ರಾಯಚೂರು, ಫೆ.19: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತ ಆಗಿದೆ. ಸದ್ಯ ಸ್ವಾಮೀಜಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ವಾಲ್ಮೀಕಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಗೆ ಆಗಮಿಸಿದ್ದ ಶ್ರೀಗಳು, ನಿನ್ನೆ ರಾತ್ರಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರಿಗೆ ಏಕಾಏಕಿ ಎದೆನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ.ಅಸ್ವಸ್ಥಗೊಂಡ ಶ್ರೀಗಳನ್ನು ಕೂಡಲೇ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ವೈದ್ಯರ ಸಲಹೆಯಂತೆ, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಳನ್ನು ರಾಯಚೂರಿನಿಂದ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಸದ್ಯ ಶ್ರೀಗಳು ಹೈದರಾಬಾದ್ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಠದ ಮೂಲಗಳು ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶ್ರೀಗಳ ಆರೋಗ್ಯ ಹದಗೆಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಭಕ್ತರು ಮತ್ತು ಅನುಯಾಯಿಗಳಲ್ಲಿ ಆತಂಕ ಮೂಡಿದೆ. ಶ್ರೀಗಳು ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ಸಾರಿಗೆ ನೌಕರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಚಲೋ ಪ್ರತಿಭಟನೆ ನಡೆಸಿದ್ದಾರೆ. 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡಬೇಕೆಂದು ನೌಕರರು ಬಿಗಿಪಟ್ಟು ಹಿಡಿದಿದ್ದು, ಸರ್ಕಾರದ 26 ತಿಂಗಳ ಹಿಂಬಾಕಿ ಮತ್ತು 2025ರ ಏಪ್ರಿಲ್ನಿಂದ ವೇತನ ಪರಿಷ್ಕರಣೆಯ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ನಡೆಯುತ್ತಿದ್ದು, ಸಂಜೆ 4 ಗಂಟೆಗೆ ಜಂಟಿ ಕ್ರಿಯಾ ಸಮಿತಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ. ಶುಕ್ರವಾರ (ನಾಳೆ) ಬೆಳಗ್ಗೆಯಿಂದ ರಾಜ್ಯಾದ್ಯಂತ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಸಂಪೂರ್ಣ ಮುಷ್ಕರಕ್ಕೆ ಕರೆ ನೀಡುವ ಸಾಧ್ಯತೆ ದಟ್ಟವಾಗಿದೆ. ನಾವು ಕಷ್ಟದಲ್ಲಿ ದುಡಿಯುವ ವರ್ಗ. ನಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಲಾಗಿದೆ. ನೌಕರರು ಇದರಿಂದ ಸಂತೋಷಪಡಬೇಕು ಮತ್ತು ಸರ್ಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 38 ತಿಂಗಳು ಕೇಳಿದ್ದರು, 26 ತಿಂಗಳು ಕೊಟ್ಟಿದ್ದೇವೆ. ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಎಂದು ಸಂತೋಷಪಡಬೇಕು. ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಸಾರಿಗೆ ನೌಕರರ ಸಂಘವು ಸರ್ಕಾರದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಇಂದಿನ ಸಂಜೆ ಸಭೆಯ ನಂತರ ಬಸ್ ಸಂಚಾರದ ಭವಿಷ್ಯ ನಿರ್ಧಾರವಾಗಲಿದೆ.
ಇಂದು ಎಂದಿನಂತೆ ಬಸ್ ಸಂಚಾರ
ಇಂದು ನಾಲ್ಕು ಸಾರಿಗೆ ನಿಗಮಗಳಿಂದ ಬೆಂಗಳೂರು ಚಲೋಗೆ ಕರೆ ಹಿನ್ನೆಲೆ ರಾಜ್ಯಾದ್ಯಂತ ಸಾರಿಗೆ ಬಸ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಬೆಳಿಗ್ಗೆಯಿಂದ ಇಲ್ಲಿಯವರೆಗೂ ಎಲ್ಲಿಯೂ ಅನಾನುಕೂಲಗಳು ಆಗಿರುವ ಬಗ್ಗೆ ವರದಿ ಆಗಿಲ್ಲ. ಬಸ್ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮಕೈಗೊಳ್ಳಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶ ಮಾಡಿದ್ದು, ತುರ್ತು ಮತ್ತು ಅನಿವಾರ್ಯ ಸಂದರ್ಭ ಹೊರತು ಯಾವುದೇ ರಜೆ ನೀಡಬೇಡಿ ಎಂದು ಸೂಚಿಸಿದ್ದಾರೆ.
ಆನೆಗಳ (elephants) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ತನ್ನನ್ನು ಆರೈಕೆ ಮಾಡುವ ವ್ಯಕ್ತಿಗಳ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ. ಕೆಲವೊಮ್ಮೆ ಅತ್ಯಂತ ಸಲುಗೆಯಿಂದ ವರ್ತಿಸುತ್ತವೆ. ಇದೀಗ ಇಂತಹದ್ದೇ ತಮಾಷೆಯೆನಿಸುವ ವಿಡಿಯೋ ವೈರಲ್ ಆಗಿದೆ. ಆನೆಯೊಂದು ಮಹಿಳೆಯ (woman) ತಲೆಯಲ್ಲಿದ್ದ ಟೋಪಿಯನ್ನು ಮೆಲ್ಲನೆ ಎಗರಿಸಿದ್ದು, ಆಮೇಲೆ ಆಗಿದ್ದು ನೋಡಿದ್ರೆ ನೀವು ಶಾಕ್ ಆಗ್ತೀರಾ. ಗಜರಾಜನ ಈ ಕ್ಯೂಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಎನಿವೇ ಮನ್ಯವಿ (Anyway Manyawi) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆನೆಯ ತುಂಟಾಟವನ್ನು ನೋಡಬಹುದು. ಆನೆಯೊಂದು ಮಹಿಳೆಯ ಹಿಂಬದಿಯಲ್ಲಿ ನಿಂತುಕೊಂಡ ಆಕೆಯ ತಲೆಯಲ್ಲಿದ್ದ ಟೋಪಿಯನ್ನು ಸೊಂಡಿಲಿನಿಂದ ಮೆಲ್ಲನೆ ಎಗರಿಸಿದೆ. ಆ ಬಳಿಕ ತಾನು ಏನು ಮಾಡಿಲ್ಲ ಎಂಬಂತೆ ಗಂಭೀರವಾಗಿ ನಿಂತು ಕೊಂಡಿದೆ. ಅಲ್ಲೇ ಇದ್ದವರು ಈ ಗಜರಾಜನ ತುಂಟಾಟ ಕಂಡು ನಕ್ಕಿದ್ದಾರೆ. ತನ್ನ ಟೋಪಿಯನ್ನು ಎಗರಿಸಿದ ಆನೆಯ ಬಳಿ ಮಹಿಳೆಯೂ ಟೋಪಿ ಕೊಡುವಂತೆ ಮನವಿ ಮಾಡಿದ್ದಾಳೆ. ಮಹಿಳೆಯ ಮಾತಿಗೆ ಕರಗಿದ ಆನೆಯೂ ಮೆಲ್ಲನೆ ಟೋಪಿಯನ್ನು ಹಿಂದಿರುಗಿಸುವುದನ್ನು ನೋಡಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಖತರ್ನಾಕ್ ಆನೆ ಎಂದರೆ, ಮತ್ತೊಬ್ಬರು, ತುಂಬಾನೇ ಮುದ್ದಾಗಿದೆ, ಆನೆ ನೋಡಲು ಗಂಭೀರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬುದ್ದಿವಂತ ಗಜರಾಜ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆಗೆ ಎಷ್ಟು ಆಯಸ್ಸು ಇರುತ್ತದೆ ಮತ್ತು ಅದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬ ವಿಷಯದ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. ಪ್ರತಿಯೊಂದಕ್ಕೂ ಆದಿ ಅಂತ್ಯ ಇರುವಂತೆ, ಮನೆಗೂ ಒಂದು ನಿರ್ದಿಷ್ಟ ಆಯಸ್ಸು ಇರುತ್ತದೆ ಎಂಬುದು ಜ್ಯೋತಿಷ್ಯ ಮತ್ತು ವಾಸ್ತು ನಂಬಿಕೆಯಾಗಿದೆ. ಮನೆ ಕಟ್ಟಲು ಪ್ರಾರಂಭಿಸುವಾಗ ಜಾತಕದ ಶುಭಯೋಗಗಳು, ವಾಸ್ತುಪುರುಷನ ಸ್ಥಾನಮಾನ, ಮತ್ತು ಧ್ವಜಾಯ, ಧೂಮ್ರಾಯ, ಕಾಕಾಯ, ಸಿಂಹಾಯ, ವೃಷಭಾಯ, ಗಜಾಯ, ಖರಾಯ ಎಂಬ ಎಂಟು ಆಯಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಈ ಆಯಗಳು ಮನೆಯ ದೀರ್ಘಾಯುಷ್ಯದ ಬಗ್ಗೆ ಸೂಚನೆ ನೀಡುತ್ತವೆ ಎಂದು ಹೇಳಲಾಗುತ್ತದೆ.
ಆದರೆ, ಕೇವಲ ಜಾತಕ ಅಥವಾ ಆಯಗಳ ಆಧಾರದ ಮೇಲೆ ಮನೆಯ ಆಯಸ್ಸನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟಕರ. ಅನೇಕ ಸಂದರ್ಭಗಳಲ್ಲಿ, ಜನರು ಒಂದೇ ವರ್ಷದಲ್ಲಿ ಮನೆ ಖಾಲಿ ಮಾಡುವುದು, ಐದು ವರ್ಷಗಳಲ್ಲಿ ಮನೆ ಮಾರಾಟ ಮಾಡುವುದು ಅಥವಾ ಮನೆ ಬಿಟ್ಟು ಹೋಗುವುದು ಸಂಭವಿಸುತ್ತದೆ. ಇವೆಲ್ಲವನ್ನು ಗಮನಿಸಿದಾಗ, ಮನೆಯ ನಿಜವಾದ ಆಯಸ್ಸು ನಿರ್ಧಾರವಾಗುವುದು ಕೇವಲ ಜಾತಕ ಮತ್ತು ಆಯಗಳಿಂದಲ್ಲ, ಬದಲಾಗಿ ಮನೆ ನಿರ್ಮಾಣವನ್ನು ಪ್ರಾರಂಭಿಸುವಾಗ ಗ್ರಹಗಳ ಗೋಚಾರದ ಪ್ರಭಾವವನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗಿದೆ. ಈಗಲೂ ಸಹ, 200, 400, ಅಥವಾ 500 ವರ್ಷಗಳ ಹಿಂದೆ ನಿರ್ಮಿಸಲಾದ ಮನೆಗಳು ಸುಭದ್ರವಾಗಿರುವುದು, ಅಂದು ಕಟ್ಟಿದವರು ಜಾತಕದ ಜೊತೆಗೆ ಗೋಚಾರದಲ್ಲಿರುವ ಗ್ರಹಗಳ ಪ್ರಭಾವವನ್ನು ಸರಿಯಾಗಿ ಪರಿಗಣಿಸಿದ್ದರೆ ಎಂಬುದನ್ನು ಸೂಚಿಸುತ್ತದೆ.
ಅಪಾರ್ಟ್ಮೆಂಟ್ಗಳ ವಿಷಯಕ್ಕೆ ಬಂದಾಗ, ಅವುಗಳ ಆಯಸ್ಸನ್ನು ನಿರ್ಧರಿಸುವುದು ಮತ್ತಷ್ಟು ಸಂಕೀರ್ಣವಾಗುತ್ತದೆ. ಏಕೆಂದರೆ ಒಂದೇ ಪಾಯದ ಮೇಲೆ ಹಲವಾರು ಫ್ಲ್ಯಾಟ್ಗಳು ಇರುತ್ತವೆ. ಹಾಗಾಗಿ ಒಂದು ನಿರ್ದಿಷ್ಟ ಫ್ಲ್ಯಾಟ್ನ ಆಯಸ್ಸನ್ನು ಪ್ರತ್ಯೇಕವಾಗಿ ಹೇಳುವುದು ಕಷ್ಟ. ಇಡೀ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಆಯಸ್ಸು ಅನ್ವಯವಾಗುತ್ತದೆ. ಫ್ಲ್ಯಾಟ್ಗಳಿಗೆ ಪೂರ್ಣಾಯುಸ್ಸು (120 ವರ್ಷ) ಇರುವುದು ಕಷ್ಟಸಾಧ್ಯ. ಅವುಗಳಿಗೆ ಹೆಚ್ಚೆಂದರೆ 60 ವರ್ಷಗಳವರೆಗೆ ಆಯಸ್ಸು ಇರಬಹುದು ಎಂದು ಹೇಳಲಾಗುತ್ತದೆ. ಭೂಮಿಯ ಬಲ ಮತ್ತು ಆಕಾಶದ ಬಲವನ್ನು ಫ್ಲ್ಯಾಟ್ಗಳಿಗೆ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಿಲ್ಲ.
ಮನೆಯ ದೀರ್ಘಾಯುಷ್ಯವನ್ನು ಜ್ಯೋತಿಷ್ಯದ ಮೂಲಕ ತಿಳಿಯಲು ಕೆಲವು ಗ್ರಹ ಸ್ಥಾನಗಳನ್ನು ಪರಿಗಣಿಸಲಾಗುತ್ತದೆ. ಲಗ್ನದಲ್ಲಿ ಬುಧ ಗ್ರಹವಿದ್ದರೆ ಆ ಮನೆಗೆ 50 ವರ್ಷಗಳ ಆಯಸ್ಸು ಇರುತ್ತದೆ. ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಗ್ರಹ ಮತ್ತು 11ನೇ ಮನೆಯಲ್ಲಿ ಚಂದ್ರ ಗ್ರಹವಿದ್ದರೆ ಆ ಮನೆಗೆ 80 ವರ್ಷಗಳ ಆಯಸ್ಸು ಇರುತ್ತದೆ ಎಂದು ಹೇಳಲಾಗುತ್ತದೆ. ಪೂರ್ಣಾಯುಸ್ಸು, ಅಂದರೆ 120 ವರ್ಷಗಳ ದೀರ್ಘಾಯುಷ್ಯಕ್ಕಾಗಿ, ಲಗ್ನದಲ್ಲಿ ಗುರು, ನಾಲ್ಕನೇ ಮನೆಯಲ್ಲಿ ಶುಕ್ರ ಮತ್ತು ಆರನೇ ಮನೆಯಲ್ಲಿ ರವಿ ಗ್ರಹಗಳು ಇರಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ. ಇದಲ್ಲದೆ, ಲಗ್ನದಿಂದ 1, 4, 7, 10ನೇ ಸ್ಥಾನಗಳಲ್ಲಿ ಶುಭ ಗ್ರಹಗಳು ಇದ್ದು, ಅವುಗಳ ಶುಭ ದೃಷ್ಟಿ ಇದ್ದರೆ, ಅಂತಹ ಮನೆಗೂ ಪೂರ್ಣಾಯುಸ್ಸು ಇರುತ್ತದೆ. ಆದ್ದರಿಂದ, ಕೇವಲ ಜಾತಕ ಮತ್ತು ಆಯಗಳ ಮೇಲೆ ಅವಲಂಬಿತವಾಗದೆ, ಗೋಚಾರವನ್ನು ಆಧರಿಸಿ ಮನೆ ನಿರ್ಮಿಸುವುದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಾಷಿಂಗ್ಟನ್, ಫೆಬ್ರವರಿ 19: ಇರಾನ್(Iran) ಮೇಲಿನ ದಾಳಿಗೆ ಅಮೆರಿಕದ ಮಿಲಿಟರಿ ಸಿದ್ಧತೆಗಳು ಪೂರ್ಣಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಧ್ಯಪ್ರಾಚ್ಯದಲ್ಲಿ, ಅಮೆರಿಕದ ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಇಂಧನ ತುಂಬುವ ವಿಮಾನಗಳು ಇರಾನ್ ವಿರುದ್ಧದ ಯುದ್ಧಕ್ಕೆ ಸಿದ್ಧವಾಗಿವೆ. ಈ ವಾರದ ಕೊನೆಯಲ್ಲಿ ಅಮೆರಿಕದ ಮಿಲಿಟರಿ ಇರಾನ್ ಮೇಲೆ ದಾಳಿ ನಡೆಸಬಹುದು ಎಂದು ವರದಿಗಳು ಹೇಳುತ್ತಿವೆ.
ಅಮೆರಿಕದ ದಾಳಿಯು ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದಾಗ್ಯೂ, ಇರಾನ್ ಮೇಲಿನ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಮೆರಿಕದ ಆಡಳಿತದ ಮೂಲವನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್, ಮುಂಬರುವ ವಾರದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾಗುವ ಸಾಧ್ಯತೆ 90 ಪ್ರತಿಶತ ಎಂದು ಹೇಳಿಕೊಂಡಿದೆ.
ಈ ವಾರದ ಕೊನೆಯಲ್ಲಿ ಅಮೆರಿಕದ ದಾಳಿ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ. ಇಸ್ರೇಲಿ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರು ಮುಂದಿನ ಕೆಲವು ದಿನಗಳಲ್ಲಿ ಇರಾನ್ ಮೇಲೆ ಅಮೆರಿಕದ ದಾಳಿ ನಡೆಯಲಿದೆ, ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿದ್ದಾರೆ.
ಮಿಲಿಟರಿ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಟ್ರಂಪ್ ಖಾಸಗಿಯಾಗಿ ಚರ್ಚಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಈ ವಿಷಯದ ಬಗ್ಗೆ ಟ್ರಂಪ್ ತಮ್ಮ ಸಲಹೆಗಾರರು ಮತ್ತು ಸಹಾಯಕರೊಂದಿಗೆ ಸಮಾಲೋಚಿಸಿದ್ದಾರೆ. ಈಗ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವುದು ಟ್ರಂಪ್ ಅವರ ಮೇಲಿದೆ. ಈ ಪ್ರದೇಶದಲ್ಲಿ ಅಮೆರಿಕದ ಯುದ್ಧನೌಕೆಗಳು ಮತ್ತು ಫೈಟರ್ ಜೆಟ್ಗಳ ದೊಡ್ಡ ಪಡೆಯನ್ನು ನಿಯೋಜಿಸುವುದನ್ನು ಅವರು ಭೀಕರ ಯುದ್ಧದ ಸಂಕೇತವೆಂದೇ ಹೇಳಬಹುದು.
ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತನ್ನ ಸಕ್ರಿಯ ನೌಕಾ ಪಡೆಯ ದೊಡ್ಡ ಭಾಗವನ್ನು ನಿಯೋಜಿಸಿದೆ. ಇದರಲ್ಲಿ ನೂರಾರು ಫೈಟರ್ ಜೆಟ್ಗಳು, ಎರಡು ವಿಮಾನವಾಹಕ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತ 150 ಕ್ಕೂ ಹೆಚ್ಚು ಸರಕು ವಿಮಾನಗಳು ಸೇರಿವೆ. ಈ ವಾರ, ಇರಾನ್ನ ಸುತ್ತಮುತ್ತಲ ಪ್ರದೇಶದಲ್ಲಿ 50 ಕ್ಕೂ ಹೆಚ್ಚು F-35, F-22 ಮತ್ತು F-16 ಫೈಟರ್ ಜೆಟ್ಗಳನ್ನು ನಿಯೋಜಿಸಲಾಗಿದೆ. ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ಅಮೆರಿಕ ಮತ್ತು ನಿರಾನಿನ ನಿಯೋಗಗಳು ಉನ್ನತ ಮಟ್ಟದ ಪರಮಾಣು ಒಪ್ಪಂದದ ಕುರಿತು ಚರ್ಚಿಸಲು ಸಭೆ ಸೇರಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ.
ನೀನಾಸಂ ಸತೀಶ್ ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್, ದುನಿಯಾ ವಿಜಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೇದಿಕೆ ಮೇಲೆ ಮತ್ತೋರ್ವ ವಿಶೇಷ ವ್ಯಕ್ತಿ ಗಮನ ಸೆಳೆಯುತ್ತಿದ್ದರು. ಅವರೇ ನೀನಾಸಂ ಸತೀಶ್ ಅವರ ಮಗಳು. ಇಷ್ಟು ದಿನ ಸತೀಶ್ ಅವರು ವೇದಿಕೆ ಮೇಲೆ ಮಗಳನ್ನು ಪರಿಚಯ ಮಾಡಿಸಿಲ್ಲ. ಈಗ ಅವರು ಮಗಳನ್ನು ವೇದಿಕೆ ಮೇಲೆ ಕರೆದರು. ಆ ಸಂದರ್ಭದಲ್ಲಿ ಮಗಳು ಭಾವುಕಳಾದಳು. ಅಪ್ಪನಿಗೆ ಆಲ್ ದಿ ಬೆಸ್ಟ್ ಅನ್ನುತ್ತಾ ಅತ್ತು ಬಿಟ್ಟಳು.
T20 World Cup 2026: ಟಿ20 ವಿಶ್ವಕಪ್ನ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಈ ಎಂಟು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳಿರುವುದು ವಿಶೇಷ. ಅಂದರೆ ಗ್ರೂಪ್-ಎ ಯಿಂದ ಉಭಯ ತಂಡಗಳು ಸೂಪರ್-8 ಸುತ್ತಿಗೆ ಪ್ರವೇಶಿಸಿದೆ. ಇದಾಗ್ಯೂ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗುವುದಿಲ್ಲ.
ಏಕೆಂದರೆ ಉಭಯ ತಂಡಗಳು ಬೇರೆ ಬೇರೆ ಗ್ರೂಪ್ಗಳಲ್ಲಿ ಸ್ಥಾನ ಪಡೆದಿದೆ. ಅಂದರೆ ಸೂಪರ್-8 ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಆ ಗ್ರೂಪ್ಗಳಲ್ಲಿರುವ ತಂಡಗಳು…
ಗ್ರೂಪ್ 1:ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.
ಸೂಪರ್-8 ಪಂದ್ಯಗಳು ನಡೆಯುವುದು ಗ್ರೂಪ್ಗಳಲ್ಲಿರುವ ತಂಡಗಳ ನಡುವೆ. ಅಂದರೆ ಭಾರತ ತಂಡವು ತನ್ನ ಗ್ರೂಪ್ನಲ್ಲಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ತಲಾ ಒಂದೊಂದು ಪಂದ್ಯಗಳನ್ನಾಡಲಿದೆ.
ಅತ್ತ ಗ್ರೂಪ್-2 ನಲ್ಲಿರುವ ಪಾಕಿಸ್ತಾನ್ ತಂಡವು ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಗೆ ಯಾವುದೇ ಅವಕಾಶವಿಲ್ಲ. ಇದಾಗ್ಯೂ ಮುಂದಿನ ಹಂತಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎದುರಾಗಬಹುದು.
ನಾಕೌಟ್ನಲ್ಲಿ ಮುಖಾಮುಖಿ:
ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್ಗಳಿಗೂ ಪ್ರತ್ಯೇಕ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಅಂಕ ಪಟ್ಟಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಟಾಪ್-2 ನಲ್ಲಿ ಕಾಣಿಸಿಕೊಂಡರೆ ಮಾತ್ರ ಸೆಮಿಫೈನಲ್ಗೆ ಪ್ರವೇಶಿಸಲಿದೆ. ಅದರಂತೆ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಬಹುದು.
ಆದರೆ ಇಲ್ಲಿ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಬೇಕಿದ್ದರೆ ಪಾಯಿಂಟ್ಸ್ ಟೇಬಲ್ನಲ್ಲಿ ಉಭಯ ತಂಡಗಳ ಸ್ಥಾನಗಳು ಬದಲಾಗಬೇಕು. ಅದರ ವಿವರಗಳು ಈ ಕೆಳಗಿನಂತಿದೆ…
ಸೂಪರ್-8 ಸುತ್ತಿನಲ್ಲಿ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಭಾರತ ತಂಡವು ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಪಾಕಿಸ್ತಾನ್ ದ್ವಿತೀಯ ಸ್ಥಾನ ಪಡೆಯಬೇಕು. ಹೀಗಾದಲ್ಲಿ ಮಾತ್ರ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಸೂಪರ್-8 ಸುತ್ತಿನಲ್ಲಿ ಗ್ರೂಪ್-2ರ ಪಾಯಿಂಟ್ಸ್ ಟೇಬಲ್ನಲ್ಲಿ ಪಾಕಿಸ್ತಾನ್ ತಂಡ ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದರೂ ಸಹ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಎದುರು ಬದುರಾಗಲಿದೆ.
ಫೈನಲ್ನಲ್ಲಿ ಮುಖಾಮುಖಿ:
ಭಾರತ ಮತ್ತು ಪಾಕಿಸ್ತಾನ್ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಗಳನ್ನು ಅಥವಾ ಎರಡನೇ ಸ್ಥಾನಗಳನ್ನು ಪಡೆದರೆ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಗೆದ್ದರೆ ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಅಂದರೆ ಉಭಯ ತಂಡಗಳು ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ ಅಥವಾ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರೆ ಸೆಮಿಫೈನಲ್ನಲ್ಲಿ ಬೇರೆ ತಂಡಗಳ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿ ಭಾರತ ಮತ್ತು ಪಾಕಿಸ್ತಾನ್ ಫೈನಲ್ಗೇರಿದರೆ ಮಾತ್ರ ಮತ್ತೊಮ್ಮೆ ಇಂಡೊ-ಪಾಕ್ ಕ್ರಿಕೆಟ್ ಕದನ ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರೆಯಲಿದೆ.
ನದೆಹಲಿ, ಫೆಬ್ರವರಿ 19:ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಆರಂಭಗೊಂಡಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಗೆ ಸಾಕ್ಷಿಯಾಗಿದ್ದಾರೆ. ಈ ಸದರ್ಭದಲ್ಲಿ ಕೇಂದ್ರಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಎಐನಿಂದ ಪ್ರಯೋನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯವನ್ನು ಕೂಡ ಕಂಡುಕೊಳ್ಳಬೇಕೆಂದರು. ತಂತ್ರಜ್ಞಾನದ ಿಜಾದ ಮೌಲ್ಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪುವುದರಲ್ಲಿದೆ.
ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು, ಅದನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸುವುದು ಮತ್ತು ಅದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಸರ್ಕಾರದ ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು.ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ನಾವು ಸಾಮಾನ್ಯ ಕಂಪ್ಯೂಟ್ ಪ್ಲಾಟ್ಫಾರ್ಮ್ ಅನ್ನು ರಚಿಸಿದ್ದೇವೆ, ಅಲ್ಲಿ ನಾವು ನಮ್ಮ ಸ್ಟಾರ್ಟ್ಅಪ್ಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ 38,000 GPU ಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದೇವೆ.
ಈ ಸಾಮಾನ್ಯ ಕಂಪ್ಯೂಟ್ ಪ್ಲಾಟ್ಫಾರ್ಮ್ಗೆ ನಾವು ಇನ್ನೂ 20,000 GPU ಗಳನ್ನು ಸೇರಿಸುತ್ತೇವೆ ಎಂದರು. 2026 ರ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ 110 ಕ್ಕೂ ಹೆಚ್ಚು ದೇಶಗಳು, 20 ರಾಷ್ಟ್ರಗಳು, 30 ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು 500ಕ್ಕೂ ಅಧಿಕ ಜಾಗತಿಕ ನಾಯಕರು ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.
ನವದೆಹಲಿ, ಫೆಬ್ರವರಿ 19: ಇಂದು ದೆಹಲಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಜತೆ ಕುಳಿತು ಚರ್ಚಿಸುತ್ತಿರುವ ವಿಡಿಯೋ ಇಲ್ಲಿದೆ. ಸಿಇಒಗಳು, ಸಿಎಕ್ಸ್ಒಗಳು ಸೇರಿದಂತೆ 500 ಕ್ಕೂ ಹೆಚ್ಚು ಜಾಗತಿಕ ಎಐ ನಾಯಕರು, ಸುಮಾರು 100 ಸಿಇಒಗಳು ಮತ್ತು ಸಂಸ್ಥಾಪಕರು, 150 ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಮತ್ತು 400 ಸಿಟಿಒಗಳು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದು 20 ಕ್ಕೂ ಹೆಚ್ಚು ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಮತ್ತು ಸುಮಾರು 60 ಮಂತ್ರಿಗಳು, ಉಪಮಂತ್ರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ.
ಮತ್ತೊಂದೆಡೆ, ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಎಐ ಶೃಂಗದಲ್ಲಿ ಇದೀಗ ಗಿನ್ನೆಸ್ ವಿಶ್ವದಾಖಲೆ ಬರೆಯಲು ಸಿದ್ಧವಾಗಿದೆ. ಈ ಶೃಂಗದಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಪ್ರತಿಜ್ಞೆ ಮಾಡಿದ್ದಾರೆ.
ನೀನಾಸಂ ಸತೀಶ್ (Sathish Ninasam) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗ ‘ದಿ ರೈಸ್ ಆಫ್ ಅಶೋಕ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಜಾತಿ ತಾರತಮ್ಯದ ವಿರುದ್ಧ ಸಿಡಿದೇಳುವ ಅಶೋಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ.
ಅಶೋಕ ಓರ್ವ ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು. ಆತ ನಗರಕ್ಕೆ ಹೋಗಿ ಓದಿ ಮರಳಿ ಊರಿಗೆ ಬರುತ್ತಾನೆ. ಆತ ರೆವೆನ್ಯೂ ಡಿಪಾರ್ಟ್ಮೆಂಟ್ ಸೇರುವ ಪ್ರಯತ್ನ ಮಾಡುತ್ತಾನೆ. ಆಗ ಶುರುವಾಗುತ್ತೆ ಊರ ಪಾಳೇಗಾರನ ದಬ್ಬಾಳಿಕೆ. ಈ ವ್ಯವಸ್ಥೆಯ ವಿರುದ್ಧ ಅಶೋಕ ಸಿಡಿದೇಳುತ್ತಾನೆ. ಇದಿಷ್ಟು ವಿಷಯ ಟ್ರೇಲರ್ನಲ್ಲಿ ತೋರಿಸಲಾಗಿದೆ.
ಸತೀಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಒಂದಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ. ಅವರೆಲ್ಲರೂ ಆಗಮಿಸಿ, ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ಲಾಂಚ್ ಈವೆಂಟ್ಗೆ ಸಾತ್ ಕೊಟ್ಟರು. ರವಿಚಂದ್ರನ್, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್ ಮೊದಲಾದವರು ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಇದ್ದರು.
ಟ್ರೇಲರ್ ನೋಡಿದವರಿಗೆ ನಿರೀಕ್ಷೆ ಮೂಡಿದೆ. ‘ಇದು ರೈಸ್ ಆಫ್ ಅಶೋಕ ಅಲ್ಲ, ರೈಸ್ ಆಫ್ ಸತೀಶ ಆಗಲಿ, ಆಗುತ್ತೆ’ ಎಂದು ಬಂದ ಸೆಲೆಬ್ರಿಟಿಗಳು ಹಾರೈಸಿದರು. ಸಪ್ತಮಿ ಗೌಡ, ಸಂಪತ್, ರವಿಶಂಕರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿನೋದ್ ದೊಂಡಾಲೆ ನಿರ್ದೇಶನ ಮಾಡಿದ್ದಾರೆ. ಅವರು ನಿಧನ ಹೊಂದಿದ ಬಳಿಕ ಸತೀಶ್ ಅವರು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಸತೀಶ್ ಕೂಡ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಹಂತ ತಲುಪಿದೆ.