ಮೈಸೂರು, (ಮಾರ್ಚ್ 14): ಗಲ್ಫ್ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿದೆ. ಇದು ಹೋಟೆಲ್ ಉದ್ಯಮದ ಕತ್ತು ಹಿಸುಕುವಂತೆ ಮಾಡಿದೆ. ಗ್ಯಾಸ್ ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಕಮರ್ಷಿಯಲ್ ಸಿಲಿಂಡರ್ಗಳು ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಒನ್ ಟು ಡಬಲ್ ರೇಟ್ಗೆ ಸೇಲ್ ಮಾಡುತ್ತಿದ್ದಾರೆ. 1 ಸಾವಿರ 950 ರೂಪಾಯಿ ಇರುವ ಸಿಲಿಂಡರ್ನ 5 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯನವರು ತಮ್ಮ ವರುಣಾ ಕ್ಷೇತ್ರದ ವರಕೋಡು ಗ್ರಾಮದ ಜಾತ್ರೆಗೆ ಪ್ರಭಾವ ಬಳಿಸಿ ಒಂದು ಲೋಡ್ ಗ್ಯಾಸ್ ಸಿಲಿಂಡರ್ ಕೊಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಂತ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ ಗೌಡ ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ತಕ್ಷಣ ಈ ಸಮಸ್ಯೆ ಬಗೆಹರಿಸಬಹುದು. ನಿನ್ನೆ (ಮಾರ್ಚ್ 13) ಸಿಎಂ ವರಕೋಡು ಹಬ್ಬಕ್ಕೂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ. ಸಿದ್ದರಾಮಯ್ಯ ವರುಣಗೆ ಮಾತ್ರ ಸಿಎಂ ಅಲ್ಲ. ಅವರು ರಾಜ್ಯದ ಸಿಎಂ ಎಂದು ಕೇವಲ ವರಕೋಡು ಗ್ರಾಮದ ಜಾತ್ರೆಗೆ ಗ್ಯಾಸ್ ಕೊಡಿಸದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಮನಸ್ಸು ಮಾಡಿದರೆ ಏನೂ ಬೇಕಾದರು ಆಗುತ್ತದೆ. ಜಾತ್ರೆಗೂ ಎರಡು ದಿನ ಮೊದಲೇ ಡಿಸಿ ಜೊತೆ ಮಾತನಾಡಿ ಸಿಲಿಂಡರ್ ಕೊಡಿಸಿದ್ದಾರೆ. ಹೀಗಾಗಿ ಹೋಟೆಲ್ಗಳಿಗೂ ಕೂಡ ದಿನಕ್ಕೆ ಒಂದೋ ಎರಡೋ ಸಿಲಿಂಡರ್ ಕೊಡಿಸಲು ಸಿಎಂ ಪ್ರಭಾವ ಬೀರಬೇಕು. ಮೈಸೂರಿನಲ್ಲಿ ಸುಮಾರು ಪ್ರತಿನಿತ್ಯ 4,000 ಸಿಲಿಂಡರ್ ಬಳಸಲಾಗುತ್ತದೆ. ಅಷ್ಟು ಸಾಧ್ಯವಿಲ್ಲವೆಂದರೂ ಕನಿಷ್ಠ 700-800 ಸಿಲಿಂಡರ್ ಲಭ್ಯವಾಗುವಂತೆ ಸಿಎಂ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ಬಾಕ್ಸ್ ಆಫೀಸ್ನಲ್ಲಿ ಅವರ ಸಿನಿಮಾಗಳು ಹಲವು ದಾಖಲೆಗಳನ್ನು ಬರೆದಿವೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಪುತ್ರಿ ಆರ್ಹಾ ಸಹ ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲು ಅರ್ಜುನ್ ಎಷ್ಟೇ ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿರಬಹುದು ಆದರೆ ಆರಾ ಬರೆದಿರುವ ಈ ದಾಖಲೆ ಬಹಳ ಅಪರೂಪದ್ದು ಮತ್ತು ವಿಶೇಷವಾದುದು. ಚುರುಕಿನ ಬಾಲಕಿಯಾದ ಆರ್ಹಾ, ಚೆಸ್ ಕ್ಷೇತ್ರದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಪುತ್ರಿ ಆರ್ಹಾ ಎಳವೆಯಿಂದಲೇ ಚೆಸ್ ಬಗ್ಗೆ ಅತೀವ ಆಸಕ್ತಿ ಹೊಂದಿರುವವರಾಗಿದ್ದು, ಕೆಲ ವರ್ಷಗಳ ಹಿಂದೆಯೇ ಒಟ್ಟಿಗೆ ಹಲವರೊಡನೆ ಚೆಸ್ ಆಡಿ ಎಲ್ಲರನ್ನೂ ಸೋಲಿಸಿದ್ದರು. ಇದೀಗ ಚೆಸ್ ಕ್ಷೇತ್ರದಲ್ಲಿಯೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಆರ್ಹಾ ಇದೀಗ ಅತ್ಯಂತ ಕಿರಿಯ ಚೆಸ್ ಟ್ರೈನರ್ ಎನಿಸಿಕೊಂಡಿದ್ದಾರೆ. ಅವರ ಹೆಸರು ಇದೀಗ ‘ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಲ್ಲು ಆರ್ಹಾ ತನ್ನ ಐದನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಚೆಸ್ ತರಬೇತುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೈದರಾಬಾದ್ನ ಹೈಟೆಕ್ ಸಿಟಿಯಲ್ಲಿರುವ ರಾಯ್ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರ್ಹಾ, ಕೇವಲ ಎರಡು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಚೆಸ್ ತರಬೇತಿ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಮಾತ್ರವಲ್ಲದೆ ಆರ್ಹಾ 30 ಕಠಿಣ ಚೆಸ್ ಪಜಲ್ಗಳನ್ನು ಸಹ ಪೂರ್ಣಗೊಳಿಸಿದ್ದಾರಂತೆ.
ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಪ್ರತಿನಿಧಿ ಆರ್ಬಿಟರ್ ಲಿಂಗಂ ಬಾಲಾಜಿ ಅವರ ನೇತೃತ್ವದಲ್ಲಿ ನಡೆಸಲಾದ ಕೌಶಲ್ಯ ಪರೀಕ್ಷೆಯಲ್ಲಿ ಅರ್ಹಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಚೆಸ್ ಪಜಲ್ಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಮೂಲಕ ತಮ್ಮ ಜಾಣ್ಮೆಯನ್ನು ಸಾಬೀತುಪಡಿಸಿದ್ದಾರೆ. ಐದನೇ ವಯಸ್ಸಿಗೆ ಇದು ಸಾಮಾನ್ಯ ಸಾಧನೆಯೇನಲ್ಲ. ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ ಮತ್ತು ಅಜ್ಜ ಅಲ್ಲು ಅರವಿಂದ್ ಅವರ ಸಮ್ಮುಖದಲ್ಲಿ ಅರ್ಹಾ ಈ ಗೌರವಕ್ಕೆ ಪಾತ್ರರಾದರು. ಸೋಶಿಯಲ್ ಮೀಡಿಯಾದಲ್ಲಿ ಅರ್ಹಾ ಅವರ ಅವಾರ್ಡ್ ಸ್ವೀಕರಿಸುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಸಹಜವಾಗಿಯೇ ಕುಟುಂಬವು ಆರ್ಹಾರ ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ.
ಅರ್ಹಾ ಕೇವಲ ಚೆಸ್ನಲ್ಲಿ ಮಾತ್ರವಲ್ಲದೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಸಮಂತಾ ಅಭಿನಯದ ‘ಶಾಕುಂತಲಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದೆಯಾಗಿದ್ದಾರೆ. ಅದಕ್ಕೂ ಮುಂಚೆ ಯೂಟ್ಯೂಬ್ ವಿಡಿಯೋ ಒಂದರಲ್ಲಿ ಸಹ ಆರ್ಹಾ ನಟಿಸಿದ್ದರು. ‘ಅಂಜಲಿ, ಅಂಜಲಿ’ ಹಾಡಿನಲ್ಲಿ ಆರ್ಹಾ ಸಖತ್ ಆಗಿ ನಟಿಸಿದ್ದರು. ಆ ವಿಡಿಯೋನಲ್ಲಿ ಅಲ್ಲು ಅರ್ಜುನ್ ಸಹ ಇದ್ದರು.
ಪುಣೆ, ಮಾರ್ಚ್ 14: ಮಹಾರಾಷ್ಟ್ರದ ಪುಣೆಯಲ್ಲಿರುವ ಅಪಾರ್ಟ್ಮೆಂಟ್ನೊಳಗೆ ಲಿಫ್ಟ್ನಲ್ಲಿ ಹೋಗುವಾಗ ಲಿಫ್ಟ್ (Lift Accident) ಗೇಟ್ನಲ್ಲಿ ಮಗುವಿನ ಕೈ ಸಿಲುಕಿಕೊಂಡಿದೆ. ಇದು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸುರಕ್ಷತಾ ಕಳವಳವನ್ನು ಉಂಟುಮಾಡಿದೆ. ಲಿಫ್ಟ್ಗಳನ್ನು ಬಳಸುವಾಗ ಅದರಲ್ಲೂ ವಿಶೇಷವಾಗಿ ಮಕ್ಕಳು ಇರುವಾಗ ಜನರು ಹೆಚ್ಚಿನ ಜಾಗರೂಕರಾಗಿರಬೇಕು ಎಂಬುದಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿತ್ರದುರ್ಗ, ಮಾರ್ಚ್ 14: ನಾಗರಹಾವು ಕಡಿತಕ್ಕೊಳಗಾಗಿ (Snake bite) ಒಂದನೇ ತರಗತಿಯ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ(6) ನಾಗರಹಾವು ಕಡಿತಕ್ಕೊಳಗಾದ ವಿದ್ಯಾರ್ಥಿನಿ. ಶಾಲಾ ಆವರಣದಲ್ಲಿ ಕುಳಿತಿದ್ದಾಗ ನಾಗರಹಾವು ಕಡಿದಿದೆ. ಈ ವೇಳೆ ಶಾಲಾ ಶಿಕ್ಷಕ ರವಿಶಂಕರ್ ಬಾಯಿಂದ ವಿಷ ತೆಗೆಯಲು ಯತ್ನಿಸಿದ್ದಾರೆ. ಸದ್ಯ ಅಸ್ವಸ್ಥಗೊಂಡ ಸೃಷ್ಠಿಯನ್ನು ಖಾಸಗಿ ಆಸ್ಪತ್ರೆಗೆ ಮತ್ತು ರವಿಶಂಕರ್ರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೆರೆಯಲ್ಲಿ ಈಜಲು ಹೋಗಿ ಓರ್ವ ವಿದ್ಯಾರ್ಥಿ ಸಾವು: ಮತ್ತೊಬ್ಬನ ರಕ್ಷಣೆ
ಮಂಡ್ಯದ ಮಳವಳ್ಳಿ ಪಟ್ಟಣದ ದೊಡ್ಡಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಕೇಶವ(11) ಸಾವು, ಹೇಮಂತ್(12) ರಕ್ಷಣೆಗೊಳಗಾದ ವಿದ್ಯಾರ್ಥಿ.
ಕೇಶವ ಮತ್ತು ಹೇಮಂತ್ ಮಳವಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಪರೀಕ್ಷೆ ಮುಗಿಸಿ ಕೆರೆಗೆ ಈಜಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೇರೂರು ಬಳಿ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ವಿದ್ಯಾರ್ಥಿಗಳ ತಂಡ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದರು. ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸುದರ್ಶನ್(22) ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೈಕ್ ನಿಯಂತ್ರಣ ತಪ್ಪಿ ಬಿದ್ದು ಯುವಕ ಸಾವು
ಬೈಕ್ ನಿಯಂತ್ರಣ ತಪ್ಪಿ ಬಿದ್ದು ಯುವಕ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಹೊರವಲಯದ ಇಂಡಸ್ಟ್ರಿಯಲ್ ಏರಿಯಾ ಬಳಿ ನಡೆದಿದೆ. ಹೊಸಹಳ್ಳಿ ಗ್ರಾಮದ ಮಲ್ಲಿಕಾರ್ಜುನ (21) ಮೃತ ದುರ್ದೈವಿ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಅಜ್ಜಿಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೈಕ್ನಲ್ಲಿ ತನ್ನ ಊರು ಹೊಸಹಳ್ಳಿ ಗ್ರಾಮಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. ಬೈಕ್ ಅಡ್ಡ ಬಂದ ವೇಳೆ ಬ್ರೇಕ್ ಹಾಕಿದ್ದಕ್ಕೆ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ.
ಬಹು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಅಚೇತನವಾಗಿ ಮಲಗಿದ್ದ ಹರೀಶ್ ರಾಣಾಗೆ (Harish Rana) ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೋಮಾ ಮತ್ತು ಬ್ರೈನ್ ಡೆಡ್ ಎಂಬ ಎರಡು ವೈದ್ಯಕೀಯ ಸ್ಥಿತಿಗಳ ಬಗ್ಗೆ ಚರ್ಚೆ ಹೆಚ್ಚಾಗಿದೆ. ಇವು ಎರಡೂ ಗಂಭೀರ ಸ್ಥಿತಿಗಳಾಗಿದ್ದರೂ, ವೈದ್ಯಕೀಯ ಹಾಗೂ ಕಾನೂನು ದೃಷ್ಟಿಯಿಂದ ದೊಡ್ಡ ವ್ಯತ್ಯಾಸಗಳಿವೆ. ಈ ಪ್ರಕರಣದಿಂದ ಒಂದು ಪ್ರಮುಖ ಪ್ರಶ್ನೆ ಎದುರಾಗಿದೆ. ಹರೀಶ್ ರಾಣಾ ಸುಮಾರು 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಹಾಸಿಗೆಯಲ್ಲೇ ಇದ್ದು, ಎಐಐಎಂಎಸ್ ವೈದ್ಯರ ಮೆಡಿಕಲ್ ಬೋರ್ಡ್ ಅವರು ಪರಿಶೀಲಿಸಿ, ಅವರ ಚೇತರಿಕೆಯ ಸಾಧ್ಯತೆ ಇಲ್ಲ ಎಂದು ತಿಳಿಸಿತ್ತು. ಹಾಗಾಗಿ ದಯಾಮರಣಕ್ಕೆ ನ್ಯಾಯಾಲಯದ ಅನುಮತಿ ಅಗತ್ಯವಾಯಿತು. ಆದರೆ ಯಾರಾದರೂ “ಬ್ರೈನ್ ಡೆಡ್” ಆಗಿದ್ದರೆ ಸಾಮಾನ್ಯವಾಗಿ ನ್ಯಾಯಾಲಯದ ಅನುಮತಿ ಬೇಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಬೇರೆ ವಿಧಾನ ಅನುಸರಿಸಲಾಗುತ್ತದೆ ಮತ್ತು ಅಂಗದಾನಕ್ಕೂ ಅನುಮತಿ ನೀಡಬಹುದು. ಆದರೆ ಕೋಮಾ ಮತ್ತು ಬ್ರೈನ್ ಡೆಡ್ ನಡುವಿನ ವ್ಯತ್ಯಾಸವೇನು, ಈ ಎರಡು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಹಾಗೂ ಕಾನೂನು ನಿರ್ಧಾರಗಳು ಏಕೆ ಬೇರೆಬೇರೆ ಆಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಕೋಮಾ ಎಂದರೇನು?
ಸಾಮಾನ್ಯವಾಗಿ ಕೋಮಾ ಎನ್ನುವುದು ಗಂಭೀರವಾದ ಮೆದುಳಿನ ಸ್ಥಿತಿ. ಈ ಸಂದರ್ಭದಲ್ಲಿ ವ್ಯಕ್ತಿ ಗಾಢ ಅಚೇತನ ಸ್ಥಿತಿಗೆ ಹೋಗುತ್ತಾನೆ. ಅವನು ಕಣ್ಣು ತೆರೆಯಲು ಸಾಧ್ಯವಿಲ್ಲ, ಮಾತನಾಡಲು ಸಾಧ್ಯವಿಲ್ಲ ಮತ್ತು ದೇಹದ ಚಲನೆಯೂ ಇರುವುದಿಲ್ಲ. ಆದರೆ ಈ ಸ್ಥಿತಿಯಲ್ಲಿ ಮೆದುಳಿನ ಕೆಲವು ಭಾಗಗಳು ಇನ್ನೂ ಕಾರ್ಯನಿರ್ವಹಿಸುತ್ತಿರುತ್ತವೆ. ರೋಗಿ ಉಸಿರಾಡುತ್ತಿರುತ್ತಾನೆ ಅವನ ಹೃದಯದ ಬಡಿತ ನಿಂತಿರುವುದಿಲ್ಲ. ಕೆಲವರು ಕೆಲವು ದಿನಗಳು, ವಾರಗಳು ಅಥವಾ ತಿಂಗಳುಗಳ ನಂತರ ಕೋಮಾದಿಂದ ಹೊರಬರುವ ಸಾಧ್ಯತೆ ಇರುತ್ತದೆ. ಕೆಲ ಸಂದರ್ಭಗಳಲ್ಲಿ ವರ್ಷಗಳ ಕಾಲವೂ ಇದೆ ಸ್ಥಿತಿ ಮುಂದುವರಿಯಬಹುದು. ವೈದ್ಯರು ಸಾಮಾನ್ಯವಾಗಿ ರೋಗಿಯ ಸ್ಥಿತಿಯನ್ನು ನೋಡಿ, ಕೋಮಾ ಎಷ್ಟು ಕಾಲ ಇರಬಹುದು ಮತ್ತು ಚೇತರಿಕೆಯ ಸಾಧ್ಯತೆ ಏನು ಎಂದು ಅಂದಾಜು ಮಾಡುತ್ತಾರೆ. ಆದರೆ ಕೆಲವೊಮ್ಮೆ ನಿಖರವಾಗಿ ಹೇಳುವುದು ಕೂಡ ಕಷ್ಟವಾಗಬಹುದು.
ಬ್ರೈನ್ ಡೆಡ್ ಎಂದರೇನು?
ಸಾಮಾನ್ಯವಾಗಿ ಬ್ರೈನ್ ಡೆತ್ ಎನ್ನುವುದು ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ ಸ್ಥಿತಿ. ಈ ಸಂದರ್ಭದಲ್ಲಿ ಮೆದುಳಿನ ಎಲ್ಲಾ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತವಾಗಿರುತ್ತವೆ. ವೈದ್ಯರ ವಿಶೇಷ ತಂಡ ಪರೀಕ್ಷೆ ನಡೆಸಿ, ವ್ಯಕ್ತಿಯನ್ನು “ಬ್ರೈನ್ ಡೆಡ್” ಎಂದು ಘೋಷಿಸುತ್ತದೆ. ವೈದ್ಯಕೀಯ ಮತ್ತು ಕಾನೂನು ದೃಷ್ಟಿಯಿಂದ ಇದನ್ನು ಮರಣವೆಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಂಗದಾನ ಮಾಡಲು ಸಹ ಕಾನೂನು ಅನುಮತಿ ದೊರೆಯುತ್ತದೆ.
ದೆಹಲಿ ಜಿಬಿ ಪಂತ್ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ದಲ್ಜೀತ್ ಸಿಂಗ್ ಅವರ ಪ್ರಕಾರ, ವೈದ್ಯರು ಹಲವು ನ್ಯೂರಾಲಜಿಕಲ್ ಪರೀಕ್ಷೆಗಳ ಮೂಲಕ ರೋಗಿ ಕೋಮಾ ಸ್ಥಿತಿಯಲ್ಲಿದ್ದಾನೆಯೋ ಅಥವಾ ಬ್ರೈನ್ ಡೆಡ್ ಆಗಿದೆಯೋ ಎಂದು ನಿರ್ಧರಿಸುತ್ತಾರೆ. ಬ್ರೈನ್ ಡೆಡ್ ಆಗಿದ್ದರೆ ಕಾನೂನು ಪ್ರಕಾರ ವ್ಯಕ್ತಿಯನ್ನು ಮೃತ ಎಂದು ಪರಿಗಣಿಸಲಾಗುತ್ತದೆ. ಆದರೆ ಕೋಮಾ ಸ್ಥಿತಿಯಲ್ಲಿ ಚೇತರಿಕೆಯ ಸಾಧ್ಯತೆ ಇರುವುದರಿಂದ ವ್ಯಕ್ತಿಯನ್ನು ಮೃತ ಎಂದು ಪರಿಗಣಿಸಲಾಗುವುದಿಲ್ಲ.
ಕೋಮಾ ಪ್ರಕರಣಗಳಲ್ಲಿ ನ್ಯಾಯಾಲಯದ ಅನುಮತಿ ಏಕೆ ಅಗತ್ಯ?
ಸಾಮಾನ್ಯವಾಗಿ ಕೋಮಾ ಸ್ಥಿತಿಯಲ್ಲಿ ರೋಗಿಯಲ್ಲಿ ಚೇತರಿಕೆಯ ಸಾಧ್ಯತೆ ಇರುವುದರಿಂದ ಲೈಫ್ ಸಪೋರ್ಟ್ ವ್ಯವಸ್ಥೆಯನ್ನು ತೆಗೆದುಹಾಕುವುದು ಸೂಕ್ಷ್ಮ ಹಾಗೂ ಕಾನೂನು ಸಂಬಂಧಿತ ವಿಷಯವಾಗುತ್ತದೆ. ವೈದ್ಯರು ಅಥವಾ ಕುಟುಂಬ ಸದಸ್ಯರು ಸ್ವತಃ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಅನುಮತಿ ಪಡೆಯಬೇಕು. ನ್ಯಾಯಾಲಯವು ವೈದ್ಯಕೀಯ ಮಂಡಳಿಯ ವರದಿ, ರೋಗಿಯ ಸ್ಥಿತಿ ಮತ್ತು ಚೇತರಿಕೆಯ ಸಾಧ್ಯತೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತದೆ. ಹೀಗಾಗಿ ಕೋಮಾ ಮತ್ತು ಬ್ರೈನ್ ಡೆಡ್ ಎರಡೂ ಗಂಭೀರ ವೈದ್ಯಕೀಯ ಸ್ಥಿತಿಗಳಾಗಿದ್ದರೂ, ಮೆದುಳಿನ ಕಾರ್ಯ ಮತ್ತು ಕಾನೂನು ಮಾನ್ಯತೆಯ ದೃಷ್ಟಿಯಿಂದ ಅವುಗಳಲ್ಲಿ ಪ್ರಮುಖ ವ್ಯತ್ಯಾಸಗಳಿವೆ.
ಪಾಟ್ನಾ, ಮಾರ್ಚ್ 14: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಆಗಮನಕ್ಕೂ ಮೊದಲು ಬೇಗುಸರೈನಲ್ಲಿರುವ ಹೆಲಿಪ್ಯಾಡ್ನೊಳಗೆ ನುಗ್ಗಿದ ಗೂಳಿ ಕೆಲಕಾಲ ಆತಂಕ ಸೃಷ್ಟಿಸಿತು. ಸಮೃದ್ಧಿ ಯಾತ್ರೆಯ ಭಾಗವಾಗಿ ಸಿಎಂ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾಗ ನಡೆದ ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹೆಲಿಪ್ಯಾಡ್ಗೆ ನುಗ್ಗಿದ ಗೂಳಿ ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಹೆದರಿದ ಪೊಲೀಸರು ಜೀವ ಉಳಿಸಿಕೊಳ್ಳಲು ಮೈದಾನದಿಂದ ಹೊರಗೆ ಓಡಿದ್ದಾರೆ. ಮುಖ್ಯಮಂತ್ರಿ ಆಗಮನಕ್ಕೂ ಮುನ್ನ ಸ್ಥಳವನ್ನು ಸುರಕ್ಷಿತಗೊಳಿಸಲಾಗಿತ್ತು.
ಹೆಲಿಪ್ಯಾಡ್ ಪ್ರದೇಶವು ಬಿದಿರಿನ ಬ್ಯಾರಿಕೇಡ್ಗಳಿಂದ ಸುತ್ತುವರೆದಿತ್ತು. ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೂ ಹೇಗೋ ಗೂಳಿ ಎಂಟ್ರಿ ಕೊಟ್ಟಿದೆ. ಈ ಘಟನೆಯ ಸಮಯದಲ್ಲಿ ಯಾರಿಗೂ ಗಾಯವಾಗದಿದ್ದರೂ, ಅನಿರೀಕ್ಷಿತವಾಗಿ ಒಳಗೆ ನುಗ್ಗಿದ ಗೂಳಿ ಹೆಲಿಪ್ಯಾಡ್ನಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಮನಗರ, (ಮಾರ್ಚ್ 14): ಇದೇ ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 2026ನೇ ಸಾಲಿನ ರಾಜ್ಯ ಬಜೆಟ್ ಗೆ ಆಡಳಿತರೂಢ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೌದು…ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಮಾತನಾಡಿ ರಾಜ್ಯ ಬಜೆಟ್ ನನಗೆ ಸಮಾಧಾನ ತಂದಿಲ್ಲ. ಮುಖ್ಯಮಮಂತ್ರಿಯವರ ಮೇಲಿನ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಬಜೆಟ್ ಬಗ್ಗೆ ಅಸಮಾಧಾನಗೊಂಡಿರುವುದ್ಯಾಕೆ ಎನ್ನುವುದಕ್ಕೆ ಇಕ್ಬಾಲ್ ಹುಸೇನ್ ಕಾರಣ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರಿಂದ ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ರಾಮನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಇಕ್ಬಾಲ್ ಹುಸೇನ್, ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಯಾರು ಏನಾದರೂ ಹೇಳಲಿ. ನಾನು ಸಿಎಂ ಹಾಗೂ ಡಿಸಿಎಂ ಇಬ್ಬರ ಜೊತೆಗೂ ಚರ್ಚೆ ಮಾಡಿದ್ದೇನೆ. ನನ್ನ ಕ್ಷೇತ್ರದ ಬಗ್ಗೆ ತೋಡಿಕೊಂಡ ನೋವಿಗೆ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
2026 ರ ಐಪಿಎಲ್ಗೆ (IPL 2026) ದಿನಗಣನೆ ಆರಂಭವಾಗಿದೆ. ಲೀಗ್ನ 19 ನೇ ಸೀಸನ್ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಈ ಸೀಸನ್ಗಾಗಿ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಬಿಸಿಸಿಐ ಆರಂಭಿಕ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಏತನ್ಮಧ್ಯೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶಿಬಿರದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸೀಸನ್ ಆರಂಭಕ್ಕೂ ಮುನ್ನ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಾಜಿ ನಾಯಕ ರೋಹಿತ್ ಶರ್ಮಾಗೆ (Rohit Sharma) ಎಚ್ಚರಿಕೆ ನೀಡಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸೋಶಿಯಲ್ ಮೀಡಿಯಾ ಪೋಸ್ಟ್ ಗಾಳಿಯಂತೆ ಹಬ್ಬವುದನ್ನು ಗಮನಿಸಿದ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ಈ ಪೋಸ್ಟ್ಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವ ಕೆಲಸ ಮಾಡಿದೆ.
ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್?
2026 ರ ಐಪಿಎಲ್ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಡಿದೆ. ವೈರಲ್ ಆಗಿರುವ ಪೋಸ್ಟ್ನಲ್ಲಿ, ಐಪಿಎಲ್ನಲ್ಲಿ ರನ್ ಬರ ಎದುರಿಸುತ್ತಿರುವ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಎಚ್ಚರಿಕೆ ನೀಡಿದ್ದು, ಈ ಬಾರಿ ರನ್ ಗಳಿಸದಿದ್ದರೆ ಅವರನ್ನು ತಂಡದಲ್ಲಿ ಆಡಿಸಲು ಸಾಧ್ಯವಿಲ್ಲ ಎಂದು ಮುಂಬೈ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ರೋಹಿತ್ ಅವರ ಪ್ರದರ್ಶನದ ಬಗ್ಗೆ ಮ್ಯಾನೇಜ್ಮೆಂಟ್ ಕೂಡ ಅಸಮಾಧಾನಗೊಂಡಿದೆ ಎಂದು ಬರೆಯಲಾಗಿದೆ.
ಆಕ್ಸಿಜನ್ ಎಂಬ ಹೆಸರಿನ ಖಾತೆಯಿಂದ ಈ ಪೋಸ್ಟ್ ಪ್ರಕಟವಾಗಿದ್ದು, ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತ ಈ ಪೋಸ್ಟ್ ನೋಡಿದ ರೋಹಿತ್ ಅಭಿಮಾನಿಗಳು ಪಾಂಡ್ಯ ವಿರುದ್ಧ ಕಿಡಿಕಾರಲು ಶುರು ಮಾಡಿದ್ದಾರೆ. ಪಾಂಡ್ಯ ಮೇಲೆ ನಿಂದನೆಗಳ ಸುರಿಮಳೆಗೈಯಲಾರಂಭಿಸಿದ್ದಾರೆ. ಈ ಪೋಸ್ಟ್ ನೋಡಿ ಕೂಡಲೇ ಎಚ್ಚೆತ್ತುಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಹಾರ್ದಿಕ್ ಪಾಂಡ್ಯರ GIF ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ‘ಹಾಗೆನಾದರೂ ಇದೆಯಾ’ ಎಂದು ಹಾರ್ದಿಕ್ರನ್ನು ತಮಾಷೆಯಾಗಿ ಪ್ರಶಸ್ತಿದೆ. ಇದರ ಜೊತೆಗೆ ತಮಾಷೆಯ ಎಮೋಜಿಯನ್ನು ಹಂಚಿಕೊಂಡಿದೆ. ಅಂದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಪೋಸ್ಟ್ನಲ್ಲಿ ನಿಜಾಂಶವಿಲ್ಲ. ಇದೆಲ್ಲ ಶುದ್ಧ ಕಟ್ಟುಕತೆ ಎಂದು ಮುಂಬೈ ಇಂಡಿಯನ್ಸ್ ಖಚಿತ ಪಡಿಸಿದೆ.
ವಾಸ್ತವವಾಗಿ 2013 ರಿಂದ ಯಾವುದೇ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ 500 ರನ್ ಗಳಿಸಿಲ್ಲ. ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳನ್ನಾಡಿದ್ದ ರೋಹಿತ್ 418 ರನ್ ಕಲೆಹಾಕಿದ್ದರು. ಆದಾಗ್ಯೂ ರೋಹಿತ್ ಹಾಗೂ ಹಾರ್ದಿಕ್ ನಡುವೆ ಮನಸ್ತಾಪವಿದೆ ಎಂಬ ಸುಳ್ಳು ಸುದ್ದಿಯನ್ನು ಹುಟ್ಟುಹಾಕಲಾಗಿದೆ. ಇವರಿಬ್ಬರು ಮುಂಬೈ ತಂಡದ ಬೆನ್ನೆಲುಬಾಗಿದ್ದಾರೆ. ರೋಹಿತ್ ನಾಯಕತ್ವದಲ್ಲೇ ಮುಂಬೈ ಐದು ಬಾರಿ ಚಾಂಪಿಯನ್ ಆಗಿದೆ. ಹೀಗಿರುವಾಗ ರೋಹಿತ್ ಶರ್ಮಾ ಬಗ್ಗೆ ಯಾರು ಈ ರೀತಿಯಾಗಿ ಮಾತನಾಡಲು ಸಾಧ್ಯವೆ ಇಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 14: ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ದೇಶದಲ್ಲಿ ಬೇಕಾದಷ್ಟು ಎಲ್ಪಿಜಿ (LPG Cylinder Booking) ಸಂಗ್ರಹವಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೂ ಗ್ರಾಹಕರಿಗೆ ಆ್ಯಪ್ ಮೂಲಕ, ಎಸ್ಎಂಎಸ್ ಅಥವಾ ಆನ್ಲೈನ್ ಮೂಲಕ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ಗ್ಯಾಸ್ ಬುಕ್ ಮಾಡಲಾಗದೆ ಜನರು ಪರದಾಡುತ್ತಿದ್ದಾರೆ. ಫೋನ್, ಮಿಸ್ಡ್ ಕಾಲ್, ಆ್ಯಪ್, ವಾಟ್ಸಾಪ್ ಮೂಲಕ ನೀವು ಹೇಗೆ ಸುಲಭವಾಗಿ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ಜಾಗತಿಕ ಯುದ್ಧದ ಪರಿಣಾಮವಾಗಿ ಎಲ್ಲೆಡೆ ಇಂಧನ ಹಾಗೂ ಗ್ಯಾಸ್ ಕೊರತೆ ಎದುರಾಗಿದೆ ಎಂಬ ಸುದ್ದಿಗಳು ಹರಡಿರುವುದರಿಂದ ಅನೇಕ ಮನೆಗಳಲ್ಲಿ ಸಾಮಾನ್ಯಕ್ಕಿಂತ ಮುಂಚಿತವಾಗಿ LPG ಸಿಲಿಂಡರ್ಗಳನ್ನು ಬುಕ್ ಮಾಡಲಾಗುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳು LPG ಬುಕಿಂಗ್ಗಳ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಗ್ರಾಹಕರಿಗೆ ಲಾಕ್-ಇನ್ ಅವಧಿ ಅಥವಾ ಬುಕಿಂಗ್ ಅನ್ನು ಹಿಂದಿನ 25 ದಿನಗಳಿಗೆ ಹೋಲಿಸಿದರೆ 45 ದಿನಗಳಿಗೆ ಹೆಚ್ಚಿಸಲಾಗಿದೆ.
ಭಾರತ್ ಗ್ಯಾಸ್ ಬುಕಿಂಗ್:
ಭಾರತ್ ಗ್ಯಾಸ್ ಗ್ರಾಹಕರು IVRS, SMS, WhatsApp, ಮೊಬೈಲ್ ಅಪ್ಲಿಕೇಶನ್ಗಳು ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ LPG ಸಿಲಿಂಡರ್ ರೀಫಿಲ್ಲಿಂಗ್ ಬುಕ್ ಮಾಡಬಹುದು.
IVRS ಬುಕಿಂಗ್: ರೀ-ಫಿಲ್ಲಿಂಗ್ ವಿನಂತಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345 ಗೆ ಕರೆ ಮಾಡಿ.
SMS ಬುಕಿಂಗ್: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345ಗೆ LPG ಎಂದು ಸಂದೇಶವನ್ನು ಕಳುಹಿಸಿ.
WhatsApp ಬುಕಿಂಗ್: ನಿಮ್ಮ ಕಾಂಟ್ಯಾಕ್ಟ್ನಲ್ಲಿ 1800224344 (BPCL ಸ್ಮಾರ್ಟ್ಲೈನ್) ಅನ್ನು ಸೇವ್ ಮಾಡಿಕೊಳ್ಳಿ. ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು Hi ಅಥವಾ Book ಎಂದು ಮೆಸೇಜ್ ಕಳುಹಿಸಿ.
ಮೊಬೈಲ್ ಅಪ್ಲಿಕೇಶನ್: ಪ್ಲೇ ಸ್ಟೋರ್ನಿಂದ ಭಾರತ್ಗ್ಯಾಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ. ನಂತರ ರೀಫಿಲ್ ಸಿಲಿಂಡರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಇತರ ಅಪ್ಲಿಕೇಶನ್ಗಳು: UMANG ಅಪ್ಲಿಕೇಶನ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.
ಆನ್ಲೈನ್ ಸೇವೆಗಳು: ಗ್ರಾಹಕರು ಹಲೋ BPCL ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ಭಾರತ್ ಗ್ಯಾಸ್ ಮೂಲಕ ರೀಫಿಲ್ಲಿಂಗ್ ವಿನಂತಿಗಳನ್ನು ಸಲ್ಲಿಸಬಹುದು.
ಹುಬ್ಬಳ್ಳಿ, ಮಾರ್ಚ್ 14: ರಾಜ್ಯದಲ್ಲಿ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ (gas cylinder) ಪೂರೈಕೆಗೆ ಸಮಸ್ಯೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಅಭಾವವಿದ್ದು, ಹೋಟೆಲ್ ಮಾಲೀಕರು ದೊಡ್ಡಮಟದಲ್ಲಿ ಪರದಾಡುತ್ತಿದ್ದಾರೆ. ಆದರೆ ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆಯಾಗುತ್ತಿದ್ದು, ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಪರದಾಡುತ್ತಿದ್ದಾರೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮುಂದೆ ತಮಗೆ ಎಲ್ಲಿ ಸಿಲಿಂಡರ್ ಸಿಗೋದಿಲ್ವೋ ಅನ್ನೋ ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ತಗೆದುಕೊಂಡು ಬರ್ತಿದ್ದು, ಹೊಸ ಸಿಲಿಂಡರ್ಗಾಗಿ ಬೇಡಿಕೆ ಇಡ್ತಿದ್ದಾರೆ. ಇದೇ ಕಾರಣಕ್ಕೆ ಅನೇಕರು ಇಂದು ಹುಬ್ಬಳ್ಳಿಯಲ್ಲಿ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ ಹಾಕಿದರು. ತಮಗೆ ಸಿಲಿಂಡರ್ ಬೇಕು ಅಂತ ಏಜನ್ಸಿ ಸಿಬ್ಬಂದಿ ವಿರುದ್ದ ವಾಗ್ವಾದ ನಡೆಸಿದರು.
ಸಿಬ್ಬಂದಿ ಹರಸಾಹಸ
ಹುಬ್ಬಳ್ಳಿ ನಗರದ ಕಾರವಾರ ರಸ್ತೆಯಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಮುಂದೆ ಇಂದು ಮುಂಜಾನೆ ಬಾಗಿಲು ತಗೆಯುವ ಮೊದಲೇ ಅನೇಕರು ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ತಾವು ಅಷ್ಟೇ ಅಲ್ಲದೇ ಸಿಲಿಂಡರ್ಗಳನ್ನು ಕೂಡ ಸರದಿ ಸಾಲಿನಲ್ಲಿ ಇಟ್ಟಿದ್ದರು. ತಾವು ಖಾಲಿ ಸಿಲಿಂಡರ್ ತಂದಿದ್ದೇವೆ. ತಮಗೆ ಖಾಲಿ ಸಿಲಿಂಡರ್ ಪಡೆದು, ತುಂಬಿರೋ ಸಿಲಿಂಡರ್ ಕೊಡಿ ಅಂತ ಕೇಳುತ್ತಿದ್ದರು. ಆದರೆ ನೀವು ಸಿಲಿಂಡರ್ ಬುಕ್ ಮಾಡಬೇಕು. ನಾವು ನಿಮ್ಮ ಮನೆಗೆ ಸಿಲಿಂಡರ್ ತಂದು ಕೊಡ್ತೇವೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದರು ಜನರು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಸಿಲಿಂಡರ್ ಸಿಗದೇ ಇದ್ದಿದ್ದಕ್ಕೆ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು. ಗ್ರಾಹಕರನ್ನು ಸಮಾಧಾನ ಮಾಡಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಆದರೆ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ಗೆ ಸಮಸ್ಯೆಯಾಗಿಲ್ಲ. ಸಿಲಿಂಡರ್ ಬುಕ್ ಆದವರ ಮನೆಗೆ ಸಿಲಿಂಡರ್ ಡೆಲಿವರಿ ಆಗುತ್ತಿದೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ಸಿಲಿಂಡರ್ ಬುಕ್ಗೆ ಹೆಚ್ಚಿನ ಜನರು ಮುಂದಾಗಿದ್ದರಿಂದ ಬುಕ್ಕಿಂಗ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಹಗಲು ಹೊತ್ತಲ್ಲಿ ಬುಕ್ ಮಾಡಲು ಮುಂದಾದವರಿಗೆ ಶಾಕ್ ಆಗ್ತಿದ್ದು, ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಹೀಗಾಗಿ ಗ್ಯಾಸ್ ಏಜೆನ್ಸಿಗಳ ಅಂಗಡಿಗಳಿಗೆ ತಮ್ಮ ಖಾಲಿ ಸಿಲಿಂಡರ್ ಸಮೇತ ಬರ್ತಿರೋ ಜನರು, ತಮಗೆ ಸಿಲಿಂಡರ್ ಕೊಡಿ ಅಂತ ಪಟ್ಟು ಹಿಡಿಯುತ್ತಿದ್ದಾರೆ. ಆದರೆ ಬುಕ್ ಮಾಡಿದವರಿಗೆ ಮಾತ್ರ ಸಿಲಿಂಡರ್ ಕೊಡ್ತೇವೆ ಅಂತ ಸಿಬ್ಬಂದಿ ಹೇಳ್ತಿದ್ದಾರೆ. ಇದು ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.
ಮಿಸ್ ಕಾಲ್ ಕೊಟ್ಟರು ಸಿಲಿಂಡರ್ ಬುಕ್ ಆಗ್ತಿಲ್ಲ. ಮತ್ತೊಂದೆಡೆ ವಾಟ್ಸಪ್, ಅಮೆಜಾನ್ನಿಂದ ಕೂಡ ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದೀಗ ಹಬ್ಬ ಬಂದಿದೆ. ತಮಗೆ ಗ್ಯಾಸ್ ಸಿಲಿಂಡರ್ ನೀಡಬೇಕು ಅಂತ ಗ್ರಾಹಕರು ಪಟ್ಟು ಹಿಡದಿದ್ದರೆ, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕೇಳಿದರೆ ಸಿಲಿಂಡರ್ ಅಭಾವವಿಲ್ಲ. ಬುಕ್ ಮಾಡಿದ ಪ್ರತಿಯೊಬ್ಬರಿಗೂ ಸಿಲಿಂಡರ್ ನೀಡ್ತಿದ್ದೇವೆ. ಆದರೆ ಸರ್ವರ್ ಡೌನ್ನಿಂದ ಸಿಲಿಂಡರ್ ಬುಕ್ ಆಗೋದು ವಿಳಂಬವಾಗುತ್ತಿದೆ. ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಏಜೆನ್ಸಿಯವರು ಜನರಿಂದ ಸ್ಥಳದಲ್ಲಿಯೇ ಹಣ ಪಡೆದು, ಅನೇಕರಿಗೆ ಸಿಲಿಂಡರ್ ಕೊಟ್ಟು ಕಳುಹಿಸಿದ್ದಾರೆ.
ಸದ್ಯ ಗೃಹ ಬಳಕೆ ಸಿಲಿಂಡರ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸರ್ವರ್ ಡೌನ್ನಿಂದ ಬುಕ್ ಆಗದೇ ಇರೋದರಿಂದ ಗ್ರಾಹಕರು ಮತ್ತು ಏಜೆನ್ಸಿ ಸಿಬ್ಬಂದಿ ನಡುವೆ ವಾಗ್ವಾದಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ.