7 ಮಂದಿಯ ಬಲಿತೆಗದುಕೊಂಡ ಹೊಸಕೋಟೆ ಅಪಘಾತದ ಭೀಕರತೆ ಬಿಚ್ಚಿಟ್ಟ ಐಜಿ ಲಾಬುರಾಮ್ – Kannada News | Hoskote Accident Horror: IG Laburam Reveals Details Behind Tragic Crash That Killed 7

ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್​​ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಸಮೀಪದ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಈ ಅಪಘಾತದ ತೀವ್ರತೆ ಕುರಿತು ಐಜಿ ಲಾಬುರಾಮ್ ಮಾಹಿತಿ ನೀಡಿದ್ದು, ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಿ, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಪೈಕಿ ಮೂವರನ್ನು ಗುರುತಿಸಲಾಗಿದ್ದು, ಅವರ ಪೋಷಕರಿಗೆ ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಗುರುತಿಸಲ್ಪಟ್ಟ ಮೂವರು ಬೆಂಗಳೂರಿನ ನಿವಾಸಿಗಳು. ಇನ್ನುಳಿದವರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಲಾಸ್ಟ್ ಡ್ರೈವ್ ಆದ ಲಾಂಗ್ ಡ್ರೈವ್ – Kannada News | Hoskote Serial Accident: PU Students’ Long Drive Turns Fatal, Overspeed and Negligence Suspected

ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್!Image Credit source: tv9

ದೇವನಹಳ್ಳಿ, ಫೆಬ್ರವರಿ 13: ಹೊಸಕೋಟೆ (Hoskote) ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದ (Serial Accident) ಬಗ್ಗೆ ಸ್ಫೋಟಕ ಮಾಹಿತಿ ಈಗ ಬಯಲಾಗಿದೆ. ಬೆಂಗಳೂರಿನ ಕಾಲೇಜೊಂದರ ಪಿಯು ವಿದ್ಯಾರ್ಥಿಗಳ ಜಾಲಿ ರೈಡ್, ಅತಿ ವೇಗದ ಚಾಲನೆಯೇ ಭೀಕರ ಸರಣಿ ಅಪಘಾತಕ್ಕೆ ಕಾರಣ ಎಂಬುದು ಈಗ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಕ್ಸ್​ ಯುವಿ 700 ಕಾರಿನಲ್ಲಿ ಬಂದಿದ್ದ ಆರು ಮಂದಿ ವಿದ್ಯಾರ್ಥಿಗಳು ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದವರು ಎಂಬುದು ಗೊತ್ತಾಗಿದೆ. ನೂತನ ಹೆದ್ದಾರಿಯಲ್ಲಿ ಲಾಂಗ್ ಡ್ರೈವ್‌ಗೆ ಬಂದಿದ್ದ ವೇಳೆ ಅತಿವೇಗವಾಗಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ.

ಅತಿವೇಗವಾಗಿ ಬಂದ ಕಾರು ಮೊದಲು ಗಗನ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕ್ಯಾಂಟರ್ ವಾಹನದ ಆಕ್ಸಲ್ ಕಟ್ ಆಗಿ ಅದು ಸರ್ವೀಸ್ ರಸ್ತೆಗೆ ನೆಗೆದಿದೆ. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಆಕ್ಸಲ್‌ಗೆ ಮತ್ತೊಂದು ಬ್ರೀಜಾ ಕಾರು ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದು, ಪ್ರಕರಣದ ಕುರಿತು ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಅತಿವೇಗವೇ ಪ್ರಮುಖ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಮೃತರ ಪೈಕಿ ಬೈಕ್ ಸವಾರ ಸ್ಥಳೀಯರಾಗಿದ್ದು, ಕಾರಿನಲ್ಲಿದ್ದವರು ಬೆಂಗಳೂರಿನ ಕೊತ್ತನೂರು ಮೂಲದವರು ಎನ್ನಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​​ಪಿ ಚಂದ್ರಕಾಂತ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಹೊಸಕೋಟೆ ಬಳಿ ಬೈಕ್, ಕ್ಯಾಂಟರ್ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು

ಏತನ್ಮಧ್ಯೆ, ಹೆದ್ದಾರಿಯ ಕಳಪೆ ನಿರ್ಮಾಣ ಮತ್ತು ವಿನ್ಯಾಸದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಮುಖ್ಯ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್! ಬಿಇಓ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ – Kannada News | Tumakuru School Tragedy: Student Loses Fingers, Parents Demand Justice

ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್!

ತುಮಕೂರು, ಫೆಬ್ರವರಿ 13: ಜಿಲ್ಲೆಯ ತುಮಕೂರು (Tumkuru) ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ದುರಂತ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡ ಘಟನೆ ಇದೇ ತಿಂಗಳ 9ರಂದು ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಬಾಲಕಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೋರ್ವ ವಿದ್ಯಾರ್ಥಿನಿ ಬಾಗಿಲು ತಳ್ಳಿದ ಆರೋಪ

ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆ ಬಿಸಿಯೂಟಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಿದ್ದಾಗ, ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಆಕೆಯ ಬಲಗೈಯ ಎರಡು ಬೆರಳುಗಳು ಕಟ್ ಆಗಿವೆ ಎನ್ನಲಾಗಿದೆ. ಘಟನೆ ನಂತರ ಶಿಕ್ಷಕರು ಸಮರ್ಪಕ ಚಿಕಿತ್ಸೆ ನೀಡದೆ, ಗಾಯಗೊಂಡ ಸ್ಥಳಕ್ಕೆ ನೀರು ಸುರಿದು ಬ್ಯಾಂಡೇಜ್ ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇದಲ್ಲದೆ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್​ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಲಾಸ್ಟ್ ಡ್ರೈವ್ ಆದ ಲಾಂಗ್ ಡ್ರೈವ್

ನ್ಯಾಯ ಕೊಡಿಸುವಂತೆ ಪೋಷಕರ ಆಗ್ರಹ

ಪೋಷಕರು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಕಟ್ ಆದ ಬೆರಳುಗಳನ್ನು ತರಲು ಸೂಚಿಸಿದ್ದರು. ಆಗ ಮಾತ್ರ ಬೆರಳುಗಳನ್ನು ಮೊದಲಿಂತೆ ಕೂಡಿಸಬಹುದೆಂದು ಹೇಳಿದ್ದರು. ಆದರೆ ಶಿಕ್ಷಕರನ್ನು ಕೇಳಿದಾಗ ಶಾಲೆಯಲ್ಲಿ ಬಾಲಕಿಯ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ನ್ಯಾಯ ದೊರಕಬೇಕು ಎಂದು ವಿದ್ಯಾರ್ಥಿನಿಯ ತಾಯಿ ಅಂಬಿಕಾ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉಪ ಲೋಕಾಯುಕ್ತರಿಗೇ ಆನ್​​ಲೈನ್ ದೋಖಾ! ರೇಜರ್ ಬ್ಲೇಡ್‌ ಆರ್ಡರ್ ಮಾಡಿದ್ರೆ ಬಂದಿದ್ದು ಹಳೇ ಬಟ್ಟೆ ತುಂಡು – Kannada News | Online Shopping Fraud Hits Karnataka Upa Lokayukta: Razor Blade Order Turns Into Old Cloth in Bengaluru

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ಅವರೇ ಆನ್‌ಲೈನ್ ಶಾಪಿಂಗ್ ಮೋಸಕ್ಕೆ ಬಲಿಯಾಗುವಂತಾಗಿದೆ. ಅವರು ಗುಡ್ ಮ್ಯಾಕ್ಸ್ ಕಂಪನಿಯ ರೇಜರ್ ಬ್ಲೇಡ್‌ಗಳನ್ನು ಆನ್​ಲೈನ್ ಮೂಲಕ ಆರ್ಡರ್ ಮಾಡಿದ್ದರು. ಶ್ಯಾಡೋಫ್ಯಾಕ್ಸ್ ಮುಖಾಂತರ ಬಂದ ಪಾರ್ಸೆಲ್ ಅನ್ನು ತೆರೆದಾಗ, ಅದರಲ್ಲಿ ರೇಜರ್ ಬ್ಲೇಡ್‌ಗಳ ಬದಲು ಹಳೆಯ ಬಟ್ಟೆಗಳು ಪತ್ತೆಯಾಗಿವೆ! ಈ ಘಟನೆಯು ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಪಲೋಕಾಯುಕ್ತರಂತಹ ಉನ್ನತ ಹುದ್ದೆಯಲ್ಲಿರುವವರೇ ಇಂತಹ ವಂಚನೆಗೆ ಗುರಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ, ಗುಡ್ ಮ್ಯಾಕ್ಸ್ ಕಂಪನಿ, ಡೆಲಿವರಿ ಸೇವೆ ಒದಗಿಸಿದ ಶ್ಯಾಡೋಫ್ಯಾಕ್ಸ್ ಕಂಪನಿ ಹಾಗೂ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Friday the 13th: 13ನೇ ತಾರೀಕು ಶುಕ್ರವಾರ ಬಂದರೆ ಸಾಕಷ್ಟು ಜನರು ಹೆದರುವುದೇಕೆ? ಈ ದಿನ ಅಪಶಕುನನಾ? – Kannada News | Why is Friday the 13th Considered Unlucky? Checkout more details here

ಪ್ರಪಂಚದಾದ್ಯಂತ ಅನೇಕ ಧರ್ಮಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳು ಇದ್ದು, ಒಂದೇ ವಿಷಯವನ್ನು ಕೆಲವರು ಶುಭವೆಂದು ನೋಡಿದರೆ ಮತ್ತೊಬ್ಬರು ಅಶುಭವೆಂದು ಪರಿಗಣಿಸುವುದು ಸಾಮಾನ್ಯ. ಅಂತಹ ವಿಚಿತ್ರ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾದದ್ದು “ಶುಕ್ರವಾರದ 13ನೇ ತಾರೀಕು”. ಈ ದಿನವನ್ನು ಅನೇಕ ಪಾಶ್ಚಾತ್ಯ ದೇಶಗಳಲ್ಲಿ ದುರಾದೃಷ್ಟಕರ ದಿನವೆಂದು ಭಯದಿಂದ ನೋಡಲಾಗುತ್ತದೆ. ಆದರೆ ಈ ನಂಬಿಕೆ ಹುಟ್ಟಿದ್ದು ಹೇಗೆ? ನಿಜವಾಗಿಯೂ ಈ ದಿನ ಅಶುಭವೇ? ಎಂಬುದನ್ನು ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ.

ವಾಸ್ತವವಾಗಿ, 13 ನೇ ಶುಕ್ರವಾರದಂದು ಇತಿಹಾಸದಲ್ಲಿ ಹಲವಾರು ಭಯಾನಕ ಘಟನೆಗಳು ನಡೆದಿವೆ. ಸಾವಿರಾರು ಜನರು ಸಾವನ್ನಪ್ಪಿದ್ದಾರೆ, ಯುದ್ಧಗಳು ಭುಗಿಲೆದ್ದಿವೆ, ನೈಸರ್ಗಿಕ ವಿಕೋಪಗಳು ಸಂಭವಿಸಿವೆ ಮತ್ತು ಅನೇಕ ವಿಶ್ವ ನಿಯಮಗಳು ಬದಲಾಗಿವೆ. ಅದಕ್ಕಾಗಿಯೇ ಈ ದಿನದಂದು ಜನರು ಹೆದರುತ್ತಾರೆ.

ಕ್ರೈಸ್ತ ಧರ್ಮದ ಪರಂಪರೆಯ ಪ್ರಕಾರ, ಯೇಸು ಕ್ರಿಸ್ತನ ಜೀವನಕ್ಕೆ ಸಂಬಂಧಿಸಿದ ಕೆಲವು ಘಟನೆಗಳು ಈ ನಂಬಿಕೆಗೆ ಕಾರಣವೆಂದು ಹೇಳಲಾಗುತ್ತದೆ. ಬೈಬಲ್ ಕಥೆಗಳ ಪ್ರಕಾರ ಯೇಸು ಕ್ರಿಸ್ತನು ಶಿಲುಬೆಗೆ ಹಾಕಲ್ಪಟ್ಟ ದಿನ ಶುಕ್ರವಾರವಾಗಿತ್ತು. ಅದಕ್ಕೂ ಮೊದಲು ನಡೆದ ‘ಅಂತಿಮ ಭೋಜನ’ದಲ್ಲಿ ಯೇಸುವಿನೊಂದಿಗೆ ಒಟ್ಟು 13 ಮಂದಿ ಇದ್ದರು. ಅವರಲ್ಲಿ ಒಬ್ಬನ ದ್ರೋಹವೇ ನಂತರದ ದುರಂತಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ. ಈ ಕಾರಣದಿಂದ 13 ಸಂಖ್ಯೆಯೂ, ಶುಕ್ರವಾರವೂ ಒಂದೇ ದಿನ ಬಂದಾಗ ಜನರು ಅದನ್ನು ಅಶುಭದ ಸಂಕೇತವೆಂದು ಪರಿಗಣಿಸಲು ಆರಂಭಿಸಿದರು.

ಇತಿಹಾಸದಲ್ಲೂ ಈ ನಂಬಿಕೆಗೆ ಬಲ ನೀಡಿದ ಕೆಲವು ಘಟನೆಗಳಿವೆ. 1307ರ ಅಕ್ಟೋಬರ್ 13ರಂದು, ಶುಕ್ರವಾರದಂದು ಫ್ರಾನ್ಸ್‌ನ ರಾಜನ ಆದೇಶದಂತೆ ‘Knights Templar’ ಸಂಘದ ಸದಸ್ಯರನ್ನು ಬಂಧಿಸಿ ಶಿಕ್ಷಿಸಲಾಯಿತು. ಈ ಘಟನೆಯು “Friday the 13th” ಬಗ್ಗೆ ಮತ್ತಷ್ಟು ಭಯವನ್ನು ಹುಟ್ಟಿಸಿತು. ಕಾಲಕ್ರಮೇಣ ಈ ನಂಬಿಕೆ ಯುರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಂತು.

ಈ ಭಯದ ಪರಿಣಾಮವಾಗಿ ಇಂದಿಗೂ ಹಲವಾರು ಕಟ್ಟಡಗಳಲ್ಲಿ 13ನೇ ಮಹಡಿಯನ್ನು ಸೂಚಿಸುವ ಸಂಖ್ಯೆ ಕಾಣಿಸದು. ಕೆಲವು ಹೋಟೆಲ್‌ಗಳು, ವಿಮಾನಗಳ ಸೀಟು ಸಂಖ್ಯೆಗಳು, ಆಸ್ಪತ್ರೆಗಳು 13 ಸಂಖ್ಯೆಯನ್ನು ತಪ್ಪಿಸುವುದು ಸಾಮಾನ್ಯವಾಗಿದೆ. ಕೆಲವರು ಆ ದಿನ ಪ್ರಯಾಣವನ್ನೇ ಮುಂದೂಡುತ್ತಾರೆ. ಈ ಭಯಕ್ಕೆ “Triskaidekaphobia” ಎಂಬ ಹೆಸರು ಕೂಡ ಇದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಆದರೆ ವಿಜ್ಞಾನ ಅಥವಾ ಗಣಿತದ ದೃಷ್ಟಿಯಿಂದ ನೋಡಿದರೆ, 13 ಎಂಬುದು ಕೇವಲ ಒಂದು ಸಂಖ್ಯೆ ಮಾತ್ರ. 12 ಅನ್ನು ಪೂರ್ಣತೆಯ ಸಂಕೇತವೆಂದು ನೋಡಲಾಗುತ್ತದೆ – 12 ತಿಂಗಳು, 12 ಗಂಟೆಗಳು, 12 ರಾಶಿಗಳು. ಇದರ ನಂತರ ಬರುವ 13 ಅಸಮತೋಲನ ತರುತ್ತದೆ ಎಂಬ ಕಲ್ಪನೆಯೇ ಈ ನಂಬಿಕೆಗೆ ಕಾರಣವಾಗಿದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:19 am, Fri, 13 February 26

Source link

Video: ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಫುಟ್ಪಾತ್​​ ಮೇಲೆ ಬಂದ ಬೈಕ್​ಗೆ ಅಡ್ಡವಾಗಿ ನಿಂತ ದಿಟ್ಟ ಮಹಿಳೆ – Kannada News | Footpath Face Off: Woman Challenges Rider, Sparks Applause Online

ಕೇರಳ, ಫೆಬ್ರವರಿ 13: ಅಷ್ಟು ದೊಡ್ಡ ರಸ್ತೆಗಳಿದ್ದರೂ ಜನರು ಫುಟ್ಪಾತ್​​ನಲ್ಲಿ ಬೈಕ್ ಓಡಿಸುವ ಛಾಳಿ ಬಿಡುತ್ತಿಲ್ಲ. ವರ್ಷಕ್ಕೆ ಒಂದು ಬಾರಿ ಫುಟ್ಪಾತ್ ಮಾಡಿದರೂ ಕೂಡ ಕೆಲವೇ ತಿಂಗಳುಗಳಲ್ಲಿ ವಾಹನಗಳ ಓಡಾಟದಿಂದ ಹಾಳಾಗುತ್ತಿವೆ. ಫುಟ್ಪಾತ್​​ನಲ್ಲಿ ಬಂದ ಬೈಕ್ ಅನ್ನು ಮಹಿಳೆಯೊಬ್ಬರು ಹೋಗದಂತೆ ತಡೆದು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ನಾನಂತೂ ಇಲ್ಲಿಂದ ಹೋಗೋಕೆ ಬಿಡಲ್ಲ, ಬೇಕಿದ್ದರೆ ನೀವು ರಸ್ತೆಯಲ್ಲಿ ಹೋಗಿ ಎಂದು ಮಹಿಳೆಯೊಬ್ಬರು ಫುಟ್ಪಾತ್​ನಲ್ಲಿ ಅಡ್ಡವಾಗಿ ನಿಂತು ಧೈರ್ಯದಿಂದ ಗದರಿಸಿದ್ದಾರೆ. ಕೋಳಿಕ್ಕೋಡ್​​ನಲ್ಲಿ ಈ ಘಟನೆ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ – Kannada News | Ram Charan’s Twins Named Shivaram and Anveera Devi: Meaning Revealed

ರಾಮ್ ಚರಣ್ (Ram Charan) ಹಾಗೂ ಉಪಾಸನಾ ದಂಪತಿ ಇತ್ತೀಚೆಗೆ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಈ ಮೊದಲು ಹುಟ್ಟಿದ ಮಗಳಿಗೆ ಕ್ಲಿನ್​ಕಾರ ಎಂದು ಹೆಸರು ಇಟ್ಟಿದ್ದರು. ಈ ಬಾರಿ ಅವಳಿ ಮಕ್ಕಳಿಗೂ ಇವರು ಭಿನ್ನ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅವರು ಮಕ್ಕಳಿಗೆ ದೇವರ ಹೆಸರನ್ನೇ ಇಟ್ಟಿದ್ದಾರೆ ಎಂಬುದು ವಿಶೇಷ.

ರಾಮ್ ಚರಣ್ ಅವರು ಅವಳಿ ಮಕ್ಕಳಿಗೆ ಹೆಸರನ್ನು ಇಡಲು ಖ್ಯಾತ ಜ್ಯೋತಿಷಿ ಬಳಿ ತೆರಳಿದ್ದರು ಎನ್ನಲಾಗಿದೆ. ಮಕ್ಕಳಿಗೆ ಯಾವ ರೀತಿಯ ಹೆಸರು ಇಡಬೇಕು ಎಂಬ ಬಗ್ಗೆ ಮಾಹಿತಿ ಕೇಳಲಾಗಿತ್ತು. ಅವರು ಸೂಚಿಸಿದ ಹೆಸರನ್ನೇ ಇವರು ಮಕ್ಕಳಿಗೆ ಇಟ್ಟಿದ್ದಾರೆ ಎಂದು ವರದಿ ಆಗಿದೆ. ಮಗನಿಗೆ ಶಿವರಾಮ್ ಎಂದು ಹಾಗೂ ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ.

ಶಿವರಾಮ್ ಎಂಬುದು ಹಿಂದೂ ದೇವರುಗಳಾದ ಶಿವ ಹಾಗೂ ರಾಮನ ಸಮ್ಮಿಲನವಾಗಿದೆ. ಕೊನಿಡೆಲಾ ಶಿವರಾಮ್ ಎಂದು ಮಗನಿಗೆ ಕರೆಯಲಾಗುತ್ತದೆ. ಮಗನಿಗೆ ದೇವರ ಹೆಸರನ್ನು ಇಟ್ಟಿರುವುದಕ್ಕೆ ಅನೇಕರಿಗೆ ಖುಷಿಯಾಗಿದೆ. ಇನ್ನು, ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ. ಇದು ಪ್ರಾಚೀನ ಪರಿಭಾಷೆಯಲ್ಲಿ ಧೈರ್ಯ ಮತ್ತು ಕೃಪೆಯ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ 

ಸದ್ಯ ರಾಮ್ ಚರಣ್ ತಮ್ಮ ಮಕ್ಕಳಿಗೆ ಇಟ್ಟ ಹೆಸರು ಚರ್ಚೆ ಆಗುತ್ತಿದೆ. ಮಕ್ಕಳಿಗೆ ಅವರು ಕ್ಲಿನ್​ಕಾರ, ಶಿವರಾಮ್ ಹಾಗೂ ಅನ್ವೀರಾ ದೇವಿ ಎಂದು ಇಟ್ಟಂತೆ ಆಗಿದೆ. ರಾಮ್ ಚರಣ್ ಅವರಿಗೆ ಈ ವರ್ಷ ವಿಶೇಷ ಎನಿಸಿಕೊಂಡಿದೆ. ಅವರು ಅವಳಿ ಮಕ್ಕಳ ತಂದೆ ಆಗಿದ್ದಾರೆ. ಇನ್ನು, ಈ ವರ್ಷ ಅವರ ನಟನೆಯ ‘ಪೆದ್ದಿ’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಏಪ್ರಿಲ್ 30ರಂದು ಸಿನಿಮಾ ತೆರೆಗೆ ಬರಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್​ಪಿ ಐತಿಹಾಸಿಕ ಗೆಲುವು ಸಾಧಿಸಿದರೂ ಖುಷಿಯ ಮೆರವಣಿಗೆಯೇ ಇಲ್ಲ – Kannada News | Bangladesh Election, BNP’s Historic Win, But No Grand Celebrations

ಢಾಕಾ, ಫೆಬ್ರವರಿ 13: ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಸಿಹಿ ಹಂಚಿ, ಮೆರವಣಿಗೆ ನಡೆಸಿ ಖುಷಿ ಪಡುವುದು ಸಾಮಾನ್ಯ. ಆದರೆ ಬಾಂಗ್ಲಾದೇಶ(Bangladesh)ದಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಬಿಎನ್​ಪಿ ಐತಿಹಾಸಿಕ ಗೆಲುವು ಸಾಧಿಸಿದರೂ ಯಾವುದೇ ಮೆರವಣಿಗೆ ನಡೆಸುವುದಿಲ್ಲ ಎಂದು ಪಕ್ಷ ಹೇಳಿಕೆ ನೀಡಿದೆ. ಗುರುವಾರ ರಾತ್ರಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಪಕ್ಷವು ದೇಶದ ಜನರಿಗೆ ತನ್ನ ಕೃತಜ್ಞತೆ ಮತ್ತು ಶುಭಾಶಯವನ್ನು ತಿಳಿಸಿದೆ. ಶುಕ್ರವಾರ ಪ್ರಾರ್ಥನೆಯ ನಂತರ ದೇಶಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳನ್ನು ನಡೆಸಲಾಗುವುದು ಎಂದು ಬಿಎನ್​ಪಿ ಹೇಳಿದೆ. ಈ ಪ್ರಾರ್ಥನೆಗಳಲ್ಲಿ ಮಾಜಿ ಪ್ರಧಾನಿ ಖಲೀದಾ ಜಿಯಾ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ದೇಶದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಈ ಪ್ರಾರ್ಥನಾ ಸಭೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಪಕ್ಷವು ತನ್ನ ನಾಯಕರಿಗೆ, ಕಾರ್ಯಕರ್ತರಿಗೆ ಮನವಿ ಮಾಡಿದೆ. ಢಾಕಾ ಸೇರಿದಂತೆ ದೇಶಾದ್ಯಂತ ಈ ಕಾರ್ಯಕ್ರಮಗಳು ನಡೆಯಲಿವೆ. ಅಗಾಧ ಸಾರ್ವಜನಿಕ ಬೆಂಬಲದಿಂದ ಜಯಗಳಿಸಿದರೂ ಯಾವುದೇ ಸಾರ್ವಜನಿಕವಾಗಿ ಆಚರನೆಗಳನ್ನು ಮಾಡುವುದಿಲ್ಲ ಎಂದು ಪಕ್ಷ ಹೇಳಿದೆ.

ಧಾರ್ಮಿಕ ಸಾಮರಸ್ಯದ ಸಂದೇಶವನ್ನು ನೀಡುವ ಪಕ್ಷವು, ದೇವಾಲಯಗಳು, ಚರ್ಚ್​ಗಳು ಅಥವಾ ಇತರೆ ಸ್ಥಳಗಳಲ್ಲಿ ದೇಶದ ಶಾಂತಿ ಮತ್ತು ಸಮೃದ್ಧಿಗಾಗಿ ದೇವರನ್ನು ಪ್ರಾರ್ಥಿಸುವಂತೆ ಕರೆ ನೀಡಿದೆ. ಕಳೆದ 17 ವರ್ಷಗಳಿಂದ ದೇಶಭ್ರಷ್ಟ ಎನಿಸಿಕೊಂಡಿರುವ ತಾರಿಕ್ ರೆಹಮಾನ್ ಈಗ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಢಾಕಾ ಟ್ರಿಬ್ಯೂನ್ ಪ್ರಕಾರ, ತಾರಿಕ್ ರೆಹಮಾನ್ ಅವರ ಬಿಎನ್‌ಪಿ ಇದುವರೆಗೆ 151 ಸ್ಥಾನಗಳನ್ನು ಗೆದ್ದಿದೆ ಮತ್ತು 120 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ, ಜಮಾತ್-ಎ-ಇಸ್ಲಾಮಿ (ಜೆಐ) ಕೇವಲ 43 ಸ್ಥಾನಗಳನ್ನು ಗಳಿಸಿದೆ ಮತ್ತು ಕೆಲವು ಇತರ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಬಾಂಗ್ಲಾದೇಶವು ಚುನಾವಣೆಯಲ್ಲಿ 350 ಸಂಸದೀಯ ಸ್ಥಾನಗಳನ್ನು ಹೊಂದಿದೆ, ಅದರಲ್ಲಿ 50 ಮಹಿಳೆಯರಿಗೆ ಮೀಸಲಾಗಿವೆ.300 ಸ್ಥಾನಗಳಿಗೆ ಮತದಾನ ನಡೆಯುತ್ತದೆ, ಆದರೆ ಈ ಬಾರಿ, ಅಭ್ಯರ್ಥಿಯ ಮರಣದ ಕಾರಣ, ಕೇವಲ 299 ಸ್ಥಾನಗಳಿಗೆ ಮತದಾನ ನಡೆಸಲಾಯಿತು. ಶೇರ್ಪುರ್ -3 ಸ್ಥಾನಕ್ಕೆ ಮತದಾನ ಈಗ ನಂತರ ನಡೆಯಲಿದೆ. ಮಹಿಳೆಯರಿಗೆ ಮೀಸಲಾಗಿರುವ 50 ಸ್ಥಾನಗಳನ್ನು ಸಾಮಾನ್ಯ ಸ್ಥಾನಗಳಲ್ಲಿ ಪಕ್ಷದ ಪ್ರಾತಿನಿಧ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಬಿಎನ್​ಪಿಗೆ ಭರ್ಜರಿ ಜಯ, 35 ವರ್ಷಗಳ ಬಳಿಕ ಪುರುಷರಿಗೆ ಪ್ರಧಾನಿ ಗಾದಿ, ತಾರಿಕ್ ರೆಹಮಾನ್​​ಗೆ ಮೋದಿ ಶುಭಾಶಯ

ಸ್ವಾತಂತ್ರ್ಯದ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಚುನಾವಣೆ ಇದಾಗಿದ್ದು, ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಬ್ಬರೂ ಉಪಸ್ಥಿತರಿರಲಿಲ್ಲ. ಶೇಖ್ ಹಸೀನಾ ಅಥವಾ ಖಲೀದಾ ಜಿಯಾ ಕಳೆದ ವರ್ಷದ ಕೊನೆಯಲ್ಲಿ ನಿಧನರಾದರು, ಆದರೆ ಶೇಖ್ ಹಸೀನಾ ಆಗಸ್ಟ್ 2024 ರ ನಂತರ ಭಾರತಕ್ಕೆ ತೆರಳಿದ್ದರು.

ಶೇ. 35-40 ರಷ್ಟು ಮತಗಳನ್ನು ಹೊಂದಿರುವ ಶೇಖ್ ಹಸೀನಾ ಅವರ ಅವಾಮಿ ಲೀಗ್ ಈ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಯಿತು. ಬಾಂಗ್ಲಾದೇಶ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಪಕ್ಷದ ಪ್ರಭಾವ ಸ್ಪಷ್ಟವಾಗಿ ಕಂಡುಬಂದಿದೆ ಮತ್ತು ಕೇವಲ ಶೇ. 48 ರಷ್ಟು ಮತದಾನವಾಗಿದ್ದು, ಚುನಾವಣೆಗಳನ್ನು ಬಹಿಷ್ಕರಿಸುವಂತೆ ಅವಾಮಿ ಲೀಗ್ ನಾಯಕರ ಕರೆಗಳು ಯಾವುದೇ ಪರಿಣಾಮ ಬೀರಲಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಬ್ಯಾಂಕ್​ ಸ್ಟೇಟ್​​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’; ‘ಟಾಕ್ಸಿಕ್’ 120 ಕೋಟಿ ಡೀಲ್ ಬಗ್ಗೆ ದಿಲ್ ರಾಜು ಉತ್ತರ – Kannada News | Toxic Movie: Dil Raju Confirms 120 Cr Distribution Deal, Offers Bank Statement Proof

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​ಗೆ ಇರೋದು ಇನ್ನು ಒಂದು ತಿಂಗಳು ಮಾತ್ರ. ಈಗಾಗಲೇ ಸಿನಿಮಾದ ಡೀಲ್​​​ಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದಲ್ಲಿ ಈ ಚಿತ್ರವನ್ನು ಹಂಚಿಕೆ ಮಾಡೋ ಜವಾಬ್ದಾರಿಯನ್ನು ದಿಲ್ ರಾಜು ಪಡೆದುಕೊಂಡಿದ್ದಾರೆ. ಅದೂ ಬರೋಬ್ಬರಿ 120 ಕೋಟಿ ರೂಪಾಯಿಗೆ. ಇಷ್ಟು ದೊಡ್ಡ ಮಟ್ಟದಲ್ಲಿ ಡೀಲ್ ನಿಜಕ್ಕೂ ಆಗಿದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

‘ಟಾಕ್ಸಿಕ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾನ ನೋಡೋಕೆ ಫ್ಯಾನ್ಸ್ ಕಾದಿದ್ದಾರೆ. ಈಗಾಗೇ ದೊಡ್ಡ ದೊಡ್ಡ ಹಂಚಿಕೆದಾರರು ಸಿನಿಮಾಗೆ ಬೇಡಿಕೆ ಇಡುತ್ತಿದ್ದಾರೆ. ದಿಲ್ ರಾಜು ಅವರು ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಸಿನಿಮಾನ ಹಂಚಿಕೆ ಮಾಡಲು ಬರೋಬ್ಬರಿ 120 ಕೋಟಿ ರೂಪಾಯಿ ಕೊಟ್ಟಿದ್ದಾರೆ.

ಎರಡು ರಾಜ್ಯಗಳಲ್ಲಿ ಹಂಚಿಕೆ ಮಾಡಲು ಇಷ್ಟು ದೊಡ್ಡ ಮಟ್ಟದಲ್ಲಿ ಹಣ ನೀಡಿದ್ದು ನಿಜವೇ ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಈ ವಿಷಯದಲ್ಲಿ ಸ್ವತಃ ದಿಲ್ ರಾಜು ಅವರೇ ಉತ್ತರ ನೀಡಿದ್ದಾರೆ. ‘ಮಾರ್ಕಂಡೆ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿದೆ. ‘ಇದು ಪಬ್ಲಿಸಿಟಿ ಸ್ಟಂಟ್ ಅಥವಾ ನಿಜಕ್ಕೂ ಈ ಡೀಲ್ ನಡೆದಿದೆಯೇ’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ದಿಲ್ ರಾಜು ಅವರು, ‘ಯಾರ್ಯಾರು ಈ ಬಗ್ಗೆ ಅನುಮಾನ ಪಡ್ತಾ ಇದೀರೋ ಅವರಿಗೆ ಈ ಉತ್ತರ. ನಾನು ಬ್ಯಾಂಕ್​​ಗೆ ತೆರಳಿ ಹಣ ಟ್ರಾನ್ಸ್ಫರ್ ಮಾಡಿದ ಬಳಿಕ ಅವರಿಗೆ ನನ್ನ ಬ್ಯಾಂಕ್​ ಸ್ಟೇಟ್​ಮೆಂಟ್ ತೋರಿಸ್ತೀನಿ, ಆಗ ನಂಬಬಹುದು’ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸಕೋಟೆ ಬಳಿ ಬೈಕ್, ಕ್ಯಾಂಟರ್ ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು – Kannada News | Hoskote Highway Tragedy: 7 Killed in Chain Collision Between Car, Bike and Canter Near Bengaluru

ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿರುವುದುImage Credit source: tv9

ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ (Accident) ಸಂಭವಿಸಿ ಏಳು ಜನ ದುರ್ಮರಣ ಹೊಂದಿದ್ದಾರೆ. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್ ​ಯುವಿ ಕಾರಿನ (XUV Car) ನಡುವೆ ಸರಣಿ ಡಿಕ್ಕಿ ಸಂಭವಿಸಿದ್ದು, ಘಟನೆ ಸ್ಥಳದಲ್ಲೇ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸಾವನ್ನಪ್ಪಿದ್ದಾರೆ.

ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಕ್ಸ್ ​ಯುವಿ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್​​ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅವೈಜ್ಞಾನಿಕ ರಸ್ತೆಯಿಂದಲೇ ಆಗುತ್ತಿದೆಯಾ ಅಪಘಾತ? ಸ್ಥಳೀಯರಿಂದ ಗಂಭೀರ ಆರೋಪ

ಹೆದ್ದಾರಿಯ ಕಳಪೆ ನಿರ್ಮಾಣ ಮತ್ತು ವಿನ್ಯಾಸದ ಬಗ್ಗೆ ಸ್ತಳೀಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾಧುಪ್ಪನಹಳ್ಳಿಯಿಂದ ಕಮಳಿಪುರ ಬ್ರಿಡ್ಜ್ ವರೆಗಿನ ಈ ರಸ್ತೆಯು ಸರಿಯಾದ ವಿನ್ಯಾಸವನ್ನು ಹೊಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NH) ಈ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದೆ. ಹೆದ್ದಾರಿಯ ವಿನ್ಯಾಸದ ಬಗ್ಗೆ ಕಾಮಗಾರಿ ಸಂದರ್ಭದಲ್ಲೇ ಎಂಜಿನಿಯರ್ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕಮಳಿಪುರ ಗ್ರಾಮದ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಭಯಾನಕ ರೋಡ್​ರೇಜ್​ಗೆ ಬೆಚ್ಚಿಬಿದ್ದ ಬೆಂಗಳೂರು: ಕಾರಿನ ಬಾನೆಟ್​​ನಲ್ಲೇ ವ್ಯಕ್ತಿಯ ಒಂದು ಕಿಮೀ ಹೊತ್ತೊಯ್ದ ಚಾಲಕ!

ಸರ್ವೀಸ್ ರಸ್ತೆಗಳ ಸಮಸ್ಯೆ ಬಗ್ಗೆಯೂ ಮಾತನಾಡಿದ ಅವರು, ಸರ್ವೀಸ್ ರಸ್ತೆಗಳು ಕನಿಷ್ಠ 18 ಅಡಿ ಅಗಲ ಇರಬೇಕಿದ್ದರೂ, ಇಲ್ಲಿ ಮೂರೂವರೆ ಅಥವಾ ಎರಡೂವರೆ ಅಡಿ ಮಾತ್ರ ಇದೆ. ರೈತರು 2010ರಲ್ಲಿ ತಮ್ಮ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಬಿಟ್ಟುಕೊಟ್ಟಿದ್ದರೂ, ಅವರಿಗೆ ಯಾವುದೇ ಬೆಲೆ ಸಿಕ್ಕಿಲ್ಲ ಮತ್ತು ರಸ್ತೆಯನ್ನು ಕೂಡ ಸರಿಯಾಗಿ ನಿರ್ಮಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 am, Fri, 13 February 26

Source link

Exit mobile version