ಅಮೆರಿಕ: ವಿಚ್ಛೇದನ ಕೊಡ್ತೀನಿ ಎಂದಿದ್ದಕ್ಕೆ ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಬುಲ್ಡೋಜರ್​ನಿಂದ ಮನೆ ಕೆಡವಲು ಯತ್ನಿಸಿದ ವ್ಯಕ್ತಿ – Kannada News

ಪೆನ್ಸಿಲ್ವೇನಿಯಾ, ಜೂನ್ 03: ಪತ್ನಿ ವಿಚ್ಛೇದನ(Divorce) ಕೊಡ್ತೀನಿ ಎಂದಿದ್ದಕ್ಕೆ ಕೋಪಗೊಂಡ ಪತಿ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದಾಗಲೇ ಬುಲ್ಡೋಜರ್ ತಂದು ಕೆಡವಲು ಯತ್ನಿಸಿರುವ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ಕೌಂಟಿಯಲ್ಲಿ ನಡೆದಿದೆ. ಪತಿಯೊಬ್ಬ ಕೋಪ ಹಾಗೂ ಮದ್ಯದ ಅಮಲಿನಲ್ಲಿ ಅತಿರೇಕದ ವರ್ತನೆ ತೋರಿದ್ದು ಮಹಿಳೆಯ ಸಮಯಪ್ರಜ್ಞೆಯಿಂದಾಗಿ ದೊಡ್ಡದೊಂದು ಗಂಡಾಂತರ ತಪ್ಪಿದೆ. 48 ವರ್ಷದ ಎರಿಕ್ ಪಿಯರ್ವ್ಸ್ಜಾ ಎಂಬಾತ ಬುಲ್ಡೋಜರ್ ಬಳಸಿ ತನ್ನದೇ ಮನೆಯನ್ನು ಕೆಡವಲು ಯತ್ನಿಸಿದಾಗ, ಮನೆಯೊಳಗಿದ್ದ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವಿಷಯ ತಿಳಿದ ಎರಿಕ್, ಮದ್ಯದ ಅಮಲಿನಲ್ಲಿ ಮನೆಯ ಹೊರಗೆ ನಿಂತಿದ್ದ ಬೃಹತ್ ನಿರ್ಮಾಣ ಯಂತ್ರದ ಕ್ಯಾಬಿನ್ ಒಳಗೆ ಕುಳಿತುಕೊಂಡಿದ್ದಾನೆ ನಮ್ಮಿಬ್ಬರ ನಡುವೆ ಎಲ್ಲವೂ ಮುಗಿದರೆ, ಈ ಮನೆಯೂ ಇರಬಾರದು ಎಂದು ಕೂಗುತ್ತಾ ಯಂತ್ರದ ಮೂಲಕ ಮನೆಯ ಹಿಂಭಾಗದ ಗೋಡೆಯನ್ನು ಕೆಡವಲು ಆರಂಭಿಸಿದ್ದಾನೆ.

ಆತಂಕದ ನಡುವೆಯೂ ಧೈರ್ಯ ಕಳೆದುಕೊಳ್ಳದ ಪತ್ನಿ, ತಕ್ಷಣವೇ ಸುರಕ್ಷಿತ ಜಾಗದಲ್ಲಿ ನಿಂತು ಪೊಲೀಸರಿಗೆ ತುರ್ತು ಕರೆ ಮಾಡಿದರು. ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಅತ್ಯಂತ ಚಾಣಾಕ್ಷತನದಿಂದ ಯಂತ್ರದ ಹೊಡೆತಕ್ಕೆ ಸಿಲುಕದಂತೆ ಸುರಕ್ಷಿತ ಮಾರ್ಗದ ಮೂಲಕ ಮನೆಯಿಂದ ಹೊರಬರುವಲ್ಲಿ ಯಶಸ್ವಿಯಾದರು. ಮನೆಯ ಹಿಂಭಾಗಕ್ಕೆ ಹಾನಿ ಮಾಡಿದ ನಂತರ ಎರಿಕ್ ಅಲ್ಲಿಂದ ಜಿಮ್ ಬ್ಯಾಗ್ ಎತ್ತಿಕೊಂಡು ನಗರದ ಕಡೆಗೆ ಪರಾರಿಯಾಗಿದ್ದಾನೆ. ಆದರೆ, ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೆನ್ಸಿಲ್ವೇನಿಯಾ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?

ಪ್ರಸ್ತುತ ಆರೋಪಿಯ ಮೇಲೆ ಕೊಲೆ ಯತ್ನ, ಸಾರ್ವಜನಿಕ ಆಸ್ತಿಗೆ ಧಕ್ಕೆ ಹಾಗೂ ಇತರರ ಜೀವಕ್ಕೆ ಅಜಾಗರೂಕತೆಯಿಂದ ಅಪಾಯವನ್ನುಂಟುಮಾಡಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬುಲ್ಡೋಜರ್​ನಿಂದಾಗಿ ಮನೆಯ ಮುಖ್ಯ ರಚನೆ ಸಂಪೂರ್ಣ ದುರ್ಬಲಗೊಂಡಿರುವುದರಿಂದ, ಅದು ಯಾವುದೇ ಸಮಯದಲ್ಲಿ ಕುಸಿಯಬಹುದು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮವಾಗಿ ಇಡೀ ಮನೆಯನ್ನು ಅಧಿಕೃತವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದ ಪತಿಯ ಬೇಜವಾಬ್ದಾರಿತನವನ್ನು ನೆಟ್ಟಿಗರು ಕಟುವಾಗಿ ಖಂಡಿಸಿದ್ದಾರೆ. ಆದಾಗ್ಯೂ, ಯಾವುದೇ ಪ್ರಾಣಹಾನಿಯಾಗದಂತೆ ತಾಯಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿ, ಕಾನೂನು ಕೈಗೆತ್ತಿಕೊಂಡ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸಲು ಪೊಲೀಸರು ಸನ್ನದ್ಧರಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿಕೆ ಶಿವಕುಮಾರ್ ಜತೆ 14 ಮಂದಿ ಪ್ರಮಾಣವಚನ ಸಾಧ್ಯತೆ: ಸಂಭಾವ್ಯ ಸಚಿವರ ಫೈನಲ್ ಲಿಸ್ಟ್ ಲಭ್ಯ – Kannada News

ಬೆಂಗಳೂರಿನಲ್ಲಿ ರಾರಾಜಿಸುತ್ತಿರುವ ಡಿಕೆ ಶಿವಕುಮಾರ್ ಫ್ಲೆಕ್ಸ್Image Credit source: tv9

ಬೆಂಗಳೂರು, ಜೂನ್ 3: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಅವರ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಕೊನೆ ಹಂತದ ಫೈನಲ್ ಲಿಸ್ಟ್ ‘ಟಿವಿ9’ಗೆ ಲಭ್ಯವಾಗಿದೆ. ಇಂದು ಮುಖ್ಯಮಂತ್ರಿಗಳ ಜೊತೆಗೆ ಒಟ್ಟು 14 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡುವ ಸಾಧ್ಯತೆಯಿದೆ. ದೆಹಲಿಯಲ್ಲಿ ನಡೆದ ಹಲವು ದಿನಗಳ ಮ್ಯಾರಥಾನ್ ಸಭೆಗಳ ಬಳಿಕ ಹೈಕಮಾಂಡ್ ಈ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ವರಿಷ್ಠರು ನೂತನ ಸಚಿವರ ಅಧಿಕೃತ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಜೊತೆ 14 ಪ್ರಮುಖ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ.
  • ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ್‌ಗೆ ಮಾತ್ರ ಡಿಸಿಎಂ ಸ್ಥಾನ?
  • ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಪಟ್ಟಕ್ಕಾಗಿ ಸತೀಶ್ ಜಾರಕಿಹೊಳಿ ಭಾರಿ ಒತ್ತಡ.

ಯಾರೆಲ್ಲ ಇದ್ದಾರೆ ಫೈನಲ್ ಲಿಸ್ಟ್‌ನಲ್ಲಿ?

ಕೊನೆ ಹಂತದ ಲೆಕ್ಕಾಚಾರಗಳ ಪ್ರಕಾರ ಸಂಪುಟ ಸೇರಲಿರುವ ಆ 14 ಸಂಭಾವ್ಯ ನಾಯಕರ ಪಟ್ಟಿ ಹೀಗಿದೆ;

ಡಾ. ಜಿ. ಪರಮೇಶ್ವರ್, ಯತೀಂದ್ರ ಸಿದ್ದರಾಮಯ್ಯ, ಕೆ.ಎಚ್. ಮುನಿಯಪ್ಪ ಅಥವಾ ರೂಪಕಲಾ ಶಶಿಧರ್, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಎಚ್.ಕೆ. ಪಾಟೀಲ್ ಅಥವಾ ಈಶ್ವರ್ ಖಂಡ್ರೆ ಹಾಗೂ ಎನ್. ಚಲುವರಾಯಸ್ವಾಮಿ. ಎಲ್ಲ ಸಮೀಕರಣಗಳನ್ನು ಪರಿಶೀಲಿಸಿಯೇ ವರಿಷ್ಠರು ಈ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿ (KIA) ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಪರಮೇಶ್ವರ್‌ಗೆ ಮಾತ್ರ ಡಿಸಿಎಂ ಪಟ್ಟ?

ಈ ಬಾರಿಯ ಸಂಪುಟದಲ್ಲಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಸಮುದಾಯಗಳ ಒತ್ತಡವಿದ್ದರೂ ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲು ವರಿಷ್ಠರು ಒಪ್ಪಿಲ್ಲ ಎನ್ನಲಾಗಿದೆ.

ಮತ್ತೊಂದೆಡೆ, ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ತಮಗೆ ಬೇಕೆಂದು ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರಿದ್ದಾರೆ. ಇದೇ ಕಾರಣಕ್ಕೆ ಅವರು ಎರಡು ದಿನಗಳ ಕಾಲ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಆದರೆ, ಸತೀಶ್ ಅವರಿಗೆ ಎರಡು ಹುದ್ದೆ ನೀಡಲು ಹಿಂಜರಿಯುತ್ತಿರುವ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಪ್ರಮಾಣವಚನ: ಖಾಕಿ ಭದ್ರಕೋಟೆಯಾದ ಲೋಕಭವನ! 2000ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ನಿಯೋಜನೆ

ಸತೀಶ್ ಜಾರಕಿಹೊಳಿ ಅವರ ಪಟ್ಟು ಸಡಿಲವಾಗದಿದ್ದರೆ ಹಿಂದುಳಿದ ವರ್ಗದ ಮತ್ತೊಬ್ಬ ಪರ್ಯಾಯ ನಾಯಕನ ಹುಡುಕಾಟದಲ್ಲೂ ದೆಹಲಿ ವರಿಷ್ಠರಿದ್ದಾರೆ ಎನ್ನಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ಪಂದ್ಯಗಳು ಎಕ್ಸ್​ಟ್ರಾ… ನ್ಯೂಝಿಲೆಂಡ್ vs ಭಾರತ ವೇಳಾಪಟ್ಟಿ ಪ್ರಕಟ – Kannada News

ನ್ಯೂಝಿಲೆಂಡ್ vs ಭಾರತ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಟೀಮ್ ಇಂಡಿಯಾ ಅಕ್ಟೋಬರ್​ನಲ್ಲಿ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲದೆ ಅಲ್ಲಿ ಒಟ್ಟು 12 ಪಂದ್ಯಗಳನ್ನಾಡಲಿದೆ. ಇದಕ್ಕೂ ಮುನ್ನ ಈ ಸರಣಿಯಲ್ಲಿ 10 ಪಂದ್ಯಗಳನ್ನು ನಿಗದಿ ಮಾಡಲಾಗಿತ್ತು. ಇದೀಗ ಹೆಚ್ಚುವರಿ 2 ಏಕದಿನ ಪಂದ್ಯಗಳನ್ನು ಸೇರಿಸಲಾಗಿದೆ. ಅದರಂತೆ 5 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯಲಿದೆ. ಇದಾದ ಬಳಿಕ 2 ಮ್ಯಾಚ್​ಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತದೆ.

ಸಾಮಾನ್ಯವಾಗಿ ದ್ವಿಪಕ್ಷೀಯ ಸರಣಿಗಳಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಆದರೆ, ಈ ಬಾರಿ ಕ್ರಿಕೆಟ್ ಅಭಿಮಾನಿಗಳ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ ಬಿಸಿಸಿಐ  ಮತ್ತು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗಳು ಸರಣಿಯನ್ನು 5 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.

ವಿಶೇಷ ಎಂದರೆ ಈ ದಶಕದಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ 5 ಪಂದ್ಯಗಳ ಏಕದಿನ ಸರಣಿ ಆಡಿದ್ದು 7 ವರ್ಷಗಳ ಹಿಂದೆ. ಅಂದರೆ ಮಾರ್ಚ್ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಿತ್ತು.

ಇದಾದ ಬಳಿಕ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿರಲಿಲ್ಲ. ಇದೀಗ ಜಾಗತಿಕ ಬೇಡಿಕೆಯನ್ನು ಪರಿಗಣಿಸಿ 2 ಪಂದ್ಯಗಳನ್ನು ಹೆಚ್ಚಿಸಿರುವುದಾಗಿ ಬಿಸಿಸಿಐ ಹೇಳಿಕೊಂಡಿದೆ.

ಪಂದ್ಯಗಳ ಹೆಚ್ಚಳಕ್ಕೆ ಅಸಲಿ ಕಾರಣವೇನು?

ಈ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕೊನೆಯ ನ್ಯೂಝಿಲೆಂಡ್ ಪ್ರವಾಸವಾಗಿದೆ. ಹೀಗಾಗಿ ಅದರ ಸಂಪೂರ್ಣ ಲಾಭ ಪಡೆಯಲು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅಂದರೆ ಅಲ್ಲಿನ ಕ್ರಿಕೆಟ್ ಮಂಡಳಿ, ಪ್ರಾಯೋಜಕರು ಮತ್ತು ಪ್ರಸಾರಕರು  ಹೆಚ್ಚಿನ ಲಾಭ ಗಳಿಸಲು ಈ ಹೆಚ್ಚುವರಿ ಪಂದ್ಯಗಳನ್ನು ಕೇಳಿ ಪಡೆದಿದ್ದಾರೆ.

ಇದರಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನ್ಯೂಝಿಲೆಂಡ್​ನಲ್ಲಿ 5 ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುತ್ತಿರುವುದರಿಂದ ಪ್ರಾಯೋಜಕತ್ವ ಮತ್ತು ಪ್ರೇಕ್ಷಕರಿಂದ ಉತ್ತಮ ಆದಾಯ ಗಳಿಸಬಹುದು. ಇದನ್ನೇ ಮನಗಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ಬಿಸಿಸಿಐ ಜೊತೆ ಮಾತುಕತೆ ನಡೆಸಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ನ್ಯೂಝಿಲೆಂಡ್ vs ಭಾರತ ವೇಳಾಪಟ್ಟಿ

  • ಟಿ20 ಸರಣಿ ವೇಳಾಪಟ್ಟಿ
  • ಮೊದಲ ಟಿ20 ಪಂದ್ಯ – ಅಕ್ಟೋಬರ್ 22, ಕ್ರೈಸ್ಟ್‌ಚರ್ಚ್
  • 2ನೇ ಟಿ20 ಪಂದ್ಯ – ಅಕ್ಟೋಬರ್ 24, ಕ್ರೈಸ್ಟ್‌ಚರ್ಚ್
  • 3ನೇ ಟಿ20 ಪಂದ್ಯ – 27 ಅಕ್ಟೋಬರ್, ವೆಲ್ಲಿಂಗ್ಟನ್
  • 4ನೇ ಟಿ20 ಪಂದ್ಯ – 30 ಅಕ್ಟೋಬರ್, ಆಕ್ಲೆಂಡ್
  • 5ನೇ ಟಿ20 ಪಂದ್ಯ – ನವೆಂಬರ್ 1, ಹ್ಯಾಮಿಲ್ಟನ್
  • ಏಕದಿನ ಸರಣಿ ವೇಳಾಪಟ್ಟಿ
  • ಮೊದಲ ಏಕದಿನ ಪಂದ್ಯ – 4 ನವೆಂಬರ್, ಆಕ್ಲೆಂಡ್
  • 2ನೇ ಏಕದಿನ ಪಂದ್ಯ – ನವೆಂಬರ್ 7, ವೆಲ್ಲಿಂಗ್ಟನ್
  • 3ನೇ ಏಕದಿನ ಪಂದ್ಯ – ನವೆಂಬರ್ 10, ಹ್ಯಾಮಿಲ್ಟನ್
  • 4ನೇ ಏಕದಿನ ಪಂದ್ಯ – 13 ನವೆಂಬರ್, ಮೌಂಟ್ ಮೌಂಗನುಯಿ
  • 5ನೇ ಏಕದಿನ ಪಂದ್ಯ – 15 ನವೆಂಬರ್, ಮೌಂಟ್ ಮೌಂಗನುಯಿ
  • ಟೆಸ್ಟ್ ಸರಣಿ ವೇಳಾಪಟ್ಟಿ
  • ಮೊದಲ ಟೆಸ್ಟ್ – ನವೆಂಬರ್ 19-23, ವೆಲ್ಲಿಂಗ್ಟನ್
  • ಎರಡನೇ ಟೆಸ್ಟ್ – 27 ನವೆಂಬರ್-1 ಡಿಸೆಂಬರ್ 2026, ಕ್ರೈಸ್ಟ್‌ಚರ್ಚ್

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ನ್ಯೂಝಿಲೆಂಡ್ ವಿರುದ್ಧದ ಸರಣಿ ಡಿಸೆಂಬರ್ 1, 2026 ರಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಭಾರತ ತಂಡವು ಸ್ವದೇಶಕ್ಕೆ ಮರಳಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿಯನ್ನು ಆಡಲಿದೆ.

Published On – 9:36 am, Wed, 3 June 26

Source link

ಮದುವೆ ಮಂಟಪದಲ್ಲಿ ಡ್ಯಾನ್ಸ್​ ಬಿಟ್ಟು ಪಂಜ ಕುಸ್ತಿಗಿಳಿದ ವಧು-ವರ – Kannada News

ನವದೆಹಲಿ, ಜೂನ್ 03: ಸಾಮಾನ್ಯವಾಗಿ ಮದುವೆ(Marriage)ಮಂಟಪದಲ್ಲಿ ವಧು-ವರರು ನಾಚಿಕೆಯಿಂದ ನಿಂತಿರುವುದನ್ನು ಅಥವಾ ರೋಮ್ಯಾಂಟಿಕ್ ಆಗಿ ನೃತ್ಯ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವಧು ಇವೆಲ್ಲವನ್ನೂ ಬದಿಗಿಟ್ಟು, ವರನಿಗೆ ನೇರವಾಗಿ ಪಂಜ ಕುಸ್ತಿ ಸವಾಲು ಹಾಕಿ ಸಖತ್ ಮನರಂಜನೆ ನೀಡಿದ್ದಾಳೆ.

ಗುಲಾಬಿ ಬಣ್ಣದ ಮದುವೆಯ ಲೆಹೆಂಗಾ ಧರಿಸಿದ್ದ ವಧು, ಮಂಟಪದ ಮಧ್ಯದಲ್ಲಿದ್ದ ಟೇಬಲ್ ಮೇಲಿಟ್ಟು ವರನಿಗೆ ಸವಾಲು ಹಾಕಿದಳು. ನನ್ನೊಂದಿಗೆ ಸ್ಪರ್ಧಿಸಲು ಹುಡುಗಿಯರನ್ನಲ್ಲ, ಹುಡುಗರನ್ನು ಕರೆತನ್ನಿ”ಎಂದು ಆತ್ಮವಿಶ್ವಾಸದಿಂದ ಕೂಗಿದ ವಧುವಿನ ದಿಟ್ಟತನಕ್ಕೆ ನೆರೆದಿದ್ದ ಅತಿಥಿಗಳು ಆಶ್ಚರ್ಯಚಕಿತರಾದರು.

ಕೆಂಪು ಶೆರ್ವಾನಿ ಧರಿಸಿದ್ದ ವರ ಆರಂಭದಲ್ಲಿ ಮುಗುಳ್ನಗುತ್ತಲೇ ಪಂದ್ಯಕ್ಕೆ ಸಿದ್ಧನಾದನಾದರೂ, ಕುಸ್ತಿ ಆರಂಭವಾಗುತ್ತಿದ್ದಂತೆ ವಧುವಿನ ಬಲಕ್ಕೆ ಬೆಚ್ಚಿಬಿದ್ದಿದ್ದಾನೆ. ವಧು ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ವರನ ಕೈಯನ್ನು ಕೆಳಕ್ಕೆ ಒತ್ತಿ, ಅಂತಿಮವಾಗಿ ಪಂದ್ಯವನ್ನು ಗೆದ್ದಿದ್ದಾಳೆ. ಇದನ್ನು ನೋಡುತ್ತಿದ್ದ ಕ್ಯಾಮೆರಾಮನ್ ಹಾಗೂ ನೆರೆದಿದ್ದ ಸಂಬಂಧಿಕರು ನಗುವಿನ ಕಡಲಲ್ಲಿ ತೇಲಿದರು.

ವಿಡಿಯೋ

ನೆಟ್ಟಿಗರ  ಕಮೆಂಟ್
ಭಾರತದ ಸಾಂಪ್ರದಾಯಿಕ ವಿವಾಹಗಳ ಚೌಕಟ್ಟಿನಿಂದ ಸ್ವಲ್ಪ ಹೊರಬಂದು ಹೊಸ ಯುಗದ ವಧುವಿನಂತೆ ಸದ್ದು ಮಾಡಿರುವ ಈಕೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಧೂಳೆಬ್ಬಿಸುತ್ತಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ವರನ ಕಾಲೆಳೆಯುತ್ತಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮನೆಯಲ್ಲಿ ಇನ್ಮುಂದೆ ವಧುವಿನದ್ದೇ ಆಡಳಿತ, ಆಕೆಯ ಧೈರ್ಯ ಮೆಚ್ಚಲೇಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. RJ Sagar Meghani ಅವರು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಯಾರಿಗೂ ಯಾವುದೇ ಹಾನಿಯಾಗದೆ, ಮದುವೆಯ ಸಂಭ್ರಮವನ್ನು ಮತ್ತಷ್ಟು ರಂಗಾಗಿಸಿದ ಈ ಮೋಜಿನ ವಿಡಿಯೋ ಸದ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

World Bicycle Day 2026: ಸೈಕಲ್‌ ಸವಾರಿ ಪರಿಸರ, ನಮ್ಮ ಆರೋಗ್ಯ ಎರಡಕ್ಕೂ ಒಳ್ಳೆಯದು – Kannada News

ಸೈಕಲ್‌ (Bicycle) ಕೈಗೆಟಕುವ, ಆರೋಗ್ಯದಾಯಕ  ಹಾಗೂ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಹಿಂದೆಲ್ಲಾ ಜನ ಓಡಾಟಕ್ಕೆ ಸೈಕಲ್‌ಗಳನ್ನೇ ಬಳಸುತ್ತಿದ್ದರು. ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಸೈಕಲ್‌ ಬಳಕೆ ತೀರಾ ಕಡಿಮೆಯಾಗಿದೆ. ಪ್ರತಿಷ್ಠೆಯ ದೃಷ್ಟಿಯಿಂದ ಹಾಗೂ ಸಮಯ ಉಳಿಸಲು ಜನರು ಸೈಕಲ್ ಬಳಸುವುದನ್ನು ಬಿಟ್ಟು ಸ್ಕೂಟರ್, ಬೈಕ್ ಮತ್ತು ಕಾರುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ.‌ ಹೀಗೆ ವಾಹನಗಳ ಬಳಕೆ ಹೆಚ್ಚಾದಂತೆ ಪರಿಸರ ಕೂಡ ಮಾಲಿನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸೈಕಲ್‌ ಸವಾರಿ ಮಾಡಲು ಜನರನ್ನು ಪ್ರೋತ್ಸಾಹಿಸಲು, ಸೈಕ್ಲಿಂಗ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ಜೂನ್‌ 3 ರಂದು ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ಬೈಸಿಕಲ್ ದಿನದ ಇತಿಹಾಸವೇನು?

ದ್ವಿಚಕ್ರ ವಾಹನ ಹಾಗೂ ಕಾರುಗಳ ಬಳಕೆಯಿಂದಾಗಿ, ಸೈಕಲ್‌ಗಳ ಬಳಕೆ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿತು. ಅಂತಹ ಪರಿಸ್ಥಿತಿಯಲ್ಲಿ, ಬೈಸಿಕಲ್ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅಮೆರಿಕದ ಪ್ರಾಧ್ಯಾಪಕರೊಬ್ಬರು ವಿಶ್ವ ಬೈಸಿಕಲ್ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮುಂದಿಟ್ಟರು. ಅಮೆರಿಕದ ಮಾಂಟ್ಗೊಮೆರಿ ಕಾಲೇಜಿನ ಪ್ರಾಧ್ಯಾಪಕ ಲೆಸ್ಜೆಕ್ ಸಿಬಿಲ್ಸ್ ಅವರು ಒಂದು  ಅರ್ಜಿಯನ್ನು ಸಲ್ಲಿಸುವ ಮೂಲಕ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲು ಪ್ರಸ್ತಾಪಿಸಿದ್ದರು. ನಂತರ ವಿಶ್ವ ಸಂಸ್ಥೆಯ  ಸಾಮಾನ್ಯ ಸಭೆಯು ಈ ದಿನದ ಆಚರಣೆಗೆ ಗ್ರೀನ್‌ ಸಿಗ್ನಲ್‌ ನೀಡಿತು. ಬಳಿಕ ಜೂನ್ 3, 2018 ರಂದು ಮೊದಲ ಬಾರಿಗೆ ವಿಶ್ವ ಸೈಕಲ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಬೈಸಿಕಲ್ ದಿನದ ಮಹತ್ವವೇನು?

  • ಸೈಕಲ್‌ನ ಆರೋಗ್ಯ ಪ್ರಯೋಜನಗಳು ಹಾಗೂ ಸೈಕಲ್‌ ಬಳಕೆಯಿಂದ ಪರಿಸರಕ್ಕಾಗುವ ಲಾಭಗಳ ಬಗ್ಗೆ ತಿಳಿಸಲೆಂದೇ ಜಗತ್ತಿನಾದ್ಯಂತ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತದೆ.
  • ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಹೆಚ್ಚು ಹೆಚ್ಚು ಸೈಕಲ್‌ ಬಳಸಲು ಪ್ರೋತ್ಸಾಹಿಸುವುದು ವಿಶ್ವ ಬೈಸಿಕಲ್ ದಿನದ ಉದ್ದೇಶವಾಗಿದೆ.
  • ಸೈಕ್ಲಿಂಗ್ ಆರೋಗ್ಯಕರ, ಸುಸ್ಥಿರ ಮತ್ತು ಕೈಗೆಟುಕುವ ಸಾರಿಗೆ ವಿಧಾನವಾಗಿದೆ. ಇದು ದೈಹಿಕ ಸದೃಢತೆಯನ್ನು ಸುಧಾರಿಸುತ್ತದೆ, ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಸೈಕ್ಲಿಂಗ್‌ನ ಈ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ:  ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ

ಸೈಕ್ಲಿಂಗ್‌ನ ಆರೋಗ್ಯ ಪ್ರಯೋಜನಗಳೇನು?

  • ಸೈಕ್ಲಿಂಗ್ ಹೃದಯ ಮತ್ತು ಶ್ವಾಸಕೋಶಗಳನ್ನು ಬಲಪಡಿಸುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಸೈಕ್ಲಿಂಗ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ಕ್ಯಾಲೊರಿಗಳನ್ನು ಸುಡಲು ಉತ್ತಮ ಮಾರ್ಗವಾಗಿದೆ.
  • ಸೈಕ್ಲಿಂಗ್ ಎಂಡಾರ್ಫಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸೈಕ್ಲಿಂಗ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
  • ಸೈಕ್ಲಿಂಗ್ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ಉತ್ತಮ ವ್ಯಾಯಾಮವಾಗಿದ್ದು, ಇದು ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
  • ಇದು ದೇಹದ ಸ್ನಾಯುಗಳನ್ನು ಆರೋಗ್ಯಕರ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ. ಸೈಕ್ಲಿಂಗ್ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ಗೆ ಹೆದರಿದ ವರುಣ್ ಧವನ್ ಸಿನಿಮಾ? ಮೊದಲ ದಿನವೇ ಟಿಕೆಟ್​ ಮೇಲೆ ಶೆ.50 ಆಫರ್ – Kannada News

ಬಾಲಿವುಡ್ ಅಂಗಳದಲ್ಲಿ ಈಗ ಹೊಸದೊಂದು ಆಸಕ್ತಿದಾಯಕ ಬೆಳವಣಿಗೆ ನಡೆದಿದೆ. ಈ ಶುಕ್ರವಾರ (ಜೂನ್ 5) ಬಿಡುಗಡೆಯಾಗಲಿರುವ ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡ ಭರ್ಜರಿ ಆಫರ್ ಒಂದನ್ನು ಘೋಷಿಸಿದೆ. ಸಿನಿಮಾದ ಮೊದಲ ದಿನದಂದೇ ಟಿಕೆಟ್ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದ ಬಳಿಕ ಆಫರ್ ನೀಡುವುದು ಸಾಮಾನ್ಯ. ಆದರೆ, ವರುಣ್ ಧವನ್ ಸಿನಿಮಾ ಬೇರೆಯದೇ ರೀತಿಯ ತಂತ್ರ ಹೂಡಿದೆ

ಈ ಆಫರ್ ಅಡಿಯಲ್ಲಿ ಜೂನ್ 5ರಂದು ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ಕನಿಷ್ಠ ಎರಡು ಟಿಕೆಟ್ ಬುಕ್ ಮಾಡುವವರಿಗೆ, 200 ರೂಪಾಯಿವರೆಗಿನ ಟಿಕೆಟ್‌ಗಳ ಮೇಲೆ 50% ಡಿಸ್ಕೌಂಟ್ ಸಿಗಲಿದೆ. ಇತ್ತೀಚೆಗಷ್ಟೇ ಕರಣ್ ಜೋಹರ್ ಅವರ ‘ಚಾಂದ್ ಮೇರಾ ದಿಲ್’ ಚಿತ್ರಕ್ಕೂ ಇಂತಹುದೇ ಆಫರ್ ನೀಡಲಾಗಿತ್ತು.

‘ಪೆದ್ದಿ’ ಕ್ರೇಜ್‌ಗೆ ಬಾಲಿವುಡ್ ಬೆದರಿತಾ?

ಚಿತ್ರರಂಗದ ವಿಶ್ಲೇಷಕರ ಪ್ರಕಾರ, ಬಾಲಿವುಡ್ ಮೇಕರ್ಸ್ ಈ ರೀತಿ ಮೊದಲ ದಿನವೇ ಭಾರಿ ರಿಯಾಯಿತಿ ನೀಡುತ್ತಿರುವುದರ ಹಿಂದೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದ ಅಲೆ ಎದ್ದುಕಾಣುತ್ತಿದೆ. ‘ಪೆದ್ದಿ’ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿದ್ದು, ಹಿಂದಿಯಲ್ಲೂ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ‘ಆರ್​​ಆರ್​​ಆರ್​’ ಚಿತ್ರದ ಸಕ್ಸಸ್ ನಂತರ ಉತ್ತರ ಭಾರತದ ಮಾರ್ಕೆಟ್‌ನಲ್ಲಿ ರಾಮ್ ಚರಣ್ ಅವರಿಗೆ ಇರುವ ಕ್ರೇಜ್ ಮತ್ತು ಖ್ಯಾತಿ ಅಗಾಧವಾಗಿದೆ. ಬಾಲಿವುಡ್‌ನ ಜನಪ್ರಿಯ ನಟಿ ಜಾನ್ವಿ ಕಪೂರ್ ‘ಪೆದ್ದಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಹಿಂದಿ ಬೆಲ್ಟ್‌ನಲ್ಲಿ ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ತಂದುಕೊಟ್ಟಿದೆ.

ಇದನ್ನೂ ಓದಿ: ಡೈಪರ್ ಚೇಂಜ್ ಮಾಡೋದು ಅಂದ್ರೆ ಆಗಲ್ಲ, ಅಲ್ಲಿಂದ ಜಾರಿಕೊಳ್ತೀನಿ; ರಾಮ್ ಚರಣ್

ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಕಾಂಬಿನೇಷನ್‌ನ ‘ಪೆದ್ದಿ’ ಚಿತ್ರವು ಹಿಂದಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ, ಸೌತ್ ಸಿನಿಮಾದ ಈ ಬಿರುಗಾಳಿಗೆ ಮುನ್ನವೇ ತಮ್ಮ ಚಿತ್ರಕ್ಕೆ ಗರಿಷ್ಠ ಮಟ್ಟದ ಓಪನಿಂಗ್ ಕಲೆಕ್ಷನ್ ಹಾಗೂ ಪ್ರೇಕ್ಷಕರನ್ನು ಸೆಳೆಯಲು ವರುಣ್ ಧವನ್ ಚಿತ್ರತಂಡ ಇಂತಹ ಆಫರ್ ಮೊರೆ ಹೋಗಿದೆ ಎನ್ನಲಾಗುತ್ತಿದೆ. ‘ಟಿಪ್ಸ್ ಫಿಲ್ಮ್ಸ್’ ನಿರ್ಮಿಸಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ. ಡೇವಿಡ್ ಧವನ್ ನಿರ್ದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

DK Shivakumar Oath Taking: ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವುದರಿಂದ ಇಡೀ ಬೆಂಗಳೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿಯೋಜಿತ ಸಿಎಂಗೆ ಶುಭ ಕೋರಲು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಬೆಂಬಲಿಗರು ನಗರದ ಬಹುತೇಕ ಕಡೆಗಳಲ್ಲಿ ಬೃಹತ್ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್‌ಗಳನ್ನು ಅಳವಡಿಸಿದ್ದಾರೆ. ವಿಶೇಷವಾಗಿ ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ವ್ಯಾಪ್ತಿಯ ಸುಮನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಬರೋಬ್ಬರಿ 100 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಿಸಿ ಭರ್ಜರಿಯಾಗಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುವ ಹೈಕಮಾಂಡ್ ಹಾಗೂ ವಿವಿಧ ರಾಜ್ಯಗಳ ಗಣ್ಯ ನಾಯಕರನ್ನು ಸ್ವಾಗತಿಸಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಹೆದ್ದಾರಿಯುದ್ದಕ್ಕೂ ಸ್ವಾಗತ ಕೋರುವ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಏರ್‌ಪೋರ್ಟ್ ಟೋಲ್ ಪ್ಲಾಜಾದಿಂದ ಹಿಡಿದು ಸಿಟಿಯವರೆಗಿನ ಹೆದ್ದಾರಿ ಬದಿಯ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ವಿವಿಧ ನಾಯಕರ ಫೋಟೋಗಳಿರುವ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಆದರೆ, ಬಿಗಿ ನಿಯಮಗಳ ನಡುವೆಯೂ ಏರ್‌ಪೋರ್ಟ್ ಹೆದ್ದಾರಿಯಾದ್ಯಂತ ಈ ರೀತಿ ರಾಜಾರೋಷವಾಗಿ ಪ್ಲೆಕ್ಸ್ ಅಳವಡಿಸಿರುವುದಕ್ಕೆ ಸಾರ್ವಜನಿಕ ವಲಯ ಹಾಗೂ ವಾಹನ ಸವಾರರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮರಣ ಹೊಂದುವ ಮುನ್ನ ಅಂತಿಮ ಐದು ನಿಮಿಷ ಹೇಗಿರುತ್ತೆ? ಆಧ್ಯಾತ್ಮಿಕ ವಿಶ್ಲೇಷಣೆ ಇಲ್ಲಿದೆ – Kannada News

“ಜಾತಸ್ಯ ಮರಣಂ ಧ್ರುವಂ” ಎಂಬ ವೇದವಾಕ್ಯದಂತೆ, ಹುಟ್ಟಿದ ಪ್ರತಿಯೊಬ್ಬರಿಗೂ ಮರಣ ನಿಶ್ಚಿತ. ರೋಗರುಜಿನೆಗಳು, ಅಪಘಾತಗಳು ಅಥವಾ ಹೃದಯಾಘಾತದಂತಹ ಕಾರಣಗಳಿಂದ ಮರಣ ಸಂಭವಿಸಬಹುದಾದರೂ, ಈ ಅಂತಿಮ ಕ್ಷಣಗಳಲ್ಲಿ, ವಿಶೇಷವಾಗಿ ಆತ್ಮ ದೇಹವನ್ನು ತ್ಯಜಿಸುವ ಕೊನೆಯ ಐದು ನಿಮಿಷಗಳಲ್ಲಿ ಏನಾಗುತ್ತದೆ ಎಂಬುದು ಆಧ್ಯಾತ್ಮಿಕವಾಗಿ ಮಹತ್ವಪೂರ್ಣವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಾವಿನ ಕೊನೆಯ ಐದು ನಿಮಿಷಗಳಲ್ಲಿ, ದೇಹವು ಹಲವಾರು ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಮೊದಲನೆಯದಾಗಿ, ವ್ಯಕ್ತಿಗೆ ತನ್ನ ಪೂರ್ವಜರು ನೆನಪಾಗುತ್ತಾರೆ. ಈ ದೇಹ ಎಲ್ಲಿಂದ ಬಂತು, ಹಿಂದಿನವರು ಯಾರು ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಇದರ ಜೊತೆಗೆ, ನಮ್ಮ ಪಂಚೇಂದ್ರಿಯಗಳು – ಕಣ್ಣು, ಮೂಗು, ಕಿವಿ, ಬಾಯಿ – ಒಂದೊಂದಾಗಿ ಸ್ಥಗಿತಗೊಳ್ಳಲು ಪ್ರಾರಂಭಿಸುತ್ತವೆ. ಕಣ್ಣುಗಳು ಮಂಪರಾಗುತ್ತವೆ, ಯಾರು ಕಾಣಿಸುವುದಿಲ್ಲ. ಕಿವಿಗಳು ಧ್ವನಿಗಳನ್ನು ಗ್ರಹಿಸುವುದಿಲ್ಲ, ಮತ್ತು ವ್ಯಕ್ತಿಯು ಮಾತನಾಡಲು ಅಥವಾ ಉಸಿರಾಡಲು ಕಷ್ಟಪಡುತ್ತಾನೆ. ಇದು ಮೃತ್ಯು ಸಮೀಪಿಸುತ್ತಿದೆ ಎಂಬುದರ ಸೂಚನೆಯಾಗಿದೆ.

ಗರುಡ ಪುರಾಣವು ಸಾವಿನ ಪಯಣವನ್ನು  ಆತ್ಮದ ವರ್ಗಾವಣೆ ಎಂದು ವಿವರಿಸುತ್ತದೆ. ಅಂದರೆ, ಒಂದು ದೇಹದಿಂದ ಆತ್ಮ ಇನ್ನೊಂದು ದೇಹಕ್ಕೆ ಸಾಗಲು ಸಿದ್ಧವಾಗುತ್ತದೆ. ಈ ಪ್ರಕ್ರಿಯೆಯು ಕೊನೆಯ ಐದು ನಿಮಿಷಗಳಲ್ಲಿ ತೀವ್ರಗೊಳ್ಳುತ್ತದೆ. ದೇಹವು ಆ ಕ್ಷಣದಲ್ಲಿ ಒದ್ದಾಡಬಹುದು, ಆದರೆ ಪುಣ್ಯವಂತರಿಗೆ ಮತ್ತು ಸದಾ ಒಳ್ಳೆಯ ಕಾರ್ಯಗಳನ್ನು ಮಾಡಿದವರಿಗೆ ಈ ತೊಂದರೆಗಳು ಇರುವುದಿಲ್ಲ. ಅಂತಹವರು ನಗುನಗುತ್ತಲೇ, ಶಾಂತಿಯುತವಾಗಿ ಜೀವವನ್ನು ತ್ಯಜಿಸುತ್ತಾರೆ. ಅವರ ಮುಖದಲ್ಲಿ ಒಂದು ವಿಶೇಷವಾದ ಕಾಂತಿ ಮೂಡುತ್ತದೆ, ಇದು ಅವರ ಆತ್ಮದ ಶಾಂತಿಯುತ ನಿರ್ಗಮನದ ಸಂಕೇತವಾಗಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಈ ಅಂತಿಮ ಕ್ಷಣಗಳಲ್ಲಿ ವ್ಯಕ್ತಿ ಅನುಭವಿಸುವ ಭಾವನೆಗಳು ಅವರ ಜೀವನದಲ್ಲಿ ಮಾಡಿದ ಕರ್ಮಗಳನ್ನು ಅವಲಂಬಿಸಿವೆ. ದುಷ್ಟ ವ್ಯಕ್ತಿಗಳಿಗೆ, ತಪ್ಪು ಕಾರ್ಯಗಳನ್ನು ಮಾಡಿದವರಿಗೆ ಭಯ ಮತ್ತು ಆತಂಕ ಆವರಿಸಿಕೊಳ್ಳುತ್ತದೆ. ಆದರೆ, ಸದ್ಗುಣ ಸಂಪನ್ನರಿಗೆ, ಒಳ್ಳೆಯ ಕೆಲಸ ಮಾಡಿದವರಿಗೆ ಸಂತೋಷ, ತೃಪ್ತಿ ಮತ್ತು ಶಾಂತಿ ಇರುತ್ತದೆ. ಲೌಕಿಕ ಆಸ್ತಿ, ಹಣಕಾಸು ಅಥವಾ ಸಂಬಂಧಗಳ ಮೇಲಿನ ಹಿಡಿತ ಈ ಸಮಯದಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಆತ್ಮವು ಕೇವಲ ಮೂಗು ಅಥವಾ ಬಾಯಿಯಿಂದ ಹೊರಹೋಗದೆ, ದೇಹದಲ್ಲಿರುವ ನವದ್ವಾರಗಳ ಮೂಲಕ ಹೊರಡುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.

ಇಂತಹ ಕಠಿಣ ಕ್ಷಣಗಳಲ್ಲಿ ಉತ್ತಮ ಅನುಭವವನ್ನು ಪಡೆಯಲು, ಜೀವನದಲ್ಲಿ ಧರ್ಮದ ಹಾದಿಯಲ್ಲಿ ನಡೆಯುವುದು ಅತಿ ಮುಖ್ಯ. ದಾನ-ಧರ್ಮ ಮಾಡುವುದು, ವೃದ್ಧರಿಗೆ, ಮಕ್ಕಳನ್ನು ಹಾಗೂ ಅಶಕ್ತರಿಗೆ ಸಹಾಯ ಮಾಡುವುದು, ಮತ್ತು ಸದಾ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವುದು ಭಗವಂತನ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ. ಅಧರ್ಮದ ಜೀವನ ನಡೆಸಿದಾಗ, ಕೊನೆಯ ಐದು ನಿಮಿಷಗಳು ತುಂಬಾ ಕಷ್ಟಕರವಾಗುತ್ತವೆ. ನಮ್ಮ ಇಷ್ಟದೇವತೆ ಅಥವಾ ಕುಲದೇವತೆಯನ್ನು ಆ ಕ್ಷಣದಲ್ಲಿ ಸ್ಮರಿಸುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ದಾಸರು ಹೇಳಿದಂತೆ, “ಇನ್ನೂ ಕಾಲ ಕೂಡಿ ಬಂದಿಲ್ಲ, ಈಗಲಾದರೂ ಎಚ್ಚರಿಕೆಯಿಂದಿರು” ಎಂಬುದು ಮರಣದ ಅಂತಿಮ ಕ್ಷಣಗಳಿಗಾಗಿ ಸಿದ್ಧತೆ ಮಾಡಿಕೊಳ್ಳಲು ನಮಗೆ ನೀಡುವ ಸಂದೇಶ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಪ್ರಮಾಣವಚನ: ಖಾಕಿ ಭದ್ರಕೋಟೆಯಾದ ಲೋಕಭವನ! 2000ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ನಿಯೋಜನೆ – Kannada News

ಲೋಕಭವನ ಸುತ್ತ ಬ್ಯಾರಿಕೇಡ್ ಹಾಕಿ ಭದ್ರತಾ ಸಿದ್ಧತೆ ಮಾಡಿರುವುದುImage Credit source: tv9

ಬೆಂಗಳೂರು, ಜೂನ್ 3: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಇಂದು ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಸಮಾರಂಭ ನಡೆಯಲಿರುವ ಲೋಕಭವನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಇಡೀ ಜಾಗವನ್ನು ವಿವಿಧ ಸೆಕ್ಟರ್‌ಗಳಾಗಿ ವಿಂಗಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮುಖ್ಯಾಂಶಗಳು

  • ಕಮಿಷನರ್ ಸೀಮಂತ್ ಕುಮಾರ್ ನೇತೃತ್ವದಲ್ಲಿ ಭದ್ರತೆ.
  • ಭದ್ರತೆಗೆ 3 ಜಂಟಿ ಆಯುಕ್ತರು, 20 ಡಿಸಿಪಿಗಳು ಸೇರಿದಂತೆ 2,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ.
  • ಲೋಕಭವನದ ಆವರಣಕ್ಕೆ ವೆಹಿಕಲ್ ಪಾಸ್ ಇದ್ದ ಗಣ್ಯರಿಗೆ ಮಾತ್ರ ಪ್ರವೇಶ.

ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಭದ್ರತೆ ಹೇಗಿದೆ?

ಈ ಐತಿಹಾಸಿಕ ಸಮಾರಂಭದ ಯಶಸ್ವಿ ನಿರ್ವಹಣೆಗಾಗಿ ಬೆಂಗಳೂರು ನಗರದ ಪೊಲೀಸರ ಜೊತೆಗೆ ಬೇರೆ ಜಿಲ್ಲೆಗಳಿಂದಲೂ ಕೆಲವು ದಕ್ಷ ಅಧಿಕಾರಿಗಳನ್ನು ಕಮಿಷನರ್ ಕರೆಸಿಕೊಳ್ಳಲಾಗಿದೆ. ಬಂದೋಬಸ್ತ್‌ಗಾಗಿ 3 ಮಂದಿ ಜಂಟಿ ಪೊಲೀಸ್ ಆಯುಕ್ತರು, 20ಕ್ಕೂ ಹೆಚ್ಚು ಡಿಸಿಪಿಗಳು (DCP), 50ಕ್ಕೂ ಹೆಚ್ಚು ಎಸಿಪಿಗಳು (ACP), 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 300ಕ್ಕೂ ಹೆಚ್ಚು ಪಿಎಸ್‌ಐಗಳು (PSI), 700ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳು ಹಾಗೂ ಕೆಎಸ್‌ಆರ್‌ಪಿ (KSRP) ತುಕಡಿಗಳು ಸೇರಿದಂತೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಯ ಉಸ್ತುವಾರಿಗಾಗಿ ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ ದರ್ಜೆಯ ಅಧಿಕಾರಿಗೆ ನೇತೃತ್ವದ ಜವಾಬ್ದಾರಿ ನೀಡಲಾಗಿದೆ.

ವಿವಿಐಪಿಗಳ ವಾಹನ ಸಂಚಾರಕ್ಕೆ ಕಠಿಣ ನಿಯಮ

ಲೋಕಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೇವಲ ವೆಹಿಕಲ್ ಪಾಸ್ (ವಾಹನ ಪಾಸ್) ಹೊಂದಿರುವ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರವೇ ನೇರವಾಗಿ ಆವರಣದ ಒಳಗಡೆ ವಾಹನ ಚಾಲನೆ ಮಾಡಲು ಅನುಮತಿ ನೀಡಲಾಗಿದೆ. ಗಣ್ಯರೆಲ್ಲರೂ ಕಾರ್ಯಕ್ರಮ ಆರಂಭವಾಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿಯೇ ಆಸನಗಳನ್ನು ಅಲಂಕರಿಸುವಂತೆ ಸೂಚಿಸಲಾಗಿದೆ. ಇನ್ನು ವಾಹನ ಪಾಸ್ ಇಲ್ಲದೆ ಆಗಮಿಸುವ ಗಣ್ಯರ ವಾಹನಗಳಿಗೆ ತಿಮ್ಮಯ್ಯ ಸರ್ಕಲ್ ಬಳಿಯೇ ನಿರ್ಬಂಧ ವಿಧಿಸಲಾಗಿದ್ದು, ಅಲ್ಲಿಂದ ಮುಂದೆ ಯಾವುದೇ ಖಾಸಗಿ ವಾಹನಗಳ ಪ್ರವೇಶ ಇರುವುದಿಲ್ಲ.

ಇದನ್ನೂ ಓದಿ: ಇಂದಿನಿಂದ ಡಿಕೆ ಶಿವಕುಮಾರ್ ಸಿಎಂ: ಬೆಂಗಳೂರು ಟನಲ್ ರೋಡ್ ಯೋಜನೆಗೆ ಸಿಗುತ್ತಾ ಗ್ರೀನ್ ಸಿಗ್ನಲ್? ಹೆಚ್ಚಿದ ಕುತೂಹಲ

ಪಾಸ್ ಇಲ್ಲದ ಗಣ್ಯರನ್ನು ತಿಮ್ಮಯ್ಯ ಸರ್ಕಲ್‌ನಿಂದ ಲೋಕಭವನದ ಮುಖ್ಯ ವೇದಿಕೆಯವರೆಗೆ ಸುರಕ್ಷಿತವಾಗಿ ಕರೆತರಲು ವಿಶೇಷವಾಗಿ 6 ಸೀಟುಗಳ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಗಾಲ್ಫ್ ಕಾರ್ಟ್ (Golf Cart) ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪಾಸ್ ಪಡೆದ ಗಣ್ಯರ ಅಧಿಕೃತ ಪಟ್ಟಿಯನ್ನು ಪೊಲೀಸರು ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ – Kannada News

ಕುವೈತ್, ಜೂನ್ 03: ಕೆಶ್ಮ್​ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರವಾಗಿ ಇರಾನ್(Iran) ಕುವೈತ್ ಹಾಗೂ ಬಹ್ರೇನ್​ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪರ್ಷಿಯನ್ ಕೊಲ್ಲಿ ವಲಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ನಡುವೆಯೇ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಾಗೂ ನಾಗರಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಕುವೈತ್ ಮತ್ತು ಬಹ್ರೇನ್ ಸರ್ಕಾರಗಳು ಅತ್ಯಂತ ವ್ಯವಸ್ಥಿತ ಹಾಗೂ ಯಶಸ್ವಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ.

ಬುಧವಾರ ಮುಂಜಾನೆ ಇರಾನ್‌ನ ಕೆಶ್ಮ್ ದ್ವೀಪದ ಘಟನೆಗೆ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್‌ನ ಸಶಸ್ತ್ರ ಪಡೆಗಳು (IRIB) ಹೇಳಿಕೊಂಡ ಬೆನ್ನಲ್ಲೇ, ಅಮೆರಿಕ ಸೇನೆಯು ಈ ಎಲ್ಲ ವರದಿಗಳನ್ನು ತಳ್ಳಿ ಹಾಕಿದೆ.

ಅಮೆರಿಕವು ವಾರಾಂತ್ಯದಲ್ಲಿ ಇರಾನ್‌ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದು, ಅದಕ್ಕೆ ಪ್ರತಿಯಾಗಿ ಅಮೆರಿಕದ ನೆಲೆಯೊಂದನ್ನು ಗುರಿಯಾಗಿಸಿಕೊಂಡಿರುವುದಾಗಿ ತೆಹ್ರಾನ್ ಹೇಳಿದೆ. ಇದರಿಂದ ಹೋರ್ಮುಜ್ ಜಲಸಂಧಿಯ ಸುತ್ತ ಒಂದು ವಾರದೊಳಗೆ ಮೂರನೇ ಬಾರಿ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕದ ಕೇಂದ್ರ ಕಮಾಂಡ್, ಅಂತಾರಾಷ್ಟ್ರೀಯ ಜಲಪ್ರದೇಶದ ಮೇಲೆ ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸುವುದನ್ನು ಒಳಗೊಂಡ ಇರಾನ್‌ನ ಕ್ರಮಗಳ ನಂತರ “ಸ್ವಯಂರಕ್ಷಣಾತ್ಮಕ ದಾಳಿಗಳನ್ನು” ನಡೆಸಿರುವುದಾಗಿ ತಿಳಿಸಿದೆ.

ಬುಧವಾರ ಮುಂಜಾನೆ ಕುವೈತ್‌ನಾದ್ಯಂತ ಜೋರಾದ ಸ್ಫೋಟದ ಶಬ್ದಗಳು ಕೇಳಿಬಂದಾಗ ಕುವೈತ್ ಸೇನೆಯು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಕುವೈತ್ ಸೇನೆಯ ಜನರಲ್ ಸ್ಟಾಫ್ ನೀಡಿರುವ ಮಾಹಿತಿ ಪ್ರಕಾರ, ದೇಶದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು (Air Defence Systems) ಅತ್ಯಂತ ಯಶಸ್ವಿಯಾಗಿ ವಾಯುಗಡಿಗೆ ನುಗ್ಗಿದ ಪ್ರತಿಕೂಲ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ತಡೆದು ಹೊಡೆದುರುಳಿಸಿವೆ ಎಂದು ಅಮೆರಿಕ ಹೇಳಿದೆ.

ಮತ್ತಷ್ಟು ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ರಕ್ಷಣಾ ಸಚಿವಾಲಯದ ಅಧಿಕೃತ ವಕ್ತಾರ ಕರ್ನಲ್ ಸೌದ್ ಅಬ್ದುಲಜೀಜ್ ಅಲ್-ಒತೈಬಿ ಅವರು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದು, ವಾಯು ರಕ್ಷಣಾ ಪಡೆಗಳು ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡಿವೆ ಎಂದು ತಿಳಿಸಿದ್ದಾರೆ.

ವಿಡಿಯೋ

ಆಕಾಶದಲ್ಲಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದಾಗ ಬಿದ್ದಿರಬಹುದಾದ ಭಗ್ನಾವಶೇಷಗಳು ಅಥವಾ ಚೂರುಗಳನ್ನು ನಾಗರಿಕರು ಮುಟ್ಟಬಾರದು ಮತ್ತು ಯಾವುದೇ ಅನುಮಾನಾಸ್ಪದ ವಸ್ತು ಕಂಡರೆ ತಕ್ಷಣವೇ ತುರ್ತು ಸೇವೆಗಳ ‘112’ ಹಾಟ್‌ಲೈನ್‌ಗೆ ತಿಳಿಸಬೇಕು ಎಂದು ಸೇನೆ ವಿನಂತಿಸಿದೆ. ಸರ್ಕಾರದ ಈ ತ್ವರಿತ ಸಂವಹನದಿಂದಾಗಿ ಸಾರ್ವಜನಿಕ ವಲಯದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದೆ ಶಾಂತಿ ನೆಲೆಸಿದೆ.

ಇರಾನ್‌ನ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಪಡೆ (IRGC), ದಕ್ಷಿಣ ಇರಾನ್ ಮೇಲಿನ ಹಿಂದಿನ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ಪಡೆಗಳು ಬಳಸುತ್ತಿದ್ದ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿದೆ. ಇದೇ ವೇಳೆ, ಈ ಸಂಘರ್ಷದ ಸಂದರ್ಭದಲ್ಲಿ ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಶತ್ರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆದಿರುವುದಾಗಿ ಕುವೈತ್ ತಿಳಿಸಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಮಾತುಕತೆಗಳು ವಾರಾಂತ್ಯದಲ್ಲಿ ಸ್ಥಗಿತಗೊಂಡ ಸಂದರ್ಭದಲ್ಲೇ ಈ ಇತ್ತೀಚಿನ ದಾಳಿಗಳು ನಡೆದಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version