ಕಾಂಗ್ರೆಸ್​ ಪಕ್ಷದ ಆಪದ್ಭಾಂಧವ ಸತೀಶನ್ ಈಗ ಕೇರಳದ ಸಿಎಂ; ಹೇಗಿತ್ತು ಅವರ ರಾಜಕೀಯ ಜೀವನ? – Kannada News | Kerala CM VD Satheesan Political Journey Saviour of Congress 6 time MLA and grassroots worker

ತಿರುವನಂತಪುರಂ, ಮೇ 14: 10 ದಿನಗಳ ಕುತೂಹಲ, ಆಂತರಿಕ ಕಲಹ, ಲಾಬಿ, ವಿಪಕ್ಷಗಳ ಟೀಕೆಯ ನಡುವೆ ಕೇರಳಕ್ಕೆ ಕೊನೆಗೂ ಓರ್ವ ನಾಯಕ ಸಿಕ್ಕಿದ್ದಾರೆ. ಕಾಂಗ್ರೆಸ್ ಇಂದು ವಿ.ಡಿ. ಸತೀಶನ್ (VD Satheesan) ಅವರನ್ನು ಕೇರಳ ಸಿಎಂ ಎಂದು ಘೋಷಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಯುಡಿಎಫ್​ ಭರ್ಜರಿ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್​​ನಲ್ಲಿ ಮುಖ್ಯಮಂತ್ರಿಯ ಆಯ್ಕೆ ಅಂತಿಮವಾಗಿರಲಿಲ್ಲ. ಕೇರಳದ ಕಾಂಗ್ರೆಸ್​​ನಲ್ಲೇ ಸತೀಶನ್ ಮತ್ತು ಕೆ.ಸಿ. ವೇಣುಗೋಪಾಲ್ ಬೆಂಬಲಿಗರ ನಡುವೆ ಲಾಬಿ ಶುರುವಾಗಿತ್ತು. ಕಾಂಗ್ರೆಸ್ ಹೈಕಮಾಂಡ್​​ಗೆ ತೀರಾ ಆಪ್ತರಾಗಿರುವ ಕೆ.ಸಿ. ವೇಣುಗೋಪಾಲ್ ಅವರೇ ಈ ಬಾರಿ ಸಿಎಂ ಆಗಲಿದ್ದಾರೆ ಎಂಬ ವದಂತಿಗಳ ನಡುವೆಯೂ ಸತೀಶನ್ ತನ್ನ ಬೆಂಬಲಿಗರನ್ನು ಮುಂದಿಟ್ಟುಕೊಂಡು ಸಿಎಂ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ, ಕಾಂಗ್ರೆಸ್ ಗುರುವಾರ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಪಕ್ಷದ ಹೈಕಮಾಂಡ್, ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ನಾಯಕರು ಮತ್ತು ಯುಡಿಎಫ್ ಮಿತ್ರಪಕ್ಷಗಳನ್ನು ಒಳಗೊಂಡ ದೀರ್ಘ ಸುತ್ತಿನ ಚರ್ಚೆಯ ನಂತರ ಸತೀಶನ್ ಅವರ ಹೆಸರು ಘೋಷಿಸಲಾಯಿತು.

ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಕೂಡ ರೇಸ್​​ನಲ್ಲಿದ್ದರೂ ಹಲವು ರಾಜಕೀಯ ಅಂಶಗಳು ಅಂತಿಮವಾಗಿ ಸತೀಶನ್ ಪರವಾಗಿ ಕೆಲಸ ಮಾಡಿದವು. ಕಳೆದ 5 ವರ್ಷಗಳಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಸರ್ಕಾರದ ವಿರುದ್ಧ ಯುಡಿಎಫ್ ನಡೆಸಿದ ಅಭಿಯಾನದ ಪ್ರಮುಖ ನಾಯಕರಾಗಿದ್ದ ಸತೀಶನ್ ಅವರಿಗೆ ಅದೇ ಪ್ಲಸ್ ಪಾಯಿಂಟ್ ಆಯಿತು. ಅವರನ್ನು ಸಿಎಂ ಆಗಿ ಆಯ್ಕೆ ಮಾಡಲು ಅದೂ ಮುಖ್ಯ ಕಾರಣ.

ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್​ ದೇವರನಾಡಿನ ನೂತನ ಮುಖ್ಯಮಂತ್ರಿ

2021ರಿಂದ ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭೆಯ ಒಳಗೆ ಮತ್ತು ಹೊರಗೆ ಪಿಣರಾಯಿ ವಿಜಯನ್ ಸರ್ಕಾರದ ಮೇಲೆ ಕಾಂಗ್ರೆಸ್ ಪರವಾಗಿ ಸತೀಶನ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ, ತಮ್ಮ ಇಮೇಜ್ ಸೃಷ್ಟಿಸಿಕೊಂಡಿದ್ದರು. ಹಾಗೇ, 2026ರ ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸತೀಶನ್ ಭವಿಷ್ಯ ನುಡಿದಿದ್ದರು. ಅದರಂತೆ ಯುಡಿಎಫ್ 102 ಸ್ಥಾನಗಳನ್ನು ಗಳಿಸಿ, ಅದರಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಗಳಿಸಿ ಕೇರಳದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22 ಸ್ಥಾನಗಳನ್ನು ಪಡೆದರೆ, ಕೇರಳ ಕಾಂಗ್ರೆಸ್ (ಜೋಸೆಫ್) 7 ಸ್ಥಾನಗಳನ್ನು ಗೆದ್ದಿದೆ. ಕ್ರಾಂತಿಕಾರಿ ಸಮಾಜವಾದಿ ಪಕ್ಷ ಮೂರು ಸ್ಥಾನಗಳನ್ನು ಮತ್ತು ಕೇರಳ ಕಾಂಗ್ರೆಸ್ (ಜಾಕೋಬ್) 1 ಸ್ಥಾನವನ್ನು ಗೆದ್ದಿದೆ.

ಸತೀಶನ್ ಅವರ ರಾಜಕೀಯ ಪ್ರಯಾಣವು ಕಾಲೇಜು ಕ್ಯಾಂಪಸ್‌ಗಳಲ್ಲಿಯೇ ಪ್ರಾರಂಭವಾಯಿತು. ಅವರು 1986-87ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯದರ್ಶಿಯಾದರು. ಆರಂಭದಲ್ಲಿಯೇ ನುರಿತ ಸಂಘಟಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರಾಗಿ ಮತ್ತು ನಂತರ ಕೇರಳ ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುವ ಮೂಲಕ ಕಾಂಗ್ರೆಸ್‌ನೊಳಗಿನ ಅವರ ವೃತ್ತಿಜೀವನವು ಉನ್ನತ ಮಟ್ಟಕ್ಕೆ ಏರಿತು. ಕಾನೂನು ಪದವೀಧರರಾದ ಸತೀಶನ್, ರಾಜಕೀಯಕ್ಕೆ ಸೇರುವ ಮೊದಲು ಕೇರಳ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ: ಕೇರಳಂ ಸಿಎಂ: ರಾಹುಲ್, ಸೋನಿಯಾ ಗಾಂಧಿ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣಗಳೇನು?

2021ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಭಾರೀ ಸೋಲಿನ ನಂತರ ವಿ.ಡಿ. ಸತೀಶನ್ ವಿರೋಧ ಪಕ್ಷದ ನಾಯಕರಾದರು. ಆದರೆ, ವಿಪಕ್ಷ ನಾಯಕರಾದರೂ ಅವರು ಆಗಿನಿಂದಲೇ ಮತ್ತೆ ಕೇರಳದಲ್ಲಿ ಪಕ್ಷ ಕಟ್ಟುವ ಕೆಲಸ ಶುರು ಮಾಡಿದ್ದರು. ಸತೀಶನ್ ಅವರ ನೆಹರೂ ಅವರ ವಿಚಾರಗಳಿಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷವನ್ನು ಪುನರ್ನಿರ್ಮಿಸಲು ಬಯಸಿದ್ದರು.

2021ರಲ್ಲಿ ಎಡ ಸರ್ಕಾರ ಅಧಿಕಾರಕ್ಕೆ ಮರಳಿದ ನಂತರ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಕತೆ ಮುಗಿಯುತು ಎಂದು ಭಯಪಟ್ಟರು. ಈ ಸೋಲು ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಇದರಿಂದಾಗಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಿ, ಆಂತರಿಕ ಹೋರಾಟಗಳಲ್ಲಿ ಸಿಲುಕಿಕೊಂಡಂತೆ ಕಾಣುತ್ತಿತ್ತು. ಆದರೆ, ಸತೀಶನ್ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಪಕ್ಷದ ಚಟುವಟಿಕೆಗಳನ್ನು ಆರಂಭಿಸಿದರು. ಪಕ್ಷದೊಳಗಿನ ಬಣ ರಾಜಕೀಯದಿಂದ ಪಕ್ಷದ ಸಂಘಟನೆಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು.

ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲರಂತಹ ಹಿರಿಯ ನಾಯಕರೊಂದಿಗೆ ಸಂಬಂಧ ಹೊಂದಿರುವ ಗುಂಪುಗಳ ಪ್ರಾಬಲ್ಯವನ್ನು ಸತೀಶನ್ ಬಹಿರಂಗವಾಗಿ ಪ್ರಶ್ನಿಸಿದರು. ಆಂತರಿಕ ಪೈಪೋಟಿಯು ವಿರೋಧ ಪಕ್ಷಗಳಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಹಾನಿ ಮಾಡುತ್ತಿದೆ ಎಂದು ಅವರು ವಾದಿಸಿದರು. ಸತೀಶನ್ ಸ್ವತಃ ಯಾವುದೇ ಪ್ರಮುಖ ಕಾಂಗ್ರೆಸ್ ಬಣದ ಭಾಗವಾಗಿರಲಿಲ್ಲ. ಅವರು ಪಕ್ಷದ ಇಮೇಜ್ ಕಟ್ಟುವುದರ ಜೊತೆಗೆ ಪಕ್ಷದೊಳಗೆ ತಮ್ಮ ಇಮೇಜನ್ನು ಗಟ್ಟಿಗೊಳಿಸಿಕೊಳ್ಳುವುದರತ್ತ ಗಮನವಿಟ್ಟಿದ್ದರು. ಅದರ ಪರಿಣಾಮವೇ ಈಗ ಅವರು ಸಿಎಂ ಆಗಿರುವುದು.
ಕೇರಳದಲ್ಲಿ ಕಾಂಗ್ರೆಸ್ ಆಪತ್ತಿನಲ್ಲಿ ಇದ್ದ ಸಂದರ್ಭದಲ್ಲಿ ಆಪದ್ಭಾಂದವನಂತೆ ಬಂದು ಪಕ್ಷವನ್ನು ಕಟ್ಟಿ, ಬೆಳೆಸಿ, ಕಾರ್ಯಕರ್ತರನ್ನು ಒಗ್ಗೂಡಿಸಿದ ಸತೀಶನ್ ಅವರೇ ಸಿಎಂ ಆಗಬೇಕೆಂದು ಅನೇಕ ಕಾರ್ಯಕರ್ತರು ಹೈಕಮಾಂಡ್​ ಮೇಲೆ ಒತ್ತಡ ಹೇರಿದ್ದರು. ಇದೇ ಕಾರಣಕ್ಕೆ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಕಾರ್ಯಕರ್ತರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂದು ಸತೀಶನ್ ಅವರ ಹೆಸರನ್ನೇ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ.

ಕೇರಳದ ರಾಜಕೀಯ ಸಂಸ್ಕೃತಿಯು ಇನ್ನೂ ನೆಹರೂ ಸಮಾಜವಾದದ ಬಲವಾದ ಅಂಶಗಳನ್ನು ಹೊಂದಿದೆ ಎಂಬುದನ್ನು ಸಂಪೂರ್ಣವಾಗಿ ಅರಿತಿದ್ದ ಸತೀಶನ್, ಕಾಂಗ್ರೆಸ್ ಅನ್ನು ನಿಜವಾದ ಎಡಪಂಥೀಯ ಎಂದು ಪದೇ ಪದೇ ಬಿಂಬಿಸಿದರು. ಇದು ಕೆಲವು ಸಾಂಪ್ರದಾಯಿಕ ಎಡಪಂಥೀಯ ಬೆಂಬಲಿಗರಲ್ಲಿಯೂ ಸಹ ಭರವಸೆಯ ಭಾವನೆಯನ್ನು ಮೂಡಿಸಿತು. ಸತೀಶನ್ ವಿರೋಧ ಪಕ್ಷದ ಪ್ರಚಾರದ ವಿಧಾನವನ್ನು ಸಹ ಬದಲಾಯಿಸಿದರು. ಚುನಾವಣಾ ಪ್ರಚಾರದ ವೇಳೆ ಆಯಾ ಭಾಗಗಳಲ್ಲಿ ಇರುವ ಜ್ವಲ.ತ ಸಮಸ್ಯೆಗಳ ಬಗ್ಗೆ ಸತೀಶನ್ ಅವರ ಟೀಂ ಅಧ್ಯಯನ ಮಾಡುತ್ತಿತ್ತು. ನಂತರ ಅದೇ ವಿಷಯವನ್ನು ಅಲ್ಲಿ ಪ್ರಸ್ತಾಪಿಸಿ ಜನರ ಗಮನಸೆಳೆಯುತ್ತಿದ್ದರು. ಚುನಾವಣಾ ಪ್ರಚಾರದ ವೇಳೆ ತಾವು ಮೈಕ್ ಹಿಡಿದು ಭಾಷಣ ಮಾಡುವುದಕ್ಕಿಂತ ಹೆಚ್ಚಾಗಿ ಸತೀಶನ್ ಜನರ ಕಷ್ಟ, ಸಮಸ್ಯೆಗಳನ್ನು ಆಲಿಸಲು ಆದ್ಯತೆ ನೀಡುತ್ತಿದ್ದರು. ಇದು ಆ ಭಾಗದ ಜನರಿಗೆ ಇವ ನಮ್ಮವನು ಎಂಬ ಭಾವನೆ ಮೂಡಿಸುತ್ತಿತ್ತು. ಇದೆಲ್ಲವೂ ಸತೀಶನ್ ಎಂಬ ತಳಮಟ್ಟದ ಕಾರ್ಯಕರ್ತ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಲು ಹಾದಿಯನ್ನು ಸುಗಮಗೊಳಿಸಿದವು ಎನ್ನಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:53 pm, Thu, 14 May 26

Source link

‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ – Kannada News | What really happened to Jana Nayagan movie why it is not released yet

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡು ರಾಜಕೀಯದಲ್ಲಿ ಇತಿಹಾಸ ಬರೆದಿದ್ದು, ಇದೀಗ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ಕೆಲವು ತಿಂಗಳುಗಳ ಮುಂಚೆ ಪರಿಸ್ಥಿತಿ ಭಿನ್ನವಾಗಿತ್ತು. ಅವರ ರಾಜಕೀಯ ಪಯಣಕ್ಕೆ ಹಲವು ಅಡ್ಡಗಾಲುಗಳು ಎದುರಾಗಿದ್ದವು. ಅವರ ಮೇಲೆ ಸತತ ವಾಗ್ದಾಳಿ, ಚಾರಿತ್ರ್ಯ ವಧೆಯ ಪ್ರಯತ್ನಗಳು ನಡೆದಿದ್ದವು, ಮಾತ್ರವಲ್ಲದೆ, ಅವರ ಸಿನಿಮಾ ‘ಜನ ನಾಯಗನ್’ ಬಿಡುಗಡೆಯನ್ನು ರಾಜಕೀಯ ಪ್ರಭಾವ ಬಳಸಿ ತಡೆಯಲಾಗಿತ್ತು. ಇದು ತಮ್ಮ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿದ್ದರು, ಅಭಿಮಾನಿಗಳು ಸಹ ‘ಜನ ನಾಯಗನ್’ ನೋಡಲು ಕಾತರರಾಗಿದ್ದರು. ಆದರೆ ಸಿನಿಮಾ ಬಿಡುಗಡೆ ಆಗದಂತೆ ತಡೆಯಲಾಯ್ತು. ಈ ಸಿನಿಮಾದ ನಿರ್ಮಾಪಕ ವೆಂಕಟೇಶ್ ಕೆ ನಾರಾಯಣ್ (ಕೆವಿಎನ್ ಪ್ರೊಡಕ್ಷನ್) ಇದೀಗ ತಮ್ಮ ಸಿನಿಮಾದ ಬಿಡುಗಡೆ ನಿಲ್ಲಲು ಕಾರಣವೇನು? ಕಾರಣ ಯಾರು ಎಂದು ತಿಳಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕೆವಿಎನ್, ‘2025ರ ಡಿಸೆಂಬರ್​​ನಲ್ಲಿಯೇ ನಾವು ಸಿಬಿಎಫ್​​ಸಿಗೆ ನಮ್ಮ ಸಿನಿಮಾವನ್ನು ಸಲ್ಲಿಕೆ ಮಾಡಿದ್ದೆವು. ಸಿಬಿಎಫ್​​ಸಿ ಸಮಿತಿಯು ಸಿನಿಮಾವನ್ನು ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಆದರೆ ಅದಾದ ಬಳಿಕ ವ್ಯಕ್ತಿಯೊಬ್ಬರ ದೂರಿನ ಆಧಾರದ ಮೇಲೆ ಸಿನಿಮಾವನ್ನು ರಿವಿಷನ್ ಕಮಿಟಿಗೆ ಕಳಿಸಲು ಮುಂದಾದರು. ಇದು ಸರಿಯಲ್ಲ, ಖಾಸಗಿ ವ್ಯಕ್ತಿಗಳ ದೂರುಗಳನ್ನು ಸಿಬಿಎಫ್​​ಸಿ ಪರಿಗಣಿಸುವಂತಿಲ್ಲ ಮತ್ತು ಸಿನಿಮಾ ಬಿಡುಗಡೆಗೆ ಮುಂಚೆ ಸಲ್ಲಿಕೆ ಆದ ದೂರುಗಳನ್ನು ಮಾನ್ಯ ಮಾಡುವಂತಿಲ್ಲ. ಇದರ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನ್ಯಾಯಾಂಗದಲ್ಲಿವೆ. ಹಾಗಾಗಿ ನಾವು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆವು’ ಎಂದಿದ್ದಾರೆ ಕೆವಿಎನ್.

‘ಆದರೆ ನ್ಯಾಯಾಲಯಕ್ಕೆ ಹೋದ ಬಳಿಕ ನಮಗೆ ಗೊತ್ತಾಗಿದ್ದು, ಸಿನಿಮಾದ ವಿರುದ್ಧ ದೂರು ನೀಡಿರುವುದು ಸಿಬಿಎಫ್​​ಸಿಯ ಸದಸ್ಯನೇ ಒಬ್ಬಾತ ಎಂದು. ಮೊದಲಿಗೆ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಿದ ತಂಡದಲ್ಲಿ ಇದ್ದ ವ್ಯಕ್ತಿಯೇ ಆ ಬಳಿಕ ಸಿನಿಮಾದ ವಿರುದ್ಧ ದೂರು ಸಲ್ಲಿಸಿದ್ದ. ಬಳಿಕ ನಾವು ರಿವಿಷನ್ ಕಮಿಟಿಗೆ ಸಿನಿಮಾವನ್ನು ಕಳಿಸಲು ಒಪ್ಪಿಗೆ ಸೂಚಿಸಿದವು. ಆದರೆ ಆಗಿನಿಂದಲೂ ಸಿನಿಮಾ ಅಲ್ಲಿಯೇ ಸಿಲುಕಿಕೊಂಡಿದೆ. ಎಲ್ಲ ಫಾರ್ಮಾಲಿಟಿಗಳು ಪೂರ್ಣಗೊಂಡ ಬಳಿಕವಷ್ಟೆ ನಾವು ಸಿನಿಮಾ ಬಿಡುಗಡೆ ಮಾಡಬಹುದಾಗಿದೆ’ ಎಂದಿದ್ದಾರೆ ನಿರ್ಮಾಪಕ ವೆಂಕಟ್.

ಇದನ್ನೂ ಓದಿ:ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್?

‘ನಾವು ಸಿನಿಮಾ ಶುರು ಮಾಡಿದಾಗ, ಇದನ್ನೆಲ್ಲಾ ಎದುರಿಸಬೇಕಾಗುತ್ತದೆ ಅಂತ ನಮಗೆ ಗೊತ್ತಿರಲಿಲ್ಲ. ಈಗ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಮತ್ತು ನಿಜವಾಗಿಯೂ ತಮಿಳುನಾಡಿನ ಜನನಾಯಕ ಆಗಿರುವುದು ನಮಗೆ ಅತೀವ ಸಂತೋಷ ತಂದಿದೆ. ಬಹುಶಃ ಅವರು ಮುಖ್ಯಮಂತ್ರಿಯಾದ ನಂತರ ಈ ಸಿನಿಮಾ ಬಿಡುಗಡೆಯಾಗಬೇಕೆಂಬುದು ವಿಧಿಯಾಗಿರಬಹುದು’ ಎಂದು ವೆಂಕಟ್ ಹೇಳಿದ್ದಾರೆ. ಆ ಮೂಲಕ ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ, ಮಲಯಾಳಂನ ಮಮಿತಾ ಬಿಜು ನಟಿಸಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಬಿಡುಗಡೆ ತಡವಾಗುತ್ತಲೇ ಬರುತ್ತಿದೆ. ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಆನ್​ಲೈನ್​​ನಲ್ಲಿ ಪೂರ್ಣವಾಗಿ ಲೀಕ್ ಸಹ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Union Bank Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಸುವರ್ಣಾವಕಾಶ; ಯೂನಿಯನ್ ಬ್ಯಾಂಕ್‌ನಲ್ಲಿ 1,865 ಹುದ್ದೆಗಳಿಗೆ ನೇಮಕಾತಿ – Kannada News | Union Bank Apprentice Recruitment 2026: 1865 Posts – Apply Now for Banking Careers

ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶImage Credit source: Pinterest

ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಾಣುತ್ತಿದ್ದರೆ, ಇದು ಒಂದು ಉತ್ತಮ ಅವಕಾಶವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಒಟ್ಟು 1,865 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನವು ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕಾರ್ಯವೈಖರಿಯ ಬಗ್ಗೆ ಆಳವಾದ ಪ್ರಾಯೋಗಿಕ ಅನುಭವವನ್ನು ಒದಗಿಸಲು ವೇದಿಕೆಯಾಗಲಿದೆ.

ಈ ನೇಮಕಾತಿ ಅಭಿಯಾನದಡಿಯಲ್ಲಿ ಒಟ್ಟು 1,865 ಹುದ್ದೆಗಳನ್ನು ವಿವಿಧ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 335 ಹುದ್ದೆಗಳು ಖಾಲಿ ಇವೆ. ಉಳಿದಂತೆ ಮಹಾರಾಷ್ಟ್ರದಲ್ಲಿ 196, ತೆಲಂಗಾಣದಲ್ಲಿ 164, ಕರ್ನಾಟಕದಲ್ಲಿ 131, ಮಧ್ಯಪ್ರದೇಶದಲ್ಲಿ 116 ಮತ್ತು ತಮಿಳುನಾಡಿನಲ್ಲಿ 95 ಹುದ್ದೆಗಳು ಲಭ್ಯವಿವೆ. ಇನ್ನುಳಿದಂತೆ ಬಿಹಾರ, ದೆಹಲಿ, ಗುಜರಾತ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯೂ ಗಮನಾರ್ಹ ಸಂಖ್ಯೆಯ ಹುದ್ದೆಗಳು ಲಭ್ಯವಿದ್ದು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯ ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ವಿಶೇಷವಾಗಿ, ಅವರ ಪದವಿಯು ಏಪ್ರಿಲ್ 1, 2022 ರ ನಂತರವೇ ಪೂರ್ಣಗೊಂಡಿರಬೇಕು ಎಂಬ ನಿಯಮವಿದೆ. ಇದರ ಜೊತೆಗೆ, ಅಭ್ಯರ್ಥಿಯು ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನವನ್ನು (ಓದಲು, ಬರೆಯಲು ಮತ್ತು ಮಾತನಾಡಲು) ಹೊಂದಿರುವುದು ಕಡ್ಡಾಯವಾಗಿದೆ.

ವಯೋಮಿತಿಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 28 ವರ್ಷಗಳ ಮಿತಿಯೊಳಗೆ ಇರಬೇಕು. ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ, ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ನಿಗದಿತ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಶುಲ್ಕವನ್ನು ವಿವಿಧ ವರ್ಗಗಳಿಗೆ ವಿಭಿನ್ನವಾಗಿ ನಿಗದಿಪಡಿಸಲಾಗಿದೆ. ಸಾಮಾನ್ಯ ಮತ್ತು ಒಬಿಸಿ ವರ್ಗಗಳ ಪುರುಷ ಅಭ್ಯರ್ಥಿಗಳು 944ರೂ. ಶುಲ್ಕ ಪಾವತಿಸಬೇಕಿದ್ದರೆ, ಅದೇ ವರ್ಗದ ಮಹಿಳಾ ಅಭ್ಯರ್ಥಿಗಳು 708ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 236ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಮೂರು ಹಂತಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಅಭ್ಯರ್ಥಿಗಳ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಪರೀಕ್ಷಿಸಲು ಆನ್‌ಲೈನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರಿಗೆ ಸ್ಥಳೀಯ ಭಾಷಾ ಪರೀಕ್ಷೆಯನ್ನು ನಡೆಸಿ, ಅವರಿಗೆ ಆ ಭಾಷೆಯ ಮೇಲೆ ಹಿಡಿತವಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಅಂತಿಮವಾಗಿ, ವೈದ್ಯಕೀಯ ಪರೀಕ್ಷೆಯ ವರದಿಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರಿಕೋಟ್ ಧರಿಸಿ ಕಣ್ ಕುಕ್ಕಿದ ಮಮತಾ; ಬಂಗಾಳ ಹಿಂಸಾಚಾರ ಪ್ರಕರಣದಲ್ಲಿ ಕೋರ್ಟ್​ನಲ್ಲಿ ದೀದಿ ವಕೀಲಿಕೆ – Kannada News | Mamata Banerjee Appears as Lawyer in Calcutta HC for West Bengal Post Election Violence PIL

ಕೋಲ್ಕತ್ತಾ, ಮೇ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರು ಇಂದು ಗುರುವಾರ ವಕೀಲರ ಕಪ್ಪು ಕೋಟ್ ಧರಿಸಿ ಮೊದಲ ಬಾರಿಗೆ ಕಲ್ಕತ್ತಾ ಹೈಕೋರ್ಟ್‌ಗೆ ಹಾಜರಾಗಿ ಎಲ್ಲರ ಗಮನ ಸೆಳೆದರು. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಪರವಾಗಿ ವಾದ ಮಂಡಿಸಲು ಅವರು ಖುದ್ದಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್‌ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು.

ಬುಲ್ಡೋಜರ್ ಸಂಸ್ಕೃತಿಗೆ ಮಮತಾ ವಿರೋಧ

“ಪಶ್ಚಿಮ ಬಂಗಾಳವು ಬುಲ್ಡೋಜರ್ ರಾಜ್ಯವಲ್ಲ. ಇಲ್ಲಿ ಕಾನೂನಿನ ಆಡಳಿತವಿದೆ. ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯ. ಹಿಂಸಾಚಾರದಲ್ಲಿ ಮಕ್ಕಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನೂ ಬಿಡುತ್ತಿಲ್ಲ. ಕೊಲೆಯಾದ 10 ಜನರ ಪಟ್ಟಿಯನ್ನು ನಾನು ನೀಡುತ್ತಿದ್ದೇನೆ, ಇದರಲ್ಲಿ ಆರು ಮಂದಿ ಹಿಂದೂಗಳಾಗಿದ್ದಾರೆ” ಎಂದು ಮಾಜಿ ಸಿಎಂ ಆದ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ತೈವಾನ್ ವಿಚಾರದಲ್ಲಿ ತಪ್ಪು ಮಾಡಿದರೆ ಅಮೆರಿಕ-ಚೀನಾ ಮಧ್ಯೆ ನೇರ ಸಂಘರ್ಷವಾದೀತು: ಷಿ ಜಿನ್​ಪಿಂಗ್ ಎಚ್ಚರಿಕೆ

ಪೊಲೀಸರ ವಿರುದ್ಧ ಕಿಡಿ: ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, “ಪೊಲೀಸರು ಮಲಗಿದ್ದಾರೆಯೇ? ಅಪರಾಧ ನಡೆದ ಮೇಲೆ ತನಿಖೆ ಮಾಡುವುದು ಅವರ ಕರ್ತವ್ಯವಲ್ಲವೇ?” ಎಂದು ಪ್ರಶ್ನಿಸಿದರು.

92 ವರ್ಷದ ವಿಧವೆ ಸೇರಿದಂತೆ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿದ ಮಮತಾ, ಬಂಗಾಳದ ಜನರಿಗೆ ತಕ್ಷಣದ ರಕ್ಷಣೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನನುಭವಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ ಶೀರ್ಷಣ್ಯ ಬ್ಯಾನರ್ಜಿ ಅವರು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಲು ಮಮತಾ ಬ್ಯಾನರ್ಜಿ ಅವರೇ ನೇರವಾಗಿ ನ್ಯಾಯಾಲಯಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ

“ಮಮತಾ ಬ್ಯಾನರ್ಜಿ ಅವರು ಬಂಗಾಳದ ಜನರನ್ನು ಸಂಕಷ್ಟದ ಸಮಯದಲ್ಲಿ ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಇಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ತೃಣಮೂಲ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದೆ.

ಮಮತಾ ಬ್ಯಾನರ್ಜಿ ಕಾನೂನು ಓದಿದ್ದಾರಾ?

ಕೋಲ್ಕತಾದಲ್ಲಿ ಜನಿಸಿದ ಮಮತಾ ಬ್ಯಾನರ್ಜಿ ಅವರು ಬಹುಪದವಿಗಳನ್ನು ಗಳಿಸಿದ್ದಾರೆ. ಬಿಎ, ಎಂಎ, ಬಿಎಡ್, ಎಲ್​ಎಲ್​ಬಿ ಓದಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕೋಲ್ಕತಾದ ಜೋಗೇಶ್ ಚಂದ್ರ ಚೌಧುರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಕಲ್ಕತ್ತಾ ಯೂನಿವರ್ಸಿಟಿಯಲ್ಲಿ ಇಸ್ಲಾಮಿಕ್ ಇತಿಹಾಸದ ಮೇಲೆ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಅನುಮತಿ ನೀಡಿದ್ದರೂ ತ್ರಿಶಾ ನಟನೆಯ ‘ಕರುಪ್ಪು’ ಚಿತ್ರಕ್ಕೆ ತಪ್ಪಲಿಲ್ಲ ತೊಂದರೆ – Kannada News | Suriya Trisha starrer Karuppu early shows cancelled despite CM Vijay permission

ಕಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಕರುಪ್ಪು’ (Karuppu) ಇಂದು (ಮೇ 14) ತೆರೆಕಂಡಿದೆ. ಸೂರ್ಯ ಮತ್ತು ತ್ರಿಶಾ ಕೃಷ್ಣನ್ (Suriya Trisha) ನಟನೆಯ ಈ ಥ್ರಿಲ್ಲರ್ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳ ಮೊದಲು ಚಿತ್ರತಂಡ ತೆಗೆದುಕೊಂಡ ನಿರ್ಧಾರವೊಂದು ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಅವರು ಈ ಚಿತ್ರದ ಮುಂಜಾನೆಯ ಪ್ರದರ್ಶನಕ್ಕೆ ವಿಶೇಷ ಅನುಮತಿ ನೀಡಿದ್ದರೂ ಸಹ, ಕೊನೆಯ ಕ್ಷಣದಲ್ಲಿ ಬೆಳಿಗ್ಗೆ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗಿದೆ.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್‌ಆರ್ ಪ್ರಭು ಅವರು ರಾತ್ರಿ 1 ಗಂಟೆಯ ಸುಮಾರಿಗೆ ಎಕ್ಸ್ (ಟ್ವಿಟರ್) ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ‘ಅನಿವಾರ್ಯ ಕಾರಣಗಳಿಂದಾಗಿ ಕರುಪ್ಪು ಚಿತ್ರದ ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಅಭಿಮಾನಿಗಳಿಗೆ ಉಂಟಾದ ತೊಂದರೆಗೆ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ಶೋಗಳನ್ನು ರದ್ದುಗೊಳಿಸಲು ನಿಖರವಾದ ಕಾರಣ ಏನು ಎಂದು ಅವರು ಬಹಿರಂಗಪಡಿಸಿಲ್ಲ.

ಮುಂಜಾನೆಯೇ ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಈ ಸುದ್ದಿಯಿಂದ ಕಂಗಾಲಾಗಿದ್ದಾರೆ. ನಿರ್ಮಾಪಕರ ಸ್ಪಷ್ಟನೆ ಇಲ್ಲದ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿರುವ ಅಭಿಮಾನಿಯೊಬ್ಬರು, ‘ಇದು ಕೇವಲ ತಮಿಳುನಾಡಿಗೆ ಮಾತ್ರವೇ ಅಥವಾ ಕೇರಳದಲ್ಲೂ ರದ್ದಾಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ‘ಸ್ಪಷ್ಟವಾಗಿ ಮಾಹಿತಿ ನೀಡಿ, ನಾವು ರಜೆ ಹಾಕಿ ಸಿನಿಮಾ ನೋಡಲು ಬಂದಿದ್ದೇವೆ. ಮಧ್ಯಾಹ್ನ 12 ಗಂಟೆಗೆ ಸಿನಿಮಾ ಶುರುವಾಗುತ್ತದೆಯೇ ಅಥವಾ ಇಲ್ಲವೇ?’ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ಅನುಮತಿ ಸಿಕ್ಕಿದ್ದರೂ ತಾಂತ್ರಿಕ ದೋಷ ಅಥವಾ ಆರ್ಥಿಕ ಸಮಸ್ಯೆಗಳಿಂದಾಗಿ ‘ಕರುಪ್ಪು’ ಚಿತ್ರದ ಬೆಳಗಿನ ಪ್ರದರ್ಶನ ಸ್ಥಗಿತಗೊಂಡಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾದ ಶೋ ಕ್ಯಾನ್ಸಲ್ ಆಗಿದ್ದಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ವಿಶೇಷವೆಂದರೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಈ ಚಿತ್ರಕ್ಕೆ ಬೆಳಿಗ್ಗೆ 9 ಗಂಟೆಯ ಶೋ ನಡೆಸಲು ಅನುಮತಿ ನೀಡಿದ್ದರು. ಇದಕ್ಕಾಗಿ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ಸಿಎಂ ವಿಜಯ್ ಅವರು ಕಚೇರಿಯಲ್ಲಿ ಫೈಲ್‌ಗೆ ಸಹಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡು ಧನ್ಯವಾದ ಅರ್ಪಿಸಿತ್ತು. ಮುಖ್ಯಮಂತ್ರಿಗಳೇ ವಿಶೇಷ ಅನುಮತಿ ನೀಡಿದ್ದರೂ, ಶೋಗಳು ರದ್ದಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:36 pm, Thu, 14 May 26

Source link

ಮೇ 30ರಿಂದ 3ನೇ ಹಂತದ SIR: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ – Kannada News | Election Commission of India Announces SIR Phase 3 in 16 States Including Karnataka and 3 Union Territories

ನವದೆಹಲಿ, ಮೇ 14: ಕರ್ನಾಟಕ ಸೇರಿದಂತೆ 16 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ದೇಶದಲ್ಲಿ 3ನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮೇ 30ರಿಂದ ಆರಂಭವಾಗಲಿದ್ದು, ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಿಸಿರುವ 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳ ಸಹಾಯದಿಂದ 36.73 ಕೋಟಿ ಮತದಾರರನ್ನು ಮನೆಮನೆಗೆ ತೆರಳಿ ಪರಿಶೀಲಿಸುವ ಕಾರ್ಯ ನಡೆಯಲಿದೆ.

ಮುಖ್ಯಾಂಶಗಳು

  • 3ನೇ ಹಂತದ SIRಗೆ ಮುಂದಾದ ಚುನಾವಣಾ ಆಯೋಗ
  • ಕರ್ನಾಟಕ ಸೇರಿ ಹಲವೆಡೆ ಮತದಾರರ ಪಟ್ಟಿ ಪರಿಷ್ಕರಣೆ
  • ಮೇ 30ರಿಂದ ಪ್ರಕ್ರಿಯೆ ಆರಂಭದ ಬಗ್ಗೆ ಆಯೋಗ ಮಾಹಿತಿ

ಯಾವೆಲ್ಲ ರಾಜ್ಯಗಳಲ್ಲಿ ಪರಿಷ್ಕರಣೆ?

ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ದಾದ್ರಾ ನಗರ ಹವೆಲಿ ಮತ್ತು ದಮನ್ ದಿಯು, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಕರ್ನಾಟಕ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಸೇರಿದಂತೆ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!

ಕರ್ನಾಟಕದಲ್ಲಿ ಯಾವಾಗ?

ಕರ್ನಾಟಕಕ್ಕೆ ಅಕ್ಟೋಬರ್ 1 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಜೂನ್ 20ರಿಂದ 29ರವರೆಗೆ ನಮೂನೆಗಳ ಸಿದ್ಧತೆ, ತರಬೇತಿ ಮತ್ತು ಮುದ್ರಣ ನಡೆಯಲಿದ್ದು, ಜೂನ್ 30ರಿಂದ ಜುಲೈ 29ರವರೆಗೆ BLOಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 5ರಿಂದ ಸೆಪ್ಟೆಂಬರ್ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಇವುಗಳ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ.

ಮೊದಲ ಎರಡು ಹಂತಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 13 ಕಡೆ SIR ಪೂರ್ಣಗೊಂಡಿದ್ದು, ಸುಮಾರು 5.18 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಈ ಪ್ರಕ್ರಿಯೆ ಮತದಾರರನ್ನು ಹೊರಗಿಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದವು. ಕಾನೂನು ಸಂಬಂಧಿತ ಸಮಸ್ಯೆಗಳ ಕಾರಣ ಅಸ್ಸಾಂನಲ್ಲಿ SIR ನಡೆಸಲಾಗಿಲ್ಲ ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇರಳಂ ಸಿಎಂ: ರಾಹುಲ್, ಸೋನಿಯಾ ಗಾಂಧಿ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣಗಳೇನು? – Kannada News | Kerala CM: reasons why Congress picked VD Satheesan over KC Venugopal

ತಿರುವನಂತಪುರ, (ಮೇ 14): ಕೇರಳಂ ಮುಖ್ಯಮಂತ್ರಿ (Kerala CM) ಆಯ್ಕೆ ಸಂಬಂಧ ಹಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಬೆಳವಣಿಗೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ದು,  ಅಂತಿಮವಾಗಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (VD Satheesan) ಅವರನ್ನ ಆಯ್ಕೆ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ವಿ.ಡಿ ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಹೆಸರುಗಳು ಪ್ರಮುಖವಾಗಿ ಸಿಎಂ ರೇಸ್​​ನಲ್ಲಿದ್ದವು. ಆದ್ರೆ, ಹೈಕಮಾಂಡ್ ನಾನಾ ಲೆಕ್ಕಾಚಾರಗಳನ್ನು ಹಾಕಿ ಅಂತಿಮವಾಗಿ ವಿ.ಡಿ.ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವ ವೇಣುಗೋಪಾಲ್ ಅವರನ್ನು ಬಿಟ್ಟು ಸತೀಶನ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಿದ್ಯಾಕೆ? ಇದರ ಹಿಂದನ ಕಾರಣಗಳೇನು ಎನ್ನುವುದನ್ನು ತಿಳಿಯಿರಿ.

ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್​ ದೇವರನಾಡಿನ ನೂತನ ಮುಖ್ಯಮಂತ್ರಿ

Source link

‘ಪತಿಯನ್ನು ಮತ್ತೆ ನೋಡುವವರೆಗೆ ನನ್ನ ಆತ್ಮಕ್ಕೆ ಶಾಂತಿ ಇಲ್ಲ’; ದಿಲೀಪ್ ರಾಜ್ ಪತ್ನಿಯ ಭಾವುಕ ಪೋಸ್ಟ್ – Kannada News | Dileep Raj Demise: Wife Sreevidya’s Emotional Tribute Post, No Peace Until I See Him Again

ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪತಿಯ ಜೊತೆ ಕಳೆದ 25 ವರ್ಷಗಳಿಂದ ಸಂಸಾರ ನಡೆಸಿಕೊಂಡು ಬರುತ್ತಿದ್ದ ಪತ್ನಿ ಶ್ರೀವಿದ್ಯಾ ಅವರ ಮನಸ್ಸು ಒಡೆದುಹೋಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಬೆಂಬಲವಾಗಿ ನಿಂತವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ದಿಲೀಪ್ ನೆನಪಿನ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ.

ಪತ್ನಿ ಶ್ರೀವಿದ್ಯಾ ಅವರ ಪೋಸ್ಟ್‌ನಲ್ಲಿ ಏನಿದೆ?

‘ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿದ್ದೇನೆ. ದಿಲೀಪ್ ಅವರು ಕಲೆ, ಸಿನಿಮಾ ಮತ್ತು ನಾವು ಇನ್ನು ಮುಂದೆ ಅನುಭವಿಸುವ ಪ್ರತಿಯೊಂದು ದಯೆಯ ರೂಪದಲ್ಲಿ ನಮ್ಮೊಂದಿಗೇ ಇರುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಮತ್ತೆ ನೋಡುವವರೆಗೂ ಶಾಂತಿ ಇಲ್ಲ’:

ಪತಿಯನ್ನು ಕಳೆದುಕೊಂಡ ದುಃಖವನ್ನು ವ್ಯಕ್ತಪಡಿಸುತ್ತಾ, ‘ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಗೆ ಹೊಸ ಜೀವನ ಸಿಗಲಿ. ಆದರೆ ಒಂದು ವಿಷಯ ಮಾತ್ರ ಖಚಿತ – ನಾನು ಅವರನ್ನು ಮತ್ತೆ ನೋಡುವವರೆಗೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ’ ಎಂದು ಬರೆಯುವ ಮೂಲಕ ಪತಿಯ ಮೇಲಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಿಲೀಪ್ ರಾಜ್ ಕೊನೆಯ ಕ್ಷಣಗಳು ಹೇಗಿತ್ತು? ಪತ್ನಿಯ ಹೋರಾಟ ಹೀಗಿತ್ತು

ಮನೆಮಾತಾಗಿದ್ದ ಜೋಡಿ:

ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಕೇವಲ ದಂಪತಿಗಳಾಗಿ ಮಾತ್ರವಲ್ಲದೆ, ವೃತ್ತಿಜೀವನದಲ್ಲೂ ಪರಸ್ಪರ ಬೆಂಬಲವಾಗಿ ನಿಂತಿದ್ದರು. ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳನ್ನು ಈ ಜೋಡಿ ಜೊತೆಯಾಗಿ ನಿರ್ಮಿಸಿತ್ತು. ದಿಲೀಪ್ ನಿಧನದ ನಂತರ ಅವರ ಪತ್ನಿಯ ಈ ಪೋಸ್ಟ್ ಕಂಡು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿಯಲ್ಲಿ ಶುರುವಾಯ್ತು ಹಿಜಾಬ್ ಕಿಚ್ಚು: ಮುತಾಲಿಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ – Kannada News | Hijab Row Resurfaces: Hubballi Protest, Muthalik Urges Saffron Shawls in Schools

ಪ್ರಮೋದ್​​ ಮುತಾಲಿಕ್​ ನೇತೃತ್ವದಲ್ಲಿ ಪ್ರತಿಭಟನೆ​ Image Credit source: tv9 kannada

ಹುಬ್ಬಳ್ಳಿ, ಮೇ 14: ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಿಜಾಬ್ ವಿವಾದ (Hijab Controversy) ದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಹಿಜಾಬ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಅವಕಾಶ ನೀಡಿರುವುದು, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ (Hubballi) ಶ್ರೀರಾಮಸೇನೆಯಿಂದ ಪ್ರತಿಭಟನೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಕೇಸರಿ ಶಾಲು ಹಾಕಿಕೊಂಡು ಹೋಗುವಂತೆ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನಲೆಗೆ: ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ
  • ಹುಬ್ಬಳ್ಳಿಯಲ್ಲಿ ಪ್ರಮೋದ್​ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮಸೇನೆ ಬೃಹತ್ ಪ್ರತಿಭಟನೆ
  • ಸರ್ಕಾರದ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದ ಪ್ರಮೋದ್​ ಮುತಾಲಿಕ್

2022ರಲ್ಲಿ ಬಿಜೆಪಿ ಸರ್ಕಾರವಿದ್ದಾಗ, ರಾಜ್ಯದಲ್ಲಿ ಹಿಜಾಬ್ ವಿವಾದ ಜೋರಾಗಿತ್ತು. ಪರ-ವಿರೋಧ ಹೋರಾಟಗಳು, ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ನಂತರ ಆ ವಿವಾದ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಹಿಜಾಬ್ ವಿವಾದ ಸದ್ದು ಮಾಡುತ್ತಿದೆ. ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ ಅನ್ನೋ ಅಧಿಸೂಚನೆ ಹೊರಡಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಬೆನ್ನಲ್ಲೇ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಸಮವಸ್ತ್ರ ಸಮರ: ವಿಪಕ್ಷದ ವಿರೋಧದ ನಡುವೆಯೂ ಸರ್ಕಾರದ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ಅದರಲ್ಲೂ ಶ್ರೀರಾಮಸೇನೆ ಸಂಘಟನೆ ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ, ಶಿಕ್ಷಣ ಸಚಿವರಿಗೆ ಹಿಜಾಬ್ ಹಾಕಿದ ಫೋಟೋಗಳನ್ನು ಹಿಡಿದು ನಂತರ ಅವುಗಳಿಗೆ ಬೆಂಕಿ ಹಚ್ಚಿದ್ದರು. ಇನ್ನು ಸರ್ಕಾರದ ಆದೇಶ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೇಸರಿ ಶಾಲು ಧರಿಸಿಕೊಂಡು ಹೋಗುವಂತೆ ವಿದ್ಯಾರ್ಥಿಗಳಿಗೆ ಪ್ರಮೋದ್ ಮುತಾಲಿಕ್​​ ಕರೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮುತಾಲಿಕ್​​​, ಎಲ್ಲೆಲ್ಲಿ ಮುಸ್ಲಿಂರು ಹಿಜಾಬ್ ಧರಿಸಿ ಬರುತ್ತಾರೋ, ಅಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಹೋಗಿ, ನಿಮ್ಮ ರಕ್ಷಣೆಗೆ ನಾವು ಇರುತ್ತೇವೆ. ಸರ್ಕಾರ ಎಷ್ಟು ಜನರ ಮೇಲೆ ಕೇಸ್ ಹಾಕುತ್ತೆ ಹಾಕಲಿ, ನಾವು ಎದುರಿಸುತ್ತೇವೆ ಅಂತ ಹೇಳಿದ್ದಾರೆ.

ಸರ್ಕಾರದ ನಿರ್ಧಾರವನ್ನು ಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ. ಆದಷ್ಟು ಬೇಗ ಪಿಐಎಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ಮಕ್ಕಳಲ್ಲಿ ಬೇಧಭಾವ ಇರಬಾರದು ಅಂತ ಸಮವಸ್ತ್ರ ನಿಯಮ ಜಾರಿಗೆ ತಂದಿದ್ದರು. ಆದರೆ ಅವರದೇ ಪಕ್ಷದವರು ಇದೀಗ ಹಿಜಾಬ್​ಗೆ ಅವಕಾಶ ನೀಡಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದರೆ ಮುಸ್ಲಿಂ ಅನ್ನೋದು ಎಲ್ಲರಿಗೂ ಗೊತ್ತಾಗುತ್ತದೆ. ಏಕತೆ ಮೂಡಿಸಬೇಕಿದ್ದ ಸರ್ಕಾರವೇ ಮಕ್ಕಳ ಮನಸು ಒಡೆಯುವ ಕೆಲಸ ಮಾಡುತ್ತಿದೆ ಎಂದು ಪ್ರಮೋದ್ ಮುತಾಲಿಕ್​​ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಆರಂಭವಾಗಿದೆ. ಪರ-ವಿರೋಧ ಚರ್ಚೆಗಳು, ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೈವಾನ್ ವಿಚಾರದಲ್ಲಿ ತಪ್ಪು ಮಾಡಿದರೆ ಅಮೆರಿಕ-ಚೀನಾ ಮಧ್ಯೆ ನೇರ ಸಂಘರ್ಷವಾದೀತು: ಷಿ ಜಿನ್​ಪಿಂಗ್ ಎಚ್ಚರಿಕೆ – Kannada News | Xi Warns Trump: Taiwan Issue Could Lead to “Very Dangerous Situation” for US China

ಷಿ ಜಿನ್​ಪಿಂಗ್ ಮತ್ತು ಡೊನಾಲ್ಡ್ ಟ್ರಂಪ್Image Credit source: AP

ಬೀಜಿಂಗ್, ಮೇ 14: ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಚೀನಾ ಮತ್ತು ಅಮೆರಿಕ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ (US-China Bilateral relation) ಬಹಳ ಅಪಾಯಕಾರಿ ಪರಿಸ್ಥಿತಿಗೆ ತಳ್ಳಲ್ಪಡಬಹುದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಬೀಜಿಂಗ್‌ನಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಉಭಯ ನಾಯಕರ ಮಾತುಕತೆಯ ವೇಳೆ ಈ ವಿಷಯ ಮುಂಚೂಣಿಗೆ ಬಂದಿದೆ. ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ಪ್ರಕಾರ, ಚೀನಾ-ಅಮೆರಿಕ ಸಂಬಂಧಗಳಲ್ಲಿ ತೈವಾನ್ ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮವಾದ ವಿಷಯವಾಗಿದೆ ಎಂಬುದನ್ನು ಜಿನ್‌ಪಿಂಗ್ ಸ್ಪಷ್ಟಪಡಿಸಿದ್ದಾರೆ.

ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎಂದ ಚೀನೀ ಮುಖ್ಯಸ್ಥ

“ಒಂದು ವೇಳೆ ತೈವಾನ್ ವಿಷಯವನ್ನು ಸರಿಯಾಗಿ ನಿಭಾಯಿಸಿದರೆ, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳು ಸ್ಥಿರವಾಗಿರುತ್ತವೆ. ಇಲ್ಲದಿದ್ದರೆ, ಎರಡು ದೇಶಗಳ ನಡುವೆ ಘರ್ಷಣೆಗಳು ನಡೆದು ಇಡೀ ಸಂಬಂಧವೇ ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ (Very Dangerous Situation) ಸಿಲುಕಲಿದೆ,” ಎಂದು ಷಿ ಜಿನ್‌ಪಿಂಗ್ ಹೇಳಿದ್ದಾರೆ. ಅಲ್ಲದೆ, ‘ತೈವಾನ್ ಸ್ವಾತಂತ್ರ್ಯ’ ಮತ್ತು ‘ತೈವಾನ್ ಜಲಸಂಧಿಯಲ್ಲಿ ಶಾಂತಿ’ ಇವೆರಡೂ “ಬೆಂಕಿ ಮತ್ತು ನೀರಿನಂತೆ” ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಆದಾಯ 11 ಕೋಟಿ, ಖರ್ಚು 60 ಕೋಟಿ ರೂ; ರಾಹುಲ್ ಗಾಂಧಿ ವಿದೇಶೀ ಪ್ರವಾಸಗಳಿಗೆ ಫಂಡಿಂಗ್ ಯಾರದು? ಬಿಜೆಪಿ ಪ್ರಶ್ನೆ

ಶತ್ರುಗಳಲ್ಲ, ಪಾಲುದಾರರಾಗೋಣ

ಜಾಗತಿಕವಾಗಿ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಭದ್ರತೆಯ ವಿಷಯದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಟ್ರಂಪ್ ಅವರ ಎರಡು ದಿನಗಳ ಚೀನಾ ಪ್ರವಾಸ ಆರಂಭವಾಗಿದೆ. ಮಾತುಕತೆಯ ವೇಳೆ ಷಿ ಜಿನ್‌ಪಿಂಗ್, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರ ಸಂಘರ್ಷಕ್ಕಿಳಿಯುವ ಬದಲು ಸಹಕರಿಸಬೇಕು ಮತ್ತು “ಶತ್ರುಗಳಾಗುವ ಬದಲು ಪಾಲುದಾರರಾಗಬೇಕು” ಎಂದು ಕರೆ ನೀಡಿದರು. “ಇಡೀ ಜಗತ್ತು ನಮ್ಮ ಭೇಟಿಯನ್ನು ಗಮನಿಸುತ್ತಿದೆ. ಜಗತ್ತು ಈಗ ಹೊಸ ಕವಲುದಾರಿಯಲ್ಲಿದೆ,” ಎಂದು ಅವರು ತಿಳಿಸಿದರು.

‘ನೀವು ನನ್ನ ಸ್ನೇಹಿತ’ ಎಂದ ಟ್ರಂಪ್

ಇದಕ್ಕೂ ಮುನ್ನ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅದ್ಧೂರಿ ಕೆಂಪು ಹಾಸಿನ ಸ್ವಾಗತ ಕೋರಲಾಯಿತು. ಚೀನಾ ಅಧ್ಯಕ್ಷರನ್ನು ಶ್ಲಾಘಿಸಿದ ಟ್ರಂಪ್, ಜಿನ್‌ಪಿಂಗ್ ಅವರನ್ನು ‘ಮಹಾನ್ ನಾಯಕ’ ಮತ್ತು ‘ಆಪ್ತ ಸ್ನೇಹಿತ’ ಎಂದು ಕರೆದರು. “ನಿಮ್ಮ ಸ್ನೇಹಿತನಾಗಿರುವುದು ನನಗೆ ಸಂದ ಗೌರವ. ಅಮೆರಿಕ ಮತ್ತು ಚೀನಾ ಭವಿಷ್ಯದಲ್ಲಿ ಒಟ್ಟಿಗೆ ಅದ್ಭುತ ದಿನಗಳನ್ನು ಕಾಣಲಿವೆ ಮತ್ತು ನಮ್ಮ ಸಂಬಂಧ ಎಂದಿಗಿಂತಲೂ ಉತ್ತಮವಾಗಲಿದೆ,” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಮದು ಮಾಡಿಕೊಳ್ಳದೆ ಚಿನ್ನದ ಬೇಡಿಕೆ ಈಡೇರಿಸುವ ಉಪಾಯಗಳನ್ನು ಮುಂದಿಟ್ಟ ಆಭರಣ ಉದ್ಯಮಿಗಳು

ತೈವಾನ್ ಅನ್ನು ಚೀನಾ ತನ್ನದೇ ಭೂಪ್ರದೇಶ ಎಂದು ಪ್ರತಿಪಾದಿಸುತ್ತಾ ಬಂದಿದೆ. ಎರಡೂ ದೇಶಗಳ ಮಧ್ಯೆ ಸಮಾನ ಇತಿಹಾಸ, ಸಂಸ್ಕೃತಿ ಇದೆ. ಚೀನಾ ಕಮ್ಯೂನಿಸ್ಟ್ ದೇಶವಾದರೆ, ತೈವಾನ್ ಪ್ರಜಾತಂತ್ರ ಆಡಳಿತ ವ್ಯವಸ್ಥೆ ಹೊಂದಿದೆ. ತಾನು ಚೀನಾದ ಭಾಗವಲ್ಲ ಎಂಬುದು ತೈವಾನ್​ನ ನಿಲುವು. ತೈವಾನ್ ಸ್ವತಂತ್ರವಾಗಿ ಉಳಿಯಲು ಅಮೆರಿಕದ ನೆರವು ನಿರಂತರವಾಗಿ ಇದೆ. ಇದು ಚೀನಾದ ಅಸಮಾಧಾನಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿನ್‌ಪಿಂಗ್ ಅವರ ಈ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version