ರಶ್ಮಿಕಾಗೆ ಅತ್ಯಂತ ಅಮೂಲ್ಯ ಉಡುಗೊರೆ ಕೊಟ್ಟ ವಿಜಯ್ ತಾಯಿ, ಭಾವುಕರಾದ ನಟಿ – Kannada News | Vijay Deverakonda mother gifted heirloom bangles to Rashmika Mandanna

ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಮುಂದೆ ತೆಲಂಗಾಣದ ಸೊಸೆ. ವಿಜಯ್ ದೇವರಕೊಂಡ ಅವರೊಟ್ಟಿಗೆ ಮದುವೆ ಆಗುತ್ತಿರುವ ರಶ್ಮಿಕಾ ತೆಲುಗು ಮನೆ ಸೇರುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದ ಅದ್ಧೂರಿ ಅರಮನೆಯಂಥಹ ರೆಸಾರ್ಟ್​​ನಲ್ಲಿ ಆಗುತ್ತಿದೆ. ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಂಜಾಯ್​​ಮೆಂಟ್​​ಗಳ ಮಧ್ಯೆ ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಉಡುಗೊರೆ ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದಲ್ಲಿ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ. ಈ ಬಳೆಗಳು ಕೆಲವು ತಲೆಮಾರುಗಳಿಂದಲೂ ಕುಟುಂಬದ ಸೊಸೆಯಾಗಿ ಬಂದವರಿಗೆ ಕೊಡಲಾಗುತ್ತಿದೆಯಂತೆ. ಅಂತೆಯೇ ಇದೀಗ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ತಮ್ಮ ಕುಟುಂಬದ ದೊಡ್ಡ ಸೊಸೆ ಆಗುತ್ತಿರುವ ರಶ್ಮಿಕಾ ಮಂದಣ್ಣಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಗೀತ್ ಕಾರ್ಯಕ್ರಮದಲ್ಲಿ ಮಾಧವಿ ಅವರು ಸೊಸೆಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದು, ಹಲವು ತಲೆಮಾರುಗಳನ್ನು ಕಂಡಿರುವ, ದೇವರಕೊಂಡ ಕುಟುಂಬದ ಐತಿಹಾಸಿಕ ಮೌಲ್ಯವನ್ನು ಒಳಗೊಂಡಿರುವ ಸುಂದರವಾದ, ಅತ್ಯಂತ ಅಮೂಲ್ಯವೂ ಅಪರೂಪವೂ ಆಗಿರುವ ಬಳೆಗಳನ್ನು ಪಡೆದು ರಶ್ಮಿಕಾ ಅವರು ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ಅಂದಹಾಗೆ ವಿಜಯ್ ಅವರ ಪೋಷಕರು ರಶ್ಮಿಕಾಗೆ ಹೊಸಬರೇನೂ ಅಲ್ಲ. ಕಳೆದ ಕೆಲ ವರ್ಷಗಳಿಂದಲೂ ಸಹ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರ ಕುಟುಂಬದ ನಡುವೆ ಬಹಳ ಆತ್ಮೀಯತೆ ಅನ್ಯೋನ್ಯತೆ ಇದೆ. ಕೆಲ ವರ್ಷಗಳಿಂದಲೂ ಎಲ್ಲ ಹಬ್ಬಗಳನ್ನು ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ಆಚರಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ರಶ್ಮಿಕಾಗೆ ಆಹ್ವಾನ ಇದ್ದೇ ಇರುತ್ತಿತ್ತು. ಕಳೆದ ವರ್ಷ ವಿಜಯ್ ತಾಯಿಯ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದರು. ವಿಜಯ್ ಅವರ ಪೋಷಕರೊಡನೆ ರಶ್ಮಿಕಾಗೆ ಬಹಳ ಆತ್ಮೀಯತೆ ಇದೆ. ಇದು ಮುಂದಿನ ಅವರ ದಾಂಪತ್ಯಕ್ಕೂ ಸಹಕಾರಿ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Air Quality: ಹುಬ್ಬಳ್ಳಿ ಬಿಟ್ಟು ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಸಾಧಾರಣ’ – Kannada News | Bengaluru Air Quality: Moderate Pollution in City and North Karnataka. Full Report

ಬೆಂಗಳೂರು, ಫೆ.26: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ‘ಸಾಧಾರಣ’ (Moderate) ಹಂತಕ್ಕೆ ತಲುಪಿದೆ. ಕಟ್ಟಡ ನಿರ್ಮಾಣ ಕಾರ್ಯಗಳು ಮತ್ತು ವಾಹನಗಳ ದಟ್ಟಣೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಬೆಂಗಳೂರಿನ ನಗರದ ಸಿಲ್ಕ್ ಬೋರ್ಡ್, ಕೆ.ಆರ್. ಪುರಂ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ 150ರ ಗಡಿ ತಲುಪಿದೆ. ಬೆಳಗಿನ ಜಾವ ಮತ್ತು ಸಂಜೆ ವೇಳೆ ವಾಯು ಮಾಲಿನ್ಯದ ತೀವ್ರತೆ ಹೆಚ್ಚಾಗಿರುತ್ತದೆ.

ಬಿಸಿಲು ಮತ್ತು ಧೂಳಿನಿಂದಾಗಿ ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ. ಒಣ ಹವಾಮಾನವು ಧೂಳಿನ ಕಣಗಳು ಗಾಳಿಯಲ್ಲಿ ತೇಲಾಡಲು ಸಹಕಾರಿಯಾಗಿದೆ. ಇನ್ನು ಸಮುದ್ರದ ತಂಗಾಳಿಯ ಪ್ರಭಾವದಿಂದ ಮಂಗಳೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ರಾಜ್ಯದಲ್ಲೇ ಅತ್ಯಂತ ಉತ್ತಮವಾಗಿದೆ. ಇನ್ನು ಶ್ವಾಸಕೋಶದ ಸಮಸ್ಯೆ ಅಥವಾ ಅಲರ್ಜಿ ಇರುವವರು ರಸ್ತೆಯಲ್ಲಿ ಓಡಾಡುವಾಗ ಮಾಸ್ಕ್ ಧರಿಸುವುದು ಸೂಕ್ತ. ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಬೆಳಿಗ್ಗೆ ಹೊತ್ತು ತೆರೆದ ಜಾಗದಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಗಾಳಿಯ ಗುಣಮಟ್ಟ 150 ದಾಟಿದಾಗ ಮಕ್ಕಳು ಮತ್ತು ವಯೋವೃದ್ಧರು ಮನೆಯ ಒಳಗಿರುವುದು ಸುರಕ್ಷಿತ.

ನಗರ AQI ಮಟ್ಟ ಗಾಳಿಯ ಗುಣಮಟ್ಟ
ಬೆಂಗಳೂರು 128 ಸಾಧಾರಣ (Moderate)
ಮೈಸೂರು 72 ತೃಪ್ತಿಕರ (Satisfactory)
ಮಂಗಳೂರು 54 ಉತ್ತಮ (Good)
ಕಲಬುರಗಿ 142 ಸಾಧಾರಣ (Moderate)
ಹುಬ್ಬಳ್ಳಿ 105 ಸಾಧಾರಣ (Moderate)
ಬೆಳಗಾವಿ 88 ತೃಪ್ತಿಕರ (Satisfactory)

ಮೈಸೂರು ಸಾಮಾನ್ಯವಾಗಿ ಕಡಿಮೆ ಮಾಲಿನ್ಯ ಹೊಂದಿರುವ ನಗರವಾಗಿದ್ದರೂ, ಇಂದಿನ ವರದಿಯ ಪ್ರಕಾರ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಏರಿಳಿತ ಕಂಡುಬಂದಿದೆ. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ 82 – 105 ರ ಆಸುಪಾಸಿನಲ್ಲಿದೆ. PM 2.5 ಮತ್ತು PM 10 ಕಣಗಳು ಗಾಳಿಯಲ್ಲಿ ಸ್ವಲ್ಪ ಹೆಚ್ಚಿವೆ. ಕಲಬುರಗಿ ಸಾಮಾನ್ಯವಾಗಿ ಬಿಸಿಲಿನಿಂದ ಕೂಡಿದ ಶುಷ್ಕ ಹವಾಮಾನವನ್ನು ಹೊಂದಿರುವುದರಿಂದ, ಗಾಳಿಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ 110 – 145ರ ಆಸುಪಾಸಿನಲ್ಲಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆ ಮತ್ತು ವಾಹನ ಸಂಚಾರದ ಕಾರಣದಿಂದಾಗಿ ಗಾಳಿಯ ಗುಣಮಟ್ಟದಲ್ಲಿ ಸಾಧಾರಣ ಏರಿಕೆ ಕಂಡುಬಂದಿದೆ. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ 110 – 140 ರ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಪಾಲಿಗೆ ಇಂದು ಯಾರು ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ – Kannada News | Why a South Africa Win Benefits India

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಇಂದು (ಫೆ.26) ಎರಡು ಪಂದ್ಯಗಳು ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಇನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಕಣಕ್ಕಿಳಿಯಲಿವೆ. ಈ ಮ್ಯಾಚ್ ರಾತ್ರಿ 7 ಗಂಟೆಯಿಂದ ಆರಂಭವಾಗಲಿದೆ.

ಈ ಎರಡು ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದ ಫಲಿತಾಂಶ ಭಾರತ ತಂಡದ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ. ಹೀಗಾಗಿಯೇ ಇಂದಿನ ಮ್ಯಾಚ್​ನಲ್ಲಿ ಭಾರತದ ಪಾಲಿಗೆ ಯಾರು ಗೆಲ್ಲಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ಇಲ್ಲಿ ಉಭಯ ತಂಡಗಳು 2 ಅಂಕಗಳನ್ನು ಹೊಂದಿರುವ ಕಾರಣ ಟೀಮ್ ಇಂಡಿಯಾ ಪಾಲಿಗೆ ಯಾರು ಗೆದ್ದರೆ ಉತ್ತಮ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…

  • ಸೌತ್ ಆಫ್ರಿಕಾ ಗೆಲುವು: ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮವಾಗಬೇಕಿದ್ದರೆ ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ ತಂಡ ಗೆಲುವು ದಾಖಲಿಸಬೇಕು. ಹಾಗೆಯೇ ಸೌತ್ ಆಫ್ರಿಕಾ ಝಿಂಬಾಬ್ವೆ ತಂಡವನ್ನು ಸೋಲಿಸಬೇಕು.
  • ನೇರ ಅರ್ಹತೆ ಅವಕಾಶ: ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಸೌತ್ ಆಫ್ರಿಕಾ ಗೆದ್ದರೆ ಟೀಮ್ ಇಂಡಿಯಾಗೆ ನೇರವಾಗಿ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ. ಅಂದರೆ ಯಾವುದೇ ನೆಟ್ ರನ್ ರೇಟ್ ಲೆಕ್ಕಾಚಾರ ಗಣನೆಗೆ ಬರುವುದಿಲ್ಲ.
  • ಟೀಮ್ ಇಂಡಿಯಾಗೆ ಲಾಭ: ಇಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋತರೆ, ಮಾರ್ಚ್ 1 ರಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ‘ನಾಕೌಟ್’ ಪಂದ್ಯದಂತಾಗುತ್ತದೆ. ಆಗ ಭಾರತ ಕೇವಲ ಈ ಪಂದ್ಯವನ್ನು ಗೆದ್ದರೆ ಸಾಕು. ಈ ಮೂಲಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ನೇರವಾಗಿ ಸೆಮಿಫೈನಲ್​ಗೇರಬಹುದು.
  • ವೆಸ್ಟ್ ಇಂಡೀಸ್ ಗೆದ್ದರೆ: ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಗೆದ್ದರೆ ತನ್ನ ನೆಟ್ ರನ್ ರೇಟ್​ ಅನ್ನು ಮತ್ತಷ್ಟು ಹೆಚ್ಚಿಸಿ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸುತ್ತದೆ. ಪರಿಣಾಮ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದರೆ ಮಾತ್ರ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ.
  • ಸೌತ್ ಆಫ್ರಿಕಾ ಗೆಲುವುಗಳು: ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳನ್ನು ಸೋಲಿಸಿದರೆ, ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದು ನೇರವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆಯಬಹುದು. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಸೌತ್ ಆಫ್ರಿಕಾ ತಂಡದ ಗೆಲುವುಗಳು ಅತೀ ಮುಖ್ಯ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ‘ಬ್ರೂಕ್ ಬ್ಲಸ್ಟರ್’ ವಿಶ್ವ ದಾಖಲೆ

ಒಟ್ಟಾರೆಯಾಗಿ ಹೇಳುವುದಾದರೆ, ಸೌತ್ ಆಫ್ರಿಕಾ ಗೆದ್ದರೆ ಭಾರತ ತಂಡದ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ವೆಸ್ಟ್ ಇಂಡೀಸ್ ಗೆದ್ದರೆ, ಭಾರತ ತನ್ನ ಮುಂದಿನ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಸೌತ್ ಆಫ್ರಿಕಾ ತಂಡ ಗೆಲ್ಲಲೇಬೇಕು.

Source link

ಹಿಮಾಚಲ ಪ್ರದೇಶ: 20 ದೆಹಲಿ ಪೊಲೀಸರನ್ನು ಬಂಧಿಸಿದ ಶಿಮ್ಲಾ ಪೊಲೀಸರು, ಕಾರಣವೇನು? – Kannada News | Shimla Police Arrest 20 Delhi Cops: Himachal Delhi Police Clash Over Protestors

ಶಿಮ್ಲಾ, ಫೆಬ್ರವರಿ 26: ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದ 20 ಪೊಲೀಸ್(Police) ಸಿಬ್ಬಂದಿಯನ್ನು ಶಿಮ್ಲಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ಘಟನೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಎಐ ಇಂಪ್ಯಾಕ್ಟ್​ ಶೃಂಗಸಭೆಯಲ್ಲಿ ಶರ್ಟ್​ ಬಿಚ್ಚಿ ಪ್ರತಿಭಟನೆ ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಮೂವರನ್ನು ಹಿಡಿಯಲು ದೆಹಲಿ ಪೊಲೀಸರು ಹಿಮಾಚಲ ಪ್ರದೇಶಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.

ಈ ಸಂಪೂರ್ಣ ಘಟನೆಯು ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯಲ್ಲಿ ನಡೆಯಿತು, ಎರಡೂ ರಾಜ್ಯಗಳ ಪೊಲೀಸರು ಇಲ್ಲಿ ಮುಖಾಮುಖಿಯಾದರು. ಈ ಶೃಂಗಸಭೆಯ ಸಮಯದಲ್ಲಿ, ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಧರಿಸದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ, ಮೂವರು ಕಾರ್ಯಕರ್ತರು ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶಕ್ಕೆ ಹೋಗಿ ಸ್ಥಳೀಯ ಹೋಟೆಲ್‌ನಲ್ಲಿ ತಂಗಿದ್ದರು ಎಂದು ವರದಿಯಾಗಿದೆ. ದೆಹಲಿ ಪೊಲೀಸರು ಅವರ ಸ್ಥಳದ ಬಗ್ಗೆ ತಿಳಿದುಕೊಂಡು, ಒಂದು ತಂಡ ರೋಹ್ರುಗೆ ಆಗಮಿಸಿತು.

ಈ ಕಾರ್ಯಾಚರಣೆಯ ಬಗ್ಗೆ ಸೋಲನ್ ಪೊಲೀಸರು ತಿಳಿದ ತಕ್ಷಣ, ಅವರು ತಕ್ಷಣ ಕ್ರಮ ಕೈಗೊಂಡರು. ಧರ್ಮಪುರ ಬಳಿಯ ಚಂಡೀಗಢ-ಕಲ್ಕಾ-ಶಿಮ್ಲಾ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ದಿಗ್ಬಂಧನ ಹಾಕಲಾಯಿತು. ಸೋಲನ್ ಪೊಲೀಸರು ದೆಹಲಿ ಪೊಲೀಸ್ ತಂಡವನ್ನು ಇಲ್ಲಿಯೇ ತಡೆದರು. ಇದಲ್ಲದೆ, 20 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಯಿತು. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು ಮತ್ತು ಎರಡೂ ರಾಜ್ಯಗಳ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು.

ಮತ್ತಷ್ಟು ಓದಿ: ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ

ಬಂಧಿತ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅವರನ್ನು ಎಸಿಜೆಎಂ ನ್ಯಾಯಾಲಯ ಸಂಖ್ಯೆ 2 ಕ್ಕೆ ಕರೆತರಲಾಯಿತು. ವಿಚಾರಣೆಯ ಸಮಯದಲ್ಲಿ ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಹಾಜರಿದ್ದರು.

ಮೂವರು ಆರೋಪಿಗಳನ್ನು ಸಾಗಿಸುತ್ತಿದ್ದಾಗ ದೆಹಲಿ ಪೊಲೀಸ್ ತಂಡವನ್ನು ಶಿಮ್ಲಾ ಪೊಲೀಸರು ತಡೆದಾಗ ಈ ವಾಗ್ವಾದ ನಡೆಯಿತು. ಶಿಮ್ಲಾ ಪೊಲೀಸರು ದೆಹಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದು, ಅವರ ವಾಹನಗಳನ್ನು ವಶಕ್ಕೆ ಪಡೆದಿದ್ದರು.

ಈ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದ ಮಾನ ಹಾಳು ಮಾಡಲು ಪ್ರಯತ್ನಿಸಿದವರಿಗೆ ರಕ್ಷಣೆ ನೀಡುವುದು ‘ನಾಚಿಕೆಗೇಡಿನ’ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.

ಫೆಬ್ರವರಿ 20ರಂದು ಭಾರತ್ ಮಂಟಪ್​ನಲ್ಲಿ ನಡೆಯುತ್ತಿದ್ದ ಎಐ ಶೃಂಗಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್​ ತೆಗೆದು ಪ್ರತಿಭಟನೆ ನಡೆಸಿದ್ದರು. ದೆಹಲಿ ಪೊಲೀಸರು ಇದುವರೆಗೆ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಉದಯ್ ಭಾನು ಚಿಬ್ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Horoscope: ಈ ರಾಶಿಯಯವರಿಗೆ ಇಂದು ಡಬಲ್​​​​​​​​​​​​​ ಸಂಭ್ರಮ, ಜೀವನದಲ್ಲಿ ದೊಡ್ಡ ಬದಲಾವಣೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಇಂದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ವಿಶ್ವಾಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸದ ಈ ಶುಭ ಗುರುವಾರದಂದು, ಮೃಗಶಿರಾ ನಕ್ಷತ್ರದಲ್ಲಿ ಚಂದ್ರನು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ರವಿ ಕುಂಭ ರಾಶಿಯಲ್ಲಿ ಇರುತ್ತಾನೆ. ದ್ವಾದಶ ರಾಶಿಗಳಿಗೆ ಇಂದು ವಿವಿಧ ಗ್ರಹಗಳ ಶುಭಫಲಗಳಿದ್ದು, ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಪ್ರಗತಿ, ವೃತ್ತಿ ಜೀವನದಲ್ಲಿ ಯಶಸ್ಸು, ಕುಟುಂಬದಲ್ಲಿ ಸಾಮರಸ್ಯ, ಮತ್ತು ಆರೋಗ್ಯದ ಕುರಿತು ಮಾಹಿತಿ ನೀಡಲಾಗಿದೆ. ಮೇಷ ರಾಶಿಯವರಿಗೆ ಆರ್ಥಿಕ ಪ್ರಗತಿ ಮತ್ತು ವೃತ್ತಿ ಜೀವನದಲ್ಲಿ ಶುಭವಾಗಲಿದೆ. ವೃಷಭ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗವಿದೆ. ಮಿಥುನ ರಾಶಿಯವರಿಗೆ ಕಾನೂನು ವಿಷಯಗಳಲ್ಲಿ ಜಯ ಮತ್ತು ಉತ್ತಮ ಫಲಿತಾಂಶಗಳು ದೊರೆಯಲಿವೆ. ಕಟಕ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ ಮತ್ತು ಹಳೆ ಬಾಕಿ ವಸೂಲಿಯ ಯೋಗವಿದೆ. ಸಿಂಹ ರಾಶಿಯವರಿಗೆ ಶುಭ ಸುದ್ದಿಗಳು ಮತ್ತು ಒಳ್ಳೆಯ ವ್ಯಕ್ತಿಗಳ ಪರಿಚಯವಾಗಲಿದೆ. ಕನ್ಯಾ ರಾಶಿಯವರಿಗೆ ಸಂತೋಷದ ಸುದ್ದಿ ಮತ್ತು ಯೋಜನೆಗಳಿಗೆ ಮನ್ನಣೆ ಸಿಗಲಿದೆ. ತುಲಾ ರಾಶಿಯವರಿಗೆ ಮಾತಿನ ಪ್ರಭಾವದಿಂದ ಶುಭ ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಫಲಿತಾಂಶವಿದೆ. ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಶುಭ ಮತ್ತು ವ್ಯವಸಾಯದಿಂದ ಲಾಭ ದೊರೆಯಲಿದೆ. ಧನು ರಾಶಿಯವರಿಗೆ ಮಾನಸಿಕ ತೃಪ್ತಿ ಮತ್ತು ಆದಾಯದಲ್ಲಿ ಏರಿಕೆ ಇರಲಿದೆ. ಮಕರ ರಾಶಿಯವರಿಗೆ ಹೊಸ ಅವಕಾಶಗಳು ಮತ್ತು ಆಕಸ್ಮಿಕ ಪ್ರಯಾಣ ಯೋಗವಿದೆ. ಕುಂಭ ರಾಶಿಯವರಿಗೆ ಆರ್ಥಿಕವಾಗಿ ಮತ್ತು ವ್ಯವಹಾರಗಳಲ್ಲಿ ಶುಭವಾಗಲಿದೆ. ಮೀನ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಗುರಿ ತಲುಪುವ ಯತ್ನಗಳು ಫಲಿಸಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಅಕ್ರಮ ವಲಸಿಗರ ವಿರುದ್ಧ ಪೊಲೀಸರ ಭರ್ಜರಿ ಬೇಟೆ, ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯ ವಿಚಾರಣೆ – Kannada News | Bengaluru Police Crack Down on Illegal Immigrants; Over 2000 Foreign Nationals Questioned in One Day

ಬೆಂಗಳೂರು, ಫೆಬ್ರವರಿ 26: ಬೆಂಗಳೂರು (Bengaluru) ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಬುಧವಾರ ಒಂದೇ ದಿನ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಇದರಲ್ಲಿ ಬಹುತೇಕರು ಸರಿಯಾದ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮೀರಿಸಿ ನಗರದಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ.

ವಿಶೇಷವಾಗಿ, ಕೆಲವು ನೈಜೀರಿಯನ್ ಹಾಗೂ ಬಾಂಗ್ಲಾ ಮೂಲದ ವಲಸಿಗರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸದ್ಯ ಅಕ್ರಮವಾಗಿ ನೆಲೆಸಿರುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

‘ಯಾವ ದೇಶದಿಂದ ಬಂದಿದ್ದಾರೆ? ಯಾವಾಗ ನಗರಕ್ಕೆ ಪ್ರವೇಶಿಸಿದ್ದಾರೆ? ಯಾರು ಕರೆತಂದಿದ್ದಾರೆ? ವೀಸಾ ಹಾಗೂ ಪಾಸ್‌ಪೋರ್ಟ್ ಮಾನ್ಯತೆಯ ಸ್ಥಿತಿ ಏನು?’ ಎಂಬ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಗತ್ಯವಿದ್ದಲ್ಲಿ ಸಂಬಂಧಿತ ಕೇಂದ್ರ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ

ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ವಿರುದ್ಧ ಈ ಹಿಂದೆಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 2026 ಜನವರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು 26ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಇವರು ನಕಲಿ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ಬಳಸಿ ನಗರದ ಸ್ಕ್ರ್ಯಾಪ್ ಯಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

2025ರ ನವೆಂಬರ್​​​ನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 14 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಅವರಿಂದ 7.7 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಲ್ಲಿ ನೈಜೀರಿಯಾ ಮೂಲದ ಮಹಿಳೆಯೂ ಸೇರಿದ್ದು, ಆಕೆ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಳು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 26 February​: ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು – Kannada News | Kitchen Vastu: Which Direction to Place Food After Cooking for Good Fortune?

ಅಡುಗೆಯ ನಂತರ ಆಹಾರವನ್ನು ಯಾವ ದಿಕ್ಕಿಗೆ ಇರಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ. ಅಡುಗೆಯು ಕೇವಲ ಶಕ್ತಿಯ ಮೂಲವಲ್ಲದೆ, ಜೀವ ಆಧಾರವೂ ಆಗಿದೆ. ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಬೇಕು. ಅಡುಗೆಮನೆಯು ಆಗ್ನೇಯ ಅಥವಾ ವಾಯುವ್ಯದಲ್ಲಿ ಇರಬಹುದು, ಆದರೆ ಯಾವಾಗಲೂ ಪೂರ್ವ ದಿಕ್ಕಿಗೆ ತಿರುಗಿ ಅಡುಗೆ ಮಾಡುವುದು ಉತ್ತಮ. ಅಡುಗೆ ಮುಗಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಇರಿಸಲು ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಮುಖ್ಯ. ಶಾಸ್ತ್ರಗಳ ಪ್ರಕಾರ, ಆಹಾರವನ್ನು ಉತ್ತರ ದಿಕ್ಕಿಗೆ, ಅಂದರೆ ಎಡಭಾಗಕ್ಕೆ ಇಳಿಸುವುದು ಅತ್ಯಂತ ಶುಭ. ಉತ್ತರ ದಿಕ್ಕು ಕುಬೇರನ ಅಧಿಪತ್ಯದಲ್ಲಿದ್ದು, ಇದು ಸಂತೃಪ್ತಿ, ಅಧಿಕ ಶಕ್ತಿ ಮತ್ತು ಸಮೃದ್ಧಿಯನ್ನು ನೀಡುತ್ತದೆ. ದಕ್ಷಿಣ ದಿಕ್ಕು ಪಿತೃಗಳಿಗೆ ಸಂಬಂಧಿಸಿದ್ದು, ಆ ದಿಕ್ಕಿಗೆ ಆಹಾರವನ್ನು ಇರಿಸಿದರೆ ಅನಾರೋಗ್ಯ, ಮಾನಸಿಕ ನೆಮ್ಮದಿ ಕೊರತೆ ಮತ್ತು ಕಲಹಗಳು ಉಂಟಾಗಬಹುದು. ಪಶ್ಚಿಮ ದಿಕ್ಕಿಗೂ ಆಹಾರ ಇರಿಸುವುದು ಶುಭಕರವಲ್ಲ. ಆದ್ದರಿಂದ, ಅಡುಗೆ ಮಾಡಿದ ನಂತರ ಆಹಾರವನ್ನು ಯಾವಾಗಲೂ ಉತ್ತರ ದಿಕ್ಕಿಗೆ ಇರಿಸಲು ಪ್ರಯತ್ನಿಸಿ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿಗಳಿಗೆ ನರಕಯಾತನೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ರೋಗಿಗಳ ಪರದಾಟ – Kannada News | ICU Bed Shortage at Victoria Hospital Bengaluru Sparks Outcry; Patients Struggle Amid Emergency Crisis

ವಿಕ್ಟೋರಿಯಾ ಆಸ್ಪತ್ರೆ ಹಾಗೂ ಐಸಿಯು ಬೆಡ್​ಗಳ ಸಾಂದರ್ಭಿಕ ಚಿತ್ರImage Credit source: tv9

ಬೆಂಗಳೂರು, ಫೆಬ್ರವರಿ 26: ಅದು ಹೇಳಿಕೊಳ್ಳಲು ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ. ಆದರೆ, ಚಿಕಿತ್ಸೆಗೆ ಬಂದರೆ ಜೀವಕ್ಕೆ ಗ್ಯಾರಂಟಿ ಇಲ್ಲ ಎಂಬಂಥ ಸ್ಥಿತಿ ಇದೆ. ಗ್ಯಾರಂಟಿಗಳನ್ನು ಕೊಟ್ಟಿರುವ ಸರ್ಕಾರದಿಂದ ಆರೋಗ್ಯ ಭಾಗ್ಯದ ಗ್ಯಾರಂಟಿಯೇ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಅವ್ಯವಸ್ಥೆಗಳ ಸಂಬಂಧ ಆರೋಪ ಈಗೀಗ ಜೋರಾಗಿಯೇ ಕೇಳಿಬರುತ್ತಿದೆ. ಸಮಸ್ಯೆಗಳು ತಾಂಡವ ಆಡುತ್ತಿದ್ದು, ರೋಗಿಗಳು ಎಮರ್ಜೆನ್ಸಿ ಎಂದು ಬಂದರೆ ಬೆಡ್ ಇಲ್ಲ ಎನ್ನುವ ಸ್ಥಿತಿ ಇದೆ.

ಆಸ್ಪತ್ರೆಗೆ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ನೂರಾರು ರೋಗಿಗಳು ಆಗಮಿಸುತ್ತಾರೆ. ಆದರೆ ಲಭ್ಯವಿರುವ ಐಸಿಯು ಬೆಡ್‌ಗಳ ಸಂಖ್ಯೆ ಕೇವಲ 60ರಿಂದ 70 ಮಾತ್ರ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ. ಎಮರ್ಜೆನ್ಸಿ ವಿಭಾಗದಲ್ಲಿಯೂ ಒತ್ತಡ ಹೆಚ್ಚಿದ್ದು, ಕೆಲವು ಸಂದರ್ಭಗಳಲ್ಲಿ ಖಾಲಿ ಬೆಡ್ ಇಲ್ಲ ಎಂಬ ಕಾರಣ ನೀಡಿ ಕಾಯುವಂತೆ ಸೂಚಿಸಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಕೆಲವರು ರೋಗಿಗಳ ಸಂಬಂಧಿಕರು, ಸಮಸ್ಯೆ ತಿಳಿಸಲು ಹೋದಾಗ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬೆಡ್ ಸಿಗದ ಹಿನ್ನೆಲೆ ಕೆಲವು ಕುಟುಂಬಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ. ಲ್ಯಾಬ್ ಪರೀಕ್ಷಾ ವರದಿಗಳು ತಡವಾಗಿ ದೊರಕುವುದು ಸೇರಿದಂತೆ ಇನ್ನೂ ಹಲವು ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತವಾಗುತ್ತಿದೆ.

ವೈದ್ಯಕೀಯ ಅಧೀಕ್ಷಕರು ಹೇಳಿದ್ದೇನು?

ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಅಧೀಕ್ಷಕರು, ‘ವಿಕ್ಟೋರಿಯಾ ಆಸ್ಪತ್ರೆ ದೊಡ್ಡ ಪ್ರಮಾಣದಲ್ಲಿ ರೋಗಿಗಳಿಗೆ ಸೇವೆ ನೀಡುತ್ತಿದೆ. ದಿನನಿತ್ಯ ಬಹಳ ಸಂಖ್ಯೆಯಲ್ಲಿ ತುರ್ತು ಪ್ರಕರಣಗಳು ಬರುತ್ತಿವೆ. ಲಭ್ಯವಿರುವ ಐಸಿಯು ಬೆಡ್‌ಗಳು ಸೀಮಿತವಾಗಿವೆ. ಈ ಕುರಿತು ಸರ್ಕಾರದ ಗಮನಕ್ಕೆ ವಿಷಯವನ್ನು ತರಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ

ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯ ವೃದ್ಧಿ ಮತ್ತು ಹೆಚ್ಚುವರಿ ಐಸಿಯು ಬೆಡ್‌ಗಳ ವ್ಯವಸ್ಥೆ ಅಗತ್ಯವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಆರೋಗ್ಯ ಸೇವೆ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ – Kannada News | Karnataka Weather Today: Light Rain in Some Areas, Rising Temperatures

ಬೆಂಗಳೂರು, ಫೆ.26: ಕರ್ನಾಟಕದಲ್ಲಿ ಇಂದು (ಫೆಬ್ರವರಿ 26, 2026) ಮುಖ್ಯವಾಗಿ ಶುಷ್ಕ ಹವಾಮಾನವಿದ್ದು, ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಗದಗ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಹಗುರ ಮಳೆಯ ಮುನ್ಸೂಚನೆ ಇದೆ.

ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಬಳ್ಳಾರಿ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 19°C ಇರಲಿದ್ದು, ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಹೆಚ್ಚಿರಲಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಿ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಆಕಾಶ ಮೋಡದಿಂದ ಕೂಡಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ತುಂತುರು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 33°C ರಿಂದ 34°C ವರೆಗೆ ಇರಲಿದ್ದು, ಮಧ್ಯಾಹ್ನ ಸೆಖೆಯ ಅನುಭವ ಹೆಚ್ಚಿರಲಿದೆ. ಸಮುದ್ರದ ಕಡೆಯಿಂದ ಬರುವ ಗಾಳಿಯಿಂದಾಗಿ ತೇವಾಂಶ (Humidity) ಹೆಚ್ಚಿರಲಿದ್ದು, ಬೆವರುವಿಕೆ ಮತ್ತು ಉಸಿರುಕಟ್ಟಿದ ವಾತಾವರಣ ಕಂಡುಬರಬಹುದು. ಈ ಭಾಗಗಳಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರುತ್ತದೆ.

ಇನ್ನು ಇಂದು ಕಲಬುರಗಿಯಲ್ಲಿ ತೀವ್ರವಾದ ಬಿಸಿಲು ಇರಲಿದೆ. ಮಧ್ಯಾಹ್ನದ ಸಮಯದಲ್ಲಿ ಸೆಖೆ ಹೆಚ್ಚಾಗಿರುತ್ತದೆ.ಗರಿಷ್ಠ ತಾಪಮಾನ 36°C ತಲುಪಬಹುದು, ಕನಿಷ್ಠ ತಾಪಮಾನ 22°C ಇರಲಿದೆ. ಆಕಾಶವು ಬಹುತೇಕ ಸ್ವಚ್ಛವಾಗಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ. ಬೆಳಗಾವಿಯಲ್ಲಿ ಬಿಸಿಲು ಇದ್ದರೂ ಸಹ, ಆಕಾಶವು ಮೋಡದಿಂದ ಕೂಡಿರುತ್ತದೆ.ಬೆಳಗಾವಿಯ ಕೆಲವು ಭಾಗಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಗುಡುಗು ಸಹಿತ ಮಳೆಯಾದರೂ ಆಶ್ಚರ್ಯವಿಲ್ಲ. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 19°C ಇರಲಿದೆ. ಮಲೆನಾಡು ಭಾಗದಲ್ಲಿ ಹವಾಮಾನವು ಮಿಶ್ರಫಲವಾಗಿರಲಿದೆ. ಶಿವಮೊಗ್ಗದಲ್ಲಿ ಇಂದು ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ.

ಇದನ್ನೂ ಓದಿ: ಇಂದಿನಿಂದ ಶಿರಸಿ ಜಾತ್ರೆ ಶುಭಾರಂಭ; ಗದ್ದುಗೆ ಏರಿ ಕುಳಿತ ಮಾರಿಕಾಂಬಾ

ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಮತ್ತು ಶಿವಮೊಗ್ಗದ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 33°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ. ಬೆಳಗಿನ ಜಾವ ತಂಪಾದ ಗಾಳಿ ಇರಲಿದ್ದು, ಮಧ್ಯಾಹ್ನ ಸ್ವಲ್ಪ ಸೆಖೆ ಇರುತ್ತದೆ. ಮೈಸೂರಿನಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಕಡಿಮೆ ಇದ್ದು, ಒಣ ಹವಾಮಾನವಿರುತ್ತದೆ. ಮೈಸೂರಿನಲ್ಲಿ ಇಂದು ಬಿಸಿಲು ಸ್ವಲ್ಪ ಜಾಸ್ತಿ ಇರಲಿದೆ. ಹಗಲಿನಲ್ಲಿ ತಾಪಮಾನ ಏರಿಕೆಯಾಗುವುದರಿಂದ ಸಾರ್ವಜನಿಕರಿಗೆ ಸೆಖೆಯ ಅನುಭವವಾಗಲಿದೆ.ಗರಿಷ್ಠ ತಾಪಮಾನ 34°C ವರೆಗೆ ತಲುಪಬಹುದು ಮತ್ತು ಕನಿಷ್ಠ ತಾಪಮಾನ 19°C ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 26ರ ದಿನಭವಿಷ್ಯ

ಕೃಷ್ಣನ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ತುಳಸಿ ಹಾರವನ್ನು ಸಮರ್ಪಣೆ ಮಾಡಿ. ಒಂದು ವೇಳೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಇರುವಂಥ ಕೃಷ್ಣನ ವಿಗ್ರಹ, ಚಿತ್ರಪಟಕ್ಕೆ ತುಳಸಿ ದಳ, ತುಳಸಿಹಾರವನ್ನು ಅರ್ಪಿಸಿ. ಯಾವುದೇ ವಿಚಾರದಲ್ಲಿ ನಿಮಗೆ ಕಾಡುತ್ತಿರುವ ಅಡೆತಡೆ ನಿವಾರಣೆ ಆಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ವಿಶ್ವಾಸಾರ್ಹತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಬೇಕಾದ ಅನಿವಾರ್ಯ ಸೃಷ್ಟಿ ಅಗಲಿದೆ. ಸಂಗಾತಿಯ ಆರ್ಥಿಕ ವಿಚಾರಗಳಿಗೆ ನಿಮ್ಮ ಬೆಂಬಲ ಹಾಗೂ ಸಹಕಾರ ಅಗತ್ಯವಿದೆ ಎಂಬುದು ಖಾತ್ರಿ ಆಗಲಿದೆ. ಉಪನ್ಯಾಸಕರು- ಮನೆಯಲ್ಲಿಯೇ ಟ್ಯೂಷನ್ ಮಾಡುತ್ತಾ ಆ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಇಳಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಪೂಜಾ ಸಾಮಗ್ರಿಗಳು ಮಾಡಿಸುವುದಕ್ಕೆ- ಖರೀದಿ ಮಾಡುವುದಕ್ಕೆ ಅಥವಾ ದೇವರಮನೆ ರಿನೋವೇಷನ್ ಇಂಥವುಗಳ ಬಗ್ಗೆ ಈ ದಿನ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಮತ್ತೆ ನಿಮ್ಮಲ್ಲಿ ಕೆಲವರು ಮನೆಯ ವಾಸ್ತುವಿನಲ್ಲಿ ಆಗಬೇಕಾದ ಬದಲಾವಣೆಗಳು ಇದ್ದಲ್ಲಿ ಅದನ್ನು ಮಾಡಿಸಲು ಬೇಕಾದಂಥ ವ್ಯಕ್ತಿಗಳನ್ನು ಕರೆಸಿ, ಕೆಲಸದ ಬಗ್ಗೆ ಮಾತುಕತೆ ನಡೆಸಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಕೃಷಿ ವಿಜ್ಞಾನಿಗಳಿಗೆ ತಮ್ಮ ಈಗಿನ ಪ್ರಾಜೆಕ್ಟ್ ಜೊತೆಗೆ ಮಹತ್ವಾಕಾಂಕ್ಷೆಯ- ದೊಟ್ಟ ಮಟ್ಟದ- ಪ್ರತಿಷ್ಠಿತ ಸಂಸ್ಥೆಯ ಅನುದಾನದ ಯೋಜನೆಗಳನ್ನು ಮುನ್ನಡೆಸುವಂತೆ ಸೂಚನೆ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಪ್ರಾಜೆಕ್ಟ್ ಇದಾಗಿರಲಿದೆ ಎಂಬ ಖಾತ್ರಿ ಸಹ ನಿಮಗೆ ಸಿಗಲಿದೆ. ಡೇರಿ ಉತ್ಪನ್ನಗಳ ಮಾರಾಟ- ವಿತರಣೆ- ಉತ್ಪಾದನೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ನಾನಾ ಅವಕಾಶಗಳು ತೆರೆದುಕೊಳ್ಳಲಿವೆ.

ಲೇಖನ- ಸ್ವಾತಿ ಎನ್.ಕೆ.

Source link

Exit mobile version