All posts by nagaraj11081993

ಕೃತಕ ಬಣ್ಣಗಳಿರುವ ಆಹಾರಕ್ಕಿಂತ ಈ ಫುಡ್ ಸೇವನೆ ಮಾಡುವುದು ಬೆಸ್ಟ್ ಅಂತಾರೆ ಡಾ. ಸಂಧ್ಯಾ ಸಿಂಗ್ – Kannada News | Experts Say Eat These Natural Foods Instead of Artificial Colors

ಕೃತಕ ಬಣ್ಣಗಳು (Artificial Colors) ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಹೊಳೆಯುವ ಬಣ್ಣಗಳಿರುವ ಕ್ಯಾಂಡಿಗಳು, ವಿವಿಧ ಬಣ್ಣದ ಪಾನೀಯಗಳು ಮಾತ್ರವಲ್ಲದೆ, ರೆಸ್ಟೋರೆಂಟ್ ಗಳಲ್ಲಿ ನೀಡಲಾಗುವ ಸಾಮಾನ್ಯ ಆಹಾರದಲ್ಲೂ ಬಣ್ಣಗಳನ್ನು ಬಳಸಲಾಗುತ್ತಿದೆ. ಇವು ಆಹಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ, ಆದರೆ ಯಾವುದೇ ಪೌಷ್ಟಿಕ ಮೌಲ್ಯವನ್ನು ನೀಡುವುದಿಲ್ಲ. ಇಂತಹ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಕುರಿತು, ಬೆಂಗಳೂರು ಅಪೋಲೋ ಆಸ್ಪತ್ರೆಯ ಎಚ್‌ಒಡಿ ಮತ್ತು ಮುಖ್ಯ ಕ್ಲಿನಿಕಲ್ ಡಯೆಟೀಶಿಯನ್ ಡಾ. ಸಂಧ್ಯಾ ಸಿಂಗ್ (Dr.Sandhya Singh) ಎಸ್ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ಮತ್ತಷ್ಟು ಮಾಹಿತಿ ನೀಡಿದ್ದಾರೆ. ಈ ಬಗೆಗಿನ ಸಂಪೂರ್ಣ ವಿವರ ಸ್ಟೋರಿಯಲ್ಲಿದೆ.

ಪೌಷ್ಟಿಕ ಮೌಲ್ಯ ನೀಡುವ ನೈಸರ್ಗಿಕ ಆಹಾರಗಳು:

ಪ್ರಕೃತಿ ಮಾನವ ಸೇವನೆಗೆ ನೀಡುವ ಬಹುತೇಕ ಆಹಾರಗಳಲ್ಲಿ ಎಲ್ಲ ಬಣ್ಣಗಳನ್ನೂ ಹೊಂದಿದೆ. ಹಣ್ಣು, ತರಕಾರಿ, ಮಸಾಲೆಗಳು, ಹಸಿರು ಸೊಪ್ಪುಗಳು, ಹೂವು, ಪರಾಗಕಣಗಳು ಇತ್ಯಾದಿ ಸಹಜ ಬಣ್ಣಗಳ ಉತ್ತಮ ಮೂಲಗಳಾಗಿವೆ. ಈ ಸಹಜ ಬಣ್ಣಗಳು ಕೇವಲ ಆಹಾರಕ್ಕೆ ಬಣ್ಣ ನೀಡುವುದಲ್ಲದೆ, ಅದರ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸುತ್ತವೆ. ಅವುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು, ಖನಿಜಗಳು, ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಫೈಟೋನ್ಯೂಟ್ರಿಯಂಟ್ಸ್‌ಗಳಂತಹ ಆರೋಗ್ಯಕರ ಸಂಯುಕ್ತಗಳು ಇರುತ್ತವೆ. ಇವು ದೇಹದಲ್ಲಿನ ಆಕ್ಸಿಡೇಟಿವ್ ಸ್ಟ್ರೆಸ್‌ನ್ನು ಕಡಿಮೆ ಮಾಡಿ, ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಉದಾಹರಣೆಗೆ, ಪಾಲಕ್ ಮತ್ತು ಹಸಿರು ಸೊಪ್ಪುಗಳು ಹಸಿರು ಬಣ್ಣ ನೀಡುತ್ತವೆ, ಅರಿಶಿನ ಹಳದಿ ಬಣ್ಣ ನೀಡುತ್ತದೆ, ಕೇಸರಿ ಹಳದಿ-ಕಿತ್ತಳೆ ಬಣ್ಣ ನೀಡುತ್ತದೆ, ಬೀಟ್ರೂಟ್ ಕೆಂಪು ಬಣ್ಣ ನೀಡುತ್ತದೆ, ಪರ್ಪಲ್ ಕ್ಯಾಬೇಜ್ ಮತ್ತು ಬಟರ್‌ಫ್ಲೈ ಪೀ ಹೂವುಗಳು ನೀಲಿ ಮತ್ತು ನೇರಳೆ ಬಣ್ಣವನ್ನು ನೀಡುತ್ತವೆ. ಆದ್ದರಿಂದ, ನಮ್ಮ ಆಹಾರದಲ್ಲಿ ಕೃತಕ ಬಣ್ಣ ಸೇರಿಸುವ ಅವಶ್ಯಕತೆಯೇ ಬರುವುದಿಲ್ಲ. ಹಾಗಾಗಿ ಬಣ್ಣಬಣ್ಣದ ಆಹಾರಗಳ ಸೇವನೆ ಮಾಡುವುದನ್ನು ತಪ್ಪಸಿವುದು ಒಳ್ಳೆಯದು. ಸಹಜ ಬಣ್ಣಗಳಿರುವ, ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸುವುದು ನಮ್ಮ ಆಹಾರವನ್ನು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಮಾಡುತ್ತದೆ.

ಇದನ್ನೂ ಓದಿ: ಬಣ್ಣ ಬಣ್ಣದ ಕೇಕ್​​ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ!

ಬಣ್ಣಬಣ್ಣದ ಆಹಾರಕ್ಕೆ ಗುಡ್ ಬೈ ಹೇಳಿ!

ಆಹಾರವನ್ನು ಆಕರ್ಷಕವಾಗಿಸುವುದು ಮುಖ್ಯವಾದರೂ, ಅದರ ಪ್ರಮುಖ ಉದ್ದೇಶ ಪೌಷ್ಟಿಕಾಂಶಗಳ ಸಮೃದ್ಧ ಮೂಲವಾಗಿರಬೇಕು. ಅದು ಮ್ಯಾಕ್ರೋನ್ಯೂಟ್ರಿಯಂಟ್ಸ್ ಮತ್ತು ಮೈಕ್ರೋನ್ಯೂಟ್ರಿಯಂಟ್ಸ್ಗಳ ಸಮತೋಲನ ಹೊಂದಿರಬೇಕು. ಸಹಜ ಬಣ್ಣಗಳನ್ನು ಆಹಾರದಲ್ಲಿ ಬಳಸುವುದು ಪ್ರತಿಯೊಂದು ಅಡಿಗೆ ಮನೆಯ ಜವಾಬ್ದಾರಿಯಾಗಿದೆ. ಇದು ಆಹಾರದ ಆಕರ್ಷಕತೆಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುತ್ತದೆ. ಹಾಗಾಗಿ ಕೃತಕ ಬಣ್ಣಗಳನ್ನು ತ್ಯಜಿಸುವುದು ನಮ್ಮ ಆಹಾರದಲ್ಲಿ ಸರಳತೆ ಮತ್ತು ನೈಜತೆಯನ್ನು ಮತ್ತೆ ತರುವಂತಾಗಿದೆ. ನೆನಪಿಡಿ, ಆರೋಗ್ಯಕರವಾದದ್ದು ಯಾವಾಗಲೂ ಬಹಳ ಬಣ್ಣಬಣ್ಣವಾಗಿರಬೇಕೆಂದಿಲ್ಲ, ಮತ್ತು ಬಣ್ಣಬಣ್ಣವಾಗಿರುವುದೇ ಆರೋಗ್ಯಕರವೆಂದು ಅರ್ಥವಲ್ಲ. ಆದ್ದರಿಂದ, ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಆಯ್ಕೆಗಳನ್ನು ಮಾಡುವ ಸಮಯ ಬಂದಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮರಾವತಿ ಲೈಂಗಿಕ ಹಗರಣದ ಆರೋಪಿಯನ್ನು ಎಳೆದುಕೊಂಡು ನಗರದ ರಸ್ತೆಗಳಲ್ಲಿ ಮೆರವಣಿಗೆ – Kannada News | Amravati scandal case main accused Ayan Ahmed Tanveer paraded across the city

ಅಮರಾವತಿ, ಏಪ್ರಿಲ್ 22: ಮಹಾರಾಷ್ಟ್ರದ ಅಮರಾವತಿ ಲೈಂಗಿಕ ಹಗರಣ ಪ್ರಕರಣದಲ್ಲಿ ಪೊಲೀಸರು ಇಂದು ಈ ಪ್ರಕರಣದ ಪ್ರಮುಖ ಆರೋಪಿ ಅಯಾನ್ ಅಹ್ಮದ್ ತನ್ವೀರ್‌ನನ್ನು ನಗರದಾದ್ಯಂತ ರಸ್ತೆಗಳಲ್ಲಿ ಎಳೆದುಕೊಂಡು ಹೋಗಿ ಮೆರವಣಿಗೆ ಮಾಡಿದ್ದಾರೆ. ಜನರಿಗೆ ಆ ಆರೋಪಿ ಯಾರೆಂದು ಗೊತ್ತಾಗಬೇಕೆಂದು ಆತನನ್ನು ಸಾರ್ವಜನಿಕರ ಮುಂದೆ ಪರೇಡ್ ಮಾಡಲಾಗಿದೆ.

ಮಹಾರಾಷ್ಟ್ರದ ಪರತ್ವಾಡದಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣವು ಬಹಳ ತಿರುವು ಪಡೆದುಕೊಂಡಿದ್ದು, ಪ್ರಮುಖ ಆರೋಪಿ ಅಯಾನ್ ಅಹ್ಮದ್‌ನ ಐಷಾರಾಮಿ ಕಾರುಗಳು, ದೊಡ್ಡ ಪ್ರಮಾಣದ ನಗದು ಮತ್ತು ಉನ್ನತ ದರ್ಜೆಯ ಗ್ಯಾಜೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದು ನಡೆಯುತ್ತಿರುವ ತನಿಖೆಗೆ ಹೊಸ ಆಯಾಮವನ್ನು ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC Results 2026: ಹಲವು ಗೊಂದಲಗಳ ಮಧ್ಯೆ SSLC ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ಮುಹೂರ್ತ ಫಿಕ್ಸ್ – Kannada News | Karnataka SSLC Result 2026 Announce On April 22 confirmed By Minister Madhu Bangarappa, here Is How To Check Result

ಬೆಂಗಳೂರು, (ಏಪ್ರಿಲ್ 22): ಹಲವು ಗೊಂದಲಗಳ ನಡುವೆಯೂ ಎಸ್​​ಎಸ್​​ಎಲ್​​ಸಿ (10ನೇ ತರಗತಿ) ಫಲಿತಾಂಶ (SSLC Result 2026) ಪ್ರಕಟಕ್ಕೆ ಮುಹೂರ್ತ ನಿಗದಿಯಾಗಿದೆ. ನಾಳೆ  (ಏಪ್ರಿಲ್ 23)  12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಘೋಷಣೆ ಮಾಡಿದ್ದಾರೆ.

Source link

ಪಹಲ್ಗಾಮ್ ಕರಾಳ ದಿನಕ್ಕೆ ವರ್ಷ: ಶಿವಮೊಗ್ಗದ ಮಂಜುನಾಥ್ ಮನೆಯಲ್ಲಿ ಇನ್ನೂ ಮಡುಗಟ್ಟಿದ ನೋವು – Kannada News | Pahalgam Attack One Year Later: Pain Still Lingers in Manjunath’s House

ಶಿವಮೊಗ್ಗ, ಏಪ್ರಿಲ್​ 22: ಪಹಲ್ಗಾಮ್​ನಲ್ಲಿ (Pahalgam) 2025 ಏಪ್ರಿಲ್​​ 22ರಂದು ಶಿವಮೊಗ್ಗದ ಮಂಜುನಾಥ್ (Manjunath)  ಸೇರಿ ಒಟ್ಟು 26 ಜನರ ನರಮೇಧವಾಗಿತ್ತು. ಈ ಘಟನೆ ನಡೆದು ಇಂದಿಗೆ ಒಂದು ವರ್ಷ. ಮೃತ ಮಂಜುನಾಥ್ ಮನೆಯಲ್ಲಿ ಇನ್ನೂ ಅದೇ ನೋವು ಮಡುಗಟ್ಟಿದೆ. ವಯಸ್ಸಾದ ತಾಯಿ ತನ್ನ ಮಗನ ಸಾವಿನ ಕುರಿತು ಈಗಲೂ ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಕಳೆದ ವರ್ಷ ಏ. 22 ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಶಿವಮೊಗ್ಗದ ಮಂಜುನಾಥ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಗುಂಡಿಕ್ಕಿ ಕೊಲ್ಲುವ ಸಂದರ್ಭದಲ್ಲಿ ಸೊಸೆ ಪಲ್ಲವಿ ಮತ್ತು ಮೊಮ್ಮಗ ಅಭಿಜಯ್ ಜೊತೆಗೆ ಇದ್ದರು. ಕೆಲವೇ ಕ್ಷಣದಲ್ಲಿ ಉಗ್ರರು ಮಂಜುನಾಥ್​ಗೆ ಗುಂಡಿಕ್ಕಿ ಕೊಂದು ಬಿಟ್ಟಿದ್ದರು. ಸ್ವರ್ಗ ನೋಡಲು ಹೋದವರು ಉಗ್ರರ ರಕ್ತಪಾತ ಕಣ್ಣಾರೆ ನೋಡಿ ಬೆಚ್ಚಿಬಿದ್ದಿದ್ದರು. ಇಂತಹ ಘಟನೆಯಲ್ಲೂ ಸೊಸೆ ಮತ್ತು ಮೊಮ್ಮಗ ಎದೆಗುಂದದೆ ಅಲ್ಲಿಂದ ಮೃತ ಮಂಜುನಾಥ್ ಶವದ ಜೊತೆ ವಾಪಸ್ ಶಿವಮೊಗ್ಗಕ್ಕೆ ಬಂದಿದ್ದು ಮಾತ್ರ ಅಚ್ಚರಿ ಮೂಡಿಸಿತ್ತು. ಇದು ಅತ್ತೆ ಸುಮತಿ ತಮ್ಮ ಸೊಸೆಯ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋವು ನುಂಗಿಕೊಂಡು ಬದುಕು ಸಾಗಿಸುತ್ತಿರುವ ತಾಯಿ

ಮಗನ ಸಾವು ನೆನದು ನೋವು ಆಗುತ್ತದೆ. ಆದರೆ ವಾಸ್ತವವನ್ನು ಅರ್ಥಮಾಡಿಕೊಂಡು ನೋವು ನುಂಗಿಕೊಂಡು ಸುಮತಿ ಅವರು ಬದುಕುತ್ತಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಅನಾಥವಾಗಿದ್ದಾರೆ. ತಾನು ನೊಂದುಕೊಂಡರೇ ಸೊಸೆ ಮತ್ತು ಮೊಮ್ಮಗನಿಗೆ ಕಷ್ಟವಾಗುತ್ತದೆಂದು ಎಲ್ಲಾ ನೋವು ನುಂಗಿಕೊಂಡು ಬದುಕು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮೃತ ಮಂಜುನಾಥ್ ಪುತ್ರ

ಮೃತ ಮಂಜುನಾಥ್ ಕುಟುಂಬ ಇನ್ನು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈ ನಡುವೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಒಂದಿಷ್ಟು ಪರಿಹಾರ ಬಂದಿದೆ. ಮೃತ ಮಂಜುನಾಥ್ ಮಗ ಅಭಿಜಯ್​​ಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್​​ನಲ್ಲಿ ಉಚಿತವಾಗಿ ಬಿ.ಕಾಂ ಪದವಿಗೆ ಅನುಮತಿ ಸಿಕ್ಕಿದೆ. ಪತ್ನಿ ಶಿವಮೊಗ್ಗದ ಮ್ಯಾಮ್ ಕೋಸ್​​ನಲ್ಲಿ ಉದ್ಯೋಗಿ ಆಗಿದ್ದಾರೆ. ಮಂಜುನಾಥ್ ಸಾವಿನಿಂದ ಹೊರಗೆ ಬರಲು ಪರದಾಡುತ್ತಿದ್ದಾರೆ. ಈ ಹಿನ್ನಲೆ ಪತ್ನಿಯೂ ಪತಿಯ ಸಾವಿನ ನೋವುವನ್ನು ಕೆಲಸದಲ್ಲಿ ಮರೆಯುತ್ತಿದ್ದಾರೆ. ಮಗ ಕೂಡ ಕಣ್ಣಾರೆ ತನ್ನ ತಂದೆಯ ಸಾವು ನೋಡಿದ ಬಳಿಕ ತಾನು ಕೂಡ ದೇಶಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆನ್ನುವ ಹಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಇತ್ತ ತಾಯಿ ಸುಮತಿ ಅವರಿಗೆ ಮಗ ನೆನಪು ಮಾತ್ರ. ಮಗ ಇಲ್ಲ ಎನ್ನುವುದನ್ನು ನಂಬಲು ಅನೇಕ ತಿಂಗಳೇಬೇಕಾಯಿತು. ಮಗ ಪ್ರವಾಸಕ್ಕೆ ಹೋಗಿ ಜೀವಂತವಾಗಿ ವಾಪಸ್ ಬರಲೇ ಇಲ್ಲ ಎಂಬ ನೋವು ತಾಯಿಗೆ ಈಗಲೂ ಕಾಡುತ್ತಿದೆ.

ಇದನ್ನೂ ಓದಿ: ಪಹಲ್ಗಾಮ್‌ ದಾಳಿ: ಪತ್ನಿ ಎದುರೇ ಪತಿಯನ್ನು ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಪಹಲ್ಗಾಮ್ ಉಗ್ರರ ದುಷ್ಕೃತ್ಯಕ್ಕೆ ಇಡೀ ದೇಶವೇ ಕಣ್ಣೀರು ಹಾಕಿತ್ತು. 26 ಹಿಂದೂಗಳ ನರಮೇಧವಾಗಿತ್ತು. ಆದರೆ ಇದಕ್ಕೆ ಆಪರೇಷನ್ ಸಿಂಧೂರ ಮೂಲಕ ಸೈನಿಕರು ಉಗ್ರರ ಬೇಟೆಯಾಡಿರುವುದಕ್ಕೆ ಮೃತ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮನುಷ್ಯನ ದೇಹದ ಯಾವ ಭಾಗ ಅತೀ ಕೊಳಕಾಗಿರುವುದು ಗೊತ್ತಾ? – Kannada News | This part of the human body is the dirtiest, its hygiene is essential

ಸಾಮಾನ್ಯವಾಗಿ ಹೆಚ್ಚಿನವರು ದೇಹದಲ್ಲಿ ಕಿವಿ, ಮೂಗು ಅತ್ಯಂತ ಕೊಳಕಾಗಿರುವ ಭಾಗ ಎಂದುಕೊಳ್ಳುತ್ತಾರೆ. ಆದ ಕಾರಣ ಪದೇ ಪದೇ ಕಿವಿ ಮತ್ತು ಮೂಗನ್ನು ಸ್ವಚ್ಛಗೊಳಿಸುತ್ತಿರುತ್ತಾರೆ. ಆದರೆ ಇವು ಅಷ್ಟು ಕೊಳಕು ಭಾಗಗಳಲ್ಲವಂತೆ, ಮಾನವನ ದೇಹದಲ್ಲಿ ಅತೀ ಹೆಚ್ಚು ಕೊಳಕಾಗಿರುವ ಅಂಗ ಹೊಕ್ಕುಳು (Navel). ಹೊಕ್ಕುಳಲ್ಲಿ ಬ್ಯಾಕ್ಟೀರಿಯಾ ಮತ್ತು ಹಾನಿಕಾರಕ ಸೂಕ್ಷ್ಮಜೀವಿಗಳು ಸುಲಭವಾಗಿ ಸಂಗ್ರಹವಾಗುವ, ಈ ಅಂಗದ ಸ್ವಚ್ಛತೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಂತೆ. ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ,  ಕೆಟ್ಟ ವಾಸನೆಯನ್ನು ಉಂಟುಮಾಡುವುದಲ್ಲದೆ ಸೋಂಕುಗಳಿಗೂ ಕಾರಣವಾಗುತ್ತವೆ. ಹಾಗಿದ್ರೆ ಹೊಕ್ಕಳ ಸ್ವಚ್ಛತೆಯ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಹೊಕ್ಕುಳ ಭಾಗವು ಏಕೆ ಅತ್ಯಂತ ಕೊಳಕಾಗಿರುತ್ತದೆ?

ಹೊಕ್ಕುಳ ಭಾಗವು ಒಳಮುಖವಾಗಿ ಆಕಾರ ಹೊಂದಿರುವುದರಿಂದ, ಬೆವರು, ಸತ್ತ ಚರ್ಮ, ಸೋಪಿನ ಕಲ್ಮಶ ಮತ್ತು ಬಟ್ಟೆಯ ನಾರುಗಳು ಅಲ್ಲಿ ಸಂಗ್ರಹವಾಗುತ್ತವೆ. ದೀರ್ಘಕಾಲದವರೆಗೆ ಅದನ್ನು ಸ್ವಚ್ಛಗೊಳಿಸದ ಕಾರಣ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಅಲ್ಲಿ ಬೆಳೆಯುತ್ತವೆ. ಹೊಕ್ಕುಳವು ಹೆಚ್ಚಾಗಿ ಕೆಟ್ಟ ವಾಸನೆ ಬರಲು ಇದೇ ಕಾರಣ. ವಿಜ್ಞಾನದ ಪ್ರಕಾರ, ಹೊಕ್ಕುಳ ಭಾಗವು ಮಾನವ ದೇಹದ ಅತ್ಯಂತ ಕೊಳಕು ಭಾಗಗಳಲ್ಲಿ ಒಂದಾಗಿದೆ. ಒಂದು ಸಂಶೋಧನೆಯ ಪ್ರಕಾರ, ಸಾವಿರಾರು ರೀತಿಯ ಬ್ಯಾಕ್ಟೀರಿಯಾಗಳು ಹೊಕ್ಕುಳಲ್ಲಿ ವಾಸಿಸುತ್ತವೆ, ಅವುಗಳಲ್ಲಿ ಹಲವು ಸೋಂಕನ್ನು ಉಂಟುಮಾಡಬಹುದು. ಆದರೆ ಹೆಚ್ಚಿನವರು ಹೊಕ್ಕುಳ ನೈರ್ಮಲ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಹೊಕ್ಕುಳ ಇನ್ನಷ್ಟು ಕೊಳಕಾಗಿ ವಾಸನೆ ಬರಲು ಆರಂಭಿಸುತ್ತದೆ. ಆದ್ದರಿಂದ ಹೊಕ್ಕುಳ ನೈರ್ಮಲ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು.

ಹೊಕ್ಕುಳನ್ನು ಹೇಗೆ ಸ್ವಚ್ಛಗೊಳಿಸುವುದು?

ಹೊಕ್ಕುಳವು ಕೊಳಕಾಗಿರುವ ಅಂಗವಾದ ಕಾರಣ ಅದನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಚರ್ಮರೋಗ ತಜ್ಞರು ಹೇಳುವಂತೆ ಹೊಕ್ಕುಳದಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಸಂಗ್ರಹವಾಗುತ್ತವೆ, ಆದ್ದರಿಂದ ಇದನ್ನು ತಡೆಗಟ್ಟಲು ಸರಿಯಾದ ಶುಚಿಗೊಳಿಸುವಿಕೆ ಅತ್ಯಗತ್ಯ. ಅಧಿಕ ತೂಕ ಹೊಂದಿರುವವರು, ಟೈಪ್ 2 ಮಧುಮೇಹ ಹೊಂದಿರುವವರು ಅಥವಾ ಹೊಕ್ಕುಳ ಚುಚ್ಚಿಸಿಕೊಂಡವರು ತಮ್ಮ ಹೊಕ್ಕುಳನ್ನು ಸ್ವಚ್ಛಗೊಳಿಸಲು ಬೆಚ್ಚಗಿನ ನೀರನ್ನು ಬಳಸಬೇಕು. ಇದು ಕೊಳೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಹೊಕ್ಕುಳಲ್ಲಿ ಕೆಂಪು, ತುರಿಕೆ, ನೋವು ಅಥವಾ ದುರ್ವಾಸನೆ ಬಂದರೆ, ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಬೇಸಿಗೆಯ ಉರಿ ಬಿಸಿಲಿನಲ್ಲೂ ದೇಹವನ್ನು ತಂಪಾಗಿರಿಸಲು ಸುಲಭ ಸಲಹೆಗಳನ್ನು ಪ್ರಯತ್ನಿಸಿ

ದೇಹದ ಎರಡನೇ ಅತ್ಯಂತ ಕೊಳಕು ಭಾಗ ಯಾವುದು?

ಹೊಕ್ಕುಳ ನಂತರ, ನಮ್ಮ ‘ಬಾಯಿ’ ಅತ್ಯಂತ ಕೊಳಕಾಗಿರುತ್ತದೆ. ನಮ್ಮ ಬಾಯಿಯಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿವೆ, ಅದಕ್ಕಾಗಿಯೇ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಬಹಳ ಮುಖ್ಯ. ಹೊಕ್ಕುಳನ್ನು ಸ್ವಚ್ಛಗೊಳಿಸದಿದ್ದರೆ, ಸೋಂಕಿನ ಅಪಾಯವಿದೆ. ಸ್ನಾನ ಮಾಡುವಾಗ, ಹೊಕ್ಕುಳಿನ ಒಳಭಾಗವನ್ನು ಸಣ್ಣ ಹತ್ತಿ  ಅಥವಾ ಮೃದುವಾದ ಬಟ್ಟೆಯಿಂದ ನಿಧಾನವಾಗಿ ಸ್ವಚ್ಛಗೊಳಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ನಾಯಕನ ಪುತ್ರನಿಂದ ಯುವತಿಗೆ ದೋಖಾ: ಆರೋಪಿಯಿಂದಲೇ ಮಗುವಾಗಿರುವುದರಿಂದ ಮದ್ವೆಯಾಗುವುದೇ ಉತ್ತಮ ಎಂದ ಕೋರ್ಟ್ – Kannada News | Puttur BJP Leader’s Son Krishna Rao Love Betrayal Case: best to accused marriage with Victim Says High Court

ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತ ಯುವತಿ

ಬೆಂಗಳೂರು/ಮಂಗಳೂರು, (ಏಪ್ರಿಲ್ 22): ಪುತ್ತೂರು ಬಿಜೆಪಿ ಮುಖಂಡ (Puttur BJP Leader) ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿ ಮಗು ಕರುಣಿಸಿ ವಂಚಿಸಿದ ಪ್ರಕರಣ (Krishna Rao Love Betrayal Case) ಭಾರೀ ಸದ್ದು ಮಾಡಿದ್ದು, ಇದೀಗ ಈ ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಯುವತಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ. ಯುವತಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡಲು ಸಿದ್ದರಿದ್ದಾರಾ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಪ್ರಶ್ನಿಸಿದ್ದು, ಇದಕ್ಕೆ ಅಭಿಪ್ರಾಯ ತಿಳಿಸಿ ಎಂದು ಹೇಳಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.

ಆರೋಪಿ ಪರ ವಕೀಲರ ವಾದವೇನು?

ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ ಕೃಷ್ಣ ಜೆ.ರಾವ್ ಪರ ಪಿ.ಪಿ.ಹೆಗ್ಡೆ ವಾದ ಮಂಡಿಸಿದ್ದು, 7 ವರ್ಷಗಳ ಪ್ರೀತಿ ಇತ್ತು, ಕ್ರಿಮಿನಲ್ ಕೇಸ್ ನಿಂದಾಗಿ ರಾಜಿಯಾಗಿಲ್ಲ. ರಾಜಕೀಯ ವಿರೋಧಿಗಳು ಆರೋಪಿ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್ ನಲ್ಲೂ ಆರೋಪಿಗಳನ್ನಾಗಿಸಿದ್ದಾರೆಂದು ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

ಕೋರ್ಟ್ ಹೇಳಿದ್ದೇನು?

ಆರೋಪಿ ಕೃಷ್ಣ ಜೆ.ರಾವ್ ಪರ ಪಿ.ಪಿ.ಹೆಗ್ಡೆ ವಾದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ, ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಯುವತಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡಲು ಸಿದ್ದರಿದ್ದಾರಾ ಎಂದು ಆರೋಪಿ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಪ್ರಶ್ನಿಸಿದ್ದು, ಇದಕ್ಕೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಯುವತಿ ಕೈಗೆ ಮಗು ಕೊಟ್ಟು ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ: ಶಿಶು ಜನಿಸಿ 6 ತಿಂಗಳಾದರೂ ದೊರಕದ ನ್ಯಾಯ

ಪ್ರಕರಣದ ಹಿನ್ನೆಲೆ

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್, ಶಾಲಾ ದಿನಗಳಿಂದ ಪರಿಚಿತವಾಗಿದ್ದ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಗರ್ಭವತಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಸಂಧಾನ ಮಾಡಿಸಲಾಗಿತ್ತು. ಆರಂಭದಲ್ಲಿ ಮದುವೆಯಾಗಲು ನಿರಾಕರಿಸಿದ್ದ ಆತ ಕೊನೆಗೆ ಒತ್ತಾಯದ ಮೇರೆಗೆ ಒಪ್ಪಿದ್ದ. ಆದರೆ, ಆತನಿಗೆ 21 ವರ್ಷ ವಯಸ್ಸು ಪೂರ್ಣವಾಗದ ಕಾರಣ, ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಭರವಸೆ ನೀಡಿದ್ದರು. ಆದರೆ, ಮಗು ಜನಿಸುತ್ತಿದ್ದಂತೆಯೇ ಕೃಷ್ಣ ರಾವ್ (ಆಗ ಆತನಿಗೆ 21 ವರ್ಷ ವಯಸ್ಸು ಪೂರ್ಣಗೊಂಡಿತ್ತು) ಮದುವೆಗೆ ನಿರಾಕರಿಸಿದ್ದ. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಬಂಧನಕ್ಕೊಳಗಾಗಿದ್ದ ಕೃಷ್ಣ ರಾವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಯುವತಿಗೆ ಹೆರಿಗೆಯಾದ ನಂತರ ‘ಮಗು ನನ್ನದಲ್ಲ’ ಎಂದು ಕೃಷ್ಣ ರಾವ್ ಹೇಳಿದ್ದರಿಂದ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು. ಆದ್ರೆ, ಆರೋಪಿ ಮಾತ್ರ ಮದುವೆಯಾಗಲು ಒಪ್ಪುತ್ತಿಲ್ಲ. ಅಲ್ಲದೆ ಪ್ರಮುಖ ಬಿಜೆಪಿ ನಾಯಕರ ಸಂಧಾನ ವಿಫಲವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜವಾನ್ 2’ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರಾ ಶಾರುಖ್ ಖಾನ್ ಮತ್ತು ಅಟ್ಲಿ? – Kannada News | Shah Rukh Khan and Atlee to reunite for Jawan 2 latest updates

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಸದ್ಯ ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. 2024ರಲ್ಲಿ ತೆರೆಕಂಡ ‘ಪಠಾಣ್’ ಸಿನಿಮಾ ವಿಶ್ವದಾದ್ಯಂತ 1055 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆಯಿತು. ಅದರ ಬೆನ್ನಲ್ಲೇ ಬಂದ ‘ಜವಾನ್’ ಸಿನಿಮಾ 1100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಈಗ ಬರುತ್ತಿರುವ ಲೇಟೆಸ್ಟ್ ವರದಿಗಳ ಪ್ರಕಾರ, ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲಿ ಮತ್ತು ಶಾರುಖ್ ಖಾನ್ ಅವರು ‘ಜವಾನ್ 2′ (Jawan 2) ಚಿತ್ರಕ್ಕಾಗಿ ಮತ್ತೆ ಕೈಜೋಡಿಸಲು ಸಜ್ಜಾಗಿದ್ದಾರೆ.

‘ಇಂಡಿಯಾ ಟುಡೇ’ ವರದಿಯ ಪ್ರಕಾರ, ‘ಜವಾನ್ 2’ ಚಿತ್ರದ ಕಥೆ ಮತ್ತು ಐಡಿಯಾ ಬಗ್ಗೆ ಕಳೆದ ಕೆಲವು ಸಮಯದಿಂದ ಕೆಲಸ ನಡೆಯುತ್ತಿತ್ತು. ಕೆಲವು ವಾರಗಳ ಹಿಂದೆಯಷ್ಟೇ ಚಿತ್ರದ ಸ್ಕ್ರಿಪ್ಟ್ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಶಾರುಖ್ ಖಾನ್ ಸದ್ಯ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮುಗಿದ ನಂತರ ಅಟ್ಲಿ ನಿರ್ದೇಶನದ ‘ಜವಾನ್ 2’ ಕೆಲಸಗಳನ್ನು ಆರಂಭಿಸಲಿದ್ದಾರೆ ಎನ್ನಲಾಗಿದೆ.

‘ಜವಾನ್’ ಸಿನಿಮಾದಲ್ಲಿ ತಮಿಳು ನಟ ವಿಜಯ್ ಸೇತುಪತಿ ವಿಲನ್ ಆಗಿ ಅಬ್ಬರಿಸಿದ್ದರು. ಈಗ ಸೀಕ್ವೆಲ್‌ಗಾಗಿ ಅಟ್ಲಿ ಅವರು ಮತ್ತೊಬ್ಬ ದಕ್ಷಿಣ ಭಾರತದ ಖ್ಯಾತ ನಟನನ್ನು ಖಳನಾಯಕನನ್ನಾಗಿ ಕರೆತರಲು ಆಲೋಚಿಸಿದ್ದಾರೆ. ‘ತಂಡವು ದಕ್ಷಿಣದ ಒಬ್ಬ ದೊಡ್ಡ ಸ್ಟಾರ್ ನಟನನ್ನು ವಿಲನ್ ಪಾತ್ರಕ್ಕೆ ಆಯ್ಕೆ ಮಾಡಲು ಹುಡುಕಾಟ ನಡೆಸುತ್ತಿದೆ’ ಎಂದು ಮೂಲಗಳು ಹೇಳಿವೆ. ಆದರೆ, ಈ ಬಗ್ಗೆ ಶಾರುಖ್ ಖಾನ್ ಆಗಲಿ ಅಥವಾ ಅಟ್ಲಿ ಆಗಲಿ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.

ಶಾರುಖ್ ಖಾನ್ ಪಾಲಿಗೆ ‘ಜವಾನ್’ ಬಹಳ ವಿಶೇಷ ಸಿನಿಮಾ ಆಗಿತ್ತು. ಆ ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ದೀಪಿಕಾ ಪಡುಕೋಣೆ ಆ ಚಿತ್ರದ ತಾರಾಗಣದಲ್ಲಿದ್ದರು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಆ ಸಿನಿಮಾ ಭರ್ಜರಿ ಪ್ರತಿಕ್ರಿಯೆ ಪಡೆದಿತ್ತು. ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತಂದುಕೊಟ್ಟಿತು.

ಇದನ್ನೂ ಓದಿ: ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಜವಾನ್’ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಒಲಿದಿದ್ದವು. ಶಾರುಖ್ ಖಾನ್ ಅವರು ತಮ್ಮ 33 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು ಇದೇ ಸಿನಿಮಾದಿಂದ. ಹಾಗೆಯೇ ಶಿಲ್ಪಾ ರಾವ್ ಅವರು ‘ಚಲೇಯಾ’ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

KD Movie Trailer: ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ – Kannada News | Dhruva Sarja Sanjay Dutt starrer KD movie trailer release Directed by Jogi Prem

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಟ್ರೇಲರ್ (KD Trailer) ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಧ್ರುವ ಸರ್ಜಾ (Dhruva Sarja) ಜೊತೆ ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಪಿ. ರವಿಶಂಕರ್ ಸೇರಿದಂತೆ ಹಲವು ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಪ್ರಿಲ್ 30ರಂದು ಈ ಸಿನಿಮಾ ತೆರೆಕಾಣಲಿದೆ.

ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಂದ ‘ಕೆಡಿ’ ಸಿನಿಮಾ ಸಖತ್ ಸುದ್ದಿ ಆಗಿದೆ. ‘ಸರ್ಸೆ ನಿನ್ನ ಸೆರಗ’ ಹಾಡಿನಿಂದಾಗಿ ದೇಶಾದ್ಯಂತ ಈ ಸಿನಿಮಾ ಬಗ್ಗೆ ಚರ್ಚೆ ಆಗಿತ್ತು. ಇತ್ತೀಚೆಗೆ ಈ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಬಗ್ಗೆಯೂ ಚಿತ್ರತಂಡದಿಂದ ಅಸಮಾಧಾನ ವ್ಯಕ್ತವಾಗಿತ್ತು. ಈ ಎಲ್ಲ ಕಾರಣಗಳಿಂದ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಸೃಷ್ಟಿ ಆಗಿದೆ.

‘ಕೆಡಿ’ ಸಿನಿಮಾದ ಟ್ರೇಲರ್:

‘ಆನಂದ್ ಆಡಿಯೋ’ ಮೂಲಕ ‘ಕೆಡಿ’ ಟ್ರೇಲರ್ ಅನಾವರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ರೆಟ್ರೋ ಕಾಲದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಆ ಕಾಲಘಟ್ಟಕ್ಕೆ ತಕ್ಕಂತೆ ಸೆಟ್ ನಿರ್ಮಾಣ ಮಾಡಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೋದಿಯನ್ನು ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗದಿಂದ ನೋಟಿಸ್ – Kannada News | Election Commission issues notice to Mallikarjun Kharge over terrorist remarks against PM Modi

ನವದೆಹಲಿ, ಏಪ್ರಿಲ್ 22: ತಮಿಳುನಾಡಿನ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು “ಭಯೋತ್ಪಾದಕ” ಎಂದು ಕರೆದಿದ್ದರು. ಈ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಇಂದು ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ನಿಮ್ಮ ನಿಲುವೇನೆಂದು ತಿಳಿಸಿ ಎಂದು ಸೂಚಿಸಿದೆ.

ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ನಿನ್ನೆ ದೂರು ನೀಡಿತ್ತು. ಅದರ ಬೆನ್ನಲ್ಲೇ ಇಂದು ಆಯೋಗ ಖರ್ಗೆಗೆ ನೋಟಿಸ್ ನೀಡಿದೆ. ಇಂದು ಚುನಾವಣಾ ಆಯೋಗ ಖರ್ಗೆ ಅವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, 24 ಗಂಟೆಗಳ ಒಳಗೆ ಅವರ ನಿಲುವನ್ನು ವಿವರಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ಮೋದಿಗೆ ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಕೇಂದ್ರ ಸಚಿವರನ್ನು ಒಳಗೊಂಡ ಬಿಜೆಪಿ ನಿಯೋಗವು ಚುನಾವಣಾ ಆಯೋಗವನ್ನು ಸಂಪರ್ಕಿಸಿ, ಪ್ರಧಾನಿ ಮೋದಿ ಅವರ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.

ಮಂಗಳವಾರ ಚುನಾವಣೆ ನಡೆಯಲಿರುವ ತಮಿಳುನಾಡಿನ ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯನ್ನು “ಭಯೋತ್ಪಾದಕ” ಎಂದು ಕರೆದ ನಂತರ ಈ ವಿವಾದ ಭುಗಿಲೆದ್ದಿತು. ಅವರ ಹೇಳಿಕೆಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಸಚಿವರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

“ಪೆರಿಯಾರ್, ಡಾ. ಅಂಬೇಡ್ಕರ್, ಅಣ್ಣಾದೊರೈ, ಕಮಲರಾಜ್ ಮತ್ತು ಕಲೈಗ್ನಾರ್ ಈ ಜನರು ಮಹಿಳಾ ಮೀಸಲಾತಿ, ನ್ಯಾಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಹೋರಾಡಿದವರು. ಪ್ರಧಾನಿ ಮೋದಿ ಈ ತತ್ವಗಳಿಗೆ ಬದ್ಧರಲ್ಲ. ಪೆರಿಯಾರ್ ಅವರನ್ನು ಪೂಜಿಸಲು ಎಐಎಡಿಎಂಕೆ ಮೋದಿಯೊಂದಿಗೆ ಹೇಗೆ ಕೈ ಜೋಡಿಸಿದರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಮೋದಿ ಒಬ್ಬ ಭಯೋತ್ಪಾದಕ. ಅವರು ಹಾಗೂ ಅವರ ಪಕ್ಷ ಸಮಾನತೆ ಮತ್ತು ನ್ಯಾಯವನ್ನು ನಂಬುವುದಿಲ್ಲ” ಎಂದು ಖರ್ಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:24 pm, Wed, 22 April 26

Source link

ಬೆಂಗಳೂರಿನಲ್ಲಿ ಜನಗಣತಿಗೆ 6 ಸಾವಿರ ಸರ್ಕಾರಿ ನೌಕಕರು ಗೈರು: ಕೋಲಾರದಲ್ಲೂ 6 ತಹಶೀಲ್ದಾರ್​​​ಗೆ ನೋಟಿಸ್​​ – Kannada News | 6,000 Government Employees Skip Census Duty in Bengaluru; Notices Issued to 6 Tehsildars in Kolar

ಜನಗಣತಿ (ಸಂಗ್ರಹ ಚಿತ್ರ) Image Credit source: newindianexpress.com

ಬೆಂಗಳೂರು, ಏಪ್ರಿಲ್​ 22: ರಾಷ್ಟ್ರೀಯ ಜನಗಣತಿ-2026 ಬೆಂಗಳೂರಿನಲ್ಲಿ (bangaluru) ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯನ್ನ ಕಾಣದೇ ಕುಂಟುತ್ತಾ ಸಾಗಿದೆ. ಇನ್ನು ಗಣತಿ ಕಾರ್ಯಕ್ಕೆ 6 ಸಾವಿರ ಸರ್ಕಾರಿ ನೌಕರರು ಕೈಕೊಟ್ಟಿದ್ದಾರೆ. ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಖಾಸಗಿ ವ್ಯಕ್ತಿಗಳಿಂದ ಗಣತಿ ಮಾಡಿಸಲು ತಯಾರಿ ನಡೆಸಿದೆ.

ರಾಷ್ಟ್ರೀಯ ಜನಗಣತಿ 2026 ಮನೆ ಮನೆ ಗಣತಿ ಕಾರ್ಯ ಶುರುವಾಗಿ ಒಂದು ವಾರವೇ ಆದರೂ ಬೆಂಗಳೂರಿನಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬಂದಿಲ್ಲ. ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದ ಸರ್ಕಾರಿ ಸಿಬ್ಬಂದಿ ಪೈಕಿ 6 ಸಾವಿರ ಮಂದಿಗೆ ಗೈರು ಹಾಜರಾಗಿರುವುದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳಿಗೆ ತಲೆನೋವಾಗಿದೆ.

ಖಾಸಗಿ ವ್ಯಕ್ತಿಗಳಿಂದ ಮನೆ ಗಣತಿ

ಇನ್ನು ಒಂದಷ್ಟು ಸರ್ಕಾರಿ ನೌಕರರು ಗಣತಿ ಕಾರ್ಯದಿಂದ ದೂರ ಉಳಿದ ಹಿನ್ನಲೆ ಉಂಟಾಗಿರುವ ಸಿಬ್ಬಂದಿ ಕೊರತೆಯನ್ನ ನೀಗಿಸಲು ಜಿಬಿಎ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಖಾಸಗಿಯವರಿಂದ ಮನೆ ಮನೆ ಗಣತಿ ಕಾರ್ಯ ನಡೆಸಲು ಮುಂದಾಗಿದೆ. 5 ನಗರ ಪಾಲಿಕೆಗಳಿಗೆ ಸುಮಾರು ತಲಾ 1 ಸಾವಿರ ಗಣತಿದಾರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಇದನ್ನೂ ಓದಿ: ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಪಿಯುಸಿ ತೇರ್ಗಡೆ ಹೊಂದಿದ ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಂಡು ತರಬೇತಿ ನೀಡಿ ಗಣತಿ ಮಾಡಿಸಲು ಜಿಬಿಎ ಸಜ್ಜಾಗಿದೆ. ಇನ್ನು ವಿದ್ಯಾರ್ಥಿಗಳು ಗಣತಿ ಕಾರ್ಯ ಮಾಡಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.

ಜನಗಣತಿ ಪ್ರಗತಿ ಶೇಕಡವಾರು ಮಾಹಿತಿ

  • ದಕ್ಷಿಣ ನಗರಪಾಲಿಕೆ – ಶೇಕಡ 22.5%
  • ಉತ್ತರ ನಗರಪಾಲಿಕೆ – ಶೇಕಡ 29.0%
  • ಪೂರ್ವ ನಗರಪಾಲಿಕೆ – ಶೇಕಡ 7.3%
  • ಪಶ್ಚಿಮ ನಗರಪಾಲಿಕೆ – ಶೇಕಡ 25%
  • ಕೇಂದ್ರ ನಗರಪಾಲಿಕೆ – ಶೇಕಡ 16%

ಸರ್ಕಾರಿ ನೌಕರರು ಮಾಡಬೇಕಿದ್ದ ಜನಗಣತಿಯಂತಹ ಸೂಕ್ಷ್ಮ ಕಾರ್ಯವನ್ನ ಖಾಸಗಿಯವರಿಂದ ಮಾಡಿಸುವುದು ಎಷ್ಟು ಸರಿ ಎಂಬ ಆಕ್ಷೇಪವು ಕೇಳಿಬರುತ್ತಿದೆ. ಆದರೆ ಸಿಬ್ಬಂದಿ ಕೊರತೆ ನೀಗಿಸಲು ಜಿಬಿಎಗೆ ಇರುವ ಮಾರ್ಗ ಇದೇ ಆಗಿದ್ದು, ಈ ನಡೆ ಮುಂದೆ ವಿವಾದಾತ್ಮಕ ತಿರುವು ಪಡೆದುಕೊಳ್ಳಲಿದೆಯೋ ಕಾದುನೋಡಬೇಕಿದೆ.

ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರದ 6 ತಹಶೀಲ್ದಾರ್‌ಗಳಿಗೆ ಡಿಸಿ ಶಾಕ್

ರಾಷ್ಟ್ರೀಯ ಜನಗಣತಿ ಮತ್ತು ಮನೆ ಗಣತಿ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಜಿಲ್ಲೆಯ ಆರು ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕೋಲಾರ ತಾಲ್ಲೂಕಿನ ತಹಶೀಲ್ದಾರ್ ನಯನ, ಮುಳಬಾಗಿಲು ತಹಶೀಲ್ದಾರ್ ಗೀತಾ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತ, ಮಾಲೂರು ತಹಶೀಲ್ದಾರ್ ರೂಪಾ ಹಾಗೂ ಶ್ರೀನಿವಾಸಪುರ ತಹಶೀಲ್ದಾರ್ ಸುದೀಂದ್ರ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: 2027ರ ಜನಗಣತಿ: ಏ 1ರಿಂದ ಕರ್ನಾಟಕದಲ್ಲಿ ಮೊದಲ ಹಂತ ಶುರು, ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಕರ್ನಾಟಕ ನಾಗರೀಕ ಸೇವಾ ನಿಯಮ 2012ರ ಕಾಲಂ 3 ಹಾಗೂ ಜನಗಣತಿ ಕಾಯ್ದೆ 1948ರ ಕಾಲಂ 6(2) ಉಲ್ಲಂಘನೆ ಆರೋಪದಡಿ 24ಗಂಟೆಯಲ್ಲಿ ನೋಟಿಸ್​ಗೆ ಸಮಜಾಯಿಷಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸೂಕ್ತ ಸಮಯದಲ್ಲಿ ಉತ್ತರಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link