ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ, ಗಾಯಾಳು ಪತ್ನಿ ಹೇಳಿದ್ದಿಷ್ಟು – Kannada News | Bannerghatta Park Keeper Injured in Leopard Attack: What did Keeper wife said

ಆನೇಕಲ್​, ಫೆಬ್ರವರಿ 13: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಉದ್ಯಾನವನದ ಪ್ರಾಣಿ ಪಾಲಕ ಶಾಂತಪ್ಪ ಮೇಲೆ ಚಿರತೆ ದಾಳಿ ಮಾಡಿದ್ದು, ಮುಖ, ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದ್ಯ ಶಾಂತಪ್ಪರನ್ನ ಜಿಗಣಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಗ್ಗೆ ಶಾಂತಪ್ಪ ಪತ್ನಿ ಜಯಮ್ಮ ಪ್ರತಿಕ್ರಿಯಿಸಿದ್ದು, ಬನ್ನೇರುಘಟ್ಟ ಝೂನಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿದ್ದರು. ಇದೀಗ ಚಿರತೆ ದಾಳಿ ಮಾಡಿದೆ. ಮನೆಗೆ ಆಧಾರವಾಗಿದ್ದಾರೆ. ಅವರನ್ನ ಖಾಯಂ ನೌಕರರನ್ನಾಗಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ – Kannada News | Seva Teerth to fulfill aspirations of 140 crore Indians not of any monarch PM Modis first Speech from new office

ನವದೆಹಲಿ, ಫೆಬ್ರವರಿ 13: ಇಂದು ಹೊಸದಾಗಿ ಉದ್ಘಾಟನೆಗೊಂಡ ‘ಸೇವಾ ತೀರ್ಥ’ ಕಟ್ಟಡದಲ್ಲಿ ತಮ್ಮ ಮೊದಲ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಭಾರತ ದೇಶ ಹೊಸ ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. “ನಾವೆಲ್ಲರೂ ಹೊಸ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವ ಮೂಲಕ ಹೊಸ ಹಾದಿಯತ್ತ ಹೆಜ್ಜೆ ಹಾಕುತ್ತಿದ್ದೇವೆ. ಇಂದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಹೊಸ ಆರಂಭಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ‘ವಿಕಸಿತ ಭಾರತ’ ಸಾಧಿಸುವ ಸಂಕಲ್ಪದೊಂದಿಗೆ ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಪ್ರವೇಶಿಸುತ್ತಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಬೆಟ್ಟದಲ್ಲಿರುವ ವಸಾಹತುಶಾಹಿ ಯುಗದ ಸೌತ್ ಬ್ಲಾಕ್ ಅನ್ನು ತೊರೆದ ಪ್ರಧಾನಿ ಮೋದಿ ಸೇವಾ ತೀರ್ಥದಲ್ಲಿರುವ ತಮ್ಮ ಹೊಸ ಕಚೇರಿಯಿಂದ ಕಾರ್ಯಾರಂಭ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಇಂದು ಸೇವಾ ತೀರ್ಥ ಮತ್ತು ಕರ್ತವ್ಯ ಭವನ 1 ಮತ್ತು 2 ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ “ಹೊಸ ಕಟ್ಟಡಗಳು ನಾಗರಿಕ ಕೇಂದ್ರಿತ ಆಡಳಿತ ಮತ್ತು ರಾಷ್ಟ್ರೀಯ ಪ್ರಗತಿಗೆ ದೇಶದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.

“ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳನ್ನು ಬ್ರಿಟಿಷ್ ಸರ್ಕಾರದ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ನಿರ್ಮಿಸಲಾಗಿತ್ತು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದಂತಹ ಹೊಸ ಸಂಕೀರ್ಣಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪೂರೈಸಲು ನಿರ್ಮಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಆಧರಿಸಿರುತ್ತವೆಯೇ ಹೊರತು ಮಹಾರಾಜರ ದೃಷ್ಟಿಕೋನವನ್ನು ಆಧರಿಸಿರುವುದಿಲ್ಲ” ಎಂದು ಪ್ರಧಾನ ಮಂತ್ರಿ ಸೇವಾ ತೀರ್ಥದ ಸಭೆಯನ್ನುದ್ದೇಶಿಸಿ ಹೇಳಿದರು.

ಇದನ್ನೂ ಓದಿ: ಮಹಿಳೆಯರು, ರೈತರು, ಯುವಕರಿಗೆ ಗುಡ್ ನ್ಯೂಸ್; ಸೇವಾ ತೀರ್ಥ ಕಚೇರಿಯಲ್ಲಿ ಪ್ರಧಾನಿ ಮೋದಿ ಮೊದಲ ನಿರ್ಧಾರ

ಸೇವಾ ತೀರ್ಥವು ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ. ಇವೆಲ್ಲವೂ ಈ ಮೊದಲು ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿದ್ದವು. ಇದರಿಂದ ಇಲಾಖೆಗಳಲ್ಲಿ ಸಮನ್ವಯತೆಗೆ ಸವಾಲಾಗಿತ್ತು. ಕರ್ತವ್ಯ ಭವನ 1 ಮತ್ತು 2 ಕಟ್ಟಡ ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ.

“ಸ್ವಾತಂತ್ರ್ಯದ ನಂತರ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳು ದೇಶಕ್ಕೆ ಅನೇಕ ಪ್ರಮುಖ ನಿರ್ಧಾರಗಳು ಮತ್ತು ನೀತಿಗಳಿಗೆ ವೇಗವರ್ಧಕಗಳಾಗಿದ್ದವು. ಆದರೆ ಈ ಕಟ್ಟಡಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಸಂಕೇತಗಳಾಗಿ ನಿರ್ಮಿಸಲಾಗಿದೆ ಎಂಬುದು ಸತ್ಯ. ಭಾರತವನ್ನು ಶತಮಾನಗಳ ಕಾಲ ಗುಲಾಮಗಿರಿಯ ಸಂಕೋಲೆಯಲ್ಲಿ ಬಂಧಿಸುವುದು ಅವರ ಉದ್ದೇಶವಾಗಿತ್ತು” ಎಂದು ಅವರು ಹೇಳಿದರು.

ಇದನ್ನೂ ಓದಿ: ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

“ಈ 100 ವರ್ಷಗಳಷ್ಟು ಹಳೆಯದಾದ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥ ಮತ್ತು ಕರ್ತವ್ಯ ಭವನಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ ಎಂಬ ಅಂಶದ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸುವುದು ಅತ್ಯಗತ್ಯ” ಎಂದು ಪ್ರಧಾನಿ ಒತ್ತಿ ಹೇಳಿದರು.

ಸ್ವತಂತ್ರ ಭಾರತದ ಪ್ರಮುಖ ರಸ್ತೆಗಳು ಮತ್ತು ಹೆಗ್ಗುರುತುಗಳು ದಶಕಗಳಿಂದ ವಸಾಹತುಶಾಹಿ ಯುಗದ ಹೆಸರುಗಳನ್ನು ಹೊಂದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. “ಪ್ರಧಾನಿ ನಿವಾಸದ ಉದ್ದಕ್ಕೂ ಇರುವ ರಸ್ತೆಯನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಅದೆಲ್ಲವನ್ನೂ ಈಗ ಬದಲಾಯಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್: ಕೈ ಸಾಲದು ಎಂದು ಮೆಷಿನ್ ತಂದ ಅಧಿಕಾರಿಗಳು – Kannada News | Karnataka Corruption: KREIS and PWD Engineers Raided, 23 Cr Unaccounted Assets Found

ಬೆಂಗಳೂರು, ಫೆ.13: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ದನ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಏಕಕಾಲದಲ್ಲಿ ಆರು ಕಡೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದರು. ಈ ದಾಳಿಯ ವೇಳೆ ಅತ್ಯಂತ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಜನಾರ್ದನ್ ಅವರ ಆಪ್ತ ಸುಜಯ್ ಶೆಟ್ಟಿ ಎಂಬುವವರಿಗೆ ಸೇರಿದ ಪ್ಲಾಟ್‌ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದಾಗ, ಬರೋಬ್ಬರಿ 1.70 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಈ ಹಣವು ಎಂಜಿನಿಯರ್ ಜನಾರ್ದನ್ ಅವರಿಗೆ ಸೇರಿದ್ದೇ ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿತ್ತು. ಜನಾರ್ದನ್ ಅವರಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಒಟ್ಟು ಆರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇನ್ನು ಲೋಕೋಪಯೋಗಿ ಇಲಾಖೆ (PWD) ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಇಂಜಿನಿಯರ್‌ಗಳು ಸೇರಿದಂತೆ ನಾಲ್ವರು ಪ್ರಮುಖ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ನಡೆದ ದಾಳಿಯಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಕ್ಕಲಕೋಟೆ ಉತ್ಖನನದ ವೇಳೆ ಶಿಲಾಯುಗ ಕಾಲದ 3ನೇ ಅಸ್ಥಿಪಂಜರ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | 3rd Stone Age Human Skeleton Found in Tekkalakote excavation

ಪತ್ತೆಯಾದ ಮೂರನೇ ಅಸ್ಥಿಪಂಜರImage Credit source: Tv9 Kannada

ಬಳ್ಳಾರಿ, ಫೆಬ್ರವರಿ 13: ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ (Excavation) ವೇಳೆ ಶಿಲಾಯುಗದ ಕಾಲದ 3ನೇ ಅಸ್ಥಿಪಂಜರ ಪತ್ತೆಯಾಗಿದೆ. ಮಡಿಕೆ ಹೊರ ತೆಗೆಯುವ ವೇಳೆ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ ಸಂಶೋಧಕರು ಉತ್ಖನನ ‌ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಉತ್ಖನನ ಸ್ಥಳಕ್ಕೆ ಬಳ್ಳಾರಿ SP ಡಾ.ಸುಮನ್ ಫನ್ನೆಕರ್ ಭೇಟಿ ನೀಡಿ, ಅಸ್ಥಿಪಂಜರ ಮತ್ತು ಮಡಿಕೆ ಕುರಿತು ಮಾಹಿತಿ ಪಡೆದಿದ್ದಾರೆ.

ಈ ಹಿಂದೆ ಪತ್ತೆಯಾಗಿತ್ತು 2 ಅಸ್ಥಿಪಂಜರಗಳು

ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ಕಾರ್ಯ ನಡೆಸುವ ವೇಳೆ ಕೆಲ ದಿನಗಳ ಹಿಂದಷ್ಟೇ 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಮಾತ್ರ ಸಿಕ್ಕಿದ್ದವು. ಆದರೆ ಬಳಿಕ ಹೆಚ್ಚಿನ ಆಳ ಅಗೆದಾಗ ಒಂದರ ಪಕ್ಕದಲ್ಲೊಂದು ಅಸ್ಥಿಪಂಜರಗಳು ಕಂಡುಬಂದಿದ್ದವು. ಆ ಬಳಿಕ ದೊರೆತ ಮೂರನೇ ಅಸ್ಥಿಪಂಜರ ಇದಾಗಿದೆ.

ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಕಾರ್ಯ ಅಪಾಯದ ಹಂತಕ್ಕೆ; ಅಧಿಕಾರಿ, ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ಅಸ್ಥಿಪಂಜರಗಳು ಯಾವುದೇ ರೀತಿಯಲ್ಲೂ ಹಾಳಾಗದೆ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಸಿಕ್ಕಿರುವ ಅಸ್ಥಿಪಂಜರಗಳು  ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಎಂದು ಅಂದಾಜಿಸಲಾಗಿದ್ದು, ನಿಖರ ಕಾಲಮಾನದ ನಿರ್ಧಾರ ಕಾರ್ಬನ್ ಡೇಟಿಂಗ್ ಪರೀಕ್ಷೆ ಬಳಿಕ ಅಂತಿಮವಾಗಿ ತಿಳಿಯಬೇಕಿದೆ. ಮೈಸೂರು ಪ್ರಾಶ್ಚವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಮ್. ಎಸ್. ನಾಗರಾಜ ರಾವ್ 1964ರಲ್ಲಿ ಇದೇ ತೆಕ್ಕಲಕೋಟೆಯಲ್ಲಿ ಉತ್ಖನನ ನಡೆಸಿದ್ದರು. ಈ ಬಗ್ಗೆ The stone is hill dwellers in Tekkalakote ಪುಸ್ತಕದಲ್ಲಿ ಅವರು ಆ ಬಗ್ಗೆ ಸಂಪೂರ್ಣ ವಿವರ ನೀಡಿದ್ದರು ಎಂಬುದು ಕೂಡ ಇಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

6 ವರ್ಷದ ಮಗುವಿನ ಪಾಲಿಗೆ ಯಮನಾದ 12ನೇ ತರಗತಿ ವಿದ್ಯಾರ್ಥಿ – Kannada News | Lucknow Class 12 student rams car into people 6 year old killed

ಲಕ್ನೋ, ಫೆಬ್ರವರಿ 13: ಉತ್ತರ ಪ್ರದೇಶದ ಲಕ್ನೋದ (Lucknow) ಕಾನ್ಪುರ ರಸ್ತೆಯಲ್ಲಿ ಗುರುವಾರ ಸಂಜೆ ಕಾರೊಂದು ಆಟೋರಿಕ್ಷಾ ಮತ್ತು ಪಾದಚಾರಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ 6 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಇತರ ನಾಲ್ವರು ಗಾಯಗೊಂಡಿದ್ದಾರೆ. ವೇಗವಾಗಿ ಕಾರು ಚಲಾಯಿಸುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿ ತನ್ನ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಪಾರ್ಟಿಯಲ್ಲಿ ಭಾಗವಹಿಸಿ ಸ್ನೇಹಿತನೊಂದಿಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಬಳಿಕ ತನ್ನ ಸ್ನೇಹಿತನನ್ನು ಸ್ಥಳದಲ್ಲಿಯೇ ಬಿಟ್ಟು ಆತ ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Video: ಕೇರಳದಲ್ಲಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ, ಎದೆ ಝೆಲ್ಲೆನಿಸೋ ವಿಡಿಯೋ

ಆರೋಪಿಯು ಸ್ನೇಹಿತನ ಕಾರನ್ನು ಓಡಿಸುತ್ತಿದ್ದು, ಡ್ರೈವಿಂಗ್ ಲೈಸೆನ್ಸ್ ಕೂಡ ಹೊಂದಿದ್ದಾನೆ. ಆತನ ತಂದೆ ಈ ಪ್ರದೇಶದಲ್ಲಿ ಸಿಮೆಂಟ್ ಅಂಗಡಿ ಹೊಂದಿದ್ದಾರೆ. ಆ ಯುವಕನ ಡ್ರೈವಿಂಗ್ ಲೈಸೆನ್ಸ್ ಪ್ರಕಾರ ಆತನಿಗೆ 21 ವರ್ಷ ವಯಸ್ಸು. ಆದರೆ, ಅವನು ಇನ್ನೂ 12ನೇ ತರಗತಿಯಲ್ಲಿ ಏಕೆ ಇದ್ದಾನೆ ಎಂಬುದನ್ನು ನಾವು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಕ್ಯಾಂಟರ್​ ಚಾಲಕ

ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಅರ್ಮಾನ್ (12), ಅವಧ್ ಬಿಹಾರಿ (42), ಸಾಧನಾ ವರ್ಮಾ (35) ಮತ್ತು ಮೀನಾ ದೇವಿ (60) ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ 6 ವರ್ಷದ ದೀಕ್ಷಾಂತ್ ಪಟೇಲ್.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಘಟನೆಯ ಸಿಸಿಟಿವಿ ವೀಡಿಯೊದಲ್ಲಿ ಕಾರು ವೇಗವಾಗಿ ಚಲಿಸುತ್ತಿರುವುದನ್ನು ನೋಡಬಹುದು. ಆ ಕಾರು ಮೊದಲು ಬೈಕ್​ಗೆ ಡಿಕ್ಕಿ ಹೊಡೆದ ನಂತರ ಆಟೋರಿಕ್ಷಾ ಮತ್ತು ಹಲವಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:37 pm, Fri, 13 February 26

Source link

ಗ್ರಾಹಕರು ಮಾತನಾಡಿದ್ದನ್ನು ಆಲಿಸಿ ಭರ್ಜರಿ ಡಾಟಾ ಸೃಷ್ಟಿ; ಬಜಾಜ್ ಫೈನಾನ್ಸ್​ಗೆ ಎಐ ಬಲ – Kannada News | Bajaj Finance implementing AI across its products lines, gets benefits of the new tech

ನವದೆಹಲಿ, ಫೆಬ್ರುವರಿ 13: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ (AI) ಮಾಡಬಹುದಾದ ಕೆಲಸಗಳು ಅಸೀಮ. ಕಾರ್ಪೊರೇಟ್ ಸಂಸ್ಥೆಗಳು ತರಾತುರಿಯಲ್ಲಿ ಎಐ ಅಳವಡಿಕೆಗೆ ಪ್ರಯತ್ನಿಸುತ್ತಿವೆ. ಎಐನಿಂದ ಬ್ಯುಸಿನೆಸ್​ಗೆ ಅದೆಷ್ಟು ಲಾಭವಾಗಬಹುದು ಎನ್ನುವ ಒಂದು ಸಣ್ಣ ನಿದರ್ಶನವನ್ನು ಬಜಾಜ್ ಫಿನಾನ್ಸ್ (Bajaj Finance) ತೋರಿಸಿದೆ. ಈ ಹಣಕಾಸು ಸಂಸ್ಥೆಯು ತನ್ನ ಅನೇಕ ಸೇವೆಗಳಿಗೆ ಎಐ ಅನ್ನು ಆದ್ಯತೆಯಾಗಿ ಅಳವಡಿಸುತ್ತಿದೆ. ಇದರ ಮೂರನೇ ಕ್ವಾರ್ಟರ್​ನ ಲಾಭ ಸಕಾರಾತ್ಮಕವಾಗಿರುವುದು ಮಾತ್ರವಲ್ಲ, ಎಐ ಪ್ರಯೋಗ ಫಲಗಳನ್ನು ಸ್ಪಷ್ಟವಾಗಿ ತೋರಿಸಿದೆ.

ಬಜಾಜ್ ಫಿನಾನ್ಸ್ ಸಂಸ್ಥೆಯ ಸೇಲ್ಸ್​ನಿಂದ ಹಿಡಿದು, ಸರ್ವಿಸ್, ಪಿಒಎಸ್ ವೆರಿಫಿಕೇಶನ್, ಡಾಕ್ಯುಮೆಂಟ್ ಪ್ರೋಸಸಿಂಗ್​ವರೆಗೆ ಒಬ್ಬ ಗ್ರಾಹಕರ ಪೂರ್ಣ ಲೈಫ್ ಸೈಕಲ್​ನಲ್ಲಿ ಎಐ ಅನ್ನು ಅಳವಡಿಸಲಾಗಿದೆ. ‘ಎಐ ಇನ್ನೋವೇಶನ್ ಆಯ್ತು, ಈಗ ಅದನ್ನು ಜಾರಿ ಮಾಡಿದ್ದೇವೆ. ಬ್ಯುಸಿನೆಸ್​ಗೆ ಅದರ ಫಲ ಹೇಗಿದೆ ಎಂಬುದನ್ನು ಗಮನಿಸುತ್ತಿದ್ದೇವೆ’ ಎಂದು ಬಜಾಜ್ ಫೈನಾನ್ಸ್​ನ ವೈಸ್ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಸಿಕ್ಕ ರೀತಿಯಲ್ಲೇ ಭಾರತದ ಜವಳಿಗೂ ಅಮೆರಿಕದಿಂದ ಸುಂಕ ವಿನಾಯಿತಿ: ಪೀಯೂಶ್ ಗೋಯಲ್

ಗ್ರಾಹಕರ ಧ್ವನಿ ಆಲಿಸಿ ಬ್ಯುಸಿನೆಸ್ ಕೊಡುವ ಎಐ

ಗ್ರಾಹಕರ ದತ್ತಾಂಶವನ್ನು ಬಳಸಿ ಏನೆನ್ನೆಲ್ಲಾ ಮಾಡಬಹುದು ಎನ್ನುವುದನ್ನು ಬಜಾಜ್ ಫೈನಾನ್ಸ್ ತೋರಿಸಿಕೊಟ್ಟಿದೆ. ಗ್ರಾಹಕರು ಮಾತನಾಡಿರುವ ಕರೆಯಲ್ಲಿನ ಧ್ವನಿಯನ್ನು ಪಠ್ಯವಾಗಿ ಪರಿವರ್ತಿಸುವ ಕೆಲಸ ಮಾಡಿದ ಎಐ. ಈ ದತ್ತಾಂಶವನ್ನು ವಿಶ್ಲೇಷಿಸಿ, ಗ್ರಾಹಕರಿಗೆ ಸೂಕ್ತವಾದ ಉತ್ಪನ್ನಗಳನ್ನು ಆಫರ್ ಮಾಡಲು ಸಂಸ್ಥೆಗೆ ಸಾಧ್ಯವಾಗಿದೆ. ಬರೋಬ್ಬರಿ 5.2 ಲಕ್ಷ ಗ್ರಾಹಕರ ಮಾತುಗಳನ್ನು ಕೇಳಿಸಿಕೊಂಡು ದತ್ತಾಂಶ ರೂಪಿಸಲಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಗ್ರಾಹಕರಿಗೆ ಕಸ್ಟಮರ್ ಕೇರ್ ಸಿಬ್ಬಂದಿ ಕರೆ ಮಾಡಿ ಮಾತನಾಡಿದ ಸಂದರ್ಭದಲ್ಲಿ ಅವರ ಅನುಮತಿ ಮೇರೆಗೆ ಧ್ವನಿ ರೆಕಾರ್ಡ್ ಮಾಡಲಾಗಿರುತ್ತದೆ. ಅಂಥ ಕರೆಗಳಲ್ಲಿನ ಧ್ವನಿಯನ್ನು ಎಐ ಮೂಲಕ ಪಠ್ಯವಾಗಿ ಪರಿವರ್ತಿಸಲಾಗುತ್ತದೆ. ಗ್ರಾಹಕರು ಬೇಡವೆಂದರೆ ಕಾಲ್ ರೆಕಾರ್ಡ್ ಅನುಮತಿಯನ್ನು ನಿರಾಕರಿಸುವ ಆಯ್ಕೆ ಇರುತ್ತದೆ.

ಬಜಾಜ್ ಫೈನಾನ್ಸ್ ಸಂಸ್ಥೆಯ ಎಐ ಕಾಲ್ ಸೆಂಟರ್ ಮೂಲಕ 1,600 ಕೋಟಿ ರೂಗೂ ಅಧಿಕ ಮೊತ್ತದಷ್ಟು ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ ಕರೆಗಳನ್ನು ಬಳಸಿ ತೆಗೆದ ದತ್ತಾಂಶದಿಂದ ಹೆಚ್ಚುವರಿ 325 ಕೋಟಿ ರೂನಷ್ಟು ಲೋನ್ ಬ್ಯುಸಿನೆಸ್ ಸೃಷ್ಟಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: ಎಐ ಕಲಿಯಿರಿ, ಇಲ್ಲವಾ ಕೆಲಸ ಬಿಟ್ಟುಹೋಗಿ; ಉದ್ಯೋಗಿಗಳಿಗೆ ಗೂಗಲ್​ನಿಂದ ವಾಲಂಟರಿ ಎಕ್ಸಿಟ್ ಪ್ಯಾಕೇಜ್​ಗಳ ಆಫರ್

ಇದಷ್ಟೇ ಅಲ್ಲದೆ, ಬಜಾಜ್ ಫೈನಾನ್ಸ್ ವಿವಿಧ ಸ್ತರಗಳಲ್ಲಿ ಎಐ ಅಳವಡಿಕೆ ಮಾಡುತ್ತಿದೆ. ಕಚೇರಿಯಲ್ಲಿ ಮತ್ತು ಪಿಒಎಸ್ ಸೆಂಟರ್​ಗಳಲ್ಲಿ ಗ್ರಾಹಕರ ಚಹರೆಯನ್ನು ದಾಖಲಿಸಿ ಎಐ ಮೂಲಕ ಗುರುತು ಪತ್ತೆ ಮಾಡುವ ಮತ್ತು ಗುರುತು ಖಚಿತಪಡಿಸುವ ಕೆಲಸ ಮಾಡಲಾಗುತ್ತಿದೆ. ಜನರಲ್ ಎಸ್ಸೆಮ್ಮೆಸ್ ಕಳುಹಿಸುವ ಬದಲು ಪ್ರತೀ ಗ್ರಾಹಕರಿಗೆ ಏನು ಅಗತ್ಯವಿದೆಯೋ ಅದನ್ನು ಎಐ ಮೂಲಕ ಗ್ರಹಿಸಿ ಮೆಸೇಜ್ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಸದ್ಯ 11 ಎಐ ಟೆಕ್ಸ್ಟ್ ಬೋಟ್​​ಗಳು ಸಕ್ರಿಯವಾಗಿವೆ. ಪ್ರೊಮೋಶನಲ್ ವಿಡಿಯೋಗಳು, ಬ್ಯಾನರ್​ಗಳನ್ನು ಎಐ ಮೂಲಕ ರಚಿಸಲಾಗುತ್ತಿರುವುದು ಸೇರಿದಂತೆ ಇನ್ನೂ ಹಲವು ಕಾರ್ಯಗಳನ್ನು ಬಜಾಜ್ ಫೈನಾನ್ಸ್ ಎಐ ಮೂಲಕ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಾಶಿವರಾತ್ರಿಗೆ ಊರಿಗೆ ಹೋಗುವವರಿಗೆ ಸಿಹಿಸುದ್ದಿ ನೀಡಿದ ಸಾರಿಗೆ, ರೈಲ್ವೆ ಇಲಾಖೆ – Kannada News | Shivaratri Special Buses: KSRTC Adds 2,155 Services from Bengaluru; Book Tickets

ಬೆಂಗಳೂರು, ಫೆ.13: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಲಕ್ಷಾಂತರ ಜನರು ತಮ್ಮ ಸ್ವಗ್ರಾಮಗಳತ್ತ ಮುಖ ಮಾಡಿದ್ದಾರೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯು ಬರೋಬ್ಬರಿ 2,155 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಘೋಷಿಸಿದೆ. ಹಬ್ಬದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ರಾತ್ರಿಯಿಂದಲೇ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಇದನ್ನು ಮನಗಂಡು ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಜಂಟಿಯಾಗಿ ಹೆಚ್ಚುವರಿ ಬಸ್ಸುಗಳನ್ನು ಬಿಟ್ಟಿದೆ.

ಇಂದಿನಿಂದ 895 ಹೆಚ್ಚುವರಿ ಬಸ್‌ಗಳು ರಸ್ತೆಗೆ ಇಳಿಯಲಿದೆ. ನಾಳೆ 1,180 ಹೆಚ್ಚುವರಿ ಬಸ್‌ಗಳು, ಹಾಗೂ ಭಾನುವಾರ 80 ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುವುದು. ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಕ್ಕೆ ತೆರಳುವ ಬಸ್‌ಗಳು ಇಲ್ಲಿಂದ ಲಭ್ಯವಿರಲಿದೆ. ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ ಮತ್ತು ತಮಿಳುನಾಡು ಕಡೆಗೆ ಹೋಗುವವರಿಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ವಾರ್ಷಿಕ ಪರೀಕ್ಷೆ ಸಮಯದಲ್ಲಿ KSRTC ಬಸ್​​​ನಲ್ಲಿ ಉಚಿತ ಪ್ರಯಾಣ

ಇನ್ನು ನಿಲ್ದಾಣದಲ್ಲಿ ದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಲು ನಿಗಮ ಕೋರಿದೆ. ಹಬ್ಬ ಮುಗಿಸಿ ವಾಪಸ್ ಬರುವವರಿಗೂ ಸಹ ಇದೇ ರೀತಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಮಹಾಶಿವರಾತ್ರಿ ಹಬ್ಬಕ್ಕೆ ವಿಶೇಷ ರೈಲು

ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ (SWR) ಯಶವಂತಪುರ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಘೋಷಿಸಿದೆ. ಇಂದಿನಿಂದ 06209 ಸಂಖ್ಯೆಯ ರೈಲು ಯಶವಂತಪುರದಿಂದ ರಾತ್ರಿ 22:40ಕ್ಕೆ ಹೊರಟು, ಮರುದಿನ ಬೆಳಗ್ಗೆ 09:15ಕ್ಕೆ ಕಲಬುರಗಿ ತಲುಪಲಿದೆ. ರೈಲು ಸಂಖ್ಯೆ 06210 ನಾಳೆ(ಶನಿವಾರ) ಕಲಬುರಗಿಯಿಂದ ಬೆಳಗ್ಗೆ 10:15ಕ್ಕೆ ಹೊರಟು, ಅದೇ ದಿನ ರಾತ್ರಿ 21:40ಕ್ಕೆ ಯಶವಂತಪುರ ತಲುಪಲಿದೆ. ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ್ ಕೂಡ ವಿಶೇಷ ರೈಲುಗಳನ್ನು ಘೋಷಣೆ ಮಾಡಲಾಗಿದೆ. ಈ ವಿಶೇಷ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ಬಿಎನ್‌ಪಿಗೆ ಭರ್ಜರಿ ಜಯ; ತಾರಿಕ್ ರೆಹಮಾನ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ – Kannada News | PM Modi speaks to Bangladesh leader Tarique Rahman Congratulates on BNPs victory in election

ನವದೆಹಲಿ, ಫೆಬ್ರವರಿ 13: ನೆರೆಯ ದೇಶವಾದ ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್​ಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಎರಡೂ ದೇಶಗಳ ಜನರ ನಡುವೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ಮೋದಿ ಪುನರುಚ್ಛರಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ” ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಿ ಸಂತೋಷವಾಯಿತು. ಬಾಂಗ್ಲಾದೇಶ ಚುನಾವಣೆಯ ಭರ್ಜರಿ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಅವರ ಪ್ರಯತ್ನದಲ್ಲಿ ನಾನು ನನ್ನ ಶುಭಾಶಯಗಳು ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

“ಆಳವಾಗಿ ಬೇರೂರಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಇಬ್ಬರು ನಿಕಟ ನೆರೆಹೊರೆಯವರಾಗಿ ನಮ್ಮ ಎರಡೂ ದೇಶಗಳ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ” ಎಂದು ಪ್ರಧಾನಿ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ 13ನೇ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಬಿಎನ್‌ಪಿ ನಿರ್ಣಾಯಕ ಬಹುಮತ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶುಭಾಶಯ ಕೋರಿದ್ದಾರೆ. ಬಾಂಗ್ಲಾದೇಶದ 299 ಸ್ಥಾನಗಳಲ್ಲಿ ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳು 212 ಸ್ಥಾನಗಳನ್ನು ಗೆದ್ದಿವೆ. ಪಕ್ಷವಾರು ಅಂಕಿಅಂಶಗಳು ಬಿಎನ್‌ಪಿ ತನ್ನದೇ ಆದ 209 ಸ್ಥಾನಗಳನ್ನು ಗೆದ್ದಿದೆ ಎಂದು ತೋರಿಸಿದೆ. ಬಹುಮತದ ಸಂಖ್ಯೆ 150 ಆಗಿತ್ತು. ಹೀಗಾಗಿ, ಬಿಎನ್‌ಪಿ ಅಧ್ಯಕ್ಷ ತಾರಿಕ್ ರೆಹಮಾನ್ ಪ್ರಧಾನಿಯಾಗುವುದು ಖಚಿತವಾಗಿದೆ.

ಇದನ್ನೂ ಓದಿ: ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಆಗಸ್ಟ್ 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಅವರ 15 ವರ್ಷಗಳ ಸರ್ಕಾರ ಪತನವಾಯಿತು. ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರದಲ್ಲಿತ್ತು. ಇದೀಗ ಬಿಎನ್‌ಪಿಯ ನಾಯಕ ತಾರಿಕ್ ರೆಹಮಾನ್ ಮುಂದಿನ ಪ್ರಧಾನಿಯಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಯುವ ಮುನ್ನ ತಮಗಿದ್ದ ಬೇಸರ ಹೇಳಿಕೊಂಡಿದ್ದ ಜೋ ಸೈಮನ್ – Kannada News | Joe Simon was upset that he did not get recognition from government

ಕನ್ನಡ ಚಿತ್ರರಂಗದ (Sandalwood) ಹಿರಿಯ ನಿರ್ದೇಶಕ, ನಟ ಜೋ ಸೈಮನ್ ಇಂದು (ಫೆಬ್ರವರಿ 13) ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್​​ನಲ್ಲಿ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗ ಹೃದಯಾಘಾತ ಉಂಟಾಗಿ ಜೋ ಸೈಮನ್ ಅವರು ನಿಧನ ಹೊಂದಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹಿರಿಯ ನಿರ್ದೇಶಕ ಆಗಿದ್ದರೂ ಸಹ ಯಾವುದೇ ಸದ್ದಿಲ್ಲದೆ, ಸುದ್ದಿಗೆ ಹಪ-ಹಪಿಸದೆ ಸರಳವಾಗಿ ಬದುಕಿದ್ದರು, ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಿದ್ದ ಅವರಿಗೆ ಯಾವುದೇ ಕೊರಗು ಇರಲಿಲ್ಲ, ಆದರೆ ಒಂದು ಸಣ್ಣ ಬೇಸರವಂತೂ ಇತ್ತು. ಆ ಬಗ್ಗೆ ಸಾಯುವ ಕೇವಲ ತಿಂಗಳ ಹಿಂದಷ್ಟೆ ಹೇಳಿಕೊಂಡಿದ್ದರು.

ಕೆಲ ವಾರಗಳ ಹಿಂದಷ್ಟೆ ಯೂಟ್ಯೂಬ್ ಚಾನೆಲ್​ ‘ಕಲಾಮಾಧ್ಯಮ’ಕ್ಕೆ ಸಂದರ್ಶನ ನೀಡಿದ್ದ ಜೋ ಸೈಮನ್, ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದರು. ಅದರಲ್ಲೂ ತಮ್ಮ ಆರೋಗ್ಯ, ತಮ್ಮ ಮನಸ್ಥಿತಿ, ತಮ್ಮ ದಿನಚರಿ ಇನ್ನಿತರೆ, ತಮ್ಮ ಸರಳತೆಗೆ ಕಾರಣ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಶನದಲ್ಲಿ ತಮಗಿರುವ ಸಣ್ಣ ಬೇಸರವನ್ನೂ ಸಹ ಹೊರಗೆ ಹಾಕಿದ್ದಾರೆ.

ತಮ್ಮ ಹಿರಿತನವನ್ನು, ತಾವು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡೆಗೆಯನ್ನು ಸರ್ಕಾರ ಗುರುತಿಸಲಿಲ್ಲ ಎಂಬ ಬೇಸರ ಜೋ ಸೈಮನ್ ಅವರಿಗೆ ಇದ್ದಂತಿತ್ತು. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸೈಮನ್, ‘ಗೆಳೆಯರು ಪ್ರತಿ ಬಾರಿ ಹೇಳುತ್ತಾರೆ ರಾಜ್ಯೋತ್ಸವ ಪ್ರಶಸ್ತಿಗೆ ಪ್ರಯತ್ನಿಸಿ ಎಂದು. ನಮ್ಮ ಸಂಘದ ಕಡೆಯಿಂದ ಪ್ರತಿ ಬಾರಿಯೂ ನನ್ನ ಹೆಸರು ಕಳಿಸುತ್ತಾರೆ. ಸಂಸದ ತೇಜಸ್ವಿ ಸೂರ್ಯ ಸಹ ಒಮ್ಮೆ ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಿಸು ಮಾಡಿದ್ದರು. ಆದರೆ ಪ್ರತಿ ಬಾರಿ ಬೇರೆಯವರಿಗೆ ಪ್ರಶಸ್ತಿ ಬಂದಿರುತ್ತದೆ. ಕಣಗಾಲ್ ಪ್ರಶಸ್ತಿ ಪಡೆಯುವ ಅರ್ಹತೆಯೂ ನನಗೆ ಇದೆಯೆಂಬ ಭಾವನೆ ಇದೆ. ಅದಕ್ಕೂ ಸಹ ಅರ್ಜಿ ಹಾಕಿದ್ದೆ ಆದರೆ ಅದಕ್ಕೂ ಸಹ ನನ್ನನ್ನು ಪರಿಗಣಿಸಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Breaking: ಫಿಲಂ ಚೇಂಬರ್​​ನಲ್ಲೇ ಹೃದಯಾಘಾತ: ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರು ಪ್ರಶಸ್ತಿಗೆ ಅರ್ಜಿ ಹಾಕುವುದನ್ನೇ ಬಿಟ್ಟಿದ್ದರಂತೆ. ‘ನೀವು ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಡಿ, ಸಿಗಲಿಲ್ಲ ಎಂದು ಬೇಸರ ಆಗುವುದು ಸರಿ ಎನಿಸುವುದಿಲ್ಲ. ನಿಮ್ಮನ್ನು ಜನ ಪ್ರೀತಿಸಿದ್ದಾರೆ. ಎಲ್ಲೇ ಹೋದರು ಗುರುತಿಸುತ್ತಾರೆ, ನಿಮ್ಮೊಂದಿಗೆ ಫೊಟೊ ತೆಗೆದುಕೊಳ್ಳುತ್ತಾರೆ ನನಗೆ ಅಷ್ಟು ಸಾಕು, ಪ್ರಶಸ್ತಿಗಳು ಬೇಡ ಎಂದರಂತೆ. ಪತ್ನಿಯ ಮಾತಿನಂತೆ ಪ್ರಶಸ್ತಿಗಳಿಗೆ ಅರ್ಜಿ ಹಾಕುವುದನ್ನೇ ನಿಲ್ಲಿಸಿದ್ದರಂತೆ ಜೋ ಸೈಮನ್.

ಸರಳವಾಗಿ ಬದುಕುವುದು ತಮಗೆ ಬಹಳ ಇಷ್ಟ ಎಂದು ಹೇಳಿದ್ದ ಜೋ ಸೈಮನ್, ‘ನನ್ನ ಮನೆಯ ಎದುರು ನನ್ನ ಪರಿಚಯ ಹೇಳುವ ಬೋರ್ಡ್ ಹಾಕಿಸಿಕೊಂಡಿಲ್ಲ. ನಾನು ಯಾವುದೇ ವಿಸಿಟಿಂಗ್ ಕಾರ್ಡ್ ಸಹ ಮಾಡಿಕೊಂಡಿಲ್ಲ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ಕೆಟ್ಟದಾದಾಗ ಬೇಸರಗೊಳ್ಳದೆ, ಒಳ್ಳೆಯದಾದಾಗ ಅತಿಯಾಗಿ ಉಬ್ಬದೆ ಸಮಚಿತ್ತದಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದೀನಿ’ ಎಂದಿದ್ದರು ಸೈಮನ್.

ಜೋ ಸೈಮನ್ ಅವರ ಅಂತಿಮ ದರ್ಶನವನ್ನು ನಾಳೆ (ಫೆಬ್ರವರಿ 14) ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ನಾಳೆಯೇ ಕ್ರಿಶ್ಚಿಯನ್ ವಿಧಿ-ವಿಧಾನಗಳ ಅನುಸಾರ ಅವರ ಅಂತಿಮ ಕಾರ್ಯಗಳು ನಡೆಯಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Astrological Impacts on Kanya Rashi by Dr. Basavaraj Guruji

2026ರ ರಾಹುಗ್ರಸ್ತ ಸೂರ್ಯಗ್ರಹಣವು ಕನ್ಯಾ ರಾಶಿಯವರ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಬುಧ ರಾಶ್ಯಾಧಿಪತಿಯಾಗಿರುವ ಕನ್ಯಾ ರಾಶಿಯವರಿಗೆ ಈ ಗ್ರಹಣ ಆರನೇ ಮನೆಯಲ್ಲಿ ಸಂಭವಿಸುತ್ತದೆ. ಉತ್ತರಾ, ಹಸ್ತಾ, ಚಿತ್ತಾ ನಕ್ಷತ್ರದವರಿಗೆ ಇದರ ಪ್ರಭಾವವಿರುತ್ತದೆ.

ಗ್ರಹಣದ ಅವಧಿಯಲ್ಲಿ ಕುಟುಂಬದಲ್ಲಿ ಸೌಖ್ಯ ಇರುತ್ತದೆ. ಆಕಸ್ಮಿಕ ಧನಯೋಗ ಮತ್ತು ಕೆಲಸ ಕಾರ್ಯಗಳಲ್ಲಿ ಪರಿಪೂರ್ಣತೆ ಕಂಡುಬರುತ್ತದೆ. ಸಾಲ ತೀರಿಸಿಕೊಳ್ಳುವ ಅವಕಾಶ ಲಭಿಸುತ್ತದೆ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆಯಾದರೂ, ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ. ರೈತರು, ವ್ಯಾಪಾರಸ್ಥರು, ಗುತ್ತಿಗೆದಾರರು, ಸರ್ಕಾರಿ ನೌಕರರು, ರಾಜಕಾರಣಿಗಳು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಶುಭ ಫಲಗಳು ದೊರೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಎಚ್ಚರಿಕೆಯಿಂದಿರಬೇಕು.

ಕಾನೂನು ವಿಷಯಗಳಲ್ಲಿ ಆತುರದ ನಿರ್ಧಾರಗಳು ಬೇಡ. ಅನಾರೋಗ್ಯ ಮತ್ತು ಹತ್ತಿರದವರ ಅಗಲಿಕೆ ಮನಸ್ಸಿಗೆ ತೊಂದರೆ ನೀಡಬಹುದು. ಕನ್ಯಾ ರಾಶಿಯವರು ನವಗ್ರಹಗಳಿಗೆ ಶಾಂತಿ ಪೂಜೆ ಮಾಡಿಸುವುದು, ವಿಷ್ಣು ದೇವಸ್ಥಾನದಲ್ಲಿ ಮೂರು ದಿನ ತುಳಸಿ ಮಾಲೆ ಅರ್ಪಿಸುವುದು, ಹಾಗೂ “ಓಂ ವರಾಹ ರೂಪಾಯ ನಮಃ” ಮಂತ್ರ ಜಪಿಸುವುದು ಉತ್ತಮ. ಗೋಸೇವೆ ಮಾಡುವುದರಿಂದ ಗ್ರಹಣದ ಅಶುಭ ಪ್ರಭಾವ ಕಡಿಮೆಯಾಗಿ ಹೆಚ್ಚು ಶುಭ ಫಲಗಳು ದೊರೆಯುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version