All posts by nagaraj11081993

Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯನವರು (Siddaramaiah) 2026-27ನೇ ಸಾಲಿನ  ರಾಜ್ಯದ ಆಯವ್ಯಯ ಮಂಡಿಸಿದ್ದಾರೆ (Karnataka Budget 2026). ಈ ಬಾರಿ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂಪಾಯಿ. ಇದರೊಂದಿಗೆ 2025ನೇ ಸಾಲಿನ ಕರ್ನಾಟಕ ಬಜೆಟ್​​ ಗಿಂತ ಈ ಬಾರಿ 40 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ರೈತರು, ಧಮನಿತರು, ಕಾರ್ಮಿಕ ಪರ ಬಜೆಟ್ ಇದಾಗಿದೆ ಎಂದು ಸಿದ್ದರಾಮಯ್ಯನವರು 3 ಗಂಟೆ 5 ನಿಮಿಷ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 40 ಸಾವಿರ ಕೋಟಿ ರೂ. ತೆರಿಗೆ ಹೆಚ್ಚಳವಾಗಿದ್ದು, 2026-2027ನೇ ಸಾಲಿನಲ್ಲಿ 3.15 ಲಕ್ಷ ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಂತಹ ಹೆಚ್ಚಿನ ಬಂಡವಾಳ ಆಕರ್ಷಣೆ, ನಗರಾಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಇನ್ನು ನಾವು ಬೆಂಕಿಯನ್ನು ಬೆಳಕಾಗಿಸಿ ಮುಂದಿನ ಹೆಜ್ಜೆ ಇರಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಬರೋಬ್ಬರಿ 3 ಗಂಟೆ 5 ನಿಮಿಷ ಬಜೆಟ್​ ಮಂಡನೆ

ಸಿಎಂ ಸಿದ್ದರಾಮಯ್ಯ ನಿರರ್ಗಳವಾಗಿ 3 ಗಂಟೆ 5 ನಿಮಿಷ ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದರು. ನೀರೂ ಕುಡಿಯದೆ, ನಿಂತಲ್ಲಿಂದ ಕದಲದೆ, ನಿರಂತರವಾಗಿ ಬಜೆಟ್ ಮಂಡಿಸಿದರು. ಅವರಿಗೆ ಕಾಲು ನೋವು ಇರುವ ಕಾರಣ ಬಜೆಟ್ ಮಧ್ಯೆ ಕೆಲವರು ಕುಳಿತುಕೊಂಡು ಓದಿ ಎಂದು ಸಲಹೆ ನೀಡಿದರು. ಆದ್ರೆ, ಸಿದ್ದರಾಮಯ್ಯ ಸಾಧ್ಯವಾದಷ್ಟು ನಿಂತುಕೊಂಡೇ ಓದುತ್ತೇನೆ. ಕಷ್ಟವಾದಗ ಕುಳಿತುಕೊಳ್ಳುತ್ತೇನೆಂದು ಎದ್ದು ನಿಂತುಕೊಂಡೇ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದರು. ಬಳಿಕ ಸಂಪುಟ ಸಹೋದ್ಯೋಗಿಗಳ ಜೊತೆ ಫೋಟೋ ತೆಗೆಸಿಕೊಂಡರು. ಬಜೆಟ್ ಮೇಲಿನ ಚರ್ಚೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಯಿತು.

ಇದನ್ನೂ ಓದಿ: Karnataka Budget 2026: ಬಜೆಟ್​ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?

ಕರ್ನಾಟಕ ಬಜೆಟ್ 2026ರ ಮುಖ್ಯಾಂಶಗಳು

  1. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 11G ಮಾದರಿ ಆರ್ಥಿಕತೆ ಘೋಷಣೆ.
  2.  ಪ್ರಸಕ್ತ ವರ್ಷದಲ್ಲಿ 56 ಸಾವಿರದ 432 ಉದ್ಯೋಗ ನೇಮಕಾತಿ
  3. ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಾ ಗಾಂಧಿ ಹೆಸರು
  4.  ಅನ್ನಭಾಗ್ಯ: 5 ಕೆಜಿ ಅಕ್ಕಿ ಜೊತೆ ಇಂದಿರಾ ಕಿಟ್‌ ವಿತರಣೆ
  5. ಇಂದಿರಾ ಕಿಟ್‌ : ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಹೆಸರು ಕಾಳು, ಉಪ್ಪು
  6. 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್
  7. 800 ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಸರ್ಕಾರಿ ಶಾಲೆಗಳು ಆರಂಭ
  8. ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭ
  9.  ಮಹಿಳೆಯರು ಮಕ್ಷಳ ರಕ್ಷಣೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಆರಂಭ
  10.  ಬೆಂಗಳೂರು, ಧಾರವಾಡದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’
  11.  ವಿವಿಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ
  12.  ಕುವೆಂಪು ವಿವಿಯಲ್ಲಿ U.R.ಅನಂತಮೂರ್ತಿ ಅಧ್ಯಯನಪೀಠ ಸ್ಥಾಪನ
  13.  ವಿಕ್ಟೋರಿಯಾ ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಎಂದು ಮರುನಾಮಕರಣ
  14.  4.90 ಲಕ್ಷ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ನಿರ್ಧಾರ
  15. ಬೆಂಗಳೂರು ಅಭಿವೃದ್ಧಿಗೆ ಒಟ್ಟು ₹7,000 ಕೋಟಿ ಮೀಸಲು
  16. ಬೆಂಗಳೂರಿನಲ್ಲಿ 40 ಕಿ.ಮೀ ಸುರಂಗ ಮಾರ್ಗ ನಿರ್ಮಾಣ
  17. ಬೆಂಗಳೂರಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹಲವು ಯೋಜನೆ
  18. ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
  19. ಮೈಸೂರನ್ನು ಎರಡನೇ ಐಟಿ ರಾಜಧಾನಿಯಾಗಿ ಬೆಳೆಸಲು ಉತ್ತೇಜನ
  20.  38 ಲಕ್ಷ ರೈತರಿಗೆ ಸಾಲ ನೀಡಲು $30,000 ಕೋಟಿ ಮೀಸಲು
  21.  ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ಆರಂಭ
  22. . ಬೆಂಗಳೂರು, ಬೀದರ್‌ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ
  23.  ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್‌ ಕೇಂದ್ರ ಸ್ಥಾಪನೆ
  24.  100 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ವಿಸ್ತಾರ ಯೋಜನೆ
  25. ಕೃಷಿ ವೆಚ್ಚ ಕಡಿತಕ್ಕೆ ಹೈಟೆಕ್ ಹಾರ್ವೆಸ್ಟರ್ ಹಬ್, ಕೋಲಾರದಲ್ಲಿ ರೈತ ಮಾಲ್
  26.  ಅಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಭಾಗ್ಯ
  27. ಬಾಣಂತಿಯರಿಗೆ ಬಿಸಿಯೂಟ. ಮರಣ ಪ್ರಮಾಣ ತಗ್ಗಿಸಲು ಕ್ರಮ
  28.  ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್‌
  29.  ಕಲ್ಯಾಣ ಕರ್ನಾಟಕದಲ್ಲಿ 1,000 ಕೋಟಿ ವೆಚ್ಚದಲ್ಲಿ 1,124 ಕೀಮೀ ಕಲ್ಯಾಣ ಪಥ
  30.  ರಾಜ್ಯಾದ್ಯಂತ 1,250 ಎಲೆಕ್ಟ್ರಿಕ್‌ ವಾಹನ ಚಾರ್ಚಿಂಗ್ ಪಾಯಿಂಟ್‌

ಹೀಗೆ ಹತ್ತು ಹಲವು ಘೋಷಣೆಗಳೊಂದಿಗೆ ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ ಹಾಗೂ ನವ ಕರ್ನಾಟಕದ ನಿರ್ಮಾಣ” ಎಂಬ ದೂರದೃಷ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2026-27ನೇ ಸಾಲಿನ ರಾಜ್ಯ ಆಯವ್ಯಯವನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಜನಸಾಮಾನ್ಯರ ನಿರೀಕ್ಷೆಯಂತೆ ವಸತಿ, ಕೃಷಿ, ನೀರಾವರಿ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಹಲವಾರು ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Budget 2026: ಕರ್ನಾಟಕದಲ್ಲಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ: ಬಜೆಟ್​​ನಲ್ಲಿ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು, ಮಾರ್ಚ್​ 06: ಕರ್ನಾಟಕದಲ್ಲಿ ಹವ್ಯಕ ಭಾಷಾ ಬೆಳವಣಿಗೆಗಾಗಿ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪನೆ ಮಾಡುವುದಾಗಿ 2026-27ರ ಬಜೆಟ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಘೋಷಿಸಿದ್ದಾರೆ. ಹವ್ಯಕ ಭಾಷೆಗೆ ಸಂಬಂಧಿಸಿದ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಹವ್ಯಕ ಬ್ರಾಹ್ಮಣರು ಸುದೀರ್ಘ ಸಮಯದಿಂದ ಬೇಡಿಕೆ ಇಟ್ಟಿದ್ದರು.

ಶ್ರೀ ಅಖಿಲ ಹವ್ಯಕ ಮಹಾಸಭಾ ಸೇರಿದಂತೆ ಹಲವರ ಪ್ರಯತ್ನ ಇದರ ಹಿಂದಿತ್ತು. ಇದೇ ವೇಳೆ ಗೋರ್‌ ಬಂಜಾರ ಸಮುದಾಯದ ಇತಿಹಾಸ, ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ, ಆಹಾರ ಪದ್ದತಿ, ಕಸುಬು ಇತ್ಯಾದಿಗಳನ್ನು ದಾಖಲಿಸಲು ಬಂಜಾರ ವಿಶ್ವಕೋಶವನ್ನು ಪ್ರಕಟಿಸಲಾಗುವುದು. 384. ಮಕ್ಕಳಿಗಾಗಿ ಪಂಪ, ರನ್ನ, ಜನ್ನ, ಬಸವಾದಿ ಶರಣರು, ಸರ್ವಜ್ಞ, ಕನಕ, ಪುರಂದರ, ಲಕ್ಷ್ಮೀಶ, ಸಂಚಿ ಹೊನ್ನಮ್ಮ ಇತ್ಯಾದಿ ಪ್ರಾಚೀನ ಕವಿಗಳ ಹಾಗೂ ಕುವೆಂಪು, ಶಿವರಾಮ ಕಾರಂತ, ದೇವನೂರು ಮಹದೇವ ಮುಂತಾದವರ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಹವ್ಯಕ ಎಂಬ ಪದವು ಹವ್ಯಕ ಅಥವಾ ಹವೀಗ ಅಥವಾ ಹೈಗ ಎಂಬ ಪದಗಳಿಂದ ಹೊರಬಂದಿದೆ, ಇದರರ್ಥ ಹವನ (ಹವ್ಯ) ಮತ್ತು ಹೋಮ (ಗವ್ಯ) ಮಾಡುವವನು , ಏಕೆಂದರೆ ಹವ್ಯಕ ಬ್ರಾಹ್ಮಣರ ಉದ್ದೇಶವೇ ರಾಜಮನೆತನದ ಆಚರಣೆಗಳು ಮತ್ತು ಅನುಭವಿ ಸರ್ಕಾರದ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುವುದಾಗಿತ್ತು. ವಾಸ್ತವವಾಗಿ, ಹೈಗ ಎಂಬ ಹೆಸರು ಹವ್ಯಕ ನಿಘಂಟಿನಲ್ಲಿ ಮುಂದುವರೆದಿದೆ.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತ್ರಿಷಾ, ವಿಜಯ್ ಖುಲ್ಲಂ ಖುಲ್ಲಾ ತಿರುಗಾಡಿದ್ದು ಸರಿಯೇ? ಖಾರವಾಗಿ ಪ್ರತಿಕ್ರಿಯಿಸಿದ ಫ್ಯಾನ್ಸ್

ನಟ ದಳಪತಿ ವಿಜಯ್ ಅವರ ರಾಜಕೀಯ ಜೀವನಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ತ್ರಿಷಾ (Trisha Krishnan) ಜೊತೆಗಿನ ಒಡನಾಟ. ಈಗಾಗಲೇ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಕೂಡ ಸಂಗೀತಾ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ತ್ರಿಷಾ ಮತ್ತು ವಿಜಯ್ (Thalapathy Vijay) ಅವರು ಖುಲ್ಲಂ ಖುಲ್ಲಾ ಜೊತೆಯಾಗಿ ತಿರುಗಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಅದನ್ನು ಕಂಡು ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿನಿಮಾ ಕಲಾವಿದರು ರಾಜಕೀಯದಲ್ಲಿ ಯಶಸ್ಸು ಕಂಡ ಸಾಕಷ್ಟು ಉದಾಹರಣೆ ತಮಿಳುನಾಡಿನಲ್ಲಿದೆ. ದಳಪತಿ ವಿಜಯ್ ಅವರು ಟಿವಿಕೆ ಪಕ್ಷ ಸ್ಥಾಪಿಸಿಕೊಂಡು ರಾಜಕೀಯಕ್ಕೆ ಇಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಅದಕ್ಕಾಗಿ ಅವರು ಎಲ್ಲ ರೀತಿಯಿಂದಲೂ ತಯಾರಿ ಮಾಡಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.

ದಳಪತಿ ವಿಜಯ್ ಅವರ ಹೆಸರು ತ್ರಿಷಾ ಜೊತೆ ತಳುಕು ಹಾಕಿಕೊಂಡಾಗಲೆಲ್ಲ ಅಭಿಮಾನಿಗಳು ರಕ್ಷಣೆಗೆ ಬರುತ್ತಿದ್ದರು. ವಿಜಯ್ ಮತ್ತು ತ್ರಿಷಾ ಕೇವಲ ಸ್ನೇಹಿತರು ಎಂದು ಫ್ಯಾನ್ಸ್ ವಾದ ಮಾಡುತ್ತಿದ್ದರು. ಗಾಸಿಪ್​​ನಿಂದ ವಿಜಯ್ ಅವರ ರಾಜಕೀಯದ ಭವಿಷ್ಯಕ್ಕೆ ತೊಂದರೆ ಆಗದಿರಲಿ ಎಂದು ಅಭಿಮಾನಿಗಳು ಇಷ್ಟೆಲ್ಲ ಮಾಡುತ್ತಿದ್ದರು. ಆದರೆ ವಿಜಯ್ ಅವರು ಅದನ್ನೆಲ್ಲ ಈಗ ಗಾಳಿಗೆ ತೂರಿದ್ದಾರೆ.

ವೈರಲ್ ವಿಡಿಯೋ:

ಇನ್ನೂ ಕೆಲವು ಅಭಿಮಾನಿಗಳು ವಿಜಯ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ವಿಜಯ್ ಮತ್ತು ತ್ರಿಷಾ ನಡುವೆ ಸಂಬಂಧ ಇರುವುದೇ ಹೌದಾದರೆ ಅದು ಇಂದಿಲ್ಲ ನಾಳೆ ಬಹಿರಂಗ ಆಗಲೇಬೇಕು. ಅದನ್ನು ರಾಜಕೀಯ ವಿರೋಧಿಗಳು ದಾಳವಾಗಿ ಉಪಯೋಗಿಸಿಕೊಳ್ಳುವುದಕ್ಕೂ ಮುನ್ನವೇ ಸ್ವತಃ ವಿಜಯ್ ಅವರು ಈಗ ಬಹಿರಂಗಪಡಿಸಿದ್ದಾರೆ ಎಂಬುದು ಕಟ್ಟಾ ಅಭಿಮಾನಿಗಳ ವಾದ.

ಇದನ್ನೂ ಓದಿ: ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ?

ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಈ ಸಂದರ್ಭದಲ್ಲೇ ವಿಜಯ್ ಅವರು ತ್ರಿಷಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ರೀತಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅವರಿಬ್ಬರು ತಮ್ಮ ಸಂಬಂಧವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂಬುದು ನೆಟ್ಟಿಗರ ವಾದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಠಾತ್ ಆಗಿ ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್

ಇತ್ತೀಚಿಗೆ ಭಾರತದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುವ ಯುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ರೀತಿಯ ಮರಣಗಳಿಗೆ ಕೋವಿಡ್- 19 ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಏನೂ ಅರಿಯದ ಜನ ಇದನ್ನು ಸತ್ಯ ಎಂದು ನಂಬಿದ್ದಾರೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಊಹಾಪೋಹಗಳಿಗೆ ಸ್ಪಷ್ಟ ಉತ್ತರ ನೀಡಿದೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಂಯುಕ್ತವಾಗಿ ನಡೆಸಿದ ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಇದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಎಸ್.ಡಿ.ಎಂ ಕ್ಷೇಮವನದ (Kshemavana) ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ. ನರೇಂದ್ರ ಕೆ ಶೆಟ್ಟಿ (Dr Narendra K Shetty) ಅವರು ಹಂಚಿಕೊಂಡಿದ್ದಾರೆ.

ಕೋವಿಡ್ ಲಸಿಕೆಗೂ ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಸಾವಿಗೂ ಸಂಬಂಧವಿದೆಯೇ?

ಡಾ. ನರೇಂದ್ರ ಕೆ ಶೆಟ್ಟಿ ಹೇಳುವ ಪ್ರಕಾರ, ಅಧ್ಯಯನದ ಪ್ರಾಥಮಿಕ ಫಲಿತಾಂಶಗಳು ಕೋವಿಡ್- 19 ಲಸಿಕೆ ಮತ್ತು ಯುವಜನರಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಮರಣಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ವಿಶ್ಲೇಷಿಸಿದೆ. ಬದಲಾಗಿ, ಯುವಜನರಲ್ಲಿ ಕಾಣಿಸಿಕೊಳ್ಳುವ ಆಕಸ್ಮಿಕ ಹೃದಯಾಘಾತ ಮತ್ತು ಹಠಾತ್ ಆಗಿ ಸಂಭವಿಸುವ ಸಾವು (Sudden Cardiac Death – SCD) ಅನೇಕ ಕಾರಣಗಳಿಂದ ಉಂಟಾಗುತ್ತಿರಬಹುದು ಎಂದು ವಿವರಿಸಿದೆ. ಪಾಶ್ಚಾತ್ಯ ದೇಶಗಳಲ್ಲಿ ನಡೆದ ಹಲವು ಅಧ್ಯಯನಗಳು ಹೃದಯ ಸ್ನಾಯುಕೋಶದ ರೋಗಗಳು (ಕಾರ್ಡಿಯೊಮಯೋಪಥಿಗಳು) ಮತ್ತು ಹೃದಯದ ವಿದ್ಯುದ್ವಿಚಲನ ವ್ಯತ್ಯಯಗಳು (ಅರಿದಮಿಯಾಸ್) ಯುವಜನತೆಯಲ್ಲಿ ಹೆಚ್ಚುತ್ತಿರುವ ಪ್ರಮುಖ ಕಾರಣಗಳೆಂದು ಗುರುತಿಸಿವೆ. ಆದರೆ ಭಾರತೀಯ ಪರಿಸ್ಥಿತಿಯಲ್ಲಿ ಇಂತಹ ಸಮಗ್ರ ಅಧ್ಯಯನಗಳ ಕೊರತೆ ಇತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ AIIMS– ICMR ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು. ಅಧ್ಯಯನದಲ್ಲಿ ಪ್ರಾಥಮಿಕವಾಗಿ ಕಂಡುಬಂದ ಮಾಹಿತಿಗಳು, ಬದಲಾಯಿಸಲಾಗದ ಕಾರಣಗಳ ಜೊತೆಗೆ ಬದಲಾಯಿಸಬಹುದಾದ ಜೀವನಶೈಲಿ ಅಂಶಗಳು ಯುವಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಇದನ್ನೂ ಓದಿ: ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ

ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತವಾಗುವುದಕ್ಕೆ ಕಾರಣವೇನು?

ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಅಸಮರ್ಪಕ ನಿದ್ರೆ ಮತ್ತು ನಿರಂತರ ಮಾನಸಿಕ ಒತ್ತಡವು ಯುವಜನರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಮದ್ಯಪಾನ ಮತ್ತು ಧೂಮಪಾನವು ಕೊರೊನರಿ ಆರ್ಟರಿ ರೋಗ, ಹೃದಯಾಘಾತ (ಮೈಕಾರ್ಡಿಯಲ್ ಇನ್ಫಾರ್ಕ್ಷನ್) ಮತ್ತು ಹೃದಯ ಬಡಿತದ ಅಸಮತೋಲನಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದೀರ್ಘಕಾಲದ ಕೆಲಸ, ನಿರ್ದಿಷ್ಟ ಸಮಯವನ್ನು ಕೆಲಸಕ್ಕೆ ಇಡದಿರುವುದು ಮತ್ತು ಕೆಲಸದ ಒತ್ತಡವು ಹೃದಯ ರಕ್ತನಾಳ ಸಂಬಂಧಿತ ಸಂಕೀರ್ಣತೆಗಳನ್ನು ಉಂಟುಮಾಡುತ್ತವೆ. ಮಧ್ಯವಯಸ್ಕರಿಗೆ ಹೋಲಿಸಿದರೆ, ಹೃದಯಾಘಾತಕ್ಕೆ ಒಳಗಾಗುವ ಯುವ ವಯಸ್ಕರು ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸಿರುವುದು ವರದಿಯಲ್ಲಿ ಬಹಿರಂಗವಾಗಿದ್ದು, ಒತ್ತಡ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ದಾರಿ ಮಾಡಿಕೊಡುವ ಪ್ರಮುಖ ಕಾರಣ ಎಂಬುದು ತಿಳಿದು ಬಂದಿದೆ.

ಲಸಿಕೆಗಳ ಕುರಿತು ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಮಾತ್ರವಲ್ಲದೆ, ತಡೆಗಟ್ಟಬಹುದಾದ ಅಪಾಯಕಾರಕ ಅಂಶಗಳತ್ತ ಗಮನ ಹರಿಸಬೇಕಾಗಿದೆ. ಅದಕ್ಕಾಗಿಯೇ ಯುವಜನರಲ್ಲಿ ಮುಂಚಿತ ತಪಾಸಣೆ, ಆರೋಗ್ಯಕರ ಜೀವನಶೈಲಿಯ ಅಳವಡಿಕೆ, ಸಕಾರಾತ್ಮಕ ಕೆಲಸದ ವಾತಾವರಣ ನಿರ್ಮಾಣ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಅಕಾಲಿಕ ಮರಣಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಭಾರತದಲ್ಲಿ ಯುವ ವಯಸ್ಕರ ಆಕಸ್ಮಿಕ ಮರಣಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಇಂತಹ ಅಧ್ಯಯನಗಳ ಆಧಾರದ ಮೇಲೆ ರೂಪುಗೊಳ್ಳುವ ಸ್ಪಷ್ಟ ಉತ್ತರ ಯುವಜನರ ಅಮೂಲ್ಯ ಜೀವಗಳನ್ನು ರಕ್ಷಿಸಲು ಸಹಾಯಕವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಕುತೂಹಲಕಾರಿ ತುಲನೆ

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದಾಖಲೆಯ 4.48 ಲಕ್ಷ ಕೋಟಿ ರೂ ಗಾತ್ರದ ಬಜೆಟ್ (Karnataka Budget) ಮಂಡಿಸಿದ್ದಾರೆ. ದೇಶದ ಅತಿದೊಡ್ಡ ಬಜೆಟ್ ಮಂಡಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ ದಾಟಿರುವ ಆರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ ಕರ್ನಾಟಕವೇ ಅತಿ ದೊಡ್ಡ ಗಾತ್ರದ ಬಜೆಟ್ ಮಂಡಿಸಿರುವುದು.

ಅತಿದೊಡ್ಡ ಬಜೆಟ್ ಮಂಡಿಸಿರುವ ಪ್ರಮುಖ ರಾಜ್ಯಗಳಿವು

  1. ಉತ್ತರಪ್ರದೇಶ: 9.12 ಲಕ್ಷ ಕೋಟಿ ರೂ (2026-27)
  2. ಮಹಾರಾಷ್ಟ್ರ: 7 ಲಕ್ಷ ಕೋಟಿ ರೂ (2025-26)
  3. ರಾಜಸ್ಥಾನ: 6.11 ಲಕ್ಷ ಕೋಟಿ ರೂ (2026-27)
  4. ಕರ್ನಾಟಕ: 4.48 ಲಕ್ಷ ಕೋಟಿ ರೂ (2026-27)
  5. ತಮಿಳುನಾಡು: 4.39 ಲಕ್ಷ ಕೋಟಿ ರೂ (2025-26)
  6. ಗುಜರಾತ್: 4.08 ಲಕ್ಷ ಕೋಟಿ ರೂ (2026-27)
  7. ಪಶ್ಚಿಮ ಬಂಗಾಳ: 4.06 ಲಕ್ಷ ಕೋಟಿ ರೂ (2026-27 ಮಧ್ಯಂತರ ಬಜೆಟ್)
  8. ಆಂಧ್ರಪ್ರದೇಶ: 3.32 ಲಕ್ಷ ಕೋಟಿ ರೂ (2026-27)
  9. ಬಿಹಾರ್: 3.47 ಲಕ್ಷ ಕೋಟಿ ರೂ (2026-27)
  10. ಒಡಿಶಾ: 2.90 ಲಕ್ಷ ಕೋಟಿ ರೂ (2025-26)

ಇದನ್ನೂ ಓದಿ: Karnataka Budget 2026: ಬಜೆಟ್​ನಲ್ಲಿ ಇಲಾಖಾವಾರು ಹಣ ಹಂಚಿಕೆ: ಯಾವ ಕ್ಷೇತ್ರಕ್ಕೆ ಎಷ್ಟು ಪಾಲು?

ಇಲ್ಲಿ ಮೇಲಿನ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ತಮಿಳುನಾಡಿನ ಬಜೆಟ್ ಗಾತ್ರ 2025-26ರ ಸಾಲಿನದ್ದು. ಈ ವರ್ಷ ಅದರ ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ ಇದೆ. ಹೀಗಾಗಿ, ಅತಿದೊಡ್ಡ ಬಜೆಟ್ ಗಾತ್ರ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಐದನೇ ಸ್ಥಾನ ಪಡೆಯಬಹುದು.

ಉತ್ತರಪ್ರದೇಶವು ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದೆನಿಸಿದೆಯಾದರೂ ಅದರ ಭೌಗೋಳಿಕ ಗಾತ್ರ ವಿಶಾಲವಾಗಿದೆ. ಹೀಗಾಗಿ, ಅದರ ಜಿಡಿಪಿಯೂ ಕೂಡ ಅತಿದೊಡ್ಡದು. ಸಹಜವಾಗಿ ಅದರ ಬಜೆಟ್ ಗಾತ್ರವೂ ಹೆಚ್ಚಿದೆ. ಆದರೆ, ಗಮನಾರ್ಹ ಸಂಗತಿ ಎಂದರೆ, ಜಿಡಿಪಿ ಗಾತ್ರಕ್ಕೆ ಬಜೆಟ್ ಗಾತ್ರವನ್ನು ಹೋಲಿಸಿದಾಗ ಉತ್ತರಪ್ರದೇಶ ವಿಶೇಷವಾಗಿ ನಿಲ್ಲುತ್ತದೆ. ಅದರ ಬಜೆಟ್ ಗಾತ್ರವು ರಾಜ್ಯ ಜಿಡಿಪಿ ಶೇ. 25ಕ್ಕಿಂತಲೂ ಹೆಚ್ಚಿದೆ. ಇದಕ್ಕೆ ಹೋಲಿಸಿದರೆ, ಕರ್ನಾಟಕದ ಬಜೆಟ್ ಗಾತ್ರವು ಶೇ. 15ರ ಆಸುಪಾಸಿನಷ್ಟಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸೈನ್ಸ್ ಸಿಟಿ, ಎಲ್ಲಾ ಜಿಲ್ಲೆಗಳಲ್ಲಿ ಸೈನ್ಸ್ ಸೆಂಟರ್, 11 ಜಿಲ್ಲೆಗಳಲ್ಲಿ ಪ್ಲಾನಿಟೇರಿಯಂ ಸ್ಥಾಪನೆ: ಸಿದ್ದರಾಮಯ್ಯ

ಉತ್ತಮ ಆರ್ಥಿಕತೆ ಹೊಂದಿರುವ ರಾಜ್ಯಗಳ ಬಜೆಟ್ ಗಾತ್ರ ಸಾಮಾನ್ಯವಾಗಿ ಶೇ. 15ಕ್ಕಿಂತ ಕಡಿಮೆ ಇರುತ್ತದೆ. ಹಿಂದುಳಿದ ರಾಜ್ಯಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದಿಂದ ಹೆಚ್ಚು ಹೂಡಿಕೆ ಬೇಕಾಗುತ್ತದೆ. ಅಂಥ ರಾಜ್ಯಗಳಲ್ಲಿ ಬಜೆಟ್ ಗಾತ್ರ ಶೇ. 15ಕ್ಕಿಂತಲೂ ಹೆಚ್ಚಿರುತ್ತದೆ ಎಂಬುದು ಆರ್ಥಿಕ ತಜ್ಞರ ಅನಿಸಿಕೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಂಧ್ರದಲ್ಲೂ 13 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ

ನವದೆಹಲಿ, ಮಾರ್ಚ್ 6: ಆಂಧ್ರಪ್ರದೇಶವು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸುವಂತಿಲ್ಲ ಎಂದು ಘೋಷಿಸಿದೆ. ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (CM Chandrababu Naidu) ಈ ಬಗ್ಗೆ ಆದೇಶ ಹೊರಡಿಸಿದ್ದು, ಹೊಸ ನಿಯಮವನ್ನು ಮುಂದಿನ 3 ತಿಂಗಳುಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದಿದ್ದಾರೆ. ಈ ನಿರ್ಬಂಧಗಳನ್ನು ಅವರು 16 ವರ್ಷ ವಯಸ್ಸಿನವರೆಗಿನ ಮಕ್ಕಳಿಗೂ ವಿಸ್ತರಿಸುವ ಸುಳಿವು ನೀಡಿದ್ದಾರೆ.

ಇದು ಮಕ್ಕಳು ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರ ದುಷ್ಪರಿಣಾಮದ ಬಗ್ಗೆ ಸರ್ಕಾರ ಗಮನಹರಿಸಿದ್ದು, ಶಿಕ್ಷಕರು ಮತ್ತು ತಜ್ಞರು ಮಾನಸಿಕ ಆರೋಗ್ಯ ಸಮಸ್ಯೆಗಳು, ಸ್ಮಾರ್ಟ್‌ಫೋನ್ ವ್ಯಸನ, ಶ್ರೇಣಿಗಳನ್ನು ಕಳೆದುಕೊಳ್ಳುವುದು ಮತ್ತು ಸೈಬರ್‌ಬುಲ್ಲಿಂಗ್‌ನ ಅಪಾಯಗಳು ಮತ್ತು ಗೌಪ್ಯತೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ, ಸಣ್ಣ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸುವ ಮೂಲಕ, ಸರ್ಕಾರವು ಮಕ್ಕಳಿಗೆ ಸುರಕ್ಷಿತ ಡಿಜಿಟಲ್ ಜಗತ್ತನ್ನು ನೀಡುವ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಒತ್ತು ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಆಸ್ತಿ ನೋಂದಣಿಗೆ ಜನರ ಅಲೆದಾಟ ತಪ್ಪಿಸಲು ಬಜೆಟ್​ನಲ್ಲಿ ಮಹತ್ವದ ಘೋಷಣೆ

ವಿಶೇಷವೆಂದರೆ, ಆಂಧ್ರಪ್ರದೇಶಕ್ಕಿಂತ ಮೊದಲು ಕರ್ನಾಟಕ ಸರ್ಕಾರ ಕೂಡ ಈ ಬಗ್ಗೆ ಕಾಳಜಿ ವಹಿಸಿತ್ತು. ಇಂದು ಬಜೆಟ್ ಮಂಡನೆಯ ಸಮಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿಧಾನಸಭೆಯಲ್ಲಿ ಎದ್ದುನಿಂತು 16 ವರ್ಷದೊಳಗಿನ ಎಲ್ಲರಿಗೂ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವುದಾಗಿ ಹೇಳಿದ್ದರು. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನದ ಸಮಸ್ಯೆಯನ್ನು ತಡೆಯುವುದು ನಮ್ಮ ಗುರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Budget 2026: ಸಮಾಜ ಕಲ್ಯಾಣ ಇಲಾಖೆಯ 2,500 ಹುದ್ದೆ ಭರ್ತಿ ಮಾಡಲು ಸರ್ಕಾರ ನಿರ್ಧಾರ

2026ನೇ ಕರ್ನಾಟಕ ಬಜೆಟ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. 2026-27ನೇ ಸಾಲಿನಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ 1500 ಕೋಟಿ ರೂ. ಒದಗಿಸಲಾಗುವುದು. ಜೊತೆಗೆ ಈ ಇಲಾಖೆಗಳಲ್ಲಿ ಖಾಲಿ ಇರುವ 2500 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣಕ್ಕೆ ನೀಡುವ ಮೊತ್ತವನ್ನು 75 ಸಾವಿರದಿಂದ 1.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಫಾಸ್ಟ್ ಫುಡ್ ಟ್ರಕ್, ಮೊಬೈಲ್ ಕಿಚನ್ ಇತ್ಯಾದಿಗಳಿಗೆ 4 ಲಕ್ಷದವರೆಗೆ ಸಹಾಯಧನ ದೊರೆಯಲಿದೆ. ಬೆಂಗಳೂರಿನ ಸುಮನಹಳ್ಳಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಸೌಧ ಸಂಕೀರ್ಣ ನಿರ್ಮಿಸಲಾಗುವುದು. ಅಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 50 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್! 90 ದಿನಗಳ ಮಾತೃತ್ವ ರಜೆ ಘೋಷಣೆ

ಬೆಂಗಳೂರು, ಮಾರ್ಚ್​ 06: ಕರ್ನಾಟಕದ 2026–27ನೇ ಸಾಲಿನ ಬಜೆಟ್  (Karnataka Budget) ಮಂಡನೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ ಸೌಲಭ್ಯವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ರಜೆ ಸೌಲಭ್ಯವನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಈ ಕ್ರಮದಿಂದ ರಾಜ್ಯದ ಸಾವಿರಾರು ಮಹಿಳಾ ಅತಿಥಿ ಉಪನ್ಯಾಸಕರಿಗೆ ನೆರವಾಗಲಿದೆ. ಇದುವರೆಗೆ ಅತಿಥಿ ಉಪನ್ಯಾಸಕರಿಗೆ ಮಾತೃತ್ವ ರಜೆಯ ಕುರಿತು ಸ್ಪಷ್ಟ ಸೌಲಭ್ಯ ಇರಲಿಲ್ಲ ಎಂಬ ಕಾರಣದಿಂದ ಹಲವು ಮಹಿಳಾ ಉಪನ್ಯಾಸಕರು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಸರ್ಕಾರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ 90 ದಿನಗಳ ಮಾತೃತ್ವ ರಜೆ ಸೌಲಭ್ಯ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಇದರ ಮೂಲಕ ಮಹಿಳಾ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ಸಹಕಾರವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ !

ಅಲ್ಲದೇ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ಮುಂದುವರಿಸಲಾಗುವುದಾಗಿ ಅವರು ತಿಳಿಸಿದ್ದಾರೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ವತಿಯಿಂದ 2025–26ನೇ ಸಾಲಿನಲ್ಲಿ ಉನ್ನತ ಶಿಕ್ಷಣಕ್ಕಾಗಿ 37 ಸಾವಿರ ವಿದ್ಯಾರ್ಥಿನಿಯರಿಗೆ ವಾರ್ಷಿಕ 30 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಬಾರದ ಉಳಿದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ವತಿಯಿಂದ ‘ದೀಪಿಕಾ ವಿದ್ಯಾರ್ಥಿ ವೇತನ ಯೋಜನೆ’ ಅಡಿಯಲ್ಲಿ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್​ಡೇಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರ‍್ಯಾಗಿಂಗ್​ನಿಂದ ನೊಂದ ಕೋತಿಮರಿಗೆ ಅಮ್ಮನಾದ ಗೊಂಬೆ!

ನವದೆಹಲಿ, ಮಾರ್ಚ್ 5: ಈ ವಿಡಿಯೋ ಎಲ್ಲಿ ಚಿತ್ರೀಕರಿಸಲ್ಪಟ್ಟಿದ್ದು ಎಂಬುದು ತಿಳಿದಿಲ್ಲ. ಆದರೆ, ಈ ವಿಡಿಯೋ (Video Viral) ನೋಡಿದರೆ ಕಣ್ಣಂಚು ಒದ್ದೆಯಾಗುವುದು ಗ್ಯಾರಂಟಿ. ಕೋತಿಮರಿಯೊಂದು ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ದೊಡ್ಡ ಕೋತಿ ಆ ಮರಿಯನ್ನು ಗಿರಗಿರನೆ ತಿರುಗಿಸಿ ಬಿಸಾಡುತ್ತದೆ, ಹಿಂಸೆ ನೀಡುತ್ತದೆ. ಇದರಿಂದ ನೋವಾಗಿ ಓಡಿದ ಮರಿಕೋತಿ ಕಲ್ಲುಬಂಡೆಯ ಹಿಂದಿದ್ದ ಕೋತಿಯ ಗೊಂಬೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಹೆದರಿ ಬಚ್ಚಿಟ್ಟುಕೊಳ್ಳುತ್ತದೆ. ಆ ಕ್ಷಣಕ್ಕೆ ಆ ಮರಿಕೋತಿಗೆ ಆ ಗೊಂಬೆಯೇ ಸಾಂತ್ವನ ನೀಡುವ ಅಮ್ಮನಾಗುತ್ತದೆ!

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕರ್ನಾಟಕ ಬಜೆಟ್ 2026: ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು?

ಸಿಎಂ ಸಿದ್ದರಾಮಯ್ಯ (Siddaramaiah) ಅವರು ದಾಖಲೆಯ 17ನೇ ಬಾರಿ ಕರ್ನಾಟಕ ಬಜೆಟ್ ಅನ್ನು ಇಂದು (ಮಾರ್ಚ್ 06) ಮಂಡಿಸಿದರು. ಹಲವಾರು ಕ್ಷೇತ್ರಗಳಿಗೆ ಹಲವು ಅನುದಾನ, ಯೋಜನೆಗಳನ್ನು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ನಿರೀಕ್ಷೆಯಂತೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಕೃಷಿ ಇನ್ನಿತರೆ ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಕನ್ನಡ ಚಿತ್ರರಂಗವೂ ಸಹ ಈ ಬಾರಿಯ ಬಜೆಟ್​​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು. ಹಾಗಿದ್ದರೆ ಬಜೆಟ್​​ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು? ಮಾಹಿತಿ ಇಲ್ಲಿದೆ…

ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೊಗ್ರಫಿ ಕೋರ್ಸುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು ಎಂದು ಸಿಎಂ ಅವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರೆ ಚಿತ್ರೀಕರಣಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಒಂದೇ ವೇದಿಕೆಯಲ್ಲಿ ನೀಡುವ ಸಲುವಾಗಿ ‘ಸಿನಿ ಮಿತ್ರ’ ಎಂಬ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್​​ನಲ್ಲಿ ಘೋಷಿಸಲಾಗಿದೆ. ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಇದರಿಂದ ಸುಲಭವಾಗುವ ಜೊತೆಗೆ ನಿಯಮಗಳ ಪಾಲನೆ ಕಡ್ಡಾಯ ಆಗಲಿದೆ.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಟ್ರೈಲರ್: ಸಜ್ಜಾಗಿ ಎಂದ ರಣ್ವೀರ್

ಗುಣಾತ್ಮಕ ಚಲನಚಿತ್ರಗಳಿಗೆ ನೀಡಲಾಗುತ್ತಿದ್ದ ಸಹಾಯಧನವು ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, 2025-26 ನೇ ಸಾಲಿನಲ್ಲಿ ಮೂರು ವರ್ಷಗಳ ಚಲನಚಿತ್ರಗಳನ್ನು ಗುರುತಿಸಿ ನಮ್ಮ ಸರ್ಕಾರದಲ್ಲಿ ಸಹಾಯಧನವನ್ನು ನೀಡಲಾಗಿರುತ್ತದೆ. ಪ್ರಸಕ್ತ ಸಾಲಿಗೆ ಉಳಿದ ಮೂರು ವರ್ಷಗಳ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಹಾಯಧನವನ್ನು ನೀಡಲು 20 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ಮೈಸೂರು ಫಿಲ್ಮ್ ಸಿಟಿಯನ್ನು ಸ್ಥಾಪಿಸಲು ಈ ಸಾಲಿನಲ್ಲಿ 500 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಫಿಲ್ಮ್ ಸಿಟಿ ಸೌಲಭ್ಯಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ ಮತ್ತು ರೆಸಾರ್ಟ್‌ಗಳನ್ನು ಒಳಗೊಂಡ PPP (ಪಬ್ಲಿಕ್ ಪ್ರೈವೇಟ್ ಪಾರ್ಟನರ್​​ಶಿಪ್) ಮಾದರಿಯಲ್ಲಿ ಅಭಿವೃದ್ಧಿಗೆ ಅನುಮೋದನೆ ನೀಡಿ ವ್ಯವಹಾರ ನಡೆಸಬೇಕೆಂದು ತೀರ್ಮಾನಿಸಲಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ಮತ್ತು ಲಿಜೆಂಡರಿ ನಿರ್ದೇಶಕ ಆಗಿರುವ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​​ನಲ್ಲಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link