಬಾರಿಗೆ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಸಿನೆಮಾಕಾನ್ 2026’ ಅವರು ನಟಿಸಿರುವ ಹಾಲಿವುಡ್ ಸಿನಿಮಾ ‘ಸ್ಟ್ರೀಟ್ ಫೈಟರ್’ನ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಜಾಗತಿಕ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪ್ರತಿಧ್ವನಿಸುವಂತೆ ಮಾಡಿದ್ದಾರೆ.

ವಿಶ್ವಪ್ರಸಿದ್ಧ ವಿಡಿಯೋ ಗೇಮ್ ಸರಣಿ ‘ಸ್ಟ್ರೀಟ್ ಫೈಟರ್’ ಆಧರಿತ ಈ ಸಿನಿಮಾದಲ್ಲಿ ವಿದ್ಯುತ್ ಅವರು ಐಕಾನಿಕ್ ಯೋಗ ಮಾಸ್ಟರ್ ‘ಧಲ್ಸಿಮ್’ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಸಿನಿಮಾಕಾನ್ 2026ನಲ್ಲಿ ಸಿನಿಮಾದ ತಂಡ ಸೇರಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿತ್ತು. ಕಾರ್ಯಕ್ರಮದ ವೇಳೆ ವಿದ್ಯುತ್ ಅವರು ಇತರೆ ನಟರ ಅನುಮತಿ ಪಡೆದು ಕಣ್ಣುಮುಚ್ಚಿ ಸೂರ್ಯ ಮಂತ್ರ, ಚಂದ್ರ ಮಂತ್ರ ಮತ್ತು ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಪಠಿಸಿದರು. ವಿಶೇಷವೆಂದರೆ, ವೇದಿಕೆಯಲ್ಲಿದ್ದ ಅವರ ಸಹನಟರಾದ ನೋವಾ ಸೆಂಟಿನಿಯೊ ಸೇರಿದಂತೆ ಇತರ ಜಾಗತಿಕ ತಾರೆಗಳು ಕೂಡ ವಿದ್ಯುತ್ ಅವರಿಗೆ ಸಾಥ್ ನೀಡಿ ಮೌನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ:ನನ್ನನ್ನು ಕೆಟ್ಟದಾಗಿ ಮುಟ್ಟಿದರು: ಕನ್ನಡದಲ್ಲಿ ಅಭಿನಯಿಸಿದ ಬಾಲಿವುಡ್ ನಟಿಯಿಂದ ಆರೋಪ

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ವಿದ್ಯುತ್ ಜಾಮ್​ವಾಲ್, ‘ವಿಶ್ವದ ಅತ್ಯಂತ ಗದ್ದಲದ ಮತ್ತು ಲವಲವಿಕೆಯ ನಗರಗಳಲ್ಲಿ ಒಂದಾದ ಲಾಸ್ ವೇಗಾಸ್‌ನ ‘ಸಿನೆಮಾಕಾನ್’ ವೇದಿಕೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಗೌರವ ನನಗೆ ಸಿಕ್ಕಿದೆ. ನಾನು ಪಠಿಸಿದ ಭಾರತೀಯ ಮಂತ್ರಗಳು ಅಲ್ಲಿನ ಗದ್ದಲದ ನಡುವೆ ಒಂದು ನಿಶ್ಯಬ್ದವನ್ನು, ಶಾಂತಿ ಮತ್ತು ಮೌನದ ಅಲೆಯನ್ನು ಸೃಷ್ಟಿಸಿದವು. ಆ ಕ್ಷಣದಲ್ಲಿ ಆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಜೊತೆ ನಾನು ಪದಗಳಿಲ್ಲದ, ಭಾಷೆಯ ಗಡಿ ಮೀರಿದ ಒಂದು ಆಳವಾದ ಬಾಂಧವ್ಯವನ್ನು ಅನುಭವಿಸಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮನ್ನು ಬೆಸೆದಿತ್ತು. ಜಾಗತಿಕ ಸಾಮರಸ್ಯದ ಈ ದರ್ಶನವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ದೊಡ್ಡ ಭಾಗ್ಯ.’ ಎಂದು ವಿದ್ಯುತ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಿಟಾವೊ ಸಕುರೈ ನಿರ್ದೇಶನದ ‘ಸ್ಟ್ರೀಟ್ ಫೈಟರ್’ ಚಿತ್ರದಲ್ಲಿ ನೋವಾ ಸೆಂಟಿನಿಯೊ, ಜೇಸನ್ ಮೊಮೊವಾ, ಅಂಡ್ರ್ಯೂ ಕೋಜಿ ಮತ್ತು ಕುರ್ಟಿಸ್ ’50 ಸೆಂಟ್’ ಜಾಕ್ಸನ್ ಅಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈ ಸಾಹಸಮಯ ಸಿನಿಮಾವು ಇದೇ ವರ್ಷದ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ಮೊದಲ ಹಾಲಿವುಡ್ ಸಿನಿಮಾದ ಪಯಣವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿದ ವಿದ್ಯುತ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ – Kannada News | Govt thinks of using ethanol as commercial cooking gas, to reduce dependency on LPG

ನವದೆಹಲಿ, ಏಪ್ರಿಲ್ 17: ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ (LPG) ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಎದುರಿಸಲು ಭಾರತ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನು ಇರಿಸುತ್ತಿದೆ. ಕಮರ್ಷಿಯಲ್ ಗ್ಯಾಸ್ ಆಗಿ ಬಳಸಲು ಎಲ್​ಪಿಜಿ ಜೊತೆಗೆ ಮತ್ತೊಂದು ಪರ್ಯಾಯವಾದ ಇಂಧನದ ಬಳಕೆ ಕುರಿತು ಯೋಚಿಸಲಾಗುತ್ತಿದೆ. ವಾಣಿಜ್ಯ ಬಳಕೆಯ ಅಡುಗೆ ಇಂಧನವಾಗಿ ‘ಎಥೆನಾಲ್’ (Ethanol) ಬಳಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಭಾರತದಲ್ಲಿ ಪೆಟ್ರೋಲ್‌ಗೆ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಮಾಡಿದ ನಂತರವೂ, ಸುಮಾರು 1,000 ಕೋಟಿ ಲೀಟರ್‌ಗಳಷ್ಟು ಹೆಚ್ಚುವರಿ ಎಥೆನಾಲ್ ಲಭ್ಯವಿದೆ. ಇದನ್ನು ಅಡುಗೆ ಇಂಧನವಾಗಿ ಬಳಸಲು ಉದ್ಯಮ ಪ್ರತಿನಿಧಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪೂರೈಕೆಯ ಕೊರತೆಯಿಂದಾಗಿ ಸರ್ಕಾರವು ಎಲ್‌ಪಿಜಿಯನ್ನು ಸದ್ಯಕ್ಕೆ ಮನೆ ಬಳಕೆಗೆ ಮೊದಲ ಆದ್ಯತೆಯಾಗಿ ನೀಡುತ್ತಿದೆ. ಹೀಗಾಗಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಂತಹ ದೊಡ್ಡ ಘಟಕಗಳಲ್ಲಿನ ವಾಣಿಜ್ಯ ಅಡುಗೆ ಮನೆಗಳಲ್ಲಿ ಎಥೆನಾಲ್ ಅನ್ನು ಎಲ್​ಪಿಜಿಗೆ ಪರ್ಯಾಯವಾಗಿ ಬಳಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ

ಬೆಲೆ ಮತ್ತು ಗುಣಮಟ್ಟ

ಇಂಧನ ಮಟ್ಟದ ಎಥನಾಲ್ ಜೊತೆಗೆ ಹೈಡ್ರಸ್ ಅಥವಾ ಜಲಯುಕ್ತ ಎಥನಾಲ್ ಕೂಡ ಇದೆ. ಈ ಹೈಡ್ರಸ್ ಎಥನಾಲ್​ನಲ್ಲಿ ಶೇ. 95ರಷ್ಟು ಇಥನಾಲ್ ಹಾಗೂ ಸ್ವಲ್ಪ ನೀರು ಇರುತ್ತದೆ. ಆದರೆ, ಫುಯಲ್ ಗ್ರೇಡ್ ಎಥನಾಲ್​ಗಿಂತ ಈ ಹೈಡ್ರಸ್ ಎಥನಾಲ್ ಕಡಿಮೆ ಬೆಲೆ.

ವಾಣಿಜ್ಯ ಎಲ್‌ಪಿಜಿ ಬೆಲೆ ಕೆ.ಜಿ.ಗೆ ಸುಮಾರು 103 ರೂ. ಇದ್ದರೆ, ಹೈಡ್ರಸ್ ಎಥೆನಾಲ್ ಬೆಲೆ ಸುಮಾರು 70 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಎಲ್‌ಪಿಜಿಗೆ ಹೋಲಿಸಿದರೆ ಎಥೆನಾಲ್‌ನಲ್ಲಿ ಶಾಖದ ಸಾಮರ್ಥ್ಯ (Calorific value) ಸ್ವಲ್ಪ ಕಡಿಮೆ ಇರುತ್ತದೆ (LPG: 12,000 kcal/kg vs Ethanol: 7,100 kcal/kg). ಅಂದರೆ ಎಲ್‌ಪಿಜಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ ಎಥೆನಾಲ್ ಬೇಕಾಗಬಹುದು, ಆದರೆ ಇದು ಪರಿಸರ ಸ್ನೇಹಿಯಾಗಿದೆ. ಈ ಹೈಡ್ರಸ್ ಎಥನಾಲ್ ಅನ್ನು ಸದ್ಯ ಆಲ್ಕೋಹಾಲ್ ಸ್ಟವ್ ಅಥವಾ ಬಯೋ ಇಥನಾಲ್ ಬರ್ನರ್​ಗಳಲ್ಲಿ ಬಳಸಲಾಗುತ್ತಿದೆ. ಇದರ ಪ್ರಮುಖ ಕೊರತೆ ಎಂದರೆ ಕಡಿಮೆ ಶಾಖ ಬಿಡುಗಡೆ ಮಾಡುವುದು. ಅಂದರೆ, ಅಡುಗೆ ಮಾಡಲು ಎಲ್​ಪಿಜಿಗಿಂತ ಹೆಚ್ಚು ಹೈಡ್ರಸ್ ಎಥನಾಲ್ ಅನ್ನು ವ್ಯಯಿಸಬೇಕಾಗುತ್ತದೆ.

ಇದನ್ನೂ ಓದಿ: ಜಾಗತಿಕ ರಾಜಕೀಯದಲ್ಲಿ ಬದಲಾದ ಲೆಕ್ಕಾಚಾರ, ಪಾಕಿಸ್ತಾನ ಭೇಟಿಗೆ ಇರಾನ್ ಒಪ್ಪಂದದ ಷರತ್ತು ವಿಧಿಸಿದ ಟ್ರಂಪ್

ಎಥೆನಾಲ್ ಮೂಲ

ಭಾರತದಲ್ಲಿ ಎಥೆನಾಲ್ ಅನ್ನು ಮುಖ್ಯವಾಗಿ ಕಬ್ಬು, ಮೆಕ್ಕೆಜೋಳ ಮತ್ತು ನುಚ್ಚಕ್ಕಿಯಿಂದ (Broken Rice) ತಯಾರಿಸಲಾಗುತ್ತದೆ. ಇದನ್ನು ಅಡುಗೆಗೆ ಬಳಸುವುದರಿಂದ ದೇಶದ ರೈತರಿಗೂ ಹೆಚ್ಚಿನ ಲಾಭ ಸಿಗುವ ನಿರೀಕ್ಷೆಯಿದೆ.

ಮುಂಬರುವ ವಾರಗಳಲ್ಲಿ ಈ ಕುರಿತು ‘ಶ್ವೇತಪತ್ರ’ (White Paper) ವನ್ನು ಅಂತರ-ಸಚಿವಾಲಯ ಸಮಿತಿಗೆ ಸಲ್ಲಿಸಲಾಗುವುದು. ತಾಂತ್ರಿಕ ಸುರಕ್ಷತೆ ಮತ್ತು ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version