ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿರುವ ವಿಮಾನದ ಎಕ್ಸಿಟ್ ಡೋರ್ ತೆರೆದು ಹಾರಿದ ಪ್ರಯಾಣಿಕ – Kannada News | Mid Flight Incident at Chennai International Airport Prompts Emergency Response

ಏರ್ ಅರೇಬಿಯಾ ವಿಮಾನ Image Credit source: Times Of India

ಚೆನ್ನೈ, ಮೇ 03: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Airport)ದಲ್ಲಿ ಇಂದು ಮುಂಜಾನೆ ನಡೆದ ಅನಿರೀಕ್ಷಿತ ಘಟನೆಯು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಶಾರ್ಜಾದಿಂದ ಬಂದ ಏರ್ ಅರೇಬಿಯಾ ವಿಮಾನವು ಇಳಿದ ನಂತರ ವಿಮಾನದೊಳಗಿನ ವ್ಯಕ್ತಿಯೊಬ್ಬರು ತೋರಿದ ಹಠಾತ್ ವರ್ತನೆಯು ಭದ್ರತಾ ಆತಂಕಕ್ಕೆ ಕಾರಣವಾಯಿತು.ಶಾರ್ಜಾ-ಚೆನ್ನೈ ಏರ್ ಅರೇಬಿಯಾ ವಿಮಾನವು ರನ್‌ವೇಯಲ್ಲಿ ಇಳಿದು ಟ್ಯಾಕ್ಸಿವೇಯಲ್ಲಿ ನಿಧಾನವಾಗಿ ಚಲಿಸುತ್ತಿತ್ತು. ವಿಮಾನವು ಪಾರ್ಕಿಂಗ್ ಬೇ ತಲುಪುವ ಮೊದಲೇ, ಪುರುಷ ಪ್ರಯಾಣಿಕನೊಬ್ಬ ಹಠಾತ್ತಾಗಿ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಹೊರಗೆ ಜಿಗಿದಿದ್ದಾನೆ. ವಿಮಾನ ನಿಂತಿರದ ಸಮಯದಲ್ಲಿ ಸಂಭವಿಸಿದ ಈ ಘಟನೆಯು ಸಹ-ಪ್ರಯಾಣಿಕರಲ್ಲಿ ಭೀತಿಯನ್ನು ಉಂಟುಮಾಡಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಪ್ರಯಾಣಿಕನು ಪ್ರಯಾಣದ ಅವಧಿಯಲ್ಲಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ.ಪ್ರಯಾಣದ ಸಮಯದಲ್ಲಿ ಆತ ತನಗೆ ವಾಂತಿ ಬರುತ್ತಿದೆ ಎಂದು ದೂರಿದ್ದ.ವಿಮಾನದ ಒಳಗೆ ಎರಡು ಬಾರಿ ವಾಂತಿ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಂತಿಯ ಅನುಭವ ಮತ್ತು ಮಾನಸಿಕ ಒತ್ತಡದಿಂದಾಗಿ ಆತ ಈ ರೀತಿ ವರ್ತಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ನಡೆದ ಕೂಡಲೇ ವಿಮಾನದ ಪೈಲಟ್ ನೆಲದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದರು. ಹೆಚ್ಚಿನ ತನಿಖೆಗಾಗಿ ಆತನನ್ನು ಈಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವರದಿಗಳ ಪ್ರಕಾರ, ಈ ವ್ಯಕ್ತಿ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ಇನ್ನೇನು ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ವಿಮಾನ

ಈ ಘಟನೆಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಮುಖ್ಯ ರನ್‌ವೇಯನ್ನು ಬೆಳಗ್ಗೆ 03.23 ರಿಂದ 04.23 ರವರೆಗೆ ಮುಚ್ಚಲಾಗಿತ್ತು. ಈ ಒಂದು ಗಂಟೆಯ ಅವಧಿಯಲ್ಲಿ ವಿಮಾನಗಳ ಸಂಚಾರವನ್ನು ದ್ವಿತೀಯ ರನ್‌ವೇಗೆ ತಿರುಗಿಸಲಾಯಿತು.

ಅದೃಷ್ಟವಶಾತ್, ಈ ಘಟನೆಯಲ್ಲಿ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ ಅಥವಾ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ. ವಿಮಾನಯಾನ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಕುರಿತು ಅಧಿಕಾರಿಗಳು ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ – Kannada News | 13 Year Old Girls Sudden Death Due to Heart Attack in Karnataka

ಉತ್ತರ ಕನ್ನಡ, ಮೇ.3: ಜಿಲ್ಲೆಯ ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡದಲ್ಲಿ ಒಂದು ಹೃದಯವಿದ್ರಾವಕ ಘಟನೆ ಸಂಭವಿಸಿದೆ. 13 ವರ್ಷದ ಗಂಗುಕವಳಿ ಎಂಬ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈ ಘಟನೆ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.ಮೃತ ವಿದ್ಯಾರ್ಥಿನಿಗೆ ಯಾವುದೇ ರೀತಿಯ ಕಾಯಿಲೆಗಳು ಇರಲಿಲ್ಲ ಎಂದು ತಿಳಿದುಬಂದಿದೆ. ಆಕೆಗೆ ಹೃದಯ ಸಂಬಂಧಿ ಸಮಸ್ಯೆಗಳೂ ಇರಲಿಲ್ಲ ಎನ್ನಲಾಗಿದೆ. ಗಂಗುಕವಳಿ ಎಲ್ಲಾ ಮಕ್ಕಳಂತೆ ಪ್ರತಿದಿನ ಆಟಪಾಠಗಳಲ್ಲಿ ತೊಡಗಿಕೊಳ್ಳುತ್ತಿದ್ದಳು. ಸಾವಿಗೂ ಹಿಂದಿನ ದಿನ ಸಂಜೆಯವರೆಗೂ ಆಟವಾಡಿ ಸಂತೋಷದಿಂದಿದ್ದಳು. ಆದರೆ, ಮರುದಿನ ಬೆಳಗ್ಗೆ ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ಅಸುನೀಗಿದ್ದಾಳೆ. ಈ ಆಘಾತಕಾರಿ ಘಟನೆ ಕುರಿತು ರಾಮನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯ ಅಕಾಲಿಕ ಮರಣಕ್ಕೆ ಕಾರಣ ಏನೆಂದು ತಿಳಿಯಲು ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಯವಿಟ್ಟು ಆ ವಿಡಿಯೋ ಹಾಕಬೇಡಿ: ಜನರಿಗೆ ‘ಕೆಡಿ’ ನಿರ್ದೇಶಕ ಪ್ರೇಮ್ ಮನವಿ – Kannada News | KD Movie director Jogi Prem requests not to share any video online

ನಿರ್ದೇಶಕ ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ಬಳಿಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ನೋಡಿದ ಅನೇಕ ಪ್ರೇಕ್ಷಕರು ಚಿತ್ರದ ಕೆಲವು ಮುಖ್ಯ ದೃಶ್ಯಗಳನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಅದರಿಂದ ಸಿನಿಮಾದ ಸಸ್ಪೆನ್ಸ್ ಹಾಳಾಗುತ್ತದೆ. ಆ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ‘ಆನ್​ಲೈನ್​​ನಲ್ಲಿ ಕೆಲವರು ವಿಡಿಯೋ ಹಾಕುತ್ತಿದ್ದೀರಿ. ಕೈ ಮುಗಿದು ಬೇಡುತ್ತೇನೆ, ದಯವಿಟ್ಟು ಹಾಗೆ ಮಾಡಬೇಕು’ ಎಂದು ಪ್ರೇಮ್ (Jogi Prem) ಅವರು ಮನವು ಮಾಡಿಕೊಂಡಿದ್ದಾರೆ.

‘ನನಗೆ ಗೊತ್ತು, ಆ ವಿಡಿಯೋಗಳನ್ನು ನೀವು ಉದ್ದೇಶಪೂರ್ವಕವಾಗಿ ಹಾಕುತ್ತಿಲ್ಲ. ಧ್ರುವ ಎಂಟ್ರಿ ಹೀಗಿದೆ, ಸುದೀಪ್ ಎಂಟ್ರಿ ಹೀಗಿದೆ, ರಮೇಶ್ ಪಾತ್ರ ಹೀಗಿದೆ ಎಂಬ ಖುಷಿಯಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದೀರಿ. ಆದರೆ ದಯವಿಟ್ಟು ಆ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ. ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದೇವೆ. ಕೆವಿಎನ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ನಮಗೆ ಬೆಂಬಲ ನೀಡಿದೆ’ ಎಂದು ಪ್ರೇಮ್ ಅವರು ಹೇಳಿದ್ದಾರೆ.

‘ಇಡೀ ಕನ್ನಡ ಚಿತ್ರರಂಗ ನಮಗೆ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ನಾವು ಎಲ್ಲರನ್ನೂ ಕರೆದು ಒಂದು ಸೆಲೆಬ್ರಿಟಿ ಶೋ ಆಯೋಜನೆ ಮಾಡಿದ್ದೇವೆ. ಚಿತ್ರರಂಗದ ನನ್ನ ಎಲ್ಲ ಸ್ನೇಹಿತರಿಗೆ ಧನ್ಯವಾದಗಳು. ಎಲ್ಲರೂ ಈ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ಮುಂದಿನ ವಾರ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ. ಅಲ್ಲಿ ಸೆನ್ಸಾರ್ ಆಗುವುದು ಬಾಕಿ ಇದೆ’ ಎಂದಿದ್ದಾರೆ ಪ್ರೇಮ್.

‘ಸಿನಿಮಾದ ಕೊನೇ ಹಂತದಲ್ಲಿ ನನಗೆ ಆತಂಕ ಆಗಿತ್ತು. ಆದರೆ ನಿರ್ಮಾಪಕರು ಕರೆದು ನನಗೆ ಒಂದು ಮಾತು ಹೇಳಿದರು. ಎಷ್ಟು ಬೇಗ ಮಾಡಲು ಸಾಧ್ಯವೋ ಅಷ್ಟು ಬೇಗ ಮಾಡಿ ಎಂದರು. ಅವರು ನನ್ನನ್ನು ನಂಬಿದ್ದಾರೆ. ಅವರಿಗೆ ನಾವು ನೋವು ಮಾಡಬಾರದು. ಎಷ್ಟೇ ಒತ್ತಡ ಇದ್ದರೂ ಕೆವಿಎನ್ ಅವರು ನಮ್ಮ ಬೆನ್ನ ಹಿಂದೆ ನಿಂತುಕೊಂಡರು’ ಎಂದು ಪ್ರೇಮ್ ಹೇಳಿದ್ದಾರೆ.

ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

‘ಎಲ್ಲರೂ ಈ ಸಿನಿಮಾವನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾರೂ ಕೂಡ ನೆಗೆಟಿವ್ ಮಾತನಾಡುತ್ತಿಲ್ಲ. ಎಲ್ಲರೂ ಪಾಸಿಟಿವ್ ಆಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಎಲ್ಲರಿಗೂ ನಮಸ್ಕಾರ ಮಾಡುತ್ತೇನೆ’ ಎಂದು ಪ್ರೇಮ್ ಅವರು ಧನ್ಯವಾದ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:46 pm, Sun, 3 May 26

Source link

ಗುರುಗ್ರಾಮ: ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ – Kannada News | Multiple Deaths Reported in Gurugram, Investigation Underway

ಗುರುಗ್ರಾಮ, ಮೇ 03: ವ್ಯಕ್ತಿಯೊಬ್ಬ ತನ್ನ ಸುಖ ಸಂಸಾರವನ್ನೇ ಬಲಿಪಡೆದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಜೀಮ್ ಎಂಬಾತ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ(Suicide)ಗೆ ಯತ್ನಿಸಿದ್ದಾನೆ. ಶನಿವಾರ ರಾತ್ರಿ ಸುಮಾರು 9.30 ರ ವೇಳೆಗೆ ನಜೀಮ್‌ನ ಸಹೋದರ ಮನೆಗೆ ಹಿಂದಿರುಗಿದಾಗ, ಮೊದಲ ಮಹಡಿಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಹಿಳೆ ಮತ್ತು ನಾಲ್ವರು ಮಕ್ಕಳು ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ನಜೀಮ್ ಹೇರ್ ಸಲೂನ್ ನಡೆಸುತ್ತಿದ್ದು, ಆತ ಬದುಕುಳಿದಿದ್ದಾನೆ. ಪತ್ನಿ ನಜ್ಮಾ, ಮಕ್ಕಳಾದ ಇಕ್ರಾ, ಶಿಫಾ (11), ಆರಾಮ್ (9) ಮತ್ತು ಖತೀಜಾ (6) ಸಾವನ್ನಪ್ಪಿದ್ದಾರೆ. ಯಾರಿಗೂ ಬಯಸದ ಕಾರಣ ಈ ಕೃತ್ಯ ಎಸಗಿರುವುದಾಗಿ ನಜೀಮ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಅವರನ್ನು ವಿಷಪ್ರಾಶನ ಮಾಡಿ ಕೊಲ್ಲಲಾಗಿದೆಯೇ ಅಥವಾ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿದುಬರಬೇಕಿದೆ.

ಮಥುರಾದ ವೃಂದಾವನದಲ್ಲಿ ಮತ್ತೊಂದು ಕರುಣಾಜನಕ ಘಟನೆ ನಡೆದಿದ್ದು, ಸುಭಾಷ್ ಠಾಕೂರ್ ಎಂಬ ವ್ಯಕ್ತಿ ತನ್ನ ಲಿವ್-ಇನ್ ಸಂಗಾತಿ ರಾಧಿಕಾಳನ್ನು ಕೊಂದ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.
ಕಳೆದ ಎರಡು ವರ್ಷಗಳಿಂದ ಈ ದಂಪತಿಗಳು ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಇತ್ತೀಚೆಗೆ ಸುಭಾಷ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ರಾಧಿಕಾ ಪೊಲೀಸ್ ದೂರು ನೀಡಿದ್ದರು. ಈ ದೂರಿನಿಂದ ತೀವ್ರ ಆಕ್ರೋಶಗೊಂಡಿದ್ದ ಸುಭಾಷ್, ರಾಧಿಕಾಳನ್ನು ಕತ್ತು ಹಿಸುಕಿ ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮತ್ತಷ್ಟು ಓದಿ: ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!

ರಾಧಿಕಾಳ ಸಹೋದರಿ ಅನಿತಾ ಪದೇ ಪದೇ ಕರೆ ಮಾಡಿದರೂ ಯಾವುದೇ ಉತ್ತರ ಬಾರದಿದ್ದಾಗ ಆತಂಕಗೊಂಡು ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಕಿಟಕಿಯ ಮೂಲಕ ನೋಡಿದಾಗ ಮನೆಯೊಳಗೆ ಶವಗಳು ಪತ್ತೆಯಾಗಿವೆ. ಈ ಎರಡೂ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಕೋನಗಳಿಂದ ತನಿಖೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗರ್ಭಿಣಿ ಹೆಂಡತಿ ಬೀದಿಗೆ! ಗಂಡನ ಮೊಬೈಲ್‌ನಲ್ಲಿತ್ತು ಅಸಹ್ಯ ಚಿತ್ರಗಳು – Kannada News | Dasarahalli Illicit Affair: Pregnant Wife Harassed, Left Homeless by BMTC Officer

ಬೆಂಗಳೂರು, ಮೇ.3: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗರ್ಭಿಣಿ ಹೆಂಡತಿಯನ್ನೇ ಮನೆಯಿಂದ ಆಚೆ ಹಾಕಿರುವ ಅಮಾನವೀಯ ಘಟನೆ ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಸೆಕ್ಯೂರಿಟಿ ಇನ್‌ಚಾರ್ಜ್ ಆಗಿರುವ ಜಗದೀಪ್ (42) ತನ್ನ ಪತ್ನಿ ಶ್ವೇತಾ (32)ಗೆ ದ್ರೋಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಶ್ವೇತಾ ಮತ್ತು ಜಗದೀಪ್ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯನಗರದ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ಇಬ್ಬರೂ ವಾಸವಿದ್ದರು.

ಪತಿ ಜಗದೀಪ್‌ನ ವರ್ತನೆಯಲ್ಲೂ ತುಂಬಾ ಬದಲಾವಣೆಗಳು ಆಗಿತ್ತು. ಇದರಿಂದ ಅನುಮಾನಗೊಂಡು ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ ಆತನಿಗೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವುದು ಪತ್ನಿ ಶ್ವೇತಾಗೆ ಗೊತ್ತಾಗಿದೆ. ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಜಗದೀಪ್ ಪತ್ನಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಪ್ರಸ್ತುತ ಆರು ತಿಂಗಳ ಗರ್ಭಿಣಿಯಾಗಿರುವ ಶ್ವೇತಾಗೆ “ಮಗು ತೆಗೆಸಿಬಿಡು, ನೀನು ನನಗೆ ಬೇಡ” ಎಂದು ಕಿರುಕುಳ ನೀಡಿದ್ದಾನೆ.

ಇದನ್ನೂ ಓದಿ: ದೇಹದಲ್ಲಿ ಒಂದೇ ಒಂದು ಮಚ್ಚೆ ಇರಬಾರದು, ಬೆತ್ತಲೆ ಪೂಜೆಗೆ 30 ಲಕ್ಷ ರೂ. : ಯುವತಿಗೆ ಕಾಲ್‌ ಮಾಡಿ ಟಾರ್ಚರ್ ನೀಡುತ್ತಿದ್ದ ಕಿರಣ್

ಕಳೆದ ಆರು ತಿಂಗಳ ಹಿಂದೆ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿರುವ ಜಗದೀಪ್, ಈಗ ಆಕೆಗೆ ಯಾವುದೇ ಆಸರೆ ಇಲ್ಲದಂತೆ ಮಾಡಿದ್ದಾನೆ. ನ್ಯಾಯಕ್ಕಾಗಿ ಆಗ್ರಹಿಸಿ ನೊಂದ ಗರ್ಭಿಣಿ ಶ್ವೇತಾ ಬಾಗಲಗುಂಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಗಂಡನ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ವರದಿ: ಮಂಜುನಾಥ್ ಟಿವಿ9 ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:08 pm, Sun, 3 May 26

Source link

Video: ರೈಲಿನ ಸೀಟುಗಳ ಹರಿದು ಯುವಕರ ಪುಂಡಾಟ – Kannada News | Vandalism on Train Caught on Camera, Sparks Calls for Strict Action

ಯುವಕರು ರೈಲಿನ ಸೀಟುಗಳನ್ನು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿದೆ. ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ಈ ಕಿಡಿಗೇಡಿಗಳು ತಮ್ಮ ವೈಯಕ್ತಿಕ ಮೋಜಿನ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ರೈಲಿನ ಸೀಟುಗಳನ್ನು ಹರಿದು ಹಾಕುವುದು ಮತ್ತು ಅವುಗಳನ್ನು ಕಿತ್ತು ಎಸೆಯುವ ಮೂಲಕ ವಿಕೃತ ಆನಂದ ಪಡೆಯುತ್ತಾ, ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೆಯು ದೇಶದ ಜೀವನಾಡಿ ಹಾಗೂ ಸಾಮಾನ್ಯ ಜನರ ಆಸ್ತಿಯಾಗಿದೆ. ಇಂತಹ ಗೂಂಡಾವರ್ತನೆಯಿಂದ ಕೇವಲ ಆರ್ಥಿಕ ನಷ್ಟವಾಗುವುದು ಮಾತ್ರವಲ್ಲದೆ, ಪ್ರಾಮಾಣಿಕ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದರೂ, ಇಂತಹ ವ್ಯಕ್ತಿಗಳು ವ್ಯವಸ್ಥೆಯನ್ನು ಹಾಳುಮಾಡಲು ಮುಂದಾಗುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಚಿನ್ನದ ಬೆಲೆ 3 ವಾರಗಳಿಂದ 500 ರೂನಷ್ಟು ಇಳಿಕೆ – Kannada News | Gold Price Today on 3rd May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 3: ಚಿನ್ನದ ಬೆಲೆ ಸಾಕಷ್ಟು ಏರಿಳಿತಗಳ ನಡುವೆಯೂ ಬಹಳಷ್ಟು ಕುಸಿದಿದೆ. ಈ ವಾರದ ಆರಂಭದಲ್ಲಿ 14,120 ರೂ ಇದ್ದ ಚಿನ್ನದ ಬೆಲೆ (Gold Rates) 13,835 ರೂಗೆ ಇಳಿದಿದೆ. ಕಳೆದ 10 ದಿನದಲ್ಲಿ ಸುಮಾರು 350 ರೂನಷ್ಟು ಬೆಲೆ ಕುಸಿತವಾಗಿದೆ. ಕಳೆದ ಮೂರು ವಾರಗಳಲ್ಲಿ 400 ರೂಗೂ ಮೇಲ್ಪಟ್ಟು ಬೆಲೆ ಇಳಿದಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿದಿದೆ. ಇದಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,835 ರೂ
  • ಚೆನ್ನೈ: 14,000 ರೂ
  • ಮುಂಬೈ: 13,835 ರೂ
  • ದೆಹಲಿ: 13,850 ರೂ
  • ಕೋಲ್ಕತಾ: 13,835 ರೂ
  • ಕೇರಳ: 13,835 ರೂ
  • ಅಹ್ಮದಾಬಾದ್: 13,840 ರೂ
  • ಜೈಪುರ್: 13,850 ರೂ
  • ಲಕ್ನೋ: 13,850 ರೂ
  • ಭುವನೇಶ್ವರ್: 13,835 ರೂ

ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,583 ರುಪಾಯಿ)
  • ದುಬೈ: 516.25 ಡಿರಾಮ್ (13,321 ರುಪಾಯಿ)
  • ಅಮೆರಿಕ: 145 ಡಾಲರ್ (13,743 ರುಪಾಯಿ)
  • ಸಿಂಗಾಪುರ: 183.50 ಸಿಂಗಾಪುರ್ ಡಾಲರ್ (13,656 ರುಪಾಯಿ)
  • ಕತಾರ್: 514 ಕತಾರಿ ರಿಯಾಲ್ (13,365 ರೂ)
  • ಸೌದಿ ಅರೇಬಿಯಾ: 528 ಸೌದಿ ರಿಯಾಲ್ (13,344 ರುಪಾಯಿ)
  • ಓಮನ್: 55.15 ಒಮಾನಿ ರಿಯಾಲ್ (13,576 ರುಪಾಯಿ)
  • ಕುವೇತ್: 42.80 ಕುವೇತಿ ದಿನಾರ್ (13,225 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ನಿರ್ಣಾಯಕ ಹಂತಕ್ಕೂ ಮುನ್ನ ವಿದೇಶಕ್ಕೆ ಹಾರಿದ RCB ಪಡೆ! – Kannada News | IPL 2026: RCB take mid season Maldives trip

IPL 2026: ಐಪಿಎಲ್ 2026ರ ಸೀಸನ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಮುಂದಿನ ಪಂದ್ಯಗಳಿಗೂ ಮುನ್ನ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಲು ಒಂದು ಪುಟ್ಟ ವಿರಾಮ ಪಡೆದುಕೊಂಢಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ನಂತರ ಸಿಕ್ಕ ಒಂದು ವಾರದ ಬಿಡುವನ್ನು ಬಳಸಿಕೊಂಡಿರುವ ತಂಡ, ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದೆ.

ವಿಶ್ರಾಂತಿ ಮತ್ತು ರಿಫ್ರೆಶ್:

ಟೂರ್ನಿಯ ಸತತ ಪ್ರಯಾಣ ಮತ್ತು ಒತ್ತಡದಿಂದ ಹೊರಬರಲು ಮ್ಯಾನೇಜ್‌ಮೆಂಟ್ ಈ ಪ್ರವಾಸವನ್ನು ಆಯೋಜಿಸಿದೆ. ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಲ್ಡೀವ್ಸ್ ಫೋಟೋ ಹಂಚಿಕೊಳ್ಳುವ ಮೂಲಕ ಈ ಪ್ರವಾಸವನ್ನು ಖಚಿತಪಡಿಸಿದ್ದಾರೆ. ತಂಡದ ಬಹುತೇಕ ಆಟಗಾರರು ಈ ಪ್ರವಾಸದಲ್ಲಿದ್ದರೂ, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಓಪನರ್ ಫಿಲ್ ಸಾಲ್ಟ್ ಈ ಪ್ರವಾಸದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

ಪ್ಲೇ-ಆಫ್ ಹಾದಿ ಸುಗಮ:

ಪ್ರಸ್ತುತ ರಾಯಲ್ ಚಾಲೆಂಕರ್ಸ್ ಬೆಂಗಳೂರು ತಂಡವು 9 ಪಂದ್ಯಗಳಲ್ಲಿ 6 ಜಯದೊಂದಿಗೆ 12 ಅಂಕಗಳನ್ನು ಗಳಿಸಿ ಭದ್ರವಾದ ಸ್ಥಾನದಲ್ಲಿದೆ. ಪ್ಲೇ-ಆಫ್ ಹಂತಕ್ಕೇರಲು ತಂಡಕ್ಕೆ ಇನ್ನು ಕೇವಲ ಎರಡು ಗೆಲುವುಗಳ ಅವಶ್ಯಕತೆಯಿದೆ. ಈ ವಿಶ್ರಾಂತಿಯು ಆಟಗಾರರು ಹೊಸ ಉತ್ಸಾಹದೊಂದಿಗೆ ಮೈದಾನಕ್ಕಿಳಿಯಲು ಸಹಕಾರಿಯಾಗಲಿದೆ.

ಮುಂದಿನ ಸವಾಲುಗಳು:

ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ, ಮೇ 7ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್​ಸಿಬಿ ಸೆಣಸಲಿದೆ. ಆನಂತರ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿವೆ. ಈ ಪಂದ್ಯಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್​ಗೇರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್​ ನೀಡಿದ ಪಂಜಾಬ್ ಕಿಂಗ್ಸ್

ಆರ್​ಸಿಬಿ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ:

  •  ಲಕ್ನೋ ಸೂಪರ್ ಜೈಂಟ್ಸ್ (LSG): ಮೇ 7, ರಾತ್ರಿ 7:30ಕ್ಕೆ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಲಕ್ನೋದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ದೊಡ್ಡ ಸವಾಲು ಎದುರಾಗಲಿದೆ.
  •  ಮುಂಬೈ ಇಂಡಿಯನ್ಸ್ (MI): ಮೇ 10ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆರ್​ಸಿಬಿ ತಂಡ ಮುಂಬೈ ಇಂಡಿಯನ್ಸ್​ ಸವಾಲನ್ನು ಎದುರಿಸಲಿದೆ.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR): ಮೇ 13ರಂದು ಮತ್ತೆ ರಾಯ್‌ಪುರದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಸೆಣಸಲಿದೆ.
  •  ಪಂಜಾಬ್ ಕಿಂಗ್ಸ್ (PBKS): ಮೇ 17ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH): ಮೇ 22ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಸ್​ಆರ್​​ಹೆಚ್ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಲಿದೆ.

Published On – 12:50 pm, Sun, 3 May 26

Source link

ಶೃಂಗೇರಿ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ: ವಿಜಯೇಂದ್ರ ಹರ್ಷ, ಜೀವರಾಜ್‌ಗೆ ಅಭಿನಂದನೆ! – Kannada News | Shringeri Recount Results: BY Vijayendra Hails Victory of Truth; Congratulates DN Jeevaraj on Legal Triumph

ಶೃಂಗೇರಿ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ: ವಿಜಯೇಂದ್ರ ಹರ್ಷ

ಬೆಂಗಳೂರು , ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ (postal ballot recount)  ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೈಕೋರ್ಟ್ ಆದೇಶದಂತೆ ನಡೆದ ಈ ಮರು ಎಣಿಕೆ ಪ್ರಕ್ರಿಯೆಯ ನಂತರ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶೃಂಗೇರಿಯ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ ಅವರ ಎಕ್ಸ್ (ಟ್ವಿಟರ್) ಪೋಸ್ಟ್

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಈ ಗೆಲುವು ನಮ್ಮ ಚುನಾವಣಾ ವ್ಯವಸ್ಥೆ ಹಾಗೂ ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಸಂದ ಗೆಲುವು. ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಿದೆ ಎಂದು ಹೇಳಿದ್ದಾರೆ. ಸಂವಿಧಾನಾತ್ಮಕ ಹೋರಾಟದ ಮೂಲಕ ಪ್ರತಿ ಮತಕ್ಕೂ ಗೌರವ ತಂದುಕೊಟ್ಟ ಜೀವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಅವರು, ಶೃಂಗೇರಿಯ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ, ಹೈಕೋರ್ಟ್ ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠವು ಅಂಚೆ ಮತಗಳ ಮರು ಎಣಿಕೆಗೆ ಐತಿಹಾಸಿಕ ಆದೇಶ ನೀಡಿತ್ತು.

ಇದನ್ನೂ ಓದಿ ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು?

ಮರು ಎಣಿಕೆಯಲ್ಲಿ ಅತಂತ್ರ ಸ್ಥಿತಿ

ನಿನ್ನೆ (ಮೇ 2) ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಅಂಚೆ ಮತಗಳ ಮರು ಎಣಿಕೆ ನಡೆಯಿತು. ವರದಿಗಳ ಪ್ರಕಾರ, ಮರು ಎಣಿಕೆಯ ನಂತರ ಕಾಂಗ್ರೆಸ್ ಶಾಸಕ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಬಿಜೆಪಿಯ ಜೀವರಾಜ್ ಅವರಿಗೆ ಮುನ್ನಡೆ ಸಿಕ್ಕಿದೆ ಎನ್ನಲಾಗಿದೆ. ಈ ಬೆಳವಣಿಗೆಯು ಪ್ರಜಾಪ್ರಭುತ್ವದಲ್ಲಿ ಸತ್ಯ ಯಾವತ್ತೂ ಸೋಲದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ಅನಿಲ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಮದುವೆ ಸಮಾರಂಭದಲ್ಲಿ ಸಮಂತಾ-ನಾಗ ಚೈತನ್ಯ; ಮಾಜಿ ಜೋಡಿಯ ಫೋಟೋ ವೈರಲ್ – Kannada News | Samantha Naga Chaitanya attend same wedding reception with Raj Nidimoru Sobhita Dhulipala

ಟಾಲಿವುಡ್‌ನ ಖ್ಯಾತ ವಿತರಕ ಮತ್ತು ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ವಿವಾಹ ಆರತಕ್ಷತೆ ಶನಿವಾರ (ಮೇ 2) ರಾತ್ರಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ತೆಲುಗು (Tollywood) ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ನಾಗಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಮಾಜಿ ದಂಪತಿಗಳಾದ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಅವರ ಮೇಲೆ. ಆ ಸಂದರ್ಭದ ಕೆಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ವಿಶೇಷವೆಂದರೆ, ಸಮಂತಾ ಮತ್ತು ನಾಗ ಚೈತನ್ಯ ತಮ್ಮ ತಮ್ಮ ಹೊಸ ಜೀವನ ಸಂಗಾತಿಗಳ ಜೊತೆಗೂಡಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಮಂತಾ ಅವರು ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡರೆ, ನಾಗ ಚೈತನ್ಯ ಅವರು ಪತ್ನಿ ಶೋಭಿತಾ ಧುಲಿಪಾಲ ಅವರ ಜೊತೆ ಆಗಮಿಸಿದರು.

ನೇರಳೆ ಮತ್ತು ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಸಮಂತಾ ಕಂಗೊಳಿಸುತ್ತಿದ್ದರು. ಪತಿ ರಾಜ್ ನಿಡಿಮೋರು ಅವರು ಸೂಟ್‌ನಲ್ಲಿ ಮಿಂಚುತ್ತಿದ್ದರು. ಸಮಂತಾ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಅದೇ ರೀತಿ, ನಾಗ ಚೈತನ್ಯ ಅವರು ನೀಲಿ ಬಣ್ಣದ ಬ್ಲೇಜರ್ ಧರಿಸಿದ್ದರೆ, ಶೋಭಿತಾ ಅವರು ನೀಲಿ ಮತ್ತು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. ಇವರ ಜೊತೆಯಲ್ಲಿ ನಾಗಾರ್ಜುನ ಮತ್ತು ಅಮಲಾ ಕೂಡ ವೇದಿಕೆಯ ಮೇಲೆ ನವ ದಂಪತಿಗಳಿಗೆ ಶುಭ ಹಾರೈಸಿದರು.

ಒಂದೇ ಸಮಾರಂಭದಲ್ಲಿ ಇಬ್ಬರೂ ಕಾಣಿಸಿಕೊಂಡರೂ, ಸಮಂತಾ ಮತ್ತು ಚೈತನ್ಯ ಪರಸ್ಪರ ಮಾತನಾಡಿದ ಅಥವಾ ಎದುರಾದ ಯಾವುದೇ ವಿಡಿಯೋಗಳು ಲಭ್ಯವಾಗಿಲ್ಲ. ಇಬ್ಬರೂ ಬೇರೆ ಬೇರೆ ಸಮಯದಲ್ಲಿ ವೇದಿಕೆ ಏರಿ ಶುಭ ಹಾರೈಸಿದರು. ಆದರೆ, ಅಭಿಮಾನಿಗಳು ಮಾತ್ರ ಈ ದೃಶ್ಯಗಳನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಸುತ್ತಿದ್ದಾರೆ. ‘ಎಲ್ಲರೂ ಈಗ ಅವರವರ ಜೀವನದಲ್ಲಿ ಸಂತೋಷವಾಗಿದ್ದಾರೆ, ಯಾರಿಗೂ ದೃಷ್ಟಿ ತಾಕದಿರಲಿ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕನ್ನಡದ ‘ರುದ್ರ ಕಾಲ’ ಪೋಸ್ಟರ್ ರಿಲೀಸ್ ಮಾಡಿದ ಸಮಂತಾ: ವಿಡಿಯೋ ನೋಡಿ

ಸಮಂತಾ ಮತ್ತು ನಾಗ ಚೈತನ್ಯ 2017ರಲ್ಲಿ ಗೋವಾದಲ್ಲಿ ವಿವಾಹವಾಗಿದ್ದರು. ಆದರೆ, 2021ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆನಂತರ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವಿವಾಹವಾದರೆ, ಸಮಂತಾ ಕಳೆದ ವರ್ಷ ರಾಜ್ ನಿಡಿಮೋರು ಅವರ ಜೊತೆ ಹೊಸ ಜೀವನ ಆರಂಭಿಸಿದ್ದರು. ಒಟ್ಟಿನಲ್ಲಿ, ಹಳೆಯ ಕಹಿ ನೆನಪುಗಳನ್ನು ಮರೆತು ಇಬ್ಬರೂ ತಮ್ಮ ಹೊಸ ಜೀವನದಲ್ಲಿ ಮುನ್ನಡೆಯುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version