MI vs PBKS: ಟಾಸ್ ಗೆದ್ದ ಪಂಜಾಬ್; ರೋಹಿತ್ ಸೇರಿದಂತೆ ಮುಂಬೈ ತಂಡದಲ್ಲಿ 2 ಬದಲಾವಣೆ – Kannada News | MI vs PBKS Playing XI Mumbai Indians vs Punjab Kings Today IPL 2026 match Confirmed playing 11 details with name in Kannada

ಐಪಿಎಲ್‌ನ 19 (IPL 2026) ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು. ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈಗೆ ಶುಭಾರಂಭ ಸಿಕ್ಕಿತ್ತು. ಆದಾಗ್ಯೂ, ಅದರ ನಂತರ ಮುಂಬೈ ಸತತ 3 ಸೋಲುಗಳನ್ನು ಎದುರಿಸಬೇಕಾಯಿತು. ಇದೀಗ ಮುಂಬೈ ಇಂಡಿಯನ್ಸ್ ಕಳೆದ ಸೀಸನ್‌ನ ರನ್ನರ್-ಅಪ್ ಪಂಜಾಬ್ ಕಿಂಗ್ಸ್ ತಂಡವನ್ನು ತನ್ನ ಐದನೇ ಪಂದ್ಯದಲ್ಲಿ ಎದುರಿಸುತ್ತಿದೆ. ಪಂಜಾಬ್ ಕಿಂಗ್ಸ್‌ಗೂ ಇದು ಐದನೇ ಪಂದ್ಯವಾಗಿದೆ. ಈ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ (PBKS) ಇದುವರೆಗೆ ಅಜೇಯವಾಗಿದೆ. ಆದ್ದರಿಂದ, ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್‌ನಿಂದ ಕಠಿಣ ಸವಾಲನ್ನು ಎದುರಿಸಲಿದೆ. ಮುಂಬೈಕರ್ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸಿದರೆ, ಹಾರ್ದಿಕ್ ಪಾಂಡ್ಯ ಮುಂಬೈ ನಾಯಕರಾಗಿದ್ದಾರೆ.

ಟಾಸ್ ಗೆದ್ದ ಪಂಜಾಬ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇದರೊಂದಿಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಪಂಜಾಬ್ ತಂಡ ತನ್ನ ಗೆಲುವಿನ ಸಂಯೋಜನೆಯನ್ನು ಬದಲಿಸಿಲ್ಲ. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಆಡುತ್ತಿದೆ. ಇತ್ತ ಮುಂಬೈ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಮಾಜಿ ನಾಯಕ ರೋಹಿತ್ ಶರ್ಮಾ ಗಾಯದಿಂದ ಈ ಪಂದ್ಯವನ್ನು ಆಡುತ್ತಿಲ್ಲ. ಹಾಗೆಯೇ ಮಿಚೆಲ್ ಸ್ಯಾಂಟ್ನರ್ ಕೂಡ ಈ ಪಂದ್ಯವನ್ನು ಆಡುತ್ತಿಲ್ಲ.

ಮುಖಾಮುಖಿ ದಾಖಲೆ

ಪಂಜಾಬ್ ಮತ್ತು ಮುಂಬೈ ನಡುವಿನ 35 ನೇ ಪಂದ್ಯವು ಇಂದು ನಡೆಯುತ್ತಿದೆ. ಎರಡೂ ತಂಡಗಳ ನಡುವಿನ 34 ಪಂದ್ಯಗಳ ಫಲಿತಾಂಶಗಳನ್ನು ನೋಡಿದರೆ, ಎರಡೂ ತಂಡಗಳು ಸಮಾನವಾಗಿ ಬಲಿಷ್ಠವಾಗಿವೆ ಎಂದು ಹೇಳಬಹುದು. ಎರಡೂ ತಂಡಗಳು ತಲಾ 17 ಪಂದ್ಯಗಳನ್ನು ಗೆದ್ದಿವೆ. ಆದ್ದರಿಂದ, ಗುರುವಾರ ಯಾವ ತಂಡ ಗೆದ್ದು ಮುನ್ನಡೆ ಸಾಧಿಸುತ್ತದೆ ಎಂಬುದನ್ನು ನೋಡುವುದು ಮುಖ್ಯವಾಗಿರುತ್ತದೆ.

MI vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯಾನ್ ರಿಕೆಲ್ಟನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಶೆರ್ಫೇನ್ ರುದರ್‌ಫೋರ್ಡ್, ನಮನ್ ಧೀರ್, ಮಯಾಂಕ್ ರಾವತ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ.

ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Thu, 16 April 26

Source link

ಮೈಗ್ರೇನ್ ಇದ್ಯಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ – Kannada News | Are You Making These Migraine Mistakes? Expert Tips

Are You Making These Migraine Mistakes? Expert TipsImage Credit source: Getty Images

ಮೈಗ್ರೇನ್ (Migraine) ಎಂದರೆ ತಲೆನೋವಿನ ಒಂದು ತೀವ್ರ ರೂಪ. ಸಾಮಾನ್ಯವಾಗಿ ಇದರ ಬಗ್ಗೆ ನಿಮಗೆ ತಿಳಿದಿರಬಹುದು, ಕೆಲವರು ಅನುಭವಿಸಿಯೂ ಇರಬಹುದು. ತಲೆಯ ಒಂದು ಭಾಗದಲ್ಲಿ ಸೂಜಿ ಚುಚ್ಚುವಂತೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಗಂಟೆಗಳವರೆಗೆ ಅಥವಾ ದಿನಗಳವರೆಗೆ ಕಂಡುಬರಬಹುದು. ಇದು ಕೇವಲ ತಲೆನೋವಷ್ಟೇ ಅಲ್ಲ, ವಾಂತಿ, ವಾಕರಿಕೆ, ಬೆಳಕಿನ ಸಂವೇದನೆ ಮತ್ತು ಶಬ್ದದಿಂದ ತೊಂದರೆಗಳನ್ನು ಉಂಟುಮಾಡುವ ನರಮಂಡಲದ ಸಮಸ್ಯೆಯಾಗಿದೆ. ಹಾಗಾದರೆ ಮೈಗ್ರೇನ್ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು, ದಿನನಿತ್ಯದ ಯಾವ ಅಭ್ಯಾಸ ಈ ರೀತಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೈಗ್ರೇನ್ ಏಕೆ ಉಂಟಾಗುತ್ತದೆ?

ತಜ್ಞರ ಪ್ರಕಾರ, ಮೆದುಳಿನಲ್ಲಿ ನಡೆಯುವ ರಾಸಾಯನಿಕ ಬದಲಾವಣೆಗಳು, ವಿಶೇಷವಾಗಿ ಸೆರೋಟೋನಿನ್ ಮಟ್ಟದ ಕುಸಿತ, ನರಮಂಡಲವನ್ನು ಹೆಚ್ಚು ಸಂವೇದನಾಶೀಲವಾಗಿಸುತ್ತದೆ. ಇದರಿಂದ ತಲೆನೋವು ಟ್ರಿಗರ್ ಆಗುತ್ತದೆ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನಲ್ ಬದಲಾವಣೆಗಳು, ಹೆಚ್ಚು ಬೆಳಕು, ಶಬ್ದ ಮತ್ತು ಕೆಲವು ಆಹಾರ ಪದಾರ್ಥಗಳು (ಚಾಕೊಲೇಟ್, ಕ್ಯಾಫೀನ್) ಮೈಗ್ರೇನ್ ಹೆಚ್ಚಿಸಲು ಕಾರಣವಾಗುತ್ತವೆ.

ಈ ತಪ್ಪುಗಳು ನೋವನ್ನು ಹೆಚ್ಚಿಸಬಹುದು;

ಸರಿಯಾಗಿ ನಿದ್ರೆ ಮಾಡದಿರುವುದು: ನಿದ್ರೆಯ ಕೊರತೆಯಿಂದ ಮೆದುಳು ವಿಶ್ರಾಂತಿ ಪಡೆಯುವುದಿಲ್ಲ, ಇದರಿಂದ ಮೈಗ್ರೇನ್ ಸಮಸ್ಯೆ ಹೆಚ್ಚಾಗಬಹುದು. ಪ್ರತಿದಿನ 7– 8 ಗಂಟೆ ನಿದ್ರೆ ಮಾಡುವುದು ಅತ್ಯಗತ್ಯ.

ಹೆಚ್ಚು ಶಬ್ದ ಮತ್ತು ಬೆಳಕಿರುವಲ್ಲಿ ಹೋಗುವುದು: ಜೋರಾದ ಶಬ್ದ ಅಥವಾ ಬೆಳಕಿನ ನಡುವೆ ಇರುವುದರಿಂದ ಮೈಗ್ರೇನ್ ಟ್ರಿಗರ್ ಆಗಬಹುದು. ಶಾಂತ ವಾತಾವರಣದಲ್ಲಿ ಸಮಯ ಕಳೆಯುವುದು ಉತ್ತಮ.

ಇದನ್ನೂ ಓದಿ: ಬಿಸಿಲಿಗೆ ಹೋದ ತಕ್ಷಣ ತಲೆನೋವು ಬರುತ್ತಾ? ಹಾಗಿದ್ರೆ ನಿಮಗೆ ಈ ಸಮಸ್ಯೆ ಇದೆ ಎಂದರ್ಥ!

ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಮಯ ಇರುವುದು: ದೀರ್ಘಕಾಲ ಆಹಾರ ಸೇವಿಸದಿರುವುದು ದೇಹದ ಶಕ್ತಿ ಮಟ್ಟವನ್ನು ಕುಗ್ಗಿಸುತ್ತದೆ. ಇದರಿಂದ ಮೈಗ್ರೇನ್ ಹೆಚ್ಚಾಗಬಹುದು. ಹಾಗಾಗಿ ನಿಯಮಿತವಾಗಿ ಸಮತೋಲನ ಆಹಾರ ಸೇವಿಸಬೇಕು.

ಹೆಚ್ಚು ಕ್ಯಾಫೀನ್ ಸೇವನೆ: ಹೆಚ್ಚು ಕಾಫಿ ಅಥವಾ ಚಹಾ ಸೇವನೆಯಿಂದ ನಿದ್ರೆಯ ಮಾದರಿ ಬದಲಾಗುತ್ತದೆ, ಇದು ಮೈಗ್ರೇನ್ ಹೆಚ್ಚಿಸಲು ಕಾರಣವಾಗಬಹುದು.

ನಿಯಂತ್ರಣಕ್ಕೆ ಸಲಹೆಗಳು:

ಮೈಗ್ರೇನ್ ನಿಯಂತ್ರಿಸಲು ನಿಯಮಿತ ನಿದ್ರೆ, ಆರೋಗ್ಯಕರ ಆಹಾರ, ಒತ್ತಡ ನಿಯಂತ್ರಣ ಮತ್ತು ವ್ಯಾಯಾಮ ಮುಖ್ಯ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಇಲ್ಲವಾದಲ್ಲಿ ಇದು ಒಂದು ದೀರ್ಘಕಾಲದ ಸಮಸ್ಯೆಯಾಗಬಹುದು. ಹಾಗಾಗಿ ಸರಿಯಾದ ಜೀವನಶೈಲಿ ಮತ್ತು ಕೆಲವು ತಪ್ಪುಗಳನ್ನು ತಪ್ಪಿಸುವ ಮೂಲಕ ಇದನ್ನು ನಿಯಂತ್ರಿಸಬಹುದು. ಆರೋಗ್ಯಕರ ಅಭ್ಯಾಸಗಳು ನೋವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಅನಂತಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ ಹೈಕೋರ್ಟ್ – Kannada News | Karnataka High Court Relief to BJP Ex MP Anantkuma hegde Son In Car Over Take Case

ಬೆಂಗಳೂರು, (ಏಪ್ರಿಲ್ 16): ದಾಬಸ್​ಪೇಟೆ ಬಳಿ ಕಾರು ಓವರ್‌ಟೇಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಪುತ್ರನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪುತ್ರ ಅಶುತೋಷ್ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಗಲಾಟೆ ಪ್ರಕರಣದಿಂದಾಗಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಿ ಎಂದು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಶುತೋಷ್ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡಿ ಇಂದು (ಏಪ್ರಿಲ್ 16) ಆದೇಶ ಹೊರಡಿಸಿದೆ.

ದಾಬಸ್​ಪೇಟೆ ಬಳಿ ಕಾರು ಓವರ್‌ಟೇಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್​ನಲ್ಲಿ ಅಶುತೋಷ್​ ಹೆಸರಿಲ್ಲದಿದ್ದರೂ ದೋಷಾರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಪಾಸ್‌ಪೋರ್ಟ್​ಗೆ ಸಮಸ್ಯೆಯಾಗಲಿದೆ. ಕುಟುಂಬದ ಹಿರಿಯರನ್ನು ನೋಡಲು ವಿದೇಶದಿಂದ ಬಂದಿದ್ದಾಗ ಘಟನೆ ನಡೆದಿದೆ. ಘಟನೆಯಲ್ಲಿ ಅಶುತೋಷ್ ಪಾತ್ರವಿಲ್ಲವೆಂದು ವಕೀಲ ಪವನ್ ಚಂದ್ರ ಶೆಟ್ಟಿ ವಾದ ಮಂಡಿಸಿದರು. ಈ ವಾದ ಆಲಿಸಿದ ಹೈಕೋರ್ಟ್​, ಅಶುತೋಷ್ ವಿರುದ್ಧದ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ಇದರಿಂದ ಅನಂತಕುಮಾರ ಹೆಗಡೆ ಪುತ್ರ ಅಶುತೋಷ್​ಗೆ ಮಧ್ಯಂತರ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ನೆಲಮಂಗಲ: ಗಲಾಟೆ-ಹಲ್ಲೆ ಆರೋಪ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ, ಗನ್​ಮ್ಯಾನ್, ಚಾಲಕನ ವಿರುದ್ಧ ಎಫ್​ಐಆರ್

ಕೋರ್ಟ್​​​ಗೆ ಅನಂತ್ ಕುಮಾರ್ ಹೆಗಡೆ ಮನವಿ ಮಾಡಿದ್ದೇನು?

ತುಮಕೂರಿನ ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಅನಂತಕುಮಾರ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಏಕಸದಸ್ಯ ಪೀಠ ನಡೆಸಿತ್ತು. ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್‌, ತನ್ನ ಅಜ್ಜಿಯನ್ನು ಕಾಣಲು ತಂದೆ ಜೊತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅನ್ಯ ರಾಜ್ಯದ ಕಾರು ಅವರ ಕಾರು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಅವರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್ ಮತ್ತು ಅವರ ಪುತ್ರ ಅಶುತೋಷ್‌ ಪಾತ್ರ ಇಲ್ಲ ಎಂದು ಅನಂತಕುಮಾರ್ ಹೆಗಡೆ ಪರ ವಕೀಲರು ವಾದಿಸಿದರು.

ಕಾರಿನ ಹಿಂಬದಿ ಸೀಟಲ್ಲಿ ಅಶುತೋಷ್‌ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದಿಲ್ಲ. ಅವರ ಕಾರಿನ ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ, ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿ ಅಶುತೋಷ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆರೋಪ ಪಟ್ಟಿಯಲ್ಲೂ ತಂದೆ-ಮಕ್ಕಳ ಪಾತ್ರದ ಬಗ್ಗೆ ಉಲ್ಲೇಖವಿಲ್ಲ. ಅಶುತೋಷ್‌ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಲಿ ಪ್ರಕರಣ ಅವರ ಪಾಸ್‌ಪೋರ್ಟ್‌ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು. ಇದನ್ನು ಆಲಿಸಿದ ಹೈಕೋರ್ಟ, ವಿಚಾರಣೆಯನ್ನು ಇಂದಿಗೆ ಅಂದರೆ ಏಪ್ರಿಲ್ 16ಕ್ಕೆ ಮುಂದೂಡಿತ್ತು.

ಭಾರೀ ಸದ್ದು ಮಾಡಿದ ಅನಂತ ಕುಮಾರ್ ಹೆಗಡೆ ಮನವಿ

ಇನ್ನು ಅನಂತ ಕುಮಾರ ಹೆಗಡೆ ಕೋರ್ಟ್​​ಗೆ ಮಾಡಿದ್ದ ಮನವಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.  ಪುತ್ರ ಅಶುತೋಷ್ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದಿಂದ ಕೈಬಿಡಿ ಎಂದು ಕೋರ್ಟ್​​ಗೆ ಅನಂತ ಕುಮಾರ್ ಹೆಗಡೆ ಮನವಿ ಮಾಡಿದ್ದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ,  ವಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ, ಇದು ಬಿಜೆಪಿಯವರ ವರಸೆ. ತಮ್ಮ ಮಗನ ವಿದೇಶ ವ್ಯಾಸಂಗಕ್ಕಾಗಿ ಪಾಸ್ಪೋರ್ಟ್ ಪಡೆಯಲು ಗಲಾಟೆ ಕೇಸ್ ಅಡ್ಡಿಯಾಗುತ್ತಿದೆ ಎಂದು ಅವಲತ್ತುಕೊಂಡಿರುವ ಇದೇ ಬಿಜೆಪಿ ನಾಯಕ ಬಡವರ ಮಕ್ಕಳಿಗೆ ಗಲಾಟೆಗೆ, ದೊಂಬಿಗೆ ಪ್ರಚೋದನೆ ಕೊಡುವುದರಲ್ಲಿ ಎತ್ತಿದ ಕೈ ಎಂದು ಟಾಂಗ್ ಕೊಟ್ಟಿದ್ದರು.

ಏನಿದು ಪ್ರಕರಣ?

ಕಳೆದ ವರ್ಷ ಅಂದರೆ 2025ರ ಜೂನ್​​ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪ ಕೇಳಿಬಂದಿತ್ತು. ಅನಂತ್‌ ಕುಮಾರ್‌ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು, ಓವರ್​ ಟೇಕ್​ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್​ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್​​ಮ್ಯಾನ್​ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೋವಾ ಕಾರಿನಲ್ಲಿ ಸಲ್ಮಾನ್, ಸೈಫ್‌, ಇಲಿಯಾಜ್ ಖಾನ್‌ ಹಾಗೂ ಉನ್ನೀಸಾ ಎಂಬವರ ಮೇಲೆ ಹಲ್ಲೆ ಆರೋಪ ಕೇಳಿಬಂದಿತ್ತು. ಬಳಿಕ ಹಲ್ಲೆಗೊಳಗಾಗಿದ್ದ ಸೈಫ್ ನೀಡಿದ ದೂರಿನ ಮೇರೆಗೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಅನಂತಕುಮಾರ್ ಹೆಗಡೆ A1, ಗನ್‌ಮ್ಯಾನ್ ಶ್ರೀಧರ್‌ A2, ಕಾರು ಚಾಲಕ ಮಹೇಶ್‌ A3 ಮತ್ತು ಇತರರ ವಿರುದ್ಧ ಬಿಎನ್​ಎಸ್ ಕಾಯ್ದೆಯ 6 ಸೆಕ್ಷನ್‌ಗಳಡಿ ಎಫ್​ಐಆರ್ ದಾಖಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Mumbai Indians vs Punjab Kings IPL 2026 Live Cricket Score MI vs PBKS Match on 16th April latest news in Kannada

ಐಪಿಎಲ್ 19 ನೇ ಸೀಸನ್‌ನ 24 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳಿಗೆ ಇದು ಐದನೇ ಪಂದ್ಯ. ಮುಂಬೈ 4 ಪಂದ್ಯಗಳಲ್ಲಿ 3 ರಲ್ಲಿ ಸೋತಿದೆ. ಆದ್ದರಿಂದ, ಪಂಜಾಬ್ ವಿರುದ್ಧದ ಪಂದ್ಯ ಮುಂಬೈಗೆ ಬಹಳ ಮುಖ್ಯವಾಗಿದೆ. ಆದಾಗ್ಯೂ, ಮುಂಬೈ ಅಜೇಯ ಪಂಜಾಬ್‌ನಿಂದ ಕಠಿಣ ಸವಾಲನ್ನು ಎದುರಿಸಲಿದೆ. ಈ ಋತುವಿನಲ್ಲಿ ಪಂಜಾಬ್ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿದೆ. ಆದ್ದರಿಂದ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡುವುದು ಮುಖ್ಯವಾಗಿರುತ್ತದೆ.

Source link

CET ವಿದ್ಯಾರ್ಥಿಗಳೇ ಗಮನಿಸಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಸೂಚನೆ – Kannada News | KEA Alert: CET Students Beware of Cyber Fraudsters and Fake Admit Card Links

ಬೆಂಗಳೂರು, ಏಪ್ರಿಲ್​​ 16: SSLC, ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳೆ ಪ್ರಶ್ನೆಪತ್ರಿಕೆ ಹೆಸರಲ್ಲಿ ವಿದ್ಯಾರ್ಥಿಗಳ ಹಾದಿ ತಪ್ಪಿಲು ಒಂದಿಷ್ಟು ಮಂದಿ ಯತ್ನಿಸಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. KEA ರೀತಿಯಲ್ಲೇ ನಕಲಿ ವೆಬ್​​ಸೈಟ್ ಮಾಡಿರೋದು ಬೆಳಕಿಗೆ ಬಂದಿದ್ದು, CET ಎಕ್ಸಾಂ ಬರೆಯಲು ಮುಂದಾಗುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೇ ಸೈಬರ್​​ ವಂಚಕರು ಟಾರ್ಗೆಟ್​​ ಮಾಡಹೊರಟಿದ್ದಾರೆ. ಹೀಗಾಗಿ ಪಿಯುಸಿ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಸಿಇಟಿ ಬರೆಯಲು ತುದಿಗಾಲಲ್ಲಿ ನಿಂತಿರುವ ವಿದ್ಯಾರ್ಥಿಗಳು ಹಾಲ್​​ ಟಿಕೆಟ್​​ ಡೌನ್​​ ಮಾಡಿಕೊಳ್ಳುವ ವೇಳೆ ಎಚ್ಚರ ವಹಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.

ನಕಲಿ ವೆಬ್​​ಸೈಟ್​​ ಯಾವುದು?

ಈಗಾಗಲೇ ಸಿಇಟಿ ಪರೀಕ್ಷೆಯ ದಿನಾಂಕ ನಿಗದಿ ಆಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​​ಸೈಟ್​​ನಲ್ಲಿ ವಿದ್ಯಾರ್ಥಿಗಳ ಹಾಲ್​​ ಟಿಕೆಟ್​​ ಕೂಡ ಲಭ್ಯವಿದೆ. ಏ.23 ಮತ್ತು 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆದರೆ ಕೆಲ ಕಿಡಿಗೇಡಿಗಳು https://applytocollege.co/kcet_admit_card_2026 ಎಂಬ ನಕಲಿ ವೆಬ್​​ ಲಿಂಕ್​​ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು ಹೇಳಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪ್ರಾಧಿಕಾರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಅಧಿಕೃತ ವೆಬ್​​ಸೈಟ್ https://cetonline.karnataka.gov.in/UGCET_Admit_Card_2026/Forms/Login.aspx​​ ಮೂಲಕವೇ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರ ಡೌನ್​​ಲೋಡ್​​ ಮಾಡಿಕೊಳ್ಳಬೇಕೆಂದು ತಿಳಿಸಿದೆ.

ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಸತತ 2ನೇ ವರ್ಷವೂ ಶುಲ್ಕ ಏರಿಕೆ

ಪರೀಕ್ಷೆಗೆ ಮುಂಚೆಯೇ ಸಿಇಟಿ ಪರೀಕ್ಷೆ ಬರೆಯುವವರ ಮೇಲೆ ಸೈಬರ್​ ಕಿರಾತಕರು ಕಣ್ಣು ಹಾಕಿದ್ದು, ನಕಲಿ ವೆಬ್​ಸೈಟ್​​ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಎಚ್ಚರವಹಿಸಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಆರ್​ಸಿಬಿ ವೇಗಿ ರಸಿಕ್ ಸಲಾಂಗೆ 2 ವರ್ಷ ನಿಷೇಧ ಹೇರಿದ್ದ ಬಿಸಿಸಿಐ..! – Kannada News | Rasikh Salam Dar’s IPL 2026 Brilliance: RCB’s Star Bowler Overcomes Age Fraud Ban

ಹಾಲಿ ಚಾಂಪಿಯನ್ ಆರ್​ಸಿಬಿ (RCB) 2026 ರ ಐಪಿಎಲ್​ನಲ್ಲೂ (IPL 2026) ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ತಂಡದ ಈ ಗೆಲುವಿನ ಓಟಕ್ಕೆ ಸಾಂಘಿಕ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ಭಾರತದ ಯುವ ವೇಗಿ ರಸಿಕ್ ಸಲಾಂ ದಾರ್ (Rasikh Salam Dar) ಬೌಲಿಂಗ್ ವಿಭಾಗವನ್ನು ಕೂಡಿಕೊಂಡ ಬಳಿಕ ತಂಡ ಮತ್ತಷ್ಟು ಸಮತೋಲಿತವಾಗಿ ಕಾಣಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಈ ವೇಗದ ಬೌಲರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ ಕೇವಲ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ರಸಿಕ್ ಸಲಾಂ ಐಡೆನ್ ಮಾರ್ಕ್ರಾಮ್, ಆಯುಷ್ ಬಡೋನಿ, ಮುಕುಲ್ ಚೌಧರಿ ಮತ್ತು ಆವೇಶ್ ಖಾನ್ ಅವರ ವಿಕೆಟ್‌ಗಳನ್ನು ಕಬಳಿಸಿದರು.

ರಸಿಕ್ ಸಲಾಂ ದಾರ್ ಅವರ ಈ ವಿಧ್ವಂಸಕ ಬೌಲಿಂಗ್​ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಯಾವುದೇ ಸಮಸ್ಯೆಗಳಿಲ್ಲದೆ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿತು. ರಸಿಕ್ ಸಲಾಂ ಅವರ ಅತ್ಯುತ್ತಮ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಬಿಸಿಸಿಐ ಅವರನ್ನು ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿತ್ತು ಎಂಬುದು ನಿಮಗೆ ತಿಳಿದಿದೆಯೇ?. ಅಷ್ಟಕ್ಕೂ ರಸಿಕ್ ವಿರುದ್ಧ ಏಕೆ ಅಂತಹ ಕಠಿಣ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ನೋಡುವುದಾದರೆ..

ರಸಿಕ್​ಗೆ 2 ವರ್ಷ ನಿಷೇಧ

2019 ರಲ್ಲಿ ರಸಿಕ್ ಸಲಾಂ ಅವರನ್ನು ಬಿಸಿಸಿಐ ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿತು. ವಾಸ್ತವವಾಗಿ ರಸಿಕ್ ವಯಸ್ಸಿನ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿತ್ತು. ಹೀಗಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿತ್ತು. ರಸಿಕ್ ಭಾರತೀಯ ಅಂಡರ್ -19 ತಂಡಕ್ಕೆ ಆಯ್ಕೆಯಾಗಲು ಬಿಸಿಸಿಐಗೆ ನಕಲಿ ಜನನ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಇದನ್ನು ಗಮನಿಸಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಯು ರಸಿಕ್ ತನ್ನ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ಗೆ ಮಾಹಿತಿ ನೀಡಿತ್ತು. ಪರಿಣಾಮವಾಗಿ, ಬಿಸಿಸಿಐ ಅವರನ್ನು ಭಾರತ U-19 ತಂಡದಿಂದ ತೆಗೆದುಹಾಕಿದಲ್ಲದೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿತ್ತು.

ರಸಿಕ್‌ಗೆ ಅವಕಾಶ ನೀಡಿದ್ದ ಮುಂಬೈ

ರಸಿಕ್ ಅವರನ್ನು ಕ್ರಿಕೆಟ್​ನಿಂದ ನಿಷೇಧಿಸುವ ವೇಳೆಗೆ ಅವರು ಅದಾಗಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಮುಂಬೈ ಇಂಡಿಯನ್ಸ್ ಅವರಿಗೆ ಅವಕಾಶ ನೀಡಿತ್ತು. ಎರಡು ವರ್ಷಗಳ ನಿಷೇಧದ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ ರಸಿಕ್​​ಗೆ ಕೆಕೆಆರ್ ಮತ್ತು ದೆಹಲಿ ಕ್ಯಾಪಿಟಲ್ಸ್‌ ತಂಡಗಳು ಐಪಿಎಲ್‌ನಲ್ಲಿ ಅವಕಾಶ ನೀಡಿದವು. ಈಗ ಅವರು ಆರ್‌ಸಿಬಿ ತಂಡದ ಭಾಗವಾಗಿದ್ದು, ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

RCB vs LSG: ತವರಿನಲ್ಲಿ ಲಕ್ನೋ ವಿರುದ್ಧ ಆರ್​ಸಿಬಿಗೆ ಮೊಟ್ಟ ಮೊದಲ ಜಯ

ರಸಿಕ್ ಸಲಾಂ ಅವರ ವೃತ್ತಿಜೀವನ

ರಸಿಕ್ ಸಲಾಂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲೂ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು 55 ವಿಕೆಟ್‌ಗಳನ್ನು ಉರುಳಿಸಿದ್ದು ಐಪಿಎಲ್‌ನಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಕ್ನೋ ವಿರುದ್ಧ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಾಯಣದ ಬಗ್ಗೆ ಪ್ರಕಾಶ್ ರಾಜ್ ಮಾತನಾಡಿದ ವಿಡಿಯೋ ವೈರಲ್; ತೀವ್ರ ಟೀಕೆ – Kannada News | Prakash Raj gets trolled for saying Ram a North Indian and Ravan a South Indian

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ರಾಜಕೀಯದ ವಿಷಯಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಬಿಜೆಪಿ ನಿಲುವುಗಳನ್ನು ಅವರು ಆಗಾಗ ವಿರೋಧಿಸುತ್ತಾರೆ. ಆ ಕಾರಣದಿಂದ ಅವರನ್ನು ವಿರೋಧಿಗಳು ಟ್ರೋಲ್ ಮಾಡುತ್ತಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ರಾಮಾಯಣದ (Ramayana) ಬಗ್ಗೆ ಮಾತನಾಡಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿಯ ವಿಡಂಬನೆಗೆ ಅವರು ರಾಮಾಯಣವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಅವರು ಮಾತನಾಡಿದ್ದನ್ನು ಅನೇಕರು ಖಂಡಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅನೇಕರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಪ್ರಕಾಶ್ ರಾಜ್ ಹೇಳುವುದೇನೆಂದರೆ ರಾಮನು ಉತ್ತರ ಭಾರತೀಯ, ರಾವಣನು ದಕ್ಷಿಣ ಭಾರತೀಯ ಆದಿವಾಸಿ. ರಾಮನು ಹಣ್ಣುಗಳನ್ನು ಕದ್ದ ಕಾರಣದಿಂದ ಅವರ ನಡುವಿನ ಸಂಘರ್ಷವು ಆರಂಭವಾಯಿತು. ನೀವು ಇತಿಹಾಸವನ್ನು ಚರ್ಚ್‌ನಿಂದ ಕಲಿತರೆ ಇಂತಹದ್ದೇ ಆಗುತ್ತದೆ’ ಎಂದು ನೆಟ್ಟಿಗರೊಬ್ಬರು ಟೀಕೆ ಮಾಡಿದ್ದಾರೆ.

‘ಪ್ರಕಾಶ್ ರಾಜ್ ತನ್ನದೇ ರಾಮಾಯಣವನ್ನು ರಚಿಸಿಕೊಂಡು, ಉತ್ತರ ಭಾರತದ ರಾಮನು ದಕ್ಷಿಣ ಭಾರತದ ಆದಿವಾಸಿಯಾದ ರಾವಣನಿಂದ ಹಣ್ಣುಗಳನ್ನು ಕದ್ದನೆಂದು ಹೇಳುತ್ತಿದ್ದಾರೆ. ಇದಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ. ಟ್ವಿಟರ್​​ನಲ್ಲಿ ಈ ವಿಷಯ ಈಗ ಟ್ರೆಂಡ್ ಆಗುತ್ತಿದೆ.

‘ಹಿಂದೂಗಳನ್ನು ಅಪಹಾಸ್ಯ ಮಾಡಲು ಪ್ರಕಾಶ್ ರಾಜ್ ರಾಮಾಯಣದ ಕಲ್ಪಿತ ಆವೃತ್ತಿಯನ್ನು ವಿವರಿಸುತ್ತಾರೆ. ಅವರು ಈ ನಿಂದನೀಯ ಕಥೆಯನ್ನು ಕೇವಲ ಗೋಮಾಂಸ ಸೇವನೆಯನ್ನು ಉತ್ತೇಜಿಸಲು ಮತ್ತು ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸಲು ಮಾಡಿದ್ದಾರೆ. ಇಂತಹ ವ್ಯಕ್ತಿಗೆ ದೃಶ್ಯಂ 3 ಮತ್ತು ವಾರಾಣಸಿ ಸಿನಿಮಾಗಳಲ್ಲಿ ಕೆಲಸ ಕೊಟ್ಟ ಅಜಯ್ ದೇವಗನ್ ಮತ್ತು ಎಸ್‌ಎಸ್ ರಾಜಮೌಳಿ ಅವರಿಗೆ ನಾಚಿಕೆ ಆಗಬೇಕು’ ಎಂದು ಇನ್ನೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನಾನು ಪ್ರಕಾಶ್ ರಾಜ್ ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ಪ್ರೇಕ್ಷಕರಲ್ಲಿ ಇದ್ದ ಜನರು ಏನು ಮಾಡುತ್ತಿದ್ದರು? ಅವರ ಅಸಂಬದ್ಧ ಮಾತುಗಳಿಗೆ ಚಪ್ಪಾಳೆ ಹೊಡೆಯುತ್ತಾ ಪ್ರೋತ್ಸಾಹಿಸುತ್ತಿದ್ದರು. ಯಾಕೆ ಯಾರೂ ಎದ್ದು ವಿರೋಧಿಸಲಿಲ್ಲ? ಅಲ್ಲಿ ಹಿಂದೂಗಳು ಯಾರೂ ಇರಲಿಲ್ಲವೇ?’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ನಟ ಪ್ರಕಾಶ್ ರಾಜ್ ತಾಯಿ ನಿಧನ: ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ: ವಿಡಿಯೋ

ಈ ರೀತಿಯ ಅನೇಕ ಟೀಕೆಗಳು ಎದುರಾಗಿವೆ. ಇವುಗಳಿಗೆ ಪ್ರಕಾಶ್ ರಾಜ್ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರ ತಾಯಿ ನಿಧನರಾದಾಗ ಅಂತ್ಯ ಸಂಸ್ಕಾರ ಮಾಡಿದ ರೀತಿಯ ಬಗ್ಗೆಯೂ ಅನೇಕರು ಟೀಕಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಕ್ನೋದಲ್ಲಿ ಇಡೀ ಸ್ಲಮ್ ಬೆಂಕಿಗಾಹುತಿ; ಕರಕಲಾದ ಗುಡಿಸಲುಗಳ ಡ್ರೋನ್ ವಿಡಿಯೋ ವೈರಲ್ – Kannada News | Drone video shows massive slum fire in Lucknow’s Vikas Nagar 2 childrens burnt alive

ಲಕ್ನೋ, ಏಪ್ರಿಲ್ 16: ಉತ್ತರ ಪ್ರದೇಶದ ಲಕ್ನೋದ ವಿಕಾಸ್ ನಗರದ ಸ್ಲಮ್ ಪ್ರದೇಶದಲ್ಲಿ ನಡೆದ ಬೆಂಕಿಯ (Fire Accident) ಭೀಕರ ಚಿತ್ರವನ್ನು ಡ್ರೋನ್ ದೃಶ್ಯಗಳು ತೋರಿಸಿವೆ. ಡಜನ್​ಗಟ್ಟಲೆ ಕೊಳೆಗೇರಿಗಳು ಬೂದಿಯ ರಾಶಿಯಾಗಿ ಬದಲಾಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಬೆಂಕಿಯಿಂದಾಗಿ ಮನೆಯ ಎಲ್ಲಾ ವಸ್ತುಗಳು ಸುಟ್ಟುಹೋಗಿವೆ. ಲಕ್ನೋದ ವಿಕಾಸ್ ನಗರ ಪ್ರದೇಶದಲ್ಲಿ ಬುಧವಾರ ಸಂಜೆ ಸಂಭವಿಸಿದ ಭಾರಿ ಬೆಂಕಿಯಲ್ಲಿ ಇಬ್ಬರು ಮಕ್ಕಳು ಜೀವಂತವಾಗಿ ಸುಟ್ಟುಹೋಗಿದ್ದಾರೆ ಮತ್ತು ಡಜನ್ಗಟ್ಟಲೆ ಮನೆಗಳು ಸುಟ್ಟುಹೋಗಿವೆ. ಬೆಂಕಿಯ ಪರಿಣಾಮವಾಗಿ ಕನಿಷ್ಠ 250 ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗದು; ಪ್ರಧಾನಿ ಮೋದಿ ಭರವಸೆ – Kannada News | No Discrimination Against North to South PM Modis Guarantee On Delimitation

ನವದೆಹಲಿ, ಏಪ್ರಿಲ್ 16: ಕ್ಷೇತ್ರ ಪುನರ್ ವಿಂಗಡಣೆಯ ಬಗ್ಗೆ ಎದ್ದಿರುವ ವಿವಾದ, ಗೊಂದಲಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ತೆರೆ ಎಳೆದಿದ್ದಾರೆ. ಇಂದು ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಉಂಟಾಗುವುದಿಲ್ಲ ಎಂದು ಗ್ಯಾರಂಟಿ ನೀಡಿದ್ದಾರೆ.

“ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಯಾವುದೇ ರಾಜ್ಯಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ನಾನು ಗ್ಯಾರಂಟಿ ನೀಡುತ್ತೇನೆ” ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪರಿಚಯಿಸಲಾದ ಮೂರು ಮಸೂದೆಗಳ ಕುರಿತು ಚರ್ಚೆ ನಡೆಸಲು ವಿಶೇಷ ಸಂಸತ್ತಿನ ಅಧಿವೇಶನವು ಇಂದು ಪ್ರಾರಂಭವಾಯಿತು. ಈ ಅಧಿವೇಶನವು ಎನ್‌ಡಿಎ ಮತ್ತು ವಿರೋಧ ಪಕ್ಷದ ನಡುವೆ 40 ನಿಮಿಷಗಳ ಕಾಲ ನಡೆದ ಬಿಸಿ ಬಿಸಿ ಚರ್ಚೆಯೊಂದಿಗೆ ಪ್ರಾರಂಭವಾಯಿತು. ನಂತರ ಎನ್‌ಡಿಎ ಮತ್ತು ವಿರೋಧ ಪಕ್ಷದವರು ಸಾಂವಿಧಾನಿಕ (131 ನೇ ತಿದ್ದುಪಡಿ) ಮಸೂದೆಯನ್ನು ಪರಿಚಯಿಸುವ ಮೊದಲು ಮತಗಳ ವಿಭಜನೆಗೆ ಒತ್ತಾಯಿಸಿದರು. ಕೊನೆಗೆ ಈ ಮಸೂದೆಯನ್ನು 251 ಸದಸ್ಯರು ಬೆಂಬಲಿಸಿದರು ಮತ್ತು 185 ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ರಾಜಕೀಯದ ಬಣ್ಣ ಬಳಿಯಬೇಡಿ; ಸಂಸತ್​​ನಲ್ಲಿ ಪ್ರಧಾನಿ ಮೋದಿ ಭಾಷಣ

ದಕ್ಷಿಣ ಭಾರತದ ಮುಖ್ಯಮಂತ್ರಿಗಳಾದ ತಮಿಳುನಾಡಿನ ಎಂ.ಕೆ. ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಸಿದ್ದರಾಮಯ್ಯ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ತಮ್ಮ ರಾಜ್ಯಗಳಿಗೆ ಈ ಸೀಮಾ ನಿರ್ಣಯದಿಂದ ಅನ್ಯಾಯವಾಗುತ್ತದೆ. ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ದೇಶದ ಮಹಿಳೆಯರು ನಿಮ್ಮನ್ನೆಂದೂ ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪ್ರಕ್ರಿಯೆಯನ್ನು ವಿರೋಧಿಸುವ ಧ್ವನಿಗಳು ಕೇವಲ ರಾಜಕೀಯ ಲಾಭಕ್ಕಾಗಿ ಹಾಗೆ ಮಾಡುತ್ತಿವೆ. ಇದರಿಂದ ಯಾವ ರಾಜ್ಯಕ್ಕೂ ಯಾವುದೇ ತಾರತಮ್ಯ, ಅನ್ಯಾಯ ಆಗುವುದಿಲ್ಲ ಎಂಬುದು ನನ್ನ ಗ್ಯಾರಂಟಿ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಿಯಾಣದ ಕಾಂಗ್ರೆಸ್ ಪಕ್ಷದ 5 ಶಾಸಕರ ಅಮಾನತು; ಕಾರಣ ಇಲ್ಲಿದೆ – Kannada News | Congress suspends 5 Haryana MLAs for cross voting in Rajya Sabha elections

ಚಂಡೀಗಢ, ಏಪ್ರಿಲ್ 16: ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಹರಿಯಾಣದ ಕಾಂಗ್ರೆಸ್ ಇಂದು (ಏಪ್ರಿಲ್ 16) ತನ್ನ ಪಕ್ಷದ 5 ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಮಾಜಿ ಸಂಸದ ಧರ್ಮಪಾಲ್ ಮಲಿಕ್ ನೇತೃತ್ವದ ಪಕ್ಷದ ಹರಿಯಾಣ ಘಟಕದ ಶಿಸ್ತು ಕ್ರಿಯಾ ಸಮಿತಿ ಶಾಸಕರಾದ ಮೊಹಮ್ಮದ್ ಇಲ್ಯಾಸ್ (ಪುನಾಹನ), ಮೊಹಮ್ಮದ್ ಇಸ್ರೇಲ್ (ಹತಿನ್), ರೇಣು ಬಾಲಾ (ಸಧೌರ), ಶಲ್ಲಿ ಚೌಧರಿ (ನರೈಂಗಢ) ಮತ್ತು ಜರ್ನೈಲ್ ಸಿಂಗ್ (ರತಿಯಾ) ಅವರನ್ನು ಅಮಾನತುಗೊಳಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಾಂಗ್ರೆಸ್ ಈ ಐವರು ಶಾಸಕರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾವ್ ನರೇಂದರ್ ಸಿಂಗ್ ಹೇಳಿದ್ದಾರೆ. ರಾಜ್ಯ ಶಿಸ್ತು ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ನಮ್ಮ ಕೈಬಿಟ್ಟಿದೆ: ಮುಸ್ಲಿಂ ಮುಖಂಡರಿಂದ ತೀವ್ರ ಆಕ್ರೋಶ

“ನಾರಾಯಣಗಢ, ಸಧೌರಾ, ಪೆಹೋವಾ, ಪಟೌಡಿ ಮತ್ತು ಫಿರೋಜ್‌ಪುರ್ ಝಿರ್ಕಾ ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರಾದ ಶಲ್ಲಿ ಚೌಧರಿ, ರೇಣು ಬಾಲಾ, ಸರ್ದಾರ್ ಗುರ್ಮೀತ್ ಸಿಂಗ್, ಮೊಹಮ್ಮದ್ ಇಲ್ಯಾಸ್ ಮತ್ತು ಮೊಹಮ್ಮದ್ ಇಸ್ರೇಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಅಮಾನತುಗೊಳಿಸಲಾಗಿದೆ. ಶಿಸ್ತು ಕ್ರಿಯಾ ಸಮಿತಿಯ ಶಿಫಾರಸಿನ ಮೇರೆಗೆ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ಘೋಷಿಸಿದ್ದಾರೆ.

ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಈ 5 ಶಾಸಕರು ಇತ್ತೀಚೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದರು. ಪಕ್ಷದ ಯಾವುದೇ ಮಟ್ಟದಲ್ಲಿ ಅಶಿಸ್ತನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಪಕ್ಷದ ಸಾಮೂಹಿಕ ನಿರ್ಧಾರಗಳು ಮತ್ತು ಅಧಿಕೃತ ನಿಲುವಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಈ ನಿರ್ಧಾರವು ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ರವಾನಿಸುತ್ತದೆ” ಎಂದು ರಾವ್ ನರೇಂದರ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:Video: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ 

ಹರಿಯಾಣದ ಎರಡು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಮತದಾನ ನಡೆಯಿತು. ಬಿಜೆಪಿ ಸಂಜಯ್ ಭಾಟಿಯಾ ಒಂದು ಸ್ಥಾನವನ್ನು ಆರಾಮವಾಗಿ ಗೆದ್ದರೆ, ನಂದಲ್ ವಿರುದ್ಧದ ನಿಕಟ ಸ್ಪರ್ಧೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಕರಮವೀರ್ ಸಿಂಗ್ ಬೌಧ್ ಎರಡನೇ ಸ್ಥಾನವನ್ನು ಪಡೆದಿದ್ದರು. 5 ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಮತಎಣಿಕೆಯ ಸಮಯದಲ್ಲಿ ಕಾಂಗ್ರೆಸ್​​ನ 4 ಮತಗಳನ್ನು ಸಹ ಅಮಾನ್ಯವೆಂದು ಘೋಷಿಸಲಾಯಿತು. ಆದರೆ, ಶಾಸಕರಾದ ಶಲ್ಲಿ ಚೌಧರಿ, ರೇಣು ಬಾಲಾ ಮತ್ತು ಜರ್ನೈಲ್ ಸಿಂಗ್ ಅಡ್ಡ ಮತದಾನದ ಆರೋಪಗಳನ್ನು ನಿರಾಕರಿಸಿದ್ದರು. ನಮ್ಮ ಹೆಸರುಗಳನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಲಾಗುತ್ತಿದೆ ಮತ್ತು ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿರುವುದಾಗಿ ಸಮರ್ಥಿಸಿಕೊಂಡಿದ್ದರು. ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:24 pm, Thu, 16 April 26

Source link

Exit mobile version