ಮಡಿಕೇರಿ, ಮಾರ್ಚ್ 26: ಮಡಿಕೇರಿ ನಗರದ ಹೊರವಲಯದಲ್ಲಿ ಹುಲಿ ಓಡಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಇಬ್ಬನಿವಳವಾಡಿ, ಸಿಂಕೋನ ಹಾಗೂ ಕಗ್ಗೋಡ್ಲು ಸುತ್ತಮುತ್ತ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆ, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಜನರಲ್ಲಿ ಆತಂಕ ಉಂಟಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಗಾವಹಿಸಲಾಗಿದೆ. ಕಾರ್ಯಾಚರಣೆಗೆ ಮೂರು ಸಾಕಾನೆಗಳನ್ನು ಬಳಸಲಾಗುತ್ತಿದ್ದು, ದಟ್ಟ ಅರಣ್ಯ ಪ್ರದೇಶಗಳಲ್ಲಿ ಹುಲಿಯ ಚಲನವಲನ ಪತ್ತೆ ಮಾಡಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಥರ್ಮಲ್ ಡ್ರೋನ್ ಮೂಲಕವೂ ಹುಲಿಯ ಹಾದಿ ಮತ್ತು ಚಲನವಲನಗಳನ್ನು ನಿಗಾವಹಿಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುದ್ದು ಮಕ್ಕಳ (little kids) ಆಟ ತುಂಟಾಟಗಳನ್ನು ನೋಡುವುದೇ ಚಂದ. ಹೆತ್ತವರು ಕೂಡ ಮಕ್ಕಳ ಆಟ ಪಾಠಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಾರೆ. ಈ ಪುಟ್ಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಮುದ್ದಾದ ಕ್ಲಿಪಿಂಗ್ ವೈರಲ್ ಆಗಿದ್ದು, ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳು ಕೈ ಜೋಡಿಸಿಕೊಂಡು ನಿಂತುಕೊಂಡರೆ, ಪುಟಾಣಿಯೊಂದು ಲಾಲಿಪಾಪ್ ತಿನ್ನೋದ್ರಲ್ಲಿ ಬ್ಯುಸಿಯಾಗಿದೆ. ಈ ಪುಟ್ಟ ಬಾಲಕನ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
Shubham_kr_rana ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳೆಲ್ಲಾ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಮಕ್ಕಳೆಲ್ಲಾ ಕೈ ಜೋಡಿಸಿ ನಿಂತು ಪ್ರಾರ್ಥನೆಗೆ ಸಜ್ಜಾದರೆ, ಆದರೆ ಪುಟಾಣಿಯೊಂದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಲಾಲಿ ಪಾಪ್ ಸವಿಯೋದ್ರಲ್ಲಿಯೇ ಬುಸ್ಯಿಯಾಗಿರುವುದನ್ನು ಕಾಣಬಹುದು. ಲಾಲಿಪಾಪ್ ತಿಂದ ಬಳಿಕ ಕಡ್ಡಿಯನ್ನು ಜೇಬಿಗೆ ಹಾಕಿ ಕಣ್ಣು ಮುಚ್ಚಿ ಕೈ ಜೋಡಿಸಿ ನಿಂತುಕೊಂಡಿದೆ. ಅಲ್ಲೇ ಇದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಡಿಯೋ 1.1 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕದ್ದು ತಿನ್ನುವ ಮಜಾನೇ ಬೇರೆ ಎಂದರೆ, ಮತ್ತೊಬ್ಬರು, ಕ್ಯಾಮೆರಾ ಮ್ಯಾನ್ ಪ್ರೈವಸಿ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮುಗ್ಧತೆ ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.26: ನಮ್ಮ ಹಿಂದೂ ಸನಾತನ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಪರಂಪರೆಗಳು ಅನೇಕ ವಿಧಿ ವಿಧಾನಗಳನ್ನು ಒಳಗೊಂಡಿವೆ. ಇವುಗಳ ಹಿಂದಿರುವ ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಗಳನ್ನು ಆಳವಾಗಿ ಅರ್ಥೈಸಿಕೊಂಡಾಗ, ಆ ಆಚರಣೆಗಳಿಗೆ ಇನ್ನಷ್ಟು ಮಹತ್ವ ಮತ್ತು ಗೌರವ ದೊರೆಯುತ್ತದೆ. ಅಂತಹ ವಿಶಿಷ್ಟ ವಿಧಿವಿಧಾನಗಳಲ್ಲಿ ವಿವಾಹದ ಸಮಯದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲವನ್ನು ಇಡುವ ಆಚರಣೆ ಅತ್ಯಂತ ಪ್ರಮುಖವಾಗಿದೆ. ಇದರ ಹಿಂದೆ ಒಂದು ಸುಂದರವಾದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.
ವಿವಾಹವೆಂಬುದು ಜೀವನದ ಒಂದು ಮಹತ್ತರ ಘಟ್ಟ. ಇದು ಕೇವಲ ಎರಡು ವ್ಯಕ್ತಿಗಳ ಮಿಲನವಲ್ಲ, ಬದಲಿಗೆ ಎರಡು ಕುಟುಂಬಗಳ ಸಂಯೋಗ ಮತ್ತು ಹೊಸ ಜವಾಬ್ದಾರಿಗಳ ಆರಂಭ. ಮದುವೆಗೆ ಮುನ್ನ ಯೌವನ ಸಹಜವಾದ ಮುಗ್ಧತೆ, ನಿರ್ಲಕ್ಷ್ಯ ಮತ್ತು ಜವಾಬ್ದಾರಿಯ ಕೊರತೆ ಇರುವುದು ಸಹಜ. ಆದರೆ ವಿವಾಹ ಬಂಧನಕ್ಕೆ ಒಳಗಾದ ನಂತರ ಜೀವನ ಸಂಗಾತಿಯೊಂದಿಗೆ ಹೊಸ ಜೀವನವನ್ನು ನಡೆಸಬೇಕಾದಾಗ, ಹೊಸ ಜವಾಬ್ದಾರಿಗಳು ಎದುರಾಗುತ್ತವೆ. ಈ ಸಂದರ್ಭದಲ್ಲಿ ಜೀರಿಗೆ ಬೆಲ್ಲವನ್ನು ತಲೆಯ ಮೇಲೆ ಇಡುವ ಆಚರಣೆಯು ವಿಶೇಷ ಪಾತ್ರ ವಹಿಸುತ್ತದೆ.
ಈ ವಿಧಿಯು ತಲೆಯ ಮೇಲ್ಭಾಗದಲ್ಲಿರುವ ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಸಹಸ್ರಾರ ಚಕ್ರವು ಜಾಗೃತಗೊಂಡಾಗ, ಮೆದುಳಿನಲ್ಲಿ ಧನಾತ್ಮಕ ಶಕ್ತಿಗಳು ಪ್ರಚೋದಿತವಾಗುತ್ತವೆ. ಇದು ನವದಂಪತಿಗಳಲ್ಲಿ ನಾನು ಮದುವೆಯಾಗಿದ್ದೇನೆ, ನನಗೆ ಜವಾಬ್ದಾರಿಗಳು ಹೆಚ್ಚಾಗಿವೆ ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಈ ಪ್ರಜ್ಞೆಯಿಂದ ಆದಾಯ ಗಳಿಸುವುದು, ಖರ್ಚುಗಳನ್ನು ನಿಭಾಯಿಸುವುದು, ಆರ್ಥಿಕ ನಿರ್ವಹಣೆ ಸೇರಿದಂತೆ ವೈವಾಹಿಕ ಜೀವನದ ಎಲ್ಲಾ ಆಯಾಮಗಳನ್ನು ಸಮರ್ಥವಾಗಿ ನಿರ್ವಹಿಸುವ ಆಲೋಚನೆಗಳು ಮೂಡುತ್ತವೆ.
ಜೀರಿಗೆ ಮತ್ತು ಬೆಲ್ಲಕ್ಕೆ ವೈಯಕ್ತಿಕವಾಗಿಯೂ ವಿಶಿಷ್ಟ ಗುಣಗಳಿವೆ. ಜೀರಿಗೆಯು ದೇಹದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರಹಾಕಲು ಸಹಾಯಕವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ತಲೆಸುತ್ತು, ವಾಕರಿಕೆ, ಆಲಸ್ಯದಂತಹ ಸಮಸ್ಯೆಗಳನ್ನು ನಿವಾರಿಸಲು ಜೀರಿಗೆ ನೀರನ್ನು ಕುಡಿಯುವ ರೂಢಿ ಇದೆ. ಬೆಲ್ಲವು ದೇಹಕ್ಕೆ ಉಷ್ಣತೆಯನ್ನು ನೀಡಿ ಶಕ್ತಿಯನ್ನು ಒದಗಿಸುತ್ತದೆ. ಆದರೆ ವಿವಾಹದಲ್ಲಿ ಈ ಜೀರಿಗೆ ಬೆಲ್ಲವನ್ನು ತಿನ್ನಲು ನೀಡುವುದಿಲ್ಲ, ಬದಲಿಗೆ ತಲೆಯ ಮೇಲೆ ಸಾಂಕೇತಿಕವಾಗಿ ಇಡಲಾಗುತ್ತದೆ. ಇದರ ಮುಖ್ಯ ಉದ್ದೇಶ ದೈಹಿಕ ಪ್ರಯೋಜನಗಳಿಗಿಂತ ಹೆಚ್ಚಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣ.
ಇಲ್ಲಿದೆ ನೋಡಿ ವಿಡಿಯೋ:
ತಲೆಯ ಮೇಲೆ ಜೀರಿಗೆ ಬೆಲ್ಲವನ್ನು ಇಡುವುದರಿಂದ ನವದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ, ಅವರ ಮನಸ್ಸುಗಳಲ್ಲಿರುವ ಋಣಾತ್ಮಕ ಆಲೋಚನೆಗಳು ದೂರವಾಗಿ, ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ. ಇದು ಅವರ ಭಾವನೆಗಳಿಗೆ ವಿಶೇಷ ಶಕ್ತಿಯನ್ನು ನೀಡಿ, ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯನ್ನು ವೃದ್ಧಿಸುತ್ತದೆ.
ಹೀಗಾಗಿ, ನಮ್ಮ ಪ್ರಾಚೀನ ಸಂಪ್ರದಾಯಗಳು ಕೇವಲ ಕಾಲ್ಪನಿಕ ಆಚರಣೆಗಳಲ್ಲ. ಅವು ಜೀವನದಲ್ಲಿ ಧನಾತ್ಮಕ ಶಕ್ತಿಗಳನ್ನು ಪ್ರಚೋದಿಸುವ, ವ್ಯಕ್ತಿತ್ವವನ್ನು ಸುಧಾರಿಸುವ ಮತ್ತು ಉತ್ತಮ ಸಮಾಜವನ್ನು ರೂಪಿಸುವ ಉದ್ದೇಶವನ್ನು ಹೊಂದಿವೆ. ಜೀರಿಗೆ ಬೆಲ್ಲದ ಈ ವಿಧಿಯು ಮಾನಸಿಕವಾಗಿ ದಂಪತಿಗಳನ್ನು ಪರಿವರ್ತಿಸಿ, ಜವಾಬ್ದಾರಿಯುತ ಮತ್ತು ಪ್ರೀತಿಯ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಈ ಪದ್ಧತಿ ಮುಂದಿನ ಪೀಳಿಗೆಗಳಿಗೂ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತಿಳಿಸುತ್ತದೆ. ಸರ್ವೇ ಜನಾಃ ಸುಖಿನೋ ಭವಂತು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಕಂಪನಿಯು ತನ್ನ ಹಿಡಿತದಲ್ಲಿ ಇದ್ದ ಆರ್ಸಿಬಿ (RCB) ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ. ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ಆರ್ಸಿಬಿ ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಈ ಮೂಲಕ ಹೊಸ ಕ್ಷೇತ್ರಕ್ಕೆ ಆದಿತ್ಯ ಬಿರ್ಲಾ ಕಾಲಿಟ್ಟಿದೆ. ಆದಿತ್ಯ ಬಿರ್ಲಾ ಜೊತೆ ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್, ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಇದೆ. ಈ ಮಾರಾಟದ ಬೆನ್ನಲ್ಲೇ ಮಲ್ಯ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿ ಮಾಡಿದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡೋದು ಇವರ ಉದ್ದೇಶ ಆಗಿತ್ತು. ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಅಂತ ಇಟ್ಟರು. ಮಲ್ಯಗೆ ಬೆಂಗಳೂರು ಹಿನ್ನೆಲೆ ಇರುವುದರಿಂದ ಬೆಂಗಳೂರು ಎಂಬುದನ್ನು ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಂಡಕ್ಕೆ ಹೆಸರು ಇಟ್ಟರು. ವಿರಾಟ್ ಕೊಹ್ಲಿ ಖರೀದಿಯಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು. ಈಗ ತಂಡ ಮಾರಾಟ ಆಗಿದ್ದಕ್ಕೆ ಅವರು ಟ್ವೀಟ್ ಮಾಡಿದ್ದಾರೆ.
‘ಆರ್ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕರು. ನನ್ನ ಹೂಡಿಕೆ ವ್ಯರ್ಥ ಎಂದು ಟೀಕಿಸಿದರು’ ಎಂದಿದ್ದಾರೆ ಅವರು.
I would like to heartily congratulate the new owners of RCB. I wish them the very best and Godspeed with the most valuable IPL franchise. When I bought the franchise in 2008 for INR 450 crores, most people laughed at me and criticised my investment as a vanity project. Behind my…
‘ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸಬೇಕು ಎಂದು ನನಗೆ ಬಹುವಾಗಿ ಇತ್ತು. ಈ ಕಾರಣದಿಂದ ನಾನು ತಂಡಕ್ಕೆ ಆರ್ಸಿಬಿ ಎಂದು ಹೆಸರಿಸಿದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್ಸಿಬಿ ಯಾವಾಗಲೂ ನನ್ನ ಡಿಎನ್ಎಯ ಭಾಗವಾಗಿ ಉಳಿಯುತ್ತದೆ’ ಎಂದು ಮಲ್ಯ ಹೇಳಿದ್ದಾರೆ.
‘ಆರ್ಸಿಬಿ ತಂಡದ ಆಟಗಾರರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಎಲ್ಲಾ ಆರ್ಸಿಬಿ ಅಭಿಮಾನಿಗಳಿಗೆ, ಕೃತಜ್ಞತಾಪೂರ್ವಕ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ, ನಮಸ್ಕಾರ’ ಎಂದು ಅವರು ಕೋರಿದ್ದಾರೆ.
ಅಪಸ್ಮಾರ ಅಥವಾ ಎಪಿಲೆಪ್ಸಿ (Epilepsy) ದೀರ್ಘಕಾಲದ ಮೆದುಳಿನ ಅಸ್ವಸ್ಥತೆಯಾಗಿದೆ. ನರಕೋಶಗಳು ಅಥವಾ ಮೆದುಳಿನ ಕೋಶಗಳಲ್ಲಿ ಉಂಟಾಗುವ ಹಠಾತ್ ಬದಲಾವಣೆಯಿಂದ ಅಪಸ್ಮಾರ ಸಂಭವಿಸುತ್ತದೆ. ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಸಕಾಲದಲ್ಲಿ ರೋಗ ನಿರ್ಣಯವನ್ನು ನೀಡುವ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ 50 ಮಿಲಿಯನ್ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರೆ. ಇಂದಿಗೂ ಕೂಡ ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಮಾರ್ಚ್ 26 ರಂದು ಪರ್ಪಲ್ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇರಳೆ ದಿನದ ಇತಿಹಾಸವೇನು?
ಪ್ರತಿ ವರ್ಷ ಮಾರ್ಚ್ 26 ರಂದು ನೇರಳೆ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ. ಈ ರೋಗವು ಲ್ಯಾವೆಂಡರ್ ಹೂವಿನಿಂದ ಪ್ರೇರಿತವಾಗಿದೆ ಮತ್ತು ಒಂಟಿತನವನ್ನು ಪ್ರತಿನಿಧಿಸುತ್ತದೆ. ಇದನ್ನು ಮೊದಲು 2008 ರಲ್ಲಿ ಅಪಸ್ಮಾರದಿಂದ ಬಳಲುತ್ತಿರುವ 9 ವರ್ಷದ ಹುಡುಗಿ ಕ್ಯಾಸಿಡಿ ಮೇಗನ್ ಪ್ರಾರಂಭಿಸಿದಳು.
ಕೆನಡಾದ ಒಂಬತ್ತು ವರ್ಷದ ಕ್ಯಾಸಿಡಿ ಮೇಗನ್, ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆ ತನ್ನ ಈ ಕಾಯಿಲೆಯೊಂದಿಗಿನ ಹೋರಾಟದಿಂದ ಪ್ರೇರಿತರಾಗಿ 2008 ರಲ್ಲಿ ಪರ್ಪಲ್ ಡೇ ಅನ್ನು ಸ್ಥಾಪಿಸಿದಳು. ಕ್ಯಾಸಿಡಿಯ ಈ ಪ್ರಯತ್ನಗಳನ್ನು ಕೆನಡಾದ ಎಪಿಲೆಪ್ಸಿ ಅಸೋಸಿಯೇಷನ್ ಆಫ್ ದಿ ಮ್ಯಾರಿಟೈಮ್ಸ್ (EAM) ಹಾಗೂ ನ್ಯೂಯಾರ್ಕ್ನ ಅನಿತಾ ಕೌಫ್ಮನ್ ಫೌಂಡೇಶನ್ ಬೆಂಬಲಿಸಿದವು ಮತ್ತು ಅಂತಿಮವಾಗಿ ಆ ದಿನವು ಅಂತರರಾಷ್ಟ್ರೀಯ ಕಾರ್ಯಕ್ರಮವಾಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 26 ರಂದು ಪರ್ಪಲ್ ಡೇ ಅನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಪಸ್ಮಾರದ ನೇರಳೆ ದಿನವು ಮಹತ್ವದ್ದಾಗಿದೆ ಏಕೆಂದರೆ ಇದು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಅಪಸ್ಮಾರ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಸುಧಾರಿತ ಆರೋಗ್ಯ ಸೇವೆ, ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುವಲ್ಲಿ ಈ ಆಚರಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ದಿನ ಅಪಸ್ಮಾರ ಕಾಯಿಲೆ, ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ.
ಚಿಕ್ಕಮಗಳೂರು, ಮಾರ್ಚ್ 26: ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಸಂಚಾರ ಜನರ ಆತಂಕಕ್ಕೆ ಕಾರಣವಾಗಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಬೇಲೂರು ಮಾರ್ಗವಾಗಿ ಬಂದಿರುವ 15ಕ್ಕೂ ಹೆಚ್ಚು ಕಾಡಾನೆಗಳು ಕಸ್ಕೆಬೈಲು, ಚಟ್ಟನಹಳ್ಳಿ, ಹುಲಿಹಂಡ್ಲು ಸೇರಿದಂತೆ ಹಲವೆಡೆ ಸಂಚಾರ ನಡೆಸುತ್ತಿದ್ದು, ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದೆ.
ಮಂಗಳೂರು, ಮಾ.26: ಮಂಗಳೂರು: ತುಳುನಾಡಿನ ದೈವಾರಾಧನೆ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಅಪಾರ ನಂಬಿಕೆ ಮತ್ತು ಶಿಸ್ತಿನ ಪದ್ಧತಿ. ಇತ್ತೀಚೆಗೆ ದೈವದ ನೇಮೋತ್ಸವಗಳ ವೇಳೆ ವಿಡಿಯೋ ಮಾಡುವ ಮತ್ತು ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ದೈವದ ಅವಕೃಪೆಗೆ ಕಾರಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @chasing_roadss ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೇಮೋತ್ಸವ ನಡೆಯುತ್ತಿದ್ದಾಗ ದೈವವು ಹಠಾತ್ತಾಗಿ ವಿಡಿಯೋ ಮಾಡುತ್ತಿದ್ದವರತ್ತ ತಿರುಗಿ ತೀವ್ರ ಆಕ್ರೋಶದಿಂದ ಎಚ್ಚರಿಕೆ ನೀಡಿದೆ. ವಿಡಿಯೋ ಹಂಚಿಕೊಂಡಿರುವ ಮಹಿಳೆಯ ಪ್ರಕಾರ, ಕೇವಲ ವಿಡಿಯೋ ಮಾಡಿದ್ದಕ್ಕೆ ಮಾತ್ರವಲ್ಲದೆ, ತಾನು ಕೆಂಪು ಬಣ್ಣದ ಬಟ್ಟೆ ಧರಿಸಿದ್ದಕ್ಕೂ ದೈವವು ಕೋಪಗೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದೈವದ ಆವೇಶ ಮತ್ತು ಆಕ್ರೋಶ ಕಂಡು ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಕರಾವಳಿಯ ದೈವಗಳ ಮುಂದೆ ನಿಲ್ಲುವಾಗ ಬಟ್ಟೆ, ನಡವಳಿಕೆ ಮತ್ತು ಮೌನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇತ್ತೀಚಿನ ‘ರೀಲ್ಸ್’ ಸಂಸ್ಕೃತಿಯು ಈ ಪವಿತ್ರ ಸಂಪ್ರದಾಯದ ಗಂಭೀರತೆಯನ್ನು ಹಾಳುಮಾಡುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಢಾಕಾ, ಮಾರ್ಚ್ 26: ನಿನ್ನೆ ಸಂಜೆ ಬಾಂಗ್ಲಾದೇಶದಲ್ಲಿ (Bangladesh Bus Accident) ಅತಿ ಭೀಕರ ಅಪಘಾತ ಸಂಭವಿಸಿದೆ. ಬಾಂಗ್ಲಾದೇಶದ ರಾಜ್ಪರಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾರಿಗೆ ದೋಣಿಯ ಮೂಲಕ ಬಸ್ನಲ್ಲಿ ಜನರು ಸಂಚರಿಸುತ್ತಾರೆ. ಇದೇ ರೀತಿ ದೋಣಿಯಲ್ಲಿದ್ದ ಖಾಸಗಿ ಬಸ್ ಇದ್ದಕ್ಕಿದ್ದಂತೆ ಪದ್ಮಾ ನದಿಗೆ ಉರುಳಿದೆ. ಬಸ್ನಿಂದ ಹೊರಗಿದ್ದ ಕೆಲವು ಕುಟುಂಬಸ್ಥರು ನೋಡುತ್ತಿದ್ದಂತೆ ಬಸ್ನೊಳಗಿದ್ದ ಅವರ ಫ್ಯಾಮಿಲಿಯವರು ನೀರಿನಲ್ಲಿ ಮುಳುಗಿದ್ದಾರೆ. ದೋಣಿಯ ಮೇಲೆ ನಿಂತು ಮಕ್ಕಳು, ಕುಟುಂಬಸ್ಥರು ಜೋರಾಗಿ ಕಿರುಚಾಡುತ್ತಾ, ತಮ್ಮ ಮನೆಯವರನ್ನು ಕಾಪಾಡಿ ಎಂದು ಗೋಗರೆಯುತ್ತಿರುವ ವಿಡಿಯೋ ಇಲ್ಲಿದೆ. ಈ ಅಪಘಾತದಲ್ಲಿ 23 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಹಲವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 26: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನೇನು ಎರಡು ದಿನವಷ್ಟೇ ಬಾಕಿ ಇರುವ ಕಾರಣ ಭರದ ಸಿದ್ಧತೆ ನಡೆದಿದೆ. ಕಳೆದ ಆವೃತ್ತಿಯ ವಿಜಯೋತ್ಸವದ ವೇಳೆ ಅವಘಡ ನಡೆದಿದ್ದ ಕಾರಣ ಈ ಬಾರಿ ಬೆಂಗಳೂರಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನಾಹುತಗಳು ನಡೆಯದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ.
ಇಂದು ಮಾಕ್ ಡ್ರಿಲ್
ಐಪಿಎಲ್ ಭದ್ರತೆಗೆ ಸಂಬಂಧಿಸಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ಪೊಲೀಸರಿಂದ ಭದ್ರತೆ ಬಗ್ಗೆ ನಡೆಯಲಿರುವ ಅಣಕು ಪ್ರದರ್ಶನದಲ್ಲಿ NSG ಪಡೆ ಕೂಡ ಭಾಗಿಯಾಗಲಿದೆ. ಬೆಳಗ್ಗೆ 10 ಗಂಟೆಗೆ ಆರಂಭ ಆಗಲಿರುವ ಮಾಕ್ ಡ್ರಿಲ್ನಲ್ಲಿ, ಸ್ಟೇಡಿಯಂ ಗೇಟ್ಗಳಲ್ಲಿನ ಎಂಟ್ರಿ ಹಾಗೂ ಎಕ್ಸಿಟ್ ಬಳಿ ಭದ್ರತೆ ಹೇಗಿರಬೇಕು? ಸ್ಟೇಡಿಯಂ ಸುತ್ತಮುತ್ತ ಅಭಿಮಾನಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು? ತಪಾಸಣೆ, ಪರಿಶೀಲನೆ ಹೇಗಿರಬೇಕು ಎಂಬ ಬಗ್ಗೆ ತಾಲೀಮು ನಡೆಯಲಿದೆ. ಸುಮಾರು ಒಂದು ಸಾವಿರ ಪೊಲೀಸರು ಇದರಲ್ಲಿ ಭಾಗಿಯಾಗಲಿದ್ದು, ಸ್ಟೇಡಿಯಂ ಒಳಗಡೆ, ಹೊರಗಡೆ ಸಿಬ್ಬಂದಿ ನಿಯೋಜನೆ ಮಾಡಿ ಅಣುಕು ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ಸಂಚಾರ ಪೊಲೀಸರಿಂದಲೂ ಸ್ಟೇಡಿಯಂ ಸುತ್ತಲೂ ಟ್ರಾಫಿಕ್ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಯಲಿದೆ.
IPL ಪಂದ್ಯ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾಲ್ತುಳಿತ ದುರಂತ ನಂತರ ಫುಲ್ ಅಲರ್ಟ್ ಆಗಿರುವ ಕೆಎಸ್ಸಿಎ, ಮ್ಯಾಚ್ ನೋಡಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದೆ. ಸ್ಟೇಡಿಯಂ ಪ್ರವೇಶ ಮಾಡುವವರಿಗೆ ಕೆಲವು ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧ ಮಾಡಲಾಗಿದ್ದು, ಯಾವ ವಸ್ತು ತರಬಾರದೆಂದು ಬೋರ್ಡ್ KSCA ಹಾಕಿದೆ. ಪಿಸ್ತೂಲ್, ಚಾಕು, ಕತ್ತರಿ, ಆಲ್ಕೋಹಾಲ್, ಬಾಟಲ್, ಪಟಾಕಿ, ಪೆಟ್ರೋಲ್, ಡೀಸೆಲ್, ಲೈಟರ್, ಫುಡ್ ಐಟಮ್ಸ್, ಸಿಗರೇಟ್, ಬ್ಯಾಗ್, ಹೆಲ್ಮೆಟ್, ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಮರಾ ಸೇರಿದಂತೆ ಅಪಾಯಕಾರಿ ವಸ್ತುಗಳು ಸೇರಿ ಹಲವು ಸಾಮಗ್ರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ದಾವಣಗೆರೆ, ಮಾರ್ಚ್ 26: ದಾವಣಗೆರೆ ದಕ್ಷಿಣ ಉಪಚುನಾವಣೆ (Davangere South By-Poll) ಕಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಅಲ್ಪಸಂಖ್ಯಾತ ಮತಬ್ಯಾಂಕ್ ಈ ಬಾರಿ ರಾಜಕೀಯ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಎದುರಾಗಿದೆ. ಕಾಂಗ್ರೆಸ್ (Congress)ಟಿಕೆಟ್ ವಿಚಾರದಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆ, ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಕಣಕ್ಕಿಳಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಾದಿಕ್ ಕಣದಿಂದ ಹಿಂದೆ ಸರಿಯಲ್ಲ ಎಂದು ಖಡಕ್ ಆಗಿ ಹೇಳಿರುವುದರಿಂದ 1983ರ ಫಲಿತಾಂಶ ಮರುಕಳಿಸಲಿದೆಯೇ ಎಂಬ ಕುತೂಹಲ ಮೂಡಿದೆ.
1983 ರಲ್ಲಿಯೂ ಇಂಥದ್ದೇ ಪರಿಸ್ಥಿತಿ!
1983ರ ವಿಧಾನಸಭಾ ಚುನಾವಣೆಯ ಇತಿಹಾಸ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿತ್ತು. ಆಗಿನ ಗುಂಡೂರಾವ್ ಸರ್ಕಾರದಲ್ಲಿ ಶಿಕ್ಷಣ ಸಚಿವೆ ಆಗಿದ್ದ ನಾಗಮ್ಮ ಕೇಶಮೂರ್ತಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಪಕ್ಷೇತರ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಸಾಬ್ ಗಮನಾರ್ಹ ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಪಂಪಾಪತಿ ಗೆಲುವು ಸಾಧಿಸಿದ್ದರು.
ಆ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಮತ ಹಾಕಿದರೆಂದು ವಿಶ್ಲೇಷಣೆ ನಡೆಯಿತ್ತು. ಇದೀಗ ಮತ್ತೆ ಟಿಕೆಟ್ ನೀಡದ ವಿಚಾರದಲ್ಲಿ ಅಲ್ಪಸಂಖ್ಯಾತರ ಅಸಮಾಧಾನ ವ್ಯಕ್ತವಾಗುತ್ತಿರುವುದರಿಂದ, ಅದೇ ಇತಿಹಾಸ ಮರುಕಳಿಸಬಹುದೇ ಎಂಬ ಪ್ರಶ್ನೆ ಎದ್ದಿದೆ.
ಮುಸ್ಲಿಂ ಅಭ್ಯರ್ಥಿಗಳು ಯಾರೂ ಈವರೆಗೆ ಗೆದ್ದಿಲ್ಲ
ದಾವಣಗೆರೆ ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ, 15 ಚುನಾವಣೆಯಲ್ಲಿ ಒಟ್ಟು 45ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಯಾರೂ ಗೆಲುವು ಸಾಧಿಸಿಲ್ಲ. ಆದರೂ ಮತಪ್ರಮಾಣ ದೃಷ್ಟಿಯಿಂದ ಮುಸ್ಲಿಮರು ಗಮನಾರ್ಹರಾಗಿದ್ದಾರೆ. 1983ರಲ್ಲಿ ಮಹಮ್ಮದ್ ಇಕ್ಬಾಲ್ ಸಾಬ್ ಸುಮಾರು ಶೇ 23.67 ಮತಗಳನ್ನು ಪಡೆದಿದ್ದರು. 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಸೈಪುಲ್ಲಾ ಸುಮಾರು ಶೇ 21 ಮತ ಗಳಿಸಿದ್ದರು.
ಇನ್ನಷ್ಟು ಗಮನಿಸಿದರೆ, 2013ರಲ್ಲಿ 15 ಅಭ್ಯರ್ಥಿಗಳಲ್ಲಿ 9 ಮಂದಿ ಮುಸ್ಲಿಂ ಅಭ್ಯರ್ಥಿಗಳಾಗಿದ್ದರೆ, 2018ರಲ್ಲಿ 11ರಲ್ಲಿ 7 ಮಂದಿ, 2023ರಲ್ಲಿ 16ರಲ್ಲಿ 8 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದಾಗ್ಯೂ, ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದರು.
ಈ ಬಾರಿ ಸಹ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಂಖ್ಯೆಯೇ ಕಾಂಗ್ರೆಸ್ಗೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಸಾಧಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಮತ ವಿಭಜನೆಗೆ ಕಾರಣವಾಗಬಹುದು ಎಂಬ ಆತಂಕ ಕಾಂಗ್ರೆಸ್ ವಲಯದಲ್ಲಿ ಇದೆ.