ಪಟಾಕಿ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ; 8 ಕಾರ್ಮಿಕರು ಸಾವು, ಹಲವರಿಗೆ ಗಂಭೀರ ಗಾಯ – Kannada News | Ahmedabad Firecracker Factory Blast Kills 8: Illegal Operation Exposed

ಅಹಮದಾಬಾದ್, ಜುಲೈ 18: ಗುಜರಾತ್‌ನ ಅಹಮದಾಬಾದ್ ನಗರದ ವಸ್ತ್ರಲ್ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ(Blast) ಸಂಭವಿಸಿದೆ. ಇಲ್ಲಿನ ರಾಮೋಲ್-ಗತ್ರಾಡ್ ರಸ್ತೆಯ ಮೆಹಮೂದ್‌ಪುರ ಬಳಿ ಇರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ ಎಂಟು ಜನ ಕಾರ್ಮಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆಗೆ ದೈತ್ಯ ಬೆಂಕಿ ಹೊತ್ತಿಕೊಂಡಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರಂತ ಸಂಭವಿಸಿದ ಕಾರ್ಖಾನೆಯ ಸಮೀಪದಲ್ಲೇ ಕ್ಷಿಪ್ರ ಕಾರ್ಯ ಪಡೆಯ (RAF) ಸೇನಾ ಶಿಬಿರವಿತ್ತು. ಶನಿವಾರ ಮಧ್ಯಾಹ್ನ ಭಾರಿ ಸದ್ದಿನೊಂದಿಗೆ ಸ್ಫೋಟ ಕೇಳಿಸುತ್ತಿದ್ದಂತೆ ಎಚ್ಚೆತ್ತ ಆರ್‌ಎಎಫ್ ಸಿಬ್ಬಂದಿ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವ ಮುನ್ನವೇ ಜೀವದ ಹಂಗು ತೊರೆದು ಸುಡುತ್ತಿದ್ದ ಕಾರ್ಖಾನೆಯೊಳಗೆ ನುಗ್ಗಿದ್ದಾರೆ. ಬೆಂಕಿಯ ಜ್ವಾಲೆಯ ನಡುವೆ ಸಿಲುಕಿದ್ದ ಹಲವಾರು ಗಾಯಗೊಂಡ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತಂದು ಆಸ್ಪತ್ರೆಗೆ ದಾಖಲಿಸುವ ಮೂಲಕ ದೊಡ್ಡ ಮಟ್ಟದ ಪ್ರಾಣಹಾನಿಯನ್ನು ತಪ್ಪಿಸಿದ್ದಾರೆ.

ನಂತರ ಸ್ಥಳಕ್ಕೆ ಧಾವಿಸಿದ 5 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳು ಭಾರಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಅಹಮದಾಬಾದ್ ಮೇಯರ್ ಹಿತೇಶ್ ಬರೋಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ಓದಿ:
ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅತ್ಯಂತ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ದುರಂತ ಸಂಭವಿಸಿದ ಈ ಪಟಾಕಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ನಡೆಸಲಾಗುತ್ತಿತ್ತು.

ಜಂಟಿ ಪೊಲೀಸ್ ಆಯುಕ್ತ (JCP) ಜೈಪಾಲ್ ಸಿಂಗ್ ರಾಥೋಡ್ ಅವರ ಪ್ರಕಾರ, ಈ ಮಾರಣಾಂತಿಕ ಘಟಕವನ್ನು ಮೆಹುಲ್ ದೋಡಿಯಾ ಎಂಬಾತ ನಡೆಸುತ್ತಿದ್ದ. ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈತನ ಪಟಾಕಿ ಕಾರ್ಖಾನೆಯ ಪರವಾನಗಿಯನ್ನು ಸರ್ಕಾರ ಈಗಾಗಲೇ ರದ್ದುಗೊಳಿಸಿತ್ತು. ಆದರೂ ಈತ ಕಾನೂನಿಗೆ ಕಣ್ಣು ಮುಚ್ಚಿ, ಅಮಾಯಕ ಕಾರ್ಮಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಾ ಕದ್ದುಮುಚ್ಚಿ ಕಾರ್ಖಾನೆ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಒಳಗೆ 8 ರಿಂದ 10 ಜನ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ವಿಡಿಯೋ

ಅಧಿಕಾರಿಗಳು ಸದ್ಯಕ್ಕೆ ಘಟನಾ ಸ್ಥಳದಿಂದ ಎಂಟು ಜನರ ಸುಟ್ಟ ಶವಗಳನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯಕ್ಕೆ ಸ್ಫೋಟಕ್ಕೆ ನಿಖರವಾದ ತಾಂತ್ರಿಕ ಕಾರಣ ತಿಳಿದುಬಂದಿಲ್ಲವಾದರೂ, ರಾಮೋಲ್ ಪೊಲೀಸರು ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅಕ್ರಮವಾಗಿ ಕಾರ್ಖಾನೆ ನಡೆಸಿ ಎಂಟು ಜನರ ಸಾವಿಗೆ ಕಾರಣನಾದ ಮಾಲೀಕ ಮೆಹುಲ್ ದೋಡಿಯಾ ವಿರುದ್ಧ ‘ಸ್ಫೋಟಕ ಕಾಯ್ದೆ’ ಮತ್ತು ದೇಶದ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಜಾಮೂನು ರಹಿತ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರತಿದಿನ ಒಂದು ಸಣ್ಣ ತುಂಡು ಶುಂಠಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು! – Kannada News | Daily Ginger Benefits: Boost Immunity and Improve Digestion Naturally

ಅಡುಗೆಮನೆಯಲ್ಲಿ ಬಹುತೇಕ ಪ್ರತಿದಿನ ಬಳಸುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಶುಂಠಿ ಕೂಡ ಒಂದು. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ನೈಸರ್ಗಿಕ ಔಷಧೀಯ ಗುಣಗಳನ್ನೂ ಹೊಂದಿದೆ. ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಶುಂಠಿಯನ್ನು ಜೀರ್ಣಕ್ರಿಯೆ, ಶೀತ, ಕೆಮ್ಮು, ಗಂಟಲು ನೋವು ಹಾಗೂ ಉರಿಯೂತದ ಸಮಸ್ಯೆಗಳಿಗೆ ಬಳಸಲಾಗುತ್ತಿದೆ. ಶುಂಠಿಯಲ್ಲಿ ಜಿಂಜರಾಲ್ (Gingerol) ಎಂಬ ಶಕ್ತಿಶಾಲಿ ಜೈವಿಕ ಸಂಯುಕ್ತವಿದ್ದು, ಇದು ಉರಿಯೂತ ನಿವಾರಕ (Anti-inflammatory), ಆಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ನಿಯಮಿತ ಪ್ರಮಾಣದಲ್ಲಿ ಶುಂಠಿಯನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.

ಜೀರ್ಣಕ್ರಿಯೆಗೆ ಒಳ್ಳೆಯದು

ಶುಂಠಿಯಲ್ಲಿರುವ ಜಿಂಜರಾಲ್ ಮತ್ತು ಶೋಗಾಲ್ (Shogaol) ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಇದರಿಂದ ಆಹಾರ ಬೇಗ ಜೀರ್ಣವಾಗಲು ನೆರವಾಗುತ್ತದೆ. ಹೊಟ್ಟೆ ಉಬ್ಬರ, ಗ್ಯಾಸ್, ಅಜೀರ್ಣ ಹಾಗೂ ಹೊಟ್ಟೆ ಭಾರವಾದ ಅನುಭವವನ್ನು ಕಡಿಮೆ ಮಾಡಲು ಶುಂಠಿ ಸಹಕಾರಿ.

ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ

ಮಳೆಗಾಲ ಮತ್ತು ಚಳಿಗಾಲದಲ್ಲಿ ವೈರಲ್ ಸೋಂಕುಗಳು ಹೆಚ್ಚಾಗುವ ಸಂದರ್ಭಗಳಲ್ಲಿ ಶುಂಠಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಇದು ಸಾಮಾನ್ಯ ಶೀತ, ಕೆಮ್ಮು ಮತ್ತು ಗಂಟಲು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಸಹ ಉಪಯುಕ್ತ.

ಕೀಲು ಹಾಗೂ ಸ್ನಾಯು ನೋವಿಗೆ ನೈಸರ್ಗಿಕ ಪರಿಹಾರ

ಉರಿಯೂತ ಕಡಿಮೆ ಮಾಡುವ ಗುಣದಿಂದಾಗಿ ಸಂಧಿವಾತ, ಕೀಲು ನೋವು ಹಾಗೂ ವ್ಯಾಯಾಮದ ನಂತರ ಉಂಟಾಗುವ ಸ್ನಾಯು ನೋವಿನ ತೀವ್ರತೆಯನ್ನು ಕಡಿಮೆ ಮಾಡಲು ಶುಂಠಿ ಸಹಕಾರಿಯಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ಶುಂಠಿ ಸೇವಿಸುವುದರಿಂದ ದೀರ್ಘಕಾಲದ ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಹೃದಯದ ಆರೋಗ್ಯಕ್ಕೂ ಒಳ್ಳೆಯದು

ಶುಂಠಿ ರಕ್ತಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ನಿಯಂತ್ರಿಸಲು ಹಾಗೂ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ನೆರವಾಗಬಹುದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಗ್ಗಿಸಲು ಸಹಾಯಕವಾಗಬಹುದು.

ವಾಕರಿಕೆ ಮತ್ತು ಪ್ರಯಾಣದ ಅಸ್ವಸ್ಥತೆಯನ್ನು ಕಡಿಮೆ ಮಾಡಬಹುದು

ಪ್ರಯಾಣದ ವೇಳೆ ವಾಕರಿಕೆ, ಗರ್ಭಾವಸ್ಥೆಯ ಆರಂಭಿಕ ಹಂತದ ಮಾರ್ನಿಂಗ್ ಸಿಕ್ನೆಸ್ ಅಥವಾ ಶಸ್ತ್ರಚಿಕಿತ್ಸೆಯ ನಂತರದ ವಾಕರಿಕೆಯನ್ನು ಕಡಿಮೆ ಮಾಡಲು ಶುಂಠಿ ಉಪಯುಕ್ತ ಎಂದು ಹಲವು ವೈದ್ಯಕೀಯ ಅಧ್ಯಯನಗಳು ಸೂಚಿಸಿವೆ. ಆದರೆ ಗರ್ಭಿಣಿಯರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು.

ಇದನ್ನೂ ಓದಿ: ಪದೇ ಪದೇ ಗ್ಯಾಸ್‌, ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಪುದೀನಾ ಎಲೆಗಳನ್ನು ಈ ರೀತಿ ಸೇವಿಸಿ

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಾಯಕವೇ?

ಇತ್ತೀಚಿನ ಕೆಲವು ಸಂಶೋಧನೆಗಳು ಶುಂಠಿಯು ಇನ್ಸುಲಿನ್ ಸಂವೇದನಾಶೀಲತೆಯನ್ನು (Insulin Sensitivity) ಸುಧಾರಿಸಲು ನೆರವಾಗಬಹುದೆಂದು ಸೂಚಿಸಿವೆ. ಆದರೆ ಮಧುಮೇಹದ ಔಷಧಿಗೆ ಪರ್ಯಾಯವಾಗಿ ಇದನ್ನು ಬಳಸಬಾರದು. ವೈದ್ಯರು ಸೂಚಿಸಿದ ಚಿಕಿತ್ಸೆಯ ಜೊತೆಗೆ ಸಮತೋಲನ ಆಹಾರ ಮತ್ತು ವ್ಯಾಯಾಮದ ಭಾಗವಾಗಿ ಮಾತ್ರ ಬಳಸುವುದು ಸೂಕ್ತ.

ಶುಂಠಿಯನ್ನು ಹೇಗೆ ಸೇವಿಸಬಹುದು?

  • ಬೆಳಿಗ್ಗೆ ಬೆಚ್ಚಗಿನ ನೀರಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯಬಹುದು.
  • ಶುಂಠಿ ಚಹಾ ಅಥವಾ ಕಷಾಯ ರೂಪದಲ್ಲಿ ಸೇವಿಸಬಹುದು.
  • ತರಕಾರಿ, ಸಾರು, ದಾಲ್ ಹಾಗೂ ಚಟ್ನಿಗಳಲ್ಲಿ ತಾಜಾ ಶುಂಠಿ ಬಳಸಬಹುದು.
  • ನಿಂಬೆ ಮತ್ತು ಸ್ವಲ್ಪ ಜೇನುತುಪ್ಪದೊಂದಿಗೆ ಶುಂಠಿ ರಸವನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು.

ಶುಂಠಿ ಸೇವಿಸುವಾಗ ಈ ಮುನ್ನೆಚ್ಚರಿಕೆ ಅಗತ್ಯ

  • ಅತಿಯಾಗಿ ಸೇವಿಸಿದರೆ ಹೊಟ್ಟೆ ಉರಿ, ಆಸಿಡ್ ರಿಫ್ಲಕ್ಸ್ ಅಥವಾ ಎದೆಯುರಿ ಉಂಟಾಗಬಹುದು.
  • ರಕ್ತ ತೆಳುವಾಗಿಸುವ (Blood Thinners) ಔಷಧಿ ಸೇವಿಸುವವರು ವೈದ್ಯರ ಸಲಹೆ ಪಡೆಯಬೇಕು.
  • ಪಿತ್ತಕೋಶದ ಕಲ್ಲು ಅಥವಾ ಗಂಭೀರ ಅಲ್ಸರ್ ಇರುವವರು ವೈದ್ಯರ ಮಾರ್ಗದರ್ಶನದಲ್ಲಿ ಮಾತ್ರ ಬಳಸಬೇಕು.
  • ದಿನಕ್ಕೆ ಸುಮಾರು 2–4 ಗ್ರಾಂ ಶುಂಠಿ ಬಹುತೇಕ ಆರೋಗ್ಯವಂತ ವಯಸ್ಕರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಗಮನಿಸಿ: ಈ ಲೇಖನ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಶುಂಠಿಯನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chennamma Deve Gowda Death: ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ – Kannada News | HD Deve Gowda’s Wife Chennamma Passes Away in Manipal Hospital Bengaluru

ಬೆಂಗಳೂರು, ಜುಲೈ 17: ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ (HD Devegowda) ಪತ್ನಿ ಚನ್ನಮ್ಮ (85) ನಿಧನ ಹೊಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಜುಲೈ 15ರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 18) ಕೊನೆಯುಸಿರೆಳೆದಿದ್ದಾರೆ.

ಕಳೆದ 2-3 ವರ್ಷಗಳಿಂದಲೂ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಈ ನಡುವೆ ಬುಧವಾರ ಚನ್ನಮ್ಮನವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯ ಡಾ.ಸತ್ಯನಾರಾಯಣ ಚನ್ನಮ್ಮನವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಂತಿಮವಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.

ದೇವೇಗೌಡರ ಬೆನ್ನೆಲುಬಾಗಿದ್ದ ಚನ್ನಮ್ಮ

ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚನ್ನಮ್ಮ ಅವರು 1954 ಮೇ 25ರಂದು ಹೆಚ್​​.ಡಿ. ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಹೆಚ್​​.ಡಿ. ರೇವಣ್ಣ, ಹೆಚ್​​.ಡಿ. ಬಾಲಕೃಷ್ಣ, ಹೆಚ್​​.ಡಿ. ರಮೇಶ್​​ ಗೌಡ, ಹೆಚ್​​.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ಒಟ್ಟು ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಚನ್ನಮ್ಮ ದೇವೇಗೌಡರ ರಾಜಕೀಯ ಜೀವನದ ಬೆನ್ನೆಲುಬಿನಂತಿದ್ದು, ಸದಾ ಕಾಲ ರಾಜಕೀಯದಲ್ಲಿ ಬ್ಯುಸಿಯಾಗಿದ್ದ ದೇವೇಗೌಡರಿಗೆ ಕುಟುಂಬದ ಹೊರೆ ಬೀಳದಂತೆ ಸಂಸಾರ ನಿಭಾಯಿಸುವ ಮೂಲಕ ಗಟ್ಟಿಗಿತ್ತಿ ಎನಿಸಿಕೊಂಡಿದ್ದರು. ಆರು ಮಕ್ಕಳನ್ನ ಸಲಹಿದ್ದಲ್ಲದೆ, ಅವರ ಶಿಕ್ಷಣದ ಜವಾಬ್ದಾರಿ ಹೊತ್ತು ಆದರ್ಶ ಗೃಹಿಣಿಯಾಗಿದ್ದರು.

ಇದನ್ನೂ ಓದಿ:  ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಚನ್ನಮ್ಮ ಅವರ ಮೇಲೆ ನಡೆದಿತ್ತು ಆ್ಯಸಿಡ್​​ ದಾಳಿ!

2001ರ ಫೆಬ್ರವರಿ ತಿಂಗಳಲ್ಲಿ ಚನ್ನಮ್ಮ ಅವರು ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ದೇವೇಗೌಡ ಮತ್ತು ಕಾಳಮ್ಮ ದಂಪತಿಯ ಪುತ್ರಿಯ ಹಿರಿಯ ಮಗಳಾಗಿದ್ದ ಚನ್ನಮ್ಮ, ಅಂದಿನ ಕಾಲದಲ್ಲೇ SSLC ವರೆಗೆ ಶಿಕ್ಷಣ ಪೂರೈಸಿದ್ದರು. ಮನೆಯ ಹಿರಿಯ ಮಗಳಾಗಿ ನಾಲ್ವರು ತಮ್ಮಂದಿರು ಮತ್ತು ಮೂವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ: ಇದ್ದ ಏಕೈಕ ಮಗನನ್ನ ಕಳೆದುಕೊಂಡ ಕುಟುಂಬದ ಕಣ್ಣೀರ ಕಥೆ – Kannada News | Sanjan Organ Donation: Family’s Selfless Decision Gives New Life to Others

ಅಂಗಾಂಗ ದಾನ ಮಾಡಿದ ಪೋಷಕರುImage Credit source: tv9 kannada

ಆನೇಕಲ್, ಜುಲೈ 18: ಮಗನನ್ನು ಕಳೆದುಕೊಂಡ ನೋವು ಒಂದೆಡೆ, ಮಗನ ಅಂಗಾಂಗ ದಾನದ (Organ Donation) ಮೂಲಕ ಹಲವು ಜೀವಗಳಿಗೆ ಹೊಸ ಬದುಕು ನೀಡಿದ ಹೆಮ್ಮೆ ಮತ್ತೊಂದೆಡೆ. ರ‍್ಯಾಂಕ್​ ವಿದ್ಯಾರ್ಥಿಯಾಗಿದ್ದ 19 ವರ್ಷದ  ಸಂಜನ್​,​ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಬಳಿಕ, ಕುಟುಂಬ ತೆಗೆದುಕೊಂಡ ಮಾನವೀಯ ನಿರ್ಧಾರ ಇದೀಗ ಹಲವರಿಗೆ ಜೀವ ದಾನವಾಗಿದೆ. ಆನೇಕಲ್‌ನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ಈ  ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ.

ಬೆಂಗಳೂರಿನ ರಾಜಾಜಿನಗರದ ನಿವಾಸಿ 19 ವರ್ಷದ ಸಂಜನ್, ರ‍್ಯಾಂಕ್​ ವಿದ್ಯಾರ್ಥಿಯಾಗಿದ್ದ. ದೊಡ್ಡ ಉದ್ಯಮಿಯಾಗುವ ಕನಸು ಹೊತ್ತಿದ್ದ. ತಂದೆ ನಡೆಸುತ್ತಿದ್ದ ಆಟೋಮೊಬೈಲ್ ಸ್ಪೇರ್ ತಯಾರಿಕಾ ಸಂಸ್ಥೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಕನಸು ಕಂಡಿದ್ದ. ಆದರೆ ವಿಧಿಯಾಟ ಬೇರೆ ಇತ್ತು.

ನಡೆದಿದ್ದೇನು?

ಜುಲೈ 8ರಂದು ಕುಟುಂಬದೊಂದಿಗೆ ತಿರುಚ್ಚಂದೂರು ಮುರುಗನ್ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ರಾಯಕೋಟೆ ಸಮೀಪ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಸಂಜನ್ ಹಾಗೂ ಅವರ ಅಜ್ಜಿ ಸುಬ್ಬಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದರು. ಸಂಜನ್ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ತಮಿಳುನಾಡು ಪೊಲೀಸರು ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ಸುಮಾರು ಅರ್ಧ ಗಂಟೆ ವಿಳಂಬ ಮಾಡಿದ್ದರು. ಬಳಿಕ ಮೀರಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅಲ್ಲಿಂದ ಹೊಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ನಂತರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಸಂಜನ್​​ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದರು.

ಮಗನ ಅಂಗಾಂಗ ದಾನ ಮಾಡಿದ ಹೆತ್ತವರು

ಏಕೈಕ ಮಗನನ್ನು ಕಳೆದುಕೊಳ್ಳುವ ನೋವಿನಲ್ಲಿದ್ದ ತಂದೆ ಲೋಕೇಶ್ ಹಾಗೂ ತಾಯಿ ಶ್ವೇತಾ, ದುಃಖದ ನಡುವೆಯೂ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಗನ ಅಂಗಾಂಗ ದಾನಕ್ಕೆ ನಿರ್ಧರಿಸಿದರು. ಸಂಜನ್  ಕಣ್ಣು, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ದಾನ ಮಾಡಲಾಗಿದೆ. ಈ ಅಂಗಾಂಗ ದಾನದ ಮೂಲಕ ಏಳರಿಂದ ಎಂಟು ಜನರಿಗೆ ಹೊಸ ಬದುಕಿನ ಆಶಾಕಿರಣ ಮೂಡಿದೆ. ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊತ್ತಿದ್ದ ಸಂಜನ್ ಇಂದು ಇಲ್ಲದಿದ್ದರೂ, ಅವರ ಅಂಗಾಂಗಗಳು ಹಲವು ಜೀವಗಳಲ್ಲಿ ಹೊಸ ಉಸಿರಾಗಿದೆ. ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬದ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದೆ.

ಇದನ್ನೂ ಓದಿ: ತುಂಗಾ ತುಂಬಿ ಹರಿಯುತ್ತಿದ್ದರೂ ಶಿವಮೊಗ್ಗದಲ್ಲಿ ನೀರಿಗೆ ಹಾಹಾಕಾರ: ನೀರಿಗಾಗಿ ಜೀವದ ಹಂಗು ತೊರೆದ ಜನರು

ಒಂದೆಡೆ ಮಗನನ್ನು ಕಳೆದುಕೊಂಡ ದುಃಖ. ಮತ್ತೊಂದೆಡೆ ಮಗನ ಅಂಗಾಂಗ ದಾನದ ಮೂಲಕ ಹಲವರಿಗೆ ಹೊಸ ಬದುಕು ನೀಡಿದ ತೃಪ್ತಿ. ಸಂಜನ್ ಅವರ ಕುಟುಂಬದ ಈ ಮಾನವೀಯ ನಿರ್ಧಾರ ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಮಾಜಕ್ಕೆ ಸಾರಿದೆ. ಕಣ್ಣೀರಿನ ನಡುವೆಯೂ ಬದುಕಿನ ಬೆಳಕು ಹಂಚಿದ ಸಂಜನ್ ಕುಟುಂಬದ ಈ ನಿರ್ಧಾರ ನಿಜಕ್ಕೂ ಎಲ್ಲರಿಗೂ ಮಾದರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karnataka Weather Forecast: ಕರ್ನಾಟಕದಲ್ಲಿ ಮಳೆ ಚುರುಕು, 7 ದಿನ ಅಬ್ಬರಿಸಲಿರುವ ವರುಣ – Kannada News | Karnataka Weather Turns Monsoon Like: IMD Issues 7 Day Heavy Rain Forecast

ಪ್ರಾತಿನಿಧಿಕ ಚಿತ್ರImage Credit source: India Today

ಬೆಂಗಳೂರು, (ಜುಲೈ 18): ಕರ್ನಾಟಕದಲ್ಲಿ (Karnataka) ಕಳೆದ ಕೆಲವು ದಿನಗಳಿಂದ ಕ್ಷೀಣಿಸಿದ್ದ ಮಳೆ (Rain) ಮತ್ತೆ ಚುರುಕುಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜುಲೈ 18 ಮತ್ತು 19 ರಂದು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜುಲೈ 18 ರಂದು ಅಲ್ಲಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಪ್ರಮುಖ ಪ್ರಾದೇಶಿಕ ಹವಾಮಾನ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ 24 ರಿಂದ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಪ್ರದೇಶಗಳಲ್ಲಿ ನಿರಂತರವಾಗಿ ಗಾಳಿಯ ವೇಗ (30-40 ಕಿ.ಮೀ.) ಹೆಚ್ಚಿರಲಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ತುಂಗಾ ತುಂಬಿ ಹರಿಯುತ್ತಿದ್ದರೂ ಶಿವಮೊಗ್ಗದಲ್ಲಿ ನೀರಿಗೆ ಹಾಹಾಕಾರ: ನೀರಿಗಾಗಿ ಜೀವದ ಹಂಗು ತೊರೆದ ಜನರು

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ (40-50 ಕಿ.ಮೀ.) ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿಯ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ (40-50 ಕಿ.ಮೀ.) ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 27°C ರಿಂದ 29°C ಹಾಗೂ ಕನಿಷ್ಠ ತಾಪಮಾನ 21°C ಆಸುಪಾಸಿನಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ; ಕೊಹ್ಲಿ ಭಾವುಕ ಪೋಸ್ಟ್ – Kannada News | Sir Garfield Sobers Demise: Cricket World Mourns Legend, Kohli’s Viral Tribute

ವೆಸ್ಟ್ ಇಂಡೀಸ್ ಕ್ರಿಕೆಟ್​ನ ಲೆಜೆಂಡರಿ ಆಲ್‌ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ (Sir Garfield Sobers) ಜುಲೈ 17 ರಂದು ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದ ಈ ವಿಂಡೀಸ್ ದಿಗ್ಗಜನ ಅಗಲಿಕೆಗೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿದೆ. ಅದರಲ್ಲೂ ಟೀಂ ಇಂಡಿಯಾದ ಭಾಗಶಃ ಕ್ರಿಕೆಟಿಗರು ಸೋಬರ್ಸ್ ಅವರ ನಿಧನಕ್ಕೆ ಭಾವುಕ ಪೋಸ್ಟ್​ಗಳ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಇತರೆ ಕ್ರಿಕೆಟಿಗರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೊಹ್ಲಿ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಸೋಬರ್ಸ್ ಅಗಲಿಕೆಗೆ ಕೊಹ್ಲಿ ಭಾವುಕ ಪೋಸ್ಟ್

‘ಕ್ರಿಕೆಟ್ ತನ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಸರ್ ಗಾರ್ಫೀಲ್ಡ್ ಸೋಬರ್ಸ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ’ ಎಂಬ ಪೋಸ್ಟ್ ಅನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಗ್ಯಾರಿ ಸೋಬರ್ಸ್ ನಡುವೆ ವಿಶೇಷ ಬಾಂಧವ್ಯವಿತ್ತು. 2023 ರಲ್ಲಿ, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಗ್ಯಾರಿ ಸೋಬರ್ಸ್ ಅವರ ಮಡದಿಯೊಂದಿಗೆ ಮೈದಾನಕ್ಕೆ ಆಗಮಸಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದರು. ಅದರ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಭೂಮಿಯಲ್ಲಿ ನಡೆದಾಡಿದ ಶ್ರೇಷ್ಠ ಕ್ರಿಕೆಟಿಗ

ಕೊಹ್ಲಿ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಲೆಜೆಂಡರಿ ಆಟಗಾರರು ಸಹ ಸೋಬರ್ಸ್ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಃಖಕರ ದಿನ ಎಂದಿರುವ ಗವಾಸ್ಕರ್, ಸೋಬರ್ಸ್ ಭೂಮಿಯಲ್ಲಿ ನಡೆದಾಡಿದ ಶ್ರೇಷ್ಠ ಕ್ರಿಕೆಟಿಗ ಎಂದಿದ್ದಾರೆ. 2003 ರ ವಿಶ್ವಕಪ್‌ನಲ್ಲಿ ಸರ್ ಗ್ಯಾರಿ ಅವರಿಗೆ ಟೂರ್ನಮೆಂಟ್‌ನ ಆಟಗಾರ ಟ್ರೋಫಿಯನ್ನು ನೀಡಿದ ನೆನಪುಗಳನ್ನು ಸಚಿನ್ ತೆಂಡೂಲ್ಕರ್ ನೆನಪಿಸಿಕೊಂಡಿದ್ದು, ‘ಸರ್ ಗಾರ್ಫೀಲ್ಡ್ ಸೋಬರ್ಸ್ ಅವರ ನಿಧನದ ಸುದ್ದಿಯನ್ನು ಒಪ್ಪಿಕೊಳ್ಳುವುದು ನಂಬಲಾಗದಷ್ಟು ಕಷ್ಟಕರವಾಗಿದೆ. ವರ್ಷಗಳಲ್ಲಿ ಅವರೊಂದಿಗೆ ಕಳೆದ ಹಲವು ಕ್ಷಣಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಸೋಬರ್ಸ್ ನಿಜವಾಗಿಯೂ ಒಬ್ಬನೇ ಒಬ್ಬ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸೋಬರ್ಸ್ ಅವರ ವೃತ್ತಿಜೀವನ

ಸರ್ ಸೋಬರ್ಸ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನಾಡಿರುವ ಸೋಬರ್ಸ್ 57.78 ರ ಸರಾಸರಿಯಲ್ಲಿ 8032 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕಗಳು ಮತ್ತು 30 ಅರ್ಧಶತಕಗಳು ಸೇರಿವೆ. ಹಾಗೆಯೇ 109 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು 93 ಟೆಸ್ಟ್‌ಗಳಲ್ಲಿ 34 ಸರಾಸರಿಯಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಒಟ್ಟಾರೆಯಾಗಿ, ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಸೋಬರ್ಸ್ 383 ಪಂದ್ಯಗಳನ್ನು ಆಡಿದ್ದು, 86 ಶತಕಗಳು ಸೇರಿದಂತೆ 54.87 ಸರಾಸರಿಯಲ್ಲಿ 28314 ರನ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ 36 ಬಾರಿ ಐದು ವಿಕೆಟ್‌ಗಳು ಸೇರಿದಂತೆ 1043 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದರಿನಾಥದಲ್ಲೂ ದೇಣಿಗೆ ಹಗರಣ, ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಬಯಲು – Kannada News | Badrinath Temple Donation Scam: SIT Arrests Senior Official After CCTV Exposes Theft

ಬದರಿನಾಥ, ಜುಲೈ 18: ದೇಶದ ಅತ್ಯಂತ ಪವಿತ್ರ ಚಾರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾದ ಬದರಿನಾಥದಲ್ಲೂ ಭಕ್ತರು ದೇವರಿಗೆ ಅರ್ಪಿಸಿದ ಕಾಣಿಕೆ ಹಣವನ್ನು ದೋಚುತ್ತಿದ್ದ ಬೃಹತ್ ಜಾಲವನ್ನು ವಿಶೇಷ ತನಿಖಾ ತಂಡ (SIT) ಭೇದಿಸಿದೆ. ಭಕ್ತರು ತಟ್ಟೆಯಲ್ಲಿ ನೀಡುತ್ತಿದ್ದ ಕಾಣಿಕೆ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಈಗ ‘ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ’ಯ (BKTC) ಹಿರಿಯ ಕಾಯಂ ಅಧಿಕಾರಿಯನ್ನು ಬಂಧಿಸಿದ್ದಾರೆ. ಈ ಹಗರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ದೇವಾಲಯದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ದಿನಗಟ್ಟಲೆ ಸೂಕ್ಷ್ಮವಾಗಿ ಪರಿಶೀಲಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಆರೋಪಿಗಳ ಆಘಾತಕಾರಿ ಕೈಚಳಕ ಪತ್ತೆಯಾಗಿದೆ.

ಅಧಿಕಾರಿಯದೇ ಸ್ಕೆಚ್: ದೇವಾಲಯದ ಕಾಣಿಕೆ ತಟ್ಟೆಯ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಹಿರಿಯ ಅಧಿಕಾರಿ ರಾಜೇಂದ್ರ ಚೌಹಾಣ್ ಎಂಬಾತನೇ ಈ ಕಳ್ಳತನದ ಮಾಸ್ಟರ್ ಮೈಂಡ್. ಈತ ಭಕ್ತರು ನೀಡಿದ ನಗದು ಹಣ ಮತ್ತು ಕಾಣಿಕೆಗಳನ್ನು ದೋಚಲು ಮತ್ತೊಬ್ಬ ಆರೋಪಿ ಪ್ರಮೋದ್ ನೌಟಿಯಾಲ್ ಎಂಬಾತನೊಂದಿಗೆ ಕೈಜೋಡಿಸಿ ಸಂಚು ರೂಪಿಸಿದ್ದ.

ಕೇಸರಿಯನ್ನೂ ಬಿಡದ ಕಳ್ಳರು: ಭಕ್ತರು ದೇವರಿಗೆ ಸಮರ್ಪಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳಷ್ಟೇ ಅಲ್ಲದೆ, ಅತ್ಯಂತ ದುಬಾರಿ ವಸ್ತುವಾದ ಪವಿತ್ರ ‘ಕೇಸರಿ’ಯನ್ನು ಕೂಡ ಈ ಭ್ರಷ್ಟ ಅಧಿಕಾರಿಗಳು ಕಣ್ತಪ್ಪಿಸಿ ಜೇಬಿಗೆ ಇಳಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸಾಬೀತಾಗಿವೆ.

ದೇವಾಲಯದ ಮಂಡಳಿಯು ನೀಡಿದ ಅಧಿಕೃತ ದೂರಿನ ಮೇರೆಗೆ ಬದರಿನಾಥ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಜುಲೈ 12 ರಂದು ಮೊದಲ ಆರೋಪಿ ಪ್ರಮೋದ್ ನೌಟಿಯಾಲ್‌ನನ್ನು ಕರಾರುವಕ್ಕಾಗಿ ಬಂಧಿಸಿ ಜೈಲಿಗಟ್ಟಿದ್ದರು. ತದನಂತರ ನಡೆದ ಆಳವಾದ ವಿಚಾರಣೆ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯದ ಆಧಾರದ ಮೇಲೆ, ಈಗ ಮುಖ್ಯ ಸೂತ್ರಧಾರ ಹಾಗೂ ದೇವಾಲಯ ಸಮಿತಿಯ ಖಾಯಂ ನೌಕರನಾಗಿದ್ದ ರಾಜೇಂದ್ರ ಚೌಹಾಣ್‌ನನ್ನು ಎಸ್‌ಐಟಿ ಬಿಗಿ ಭದ್ರತೆಯಲ್ಲಿ ವಶಕ್ಕೆ ಪಡೆದಿದೆ.

ಮತ್ತಷ್ಟು ಓದಿ: ಅಯೋಧ್ಯೆ ಹಗರಣ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ

ಕಠಿಣ ಸಿಸಿಟಿವಿ ಕಣ್ಗಾವಲು ಮತ್ತು ಭಕ್ತರ ಆಕ್ರೋಶ
ಈ ಪವಿತ್ರ ಧಾಮದ ಹಗರಣವು ಇಡೀ ದೇಶದಾದ್ಯಂತ ಇರುವ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಲ್ಲಿ ಭಕ್ತರು ನೀಡಿದ ಒಟ್ಟು ದೇಣಿಗೆ, ಸಂಗ್ರಹವಾದ ಚಿನ್ನ ಮತ್ತು ಇತರ ಕಾಣಿಕೆಗಳ ಸಂಪೂರ್ಣ ಆಡಿಟಿಂಗ್ ನಡೆಸಲು ಉತ್ತರಾಖಂಡ್ ಸರ್ಕಾರ ಮುಂದಾಗಿದೆ. ಈ ಕಳ್ಳತನದ ಜಾಲದಲ್ಲಿ ಇನ್ನೂ ಹಲವು ದೊಡ್ಡ ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದ್ದು, ಎಸ್‌ಐಟಿ ತನಿಖೆಯನ್ನು ವಿಸ್ತರಿಸಿದೆ.

ಹೊಸ ನಿಯಮಗಳ ಜಾರಿ: ಈ ಘಟನೆಯ ಬೆನ್ನಲ್ಲೇ, ದೇವಾಲಯದ ಹಣ ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಕಿಸೆಗಳಿಲ್ಲದ ವಿಶೇಷ ಉಡುಪನ್ನು ಕಡ್ಡಾಯಗೊಳಿಸಲು ಮತ್ತು ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡುವ ಮೂಲಕ ಪಾರದರ್ಶಕತೆ ತರಲು ಭಕ್ತರು ಹಾಗೂ ಧಾರ್ಮಿಕ ಮುಖಂಡರು ತೀವ್ರ ಒತ್ತಾಯ ಹೇರಿದ್ದಾರೆ. ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಹಗರಣ ನಡೆದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೆಜೆಸ್ಟಿಕ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆ; ವಾಹನ ಸವಾರರು, ಪಾದಚಾರಿಗಳು ಹೈರಾಣು – Kannada News | Bengaluru Weekend Rain: Sudden Downpour Paralyses City, Causes Major Traffic Snarls

ಬೆಂಗಳೂರು, ಜು.18: ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್ ಮೂಡ್‌ನಲ್ಲಿದ್ದ ಜನರಿಗೆ ವರುಣದೇವ ತಂಪಾದ ಶಾಕ್ ನೀಡಿದ್ದಾನೆ. ಇಂದು (ಜುಲೈ 18) ಮಧ್ಯಾಹ್ನ ಸುಮಾರು 3:30ರ ನಂತರ ಬೆಂಗಳೂರು ನಗರದ ಕೇಂದ್ರ ಭಾಗ ಹಾಗೂ ಸುತ್ತಮುತ್ತಲಿನ ಹಲವು ಪ್ರಮುಖ ಬಡಾವಣೆಗಳಲ್ಲಿ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಆರಂಭವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.

ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ವಿಧಾನಸೌಧ ಸುತ್ತಮುತ್ತ, ವಸಂತನಗರ, ಶೇಷಾದ್ರಿಪುರಂ, ಟೌನ್‌ಹಾಲ್, ಕೆ.ಆರ್. ಮಾರುಕಟ್ಟೆ (ಮಾರ್ಕೆಟ್) ಮತ್ತು ಚಾಮರಾಜಪೇಟೆ. ರಾಜಾಜಿನಗರ, ಮಲ್ಲೇಶ್ವರಂ, ಪ್ಯಾಲೇಸ್ ಗುಟ್ಟಹಳ್ಳಿ ಹಾಗೂ ಮಾಗಡಿ ರಸ್ತೆ ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ಮಳೆಯಾಗಿದೆ.

ದಿಢೀರ್ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿದ್ದ ಪಾದಚಾರಿಗಳು ಹಾಗೂ ಬೈಕ್ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಇಲ್ಲದ ಜನರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಮುಂದೆ ಸಾಲು ಗಟ್ಟಿ ನಿಂತಿದ್ದಾರೆ. ಶನಿವಾರವಾದ್ದರಿಂದ ಮಾಗಡಿ ರಸ್ತೆ ಮತ್ತು ಮಾರ್ಕೆಟ್ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟವಾಗಿತ್ತು. ಅನಿವಾರ್ಯವಾಗಿ ಬೈಕ್ ಸವಾರರು ಮಳೆಯಲ್ಲೇ ನೆನೆಯುತ್ತಾ ವಾಹನ ಚಲಾಯಿಸಬೇಕಾಯಿತು.

ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!

ಮಳೆಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ವೀಕೆಂಡ್ ಸಮಯವಾಗಿರುವುದರಿಂದ ಸಂಜೆಯ ವೇಳೆಗೆ ರಸ್ತೆಗಳಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ಮಳೆಯು ರಾಜಧಾನಿಯ ಜನತೆಗೆ ಸೆಕೆಯಿಂದ ಕೊಂಚ ನಿರಾಳತೆ ತಂದಿದ್ದರೂ, ರಸ್ತೆಗಿಳಿದ ಪ್ರಯಾಣಿಕರಿಗೆ ಮಾತ್ರ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಸ್ವರೂಪ ಪಡೆದ ಬಿಡದಿ ಟೌನ್​​ಶಿಪ್ ವಿವಾದ: ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ – Kannada News | Bidadi township Row: Congress MLA HC Balakrishna alleged kick back Against HD Kumaraswamy In DLF

ಬೆಂಗಳೂರು, (ಜುಲೈ 18): ಬಿಡದಿ ಟೌನ್ ಶಿಪ್ (bidadi township) ವಿಚಾರಕ್ಕೆ ಸಂಬಂಧ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವಿನ ಟೀಕೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ವೈಯಕ್ತಿವಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಹೌದು….ಸಿಎಂ ಡಿಕೆ ಶಿವಕುಮಾರ್ (DK Shivakumar) ಮೇಲೆ ಭಷ್ಟ್ರಾಚಾರ ಆರೋಪ ಮಾಡಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಡಿಎಲ್ಎಫ್ ಗೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿದೆ. “ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದು ಕಾಂಗ್ರೆಸ್ ಶಾಸಕ ಹೆಚ್​​​​ಸಿ ಬಾಲಕೃಷ್ಣ  (HC Balakrishna) ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಡದಿ ಟೌನ್ ಶಿಪ್ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ,“ಕುಮಾರಸ್ವಾಮಿ ಅವರು ಬಿಡದಿ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಡಿಎಲ್ಎಫ್ ನವರಿಗೆ ನೀಡಿದರು. ಇದನ್ನು ನೀಡುವಾಗ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಕುಮಾರಸ್ವಾಮಿ ಅವರೇ ಹೇಳಬೇಕು. ಕುಮಾರಸ್ವಾಮಿ ಅವರು ಈ ಯೋಜನೆ ಮಾಡುವಾಗ ಡಿಸಿಎಂ ಆಗಿದ್ದು ಯಡಿಯೂರಪ್ಪನವರು. ಕನಿಷ್ಠ ಸೌಜನ್ಯಕ್ಕಾದರೂ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಭೆ ಮಾಡಲಿಲ್ಲ. ಶಿವಕುಮಾರ್ ಅವರು ಕಿಕ್ ಬ್ಯಾಕ್ ಪಡೆದು ಕೇಂದ್ರದ ನಾಯಕರಿಗೆ ಕಳುಹಿಸುತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನೇಕ ಬಾರಿ ಆರೋಪಿಸಿದ್ದಾರೆ. ಡಿಎಲ್ಎಫ್ ಗೆ ಜಾಗತಿಕ ಟೆಂಡರ್ ನೀಡುವಾಗ ಕುಮಾರಸ್ವಾಮಿ ಅವರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು? ಡಿಎಲ್ಎಫ್ ಅವರು ಕೊಟ್ಟ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಆದರೆ ಜಾಗತಿಕ ಮುಗ್ಗಟ್ಟಿನಲ್ಲಿ ಈ ಯೋಜನೆ ಮಾಡುವುದು ಅಸಾಧ್ಯ ಎಂದು ಡಿಎಲ್ಎಫ್ ಹಿಂದಕ್ಕೆ ಸರಿದಾಗ ಇವರು 400 ಕೋಟಿ ಹಣ ವಾಪಸ್ ನೀಡಿದಾಗ ಯಡಿಯೂರಪ್ಪನವರು ಎಷ್ಟು ಕಿಕ್ ಬ್ಯಾಕ್ ಪಡೆದರು? ಅದರಲ್ಲಿ ಅವರ ಕೇಂದ್ರದ ನಾಯಕರಿಗೆ ಎಷ್ಟು ಪಾಲು ನೀಡಿದರು?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ದೋಸ್ತಿಯಲ್ಲಿ ಕುಸ್ತಿ: ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಪ್ರತ್ಯೇಕ ಪಾದಯಾತ್ರೆ ಘೋಷಿಸಿದ ಜೆಡಿಎಸ್

“2019ರಲ್ಲಿ ಯಡಿಯೂರಪ್ಪನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಐಎಡಿಬಿಗೆ 1 ಸಾವಿರ ಎಕರೆ ಟೌನ್ ಶಿಪ್ ಭೂಮಿಯನ್ನು ಹಸ್ತಾಂತರ ಮಾಡಿದರು. ಆಗ ಕೈಗಾರಿಕಾ ಸಚಿವರಾಗಿದ್ದವರು ಜಗದೀಶ್ ಶೆಟ್ಟರ್ ಅವರು. ಈ ಸಂದರ್ಭದಲ್ಲಿ ಕಿಕ್ ಬ್ಯಾಕ್ ಪಡೆದು ಈ ಭೂಮಿಯನ್ನು ಕೆಐಎಡಿಬಿಗೆ ನೀಡಿದ್ದಾರೆ ಎಂದು ಇದೇ ಕುಮಾರಸ್ವಾಮಿ ಅವರು ಆರೋಪಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಷ್ಟು ಕಿಕ್ ಬ್ಯಾಕ್ ಪಡೆದಿದ್ದರು ಎಂದು ಅವರೇ ಹೇಳಬೇಕು. ನಾಲ್ಕೈದು ವರ್ಷಗಳ ಹಿಂದೆ ಕೇವಲ 80 ಲಕ್ಷದಿಂದ 1 ಕೋಟಿವರೆಗೆ ಭೂಮಿ ಪಡೆದಿದ್ದರು. ಈಗ ನಮ್ಮ ಸರ್ಕಾರ 2.50 ಕೋಟಿವರೆಗೂ ಪರಿಹಾರ ನೀಡುತ್ತಿದೆ. ಆ ಸಂದರ್ಭದಲ್ಲಿ ನಾನು ಮಾಜಿ ಶಾಸಕನಾಗಿ ಸ್ಥಳಕ್ಕೆ ಹೋಗಿ ಹೋರಾಟ ಮಾಡಿದೆ. ಈ ಭಾಗವನ್ನು ಕೆಂಪು ವಲಯದಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದೆ ಎಂದು ಯಡಿಯೂರಪ್ಪನವರ ಬಳಿ ನಿಯೋಗ ತೆಗೆದುಕೊಂಡು ಹೋಗಿ ಮನವಿ ನೀಡಿದ್ದೆ” ಎಂದು ತಿಳಿಸಿದರು.

ಯಡಿಯೂರಪ್ಪ ಸರ್ಕಾರದಲ್ಲಿ ಯೋಜನೆ ಮಾಡಲು ಸಮಿತಿ ಶಿಫಾರಸ್ಸು

“ಈಗ ಹಸಿರು ಶಾಲು ಹಾಕಿಕೊಂಡು ಹೋರಾಟ ಮಾಡುತ್ತಿರುವ ಯಡಿಯೂರಪ್ಪನವರು ನಂತರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಮಾಡಿ ರೈತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ನಂತರ 18-05-2021ರಂದು ಯಡಿಯೂರಪ್ಪನವರು ಅಧಿಸೂಚನೆ ಹೊರಡಿಸಿ, ಬೆಂಗಳೂರಿನ ಸಮೀಪ ಹೂಡಿಕೆ ಸಾಧ್ಯತೆ ಇರುವುದರಿಂದ ಟೌನ್ ಶಿಪ್ ಗಳ ಅಗತ್ಯವಿರುತ್ತದೆ. ಅದಕ್ಕೆ ಈ 9 ಸಾವಿರ ಎಕರೆ ಭೂಮಿ ಟೌನ್ ಶಿಪ್ ಯೋಜನೆಗೆ ಸೂಕ್ತವಾಗಿರುತ್ತದೆ ಎಂದು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮುಖ್ಯ ಕಾರ್ಯದರ್ಶಿಗಳು ತೀರ್ಮಾನ ಮಾಡಿದರು. 35% ಕೈಗಾರಿಕೆ, 35% ವಸತಿಗಾಗಿ ಹಾಗೂ ಉಳಿದ ಪ್ರದೇಶವನ್ನು ಇತರೆ ಕಾಮಗಾರಿಗಳಿಗೆ ಬಳಿಸಿ ಟೌನ್ ಶಿಪ್ ಯೋಜನೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಂತರ ಬಂದ ಬೊಮ್ಮಾಯಿ ಅವರು ಇದನ್ನು ನವನಗರ ಇಂಟಿಗ್ರೇಡೆಟ್ ಟೌನ್ ಶಿಪ್ ಮಾಡಲು ಬಜೆಟ್ ನಲ್ಲಿ ಮಂಡಿಸಿದರು” ಎಂದು ತಿಳಿಸಿದರು.

“ವಿಜಯೇಂದ್ರಣ್ಣ ನೀವು ಪಶ್ಚಾತಾಪ ಯಾತ್ರೆ ಮಾಡುವ ಮುನ್ನ ನಿಮ್ಮ ತಂದೆಯವರು ಸಿಎಂ ಆಗಿದ್ದಾಗ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಿಮ್ಮನ್ನು ಭೇಟಿ ಮಾಡಿದಾಗ ನೀವು ಏರೋನಾಟಿಕ್ ಕಂಪನಿ ಬಂಡವಾಳ ಹೂಡಿಕೆ ಮಾಡಲು ಬರುತ್ತಿದೆ. ದಯಮಾಡಿ ಗಲಾಟೆ ಮಾಡಬೇಡಿ ನಿಮಗೆ ಉತ್ತಮ ಪರಿಹಾರ ಕೊಡಿಸುತ್ತೇವೆ ಎಂದು ಹೇಳಿದ್ದನ್ನು ಮರೆತುಬಿಟ್ಟಿದ್ದೀರಾ? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಸಿ.ಟಿ ರವಿ ಅವರು ರಾಜ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದು ಹೇಳಿದ್ದಾರೆ. ರವಿ ಅವರು ಈ ಮಾತನ್ನು ಯಡಿಯೂರಪ್ಪನವರಿಗೆ ಹೇಳಿದರಾ? ರವಿ ಅಣ್ಣಾ ನಿನಗೆ ಜನ ಇಟ್ಟಿರುವ ಹೆಸರೇ ಲೂಟಿ ರವಿ ಅಂತಾ. ನೀನು ವ್ಯಾಪಾರಿ ಆಗಿದ್ದಕ್ಕೆ ಚಿಕ್ಕಮಗಳೂರಿನವರು ಭಿಕಾರಿಯಾದರು. ನೀವೆಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದು, ಮಾತನಾಡುವ ಮುನ್ನ ಎಚ್ಚರವಾಗಿರಬೇಕು. ನಮ್ಮಕ್ಕ ಶೋಭಕ್ಕ ಅವರು ಬಹಳ ಚೆನ್ನಾಗಿ ಹೇಳಿದ್ದಾರೆ. ಇದು ನಿಮ್ಮ ಸಾಹೇಬರು, ಯಜಮಾನರ ಪಾಪದ ಕೂಸು” ಎಂದು ತಿರುಗೇಟು ನೀಡಿದರು.

ವಿರೋಧ ಪಕ್ಷದ ನಾಯಕರಿಗೆ ಸಾಮಾನ್ಯ ಪ್ರಜ್ಞೆ ಇಲ್ಲ

“ವಿರಾವೇಶದಲ್ಲಿ ಮಾತನಾಡಿರು ಅಶೋಕಣ್ಣ, ಮಾತನಾಡುವ ಮುನ್ನ ಸಾಮಾನ್ಯ ಪ್ರಜ್ಞೆ ಇರಬೇಕು. ಈ ಯೋಜನೆ ಹಣವನ್ನು ಮೂರು ರಾಜ್ಯಗಳ ಚುನಾವಣೆಗೆ ಬಳಸಲಾಗುತ್ತಿದೆ ಎಂದು ಹೇಳಿದ್ದೀರಾ. ಈ ಯೋಜನೆ ಇವತ್ತೇ ಜಾರಿಯಾಗುತ್ತದೆಯೇ? ಈ ಟೌನ್ ಶಿಪ್ ಆಗಲು ಇನ್ನು 10 ವರ್ಷ ಬೇಕಾಗುತ್ತದೆ. ಬಿಜೆಪಿ ಜೆಡಿಎಸ್ ನವರು ಈ ಯೋಜನೆಯನ್ನು ಸರ್ಕಾರಿ ಜಾಗ ಸೇರಿಸಿ ಖಾಸಗಿಯವರಿಗೆ ನೀಡಿದ್ದರು. ಆದರೆ ನಾವು ಸರ್ಕಾರದಿಂದಲೇ ಈ ಯೋಜನೆ ಮಾಡುತ್ತಿದ್ದೇವೆ. ಯಡಿಯೂರಪ್ಪನವರ ಕಾಲದಲ್ಲಿನ ವರದಿ ಪ್ರಕಾರ ಈ ಟೌನ್ ಶಿಪ್ ನಲ್ಲಿ ಸರ್ಕಾರಕ್ಕೆ ವಾರ್ಷಿಕ 3,146 ಕೋಟಿ ಆದಾಯ ಬರುತ್ತದೆ ಎಂದು ತಿಳಿಸಲಾಗಿದೆ. ಈ ಎಲ್ಲಾ ದಾಖಲೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. 2020ರಲ್ಲಿ ಕಂದಾಯ ಮಂತ್ರಿಯಾಗಿದ್ದು ನೀವೇ ಅಲ್ಲವೇ?” ಎಂದು ತಿರುಗೇಟು ನೀಡಿದರು.

ಪುತ್ರ ವ್ಯಾಮೋಹಕ್ಕಾಗಿ ವಿರೋಧ ಪಕ್ಷದ ನಾಯಕರಿಂದ ಹೋರಾಟ

“ರೈತರನ್ನು ರಕ್ಷಣೆ ಮಾಡುವ ವಿಚಾರವನ್ನು ನಾವು ಬಿಜೆಪಿಯಿಂದ ಕಲಿಯಬೇಕೆ? ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ಅವರನ್ನು ಎಷ್ಟು ದಿನಗಳ ಕಾಲ ಕಾಡಿದರು ಎಂಬುದು ಜಗತ್ತಿಗೆ ಗೊತ್ತಿದೆ. ಹಸಿರು ಟವಲ್ ಹಾಕಿಕೊಂಡ ತಕ್ಷಣ ಇವರು ರೈತ ಪರ. ನಮ್ಮ ರಾಜ್ಯದಲ್ಲಿ ಎಲ್ಲರಿಗೂ ಪುತ್ರ ವ್ಯಾಮೋಹ ಹೆಚ್ಚಾಗಿದೆ. ತಮ್ಮ ಮಕ್ಕಳನ್ನು ಸಿಎಂ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಗೆಲ್ಲಿಸಬೇಕು ಎಂದು ಹೋರಾಡುತ್ತಿದ್ದರೆ, ಯಡಿಯೂರಪ್ಪನವರು ವಿಜಯೇಂದ್ರ ಅವರನ್ನು ಪ್ರಮೋಟ್ ಮಾಡಲು ಹೋರಾಟ ಮಾಡುತ್ತಿದ್ದಾರೆ. ಮಕ್ಕಳ ಉದ್ಧಾರಕ್ಕೆ ಇವರು ಹಠಕ್ಕೆ ಬಿದ್ದಿದ್ದಾರೆ. ವಿರೋಧ ಪಕ್ಷದ ನಾಯಕರುಗಳು ಗೋಸುಂಬೆ ರಾಜಕಾರಣ ಬಿಡಬೇಕು” ಎಂದು ತಿಳಿಸಿದರು.

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು 2023ರಲ್ಲಿ ನಮ್ಮ ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಈ ಭಾಗದ ರೈತರು ಬಂದು ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು ಯೋಜನೆ ಮಾಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರು ಸರ್ವೇ ಮಾಡಿಸಿ ಬಹುತೇಕ ರೈತರು ಯೋಜನೆ ಪರವಾಗಿದ್ದಾರೆ ಎಂದು ತಿಳಿದ ಬಳಿಕವಷ್ಟೇ 2025ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಅಂತಿಮ ಅಧಿಸೂಚನೆ ಹೊರಡಿಸಿದ್ದು 2026ರಲ್ಲಿ. ಈ ಒಂದು ವರ್ಷ ಅವಧಿಯಲ್ಲಿ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪನವರು, ವಿಜಯೇಂದ್ರ, ಅಶೋಕ್ ಅವರಾಗಲಿ ಪ್ರಶ್ನೆ ಮಾಡಿದ್ದರ? ವಿರೋಧ ಪಕ್ಷದ ನಾಯಕರಾದ ಅಶೋಕ್ ಅಧಿವೇಶನದಲ್ಲಿ ಈ ವಿಚಾರ ಪ್ರಶ್ನೆ ಮಾಡಿದ್ದೀರಾ? ಅಂತಿಮ ಅಧಿಸೂಚನೆ ವೇಳೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾದರು ಎಂಬ ಕಾರಣಕ್ಕೆ ಹೊಟ್ಟೆಯುರಿ ಆರಂಭವಾದರೆ ನಿಮಗೆ ಮದ್ದು ನೀಡಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ನಾಯಕರಿಂದ ಪ್ರಾಯಶ್ಚಿತ ಯಾತ್ರೆ

“ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಅನೇಕ ಬಾರಿ ಪ್ರೀತಿ ತೋರಿದ್ದಾರೆ. ಆದರೆ ಇದೇ ಡಿಎಲ್ಎಫ್ ಯೋಜನೆಯಿಂದ ಹಿಂದೆ ಸರಿದಾಗ, ಯಡಿಯೂರಪ್ಪನವರು ಮತ್ತೆ ಜಾಗತಿಕ ಟೆಂಡರ್ ಕರೆದಿದ್ದು ಯಾಕೆ? ನಿಮ್ಮ ಪಶ್ಚಾತಾಪ ಯಾತ್ರೆ ಆರಂಭಕ್ಕೂ ಮುನ್ನ ಈ ಪ್ರಶ್ನೆಗೆ ಉತ್ತರಿಸಬೇಕು. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ವೈದರು ತೂಕ ಇಳಿಸಬೇಕು ಎಂಬ ಸಲಹೆ ನೀಡಿದ್ದು, ಅದಕ್ಕಾಗಿ ಅವರು ಪಶ್ಚಾತಾಪಯಾತ್ರೆ ಮಾಡಲು ಮುಂದಾಗಿದ್ದಾರೆ. ಇದು ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯ ಪರಿಣಾಮ. ಎಲ್ಲರೂ ಪ್ರತಿವ್ರತೆಯ ಸ್ಪರ್ಧೆಗೆ ಬಿದ್ದವರಂತೆ ತಾವು ರೈತರ ಪರ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಾಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ ಎಂಬ ಆತಂಕದಲ್ಲಿ ಈ ಪಶ್ಚಾತಾಪಯಾತ್ರೆ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

“ಬಿಜೆಪಿಯವರ ಪಶ್ಚಾತಾಪ ಯಾತ್ರೆಗೆ ನಮ್ಮ ಅಭ್ಯಂಥರವಿಲ್ಲ. ಆದರೆ ಈ ಯಾತ್ರೆಗೂ ಮುನ್ನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿ ಮುಂದುವರಿಸಲಿ. ಇತ್ತೀಚೆಗೆ ನಂಜುಂಡಸ್ವಾಮಿ ಅವರ ಪುತ್ರಿ ಬಿಡದಿಯಲ್ಲಿ ರಾಜಕಾರಣಿಗಳಿಗೆ ಹಸಿರು ಶಾಲು ಹಾಕಿಕೊಳ್ಳುವ ಅರ್ಹತೆ ಇಲ್ಲ ಎಂದು ಹೇಳಿದ್ದರು. ಈ ಮಾತನ್ನು ಅವರು ಹೇಳಿದ್ದು, ರೈತರ ಜೊತೆ ಪ್ರತಿಭಟನೆಗೆ ಕೂತು ನಾಟಕ ಮಾಡಿದವರಿಗೆ ಹಾಗೂ ರೈತರ ಶಾಲು ಹಾಕಿಕೊಂಡು ಯಾತ್ರೆ ಮಾಡಲು ಮುಂದಾಗಿರುವವರಿಗೆ” ಎಂದರು.

2018 ರಲ್ಲಿ ದೇವೇಗೌಡರು ಕಣ್ಣುಮುಚ್ಚಿ ಕುಳಿತರು

“ಯಡಿಯೂರಪ್ಪನವರ ನಂತರ ಸದಾನಂದ ಗೌಡರು ಬಂದು ಐದು ಟೌನ್ ಶಿಪ್ ಸಾಧ್ಯವಿಲ್ಲ, ಕೇವಲ ಬಿಡದಿಯಲ್ಲಿ ಪ್ರಾಯೋಗಿಕ ಯೋಜನೆ ಮಾಡುತ್ತೇವೆ ಎಂದರು. ನಂತರ ಜಗದೀಶ್ ಶೆಟ್ಟರ್ ಅವರು ಬಂದು ಈ ಯೋಜನೆ ಮುಂದುವರಿಸಿ ಸಭೆ ಮಾಡಿದರು. ನಂತರ 2013ರಲ್ಲಿ ಕಾಂಗ್ರೆಸ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ನಂತರ 2018ರಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಈ ಭಾಗದ ರೈತರು ಹೋಗಿ ಈ ಯೋಜನೆ ಕೈಬಿಡಿ ಎಂದು ಕೇಳಿಕೊಂಡಾಗ. ಇದು ನನ್ನ ಕನಸಿನ ಯೋಜನೆ ಯಾವುದೇ ಕಾರಣಕ್ಕೂ ಈ ಯೋಜನೆ ಬಿಡಲು ಸಾಧ್ಯವಿಲ್ಲ. ಈ ಯೋಜನೆ ಮಾಡೇ ತೀರುತ್ತೇವೆ ಎಂದು ಹೇಳಿದ್ದನ್ನು ಕುಮಾರಸ್ವಾಮಿ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಂತರ ಅಲ್ಲಿನ ರೈತರು ದೇವೇಗೌಡರ ಬಳಿ ಈ ಯೋಜನೆಯನ್ನು ಕೈಬಿಟ್ಟು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಾರೆ. ಆಗ ದೇವೇಗೌಡರು ಕಣ್ಣುಮುಚ್ಚಿ ಕುಳಿತರು. ನಾನು ಈ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಮಗ ಏನು ಹೇಳುತ್ತಾನೇ ಆ ರೀತಿ ಕೇಳಿಕೊಂಡು ಹೋಗಿ ಎಂದು ಸ್ಪಷ್ಟವಾಗಿ ಹೇಳುತ್ತಾರೆ” ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

FIFA World Cup 2026: 8,396 ಕೋಟಿಯಲ್ಲಿ ಚಾಂಪಿಯನ್ ತಂಡಕ್ಕೆ ಸಿಗುವುದೆಷ್ಟು? ಉಳಿದ ತಂಡಗಳಿಗೆಷ್ಟು? – Kannada News | 2026 FIFA World Cup Final: Argentina vs Spain Battle for Record Breaking Prize Money

2026 ರ ಫಿಫಾ ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ ಅಂದರೆ ಜುಲೈ 19 ರಂದು ನಡೆಯಲಿರುವ ಅರ್ಜೆಂಟೀನಾ ಹಾಗೂ ಸ್ಪೇನ್ ನಡುವಿನ ಫೈನಲ್ ಪಂದ್ಯದೊಂದಿಗೆ ಈ ಪಂದ್ಯಾವಳಿಗೆ ತೆರೆ ಬೀಳಲಿದೆ. ಒಂದೆಡೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಫೈನಲ್​ಗೇರಿದರೆ, ಇತ್ತ ಸ್ಪೇನ್ ಕಳೆದ ಬಾರಿಯ ರನ್ನರ್ ಅಪ್ ಫ್ರಾನ್ಸ್ ತಂಡವನ್ನು ಮಣಿಸಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. 2010 ರ ನಂತರ ಸ್ಪೇನ್ ಫೈನಲ್ ತಲುಪಿರುವುದರಿಂದ ಈ ಬಾರಿ ಪ್ರಶಸ್ತಿ ಬರ ನೀಗಿಸಿಕೊಳ್ಳುತ್ತಾ ಎಂಬ ಕುತೂಹಲ ಮೂಡಿದೆ. ಅಂದಹಾಗೆ ಈ ಬಾರಿ ಫಿಫಾ ವಿಶ್ವಕಪ್​ಗೆ ಸರಿಸುಮಾರು 8,396 ಕೋಟಿ ರೂಗಳನ್ನು ಬಹುಮಾನದ ಮೊತ್ತವಾಗಿ ಮೀಸಲಿಡಲಾಗಿದೆ. ಇದರರ್ಥ ಈ ಬಾರಿಯ ಚಾಂಪಿಯನ್ ತಂಡದ ಮೇಲೆ ಹಣದ ಮಳೆಯೇ ಸುರಿಯಲಿದೆ. ಚಾಂಪಿಯನ್ ತಂಡದ ಜೊತೆಗೆ ರನ್ನರ್ ಅಪ್ ತಂಡ ಹಾಗೂ ಇತರ ತಂಡಗಳಿಗೂ 100 ಕೋಟಿ ಗೂ ಅಧಿಕ ಮೊತ್ತ ಬಹುಮಾನವಾಗಿ ಸಿಗಲಿದೆ.

2026 ರ ಫಿಫಾ ವಿಶ್ವಕಪ್‌ ಹಲವು ಕಾರಣಗಳಿಗೆ ವಿಶೇಷವಾಗಿತ್ತು. ಮೊದಲ ಬಾರಿಗೆ, ಪಂದ್ಯಾವಳಿಯಲ್ಲಿ ಗರಿಷ್ಠ 48 ತಂಡಗಳು ಆಡಿದವು, ಗರಿಷ್ಠ ಸಂಖ್ಯೆಯ ಪಂದ್ಯಗಳು ನಡೆದವು. ಹಾಗೆಯೇ ಇದರ ಜೊತೆಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನದ ಹಣವನ್ನು ಈ ಬಾರಿ ಘೋಷಿಸಲಾಗಿದೆ.

ಸುಮಾರು 8,396 ಕೋಟಿ ರೂ..!

ಮೇಲೆ ಹೇಳಿದಂತೆ ಈ ಬಾರಿ ಪಂದ್ಯಾವಳಿಗಾಗಿ ಒಟ್ಟು 871 ಮಿಲಿಯನ್ ಡಾಲರ್ (ಸುಮಾರು 8,396 ಕೋಟಿ ರೂ) ಅನ್ನು ಬಹುಮಾನಕ್ಕಾಗಿ ಮೀಸಲಿಡಲಾಗಿದೆ. ಅದರಲ್ಲಿ ಈಗಾಗಲೇ ಪ್ರದರ್ಶನದ ಆಧಾರದ ಮೇಲೆ 703 ಮಿಲಿಯನ್ (ಸುಮಾರು 6775.8 ಕೋಟಿ ರೂ.) ವಿತರಿಸಲಾಗಿದೆ. ಹಾಗೆಯೇ 168 ಮಿಲಿಯನ್ (ಸುಮಾರು 1619.2 ಕೋಟಿ ರೂ) ಭಾಗವಹಿಸುವಿಕೆ ಶುಲ್ಕ ಮತ್ತು ಪೂರ್ವಸಿದ್ಧತಾ ಅನುದಾನದ ರೂಪದಲ್ಲಿ ಎಲ್ಲಾ ಅರ್ಹತಾ ತಂಡಗಳಿಗೆ ಹೋಗುತ್ತದೆ.

ವಿಜೇತ ತಂಡಕ್ಕೆ 348 ಕೋಟಿ ರೂ

ಹಿಂದಿನ ಆವೃತ್ತಿಯಲ್ಲಿ, ವಿಜೇತ ತಂಡವು 348 ಕೋಟಿ ರೂಪಾಯಿಗಳನ್ನು (42 ಮಿಲಿಯನ್) ಬಹುಮಾನವನ್ನಾಗಿ ಪಡೆದುಕೊಂಡಿತ್ತು. ಇತ್ತ ಫೈನಲ್​ನಲ್ಲಿ ಸೋತ ತಂಡಕ್ಕೆ 248 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಉಳಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸಿದ 32 ತಂಡಗಳಿಗೆ ವಿತರಿಸಲಾದ ಒಟ್ಟು ಬಹುಮಾನದ ಮೊತ್ತ 36 ಬಿಲಿಯನ್ ರೂಪಾಯಿಗಳಿಗಿಂತ ಹೆಚ್ಚಾಗಿತ್ತು.

ಈ ವರ್ಷ, ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಪ್ರತಿ ತಂಡವು ಸರಿಸುಮಾರು 12.5 ಮಿಲಿಯನ್ (ಸುಮಾರು ರೂ. 120.4 ಕೋಟಿ) ಪಡೆಯುತ್ತದೆ. ಹಾಗೆಯೇ ಫೈನಲ್ ಗೆದ್ದ ತಂಡದ ಎಲ್ಲಾ ಆಟಗಾರರಿಗೆ ವಿಶೇಷ ಚಿನ್ನದ ಉಂಗುರವನ್ನು ನೀಡಲಾಗುವುದು ಎಂದು ಫಿಫಾ ಘೋಷಿಸಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ, ಚಾಂಪಿಯನ್ ತಂಡದ ಆಟಗಾರರು ಮತ್ತು ಎಲ್ಲಾ ಸಹಾಯಕ ಸಿಬ್ಬಂದಿ ಸದಸ್ಯರು ಟ್ರೋಫಿ ಮತ್ತು ಚಿನ್ನದ ಪದಕಗಳೊಂದಿಗೆ ಚಾಂಪಿಯನ್‌ಶಿಪ್ ಉಂಗುರಗಳನ್ನು ಸ್ವೀಕರಿಸುತ್ತಾರೆ.

ಬಹುಮಾನದ ಮೊತ್ತ ಹೀಗೆ ಹಂಚಿಕೆಯಾಗಲಿದೆ

  • ಚಾಂಪಿಯನ್ ತಂಡ: 490 ಕೋಟಿ ರೂ.
  • ರನ್ನರ್ ಅಪ್: 317 ಕೋಟಿ ರೂ.
  • ಮೂರನೇ ಸ್ಥಾನ: 279 ಕೋಟಿ ರೂ.
  • ನಾಲ್ಕನೇ ಸ್ಥಾನ: 259 ಕೋಟಿ ರೂ.
  • 5-8ನೇ ಸ್ಥಾನ: ಪ್ರತಿ ತಂಡಕ್ಕೆ 182 ಕೋಟಿ ರೂ.
  • 9-16ನೇ ಸ್ಥಾನ: ಪ್ರತಿ ತಂಡಕ್ಕೆ 144 ಕೋಟಿ ರೂ.
  • 17-32ನೇ ಸ್ಥಾನ: ಪ್ರತಿ ತಂಡಕ್ಕೆ 105 ಕೋಟಿ ರೂ.
  • 33-48ನೇ ಸ್ಥಾನ: ಪ್ರತಿ ತಂಡಕ್ಕೆ 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version