ಹಳ್ಳ ಹಿಡಿದ ಕಲಬುರಗಿ ಜನರ ಕನಸಿನ ಕೂಸು: 10 ವರ್ಷದಿಂದ ನೆನೆಗುದಿಗೆ ಬಿದ್ದ ರಾಜೀವ್ ಗಾಂಧಿ ಥೀಮ್ ಪಾರ್ಕ್ – Kannada News | Rajiv Gandhi Theme Park in Shambles: Kalaburagi’s Dream Project Stalled for 10 Years

ರಾಜೀವ್ ಗಾಂಧಿ ಥೀಮ್ ಪಾರ್ಕ್Image Credit source: tv9 kannada

ಕಲಬುರಗಿ, ಆಗಸ್ಟ್​ 09: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ (kalaburagi) ನಗರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಎಲ್ಲ ವಯೋಮಾನದವರಿಗೆ ಒಂದೇ ಸೂರಿನಡಿ ಮನರಂಜನೆ ನೀಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದ ಬೃಹತ್ ‘ರಾಜೀವ್ ಗಾಂಧಿ ಥೀಮ್ ಪಾರ್ಕ್’ (Rajiv Gandhi Theme Park) ಯೋಜನೆ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯರ ಕನಸಿನ ಕೂಸಾಗಿದ್ದ ಈ ಪಾರ್ಕ್, ಇದೀಗ ಹಳ್ಳ ಹಿಡಿದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

18 ಎಕರೆಯಲ್ಲಿ 9 ಕೋಟಿ ರೂ ವೆಚ್ಚದ ಯೋಜನೆ

ಕಲಬುರಗಿ ನಗರದ ಧರಿಯಾಪುರ ಕೋಟನೂರ್ ಬಡಾವಣೆಯ 18 ಎಕರೆ ವಿಶಾಲ ಪ್ರದೇಶದಲ್ಲಿ 2014ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 9 ಕೋಟಿ ರೂ ವೆಚ್ಚದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಯೋಜಿಸಲಾಗಿತ್ತು.

ಇದನ್ನೂ ಓದಿ: ನೆರೆಯಲ್ಲಿ ಶವಸಂಸ್ಕಾರದ ಹರಸಾಹಸ: ಹರಿವ ನದಿಯಲ್ಲೇ ಟ್ರ್ಯಾಕ್ಟರ್ ಓಡಿಸಿ ಅಂತ್ಯಕ್ರಿಯೆ ನೆರವೇರಿಸಿದ ಜನರು

ಈ ಪೈಕಿ 3 ಕೋಟಿ ರೂ ಹಣ ಮಂಜೂರಾಗಿದ್ದು, ಕಾಮಗಾರಿಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಯೋಜನೆಯ ಪ್ರಕಾರ 7ಡಿ ಥಿಯೇಟರ್, ಫನ್ ಕಾಂಪ್ಲೆಕ್ಸ್, ಮಕ್ಕಳ ವಸತಿ, ಕೀಟಗಳ ಮನೆ ಹಾಗೂ ಮತ್ಸ್ಯಾಗಾರಗಳನ್ನು ಒಳಗೊಂಡ ಅತ್ಯಾಧುನಿಕ ಉದ್ಯಾನವನವನ್ನು ಒಂದೆರಡು ವರ್ಷಗಳಲ್ಲೇ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕಿತ್ತು.

ಕಳಪೆ ಕಾಮಗಾರಿ, ಸ್ಥಗಿತಗೊಂಡ ಕೆಲಸ

2014-15ರಲ್ಲಿ ಆರಂಭಗೊಂಡ ಕಾಮಗಾರಿಯು ಆರಂಭದಲ್ಲೇ ತೀವ್ರ ಕಳಪೆಯಿಂದ ಕೂಡಿದ್ದರಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ 10 ವರ್ಷಗಳು ಕಳೆದರೂ ಕಾಮಗಾರಿಯನ್ನು ಪುನರಾರಂಭಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಪರಿಣಾಮವಾಗಿ ಪಾರ್ಕ್‌ನಲ್ಲಿದ್ದ ನಾಲ್ಕು ಹೈಮಾಸ್ಟ್ ದೀಪಗಳು, ಆರು ಕಾರಂಜಿಗಳು, ಕಾಂಪೌಂಡ್ ಗೋಡೆಗಳು ಒಡೆದು ಹೋಗಿದ್ದು, ಕಬ್ಬಿಣದ ಗೇಟ್‌ಗಳು ತುಕ್ಕು ಹಿಡಿದಿವೆ. ಜೊತೆಗೆ ಸುತ್ತಲಿನ ಸ್ಟ್ರೀಟ್ ಲೈಟ್‌ಗಳು ಹಾಳಾಗಿದ್ದು, ಅರ್ಧಕ್ಕೆ ನಿಂತ ಕಟ್ಟಡಗಳು ದನದ ಕೊಟ್ಟಿಗೆಗಳಂತಾಗಿವೆ.

ಅನೈತಿಕ ಚಟುವಟಿಕೆ ತಾಣ; ಸಾರ್ವಜನಿಕರ ಆಕ್ರೋಶ

ಹಸಿರು ಉದ್ಯಾನವನದಿಂದ ಕಂಗೊಳಿಸಬೇಕಿದ್ದ ಈ ಪಾರ್ಕ್​​ನಲ್ಲಿ ಇಂದು ಎಲ್ಲೆಂದರಲ್ಲಿ ಮುಳ್ಳು ಕಂಟಿಗಳು, ಜಾಲಿ ಗಿಡಗಳು ಬೆಳೆದು ನಿಂತಿವೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಬಿದ್ದಿದ್ದು, ಕತ್ತಲಾಗುತ್ತಿದ್ದಂತೆ ಪುಂಡಪೋಕರಿಗಳ ತಾಣವಾಗುತ್ತಿದೆ. ಎಮ್ಮೆ-ದನಗಳು ಮೇಯುವ ಸ್ಥಳವಾಗಿ ಮಾರ್ಪಟ್ಟಿದೆ.

 

ಇದನ್ನೂ ಓದಿ: “ನಮ್ಮ ಶಾಲೆಗೆ ರಸ್ತೆ ಮಾಡಿಸಿಕೊಡಿ”: ಯಡ್ರಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಶಾಲಾ ಮಕ್ಕಳ ಆಕ್ರೋಶ

ಸಾರ್ವಜನಿಕರ ತೆರಿಗೆ ಹಣ ಅರೆಬರೆ ಕಾಮಗಾರಿಯಿಂದಾಗಿ ಪೋಲಾಗುತ್ತಿದ್ದು, ಈ ಕುರಿತು ಜನರು ಹಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಸ್ಥಗಿತಗೊಂಡಿರುವ ಕಾಮಗಾರಿಯನ್ನು ತಕ್ಷಣವೇ ಪುನರಾರಂಭಿಸಿ ಪೂರ್ಣಗೊಳಿಸಬೇಕು ಎಂದು ಕಲಬುರಗಿ ನಿವಾಸಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬೊಮ್ಮಾಯಿ – Kannada News | Quality training for rural and poor talented children of North Karnataka Says Basavaraj Bommai

ಹುಬ್ಬಳ್ಳಿ, (ಅಗಸ್ಟ್ 09): ಉತ್ತರ ಕರ್ನಾಟಕದ (North Karnataka) ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (competitive exams) ಅನುಕೂಲವಾಗುವಂತೆ ಅತ್ಯುತ್ತಮ ತರಬೇತಿ (ಕೋಚಿಂಗ್) ನೀಡುವ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು(ಆ.09) ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಉತ್ತರ ಕರ್ನಾಟಕ ಪ್ರತಿಭಾವಂತ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷಾ ಹಿತರಕ್ಷಣಾ ಸಮಿತಿ ಏರ್ಪಡಿಸಿದ ರಾಜ್ಯ ಮಟ್ಟದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಬೊಮ್ಮಾಯಿ, ಎಲ್ಲರ ಮನಸಿನಲ್ಲಿ ಏನಿದೆಯೊ ಅದು ಆಗಬೇಕು, ಜಗತ್ತಿನಲ್ಲಿ ಮನಸಿನೊಳಗ ಎರಡು ಬಾರಿ ಆಗುತ್ತದೆ. ಮೊದಲನೇಯದ್ದು ಮನಸಿನ್ಯಾಗ ಸಿದ್ದಿ ಅಗುತ್ತದೆ ಆ ನಂತರ ಕಾರ್ಯಗತ ಆದಾಗ ಸಿದ್ದಿ ಆಗುತ್ತದೆ. ಇವತ್ತು ಕೂಡಿರುವುದು ಸಿದ್ದಿ ಆಗಬೇಕು. ಎಲ್ಲವನ್ನು ಎದುರಿಸಿ ಸಾಧಿಸುತ್ತೇವೆ ಎಂದಾಗ ಅದು ಕಾರ್ಯಗತ ಆಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ತರಬೇತಿ ಕೇಂದ್ರ ಆರಂಭಿಸುವುದು ನಮ್ಮೆಲ್ಲರ ಸಂಕಲ್ಪ ಎಂದು ಹೇಳಿದರು.

ಪ್ರಭಾಕರ ಕೊರೆಯವರ ಉಪಸ್ತಿತಿಯೆ ದೊಡ್ಡ ಶಕ್ತಿ, ಉತ್ತರ ಕರ್ನಾಟಕದ ಮಕ್ಕಳಿಗೆ ಪಿಯುಸಿಯಿಂದ ಪದವಿ ಹಂತದವರೆಗೆ ಸಮಗ್ರ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಸಂಸ್ಥೆಯನ್ನು ಆರಂಭಿಸುವುದು ಮೊದಲ ಸಂಕಲ್ಪವಾಗಿದೆ. ಯೋಜನೆಗಾಗಿ ಸೂಕ್ತ ಸ್ಥಳ ಆಯ್ಕೆ, ಶಿಕ್ಷಣ ಸಂಸ್ಥೆಯ ಮಾದರಿ ಹಾಗೂ ಪ್ರಥಮ ವರ್ಷದ ತರಬೇತಿ ಚಟುವಟಿಕೆಗಳನ್ನು ನಿರ್ಧರಿಸಲು ತಜ್ಞರ ನೇತೃತ್ವದಲ್ಲಿ ಸಣ್ಣ ಕ್ರಿಯಾ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಈ ವರ್ಷ ಶಾಲಾ ದಾಖಲಾತಿ ಭಾರಿ ಕುಸಿತ: 4 ಲಕ್ಷ ವಿದ್ಯಾರ್ಥಿಗಳ ಕೊರತೆ

ಆರ್ಥಿಕ ಹಾಗೂ ಮೂಲಸೌಕರ್ಯ ಕ್ರೋಡೀಕರಣ

ಸರಸ್ವತಿ ಒಲಿಯಬೇಕೆಂದರೆ ಲಕ್ಷ್ಮೀ ಒಲಿದಾಗ ಮಾತ್ರ ಸರಸ್ವತಿ ಒಲಿಯುತ್ತಾಳೆ, ಸಂಸ್ಥೆಯ ನಿರ್ಮಾಣ ಮತ್ತು ಮೂಲಸೌಕರ್ಯಕ್ಕಾಗಿ ಅಗತ್ಯವಿರುವ ನಿಧಿ ಸಂಗ್ರಹಣೆಗೆ ಪ್ರತ್ಯೇಕ ಸಮಿತಿ ಕಾರ್ಯನಿರ್ವಹಿಸಲಿದ್ದು, ಮುಂಬರುವ ಏಪ್ರಿಲ್ ವೇಳೆಗೆ ತರಬೇತಿ ಪ್ರಕ್ರಿಯೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಹಿಂದೆಲ್ಲ ಬಹಳ ಪ್ರಯತ್ನ ಆಗಿದೆ ಎಂದರು.

​ಬೆಂಗಳೂರಿನಲ್ಲೂ ವಿಸ್ತರಣೆ ಯೋಜನೆ

ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಯಲಹಂಕ ಬಳಿ ಉತ್ತರ ಕರ್ನಾಟಕ ಒಕ್ಕೂಟಕ್ಕೆ ನೀಡಿದ್ದ 3 ಎಕರೆ ಜಾಗವನ್ನು ಬಳಸಿಕೊಂಡು, ಬೆಂಗಳೂರಿನಲ್ಲಿ ಲಭ್ಯವಿರುವ ಅನುಭವಿ ಬೋಧಕರ ಪ್ರಯೋಜನವನ್ನು ಪಡೆಯಲು ಎರಡನೇ ಹಂತದಲ್ಲಿ ಯೋಜನೆ ರೂಪಿಸಲಾಗುವುದು. ಬೆಂಗಳೂರು ನಮ್ಮ ರಾಜಧಾನಿಯಾಗಿದ್ದು, ಅಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಅಗತ್ಯ ತಜ್ಞರನ್ನು ಬಳಸಿಕೊಂಡು ತರಬೇತಿ ನೀಡುವ ವ್ಯವಸ್ಥೆ ಮಾಡೋಣ, ಈ ನಿಟ್ಟಿನಲ್ಲಿ ನಾನು ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿದರು.

​10 ವರ್ಷಗಳ ದೂರದೃಷ್ಟಿ:

“ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ತಡೆಹಿಡಿಯದೆ, ಬರುವ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಮುಂಬರುವ 10 ವರ್ಷಗಳಲ್ಲಿ ಇದನ್ನು ದೇಶದಲ್ಲೇ ಪ್ರಸಿದ್ಧವಾದ ಅತ್ಯುನ್ನತ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಲಾಗಿದೆ, ನಾವು ಇತಿಹಾಸವನ್ನು ಸೃಷ್ಟಿಸುವ ಕೆಲಸ ಮಾಡೋಣ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.​ಪ್ರಭಾಕರ್ ಕೊರೆ ಅವರಿಗೆ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಅನುಭವ ದೊಡ್ಡದಿದೆ, ಒಂದೂವರೆ ವರ್ಷದಲ್ಲಿ ಹುಬ್ಬಳ್ಳಿ ಮೆಡಿಕಲ್ ಕಾಲೇಜು ಮಟ್ಟಿಸಿದ್ದಾರೆ. ಈ ಸಂಸ್ಥೆಯ ನಿರ್ಮಾಣದ ಜವಾಬ್ದಾರಿಯನ್ನು ಕೊರೆಯವರಿಗೆ ಕೊಟ್ಟರೆ ಎಲ್ಲ ರೀತಿಯ ಅನುಕೂಲವಾಗುತ್ತದೆ. ಹಾಗೂ ಕನೇರಿ ಸ್ವಾಮೀಜಿಯವರಸಾಮಾಜಿಕ ಸಂಕಲ್ಪ ಈ ಯೋಜನೆಗೆ ದೊಡ್ಡ ಬಲ ನೀಡಿದೆ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಈ ಯೋಜನೆ ಕಾರ್ಯಗತ ಆಗಲಿ ನಾವೆಲ್ಲರೂ ಜೊತೆಯಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಕನ್ಹೇರಿ ಶ್ರೀಗಳು ಸೇರಿದಂತೆ ನಾಡಿನ ಹಲವಾರು ಮಠಾಧೀಶರು ಸಾನಿಧ್ಯ ವಹಿಸಿದ್ದರು. ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ ಶೆಟ್ಟರ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ – Kannada News | Yathindra Siddaramaiah Likely to Become Karnataka Legislative Council Leader

ಬೆಂಗಳೂರು, (ಆಗಸ್ಟ್​​ 09): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಸಚಿವ ಯತೀಂದ್ರ ಅವರಿಗೆ ಮತ್ತೊಂದು ಪ್ರಮುಖ ಜವಾಬ್ದಾರಿ ಸಿಗುವುದು ಬಹುತೇಕ ಖಚಿತವಾಗಿದೆ. ಖಾಲಿ ಇರುವ ವಿಧಾನ ಪರಿಷತ್​​ ಸಭಾ ನಾಯಕನ ಹೊಣೆ ಯತೀಂದ್ರ ಸಿದ್ದರಾಮಯ್ಯನವರ ಹೆಗಲಿಗೆ ಬೀಳುವ ಸಾಧ್ಯತೆ ಇದ್ದು, ಪರಿಷತ್​​ನಿಂದ ಯತೀಂದ್ರ ಸಿದ್ದರಾಮಯ್ಯ ಮಾತ್ರ ಏಕೈಕ ಸಚಿವರಾಗಿರೋದೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಎನ್​​​ಎಸ್ ಬೋಸರಾಜ್ ಅವರು ಸಚಿವರಾಗಿದ್ದರು. ಜೊತೆಗೆ ವಿಧಾನಪರಿಷತ್ ಸಭಾನಾಯಕರಾಗಿದ್ದರು. ಅದರಂತೆ ಇದೀಗ ಯತೀಂದ್ರ ಸಿದ್ದರಾಮಯ್ಯನವರಿಗೆ ಸಭಾನಾಯಕ ಸ್ಥಾನ ಒಲಿಯಲಿದೆ.

ಇನ್ನು ಆಗಸ್ಟ್ 13 ರಿಂದ ಮಳೆಗಾಲದ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಪರಿಷತ್ ನಲ್ಲಿ ಆಡಳಿತ ಪಕ್ಷವನ್ನು ಯತೀಂದ್ರ ಮುನ್ನಡೆಸಲಿದ್ದಾರೆ. ಇನ್ನು ಯತೀಂದ್ರಗೆ ಸಭಾ ನಾಯಕ ಸ್ಥಾನದ ಮೂಲಕ ಸಿದ್ದರಾಮಯ್ಯ ಮುನಿಸು ಕೂಡ ತಣಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿದ್ರೆ ಕಡಿಮೆಯಾದರೆ ಮೂಳೆ-ಕೀಲುಗಳ ಆರೋಗ್ಯಕ್ಕೆ ಅಪಾಯ! ಡಾ. ಯೋಗೀಶ್ ಕಾಮತ್ ಸಲಹೆ – Kannada News | Sleeping Less Can Trigger Back and Joint Pain: Dr. Yogeesh Kamath Warns

ನಿದ್ರೆಯ ಕೊರತೆಯು ಕೇವಲ ಆಯಾಸ ಮತ್ತು ಅಸ್ವಸ್ಥತೆಯ ಭಾವನೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದು ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುವ ಮೂಲಕ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ಮೂಳೆಗಳು, ಕೀಲುಗಳು ಮತ್ತು ಸ್ನಾಯುಗಳ ಆರೋಗ್ಯದ ಮೇಲೆ ಇದರ ಪರಿಣಾಮವು ಗಮನಾರ್ಹವಾಗಿದ್ದರೂ, ಹೆಚ್ಚಿನವರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಯುವಜನರಲ್ಲಿ ನಿದ್ರೆಯ ಅವಧಿ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಉದ್ಯೋಗ ಅಥವಾ ವೈಯಕ್ತಿಕ ಜೀವನದ ಒತ್ತಡಗಳಿಂದಾಗಿ ಅರ್ಧಕ್ಕಿಂತ ಹೆಚ್ಚು ಯುವ ಉದ್ಯೋಗಿಗಳು ಸಮರ್ಪಕ ನಿದ್ರೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾದರೆ ನಿದ್ರೆಯ ಕೊರತೆ ಮತ್ತು ಮೂಳೆ-ಕೀಲುಗಳ ಆರೋಗ್ಯದ ನಡುವಿನ ಸಂಬಂಧ ಯಾಕೆ ಈ ರೀತಿ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ಸ್, ಹಿಪ್ ಮತ್ತು ಮೊಣಕಾಲು ಕೀಲು ಬದಲಾವಣೆ ತಜ್ಞರು ಹಾಗೂ ಕ್ರೀಡಾ ಗಾಯಗಳ ತಜ್ಞರಾಗಿರುವ ಡಾ. ಯೋಗೀಶ್ ಕಾಮತ್ ಅವರು ನಿದ್ರೆಯ ಕೊರತೆ ಮತ್ತು ಮೂಳೆ-ಕೀಲುಗಳ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು ನಿದ್ರಾಹೀನತೆಗೆ ಕಾರಣವಾಗುವ ಅಂಶಗಳು ತಪ್ಪಾದ ಭಂಗಿ, ಅಸಮರ್ಪಕ ದಿನಚರಿ ಮತ್ತು ಜೀವನಶೈಲಿಯಾಗಿದೆ. ಅಷ್ಟೇಅಲ್ಲ, ಮಾನಸಿಕ ಒತ್ತಡ ಮತ್ತು ಆತಂಕದಿಂದ ಸ್ನಾಯುಗಳ ಬಿಗಿತ ಉಂಟಾಗುತ್ತದೆ. ಜೊತೆಗೆ ನಿದ್ರೆಯ ಅವಧಿ ಹಾಗೂ ಕ್ರಮದಲ್ಲಿನ ವ್ಯತ್ಯಾಸಗಳು ಮೂಳೆ, ಸ್ನಾಯು ಮತ್ತು ಕೀಲುಗಳ ಮೇಲೆ ಬೀರುವ ಪರಿಣಾಮ ಬೀರುತ್ತದೆ. ಇನ್ನು, ಮಲಗುವ ವಾತಾವರಣ, ಹಾಸಿಗೆ ಗುಣಮಟ್ಟ ಕೂಡ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವವರಿಗೆ ಅಪಾಯ

ವಿದ್ಯಾರ್ಥಿಗಳು ಮತ್ತು ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತು ಕೆಲಸ ಮಾಡುವ ವೃತ್ತಿಪರರು ಸಾಮಾನ್ಯವಾಗಿ ಬಾಗಿದ ದೇಹದ ಭಂಗಿಯನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಉಂಟಾಗುವುದರ ಜೊತೆಗೆ ತೊಡೆಯ ಹಿಂಭಾಗದ (ಹ್ಯಾಮ್‌ಸ್ಟ್ರಿಂಗ್) ಮತ್ತು ಕಾಲಿನ ಹಿಂಭಾಗದ (ಕ್ಯಾಫ್) ಸ್ನಾಯುಗಳು ಬಿಗಿಯಾಗುತ್ತವೆ. ಇದರ ಪರಿಣಾಮವಾಗಿ ಮೊಣಕಾಲಿನ ನೋವು ಕಾಣಿಸಿಕೊಳ್ಳಬಹುದು ಮತ್ತು ಮುಂದಿನ ದಿನಗಳಲ್ಲಿ ಮೊಣಕಾಲು ಹಾಗೂ ಬೆನ್ನಿನ ಕೀಲುಗಳಲ್ಲಿ ಸವೆತ (ಆರ್ಥ್ರೈಟಿಸ್) ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಕುತ್ತಿಗೆ ಮತ್ತು ತೊಡೆಯ ಸ್ನಾಯುಗಳ ಬಿಗಿತದಿಂದ ಆರಾಮವಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ. ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಮಲಗುವುದರಿಂದ ಸ್ನಾಯುಗಳಲ್ಲಿ ಆಯಾಸ ಮತ್ತು ನೋವು ಹೆಚ್ಚಾಗಿ ನಿದ್ರೆಗೆ ಅಡ್ಡಿಯಾಗುತ್ತದೆ.

ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ಅನೇಕರು ಸಾಮಾಜಿಕ ಮುಜುಗರ ಅಥವಾ ತಿರಸ್ಕಾರದ ಭಯದಿಂದ ಮರೆಮಾಚುತ್ತಾರೆ. ಹೀಗಾಗಿ ಇಂತಹ ಸಮಸ್ಯೆಗಳ ನೈಜ ಪ್ರಮಾಣ ವರದಿಯಾಗಿರುವುದಕ್ಕಿಂತ ಹೆಚ್ಚಿರಬಹುದು. ಆದ್ದರಿಂದ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಅಗತ್ಯ ಬೆಂಬಲ ಒದಗಿಸುವುದು ಅಗತ್ಯವಾಗಿದೆ. ದೇಹದ ಯಾವುದೇ ನೋವು ಅಥವಾ ಆರೋಗ್ಯ ಸಮಸ್ಯೆಯೊಂದಿಗೆ ವೈದ್ಯರನ್ನು ಸಂಪರ್ಕಿಸುವಾಗ ಅದರ ಹಿಂದೆ ಮಾನಸಿಕ ಒತ್ತಡವೂ ಕಾರಣವಾಗಿದೆಯೇ ಎಂಬುದನ್ನು ವೈದ್ಯರು ಪರಿಶೀಲಿಸುವುದು ಮುಖ್ಯ.

ನಿದ್ರೆಯ ಕೊರತೆಯಿಂದ ನೋವು ಇನ್ನಷ್ಟು ಹೆಚ್ಚಾಗಬಹುದೇ?

ಸಾಕಷ್ಟು ನಿದ್ರೆ ಇಲ್ಲದಿದ್ದಾಗ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಮತ್ತು ಚೇತರಿಕೆಯ ಸಮಯ ಕಡಿಮೆಯಾಗುತ್ತದೆ. ಗಾಢ ನಿದ್ರೆಯ ಸಮಯದಲ್ಲಿ ಸ್ನಾಯುಗಳು ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಕಡಿಮೆ ಅವಧಿಯ ನಿದ್ರೆ ಅಥವಾ ಅಸಮರ್ಪಕ ನಿದ್ರೆಯ ಕ್ರಮ ಮುಂದುವರಿದರೆ ಸ್ನಾಯುಗಳಲ್ಲಿ ಆಯಾಸ, ಬಿಗಿತ ಮತ್ತು ನೋವು ಹೆಚ್ಚಾಗಬಹುದು. ಈಗಾಗಲೇ ಕುತ್ತಿಗೆ, ಬೆನ್ನು ಅಥವಾ ಕೀಲು ನೋವಿನಿಂದ ಬಳಲುತ್ತಿರುವವರಲ್ಲಿ ಇದು ಸಮಸ್ಯೆಯನ್ನು ಮತ್ತಷ್ಟು ಕಿರಿಕಿರಿ ಉಂಟುಮಾಡುವಂತೆ ಮಾಡಬಹುದು.

ತಪ್ಪಾದ ಭಂಗಿಯಲ್ಲಿ ಮಲಗುವುದರಿಂದ ಏನಾಗಬಹುದು?

ಅತಿಯಾದ ಮೃದುವಾದ ಸೋಫಾ, ರಿಕ್ಲೈನರ್ ಅಥವಾ ಫೋಮ್ ಮೆತ್ತೆಗಳು ಬೆನ್ನುಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಸೂಕ್ತವಲ್ಲ. ಇವು ಬೆನ್ನುಮೂಳೆಗೆ ಅಗತ್ಯವಾದ ಬೆಂಬಲವನ್ನು ನೀಡುವುದಿಲ್ಲ. ದಿನವಿಡೀ ಕುಳಿತು ಕೆಲಸ ಮಾಡುವವರು, ನಿರಂತರ ಪ್ರಯಾಣ ಮಾಡುವವರು ಮತ್ತು ಹೋಟೆಲ್‌ಗಳಲ್ಲಿ ಹೆಚ್ಚಾಗಿ ತಂಗುವ ಉದ್ಯೋಗಿಗಳಲ್ಲಿ ಇಂತಹ ಮೃದುವಾದ ಹಾಸಿಗೆಗಳು ಬೆನ್ನುನೋವು ಹಾಗೂ ಕ್ಷೀಣತೆಯ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಕೀಲುಗಳ ಸವೆತ ಮತ್ತು ಆರ್ಥ್ರೈಟಿಸ್‌ನ್ನು ಆರಂಭದಲ್ಲೇ ತಡೆಗಟ್ಟುವುದು ಅತ್ಯುತ್ತಮ ಮಾರ್ಗವಾಗಿದೆ. ಸರಿಯಾದ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು, ನಿಗದಿತ ಸಮಯದಲ್ಲಿ ಮಲಗುವುದು, ಸಮತೋಲಿತ ಆಹಾರ ಸೇವಿಸುವುದು ಹಾಗೂ ಉತ್ತಮ ನಿದ್ರೆಯ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಲು ಅತ್ಯಗತ್ಯ. ನಿದ್ರಾಹೀನತೆ ಮತ್ತು ದೇಹ ಅಥವಾ ಕೀಲು ನೋವು ನಿರಂತರವಾಗಿ ಕಂಡುಬಂದರೆ ವಿಳಂಬ ಮಾಡದೆ ಮೂಳೆ ಮತ್ತು ಕೀಲು ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shravana Masa: ಶ್ರಾವಣ ಮಾಸದಲ್ಲಿ ಹೆಂಡತಿಗೆ ಹಸಿರು ಬಳೆ ಕೊಡಿಸಬೇಕು ಯಾಕೆ ಗೊತ್ತಾ? ಮಹತ್ವ ಮತ್ತು ಲಾಭ ಇಲ್ಲಿದೆ – Kannada News | Shravana Masa Special: Why Husbands Should Gift Green Bangles to Wives?

ಶ್ರಾವಣ ಮಾಸವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ಸಮಯವಾಗಿದೆ. ಈ ಮಾಸವನ್ನು ಸೌಭಾಗ್ಯದ ಸಂಕೇತವೆಂದೂ ಕರೆಯಲಾಗುತ್ತದೆ. ಶ್ರಾವಣದಲ್ಲಿ ಮಹಿಳೆಯರು ಮಹಾಲಕ್ಷ್ಮಿ ಹಾಗೂ ಗೌರಿ ಪೂಜೆ, ವರಲಕ್ಷ್ಮಿ ವ್ರತಗಳನ್ನು ಆಚರಿಸಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಈ ತಿಂಗಳಲ್ಲಿ ಮಹಿಳೆಯರು ಹಸಿರು ಬಟ್ಟೆ ಹಾಗೂ ಹಸಿರು ಬಳೆಗಳನ್ನು ಧರಿಸುವುದು ಅತ್ಯಂತ ಶುಭಪ್ರದ ಎಂಬ ಆಚರಣೆ ಅನಾದಿ ಕಾಲದಿಂದಲೂ ಬಂದಿದೆ.

ಆದರೆ, ಶ್ರಾವಣ ಮಾಸದಲ್ಲಿ ಪತಿಯು ತನ್ನ ಪತ್ನಿಗೆ ಹಸಿರು ಬಣ್ಣದ ಬಳೆಗಳನ್ನು ಕೊಡುಗೆಯಾಗಿ ಕೊಡಿಸುವುದು ಅತ್ಯಂತ ಶ್ರೇಷ್ಠ ಹಾಗೂ ವಿಶೇಷ ಫಲ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ದಂಪತಿಗಳ ನಡುವಿನ ಪ್ರೀತಿ-ವಾತ್ಸಲ್ಯ ಹೆಚ್ಚುವುದಲ್ಲದೆ, ಜಾತಕದಲ್ಲಿ ಶುಕ್ರ ಗ್ರಹವು ಬಲಗೊಂಡು ಸಂಪತ್ತು ದ್ವಿಗುಣಗೊಳ್ಳುತ್ತದೆ. ಇದರ ಪೂರ್ಣ ಮಹತ್ವವನ್ನು ವಿವರವಾಗಿ ತಿಳಿಯೋಣ.

ಶುಕ್ರ ಗ್ರಹದ ಬಲವರ್ಧನೆ ಮತ್ತು ಧನ ಲಾಭ:

ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವನ್ನು ದಾಂಪತ್ಯ ಸುಖ, ಆಕರ್ಷಣೆ ಮತ್ತು ಸಂಪತ್ತಿನ ಕಾರಕ ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ರವಾರದಂದು ಪತಿ-ಪತ್ನಿ ಒಟ್ಟಾಗಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ/ಗೌರಿ ದೇವಿಯ ದರ್ಶನ ಪಡೆದ ನಂತರ, ಪತಿಯು ತನ್ನ ಕೈಯಾರೆ ಪತ್ನಿಗೆ ಹಸಿರು ಬಳೆಗಳನ್ನು ಕೊಡಿಸಿ ಧರಿಸಿದರೆ ಪತ್ನಿಗೆ ಅದೃಷ್ಟ ಒಲಿಯುತ್ತದೆ. ಇದರಿಂದ ಆಕೆಯ ಜಾತಕದಲ್ಲಿ ಶುಕ್ರ ಗ್ರಹವು ಬಲಗೊಂಡು, ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಹಣಕಾಸಿನ ಅಭಿವೃದ್ಧಿ ಹಾಗೂ ಲಕ್ಷ್ಮಿ ಕೃಪೆ ಉಂಟಾಗುತ್ತದೆ.

ದಾಂಪತ್ಯ ಜೀವನದಲ್ಲಿ ನೆಮ್ಮದಿ ಮತ್ತು ಪತಿಯ ಆಯುಷ್ಯ ವೃದ್ಧಿ:

ಶ್ರಾವಣ ಮಾಸದಲ್ಲಿ ಹಸಿರು ಬಳೆಗಳನ್ನು ಧರಿಸುವುದರಿಂದ ಪತಿಯ ಆಯುಷ್ಯ ಮತ್ತು ಆರೋಗ್ಯ ಹೆಚ್ಚಾಗುತ್ತದೆ ಎಂಬ ದೃಢವಾದ ನಂಬಿಕೆಯಿದೆ. ಪತಿ ತನ್ನ ಪ್ರೀತಿಯ ಸಂಕೇತವಾಗಿ ತಂದುಕೊಡುವ ಈ ಬಳೆಗಳನ್ನು ಧರಿಸುವುದರಿಂದ ದಂಪತಿಗಳ ನಡುವೆ ಇರುವ ಮನಸ್ತಾಪಗಳು ದೂರವಾಗಿ, ದಾಂಪತ್ಯ ಜೀವನವು ಯಾವುದೇ ಸಮಸ್ಯೆಗಳಿಲ್ಲದೆ ಸುಖ-ಸಮೃದ್ಧಿಯಿಂದ ಕೂಡಿರುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸಂತಾನ ಭಾಗ್ಯ ಮತ್ತು ಆರೋಗ್ಯ ವೃದ್ಧಿ:

ಸನಾತನ ಧರ್ಮದಲ್ಲಿ ಹಸಿರು ಬಣ್ಣವನ್ನು ಪ್ರಕೃತಿ, ವೃದ್ಧಿ ಮತ್ತು ಫಲವತ್ತತೆಯ (Fertility) ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಂತಾನ ನಿರೀಕ್ಷೆಯಲ್ಲಿರುವವರು ಅಥವಾ ಗರ್ಭಿಣಿಯರು ಶ್ರಾವಣ ಮಾಸದಲ್ಲಿ ಹಸಿರು ಬಳೆಗಳನ್ನು ಧರಿಸುವುದು ಅತ್ಯಂತ ಒಳಿತೆಂದು ವಿದ್ವಾಂಸರು ಹೇಳುತ್ತಾರೆ. ಗೌರಿ ದೇವಿಯ ವಿಶೇಷ ಅನುಗ್ರಹದಿಂದ ಗರ್ಭಧಾರಣೆಯ ಅವಕಾಶಗಳು ಹೆಚ್ಚಾಗುತ್ತವೆ ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯಕ್ಕೂ ಇದು ಧನಾತ್ಮಕ ಶಕ್ತಿಯನ್ನು ನೀಡುತ್ತದೆ.

ಗೌರಿ ದೇವಿಯ ವಿಶೇಷ ಆಶೀರ್ವಾದ:

ಪತಿ ಪ್ರೀತಿಯಿಂದ ತಂದುಕೊಡುವ ಹಸಿರು ಬಳೆಗಳನ್ನು ಧರಿಸಿ ಧಾರ್ಮಿಕ ಪೂಜೆಗಳನ್ನು ನೆರವೇರಿಸುವುದರಿಂದ ಸಾಕ್ಷಾತ್ ಗೌರಿಯ ಪರಿಪೂರ್ಣ ಆಶೀರ್ವಾದ ಕುಟುಂಬಕ್ಕೆ ಸಿಗುತ್ತದೆ. ಇದು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಗಂಡ ಮತ್ತು ಹೆಂಡತಿಯ ನಡುವಿನ ಆತ್ಮೀಕ ಸಂಬಂಧವನ್ನು ಗಟ್ಟಿಗೊಳಿಸುವ ಸುಂದರ ಸಂಪ್ರದಾಯವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ; ಹಿಟ್ ಆ್ಯಂಡ್ ರನ್​​ಗೆ ಬೈಕ್ ಸವಾರರಿಬ್ಬರು ಸಾವು – Kannada News | Hit and Run: 2 Bike Riders Die in Konanakere Tragedy; Police Hunt Driver

ಪ್ರಾತಿನಿಧಿಕ ಚಿತ್ರImage Credit source: Getty images

ಚಾಮರಾಜನಗರ, ಆಗಸ್ಟ್​​ 09: ಜಿಲ್ಲೆಯ ಹನೂರು ತಾಲೂಕಿನ ಕೋಣನಕೆರೆ ಗ್ರಾಮದ ಬಳಿ ಭಾನುವಾರ ಭೀಕರ ಹಿಟ್ ಆ್ಯಂಡ್ ರನ್ (Hit and Run) ಸಂಭವಿಸಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವ ಘಟನೆ ನಡೆದಿದೆ. ಯುವರಾಜ್(50) ಮತ್ತು ಶಶಾಂಕ್(25) ಮೃತ ಬೈಕ್ ಸವಾರರು. ರಾಮಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ನಿವಾಸಿ ಯುವರಾಜ್ (50) ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಮೂಲದ ಶಶಾಂಕ್ (25) ಇಬ್ಬರು ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಭರ್ಜರಿ ಕಾರ್ಯಾಚರಣೆ, 40 ಮಂದಿ ವಶಕ್ಕೆ

ಕೋಣನಕೆರೆ ಗ್ರಾಮದ ಬಳಿ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವೆಸಗಿದ ತಕ್ಷಣ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಚಾಲಕನ ಪತ್ತೆಗಾಗಿ ಪೊಲೀಸರು ಶೋಧ

ಇನ್ನು ಘಟನಾ ಸ್ಥಳಕ್ಕೆ ರಾಮಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಪರಾರಿಯಾಗಿರುವ ಅಪರಿಚಿತ ವಾಹನ ಹಾಗೂ ಚಾಲಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಗಸ್ತು ವೇಳೆ ಕಾಡಾನೆ ದಾಳಿಯಿಂದ ಫಾರೆಸ್ಟ್ ವಾಚರ್ ಸಾವು

ಗಸ್ತು ವೇಳೆ ಕಾಡಾನೆ ದಾಳಿಯಿಂದ ಫಾರೆಸ್ಟ್ ವಾಚರ್ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ವಲಯದ ಹುಣಸೆ ಬಯಲು ಅರಣ್ಯದಲ್ಲಿ ನಡೆದಿದೆ. ಮಲೆಮಹದೇಶ್ವರ ಬೆಟ್ಟ ನಿವಾಸಿ ಮಹಾದೇವಸ್ವಾಮಿ (48) ಮೃತ ಫಾರೆಸ್ಟ್ ವಾಚರ್. ಇನ್ನು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ – Kannada News | Shubman Gill’s Timely Return: India vs Sri Lanka Practice Match Boosts Team Confidence

ಗಿಲ್ ಗಾಯದ ಬಗ್ಗೆ ಹೇಳಿಕೆ ನೀಡಿದ್ದ ಬಿಸಿಸಿಐ, ‘ಗುರುವಾರ ಭಾರತದ ಅಭ್ಯಾಸದ ಸಮಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಗಾಯವಾಗಿದೆ. ಮುನ್ನೆಚ್ಚರಿಕೆಯಾಗಿ, ಶ್ರೀಲಂಕಾ XI ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನದಂದು ಅವರು ಮೈದಾನಕ್ಕೆ ಇಳಿಯುವುದಿಲ್ಲ. ಗಿಲ್ ಅನುಪಸ್ಥಿತಿಯಲ್ಲಿ, ಉಪನಾಯಕ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದಿತ್ತು(PC-PTI).

Source link

ಹೈದರಾಬಾದ್: ನಲ್ಸಾರ್ ಕಾನೂನು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಲು ವಿದ್ಯಾರ್ಥಿಗಳಿಂದ ವಿರೋಧ? – Kannada News | CJI as chief guest for NALSAR convocation, students oppose

ಹೈದರಾಬಾದ್, ಆಗಸ್ಟ್ 9: ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ (NALSAR University of Law) 2026ರ ಸಾಲಿನ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಗುಂಪೊಂದು, ಮುಂಬರುವ ಘಟಿಕೋತ್ಸವ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

2026ರ ಬ್ಯಾಚ್‌ನ ಹೊರಹೋಗುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿಗಳು (VC), ರಿಜಿಸ್ಟ್ರಾರ್ ಮತ್ತು ಉಪನ್ಯಾಸಕರಿಗೆ ಜಂಟಿ ಪತ್ರ ಬರೆದಿದ್ದು, ಸಿಜೆಐ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ವಿರೋಧಕ್ಕೆ ಕಾರಣ: ಇತ್ತೀಚಿನ ಜಂತರ್ ಮಂತರ್ ಪ್ರತಿಭಟನೆ ಮತ್ತು ಇತರ ನ್ಯಾಯಾಂಗ ವಿಚಾರಣೆಗಳ ಸಂದರ್ಭದಲ್ಲಿ ಸಿಜೆಐ ಸೂರ್ಯ ಕಾಂತ್ ಅವರು ನೀಡಿದರೆನ್ನಲಾದ ಕೆಲವು ಹೇಳಿಕೆಗಳು ಹಾಗೂ ವಿದ್ಯಾರ್ಥಿ ಪ್ರತಿಭಟನೆ ಬಗ್ಗೆ ವ್ಯಕ್ತಪಡಿಸಿದ ನಿಲುವುಗಳು ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಜವಾಬ್ದಾರಿಯ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 90ರ ದಶಕದ ಕರಾಳ ಕಾಶ್ಮೀರಿ ಉಗ್ರ ಇತಿಹಾಸ ಮರುಕಳಿಸುತ್ತಿದೆಯೇ? ಪಂಡಿತರಿಗೆ ಶುರುವಾಗಿವೆ ಉಗ್ರ ಬೆದರಿಕೆಗಳು

‘ಅವರ ಕೈಯಿಂದ ಪದವಿ ಪಡೆಯಲು ಇಷ್ಟವಿಲ್ಲ’

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ಅತ್ಯಂತ ಮಹತ್ವದಾಗಿರುವ ಘಟಿಕೋತ್ಸವದಲ್ಲಿ ಇಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಯಿಂದ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸುವುದು ಸೂಕ್ತವಲ್ಲ ಎಂದು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವವಿದ್ಯಾಲಯದ ಪ್ರತಿಕ್ರಿಯೆ: ನಲ್ಸಾರ್ ವಿಶ್ವವಿದ್ಯಾಲಯದ ಸಮಾರಂಭಗಳಲ್ಲಿ ಸಿಜೆಐ ಅವರನ್ನು ಆಹ್ವಾನಿಸುವುದು ಈ ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಆದರೆ ವಿದ್ಯಾರ್ಥಿಗಳ ಈ ಆಕ್ಷೇಪಣಾ ಪತ್ರದ ಕುರಿತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ಓಣಂ ಹಬ್ಬದ ಹಿನ್ನೆಲೆ ಕೇರಳಕ್ಕೆ ತೆರಳುವ ಪ್ರಯಾಣಿಕರಿಗಾಗಿ ಕೆಎಸ್‌ಆರ್‌ಟಿಸಿಯಿಂದ 90 ವಿಶೇಷ ಬಸ್‌ಗಳ ವ್ಯವಸ್ಥೆ

ಮುಂಬೈನಲ್ಲೂ ಮುಂದೂಡಿಕೆಯಾಗಿತ್ತು ಟಿಸ್ ಘಟಿಕೋತ್ಸವ ಕಾರ್ಯಕ್ರಮ

ಎರಡು ವಾರಗಳ ಹಿಂದೆ ಮುಂಬೈನಲ್ಲಿರುವ ಟಾಟಾ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಸಂಸ್ಥೆಯ 86ನೇ ಘಟಿಕೋತ್ಸವ ಕೂಡ ಮುಂದೂಡಿಕೆ ಆಗಿತ್ತು. ಆಗಸ್ಟ್ 2ರಂದು ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಆದರೆ, ಭದ್ರತಾ ಕಳವಳ ವ್ಯಕ್ತಪಡಿಸಿ, ಶಿಕ್ಷಣ ಸಂಸ್ಥೆಯು ಘಟಿಕೋತ್ಸವ ಕಾರ್ಯಕ್ರಮವನ್ನು ಮುಂದೂಡಿತ್ತು. ಕೆಲ ವರದಿಗಳ ಪ್ರಕಾರ, ಸಿಜೆಐ ಮುಖ್ಯ ಅತಿಥಿಗಳಾಗಿರುವುದಕ್ಕೆ ವಿದ್ಯಾರ್ಥಿ ಸಂಘಟನೆಗಳ ವಿರೋಧ ಬಂದಿತ್ತು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು

ಪೊಲೀಸ್ ಇಲಾಖೆಯಲ್ಲಿ ಧಕ್ಷ ಅಧಿಕಾರಿಗಳಿಗೆ, ಅಪ್ರತಿಮ ಸಾಧಕರಿಗೆ, ಕರ್ತವ್ಯಪ್ರಜ್ಞೆ ಜೊತೆ ಮಾನೀಯತೆಯನ್ನು ಮೆರೆದ ಆರಕ್ಷಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಟಿವಿ9 ಮಾಡಿತು. ಇತ್ತೀಚೆಗಷ್ಟೆ ನಡೆದ ಟಿವಿ9 ಸೆಲ್ಯೂಟ್ ಕಾರ್ಯಕ್ರಮದಲ್ಲಿ ದಕ್ಷ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳ ಜೊತೆಗೆ ಸಚಿವರು, ಸಿನಿಮಾ ನಟರು ಸಹ ಭಾಗಿ ಆಗಿದ್ದರು. ನಟ ಡಾಲಿ ಧನಂಜಯ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಪೊಲೀಸ್ ವ್ಯವಸ್ಥೆ, ಪೊಲೀಸ್ ಕರ್ತವ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ತಾವು ಸಿನಿಮಾಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದಾಗ ಒಂದು ಜೋಶ್ ಬರುತ್ತದೆ ಎಂದು ಅವರು ನೆನಪು ಮಾಡಿಕೊಂಡರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | August Weekly Horoscope 2026: Planetary Shifts Impact Your Zodiac Sign Check Your Rashi Bhavishya

ಆಗಷ್ಟ್ ನ ಈ ವಾರದಲ್ಲಿ ಸೂರ್ಯ, ಗುರು ಮತ್ತು ಬುಧ ಕಟಕ ರಾಶಿಯಲ್ಲಿದ್ದು ಶುಭ ಯೋಗಗಳನ್ನು ರೂಪಿಸುತ್ತಿವೆ. ಚಂದ್ರ ಮತ್ತು ಶುಕ್ರ ಕನ್ಯಾ ರಾಶಿಯಲ್ಲಿದ್ದರೆ, ಮಂಗಳ ಮಿಥುನ ರಾಶಿಯಲ್ಲಿದ್ದಾನೆ. ಮೀನ ರಾಶಿಯಲ್ಲಿ ಶನಿ, ಕುಂಭದಲ್ಲಿ ರಾಹು ಹಾಗೂ ಸಿಂಹ ರಾಶಿಯಲ್ಲಿ ಕೇತು ಸಂಚರಿಸುತ್ತಿದ್ದಾರೆ. ಇದು ಅಯಾ ರಾಶಿಗಳಿಗೆ ಮಹತ್ತ್ವದ ತಿರುವಿನ ಸಂದರ್ಭ ಆಗಲಿ.

​ಮೇಷ ರಾಶಿ:

ಸಹೋದರರೊಂದಿಗೆ ಬಾಂಧವ್ಯ ವೃದ್ಧಿಸಲಿದ್ದು, ಅವರ ಸಹಾಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಆದರೆ, ಆರೋಗ್ಯದ ವಿಚಾರದಲ್ಲಿ, ವಿಶೇಷವಾಗಿ ರಕ್ತದೊತ್ತಡ ಮತ್ತು ಶಿರೋವೇದನೆಯಂತಹ ಸಮಸ್ಯೆಗಳಿದ್ದರೆ ಎಚ್ಚರವಹಿಸಿ. ಸಾಲದ ವಹಿವಾಟಿನಿಂದ ದೂರವಿರುವುದು ಸೂಕ್ತ.

​ವೃಷಭ ರಾಶಿ:

ಪಂಚಮ ಭಾವದಲ್ಲಿ ಶುಕ್ರ ಮತ್ತು ಚಂದ್ರರ ಅನುಕೂಲಕರ ಸ್ಥಿತಿಯಿಂದ ಸೃಜನಶೀಲತೆ ಹೆಚ್ಚಾಗಲಿದೆ. ಕಲಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ಆರ್ಥಿಕವಾಗಿ ಲಾಭದಾಯಕ ವಾರವಾಗಿದ್ದು, ವ್ಯಾಪಾರ-ವಹಿವಾಟಿನಲ್ಲಿ ಹೊಸ ಹೂಡಿಕೆಗೆ ವಾತಾವರಣ ಅನುಕೂಲಕರವಾಗಿದೆ. ಕುಟುಂಬದಲ್ಲಿ ಮಾಂಗಲ್ಯ ಕಾರ್ಯಗಳ ಚರ್ಚೆ ನಡೆಯಬಹುದು. ಸಣ್ಣಪುಟ್ಟ ಪ್ರಯಾಣಗಳು ಸಂತಸ ತರಲಿವೆ.

​ಮಿಥುನ ರಾಶಿ :

ನಿಮ್ಮ ಲಗ್ನದಲ್ಲೇ ಮಂಗಳನಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಬಹುದು, ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ದ್ವಿತೀಯದ ಗುರು ಮತ್ತು ಬುಧರ ಕೃಪೆಯಿಂದ ಮಾತು ಲಲಿತವಾಗಿರಲಿದ್ದು, ಮಾತಿನಿಂದಲೇ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವುದು ಸೂಕ್ತ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿಯೇ ಸೂರ್ಯ, ಗುರು ಹಾಗೂ ಬುಧರ ಸಂಯೋಜನೆಯು ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸುತ್ತದೆ. ಸಮಾಜ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಹೆಸರು ಹಾಗೂ ಗೌರವ ಸಿಗಲಿದೆ. ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಆಸ್ತಿ ಅಥವಾ ವಾಹನ ಖರೀದಿಗೆ ಸೂಕ್ತ ಯೋಜನೆ ರೂಪಿಸುವಿರಿ.

​ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಸಂಚರಿಸುತ್ತಿರುವುದರಿಂದ ಮನಸ್ಸಿನಲ್ಲಿ ಅಸ್ಥಿರತೆ ಮತ್ತು ಚಿಂತೆಗಳು ಉಂಟಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಜೆಟ್ ನಿಯಂತ್ರಣದಲ್ಲಿಡಬೇಕು. ದ್ವಾದಶ ಭಾವದ ಗ್ರಹಗಳ ಪ್ರಭಾವದಿಂದಾಗಿ ವಿದೇಶಿ ವ್ಯಾಪಾರ ಅಥವಾ ವಿದೇಶಿ ಸಂಪರ್ಕಗಳಿಂದ ಲಾಭ ಸಿಗಬಹುದು. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಧ್ಯಾನ ಮತ್ತು ಯೋಗದಿಂದ ಮನಸ್ಸಿಗೆ ಶಾಂತಿ ಸಿಗಲಿದೆ.

ಕನ್ಯಾ ರಾಶಿ :

ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರ ಯುತಿಯು ವ್ಯಕ್ತಿತ್ವದಲ್ಲಿ ಆಕರ್ಷಣೆ ತರಲಿದೆ. ಏಕಾದಶ ಭಾವದಲ್ಲಿರುವ ಸೂರ್ಯ-ಗುರುಗಳ ಬಲದಿಂದ ಆರ್ಥಿಕ ಅಭಿವೃದ್ಧಿ ಸ್ಪಷ್ಟವಾಗಿ ಗೋಚರಿಸಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಉದ್ಯೋಗಸ್ಥರಿಗೆ ಬಡ್ತಿ ಅಥವಾ ಆರ್ಥಿಕ ಲಾಭದ ಸೂಚನೆಗಳಿವೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ.

​ತುಲಾ ರಾಶಿ :

ದಶಮ ಭಾವದಲ್ಲಿ ಬಲವಾದ ಗ್ರಹಗಳ ಉಪಸ್ಥಿತಿಯಿಂದಾಗಿ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಉದ್ಯೋಗ ಬದಲಾವಣೆಗೆ ಬಯಸುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಬೆಂಬಲ ದೊರೆಯಲಿದೆ. ನೂತನ ಗೃಹ ನಿರ್ಮಾಣ ಅಥವಾ ವಾಹನ ಖರೀದಿ ವಿಚಾರದಲ್ಲಿ ಸಕಾರಾತ್ಮಕ ಮುನ್ನಡೆ ಕಾಣಬಹುದು. ಕುಟುಂಬದಲ್ಲಿ ನೆಮ್ಮದಿ ಇರಲಿದೆ.

​ವೃಶ್ಚಿಕ ರಾಶಿ:

ಭಾಗ್ಯಸ್ಥಾನದಲ್ಲಿ ಗುರು ಮತ್ತು ಬುಧರ ಅನುಕೂಲಕರ ಸಂಚಾರದಿಂದ ಕೈಗೊಂಡ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಒಲಿಯಲಿದೆ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ. ದೂರದ ಕ್ಷೇಮಾಭಿವೃದ್ಧಿ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ.

​ಧನುಸ್ಸು ರಾಶಿ:

ಅಷ್ಟಮ ಭಾವದಲ್ಲಿ ಗ್ರಹಗಳ ಸಂಚಾರವಿರುವುದರಿಂದ ಅನಗತ್ಯ ಗೊಂದಲ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ಚಾಲನೆ ಮಾಡುವಾಗ ಎಚ್ಚರವಿರಲಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆದಾಗ್ಯೂ, ಸಂಶೋಧನೆ ಹಾಗೂ ಗೂಢಶಾಸ್ತ್ರಗಳಲ್ಲಿ ಆಸಕ್ತಿ ಇರುವವರಿಗೆ ಇದು ಉತ್ತಮ ಸಮಯ. ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ:

ಸಪ್ತಮ ಭಾವದಲ್ಲಿರುವ ಗ್ರಹಗಳ ಅನುಗ್ರಹದಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಲಿದೆ. ವ್ಯಾಪಾರ ಮತ್ತು ಪಾಲುದಾರಿಕೆ ವಹಿವಾಟುಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಹೊಸ ಪರಿಚಯಸ್ಥರಿಂದ ವೃತ್ತಿಬದುಕಿಗೆ ಸಹಾಯ ಸಿಗಲಿದೆ. ಆರೋಗ್ಯ ಸ್ಥಿರವಾಗಿರುತ್ತದೆ.

​ಕುಂಭ ರಾಶಿ:

ನಿಮ್ಮ ರಾಶಿಯಲ್ಲಿ ರಾಹುವಿನ ಸ್ಥಿತಿ ಹಾಗೂ ಆರನೇ ಭಾವದ ಬಲದಿಂದಾಗಿ ಶತ್ರುಗಳ ಮೇಲೆ ಮೇಲುಗೈ ಸಾಧಿಸುವಿರಿ. ಹಳೆಯ ಕೋರ್ಟ್ ವ್ಯಾಜ್ಯಗಳು ಅಥವಾ ತಂಟೆ-ತಕರಾರುಗಳು ನಿಮ್ಮ ಪರವಾಗಿ ಬಗೆಹರಿಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಅತಿಯಾದ ಕೆಲಸದ ಒತ್ತಡದಿಂದ ದೈಹಿಕ ಆಯಾಸ ಉಂಟಾಗದಂತೆ ನೋಡಿಕೊಳ್ಳಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ಇರುವುದರಿಂದ ಮಾನಸಿಕ ಒತ್ತಡ ಅಥವಾ ಕೆಲಸಗಳಲ್ಲಿ ನಿಧಾನಗತಿ ಅನುಭವಕ್ಕೆ ಬರಬಹುದು. ಆದರೆ ಪಂಚಮ ಭಾವದಲ್ಲಿರುವ ಗುರು ಮತ್ತು ಬುಧರ ಶುಭ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ಫಲಿತಾಂಶ ಸಿಗಲಿದೆ. ಸಂತಾನ ಅಪೇಕ್ಷಿಗಳಿಗೆ ಶುಭ ವಾರ್ತೆ ಸಿಗುವ ಸಾಧ್ಯತೆಯಿದೆ. ಆಲೋಚಿಸಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಫಲ ದೊರೆಯಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Sun, 9 August 26

Source link

Exit mobile version