ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ‘ಲ್ಯಾಂಡ್ ಲಾರ್ಡ್’ (Landlord) ಸಿನಿಮಾದ ‘ನಿಂಗವ್ವ ನಿಂಗವ್ವ..’ ಹಾಡು ರಿಲೀಸ್ ಆಗಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರೇಮ್, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ತರುಣ್ ಸುಧೀರ್, ಸೋನಲ್ ಮೊಂತೆರೋ ಭಾಗಿ ಆಗಿದ್ದರು. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಯೋಗರಾಜ್ ಭಟ್ (Yogaraj Bhat) ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಕಂಠದಲ್ಲಿ ಹಾಡು ಮೂಡಿಬಂದಿದೆ. ಸಾಂಗ್ ರಿಲೀಸ್ ವೇಳೆ ಯೋಗರಾಜ್ ಭಟ್ ಅವರು ನೇರವಾಗಿ ಮಾತನಾಡಿದರು. ‘ನಾನು ಪಕ್ಕಾ ಲೋಫರ್. ಆದ್ರೆ ವಿಜಿ ನನ್ನ ಅಪ್ಪ ಇದ್ದಂಗೆ’ ಎಂದು ಅವರು ಹೇಳಿದರು. ಅವರು ಯಾಕೆ ಈ ರೀತಿ ಮಾತನಾಡಿದರು ಎಂಬುದಕ್ಕೆ ಈ ವಿಡಿಯೋದಲ್ಲಿ ಉತ್ತರ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಕುಟುಂಬದ ಮೇಲೆ ಹಲವಾರು ಕೇಸ್ಗಳು ಇವೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಈಗಾಗಲೇ ಅನೇಕ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಮುಂಬೈ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗುರುವಾರ (ಡಿಸೆಂಬರ್ 18) ಈ ಘಟನೆ ನಡೆದಿದೆ. ಅದಕ್ಕೂ ಒಂದು ದಿನ ಮುನ್ನ, ಅಂದರೆ ಡಿ.17ರಂದು ಬೆಂಗಳೂರಿನಲ್ಲಿ ಕೂಡ ಶಿಲ್ಪಾ ಶೆಟ್ಟಿ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಐಟಿ ಅಧಿಕಾರಿಗಳು ದಾಳಿ (IT Raid) ಮಾಡಿದ್ದರು.
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಅವರು ‘ಬಾಸ್ಟಿಯನ್ ಗಾರ್ಡನ್ ಸಿಟಿ’ ಪಬ್ ಹೊಂದಿದ್ದಾರೆ. ಇದು ಬೆಂಗಳೂರಿನ ಅತಿ ದುಬಾರಿ ಪಬ್ಗಳಲ್ಲಿ ಒಂದಾಗಿದೆ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ಪಬ್ ಇದೆ. ಪಬ್ ಮಾತ್ರವಲ್ಲದೇ ಇನ್ನೂ ಹಲವು ಕಡೆಗಳಲ್ಲಿ ದಾಳಿ ಮಾಡಿ ಕೆಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿ ಅವರಿಗೆ ಸಂಕಷ್ಟ ಶುರುವಾಗಿದೆ.
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಮೇಲೆ 60 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಅವರು ಈ ಆರೋಪ ಮಾಡಿದ್ದಾರೆ. ಸ್ಟಾರ್ ದಂಪತಿಯಿಂದ ತಮಗೆ ವಂಚನೆ ಆಗಿದೆ ಎಂದು ದೀಪಕ್ ಕೊಠಾರಿ ದೂರು ನೀಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಪಬ್ ಮೇಲೆ ದಾಳಿ:
ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ 5 ಕಾರಿನಲ್ಲಿ ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಸೆಂಟ್ ಮಾರ್ಕ್ಸ್ ರಸ್ತೆಯ ಬ್ಯಾಸ್ಟಿಯನ್ ಪಬ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ರೆಸ್ಟೋರೆಂಟ್ ಸಹಜವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟರು. ಆದರೆ ಆಡಳಿತ ವಿಭಾಗ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಐಟಿ ಅಧಿಕಾರಿಗಳು ಜಾಲಾಡಿದರು. ಇಷ್ಟು ವರ್ಷಗಳಿಂದ ಕಟ್ಟಿದ ತೆರಿಗೆ ಎಷ್ಟು ಎಂಬುದನ್ನು ಪರಿಶೀಲಿಸಲಾಯಿತು. ತೆರಿಗೆ ಇಲಾಖೆಗೆ ನೀಡಿರುವ ದಾಖಲಾತಿಗಳಿಗೂ ಕೌಂಟರ್ನಲ್ಲಿ ಇದುವರೆಗೆ ಆಗಿರುವ ವ್ಯಾಪಾರಕ್ಕೂ ಹೋಲಿಕೆ ಮಾಡಲಾಗಿದೆ. ಹೂಡಿಕೆ, ಲಾಭ ಮತ್ತು ತೆರಿಗೆ ಈ ಮೂರು ವಿಚಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ.
ಶಿಲ್ಪಾ ಶೆಟ್ಟಿ ಅವರ ಪಬ್ನಲ್ಲಿ ಕೆಲವು ದಿನಗಳ ಹಿಂದೆ ಉದ್ಯಮಿ ಸತ್ಯನಾಯ್ಡು ಮತ್ತು ಇತರರ ನಡುವೆ ಒಂದು ಗಲಾಟೆ ಆಗಿತ್ತು. ಆ ಬಳಿಕ ಪಬ್ ಅವಧಿ ಮೀರಿ, ಅಂದರೆ 1.30ರ ತನಕ ಒಪನ್ ಇತ್ತು. ಈ ಎರಡೂ ವಿಚಾರಕ್ಕೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಕಳೆದ 10 ದಿನಗಳ ಅಂತರದಲ್ಲಿ ಈ ಪಬ್ ಮೇಲೆ ಒಂದು ಕೇಸ್ ಹಾಗೂ ಐಟಿ ದಾಳಿ ನಡೆದಿದೆ.
ಗೋರಖ್ಪುರ, ಡಿಸೆಂಬರ್ 18: ‘ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು’ ಎಂಬ ಗಾದೆ ಮಾತೊಂದಿದೆ. ತಾಯಿ ಎಂಥದ್ದೇ ಪರಿಸ್ಥಿತಿ ಬಂದರೂ ತಾನು ಹೆತ್ತ ಮಗುವನ್ನು ಬಿಟ್ಟುಕೊಡುವುದಿಲ್ಲ, ಅದಕ್ಕೆ ತೊಂದರೆಯಾದರೆ ಸಹಿಸುವುದೂ ಇಲ್ಲ. ಆದರೆ, ಗೋರಖ್ಪುರದ (Gorakhpur) ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ನಿರಾಕರಿಸಿದಳು. ಇದು ವೈದ್ಯರಿಗೆ ಆಘಾತ ಉಂಟುಮಾಡಿದೆ. ಆಕೆಯ ಮನೆಯವರು, ವೈದ್ಯರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಅದಕ್ಕೆ ಒಪ್ಪಲಿಲ್ಲ.
“ಈ ಮಗು ವಿಶ್ವಾಸದ್ರೋಹಿಯಾದ ನನ್ನ ಗಂಡನ ಮಗು. ಆ ಮಗುವನ್ನು ಬೇಕಿದ್ದರೆ ಕಸದ ಬುಟ್ಟಿಗೆ ಎಸೆಯಿರಿ, ಆದರೆ ನಾನು ಅವನಿಗೆ ಹಾಲುಣಿಸುವುದಿಲ್ಲ ಅಥವಾ ಬೆಳೆಸುವುದೂ ಇಲ್ಲ” ಎಂದು ಆಕೆ ಹೇಳಿದ್ದಾಳೆ.
“ಮಗುವನ್ನು ನೋಡಿಕೊಳ್ಳಬೇಕಾದ ನನ್ನ ಪತಿ ಬೇರೆ ಮಹಿಳೆಯೊಂದಿಗೆ ಓಡಿಹೋದ. ಹಾಗಾದರೆ ನಾನೊಬ್ಬಳೇ ಏಕೆ ಈ ಮಗುವನ್ನು ಬೆಳೆಸಬೇಕು?” ಎಂದು ಆಕೆ ಹತಾಶಳಾಗಿ ಪ್ರಶ್ನಿಸಿದ್ದಾಳೆ. ತನ್ನ ಪತಿ ತನ್ನ ಜೀವನವನ್ನು ಹಾಳು ಮಾಡಿದ್ದರಿಂದ ಆ ಮಗುವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಆ ಮಹಿಳೆ ಹೇಳಿದ್ದಾಳೆ. “ಆ ಮಗುವನ್ನು ನೀವು ಎಲ್ಲಿ ಬೇಕಾದರೂ ಬಿಡಿ ಅಥವಾ ಕಸಕ್ಕೆ ಬೇಕಾದರೂ ಎಸೆಯಿರಿ” ಎಂದು ಆಕೆ ಹಠ ಹಿಡಿದಿದ್ದಾಳೆ.
ಈ ಸುದ್ದಿ ಕೇಳಿದ ಕೂಡಲೇ ಜನರು ಆ ಮಗುವನ್ನು ದತ್ತು ಪಡೆಯಲು ಆಸ್ಪತ್ರೆಗೆ ಬರಲು ಪ್ರಾರಂಭಿಸಿದರು. ಕೊನೆಗೆ ಈ ವಿಷಯ ಎಸ್ಐಸಿ ಜೈ ಕುಮಾರ್ಗೆ ತಲುಪಿ, ಅವರು ತಕ್ಷಣವೇ ಮಕ್ಕಳ ಸಹಾಯವಾಣಿಗೆ ಇಡೀ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯೂ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿತು. ಸುಮಾರು 48 ಗಂಟೆಗಳ ಪ್ರಯತ್ನದ ನಂತರ ಆ ಮಗುವನ್ನು ತನ್ನ ಜೊತೆ ಇಟ್ಟುಕೊಂಡು, ಬೆಳೆಸಲು ಆಕೆ ಒಪ್ಪಿಕೊಂಡಳು.
ಆ ಮಹಿಳೆಯ ಪತಿ ಚಾಲಕರಾಗಿದ್ದರು. ಅವರು ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅವರ ಕುಟುಂಬವು ಸಂತೋಷದಿಂದಲೇ ಬದುಕುತ್ತಿತ್ತು. ಅವರು ತಮ್ಮ ಕುಟುಂಬದೊಂದಿಗೆ ಬಿಹಾರದ ದರ್ಭಾಂಗದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವು ತಿಂಗಳ ನಂತರ, ಆಕೆಯ ಪತಿ ಆಕೆಯನ್ನು ದೆಹಲಿಗೆ ಕರೆದೊಯ್ದರು. ಸುಮಾರು 5 ತಿಂಗಳ ಹಿಂದೆ ಆತ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿ ಈ ಮಹಿಳೆಯನ್ನು ಬಿಟ್ಟು ಹೋದರು.
ಅಷ್ಟರಲ್ಲಾಗಲೇ ಗರ್ಭಿಣಿಯಾಗಿದ್ದ ಆಕೆ ಮಗುವನ್ನು ತೆಗೆಸಲೂ ಆಗದೆ ಗಂಡ ವಾಪಾಸ್ ಬರುತ್ತಾನೆಂದು ಕಾಯುತ್ತಲೇ ಇದ್ದಳು. ಮಗು ಹುಟ್ಟಿದ ವಿಷಯ ತಿಳಿದರೂ ಆತ ಬಾರದೆ ಇದ್ದುದರಿಂದ ಆಕೆ ತಾಳ್ಮಗೆಟ್ಟು ಮಗುವೇ ಬೇಡವೆಂದು ಹಠ ಹಿಡಿದಿದ್ದಳು. ತಾನೊಬ್ಬಳೇ ಆ ಮಗುವನ್ನು ಹೇಗೆ ಬೆಳೆಸುವುದು ಎಂಬ ಚಿಂತೆ ಆಕೆಯನ್ನು ಕಾಡಿತ್ತು. ಗಂಡ ಬಿಟ್ಟುಹೋದ ನಂತರ ಗೊತ್ತಿಲ್ಲದ ಊರಾದ ದೆಹಲಿಯಲ್ಲಿ ಬೇರೆಯವರ ಮನೆ ಅಡುಗೆ ಮಾಡಿ ಆಕೆ ಮನೆಯ ಬಾಡಿಗೆ ಕಟ್ಟಿ, ಜೀವನ ನಡೆಸುತ್ತಿದ್ದಳು. ಇನ್ನು ಮುಂದೆ ಪುಟ್ಟ ಮಗುವನ್ನು ಬಿಟ್ಟುಕೊಂಡು ಕೆಲಸ ಮಾಡಿ ದುಡಿಯಲೂ ಸಾಧ್ಯವಾಗದ ಕಾರಣದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಡಿಸೆಂಬರ್ 18: ಬಿಪಿಎಲ್ ಕಾರ್ಡ್ದಾರರಿಂದ ಕಡಿಮೆ ಬೆಲೆಗೆ ಅಕ್ಕಿ(rice) ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿರುವ ಸಾಕಷ್ಟು ಘಟನೆಗಳು ವರದಿಯಾಗಿವೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿ ಮಾಡಿ ಬಳಿಕ ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಯಲ್ಲಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಇದೀಗ ಕಾಂಗ್ರೆಸ್ (congress) ಮುಖಂಡನಿಂದಲೇ ಈ ಅಕ್ಕಿ ಮಾರಾಟ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಕಾಳ ಸಂತೆಯಲ್ಲಿ ಬಿಪಿಎಲ್ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಆಕ್ರೋಶ ಭುಗಿಲೆದ್ದಿದೆ.
ಎರಡು ಗುಂಪುಗಳ ನಡುವೆ ಗಲಾಟೆ
ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಅಲೀಮ್ ಎಂಬ ಕಾಂಗ್ರೆಸ್ ಮುಖಂಡನ ಮಧ್ಯೆ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಕಾಂಗ್ರೆಸ್ ಮುಖಂಡ ಅಲೀಮ್ ಎಂಬುವವರಿಂದ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ದಾರರಿಂದ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿದೆ. ಅಷ್ಟೇ ಅಲ್ಲದೆ KRS ಪಕ್ಷದ ಮುಖಂಡರು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದವರನ್ನು ಹಿಡಿದು ಪೊಲೀಸ್ ಠಾಣೆಗೆ ಕರೆತಂದಿದ್ದರು.
ಇನ್ನು KRS ಪಕ್ಷದ ಮುಖಂಡರ ಆರೋಪವನ್ನು ಅಲೀಮ್ ಅಲ್ಲಗೆಳೆದಿದ್ದಾರೆ. ಸದ್ಯ ಕುಮಾರಸ್ವಾಮಿ ಲೇಔಟ್ ಸ್ಟೇಷನ್ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂಥಾಗಿದೆ. 300ಕ್ಕೂ ಹೆಚ್ಚು ಅಲೀಮ್ ಬೆಂಬಲಿಗರು ಹಾಗೂ KRS ಮುಖಂಡರು ಸೇರಿದ್ದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸದ್ಯ ಎರಡು ಕಡೆಯ ಗುಂಪುಗಳನ್ನು ಪೊಲೀಸರು ಚದುರಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಅಲೀಮ್ ದಂಧೆ ನಡೆಸುತ್ತಿದ್ದಾನೆ: ರಘುಪತಿ ಭ
ಇನ್ನು ಈ ಬಗ್ಗೆ KRS ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಮಾತನಾಡಿದ್ದು, ಹಲವು ದಿನಗಳ ಹಿಂದೆ ಈ ರೀತಿ ಅಕ್ರಮವಾಗಿ ಬಿಪಿಎಲ್ ಅಕ್ಕಿ ಮಾರಾಟದ ಮಾಹಿತಿ ಸಿಕ್ತು. ನಾವು ಪೂರ್ವ ತಯಾರಿ ಮಾಡಿಕೊಂಡು ಅಕ್ಕಿ ತುಂಬಿಸಿಕೊಂಡು ಹೋಗುತ್ತಿದ್ದ ಜನರನ್ನು ಹಿಡಿದಿದ್ದೇವೆ. ಸುಮಾರು 45 ಅಕ್ಕಿ ಚೀಲಗಳನ್ನು ನಾವು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ ಎಂದರು.
ಅಲೀಮ್ ಎಂಬ ಕಾಂಗ್ರೆಸ್ ಮುಖಂಡನೇ ಈ ದಂಧೆಯನ್ನು ನಡೆಸುತ್ತಿದ್ದಾನೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಅಲೀಮ್ ಪ್ಲಾನ್ ಮಾಡಿಕೊಂಡಿದ್ದಾನೆ. ಯಲಚೇನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಆತನ ಹಾವಳಿ ಮಿತಿಮೀರಿದೆ. ನಾವು KRS ಪಕ್ಷದ ಮುಖಂಡರು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿದ್ದೇವೆ. ನಮ್ಮ ಜನಪ್ರಿಯತೆಯನ್ನು ಸಹಿಸಲು ಆಗದೆ ಈ ರೀತಿ ಹಗೆ ಸಾಧಿಸುತ್ತಿದ್ದಾನೆ. ಅವನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಕಡೆಯ 200 ಹುಡುಗರನ್ನು ಕರೆಸಿ ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಪೊಲೀಸರು ನಮಗೆ ರಕ್ಷಣೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಡಿಸೆಂಬರ್ 18: ಸರ್ಕಾರಿ ಬಸ್ಗಳಲ್ಲಿ ಲಕ್ಷಾಂತರ ನಾರಿಮಣಿಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದಂತೆ ಹಲವರ ಬದುಕಿಗೆ ಶಕ್ತಿಯೋಜನೆಯೇ (shakti yojana) ಆಸರೆ ಆಗಿದೆ. ಆದರೆ ಯೋಜನೆಯೇ ಸಾರಿಗೆ ಇಲಾಖೆಯನ್ನ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆಯಾಗಿದ್ದು, ಅದರ ಬೆನ್ನಲ್ಲೇ ಇದೀಗ ಸರ್ಕಾರ ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದೆ. 4 ನಿಗಮಗಳಿಗೆ 441 ಕೋಟಿ ರೂ. ಅನುದಾನ (grant) ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ದಾಖಲೆಯ ಸಮೇತ ಬಯಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 4 ಸಾರಿಗೆ ನಿಗಮಗಳಿಗೆ ಬರೋಬ್ಬರಿ 4 ಸಾವಿರ ಕೋಟಿ ರೂ ಹಣ ಬರಬೇಕಾಗಿದೆ. ಇದೇ ಕಾರಣಕ್ಕೆ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯಾ ಅನ್ನೋ ಪ್ರಶ್ನೆ ಎದ್ದಿದೆ.
ಇನ್ನು ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆ ಆಗುತ್ತಿದ್ದಂತೆ ಇದೀಗ ಆರ್ಥಿಕ ಇಲಾಖೆಯಿಂದ ಸಾರಿಗೆ ಇಲಾಖೆಗೆ 441 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ನವೆಂಬರ್ ತಿಂಗಳ ಅನುದಾನವಾಗಿ ಸಾರಿಗೆ ಇಲಾಖೆಯ 4 ನಿಗಮಗಳಿಗೆ 441 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೆಎಸ್ಆರ್ಟಿಸಿಗೆ 171.41 ಕೋಟಿ ರೂ, ಬಿಎಂಟಿಸಿಗೆ 75.65 ಕೋಟಿ ರೂ, ಕೆಕೆಆರ್ಟಿಸಿಗೆ 86.92 ಕೋಟಿ ರೂ, NWKRTCಗೆ 107.67 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಶಕ್ತಿ ಯೋಜನೆಯ ಬಾಕಿ 4006 ಕೋಟಿ ರೂ. ಹಣ ಹಾಗೆಯೇ ಉಳಿದಿದೆ.
ನಾಲ್ಕು ನಿಗಮಗಳ ಬಾಕಿ ಹಣ ಹೀಗಿದೆ
ಕೆಸ್ಆರ್ಟಿಸಿಗೆ 2023-2024ರ ಅವಧಿಯಲ್ಲಿ 452 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ. 2024-2025ರ ಅವಧಿಯಲ್ಲಿ 495 ಕೋಟಿ ರೂ ಬಾಕಿ ಇದೆ. 2025 ನವೆಂಬರ್ ಅಂತ್ಯಕ್ಕೆ 631 ಕೋಟಿ ರೂ ಪೆಂಡಿಂಗ್ ಇದ್ದು, ಒಟ್ಟು 1580 ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ.
ಬಿಎಂಟಿಸಿ ನಿಗಮಕ್ಕೆ 2023-2024ರಅವಧಿಯಲ್ಲಿ 205 ಕೋಟಿ ರೂ ಬಾಕಿ ಇದೆ. 2024-25ರ ಅವಧಿಯಲ್ಲಿ 194 ಕೋಟಿ ರೂ ಬಾಕಿ ಇದ್ರೆ, 2025ರ ನವೆಂಬರ್ ಅಂತ್ಯಕ್ಕೆ ಒಟ್ಟು 310 ಕೋಟಿ ರೂ ಸೇರಿದಂತೆ ಒಟ್ಟು 710 ಕೋಟಿ ರೂಪಾಯಿ ಸರ್ಕಾರದಿಂದ ಬರಬೇಕಿದೆ.
ಅಲ್ಲದೇ NWKRTC ನಿಗಮಕ್ಕೆ 2023-2024 ರಲ್ಲಿ 283 ಕೋಟಿ ರೂ ಬಾಕಿ ಬರಬೇಕಿದೆ. 2024-2025ರ ಅವಧಿಯಲ್ಲಿ 275 ಕೋಟಿ ಮತ್ತು 2025ರ ನವೆಂಬರ್ ಅಂತ್ಯಕ್ಕೆ 428 ಕೋಟಿ ರೂ ಸೇರಿ ಒಟ್ಟು 988 ಕೋಟಿ ರೂ ಬಾಕಿ ಉಳಿಸಿಕೊಳ್ಳಳಾಗಿದೆ.
ಇಷ್ಟೇ ಅಲ್ಲ KKRTC ಸಾರಿಗೆ ನಿಗಮಕ್ಕೆ 2023-2024 ರಲ್ಲಿ 238 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. 2024-2025 ರ ಅವಧಿಯಲ್ಲಿ 204 ಕೋಟಿ ರೂ ಪೆಂಡಿಂಗ್ ಇದ್ದರೆ, 2025ರ ನವೆಂಬರ್ ಅಂತ್ಯಕ್ಕೆ 284 ಕೋಟಿ ರೂ ಬಾಕಿ ಇದೆ. 4 ನಿಗಮಗಳು ಸೇರಿ ಬರೋಬ್ಬರಿ 4 ಸಾವಿರ ಕೋಟಿ ರೂ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದ್ದು ಬಯಲಾಗಿದೆ.
ಕೋಲಾರ, (ಡಿಸೆಂಬರ್ 18): ಬೆಂಗಳೂರಿನ ಬ್ಯಾಟರಾಯನಪುರ ಕಾಂಗ್ರೆಸ್ ಶಾಸಕ, ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಈವರೆಗೂ ಯಾವ ಹಗರಣದಲ್ಲೂ ಸಿಲುಕದ ಕ್ಲೀನ್ ಇಮೇಜ್ ರಾಜಕಾರಣಿ. ಆದ್ರೆ, ಇದೇ ಮೊದಲ ಬಾರಿಗೆ ಭೂಕಬಳಿಕೆ ಆರೋಪ ಇವರನ್ನೀಗ ಸುತ್ತಿಕೊಂಡಿದೆ.ಹೌದು..ಕೋಲಾರ ತಾಲೂಕಿನ ಗರುಡಪಾಳ್ಯ ಸಚಿವ ಕೃಷ್ಣಭೈರೇಗೌಡರ ಹುಟ್ಟೂರು. ನರಸುಪುರ ಹೋಬಳಿಯ ಗರುಡಪಾಳ್ಯದಲ್ಲಿ 200ಎಕರೆಗೂ ಹೆಚ್ಚು ಜಾಗವಿದೆ. ಇಲ್ಲಿನ ಸರ್ವೆ ನಂಬರ್ 46 ಮತ್ತು 47ರಲ್ಲಿ . ಇದೇ ಸರ್ವೇ ನಂಬರ್ನಲ್ಲೇ ಸಚಿವರ ಹೆಸರಿನಲ್ಲಿ 21 ಎಕರೆ ಜಮೀನಿದೆ. ಆದ್ರೆ, ಇದು ಸ್ಮಶಾನ ಮತ್ತು ಕೆರೆ ಭೂಮಿಯಾಗಿದ್ದು, ನಕಲಿ ದಾಖಲೆಗಳನ್ನ ಸೃಷ್ಟಿಸಿ ಸಚಿವರು ಅದನ್ನ ಕಬಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇನ್ನು ಇದಕ್ಕೆ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿ, ತನಿಖೆ ಎದುರಿಸಲು ಸಿದ್ಧ ಎಂದು ಖಡಕ್ ಆಗಿ ಹೇಳಿದ್ದಾರೆ.ಆದ್ರೆ, ಭೂಕಬಳಿಕೆ ಆರೋಪವನ್ನೇ ಅಸ್ತ್ರವಾಗಿಸಿಕೊಂಡು ಬಿಜೆಪಿ ಕೃಷ್ಣಭೈರೇಗೌಡರ ವಿರುದ್ಧ ಮುಗಿಬಿದ್ದಿದೆ. ಇಂದು (ಡಿಸೆಂಬರ್ 18) ಉಭಯ ಸದನದಲ್ಲೂ ಈ ವಿಚಾರವೇ ಪ್ರತಿಧ್ವನಿಸಿದೆ. ಬಿಜೆಪಿ ಆರೋಪಕ್ಕೆ ಸಚಿವರು ಕೂಡ ತಿರುಗೇಟು ಕೊಟ್ಟಿದ್ದಾರೆ. ಇನ್ನು ಬಿಜೆಪಿ ಆರೋಪ ಮಾಡಿರುವ ಆ ಭೂಮಿ ಹೇಗಿದೆ? ಎಲ್ಲಿದೆ? ಎನ್ನುವುದನ್ನು ನಮ್ಮ ಕೋಲಾರ ಪ್ರತಿನಿಧಿ ಸ್ಥಳದಿಂದ ಮಾಹಿತಿ ನೀಡಿದ್ದಾರೆ ನೋಡಿ.
ನಿರ್ದೇಶಕ ವೆಂಕಟ್ ಭಾರದ್ವಾಜ್ (Venkat Bharadwaj) ಅವರು ಬ್ಯಾಕ್ ಟು ಬ್ಯಾಕ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. 2025ರಲ್ಲಿ ಅವರು ಸೂಪರ್ ಫಾಸ್ಟ್ ಆಗಿ ಕೆಲಸ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ 2 ಸಿನಿಮಾಗಳು 2025ರಲ್ಲಿ ಬಿಡುಗಡೆ ಆದವು. ಅಲ್ಲದೇ ಇದೇ ವರ್ಷ ಅವರು ಇನ್ನೆರಡು ಸಿನಿಮಾಗಳ ಶೂಟಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಹೌದು, ವೆಂಕಟ್ ಭಾರದ್ವಜ್ ಆ್ಯಕ್ಷನ್-ಕಟ್ ಹೇಳಿದ ‘ಹೈನಾ’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಯಿತು. ಬಳಿಕ ನವೆಂಬರ್ ತಿಂಗಳಲ್ಲಿ ‘ಹೇ ಪ್ರಭು’ ಸಿನಿಮಾ ತೆರೆಕಂಡಿತು. ಈ ನಡುವೆಯೇ ಅವರು ‘ಚಾರ್ಜ್ಶೀಟ್’ (Chargesheet) ಹಾಗೂ ‘ರಕ್ಕಿ’ ಸಿನಿಮಾಗಳ ಶೂಟಿಂಗ್ ಮುಗಿಸಿದ್ದಾರೆ.
‘ಚಾರ್ಜ್ಶೀಟ್’ ಸಿನಿಮಾದಲ್ಲಿ ಕ್ರೈಮ್ ಕಥಾಹಂದರ ಇದರಲಿದೆ. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ‘ಅರ್ಜುನ್ ಫಿಲ್ಮ್ಸ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಈ ವರ್ಷ ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ಮುಗಿಸಲಾಯಿತು. ಅದರ ಜೊತೆಗೆ ವೆಂಕಟ್ ಭಾರದ್ವಾಜ್ ಅವರು ಇನ್ನೊಂದು ಸಿನಿಮಾ ಕೈಗೆತ್ತಿಕೊಂಡರು.
ವೆಂಕಟ್ ಭಾರದ್ವಾಜ್ ನಿರ್ದೇಶನದ ಇನ್ನೊಂದು ಸಿನಿಮಾ ‘ರಕ್ಕಿ’. ಈ ಸಿನಿಮಾವನ್ನು ‘ಎಸ್ಎನ್ಆರ್ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಮಾಡಲಾಗಿದೆ. ರಕ್ಕಿ ಸುರೇಶ್, ಆಶಿಕಾ ಸೋಮಶೇಖರ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
2003ರಲ್ಲಿ ಬೆಂಗಳೂರು ನಗರದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧಾರಿಸಿ ‘ಚಾರ್ಜ್ಶೀಟ್’ ಸಿನಿಮಾ ಸಿದ್ಧವಾಗುತ್ತಿದೆ. ಆ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಜೀವನಾನುಭವಗಳು ಮತ್ತು ಅವರ ಕಾದಂಬರಿಯನ್ನು ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ವೆಂಕಟ್ ಭಾರದ್ವಾಜ್ ಅವರು ಚಿತ್ರಕಥೆ, ಸಂಭಾಷಣೆಗಳು ಮತ್ತು ನಿರ್ದೇಶನ ಮಾಡಿದ್ದಾರೆ.
‘ಚಾರ್ಜ್ಶೀಟ್’ ಸಿನಿಮಾದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಅಮರ್, ಸತ್ಯಾ ರಾಮ್, ಡಾ. ಪ್ರಮೋದ್, ಡಾ. ಸುಧಾಕರ್ ಶೆಟ್ಟಿ, ಚೇತನ ಖೋಟ್, ರೂಪೇಶ್ ಹಾಗೂ ವೆಂಕಟ್ ಭಾರದ್ವಾಜ್ ಅಭಿನಯಿಸಿದ್ದಾರೆ. ಸಮೀರ್ ಕುಲಕರ್ಣಿ ಅವರು ಸಂಗೀತ ನೀಡಿದ್ದಾರೆ. ಪ್ರಮೋದ್ ಭಾರತೀಯ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಮೀಕ್ ವಿ. ಭಾರದ್ವಾಜ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಬಹಳ ಹಿಂದಿನಿಂದಲೂ ಆಯುರ್ವೇದವನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಸ್ಥಳೀಯ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ನಿರಂತರವಾಗಿ ಶಿಫಾರಸು ಮಾಡುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫಿಟ್ನೆಸ್ಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ರಾಮದೇವ್ ಸ್ವತಃ ಸೇವಿಸುವ ಅನೇಕ ಆರೋಗ್ಯಕರ ಆಹಾರಗಳ ಪಾಕವಿಧಾನಗಳನ್ನು ಸಹ ಅವರು ಹಂಚಿಕೊಳ್ಳುತ್ತಾರೆ. ಸಾಂಪ್ರದಾಯಿಕ ಚಳಿಗಾಲದ ಧಾನ್ಯಗಳು ಮತ್ತು ತರಕಾರಿಗಳು ದೇಹವನ್ನು ಒಳಗಿನಿಂದ ಬಲಪಡಿಸುತ್ತವೆ ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ ಎಂಬುದು ಅವರ ಅನಿಸಿಕೆ. ಈ ಬಾರಿ, ಬಾಬಾ ರಾಮದೇವ್ ಆರೋಗ್ಯಕರ ಪಿಜ್ಜಾ ತಯಾರಿಸಲು ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ತಿನ್ನುವ ಪ್ರವೃತ್ತಿ ಸಾಕಷ್ಟು ವ್ಯಾಪಕವಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪಿಜ್ಜಾವನ್ನು ಇಷ್ಟಪಡುತ್ತಾರೆ. ಆದಾಗ್ಯೂ, ಅದರಲ್ಲಿ ಬಳಸುವ ಹಿಟ್ಟು, ಸಾಸ್ ಮತ್ತು ಚೀಸ್ ನಿಧಾನವಾಗಿ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಳಿಗಾಲದ ಸೂಪರ್ಫುಡ್ ಬಳಸಿ ನೀವು ಮನೆಯಲ್ಲಿ ರುಚಿಕರವಾದ ಮತ್ತು ಆರೋಗ್ಯಕರ ಪಿಜ್ಜಾವನ್ನು ತಯಾರಿಸಬಹುದು. ಅದರ ಪ್ರಯೋಜನಗಳೇನು ಮತ್ತು ಅದನ್ನು ಹೇಗೆ ತಯಾರಿಸಬೇಕೆಂಬುದರ ವಿವರ ಇಲ್ಲಿದೆ.
ಬಾಬಾ ರಾಮದೇವ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪಿಜ್ಜಾ ಬಗ್ಗೆ ಮಾತನಾಡಿದ್ದಾರೆ. ಒಮ್ಮೆ ತಾನು ಅದನ್ನು ತಿನ್ನಲು ಪ್ರಯತ್ನಿಸಿದ್ಉದ, ಅದು ತನಗೆ ಇಷ್ಟವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಜನರು ಪಿಜ್ಜಾವನ್ನು ಜೀರ್ಣಿಸಿಕೊಳ್ಳಲು, ಅದರ ಜೊತೆಗೆ ಕೋಲ್ಡ್ ಡ್ರಿಂಕ್ಸ್ ಅನ್ನೂ ಕುಡಿಯುತ್ತಾರೆ. ಇದು ಹೊಟ್ಟೆಗೆ ಎಷ್ಟು ಹಾನಿಕಾರಕ ಎಂಬುದನ್ನು ಊಹಿಸಬಹುದು. ಇದಕ್ಕೆ ಬದಲಾಗಿ, ನೀವು ಮನೆಯಲ್ಲಿಯೇ ಆರೋಗ್ಯಕರ, ದೇಸಿ ಪಿಜ್ಜಾವನ್ನು ತಯಾರಿಸಬಹುದು. ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಬಾಬಾ ರಾಮದೇವ್ ಅವರು ಹಂಚಿಕೊಂಡ ಪೋಸ್ಟ್
ಚಳಿಗಾಲದ ಸೂಪರ್ಫುಡ್ಸ್ ಜೊತೆ ದೇಸಿ ಪಿಜ್ಜಾ
ಈ ವಿಡಿಯೋದಲ್ಲಿ ಬಾಬಾ ರಾಮದೇವ್ ಅವರು ಸಿರಿಧಾನ್ಯಗಳಲ್ಲೊಂದಾದ ಬಾಜ್ರಾದ ರೋಟಿ ಬಳಸಿ ಪಿಜ್ಜಾ ತಯಾರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ. ಇದು ದೇಹವನ್ನು ಬೆಚ್ಚಗಿಡಲು ಸಹಾಯವಾಗುತ್ತದಾದ್ದರಿಂದ ಇದನ್ನು ಚಳಿಗಾಲದ ಸೂಪರ್ಫುಡ್ ಎಂದು ಪರಿಗಣಿಸಲಾಗಿದೆ. ಈ ದೇಸಿ ಪಿಜ್ಜಾ ಮಾಡಲು, ಬಾಜರಾ ರೊಟ್ಟಿ ತಯಾರಿಸಿ, ಅದಕ್ಕೆ ಚೀಸ್ ಬದಲಿಗೆ ಮೇಲೆ ಬೆಣ್ಣೆಯನ್ನು ಹರಡಿ. ನಂತರ, ಮನೆಯಲ್ಲಿ ತಯಾರಿಸಿದ ಚಟ್ನಿಯನ್ನು ಹರಡಿ ಮತ್ತು ಅದರ ಮೇಲೆ ತರಕಾರಿಗಳನ್ನು ಹಾಕಿ. ಅಲ್ಲಿಗೆ, ನಿಮ್ಮ ದೇಸಿ ಮತ್ತು ಆರೋಗ್ಯಕರ ಪಿಜ್ಜಾ ಸಿದ್ಧವಾದಂತೆ.
ಬಾಜ್ರಾ ಧಾನ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ಇದರಲ್ಲಿ ಫೈಬರ್, ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ವೈಟಮಿನ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳಿವೆ. ಇದು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕ್ಕೆ, ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ನವದೆಹಲಿ, ಡಿಸೆಂಬರ್ 18: ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಪೊಲೀಸರು ಪತ್ನಿ ಮತ್ತು ಇಬ್ಬರು ಮಕ್ಕಳ ಕೊಲೆಗೆ (Murder) ಸಂಬಂಧಿಸಿದಂತೆ ವ್ಯಕ್ತಿಯನ್ನು ವಶಕ್ಕೆ ಪಡೆದ ನಂತರ, ಆ ಆರೋಪಿಯ ತಪ್ಪೊಪ್ಪಿಗೆಯ ವೇಳೆ ಆಘಾತಕಾರಿ ವಿವರಗಳು ಹೊರಬಿದ್ದಿವೆ. ಡಿಸೆಂಬರ್ 10ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ 33 ವರ್ಷದ ಫಾರೂಕ್ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೂಡ ಕೊಂದಿದ್ದ. ಬಳಿಕ ಆತ ತನ್ನ ಮನೆಯೊಳಗೆ 3 ಶವಗಳನ್ನು ಹೂತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿರುವ ಫಾರೂಕ್ ತನ್ನ ಪತ್ನಿ ತಾಹಿರಾ (32) ಬುರ್ಖಾ ಹಾಕದೆ ಹೊರಗೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಿದ್ದ. ಬುರ್ಖಾ ಧರಿಸದೆ ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ. 1 ತಿಂಗಳ ಹಿಂದೆ ಮನೆಯ ಖರ್ಚಿನ ಬಗ್ಗೆ ತನ್ನ ಪತ್ನಿಯೊಂದಿಗೆ ತೀವ್ರ ಜಗಳವಾಡಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ಫಾರೂಕ್ ಮನೆಯ ಖರ್ಚುಗಳಿಗೆ ಸಾಕಷ್ಟು ಹಣವನ್ನು ನೀಡಲಿಲ್ಲ ಎಂದು ತಾಹಿರಾ ಜಗಳವಾಡುತ್ತಿದ್ದಳು. ಈ ವಿವಾದದ ನಂತರ, ಬುರ್ಖಾ ಧರಿಸದೆ ಮುಜಫರ್ ನಗರದ ನಾರಾ ಗ್ರಾಮದಲ್ಲಿರುವ ತನ್ನ ಹೆತ್ತವರ ಮನೆಗೆ ಹೋಗಿದ್ದಳು.
ಆಕೆಯ ನಿರ್ಧಾರದಿಂದ ಕೋಪಗೊಂಡ ಫಾರೂಕ್ ಆಕೆ ಮನೆಗೆ ವಾಪಾಸ್ ಬಂದ ನಂತರ ಡಿಸೆಂಬರ್ 10ರ ರಾತ್ರಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಆ ಕೊಲೆಯನ್ನು ಕಂಡಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಸಹ ಕೊಂದು, ನಂತರ ಮೂರು ಶವಗಳನ್ನು ಮನೆಯಲ್ಲಿಯೇ ಹೂತು ಹಾಕಿದ್ದಾನೆ. ಈ ಬಗ್ಗೆ ಆತನೇ ಒಪ್ಪಿಕೊಂಡಿದ್ದಾನೆ. ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳ ಕಣ್ಣುಗಳನ್ನು ಕೂಡ ಕಿತ್ತುಹಾಕಿದ್ದಾಗಿ ಆತ ಹೇಳಿದ್ದಾನೆ.
ಶವವನ್ನು ಹೊರಗೆ ತೆಗೆದಾಗ ಅಪ್ರಾಪ್ತ ಹೆಣ್ಣುಮಕ್ಕಳ ದೇಹದಲ್ಲಿ ಒಬ್ಬರ ದೇಹದ ಒಂದು ಕಣ್ಣು ಕಿತ್ತು ಹೋಗಿದ್ದು, ಕೊಲೆ ನಡೆದ ಸ್ಥಳದಿಂದ ರಕ್ತಸಿಕ್ತವಾದ ಮರದ ಕೋಲನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮಕ್ಕಳನ್ನು ಹೊಡೆಯಲು ಅದನ್ನು ಬಳಸಿದ್ದಾನೆ ಎಂದು ಶಂಕಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿ, ಡಿಸೆಂಬರ್ 18: ಕೃಷ್ಣಾ ನದಿ ಯಾದಗಿರಿ (Yadgiri)ಜಿಲ್ಲೆಯ ಜನರ ಜೀವನಾಡಿ. ಈ ವರ್ಷ ಅತಿಯಾದ ಮಳೆಯಿಂದಾಗಿ ನದಿ ಮೈದುಂಬಿಕೊಂಡಿದೆ. ಇದರ ಜೊತೆಗೆ ಸಾಕಷ್ಟು ಮರಳು (sand) ಕೂಡ ಸಂಗ್ರಹವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ನದಿಯ ಒಡಲು ಬಗೆದು ಕೋಟ್ಯಂತರ ರೂ. ಮೌಲ್ಯದ ಮರಳು ಲೂಟಿ ಮಾಡುತ್ತಿದ್ದಾರೆ. ಕೊನೆಗೂ ಅಧಿಕಾರಿಗಳು ಧೈರ್ಯ ಮಾಡಿ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣ ನದಿ ತೀರದಲ್ಲಿ ಮರಳು ದಂಧೆ ಜೋರಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಮತ್ತು ಭೀಮಾ ನದಿ ತೀರದಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ನದಿಗೆ ಜೆಸಿಬಿ ಹಾಗೂ ಹಿಟಾಚಿಗಳನ್ನ ಇಳಿಸಿ ಅಕ್ರಮವಾಗಿ ಮರಳನ್ನ ಲೂಟಿ ಮಾಡಲಾಗುತ್ತಿದೆ. ಅದರಲ್ಲೂ ಕೃಷ್ಣಾ ನದಿಯಲ್ಲಂತೂ ಅಕ್ರಮ ದಂಧೆಕೋರರು ಹಗಲು ರಾತ್ರಿಯನ್ನೆದೇ ಮರಳನ್ನ ಲೂಟಿ ಮಾಡುತ್ತಿದ್ದಾರೆ.
ಅಕ್ರಮವಾಗಿ ಮರಳು ಸಂಗ್ರಹ ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ
ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ಸೂಗೂರು ಹಾಗೂ ಹೆಮ್ಮಡಗಿ ಬಳಿಯಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಅಧಿಕೃತ ಟೆಂಡರ್ ಕರೆದು ಪಾಯಿಂಟ್ ಗುರುತು ಮಾಡದೆ ಇದ್ದರೂ ಸಹ ಮರಳು ದಂಧೆಕೋರರು ಅಕ್ರಮವಾಗಿ ಮರಳನ್ನ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಮರಳನ್ನು ರಾಜಾರೋಷವಾಗಿ ಲೂಟಿ ಮಾಡುವ ಕೆಲಸವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಜನರು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಇದೀಗ ಅಧಿಕಾರಿಗಳು ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ.
ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ಸೂಗೂರು ಹಾಗೂ ಹೆಮ್ಮಡಗಿ ಬಳಿ ಪೊಲೀಸರ ಸಹಕಾರದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ ವಾರ ದಾಳಿ ಮಾಡಿದ್ದ ಅಧಿಕಾರಿಗಳು ಅಕ್ರಮ ಮರಳು ಸಂಗ್ರಹ ಕಂಡು ಶಾಕ್ ಆಗಿದ್ದಾರೆ. ಏಕೆಂದರೆ ಲೆಕ್ಕಕ್ಕೆ ಸಿಗದಷ್ಟು ಮರಳನ್ನ ನದಿಯಿಂದ ಬಗೆದು ಸಂಗ್ರಹಿಸಿಡಲಾಗಿತ್ತು. ಸದ್ಯ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿ ಲೆಕ್ಕ ಮಾಡಿದಾಗ ಮೂರು ಕಡೆ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮರಳು ಸಿಕ್ಕಿದೆ. ಸುಮಾರು 67 ಸಾವಿರ ಮೆಟ್ರಿಕ್ ಟನ್ ಮರಳು, ಬಳಕೆ ಮಾಡಿದ ಸುಮಾರು 20 ಹಿಟಾಚಿ ವಾಹನಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಸುರಪುರ ಪೊಲೀಸ್ ಠಾಣೆಯಲ್ಲಿ 16 ಜನರ ವಿರುದ್ಧ ಮೂರು ಪ್ರತ್ಯೇಕ ಕೇಸ್ ದಾಖಲು ಮಾಡಿದ್ದಾರೆ. ಇನ್ನು ಅಧಿಕಾರಿಗಳಿಗೆ ಸಾಕಷ್ಟು ಕಡೆಗಳಿಂದ ಕರೆಗಳು ಬರುತ್ತಿದ್ದು, ವಾಹನಗಳನ್ನ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೆ ತಲೆ ಕೆಡಿಸಿಕೊಳ್ಳದೆ ವಾಹನಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.