ವಿಕೆಟ್​ ಉರುಳುತ್ತಿದ್ದಂತೆ ದೇವರ ಫೋಟೋವನ್ನು ಹಣೆಗೊತ್ತಿ ಕೈ ಮುಗಿದ ಗೋಯೆಂಕಾ

ವಿಕೆಟ್​ ಉರುಳುತ್ತಿದ್ದಂತೆ ದೇವರ ಫೋಟೋವನ್ನು ಹಣೆಗೊತ್ತಿ ಕೈ ಮುಗಿದ ಗೋಯೆಂಕಾ

ಐಪಿಎಲ್‌ನಲ್ಲಿ ಲಕ್ನೋ ತಂಡ ತನ್ನ ಪ್ರದರ್ಶನದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ನಡವಳಿಕೆಗಳಿಂದ ಸುದ್ದಿಯಾಗಿದ್ದಾರೆ. ಈ ಹಿಂದಿನ ಸೀಸನ್​ಗಳಲ್ಲಿ ತಂಡದ ನಾಯಕರನ್ನು ಕ್ರೀಡಾಂಗಣದಲ್ಲೇ ಬಹಿರಂಗವಾಗಿ ನಿಂಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಗೋಯೆಂಕಾ, ಈ ಆವೃತ್ತಿಯಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು. ಲಕ್ನೋ ತಂಡ ಡೆಲ್ಲಿ ವಿರುದ್ಧ ಸೋತಾಗ ತಂಡದ ನಾಯಕ ರಿಷಭ್ ಪಂತ್​ಗೆ ಗೋಯೆಂಕಾ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ, ಬಹಿರಂಗವಾಗಿ ಆಟಗಾರರನ್ನು ಅಥವಾ ನಾಯಕರನ್ನು ನಿಂಧಿಸಿದಂತೆ ಎಲ್ಲಾ ತಂಡಗಳ ಮಾಲೀಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಇದೀಗ ಇದೆಲ್ಲದರ ನಡುವೆ ಇದೀಗ ಸಂಜೀವ್ ಗೋಯೆಂಕಾ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್​ಜೈಂಟ್ಸ್ ತಂಡ, ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಅವರ ತವರು ನೆಲದಲ್ಲಿ ಎದುರಿಸಿತ್ತು. ಸನ್‌ರೈಸರ್ಸ್ ತಂಡಕ್ಕೆ ಇದು ತವರು ಪಂದ್ಯವಾಗಿದ್ದರಿಂದ ತಂಡದಿಂದ ಸ್ಫೋಟಕ ಬ್ಯಾಟಿಂಗ್​ನ ನಿರೀಕ್ಷೆ ಇತ್ತು. ಆದರೆ ಇದಕ್ಕೆ ಲಕ್ನೋ ವೇಗಿಗಳು ಅವಕಾಶ ಮಾಡಿಕೊಡಲಿಲ್ಲ. ತಂಡದ ಪ್ರಮುಖ 4 ವಿಕೆಟ್​ಗಳು ಬಹುಬೇಗನೇ ಉದುರಿದವು. ಇದರಿಂದ ಸನ್‌ರೈಸರ್ಸ್ ತಂಡದ ರನ್ ವೇಗ ಪಾತಳಕ್ಕೆ ಕುಸಿಯಿತು. ಇದೆಲ್ಲದರ ನಡುವೆ ಸನ್‌ರೈಸರ್ಸ್ ತಂಡದ ನಾಯಕ ಇಶಾನ್ ಕಿಶನ್ ಅವರ ವಿಕೆಟ್ ಬಿದ್ದಾಗ, ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನೀಡಿದ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿಯೇ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಅದರಲ್ಲೂ ಆರಂಭಿಕರಾದ ಅಭಿಷೇಕ್ ಶರ್ಮಾ ಖಾತೆ ತೆರೆಯದೆ ಔಟಾದರೆ, ಟ್ರಾವಿಸ್ ಹೆಡ್ ಕೂಡ 7 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್​ಗಳು ಬಿದ್ದಾಗಲೇ ಸಾಕಷ್ಟು ಖುಷಿಯಲ್ಲಿದ್ದ ಗೋಯೆಂಕಾ ಅವರಿಗೆ ಅವರ ಖುಷಿಯನ್ನು ಇಮ್ಮಡಿಗೊಳಿಸುವ ಮತ್ತೊಂದು ಘಟನೆ ನಡೆಯಿತು. ಆರಂಭಿಕ ಆಘಾತದಿಂದ ತಂಡವನ್ನು ಮೇಲೇತ್ತುವ ಕೆಲಸ ಮಾಡುವ ಜವಾಬ್ದಾರಿ ಹೊತ್ತಿದ್ದ ತಂಡದ ನಾಯಕ ಇಶಾನ್ ಕಿಶನ್ ಕೂಡ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಕೇವಲ 1 ರನ್​ ಗಳಿಸಿ ಔಟಾದರು. ಕಿಶನ್ ಔಟಾದ ಕೂಡಲೇ ಸಂಜೀವ ಗೋಯೆಂಕಾ ತಮ್ಮ ಆಸನದಿಂದ ಮೇಲೆದ್ದು, ತಮ್ಮ ಕಿಸೆಯಲ್ಲಿದ್ದ ದೇವರ ಫೋಟೋವನ್ನು ಹೊರತೆಗೆದು ಅದನ್ನು ತಮ್ಮ ಹಣೆಗೆ ಒತ್ತಿಕೊಂಡರು. ನಂತರ ತಮ್ಮ ಎರಡು ಕೈಗಳನ್ನು ಜೋಡಿಸಿ ದೇವರಿಗೆ ನಮಸ್ಕರಿಸಿದರು. ಈ ವೇಳೆ ಅವರ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಇದೀಗ ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೃಥ್ವಿ ಅಂಬರ್-ಕಾರ್ತಿಕ್ ಮಹೇಶ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?

ನಟ ಪೃಥ್ವಿ ಅಂಬರ್ (Prithvi Ambar) ಮತ್ತು ಬಿಗ್​​ಬಾಸ್ 10 ವಿಜೇತ ಕಾರ್ತಿಕ್ ಮಹೇಶ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾ ಘೋಷಣೆಗೆಂದು ವಿಶೇಷ ಪ್ರೋಮೊ ಮಾಡಲಾಗಿದೆ. ಹಾಸ್ಯಮಯವಾದ ಈ ಪ್ರೋಮೊನಲ್ಲಿ ಪೃಥ್ವಿ ಅಂಬರ್​​ಗೆ ‘ಗ್ಯಾಸ್ ಟ್ರಬಲ್’ ಕಾರ್ತಿಕ್​​ಗೂ ‘ಗ್ಯಾಸ್ ಟ್ರಬಲ್’ ನಿರ್ಮಾಪಕರಿಗೆ ಡೊನಾಲ್ಡ್ ಟ್ರಂಪ್, ಇನ್ನೂ ಯಾರ್ಯಾರಿಂದಲೋ ಕರೆ ಬರುತ್ತಿವೆ. ಒಟ್ಟಾರೆ ಚಿತ್ರ ವಿಚಿತ್ರವಾದ ಈ ವಿಡಿಯೋದ ಉದ್ದೇಶವೇನು? ಇಬ್ಬರೂ ನಟಿಸುತ್ತಿರುವ ಸಿನಿಮಾ ಯಾವುದು? ಇಬ್ಬರಲ್ಲಿ ಯಾರು ಹೀರೋ? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Traditional Guidelines: ವಿದ್ಯಾರ್ಥಿಗಳು ತಾಂಬೂಲ ಯಾಕೆ ತಿನ್ನಬಾರದು? ಕಾರಣ ಇಲ್ಲಿ ತಿಳಿಯಿರಿ

ಯಾವುದೇ ಶುಭ ಕಾರ್ಯ ಅಥವಾ ಸಂತೋಷದ ಕಾರ್ಯಕ್ರಮಗಳಲ್ಲಿ ಉತ್ತಮ ಭೋಜನದ ನಂತರ ತಾಂಬೂಲವನ್ನು ಸೇವಿಸುವುದು ಭಾರತೀಯ ಸಂಪ್ರದಾಯದಲ್ಲಿ ಮಹತ್ವ ಪಡೆದಿದೆ. ವೈಜ್ಞಾನಿಕವಾಗಿ ತಾಂಬೂಲ ಸೇವನೆಯು ಆರೋಗ್ಯ ವೃದ್ಧಿಗೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಪಚನ ಕ್ರಿಯೆಯನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ. ಅಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ನೋಡಿದಾಗ, ತಾಂಬೂಲವು ಮಹಾಲಕ್ಷ್ಮಿಯ ಸಂಕೇತ, ಐಶ್ವರ್ಯ, ಸಮೃದ್ಧಿ ಮತ್ತು ಸಂತೋಷದ ಪ್ರತೀಕವಾಗಿದೆ. ವಿವಾಹ, ಗೃಹ ಪ್ರವೇಶ, ಉಪನಯನ, ಗೃಹಾರಂಭದಂತಹ ಯಾವುದೇ ಶುಭ ಸಂದರ್ಭಗಳಲ್ಲಿ ಸಂತೋಷದಿಂದ ಊಟ ಮಾಡಿದ ನಂತರ ತಾಂಬೂಲವನ್ನು ಸ್ವೀಕರಿಸಲಾಗುತ್ತದೆ.

ಆದರೆ, ಎಲ್ಲರಿಗೂ ಶುಭವೆನಿಸುವ ಈ ತಾಂಬೂಲವನ್ನು ವಿದ್ಯಾರ್ಥಿಗಳು ಸೇವಿಸಬಾರದು ಎಂದು ಶಾಸ್ತ್ರಗಳು ತಿಳಿಸುತ್ತವೆ. ಈ ಬಗ್ಗೆಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ವಿದ್ಯೆಯನ್ನು ಅರ್ಜಿಸುತ್ತಿರುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ಬ್ರಹ್ಮಚಾರಿಗಳು ತಾಂಬೂಲವನ್ನು ಸೇವಿಸುವುದು ಅಥವಾ ಭಕ್ಷಿಸುವುದು ಶುಭವಲ್ಲ. ಕೇವಲ ಗೃಹಸ್ಥರು ಮತ್ತು ವಯಸ್ಸಾದವರಿಗೆ ಮಾತ್ರ ಇದು ಶುಭಕರ ಎಂದು ಹೇಳಲಾಗುತ್ತದೆ. ತಾಂಬೂಲದಲ್ಲಿ ವೀಳ್ಯದೆಲೆ, ಅಡಿಕೆ, ಸುಣ್ಣ, ಏಲಕ್ಕಿ, ಕಸ್ತೂರಿ, ಜಾಜಿ, ಜಾಪತ್ರೆ ಮುಂತಾದ ಪದಾರ್ಥಗಳು ಸೇರಿರುತ್ತವೆ.

ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಿದರೆ ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಇದು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರ ಅಧ್ಯಯನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ತಾಂಬೂಲ ಸೇವನೆಯಿಂದ ನಾಲಿಗೆ ದಪ್ಪವಾಗಬಹುದು. ಮನಸ್ಸಿನ ಭಾವನೆಗಳು ವಿಕೃತಗೊಳ್ಳಬಹುದು. ಅಹಂಕಾರವೂ ಹೆಚ್ಚಾಗಬಹುದು. ಇವೆಲ್ಲವೂ ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಜ್ಞಾನಾರ್ಜನೆಗೆ ಮಾರಕವಾಗಿ ಪರಿಣಮಿಸಬಹುದು.

ಹಿಂದೆ ಗುರುಕುಲಗಳಲ್ಲಿ ವಿದ್ಯಾರ್ಥಿಗಳನ್ನು ಶ್ರೀಮಂತರು, ಬಡವರು, ರಾಜನ ಮಕ್ಕಳೇ ಆಗಲಿ ಸಮಾನವಾಗಿ ಕಾಣಲಾಗುತ್ತಿತ್ತು. ಅಲ್ಲಿ ಸಮಾನ ವಸ್ತ್ರ ಸಂಹಿತೆ, ಸಮಾನ ಆಸನ ಮತ್ತು ಸಮಾನ ಆಹಾರವನ್ನು ನೀಡಲಾಗುತ್ತಿತ್ತು. ಅಧ್ಯಯನಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಲು, ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಆಹಾರ ಪದಾರ್ಥಗಳನ್ನು ನೀಡುವುದನ್ನು ನಿಷೇಧಿಸಲಾಗಿತ್ತು. ಈರುಳ್ಳಿ, ಬೆಳ್ಳುಳ್ಳಿ, ಬದನೆಕಾಯಿ, ಗಿಣ್ಣ, ಮೂಲಂಗಿ, ಹುಳಿ ಮೊಸರಿನಂತಹ ಆಹಾರ ಪದಾರ್ಥಗಳನ್ನು ನೀಡುವುದಿಲ್ಲ. ಈ ನಿಯಮಗಳು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಕಲಿತ ವಿದ್ಯೆಯನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದ್ದವು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ತಾಂಬೂಲ ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ಕೆಲವು ಇತರ ನಿಯಮಗಳನ್ನೂ ಸಹ ಹಿಂದಿನ ಕಾಲದಲ್ಲಿ ವಿಧಿಸಲಾಗುತ್ತಿತ್ತು. ವಿದ್ಯಾರ್ಥಿಗಳು ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳಬಾರದು, ತಲೆ ಬಾಚಿಕೊಳ್ಳಬಾರದು, ಸುಗಂಧ ದ್ರವ್ಯಗಳನ್ನು ಬಳಸಬಾರದು ಎಂದು ಹೇಳಲಾಗುತ್ತಿತ್ತು. ನೈಸರ್ಗಿಕವಾಗಿ ಇರಬೇಕು ಎಂಬುದು ಇದರ ಹಿಂದಿನ ಉದ್ದೇಶ. ಚಾಪೆ ಮೇಲೆ ಮಲಗುವುದು ಶುದ್ಧವೆಂದು ಪರಿಗಣಿಸಲಾಗಿತ್ತು. ಬಿಸಿನೀರನ್ನು ಬಳಸದೆ ಬೆಚ್ಚಗಿನ ಅಥವಾ ಸಾಮಾನ್ಯ ನೀರನ್ನು ಬಳಸಬೇಕು, ಗಟ್ಟಿಯಾದ ಅಥವಾ ವಿಚಿತ್ರವಾದ ಪಾದರಕ್ಷೆಗಳನ್ನು ಧರಿಸಬಾರದು ಎಂಬ ನಿಯಮಗಳಿದ್ದವು. ಹಾಗೆಯೇ, ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅತಿಯಾಗಿ ಹಾಸ್ಯ ಮಾಡಬಾರದು. ಹಾಸ್ಯವೇ ಅಭ್ಯಾಸವಾದರೆ ಜೀವನವೂ ಹಾಸ್ಯಮಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಮಧ್ಯಾಹ್ನದ ನಿದ್ದೆಯು ಕೂಡ ವಿದ್ಯಾರ್ಥಿಗಳಿಗೆ ಶುಭವಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವುದೇ ವಿದ್ಯಾರ್ಥಿ, ಅದು ಎಲ್.ಕೆ.ಜಿ.ಯಿಂದ ಪಿ.ಎಚ್.ಡಿ.ವರೆಗಿನವರಾಗಿರಲಿ, ತಮ್ಮ ವಿದ್ಯಾರ್ಜನೆಯ ಕಾಲ ಪೂರ್ಣಗೊಳ್ಳುವವರೆಗೆ ತಾಂಬೂಲವನ್ನು ಸೇವಿಸಬಾರದು. ಪೋಷಕರು ಕೂಡ ಇದನ್ನು ಪ್ರೋತ್ಸಾಹಿಸಬಾರದು. ಶುಭ ಕಾರ್ಯಗಳಲ್ಲಿ ನೀಡುವ ಪಾನ್‌ ಬೀಡಾವನ್ನು ಸಹ ತಾಂಬೂಲದ ಲೆಕ್ಕಕ್ಕೆ ಸೇರಿಸಿ ವಿದ್ಯಾರ್ಥಿಗಳು ತ್ಯಜಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB-CSK ಪಂದ್ಯ: ಸ್ಟೇಡಿಯಂ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ 8 ಜನ ಪೊಲೀಸ್ ವಶಕ್ಕೆ

ಬೆಂಗಳೂರು, ಏಪ್ರಿಲ್​​ 05: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ಆರ್​ಸಿಬಿ (RCB) ಹಾಗೂ ಚೆನ್ನೈ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತರರಾಗಿದ್ದು, ಕ್ರೀಡಾಂಗಣದತ್ತ ಆಗಮಿಸುತ್ತಿದ್ದಾರೆ. ಕ್ರೀಡಾಂಗಣದ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಿ ಒಳ ಬಿಡುತ್ತಿದ್ದಾರೆ. ಈ ಮಧ್ಯೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಜಾರ್ಖಂಡ್ ಮೂಲದ ನಾಲ್ವರು ಸೇರಿ ಒಟ್ಟು 8 ಜನರನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ.

ಕಳ್ಳತನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಎಂದ ಸೀಮಂತ್ ಕುಮಾರ್ ಸಿಂಗ್

ಇತ್ತೀಚೆಗೆ ಮೊಬೈಲ್ ಕಳ್ಳತನ ಹಿನ್ನೆಲೆ ಉತ್ತರ ಭಾರತದಿಂದ ಬಂದಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅನುಮಾನಸ್ಪದವಾಗಿ ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದಿರುವ ಪೊಲೀಸರು ದಾಖಲೆ ಪತ್ರ ಮತ್ತು ಟಿಕೆಟ್​ ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ. ಇನ್ನು ಪಿಕ್ ಪಾಕೆಟ್ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

72 ಮೊಬೈಲ್ ಕದ್ದಿದ್ದ 13 ಮಂದಿ ಅರೆಸ್ಟ್

ಇತ್ತೀಚೆಗೆ ಅಂದರೆ ಮಾರ್ಚ್​ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ಮಧ್ಯೆ ಐಪಿಎಲ್​ ಉದ್ಘಾಟನಾ ಪಂದ್ಯ ನಡೆದಿತ್ತು. ಪಂದ್ಯ ನೋಡ್ತಾ ಫ್ಯಾನ್ಸ್​ ಕುಣಿದು ಕುಪ್ಪಳಿಸುತ್ತಿದ್ದರೆ, ಅಪ್ರಾಪ್ತ ಹುಡುಗರ ಗ್ಯಾಂಗ್​​ ಮೊಬೈಲ್‌ಗಳನ್ನ ಸದ್ದಿಲ್ಲದೆ ಕದಿಯುತ್ತಿದ್ದರು. ಒಂದಲ್ಲ, ಎರಡಲ್ಲ, ಬರೋಬ್ಬರಿ 72 ಮೊಬೈಲ್​ಗಳನ್ನ ಸೈಲೆಂಟಾಗಿ ದೋಚಿದ್ದರು.

ಇದನ್ನೂ ಓದಿ: ಬಂದಿದ್ದು ಜಾರ್ಖಂಡ್​ನಿಂದ, ಧರಿಸಿದ್ದು ಆರ್​ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಹೀಗೆ 72 ಮೊಬೈಲ್​ ಕದ್ದ 9 ಅಪ್ರಾಪ್ತರು ಸೇರಿ 13 ಮಂದಿಯನ್ನ ಅರೆಸ್ಟ್ ಮಾಡಲಾಗಿತ್ತು. ಜಾರ್ಖಂಡ್​ನಿಂದ ಅಪ್ರಾಪ್ತರ ಗ್ಯಾಂಗ್ ಕಟ್ಕೊಂಡು ಬಂದಿದ್ದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್‌ಕುಮಾರ್ ಮತ್ತು ಶುಭಮನ್​ನ ಗ್ಯಾಂಗ್ ಅಂದರ್​ ಆಗಿತ್ತು.

ಇದನ್ನೂ ಓದಿ: RCB vs CSK IPL 2026: ಹೈವೋಲ್ಟೇಜ್ ಪಂದ್ಯದ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಪೊಲೀಸ್ ಬಿಗಿ ಭದ್ರತೆ!

ಇನ್ನು ಮೈದಾನದ ಸುತ್ತಮುತ್ತ ಭದ್ರತೆಗೆ 2,300 ಪೊಲೀಸರ ನಿಯೋಜನೆ ಮಾಡಲಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್, ಮೆಟ್ರೋ ಸೇವೆ ಈ ಹಿಂದಿನ ಪಂದ್ಯದಂತೆಯೇ ಇರಲಿದೆ. ತಡರಾತ್ರಿ 2 ಗಂಟೆಯವರೆಗೂ ನಮ್ಮ ಮೆಟ್ರೋ ರೈಲು ಸಂಚಾರವಿರುತ್ತೆ. ಸುರಕ್ಷತೆಗಾಗಿ ಸ್ಟೇಡಿಯಂ ಸಮೀಪದ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಟಿಕೆಟ್ ಇಲ್ಲದವರು ಸ್ಟೇಡಿಯಂ ಸುತ್ತಮುತ್ತ ಬಾರದಂತೆ ಸೂಚನೆ ನೀಡಲಾಗಿದೆ. ನಕಲಿ ಟಿಕೆಟ್ ಮಾರಾಟ, ಬೆಟ್ಟಿಂಗ್ ಚಟುವಟಿಕೆ ಮೇಲೆ ಸಿಸಿಬಿ ನಿಗಾ ಇಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Akshaya Tritiya: ಅಕ್ಷಯ ತೃತೀಯದಂದು ತಪ್ಪಿಯೂ ಈ ವಸ್ತುಗಳನ್ನು ಖರೀದಿಸಬೇಡಿ!

ಸನಾತನ ಧರ್ಮದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಗೆ ವಿಶೇಷವಾದ ಧಾರ್ಮಿಕ ಮಹತ್ವವಿದೆ. ಈ ಪವಿತ್ರ ದಿನವನ್ನೇ ‘ಅಕ್ಷಯ ತೃತೀಯ’ ಎಂದು ಆಚರಿಸುತ್ತೇವೆ. ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ ಈ ಶುಭ ಹಬ್ಬವು ಏಪ್ರಿಲ್ 19 ರಂದು ಬಂದಿದೆ. ಶಾಸ್ತ್ರಗಳ ಪ್ರಕಾರ, ಅಕ್ಷಯ ತೃತೀಯದಂದು ಮದುವೆ, ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಪ್ರತ್ಯೇಕವಾಗಿ ಪಂಚಾಂಗ ನೋಡುವ ಅವಶ್ಯಕತೆಯಿಲ್ಲ, ಇಡೀ ದಿನವು ಅತ್ಯಂತ ಮಂಗಳಕರವಾಗಿರುತ್ತದೆ.

ಸಂಪತ್ತಿನ ಅಧಿದೇವತೆಯ ಆರಾಧನೆ:

ಅಕ್ಷಯ ತೃತೀಯದಂದು ಐಶ್ವರ್ಯದ ದೇವತೆಯಾದ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಮಾಡಿದ ದಾನ, ಧರ್ಮ ಮತ್ತು ಪುಣ್ಯ ಕಾರ್ಯಗಳ ಫಲವು ಎಂದಿಗೂ ಕ್ಷಯಿಸುವುದಿಲ್ಲ (ಅಳಿಯುವುದಿಲ್ಲ) ಎಂಬ ನಂಬಿಕೆಯಿದೆ. ಈ ಕಾರಣಕ್ಕಾಗಿಯೇ ಜನರು ಅಂದು ಚಿನ್ನ, ಬೆಳ್ಳಿ ಅಥವಾ ಬೆಲೆಬಾಳುವ ಆಭರಣಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ಆದರೆ, ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಈ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಆ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಚೂಪಾದ ಮತ್ತು ಮೊನಚಾದ ಆಯುಧಗಳು:

ಅಕ್ಷಯ ತೃತೀಯದಂದು ಚಾಕು, ಕತ್ತರಿ, ಬ್ಲೇಡ್, ಸೂಜಿ ಅಥವಾ ಕೊಡಲಿಯಂತಹ ಕತ್ತರಿಸುವ ಸಾಧನಗಳನ್ನು ಖರೀದಿಸಬಾರದು. ಇವುಗಳನ್ನು ಮನೆಗೆ ತರುವುದರಿಂದ ಕುಟುಂಬದಲ್ಲಿ ಕಲಹ ಉಂಟಾಗುತ್ತದೆ ಮತ್ತು ಸುಖ-ಶಾಂತಿ ಹದಗೆಡುತ್ತದೆ ಎಂಬ ನಂಬಿಕೆಯಿದೆ.

ಕಪ್ಪು ಬಣ್ಣದ ವಸ್ತುಗಳು:

ಶಾಸ್ತ್ರಗಳಲ್ಲಿ ಕಪ್ಪು ಬಣ್ಣವನ್ನು ಶನಿ ಮತ್ತು ರಾಹುವಿಗೆ ಸಂಬಂಧಿಸಿದ್ದೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಶುಭ ದಿನದಂದು ಕಪ್ಪು ಬಟ್ಟೆ, ಬೂಟುಗಳು ಅಥವಾ ಕಪ್ಪು ಪೀಠೋಪಕರಣಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಮಂಗಳಕರ ಕಾರ್ಯಗಳಲ್ಲಿ ಕಪ್ಪು ಬಣ್ಣದ ಬಳಕೆ ಅಶುಭವೆಂದು ನಂಬಲಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಅಲ್ಯೂಮಿನಿಯಂ ಮತ್ತು ಉಕ್ಕಿನ ಪಾತ್ರೆಗಳು:

ಅಕ್ಷಯ ತೃತೀಯದಂದು ಲೋಹವನ್ನು ಖರೀದಿಸುವುದು ಶ್ರೇಷ್ಠವಾದರೂ, ಲೋಹದ ಆಯ್ಕೆ ಸರಿಯಾಗಿರಲಿ. ಅಲ್ಯೂಮಿನಿಯಂ ಮತ್ತು ಸ್ಟೀಲ್ ಪಾತ್ರೆಗಳು ರಾಹುವಿನ ಸಂಕೇತವೆಂದು ಹೇಳಲಾಗುತ್ತದೆ. ಇವುಗಳ ಖರೀದಿಯು ಮನೆಯ ಸಮೃದ್ಧಿಯನ್ನು ಕುಂಠಿತಗೊಳಿಸಬಹುದು. ಬದಲಿಗೆ ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯ ವಸ್ತುಗಳನ್ನು ಆರಿಸಿಕೊಳ್ಳುವುದು ಉತ್ತಮ.

ಮುಳ್ಳಿನ ಗಿಡಗಳು:

ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ದಿನದಂದು ಕಳ್ಳಿ ಅಥವಾ ಯಾವುದೇ ಮುಳ್ಳಿನ ಗಿಡಗಳನ್ನು ಮನೆಗೆ ತರಬೇಡಿ. ಇವು ಜೀವನದಲ್ಲಿ ಅಡೆತಡೆಗಳನ್ನು ತರಬಹುದು ಮತ್ತು ಧನಾಗಮನಕ್ಕೆ ಅಡ್ಡಿಯಾಗಬಹುದು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​ ಬಗ್ಗೆ ಜಮೀರ್ ಶಾಕಿಂಗ್ ಹೇಳಿಕೆ

ದಾವಣಗೆರೆ, (ಏಪ್ರಿಲ್ 05): ಹಲವು ಅಂತೆ ಕಂತೆಗಳ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆಯೇ ಸಚಿವ ಜಮೀರ್ ಅಹ್ಮದ್‌ ಖಾನ್‌ (zameer ahmed khan) ಅವರು ದಾವಣಗೆರೆ ದಕ್ಷಿಣ ಉಪಚುನಾವಣೆ (Davanagere South By Election) ಪ್ರಚಾರಕ್ಕೆ ಬಂದಿದ್ದಾರೆ. ಎಸ್‌ಎಸ್‌ ಮಲ್ಲಿಕಾರ್ಜುನ್‌ (Minister SS Mallikarjun) ಪಕ್ಕದಲ್ಲಿಯೇ ಕುಳಿತು ಸುದ್ದಿಗೋಷ್ಠಿ ನಡೆಸಿ ತಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ ಎಂಬುವುದನ್ನು ಸಾರಿದರು. ಅಲ್ಲದೇ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನೂ ಕೂಡ ಸುಮ್ಮನೆ ಇರಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೂಡ ಕೊಟ್ಟಿದ್ದಾರೆ. ಯಾಕಂದ್ರೆ, ಈ ಹಿಂದೆ ಟಿಕೆಟ್ ವಿಚಾರವಾಗಿ ಸಚಿವ ಮಲ್ಲಿಕಾರ್ಜುನ ಅವರೂ ಸಹ ದಾವಣಗೆರೆಗೆ ಬಂದು ಏನೇನೋ ಮಾತನಾಡಿದ ಸರಿ ಇರಲ್ಲ ಎಂದು ಜಮೀರ್ ವಿರುದ್ಧ ಗುಡುಗಿದ್ದರು. ಇದೀಗ ಮಲ್ಲಿಕಾರ್ಜುನ ಅವರಿಗೆ ಮಾತಿಗೆ ಸ್ಪಷ್ಟನೆ ನೀಡುವಾಗ ಜಮೀರ್ ಸಹ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ​

ಟಿಕೆಟ್‌ ವಿಚಾರದ ಗಲಾಟೆ ವೇಳೆ ಎಸ್‌ಎಸ್‌ ಮಲ್ಲಿಕಾರ್ಜುನ್‌ “ಯಾರ್ರಿ ಜಮೀರ್‌ ದಾವಣಗೆರೆ ಬಗ್ಗೆ ಮಾತನಾಡಲು” ಎಂಬ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಜತೆಗೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೂ ಸಚಿವ ಜಮೀರ್‌ ಮುನಿಸಿಕೊಂಡಿದ್ದರು. ಅಲ್ಲದೇ ಮಲ್ಲಿಕಾರ್ಜುನ ಹೇಳಿಕೆಯಿಂದಾಗಿ ಜಮೀರ್ ಅವರ ಅಭಿಮಾನಿಗಳು ಹಾಗೂ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಜಮೀರ್​ ಅವರನ್ನ ಕಡೆಗಣಿಸಿದ್ದಕ್ಕೆ ಈ ಬಾರಿ ತಕ್ಕ ಪಾಠ ಕಲಿಸುವ ಬಗ್ಗೆಯೂ ಅಲ್ಪಸಂಖ್ಯಾತ ಮುಖಂಡರು ಹೇಳಿಕೆಗಳ ನೀಡುತ್ತಿದ್ದು, ಇದು ಮಲ್ಲಿಕಾರ್ಜುನ ಅವರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ದಾವಣಗೆರೆಯಲ್ಲಿ ಜಮೀರ್‌ ಅವರಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಸ್ವತಃ ಎಸ್‌ಎಸ್‌ ಮಲ್ಲಿಕಾರ್ಜುನ್‌ ಅವರು ಸಿಎಂ ಬಳಿ ಒತ್ತಡ ಹಾಕಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಇನ್ನು ಸಿಎಂ ಮಾತಿಗೆ ಬೆಲೆಕೊಟ್ಟು ದಾವಣಗೆರೆಗೆ ಬಂದಿರುವ ಜಮೀರ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಇದನ್ನೂ ನೋಡಿ: ಏಕವಚನದಲ್ಲಿ ಬೈದಿದ್ದ ಸಚಿವ ಎಸ್​​ಎಸ್​ ಮಲ್ಲಿಕಾರ್ಜುರನ್ನು ಕ್ಷಮಿಸಿ ಪ್ರಚಾರಕ್ಕೆ ಬಂದ ಜಮೀರ್

Source link

ಪಾಕಿಸ್ತಾನದ ಪಾಪಿಗಳು; ದಾವೂದ್ ಇಬ್ರಾಹಿಂ ವರ್ಸಸ್ ಲೆಯಾರಿ ಕಿಂಗ್ ರೆಹಮಾನ್ ಡಕಾಯಿಟ್

ದುರಂಧರ್ ಸರಣಿಯ ಸಿನಿಮಾಗಳು ಪಾಕಿಸ್ತಾನದ ಭೂಗತ ಲೋಕವನ್ನು ಭಾರತೀಯ ಜನಸಾಮಾನ್ಯರಿಗೆ ಸ್ಪಷ್ಟವಾಗಿ ಪರಿಚಯಿಸಿವೆ. ಮುಂಬೈ ಅಂಡರ್​ವರ್ಲ್ಡ್ ಸ್ಟೋರಿಗಳನ್ನು ನೆನಪಿಸುವಂತಹ ಕ್ರೈಮ್​ಗಳು ಕರಾಚಿಯಲ್ಲಿ ನಡೆದಿರುವುದನ್ನು ಈ ಸಿನಿಮಾಗಳಲ್ಲಿ ನೋಡಬಹುದು. ಪಾಕಿಸ್ತಾನದಲ್ಲಿ ಭೂಗತಲೋಕ, ಪೊಲೀಸ್, ರಾಜಕಾರಣಿಗಳು, ಭಾರತೀಯ ಗೂಢಚಾರಿಗಳ ಜಾಲ ಇವೆಲ್ಲವೂ ಹೇಗಿದೆ ಎನ್ನುವುದನ್ನು ದುರಂಧರ್​ಗಳಲ್ಲಿ ಕಾಣಬಹುದು. ಆದರೆ, ಅವು ಅಪ್ಪಟ ವಾಸ್ತವವಾ, ಕಾಲ್ಪನಿಕವಾ ಇದು ಯಾವತ್ತಿಗೂ ಹೊರಬರದ ಸಂಗತಿ. ಇದೇ ವೇಳೆ, ಅಕ್ಷಯ್ ಖನ್ನಾ ನಟಿಸಿದ್ದ ರೆಹಮಾನ್ ಡೆಕಾಯಿಟ್ ಪಾತ್ರ ರಿಯಲ್ ಲೈಫ್​ನಲ್ಲಿ ಇದ್ದಂಥದ್ದೇ. ಮುಂಬೈ ಭೂಗತಲೋಕ ಆಳಿ ನಂತರ ಕರಾಚಿಗೆ ಶಿಫ್ಟ್ ಆಗಿದ್ದ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ರಹಮಾನ್ ಡಕಾಯಿಟ್ (Rahman Dikait) ನಡುವಿನ ರಿಯಲ್ ಲೈಫ್ ಡೆಡ್ಲಿ ಫೈಟ್​ಗಳ ಕಥೆ ಹರಿದಾಡುತ್ತಿದೆ.

ಬೆಂಗಳೂರು, ಮುಂಬೈ, ಮಂಗಳೂರು ಇತ್ಯಾದಿ ನಗರಗಳಲ್ಲಿ ಭೂಗತ ಲೋಕದಲ್ಲಿ ವಿವಿಧ ಗ್ಯಾಂಗ್​ಗಳ ನಡುವೆ ಗ್ಯಾಂಗ್ ವಾರ್ ಸಾಮಾನ್ಯ. ಕರಾಚಿಯೂ ಹೊರತಲ್ಲ. ದಾವೂದ್ ಇಬ್ರಾಹಿಂ ಕರಾಚಿ ಭೂಗತಲೋಕದ ದೊರೆ. ಆದರೆ, ರೆಹಮಾನ್ ಡೆಕಾಯಿಟ್ ನೊಟೋರಿಯಸ್ ಲಯಾರಿ ಏರಿಯಾದ ಕಿಂಗ್. ಇವರಿಬ್ಬರ ನಡುವಿನ ಗ್ಯಾಂಗ್ ವಾರ್ ಭೀಕರವಾಗಿತ್ತಂತೆ.

ಇದನ್ನೂ ಓದಿ: ‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಲ್ಯಾಂಡ್ ಡೀಲ್​ನಿಂದ ಶುರುವಾಗಿತ್ತು ದಾವೂದ್-ಡೆಕಾಯಿಟ್ ಫೈಟ್

ಕರಾಚಿಯ ಪ್ರಮುಖ ಪ್ರದೇಶವೊಂದರಲ್ಲಿ 100ರಿಂದ 400 ಕೋಟಿ ರೂ ಮೌಲ್ಯವಿರುವ ಜಾಗವೊಂದರಲ್ಲಿ ದಾವೂದ್ ಒಂದು ಮಾಲ್ ಕಟ್ಟಲು ಯೋಜಿಸುತ್ತಾನೆ. ಕೇವಲ ಒಂದು ಕೋಟಿ ರೂಗೆ ನೀಡಬೇಕೆಂದು ಆ ಜಾಗದ ಮಾಲೀಕನಿಗೆ ಧಮಕಿ ಹಾಕಿಸುತ್ತಾನೆ. ಮುಂಬೈನಲ್ಲೂ ದಾವೂದ್ ಮಾಡುತ್ತಿದ್ದುದು ಇಂಥ ಕೆಲಸಗಳನ್ನೇ. ಆದರೆ, ಆ ಜಾಗವು ರೆಹಮಾನ್ ಡೆಕಾಯಿಟ್​ನ ಸಂಬಂಧಿಯದ್ದಾಗಿರುತ್ತದೆ. ರೆಹಮಾನ್ ಎಂಟ್ರಿಯಾಗಬೇಕಾಗುತ್ತದೆ. ಈ ಜಮೀನಿನ ತಂಟೆಗೆ ಬರಬೇಡವೆಂದು ಫೋನ್​ನಲ್ಲೇ ದಾವೂದ್​ಗೆ ಧಮಕಿ ಹಾಕುತ್ತಾನೆ. ರೆಹಮಾನ್​ನನ್ನು ದಾವೂದ್ ಹೀಯಾಳಿಸುತ್ತಾನೆ.

ದಾವೂದ್ ಸಹೋದರನಿಗೆ ಡೆಕಾಯಿಟ್​ನಿಂದ ನರಕ

ದಾವೂದ್​ಗೆ ಪಾಠ ಕಲಿಸಬೇಕೆಂದು ನಿರ್ಧರಿಸುವ ರೆಹಮಾನ್ ಡೆಕಾಯಿಟ್, ಆತನ ಸಹೋದರ ನೂರ್ ಉಲ್ ಹಕ್ ಅಲಿಯಾಸ್ ನೂರಾನನ್ನು ಕಿಡ್ನಾಪ್ ಮಾಡಿಸುತ್ತಾನೆ. ಫಾರ್ಮ್ಹೌಸ್​ವೊಂದರಲ್ಲಿ ನೂರಾನನ್ನು ಇರಿಸಿ ವಿಪರೀತ ಚಿತ್ರಹಿಂಸೆ ಕೊಡುತ್ತಾನೆ. ಸಹೋದರನ ಚೀರಾಟದ ಶಬ್ದವನ್ನು ದಾವೂಡ್​ಗೆ ನೇರವಾಗಿ ಕೇಳಿಸಿಸುತ್ತಾನೆ. ಇಷ್ಟು ದಿನ ಎಲ್ಲರಿಗೂ ಚಿತ್ರಹಿಂಸೆ ಕೊಡುತ್ತಿದ್ದ ದಾವೂದ್​ಗೆ ಈಗ ತನ್ನ ಆಟ ರುಚಿ ತಾನೇ ಮೆಲ್ಲುವಂತಾಗುತ್ತದೆ. ಯಾವ ಜಾಗವನ್ನು ಒಂದು ಕೋಟಿಗೆ ಖರೀದಿಸಬೇಕೆಂದಿದ್ದರೋ ಅದಕ್ಕೆ 580 ಕೋಟಿ ರೂ ಕೊಡಲು ಒಪ್ಪಬೇಕಾಗುತ್ತದೆ. ಇದು ದಾವೂದ್​ಗೆ ಆದ ಮೊದಲ ಅವಮಾನ.

ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಇಷ್ಟಾದ ಬಳಿಕ ನೂರಾನನ್ನು ಡೆಕಾಯಿಟ್ ಬಿಡುಗಡೆ ಮಾಡದೆ ಕೊಂದು ಹಾಕುತ್ತಾನೆ. ಕರಾಚಿಯಲ್ಲಿರುವ ದಾವೂದ್ ಮನೆ ಸಮೀಪ ನೂರಾನ ಶವ ಎಸೆಯಲಾಗುತ್ತದೆ. ಇದು ದಾವೂದ್​ಗೆ ಆದ ಅವಮಾನದ ಮೇಲೆ ಅವಮಾನ. ಇದಾಗಿದ್ದು, 2009ರ ಮಧ್ಯಭಾಗದಲ್ಲಿ. ಈ ಘಟನೆ ನಡೆದು ಒಂದು ತಿಂಗಳಲ್ಲಿ ರೆಹಮಾನ್ ಡೆಕಾಯಿಟ್​ನನ್ನು ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಎನ್​ಕೌಂಟರ್​ನಲ್ಲಿ ಸಾಯಿಸುತ್ತಾರೆ. ಈ ಘಟನೆ ದುರಂಧರ್ ಸಿನಿಮಾದಲ್ಲಿದೆ.

ಅನಧಿಕೃತ ದಾಖಲೆಗಳು, ಗೂಢಚಾರಿಗಳು, ಪೊಲೀಸ್ ಗುಪ್ತಚರರು ಮೊದಲಾದವರು ನೀಡಿರುವ ಮಾಹಿತಿಯನ್ನಾಧರಿಸಿ ಹರಿದಾಡುತ್ತಿರುವ ಕಥೆಗಳಾಗಿವೆ. ಅನೇಕ ಭೂಗತಲೋಕದ ಕಥೆಗಳು ಇರುವುದೇ ಹೀಗೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs LSG: ನಂಬಲಸಾಧ್ಯ..! ಪವರ್‌ಪ್ಲೇನಲ್ಲಿ ಅತಿ ಕಡಿಮೆ ಮೊತ್ತ ದಾಖಲಿಸಿದ ಸನ್‌ರೈಸರ್ಸ್

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಲಕ್ನೋ ಸೂಪರ್​ಜೈಂಟ್ಸ್ (SRH vs LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ ತವರಿನ ಲಾಭ ಪಡೆದು ಬೃಹತ್ ಮೊತ್ತವನ್ನು ಕಲೆಹಾಕಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಲಕ್ನೋ ಬೌಲರ್​ಗಳ ಮಾರಕ ದಾಳಿ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದಾಗ್ಯೂ ಲೋಕಲ್ ಬಾಯ್ ನಿತೀಶ್ ರೆಡ್ಡಿ ಹಾಗೂ ಕ್ಲಾಸೆನ್ ಅವರ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ತಂಡ 20 ಓವರ್​ಗಳಲ್ಲಿ 156 ರನ್ ಕಲೆಹಾಕಿತು.

ಪವರ್‌ಪ್ಲೇನಲ್ಲಿ ಕೇವಲ 22 ರನ್

ಸನ್‌ರೈಸರ್ಸ್ ತಂಡದ ಬ್ಯಾಟಿಂಗ್‌ ಎಷ್ಟು ಕಳಪೆಯಾಗಿತ್ತು ಎಂದರೆ, ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಈ ತಂಡ ಪವರ್‌ಪ್ಲೇನಲ್ಲಿ ಕಲೆಹಾಕಿದ್ದು, ಕೇವಲ 22 ರನ್. ಇದಕ್ಕಾಗಿ ಕಳೆದುಕೊಂಡಿದ್ದು ಪ್ರಮುಖ 3 ವಿಕೆಟ್. ಅಚ್ಚರಿಯ ಸಂಗತಿಯೆಂದರೆ ಇದೇ ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿ ಅತ್ಯದಿಕ ರನ್ ಕಲೆಹಾಕಿದ ದಾಖಲೆಯನ್ನು ಹೊಂದಿದೆ. ಆದರೆ ಈ ಬಾರಿ ತನ್ನ ತವರು ಪಂದ್ಯದಲ್ಲಿ ರನ್ ಕಲೆಹಾಕಲು ಹೆಣಗಾಡಬೇಕಾಯಿತು. ಈ ಮೂಲಕ ಸನ್‌ರೈಸರ್ಸ್ ತಂಡ ಈ ಆವೃತ್ತಿಯಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ಮೊತ್ತವನ್ನು ದಾಖಲಿಸಿದ ತಂಡವೆಂಬ ಬೇಡದ ದಾಖಲೆಯನ್ನು ಬರೆಯಿತು.

ಆರಂಭಿಕರ ಕಳಪೆ ಬ್ಯಾಟಿಂಗ್

ಅದರಲ್ಲೂ ಪವರ್‌ಪ್ಲೇನ ಕೊನೆಯ ಓವರ್​ನಲ್ಲಿ ಲಿವಿಂಗ್​ಸ್ಟೋನ್ ಸಿಕ್ಸರ್ ಬಾರಿಸದಿದ್ದರೆ, ತಂಡದ ಮೊತ್ತ ಮೊದಲ 6 ಓವರ್​ಗಳಲ್ಲಿ ಕೇವಲ 15 ರನ್​ಗಳಾಗಿರುತಿತ್ತು. ಇದರರ್ಥ ಸನ್‌ರೈಸರ್ಸ್ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಲಕ್ನೋ ಬೌಲರ್​ಗಳು ಯಶಸ್ವಿಯಾಗಿದ್ದರು ಎನ್ನಬಹುದು. ಅದರಲ್ಲೂ ಆರಂಭಿಕ ದಾಳಿ ನಡೆಸಿದ ಸನ್‌ರೈಸರ್ಸ್ ತಂಡದ ಮಾಜಿ ಬೌಲರ್ ಮೊಹಮ್ಮದ್ ಶಮಿ, ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಅವರನ್ನು ಬೇಗನೇ ಔಟ್ ಮಾಡಿದರು. ಅಭಿಷೇಕ್ ಶೂನ್ಯಕ್ಕೆ ಔಟಾದರೆ, ಹೆಡ್ 7 ರನ್​ಗಳಿಗೆ ಸುಸ್ತಾದರು.

SRH vs LSG IPL 2026 Live Score: ಲಕ್ನೋಗೆ 157 ರನ್ ಟಾರ್ಗೆಟ್

ನಿತೀಶ್- ಕ್ಲಾಸೆನ್ ಅರ್ಧಶತಕ

ಇವರಿಬ್ಬರ ವಿಕೆಟ್ ಪತನದ ಬಳಿಕ ನಾಯಕ ಕಿಶನ್ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತ್ತು. ಆದರೆ ಕಿಶನ್ ಕೂಡ 1 ರನ್​ಗೆ ಸುಸ್ತಾದರು. ಇದೇ ಮೊದಲ ಬಾರಿಗೆ ಸನ್‌ರೈಸರ್ಸ್ ತಂಡದ ಪರ ಕಣಕ್ಕಿಳಿದಿದ್ದ ಲಿಯಾಮ್ ಲಿವಿಂಗ್​ಸ್ಟೋನ್ ಕೂಡ ಕ್ರೀಸ್​ ಕಚ್ಚಿ ಆಡಲಿಲ್ಲ. ಕೇವಲ 14 ರನ್ ಬಾರಿಸಿ ಅವರು ಕೂಡ ಔಟಾದರು. ಈ 4 ವಿಕೆಟ್​ಗಳ ಆಘಾತದ ನಂತರ ಜೊತೆಯಾದ ನಿತೀಶ್ ಹಾಗೂ ಕ್ಲಾಸೆನ್ ಶತಕದ ಜೊತೆಯಾಟ ಕಟ್ಟಿದರು. ಇವರಿಬ್ಬರು ಕ್ರಮವಾಗಿ 56 ಹಾಗೂ 62 ರನ್​ಗಳ ಇನ್ನಿಂಗ್ಸ್ ಆಡಿದರು. ಈ ನಡುವೆ ಕ್ಲಾಸೆನ್​ಗೆ ಜೀವದಾನವೂ ಸಿಕ್ಕಿತು. ಇದರ ಲಾಭ ಪಡೆದ ಕ್ಲಾಸೆನ್ ಅರ್ಧಶತಕ ಇನ್ನಿಂಗ್ಸ್ ಆಡಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಪೊಲೀಸರ ಡ್ರಿಂಕ್ & ಡ್ರೈವ್‌ ತಪಾಸಣೆಯಲ್ಲಿ ಸಿಕ್ಕಿಬಿದ್ದ ಡ್ರೈವರ್ ಲಾರಿಯಲ್ಲೇ ನೇಣಿಗೆ ಶರಣು!

ಬೆಂಗಳೂರು, (ಏಪ್ರಿಲ್ 05): ಚಾಲಕನೋರ್ವ ಲಾರಿಯೊಳಗೆ (Lorry Driver) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಜೆ.ಪಿ.ನಗರದಲ್ಲಿ ನಡೆದಿದೆ. ಷಣ್ಮುಗ ಮೃತ ಲಾರಿ ಚಾಲಕ. ಪೊಲೀಸರು ಡ್ರಿಂಗ್ ಆ್ಯಂಡ್ ಡ್ರೈವ (Drink And Drive )ತಪಾಸಣೆ ವೇಳೆ ಷಣ್ಮುಗ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು, ಚಾಲಕ ಷಣ್ಮುಗಗೆ ದಂಡ ವಿಧಿಸಿ ಬಳಿಕ ಲಾರಿಯನ್ನು ಜೆ.ಪಿ.ನಗರ ಠಾಣೆಗೆ ಎಳೆದೊಯ್ದಿದ್ದಾರೆ. ಆದ್ರೆ, ಷಣ್ಮುಗ ಠಾಣೆಯ ಬಳಿ ನಿಲ್ಲಿಸಿದ್ದ ಲಾರಿಯಲ್ಲೇ ನೇಣು ಬಿಗಿದುಕೊಂಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಯಿಂದ ಮನನೊಂದು ಚಾಲಕ, ತಡರಾತ್ರಿ ಈ ದುರಂತ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ನಿನ್ನೆ (ಏಪ್ರಿಲ್ 04) ರಾತ್ರಿ ಜೆಪಿ ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ತಪಾಸಣೆ (Drink and Drive Checking) ನಡೆಸುತ್ತಿದ್ದರು. ಈ ವೇಳೆ ಲಾರಿ ಚಾಲಕ ಷಣ್ಮುಗ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ಪೊಲೀಸರಿಗೆ ಅನುಮಾನ ಬಂದಿದೆ. ಕೂಡಲೇ ಆತನನ್ನು ತಡೆದ ಪೊಲೀಸರು ಬ್ರೀತ್ ಅನಲೈಸರ್ ಮೂಲಕ ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಇದಾದ ನಂತರ ಪೊಲೀಸರು ನಿಯಮದಂತೆ ಷಣ್ಮುಗನಿಗೆ ಭಾರೀ ಮೊತ್ತದ ದಂಡ (Fine) ವಿಧಿಸಿದ್ದಾರೆ. ಅಲ್ಲದೆ, ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ವಾಹನ ಚಲಾಯಿಸಲು ಬಿಡದ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಜೆಪಿ ನಗರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದರು. ಆದ್ರೆ, ಚಾಲಕ ಷಣ್ಮುಗ ಅದೇ ಲಾರಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಟ್ರೆಕ್ಕಿಂಗ್​ಗೆ ತೆರಳಿದ್ದ ಕೇರಳದ ಯುವತಿ ಮಡಿಕೇರಿಯಲ್ಲಿ ನಾಪತ್ತೆ: ಮೂರು ದಿನಗಳಾದರೂ ಆಗಿಲ್ಲ ಪತ್ತೆ!

ಮದ್ಯಪಾನದ ಅಮಲು ಹಾಗೂ ಪೊಲೀಸರು ದಂಡ ಹಾಕಿದದ್ದರಿಂದ ಮನನೊಂದು ತಡರಾತ್ರಿ ಲಾರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇಂದು (ಏಪ್ರಿಲ್ 05) ಬೆಳಿಗ್ಗೆ ಲಾರಿಯೊಳಗೆ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ UDR ಕೇಸ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ಟಿಲೇರಿಯೇ ತಿಮ್ಮಪ್ಪನ ದರ್ಶನ ಮಾಡುವುದೇಕೆ ಜಾನ್ಹವಿ: ಅದ್ಭುತ ಕಾರಣ ಕೊಟ್ಟ ನಟಿ

ಜಾನ್ಹವಿ ಕಪೂರ್ (Janhvi Kapoor), ಬಾಲಿವುಡ್​​ನ ಬಲು ಜನಪ್ರಿಯ ಮತ್ತು ಬೇಡಿಕೆಯ ಯುವನಟಿ. ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಹ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಜಾನ್ಹವಿ ಕಪೂರ್, ಬಾಲಿವುಡ್​​ನ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಮಾಡರ್ನ್ ಯುವತಿಯಾಗಿ ಕಾಣಿಸಿಕೊಳ್ಳುವ ಜಾನ್ಹವಿ, ಅಪ್ಪಟ ದೈವ ಭಕ್ತೆ. ಅದರಲ್ಲೂ ತಿರುಪತಿ ತಿಮ್ಮಪ್ಪನ ಪರಮ ಭಕ್ತೆ. ವರ್ಷದಲ್ಲಿ ಹಲವು ಭಾರಿ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡಿದ ಪ್ರತಿಬಾರಿ ಅವರು ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿಯೇ ದರ್ಶನ ಪಡೆಯುತ್ತಾರೆ. ತಾವು ಹೀಗೆ ಮಾಡುವುದು ಏಕೆ ಎಂಬುದನ್ನು ಸಹ ಜಾನ್ಹವಿ ಕಪೂರ್ ವಿವರಿಸಿದ್ದಾರೆ. ಜಾನ್ಹವಿ ಕೊಟ್ಟಿರುವ ಉತ್ತರ ತಿಮ್ಮಪ್ಪನ ಭಕ್ತರ ಮಾತ್ರವಲ್ಲ ಎಲ್ಲರ ಹೃದಯ ಗೆಲ್ಲುವಂತಿದೆ.

ದೇಶದ ಹಲವಾರು ದೇವಾಲಯಗಳಲ್ಲಿ ವಿಐಪಿ ಸಂಸ್ಕೃತಿ ಇದೆ. ಸಾಮಾನ್ಯ ಭಕ್ತರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡಬೇಕು ಆದರೆ ಹಣ ಇದ್ದರು ಅಥವಾ ಪ್ರಭಾವಿಗಳು ಹಣ ನೀಡಿದರೆ ಅವರಿಗೆ ವಿಶೇಷ ದರ್ಶನ ಸಿಗುತ್ತದೆ. ತಿರುಪತಿಯಲ್ಲೂ ಈ ವಿಶೇಷ ದರ್ಶನ ಸೌಲಭ್ಯ ಇದೆ. ಅದರಲ್ಲೂ ವಿವಿಐಪಿಗಳು ಕೆಲ ಸಮಯವೂ ಕಾಯುವಂತಿಲ್ಲ ಅವರಿಗೆ ನೇರ ದರ್ಶನ ವ್ಯವಸ್ಥೆ ಇದೆ. ನಟಿ ಜಾನ್ಹವಿ ಹೇಳಿರುವಂತೆ ಅವರೂ ಸಹ ಅದೇ ವಿಐಪಿ ದರ್ಶನದ ಮೂಲಕವೇ ದರ್ಶನ ಮಾಡುತ್ತಾರೆ.

ಆದರೆ, ‘ಸಾವಿರಾರು ಮಂದಿ ಗಂಟ್ಟೆಗಟ್ಟಲೆ ದೇವರ ದರ್ಶನಕ್ಕಾಗಿ ಕಾದು ದರ್ಶನ ಪಡೆಯುತ್ತಾರೆ, ಆದರೆ ನಾನು ಸುಲಭವಾಗಿ ಹಣ ಕೊಟ್ಟು ವಿಶೇಷ ದರ್ಶನ ಪಡೆಯುತ್ತೇನೆ. ಆದರೆ ಇದು ಸರಿಯಲ್ಲ, ಹಾಗೆಂದು ನಾನು ಕೆಲವು ಕಾರಣಗಳಿಗೆ (ಸೆಲೆಬ್ರಿಟಿ ಆಗಿರುವುದರಿಂದ) ಸಾಮಾನ್ಯ ಜನರ ಜೊತೆಗೆ ಹೋಗಿ ದರ್ಶನ ಮಾಡುವಂತೆಯೂ ಇಲ್ಲ. ಹಾಗಾಗಿ ನನ್ನ ಶ್ರಮ ದಾಖಲಾಗಲಿ ಎಂಬ ಕಾರಣಕ್ಕೆ ನಾನು ಪ್ರತಿ ಬಾರಿ ಮೆಟ್ಟಿಲುಗಳನ್ನು ಹತ್ತಿ, ಕಷ್ಟಪಟ್ಟು, ಶ್ರಮಪಟ್ಟು ದರ್ಶನಕ್ಕೆ ಹೋಗುತ್ತೇನೆ’ ಎಂದಿದ್ದಾರೆ ಜಾನ್ಹವಿ.

ಇದನ್ನೂ ಓದಿ:ಹುಟ್ಟುಹಬ್ಬದಂದು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ನಟಿ ಜಾನ್ಹವಿ ಕಪೂರ್

ಕಾರಿನಲ್ಲಿ ಬೆಟ್ಟಕ್ಕೆ ಹೋಗಿ, ಅಲ್ಲಿ ಹಣ ಕೊಟ್ಟು ವಿಐಪಿ, ವಿವಿಐಪಿ ದರ್ಶನ ಮಾಡುವುದು ಜಾನ್ಹವಿಗೆ ಬಹಳ ಸುಲಭ. ಆದರೆ ತಾನು ವಿಐಪಿ ಆಗಿ ಅಲ್ಲ ಬದಲಿಗೆ ಭಕ್ತಳಾಗಿ ದರ್ಶನಕ್ಕೆ ಹೋಗಬೇಕು ಎಂಬ ಕಾರಣಕ್ಕೆ ಜಾನ್ಹವಿ ಕಪೂರ್ ಅವರು ತಿರುಪತಿ ಬೆಟ್ಟದ 3500 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನಕ್ಕೆ ಹೋಗುತ್ತಾರೆ.

ಜಾನ್ಹವಿ ಕಪೂರ್ ಬಹಳ ವರ್ಷಗಳಿಂದಲೂ ತಿರುಪತಿ ತಿಮ್ಮಪ್ಪನ ಭಕ್ತೆ. ಅವರ ತಾಯಿ ಶ್ರೀದೇವಿ ಸಹ ತಿಮ್ಮಪ್ಪನ ಭಕ್ತೆ ಆಗಿದ್ದರು. ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದಂತೆ, ಅವರಿಗೆ ತಿರುಪತಿಯಲ್ಲಿಯೇ ಮನೆ ಮಾಡಿಕೊಂಡು ತನ್ನ ಪತಿ, ಮಕ್ಕಳೊಟ್ಟಿಗೆ ನೆಲೆಸುವ ಆಸೆಯೂ ಇದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version