ಅಮರನಾಥ ಯಾತ್ರೆ ಭದ್ರತೆ ಪರಿಶೀಲನೆ; ಯಾತ್ರಾರ್ಥಿಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಅಮಿತ್ ಶಾ ಆದೇಶ – Kannada News | Home Minister Amit Shah Reviews Amarnath Yatra Preparation and Security in delhi

ನವದೆಹಲಿ, ಜೂನ್ 12: ಅಮರನಾಥ ಯಾತ್ರೆಯ ಭದ್ರತೆ ಕುರಿತು ಗೃಹ ಸಚಿವ ಅಮಿತ್ ಶಾ (Amit Shah) ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥರಂತಹ ಅಧಿಕಾರಿಗಳು ಭಾಗವಹಿಸಿದ್ದರು. ಈ ಯಾತ್ರೆಯ ಮಾರ್ಗದಲ್ಲಿ ಬಹು-ಪದರದ ಭದ್ರತಾ ಗ್ರಿಡ್ ಸ್ಥಾಪನೆ, ಡ್ರೋನ್‌ಗಳು ಮತ್ತು ಸಿಸಿಟಿವಿಗಳಂತಹ ಆಧುನಿಕ ತಂತ್ರಜ್ಞಾನಗಳ ವ್ಯಾಪಕ ಬಳಕೆ ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯವನ್ನು ಸುಧಾರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಯಾತ್ರಿಕರಿಗೆ ಅತ್ಯಂತ ಭದ್ರತೆ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ತಿಂಗಳಿನಿಂದ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಗೃಹ ಸಚಿವಾಲಯವು ಭದ್ರತಾ ತಂತ್ರಗಳನ್ನು ರೂಪಿಸಿದೆ. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಕಣ್ಗಾವಲು ಹೆಚ್ಚಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅಮಿತ್ ಶಾ ಸೂಚಿಸಿದ್ದಾರೆ. ಅವಗಳೆಂದರೆ,

RFID ಟ್ಯಾಗ್‌ಗಳ ಕಡ್ಡಾಯ ಬಳಕೆ:

ಪ್ರತಿಯೊಬ್ಬ ಯಾತ್ರಾರ್ಥಿ ಮತ್ತು ಅವರ ವಾಹನಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಲು ‘ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್’ (RFID) ಟ್ಯಾಗ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಯಾರಾದರೂ ದಾರಿ ತಪ್ಪಿದರೆ ಅಥವಾ ಸಂಕಷ್ಟಕ್ಕೆ ಸಿಲುಕಿದರೆ ತಕ್ಷಣ ಪತ್ತೆಹಚ್ಚಬಹುದು.

ಇದನ್ನೂ ಓದಿ: ಅಮರನಾಥ ಯಾತ್ರೆಗೆ ಹೋಗಬೇಕಾ? ಏಪ್ರಿಲ್ 15ರಿಂದ ನೋಂದಣಿ ಆರಂಭ

ಡ್ರೋನ್ ಮತ್ತು ಸಿಸಿಟಿವಿ ಕಣ್ಗಾವಲು:

ಯಾತ್ರಾ ಮಾರ್ಗಗಳು, ತಂಗುದಾಣಗಳು ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ದಿನದ 24 ಗಂಟೆಯೂ ನಿಗಾ ಇಡಲು ಅತ್ಯಾಧುನಿಕ ಡ್ರೋನ್‌ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಆ್ಯಂಟಿ-ಡ್ರೋನ್ ವ್ಯವಸ್ಥೆ:

ಗಡಿ ನಿಯಂತ್ರಣ ರೇಖೆಯ (LoC) ಸಮೀಪದಿಂದ ಎದುರಾಗಬಹುದಾದ ಡ್ರೋನ್ ದಾಳಿಗಳ ಭೀತಿಯನ್ನು ಎದುರಿಸಲು ಪ್ರಮುಖ ಸ್ಥಳಗಳಲ್ಲಿ ಆ್ಯಂಟಿ-ಡ್ರೋನ್ ತಂತ್ರಜ್ಞಾನವನ್ನು ನಿಯೋಜಿಸಲಾಗುವುದು.

ಇದನ್ನೂ ಓದಿ: ಅಮರನಾಥ ಯಾತ್ರೆ ಮಾರ್ಗವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಣೆ

ಇದರ ಜೊತೆಗೆ ಯಾತ್ರಾ ಮಾರ್ಗದಲ್ಲಿ ಆಮ್ಲಜನಕದ ಕೊರತೆಯಾಗದಂತೆ ಅಗತ್ಯ ಸಿಲಿಂಡರ್‌ಗಳು ಹಾಗೂ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗುವುದು. ಹವಾಮಾನ ವೈಪರೀತ್ಯ ಅಥವಾ ಭೂಕುಸಿತ ಸಂಭವಿಸಿದರೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಯನ್ನು ಸನ್ನದ್ಧ ಸ್ಥಿತಿಯಲ್ಲಿಡುವುದು. ಯಾತ್ರಾರ್ಥಿಗಳಿಗೆ ನಿರಂತರ ವಿದ್ಯುತ್, ಕುಡಿಯುವ ನೀರು ಮತ್ತು ಸುಸಜ್ಜಿತ ರಸ್ತೆ ಸಂಪರ್ಕವನ್ನು ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಂದಿನ ಸಭೆಯಲ್ಲಿ ಸೂಚನೆ ನೀಡಲಾಯಿತು.
2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಗೃಹ ಸಚಿವ ಅಮಿತ್ ಶಾ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ಭದ್ರತಾ ಗ್ರಿಡ್ ಅನ್ನು ಬಲಪಡಿಸಲು ಮತ್ತು ಉತ್ತಮ ಸಮನ್ವಯದ ಮೂಲಕ ಬಾಬಾ ಬರ್ಫಾನಿ ಭೇಟಿಗೆ ಪ್ರಯಾಣಿಸುವ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದರು. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಮರನಾಥ ಯಾತ್ರೆಯಲ್ಲಿ ಯಾತ್ರಾರ್ಥಿಗಳಿಗೆ ಅತ್ಯುನ್ನತ ಭದ್ರತೆ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಾಲಾ ಹಿರಣ್’ ಚಿತ್ರದ ತಡೆ ಕೋರಿ ಸಲ್ಮಾನ್ ಖಾನ್ ಅರ್ಜಿ: ದೆಹಲಿ ಹೈಕೋರ್ಟ್‌ನಲ್ಲಿ ಜೂನ್ 19ರಂದು ವಿಚಾರಣೆ – Kannada News | Salman Khan Vs Kala Hiran Case Delhi High Court to hear actors Plea on 19 June

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದ ಹಿನ್ನೆಲೆಯನ್ನು ಆಧರಿಸಿ ಸಿದ್ಧವಾಗುತ್ತಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran: The Battle for Legacy) ಸಿನಿಮಾ ವಿವಾದ ಈಗ ನ್ಯಾಯಾಲಯದ ಅಂಗಳ ತಲುಪಿದೆ. ಸಲ್ಮಾನ್ ಖಾನ್ ಸಲ್ಲಿಸಿರುವ ತುರ್ತು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜೂನ್ 19ಕ್ಕೆ ನಿಗದಿಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ (Salman Khan) ಮತ್ತು ‘ಕಾಲಾ ಹಿರಣ್’ ಸಿನಿಮಾ ನಿರ್ಮಾಪಕ ನಡುವೆ ಕಾನೂನಿನ ಸಮರ ಶುರುವಾಗಿದೆ.

ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಸಲ್ಮಾನ್ ಖಾನ್ ಅವರು ಚಿತ್ರದ ನಿರ್ಮಾಣ, ಪ್ರಚಾರ ಹಾಗೂ ಬಿಡುಗಡೆಗೆ ತಕ್ಷಣವೇ ತಡೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾದ ಟೀಸರ್‌ನಲ್ಲಿ ಸಲ್ಮಾನ್ ಖಾನ್ ಅವರ ಸಾರ್ವಜನಿಕ ಇಮೇಜ್, ಅವರ ಐಕಾನಿಕ್ ಬ್ರೇಸ್‌ಲೆಟ್ ಮತ್ತು ಅವರ ವೈಯಕ್ತಿಕ ಕಾನೂನು ಹೋರಾಟದ ವಿವರವನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದಾರೆ.

ಚಿತ್ರದ ಪ್ರಚಾರದ ಉದ್ದೇಶಕ್ಕಾಗಿ ಚಿತ್ರತಂಡವು ಪರೋಕ್ಷವಾಗಿ ಸಲ್ಮಾನ್ ಖಾನ್ ಹೆಸರನ್ನು ಬಳಸಿಕೊಳ್ಳುತ್ತಿದ್ದು, ಇದರಿಂದ ಅವರ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿ, ಚಿತ್ರದ ಕೆಲಸಗಳನ್ನು ನಿಲ್ಲಿಸುವಂತೆ ಹಾಗೂ ಪ್ರಚಾರದ ವಸ್ತುಗಳನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ ನಿರ್ಮಾಪಕ ಅಮಿತ್ ಜಾನಿ ನೇತೃತ್ವದ ಚಿತ್ರತಂಡ ಇದಕ್ಕೆ ಕಿವಿಕೊಡದೆ ಸಿನಿಮಾದ ಕೆಲಸವನ್ನು ಮುಂದುವರಿಸಿದೆ.

‘ಕಾಲಾ ಹಿರಣ್’ ಚಿತ್ರದ ಟೀಸರ್:

ಅಮಿತ್ ಜಾನಿ ನಿರ್ಮಾಣದ ಈ ಚಿತ್ರವು ಸಲ್ಮಾನ್ ಖಾನ್ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ಹಗೆತನದ ಕಥೆಯನ್ನು ಹೋಲುತ್ತಿರುವುದರಿಂದ ಈಗಾಗಲೇ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಜೂನ್ 19ರಂದು ನಡೆಯಲಿರುವ ದೆಹಲಿ ಹೈಕೋರ್ಟ್ ವಿಚಾರಣೆಯು ಈ ಬಹುಚರ್ಚಿತ ಸಿನಿಮಾದ ಭವಿಷ್ಯವನ್ನು ನಿರ್ಧರಿಸಲಿದ್ದು, ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ‘ಕಾಲಾ ಹಿರನ್’ ಚಿತ್ರದ ಟೀಸರ್ ಅತ್ಯಂತ ವಿವಾದಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಸಲ್ಮಾನ್ ಖಾನ್ ಅವರನ್ನೇ ಹೋಲುವ ‘ಅಯಾನ್ ಖಾನ್’ ಪಾತ್ರವು ರಾತ್ರಿಯಲ್ಲಿ ಕಾಡಿನ ಮಧ್ಯೆ ಕೃಷ್ಣಮೃಗವನ್ನು ಬೇಟೆಯಾಡುವ ದೃಶ್ಯಗಳು ಮತ್ತು ಆ ಘಟನೆಯ ನಂತರ ಜೈಲಿನ ಒಳಗಿನಿಂದಲೇ ‘ಲಯನ್ ಬಿಷ್ಣೋಯ್’ ಎಂಬ ಪಾತ್ರವು ಮುಂಬೈ ಅಂಡರ್‌ವರ್ಲ್ಡ್‌ಗೆ ಸವಾಲು ಹಾಕುತ್ತಾ ಕೊಲೆ ಬೆದರಿಕೆ ಒಡ್ಡುವ ಡೈಲಾಗ್‌ಗಳು ಟೀಸರ್‌ನ ಹೈಲೈಟ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs AFG: ಧರ್ಮಶಾಲಾದಲ್ಲಿ ಭಾರೀ ಮಳೆ; ಮೊದಲ ಏಕದಿನ ಪಂದ್ಯ ನಡೆಯುವುದು ಅನುಮಾನ! – Kannada News | IND vs AFG ODI: Rain Threatens Dharamshala Opener; Match Preview and Weather Update

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಜೂನ್ 13 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದಾಗ್ಯೂ, ಈ ಪಂದ್ಯ ನಡೆಯುವುದು ಅನುಮಾನವಾಗಿದೆ. ಏಕೆಂದರೆ ಪಂದ್ಯ ಪ್ರಾರಂಭವಾಗುವ ಮೊದಲೇ, ಧರ್ಮಶಾಲಾದಲ್ಲಿ ಭಾರೀ ಮಳೆಯಾಗುತ್ತಿದ್ದು (Rain threat Dharamshala), ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ಪಂದ್ಯದ ದಿನ ಎಲ್ಲೋ ಅಲರ್ಟ್

ಧರ್ಮಶಾಲಾದಲ್ಲಿ ಇಂದು ಅಂದರೆ ಶುಕ್ರವಾರದಂದು ಹವಾಮಾನ ಸ್ಪಷ್ಟವಾಗಿತ್ತು. ಅಂದರೆ ಈ ದಿನ ಮಳೆಯಾಗಿರಲಿಲ್ಲ, ಬದಲಿಗೆ ಮೋಡ ಕವಿದ ವಾತಾವರಣವಿತ್ತು. ಆದಾಗ್ಯೂ, ಗುರುವಾರ ಧರ್ಮಶಾಲಾದಲ್ಲಿ ಮಳೆಯಾಗಿತ್ತು. ಇನ್ನು ಜೂನ್ 13 ರಂದು ಅಂದರೆ ಪಂದ್ಯ ನಡೆಯುವ ದಿನದಂದು ಭಾರತ ಹವಾಮಾನ ಇಲಾಖೆ ಧರ್ಮಶಾಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಎಲ್ಲೋ ಅಲರ್ಟ್​ ನೀಡಿದೆ. ಹೀಗಾಗಿ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಭೀತಿ ಉಂಟಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಜೂನ್ 13 ರಂದು ಈ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಆದಾಗ್ಯೂ, ಅಕ್ಯೂವೆದರ್ ಪ್ರಕಾರ, ದಿನದ ಶೇ. 90 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಆದ್ದರಿಂದ, ಪಂದ್ಯದ ಸಮಯದಲ್ಲಿ ಮಳೆಯಿಂದ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಅಭಿಮಾನಿಗಳು ಟಾಸ್ ವಿಳಂಬ ಮತ್ತು ಓವರ್‌ಗಳ ಸಂಖ್ಯೆಯಲ್ಲಿ ಕಡಿತವನ್ನು ಸಹ ನಿರೀಕ್ಷಿಸಬಹುದು.

ಪಿಚ್ ಮೇಲೆ ಪರಿಣಾಮ

ಮಳೆ ಬಂದರೆ, ಅದು ಪಿಚ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗುತ್ತದೆ. ಧರ್ಮಶಾಲಾದ ಹವಾಮಾನವು ಸಾಮಾನ್ಯವಾಗಿ ತಂಪಾಗಿರುತ್ತದೆ. ಹೀಗಾಗಿ ಗಾಳಿಯಲ್ಲಿನ ಆರ್ದ್ರತೆಯು ಚೆಂಡು ಹೆಚ್ಚು ಸ್ವಿಂಗ್ ಆಗಲು ಕಾರಣವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡೂ ತಂಡಗಳು ತಮ್ಮ ಆಡುವ ಹನ್ನೊಂದನ್ನು ಆಯ್ಕೆ ಮಾಡಬೇಕಾಗುತ್ತದೆ.

ಮುಖಾಮುಖಿ ದಾಖಲೆ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಎರಡೂ ತಂಡಗಳು ಇಲ್ಲಿಯವರೆಗೆ ನಾಲ್ಕು ಏಕದಿನ ಪಂದ್ಯಗಳನ್ನು ಆಡಿವೆ. ಈ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಇದರರ್ಥ ಅಫ್ಘಾನಿಸ್ತಾನವು ಇದುವರೆಗೆ ಒಂದೇ ಒಂದು ಏಕದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರೇನ್ ಟ್ಯೂಮರ್ ಲಕ್ಷಣಗಳು ಹೇಗಿರುತ್ತೆ ಗೊತ್ತಾ? ಮೈಗ್ರೇನ್ ಅಥವಾ ಸ್ಟ್ರೆಸ್ ಎಂದು ನಿರ್ಲಕ್ಷ್ಯ ಮಾಡದಿರಿ – Kannada News | Early Signs Of Brain Tumor That People Commonly Ignore

ಇತ್ತೀಚಿನ ದಿನಗಳಲ್ಲಿ ತಲೆನೋವು, ಒತ್ತಡ ಮತ್ತು 0 (Migraine) ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಕೆಲವೊಮ್ಮೆ ಇದೇ ಲಕ್ಷಣಗಳು ಬ್ರೇನ್ ಟ್ಯೂಮರ್ (Brain Tumor) ಎಂಬ ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು, ಆರಂಭಿಕ ಹಂತದಲ್ಲಿ ಬ್ರೇನ್ ಟ್ಯೂಮರ್ ಲಕ್ಷಣಗಳು ಸಾಮಾನ್ಯ ತಲೆನೋವಿನಂತೆ ಕಾಣುವುದರಿಂದ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನ್ಯೂರೋ ಸರ್ಜನ್‌ಗಳ ಪ್ರಕಾರ, ನಿರಂತರ ತಲೆನೋವು, ದೃಷ್ಟಿ ಸಮಸ್ಯೆ, ವಾಂತಿ, ಸಮತೋಲನ ಕಳೆದುಕೊಳ್ಳುವುದು ಅಥವಾ ಮಾತಿನಲ್ಲಿ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಹಾಗಾದರೆ ಸಾಮಾನ್ಯ ತಲೆನೋವು ಮತ್ತು ಬ್ರೇನ್ ಟ್ಯೂಮರ್ ಗಿರುವ ವ್ಯತ್ಯಾಸವೇನು, ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯ ತಲೆನೋವಿಗಿಂತ ವಿಭಿನ್ನವಾದ ನೋವು:

ಬ್ರೇನ್ ಟ್ಯೂಮರ್‌ನಿಂದ ಉಂಟಾಗುವ ತಲೆನೋವು ಸಾಮಾನ್ಯ ಒತ್ತಡದ ತಲೆನೋವಿನಂತಿರದು. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಸಮಯದಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಕೆಮ್ಮಿದಾಗ, ತಲೆ ತಗ್ಗಿಸಿದಾಗ ಅಥವಾ ಮಲಗಿದಾಗ ನೋವು ಹೆಚ್ಚಾಗಬಹುದು. ಇದನ್ನು ನಿದ್ರಾಹೀನತೆ ಅಥವಾ ಮೈಗ್ರೇನ್ ಎಂದು ನಿರ್ಲಕ್ಷ್ಯ ಮಾಡುವುದು ಅಪಾಯಕಾರಿಯಾಗಿದೆ.

ನಿರಂತರ ವಾಂತಿ ಮತ್ತು ವಾಕರಿಕೆ:

ಬೆಳಿಗ್ಗೆ ಎದ್ದ ಕೂಡಲೇ ವಾಕರಿಕೆ ಅಥವಾ ವಾಂತಿ ಆಗುವುದು ಕೂಡ ಪ್ರಮುಖ ಲಕ್ಷಣವಾಗಿದೆ. ಮೆದುಳಿನ ಒಳಭಾಗದಲ್ಲಿ ಒತ್ತಡ ಹೆಚ್ಚಾದಾಗ ಈ ಸಮಸ್ಯೆ ಕಾಣಿಸಬಹುದು. ಹಲವರು ಇದನ್ನು ಅಜೀರ್ಣ ಅಥವಾ ಆಸಿಡ್ ಸಮಸ್ಯೆ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ.

ದೃಷ್ಟಿ ಸಮಸ್ಯೆ:

ಬ್ರೇನ್ ಟ್ಯೂಮರ್ ಮೆದುಳಿನ ದೃಷ್ಟಿಯನ್ನು ನಿಯಂತ್ರಿಸುವ ಭಾಗದ ಮೇಲೆ ಪರಿಣಾಮ ಬೀರಿದರೆ, ಮಸುಕಾಗಿ ಕಾಣುವುದು, ಡಬಲ್ ವಿಸನ್, ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು ಅಥವಾ ಕೆಲ ಕ್ಷಣ ದೃಷ್ಟಿ ಕಳೆದುಕೊಂಡಂತೆ ಆಗಬಹುದು. ಆದರೆ ಮೊಬೈಲ್ ಹೆಚ್ಚು ಬಳಸುವುದರಿಂದಲೂ ಈ ರೀತಿ ಆಗುತ್ತದೆ ಎಂದು ನಿರ್ಲಕ್ಷ್ಯ ಮಾಡಬಾರದು.

ಇದನ್ನೂ ಓದಿ: ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ

ನೆನಪಿನ ಶಕ್ತಿ ಮತ್ತು ಮಾತನಾಡುವಾಗ ಸಮಸ್ಯೆ:

ಯಾವುದಾದರೂ ಮುಖ್ಯ ವಿಷಯವನ್ನು ಮರೆತುಹೋಗುವುದು, ಸರಿಯಾಗಿ ಗಮನ ಕೇಂದ್ರೀಕರಿಸಲಾಗದಿರುವುದು ಅಥವಾ ಮಾತನಾಡುವಾಗ ಪದಗಳು ನೆನಪಿಗೆ ಬರದಿರುವುದು ಕೂಡ ಬ್ರೇನ್ ಟ್ಯೂಮರ್‌ನ ಸೂಚನೆಯಾಗಿರಬಹುದು.

ಸಮತೋಲನ ಕಳೆದುಕೊಳ್ಳುವುದು: ನಡೆಯುವಾಗ ವಾಲುವುದು, ತಲೆಸುತ್ತು, ದೇಹದ ಸಮತೋಲನ ತಪ್ಪುವುದು ಅಥವಾ ಬೇಗ ದಣಿವಾಗುವುದು ಕೂಡ ಎಚ್ಚರಿಕೆಯ ಲಕ್ಷಣಗಳಾಗಿವೆ.

ಚಿಕಿತ್ಸೆ ಹೇಗೆ?

ಬ್ರೇನ್ ಟ್ಯೂಮರ್ ಚಿಕಿತ್ಸೆಯು ಅದರ ಗಾತ್ರ, ಪ್ರಕಾರ ಮತ್ತು ಇರುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಸರ್ಜರಿ, ರೇಡಿಯೇಷನ್ ಥೆರಪಿ ಮತ್ತು ಕಿಮೋಥೆರಪಿ ಸೇರಿದಂತೆ ಹಲವು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ – Kannada News | Jailer Siddaramappa Dies In Dharwad, Wife alleges On DGP Alok Kumar

ಧಾರವಾಡ, (ಜೂನ್ 12): ಅಮಾನತುಗೊಂಡು ಬಳಿಕ ಧಾರವಾಡದಿಂದ ಮೈಸೂರಿಗೆ ವರ್ಗಾವಣೆಗೊಂಡಿದ್ದ ಜೈಲರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಕಾರಾಗೃಹದ ಕ್ವಾರ್ಟರ್ಸ್​ ನಲ್ಲಿ ನಡೆದಿದೆ. ಸಿದ್ದರಾಮಪ್ಪ ವಡ್ಡರ್(37) ಆತ್ಮಹತ್ಯೆ ಮಾಡಿಕೊಂಡ ಜೈಲರ್. ಕರ್ತವ್ಯಲೋಪ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಸಿದ್ದರಾಮಪ್ಪನನ್ನು ಅಮಾನತ್ತು ಮಾಡಲಾಗಿತ್​ತು. ಬಳಿಕ ಧಾರವಾಡದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೂ ಸಹ ಮೈಸೂರಿನಲ್ಲಿ ವರದಿ ಮಾಡಿಕೊಂಡಿರಲಿಲ್ಲ. ಬದಲಿಗೆ ನೇಣಿಗೆ ಶರಣಾಗಿದ್ದಾನೆ. ಇನ್ನು ಈ ಆತ್ಮಹತ್ಯೆಗೆ ಕಾರಗೃಹ ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಸಿದ್ದರಾಮಪ್ಪನ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯೆಸಿದ ಮೃತ ಸಿದ್ದರಾಮಪ್ಪನ ಪತ್ನಿ ಲಕ್ಷ್ಮೀ, ಅಲೋಕ್ ಕುಮಾರ್ ಅವರೇ ನನ್ನ‌ ಗಂಡನ ಜೀವ ಪಡೆದರು. ಸಸ್ಪೆಂಡ್ ‌ಮಾಡಿದ್ದಾರೆ. ಮುಂದೆ ಜೈಲಿಗೆ ಕಳಿಸುತ್ತಾರೆ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಸಸ್ಪೆಂಡ್ ‌ಮಾಡಿದ್ದು, ಇದೀಗ ಮೈಸೂರಿಗೆ ವರ್ಗಾವಣೆ ‌ಮಾಡಿದ್ದರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದರು. ಆದರೆ ತಂದೆ, ತಾಯಿ ಮುಖ ನೋಡಿ ಹೋಗುತ್ತೇನೆ ಅಂದಿದ್ದರು. ಆದರೆ ಇದೀಗ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ‌ ಮೇಲೆ ಕ್ರಮ ಆಗುತ್ತೆ ಏನು ಮಾಡಬೇಕು ಅನ್ನುತ್ತಿದ್ದರು. ಯಾವಾಗಲೂ ನನ್ನ ಅಲೋಕ್ ‌ಕುಮಾರ್ ಜೈಲಿಗೆ ‌ಕಳಿಸುತ್ತಾರೆ ಅನ್ನುತ್ತಿದ್ದರು ಎಂದು ಎಂದು ಆರೋಪಿಸಿದ್ದಾರೆ.

Source link

‘ಧಮಾಲ್ 4’ ಟ್ರೇಲರ್ ರಿಲೀಸ್: ಅಜಯ್ ದೇವಗನ್ ಗ್ಯಾಂಗ್‌ನಿಂದ ಮತ್ತೆ ಕಾಮಿಡಿ ಹಂಗಾಮಾ – Kannada News | Ajay Devgn Arshad Warsi Dhamaal 4 Movie Trailer released

ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಫ್ರಾಂಚೈಸಿಗಳಲ್ಲಿ ಒಂದಾದ ‘ಧಮಾಲ್’ ಸರಣಿಯ ಬಹುನಿರೀಕ್ಷಿತ ‘ಧಮಾಲ್ 4’ ಚಿತ್ರದ ಟ್ರೇಲರ್ (Dhamaal 4 Trailer) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮುಂಬೈ ಹೊರವಲಯದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ‘ಇಮ್ಯಾಜಿಕಾ’ದಲ್ಲಿ ಚಿತ್ರತಂಡವು ವಿಭಿನ್ನವಾದ ಇಮರ್ಸಿವ್ ಶೈಲಿಯಲ್ಲಿ ಟ್ರೇಲರ್ ಲಾಂಚ್ ಮಾಡಿದ್ದು, ಸಿನಿಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದಿದ್ದಾರೆ. ಕಾಮಿಡಿ ಪ್ರಿಯರಿಗೆ ‘ಧಮಾಲ್ 4’ (Dhamaal 4) ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ.

ಚಿತ್ರದ ಟ್ರೇಲರ್ ಎಂದಿನಂತೆ ನಗು, ಸಾಹಸ ಮತ್ತು ಗೊಂದಲಗಳ ಮಹಾಪೂರವನ್ನೇ ಹೊತ್ತು ತಂದಿದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನಗುವಂತಹ ಕಚಗುಳಿ ಇಡುವ ದೃಶ್ಯಗಳು ಟ್ರೇಲರ್‌ನಲ್ಲಿ ಹೈಲೈಟ್ ಆಗಿವೆ. ಈ ಬಾರಿ ಧಮಾಲ್ ಗ್ಯಾಂಗ್‌ಗೆ ಬಂಗಾರದ ಬೆಟ್ಟದಂತಹ ದೊಡ್ಡ ನಿಧಿಯೊಂದರ ಸುಳಿವು ಸಿಗುತ್ತದೆ. ಅದನ್ನು ಹುಡುಕಿಕೊಂಡು ಹೊರಡುವ ಇಡೀ ಗ್ಯಾಂಗ್ ಸಿಕ್ಕಿಬೀಳುವ ಹಾಸ್ಯಾಸ್ಪದ ಸನ್ನಿವೇಶಗಳು, ಕಾಡಿನ ಸಾಹಸಗಳು ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳು ಟ್ರೇಲರ್‌ನಲ್ಲಿ ಭರಪೂರ ಮನರಂಜನೆ ನೀಡುವ ಭರವಸೆ ಮೂಡಿಸಿವೆ.

‘ಧಮಾಲ್ 4’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಒಂದಾಗಿದೆ. ಅಜಯ್ ದೇವ್ಗನ್, ಅರ್ಶದ್ ವಾರ್ಸಿ, ರಿತೇಶ್ ದೇಶ್‌ಮುಖ್, ಜಾವೇದ್ ಜಾಫೇರಿ ಮತ್ತು ಸಂಜಯ್ ಮಿಶ್ರಾ ಮುಖ್ಯ ಭೂಮಿಕೆಯಲ್ಲಿ ಮರಳಿದ್ದಾರೆ. ಇವರ ಜೊತೆಗೆ ಇಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಾಯೆ, ವಿಜಯ್ ಪಾಟ್ಕರ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಧಮಾಲ್ 4’ ಸಿನಿಮಾದ ಟ್ರೇಲರ್:

ಈ ಚಿತ್ರವನ್ನು ಹಿರಿಯ ನಿರ್ದೇಶಕ ಇಂದ್ರ ಕುಮಾರ್ ನಿರ್ದೇಶಿಸಿದ್ದು, ಅಜಯ್ ದೇವ್ಗನ್, ಭೂಷಣ್ ಕುಮಾರ್, ಕ್ರಿಷಣ್ ಕುಮಾರ್ ಸೇರಿದಂತೆ ಪ್ರಮುಖರು ಜಂಟಿಯಾಗಿ ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಜುಲೈ 10ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಮೊದಲಿನ 3 ಸಿನಿಮಾಗಳ ರೀತಿಯೇ ‘ಧಮಾಲ್ 4’ ಕೂಡ ಭರ್ಜರಿ ಮನರಂಜನೆ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ಧಮಾಲ್ ಸರಣಿಯ ಇತಿಹಾಸ:

ಧಮಾಲ್ (2007): ನಾಲ್ಕು ಜನ ಸೋಮಾರಿ ಗೆಳೆಯರು ಗೋವಾದಲ್ಲಿ ಬಚ್ಚಿಟ್ಟ ಕೋಟ್ಯಂತರ ರೂಪಾಯಿ ನಿಧಿಯನ್ನು ಹುಡುಕುವ ಕಥೆಯೊಂದಿಗೆ ಈ ಸರಣಿ ಆರಂಭವಾಗಿ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ಸಂಜಯ್ ದತ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.

ಡಬಲ್ ಧಮಾಲ್ (2011): ಮೊದಲ ಭಾಗದ ಮುಂದುವರಿದ ಕಥೆಯಾಗಿ ತೆರೆಕಂಡು ಯಶಸ್ವಿಯಾಗಿತ್ತು.

ಟೋಟಲ್ ಧಮಾಲ್ (2019): ಹೊಸ ಪಾತ್ರಗಳು ಮತ್ತು ಅಜಯ್ ದೇವ್ಗನ್ ಎಂಟ್ರಿಯೊಂದಿಗೆ ಸ್ಟ್ಯಾಂಡ್-ಅಲೋನ್ ರಿಬೂಟ್ ಆಗಿ ಬಂದು ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ ಅದೇ ಯಶಸ್ಸಿನ ಸರಣಿಯಲ್ಲಿ ನಾಲ್ಕನೇ ಭಾಗವಾಗಿ ‘ಧಮಾಲ್ 4’ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಡಿಕೆ ಶಿವಕುಮಾರ್ ಇಟ್ಟ 9 ಬೇಡಿಕೆಗಳು ಹೀಗಿವೆ

ನವದೆಹಲಿ, (ಜೂನ್ 12): ಡಿಕೆ ಶಿವಕುಮಾರ್ (DK Shivakumar)  ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದೆಹಲಿಯಲ್ಲಿ (New Delhi) ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದು, ತಮ್ಮ ಮೊದಲ ಸಭೆಯಲ್ಲಿ ಕೆಲ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಿ ಕರ್ನಾಟಕದ (Karnataka) ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಮಾಡಿದ್ದಾರೆ. ಇನ್ನು ಇಂದು (ಜೂನ್ 12) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನೂ ಸಹ ಭೇಟಿ ಮಾಡಿದ್ದು, ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗಲು ಮನವಿ ಮಾಡಿದ್ದಾರೆ. ಅಲ್ಲದೇ ಈ ವೇಳೆ ಒಂಭತ್ತು ಬೇಡಿಕೆಗಳ ಮನವಿಯನ್ನೂ ಸಲ್ಲಿಕೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
  • ದೆಹಲಿಯ ಕರ್ತವ್ಯಭವನದಲ್ಲಿ ಅಮಿತ್ ಶಾ ಭೇಟಿಯಾಗಿ ಮಹತ್ವದ ಚರ್ಚೆ
  • ಇದೇ ವೇಳೆ ಅಮಿತ್ ಶಾ ಮುಂದೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಒಂಭತ್ತು ಬೇಡಿಕೆಗಳನ್ನಿಟ್ಟ ಡಿಕೆಶಿ

ಇದನ್ನೂ ಓದಿ: ಒಂದು ಭೇಟಿ, ಹತ್ತಾರು ಬೇಡಿಕೆ: ಪ್ರಧಾನಿ ಮೋದಿ ಮುಂದೆ ಡಿಕೆಶಿ ಇಟ್ಟ ಬೇಡಿಕೆಗಳಾವುವು? ಇಲ್ಲಿದೆ ಪಟ್ಟಿ

ಅಮಿತ್ ಶಾ ಮುಂದೆ ಡಿಕೆಶಿ ಇಟ್ಟ 9 ಬೇಡಿಕೆಗಳು

  1. ಕರ್ನಾಟಕ ರಾಜ್ಯ ಪೊಲೀಸ್‌ಗೆ ‘ಪ್ರೆಸಿಡೆಂಟ್ಸ್ ಕಲರ್’ (ರಾಷ್ಟ್ರಪತಿಗಳ ಅತ್ಯುನ್ನತ ಗೌರವ) ಪ್ರಶಸ್ತಿ:
    ಕರ್ನಾಟಕ ರಾಜ್ಯ ಪೊಲೀಸ್‌ಗೆ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿಯನ್ನು ನೀಡುವ ಕುರಿತಾದ ಪ್ರಸ್ತಾವನೆಯನ್ನು 08-05-2024 ರಂದು ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪ್ರಸ್ತುತ ಅದು ಪರಿಶೀಲನೆಯಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇನ್ನು ಸಹ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಬೇಕಾಗಿದೆ. ಈ ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ನೀಡಲು ಅನುಮೋದನೆ ನೀಡಬೇಕು.
  2. ಎರಡು ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ಸ್ (IRBs) ಸೃಷ್ಟಿ: ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಇನ್ನೂ ಎರಡು ಹೆಚ್ಚುವರಿ ಐಆರ್‌ಬಿ (IRB) ಬೆಟಾಲಿಯನ್‌ಗಳನ್ನು ಸ್ಥಾಪಿಸಲು ಅಂದಾಜು 243.87 ಕೋಟಿ ರೂ.ಗಳ ವೆಚ್ಚದ ಹೊಸ ಪ್ರಸ್ತಾವನೆಯನ್ನು ಪತ್ರ ಸಂಖ್ಯೆ HD/133/POP/2024 ದಿನಾಂಕ 04-02-2025 ರ ಮೂಲಕ ಸಚಿವಾಲಯಕ್ಕೆ ಕಳುಹಿಸಲಾಗಿದೆ.ಇದಕ್ಕೆ ಶೀಘ್ರವಾಗಿ ಮಂಜೂರಾತಿ ನೀಡಬೇಕೆಂದು ನಾನು ವಿನಂತಿಸುತ್ತೇನೆ.
  3. ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು (ASUMP) – 2025-26:ನಾಲ್ಕು ಪ್ರಮುಖ ನಗರಗಳಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು ಹಾಗೂ ಸಂವಹನ ಉಪಕರಣಗಳ ಸ್ಥಾಪನೆಗಾಗಿ ASUMP ಯೋಜನೆಯಡಿ 280.00 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಮಂಜೂರಾತಿ ನೀಡಬೇಕು.
  4. ಕಂಪನಿಗಳ ಕಾಯ್ದೆ, 2013 ರ ಶೆಡ್ಯೂಲ್ VII ರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳ ಸೇರ್ಪಡೆ (CSR): ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕಂಪನಿಗಳ ಕಾಯ್ದೆ, 2013 ರ ಶೆಡ್ಯೂಲ್ VII ರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳನ್ನು ಸೇರಿಸುವ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಶೀಘ್ರವಾಗಿ ಅನುಮೋದನೆ ನೀಡಬೇಕು.
  5.  ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮೇಲ್ದರ್ಜೀಕರಣ:BPR&D ಯ ಗ್ಯಾಪ್ ಅನಾಲಿಸಿಸ್ (GAP Analysis) ಮಾರ್ಗಸೂಚಿಗಳ ಪ್ರಕಾರ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು 258.53 ಕೋಟಿ ರೂ.ಗಳ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗಿದೆಇದಕ್ಕೆ ನಿಮ್ಮ ಅನುಮೋದನೆ ಕೋರುತ್ತೇನೆ.
  6. ಕಾರಾಗೃಹಗಳ (ಜೈಲುಗಳ) ಆಧುನೀಕರಣ: ಕಾರಾಗೃಹಗಳ ಆಧುನೀಕರಣ ಯೋಜನೆಯಡಿ 2025-26 ರ ಆರ್ಥಿಕ ವರ್ಷಕ್ಕೆ (ಸಿಸಿಟಿವಿ, ವಾಕಿ-ಟಾಕಿ ಮತ್ತು ಇತರ ಭದ್ರತಾ ಉಪಕರಣಗಳ ಖರೀದಿಗೆ) 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೊತ್ತವನ್ನು ಶೀಘ್ರ ಮಂಜೂರು ಮಾಡಬೇಕು.
  7.  ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ರ ನಿಯಮ 52-A ಅನುಷ್ಠಾನದ ಗಡುವು ವಿಸ್ತರಣೆ: ಕರ್ನಾಟಕದಲ್ಲಿ ನಿಯಮ 52-A ಅನ್ನು ಅನುಷ್ಠಾನಗೊಳಿಸಲು ಗಡುವನ್ನು ವಿಸ್ತರಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ದಯವಿಟ್ಟು ತಾವು ಈ ವಿಷಯವನ್ನು ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸಿ, ಆದಷ್ಟು ಬೇಗ ಅನುಮೋದನೆ ಕೊಡಿಸಬೇಕು.
  8.  ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳ ಮೇಲ್ದರ್ಜೀಕರಣ: ಗೌರವಾನ್ವಿತ ಭಾರತದ ಸುಪ್ರೀಂ ಕೋರ್ಟ್ ಮುಂದೆ ನಡೆದ ಚರ್ಚೆಗಳ ಅನುಸಾರ, ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೆ ಏರಿಸಲು ASUMP ಅಡಿಯಲ್ಲಿ 278.26 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಪರಿಗಣಿಸಬೇಕು.
  9.  ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್ (K4C) ಸ್ಥಾಪನೆ: ಸೈಬರ್ ಅಪರಾಧಗಳು ಸಮಾಜ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಹಾಗೂ ನಿರಂತರ ಸವಾಲನ್ನು ಒಡ್ಡುತ್ತಿವೆ. ಇವುಗಳನ್ನು ನಿಗ್ರಹಿಸಲು ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆ ಅಗತ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್: ಲೋಕಾಯುಕ್ತ ದಾಳಿಯಲ್ಲಿ ಬಯಲಾಯಿತು ಸತ್ಯ – Kannada News | Irregularities Uncovered: Lokayukta Investigation At Ramanagara RTO Highlights Proxy Employment And Broker Menace

ರಾಮನಗರ, ಜೂ.12: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್​ಪಿ ಪಿ.ವಿ.ಸ್ನೇಹಾ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ಕಚೇರಿಯ ಇಂಚಿಂಚೂ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಆರ್‌ಟಿಒ ಕಚೇರಿಯ ಕರಾಳ ಮುಖ ಬಯಲಾಗಿದೆ. ನಿಯಮದ ಪ್ರಕಾರ ಕೇವಲ 7 ದಿನಗಳಲ್ಲಿ ಸಾರ್ವಜನಿಕರ ಕೈ ಸೇರಬೇಕಾಗಿದ್ದ ಲೈಸೆನ್ಸ್ ಹಾಗೂ ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು, ಮೂರು ತಿಂಗಳು ಕಳೆದರೂ ವಿತರಣೆಯಾಗದೆ ಕಚೇರಿಯಲ್ಲೇ ಕಂತೆ ಕಂತೆಯಾಗಿ ಶೇಖರಣೆಗೊಂಡಿರುವುದು ಪತ್ತೆಯಾಗಿದೆ. ಸಾರ್ವಜನಿಕರು ನೇರವಾಗಿ ಬಂದರೆ ಕೆಲಸ ಮಾಡಿಕೊಡದ ಸಿಬ್ಬಂದಿ, ಏಜೆಂಟ್​ಗಳ ಮೂಲಕ ಲಂಚದ ಹಣದೊಂದಿಗೆ ಬಂದರೆ ಮಾತ್ರ ಕೆಲಸ ಮಾಡಿಕೊಡುತ್ತಿದ್ದರು ಎಂಬ ದೂರುಗಳು ದಾಳಿ ವೇಳೆ ಸಾಬೀತಾಗಿವೆ. ಇನ್ನು ವಾರದ ಹಿಂದೆಯಷ್ಟೇ ಇದೇ ಕಚೇರಿ ಆವರಣದಲ್ಲಿ ಕಮಿಷನ್ ವಿಚಾರಕ್ಕಾಗಿ ಏಜೆಂಟ್​ಗಳ ನಡುವೆ ಭೀಕರ ಹೊಡೆದಾಟ ನಡೆದಿದ್ದರೂ ಆರ್‌ಟಿಒ ಅಧಿಕಾರಿಗಳು ಯಾವುದೇ ಪೊಲೀಸ್ ದೂರು ನೀಡದೆ ಭ್ರಷ್ಟರನ್ನು ರಕ್ಷಿಸಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಕಚೇರಿಯ ಮೇಲೆ ಈಗಾಗಲೇ ಮೂರು ಬಾರಿ ಲೋಕಾಯುಕ್ತ ದಾಳಿ ನಡೆದಿದ್ದರೂ ಭ್ರಷ್ಟಾಚಾರದ ಹಾದಿ ಮಾತ್ರ ಬದಲಾಗಿರಲಿಲ್ಲ. ಕಚೇರಿಯಲ್ಲಿ ತುಂಬಿ ತುಳುಕುತ್ತಿದ್ದ ಅಕ್ರಮಗಳು, ಸ್ಮಾರ್ಟ್ ಕಾರ್ಡ್ ವಿಳಂಬ ಹಾಗೂ ಏಜೆಂಟ್‌ಗಳ ದರ್ಬಾರ್ ಕುರಿತು ಲೋಕಾಯುಕ್ತ ಎಸ್​ಪಿ ಪಿ.ವಿ.ಸ್ನೇಹಾ ಅವರು ಕೇಳಿದ ಖಡಕ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆರ್‌ಟಿಒ ಅಧಿಕಾರಿ ಟಿ.ಎ.ಸತೀಶ್ ಬಾಬು ಕಚೇರಿಯಲ್ಲೇ ತಬ್ಬಿಬ್ಬಾಗಿ ತಡಕಾಡಿದ್ದಾರೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಪ್ರಮುಖ ಕಡತಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುಣೆಯಲ್ಲಿ ಟಿಸಿಎಸ್ ಉದ್ಯೋಗಿ ಆತ್ಮಹತ್ಯೆ; ಇಬ್ಬರು ಮಹಿಳಾ ಸಹೋದ್ಯೋಗಿಗಳ ವಿರುದ್ಧ ಕೇಸ್ ದಾಖಲು – Kannada News | TCS employee dies by suicide after Repeatedly Humiliating him FIR against 2 women colleagues

ಪುಣೆ, ಜೂನ್ 12: ಮಹಾರಾಷ್ಟ್ರದ ಪುಣೆಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯ 48 ವರ್ಷದ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಹೋದ್ಯೋಗಿಗಳ ಕಿರುಕುಳವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಮಾಹಿತಿ ತಂತ್ರಜ್ಞಾನ ನೌಕರರ ಸಂಘಟನೆಯಾದ NITES ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆದಿದೆ.

ಟಿಸಿಎಸ್ ಉದ್ಯೋಗಿಯಾದ ಪುಣೆಯ ಪಿಂಪ್ರಿ ಚಿಂಚಾವಡ್ ವ್ಯಾಪ್ತಿಯ ಭೋಸರಿ ನಿವಾಸಿಯಾದ ಅಮಿತ್ ಅಭಯ್ ಬ್ರಹ್ಮೆ ಎಂಬ 48 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹಿಂಜೆವಾಡಿಯಲ್ಲಿರುವ ಟಿಸಿಎಸ್ (TCS) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 2ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ಬರೆದಿದ್ದ ‘ಡೆತ್ ನೋಟ್’ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತರ 19 ವರ್ಷದ ಮಗ ನೀಡಿದ ದೂರಿನ ಮೇರೆಗೆ ಜೂನ್ 9ರಂದು ಭೋಸರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನ ಪ್ರಕಾರ, ಅಮಿತ್ ಬ್ರಹ್ಮೆ ಅವರ ಆತ್ಮಹತ್ಯೆಗೆ ಕುಟುಂಬದ ಪರಿಚಯಸ್ಥನೊಬ್ಬನ ಅಪಪ್ರಚಾರ ಮತ್ತು ಕಂಪನಿಯೊಳಗಿನ ಸಹೋದ್ಯೋಗಿಗಳ ಕಿರುಕುಳ ಕಾರಣ. ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಸಹೋದ್ಯೋಗಿಗಳು ಇತರ ಉದ್ಯೋಗಿಗಳ ಸಮ್ಮುಖದಲ್ಲೇ ಅಮಿತ್ ಅವರಿಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಮಿತ್ ಅವರ ಕೈಯಲ್ಲಿದ್ದ ಒಂದು ಉತ್ತಮ ಪ್ರಾಜೆಕ್ಟ್ ಅನ್ನು ಬಲವಂತವಾಗಿ ಕಸಿದುಕೊಂಡು, ಅವರಿಗೆ ಯಾವುದೇ ಅನುಭವವಿಲ್ಲದ ಬೇರೆ ಕೆಲಸವನ್ನು ಮಾಡಲು ಒತ್ತಾಯಿಸಲಾಗಿತ್ತು. ಅಷ್ಟೇ ಅಲ್ಲದೆ, ಅವರ ವಿರುದ್ಧ ಕಂಪನಿಗೆ ನೆಗೆಟಿವ್ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್

ಅಮಿತ್ ಅವರ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, 2024ರಲ್ಲಿ ಫೇಸ್‌ಬುಕ್ ಮೂಲಕ ಆರೋಪಿಯ ಪತ್ನಿಯೊಂದಿಗೆ ಗೆಳತನ ಹೊಂದಿದ್ದರು. ಅಂದಿನಿಂದ ಎರಡೂ ಕುಟುಂಬಗಳ ನಡುವೆ ಪರಿಚಯವಿತ್ತು. ಆದರೆ, ಆರೋಪಿ ವ್ಯಕ್ತಿಯು ತನ್ನ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದರಿಂದ, ಆಕೆ ಎನ್‌ಜಿಒ ಒಂದರ ಸಹಾಯದಿಂದ ಫಿಲಿಪೈನ್ಸ್ ದೇಶಕ್ಕೆ ತೆರಳಿದ್ದಳು. ತನ್ನ ಪತ್ನಿ ಮನೆ ಬಿಟ್ಟು ವಿದೇಶಕ್ಕೆ ಹೋಗಲು ಅಮಿತ್ ಬ್ರಹ್ಮೆ ಮತ್ತು ಅವರ ಪತ್ನಿಯೇ ಕಾರಣ ಎಂದು ಆ ವ್ಯಕ್ತಿ ತಪ್ಪು ತಿಳಿದುಕೊಂಡಿದ್ದರು. ಈ ದ್ವೇಷದಿಂದಾಗಿ ಆತ ಅಮಿತ್ ವಿರುದ್ಧ ಹಿಂಜೆವಾಡಿ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಕಳ್ಳತನದ ಸುಳ್ಳು ದೂರುಗಳನ್ನು ನೀಡಿದ್ದರು. ಜೊತೆಗೆ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿ, ಟಿಸಿಎಸ್ ಕಂಪನಿಯ ಅಧಿಕೃತ ಇಮೇಲ್‌ಗೂ ಅಮಿತ್ ವಿರುದ್ಧ ಸುಳ್ಳು ದೂರುಗಳನ್ನು ರವಾನಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಟಿಸಿಎಸ್​​ನ ಇಬ್ಬರು ಮಹಿಳಾ ಸಿಬ್ಬಂದಿಯ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಟಿಸಿಎಸ್ (TCS) ಕಂಪನಿಯ ಅಧಿಕಾರಿಗಳಿಗೆ ಪೊಲೀಸರು ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ. ಕೌಟುಂಬಿಕ ದ್ವೇಷ ಸಾಧಿಸಿ ಸುಳ್ಳು ದೂರು ನೀಡಿದ್ದ ಮೂರನೇ ಆರೋಪಿ ವ್ಯಕ್ತಿಯ ಬಂಧನಕ್ಕಾಗಿ ಪೊಲೀಸರು ಸದ್ಯ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಟಿಸಿಎಸ್ ಮತಾಂತರ ಪ್ರಕರಣ: ತಾನು ಗರ್ಭಿಣಿ ಎಂದು ನ್ಯಾಯಾಲಯದ ಮೊರೆ ಹೋದ ಆರೋಪಿ ನಿದಾ ಖಾನ್

ಈ ಘಟನೆಯನ್ನು ಐಟಿ ನೌಕರರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯಾದ NITES ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕಾರ್ಪೊರೇಟ್ ವಲಯದಲ್ಲಿ ಹೆಚ್ಚುತ್ತಿರುವ ಇಂತಹ ಮಾನಸಿಕ ಕಿರುಕುಳ ಮತ್ತು ಕೆಲಸದ ಒತ್ತಡದ ಸಂಸ್ಕೃತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಘಟನೆಯು ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಮಹಾರಾಷ್ಟ್ರ ಮುಖ್ಯಮಂತ್ರಿಯವರು ತಕ್ಷಣವೇ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ – Kannada News | Salman Khan lookalike Blackbuck Case Kala Hiran movie Teaser Viral Case in Delhi High Court

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಜೀವನದ ಅತ್ಯಂತ ವಿವಾದಾತ್ಮಕ ಅಧ್ಯಾಯವಾಗಿದ್ದ 1998ರ ಕೃಷ್ಣಮೃಗ ಬೇಟೆ (Blackbuck Case) ಪ್ರಕರಣವನ್ನು ಆಧರಿಸಿ ಸಿದ್ಧವಾಗುತ್ತಿರುವ ಹೊಸ ಸಿನಿಮಾ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ನಟ ಸಲ್ಮಾನ್ ಖಾನ್ (Salman Khan) ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಸವಾಲು ಹಾಕಿದೆ.

ಅಮಿತ್ ಜಾನಿ ನಿರ್ಮಾಣದ ಈ ಕ್ರೈಮ್ ಥ್ರಿಲ್ಲರ್ ಮತ್ತು ಕೋರ್ಟ್‌ರೂಮ್ ಡ್ರಾಮಾ ಚಿತ್ರದ ಟೀಸರ್ ಸಂಪೂರ್ಣವಾಗಿ ಸಲ್ಮಾನ್ ಖಾನ್ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ಹಗೆತನವನ್ನು ಹೋಲುವಂತಿದೆ. ಟೀಸರ್‌ನಲ್ಲಿ ಸಲ್ಮಾನ್ ಖಾನ್ ಅವರನ್ನೇ ಹೋಲುವ ನಟ ಕಾಸಿಫ್ ಇಕ್ಬಾಲ್ ಖಾನ್ ಅವರು ‘ಅಯಾನ್ ಖಾನ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಅವರ ಐಕಾನಿಕ್ ಗುರುತಾದ ನೀಲಿ ಬಣ್ಣದ ಬ್ರೇಸ್‌ಲೆಟ್ ಅನ್ನು ಸಹ ಈ ಪಾತ್ರಕ್ಕೆ ತೊಡಿಸಲಾಗಿದೆ. ಈ ಅಯಾನ್ ಖಾನ್ ಕಾಡಿನಲ್ಲಿ ಕೃಷ್ಣಮೃಗವನ್ನು ಬೇಟೆಯಾಡುವುದು ಮತ್ತು ನಂತರ ಜೈಲಿನಲ್ಲಿರುವ ‘ಲಯನ್ ಬಿಷ್ಣೋಯ್’ ಎಂಬ ಪಾತ್ರದಿಂದ ಕೊಲೆ ಬೆದರಿಕೆ ಪಡೆಯುವ ದೃಶ್ಯಗಳು ಟೀಸರ್‌ನಲ್ಲಿವೆ.

ಚಿತ್ರತಂಡವು ಕಾನೂನು ಕೈಯಿಂದ ಬಚಾವಾಗಲು ಪಾತ್ರಗಳ ಹೆಸರನ್ನು ಬದಲಾಯಿಸಿದೆ. ಸಲ್ಮಾನ್ ಖಾನ್ ಹೆಸರನ್ನು ‘ಅಯಾನ್ ಖಾನ್’ ಎಂದು, ಲಾರೆನ್ಸ್ ಬಿಷ್ಣೋಯ್ ಹೆಸರನ್ನು ‘ಲಯನ್ ಬಿಷ್ಣೋಯ್’ ಎಂದು ಬದಲಾಯಿಸಲಾಗಿದೆ. ಇಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ‘ದಬಾಂಗ್’ನ ಚುಲ್ಬುಲ್ ಪಾಂಡೆ ಪಾತ್ರವನ್ನು ಇಲ್ಲಿ ‘ಬುಲ್ಬುಲ್ ಚೌಬೆ’ ಎಂದು ಮರುಸೃಷ್ಟಿಸಲಾಗಿದೆ. ಟೀಸರ್‌ನಲ್ಲಿ ಬರುವ ಒಂದು ಸಂಭಾಷಣೆ ಈಗ ವೈರಲ್ ಆಗಿದೆ. ‘ಮುಂಬೈ ಅಂಡರ್‌ವರ್ಲ್ಡ್‌ಗೆ ಒಬ್ಬನೇ ಬಾಸ್ ಇದ್ದ, ಅವನೇ ದಾವೂದ್.. ಆದರೆ ಇವತ್ತು ದಾವೂದ್‌ಗೂ ಒಬ್ಬ ಅಪ್ಪ ಇದ್ದಾನೆ, ಅವನ ಹೆಸರೇ ಲಯನ್ ಬಿಷ್ಣೋಯ್!’ ಎಂಬ ಡೈಲಾಗ್ ಇದೆ.

‘ಕಾಲಾ ಹಿರಣ್’ ಸಿನಿಮಾದ ಟೀಸರ್:

ಹಿರಿಯ ನಟ ಗೋವಿಂದ್ ನಾಮದೇವ್ ಅವರು ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇಡೀ ಪ್ರಕರಣದ ಹಿನ್ನೆಲೆಯನ್ನು ವಿವರಿಸುತ್ತಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆಗಳು ಮತ್ತು ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಅವರನ್ನೇ ಹೋಲುವ ಪಾತ್ರಗಳ ಝಲಕ್ ಕೂಡ ಟೀಸರ್‌ನಲ್ಲಿದೆ.

ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ

ಈ ಚಿತ್ರವು ತನ್ನ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಮತ್ತು ಸಾರ್ವಜನಿಕವಾಗಿ ತನ್ನ ಇಮೇಜ್‌ಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಈಗ ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ತಾವು ಈಗಾಗಲೇ ಖುಲಾಸೆಗೊಂಡಿದ್ದರೂ, ಚಿತ್ರದ ಪೋಸ್ಟರ್‌ನಲ್ಲಿ ತಮ್ಮನ್ನು ಹೋಲುವ ಪಾತ್ರದ ಕೈಗೆ ಗನ್ ನೀಡಿ ಸಾರ್ವಜನಿಕರನ್ನು ಹಾದಿ ತಪ್ಪಿಸಲಾಗುತ್ತಿದೆ ಎಂದು ಸಲ್ಮಾನ್ ವಾದಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version