ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಸ್ಟಡಿಯಿಂದ ಎಸ್ಕೇಪ್ ಆದ ಆರೋಪಿ! – Kannada News | KIADB Ballari: Rs 16 Cr Financial Fraud Accused Escapes Custody, Recaptured in 24 Hrs

ಕೆಐಎಡಿಬಿ ಗುತ್ತಿಗೆ ನೌಕರ ಸಂತೋಷ್ ಕುಮಾರ್

ಬಳ್ಳಾರಿ, ಏಪ್ರಿಲ್ 18: ಜಿಲ್ಲೆಯಲ್ಲಿ ( ಬಳ್ಳಾರಿ)ಕೋಟ್ಯಾಂತರ ವಂಚನೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಠಾಣೆಯಿಂದ ಪರಾರಿಯಾಗಿದ್ದು, ನಂತರ 24 ಗಂಟೆಗಳೊಳಗೆ ಮತ್ತೆ ಬಂಧನಕ್ಕೊಳಗಾದ ಘಟನೆ ಸಂಚಲನ ಮೂಡಿಸಿದೆ. ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಸಂತೋಷ್ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಪ್ಪಿಸಿಕೊಂಡಿದ್ದಾನೆ. ತಡರಾತ್ರಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ, ಕೊನೆಗೂ ಆರೋಪಿಯನ್ನು ಮತ್ತೆ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.

ನಡೆದಿದ್ದೇನು?

ಸಂತೋಷ್ ವಿರುದ್ಧ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ 16.17 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಮಾಡಿದ ಆರೋಪ ಇದೆ. ಗುತ್ತಿಗೆ ನೌಕರನಾಗಿದ್ದ ಸಂತೋಷ್, ಅಧಿಕಾರಿಗಳ ನಕಲಿ ಸಹಿಗಳನ್ನು ಬಳಸಿ ಚೆಕ್‌ಗಳ ಮೂಲಕ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಟ್ಟು ಏಳು ಮಂದಿ ಭಾಗಿಯಾಗಿರುವ ಶಂಕೆ ಇದೆ.

ಇದನ್ನೂ ಓದಿ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್

ಸಿಬಿಐಗೆ ಒಪ್ಪಿಸುವ ಮುನ್ನವೇ ಪರಾರಿ

2022ರಿಂದ 2026ರವರೆಗೆ ಹಂತ ಹಂತವಾಗಿ ಹಣ ಲೂಟಿ ಮಾಡಲಾಗಿದ್ದು, 2026 ಮಾರ್ಚ್ 3ರಂದು ಪ್ರಕರಣ ಬಹಿರಂಗಗೊಂಡಿತ್ತು. ಬಳಿಕ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸಂತೋಷ್ ಪರಾರಿಯಾಗಿದ್ದ. ನಿರಂತರ ಹುಡುಕಾಟದ ಬಳಿಕ ಏಪ್ರಿಲ್ 15ರಂದು ಪೊಲೀಸರು ಅವನನ್ನು ಬಂಧಿಸಿದ್ದರು. ಸರ್ಕಾರಿ ಹಣ ದುರ್ಬಳಕೆ ಪ್ರಕರಣವಾಗಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಸಿಐಡಿಗೆ ಒಪ್ಪಿಸುವ ಮುನ್ನವೇ ಆರೋಪಿ ಠಾಣೆಯಿಂದ ತಪ್ಪಿಸಿಕೊಂಡಿರದ್ದ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ನಮ್ಮ ಊರು, ನಮ್ಮ ನೂರು: ಬೆಂಗಳೂರಿನಲ್ಲಿ RCB ‘ಶತಕ’ – Kannada News | RCB will be playing their 100th home match at the Chinnaswamy Stadium

IPL 2026: ಐಪಿಎಲ್​ನ 26ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಾಲಿಗೆ ಕೇವಲ ಒಂದು ಪಂದ್ಯವಲ್ಲ, ಅದೊಂದು ಭಾವನಾತ್ಮಕ ಮೈಲಿಗಲ್ಲು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ಈ ತಂಡ, ಇಂದು (ಏಪ್ರಿಲ್ 18, 2026) ತನ್ನ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 100ನೇ ಐಪಿಎಲ್ ಪಂದ್ಯವನ್ನಾಡುತ್ತಿದೆ.

ಡಬಲ್ ವಿಶೇಷ:

ವಿಶೇಷವೆಂದರೆ, 18 ವರ್ಷಗಳ ಹಿಂದೆ ಅಂದರೆ 2008ರ ಏಪ್ರಿಲ್ 18ರಂದೇ ಆರ್​ಸಿಬಿ ತಂಡವು ಐಪಿಎಲ್‌ನ ಮೊಟ್ಟಮೊದಲ ಪಂದ್ಯವಾಡಿತ್ತು. ಅಂದರೆ ಚೊಚ್ಚಲ ಐಪಿಎಲ್​ನ ಮೊದಲ ಪಂದ್ಯ ನಡೆದಿದ್ದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಅಂದು ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು.

ಇದೀಗ ಬರೋಬ್ಬರಿ 19 ವರ್ಷಗಳ ಬಳಿಕ ಆರ್​ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 100ನೇ ಪಂದ್ಯವಾಡುತ್ತಿದೆ. ಅದು ಸಹ ಏಪ್ರಿಲ್ 18 ರಂದೇ ಎಂಬುದೇ ವಿಶೇಷ. ಅಂದರೆ ಐಪಿಎಲ್​ನ ಮೊದಲ ಪಂದ್ಯವಾಡಿದ ದಿನಾಂಕದಂದೇ ಆರ್​ಸಿಬಿ 100ನೇ ಪಂದ್ಯವಾಡುತ್ತಿದೆ.

ಐತಿಹಾಸಿಕ ಮೈಲುಗಲ್ಲು:

ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಯಾವುದೇ ತಂಡ ಒಂದೇ ಮೈದಾನದಲ್ಲಿ 100 ಪಂದ್ಯಗಳನ್ನಾಡಿಲ್ಲ ಎಂಬುದು ವಿಶೇಷ.

  • ಮುಂಬೈ ಇಂಡಿಯನ್ಸ್ (MI): ಮುಂಬೈನ ವಾಂಖೆಡೆ ಕ್ರೀಡಾಂಗಣವು ಅತಿ ಹೆಚ್ಚು ಐಪಿಎಲ್ ಪಂದ್ಯಗಳಿಗೆ (ಸುಮಾರು 126) ಆತಿಥ್ಯ ನೀಡಿದ್ದರೂ, ಮುಂಬೈ ತಂಡವು ಅಲ್ಲಿ ಆಡಿರುವುದು 92 ಮ್ಯಾಚ್​ಗಳನ್ನು ಮಾತ್ರ.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR): ಈಡನ್ ಗಾರ್ಡನ್ಸ್ ಮೈದಾನವು 100ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಕಂಡಿದೆ, ಆದರೆ ಕೆಕೆಆರ್ ತಂಡವು ಅಲ್ಲಿ ಆಡಿರುವ ಪಂದ್ಯಗಳ ಸಂಖ್ಯೆ 95 ಮಾತ್ರ.
  • ಚೆನ್ನೈ ಸೂಪರ್ ಕಿಂಗ್ಸ್ (CSK): ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಸಿಎಸ್‌ಕೆ ಇದುವರೆಗೆ ಸುಮಾರು 92 ಪಂದ್ಯಗಳನ್ನು ಆಡಿದೆ.

ಅಂದರೆ ಐಪಿಎಲ್​ನ ಯಶಸ್ವಿ ಮೂರು ತಂಡಗಳು ತವರಿನಲ್ಲಿ 100 ಪಂದ್ಯಗಳನ್ನಾಡಿದ ಸಾಧನೆ ಮಾಡಿಲ್ಲ. ಇದೀಗ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಳ್ಳಲು ಆರ್​ಸಿಬಿ ಸಜ್ಜಾಗಿ ನಿಂತಿದೆ. ಅದರಂತೆ ಇಂದು ಕಣಕ್ಕಿಳಿಯುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ.

ಚಿನ್ನಸ್ವಾಮಿಯಲ್ಲಿ RCB ದಾಖಲೆ ಹೇಗಿದೆ?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 99 ಪಂದ್ಯಗಳನ್ನಾಡಿದೆ. ಈ ವೇಳೆ ಆರ್​ಸಿಬಿ 48 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 46 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನುಳಿದ 5 ಮ್ಯಾಚ್​ಗಳು ಕಾರಣಾಂತರಗಳಿಂದ ರದ್ದಾಗಿದ್ದವು.

ಇದನ್ನೂ ಓದಿ: ಅಂದು RCB ಆಟಗಾರನ ಹೀಯಾಳಿಸಿ ಇಂದು ದೂರು ನೀಡಿದ CSK

2026ರ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಒಟ್ಟು 5 ಪಂದ್ಯಗಳನ್ನು ಆಡಿದೆ. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 3 ಪಂದ್ಯಗಳಲ್ಲೂ ಆರ್​ಸಿಬಿ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ. ಅದರಂತೆ ನೂರನೇ ಪಂದ್ಯದಲ್ಲಿ ಆರ್​ಸಿಬಿ ಸ್ಮರಣೀಯ ಗೆಲುವು ತನ್ನದಾಗಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

Published On – 10:58 am, Sat, 18 April 26

Source link

Heatwave Safety: ಹೆಚ್ಚುತ್ತಿರುವ ಬಿಸಿಲ ಬೇಗೆ; ಆರೋಗ್ಯ ರಕ್ಷಣೆಗೆ ಇಲ್ಲಿವೆ ಸರಳ ಹಾಗೂ ಪರಿಣಾಮಕಾರಿ ಉಪಾಯಗಳು – Kannada News | Heatwave Safety: 7 Tips to Protect Your Family from Extreme Summer Sun

ದಿನ ಕಳೆದಂತೆ ಸೂರ್ಯನ ಪ್ರಖರತೆ ಏರುತ್ತಲೇ ಇದೆ. “ಇಂದು ಮಳೆ ಬರಬಹುದು, ನಾಳೆ ಬರಬಹುದು” ಎಂಬ ನಿರೀಕ್ಷೆ ಎಲ್ಲರಲ್ಲೂ ಸಹಜ. ಇತ್ತೀಚೆಗೆ ಶಿರಸಿಯಂತಹ ಮಲೆನಾಡಿನ ಭಾಗದಲ್ಲೂ ನೆರಳಿನಲ್ಲೇ ಸುಮಾರು 35°C ಉಷ್ಣಾಂಶ ದಾಖಲಾಗುತ್ತಿರುವುದು ಬಿಸಿಲಿನ ತೀವ್ರತೆಗೆ ಸಾಕ್ಷಿ. ಹಿಂದಿನ ಕಾಲದಲ್ಲಿ 33°C ದಾಟಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿತ್ತು, ಆದರೆ ಈಗಿನ ಹವಾಮಾನ ಬದಲಾವಣೆ ನಮಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡುತ್ತಿದೆ. ಬಿಸಿಲಿನ ಧಗೆಯಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಕೆಲವು ಪ್ರಮುಖ ಸಲಹೆಗಳು:

ಹೊರಾಂಗಣ ಕೆಲಸಗಳ ಸಮಯದ ಬಗ್ಗೆ ಇರಲಿ ಗಮನ:

ಸಾಮಾನ್ಯವಾಗಿ ಮಧ್ಯಾಹ್ನ 11:30 ರಿಂದ ಸಂಜೆ 4:00ರವರೆಗೆ ಬಿಸಿಲಿನ ತೀವ್ರತೆ ಗರಿಷ್ಠವಾಗಿರುತ್ತದೆ. ಸಾಧ್ಯವಾದಷ್ಟು ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಅನಿವಾರ್ಯ ಕೆಲಸಗಳಿದ್ದರೆ ಬೆಳಿಗ್ಗೆ ಅಥವಾ ಸಂಜೆ 4 ಗಂಟೆಯ ನಂತರ ಮುಗಿಸಿಕೊಳ್ಳುವುದು ಒಳಿತು.

ಸರಿಯಾದ ಟೋಪಿಯ ಆಯ್ಕೆ:

ಬಿಸಿಲಿನಲ್ಲಿ ಹೋಗಲೇಬೇಕಾದ ಸಂದರ್ಭ ಬಂದಾಗ ಹತ್ತಿ ಬಟ್ಟೆ ಟೋಪಿ ಬಳಸಿ. ಇದು ತಲೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಇದಲ್ಲದೇ ಅಂಪೈರ್ ಕ್ಯಾಪ್ (Umpire Cap) ಸಾಮಾನ್ಯ ಪಿ-ಕ್ಯಾಪ್‌ಗಿಂತ ಇದು ಮುಖ ಮತ್ತು ಕುತ್ತಿಗೆಗೆ ಹೆಚ್ಚು ರಕ್ಷಣೆ ನೀಡುತ್ತದೆ. ಗಾಢ ಬಣ್ಣದ ಬಟ್ಟೆಗಳು ಶಾಖವನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ಬಿಳಿ ಅಥವಾ ತಿಳಿ ಬಣ್ಣದ ಟೋಪಿಗಳನ್ನು ಧರಿಸುವುದು ಹೆಚ್ಚು ಆರಾಮದಾಯಕ.

ದೇಹದ ಜಲಾಂಶ ನಿರ್ವಹಣೆ:

ಬಿಸಿಲಿನಲ್ಲಿ ದೇಹವು ಬೇಗನೆ ನೀರಿನಾಂಶವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಸಾಮಾನ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯಿರಿ. ಬಿಸಿಲಿಗೆ ಹೋಗುವ ಮೊದಲು 1 ಲೀಟರ್ ನೀರಿಗೆ 6 ಚಮಚ ಸಕ್ಕರೆ ಮತ್ತು 1 ಚಮಚ ಉಪ್ಪು ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದ ಶಕ್ತಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಸಾಂಪ್ರದಾಯಿಕ ‘ಲಾವಂಚ’ದ ಮ್ಯಾಜಿಕ್:

ಉತ್ತರ ಕನ್ನಡದಲ್ಲಿ ಜನಪ್ರಿಯವಾಗಿರುವ ಲಾವಂಚ (ಮಡಿವಾಳ ಬೇರು) ಬಿಸಿಲಿಗೆ ಅತ್ಯುತ್ತಮ ಮದ್ದು. ಒಂದು ಅಡಿಕೆಯ ಗಾತ್ರದಷ್ಟು ಲಾವಂಚ ಬೇರನ್ನು ಮಣ್ಣಿಲ್ಲದಂತೆ ಚೆನ್ನಾಗಿ ತೊಳೆದು ಕುಡಿಯುವ ನೀರಿನ ಡ್ರಂಗೆ ಹಾಕಿ. ಒಮ್ಮೆ ಬಳಸಿದ ಬೇರನ್ನು 3-4 ದಿನಗಳವರೆಗೆ ಬಳಸಬಹುದು. ಈ ನೀರು ದೇಹಕ್ಕೆ ನೈಸರ್ಗಿಕ ತಂಪು ನೀಡುವುದಲ್ಲದೆ, ಮನಸ್ಸಿಗೆ ಹಿತವಾದ ಸುಗಂಧವನ್ನೂ ನೀಡುತ್ತದೆ.

ಕೊತ್ತಂಬರಿ (ಧನಿಯಾ) ಪಾನೀಯ:

ಪ್ರವಾಸ ಮಾಡುವವರಿಗೆ ಅಥವಾ ಹೆಚ್ಚು ನೀರು ಕುಡಿಯಲು ಸಾಧ್ಯವಾಗದವರಿಗೆ ಇದು ರಾಮಬಾಣ. 1 ಲೀಟರ್ ನೀರಿಗೆ 20 ಗ್ರಾಂ ಕೊತ್ತಂಬರಿ ಪುಡಿ ಹಾಕಿ 15-20 ನಿಮಿಷ ಕುದಿಸಿ. ನಂತರ 6 ಚಮಚ ಸಕ್ಕರೆ ಮತ್ತು 2 ಚಮಚ ಉಪ್ಪು ಸೇರಿಸಿ.

ಲೇಖನ: ಡಾ. ರವಿಕಿರಣ್ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ (9242122874)

ಆರೋಗ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:45 am, Sat, 18 April 26

Source link

ಸದ್ಯಕ್ಕಂತೂ ಆಗಲ್ಲ ‘ಹೇರಾ ಫೇರಿ 3’; ಅಕ್ಷಯ್ ಕೊಟ್ಟ ಕಾರಣ ಏನು? – Kannada News | Hera Pheri 3 Delayed: Akshay Kumar Reveals Reasons Behind Postponement

ಅಕ್ಷಯ್ ಕುಮಾರ್ (Akshay Kumar) ಅಭಿನಯದ ಸಾಕಷ್ಟು ಸಿನಿಮಾಗಳು ಜನಮನ್ನಣೆ ಪಡೆದಿವೆ. ಅದರಲ್ಲಿ ‘ಹೇರಾ ಫೇರಿ’ ಸರಣಿ ಕೂಡ ಒಂದು. ಈ ಚಿತ್ರ ಶೀಘ್ರವೇ ಸೆಟ್ಟೇರಲಿದೆ ಎಂದು ಹೇಳಲಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಅಪ್​​ಡೇಟ್ ಬಂದಿಲ್ಲ. ಪರೇಶ್ ರಾವಲ್ ಆರಂಭದಲ್ಲಿ ಕಿರಿಕ್ ಮಾಡಿದರು. ನಂತರ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಆದರೆ ಚಿತ್ರದ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಈಗ, ‘ಹೇರಾ ಫೆರಿ 3’ ಸದ್ಯಕ್ಕೆ ಸೆಟ್ಟೇರಲ್ಲ ಎಂದು ಅಕ್ಷಯ್ ಕುಮಾರ್ ಸ್ವತಃ ದೃಢಪಡಿಸಿದ್ದಾರೆ.

‘ಹೇರಾ ಫೇರಿ 3 ಸಿನಿಮಾ ಈಗ ಆರಂಭ ಆಗುತ್ತಿಲ್ಲ. ಇದರಿಂದ ಸಾಕಷ್ಟು ಜನರಿಗೆ ಬೇಸರವಾಗಿದೆ. ಆದರೆ ಪರವಾಗಿಲ್ಲ, ನಾವು ‘ವೆಲ್‌ಕಮ್ 3’ ಮಾಡುತ್ತೇವೆ’ ಎಂದು ಅಕ್ಷಯ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದರು. ಚಿತ್ರದ ಬಗ್ಗೆ ವಿಷಯಗಳು ಬಗೆಹರಿದಿವೆಯೇ ಎಂದು ಕೇಳಿದಾಗ, ‘ಈಗ ಏನೋ ನಡೆಯುತ್ತಿದೆ. ಅದನ್ನು ಓಪನ್ ಆಗಿ ಹೇಳಲು ಸಾಧ್ಯವಿಲ್ಲ. ಆದರೆ, ಸಿನಿಮಾ ಸದ್ಯಕ್ಕಂತೂ ಆಗಲ್ಲ’ ಎಂದು ಹೇಳಿದರು ಅಕ್ಷಯ್.

ಮುಂದಿನ ಒಂದು ಅಥವಾ ಎರಡು ವರ್ಷಗಳ ಕಾಲ ಈ ಚಿತ್ರ ನಿರ್ಮಾಣವಾಗುವುದಿಲ್ಲವೇ ಎಂದು ಅಕ್ಷಯ್ ಕುಮಾರ್ ಅವರನ್ನು ಕೇಳಿದಾಗ, ‘ಮುಂದಿನ ವರ್ಷಕ್ಕಂತೂ ಸೆಟ್ಟೇರಲ್ಲ’ ಎಂದು ಉತ್ತರಿಸಿದರು. ಪರೇಶ್ ಅವರ ಜೊತೆ ಮನಸ್ತಾಪ ಪೂರ್ಣಗೊಂಡಿತೇ ಎಂದು ಕೇಳಿದಾಗ ನಾನು, ಸುನೀಲ್ ಶೆಟ್ಟಿ ಹಾಗೂ ಪರೇಶ್ ವೆಲ್ಕಮ್ ಟು ದಿ ಜಂಗಲ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇವೆ ಎಂದಿದ್ದಾರೆ.

‘ಸಂದರ್ಶನಗಳಲ್ಲಿ, ಕ್ಯಾಮೆರಾ ಎದುರು ಚರ್ಚಿಸಲಾಗದ ಕೆಲವು ವಿಷಯಗಳಿವೆ. ಇವು ಒಪ್ಪಂದಗಳು. ಒಂದು ಪ್ರಾಜೆಕ್ಟ್ ತಡ ಆಗಲು ಹಲವು ಕಾರಣ ಇರುತ್ತದೆ. ಸಮಯ ಬಂದಾಗ, ಈ ಚಿತ್ರವನ್ನು ನಿರ್ಮಿಸಲಾಗುವುದು. ಆದರೆ ಅಷ್ಟರಲ್ಲಿ ನನಗೆ ವಯಸ್ಸಾಗಿರಬಾರದು’ ಎಂದಿದ್ದಾರೆ.

ಇದನ್ನೂ ಓದಿ: ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

‘ಹೇರಾ ಫೆರಿ’ ಚಿತ್ರದ ಹಿಂದಿನ ಎರಡೂ ಭಾಗಗಳು ಭಾರಿ ಯಶಸ್ಸನ್ನು ಕಂಡವು. ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದವು ಮತ್ತು ಎರಡೂ ಕಲ್ಟ್ ಕ್ಲಾಸಿಕ್ ಸ್ಥಾನಮಾನವನ್ನು ಹೊಂದಿವೆ. ಅಭಿಮಾನಿಗಳು “ಹೇರಾ ಫೆರಿ 3” ಗಾಗಿ ಕಾತರದಿಂದ ಕಾಯುತ್ತಿದ್ದಾರೆ, ಆದರೆ ಆ ಕಾಯುವಿಕೆ ಎಷ್ಟು ಕಾಲ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 99 ಅಡಿಗೆ ಕುಸಿತ: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಎದುರಾಯ್ತು ಜಲಕಂಟಕ – Kannada News | KRS Dam Water Level Drops to 99 Feet: Drinking Water Crisis Looms for Bengaluru and Cauvery Basin Districts

ಮಂಡ್ಯ, ಏಪ್ರಿಲ್ 18: ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕನ್ನಂಬಾಡಿ ಕಟ್ಟೆ (KRS Dam) ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99 ಅಡಿಗೆ ಕುಸಿದಿದ್ದು, ಮಳೆಗಾಲ ವಿಳಂಬವಾದರೆ ಕುಡಿಯುವ ನೀರಿಗಾಗಿ ದೊಡ್ಡ ಮಟ್ಟದ ಹಾಹಾಕಾರ ಎದುರಾಗುವ ಭೀತಿ ಆವರಿಸಿದೆ. ಬೆಂಗಳೂರಿನ ಹಲವೆಡೆ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು, ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ.

ಖಾಲಿಯಾಗುತ್ತಿದೆ ಕಾವೇರಿ ಒಡಲು

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ ಕೇವಲ 22 ಟಿಎಂಸಿ ಮಾತ್ರ ನೀರು ಶೇಖರಣೆ ಇದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ (Dead Storage) ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 15 ಟಿಎಂಸಿ ಮಾತ್ರ. ಪ್ರಸ್ತುತ ಜಲಾಶಯಕ್ಕೆ 66 ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವು 4,388 ಕ್ಯೂಸೆಕ್ ಇದೆ.

ಬೆಂಗಳೂರಿಗರಿಗೆ ಆತಂಕ

ಕಾವೇರಿ ನೀರನ್ನೇ ನಂಬಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಮತ್ತು ಇತರ ನಗರಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಲಭ್ಯವಿರುವ ನೀರನ್ನು ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀಡಬೇಕಿದೆ ಮತ್ತು ಕುಡಿಯಲು ಮೀಸಲಿಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.

ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ತಡವಾದರೆ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಕಾವೇರಿ ನೀರು ಅವಲಂಬಿತ ಜನರಿಗೆ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು ಹೃದಯಭಾಗದಲ್ಲೇ ಜಲಕ್ಷಾಮ: ನೀರಿಗಾಗಿ ನಿದ್ದೆಬಿಟ್ಟ ರಾಜಾಜಿನಗರದ ಜನ, ಜಲಮಂಡಳಿ ವಿರುದ್ಧ ಆಕ್ರೋಶ

ಮತ್ತೊಂದೆಡೆ, ಬೆಂಗಳೂರಿನ ವಿವಿಧೆಡೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ರಾಜಾಜಿನಗರದ ಚಾಮುಂಡಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, 3,000ಕ್ಕೂ ಹೆಚ್ಚು ಕುಟುಂಬಗಳು ಹನಿ ನೀರಿಗಾಗಿ ಮಧ್ಯರಾತ್ರಿ ನಿದ್ದೆ ಬಿಟ್ಟು ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಬೆಲೆ ಏರಿಕೆಯಾಗಿದ್ದು, ಜನರು ದೂರದ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿಯೂ ನೀರಿನ ಭಾರಿ ಸಮಸ್ಯೆ ತಲೆದೋರಿದೆ. ಇದೀಗ ಕೆಆರ್​​ಎಸ್ ಡ್ಯಾಂನಲ್ಲೂ ನೀರಿನ ಮಟ್ಟ ಕುಸಿದಿರುವುದು ಬೆಂಗಳೂರಿನ ಜನತೆಗೆ ತಲೆನೋವು ಉಂಟುಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:03 am, Sat, 18 April 26

Source link

IPL 2026: SRH ತಂಡಕ್ಕೆ ಇಬ್ಬರು ವಿದೇಶಿ ಆಟಗಾರರು ಎಂಟ್ರಿ

Source link

ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ: ರನ್‌ವೇ ಸ್ಥಗಿತ, ನೂರಾರು ವಿಮಾನಗಳ ಸಂಚಾರ ವ್ಯತ್ಯಯ! – Kannada News | Pune Airport Runway Closed: Fighter Jet Emergency Landing Causes Flight Chaos

ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ

ಪುಣೆ, ಏಪ್ರಿಲ್ 18: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pune) ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ರನ್‌ವೇ ಮೇಲೆ ಅನಿರೀಕ್ಷಿತವಾಗಿ ಸ್ಥಗಿತಗೊಂಡ ಪರಿಣಾಮ ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.

ಏನಿದು ಘಟನೆ?

ಶುಕ್ರವಾರ ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ಯುದ್ಧ ವಿಮಾನವೊಂದು ವಾಡಿಕೆಯ ತರಬೇತಿ ಹಾರಾಟದ ನಂತರ ಭೂಸ್ಪರ್ಶ ಮಾಡುವಾಗ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದ ಅಡಿಭಾಗದ ಚಕ್ರಗಳ ವ್ಯವಸ್ಥೆಯಲ್ಲಿ (Undercarriage) ತಾಂತ್ರಿಕ ವೈಫಲ್ಯ ಉಂಟಾದ ಪರಿಣಾಮ ಅದು ರನ್‌ವೇ ಮೇಲೆಯೇ ನಿಂತುಬಿಟ್ಟಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.

ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ ವಾಯುಪಡೆ, ವಿಮಾನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿಯಾಗಿಲ್ಲ. ರನ್‌ವೇ ಪುನಃ ಕಾರ್ಯಾಚರಣೆಗೆ ತರುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿತು. ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಅಗತ್ಯ ಭದ್ರತಾ ಪರಿಶೀಲನೆಗಳ ನಂತರ ರನ್‌ವೇ ಮತ್ತೆ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಘೋಷಿಸಿತು.

ಪುಣೆ ವಿಮಾನ ನಿಲ್ದಾಣವು ದ್ವಂದ್ವ ಬಳಕೆ ವ್ಯವಸ್ಥೆಯಲ್ಲಿದ್ದು, ಲೋಹೇಗಾಂವ್ ವಾಯುಪಡೆ ಕೇಂದ್ರದೊಂದಿಗೆ ನಾಗರಿಕ ವಿಮಾನಗಳೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮವಾಗಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್‌ವೇ ಕ್ಲಿಯರ್ ಮಾಡಲು 4 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು.

ವಿಮಾನಯಾನದ ಮೇಲೆ ಭಾರಿ ಹೊಡೆತ

ಈ ಅವಧಿಯಲ್ಲಿ ಅನೇಕ ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದುಪಡಿಸಲಾಯಿತು. ಇಂಡಿಗೋ 31 ಆಗಮನ ಮತ್ತು 34 ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದರೆ, ಏರ್ ಇಂಡಿಯಾ ಮೂರು ಆಗಮನ ಮತ್ತು ಮೂರು ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದೆ. ಸ್ಪೈಸ್ ಜೆಟ್ ಹಾಗೂ ಆಕಾಶ ಏರ್ ತಲಾ ಎರಡು ಆಗಮನ ಮತ್ತು ಮೂರು ನಿರ್ಗಮನಗಳನ್ನು ರದ್ದುಪಡಿಸಿದವು. ಏರ್ ಇಂಡಿಯಾ ಎಕ್ಸ್​ಪರೆಸ್ ಐದು ಆಗಮನ ಮತ್ತು ಐದು ನಿರ್ಗಮನಗಳನ್ನು ರದ್ದುಪಡಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣ ಸಲಹೆ ಹೊರಡಿಸಿದ್ದು, ವಿಮಾನ ಸ್ಥಿತಿ ಪರಿಶೀಲಿಸಿ ಬಳಿಕವೇ ವಿಮಾನ ನಿಲ್ದಾಣಕ್ಕೆ ಬರಲು ಮನವಿ ಮಾಡಿದೆ. ಪರ್ಯಾಯ ಬುಕ್ಕಿಂಗ್ ಅಥವಾ ಸಂಪೂರ್ಣ ಹಣ ಮರುಪಾವತಿ ಆಯ್ಕೆಯನ್ನೂ ನೀಡಲಾಗಿದೆ.

ಇದನ್ನೂ ಓದಿ ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?

ಸಚಿವರ ಭರವಸೆ

ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು. ಯುದ್ಧ ವಿಮಾನವನ್ನು ತೆರವುಗೊಳಿಸಿ, ರನ್‌ವೇ ಪರೀಕ್ಷೆ ನಡೆಸಿದ ನಂತರ ಶನಿವಾರ ಬೆಳಗಿನ ಜಾವದ ವೇಳೆಗೆ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.

ಪ್ರಯಾಣಿಕರಿಗೆ ಸೂಚನೆ

ವಿಮಾನ ರದ್ದತಿಯಿಂದ ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ‘ಪ್ಲಾನ್ ಬಿ’ ಅಡಿಯಲ್ಲಿ ಪೂರ್ಣ ಹಣ ಮರುಪಾವತಿ ಅಥವಾ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದೆ. ಹವಾಮಾನ ಅಥವಾ ಇಂತಹ ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

The Impact of Anger: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ನಿಜವಾದ ಕಾರಣವೇ?

ಮಾನವನ ಜೀವನದಲ್ಲಿ ಎಲ್ಲವೂ ಅನುಕೂಲಕರವಾಗಿರುವಾಗ ಅದರ ಮಹತ್ವದ ಅರಿವು ಇರುವುದಿಲ್ಲ. ಆದರೆ, ಜೀವನದಲ್ಲಿ ಎದುರಾಗುವ ಕಷ್ಟಗಳು, ಯಶಸ್ಸು ಸಿಗದಿರುವುದು, ನಿರಂತರ ಸಂಕಷ್ಟಗಳು ದಾರಿದ್ರ್ಯ ಎಂದು ಕರೆಯಲ್ಪಡುತ್ತದೆ. ಊಟಕ್ಕೆ ಕಷ್ಟಪಡುವುದು, ಉದ್ಯೋಗ ಸಿಗದಿರುವುದು, ಸರಿಯಾಗಿ ಬೆಳೆಗಳು ಬಾರದಿರುವುದು, ವಿದ್ಯಾಭ್ಯಾಸದಲ್ಲಿ ಎಷ್ಟೇ ಓದಿದರೂ ಪ್ರಯೋಜನವಾಗದಿರುವುದು – ಇವೆಲ್ಲವೂ ದಾರಿದ್ರ್ಯದ ಲಕ್ಷಣಗಳು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳಯವಂತೆ, ಈ ದಾರಿದ್ರ್ಯಕ್ಕೆ ಅನೇಕ ಕಾರಣಗಳಿದ್ದರೂ, ಕೋಪವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಗ್ರಹದೋಷಗಳು, ಪೂರ್ವ ಜನ್ಮದ ದೋಷಗಳು, ಪಿತೃ ದೋಷಗಳು, ಮತ್ತು ಕರ್ಮಫಲಗಳ ಜೊತೆಗೆ, ಕೋಪವು ವ್ಯಕ್ತಿಯ ಜೀವನದಲ್ಲಿ ಮಹಾ ನಷ್ಟವನ್ನುಂಟುಮಾಡುತ್ತದೆ. ಉದಾಹರಣೆಗೆ, ಒಬ್ಬ ಕಂಪನಿಯ ಮಾಲೀಕನು ತನ್ನ ಅಧೀನ ನೌಕರರ ಮೇಲೆ ನಿರಂತರವಾಗಿ ಕೋಪ ಮಾಡಿಕೊಂಡರೆ, ಒಬ್ಬೊಬ್ಬರಾಗಿ ಕೆಲಸ ಬಿಟ್ಟು ಹೋಗುತ್ತಾರೆ. ಹೊಸಬರನ್ನು ನೇಮಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಂಪನಿಯ ಮಾಲೀಕನ ಕೋಪದ ಬಗ್ಗೆ ಸಂದೇಶ ಹರಡಿ, ಹೊಸಬರೂ ಅಲ್ಲಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ಸಂಸ್ಥೆಯು ದಿನೇ ದಿನೇ ಅದೋಗತಿಗೆ ಇಳಿದು, ಮಾಲೀಕನು ದಾರಿದ್ರ್ಯಕ್ಕೆ ತುತ್ತಾಗುತ್ತಾನೆ.

ಕೋಪದಲ್ಲಿ ಆವೇಶಭರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ನಮ್ಮ ಪುರಾಣಗಳಲ್ಲೂ ಇದಕ್ಕೆ ಅನೇಕ ಉದಾಹರಣೆಗಳಿವೆ. ಅತಿಯಾದ ಅಹಂಕಾರವನ್ನು ಮೆರೆದ ಕಂಸನ ಗತಿಯು ದುರಂತವಾಗಿತ್ತು. ಅಹಂಕಾರವು ಕೋಪದ ಸಹೋದರನಂತೆಯೇ ಇರುತ್ತದೆ. ಚಿನ್ನದ ನಗರದಲ್ಲಿದ್ದರೂ, ತನ್ನ ಕೋಪ ಮತ್ತು ಅಹಂಕಾರದಿಂದಾಗಿ ರಾವಣನು ತನ್ನ ಇಡೀ ಕುಟುಂಬವನ್ನು ಕಳೆದುಕೊಂಡನು. ರಾವಣನ ಪತ್ನಿ ಮಂಡೋದರಿಯು ಪಂಚ ಪತಿವ್ರತೆಯರಲ್ಲಿ ಒಬ್ಬಳಾದರೂ, ರಾವಣನ ಕೋಪವು ಅವನನ್ನು ಪಾತಾಳಕ್ಕೆ ತಳ್ಳಿತು.

ಇನ್ನು, ಅತಿ ವಿಪರೀತ ಕೋಪಿಷ್ಠನಾಗಿದ್ದ ವಿಶ್ವಾಮಿತ್ರ ಮಹರ್ಷಿಗಳು ಎಷ್ಟೋ ವರ್ಷಗಳ ತಪಸ್ಸಿನ ನಂತರ ತಮ್ಮ ಕೋಪವನ್ನು ಹೋಗಲಾಡಿಸಿಕೊಂಡು ಬ್ರಹ್ಮಋಷಿ ಸ್ಥಾನವನ್ನು ಪಡೆದರು. ಕೋಪವಿಲ್ಲದಿದ್ದರೆ ವಿಶ್ವಾಮಿತ್ರರು ವಸಿಷ್ಠ ಮಹರ್ಷಿಗಳಿಗೆ ಸಮಾನರಾಗುತ್ತಿದ್ದರು ಎಂದು ಶಾಸ್ತ್ರಗಳು ಹೇಳುತ್ತವೆ. ಕೋಪವು ಧನಹಾನಿ, ಮಾನಹಾನಿ, ಪ್ರಾಣಹಾನಿಗಳಿಗೆ ಕಾರಣವಾಗುತ್ತದೆ. ಕೋಪವು ನಮ್ಮ ಜಯವನ್ನು ಕಸಿದುಕೊಳ್ಳುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಶ್ರೀ ಮಹಾವಿಷ್ಣು ಭಗವಾನ್ ದಶಾವತಾರಗಳಲ್ಲಿ ರಾಕ್ಷಸರನ್ನು ಸಂಹಾರ ಮಾಡಿದ್ದು ಶಾಂತಿಯ ಮೂಲಕ. ಅವರು ಪ್ರಶಾಂತವಾಗಿ, ಹಸನ್ಮುಖಿಯಾಗಿ, ಮನಸ್ಸಿನಲ್ಲಿ ಚಿಂತನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ನರಸಿಂಹ ಅವತಾರದಲ್ಲಿ ಹಿರಣ್ಯಕಶಿಪುವಿನ ಅತಿರೇಕದ ವರ್ತನೆ ಮಿತಿ ಮೀರಿದಾಗ ಮಾತ್ರ ರೋಷಾವೇಶದಿಂದ ಸಂಹಾರ ಮಾಡಿದರು. ಶ್ರೀರಾಮ, ಶ್ರೀಕೃಷ್ಣರು ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ನಗುನಗುತ್ತಾ ಇರುತ್ತಿದ್ದರು. ಕೋಪವು ಯಾವಾಗಲೂ ಹಾನಿಕಾರಕ. ಕೋಪದಿಂದ ಮಾಡಿದ ಹೋಮ, ಪೂಜೆ, ವ್ರತ, ಉಪವಾಸ ಯಾವುದೂ ಫಲ ನೀಡುವುದಿಲ್ಲ.

ಹಾಗಾಗಿ, “ಕೋಪ ಬಿಟ್ಟರೆ ಕುಬೇರನೇ” ಎಂಬ ಮಾತಿದೆ. ಪ್ರಶಾಂತತೆಯಿಂದ ಇರುವವರಿಗೆ ಕುಬೇರನು ಒಲಿಯುತ್ತಾನೆ. ಹಣ ಬರುವಾಗ ನಾವು ಶಾಂತವಾಗಿರುತ್ತೇವೆ, ಆದರೆ ಹಣ ಬಂದ ನಂತರ ಅಥವಾ ಬರುವ ಮುನ್ನ ಕೋಪವನ್ನು ನಿಯಂತ್ರಿಸುವುದು ಮುಖ್ಯ. ದಾರಿದ್ರ್ಯ, ಕಷ್ಟ, ನಷ್ಟಗಳಿಗೆ ಕೋಪವೇ ಮಹಾ ದೊಡ್ಡ ಭೂತ. ಆವೇಶವಾಗಿ ಮಾತನಾಡುವುದು, ಹೈ ಪಿಚ್‌ನಲ್ಲಿ ಮಾತನಾಡುವುದು ಮುಂತಾದ ಕೋಪದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಒಂದು ವಾರ ಕಾಲ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ನಿಮ್ಮ ಜೀವನದಲ್ಲಿ ಆಗುವ ಸಕಾರಾತ್ಮಕ ಬದಲಾವಣೆಗಳು ನಿಮಗೇ ತಿಳಿಯುತ್ತವೆ. ಬೀದಿ ವ್ಯಾಪಾರಿಯಿಂದ ಅಂಬಾನಿಯವರೆಗೂ ಎಲ್ಲರೂ ಮಾಡುವ ಕಾಯಕಕ್ಕೆ ಗೌರವವಿರುತ್ತದೆ. ಕೋಪವನ್ನು ನಿಯಂತ್ರಿಸಿದರೆ ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ, ಮತ್ತು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನಗೆ ವಿಷಾದವಿಲ್ಲ’; ಡಿವೋರ್ಸ್​ ಬಗ್ಗೆ ಕೊನೆಗೂ ಮೌನ ಮುರಿದ ಹನ್ಸಿಕಾ ಮೋಟ್ವಾನಿ – Kannada News | Hansika Motwani Breaks Silence on Divorce: Reveals Why She Separated from Sohail Khaturia

ಹನ್ಸಿಕಾ ಮೋಟ್ವಾನಿ (Hansika) ಹಾಗೂ ಸೋಹೈಲ್ ಕತುರಿಯಾ ಅವರು ಅದ್ದೂರಿಯಾಗಿ ವಿವಾಹ ಆಗಿದ್ದೇನೋ ನಿಜ. ಆದರೆ, ಕೇವಲ ನಾಲ್ಕೇ ವರ್ಷಕ್ಕೆ ಇವರು ಬೇರೆ ಆದರು. ಡಿವೋರ್ಸ್ ಪಡೆಯುವುದಕ್ಕೂ ಮೊದಲೇ ಇವರು ಬೇರೆ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು ಎಂದು ಹೇಳಲಾಗಿತ್ತು. ಈಗ ವಿಚ್ಛೇದನದ ಬಗ್ಗೆ ಹನ್ಸಿಕಾ ಮೊದಲ ಬಾರಿಗೆ ಮಾತನಾಡಿದ್ದಾರೆ. ಡಿವೋರ್ಸ್​​ಗೆ ಸೋಹೈಲ್ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಯಾವುದೇ ಸೆಲೆಬ್ರಿಟಿ ವಿಚ್ಛೇದನವಾದರೂ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಈಗಲೂ ಹಾಗೆಯೇ ಆಗಿದೆ. ಹನ್ಸಿಕಾ ಹಾಗೂ ಸೋಹೈಲ್ ಡಿವೋರ್ಸ್ ವಿಷಯದಲ್ಲಿ ಹಲವು ವದಂತಿಗಳು ಹುಟ್ಟಿಕೊಂಡವು. ಆದರೆ, ಇಷ್ಟು ದಿನ ಅವರು ಈ ಬಗ್ಗೆ ಮಾತನಾಡಿರಲಿಲ್ಲ. ಕೊನೆಗೂ ಈ ಬಗ್ಗೆ ಅವರು ಮೌನ ಮುರಿದಿದ್ದಾರೆ.

‘ಜನರು ಕ್ಲಿಕ್‌ಬೈಟ್ ಬಯಸಿದ್ದರು, ಅವರಿಗೆ ಅದು ಸಿಕ್ಕಿತು. ಅವರಿಗೆ ಹೆಡ್​​ಲೈನ್ ಬೇಕಿತ್ತು ಅದು ಅವರಿಗೆ ಸಿಕ್ಕಿತು. ನನಗೆ ಇದೆಲ್ಲ ಮುಖ್ಯ ಎಂದು ಅನಿಸಲಿಲ್ಲ. ಹೀಗಾಗಿ, ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಯಾರಾದರೂ ಗೊತ್ತಿಲ್ಲದೆ ತಪ್ಪಾದ ರೈಲನ್ನು ಏರಿದರೆ, ಅದರಲ್ಲಿ ಪ್ರಯಾಣ ಮಾಡಿ ಕೊರಗುವುದಕ್ಕಿಂತ, ರೈಲಿನಿಂದ ಇಳಿಯುವುದು ಉತ್ತಮ’ ಎಂದು ಅವರು ಹೇಳಿದ್ದಾರೆ. ‘ನನಗೆ ನನ್ನ ಕುಟುಂಬದಿಂದ ಅಪಾರ ಬೆಂಬಲ ಸಿಕ್ಕಿದೆ. ನನಗೆ ಡಿವೋರ್ಸ್ ಬಗ್ಗೆ ಯಾವುದೇ ವಿಷಯ ಇಲ್ಲ. ನಾನು ಖುಷಿಯಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ವಿಚ್ಛೇದನಕ್ಕೆ ತಾಯಿ ಮತ್ತು ಸಹೋದರ ಹೇಗೆ ಪ್ರತಿಕ್ರಿಯಿಸಿದರು ಎಂದು ಕೇಳಿದ್ದಕ್ಕೆ ಹನ್ಸಿಕಾ ನೇರ ಉತ್ತರ ನೀಡಿದ್ದಾರೆ. ‘ನಾನು ಅನುಭವಿಸಿದ ಕಷ್ಟಗಳನ್ನು ಕುಟುಂಬದವರು ನೋಡಿದ್ದರು. ಸರಿ ಹೊಂದುತ್ತಿಲ್ಲ ಎಂದರೆ ಹೊರಬರುವಂತೆ ಸೂಚಿಸಿದರು. ನಾನು ಸದಾ ಖುಷಿಯಿಂದ ಇರುವ ವ್ತಕ್ತಿ. ಹೀಗಾಗಿ, ಈ ರೀತಿಯ ಕಷ್ಟ ಅನುಭವಿಸುವುದು ಭಯ ತರುತ್ತದೆ. ನನ್ನ ಹಾಗೂ ಸೋಹೈಲ್ ಮಧ್ಯೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ತಿಳಿಯದಿರುವುದೇ ಉತ್ತಮ’ ಎಂದು ಹನ್ಸಿಕಾ ಹೇಳಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಮನಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ

ಹನ್ಸಿಕಾ ಹಾಗೂ ಸೋಹೈಲ್ 2022ರ ಡಿಸೆಂಬರ್ 4ರಂದು ವಿವಾಹ ಆದರು. ಇತ್ತೀಚೆಗೆ ಇವರು ಬೇರೆ ಆಗಿದ್ದಾರೆ. ಸದ್ಯಕ್ಕೆ ಹನ್ಸಿಕಾಗೆ ಮದುವೆ ಆಗುವ ಆಲೋಚನೆ ಇಲ್ಲ. ಮುಂದೆ ವಿಧಿ ಹೇಗೆ ಕರೆದುಕೊಂಡು ಹೋಗುತ್ತದೆಯೋ ಹಾಗೆ ಹೋಗುವ ಆಲೋಚನೆಯಲ್ಲಿ ಅವರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

World Heritage Day 2026: ಭಾರತದಲ್ಲಿರುವ ಈ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು? – Kannada News | World Heritage Day 2026: These are the popular World Heritage Sites in India

ಭಾರತ ಸೇರಿದಂತೆ ವಿಶ್ವದ ಹಲವೆಡೆ ಐತಿಹಾಸಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ನೈಸರ್ಗಿಕ ಪ್ರಾಮುಖ್ಯತೆಯನ್ನು ಹೊಂದಿರುವ ಹಲವಾರು ತಾಣಗಳಿವೆ (Heritage Sites). ಈ ತಾಣಗಳು ಮಾನವ ನಾಗರಿಕತೆಯ ಸಾಧನೆಗಳು ಮತ್ತು ಪ್ರಕೃತಿಯ ಅದ್ಭುತ ಸೃಷ್ಟಿಗಳನ್ನು ಸಂಕೇತಿಸುತ್ತವೆ. ಅಷ್ಟೇ ಅಲ್ಲದೆ ಈ ಐತಿಹಾಸಿಕ ಕಟ್ಟಡಗಳು, ಸ್ಮಾರಕಗಳು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸದ ಪ್ರಮುಖ ಭಾಗವಾಗಿದೆ. ಈ ಅಮೂಲ್ಯವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್‌ 18 ರಂದು ವಿಶ್ವ ಪರಂಪರೆ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಭಾರತದಲ್ಲಿ ಯುನೆಸ್ಕೋ ಗುರುತಿಸಿರುವ ಪಾರಂಪರಿಕ ತಾಣಗಳು ಎಷ್ಟಿವೆ ಎಂಬುದನ್ನು ನೋಡೋಣ ಬನ್ನಿ.

ವಿಶ್ವ ಪರಂಪರೆಯ ದಿನದ ಇತಿಹಾಸವೇನು?

ಪ್ರಪಂಚದಾದ್ಯಂತದ ಪ್ರಸಿದ್ಧ ಕಟ್ಟಡಗಳು ಮತ್ತು ನೈಸರ್ಗಿಕ ತಾಣಗಳನ್ನು ಸಂರಕ್ಷಿಸುವ ಉದ್ದೇಶದಿಂದ 1982 ರಲ್ಲಿ, ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿ (ICOMOS) ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆಯ ದಿನವನ್ನು ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿತು. ಅದರ ಮುಂದಿನ ವರ್ಷ, ಅಂದರೆ 1983 ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಯಿತು. ಈ ದಿನದಂದು, ಟುನೀಶಿಯಾದಲ್ಲಿ ಮೊದಲ ಬಾರಿಗೆ ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಯಿತು. ಆ ನಂತರದಲ್ಲಿ ವಿಶ್ವ ಪರಂಪರೆಯ ದಿನವನ್ನು ಅಧಿಕೃತವಾಗಿ ಗುರುತಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಪರಂಪರೆಯ ದಿನದ ಮಹತ್ವವೇನು?

  • ನೈಸರ್ಗಿಕ ಭೂದೃಶ್ಯಗಳು, ಐತಿಹಾಸಿಕ, ಸಾಂಸ್ಕೃತಿಕ ಸ್ಮಾರಕಗಳು, ಪ್ರಾಚೀನ ಅವಶೇಷಗಳ ರಕ್ಷಣೆ ಮತ್ತು ಇವುಗಳ ಬಗ್ಗೆ ಜನರಿಗೆ ಜ್ಞಾನ ಮೂಡಿಸಲು ವಿಶ್ವ ಪರಂಪರೆಯ ದಿನವನ್ನು ಆಚರಿಸಲಾಗುತ್ತದೆ.
  • ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಈ ಸ್ಮಾರಕಗಳನ್ನು ರಕ್ಷಿಸಬೇಕೆಂಬುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ.
  • ಈ ದಿನ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಹಾಗೂ ಕಲಾವಿದರು ಸೇರಿದಂತೆ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳನ್ನು ಸಂರಕ್ಷಿಸಲು ಕೊಡುಗೆ ನೀಡುವ ಜನರನ್ನು ಗುರುತಿಸಿ ಗೌರವಿಸಲಾಗುತ್ತದೆ.

ಇದನ್ನೂ ಓದಿ: ಏಪ್ರಿಲ್‌ 15 ರಂದೇ ಏಕೆ ವಿಶ್ವ ಕಲಾ ದಿನವನ್ನು ಆಚರಿಸುವುದು ಗೊತ್ತಾ?

ವಿಶ್ವ ಪರಂಪರೆಯ ತಾಣ ಎಂದರೇನು?

ವಿಶ್ವ ಪರಂಪರೆಯ ತಾಣಗಳು ಸಾಂಸ್ಕೃತಿಕ ಮತ್ತು ನೈಸರ್ಗಿಕ ಮಹತ್ವವನ್ನು ಹೊಂದಿರುವ ತಾಣಗಳಾಗಿವೆ. ಅವು ಐತಿಹಾಸಿಕವಾಗಿ ಮತ್ತು ಪರಿಸರೀಯವಾಗಿಯೂ ಮಹತ್ವದ್ದಾಗಿವೆ. ಅಂತಹ ತಾಣಗಳನ್ನು ವಿಶ್ವಸಂಸ್ಥೆಯ ಸಂಸ್ಥೆಯ UNESCO ಅಧಿಕೃತವಾಗಿ ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸಿದೆ.

ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು ಯಾವುವು?

ಪ್ರಪಂಚದಾದ್ಯಂತ ಒಟ್ಟು 1,052 ವಿಶ್ವ ಪರಂಪರೆಯ ತಾಣಗಳಿವೆ. ಅದರಲ್ಲಿ ಭಾರತವು ಪ್ರಸ್ತುತ ಒಟ್ಟು 44 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ. ಅವುಗಳು ಯಾವುವು ಎಂದರೆ,

  • ಆಗ್ರಾ ಕೋಟೆ
  • ಅಜಂತಾ ಗುಹೆಗಳು
  • ಎಲ್ಲೋರಾ ಗುಹೆಗಳು
  • ನಳಂದ ಮಹಾವಿಹಾರ (ನಳಂದ ವಿಶ್ವವಿದ್ಯಾಲಯ)
  • ಸಾಂಚಿ ಬೌದ್ಧ ಸ್ಮಾರಕ
  • ಚಂಪಾನೇರ್-ಪಾವಗಢ್ ಪುರಾತತ್ವ ಉದ್ಯಾನವನ
  • ಛತ್ರಪತಿ ಶಿವಾಜಿ ಟರ್ಮಿನಸ್
  • ಗೋವಾದ ಚರ್ಚುಗಳು ಮತ್ತು ಕಾನ್ವೆಂಟ್‌ಗಳು
  • ಎಲಿಫೆಂಟಾ ಗುಹೆಗಳು
  • ಫತೇಪುರ್ ಸಿಕ್ರಿ
  • ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್
  • ಹಂಪಿಯಲ್ಲಿರುವ ಸ್ಮಾರಕಗಳು
  • ಮಹಾಬಲಿಪುರಂನಲ್ಲಿರುವ ಸ್ಮಾರಕಗಳು
  • ಪಟ್ಟದಕಲ್ಲು
  • ರಾಜಸ್ಥಾನದ ಬೆಟ್ಟದ ಕೋಟೆ
  • ಕುತುಬ್‌ ಮಿನಾರ್‌
  • ರಾಣಿ-ಕಿ-ವಾವ್ ಪಟಾನ್, ಗುಜರಾತ್ (2014)
  • ಕೆಂಪು ಕೋಟೆ
  • ಭಿಂಬೆಟ್ಕಾದ ರಾಕ್ ಶೆಲ್ಟರ್ಸ್
  • ಸೂರ್ಯ ದೇವಾಲಯ, ಕೋನಾರ್ಕ್
  • ತಾಜ್ ಮಹಲ್
  • ಜಂತರ್ ಮಂತರ್, ಜೈಪುರ
  • ಕಾಜಿರಂಗ ರಾಷ್ಟ್ರೀಯ ಉದ್ಯಾನ
  • ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ
  • ಮಾನಸ ವನ್ಯಜೀವಿ ಅಭಯಾರಣ್ಯ
  • ಖಜುರಾಹೊದಲ್ಲಿರುವ ಸ್ಮಾರಕಗಳು
  • ಪಶ್ಚಿಮಘಟ್ಟಗಳು
  • ನಂದಾದೇವಿ ರಾಷ್ಟ್ರೀಯ ಉದ್ಯಾನವನ
  • ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ

ಇವೆಲ್ಲವು ಭಾರತದಲ್ಲಿರುವ ಪ್ರಮುಖ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿವೆ. ಈ ಸುಂದರ ತಾಣಗಳಿಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version