ನವದೆಹಲಿ, ಮಾರ್ಚ್ 6: ದಕ್ಷಿಣ ದೆಹಲಿಯಲ್ಲಿ 33 ಮತ್ತು 28 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ನಿಗೂಢವಾಗಿ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಮಾಲ್ವಿಯಾ ನಗರದ ಅವರ ಮನೆಯ ಬಾಗಿಲು ಒಡೆದು ನೋಡಿದ ನಂತರ ಅವರ 55 ವರ್ಷದ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ (Delhi Crime News) ಯತ್ನಿಸುವ ಮೊದಲು ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿರಬಹುದು ಎಂಬುದು ಪೊಲೀಸರ ಅನುಮಾನ. ಆದರೆ ಆ ಮಹಿಳೆಗೆ ಪ್ರಜ್ಞೆ ಬಂದ ನಂತರವೇ ನಡೆದ ಘಟನೆಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಗುರುವಾರ ಸಂಜೆ ಮೃತರ ಮನೆಗೆ ಹೋಗಿದ್ದ ಸಂಬಂಧಿಕರು ಎಷ್ಟೇ ಬಾಗಿಲು ಬಡಿದರೂ ಡೋರ್ ಓಪನ್ ಆಗಲಿಲ್ಲ. ಇದರಿಂದ ಅನುಮಾಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೆಹಲಿ ಪೊಲೀಸರ ತಂಡವು ಸ್ಥಳಕ್ಕೆ ತಲುಪಿ ಬಾಗಿಲು ಒಡೆದು ನೋಡಿದಾಗ, ಒಬ್ಬ ಮಹಿಳೆಯ ಶವ ಮುಖದ ಮೇಲೆ ದಿಂಬನ್ನು ಇಡಲಾಗಿತ್ತು. ಮತ್ತೊಬ್ಬಳ ಕುತ್ತಿಗೆಗೆ ಗಾಯವಾಗಿತ್ತು. ಇಬ್ಬರೂ ಬೇರೆ ಬೇರೆ ರೂಂನಲ್ಲಿ ಸತ್ತುಬಿದ್ದಿದ್ದರು. ಅವರಿಬ್ಬರೂ ಸುಮಾರು 33 ಮತ್ತು 28 ವರ್ಷ ವಯಸ್ಸಿನ ಸಹೋದರಿಯರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:
ಅವರ 55 ವರ್ಷ ವಯಸ್ಸಿನ ತಾಯಿ ಮತ್ತೊಂದು ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಏಮ್ಸ್ ಟ್ರಾಮಾ ಸೆಂಟರ್ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯು ತಾಯಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವ ಮೊದಲು ಇಬ್ಬರೂ ಹೆಣ್ಣುಮಕ್ಕಳನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ.
ಅಕ್ಕ-ತಂಗಿಯರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಾಧ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಂಡಗಳು ಘಟನಾ ಸ್ಥಳವನ್ನು ಪರಿಶೀಲಿಸಿವೆ ಮತ್ತು ಪುರಾವೆಗಳನ್ನು ಸಂಗ್ರಹಿಸಿವೆ. ಆ ಮಹಿಳೆಯ ಹೇಳಿಕೆಯನ್ನು ದಾಖಲಿಸಲು ಅವರು ಪ್ರಜ್ಞೆ ಮರಳುವವರೆಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 06: ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಜೆಟ್ (Budget) ಮಂಡಿಸಿದ್ದಾರೆ. 3 ಗಂಟೆ 30 ನಿಮಿಷಗಳ ಕಾಲ ಭಾಷಣ ಮಾಡಿದ ಸಿಎಂ, ಮಕ್ಕಳಿಂದ ವೃದ್ಧರವರೆಗೂ ಎಲ್ಲರಿಗೂ ಒಂದೊಂದು ಕೊಡುಗೆ ನೀಡಿದ್ದಾರೆ. ಆದರೆ ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದೆ. ಮದ್ಯದ ಅಂಶ ಆಧರಿಸಿ ತೆರಿಗೆ ವಿಧಿಸಲು ನಿರ್ಧಾರ ಮಾಡಿರೋದು ದರ ಹೆಚ್ಚಳದ ಸುಳಿವು ಕೊಟ್ಟಿದೆ. ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ಸಂಗ್ರಹದ ಗುರಿ ನೀಡಿದೆ. ಸದ್ಯ ಸರ್ಕಾರ ನೀಡಿರುವ ಟಾರ್ಗೆಟ್ ಬಗ್ಗೆ ಮದ್ಯ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಮನ್ನಣೆಯನ್ನೇ ನೀಡಿಲ್ಲ: ಲೋಕೇಶ್
ಈ ಬಗ್ಗೆ ಬೆಂಗಳೂರು ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಪ್ರತಿಕ್ರಿಯಿಸಿದ್ದು, 2026-27ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 45,000 ಕೋಟಿ ರೂ ಟಾರ್ಗೆಟ್, ಯಾವ ಅಂಶ ಇಟ್ಟುಕೊಂಡು ಇಷ್ಟು ಆದಾಯ ನಿರೀಕ್ಷಿಸಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಅಬಕಾರಿ ಆದಾಯ 2-3 ಸಾವಿರ ಕೋಟಿ ಖೋತಾ ಎಂಬ ಮಾಹಿತಿ. ಇರುವ ಸ್ಲ್ಯಾಬ್ಗಳನ್ನು ಮತ್ತಷ್ಟು ಇಳಿಕೆ ಮಾಡುವ ಬಗ್ಗೆ ತೀರ್ಮಾನವಾಗಿದೆ. ಸರ್ಕಾರದ ಹೊಸ ಅಬಕಾರಿ ನೀತಿ ಬಗ್ಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಮನ್ನಣೆಯನ್ನೇ ನೀಡಿಲ್ಲ. CL2, CL7, CL5ಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ತಿದ್ದುಪಡಿ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ
ಇನ್ನು ರಾಜ್ಯ ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ ವ್ಯಕ್ತವಾಗಿದೆ. ಅಬಕಾರಿ ನೀತಿ ಬದಲಾವಣೆ ವಿರುದ್ಧ ಮದ್ಯ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟಿವಿ9ಗೆ ಮದ್ಯ ವ್ಯಾಪಾರಿ ಮಹದೇವಗೌಡ ಹೇಳಿಕೆ ನೀಡಿದ್ದು, ಸದ್ಯ ಚಾಲ್ತಿಯಲ್ಲಿರುವ ಅಬಕಾರಿ ನೀತಿಯನ್ನೇ ಮುಂದುವರಿಸಬೇಕಿತ್ತು. ಹೊಸ ಅಬಕಾರಿ ನೀತಿಯಲ್ಲಿ ಆಗುವ ಬದಲಾವಣೆಯಿಂದ ಸಮಸ್ಯೆ ಹೆಚ್ಚುತ್ತೆ ಎಂದಿದ್ದಾರೆ.
ಮದ್ಯದ ಅಂಶದ ಮೇಲೆ ಸುಂಕ ನಿಗದಿ ಅಂದರೆ ದರದಲ್ಲಿ ವ್ಯತ್ಯಾಸವಾಗುತ್ತೆ. ತಮ್ಮ ಉತ್ಪನ್ನ ಇಂತಹ ಸ್ಲ್ಯಾಬ್ಗಳಲ್ಲಿ ಬರಬೇಕೆಂದು ಉತ್ಪಾದಕರು ನಿಗದಿ ಮಾಡಿದರೆ ಸರಿಹೋಗಲ್ಲ. ಬೆಲೆ ನಿಗದಿಯಲ್ಲಿ ಅಬಕಾರಿ ಇಲಾಖೆ ಹಸ್ತಕ್ಷೇಪ ಇಲ್ಲವಾದರೆ ಸಮಸ್ಯೆ. ಅಂತಿಮವಾಗಿ ವರ್ತಕರು ಮತ್ತು ಗ್ರಾಹಕರ ಮೇಲೆ ಹೊಡೆತ ಬೀಳಲಿದೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಇಂದು (ಮಾರ್ಚ್ 6) 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಜಾನ್ವಿ ಆಗಮಿಸಿದ್ದರು. ಆದರೆ ಈ ಬಾರಿ ಅವರು ಕೇವಲ ದರ್ಶನ ಪಡೆಯುವುದಲ್ಲದೆ, ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ತಿರುಪತಿ ಬೆಟ್ಟ ಹತ್ತುವಾಗ ಜಾನ್ವಿ ಅವರು ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದರು.
ಸುಮಾರು 9ರಿಂದ 12 ಕಿಲೋಮೀಟರ್ ದೂರದ ಈ ಹಾದಿಯನ್ನು ಕ್ರಮಿಸಲು ಅವರಿಗೆ 4ರಿಂದ 5 ಗಂಟೆಗಳು ಬೇಕಾಯಿತು. ಜಾನ್ವಿ ಅವರ ಈ ಭಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಸರಳತೆಯಲ್ಲಿ ನೀವು ನಿಮ್ಮ ತಾಯಿ ಶ್ರೀದೇವಿಯಂತೆಯೇ ಕಾಣುತ್ತಿದ್ದೀರಿ’ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಬಾರಿ ಜಾನ್ವಿ ಕಪೂರ್ ಅವರ ಆಪ್ತ ಗೆಳೆಯನ ಅನುಪಸ್ಥಿತಿ ಕಾಣಿಸಿದೆ. ಸಾಮಾನ್ಯವಾಗಿ ಜಾನ್ವಿ ತಿರುಪತಿಗೆ ಭೇಟಿ ನೀಡುವಾಗ ಅವರ ಗೆಳೆಯ ಶಿಖರ್ ಪಹರಿಯಾ ಜೊತೆಗಿರುತ್ತಿದ್ದರು. ಆದರೆ ಈ ಬಾರಿ ಶಿಖರ್ ಬದಲಿಗೆ ಜಾನ್ವಿ ಬೇರೆ ಸ್ನೇಹಿತರೊಂದಿಗೆ ಬೆಟ್ಟ ಹತ್ತಿರುವುದು ವಿಶೇಷವಾಗಿತ್ತು. ಪ್ರತಿ ವರ್ಷ ತಮ್ಮ ತಾಯಿ ಶ್ರೀದೇವಿಯವರ ಜನ್ಮದಿನದಂದೂ ಜಾನ್ವಿ ಮಿಸ್ ಮಾಡದೆ ತಿರುಪತಿಗೆ ಭೇಟಿ ನೀಡುತ್ತಾರೆ.
ತಮ್ಮ ಆಧ್ಯಾತ್ಮಿಕ ನಂಬಿಕೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಜಾನ್ವಿ, ‘ಕಳೆದ 5-6 ವರ್ಷಗಳಿಂದ ನಾನು ಹೆಚ್ಚು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದೇನೆ. ನನಗೆ ವೆಂಕಟೇಶ್ವರ ಸ್ವಾಮಿಯ ಮೇಲೆ ಅಪಾರ ನಂಬಿಕೆ. ಯಾವಾಗ ಒಳಗಿನಿಂದ ಕರೆ ಬರುತ್ತದೆಯೋ, ಆಗ ನಾನು ತಿರುಪತಿಗೆ ಬಂದು ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆಯುತ್ತೇನೆ’ ಎಂದು ಹೇಳಿಕೊಂಡಿದ್ದರು.
ಸಿನಿಮಾಗಳ ಬಗ್ಗೆ ಹೇಳೋದಾದರೆ, 2025ರಲ್ಲಿ ಜಾನ್ವಿ ಕಪೂರ್ ನಟನೆಯ ‘ಹೋಮ್ಬೌಂಡ್’, ‘ಪರಮ್ ಸುಂದರಿ’ ಹಾಗೂ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾಗಳು ಬಿಡುಗಡೆಯಾಗಿದ್ದವು. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಕಡೆಗೂ ಅವರು ಮುಖ ಮಾಡಿದ್ದಾರೆ. ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ಏಪ್ರಿಲ್ 30ರಂದು ಆ ಚಿತ್ರ ತೆರೆಕಾಣಲಿದೆ.
ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು (ಮಾರ್ಚ್ 06)ಕರ್ನಾಟಕದ 2026ನೇ ಸಾಲಿನ ಬಜೆಟ್ (Karnataka Budget 2026) ಮಂಡನೆ ಮಾಡಿದ್ದಾರೆ. ಒಟ್ಟು 4.48 ಲಕ್ಷ ಕೋಟಿ ರೂಪಾಯಿಯ ತಮ್ಮ 17ನೇ ಬಜೆಟ್ ಮಂಡನೆ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದು ಜನಪರವಾದ ಬಜೆಟ್ ಎಂದು ಆಡಳಿತ ಪಕ್ಷ ಮೆಚ್ಚುಗೆ ಸೂಚಿಸದರೆ, ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲದ ಬಜೆಟ್ ಇದಾಗಿದೆ ಎಂದು ವಿಪಕ್ಷ ಟೀಕಿಸಿದೆ. ಇನ್ನ ಬಜೆಟ್ ಬಳಿಕ ಸಿಎಂ ಸಿದ್ದರಾಮ್ಯಯ ಸುದ್ದಿಗೋಷ್ಠಿ ನಡೆಸಿದ್ದು, ನೇರಪ್ರಸಾರ ಇಲ್ಲಿದೆ ನೋಡಿ.
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈ ಮತ್ತು ಮುಖದ ಮೇಲಿನ ಮಚ್ಚೆಗಳು ವ್ಯಕ್ತಿಯ ಅದೃಷ್ಟ, ಸಂಪತ್ತು ಮತ್ತು ಜೀವನದ ಯಶಸ್ಸಿನ ಪಥವನ್ನು ಸೂಚಿಸುತ್ತವೆ. ವಿಶೇಷವಾಗಿ ಅಂಗೈಯಲ್ಲಿರುವ ಮಚ್ಚೆಗಳು ಅಪಾರ ಐಶ್ವರ್ಯದ ಸಂಕೇತವೆಂದು ನಂಬಲಾಗಿದೆ. ಹಾಗಾದರೆ, ಈ ಮಚ್ಚೆಗಳು ವ್ಯಕ್ತಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅಂಗೈಯ ಮಧ್ಯಭಾಗದ ಮಚ್ಚೆ: ಅದೃಷ್ಟದ ಲಕ್ಷಣ:
ಅಂಗೈಯ ಮಧ್ಯಭಾಗದಲ್ಲಿ ಮಚ್ಚೆ ಇರುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಬಹಳ ಬೇಗನೆ ಆರ್ಥಿಕ ಸ್ಥಿರತೆಯನ್ನು ಮತ್ತು ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ. ಕೇವಲ ಹಣವಷ್ಟೇ ಅಲ್ಲದೆ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಗಳಿಸುವ ಯೋಗ ಇವರಿಗಿರುತ್ತದೆ. ಒಂದು ಕುತೂಹಲಕಾರಿ ವಿಷಯವೆಂದರೆ, ಇವರು ತಮ್ಮ ಮುಷ್ಟಿಯನ್ನು ಮುಚ್ಚಿದಾಗ ಆ ಮಚ್ಚೆ ಅದೃಶ್ಯವಾಗುತ್ತದೆಯೋ, ಅಂತಹವರು ಅತೀ ಅದೃಷ್ಟಶಾಲಿಗಳು. ಸಾಮುದ್ರಿಕ ಶಾಸ್ತ್ರದಲ್ಲಿ ಇದನ್ನು ‘ಅಪರಿಮಿತ ಸಂಪತ್ತಿನ ಭಂಡಾರ’ ಎಂದೇ ಕರೆಯಲಾಗುತ್ತದೆ.
ಏಳು ತಲೆಮಾರುಗಳ ಸಂಪತ್ತು ಮತ್ತು ಲಕ್ಷ್ಮಿಯ ಕೃಪೆ:
ಬಲ ಅಂಗೈಯಲ್ಲಿ ಸ್ಪಷ್ಟ ಮತ್ತು ಆಳವಾದ ಮಚ್ಚೆಯನ್ನು ಹೊಂದಿರುವವರು ಬಹಳ ವಿರಳ ಮತ್ತು ವಿಶೇಷ. ನಂಬಿಕೆಯ ಪ್ರಕಾರ, ಇಂತಹವರ ಕುಟುಂಬವು ಏಳು ತಲೆಮಾರುಗಳವರೆಗೆ ಆರ್ಥಿಕ ಕೊರತೆಯನ್ನು ಕಾಣುವುದಿಲ್ಲ. ಇವರು ಸಂಪತ್ತನ್ನು ಕೇವಲ ಗಳಿಸುವುದಷ್ಟೇ ಅಲ್ಲ, ಅದನ್ನು ವೃದ್ಧಿಸುವ ಚಾಕಚಕ್ಯತೆಯನ್ನೂ ಹೊಂದಿರುತ್ತಾರೆ. ಮಾನಸಿಕವಾಗಿ ದೃಢವಾಗಿರುವ ಇವರು, ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ.
ಅಂಗೈಯಲ್ಲಿ ಮಚ್ಚೆ ಇರುವವರು ಜೀವನದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಇವರಲ್ಲಿರುವ ದೃಢ ನಿಶ್ಚಯ ಮತ್ತು ಅದೃಷ್ಟದ ಬಲದಿಂದ, ಇವರು ವಿಶೇಷವಾಗಿ ಸರ್ಕಾರಿ ಉದ್ಯೋಗಗಳಲ್ಲಿ ಅಥವಾ ಆಡಳಿತಾತ್ಮಕ ಹುದ್ದೆಗಳಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸುತ್ತಾರೆ. ಇವರು ಎಲ್ಲಿಯೇ ಹೋದರೂ, ಅಲ್ಲಿನ ಪರಿಸರದಲ್ಲಿ ತಮ್ಮದೇ ಆದ ಪ್ರಭಾವವನ್ನು ಬೀರಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಾಟ್ನಾ, ಮಾರ್ಚ್ 6: ಬಿಹಾರದಲ್ಲಿ ಹೊಸ ರಾಜ್ಯ ಸರ್ಕಾರ ರಚನೆ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ತಕ್ಷಣ ರಾಜೀನಾಮೆ ನೀಡುವ ಸಾಧ್ಯತೆಯಿಲ್ಲ. ಏಪ್ರಿಲ್ 10ರವರೆಗೆ ಅವರು ಅಧಿಕಾರದಲ್ಲಿ ಮುಂದುವರಿಯಬಹುದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನಿತೀಶ್ ಕುಮಾರ್ ನಡುವೆ ರಾಜಕೀಯ ಪರಿವರ್ತನೆಯ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾದ ನಂತರವೇ ಸಿಎಂ ಸ್ಥಾನದ ಬದಲಾವಣೆಯಾಗುವ ನಿರೀಕ್ಷೆಯಿದೆ.
ರಾಜ್ಯಸಭೆಯ ಅವಧಿ ಪ್ರಾರಂಭವಾಗುವ ಏಪ್ರಿಲ್ 10ರವರೆಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಮೂಲಗಳು ಸೂಚಿಸಿವೆ. ಆ ಸಮಯದಲ್ಲಿ ಹೊಸ ಸರ್ಕಾರದ ರಚನೆಯೂ ನಡೆಯುವ ನಿರೀಕ್ಷೆಯಿದೆ. ನಿತೀಶ್ ಕುಮಾರ್ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದರು. ಬಿಹಾರದಲ್ಲಿ ಸುಮಾರು 2 ದಶಕಗಳ ಕಾಲ ಅಧಿಕಾರದಲ್ಲಿದ್ದ ನಿತೀಶ್ ಕುಮಾರ್ ಕ್ರಮೇಣ ರಾಷ್ಟ್ರೀಯ ರಾಜಕೀಯದತ್ತ ಗಮನ ಹರಿಸಬಹುದೆಂಬ ಊಹಾಪೋಹಗಳಿಗೆ ಈ ಬೆಳವಣಿಗೆ ಪುಷ್ಟಿ ನೀಡಿದೆ. ಆದರೆ, ನಿತೀಶ್ ಕುಮಾರ್ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಬಗ್ಗೆ ಮೈತ್ರಿಕೂಟದೊಳಗೆ ಯಾವುದೇ ಚರ್ಚೆಗಳು ನಡೆದಿಲ್ಲ.
ಹೊಸ ಸಂಪುಟ ರಚನೆಯಲ್ಲಿ, ಜೆಡಿಯು 14 ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿಗೆ ಮುಖ್ಯಮಂತ್ರಿ ಸೇರಿದಂತೆ 13 ಸಚಿವ ಸ್ಥಾನಗಳು ಸಿಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 06: ಕರ್ನಾಟಕದ ಇತಿಹಾಸದಲ್ಲೇ ಐತಿಹಾಸಿಕ 17ನೇ ಬಜೆಟ್ ಮಂಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ್ದಾರೆ. ರೈತರು, ಮಹಿಳೆಯರು ಸೇರಿದಂತೆ ಮಕ್ಕಳಿಗೂ ಆದ್ಯತೆ ನೀಡಲಾಗಿದೆ. ಅದರಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ (Social Media Ban) ಮಾಡಲಾಗಿದೆ. ಆ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ(Lahar Singh Siroya) ಸ್ವಾಗತಿಸಿದ್ದಾರೆ.
ಸರ್ಕಾರದ ನಡೆಗೆ ಲಹರ್ ಸಿಂಗ್ ಸಿರೋಯಾ ಮೆಚ್ಚುಗೆ
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ‘ಕರ್ನಾಟಕ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ವಿಷಯವನ್ನು ನಾನು ಸಂಸತ್ತಿನಲ್ಲಿ ವಿಶೇಷ ಪ್ರಸ್ತಾಪದ ಮೂಲಕ ಧ್ವನಿ ಎತ್ತಿದ್ದೆ’ ಎಂದು ಹೇಳಿದ್ದಾರೆ.
ಲಹರ್ ಸಿಂಗ್ ಸಿರೋಯಾ ಟ್ವೀಟ್
I welcome the move of the Karnataka government to ban the use of social media for children below 16 years. I had raised this issue via a special mention in parliament (see the thread below). Prime Minister Modi had also spoken about securing the interest of our younger… https://t.co/Bxtz7YQbO2
‘ಮಕ್ಕಳಲ್ಲಿ ಸ್ಮಾರ್ಟ್ಫೋನ್ ಬಳಕೆಗೆ ಮಿತಿಗಳನ್ನು ವಿಧಿಸುವ ಅಗತ್ಯವನ್ನೂ ನನ್ನ ಸಂಸತ್ತಿನ ಭಾಷಣದಲ್ಲಿ ಪ್ರಸ್ತಾಪಿಸಿದ್ದೆ. ಈ ವಿಷಯವನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆ ನನಗಿದೆ. ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ವಿಷಯದಲ್ಲಿ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸ್ಪಷ್ಟ ಹಾಗೂ ಪರಿಣಾಮಕಾರಿ ನಿಯಮಗಳನ್ನು ರೂಪಿಸಬೇಕಾಗಿದೆ’ ಎಂದು ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.
ತುಮಕೂರು, ಮಾರ್ಚ್ 06: ಜಿಲ್ಲೆಯ ತಿಪಟೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂರು ಲಕ್ಷ ರೂ ಹಣದಾಸೆಗೆ 7 ವರ್ಷದ ಸ್ನೇಹಕ್ಕೆ ಗೆಳೆಯ ಕೊಳ್ಳಿ ಇಟ್ಟಿದ್ದಾನೆ. ಕೊಲೆ (murder)ಬಳಿಕ ಗೆಳೆಯನ ಹಣದಲ್ಲೇ ಎರಡನೇ ಪತ್ನಿಗೆ ಹೊಸ ಟಿವಿ ಖರೀದಿಸಿ ಗಿಫ್ಟ್ ನೀಡಿದ್ದ. ಅಷ್ಟೇ ಅಲ್ಲದೆ ಪತ್ನಿಯೊಂದು ಲಾಡ್ಜ್ನಲ್ಲಿ ಮಸ್ತಿ ಮಾಡಿ ಪರಾರಿಯಾಗಿದ್ದ ಭೂಪನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೊನ್ನವಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಡೆದಿದ್ದೇನು?
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಅರಣ್ಯ ಪ್ರದೇಶ. ಸುತ್ತಲೂ ಖಾಲಿ ಜಾಗ. ಎತ್ತನೋಡದರೂ ಕಾಣದ ಸೂರು. ನಿಜ ಹೇಳಬೇಕೆಂದರೇ ಅದೊಂದು ನಿರ್ಜನ ಸ್ಥಳ. ಆ ಸ್ಥಳದಲ್ಲಿ ಕಳೆದ ಫೆಬ್ರವರಿ 20ರ ಬೆಳಿಗ್ಗೆಯಂದು ಅರಣ್ಯ ಪ್ರದೇಶದಲ್ಲಿ ಹಾದು ಹೊಗುವ ದಾರಿಯ ಪಕ್ಕದಲ್ಲಿ ಅದೊಬ್ಬ ಅಪರಿಚಿತನ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಆ ವ್ಯಕ್ತಿಯ ಕತ್ತು ಸೀಳಿ ಹತ್ಯೆಗೈದಿದ್ದರು. ಅರಣ್ಯ ದಾರಿಯಲ್ಲಿ ಹೆಜ್ಜೆ ಹಾಕಿದ್ದ ಅದೊಬ್ಬ ಶವ ಕಂಡು ಬೆಚ್ಚಿ ಬಿದಿದ್ದ. ಕೂಡಲೇ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಸ್ಥಳಕ್ಕೆ ಬಂದ ಪೊಲೀಸರಿಗೆ ಗೊಂದಲ. ಕೊಲೆ ಮಾಡಿದ್ಯಾರು ಅನ್ನೊದಕ್ಕಿಂತ ಅಲ್ಲಿ ಕೊಲೆಯಾದವನು ಯಾರು ಅನ್ನೊದೇ ಪೊಲೀಸರಿಗೆ ಪ್ರಶ್ನೆಯಾಗಿತ್ತು. ಹೀಗಾಗಿ ಅಲ್ಲಿ ಸಿಕ್ಕ ಒಂದಷ್ಟು ಮಾಹಿತಿಗಳ ಮುಖಾಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ವ್ಯಕ್ತಿ ಪುಟ್ಟರಾಜು ಎಂಬುದು ಗೊತ್ತಾಗಿತ್ತು. ಇನ್ನು ಈತ ಚಿಕ್ಕಮಗಳೂರಿನ ಬೀರೂರು ನಿವಾಸಿ ಅನ್ನೊ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಲಕ್ಷ ಲಕ್ಷ ಹಣ ತಂದಿದ್ದ ಪುಟ್ಟರಾಜು
ಅಸಲಿಗೆ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತಿದ್ದ ಪುಟ್ಟರಾಜು ತುಮಕೂರು ಬಂದಿದ್ದು ಏಕೆ ಎನ್ನುವ ಗೊಂದಲದ ಜೊತೆ ಕೊಲೆಯಾಗಿದ್ದೇಕೆ ಎಂಬ ಪ್ರಶ್ನೆ ಮೂಡಿತ್ತು. ಹೀಗಾಗಿ ಕೊಲೆಯಾದವನು ಗುರುತು ಪತ್ತೆ ಬೆನ್ನಲ್ಲೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಪುಟ್ಟರಾಜು ವಿಳಾಸ ಸಿಕ್ಕಿತ್ತು. ಅಸಲಿಗೆ ಫೆಬ್ರವರಿ 19ರಂದು, ಅಂದರೆ ಕೊಲೆಯ ಹಿಂದಿನ ದಿನ ಬೆಳಿಗ್ಗೆ 11 ಗಂಟೆಗೆ ಪುಟ್ಟರಾಜು ಬಿರೂರಿನ ತನ್ನ ಮನೆಯಿಂದ ಹೊರ ಬಂದಿದ್ದ. ಈ ವೇಳೆ ಕೈನಲ್ಲಿ ಲಕ್ಷ ಲಕ್ಷ ಹಣ ಹಿಡಿದಿದ್ದ ಪುಟ್ಟರಾಜು ಹೊನ್ನವಳ್ಳಿಯ ಚಿನ್ನದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗೊದಾಗಿ ಹೇಳಿದ್ದ. ಈ ವೇಳೆ ಬಂದಿದ್ದ ಶಫೀ ಎಂಬ ಏಳು ವರ್ಷದ ಗೆಳೆಯನ ಜೊತೆ ಬೈಕ್ ಹತ್ತಿದ್ದ ಪುಟ್ಟರಾಜು ತುಮಕೂರಿನತ್ತ ಹೊರಟಿದ್ದ. ಅಷ್ಟೇ ಮರು ದಿನ ಪುಟ್ಟರಾಜು ಶವವಾಗಿ ಪತ್ತೆಯಾಗಿದ್ದ. ಆದರೆ ಈ ವೇಳೆ ಆತನ ಜೊತೆ ಹೊರಟಿದ್ದ ಗೆಳೆಯ ಶಫಿ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ. ಹೀಗಾಗಿ ಇಬ್ಬರ ಬಳಿ ಇದ್ದ ಹಣಕ್ಕಾಗಿಯೋ ಅಥವಾ ಹರಾಜು ಬಳಿಕ ತಂದ ಚಿನ್ನಕ್ಕಾಗಿಯೋ ಅಪರಿಚತರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು.
ಅಸಲಿಗೆ ಕೊಲೆಯಾದ ಪುಟ್ಟರಾಜು ಗೆಳೆಯ ಶಫೀ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯವನು. ಚಿಕ್ಕಮಗಳೂರಿನ ಬಿರೂರಿನಲ್ಲಿ ನೆಲೆಸಿದ್ದ. ಈತ ಕಬಾಬ್ ಸೆಂಟರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಈತನಿಗೆ ಪುಟ್ಟರಾಜು ಕಳೆದ ಏಳು ವರ್ಷದಿಂದ ಪರಿಚಯ. ಆರಂಭದಲ್ಲಿ ಕಬಾಬ್ ಅಂಗಡಿ ಬಳಿ ಬರುತಿದ್ದ ಪುಟ್ಟರಾಜು ನಂತರದಲ್ಲಿ ಗೆಳೆಯನಾಗಿದ್ದ. ಏಳು ವರ್ಷದ ಈ ಆತ್ಮೀಯತೆಯಲ್ಲೇ ಇಬ್ಬರ ನಡುವೆ ಸಹ ಒಂದಷ್ಟು ಹಣಕಾಸಿನ ವ್ಯವಹಾರವು ನಡೆದಿತ್ತು. ಆದರೆ ಈ ಹಣ ಇಬ್ಬರ ನಡುವೆ ಯಾವತ್ತು ಜಗಳ ತಂದಿರಲಿಲ್ಲ. ಒಬ್ಬರಿಗೊಬ್ಬರು ಕಷ್ಟಕ್ಕೆ ಜೊತೆಯಾಗಿದ್ದರು. ಶಫೀ ಸಹ ಆಗಾಗ ಪುಟ್ಟರಾಜು ಮನೆಗೆ ಬಂದು ಹೋಗುತ್ತಿದ್ದ. ಜೀವನದಲ್ಲಿ ಮುಂದೆ ಹೇಗೆ ಸೆಟಲ್ ಆಗುವುದು ಎನ್ನುವ ಚರ್ಚೆ ಇಬ್ಬರಲ್ಲೂ ಇತ್ತು.
ಹೀಗೆ ಆತ್ಮೀಯವಾಗಿದ್ದ ಇಬ್ಬರು ಕಳೆದ ಫೆಬ್ರವರಿ 19ರಂದು ಹೊನ್ನವಳ್ಳಿಗೆ ತೆರಳಿದ್ದರು. ಕಾರಣ ಅದೊಂದು ಚಿನ್ನದ ಹರಾಜು ಪ್ರಕ್ರಿಯೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಚಿನ್ನದ ಬೆಲೆ. ಈ ಸಮಯದಲ್ಲಿ ಚಿನ್ನ ಖರೀದಿ ಮಾತು ಸವಾಲು. ಹಾಗಾಗಿಯೇ ಹಾರಾಜು ಪ್ರಕ್ರಿಯೆ ಚಿನ್ನ ಕಡಿಮೆಗೆ ಸಿಕ್ಕರೇ ಖರೀದಿ ಮಾಡಬಹುದು. ಆ ಬಳಿಕ ಆ ಚಿನ್ನ ಭವಿಷ್ಯಕ್ಕೆ ಉಪಯೋಗವಾಗುತ್ತೆ. ಹೀಗಂತ ಯೋಚನೆ ಮಾಡಿದ್ದ ಶಫೀ ಕಳೆದ ಕೆಲ ದಿನಗಳ ಹಿಂದೆ ಪುಟ್ಟರಾಜುಗೆ ತಿಳಿಸಿದ್ದ. ಜೊತೆಗೆ ಪುಟ್ಟರಾಜುವನ್ನು ಒಂದೆರಡು ಕಡೆ ಶಫೀ ಕರೆದುಕೊಂಡು ಹೊಗಿದ್ದ, ಚಿನ್ನ ಹರಾಜು ಪ್ರಕ್ರಿಯೆ ತೋರಿಸಿ ಲಾಭದ ಲೆಕ್ಕ ಹೇಳಿದ್ದ. ನಂತರ ತಾನೂ ಹಾರಾಜು ಪ್ರಕ್ರಿಯೆಯಲ್ಲಿ ಚಿನ್ನ ಖರೀದಿಸಲು ಪುಟ್ಟರಾಜು ಆಸಕ್ತಿ ತೋರಿದ್ದ ಅದಕ್ಕೆಂದೆ ಮನೆಯಿಂದ ಒಂದಷ್ಟು ಹಣ ಸಹ ತಂದಿದ್ದ. ಶಫೀ ಜೊತೆ ಫೆಬ್ರವರಿ 19ರಂದು ತುಮಕೂರಿನ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ಖಾಸಗಿ ಫೈನಾನ್ಸ್ ನ ಹರಾಜು ಪ್ರಕ್ರಿಯೆಗೆ ಭಾಗಿಯಾಗಲು ಹೋಗಿದ್ದ. ಆದರೆ ಹೀಗೆ ಹೋದ ಪುಟ್ಟರಾಜು ಶವವಾಗಿ ಪತ್ತೆಯಾದರೇ, ಶಫೀ ನಾಪತ್ತೆಯಾಗಿದ್ದ.
ಶಫೀ ಕಾಣೆ: ಪೊಲೀಸರಿಗೆ ಅನುಮಾನ
ಶಫೀ ಕಾಣೆಯಾದ ಹಿನ್ನಲೆ ಪೊಲೀಸರಿಗೆ ಅನುಮಾನ ಮೂಡಿತ್ತು. 7 ವರ್ಷದ ಆತ್ಮೀಯ ಗೆಳೆಯರು. ಒಬ್ಬ ಶವವಾಗಿ ಸಿಕ್ಕರೇ ಮತ್ತೊಬ್ಬ ಅರಣ್ಯ ಪ್ರದೇಶದಲ್ಲಿ ನಾಪತ್ತೆ ಅನ್ನೊದು ಗೊಂದಲ ಮೂಡಿಸಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ಶಫೀ ಹುಡುಕಲು ಮುಂದಾಗಿದ್ದರು. ಆಗಲೇ ನೋಡಿ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು. ಅಸಲಿಗೆ ಇಲ್ಲಿ ಪುಟ್ಟರಾಜು ಕೊಲೆ ಆಕಸ್ಮಿಕವಾಗಿ ಆಗಿರಲಿಲ್ಲ. ಬದಲಾಗಿ ಅದೊಂದು ಪ್ರೀ ಪ್ಲ್ಯಾನ್ ಆಗಿತ್ತು. ಯಾವಾಗ ಪೊಲೀಸರು ಶಫೀ ಹುಡುಕಲು ಮುಂದಾರೋ ಆಗ ಶಫೀಯ ಒಂದಷ್ಟು ಸಂಗತಿಗಳು ಹೊರ ಬಂದಿದ್ದವು. ಶಫೀಗೆ ಎಲ್ಲಿಲ್ಲದ ಸಾಲ, ಊರ ತುಂಬಾ ಸಾಲ. ಮೂಲತಃ ತುಮಕೂರಿನ ಹೊನ್ನವಳ್ಳಿಯವನ್ನೇ ಆದ ಈತ ಕಳೆದ 14 ವರ್ಷದ ಹಿಂದೆಯೇ ಊರು ಬಿಟ್ಟಿದ್ದ. ಕಾರಣ ಮೈತುಂಬ ಸಾಲ. ಹಣ ಕೊಟ್ಟವರು ಮನೆ ಬಳಿ ಬರುತಿದ್ದಂತೆ ಊರು ಬಿಟ್ಟಿದ್ದ ಶಫೀ ಚಿಕ್ಕಮಗಳೂರಿಗೆ ತೆರಳಿದ್ದ.
ಹೀಗೆ ಚಿಕ್ಕಮಗಳೂರಿಗೆ ಬಂದು ಬಿರೂರಿನಲ್ಲಿ ಮನೆ ಮಾಡಿಕೊಂಡ ಶಫೀ ಕಬಾಬ್ ಅಂಗಡಿ ತೆರೆದಿದ್ದ. ಅಂಗಡಿ ಮಾಡಿಕೊಂಡು ಹೊಸ ಜೀವನ ಮಾಡೊ ನಡುವೆ ಎರಡು ಮದುವೆ. ಇಬ್ಬರು ಹೆಂಡತಿಯರ ಮುದ್ದಿನ ಗಂಡನಾದ ಶಫೀಗೆ ಹಣದಾಸೆ. ಹೀಗಾಗಿ ಅಲ್ಲೂ ಸಹ ಮತ್ತೆ ಸಾಲ. ಮಾಡಿದ ಸಾಲಗಳ ತೀರಿಸಲಾಗದ ಪರದಾಡುತಿದ್ದ. ಇನ್ನು ಈತ ಪುಟ್ಟರಾಜು ಜೊತೆ ಬಂದಿದ್ದ ಅನ್ನೊ ಗೊಂದಲ. ಇದರ ನಡುವೆ ಪೊಲೀಸರಿಗೆ ಅನುಮಾನ ಮೂಡಿಸಿದ್ದು, ಪುಟ್ಟರಾಜು ಮನೆಯಲ್ಲಿ ಹೇಳಿದ್ದ ಆ ಮಾತು.
ಕೊಲೆ ಮಾಡಿ ಊರು ಬಿಟ್ಟಿದ್ದ ಆರೋಪಿ: ಎರಡನೇ ಹೆಂಡತಿ ಟಿವಿ ಗಿಫ್ಟ್
ಹೊನ್ನವಳ್ಳಿಯ ಫೈನಾನ್ಸ್ನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಹೇಳಿ ಹೋಗಿದ್ದ. ಆದರೆ ಅವತ್ತು ಹೊನ್ನವಳ್ಳಿಯಲ್ಲಿ ಯಾವುದೇ ಚಿನ್ನದ ಹರಾಜು ಪ್ರಕ್ರಿಯೆ ಇರಲಿಲ್ಲ. ಮೇಲಾಗಿ ಅದೊಂದು ಸುಳ್ಳು. ಆ ಸುಳ್ಳು ಸೃಷ್ಟಿಸಿದ್ದವನು ಇದೇ ಶಫೀ. ಅಲ್ಲಿಗೆ ಶಫೀ ಕೃತ್ಯ ಪೊಲೀಸರಿಗೆ ಗೊತ್ತಾಗಿತ್ತು. ಆತನ ಹುಡುಕಾಟಕ್ಕೆ ಮುಂದಾದ ಪೊಲೀಸರು ಟೆಕ್ನಿಕಲ್ ಜಾಡು ಹಿಡಿದಿದ್ದರು. ಅದಾಗಲೇ ಕೊಲೆ ಮಾಡಿ ಊರು ಬಿಟ್ಟಿದ್ದ ಆರೋಪಿ ಶಫೀ ತನ್ನ ಎರಡನೇ ಹೆಂಡತಿ ಭೇಟಿ ಮಾಡಿದ್ದ. ಹಾಸನದ ಅರಸಿಕೆರೆಯ ಲಾಡ್ಜ್ನಲ್ಲಿ ಆಕೆ ಭೇಟಿ ಮಾಡಿದ ಆಸಾಮಿ ಅವಳಿಗೊಂದು ಟಿವಿ ಹಾಗೂ 60 ಸಾವಿರ ರೂ ಹಣ ನೀಡಿದ್ದ. ಆ ಬಳಿಕ ಅಲ್ಲಿಂದ ಹೊರಟವನೇ ಬೆಂಗಳೂರು ಮಾರ್ಗವಾಗಿ ಚಿಂತಮಣಿ ಸೇರಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ಕೊನೆಗೂ ಆತನ ಬಂಧಿಸಿದ್ದರು. ಆ ಬಳಿಕ ಪೊಲೀಸರಿಗೆ ಗೊತ್ತಾಗಿದ್ದು ಮೂರು ಲಕ್ಷ ರೂ ಸಾಲದ ಕಥೆ.
ಸಾಲದ ಸುಳಿಯಲ್ಲಿ ಸಿಲುಕಿದ ಶಫೀಗೆ ಖರ್ಚು ಮಾಡುವ ಹುಚ್ಚಾಟ. ಹೀಗಾಗಿಯೇ ಮಾಡಿಕೊಂಡ ಒಂದಷ್ಟು ಸಾಲ ಹಾಗೂ ತುರ್ತಾಗಿ ಬೇಕಾದ ಹಣಕ್ಕಾಗಿ ಶಫೀ ಪರದಾಡಿದ್ದ. ಊರಲ್ಲಿ ಗೊತ್ತಿರುವವರ ಬಳಿಯೆಲ್ಲಾ ಸಾಲ ಮಾಡಿದ್ದ ಶಫಿಗೆ ಮತ್ಯಾರನ್ನು ಕೇಳುವುದು ಎನ್ನುವ ಗೊಂದಲ. ಈ ವೇಳೆ ಶಫೀಗೆ ನೆನಪಾಗಿದ್ದು ಪುಟ್ಟರಾಜು. ಪುಟ್ಟರಾಜು ಜೊತೆ ಮೊದಲಿಂದಲೂ ಸಣ್ಣಪುಟ್ಟ ಹಣದ ವ್ಯವಹಾರ ಮಾಡಿದ್ದ ಶಫೀ ಈ ಬಾರಿ ಆತನಿಂದ ದೊಡ್ಡದನ್ನೇ ಬಯಸಿದ್ದ. ಆದರೆ ಅದನ್ನು ಕೇಳುವುದು ಹೇಗೆ ಎನ್ನುವ ಗೊಂದಲ ಶಫೀಗಿತ್ತು. ಹೀಗಾಗಿಯೇ ಚಿನ್ನದ ಹರಾಜು ಕಥೆ ಕಟ್ಟಿದ್ದ.
ಚಿನ್ನದ ಹರಾಜು ಕಥೆ ನಂಬಿಸುವ ಬರದಲ್ಲಿ ಶಫೀಗೆ ಹುಚ್ಚು ಯೋಚನೆಯೊಂದು ಮೂಡಿತ್ತು. ಅದುವೇ ಪುಟ್ಟರಾಜು ಬಳಿ ಇರುವ ಹಣ ಎಗರಿಸುವ ಚಿಂತೆಯಲ್ಲಿ ಅತನ ಕೊಲೆ ಮಾಡುವ ಸಂಚು. ಯಾವಾಗ ಶಫೀ ಹೇಳಿದ ಮಾತುಗಳನ್ನೆಲ್ಲಾ ಪುಟ್ಟರಾಜು ನಂಬಲು ಆರಂಭಿಸಿದ್ನೋ ಆಗ ಹೊಸದೊಂದು ಕಥೆ ಸೃಷ್ಟಿಸಿಬಿಟ್ಟಿದ್ದ. ಈ ಕಥೆಗೆ ತನ್ನದೇ ಊರನ್ನು ಆರಿಸಿಕೊಂಡ ಶಫೀ ಹೊನ್ನವಳ್ಳಿಯಲ್ಲಿ ಫೈನಾನ್ಸ್ನ ಚಿನ್ನದ ಹರಾಜು ಇದೆ ಹೊದರೇ ದೊಡ್ಡ ಲಾಭ ಬರುತ್ತದೆ ಎಂಬ ಕಥೆ ಕಟ್ಟಿದ್ದ ಇದಕ್ಕೆ ನಾನು ಸಹ ಹಣ ತರ್ತಿನಿ ನೀನು ಲಕ್ಷ ಲಕ್ಷ ಹಣ ತೆಗೆದುಕೊಂಡು ಬಾ ಎಂದಿದ್ದ. ಈ ಮಾತು ಕೇಳಿದ ಪುಟ್ಟರಾಜು ಮನೆಯಿಂದ ಎರಡುವರೆ ಲಕ್ಷ ರೂ ತಂದು ಶಫೀ ಕೈಗಿಟ್ಟಿದ್ದ. ಅಲ್ಲಿಗೆ ಶಫೀ ಯೋಚನೆ ಮತ್ತಷ್ಟು ಅಡ್ಡದಾರಿ ಕಡೆ ತಿರುಗಿತ್ತು. ಹೀಗಾಗಿ ಮೊದಲೇ ಒಂದಷ್ಟು ಸಂಚು ರೂಪಿಸಿದ್ದ ಶಫೀ ತನ್ನ ಮತ್ತೊಬ್ಬ ಗೆಳೆಯನ ಸ್ಪ್ಲೆಂಡರ್ ಬೈಕ್ ತಂದಿದ್ದ. ಅದೇ ಗಾಡಿಯಲ್ಲಿ ಹೋಗೋಣ ಬಾ ಎಂದು ಪುಟ್ಟರಾಜು ಕರೆದಿದ್ದ. ಅತ್ತ ಪುಟ್ಟರಾಜು ನೈಟ್ ಪ್ಯಾಟ್ ನಲ್ಲಿ ಹೊರ ಬಂದವೇ ಕೈನಲ್ಲಿ ಹಣ ಹಿಡಿದ್ದ. ತನ್ನ ಬಳಿ ಹಣ ಇಟ್ಕೊಳೊಕೆ ಆಗಲ್ಲಪ್ಪ ನೀನೇ ಇಟ್ಕೊ ಅಂತ ಆ ಹಣವನ್ನು ಶಫೀ ಕೈಗಿಟ್ಟಿದ್ದ.
ಪುಟ್ಟರಾಜು ಹಣದಿಂದಲೇ ಆಯುಧ ಖರೀದಿ
ಹೀಗೆ ಹಣದ ಜೊತೆ ಹೊರಟವರೇ ನೇರವಾಗಿ ಅರಸಿಕೆರೆಯತ್ತ ತೆರಳಿದ್ದರು. ಅದು ಶಫೀ ಪ್ಲ್ಯಾನ್ನಂತೆ. ಕಾರಣ ಶಫೀ ಅದೊಂದು ಅಂಗಡಿ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಮನೆಯ ಬಳಿ ಒಂದಷ್ಟು ಗಿಡಗಳು ಬೆಳೆದಿವೆ, ಕಸ ಹೆಚ್ಚಾಗಿದೆ. ಅದನ್ನು ಸ್ವಚ್ಛಗೊಳಿಸಬೇಕು. ಹೀಗಾಗಿ ಅಲ್ಲಿ ಒಂದಷ್ಟು ಸಾಮಾನು ಖರೋದಿ ಇದೆ ಎಂದಿದ್ದ. ಈತನ ಮಾತು ನಂಬಿದ್ದ ಪುಟ್ಟರಾಜುವಿಗೆ ಮುಂದಾಗಬಹುದಿದ್ದ ಅನಾಹುತದ ಅರಿವಿರಲಿಲ್ಲ. ಹೀಗೆ ಅರಸಿಕೆರೆಯ ಅಂಗಡಿ ಒಂದಕ್ಕೆ ಬಂದ ಶಫೀ ಅಲ್ಲಿ ಮಚ್ಚು, ಸಣ್ಣ ಎರಡು ಚಾಕು, ಪೊರಕೆ ಅಂತ ಖರೀದಿ ಮಾಡಿದ್ದ. ಅಸಲಿಗೆ ಪುಟ್ಟರಾಜು ಹತ್ಯೆಗೆ ಸಂಚು ರೂಪಿಸಿದ್ದ ಶಫೀಗೆ ಮಚ್ಚು ಮಾತ್ರ ಬೇಕಾಗಿತ್ತು. ಆದರೆ ಪುಟ್ಟರಾಜುಗೆ ಈ ವಿಚಾರ ಗೊತ್ತಾಗಬಾರದು ಅನ್ನೊ ಕಾರಣಕ್ಕೆ ನಾಟಕವಾಡಿ ಕಥೆ ಬಿಟ್ಟ ಶಫೀ ಬೇರೆ ವಸ್ತುಗಳನ್ನು ಸಹ ಖರೀದಿ ಮಾಡಿದ್ದ. ಆ ಬಳಿಕ ಬೈಕ್ ಏರಿ ಇಬ್ಬರು ಹೊರಟವರೇ ನೇರವಾಗಿ ಅರಣ್ಯ ಪ್ರದೇಶದತ್ತ ಬಂದಿದ್ದರು. ಅದಾಗಲೇ ಸಮಯ ಮಧ್ಯಾಹ್ನವಾಗಿತ್ತು. ಉರಿ ಬಿಸಿಲು ನೆತ್ತಿಯ ಮೇಲಿತ್ತು. ಕಾಡಿನ ಒಂಟಿ ದಾರಿಯಲ್ಲಿ ಬೈಕ್ ಪಕ್ಕಕ್ಕೆ ಹಾಕಿದ ಶಫೀ ಕೆಳಗೆ ಇಳಿದಿದ್ದ. ಮೂತ್ರ ವಿಸರ್ಜನೆ ರೀತಿ ಹಿಂದೆ ಹೊದ ಶಫೀ ಏಕಾಏಕಿ ಮಚ್ಚಿನಿಂದ ಪುಟ್ಟರಾಜು ತಲೆಗೆ ಎರಡು ಬಾರಿ ಹೊಡೆದಿದ್ದ. ಕೂಡಲೇ ತಿರುಗಿದ ಪುಟ್ಟರಾಜು ಯಾಕೋ ಶಫೀ ಎಂದ ಅಷ್ಟೇ. ಮಚ್ಚಿನಿಂದ ಕುತ್ತಿಗೆಗೆ ಹಲ್ಲೆ ಮಾಡಿದ್ದ. ಸ್ಥಳದಲ್ಲೇ ಬಿದ್ದ ಪುಟ್ಟರಾಜು ಸಾವನಪ್ಪಿದ್ದ.
ಹೇಳಿಕೇಳಿ ಅದು ಅರಣ್ಯ ಪ್ರದೇಶ. ಸಾಮಾನ್ಯವಾಗಿ ಆ ರಸ್ತೆಯಲ್ಲಿ ಹೆಚ್ಚಾಗಿ ಜನರು ಓಡಾಡುವುದಿಲ್ಲ. ಹೀಗಾಗಿಯೇ ಮಧ್ಯಾಹ್ನ ಕೊಲೆ ನಡೆದರೆ ವಿಚಾರ ಬೆಳಕಿಗೆ ಬಂದಿದ್ದು ಮರುದಿನ ಬೆಳಿಗ್ಗೆ. ವ್ಯಕ್ತಿಯೋರ್ವ ಹಾಲು ತೆಗೆದುಕೊಂಡು ಹೊಗುವಾಗ ಶವ ಕಾಣಿಸಿದೆ. ಆ ಬಳಿಕ ಆತ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇತ್ತ ಕೊಲೆ ಬಳಿಕ ಊರು ಬಿಟ್ಟ ಶಫೀ ಡಿವೋರ್ಸ್ ಆಗಿದ್ದ ಹಳೆ ಹೆಂಡತ ನೆನಪಿಸಿಕೊಂಡಿದ್ದ. ಅದಾಗಲೇ ಪುಟ್ಟರಾಜು ಹಣ ಈತನ ಕೈ ಸೇರಿತ್ತು. ಹೀಗಾಗಿಯೇ ಹೊಸ ಟಿವಿ ಖರೀದಿಸಿ ಆಕೆ ಮನೆಗೆ ತೆರಳಿ ಟಿವಿ ಕೊಟ್ಟ ಆತ ಬಳಿಕ ಅರಿಸಿಕೆರೆ ಲಾಡ್ಜ್ ಕರೆದೊಯ್ದು 60 ಸಾವಿರ ಕೊಟ್ಟಿದ್ದ. ನಂತರ ಅಲ್ಲಿಂದ ಉಳಿದ ಹಣದ ಸಮೇತ ಚಿಂತಾಮಣೆ ಸೇರಿದ್ದವನ ಹೊನ್ನವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 7 ರಿಂದ ಆರಂಭವಾಗಿದ್ದ 2026 ರ ಟಿ20 ವಿಶ್ವಕಪ್ ಈಗ ಅಂತಿಮ ಹಂತವನ್ನು ತಲುಪಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದೆಡೆ ಭಾರತ ಸತತ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ನ್ಯೂಜಿಲೆಂಡ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗಾಗಿ ಎದುರು ನೋಡುತ್ತಿದೆ. ಇದರ ಜೊತೆಗೆ ಚಾಂಪಿಯನ್ ತಂಡದ ಮೇಲೆ ಕೋಟಿಗಳ ಮಳೆ ಸುರಿಸಲು ಐಸಿಸಿ ತಯಾರಿ ಮಾಡಿಕೊಂಡಿದೆ.
ಹಿಂದಿನ ಒಂಬತ್ತು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ, ಅತಿ ಹೆಚ್ಚು ಬಹುಮಾನದ ಹಣವನ್ನು 2024 ರ ಪಂದ್ಯಾವಳಿಯಲ್ಲಿ ವಿತರಿಸಲಾಯಿತು. 2024 ರ ಟಿ20 ವಿಶ್ವಕಪ್ನ ಬಹುಮಾನದ ಗಾತ್ರವನ್ನು ಐಸಿಸಿ 103 ಕೋಟಿ ರೂಗಳಿಗೆ ಏರಿಸಿತ್ತು. ಅದರಂತೆ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾಕ್ಕೆ 20.42 ಕೋಟಿ ರೂಗಳ ಬಹುಮಾನ ಸಿಕ್ಕಿತ್ತು. ಹಾಗೆಯೇ ರನ್ನರ್ ಅಪ್ ಆಗಿದ್ದ ಆಫ್ರಿಕಾ ತಂಡಕ್ಕೆ 10.67 ಕೋಟಿ ರೂ. ಬಹುಮಾನ ನೀಡಲಾಗಿತ್ತು.
2026 ರ ಟಿ20 ವಿಶ್ವಕಪ್ನ ಬಹುಮಾನದ ಹಣವನ್ನು ಐಸಿಸಿ ಇನ್ನೂ ಘೋಷಿಸಿಲ್ಲ. ಹಿಂದಿನ ಆವೃತ್ತಿಗಳನ್ನು ಪರಿಗಣಿಸಿದರೆ, ಫೈನಲ್ನ ಫಲಿತಾಂಶ ಏನೇ ಇರಲಿ, ಎರಡೂ ತಂಡಗಳು ಶ್ರೀಮಂತರಾಗುವುದು ಖಚಿತ. ಫೈನಲ್ನಲ್ಲಿ ಸೋತರೂ ಟೀಂ ಇಂಡಿಯಾ 1.28 ಮಿಲಿಯನ್ ಡಾಲರ್ (ಸುಮಾರು 12 ಕೋಟಿ ರೂ.) ಪಡೆಯುತ್ತದೆ.
2024 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡಕ್ಕೆ ಐಸಿಸಿ ಮಾತ್ರವಲ್ಲದೆ ಬಿಸಿಸಿಐ ಕೂಡ ಭರ್ಜರಿ ಬಹುಮಾನ ಘೋಷಿಸಿತ್ತು. ಅದರಂತೆ ರೋಹಿತ್ ಪಡೆಗೆ ಬಿಸಿಸಿಐ 125 ಕೋಟಿ ರೂಪಾಯಿಯನ್ನು ಪ್ರತ್ಯೇಕ ಬಹುಮಾನವಾಗಿ ನೀಡಿತ್ತು. ಆದ್ದರಿಂದ, 2026 ರಲ್ಲಿ ತಂಡವು ಮತ್ತೆ ಗೆದ್ದರೆ, ಈ ಬಾರಿಯೂ ದೊಡ್ಡ ಮೊತ್ತದ ಬಹುಮಾನ ಸಿಗಬಹುದು.
ಭಾರತ ತಂಡವು ಫೈನಲ್ನಲ್ಲಿ ಇತಿಹಾಸ ನಿರ್ಮಿಸುವ ಗುರಿಯನ್ನು ಹೊಂದಿದೆ. ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ನಲ್ಲಿ ಆಡುತ್ತಿರುವ ಮೊದಲ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟೂರ್ನಮೆಂಟ್ ಗೆಲ್ಲುವ ಅವಕಾಶವನ್ನು ಹೊಂದಿದೆ. ಇದುವರೆಗೆ ಯಾವುದೇ ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದಿಲ್ಲ. ಇದಲ್ಲದೆ, ಯಾವುದೇ ತಂಡ ಕೂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕೇರಿ ಇತಿಹಾಸ ಬದಲಿಸುವ ಇರಾದೆಯಲ್ಲಿದೆ.
ಕೇಂದ್ರ ಲೋಕಸೇವಾ ಆಯೋಗವು (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ದೇಶದಾದ್ಯಂತ ಕುತೂಹಲಕ್ಕೆ ತೆರೆ ಎಳೆದಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಅವರು ಮೊದಲ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಅವರ ಬೆನ್ನಲ್ಲೇ ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಕಳೆದ ವರ್ಷದ ಮೇ 25 ರಂದು ಪೂರ್ವಭಾವಿ ಪರೀಕ್ಷೆ ಆರಂಭವಾಗಿತ್ತು. ನಂತರ ಆಗಸ್ಟ್ 22 ರಿಂದ 31 ರವರೆಗೆ ನಡೆದ ಕಠಿಣ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 2,736 ಅಭ್ಯರ್ಥಿಗಳನ್ನು ಅಂತಿಮ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಬಳಿಕ ಜನವರಿ 5 ರಿಂದ ಫೆಬ್ರವರಿ 27 ರವರೆಗೆ ನಡೆದ ಪರೀಕ್ಷೆಯು ಅಭ್ಯರ್ಥಿಗಳ ತಾಳ್ಮೆ ಮತ್ತು ಜ್ಞಾನಕ್ಕೆ ಒಡ್ಡಿದ ಅಂತಿಮ ಸವಾಲಾಗಿತ್ತು. ಇದೀಗ ಪ್ರಕಟವಾಗಿರುವ ಫಲಿತಾಂಶದ ಅನ್ವಯ, ಒಟ್ಟು 958 ಅಭ್ಯರ್ಥಿಗಳು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ನೇಮಕಾತಿಯ ವಿವರಗಳನ್ನು ನೋಡುವುದಾದರೆ, ಒಟ್ಟು 180 ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆಗೆ (IAS) ಆಯ್ಕೆಯಾಗಿದ್ದು, 150 ಅಭ್ಯರ್ಥಿಗಳು ಭಾರತೀಯ ಪೊಲೀಸ್ ಸೇವೆಗೆ (IPS) ಮತ್ತು 55 ಅಭ್ಯರ್ಥಿಗಳು ಭಾರತೀಯ ವಿದೇಶಾಂಗ ಸೇವೆಗೆ (IFS) ನಿಯೋಜನೆಗೊಂಡಿದ್ದಾರೆ. ವಿಶೇಷವಾಗಿ 180 ಐಎಎಸ್ ಹುದ್ದೆಗಳಲ್ಲಿ 74 ಸಾಮಾನ್ಯ ವರ್ಗಕ್ಕೆ, 47 ಒಬಿಸಿ, 28 ಪರಿಶಿಷ್ಟ ಜಾತಿ, 13 ಪರಿಶಿಷ್ಟ ಪಂಗಡ ಮತ್ತು 18 ಅಭ್ಯರ್ಥಿಗಳು ಇಡಬ್ಲ್ಯೂಎಸ್ ವರ್ಗದಡಿ ಸ್ಥಾನ ಪಡೆದಿದ್ದಾರೆ. ಈ ಫಲಿತಾಂಶದ ಅಧಿಕೃತ ಅಂಕಪಟ್ಟಿಗಳು ಮುಂದಿನ 15 ದಿನಗಳಲ್ಲಿ ಯುಪಿಎಸ್ಸಿ ವೆಬ್ಸೈಟ್ನಲ್ಲಿ ಲಭ್ಯವಿರಲಿವೆ.