ಟಾಸ್ ಗೆದ್ದಿದ್ರೆ ಕಥೆನೇ ಬೇರೆ ಇರುತ್ತಿತ್ತು..! – Kannada News | Salman ali agha post match presentation of pak vs sl match

T20 World Cup 2026: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಅಭಿಯಾನ ಅಂತ್ಯವಾಗಿದೆ. ಪಾಕ್ ಪಾಲಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಗೆದ್ದರೂ ನೆಟ್ ರನ್ ರೇಟ್​ನಲ್ಲಿ ಹಿಂದೆ ಉಳಿಯುವ ಮೂಲಕ ಪಾಕಿಸ್ತಾನ್ ತಂಡ ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 212 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು 147 ರನ್​ಗಳಿಗೆ ನಿಯಂತ್ರಿಸಿದ್ದರೆ ಪಾಕಿಸ್ತಾನ್ ತಂಡಕ್ಕೆ ನೆಟ್ ರನ್ ರೇಟ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್​ಗೇರುವ ಅವಕಾಶವಿತ್ತು. ಆದರೆ ಶ್ರೀಲಂಕಾ ಬರೋಬ್ಬರಿ 207 ರನ್​ಗಳಿಸಿ ಕೇವಲ 5 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಅತ್ತ ಈ ಪಂದ್ಯದಲ್ಲಿ ಗೆದ್ದರೂ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಪಂದ್ಯದ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಟಾಸ್ ಸೋತಾಗಲೇ ಇಬ್ಬನಿಯ ಸವಾಲು ಎದುರಾಗಿತ್ತು. ದ್ವಿತೀಯ ಇನಿಂಗ್ಸ್​ ವೇಳೆ ಇಬ್ಬನಿ ಇರುವುದರಿಂದ ಬೌಲಿಂಗ್ ಮಾಡುವುದು ಕಷ್ಟಕರ. ಹೀಗಾಗಿ ಶ್ರೀಲಂಕಾ ತಂಡವನ್ನು 148 ರನ್​ಗಳಿಗೆ ನಿರ್ಬಂಧಿಸುವುದು ಯಾವಾಗಲೂ ಸವಾಲೇ ಆಗಿರುತ್ತದೆ.

ಒಂದು ವೇಳೆ ನಾವು ಟಾಸ್ ಗೆದ್ದಿದ್ದರೆ, ಕಥೆನೇ ಬೇರೆದಾಗಿರುತ್ತಿತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಂಗ್ ಮಾಡಿದ್ದರಿಂದ ಇಬ್ಬನಿಯ ಕಾರಣ ನಮ್ಮ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

ಇನ್ನು ಈ ಬಾರಿಯ ಟೂರ್ನಿಯಲ್ಲಿ  ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ ಎಂಬುದೇ ಸತ್ಯ. ಇದಾಗ್ಯೂ ಸಾಹಿಬ್‌ಝಾದ ಫರ್ಹಾನ್ ಮಾತ್ರ ಅದ್ಭುತ ಪ್ರದರ್ಶನ ನೀಡಿದ್ದರು. ಅವರೊಂದಿಗೆ ಬೇರೊಬ್ಬ ಬ್ಯಾಟರ್​ ಉತ್ತಮ ಸಾಥ್ ನೀಡಿದ್ದಿದ್ದರೆ ಕೆಲ ಪಂದ್ಯಗಳು ನಮ್ಮ ಪರವಾಗುತ್ತಿತ್ತು. ಆದರೆ ನಮ್ಮ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಒಟ್ಟಿನಲ್ಲಿ ಶ್ರೀಲಂಕಾದಲ್ಲಿ ತನ್ನೆಲ್ಲಾ ಪಂದ್ಯಗಳನ್ನಾಡುವ ಮೂಲಕ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನ್ ತಂಡವು ಸೂಪರ್-8 ಸುತ್ತಿನಲ್ಲಿ ಕೇವಲ ಒಂದು ಮ್ಯಾಚ್ ಮಾತ್ರ ಗೆದ್ದು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ವಿಶ್ವಕಪ್​ನಿಂದ ಹೊರಬಿದ್ದಿರುವ ಪಾಕ್ ಪಡೆ ಮಾರ್ಚ್ 2ನೇ ವಾರದಿಂದ ಬಾಂಗ್ಲಾದೇಶ್ ವಿರುದ್ಧ ಸರಣಿ ಆಡಲಿದೆ.

Source link

Lunar Eclipse 2026: ಮಾ.03ರ ಚಂದ್ರಗ್ರಹಣ; ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು? – Kannada News | Holi Full Moon Lunar Eclipse: Chief Priest Somasundara Dikshiths Guidance

ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಹೋಳಿ ಹುಣ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣದ ಕುರಿತು ವಿವರಣೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಸೂರ್ಯಗ್ರಹಣದ ನಂತರ, ಹದಿನೈದು ದಿನಗಳ ಅಂತರದಲ್ಲಿ ಬರುವ ಈ ಚಂದ್ರಗ್ರಹಣವು ಪ್ರಕೃತಿ ಮತ್ತು ಪ್ರಸ್ತುತ ವಿದ್ಯಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅವರು ತಿಳಿಸಿದ್ದಾರೆ.

ಗ್ರಹಣದ ಆರಂಭ ಮತ್ತು ಯುದ್ಧದ ನಡುವೆ ಸಾಮ್ಯತೆಯನ್ನು ಗುರುತಿಸಿದ ಅವರು, ಪ್ರಸ್ತುತ ಜಾಗತಿಕ ಸಂಘರ್ಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಭಾರತ ದೇಶವು ಯಜ್ಞಭೂಮಿ, ಕರ್ಮಭೂಮಿ, ತಪೋಭೂಮಿ, ಜಪಭೂಮಿ ಆಗಿರುವುದರಿಂದ ಯಾವುದೇ ಅವಘಡಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸಿದ್ದಾರೆ. ರಾಜಕೀಯ ವಿಶ್ಲೇಷಣೆಗೆ ಆಸಕ್ತಿ ತೋರದಿದ್ದರೂ, ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಶಾಂತಿ ನೆಲೆಸಲಿ ಎಂದು ಅವರು ಆಶಿಸಿದ್ದಾರೆ. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮತ್ತು ಮಕ್ಕಳು ಮನೆಯಿಂದ ಹೊರಬರಬಾರದು. ಗ್ರಹಣಾನಂತರ ಸ್ನಾನ ಮಾಡಿ, ಶುಚಿತ್ವ ಕಾಪಾಡಿಕೊಂಡು, ಮರುದಿನ ಶಿವನ ದೇವಸ್ಥಾನಕ್ಕೆ ಅಕ್ಕಿ, ಉದ್ದು, ಎಣ್ಣೆ ಅರ್ಪಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Maharashtra Blast: ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು – Kannada News | Major Explosion at Explosives Factory in Nagpur Claims at Least 15 Lives

ನಾಗ್ಪುರ, ಮಾರ್ಚ್ 01: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, 15 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕಲ್ಮೇಶ್ವರ ತಾಲೂಕಿನ ರೌಲ್ಗಾಂವ್ ಬಳಿ ಘಟನೆ ಸಂಭವಿಸಿದೆ. ಸ್ಫೋಟಕಗಳನ್ನು ತಯಾರಿಸುವ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟ ಇದಾಗಿದೆ. ಘಟನೆಯಲ್ಲಿ ಮಹಿಳೆಯರು ಸೇರಿ 15 ಕಾರ್ಮಿಕರು ಸಾವನ್ನಪ್ಪಿದ್ದಾರೆ. 18 ಜನರಿಗೆ ಗಂಭೀರ ಗಾಯ, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆ ಪಾಳಿಗೆ ಕೆಲಸಕ್ಕೆ ಬಂದಿದ್ದ 35 ಕಾರ್ಮಿಕರು ಸ್ಥಳದಲ್ಲಿದ್ದರು.

ಕಟೋಲ್ ತಹಸಿಲ್‌ನ ರೌಲ್ಗಾಂವ್‌ನಲ್ಲಿರುವ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಕರಾದ ಎಸ್‌ಬಿಎಲ್ ಎನರ್ಜಿ ಲಿಮಿಟೆಡ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಕಂಪನಿಯ ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ಬೆಳಗ್ಗೆ 7 ರಿಂದ 7.15 ರ ನಡುವೆ ಈ ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಹೇಳಿಕೆ ನೀಡುವುದಾಗಿ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Lunar Eclipse March 03: ಚಂದ್ರ ಗ್ರಹಣದ ಹಿನ್ನೆಲೆ ಈ ಎಲ್ಲಾ ದೇವಾಲಯಗಳು ಬಂದ್! – Kannada News | March 3 Lunar Eclipse: Karnataka Temple Timings, Pujas and Remedies

ಚಂದ್ರ ಗ್ರಹಣದ ಹಿನ್ನೆಲೆ ಈ ಎಲ್ಲಾ ದೇವಾಲಯಗಳು ಬಂದ್!

ಬೆಂಗಳೂರು, ಮಾರ್ಚ್ 01: ಮಾರ್ಚ್ 3ರಂದು ಸಂಭವಿಸಲಿರುವ ವರ್ಷದ ಮೊದಲ ಹಾಗೂ ಹಿಂದು ಪಂಚಾಂಗದ ಪ್ರಕಾರ ವರ್ಷದ ಕೊನೆಯ ಚಂದ್ರಗ್ರಹಣದ (Lunar Eclipse) ಹಿನ್ನೆಲೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಬದಲಾದ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಜಾತ್ರೆಯ ದಿನವೇ ಚಂದ್ರ ಗ್ರಹಣ

ತುಮಕೂರು ಜಿಲ್ಲೆಯ ದೇವರಾಯನ ದುರ್ಗ ಜಾತ್ರಾ ಮಹೋತ್ಸವದ ದಿನವೇ ಚಂದ್ರಗ್ರಹಣ ಇರುವುದರಿಂದ ದೇವಸ್ಥಾನದ ಮಹಾದ್ವಾರ ಮಧ್ಯಾಹ್ನ 1ರಿಂದ ರಾತ್ರಿ 8:30ರವರೆಗೆ ಬಂದ್ ಆಗಲಿದೆ. ಬೆಳಿಗ್ಗೆ 7:30ರಿಂದ 10:30ರೊಳಗೆ ಪೂಜೆ ನೆರವೇರಿಸಲು ಸೂಚನೆ ನೀಡಲಾಗಿದೆ. ಮಾರ್ಚ್ 3ರ ಬೆಳಗಿನ ಜಾವ 4 ಗಂಟೆಗೆ ಅಭಿಷೇಕ, 5 ಗಂಟೆಗೆ ಅಲಂಕಾರ, 6ರಿಂದ 6:30ರವರೆಗೆ ಯಾತ್ರಾದಾನ, 7 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಕರಿಗಿರಿಯಲ್ಲಿ ಮಂಟಪಮಡಿ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8:30ರಿಂದ 10:30ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದಾವಣಗೆರೆಯ ರಿಂಗ್‌ರಸ್ತೆಯ ಬಳಿಯ ಶಾರದಾ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಗ್ರಹಣದ ಹಿನ್ನೆಲೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಸಂಜೆ 6:33ರಿಂದ 6:47ರವರೆಗೆ ಗ್ರಹಣಕಾಲವಾಗಿದ್ದು, ಅಂದು ದೇವಸ್ಥಾನಗಳು ಬಂದ್ ಆಗಲಿವೆ. ಸಿಂಹ, ವೃಷಭ, ಕನ್ಯಾ, ಮಕರ ರಾಶಿಯವರು ಶಾಂತಿ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದ್ದು, ಗ್ರಹಣ ಮೋಕ್ಷದ ಬಳಿಕ ಹುರುಳಿ, ಅಕ್ಕಿ, ಎಳ್ಳೆಣ್ಣೆ, ಬೆಳ್ಳಿನಾಗ ದಾನಗಳನ್ನು ಮಾಡಲು ಪುರೋಹಿತರು ಸೂಚಿಸಿದ್ದಾರೆ.

ಇದನ್ನೂ ಓದಿ ಚಂದ್ರ ಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

ಇದೇ ವೇಳೆ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12:30ರಿಂದ ಬಂದ್ ಆಗಲಿದೆ. ಸಂಜೆ 7 ಗಂಟೆಯ ಬಳಿಕ ದರ್ಶನಕ್ಕೆ ಅವಕಾಶವಿದ್ದು, ಗ್ರಹಣ ಮೋಕ್ಷದ ನಂತರ ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದು ಅರ್ಚಕ ಶರತ್ ದೀಕ್ಷಿತ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Lunar Eclipse 2026: ಗ್ರಹಣ ಕಾಲದಲ್ಲಿ ಅನುಸರಿಸಬೇಕಾದ ನಿಯಮ ಮತ್ತು ಪರಿಹಾರ ಕ್ರಮಗಳ ಮಾಹಿತಿ ಇಲ್ಲಿದೆ – Kannada News | Holi Purnima Lunar Eclipse 2026: Astrological Impact, Rituals and Post Grahan Remedies

ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಹೋಳಿ ಹುಣ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣದ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸೂರ್ಯಗ್ರಹಣ ಸಂಭವಿಸಿದ ಹದಿನೈದು ದಿನಗಳ ನಂತರ, ಹೋಳಿ ಮಾಸದ ಈ ಪೌರ್ಣಮಿಯಂದು ಬರುವ ಚಂದ್ರಗ್ರಹಣವು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಹಣ ಕಾಲ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಮಾತನಾಡಿದ ದೀಕ್ಷಿತ್ ಅವರು, ಗ್ರಹಣ ಆರಂಭವಾಗುವ ಹೊತ್ತಿಗಾಗಲೇ ಇರಾನ್ ಮತ್ತು ಇರಾಕ್ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವುದನ್ನು ಉಲ್ಲೇಖಿಸಿದರು. ಹೋಳಿ ಹಬ್ಬದಂದು ಬೆಂಕಿಯನ್ನು ನೋಡಿ ಸಮಾಧಾನ ಪಡೆಯುವಂತೆಯೇ, ಯುದ್ಧದ ಕಾವು ಆರಂಭವಾಗಿರುವುದು ದುಃಖಕರ. ಅಗ್ನಿ, ಹೊಗೆ, ಗಲಭೆಗಳು ಹೆಚ್ಚಾಗಿವೆ. ಪ್ರಾಣಿ ಜೀವಿಗಳಿಗೂ ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ, ಭಾರತವು ಯಜ್ಞಭೂಮಿ, ಕರ್ಮಭೂಮಿ, ತಪೋಭೂಮಿ, ಜಪಭೂಮಿ ಆಗಿರುವುದರಿಂದ, ಇಂತಹ ಯಾವುದೇ ಅವಘಡಗಳು ಇಲ್ಲಿ ಸಂಭವಿಸದು.

ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು:

ಗ್ರಹಣದ ನಿಮಿತ್ತ ಅನುಸರಿಸಬೇಕಾದ ನಿಯಮಗಳು ಮತ್ತು ಆಚರಣೆಗಳ ಕುರಿತು ದೀಕ್ಷಿತ್ ಅವರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಮನೆಯಿಂದ ಹೊರಬರದೇ ಒಳಗಿರಬೇಕು. ಮಕ್ಕಳು ಆಟವಾಡಲು ಹೊರಹೋಗುವುದನ್ನು ತಪ್ಪಿಸಬೇಕು. ಇಂತಹ ಸಮಯದಲ್ಲಿ ಅನಾವತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಸಿದ್ದಾರೆ. ಈ ಗ್ರಹಣವು ಭಾರತಕ್ಕೆ ಅಲ್ಪಕಾಲ, ಅಂದರೆ ಕೊನೆಯ ಭಾಗದಲ್ಲಿ ಗೋಚರವಾಗುತ್ತದೆ. ಮಧ್ಯಾಹ್ನ 3:00 ಗಂಟೆಯಿಂದ ಪ್ರಾರಂಭವಾಗಿ ಸಾಯಂಕಾಲ 7:30 ರವರೆಗೆ ಗ್ರಹಣ ಕಾಲವಿರುತ್ತದೆ. ಈ ಅವಧಿಯಲ್ಲಿ ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಮನೆಯಲ್ಲಿಯೇ ಇರಬೇಕು. ದೊಡ್ಡವರು ಮಕ್ಕಳ ಪಕ್ಕದಲ್ಲಿ ಕುಳಿತು ಧ್ಯಾನ, ದೀಪ ಪೂಜೆಗಳನ್ನು ಮಾಡುವುದರಿಂದ ಬಹಳ ವಿಶೇಷ ಫಲ ದೊರೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಗ್ರಹಣದ ನಂತರ ಕೈಗೊಳ್ಳಬೇಕಾದ ಪರಿಹಾರ ಕ್ರಮ:

ಗ್ರಹಣದ ನಂತರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಗ್ರಹಣದ ನಂತರ ಸ್ನಾನ ಮಾಡಿ, ಮನೆಯನ್ನು ಶುಚಿ ಮಾಡಿಕೊಳ್ಳಬೇಕು. ಬುಧವಾರ ಬೆಳಗ್ಗೆ ನಿಮ್ಮ ಪಕ್ಕದಲ್ಲಿರುವ ಯಾವುದೇ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಕ್ಕಿ, ಉದ್ದು ಮತ್ತು ಎಣ್ಣೆಯನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಬೇಕು. ಶಿವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮತ್ತು ಸೇವೆಗಳನ್ನು ಸಲ್ಲಿಸುವುದರ ಮೂಲಕ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಂಬಿಸಿ ಅತ್ಯಾಚಾರವೆಸಗಿ ಬಿಟ್ಟು ಹೋದ ಪ್ರಿಯಕರ, ಸಹಾಯ ಮಾಡುವುದಾಗಿ ಕರೆದೊಯ್ದು ಅತ್ಯಾಚಾರವೆಸಗಿ ಕೊಂದ ಅಪರಿಚಿತ – Kannada News | Odisha Elopement Plan Turns Deadly: Woman Assaulted Twice Before Fatal Fall from Roof

ಒಡಿಶಾ, ಮಾರ್ಚ್​ 01: ಮದುವೆ(Marriage)ಯಾಗುವುದಾಗಿ ನಂಬಿಸಿ ಯುವತಿಯನ್ನು ಕರೆದೊಯ್ದು ಪ್ರಿಯಕರ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಜಗತ್ಸಿಂಗ್​ಪುರದಲ್ಲಿ ನಡೆದಿದೆ. ನಂತರ ಅಪರಿಚಿತ ವ್ಯಕ್ತಿಯೊಬ್ಬ ಸಹಾಯ ಮಾಡುವುದಾಗಿ ಕರೆದೊಯ್ದು ಮತ್ತೆ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಫೆಬ್ರವರಿ 22ರಂದು ಯುವತಿ ಗೆಳೆಯನಿಗಾಗಿ ಮನೆಬಿಟ್ಟು ಬಂದಿದ್ದಳು, ಮದುವೆಯಾಗುವ ಆಸೆ ತೋರಿಸಿ ದೇವಸ್ಥಾನದಲ್ಲಿ ಭೇಟಿಯಾಗೋಣ ಎಂದು ಆಹ್ವಾನಿಸಿದ್ದ, ಅಲ್ಲಿಂದ ಆಕೆ ಗೆಳೆಯನೊಂದಿಗೆ ಓಡಿ ಹೋಗಲು ನಿರ್ಧರಿಸಿದ್ದಳು. ಬದಲಾಗಿ, ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ, ನಂತರ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾನೆಂದು ಆರೋಪಿಸಲಾಗಿದೆ.

ಸಂತ್ರಸ್ತೆ ಬಸ್ ನಿಲ್ದಾಣದಲ್ಲಿ ಕುಳಿತಿರುವಾಗ ಬೈಕ್​ನಲ್ಲಿ ಬಂದ ಜಾರ್ಖಂಡ್ ಮೂಲದ ಮತ್ತೊಬ್ಬ ವ್ಯಕ್ತಿ ಆಕೆಯ ಬಳಿಗೆ ಬಂದು ಸಹಾಯ ಮಾಡಲು ಮುಂದಾದ, ಆದರೆ ಆತ ಆಕೆಯನ್ನು ಪಾರದೀಪ್ ಪಟ್ಟಣದಲ್ಲಿರುವ ತನ್ನ ಬಾಡಿಗೆ ಮನೆಯ ಮೇಲ್ಛಾವಣಿಗೆ ಕರೆದೊಯ್ದ, ಅಲ್ಲಿ ಮತ್ತೆ ಅತ್ಯಾಚಾರವೆಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಕುಮಾರ್ ವರ್ಮಾ ಪಿಟಿಐಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ನಂತರ ಆರೋಪಿಯು ಆಕೆಯನ್ನು ಕಟ್ಟಡದ ಛಾವಣಿಯಿಂದ ತಳ್ಳಿದ್ದಾನೆ, ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ. ಮರುದಿನ ಬೆಳಗ್ಗೆ ಆಕೆಯ ಶವವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿ ಹೇಳಿದರು. ಫೆಬ್ರವರಿ 22 ರ ಸಂಜೆ ಸಂತ್ರಸ್ತೆ ಮನೆಗೆ ಮರಳದ ಕಾರಣ ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದರು. ಫೆಬ್ರವರಿ 23 ರಂದು ಮೃತದೇಹ ಪತ್ತೆಯಾಗಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗಿತ್ತು.

ತರುವಾಯ, ಫೆಬ್ರವರಿ 25 ರಂದು, ಸಹೋದರನು ತನ್ನ ಸಹೋದರಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮತ್ತೊಂದು ದೂರು ದಾಖಲಿಸಿದನು, ನಂತರ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಯಿತು.

ಇಬ್ಬರೂ ಆರೋಪಿಗಳನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ನಿಬಂಧನೆಗಳ ಅಡಿಯಲ್ಲಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜು ಜನತಾದಳ (ಬಿಜೆಡಿ) ಅಧ್ಯಕ್ಷ ಮತ್ತು ಒಡಿಶಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಘಟನೆಯನ್ನು ಖಂಡಿಸಿ, ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು ಮತ್ತು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮಹಿಳಾ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ಸರ್ಕಾರ ದೀರ್ಘ ಭಾಷಣಗಳನ್ನು ನೀಡುತ್ತಿದ್ದರೂ, ಮೂಲ ವಾಸ್ತವವು ಅತ್ಯಂತ ಆತಂಕಕಾರಿಯಾಗಿದೆ. ಹಗಲು ಹೊತ್ತಿನಲ್ಲಿಯೂ ಭಯದ ವಾತಾವರಣವಿದೆ ಎಂದಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Auqib Nabi: 18 ಪಂದ್ಯಗಳಲ್ಲಿ ಬರೋಬ್ಬರಿ 104 ವಿಕೆಟ್ಸ್..! – Kannada News | Auqib Nabi has taken 104 wickets in the last two Ranji Trophy seasons

ಬರೋಬ್ಬರಿ 67 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ತಂಡವು ರಣಜಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ರೂವಾರಿ ಆಖಿಬ್ ನಬಿ. ಏಕೆಂದರೆ ಇಡೀ ಟೂರ್ನಿಯುದ್ದಕ್ಕೂ ಜಮ್ಮು-ಕಾಶ್ಮೀರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದೇ ನಬಿ.

ಅದರಲ್ಲೂ ಫೈನಲ್​ ಪಂದ್ಯದಲ್ಲಿ 5 ವಿಕೆಟ್ ಉರುಳಿಸುವ ಮೂಲಕ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ 293 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪರಿಣಾಮ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಜಮ್ಮು-ಕಾಶ್ಮೀರ ತಂಡ ರಣಜಿ ಟೂರ್ನಿಯಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ವಿಶೇಷ ಎಂದರೆ ಈ ಬಾರಿಯ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿರುವ ನಬಿ ಕಬಳಿಸಿದ್ದು ಬರೋಬ್ಬರಿ 60 ವಿಕೆಟ್​ಗಳು. ಅಂದರೆ ರಣಜಿ ಟೂರ್ನಿ ಇತಿಹಾಸದಲ್ಲೇ 60 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್​ ಕಬಳಿಸಿದ ಮೂವರು ವೇಗಿಗಳಲ್ಲಿ ಆಖಿಬ್ ನಬಿ ಕೂಡ ಒಬ್ಬರಾಗಿದ್ದಾರೆ.

ಇದಕ್ಕೂ ಮುನ್ನ ಅಂದರೆ, 2024-25 ರ ಸೀಸನ್​ನಲ್ಲಿ ಆಖಿಬ್ ನಬಿ ಬರೋಬ್ಬರಿ 44 ವಿಕೆಟ್ ಕಬಳಿಸಿದ್ದರು. ಪರಿಣಾಮ ಜಮ್ಮು-ಕಾಶ್ಮೀರ ತಂಡವು ಕ್ವಾರ್ಟರ್ ಫೈನಲ್​ವರೆಗೆ ತಲುಪಿತ್ತು. ಈ ಬಾರಿ ತನ್ನ ಕರಾರುವಾಕ್ಕಾದ ದಾಳಿಯನ್ನು ಮತ್ತಷ್ಟು ಮೊನಚುಗೊಳಿಸಿದ್ದ ನಬಿ ಜಮ್ಮು-ಕಾಶ್ಮೀರ ತಂಡಕ್ಕೆ ರಣಜಿ ಕಿರೀಟ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ಬಾರಿಯ ರಣಜಿ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 8 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ  ಕಳೆದ 18 ಪಂದ್ಯಗಳಲ್ಲಿ ಆಖಿಬ್ ನಬಿ 13 ಬಾರಿ 5 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ 2 ಸೀಸನ್​ಗಳ ಮೂಲಕ ರಣಜಿ ಟೂರ್ನಿಯಲ್ಲಿ 100 ಕ್ಕೂ ಅಧಿಕ ವಿಕೆಟ್ ಪಡೆದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ.

ಈ ಎಲ್ಲಾ ಸಾಧನೆಗಳೊಂದಿಗೆ ರಣಜಿ ಟೂರ್ನಿಯಲ್ಲಿ ಸಂಚಲನ ಸೃಷ್ಟಿಸಿರುವ ಆಖಿಬ್ ನಬಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

 

Source link

ಓಮನ್ ಬಿಟ್ಟು ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಆ ಒಂದು ರಾಷ್ಟ್ರ ಬಿಟ್ಟಿದ್ದೇಕೆ? – Kannada News | Iran attacks most of the Gulf nations, except Oman, interesting reason behind it

ನವದೆಹಲಿ, ಮಾರ್ಚ್ 1: ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಯುದ್ಧ (Iran War) ನಡೆಸುತ್ತಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿವೆ. ಗಲ್ಫ್ ಪ್ರದೇಶದಲ್ಲಿರುವ ಹೆಚ್ಚಿನ ದೇಶಗಳ ಪ್ರಮುಖ ಸ್ಥಳಗಳನ್ನು ಇರಾನ್ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ದುಬೈ, ದೋಹಾ ಇತ್ಯಾದಿ ನಗರಗಳು ಇರಾನ್ ದಾಳಿಗೆ ಒಳಗಾಗಿವೆ. ಬಹ್ರೇನ್, ಸೌದಿ, ಯುಎಇ, ಕತಾರ್ ಮೊದಲಾದ ದೇಶಗಳು ಇರಾನ್ ಪ್ರತಿದಾಳಿಗೆ ಸಿಲುಕಿವೆ. ಅಧ್ಯಕ್ಷ ಆಯತೊಲ್ಲಾ ಖೊಮೇನಿ ಹತ್ಯೆಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದೆ. ಆದರೆ, ಓಮನ್ ಹೊರತುಪಡಿಸಿ ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಮೆರಿಕದ ನೆಲೆಗಳಿರುವ ಈ ದೇಶಗಳು ಇರಾನ್​ನ ಮುಯ್ಯಿಗಳ ಪಟ್ಟಿಯಲ್ಲಿವೆ. ಆದರೆ, ಓಮನ್ ಮಾತ್ರ ಇದಕ್ಕೆ ಅಪವಾದ.

ಓಮನ್ ಮೇಲೆ ಇರಾನ್ ದಾಳಿ ಯಾಕಿಲ್ಲ?

ಓಮನ್ ಮತ್ತು ಇರಾನ್ ನಡುವೆ ಆಪ್ಯಾಯಮಾನವಾದ ಸಂಬಂಧ ಶುರುವಾಗಿ ಸುಮಾರು ಐದು ದಶಕಗಳು ಗತಿಸಿವೆ. 20ನೇ ಶತಮಾನದ ಇಪ್ಪತರ ದೇಶಕದಲ್ಲಿ ಓಮನ್​ನಲ್ಲಿ ಸುಲ್ತಾನ್ ಖಾಬೂಸ್ ಬಿನ್ ಸಯಿದ್ ಅವರ ಆಡಳಿತ ಇತ್ತು. ಅಂದಿನ ಸೋವಿಯತ್ ರಷ್ಯಾ ಪ್ರೇರಿತ ಮಾರ್ಕ್ಸ್​ವಾದಿ ಹೋರಾಟಗಾರರು ಓಮನ್ ಸುಲ್ತಾನನ ಆಡಳಿತ ವಿರುದ್ದ ದೊಡ್ಡ ದಂಗೆ ಎಬ್ಬಿಸಿದ್ದರು. ಅದನ್ನು ದೋಫರ್ ದಂಗೆ ಎಂದು ಕರೆಯಲಾಗುತ್ತದೆ.

ಆಗ ಇರಾನ್ ದೇಶವು ತನ್ನ ಸೇನೆಯನ್ನು ಕಳುಹಿಸಿ ಓಮನ್ ಸುಲ್ತಾನನಿಗೆ ನೆರವು ಕೊಡುತ್ತದೆ. ಅಂದು ಈ ಎರಡು ದೇಶಗಳ ಮಧ್ಯೆ ಸ್ವಾಭಾವಿಕ ಮಿತ್ರತ್ವ ಏರ್ಪಟ್ಟಿತ್ತು. ಕುತೂಹಲ ಎಂದರೆ ಆಗ ಇರಾನ್​ನಲ್ಲಿ ಆಡಳಿತದಲ್ಲಿದ್ದದ್ದು ಅಮೆರಿಕನ್ ಪರವಾಗಿದ್ದ ಶಾ ಅವರು. ಓಮನ್ ಮೇಲೆ ಸೋವಿಯತ್ ನಿಯಂತ್ರಣ ತಪ್ಪಿಸಲು ಅಮೆರಿಕವು ಇರಾನ್​ನ ಶಾ ಮೂಲಕ ಪರೋಕ್ಷವಾಗಿ ಮಧ್ಯಪ್ರವೇಶಿಸಿತ್ತು.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಮತ್ತೂ ಕುತೂಹಲ ಎಂದರೆ, 1979ರಲ್ಲಿ ಇರಾನ್​ನಲ್ಲಿ ಕ್ರಾಂತಿ ಉಂಟಾಗಿ ಇಸ್ಲಾಮಿಕ್ ಪ್ರಭುತ್ವದ ಸ್ಥಾಪನೆಯಾಯಿತು. ಅಮೆರಿಕದ ನಿಯಂತ್​ರಣದಲ್ಲಿದ್ದ ಹೆಚ್ಚಿನ ಗಲ್ಫ್ ರಾಷ್ಟ್ರಗಳು ಇರಾನ್​ನಿಂದ ದೂರ ಉಳಿದವು. ಆದರೆ, ಓಮನ್ ಮಾತ್ರ ತನ್ನ ಮಿತ್ರತ್ವ ಮುಂದುವರಿಸಿತು. ಆಡಳಿತಗಳು ಬದಲಾದವರೂ ಈ ಮಿತ್ರತ್ವ ಭಾವ ಬದಲಾಗಲಿಲ್ಲ. ಅಮೆರಿಕದ ಒತ್ತಡ ಮತ್ತು ಇರಾನ್ ಹಿತಾಸಕ್ತಿ ಎರಡನ್ನೂ ಓಮನ್ ಸಮತೋಲಿತ ರೀತಿಯಲ್ಲಿ ನಿಭಾಯಿಸಿಕೊಂಡು ಬಂದಿದೆ. ಇರಾನ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ಮಧ್ಯೆ ಓಮನ್ ಸಂಪರ್ಕ ಸೇತುವಾಗಿ ನಿಂತಿದೆ.

ಇರಾನ್​ಗೆ ಓಮನ್ ಬಹಳ ಮುಖ್ಯ…

ಮೆಡಿಟರೇನಿಯನ್ ಸಮುದ್ರದಲ್ಲಿ ಹಾರ್ಮುಜ್ ಸ್ಟ್ರೇಟ್ ಎನ್ನುವ ಬಹಳ ಮುಖ್ಯವಾದ ಜಲಮಾರ್ಗ ಇದೆ. ಬಹಳ ಕಿರಿದಾದ ಮಾರ್ಗ. ಆದರೆ, ಜಗತ್ತಿನ ವ್ಯಾಪಾರದ ಮುಖ್ಯಪಾಲು ಸರಕುಗಳು ಈ ಮಾರ್ಗದಲ್ಲೇ ಹಡುಗಗಳ ಮೂಲಕ ಸಾಗಣೆ ಆಗುತ್ತವೆ. ಈ ಹಾರ್ಮುಜ್ ಮಾರ್ಗದ ಆ ಬದಿ ಈ ಬದಿಯಲ್ಲಿ ಇರಾನ್, ಓಮನ್, ಯುಎಇ ದೇಶಗಳಿವೆ. ಹೀಗಾಗಿ, ಈ ದೇಶಗಳ ಮಧ್ಯೆ ತಾಳಮೇಳ ಸರಿಯಾಗಿ ಇರಬೇಕಾದ್ದು ಅನಿವಾರ್ಯ.

ಹಾಗೆಯೇ, ಅಮೆರಿಕದ ನಿಷೇಧ ಎದುರಿಸುತ್ತಿರುವ ಇರಾನ್ ದೇಶಕ್ಕೆ ತನ್ನ ಸರಕುಗಳನ್ನು ಬೇರೆ ದೇಶಗಳ ಮಾರುಕಟ್ಟೆಗೆ ಕಳುಹಿಸಲು ಓಮನ್ ಅಗತ್ಯ ಇದೆ. ಓಮನ್ ಮುಖಾಂತರ ಅದು ಸರಕುಗಳನ್ನು ಹೊರಕಳುಹಿಸಲು ಅವಕಾಶ ಇದೆ.

ಇದನ್ನೂ ಓದಿ: Ali Khamenei Death: ಸರ್ವೋಚ್ಛ ನಾಯಕ ಖಮೇನಿ ಹತ್ಯೆಯನ್ನು ದೃಢಪಡಿಸಿ, 40 ದಿನಗಳ ಶೋಕಾಚರಣೆ ಘೋಷಿಸಿದ ಇರಾನ್

ಓಮನ್ ವಿಚಾರದಲ್ಲಿ ಮೆಚ್ಚುಗೆಯಾಗುವ ಅಂಶವೆಂದರೆ ಅದರ ವಿದೇಶ ನೀತಿಯದ್ದು. ಇರಾನ್ ಅಥವಾ ಯಾವುದೇ ದೇಶದೊಂದಿಗೆಯಾಗಲೀ ಓಮನ್ ಕದ್ದುಮುಚ್ಚಿ ವ್ಯವಹಾರ ನಡೆಸಿಲ್ಲ. ಶಾಂತಿ ವಾತಾವರಣವೇ ಅದರ ವಿದೇಶಾಂಗ ನೀತಿಯ ಗುರಿ. ಹೀಗಾಗಿ, ಇರಾನ್ ಸೇರಿದಂತೆ ಬಹುತೇಕ ಎಲ್ಲಾ ದೇಶಗಳೊಂದಿಗೆ ಓಮನ್ ಉತ್ತಮ ಸಂಬಂಧ ಇಟ್ಟುಕೊಳ್ಳಲು ಯಶಸ್ವಿಯಾಗಿದೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಬಿಡುಗಡೆಗೂ ಮುನ್ನವೇ ವಿಮರ್ಶೆ ತಿಳಿಸಿದ ನಟಿ ಯಾಮಿ ಗೌತಮ್ – Kannada News | Aditya Dhar wife Yami Gautam shares the first review of Dhurandhar 2 even before its release

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಸಿನಿಮಾಗೆ ಅಧಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಪ್ರೇಕ್ಷಕರಿಗೆ ಇದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ನಟಿ ಯಾಮಿ ಗೌತಮ್ ಅವರು ವಿಮರ್ಶೆ (Dhurandhar 2 First Review) ತಿಳಿಸಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಪತ್ನಿ ಆಗಿರುವ ಯಾಮಿ ಗೌತಮ್ (Yami Gautam) ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಧುರಂಧರ್ 2’ ಸಿನಿಮಾ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

‘ನಾನು ಈಗಾಗಲೇ ಧುರಂಧರ್ 2 ಸಿನಿಮಾವನ್ನು ನೋಡಿದ್ದೇನೆ. ಅದು ಅದ್ಭುತಗಿಂತಲೂ ಹೆಚ್ಚಾಗಿದೆ. ನೋಡಿದ ಬಳಿಕ ನಾನು ಎಮೋಷನಲ್ ಆದೆ. ಅಂದು ನಾನು ವಿಮಾನದಲ್ಲಿ ಪ್ರಯಾಣ ಮಾಡಬೇಕಿತ್ತು. ಹಾಗಾಗಿ ಆದಿತ್ಯ ಧಾರ್ ಅವರಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಅಂದು ನಾನು ಒಂದು ಸ್ಕ್ರಿಪ್ಟ್ ಓದಬೇಕಿತ್ತು. ಅದು ಕೂಡ ಆಗಲಿಲ್ಲ. ನಾನು ಏನನ್ನೋ ನೋಡಬೇಕಿತ್ತು. ಅದು ಸಹ ನನ್ನಿಂದ ಸಾಧ್ಯವಾಗಲಿಲ್ಲ’ ಎಂದು ಸಿನಿಮಾ ನೋಡಿದ ಬಳಿಕ ಪರಿಣಾಮ ಹೇಗಿತ್ತು ಎಂಬುದನ್ನು ಯಾಮಿ ಗೌತಮ್ ಅವರು ವಿವರಿಸಿದ್ದಾರೆ.

‘ಸಂದರವಾದ ಸೂರ್ಯಾಸ್ತ ನೋಡುತ್ತಾ ನಾನು ಕುಳಿತೆ. ವಿಮಾನ ಇಳಿದ ಬಳಿಕ ಆದಿತ್ಯ ಅವರಿಗೆ ಏನು ಹೇಳಲಿ ಅಂತ ನಾನು ಯೋಚಸುತ್ತಿದೆ. ಸಿನಿಮಾ ಬಗ್ಗೆ ನನ್ನ ಭಾವನೆ ಏನಿದೆ ಎಂಬುದನ್ನು ಪದಗಳಲ್ಲಿ ಹೇಳಬೇಕಿತ್ತು. ಆದಿತ್ಯ ಅವರು ಈ ದೇಶವನ್ನು ಮತ್ತು ಪ್ರೇಕ್ಷಕರನ್ನು ಪ್ರೀತಿಸುತ್ತಾರೆ. ಈ ಸಿನಿಮಾ ಮಾಡಲು ಅವರು ತುಂಬಾ ಕಷ್ಪಪಟ್ಟಿದ್ದಾರೆ. ಪ್ರೇಕ್ಷಕರು ಎಂದೂ ಮರೆಯಲಾಗದ ಅನುಭವವನ್ನು ಧುರಂಧರ್ 2 ಸಿನಿಮಾ ನೀಡುತ್ತದೆ’ ಎಂದಿದ್ದಾರೆ ಯಾಮಿ ಗೌತಮ್.

‘ಪ್ರತಿಯೊಬ್ಬ ಭಾರತೀಯನೂ ಹೆಮ್ಮಪಡುವಂತಹ ಸಿನಿಮಾ ಧುರಂಧರ್ ಆಗಲಿದೆ ಅಂತ ನಾನು ಮೊದಲೇ ಹೇಳಿದ್ದೆ. ಆ ನಂಬಿಕೆ ನನಗೆ ಯಾವಾಗಲೂ ಇತ್ತು. ಮೊದಲು ನಾನು ಈ ಸಿನಿಮಾದ ಸ್ಕ್ರಿಪ್ಟ್ ಓದಿದಾಗ ನಾನು ಆರ್ಟಿಕಲ್ 370 ಸಿನಿಮಾದ ಶೂಟಿಂಗ್​ನಲ್ಲಿದೆ. ಅದು ಕೇವಲ 40 ಪುಟ ಇತ್ತು. ಆದರೆ ಓದಿದ ಬಳಿಕ ನನಗೆ ಕಣ್ಣೀರು ಬಂದಿತ್ತು’ ಎಂದು ಯಾಮಿ ಗೌತಮ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ನೋಡಲು ದುಬೈನಿಂದ ಭಾರತಕ್ಕೆ ಬರಲಿರುವ ಪ್ರೇಕ್ಷಕರು

‘ಧುರಂಧರ್ 2’ ಸಿನಿಮಾದಲ್ಲಿ ಯಾಮಿ ಗೌತಮ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ ಎಂಬ ಅನುಮಾನ ಇದೆ. ಆ ಬಗ್ಗೆ ಚಿತ್ರತಂಡದವರು ಮೌನ ಮುರಿದಿಲ್ಲ. ಯಾಮಿ ಗೌತಮ್ ಕೂಡ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ‘ನಿಮ್ಮೆಲ್ಲರನ್ನೂ ಅಲ್ಲಿ ಭೇಟಿ ಆಗುತ್ತೇನೆ’ ಎಂದು ಹೇಳುವ ಮೂಲಕ ಇನ್ನಷ್ಟು ಕುತೂಹಲ ಹುಟ್ಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಿವ್-ಇನ್ ಸಂಗಾತಿಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಡಿಎಂಕೆ ಕಾರ್ಯಕರ್ತ – Kannada News | Tamil Nadu Man Linked to DMK Youth Wing Arrested in Toddler Assault and Murder Case

ಬಂಧನ-ಸಾಂದರ್ಭಿಕ ಚಿತ್ರImage Credit source: ipleaders

ಕೃಷ್ಣಗಿರಿ, ಮಾರ್ಚ್​ 01: ಡಿಎಂಕೆ ಕಾರ್ಯರ್ತನೊಬ್ಬ ಲಿವ್-ಇನ್ ಸಂಗಾತಿ(Live-in Partner)ಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಪೆರಿಯನಾಯಗಂ ತನ್ನ ಸಂಗಾತಿ ಪ್ರಿನ್ಸಿಯ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಗಂಡ ಸೂರ್ಯನಿಂದ ಬೇರೆಯಾಗಿದ್ದಳು. ತಾಯಿ ಇಲ್ಲದ ಸಮಯದಲ್ಲಿ ಪೆರಿಯನಾಯಗಂ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ವೈವಾಹಿಕ ಭಿನ್ನಾಭಿಪ್ರಾಯಗಳ ನಂತರ, ಪ್ರಿನ್ಸಿ ತನ್ನ ತಾಯಿಯೊಂದಿಗೆ ಅಂಚೆಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದರು, ಆದರೆ ಸೂರ್ಯ ಆಗಾಗ ತನ್ನ ಮಗಳನ್ನು ಭೇಟಿ ಮಾಡಲು ಬರುತ್ತಿದ್ದರು.

ಫೆಬ್ರವರಿ 11 ರಂದು, ಮಗು ಪ್ರಜ್ಞೆ ತಪ್ಪಿತ್ತು, ನಂತರ ಆಕೆಯ ತಾಯಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲಿ ಆಕೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಘಟನೆಯ ಬಗ್ಗೆ ಶಂಕಿಸಿ ಸೂರ್ಯ ದೂರು ದಾಖಲಿಸಿದ್ದು, ಪೊಲೀಸ್ ತನಿಖೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಖಾಸಗಿ ಭಾಗಗಳಲ್ಲಿ ಗಾಯಗಳಾಗಿದ್ದು, ಇದು ಲೈಂಗಿಕ ದೌರ್ಜನ್ಯವನ್ನು ಸೂಚಿಸುತ್ತದೆ.

ತನಿಖಾಧಿಕಾರಿಗಳು ನಂತರ ಪ್ರಿನ್ಸಿ ಪೆರಿಯನಾಯಗಂ ಜೊತೆ ಸಂಬಂಧ ಹೊಂದಿದ್ದಾಳೆಂದು ಹೇಳಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಪೆರಿಯನಾಯಗಂ ತನ್ನ ತಾಯಿಯ ಅನುಪಸ್ಥಿತಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮತ್ತಷ್ಟು ಓದಿ: ಲಿವ್ ಇನ್ ಸಂಗಾತಿಯ ಕೊಂದು ದೇಹವನ್ನು ಟ್ರಂಕ್​ನಲ್ಲಿ ಹಾಕಿ ಸುಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?

ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಆಡಳಿತಾರೂಢ ಡಿಎಂಕೆ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿತು.

ಮಹಿಳೆಯರು ಮತ್ತು ಮಕ್ಕಳ ಮೂಲಭೂತ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ಸರ್ಕಾರವು ಅಧಿಕಾರದಲ್ಲಿ ಉಳಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:59 am, Sun, 1 March 26

Source link

Exit mobile version