ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಮೈಸೂರು, ಮಾರ್ಚ್​ 28: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಪೊಲೀಸರು 12 ಕೋಟಿ ರೂಪಾಯಿ ಮೌಲ್ಯದ ಡ್ರಗ್ (Drugs) ದಾಸ್ತಾನು ಪತ್ತೆ ಮಾಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಆಸ್ಪತ್ರೆ ಬಳಿಯೇ ನಡೀತಿತ್ತು ಚಟುವಟಿಕೆ

ಮೈಸೂರು ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಆರೋಪಿಗಳಾಗಿದ್ದು, ಇವರ ಜಮೀನಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕೆ ಮತ್ತು ಸಂಗ್ರಹಣೆ ನಡೆಸಲಾಗುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದಾಸನಪುರ ಗ್ರಾಮದಲ್ಲಿ ಇರುವ ಪಕ್ಕದ ಆಸ್ಪತ್ರೆ ಕಾವಲ್‌ನಲ್ಲಿ ಇದ್ದ ಒಂಟಿ ಮನೆಯಲ್ಲಿ ಈ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹುಣಸೂರು ಟೌನ್ ರೆಹಮತ್ ಮೊಹಲ್ಲಾ ನಿವಾಸಿಯ ಶೆಡ್‌ನಲ್ಲಿ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ.

ಪೊಲೀಸರು ಜಪ್ತು ಮಾಡಿದ ವಸ್ತುಗಳು

ಪೊಲೀಸರು 7.35 ಕೆ.ಜಿ ತೂಕದ ಮೆಫೆಡ್ರೋನ್ ಮತ್ತು 41 ಕೆ.ಜಿ ತೂಕದ ಡ್ರಗ್ಸ್ ಪ್ರಿಕರ್ಸರ್ ವಸ್ತುಗಳನ್ನು ವಶಪಡಸಿಕೊಂಡಿದ್ದು, ಒಟ್ಟು 48 ಕೆ.ಜಿ ತೂಕದ ಡ್ರಗ್ಸ್ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಈ ರೀತಿಯಾಗಿ ಸಿಂಥೆಟಿಕ್ ಡ್ರಗ್ಸ್ ತಯಾರಣೆ ಮತ್ತು ವಿತರಣೆ ಮಾಡುತ್ತಿದ್ದಂತೆ ಪೊಲೀಸರು ವರದಿ ನೀಡಿದ್ದಾರೆ. ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Revenue Dept Jobs 2026: ಕರ್ನಾಟಕ ಕಂದಾಯ ಇಲಾಖೆಯಲ್ಲಿ ನೇಮಕಾತಿ; ಉಪ ತಹಶೀಲ್ದಾರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕಂದಾಯ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಉಪ ತಹಶೀಲ್ದಾರ್ ಮತ್ತು ಕಾನೂನು ಬೆರಳಚ್ಚುಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ ಮತ್ತು ಸಂಬಳ:

ಕಂದಾಯ ಇಲಾಖೆಯಲ್ಲಿ ಒಟ್ಟು 3 ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಮಾಸಿಕ ರೂ. 22,000 ರಿಂದ 55,000/- ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ವಿಶೇಷವಾಗಿ ಐಎಂಎ (IMA) ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳ ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿಯಲ್ಲಿ ಕೆಲಸ ಮಾಡಲು ಈ ನೇಮಕಾತಿ ನಡೆಯುತ್ತಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ LLB, BE/B.Tech (CSE/IS), ಅಥವಾ PG ಡಿಪ್ಲೊಮಾ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಅನುಭವ ಮತ್ತು ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಇನ್ನು ವಯೋಮಿತಿಯ ವಿಷಯಕ್ಕೆ ಬಂದರೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷಗಳು ಮೀರಿರಬಾರದು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗಳಿಗೆ ಆಸಕ್ತರು ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಅಗತ್ಯವಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು (ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆಗಳು, ಅನುಭವದ ಪತ್ರ ಇತ್ಯಾದಿ) ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 04 ರೊಳಗೆ “ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ (ಐಎಂಎ ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳು)” ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ; 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಮುನ್ನ ಗಮನಿಸಿ:

  • ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ಇತ್ತೀಚಿನ ಫೋಟೋ, ರೆಸ್ಯೂಮ್ ಮತ್ತು ಸರಿಯಾದ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಹೊಂದಿರಲಿ.
  • ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ನಿಗದಿತ ವಿಳಾಸಕ್ಕೆ ಕಳುಹಿಸಿ.
  • ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಗಾಗಿ ಅಭ್ಯರ್ಥಿಗಳು ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ಭಾರಿ ಅನಾಹುತ

ನವದೆಹಲಿ, ಮಾರ್ಚ್​ 28: ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ದೆಹಲಿಗೆ (Delhi) ತೆರಳುತ್ತಿದ್ದ ಇಂಡಿಗೋ ವಿಮಾನವೊಂದು (IndiGo Flight) ಎಂಜಿಜಿನ್ ವೈಫಲ್ಯದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ 161 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಘಟನೆಯ ವಿವರ

ಇಂಡಿಗೋ ಸಂಸ್ಥೆಯ ಬೋಯಿಂಗ್ 737 (ವಿಮಾನ ಸಂಖ್ಯೆ 6E 579) ಶನಿವಾರ ಬೆಳಗ್ಗೆ ವಿಶಾಖಪಟ್ಟಣಂನಿಂದ ದೆಹಲಿಗೆ ಪ್ರಯಾಣ ಬೆಳೆಸಿತ್ತು. ವಿಮಾನವು ದೆಹಲಿ ವಿಮಾನ ನಿಲ್ದಾಣವನ್ನು ತಲುಪುವ ಕೆಲವೇ ನಿಮಿಷಗಳ ಮೊದಲು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್‌ಗಳು ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಅನುಮತಿ ಕೋರಿದ್ದಾರೆ.

ಬೆಳಗ್ಗೆ 10:39ಕ್ಕೆ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಘೋಷಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳು ಮತ್ತು ತುರ್ತು ಚಿಕಿತ್ಸಾ ತಂಡಗಳು ರನ್‌ವೇ ಬಳಿ ಸನ್ನದ್ಧವಾಗಿದ್ದವು. ಅದೃಷ್ಟವಶಾತ್, ಬೆಳಗ್ಗೆ 10:54ಕ್ಕೆ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.

ಟರ್ಕಿ ಸಂಸ್ಥೆಯ ವಿಮಾನ

ಈ ವಿಮಾನವನ್ನು ಇಂಡಿಗೋ ಸಂಸ್ಥೆಯು ಟರ್ಕಿಯ ‘ಕೊರೆಂಡನ್ ಏರ್ಲೈನ್ಸ್’ನಿಂದ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. ಸದ್ಯ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ಇಂಡಿಗೋ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs SRH: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಒಂದೆಡೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು… ಮತ್ತೊಂದೆಡೆ ಬಲಿಷ್ಠ ದಾಂಡಿಗರ ಸನ್​ರೈಸರ್ಸ್ ಹೈದರಾಬಾದ್… ಎರಡು ಮದಗಜಗಳ ಕಾಳಗದೊಂದಿಗೆ ಐಪಿಎಲ್ ಸೀಸನ್​-19 ಗೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮಾ.28) ನಡೆಯಲಿರುವ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇಂತಹದೊಂದು ನಿರೀಕ್ಷೆಗೆ ಕಾರಣ ಉಭಯ ತಂಡಗಳಲ್ಲಿರುವ ಸ್ಟಾರ್ ಆಟಗಾರರ ದಂಡು.

ಏಕೆಂದರೆ ಆರ್​ಸಿಬಿ ತಂಡದಲ್ಲಿ ಸ್ಟಾರ್ ಬ್ಯಾಟರ್​ಗಳಿದ್ದರೆ, ಎಸ್​ಆರ್​ಹೆಚ್ ತಂಡದಲ್ಲಿ ಹೊಡಿಬಡಿ ದಾಂಡಿಗರ ದಂಡೇ ಕಾಣಿಸಿಕೊಂಡಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರನ್ ಮಳೆಯನ್ನು ನಿರೀಕ್ಷಿಸಬಹುದು.

  • RCB ಬ್ಯಾಟಿಂಗ್ ಬಲ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ಟಿಮ್ ಡೇವಿಡ್, ರೊಮಾರಿಯೊ ಶೆರ್ಫಡ್, ಜಿತೇಶ್ ಶರ್ಮಾ
  • SRH ಬ್ಯಾಟಿಂಗ್ ಬಲ: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಲಿವಿಂಗ್​ಸ್ಟೋನ್

ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಈ ಆರಂಭವನ್ನು ಬೃಹತ್ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ರಜತ್ ಪಾಟಿದಾರ್, ಟಿಮ್ ಡೇವಿಡ್, ರೊಮಾರಿಯೊ ಶೆರ್ಫಡ್ ಹಾಗೂ ಜಿತೇಶ್ ಶರ್ಮಾ ಯಶಸ್ವಿಯಾಗಿದ್ದರು.

ಇತ್ತ ಎಸ್​ಆರ್​ಹೆಚ್​ ತಂಡದ ಶಕ್ತಿ ಬಿರುಸಿನ ಬ್ಯಾಟಿಂಗ್. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಹೊಡಿಬಡಿ ಬ್ಯಾಟಿಂಗ್​ಗೆ ಹೆಸರುವಾಸಿ. ಇದೀಗ ಲಿಯಾಮ್ ಲಿವಿಂಗ್​ಸ್ಟೋನ್ ಕೂಡ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದು.

ದುರ್ಬಲ ಬೌಲಿಂಗ್ ಪಡೆ:

ಉಭಯ ತಂಡಗಳಲ್ಲಿ ಸ್ಟಾರ್ ಬ್ಯಾಟರ್​ಗಳಿದ್ದರೂ ಬೌಲಿಂಗ್ ವಿಭಾಗವು ದುರ್ಬಲವಾಗಿದೆ. ಅಂದರೆ ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ, ಅತ್ಯುತ್ತಮ ಎನಿಸಿಕೊಳ್ಳುವಂತಹ ಮತ್ತೋರ್ವ ವೇಗಿ ಇಲ್ಲ. ಇನ್ನು ಸ್ಪಿನ್ನರ್ ಆಗಿ ಕೃನಾಲ್ ಪಾಂಡ್ಯ ಅವರನ್ನೇ ಆರ್​ಸಿಬಿ ನೆಚ್ಚಿಕೊಂಡಿದೆ.

ಅತ್ತ ಸನ್​ರೈಸರ್ಸ್ ಹೈದರಾಬಾದ್ ಕಥೆ ಕೂಡ ಬೇರೆಯಲ್ಲ. ಎಸ್​ಆರ್​ಹೆಚ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಳ್ಳುತ್ತಿರುವುದು ಮಾಜಿ ಆರ್​ಸಿಬಿ ಬೌಲರ್ ಹರ್ಷಲ್ ಪಟೇಲ್. ಇನ್ನು ಸ್ಪಿನ್ನರ್ ಜವಾಬ್ದಾರಿ ಲಿಯಾಮ್ ಲಿವಿಂಗ್​ಸ್ಟೋನ್ ಹೆಗಲೇರಲಿದೆ.

ಇಬ್ಬರು ಪ್ರಮುಖರು ಅಲಭ್ಯ:

ಆರ್​ಸಿಬಿ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್​ವುಡ್ ಫಿಟ್​ನೆಸ್ ಕಾರಣದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಇದೇ ಕಾರಣದಿಂದಾಗಿ ಆರ್​ಸಿಬಿ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿದೆ ಎನ್ನಬಹುದು.

ಅತ್ತ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಏಕೈಕ ಅನುಭವಿ ವೇಗಿ ಪ್ಯಾಟ್ ಕಮಿನ್ಸ್ ಕೂಡ ಫಿಟ್​ನೆಸ್ ಸಮಸ್ಯೆ ಕಾರಣ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ತಂಡಕ್ಕಿಂತ ಎಸ್​ಆರ್​ಹೆಚ್ ತಂಡದ ಬೌಲಿಂಗ್ ವಿಭಾಗ ಅತ್ಯಂತ ದುರ್ಬಲವಾಗಿದೆ ಎನ್ನಬಹುದು.

ಮುಖಾಮುಖಿ ದಾಖಲೆ:

ಆರ್​ಸಿಬಿ ಮತ್ತು ಎಸ್​ಆರ್​ಹೆಚ್ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸನ್​ರೈಸರ್ಸ್ ಹೈದರಾಬಾದ್ ತಂಡವು 13 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ ಗೆದ್ದಿರುವುದು 11 ಪಂದ್ಯಗಳಲ್ಲಿ ಮಾತ್ರ. ಈ ಅಂಕ ಅಂಶಗಳನ್ನು ಗಮನಿಸಿದರೆ ಆರ್​ಸಿಬಿಗಿಂತ ಸನ್​ರೈಸರ್ಸ್ ಹೈದರಾಬಾದ್ ತಂಡವು ಮೇಲುಗೈ ಹೊಂದಿದೆ.

ಇದಾಗ್ಯೂ ಕಳೆದ 5 ಪಂದ್ಯಗಳ ಮುಖಾಮುಖಿಯಲ್ಲಿ ಆರ್​ಸಿಬಿ 3 ಬಾರಿ ಎಸ್​ಆರ್​ಹೆಚ್ ತಂಡಕ್ಕೆ ಸೋಲುಣಿಸಿದೆ. ಹೀಗಾಗಿ ಪ್ರಸ್ತುತ ಆರ್​ಸಿಬಿ ತಂಡ ಸನ್​ರೈಸರ್ಸ್ ತಂಡಕ್ಕಿಂತ ಬಲಿಷ್ಠವಾಗಿದೆ ಎನ್ನಬಹುದು.

ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಆರ್​ಸಿಬಿ ತಂಡವು 5 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಅಂದರೆ ತವರು ಮೈದಾನದಲ್ಲಿ ಎಸ್​ಆರ್​ಹೆಚ್ ವಿರುದ್ಧ ಆರ್​ಸಿಬಿ ಉತ್ತಮ ದಾಖಲೆ ಹೊಂದಿದೆ.

ಹೀಗಾಗಿ ಇಂದಿನ ಪಂದ್ಯದಲ್ಲೂ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್ (ಹಂಗಾಮಿ ನಾಯಕ), ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸ್​, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ, ಶಿವಾಂಗ್ ಕುಮಾರ್, ಸಲೀಲ್ ಅರೋರ, ಸಾಕಿಬ್ ಹುಸೈನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್​ಸ್ಟೋನ್ಸ್, ಶಿವಂ ಮಾವಿ, ಡೇವಿಡ್ ಪೇನ್.

ಇದನ್ನೂ ಓದಿ: PSLನ ಬಿಗ್ ಆಫರ್ ತ್ಯಜಿಸಿ IPLಗೆ ಬಂದ ಆಸ್ಟ್ರೇಲಿಯನ್ ವೇಗಿ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

 

Source link

ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!

ತುಮಕೂರು, ಮಾರ್ಚ್​ 28: ಶಿರಾ ತಾಲ್ಲೂಕಿನ ಸಾಕ್ಷಿಹಳ್ಳಿಯಲ್ಲಿ ಕುಂಬಾರಳ್ಳಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಅಕ್ರಮ ಮದ್ಯ ಮಾರಾಟಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಚಿಲ್ಲರೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ MSIL ಮದ್ಯದ ಅಂಗಡಿಯನ್ನು ಮಹಿಳೆಯರು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘದ ಮಹಿಳೆಯರು, ಅಕ್ರಮ ಮಾರಾಟ ನಿಲ್ಲಿಸದಿದ್ದರೆ ಅಂಗಡಿಗೆ ಬೀಗ ಹಾಕುವ ಮತ್ತು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!

ಬಾಗಲಕೋಟೆ, ಮಾರ್ಚ್​ 28: ಬಾಗಲಕೋಟೆ ಉಪಚುನಾವಣೆ (By election) ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರಗಳನ್ನು ಅನುಸರಿಸುತ್ತಿವೆ. ಈ ಸಂದರ್ಭದಲ್ಲಿ, ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ನಾಯಕರೆಂದು ಗುರುತಿಸಿಕೊಂಡಿರುವ ವಕ್ಫ್ ಸಚಿವ ಜಮೀರ್ ಅಹ್ಮದ್ ಅವರಿಗೆ ಬಾಗಲಕೋಟೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇಲ್ಲಿನ ಅಂಜುಮನ್ ಸಮಿತಿಯ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಜಮೀರ್ ಅಹ್ಮದ್ ಅವರು ಪ್ರಚಾರಕ್ಕೆ ಬರುವುದನ್ನು ವಿರೋಧಿಸಿ ‘ಗೋ ಬ್ಯಾಕ್ ಜಮೀರ್​ ಅಹ್ಮದ್’ ಅಭಿಯಾನ ನಡೆಸಿದ್ದಾರೆ.

ಈ ವಿರೋಧಕ್ಕೆ ಪ್ರಮುಖ ಕಾರಣ, ಅಂಜುಮನ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಬೆಳವಣಿಗೆಗಳು. ಹಿಂದೆ ಇದ್ದ ಅಧ್ಯಕ್ಷರನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಬದಲಾಯಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಅದರ ಅನುಮೋದನೆಗಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಕಳುಹಿಸಲಾಗಿತ್ತು. ಆದರೆ, ವಕ್ಫ್ ಸಚಿವರ ಇಲಾಖೆಯಿಂದ ಈ ಕೆಲಸಕ್ಕೆ ಒಂಬತ್ತು ತಿಂಗಳು ವಿಳಂಬವಾಗಿದೆ ಎಂದು ಆರೋಪಿಸಲಾಗಿದೆ. ಬಡ ಸಂಸ್ಥೆಯಾದ ಅಂಜುಮನ್‌ಗೆ ಅನ್ಯಾಯ ಮಾಡಲಾಗಿದೆ ಎಂಬುದು ಮುಸ್ಲಿಂ ಮುಖಂಡರ ಆರೋಪವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ಬಾಳೆಹಣ್ಣನ್ನು ಗುರುತಿಸಬಲ್ಲಿರಾ

ಮನಸ್ಸು ಹಾಗೂ ಮೈಂಡ್ ಎರಡನ್ನು ರಿಲ್ಯಾಕ್ಸ್ ಆಗಿಸಲು ಕೆಲವರು ತಮ್ಮ ಇಷ್ಟದ ಹವ್ಯಾಸದತ್ತ ಮುಖ ಮಾಡುತ್ತಾರೆ. ಆದರೆ, ಈ ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳು ನಿಮ್ಮ ಮೈಂಡ್ ರಿಲ್ಯಾಕ್ಸ್ ಆಗಿಸುತ್ತದೆ. ಅಷ್ಟೇ ಅಲ್ಲದೇ, ಈ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಬಹುದು. ಇದೀಗ ಮೆದುಳಿನ ಸಾಮರ್ಥ್ಯಕ್ಕೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಬಾಳೆ ಹಣ್ಣು ಎಲ್ಲಿದೆ ಎಂದು ಕಂಡು ಹಿಡಿಯುವುದೇ ಇಲ್ಲಿರುವ ಸವಾಲು. 9 ಸೆಕೆಂಡುಗಳೊಳಗೆ ಈ ಗುಪ್ತ ವಸ್ತುವನ್ನು ಕಂಡು ಹಿಡಿಯಬೇಕು.

ಈ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ರಸ್ತೆ ದುರಸ್ತಿ ಕೆಲಸ ಆಗುತ್ತಿರುವುದನ್ನು ಕಾಣಬಹುದು. ಹೀಗಾಗಿ ರಸ್ತೆ ತುಂಬಾ ಜೆಸಿಬಿಗಳು ಮತ್ತು ಲೋಡರ್‌ಗಳಿವೆ. ಇದೆಲ್ಲದರ ನಡುವೆ ಬಾಳೆಹಣ್ಣು ಕೂಡ ಇದೆ. ನೀವು ಕಣ್ಣು ಬಿಟ್ಟು ಈ ಚಿತ್ರ ನೋಡಿದ್ರೆ ಬಾಳೆ ಹಣ್ಣು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ.

ಇದನ್ನೂ ಓದಿ: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ಕರಡಿಯನ್ನು10 ಸೆಕೆಂಡುಗಳಲ್ಲಿ ಗುರುತಿಸಿ

ಬಾಳೆಹಣ್ಣನ್ನು ಗುರುತಿಸಲು ಸಾಧ್ಯವಾಯಿತೇ?

ಕಣ್ಣು ಅಗಲಿಸಿ ನೋಡಿದರೂ ಬಾಳೆಹಣ್ಣು ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಈ ಗುಪ್ತ ವಸ್ತುವನ್ನು ಕಂಡು ಹಿಡಿಯಲು ಸಾಧ್ಯ. ನಿಮಗೂ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಬಾಳೆ ಹಣ್ಣು ಎಲ್ಲಿದೆ ಎಂದು ಗುರುತಿಸಿದ್ದೇವೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ದೆಹಲಿ ಪೊಲೀಸರ ಕಾರ್ಯಾಚರಣೆ: ಶಾಲೆಗಳು, ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್

ಮೈಸೂರು, ಮಾರ್ಚ್ 28: ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಕಳೆದ ಕೆಲವು ದಿನಗಳಿಂದ ಬೆದರಿಕೆ (Bomb Threat) ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ (Delhi Police) ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ. ಮೈಸೂರು (Mysuru) ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಎಂಬುದು ತಿಳಿದುಬಂದಿದೆ.

ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲೇ ಇದ್ದ ಆರೋಪಿ!

ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಆರೋಪಿಯು ಅಡಗಿ ಕುಳಿತಿದ್ದ. ಈ ಕುರಿತು ಮಾಹಿತಿ ಪಡೆದ ದೆಹಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಸ್ಥಳೀಯ ವಿವಿ ಪುರಂ ಪೊಲೀಸ್ ಠಾಣೆಯ ಸಹಕಾರದಿಂದ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು.

ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಾಗುತ್ತಿದ್ದು, ಈ ಹಿಂದೆ ಕಳುಹಿಸಿದ ಎಲ್ಲಾ ಬೆದರಿಕೆ ಸಂದೇಶಗಳ ಹಿನ್ನಲೆ ಹಾಗೂ ಉದ್ದೇಶಗಳ ಬಗ್ಗೆ ವಿಚಾರಣೆ ಮುಂದುವರಿಯಲಿದೆ.

ಈ ಹಿಂದೆ ಮೈಸೂರಿನಲ್ಲಿ ದೊಡ್ಡ ಡ್ರಗ್ಸ್ ತಯಾರಿಕಾ ಮತ್ತು ಪೂರೈಕೆ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಬಯಲಿಗೆಳೆದಿದ್ದರು. ಅದಾದ ನಂತರವೂ ಮೈಸೂರಿನಲ್ಲಿ ಅನೇಕ ಡ್ರಗ್ಸ್ ಪ್ರಕರಣಗಳು ಬಯಲಿಗೆ ಬಂದಿವೆ. ಇದೀಗ ಬಾಂಬ್ ಬೆದರಿಕೆ ಸಂದೇಶಗಳ ಆರೋಪಿ ಸಹ ಮೈಸೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಅಡಗಿ ಇದ್ದುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: ವಿಧಾನಸಭಾ ಸ್ಪೀಕರ್​ಗೆ ಬಾಂಬ್ ಬೆದರಿಕೆ, ಮೆಟ್ರೋ ನಿಲ್ದಾಣವನ್ನೂ ಸ್ಫೋಟಿಸುವುದಾಗಿ ಬಂತು ಇ-ಮೇಲ್

ಒಟ್ಟಿನಲ್ಲಿ, ಮೈಸೂರಿನಲ್ಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಆತಂಕ ಸೃಷ್ಟಿಸಿದ್ದ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ದೆಹಲಿ ಪೊಲೀಸರು ತೆರೆ ಎಳೆದಿದ್ದು, ಆರೋಪಿಯ ಬಂಧನದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾ ದಿಢೀರ್ ದಾಳಿ! ಐಸಿಯು ಅವ್ಯವಸ್ಥೆ ಬಯಲು

ಬೆಂಗಳೂರು, ಮಾರ್ಚ್​ 28: ಕರ್ನಾಟಕ ಲೋಕಾಯುಕ್ತ ತಂಡದ ಏಕಾಏಕಿ ಭೇಟಿ ವೇಳೆ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ (ವಿಕ್ಟೋರಿಯಾ ಆಸ್ಪತ್ರೆ) ಟ್ರಾಮಾ ಕೇರ್ ಸೆಂಟರ್‌ನಲ್ಲಿ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಐಸಿಯುನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದ್ದು, ಖಾಲಿ ಹಾಸಿಗೆಗಳಿದ್ದರೂ ತುರ್ತು ರೋಗಿಗೆ ದಾಖಲಾತಿ ನಿರಾಕರಿಸಿರುವುದು ಗಮನಕ್ಕೆ ಬಂದಿದೆ.

ಹಾಸಿಗೆಗಳಿದ್ದರೂ ರೋಗಿಗಳಿಗೆ ದಾಖಲಾತಿ ಇಲ್ಲ!

ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ. ಪ್ರಕರಣದ ವರದಿಯನ್ನು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಲಾಗಿದ್ದು, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.

ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಒತ್ತಾಯ

ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಅವರು ವೈದ್ಯರನ್ನು ಸಂಪರ್ಕಿಸಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲು ಒತ್ತಾಯಿಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಕೆಲವು ಸಿಬ್ಬಂದಿ ಖಾಸಗಿ ಆಂಬ್ಯುಲೆನ್ಸ್ ಬಳಸುವಂತೆ ರೋಗಿಗಳ ಬಂಧುಗಳ ಮೇಲೆ ಒತ್ತಡ ಹೇರಿರುವುದು ತಿಳಿದುಬಂದಿದೆ.

ಈ ಹಿನ್ನೆಲೆ, ಖಾಸಗಿ ಆಂಬ್ಯುಲೆನ್ಸ್ ಸೇವೆಯನ್ನು ನಿಯಂತ್ರಿಸಲು ಪ್ರೀಪೇಯ್ಡ್ ವ್ಯವಸ್ಥೆ ಜಾರಿಗೆ ತರಬೇಕೆಂದು ಲೋಕಾಯುಕ್ತ ಸೂಚಿಸಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ವಿವರಗಳನ್ನು ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಅಕ್ರಮ ಚಟುವಟಿಕೆಗಳಿಗೆ ಬ್ರೇಕ್

ಲೋಕಾಯುಕ್ತ ಮುಂದೆ ಟ್ರಾಮಾ ಕೇರ್ ಸೆಂಟರ್‌ನ ಸಮಸ್ಯೆಗಳ ಕುರಿತು ಡಾ. ಅಸೀಮಾ ಅವರು ಮಾಹಿತಿ ನೀಡಿದ್ದು, ಹಾಸಿಗೆಗಳ ಕೊರತೆಯಿಂದ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಧ್ಯವರ್ತಿಗಳು ರೋಗಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು. ಅವರಿಂದ ಉಂಟಾಗುವ ಅಡಚಣೆಗಳನ್ನು ನಿಯಂತ್ರಣಕ್ಕೆ ಬಾರದ ಮಟ್ಟಕ್ಕೆ ತಲುಪಿದ್ದು, ಕೆಲವೊಮ್ಮೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಮೇಲೆ ದಾಳಿ ನಡೆದ ಘಟನೆಗಳೂ ನಡೆದಿವೆ ಎಂದು ತಿಳಿಸಿದರು.

ಇದನ್ನೂ ಓದಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹುಟ್ಟಿದ್ದೇ ಒಂದು ಭೀಕರ ಅಗ್ನಿದುರಂತದಿಂದ! ಇದರ ಹಿಂದಿರುವ ಅರಮನೆಯ ಆ ರಹಸ್ಯ ನಿಮಗೆ ಗೊತ್ತೇ?

ಆದರೆ ಈ ಬಗ್ಗೆ ಯಾವುದೇ ನಿರ್ದಿಷ್ಟ ದೂರು ದಾಖಲಾಗಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ದಕ್ಷಿಣ ವಿಭಾಗದ ಡಿಸಿಪಿ ಲೋಕಾಯುಕ್ತರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಬಲಪಡಿಸಿ, ಅಕ್ರಮ ಚಟುವಟಿಕೆ ನಡೆಸುವವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

PSLನ ಬಿಗ್ ಆಫರ್ ತ್ಯಜಿಸಿ IPLಗೆ ಬಂದ ಆಸ್ಟ್ರೇಲಿಯನ್ ವೇಗಿ..!

Source link

Exit mobile version