ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸನ್ರೈಸರ್ಸ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅಭಿ ಅವರ ಈ ಅರ್ಧಶತಕದ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದ್ದವು. ಅಂದರೆ, ಅವರು ಕೇವಲ 9 ಎಸೆತಗಳಲ್ಲಿ 44 ರನ್ ಗಳಿಸಿದರು. ಉಳಿದ ಆರು ಎಸೆತಗಳಲ್ಲಿ ಆರು ರನ್ ಕಲೆಹಾಕಿ ತಮ್ಮ ಅರ್ಧಶತಕ ಪೂರೈಸಿದರು.
ಇದರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು ಸಹ ಮುರಿದಿದ್ದಾರೆ. 2024 ರಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಷೇಕ್ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಭಿಷೇಕ್ ದಾಖಲೆ ನಿರ್ಮಿಸಿದ್ದಾರೆ. ಅಂತಿಮವಾಗಿ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿ, ಏ,18: ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿ ಈಗ ಸದನದಲ್ಲಿ ಸಮರ್ಥನೆ ಮಾಡಿಕೊಳ್ಳಲು ಪರದಾಡುತ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ. ಅನೇಕ ಕಾಂಗ್ರೆಸ್ ಸಂಸದರಿಗೆ ಮಹಿಳಾ ಮೀಸಲಾತಿಯನ್ನು ವಿರೋಧಿಸಬಾರದು ಎಂದು ತಿಳಿದಿದ್ದರೂ, ರಾಹುಲ್ ಗಾಂಧಿ ಅವರ ಅಪ್ರಬುದ್ಧ ಮತ್ತು ಗಂಭೀರತೆ ಇಲ್ಲದ, ಬೇಜವಾಬ್ದಾರಿಯ ಪಾರ್ಟ್ ಟೈಮ್ ರಾಜಕಾರಣಿಯ ನಾಯಕತ್ವದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಪ್ರಹ್ಲಾದ್ ಜೋಶಿ ಕಟುವಾಗಿ ಟೀಕಿಸಿದರು.ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷವನ್ನು ಒಬಿಸಿ ವಿರೋಧಿ ಎಂದು ಕರೆದರು. ರಾಜೀವ್ ಗಾಂಧಿ, ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದಲ್ಲಿಯೂ ಒಬಿಸಿ ಕಮಿಷನ್ಗೆ ಸಾಂವಿಧಾನಿಕ ಸ್ಥಾನಮಾನ ನೀಡಲಿಲ್ಲ ಎಂದು ಅವರು ಹೇಳಿದರು. ವಿಶೇಷವಾಗಿ, ಮಂಡಲ ಆಯೋಗದ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಒಬಿಸಿ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸಿದ್ದರು ಎಂಬುದನ್ನು ಜೋಶಿ ಉಲ್ಲೇಖಿಸಿದರು. 1984 ರಿಂದ 1989 ರವರೆಗೆ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಅವರು ಸಂಸತ್ತಿನಲ್ಲಿ ಅತಿ ಉದ್ದದ ಭಾಷಣವನ್ನು ಒಬಿಸಿ ಮೀಸಲಾತಿ ಮತ್ತು ಮಂಡಲ ಕಮಿಷನ್ ವಿರುದ್ಧ ಮಾಡಿದ್ದರು ಎಂದು ಅವರು ಸ್ಮರಿಸಿದರು. ಇಂದು ರಾಹುಲ್ ಗಾಂಧಿ ಈ ಬಗ್ಗೆ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಕೂಡ ಹೌದು ಎಂದು ಜೋಶಿ ಪ್ರತಿಪಾದಿಸಿದರು. 1996 ರಲ್ಲಿ ದೇವೇಗೌಡರ ಸರ್ಕಾರ ಮಹಿಳಾ ಮೀಸಲಾತಿಯನ್ನು ತಂದಾಗ, ಕಾಂಗ್ರೆಸ್ ಪಕ್ಷವು ಆ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ, ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿತ್ತು. ಇದು ಐತಿಹಾಸಿಕ ದಾಖಲೆ ಎಂದು ಜೋಶಿ ತಿಳಿಸಿದರು. “ಅವರು ಅದನ್ನು ವಿರೋಧಿಸಿದರು” ಎಂದು ಜೋಶಿ ಪುನರುಚ್ಚರಿಸಿದರು. ಮಹಿಳಾ ಮೀಸಲಾತಿ ಜಾರಿಗೆ ಬಾರದೆ ಇರಲು ಕಾಂಗ್ರೆಸ್ ಕಾರಣವಾಗಿದ್ದು, ಆ ಮಸೂದೆಯನ್ನು ಜಾರಿಗೆ ತರುವುದು ಸಂಪೂರ್ಣವಾಗಿ ಅವರ ಕೈಯಲ್ಲಿತ್ತು ಎಂದರು. ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜಕಾರಣಿಗಳು ಹೇಳಿದ್ದನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಪ್ರತಿಯೊಬ್ಬರೂ ವಿಷಯದ ಬಗ್ಗೆ ಅಧ್ಯಯನ ಮಾಡಿ, ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ಮಾಡುವಂತೆ ವಿನಂತಿಸಿದರು. 1996ರಲ್ಲಿ ಅವರು ಮಹಿಳಾ ಮೀಸಲಾತಿಯನ್ನು ವಿರೋಧಿಸಿದ್ದರೂ, ನಂತರ ಬೆಂಬಲ ನೀಡಿದಂತೆ ವರ್ತಿಸುವುದು ವಿಪರ್ಯಾಸ ಎಂದರು. ಒಟ್ಟಾರೆ, ರಾಹುಲ್ ಗಾಂಧಿ ಅವರ ಅಪ್ರಬುದ್ಧ ನಾಯಕತ್ವ ಮತ್ತು ಕಾಂಗ್ರೆಸ್ನ ಐತಿಹಾಸಿಕ ನಿಲುವುಗಳ ಬಗ್ಗೆ ಪ್ರಹ್ಲಾದ್ ಜೋಶಿ ತಮ್ಮ ಸುದ್ದಿಗೋಷ್ಠಿಯಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಟೆಹ್ರಾನ್, ಏಪ್ರಿಲ್ 18: ಇರಾನ್ ಇಂದು ಹಾರ್ಮುಜ್ ಜಲಸಂಧಿಯನ್ನು (Strait Of Hormuz) ದಾಟುತ್ತಿದ್ದ ಗುಂಡಿನ ದಾಳಿ ನಡೆಸಿದ್ದ 2 ಹಡಗುಗಳಲ್ಲಿ ಭಾರತದ 1 ಹಡಗು ಕೂಡ ಸೇರಿತ್ತು. ಈ ತೈಲ ಟ್ಯಾಂಕರ್ ಸುಮಾರು 2 ಮಿಲಿಯನ್ ಬ್ಯಾರೆಲ್ ಇರಾಕ್ ತೈಲವನ್ನು ಸಾಗಿಸುತ್ತಿತ್ತು. ಇದರ ಮೇಲೆ ಓಮನ್ನ ಉತ್ತರಕ್ಕೆ ಇರಾನ್ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಿಂದ 2 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಯು-ಟರ್ನ್ ತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಇರಾನ್ಗೆ ಸಮನ್ಸ್ ಜಾರಿ ಮಾಡಿದೆ.
ಜಗ್ ಅರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಎಂಬ ಭಾರತದ 2 ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಹೋಗುತ್ತಿದ್ದಾಗ ದಾಳಿ ನಡೆಸಲಾಗಿತ್ತು. ಅವುಗಳಲ್ಲಿ ಜಗ್ ಅರ್ನವ್ ಮೇಲೆ ದಾಳಿ ನಡೆಸಲಾಯಿತು. ಇದು ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ಹತ್ತಿರದಲ್ಲಿದ್ದ ಇನ್ನೊಂದು ಹಡಗು ಸನ್ಮಾರ್ ಹೆರಾಲ್ಡ್ ಹಾನಿಗೊಳಗಾಗಿಲ್ಲ. ಜಗ್ ಅರ್ನವ್ಗೆ ಸಣ್ಣಪುಟ್ಟ ಹಾನಿಯಾಗಿದೆ. ಆದರೆ, ಸಿಬ್ಬಂದಿ ಸುರಕ್ಷಿತರಾಗಿದ್ದಾರೆ.
ಹಾರ್ಮುಜ್ನಲ್ಲಿರುವ ಭಾರತೀಯ ಹಡಗುಗಳ ಬಳಿ ಗುಂಡಿನ ದಾಳಿ ನಡೆದ ನಂತರ ಭಾರತವು ಇರಾನಿನ ರಾಯಭಾರಿಯನ್ನು ಕರೆಸಿ ಸಮನ್ಸ್ ನೀಡಿದೆ. ಭಾರತದ ವಿದೇಶಾಂಗ ಸಚಿವಾಲಯ ಇರಾನಿನ ರಾಯಭಾರಿ ಡಾ. ಮೊಹಮ್ಮದ್ ಫಥಾಲಿಯವರನ್ನು ಕರೆಸಿ ಈ ವಿಷಯದ ಬಗ್ಗೆ ಔಪಚಾರಿಕವಾಗಿ ನೋಟಿಸ್ ನೀಡಿದೆ.
#WATCH | Delhi: Ambassador of Iran to India, Dr. Mohammad Fathali leaves from the Ministry of External Affairs (MEA). More details awaited. pic.twitter.com/HkrEkJKhq1
ಇರಾನ್ ಸಂಬಂಧಿತ ಹಡಗು ಸಾಗಣೆಯ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸುವುದಿಲ್ಲ ಎಂದು ಅಮೆರಿಕ ಹೇಳಿದ ನಂತರ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯ ಮೇಲೆ ನಿರ್ಬಂಧ ಹೇರಿದೆ. ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಾಟವನ್ನು ನಿರ್ಬಂಧಿಸುವುದಾಗಿ ಇರಾನ್ ಎಚ್ಚರಿಸಿದೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ನಡುವೆ ಲೆಬನಾನ್ನಲ್ಲಿ 10 ದಿನಗಳ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಇರಾನ್ ನಿನ್ನೆ ಹೇಳಿತ್ತು. ಆದರೂ ಇರಾನ್ನ ಹಡಗುಗಳ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ ನಂತರ ಇರಾನ್ ಅಧಿಕಾರಿಗಳು ಈ ಕ್ರಮವು ಕಳೆದ ವಾರದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇದೀಗ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ನಿನ್ನೆ ನಡೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಒಳಗೊಂಡ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸಂಸತ್ ಅಧಿವೇಶನದಲ್ಲಿ ಬಹುಮತ ಲಭ್ಯವಾಗಲಿರಲಿಲ್ಲ. ಇದರಿಂದಾಗಿ ಎನ್ಡಿಎ ಸರ್ಕಾರದ ಬಹು ನಿರೀಕ್ಷಿತ ಮಸೂದೆ ಅಂಗೀಕಾರವಾಗಲಿಲ್ಲ. ಈ ವಿಷಯದ ಕುರಿತೂ ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪ ಮಾಡುವ ನಿರೀಕ್ಷೆಯಿದೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ನರೇಂದ್ರ ಮೋದಿ ಒಟ್ಟು 17 ಬಾರಿ ಈ ರೀತಿ ಭಾರತ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೊನೆಯ ಬಾರಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ಟಿ 2.0 ಸುಧಾರಣೆಯ ಬಗ್ಗೆ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಇದೀಗ 18ನೇ ಬಾರಿ ದೇಶವನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದಾರೆ.
ಚಿಕ್ಕಮಗಳೂರು, ಏಪ್ರಿಲ್ 18: ಬ್ಯಾಂಕಿನ ಒಳಗೆ ಗ್ರಾಹಕರು ಇರುವುದನ್ನೂ ಲೆಕ್ಕಿಸದೆ ಬ್ಯಾಂಕ್ ಸಿಬ್ಬಂದಿಗಳಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ಅಹಿತಕರ ಘಟನೆ ಜಿಲ್ಲೆಯ ಎನ್.ಆರ್. ಪುರದ ಕೆನರಾ ಬ್ಯಾಂಕ್(Canara Bank)ಶಾಖೆಯಲ್ಲಿ ನಡೆದಿದೆ. ಮಹಿಳಾ ಸಿಬ್ಬಂದಿಯೊಬ್ಬರು ಕ್ಯಾಶಿಯರ್ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದ್ದು, ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ.
ನಡೆದಿದ್ದೇನು?
ಎನ್.ಆರ್. ಪುರ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ದೀಪಾ ಹಾಗೂ ಆಂಧ್ರ ಮೂಲದ ಕ್ಯಾಶಿಯರ್ ಚಾಣಕ್ಯ ಎಂಬುವವರ ನಡುವೆ ಗಲಾಟೆ ನಡೆದಿದೆ. ಬ್ಯಾಂಕಿನ ದೈನಂದಿನ ಕೆಲಸದ ಅವಧಿಯಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಕೈ ಹಿಡಿದು ಎಳೆದಿದ್ದಾರೆ: ಮಹಿಳಾ ಸಿಬ್ಬಂದಿ ಗಂಭೀರ ಆರೋಪ
ಕ್ಯಾಶಿಯರ್ ಚಾಣಕ್ಯ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ. ಬ್ಯಾಂಕಿಗೆ ಸಂಬಂಧಿಸಿದ ಹಣವನ್ನು ಕಟ್ಟಲು ಹೋದ ಸಂದರ್ಭದಲ್ಲಿ ಕ್ಯಾಶಿಯರ್ ತನ್ನ ಕೈ ಹಿಡಿದು ಎಳೆದಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ದೀಪಾ, ಗ್ರಾಹಕರ ಮುಂದೆಯೇ ಕ್ಯಾಶಿಯರ್ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ವೇಳೆ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.
ಎನ್.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಘಟನೆ ನಡೆದಿದ್ದರೂ, ಈವರೆಗೂ ಇಬ್ಬರು ಸಿಬ್ಬಂದಿ ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ನೀಡಿಲ್ಲ. ಇನ್ನು ಬ್ಯಾಂಕಿನ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗಲಾಟೆಯನ್ನು ಅಲ್ಲಿಯೇ ಇದ್ದ ಗ್ರಾಹಕರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಬ್ಯಾಂಕಿನಂತಹ ಜವಾಬ್ದಾರಿಯುತ ಸಂಸ್ಥೆಯಲ್ಲಿ ಸಿಬ್ಬಂದಿಗಳ ಇಂತಹ ವರ್ತನೆಯು ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಲಸದ ಸ್ಥಳಗಳಲ್ಲಿ ಆಫೀಸ್ ಪಾಲಿಟಿಕ್ಸ್ (office politics), ಸಹದ್ಯೋಗಿಗಳ ನಡುವೆ ಮನಸ್ತಾನ, ಶೀತಲ ಸಮರ ಇದ್ದೇ ಇರುತ್ತದೆ. ಕೆಲಸದ ಟೆನ್ಷನ್ ಜೊತೆಗೆ ಈ ಕಿರಿಕಿರಿಗಳು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಅಲ್ಲದೆ ಈ ಆಫೀಸ್ ಪಾಲಿಟಿಕ್ಸ್ ವೃತ್ತಿ ಜೀವನದ ಯಶಸ್ಸಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಹೀಗಿರುವಾಗ ಈ ಎಲ್ಲಾ ಕಿರಿಕಿರಿಗಳನ್ನು ಸಮರ್ಥವಾಗಿ ನಿಭಾಯಿಸೋದು ತುಂಬಾನೇ ಮುಖ್ಯವಾಗಿದೆ. ಆದರೆ ಹೆಚ್ಚಿನವರಿಗೆ ಆಫೀಸ್ ಒಳ ರಾಜಕೀಯಗಳನ್ನು ಸಮರ್ಥವಾಗಿ ನಿಭಾಯಿಸೋದು ಹೇಗೆ ಎಂಬುದೇ ಗೊತ್ತಿಲ್ಲ. ಚಾಣಕ್ಯರು ನೀಡಿರುವ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಖಂಡಿತವಾಗಿಯೂ ಆಫೀಸ್ ಪಾಲಿಟಿಕ್ಸ್ ಕಿರಿಕಿರಿಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು.
ಆಫೀಸ್ ಪಾಲಿಟಿಕ್ಸ್ ಕಿರಿಕಿರಿಯನ್ನು ಸಮರ್ಥವಾಗಿ ಎದುರಿಸುವುದು ಹೇಗೆ?
ಹೆಚ್ಚು ಮಾತನಾಡುವುದನ್ನು ತಪ್ಪಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಕಚೇರಿ ರಾಜಕೀಯವನ್ನು ತಪ್ಪಿಸಲು ಬಯಸಿದರೆ, ನೀವು ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು. ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು ಮುಂದೊಂದು ದಿನ ನಿಮಗೆ ಹಾನಿಕಾರಕವಾಗಿ ಪರಿಣಾಮಿಸಬಹುದು. ಮತ್ತು ಮಾತನಾಡುತ್ತಾ ನಿಮ್ಮ ಎಲ್ಲಾ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡಬೇಡಿ. ಮಾತುಕತೆ ಯಾವಾಗಲೂ ಹಿತಮಿತವಾಗಿರಲಿ.
ಎಲ್ಲರನ್ನೂ ನಂಬಬೇಡಿ: ಕಚೇರಿಯಲ್ಲಿ, ನಿಮ್ಮ ಸ್ನೇಹಿತರು ಯಾರು ಮತ್ತು ನಿಮ್ಮ ಶತ್ರುಗಳು ಯಾರು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ನಮ್ಮ ಜೊತೆ ಒಳ್ಳೆಯವರಂತೆ ಇದ್ದುಕೊಂಡೇ ನಮ್ಮ ಬೆನ್ನಿಗೆ ಚೂರಿ ಹಾಕುವವರು ಅನೇಕರಿದ್ದಾರೆ. ಆದ್ದರಿಂದ, ಎಲ್ಲರನ್ನೂ ನಂಬಬೇಡಿ.
ಕೆಲಸದ ಮೇಲೆ ಗಮನಹರಿಸಿ: ಆಫೀಸ್ ಒಳ ರಾಜಕೀಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಇತರ ಸಹದ್ಯೋಗಿಗಳು ನಡೆಸುವ ಗಾಸಿಪ್ಗಳಲ್ಲಿ ಭಾಗಿಯಾಗದೆ ನಿಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಈ ಒಂದು ಗುಣ ನಿಮ್ಮ ಯಶಸ್ಸಿಗೂ ತುಂಬಾನೇ ಮುಖ್ಯ. ಗಾಸಿಪ್ಗಳಿಗೆ ತಲೆ ಹಾಕುವುದು ಬಿಟ್ಟು ನಿಮ್ಮ ಕೆಲಸದ ಮೇಲಷ್ಟೇ ಗಮನ ವಹಿಸಿ.
ಶಾಂತವಾಗಿರಲು ಕಲಿಯಿರಿ: ಕಚೇರಿಯಲ್ಲಿ ಎಲ್ಲದಕ್ಕೂ ಪ್ರತಿಕ್ರಿಯಿಸುವುದು ಅನಿವಾರ್ಯವಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಶಾಂತವಾಗಿದ್ದಷ್ಟೂ ನಿಮ್ಮ ಆಲೋಚನೆ ಮತ್ತು ತಿಳುವಳಿಕೆ ಬಲವಾಗಿರುತ್ತದೆ. ಕೆಲಸದಲ್ಲಿ ವೃತ್ತಿಪರ ನಡವಳಿಕೆಯನ್ನು ಕಾಪಾಡಿಕೊಳ್ಳಿ. ಇದು ನಿಮ್ಮ ಪ್ರಗತಿಗೂ ತುಂಬಾನೇ ಮುಖ್ಯ.
ಟೆಹ್ರಾನ್, ಏಪ್ರಿಲ್ 18: ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ನಿನ್ನೆ ತೆಗೆದುಹಾಕಿದ್ದ ಇರಾನ್ ಇಂದು ಮತ್ತೆ ಅಮೆರಿಕ ಕದನವಿರಾಮವನ್ನು ಉಲ್ಲಂಘನೆ ಮಾಡಿದ ಎಂಬ ಕಾರಣ ನೀಡಿ ಹಾರ್ಮುಜ್ ಮಾರ್ಗವನ್ನು ಬಂದ್ ಮಾಡುವುದಾಗಿ ಘೋಷಿಸಿತ್ತು. ಇದರ ನಡುವೆ ಇಂದು ಸಂಜೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿದೆ. ಇದರಿಂದಾಗಿ ಭಾರತದ 2 ಹಡಗುಗಳು ಯು-ಟರ್ನ್ ಹೊಡೆದು ವಾಪಾಸ್ ಹೊರಟಿವೆ.
ಇರಾನ್ನ ಕ್ರಾಂತಿಕಾರಿ ಗಾರ್ಡ್ನ ಎರಡು ಗನ್ಬೋಟ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಭಾರತದ 2 ಟ್ಯಾಂಕರ್ ಮೇಲೆ ಗುಂಡು ಹಾರಿಸಿವೆ ಎಂದು ಬ್ರಿಟಿಷ್ ಮಿಲಿಟರಿ ಇಂದು ದೃಢಪಡಿಸಿದೆ. ಟ್ಯಾಂಕರ್ ಮತ್ತು ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೊಸಕೋಟೆ, ಏ.18: ಅನೈತಿಕ ಸಂಬಂಧದ ಹಪಾಹಪಿಗೆ ಬಿದ್ದ ಪ್ರಿಯಕರನೊಬ್ಬ, ತನ್ನ ಪ್ರಿಯತಮೆಯ ಗಂಡನನ್ನೇ ದಾರಿ ತಪ್ಪಿಸಲು ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ನಡೆದಿದೆ. ಮದುವೆಯಾದ ಮಹಿಳೆಯ ಮೇಲಿನ ವ್ಯಾಮೋಹಕ್ಕೆ ಬಿದ್ದ ಕಿರಾತಕ, ಈಗ ಕಂಬಿ ಎಣಿಸುತ್ತಿದ್ದಾನೆ.
ದಬ್ಬಗುಂಟನಹಳ್ಳಿ ಗ್ರಾಮದ ಶಿವಶಂಕರ್ ಎಂಬ ಯುವಕ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ತಾಯಿ, ಪತ್ನಿ ಪವಿತ್ರಾ ಮತ್ತು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಕಳೆದ ಏಪ್ರಿಲ್ 13ರ ಸೋಮವಾರ ರಾತ್ರಿ, ಕೆಲಸ ಮುಗಿಸಿ ಬಂದಿದ್ದ ಶಿವಶಂಕರ್ ಸೆಕೆಯಿಂದಾಗಿ ಗಾಳಿ ಸೇವಿಸಲು ಮತ್ತು ಫೋನ್ನಲ್ಲಿ ಮಾತನಾಡಲು ಮನೆಯಿಂದ ಹೊರಗೆ ಬಂದಿದ್ದ. ಇದನ್ನೇ ಕಾಯುತ್ತಿದ್ದ ಹಂತಕ ಅನಿಲ್ ಕುಮಾರ್, ಕತ್ತಲಲ್ಲಿ ಶಿವಶಂಕರ್ ಮೇಲೆ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದ. ಮುಂಜಾನೆ ಶೌಚಾಲಯಕ್ಕೆ ಬಂದ ತಾಯಿ ಗೌರಮ್ಮನಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನ ಶವ ಕಂಡು ಎದೆ ಒಡೆದಂತಾಗಿದೆ.
ಕೊಲೆಯಾದ ಶಿವಶಂಕರ್ ಯಾರ ತಂಟೆಗೂ ಹೋಗದ ವ್ಯಕ್ತಿಯಾಗಿದ್ದ ಕಾರಣ ಪೊಲೀಸರಿಗೆ ಆರಂಭದಲ್ಲಿ ಕೊಲೆಯ ಕಾರಣ ನಿಗೂಢವಾಗಿತ್ತು. ಆದರೆ ತನಿಖೆ ತೀವ್ರಗೊಳಿಸಿದಾಗ ಶಿವಶಂಕರ್ ಪತ್ನಿ ಪವಿತ್ರಾ ಮತ್ತು ಆರೋಪಿ ಅನಿಲ್ ಕುಮಾರ್ ನಡುವಿನ ಅನೈತಿಕ ಸಂಬಂಧ ಬಯಲಿಗೆ ಬಂದಿದೆ. ಕಳೆದ 4 ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹವಿತ್ತು. ಆದರೆ ಇತ್ತೀಚೆಗೆ ಕುಟುಂಬದವರ ಬುದ್ಧಿವಾದದಿಂದ ಪವಿತ್ರಾ ಈ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದರು. “ನಿನ್ನ ಪಾಡಿಗೆ ನೀನಿರು, ಮದುವೆಯಾಗು” ಎಂದು ಅನಿಲ್ನಿಗೆ ತಿಳಿಸಿದ್ದರು.
ಪವಿತ್ರಾಳನ್ನು ಹೇಗಾದರೂ ಮಾಡಿ ತನ್ನವಳನ್ನಾಗಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದ ಅನಿಲ್, ಆಕೆಯ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ. ಶಿವಶಂಕರ್ನನ್ನು ಮುಗಿಸಿದರೆ ಪವಿತ್ರಾ ತನ್ನ ಬಳಿ ಬರುತ್ತಾಳೆ ಎಂದು ಸಂಚು ರೂಪಿಸಿ, ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಯಾವುದೂ ಅರಿಯದವನಂತೆ ತನ್ನ ಊರಿನಲ್ಲಿ ಓಡಾಡಿಕೊಂಡಿದ್ದ ಅನಿಲ್ನನ್ನು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಹೊಸಕೋಟೆ ಪೊಲೀಸರು ಮೃತ ಶಿವಶಂಕರ್ ಪತ್ನಿ ಪವಿತ್ರಾಳನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಕೊಲೆ ಸಂಚಿನಲ್ಲಿ ಆಕೆಯ ಪಾತ್ರವಿಲ್ಲದಿರುವುದು ಕಾಲ್ ಲಿಸ್ಟ್ ಮತ್ತು ಸಂದೇಶಗಳ ಪರಿಶೀಲನೆಯಿಂದ ದೃಢಪಟ್ಟಿದೆ. ಸದ್ಯಕ್ಕೆ ಪ್ರಮುಖ ಆರೋಪಿ ಅನಿಲ್ ಕುಮಾರ್ನನ್ನು ಜೈಲಿಗಟ್ಟಲಾಗಿದ್ದು, ಹೊಸಕೋಟೆ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿತು. ಆರ್ಸಿಬಿ ನೀಡದ 175 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅರ್ಧಶತಕಗಳ ಇನ್ನಿಂಗ್ಸ್ ಆಡಿದರೆ, ಕೊನೆಯ ಓವರ್ನಲ್ಲಿ ಡೇವಿಡ್ ಮಿಲ್ಲರ್ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
ವಾಸ್ತವವಾಗಿ ಆರ್ಸಿಬಿ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಪ್ರಮುಖ 3 ವಿಕೆಟ್ಗಳು ಮೊದಲ 3 ಓವರ್ಗಳಲ್ಲಿಯೇ ಪತನಗೊಂಡವು. ಆಗ ಡೆಲ್ಲಿ ತಂಡದ ಮೊತ್ತ ಕೇವಲ 18 ರನ್ಗಳಾಗಿದ್ದವು. ಅಲ್ಲಿಂದ ಟ್ರಿಸ್ಟಾನ್ ಸ್ಟಬ್ಸ್ ಜೊತೆಗೂಡಿ ತಂಡದ ಇನ್ನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್ ತ್ವರಿತವಾಗಿ ರನ್ ಗಳಿಸಿದರು. ಇದರ ಜೊತೆಗೆ ರಾಹುಲ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಅವರ ವೃತ್ತಿಜೀವನದ 42 ನೇ ಐಪಿಎಲ್ ಅರ್ಧಶತಕವಾಗಿದ್ದರೆ, ಆರ್ಸಿಬಿ ವಿರುದ್ಧ ಅವರ ಐದನೇ ಶತಕವೂ ಆಗಿತ್ತು. ಈ ಇನ್ನಿಂಗ್ಸ್ ಅವರ ಹುಟ್ಟುಹಬ್ಬದಂದು ಬಂದಿದ್ದು, ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತ್ತು. ಹಾಗೆಯೇ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣವೂ ಆಯಿತು.
ಇಂದು ಐಪಿಎಲ್ 2026 ರ 27 ನೇ ಪಂದ್ಯದಲ್ಲಿ, ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕೂ ಮೊದಲು, ಎರಡೂ ತಂಡಗಳ ನಾಯಕರ ನಡುವೆ ಟಾಸ್ ನಡೆಯಿತು, ಇದರಲ್ಲಿ ಸಿಎಸ್ಕೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಅಂದರೆ ಈ ಪಂದ್ಯದಲ್ಲಿ ಎಸ್ಆರ್ಹೆಚ್ ಮೊದಲು ಬ್ಯಾಟಿಂಗ್ ಮಾಡಲಿದೆ. ಎಸ್ಆರ್ಹೆಚ್ ಮತ್ತು ಸಿಎಸ್ಕೆ ಎರಡೂ ಈ ಋತುವಿನ ಐದನೇ ಪಂದ್ಯವನ್ನು ಆಡುತ್ತಿವೆ. ಎರಡೂ ತಂಡಗಳು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತವೆ.