ಅನ್​ಫಿಟ್​… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?

Source link

ಕನಸಿನ ಮನೆ ಕಾಗದಕ್ಕಷ್ಟೇ ಸೀಮಿತವಾಯ್ತು, 34ನೇ ಫ್ಲೋರ್​ನಲ್ಲಿ ಫ್ಲಾಟ್ ಖರೀದಿಸಿದ ವ್ಯಕ್ತಿಗೆ ಎದುರಾಯ್ತು ಸಂಕಷ್ಟ, ಕಟ್ಟದಲ್ಲಿದ್ದಿದ್ದೇ 32 ಮಹಡಿಗಳು – Kannada News

ಕಟ್ಟಡ-ಸಾಂದರ್ಭಿಕ ಚಿತ್ರImage Credit source: South China Morning Post

ಶಾಂಕ್ಸಿ, ಜೂನ್ 09: ಚೀನಾ(China)ದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದ ಶೆನ್ ಎಂಬ ವ್ಯಕ್ತಿಯ ಕಥೆ ಇದು. ಒಂದು ದಶಕದ ಹಿಂದೆ, ಮಧ್ಯಮ ವರ್ಗದ ಪ್ರತಿಯೊಬ್ಬ ಸಾಮಾನ್ಯನಂತೆ ತನಗೂ ಒಂದು ಸ್ವಂತ ಮನೆ ಇರಬೇಕು ಎಂಬ ಕನಸು ಕಂಡಿದ್ದ ಶೆನ್, ಇಂದು ಆ ಮನೆಯೂ ಇಲ್ಲದೆ, ಕಷ್ಟಪಟ್ಟು ದುಡಿದ ಹಣವೂ ಸಿಗದೆ ಅಸಹಾಯಕರಾಗಿ ನಿಂತಿದ್ದಾರೆ. ರಿಯಲ್ ಎಸ್ಟೇಟ್‌ನ ಹಪಾಹಪಿತನ ಮತ್ತು ಕಾನೂನುಬಾಹಿರ ಹಗರಣಗಳು ಹೇಗೆ ಒಬ್ಬ ಸಾಮಾನ್ಯ ಮನುಷ್ಯನ ಬದುಕನ್ನು ಬೀದಿಗೆ ತರಬಲ್ಲವು ಎಂಬುದಕ್ಕೆ ಇವರ ಜೀವನವೇ ಒಂದು ಕಣ್ಣೀರಿನ ಉದಾಹರಣೆ.

ಕೇವಲ ಮೂರನೇ ಒಂದು ಭಾಗದ ಬೆಲೆಗೆ ಸಿಕ್ಕ ಆಮಿಷ
2013 ರಲ್ಲಿ, ಷಿಯಾನ್ ಬಳಿಯ ಹಳ್ಳಿಯೊಂದರಲ್ಲಿ ಅಪಾರ್ಟ್ಮೆಂಟ್ ಯೋಜನೆಯೊಂದು ಆರಂಭವಾಗಿತ್ತು. ಅಲ್ಲಿನ ಮಾರುಕಟ್ಟೆ ದರಕ್ಕಿಂತ ಕೇವಲ ಮೂರನೇ ಒಂದು ಭಾಗದಷ್ಟು ಕಡಿಮೆ ಬೆಲೆಗೆ (ಪ್ರತಿ ಚದರ ಮೀಟರ್‌ಗೆ ಸುಮಾರು 37,431 ರೂ. ರಂತೆ) ಫ್ಲಾಟ್ ಸಿಗುತ್ತಿದೆ ಎಂದು ತಿಳಿದ ಶೆನ್ ಸಂತೋಷಪಟ್ಟಿದ್ದರು. 90 ಚದರ ಮೀಟರ್ ವಿಸ್ತೀರ್ಣದ ಸುಂದರ ಅಪಾರ್ಟ್ಮೆಂಟ್‌ನ ಒಟ್ಟು ಮೌಲ್ಯ ಸುಮಾರು 33.69 ಲಕ್ಷ ರೂ.ಆಗಿತ್ತು.

ಆದರೆ, ಈ ಕಡಿಮೆ ಬೆಲೆಯ ಹಿಂದೆ ‘ಸೀಮಿತ ಆಸ್ತಿ ಹಕ್ಕುಗಳು’ (Limited Property Rights) ಎಂಬ ರಿಯಲ್ ಎಸ್ಟೇಟ್‌ನ ಕರಾಳ ಜಾಲ ಅಡಗಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಇದು ನಗರದ ಭೂಮಿಯ ಬದಲಿಗೆ, ಗ್ರಾಮೀಣ ಸಾಮೂಹಿಕ ಭೂಮಿಯಲ್ಲಿ ಯಾವುದೇ ಸರ್ಕಾರಿ ಅನುಮೋದನೆ ಇಲ್ಲದೆ ಅಕ್ರಮವಾಗಿ ನಿರ್ಮಿಸುವ ವಸತಿಯಾಗಿತ್ತು. ಇಂತಹ ಮನೆಗಳಿಗೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ.

ಮನೆಯ ಆಸೆಗೆ ಬಿದ್ದ ಶೆನ್, ಭವಿಷ್ಯದಲ್ಲಿ ಎಲ್ಲಾ ದಾಖಲೆಗಳನ್ನು ನೀಡುವುದಾಗಿ ಡೆವಲಪರ್ ಕೊಟ್ಟ ಸುಳ್ಳು ಭರವಸೆಯನ್ನು ನಂಬಿ, ತನ್ನ ಜೀವಮಾನದ ಉಳಿತಾಯದಿಂದ 1,17,700 ಯುವಾನ್ (ಸುಮಾರು 16 ಲಕ್ಷ ರೂ.) ಹಣವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿದರು.

ಮತ್ತಷ್ಟು ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

34ನೇ ಮಹಡಿಯ ಫ್ಲಾಟ್, ಆದರೆ ಕಟ್ಟಡಕ್ಕೆ ಕೇವಲ 32 ಅಂತಸ್ತು
2015 ರಲ್ಲಿ ಕೈಗೆ ಸಿಗಬೇಕಾಗಿದ್ದ ಮನೆ ನಿರ್ಮಾಣ ವಿಳಂಬದ ಕಾರಣದಿಂದಾಗಿ ಮುಂದೂಡಲ್ಪಡುತ್ತಾ ಸಾಗಿತು. ಕೊನೆಗೆ 2017 ರಲ್ಲಿ ಶೆನ್ ಅವರಿಗೆ ಡೆವಲಪರ್ ಕಡೆಯಿಂದ ಬಂದ ಒಂದು ಕರೆ ಅವರ ಕಾಲ ಕೆಳಗಿನ ಭೂಮಿಯನ್ನೇ ಕುಸಿಯುವಂತೆ ಮಾಡಿತು.

ಡೆವಲಪರ್ ಅತ್ಯಂತ ನಿರ್ಲಕ್ಷ್ಯದಿಂದ, ನೀವು ಖರೀದಿಸಿರುವ 34ನೇ ಮಹಡಿಯ ಫ್ಲಾಟ್ ಅಸ್ತಿತ್ವದಲ್ಲೇ ಇಲ್ಲ. ಏಕೆಂದರೆ ನಾವು ನಿರ್ಮಿಸಿರುವ ಇಡೀ ಕಟ್ಟಡವೇ ಕೇವಲ 32 ಅಂತಸ್ತುಗಳದ್ದಾಗಿದೆ ಎಂದು ತಿಳಿಸಿದ್ದರು.

ಕಂಪನಿಯು ಅವರಿಗೆ ಪರ್ಯಾಯವಾಗಿ 32ನೇ ಮಹಡಿಯಲ್ಲಿ ಮತ್ತೊಂದು ಫ್ಲಾಟ್ ನೀಡುವುದಾಗಿ ಹೇಳಿತಾದರೂ, ಆ ಸಮಯದಲ್ಲಿ ಉಳಿದ ಬಾಕಿ ಹಣವನ್ನು ತಕ್ಷಣವೇ ಹೊಂದಿಸಲು ಶೆನ್ ಅವರಿಂದ ಸಾಧ್ಯವಾಗಲಿಲ್ಲ. ಕೇವಲ ಎರಡು ತಿಂಗಳ ಅವಧಿಯಲ್ಲಿ ಡೆವಲಪರ್ ಆ ಫ್ಲಾಟ್‌ಅನ್ನು ಬೇರೊಬ್ಬ ಖರೀದಿದಾರನಿಗೆ ಮಾರಿ ಶೆನ್ ಅವರನ್ನು ಸಂಪೂರ್ಣವಾಗಿ ಬೀದಿಗೆ ತಳ್ಳಿದ್ದರು.

ಹಣವೂ ಇಲ್ಲ, ಮನೆಯೂ ಇಲ್ಲ
ಮನೆ ಕಳೆದುಕೊಂಡ ಶೆನ್ ತನ್ನ ಪೂರ್ಣ ಹಣವನ್ನು ಮರಳಿ ಪಡೆಯಲು ಡೆವಲಪರ್ ಕಚೇರಿಗೆ ಅಲೆಯಲಾರಂಭಿಸಿದರು. ಆದರೆ ಕಂಪನಿಯು ತಾನು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇನೆ ಎಂದು ನೆಪ ಒಡ್ಡಿತು. ಸತತ ಒತ್ತಾಯದ ನಂತರ 2020 ರಲ್ಲಿ 20,000 ಯುವಾನ್ ಮತ್ತು 2022 ರಲ್ಲಿ 50,000 ಯುವಾನ್‌ಗಳ ಭಾಗಶಃ ಮರುಪಾವತಿ ಸಿಕ್ಕಿತಾದರೂ, ಆ ನಂತರ ಡೆವಲಪರ್ ಊರು ಬಿಟ್ಟು ದೂರ ಹೋಗಿದ್ದ, ಕರೆಗೂ ಸಿಗುತ್ತಿರಲಿಲ್ಲ.

ನೊಂದ ಶೆನ್ ಕೊನೆಗೆ ನ್ಯಾಯದ ಮೊರೆ ಹೋದರು. ಮಧ್ಯಸ್ಥಿಕೆ ಅಧಿಕಾರಿಗಳು ಮತ್ತು ಸ್ಥಳೀಯ ನ್ಯಾಯಾಲಯವು ಶೆನ್ ಅವರ ಪರವಾಗಿ ತೀರ್ಪು ನೀಡಿ, ಉಳಿದ 47,700 ಯುವಾನ್ ಡೌನ್ ಪೇಮೆಂಟ್, ಅದಕ್ಕೆ ತಕ್ಕ ಬಡ್ಡಿ (27,000 ಯುವಾನ್) ಹಾಗೂ ವಿಳಂಬಕ್ಕೆ ಹೆಚ್ಚುವರಿ 47,000 ಯುವಾನ್ ಪರಿಹಾರವನ್ನು ನೀಡುವಂತೆ ಸಾಲಗಾರ ಡೆವಲಪರ್‌ಗೆ ಆದೇಶಿಸಿತು.

ಇಂದಿಗೂ ಮುಂದುವರಿದ ಕಣ್ಣೀರಿನ ಪಯಣ
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶವಿದ್ದರೂ, ಈ ವರ್ಷದ ಮೇ ತಿಂಗಳವರೆಗೂ ಶೆನ್ ಅವರಿಗೆ ಬಿಡಿಗಾಸೂ ಸಿಕ್ಕಿಲ್ಲ. ಏಕೆಂದರೆ, ಆ ವಂಚಕ ಡೆವಲಪರ್ ತನ್ನ ಹೆಸರಿನಲ್ಲಿ ಯಾವುದೇ ನೋಂದಾಯಿತ ಆಸ್ತಿ ಅಥವಾ ಬ್ಯಾಂಕ್ ಉಳಿತಾಯವನ್ನು ಹೊಂದಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಕೋರ್ಟ್ ಆದೇಶವಿದ್ದರೂ ಅದನ್ನು ಜಾರಿಗೊಳಿಸುವುದು ಅಸಾಧ್ಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿಶೀಟರ್ ಎಣ್ಣೆ ಪಾರ್ಟಿ ಪ್ರಕರಣ: ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ಅಮಾನತು – Kannada News

ರೌಡಿಶೀಟರ್ ಎಣ್ಣೆ ಪಾರ್ಟಿ (ಎಡ ಚಿತ್ರ) ಹಾಗೂ ಮದ್ದೂರು ವಲಯ ಅರಣ್ಯಾಧಿಕಾರಿ ಡಿ. ಪುನೀತ್ ಕುಮಾರ್ Image Credit source: tv9

ಚಾಮರಾಜನಗರ, ಜೂನ್ 9: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶದಲ್ಲಿ ರೌಡಿಶೀಟರ್ ಮತ್ತು ಆತನ ಪಟಾಲಂ ನಡೆಸಿದ್ದ ಬಿಂದಾಸ್ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಬಂಡೀಪುರದ ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ (RFO) ಡಿ. ಪುನೀತ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಕರ್ತವ್ಯ ಲೋಪಕ್ಕೆ ಆರ್‌ಎಫ್‌ಒ ಪುನೀತ್ ಅಮಾನತು.
  • ರೌಡಿಶೀಟರ್ ಪಾರ್ಟಿಗೆ ಮೌನ ಸಮ್ಮತಿ ಆರೋಪ.
  • ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಶೋಧ.

ಸೌರ ಫಲಕವನ್ನೇ ಟೇಬಲ್ ಮಾಡಿಕೊಂಡಿದ್ದ ಕಿಡಿಗೇಡಿಗಳು

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ‘ಹುಲಿ ಕಟ್ಟೆ’ ಎಂಬಲ್ಲಿರುವ ಕಳ್ಳಬೇಟೆ ತಡೆ ಶಿಬಿರದ (Anti-Poaching Camp) ಮುಂಭಾಗದಲ್ಲೇ ಕುಖ್ಯಾತ ರೌಡಿಶೀಟರ್ ಸತೀಶ್ ಯಾನೆ ಮಹದೇವಪ್ರಸಾದ್ ಹಾಗೂ ಆತನ ಸ್ನೇಹಿತರಾದ ಗಂಗಾಧರ್ ಮತ್ತು ಚೇತನ್ ಅಕ್ರಮವಾಗಿ ಪ್ರವೇಶಿಸಿ ಮದ್ಯದ ಪಾರ್ಟಿ ಮಾಡಿದ್ದರು. ಶಿಬಿರದ ಸೌರ ಫಲಕವನ್ನೇ ಟೇಬಲ್ ಮಾಡಿಕೊಂಡು, ಅದರ ಮೇಲೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟ ಹಾಗೂ ತಿಂಡಿಯ ಪ್ಯಾಕೆಟ್‌ಗಳನ್ನು ಇಟ್ಟು ಮೋಜು ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಅತ್ಯಂತ ಸಂರಕ್ಷಿತ ಹಾಗೂ ವನ್ಯಜೀವಿಗಳ ಓಡಾಟವಿರುವ ಪ್ರಮುಖ ವಲಯದೊಳಗೆ ಇಂತಹ ಕೃತ್ಯ ನಡೆದಿದ್ದಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದ ಅಧಿಕಾರಿ

ಈ ಅಕ್ರಮ ಪಾರ್ಟಿಯ ಹಿಂದೆ ಸ್ಥಳೀಯ ಅರಣ್ಯ ಸಿಬ್ಬಂದಿಯ ಕೈವಾಡವಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಂದೀಶ್ ಅವರು ಎಸಿಎಫ್ ಸುರೇಶ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಎಸಿಎಫ್ ನೀಡಿದ ತನಿಖಾ ವರದಿಯಲ್ಲಿ, ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ಅವರು ತಮಗಿಂತ ಮೇಲಧಿಕಾರಿಗಳಿಗೆ ಈ ಗಂಭೀರ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿರುವುದು ಹಾಗೂ ಫೋಟೋಗಳಲ್ಲಿ ಗುರುತಿಸಲಾದ ಶಂಕಿತರ ಹೆಸರನ್ನು ಅಧಿಕೃತವಾಗಿ ದಾಖಲಿಸದೆ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಶಿಸ್ತು ಕ್ರಮಕ್ಕೆ ಬಾಕಿ ಇರುವಂತೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ವನ್ಯಜೀವಿ ಕಾಯ್ದೆಯಡಿ ಕೇಸ್: ಆರೋಪಿಗಳಿಗಾಗಿ ಪೊಲೀಸರ ಬಲೆ

ಪ್ರಸ್ತುತ ಅರಣ್ಯ ಇಲಾಖೆಯು ಈ ಮೂವರು ಕಿಡಿಗೇಡಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿದೆ. ಸದ್ಯ ತಲೆಮರೆಸಿಕೊಂಡಿರುವ ರೌಡಿಶೀಟರ್ ಸತೀಶ್ ಮತ್ತು ಆತನ ಪಟಾಲಂಗಾಗಿ ಅರಣ್ಯ ಇಲಾಖೆ ಹಾಗೂ ಗುಂಡ್ಲುಪೇಟೆ ಪೊಲೀಸರು ಜಂಟಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿ ಶೀಟರ್ ಎಣ್ಣೆ ಪಾರ್ಟಿ!

ಸಾಮಾನ್ಯ ಜನರಿಗೆ ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸಿ ಫೋಟೋ ತೆಗೆಯಲೂ ದಂಡ ವಿಧಿಸುವ ಇಲಾಖೆ, ರೌಡಿಶೀಟರ್‌ಗಳಿಗೆ ಪಾರ್ಟಿ ಮಾಡಲು ಬಿಟ್ಟಿದ್ದಕ್ಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಹೋರಾಟಗಾರರು ಆಗ್ರಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Khan Sir: ಬಿಹಾರದ ‘ಖಾನ್ ಸರ್’ಗೆ ದೊಡ್ಡ ರಿಲೀಫ್, ಗುಂಡಿನ ದಾಳಿ ಪ್ರಕರಣದಲ್ಲಿ ಫೈಸಲ್ ಖಾನ್ ಬಂಧನಕ್ಕೆ ಪಾಟ್ನಾ ನ್ಯಾಯಾಲಯ ತಡೆ – Kannada News

ಪಾಟ್ನಾ, ಜೂನ್ 09: ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿರುವ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಹಾಗೂ ಶಿಕ್ಷಣ ತಜ್ಞ ಫೈಸಲ್ ಖಾನ್ ( ಖಾನ್ ಸರ್) ಅವರಿಗೆ ಪಾಟ್ನಾ ನ್ಯಾಯಾಲಯದಿಂದ ಸಾಮಾಧಾನ ಸಿಕ್ಕಿದೆ. ಪಾಟ್ನಾದ ಕೋಚಿಂಗ್ ಇನ್‌ಸ್ಟಿಟ್ಯೂಟ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಖಾನ್ ಸರ್ ಬಂಧನಕ್ಕೆ ತಕ್ಷಣವೇ ಮಧ್ಯಂತರ ತಡೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನ್ಯಾಯಾಲಯದ ಈ ನಿರ್ಧಾರವು ಖಾನ್ ಸರ್ ಅವರ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ವಲಯದಲ್ಲಿ ಭಾರಿ ಹರ್ಷವನ್ನು ತಂದಿದೆ. ಜೂನ್ 6 ರಂದು ಪಾಟ್ನಾ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜೂನ್ 8ರಂದು ನಡೆದಿತ್ತು.

ವಿಚಾರಣೆಯ ಸಮಯದಲ್ಲಿ ಖಾನ್ ಸರ್ ಪರ ವಕೀಲರು ಅತ್ಯಂತ ಬಲವಾದ ವಾದ ಮಂಡಿಸಿದರು. ಕೋಚಿಂಗ್ ಇನ್‌ಸ್ಟಿಟ್ಯೂಟ್ ಬಳಿ ನಡೆದ ಗುಂಡಿನ ಘಟನೆಗೂ ಫೈಸಲ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ. ಅವರು ಯಾವುದೇ ಕ್ರಿಮಿನಲ್ ಕೃತ್ಯ ಎಸಗಿಲ್ಲ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಅವರನ್ನು ಈ ಪ್ರಕರಣದಲ್ಲಿ ಸಂಪೂರ್ಣವಾಗಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ಮತ್ತಷ್ಟು ಓದಿ: Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ

ಪಾಟ್ನಾದ ಕಡಮ್‌ಕುವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಚಿಂಗ್ ಇನ್‌ಸ್ಟಿಟ್ಯೂಟ್ ಒಂದರ ವಿವಾದದ ವೇಳೆ ನಡೆದ ಗುಂಡಿನ ಚಕಮಕಿಯ ವೈರಲ್ ವೀಡಿಯೊದ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ, ಪೊಲೀಸ್ ತನಿಖೆಯಲ್ಲೇ ಸ್ಪಷ್ಟವಾಗಿರುವಂತೆ, ಈ ಗುಂಡಿನ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದವರು ಇನ್‌ಸ್ಟಿಟ್ಯೂಟ್‌ಗೆ ಸಂಬಂಧಿಸಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು (ಭದ್ರತಾ ಸಿಬ್ಬಂದಿ). ಆ ಇಬ್ಬರೂ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಲೆಮರೆಸಿಕೊಂಡಿದ್ದ ಖಾನ್ ಸರ್‌ಗೆ ಈಗ ಆಡಳಿತಾತ್ಮಕ ರಕ್ಷಣೆ
ವಿವಾದದ ನಂತರ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಿಂದಾಗಿ ಖಾನ್ ಸರ್ ಕಳೆದ ಕೆಲವು ದಿನಗಳಿಂದ ಪಾಟ್ನಾದಿಂದ ಹೊರಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಕಡೆ ಗಮನ ಹರಿಸಿದ್ದರು. ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕ್ ಶರ್ಮಾ ನೇರ ಉಸ್ತುವಾರಿಯಲ್ಲಿ ಪೊಲೀಸರು ದಾಳಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲೇ, ನ್ಯಾಯಾಲಯವು ಮಧ್ಯಸ್ಥಿಕೆ ವಹಿಸಿ ಖಾನ್ ಸರ್ ಅವರ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.

ನ್ಯಾಯಾಲಯದ ಈ ಪರಿಹಾರದ ಆದೇಶದೊಂದಿಗೆ ಖಾನ್ ಸರ್ ಅವರ ಬಂಧನದ ಭೀತಿ ಸಂಪೂರ್ಣವಾಗಿ ದೂರವಾಗಿದೆ. ಮುಂದಿನ ವಿಚಾರಣೆಯಲ್ಲಿ ಪೊಲೀಸ್ ತನಿಖಾ ವರದಿಯ ವಿವರವಾದ ಪರಿಶೀಲನೆ ನಡೆಯಲಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಇದರಿಂದಾಗಿ ಖಾನ್ ಸರ್ ಅವರು ಶೀಘ್ರದಲ್ಲೇ ಮರಳಿ ತರಗತಿಗಳಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಎಂದಿನಂತೆ ಮಾರ್ಗದರ್ಶನ ನೀಡಲು ಹಾದಿ ಸುಗಮವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

8 ತಿಂಗಳ ಬಳಿಕ ಕಲಬುರಗಿ-ಬೆಂಗಳೂರು ವಿಮಾನ ಸಂಚಾರ ನಾಳೆಯಿಂದ ಆರಂಭ – Kannada News

ಕಲಬುರಗಿ ವಿಮಾನ ನಿಲ್ದಾಣImage Credit source: tv9

ಕಲಬುರಗಿ, ಜೂನ್ 9: ಕಲಬುರಗಿ (Kalaburagi) ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಕೊನೆಗೂ ಸಂತಸದ ಸುದ್ದಿ ಸಿಕ್ಕಿದೆ. ಕಳೆದ 8 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ನಡುವಿನ ವಿಮಾನ ಸೇವೆ ಜೂನ್ 10ರಿಂದ (ನಾಳೆಯಿಂದ) ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಕಿಶೋರ್ ಕಿಲ್ಲಂಪಳ್ಳಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಆರ್ಥಿಕ ನೆರವು ವಿಸ್ತರಿಸಿದ ಬೆನ್ನಲ್ಲೇ ಸ್ಟಾರ್ ಏರ್ (Star Air) ಸಂಸ್ಥೆಯು ವಾರದ ಏಳೂ ದಿನಗಳೂ ಈ ಮಾರ್ಗದಲ್ಲಿ ವಿಮಾನ ಯಾನ ಸೇವೆ ನೀಡಲು ಮುಂದೆ ಬಂದಿದೆ.

ಮುಖ್ಯಾಂಶಗಳು

  • ಜೂನ್ 10ರಿಂದ ವಿಮಾನ ಸೇವೆ ಪುನರಾರಂಭ.
  • ವಾರದ ಏಳೂ ದಿನ ಸ್ಟಾರ್ ಏರ್ ಸಂಚಾರ.
  • ರನ್‌ವೇ ನವೀಕರಣ, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ.

ಕಲಬುರಗಿ ಬೆಂಗಳೂರು ವಿಮಾನ ಸಂಚಾರದ ಟೈಮಿಂಗ್ಸ್

ಈ ಎರಡು ನಗರಗಳ ನಡುವೆ ಸ್ಟಾರ್ ಏರ್ ಸಂಸ್ಥೆಯ 76 ಆಸನಗಳ ಸಾಮರ್ಥ್ಯದ ‘ಎಂಬ್ರೇಯರ್ 175 (E175)’ ಅತ್ಯಾಧುನಿಕ ವಿಮಾನ ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 7:40ಕ್ಕೆ ಕಲಬುರಗಿ ತಲುಪಲಿದೆ. ತದನಂತರ 30 ನಿಮಿಷಗಳ ಬಿಡುವಿನ ನಂತರ, ಬೆಳಗ್ಗೆ 8:10ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ವಾಪಸ್ ಆಗಲಿದೆ. ಈ ಮುಂಜಾನೆಯ ಸಮಯದ ಸೇವೆಯು ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ತುರ್ತು ಕೆಲಸದ ನಿಮಿತ್ತ ರಾಜಧಾನಿಗೆ ತೆರಳುವ ಸಾರ್ವಜನಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.

8 ತಿಂಗಳ ಸುದೀರ್ಘ ಕಾಯುವಿಕೆಗೆ ತೆರೆ

ಕಲಬುರಗಿ ಮತ್ತು ಬೆಂಗಳೂರು ನಡುವೆ ಕೊನೆಯ ವಿಮಾನ ಸಂಚಾರ 2025 ರ ಅಕ್ಟೋಬರ್ 8 ರಂದು ಸಂಚರಿಸಿತ್ತು. ಆ ಬಳಿಕ ವಿಮಾನ ನಿಲ್ದಾಣದ ಸೇವೆ ಕೇವಲ ಹೆಲಿಕಾಪ್ಟರ್‌ಗಳು ಮತ್ತು ವಿಶೇಷ ಚಾರ್ಟರ್ಡ್ ವಿಮಾನಗಳಿಗಷ್ಟೇ ಸೀಮಿತವಾಗಿತ್ತು. ಎರಡು ವಾರಗಳ ಹಿಂದಷ್ಟೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ತಾಂತ್ರಿಕ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ವಿಮಾನ ಸಂಚಾರ ಇಲ್ಲದಿದ್ದರೂ ನಿಲ್ದಾಣದ 3 ಕಿಲೋಮೀಟರ್ ಉದ್ದದ ರನ್‌ವೇಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸುತ್ತಮುತ್ತಲಿನ 9 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೀದಿದೀಪಗಳನ್ನು ಅಳವಡಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆ ಹಾಗೂ ‘ಫ್ಲೈಬ್ರರಿ’!

ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ ನಗರದಿಂದ ಮುಂಜಾನೆ 5:30ಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:15ಕ್ಕೆ ವಿಶೇಷ ಬಸ್ ಸೌಕರ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಕೋರಲಾಗಿದೆ. ಇದರೊಂದಿಗೆ ಪ್ರಯಾಣಿಕರ ಜ್ಞಾನಾರ್ಜನೆಗಾಗಿ ವಿಮಾನ ನಿಲ್ದಾಣದಲ್ಲಿ ‘ಫ್ಲೈಬ್ರರಿ (ಗ್ರಂಥಾಲಯ)’ ಸೌಲಭ್ಯವನ್ನು ಕೂಡ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ

2020 ರಿಂದ 2025 ರ ಅವಧಿಯಲ್ಲಿ ಈ ಮಾರ್ಗದಲ್ಲಿ ಒಟ್ಟು 5,792 ಬಾರಿ ವಿಮಾನ ಸಂಚಾರ ನಡೆದಿದ್ದು, 2.83 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಸದ್ಯ ಸ್ಥಳೀಯರಿಂದ ಮುಂಬೈ, ದೆಹಲಿ, ತಿರುಪತಿ ಹಾಗೂ ಗೋವಾ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ ಕೇಳಿಬಂದಿದ್ದು, ವಿಮಾನಯಾನ ಸಂಸ್ಥೆಗಳು ಮುಂದೆ ಬಂದರೆ ಆ ಮಾರ್ಗಗಳಲ್ಲೂ ಸೇವೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Visakhapatnam Tragedy: ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು, ಹೆಚ್​ಡಿಕೆ ಭೇಟಿ – Kannada News

ವಿಶಾಖಪಟ್ಟಣಂ, ಜೂನ್ 09: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಭೀಕರ ದುರಂತ ಸಂಭವಿಸಿದೆ. ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಘಟನೆಯು ಕಂಟಿನ್ಯೂಯಸ್ ಕ್ಯಾಸ್ಟಿಂಗ್ ಯಂತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದಿದೆ. ಇಪ್ಪತ್ತೆರಡು ಲ್ಯಾಡಲ್‌ಗಳ ಕಾರ್ಯಾಚರಣೆ ಮುಗಿದ ನಂತರ, ಮುಂದಿನ ಲ್ಯಾಡಲ್ ಅನ್ನು ಸೇರಿಸುವಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ, ಲ್ಯಾಡಲ್‌ನ ಮೇಲ್ಭಾಗದಿಂದ ಹಠಾತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಿಸಿ ಲೋಹ ಚೆಲ್ಲಿದೆ ಮತ್ತು ಕ್ರೇನ್‌ಗೂ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಹದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ಲೈಡ್ ಗೇಟ್ ವ್ಯವಸ್ಥೆಯಲ್ಲಿನ ವೈಫಲ್ಯವು ಈ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ತನಿಖೆ ನಡೆಯುತ್ತಿದ್ದು, ದುರಂತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ಸಾಗಿದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭರ್ಜರಿ ಬೌಲಿಂಗ್, ಸಿಡಿಲಬ್ಬರದ ಬ್ಯಾಟಿಂಗ್: ಅರ್ಜುನ್ ತೆಂಡೂಲ್ಕರ್ ಮಿಂಚಿಂಗ್! – Kannada News

ಮುಂಬೈ ಟಿ20 ಲೀಗ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಕ್ಸ್ ಅಂಧೇರಿ  ಹಾಗೂ ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಕ್ಸ್ ಅಂಧೇರಿ ತಂಡಕ್ಕೆ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಅತ್ಯುತ್ತಮ ಆರಂಭ ಒದಗಿಸಿದ್ದರು.

ಪಂದ್ಯದ ಮೊದಲ ಓವರ್‌ನಲ್ಲೇ ಎರಡು ಪ್ರಮುಖ ವಿಕೆಟ್ ಕಿತ್ತ ಅರ್ಜುನ್ ಬಾಂದ್ರಾ ಬ್ಲಾಸ್ಟರ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ಆಘಾತದಿಂದ ಪಾರಾಗಲು ಬ್ಲಾಸ್ಟರ್ಸ್​ ಪಡೆ ಪರದಾಡಬೇಕಾಯಿತು. ಪರಿಣಾಮ 20 ಓವರ್​ಗಳಲ್ಲಿ ಕೇವಲ 144 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಈ ಪಂದ್ಯದಲ್ಲಿ 3 ಓವರ್​ಗಳನ್ನು ಎಸೆದ ಅರ್ಜುನ್ ತೆಂಡೂಲ್ಕರ್ ಒಂದು ಓವರ್ ಮೇಡನ್ ಮಾಡಿದ್ದರು. ಅಲ್ಲದೆ ಮೂರು ಓವರ್​​ಗಳಲ್ಲಿ ನೀಡಿದ್ದು ಕೇವಲ 11 ರನ್​ಗಳು ಮಾತ್ರ. ಹಾಗೆಯೇ ಈ  3 ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಬ್ಯಾಟಿಂಗ್​ನಲ್ಲೂ ಮಿಂಚಿಂಗ್:

145 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಅಂಧೇರಿ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲೂ ಆಸರೆಯಾದರು. ಈ ಬಾರಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅಲ್ಲದೆ ಯುವ ದಾಂಡಿಗ ಮುಶೀರ್ ಖಾನ್ (54*) ಅವರ ಜೊತೆಗೂಡಿ ಎರಡನೇ ವಿಕೆಟ್‌ಗೆ 116 ರನ್‌ಗಳ ಅಜೇಯ ಜೊತೆಯಾಟವಾಡಿದರು. ಈ ಮೂಲಕ ಕೇವಲ 13.5 ಓವರ್‌ಗಳಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿ ಆರ್ಕ್ಸ್ ಅಂಧೇರಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಅರ್ಜುನ್ ಆಲ್​ರೌಂಡರ್:

  • ಬೌಲಿಂಗ್​ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಕರ್ 3 ಓವರ್​ಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು.
  • ಬ್ಯಾಟಿಂಗ್​ನಲ್ಲಿ 34 ಎಸೆತಗಳನ್ನು ಎದುರಿಸಿದ ಅರ್ಜುನ್, 5 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 66 ರನ್ ಬಾರಿಸಿದ್ದರು.
  • ಈ ಭರ್ಜರಿ ಆಲ್​ರೌಂಡರ್ ಪ್ರದರ್ಶನಕ್ಕೆ ಅರ್ಜುನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 3,542 ಕೋಟಿ ರೂ! ಕಿಂಗ್​​ ಖಾನ್​ನ ಹಿಂದಿಕ್ಕಿದ ಕಿಂಗ್ ಕೊಹ್ಲಿ

ಐಪಿಎಲ್​ನಲ್ಲಿ ಒಂದೇ ಚಾನ್ಸ್​:

ಐಪಿಎಲ್​ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಸಲಾಗಿತ್ತು. ಅದು ಕೂಡ ಎಲ್​ಎಸ್​ಜಿ ತಂಡದ ಕೊನೆಯ ಮ್ಯಾಚ್​ನಲ್ಲಿ. ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ಅರ್ಜುನ್ 4 ಓವರ್​ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು.

Published On – 8:54 am, Tue, 9 June 26

Source link

ಫೋನ್ ಪೇನಲ್ಲಿ ಹಣ ಪಡೆದು ಕ್ಯಾಶ್ ಕೊಡುವ ಮುನ್ನ ಎಚ್ಚರ! ನಿಮ್ಮ ಖಾತೆಯನ್ನೇ ಖಾಲಿ ಮಾಡ್ತಾರೆ ವಂಚಕರು – Kannada News

ಫೋನ್ ಪೇನಲ್ಲಿ ಹಣ ಪಡೆದು ಕ್ಯಾಶ್ ಕೊಡುವ ಮುನ್ನ ಎಚ್ಚರ!

ರಾಯಚೂರು, ಜೂನ್ 09: ತಾಂತ್ರಿಕತೆ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಅಪರಿಚಿತರ ಮಾತನ್ನು ನಂಬಿ ಯುಪಿಐ (UPI) ಮೂಲಕ ಹಣ ಪಡೆದು ನಗದು (Cash) ನೀಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹದೇ ಒಂದು ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಅರಕೇರಾ ಪಟ್ಟಣದಲ್ಲಿ ನಡೆದಿದ್ದು, ಕಮಿಷನ್ ಆಸೆ ಹಾಗೂ ಮಾನವೀಯತೆ ದೃಷ್ಟಿಯಿಂದ ಅಪರಿಚಿತರಿಗೆ ಸಹಾಯ ಮಾಡಲು ಹೋದ ಯುವಕರು ಈಗ ಸೈಬರ್ ಪೊಲೀಸರ ವಿಚಾರಣೆಗೆ ಬೆಚ್ಚಿಬಿದ್ದಿದ್ದಾರೆ.

ಮುಖ್ಯಾಂಶಗಳು

  • ಅಪರಿಚಿತರ ಫೋನ್ ಪೇ ನಂಬಿ ನಗದು ನೀಡಿ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ಕಳ್ಳರು ಕದ್ದ ಫೋನ್‌ ಬಳಸಿ 2.5 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.
  • ವಂಚನೆ ತಿಳಿಯದೆ ಹಣ ವ್ಯವಹಾರ ನಡೆಸಿದ ಯುವಕರ ಬ್ಯಾಂಕ್ ಅಕೌಂಟ್ ಬ್ಲಾಕ್.

ಮೆಡಿಕಲ್ ಎಮರ್ಜನ್ಸಿ ಎಂದ ಕಳ್ಳರು: ಲಾಕ್ ಆದ ಸಿಎಸ್‌ಸಿ ಕೇಂದ್ರಗಳು!

ಅರಕೇರಾ ಪಟ್ಟಣದಲ್ಲಿ ಕಾಮನ್ ಸರ್ವಿಸ್ ಸೆಂಟರ್ (CSC) ನಡೆಸುತ್ತಿದ್ದ ಮಲ್ಲಿಕಾರ್ಜುನ, ಮಹಾಂತೇಶ್ ಸೇರಿದಂತೆ ಮೂವರು ಯುವಕರ ತಂಡವೇ ಈ ವಂಚನೆಗೆ ಒಳಗಾಗಿದೆ. ಇತ್ತೀಚೆಗೆ ಇವರ ಕೇಂದ್ರಗಳಿಗೆ ಬಂದಿದ್ದ ಇಬ್ಬರು ಅಪರಿಚಿತರು, ತಮಗೆ ಮೆಡಿಕಲ್ ಎಮರ್ಜನ್ಸಿ ಇದೆ ಎಂದು ನಂಬಿಸಿದ್ದಾರೆ. ತಮ್ಮ ಫೋನ್ ಪೇ ಮೂಲಕ ಸಿಎಸ್‌ಸಿ ಕೇಂದ್ರದ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಹೇಳಿ, ಅದಕ್ಕೆ ಪ್ರತಿಯಾಗಿ ನಗದು ಹಣ ನೀಡುವಂತೆ ವಿನಂತಿಸಿದ್ದಾರೆ. ಜೊತೆಗೆ 1,000 ರೂಪಾಯಿಗೆ 10 ರೂಪಾಯಿ ಕಮಿಷನ್ ನೀಡುವುದಾಗಿಯೂ ಆಮಿಷ ಒಡ್ಡಿದ್ದಾರೆ.

ಇದನ್ನು ನಂಬಿದ ಯುವಕರು ಒಟ್ಟು ಮೂರು ಮಳಿಗೆಗಳಿಂದ ಸುಮಾರು 2.5 ಲಕ್ಷ ರೂಪಾಯಿ ಹಣದ ಟ್ರಾನ್ಸಾಕ್ಷನ್ ಮಾಡಿಸಿಕೊಂಡು, ಕಳ್ಳರಿಗೆ ನಗದು ಕೊಟ್ಟಿದ್ದಾರೆ. ಆದರೆ, ಆ ಇಬ್ಬರು ವ್ಯಕ್ತಿಗಳು ಕದ್ದ ಮೊಬೈಲ್‌ನಿಂದ ಯುಪಿಐ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ ಎಂಬ ಸತ್ಯ ಯುವಕರಿಗೆ ತಿಳಿದಿರಲಿಲ್ಲ.

ಮೊಬೈಲ್ ಕಳವು ಮತ್ತು ಪೊಲೀಸ್ ತನಿಖೆ

ಮೇ 25 ರಂದು ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ರಾಂಬಾಬು ಎಂಬುವವರ ಮೊಬೈಲ್ ಅನ್ನು ಬಸ್ ಹತ್ತುವ ವೇಳೆ ಕಳ್ಳರು ಕದ್ದಿದ್ದರು. ಮೊಬೈಲ್ ಕದ್ದ ಕೆಲವೇ ಗಂಟೆಗಳಲ್ಲಿ ಕಳ್ಳರು ಅರಕೇರಾದ ಸಿಎಸ್‌ಸಿ ಕೇಂದ್ರಗಳಲ್ಲಿ ರಾಂಬಾಬು ಅವರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸರಣಿ ಹಣ ಕಡಿತಗೊಂಡ ಮೆಸೇಜ್ ನೋಡಿ ಗಾಬರಿಯಾದ ರಾಂಬಾಬು ತಕ್ಷಣ ಸದರ ಬಜಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ವರ್ಗಾವಣೆಯಾದ ಅರಕೇರಾ ಸಿಎಸ್‌ಸಿ ಕೇಂದ್ರದ ಹುಡುಗರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ತಮಗೆ ಆ ವ್ಯಕ್ತಿಗಳು ಯಾರೆಂದೇ ಗೊತ್ತಿಲ್ಲ ಎಂದು ಯುವಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಹಣ ಕಳೆದುಕೊಂಡ ರಾಂಬಾಬು ಹಾಗೂ ಅಪರಿಚಿತರಿಂದ ಹಣ ಹಾಕಿಸಿಕೊಂಡು ನಗದು ಕೊಟ್ಟ ಮಲ್ಲಿಕಾರ್ಜುನ್, ಮಹಾಂತೇಶ್ ಸೇರಿದಂತೆ ಇತರರ ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ (Freeze) ಮಾಡಿದ್ದಾರೆ.

ಇದನ್ನೂ ಓದಿ Viral News: ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ!

ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿರುವುದರಿಂದ ಸಿಎಸ್‌ಸಿ ಕೇಂದ್ರದ ಯುವಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸದರ ಬಜಾರ್ ಪೊಲೀಸರು ಸದ್ಯ ಮೊಬೈಲ್ ಕಳ್ಳರ ಪತ್ತೆಗೆ ಜಾಲ ಬೀಸಿದ್ದು, ಸಾರ್ವಜನಿಕರು ಇಂತಹ ಆನ್‌ಲೈನ್ ನಗದು ವ್ಯವಹಾರಗಳ ಜೂಜಾಟಕ್ಕೆ ಬೀಳದಂತೆ ಮತ್ತು ಅಪರಿಚಿತರ ಫೋನ್ ಪೇ ನಂಬಿ ನಗದು ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಪೆದ್ದಿ’ ಸಿನಿಮಾಗೆ ಶುರುವಾಯ್ತು ಅಟ್ರಾಸಿಟಿ ಕೇಸ್ ಭಯ; ದೂರು ದಾಖಲು

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸನಾ ನಿರ್ದೇಶನದ ಬಿಗ್ ಬಜೆಟ್ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ‘ಪೆದ್ದಿ’ ಥಿಯೇಟರ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 248.92 ಕೋಟಿ ರೂಪಾಯಿ ಗಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಭಾರತದಲ್ಲೇ ಈ ಚಿತ್ರ 169.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಆದರೆ, ಈ ಭಾರಿ ಯಶಸ್ಸಿನ ಬೆನ್ನಲ್ಲೇ ಸಿನಿಮಾ ದೊಡ್ಡ ಕಾನೂನು ಸಂಕಷ್ಟ ಹಾಗೂ ವಿವಾದಗಳ ಸುಳಿಗೆ ಸಿಲುಕಿದೆ.

ಚಿತ್ರತಂಡದ ವಿರುದ್ಧ SC/ST ಅಟ್ರಾಸಿಟಿ ಕೇಸ್‌ಗೆ ಡಿಮ್ಯಾಂಡ್:

ಚಿತ್ರದಲ್ಲಿ ಬುಡಕಟ್ಟು ಸಮುದಾಯವನ್ನು ಅತ್ಯಂತ ಅವಮಾನಕರವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಮಾನ್ಯಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗದ ನಾಯಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಿನಿಮಾದಲ್ಲಿ ಬುಡಕಟ್ಟು ಜನರನ್ನು ಹಾಗೂ ಅವರ ಸಂಸ್ಕೃತಿಯನ್ನು ಕೀಳಾಗಿ ಕಾಣುವಂತಹ ಆಕ್ಷೇಪಾರ್ಹ ಡೈಲಾಗ್‌ಗಳನ್ನು ಬಳಸಲಾಗಿದೆ. ಇದು ನಮ್ಮ ಸಮುದಾಯದ ಮನೋಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

ಈ ಹಿನ್ನೆಲೆಯಲ್ಲಿ ನಿರ್ದೇಶಕ ಬುಚ್ಚಿ ಬಾಬು ಸನಾ, ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ಹೌಸ್ ಹಾಗೂ ಇಂತಹ ಸಂಭಾಷಣೆಗಳಿಗೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ ತಕ್ಷಣವೇ SC/ST ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಬೇಕೆಂದು ಬುಡಕಟ್ಟು ಜನಾಂಗದ ಸಂಘಟನೆಗಳು ಪಟ್ಟು ಹಿಡಿದಿವೆ.

ಜಾನ್ವಿ ಕಪೂರ್ ಡ್ರೆಸ್ ಮತ್ತು ಹೈಪರ್‌ಸೆಕ್ಷುಅಲೈಸ್ ವಿವಾದ:

ಈ ಕಡೆ ಲೀಗಲ್ ಶಾಕ್ ಎದುರಾಗಿದ್ದರೆ, ಆ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರದ ಸುತ್ತ ವಿವಾದ ಜೋರಾಗಿದೆ. ಚಿತ್ರದಲ್ಲಿ ಜಾನ್ವಿ ಅವರ ಪಾತ್ರಕ್ಕೆ ತೊಡಿಸಿರುವ ಉಡುಪುಗಳು ಹಾಗೂ ಅವರನ್ನು ತೋರಿಸಿರುವ ರೀತಿ ಸರಿಯಾಗಿಲ್ಲ ಎಂದು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಗ್ರಾಮೀಣ ಹಿನ್ನೆಲೆಯ ಕಥೆಯಲ್ಲಿ ಮಹಿಳಾ ಪಾತ್ರವನ್ನು ಇಷ್ಟು ಆಕ್ಷೇಪಾರ್ಹವಾಗಿ ಬಿಂಬಿಸುವ ಅಗತ್ಯವಿರಲಿಲ್ಲ ಎಂದು ಚಿತ್ರತಂಡದ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Dried Tulasi Plant: ಒಣಗಿದ ತುಳಸಿ ಗಿಡವನ್ನು ಕಸಕ್ಕೆ ಎಸೆಯಬೇಡಿ; ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸಲು ಹೀಗೆ ಬಳಸಿ… – Kannada News

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಅತ್ಯುನ್ನತ ಹಾಗೂ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯೇ ನೆಲೆಸಿದ್ದಾಳೆ ಮತ್ತು ಈ ದೇವಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯಳಾಗಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ. ಇದೇ ಕಾರಣಕ್ಕೆ ತುಳಸಿ ಸಸ್ಯವು ಹಸಿರಾಗಿದ್ದಾಗ ಮಾತ್ರವಲ್ಲದೆ, ಅದು ಒಣಗಿದ ಮೇಲೂ ಅಷ್ಟೇ ಗೌರವದಿಂದ ಕಾಣಬೇಕೆಂದು ಧರ್ಮಗ್ರಂಥಗಳು ಸೂಚಿಸುತ್ತವೆ. ಒಂದು ವೇಳೆ ಮನೆಯಲ್ಲಿರುವ ತುಳಸಿ ಗಿಡವು ಒಣಗಿಹೋದರೆ, ಅದನ್ನು ಅಜಾಗರೂಕತೆಯಿಂದ ಕಸದ ಬುಟ್ಟಿಗೆ ಎಸೆಯದೆ, ಕೆಲವು ಆಧ್ಯಾತ್ಮಿಕ ನಿಯಮಗಳನ್ನು ಪಾಲಿಸುವ ಮೂಲಕ ಅದರ ಪವಿತ್ರತೆಯನ್ನು ಕಾಪಾಡಿಕೊಳ್ಳಬಹುದು. ಒಣಗಿದ ತುಳಸಿ ಸಸ್ಯವನ್ನು ಹೇಗೆ ಗೌರವಯುತವಾಗಿ ಬಳಸಬಹುದು ಮತ್ತು ಸಂರಕ್ಷಿಸಬಹುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಒಣಗಿದ ತುಳಸಿಯನ್ನು ಕಸದ ಬುಟ್ಟಿಗೆ ಎಸೆಯಬೇಡಿ:

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವು ಒಣಗಿದ ನಂತರವೂ ತನ್ನ ಪವಿತ್ರತೆಯನ್ನು ಕಳೆದುಕೊಳ್ಳುವುದಿಲ್ಲ. ಹಾಗಾಗಿ ಒಣಗಿದ ತುಳಸಿ ಎಲೆಗಳು ಅಥವಾ ಕೊಂಬೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಅಥವಾ ಕಸದ ಬುಟ್ಟಿಗೆ ಹಾಕುವುದು ತಪ್ಪು ಎಂದು ಹೇಳಲಾಗುತ್ತದೆ. ಬದಲಿಗೆ, ಒಣಗಿದ ತುಳಸಿಯ ಭಾಗಗಳನ್ನು ಸಂಗ್ರಹಿಸಿ, ನಿಮ್ಮ ಹತ್ತಿರದ ಯಾವುದೇ ಪವಿತ್ರ ಜಲಮೂಲ ಅಥವಾ ಹರಿಯುವ ನದಿಯಲ್ಲಿ ಮುಳುಗಿಸುವುದು (ವಿಸರ್ಜಿಸುವುದು) ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

ತುಳಸಿ ಕಡ್ಡಿಯಿಂದ ಮಾಲೆ (ದಂಡ) ತಯಾರಿಕೆ:

ಒಣಗಿದ ತುಳಸಿಯ ದಪ್ಪನೆಯ ಕಾಂಡಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ, ಗಂಗಾಜಲದಿಂದ ಶುದ್ಧೀಕರಿಸಿದ ನಂತರ ಅದರಿಂದ ತುಳಸಿ ಮಾಲೆ ತಯಾರಿಸಬಹುದು. ವೈಷ್ಣವ ಸಂಪ್ರದಾಯದಲ್ಲಿ ಈ ತುಳಸಿ ಮಾಲೆ ಧರಿಸುವುದಕ್ಕೆ ವಿಶೇಷ ಮಹತ್ವವಿದೆ. ಇದನ್ನು ಧರಿಸುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುತ್ತದೆ ಮತ್ತು ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಆದರೆ, ತುಳಸಿ ದಂಡವನ್ನು ಧರಿಸುವವರು ಸತ್ಯತೆ, ಸಾತ್ವಿಕತೆ ಮತ್ತು ದೈಹಿಕ-ಮಾನಸಿಕ ಶುಚಿತ್ವದಂತಹ ಕಠಿಣ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಪೂಜಾ ಕೋಣೆಯಲ್ಲಿ ಸಂರಕ್ಷಿಸಿ ಇಡುವುದು:

ಒಣಗಿದ ತುಳಸಿಯ ಎಲೆಗಳು ಅಥವಾ ಸಣ್ಣ ಸಣ್ಣ ಕೊಂಬೆಗಳನ್ನು ಒಂದು ಸಣ್ಣ ಕೆಂಪು ಬಟ್ಟೆಯಲ್ಲಿ ಕಟ್ಟಿ, ಅದನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಇಡುವುದು ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ದೈವಿಕ ಮತ್ತು ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ಮನೆಯೊಳಗಿನ ಸಕಾರಾತ್ಮಕ ಶಕ್ತಿಯು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಮುಖ್ಯ ದ್ವಾರಕ್ಕೆ ರಕ್ಷಣಾ ಕವಚ:

ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಒಣಗಿದ ತುಳಸಿ ಎಲೆಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ, ಅದನ್ನು ಮನೆಯ ಮುಖ್ಯ ದ್ವಾರದ (ಹೊಸ್ತಿಲ) ಮೇಲೆ ನೇತುಹಾಕಬೇಕು. ಇದು ಮನೆಗೆ ಬರುವ ನಕಾರಾತ್ಮಕ ಶಕ್ತಿಗಳು ಮತ್ತು ಕೆಟ್ಟ ದೃಷ್ಟಿಯನ್ನು ತಡೆಯಲು ಒಂದು ರಕ್ಷಣಾತ್ಮಕ ಗುರಾಣಿಯಾಗಿ (ಕವಚವಾಗಿ) ಕಾರ್ಯನಿರ್ವಹಿಸುತ್ತದೆ ಮತ್ತು ಮನೆಗೆ ಯಾವುದೇ ನಕಾರಾತ್ಮಕತೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಹೋಮಗಳು ಮತ್ತು ಯಜ್ಞಗಳಲ್ಲಿ ಬಳಕೆ:

ಒಣಗಿದ ತುಳಸಿ ಎಲೆಗಳನ್ನು ಮತ್ತು ಕಡ್ಡಿಗಳನ್ನು ಹವನ ಹಾಗೂ ಯಜ್ಞದಂತಹ ಪವಿತ್ರ ಆಧ್ಯಾತ್ಮಿಕ ಸಮಾರಂಭಗಳಲ್ಲಿ ಅಹುತಿಯಾಗಿ ಅರ್ಪಿಸಬಹುದು. ಯಜ್ಞ ಕುಂಡದಲ್ಲಿ ತುಳಸಿಯನ್ನು ಅರ್ಪಿಸುವುದರಿಂದ ಹೊರಹೊಮ್ಮುವ ಹೊಗೆಯು ಸುತ್ತಮುತ್ತಲಿನ ವಾತಾವರಣವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ ಮತ್ತು ದೇವಾನುದೇವತೆಗಳ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂಬುದು ಭಕ್ತರ ದೃಢ ನಂಬಿಕೆ.

ತುಳಸಿ ಬತ್ತಿಯಿಂದ ದೀಪಾರಾಧನೆ:

ಒಣಗಿದ ತುಳಸಿ ಎಲೆಗಳು ಮತ್ತು ಸಣ್ಣ ಕೊಂಬೆಗಳನ್ನು ಪುಡಿ ಮಾಡಿ ಅಥವಾ ನೂಲಿನೊಂದಿಗೆ ಸೇರಿಸಿ ಬತ್ತಿಯನ್ನು ಸಿದ್ಧಪಡಿಸಿ, ಅದರಿಂದ ದೀಪವನ್ನು ಹಚ್ಚುವ ಸಂಪ್ರದಾಯವೂ ಇದೆ. ಈ ರೀತಿಯ ತುಳಸಿ ಬತ್ತಿಯ ದೀಪ ಪೂಜೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಇದು ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹವನ್ನು ತಂದುಕೊಡುವ ಮೂಲಕ, ಇಡೀ ಕುಟುಂಬಕ್ಕೆ ಸುಖ, ಶಾಂತಿ, ಸಂತೋಷ ಮತ್ತು ಅಪಾರ ಸಮೃದ್ಧಿಯನ್ನು ಕರುಣಿಸುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version