ಚೆನ್ನೈ, ಫೆಬ್ರವರಿ 25: ಇಂಡಿಗೋ ವಿಮಾನವು ಚೆನ್ನೈನಿಂದ ಸಿಂಗಾಪುರಕ್ಕೆ ಹೊರಡುವ ಮೊದಲು 200ಕ್ಕೂ ಹೆಚ್ಚು ಪ್ರಯಾಣಿಕರು ಇಂಡಿಗೋ (IndiGo) ವಿಮಾನದೊಳಗೆ 5 ಗಂಟೆಗಳ ಕಾಲ ಕಾಯುವಂತಾಯಿತು. ವಿಮಾನ ಹತ್ತಿದ ನಂತರ ಸುಮಾರು 5 ಗಂಟೆಗಳ ಕಾಲ ಅಂದರೆ ಚೆನ್ನೈನಿಂದ ಸಿಂಗಾಪುರ ತಲುಪುವ ಸಮಯಕ್ಕಿಂತ ಹೆಚ್ಚು ಕಾಲ ವಿಮಾನದೊಳಗೆ ಕುಳಿತು ಕಾಯುವಂತಾಯಿತು. ಇದರಿಂದ ಹತಾಶೆಗೊಂಡ ಪ್ರಯಾಣಿಕರು ಅಸಮಾಧಾನ ಹೊರಹಾಕಿದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಯ ಮೇಲೆ ಕೋಪ ವ್ಯಕ್ತಪಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
About 200 passengers stuck more than 4.20 hours without proper ventilation and food inside the clueless Indigo flight at #Chennai airport on 24/2/2026. This flight s ETD to #Singapore was 07.20. ATD was 11.40. The impact of monopoly in Indian skies. @mkstalin@RamMNK@IndiGo6Epic.twitter.com/aBMQGl8f1q
ಈ ಘಟನೆ ನಡೆದ ನಂತರ ಇಂಡಿಗೋ ಸ್ಪಷ್ಟನೆಯನ್ನೂ ನೀಡಿದೆ. ಕ್ಯಾಬಿನ್ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರುವುದನ್ನು ಪೈಲಟ್ ಗಮನಿಸಿ ಎಂಜಿನಿಯರಿಂಗ್ ತಂಡಕ್ಕೆ ಎಚ್ಚರಿಕೆ ನೀಡಿದ್ದರಿಂದ ವಿಳಂಬ ಸಂಭವಿಸಿದೆ ಎಂದು ಇಂಡಿಗೋ ವಿವರಿಸಿದೆ. ಈ ವೇಳೆ ಕಾಕ್ಪಿಟ್ ಸಿಬ್ಬಂದಿ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೆಷನ್ಗಳನ್ನು (ಎಫ್ಡಿಟಿಎಲ್) ಮೀರಿದ್ದರು. ಹೀಗಾಗಿ, ಬದಲಿ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕಿತ್ತು. ಇದು ವಿಮಾನ ಹಾರಾಟದ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲಾರ, ಫೆಬ್ರವರಿ 25: ಕೋಲಾರ ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಯಲ್ಲಿ ಹೆಸರುವಾಸಿಯಾದ ಜಿಲ್ಲೆ. ಅಪರೂಪಕ್ಕೆ ಒಮ್ಮೆ ಸಿಲ್ಕ್ (Silk) ಉತ್ಪಾದನೆ ಮಾಡುವ ರೈತರ ಮುಖದಲ್ಲಿ ಸಂತಸ ಮೂಡುವಂತ ಬೆಲೆ ರೈತರಿಗೆ ಸಿಗುತ್ತಿದೆ. ಕೊರೊನಾ ನಂತರದ ದಿನಗಳಲ್ಲಿ ಇದೇ ಮೊದಲ ಬಾರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದೆ. ಕೆಜಿಗೆ ಸಾವಿರಾರು ರೂ ಮಾರಾಟ ಹಿನ್ನೆಲೆ ರೇಷ್ಮೆ ಬೆಳೆಗಾರರು ಸಂತಸಗೊಂಡಿದ್ದಾರೆ.
800 ರಿಂದ 1000 ರೂ
ಕಳೆದ ಎರಡು ಮೂರು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಮುಖದಲ್ಲಿ ನಗು ದುಪ್ಪಟ್ಟಾಗಿದೆ. ಅದಕ್ಕೆ ಕಾರಣ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದೆ. ಕೆಜಿ ಬಯೋಲ್ಟಿನ್ ರೇಷ್ಮೆ 800 ರಿಂದ 1000 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಕಷ್ಟಪಟ್ಟು ಬೆಳೆದ ರೇಷ್ಮೆ ಬೆಳೆಗಾರರ ಮುಖದಲ್ಲಿ ಸಂತೋಷ ಹಿಮ್ಮಡಿಯಾಗುತ್ತಿದೆ.
ಕೊರೊನೊ ಕಾಲದಲ್ಲಿ ಚೀನಾ ರೇಷ್ಮೆಯ ಆಮದು ನಿಲ್ಲಿಸಿದ್ದ ಸಮಯದಲ್ಲಿ ರೇಷ್ಮೆಗೆ ಈ ರೀತಿಯ ಬೆಲೆ ಬಂದಿತ್ತು. ಅದಾದ ನಂತರ ಇಷ್ಟು ಬೆಲೆ ಬಂದಿರುವುದು ರೇಷ್ಮೆ ಬೆಳೆಗಾರರಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಆದರೆ ರೇಷ್ಮೆ ಬೆಲೆ ಏರಿಕೆಯಾಗಲು ಕಾರಣ ವಾತಾವರಣದಲ್ಲಿನ ಏರುಪೇರು. ಹಿಪ್ಪುನೇರಳೆ ಬೆಳೆ ಗುಣಮಟ್ಟ ಕುಸಿತ ಹಾಗೂ ರೇಷ್ಮೆ ಗೂಡು ಉತ್ಪಾದನೆಯಲ್ಲೂ ತೀವ್ರ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಬಯೋಲ್ಟಿನ್ ರೇಷ್ಮೆಗೆ ಬೇಡಿಕೆ ಹೆಚ್ಚಿರುವ ಕಾರಣದಿಂದ ರೇಷ್ಮೆ ನೂಲು ತೆಗೆಯುವ ರೀಲರ್ಸ್ ಹೆಚ್ಚಿನ ಬೆಲೆ ಕೊಟ್ಟು ರೇಷ್ಮೆ ಗೂಡು ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ಕೂಡ ಸಂತೋಷಗೊಂಡಿದ್ದಾರೆ.
ಇನ್ನು ಕೋಲಾರ ಜಿಲ್ಲೆಯಲ್ಲಿ ಹಲವು ದಶಕಗಳಿಂದ ರೇಷ್ಮೆ ಬೆಳೆಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಜಿಲ್ಲೆಯಲ್ಲಿ ಸುಮಾರು 20,134 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳಿ ಅಥವಾ ಮಲ್ಬರಿ ಬೆಳೆ ಬೆಳೆಯಲಾಗುತ್ತಿದ್ದು, 11,500 ಮೆಟ್ರಿಕ್ ಟನ್ನಷ್ಟು ರೇಷ್ಮೆ ಉತ್ಪಾದನೆ ಮಾಡಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಸುಮಾರು 1477 ಗ್ರಾಮಗಳ 19,739 ಜನ ರೈತರು ರೇಷ್ಮೆ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿಕಾರರ ಸಮಸ್ಯೆ, ವಾತಾವರಣದಲ್ಲಿನ ಏರುಪೇರಿನ ಪರಿಣಾಮವಾಗಿ ರೇಷ್ಮೆ ಬೆಳೆಗಾರರ ಸಂಖ್ಯೆ ಕ್ಷೀಣಿಸುತ್ತಿದೆ.
ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಹೇಳಿದ್ದಿಷ್ಟು
ಮೊದಲೆಲ್ಲಾ ಒಂದು ಟನ್ ರೇಷ್ಮೆ ಉತ್ಪಾದನೆ ಮಾಡುತ್ತಿದ್ದ ರೈತರು ಈಗ 400 ರಿಂದ 500 ಕೆಜಿ ರೇಷ್ಮೆ ಉತ್ಪಾದನೆ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೇಷ್ಮೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇರುವ ಹಿನ್ನೆಲೆ ಜೊತೆಗೆ ರೇಷ್ಮೆ ಬೆಲೆ ಕೂಡ ಉತ್ತಮ ಬೆಲೆ ಕಾಪಾಡಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಯತ್ತ ರೈತರು ಒಲವು ತೋರಿದಲ್ಲಿ ಉತ್ತಮ ಆದಾಯ ಗಳಿಸಬಹುದು ಅನ್ನೋದು ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಮಾತು.
ಲಕ್ಷಾಂತರ ರೂ ಸಂಪಾದನೆ ಮಾಡಲು ಅವಕಾಶವಿದೆ: ಆಂಜನೇಯರೆಡ್ಡಿ
ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಗೆ ಒಳ್ಳೆಯ ಬೆಲೆ ಸಿಗುತ್ತಿದ್ದು, ರೇಷ್ಮೆ ಬೆಳೆಗಾರರು ಲಕ್ಷ ಲಕ್ಷ ಹಣ ಸಂಪಾದನೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆಯಿಂದ ರೈತರಿಗೆ ರೇಷ್ಮೆ ಬೆಳೆ ಬೆಳೆಯಲು ಸಹ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಅನ್ನೋದು ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯರೆಡ್ಡಿ ಮಾತು.
ಸದ್ಯ ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಿದ್ದು, ಇತ್ತೀಚೆಗೆ ರೇಷ್ಮೆ ಬೆಳೆಯಿಂದಲೇ ದೂರ ಸರಿಯಬೇಕು ಎಂದುಕೊಂಡಿದ್ದ ರೈತರಿಗೆ ಈ ಬೆಲೆ ಏರಿಕೆ ಹೊಸ ಉತ್ಸಾಹವನ್ನು ತುಂಬಿದೆ. ರೇಷ್ಮೆ ಬೆಳೆಗಾರರಿಗೆ ಪ್ರೇರಣೆ ನೀಡುವಲ್ಲಿ ಈ ಉತ್ತಮ ಬೆಲೆ ಸಹಕಾರಿಯಾಗಿರುವುದರಲ್ಲಿ ಎರಡು ಮಾತಿಲ್ಲ. ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರಿಗೆ ಬೇಕಾದ ಸಹಕಾರ ನೀಡಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.
ಗದಗ, (ಫೆಬ್ರವರಿ 25): ಲೋಕಾಯುಕ್ತ (Lokayukta) ಅಧಿಕಾರಿಗಳ ದಾಳಿ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಸದ್ಯ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ. ಇದರ ಬೆನ್ನಲ್ಲೇ ಇದೀಗ ಗದಗ (Gadag) ಶಹರ ಠಾಣೆ ASI ಚನ್ನಬಸಪ್ಪ ಇಂಗಳಳ್ಳಿ ಸಹ ಲೋಕಾಯುಕ್ತ ಬಲೆಬಿದ್ದಿದ್ದಾರೆ. ಪಿಟಿಷನ್ ಅರ್ಜಿ ವಿಚಾರಣೆಗೆ ಲಂಚ 10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಚೆನ್ನಬಸಪ್ಪ ಇಂಗಳಳ್ಳಿ ಅವರು ಪಿಟಿಷನ್ ಅರ್ಜಿ ವಿಚಾರಣೆಗೆ ಸುಮಾರು ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವೀರೇಶ ಪೂಜಾರ್ ಎಂಬುವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆ, ಇಂದು (ಫೆಬ್ರವರಿ 25) ಪೊಲೀಸ್ ಠಾಣೆಯಲ್ಲಿ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡ ದಾಳಿ ಮಾಡಿದೆ.
ಇನ್ನೊಂದೆಡೆ ಚಿಕ್ಕಮಗಳೂರಿನಲ್ಲೂ ಸಹ ಲೋಕಾಯುಕ್ತ ದಾಳಿ ನಡೆಸಿದ್ದು, ಲಂಚ ಪಡೆಯುವಾಗ ಪಿಡಿಓ ಬಲೆಗೆ ಬಿದ್ದಿದ್ದಾರೆ. ಸೈಟ್ ಒಂದಕ್ಕೆ ಎನ್ಒಸಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ ಹಣ ಸ್ವೀಕರಿಸುತ್ತಿದ್ದ ವೇಳೆ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಂಜುಂಡಮ್ಮ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ತಿಮ್ಮಶೆಟ್ಟಿ ಎನ್ನುವರು ಲೋಕಾಯಯಕ್ತ ಪೋಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಇದೇ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಾಸಕ ಡಾ. ಚಂದ್ರು ಲಮಾಣಿ ಅವರು ಸುಮಾರು ಐದು ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದರು. ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಇಂತಹ ಘಟನೆಗಳಿಂದ ಎಚ್ಚರಗೊಳ್ಳದ ಕೆಲ ಲಂಚಬಾಕ ಅಧಿಕಾರಿಗಳು ಜನರಿಂದ ಲಂಚ ಸ್ವೀಕರಿಸುವುದನ್ನು ಮುಂದುವರಿಸಿದ್ದಾರೆ. ಇನ್ನು ಲಂಚಬಾಕ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಸಹ ಸಮರ ಸಾರಿದ್ದಾರೆ.
ಕನ್ನಡದ ವರನಟ ಡಾ. ರಾಜ್ಕುಮಾರ್ (Dr Rajkumar) ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಾಡುಗಳ್ಳ ವೀರಪ್ಪನ್ನ (Veerappan) ಒಂಬತ್ತು ಮಂದಿ ಸಹಚರರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ (ಫೆಬ್ರವರಿ 26) ವಜಾಗೊಳಿಸಿದೆ. ಇದರೊಂದಿಗೆ, 2018ರಲ್ಲಿ ಗೋಪಿಶೆಟ್ಟಿಪಾಳ್ಯದ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ (Madras High Court) ಎತ್ತಿಹಿಡಿದಂತಾಗಿದೆ. ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ.
2000ನೇ ಇಸವಿಯ ಜುಲೈ 30ರಂದು ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಇರುವ ತಮ್ಮ ಫಾರ್ಮ್ಹೌಸ್ನಲ್ಲಿ ತಂಗಿದ್ದ ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ತಂಡ ಅಪಹರಿಸಿತ್ತು. ಸುಮಾರು 108 ದಿನಗಳ ಕಾಲ ಅವರನ್ನು ಅರಣ್ಯದಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಈ ಘಟನೆಯು ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಈ ಪ್ರಕರಣದಲ್ಲಿ ವೀರಪ್ಪನ್ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ, 2004ರಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮತ್ತು ಸೇತುಮಣಿ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದರು. ಮತ್ತೊಬ್ಬ ಆರೋಪಿ ರಮೇಶ್ ಎಂಬಾತ ಇದುವರೆಗೂ ಪತ್ತೆಯಾಗಿಲ್ಲ. ಉಳಿದ 9 ಮಂದಿಯಾದ ಗೋವಿಂದರಾಜ್, ಅಂದ್ರಿಲ್, ಪಸುವಣ್ಣ, ಪುಟ್ಟುಸ್ವಾಮಿ, ಕಾಲ್ಮಂದಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ವಿರುದ್ಧ ಸುದೀರ್ಘ 18 ವರ್ಷಗಳ ಕಾಲ ವಿಚಾರಣೆ ನಡೆದಿತ್ತು.
ಸುಮಾರು 10 ನ್ಯಾಯಮೂರ್ತಿಗಳು ಬದಲಾದ ಈ ಸುದೀರ್ಘ ಕಾನೂನು ಹೋರಾಟವು 2018ರ ಸೆಪ್ಟೆಂಬರ್ನಲ್ಲಿ ಅಂತ್ಯಗೊಂಡಿತ್ತು. ಅಂದು ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪಿನಿಂದ ಅತೃಪ್ತಗೊಂಡಿದ್ದ ತಮಿಳುನಾಡು ಸರ್ಕಾರ 2019ರಲ್ಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಐದು ವರ್ಷಗಳ ನಂತರ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಅಂತಿಮಗೊಳಿಸಿದೆ.
ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ (Karnataka vs J&K) ನಡುವೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದೆ. ಒಂದೆಡೆ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ (Ranji Trophy Final) ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಎಂಟು ಬಾರಿಯ ರಣಜಿ ಚಾಂಪಿಯನ್ ಕರ್ನಾಟಕದ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದೆ. ಆದರೆ ಈ ಪಂದ್ಯದಲ್ಲಿ ಆಟದ ನಿಯಮದ ವಿರುದ್ಧ ನಡೆದುಕೊಂಡ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ವಿರುದ್ಧ ಬಿಸಿಸಿಐ ಕಠಿಣ ಕ್ರಮ ತೆಗೆದುಕೊಂಡಿದ್ದು, ಪಂದ್ಯ ಶುಲ್ಕದ ಶೇ. 50 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ.
ನಿಯಮ ಮುರಿದ ಪರಾಸ್ ಡೋಗ್ರಾ
ವಾಸ್ತವವಾಗಿ ರಣಜಿ ಫೈನಲ್ ಪಂದ್ಯದ ಎರಡನೇ ದಿನದಾಟದಂದು ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಫೀಲ್ಡರ್ ಅನೀಶ್ ಕೆವಿ ಮೈದಾನದಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತೆರಳಿ, ಜೆಕೆ ನಾಯಕ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಪರಾಸ್ ಡೋಗ್ರಾ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇದನ್ನು ಗಮನಿಸಿದ ಅಂಪೈರ್ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಮಾತಿನ ಚಕಮಕಿ
ಜಮ್ಮು ಮತ್ತು ಕಾಶ್ಮೀರದ ಇನ್ನಿಂಗ್ಸ್ನ 100 ನೇ ಓವರ್ನಲ್ಲಿ ಈ ಘಟನೆ ನಡೆದಿದ್ದು, ಪ್ರಸಿದ್ಧ್ ಕೃಷ್ಣ ಎಸೆತವನ್ನು ಪರಾಸ್ ಡೋಗ್ರಾ ಗಲ್ಲಿ ದಿಕ್ಕಿನಲ್ಲಿ ಆಡಿದರು. ಅಲ್ಲಿದ್ದ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ತಡೆಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಗೆರೆ ದಾಟಿತು. ಈ ನಡುವೆ ಸಿಲ್ಲಿ ಪಾಯಿಂಟ್ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಕೆವಿ ಅನೀಶ್ ಹಾಗೂ ಪರಾಸ್ ಡೋಗ್ರಾ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿದೆ. ಇದೇ ವೇಳೆ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಕ್ಕಿ ಹೊಡೆದಿದ್ದಾರೆ.
ಈ ಹಂತದಲ್ಲಿ, ಮಾಯಾಂಕ್ ಅಗರ್ವಾಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ, ಸ್ವಲ್ಪ ಸಮಯದವರೆಗೆ ವಾದ ಮುಂದುವರೆಯಿತು. ಕೊನೆಗೆ, ಅಂಪೈರ್ಗಳು ಮಧ್ಯಪ್ರವೇಶಿಸಿ ಡೋಗ್ರಾ ಮತ್ತು ಅನೀಶ್ ಅವರನ್ನು ಬೇರ್ಪಡಿಸಿದರು. ನಂತರ, ಪರಾಸ್ ಡೋಗ್ರಾ ಅನೀಶ್ ಕೆವಿ ಅವರ ಬಳಿ ಕ್ಷಮೆಯಾಚಿಸಲು ಪ್ರಯತ್ನಿಸಿದರು. ಆದರೆ ಬದಲಿ ಫೀಲ್ಡರ್ ಅನೀಶ್ ಕ್ಷಮೆಯಾಚನೆಯನ್ನು ಸ್ವೀಕರಿಸಲು ಆಸಕ್ತಿ ತೋರಲಿಲ್ಲ. ಅಂಪೈರ್ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಫೆಬ್ರವರಿ 25: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯ ಕುರಿತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಬೆಂಗಳೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ, ಮುಂಬರುವ ಕಾರ್ಪೊರೇಷನ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎನ್ಡಿಎ ಜೊತೆಗೇ ಎದುರಿಸಲು ತಮ್ಮ ಪಕ್ಷಕ್ಕೆ ಆಕಾಂಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮತ್ತು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ನಡುವಿನ ನಿರ್ಧಾರವಾಗಿದ್ದು, ಅಂತಿಮ ತೀರ್ಮಾನವನ್ನು ಬಿಜೆಪಿ ತೆಗೆದುಕೊಳ್ಳಬೇಕು. ಬಿಜೆಪಿಯವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಮತ್ತು ಯಾವ ಭಾವನೆ ವ್ಯಕ್ತಪಡಿಸುತ್ತಾರೆ ಎಂಬುದರ ಮೇಲೆ ಜೆಡಿಎಸ್ ತನ್ನ ಮುಂದಿನ ಹೆಜ್ಜೆ ಇಡಲಿದೆ. ಸಂಸತ್ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ ಎನ್ಡಿಎ ಜೊತೆಗೇ ಹೋಗೋದಾಗಿಯೂ ಅವರು ಈ ವೇಳೆ ತಿಳಿಸಿದ್ದಾರೆ.
ಕೇಂದ್ರ ನಾಯಕರೊಂದಿಗೆ ಚರ್ಚಿಸಲು ಹೆಚ್.ಡಿ.ಕುಮಾರಸ್ವಾಮಿಯವರು ದೆಹಲಿಗೆ ತೆರಳಿದ್ದಾರೆ. ಅವರು ವಾಪಸ್ ಬಂದ ನಂತರ ನಿಖಿಲ್ ಕುಮಾರಸ್ವಾಮಿ, ತಿಪ್ಪೇಸ್ವಾಮಿ, ಬಾಬು ಹಾಗೂ ಇತರ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವೇಗೌಡರು ಹೇಳಿದ್ದಾರೆ.
ಅನೇಕರು ಊಟ ಮಾಡಿದ ತಕ್ಷಣ ವಾಕಿಂಗ್ ಮಾಡಲು ಹೋಗುತ್ತಾರೆ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಭಾರವಾಗುವುದನ್ನು ತಡೆಯುತ್ತದೆ ಎಂಬುದು ಅವರು ನಂಬಿಕೆಯಾಗಿರುತ್ತದೆ. ಇನ್ನು ಕೆಲವರು ತೂಕವನ್ನು ನಿಯಂತ್ರಿಸಲು, ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಅಥವಾ ಆಲಸ್ಯವನ್ನು ಹೋಗಲಾಡಿಸಲು ಈ ರೀತಿ ಮಾಡುತ್ತಾರೆ. ಆಫೀಸ್ ಅಥವಾ ಮನೆಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವವರು ಊಟದ ನಂತರ ಸ್ವಲ್ಪ ನಡೆಯುವುದು ಅಗತ್ಯವೆಂದು ಭಾವಿಸುತ್ತಾರೆ. ಗ್ಯಾಸ್, ಆಮ್ಲೀಯತೆ ಅಥವಾ ಮಲಬದ್ಧತೆಯನ್ನು (Constipation) ತಪ್ಪಿಸಲು ಅನೇಕರು ಈ ಅಭ್ಯಾಸವನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಜೀರ್ಣಕ್ರಿಯೆಯ ಸಾಮರ್ಥ್ಯವಿಭಿನ್ನವಾಗಿರುತ್ತದೆ ಮತ್ತು ದೇಹದ ಅಗತ್ಯತೆಗಳು ಸಹ ಬದಲಾಗಬಹುದು. ಇತ್ತೀಚಿನ ದಿನಗಳಲ್ಲಿ, ಈ ಫಿಟ್ನೆಸ್ ಪ್ರವೃತ್ತಿಗಳಿಂದಾಗಿ, ಜನ ಇಂತಹ ಅಭ್ಯಾಸವನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ನಿಮಗೆ ತಿಳಿದಿರಲಿ ಸರಿಯಾದ ಮಾಹಿತಿಯಿಲ್ಲದೆ ಯಾವುದೇ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದಲ್ಲ. ಆದ್ದರಿಂದ, ವಾಕಿಂಗ್ ಮಾಡಲು ಸರಿಯಾದ ಸಮಯ ತಿಳಿದುಕೊಳ್ಳುವುದು ಬಹಳ ಮುಖ್ಯ.
ಊಟ ಮಾಡಿದ ತಕ್ಷಣ ನಡೆಯುವುದು ಸರಿಯೋ ತಪ್ಪೋ?
ಆರ್ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಊಟ ಮಾಡಿದ ತಕ್ಷಣ ಚುರುಕಾದ ನಡಿಗೆ ಸಾಮಾನ್ಯವಾಗಿ ಸೂಕ್ತವಲ್ಲ. ಊಟದ ನಂತರ, ದೇಹದಲ್ಲಿನ ಹೆಚ್ಚಿನ ರಕ್ತದ ಹರಿವು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡಲು ಜೀರ್ಣಾಂಗ ವ್ಯವಸ್ಥೆಯ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಅಂತಹ ಸಂದರ್ಭಗಳಲ್ಲಿ, ಊಟ ಮಾಡಿದ ತಕ್ಷಣ ವೇಗವಾಗಿ ನಡೆಯುವುದು ಅಥವಾ ಭಾರೀ ಚಟುವಟಿಕೆಯಲ್ಲಿ ತೊಡಗುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವರಿಗೆ ಹೊಟ್ಟೆ ನೋವು, ಭಾರ ಅಥವಾ ಆಮ್ಲೀಯತೆ ಉಂಟಾಗಬಹುದು. ಆದರೆ ಕೆಲವು ನಿಮಿಷ ನಿಧಾನವಾಗಿ ನಡೆಯುವುದು ಹಾನಿಕಾರಕವಲ್ಲ. ಅದರಲ್ಲಿಯೂ ಊಟ ಮಾಡಿದ 10 ರಿಂದ 15 ನಿಮಿಷಗಳ ನಂತರ ಆರಾಮದಾಯಕ ನಿಧಾನ ನಡಿಗೆ ಮಾಡುವುದು ಬಹಳ ಉತ್ತಮ.
ಊಟದ ನಂತರ 10 ರಿಂದ 20 ನಿಮಿಷಗಳ ಕಾಲ ಲಘು ನಡಿಗೆ ಮಾಡಿ. ತುಂಬಾ ವೇಗವಾಗಿ ಅಥವಾ ದೂರ ನಡೆಯುವ ಅಗತ್ಯವಿಲ್ಲ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರದಂತೆ ನಿಧಾನವಾಗಿ ನಡೆಯುವುದು ಉತ್ತಮ. ಊಟ ಭಾರವಾಗಿದ್ದರೆ, ಮೊದಲ 10- 15 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ ಮತ್ತು ನಂತರ ನಿಧಾನಗತಿಯಲ್ಲಿ ನಡೆಯಿರಿ. ನಿಯಮಿತ ಮತ್ತು ಸಮತೋಲಿತ ದೈನಂದಿನ ನಡಿಗೆ ಹೆಚ್ಚು ಪ್ರಯೋಜನಕಾರಿ.
ಊಟದ ನಂತರ ನಡೆಯುವುದರಿಂದಾಗುವ ಪ್ರಯೋಜನಗಳು:
ಸಾಮಾನ್ಯವಾಗಿ ಊಟದ ನಂತರ ಲಘುವಾಗಿ ನಡೆಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಗ್ಯಾಸ್ ಅಥವಾ ಉಬ್ಬುವುದು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ನಿಧಾನ ವೇಗದಲ್ಲಿ ನಡೆಯುವುದರಿಂದ ದೇಹವು ಸಕ್ರಿಯವಾಗಿರುತ್ತದೆ ಮತ್ತು ಸೋಮಾರಿತನ ಕಡಿಮೆಯಾಗುತ್ತದೆ. ನಿಯಮಿತ ಅಭ್ಯಾಸದಿಂದ, ಇದು ತೂಕವನ್ನು ನಿಯಂತ್ರಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಗುವಾಹಟಿ, ಫೆಬ್ರವರಿ 25: ಅಸ್ಸಾಂನ (Assam) ಸಿಲ್ಚಾರ್ ಬೈಪಾಸ್ನಲ್ಲಿ ರಾತ್ರಿ ತನ್ನ ಭಾವಿ ಪತಿಯೊಂದಿಗೆ ಲಾಂಗ್ ಡ್ರೈವ್ ಹೋಗಿದ್ದ 28 ವರ್ಷದ ಯುವತಿಗೆ ಆ ರಾತ್ರಿ ದುಃಸ್ವಪ್ನವಾಗಿ ಮಾರ್ಪಟ್ಟಿತು. ಆಕೆಯ ಜೊತೆ ನಿಶ್ಚಿತಾರ್ಥವಾದ ಹುಡುಗನ ಮುಂದೆ ಯುವಕರ ಗುಂಪೊಂದು ಆಕೆಯನ್ನು ಕಾರಿನಿಂದ ಹೊರಗೆ ಎಳೆದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಅಲ್ಲದೆ, 10,000 ರೂ. ಹಣ ನೀಡುವಂತೆ ಆಕೆಯನ್ನು ಒತ್ತಾಯಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿಯ ಹೇಳಿಕೆಯ ಪ್ರಕಾರ, ಈ ಘಟನೆ ಫೆಬ್ರವರಿ 19ರ ರಾತ್ರಿ ನಡೆದಿದೆ. ಆಕೆ ಮತ್ತು ಆಕೆಯ ಭಾವಿ ಪತಿ ಸಿಲ್ಚಾರ್ನ ರಾಮನಗರ ಬೈಪಾಸ್ ರಸ್ತೆಯ ಮೂಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. 7 ಜನರು ಒಬ್ಬರಾದ ನಂತರ ಒಬ್ಬರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ 10,000 ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಬರೆದಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಕೆಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ. ಸಾವಿರಾರು ಸ್ಥಳೀಯರು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ಸೇರಿದಂತೆ ರಾಜಕೀಯ ನಾಯಕರು ಸಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿ, ಫೆಬ್ರವರಿ 25: ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಿನ್ನೆಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಯಾದಗಿರಿ ಎಸ್ಪಿಗೆ ಪತ್ರ ಬರೆದಿರುವ ಆಯೋಗ, ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಿದೆ. ಪೊಲೀಸ್ ಇಲಾಖೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳೋದಾಗಿ ಆಯೊಗದ ಅಧ್ಯಕ್ಷ ಶಶಿಧರ್ ಕೋಸುಂಬೆ ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅಪ್ರಾಪ್ತ ಬಾಲಕಿಯೋರ್ವಳ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು ಸೇರಿದಂತೆ ಆಕೆಗೆ ಚಿವುಟುವದರ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೇ ತಡ ಮುತ್ಯಾ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಅಭಿಪ್ರಾಯಗಳು ಕೇಳಿಬಂದಿದ್ದವು. ಆ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ.
ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರೋಜಾ ಮಹೆಲ್ ಗ್ರಾಮದಲ್ಲಿ ವಾಸವಿರುವ 26 ವರ್ಷ ಆಸುಪಾಸಿನ ಈ ವ್ಯಕ್ತಿ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಉತ್ತರ ಕರ್ನಾಟಕದ ಅನೇಕ ಭಕ್ತರು ಇವರನ್ನು ಅಪ್ಪಾಜಿ ಅಥವಾ ನಡೆದಾಡುವ ದೇವರು ಎಂದು ನಂಬಿ ಗೌರವಿಸುತ್ತಾರೆ. ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮುತ್ಯಾ, ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ. ಸ್ವಯಂ ಘೋಷಿತ ಈ ದೇವಮಾನವನ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ಟೆಲ್ ಅವಿವ್, ಫೆಬ್ರವರಿ 25: ಪ್ರಧಾನಿ ಮೋದಿ (PM Modi in Israel) ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4.15ರ ಸುಮಾರಿಗೆ ಇಸ್ರೇಲ್ನ ಟೆಲ್ ಅವಿವ್ಗೆ ತಲುಪಿದ್ದಾರೆ. 6 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೇಲ್ಗೆ ತೆರಳಿದ ಮೋದಿಯನ್ನು ವಿಮಾನ ನಿಲ್ದಾಣದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದರು. ವಿಮಾನದಿಂದ ಇಳಿಯುತ್ತಿದ್ದಂತೆ ನೆತನ್ಯಾಹು ಪ್ರಧಾನಿ ಮೋದಿಯನ್ನು ಅಪ್ಪುಗೆ ಮೂಲಕ ಸ್ವಾಗತಿಸಿದರು. ಈ ವೇಳೆ ನೆತನ್ಯಾಹು ಅವರ ಪತ್ನಿ ಬೆನ್ ಗುರಿಯನ್ ಕೂಡ ಹಾಜರಿದ್ದರು.
ಇಸ್ರೇಲ್ಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರ 2ನೇ ಭೇಟಿ ಇದಾಗಿದೆ. ಈ ಹಿಂದೆ 2017ರಲ್ಲಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ