ವಿಶ್ವದ ಟಾಪ್ ಸಿನಿಮಾ ನಿರ್ದೇಶಕನಿಗೆ ಭಾರತದ ಈ ನಿರ್ದೇಶಕ ಅಚ್ಚು-ಮೆಚ್ಚು – Kannada News | Christopher Nolan Gives talks about India director Satyajit Ray

ಕ್ರಿಸ್ಟೊಫರ್ ನೋಲನ್, ಹಾಲಿವುಡ್​​ನ (Hollywood) ಸೂಪರ್ ಸ್ಟಾರ್ ನಟರನ್ನೂ ಮೀರಿಸಬಹುದಾದ ಅಪ್ಪಟ ಅಭಿಮಾನಿಗಳನ್ನು ಹೊಂದಿರುವ ನಿರ್ದೇಶಕ. ಹಾಲಿವುಡ್​​ನಲ್ಲಿ ಫ್ರಾಂಚೈಸ್ ಅಭಿಮಾನಿಗಳು ಬಹಳ ಹೆಚ್ಚು. ಅಂದರೆ ‘ಸ್ಪೈಡರ್ ಮ್ಯಾನ್’ ಅಭಿಮಾನಿಗಳು, ‘ಸೂಪರ್ ಮ್ಯಾನ್’ ಅಭಿಮಾನಿಗಳು, ‘ಮಿಷನ್ ಇಂಪಾಸಿಬಲ್’ ಅಭಿಮಾನಿಗಳು, ‘ಫಾಸ್ಟ್ ಆಂಡ್ ಫ್ಯೂರಿಯಸ್’ ಅಭಿಮಾನಿಗಳು ಹೀಗೆ. ಆದರೆ ಒಬ್ಬ ನಿರ್ದೇಶಕ ಯಾವುದೇ ರೀತಿಯ ಸಿನಿಮಾ ಮಾಡಿದರೂ ನೋಡಲು ವರ್ಷಗಳ ಗಟ್ಟಲೆ ಕಾದು ಕೂರುತ್ತಾರೆಂದರೆ ಅದು ಕ್ರಿಸ್ಟೊಫರ್ ನೋಲನ್​​ಗೆ ಮಾತ್ರ. ತಮ್ಮ ಭಿನ್ನ ನಿರೂಪಣಾ ಶೈಲಿಯಿಂದಲೇ ವಿಶ್ವದಾದ್ಯಂತ ನೂರಾರು ಕೋಟಿ ಅಭಿಮಾನಿಗಳನ್ನು ಗಳಿಸಿರುವ ಕ್ರಿಸ್ಟೊಫರ್ ನೋಲನ್​​ಗೆ ಭಾರತದ ನಿರ್ದೇಶಕರೊಬ್ಬರು ಅಚ್ಚುಮೆಚ್ಚು.

ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ತಿಂಗಳಾನುಗಟ್ಟಲೆ ಮುಂಗಡ ಬುಕಿಂಗ್ ಆಗಿದೆ ಈ ಸಿನಿಮಾ. ಬೆಂಗಳೂರಿನಲ್ಲಿ ಸಹ ಕೋರಮಂಗಲ ಐಮ್ಯಾಕ್ಸ್​​ನಲ್ಲಿ ಕಳೆದೊಂದು ವಾರದಿಂದಲೂ ಹೌಸ್​​ಫುಲ್ ಆಗುತ್ತಿರುವುದು ಮಾತ್ರವಲ್ಲ, ಮುಂದಿನ ಒಂದು ವಾರಕ್ಕೂ ಮುಂಗಡ ಬುಕಿಂಗ್ ಆಗಿ ಹೋಗಿದೆ. ಇಂಥಹಾ ನಿರ್ದೇಶಕ, ಭಾರತದ ಸಿನಿಮಾ ನಿರ್ದೇಶಕರೊಬ್ಬರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ ಕ್ರಿಸ್ಟೊಫರ್ ನೋಲನ್ ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ‘ಕ್ರೈಟೇರಿಯನ್ ಕ್ಲೋಸೆಟ್’ ಭೇಟಿ ನೀಡಿದ್ದರು. ಅಲ್ಲಿನ ಸಿನಿಮಾ ಸಂಗ್ರಹದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಭಾರತೀಯ ಸಿನಿಮಾ ಸರಣಿ ‘ದಿ ಅಪು ಟ್ರಿಲಜಿ’ಯನ್ನು ಕೈಗೆತ್ತಿಕೊಂಡು, ತಾವು ಮನೆಗೆ ಕೊಂಡೊಯ್ಯಲು ಬಯಸುವ ಚಲನಚಿತ್ರಗಳಲ್ಲಿ ‘ದಿ ಅಪು ಟ್ರೈಲಜಿ’ಯನ್ನು ಒಂದನ್ನಾಗಿ ಆಯ್ಕೆ ಮಾಡಿಕೊಂಡರು ಮತ್ತು ಅದರ ನಿರ್ದೇಶಕ ಸತ್ಯಜಿತ್ ರೇ ತಮ್ಮ ಮೇಲೆ ಬೀರಿರುವ ಪ್ರಭಾವದ ಬಗ್ಗೆಯೂ ಅವರು ಮಾತನಾಡಿದರು.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

‘ಕ್ರೈಟೇರಿಯನ್ ಕ್ಲೋಸೆಟ್’ ಪ್ರಪಂಚದಾದ್ಯಂತದ 1,000 ಕ್ಕೂ ಹೆಚ್ಚು ಶ್ರೇಷ್ಠ ಚಲನಚಿತ್ರಗಳ ಸಂಗ್ರಹವನ್ನು ಹೊಂದಿದೆ. ಚಲನಚಿತ್ರ ನಿರ್ದೇಶಕರು, ನಟರು ಮತ್ತು ಕಲಾವಿದರು ಈ ಸಂಗ್ರಹವನ್ನು ವೀಕ್ಷಿಸಲು ಮತ್ತು ತಮ್ಮ ಮೇಲೆ ಪ್ರಭಾವ ಬೀರಿದ ಚಲನಚಿತ್ರಗಳ ಕುರಿತು ಮಾತನಾಡಲು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

‘ಕ್ರೈಟೇರಿಯನ್ ಕಲೆಕ್ಷನ್’ ಖುದ್ದು ಕ್ರಿಸ್ಟೊಫರ್ ಅವರ ವೀಡಿಯೊ ಅನ್ನು ಹಂಚಿಕೊಂಡಿದ್ದು, ನೊಲನ್ ಅವರು ಶೆಲ್ಫ್‌ಗಳನ್ನು ಪರಿಶೀಲಿಸುತ್ತಾ ಬಂದು ಅಂತಿಮವಾಗಿ ‘ದಿ ಅಪು ಟ್ರೈಲಜಿ’ ಬಳಿ ನಿಲ್ಲುತ್ತಾರೆ. ಆ ಚಲನಚಿತ್ರಗಳ ಬಗ್ಗೆ ಮಾತನಾಡುತ್ತಾ ಅವರು, ‘ಭಾರತದ ಅತ್ಯಂತ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ಅವರ ‘ಅಪು ಟ್ರೈಲಜಿ’ ಇದೆ. ಈ ತ್ರಿವಳಿ ಚಿತ್ರಗಳು ‘ಪಥೇರ್ ಪಾಂಚಾಲಿ’ಯೊಂದಿಗೆ ಪ್ರಾರಂಭವಾಗುತ್ತವೆ, ಇದು ಅತ್ಯದ್ಭುತ ಚಿತ್ರ. ಇದು ನನ್ನ ಮನಸ್ಸನ್ನು ಬೆರಗುಗೊಳಿಸಿತ್ತು. ನಾನು ಈ ಟ್ರೈಲಜಿಯ ಎರಡು ಮತ್ತು ಮೂರನೇ ಭಾಗಗಳನ್ನು ಇನ್ನೂ ನೋಡಿಲ್ಲ, ಹಾಗಾಗಿ ಇದನ್ನು ಪಡೆದುಕೊಂಡು ಕಥೆಯನ್ನು ಪೂರ್ಣಗೊಳಿಸಲು ನಾನು ತುಂಬ ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ಸತ್ಯಜಿತ್ ರೇ, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ. ಜೀವಮಾನ ಸಾಧನೆಗೆ ಆಸ್ಕರ್ ಪಡೆದ ಏಕೈಕ ಭಾರತೀಯ ನಿರ್ದೇಶಕ. ಅವರು ಹಾಲಿವುಡ್​ನ ಹಲವು ಹೆಸರಾಂತ ಸಿನಿಮಾ ನಿರ್ದೇಶಕರ ಮೇಲೆ ಪ್ರಭಾವ ಬೀರಿದ್ದಾರೆ. ಹಾಲಿವುಡ್​​ನ ಟಾಪ್ ನಿರ್ದೇಶಕ ಎನಿಸಿಕೊಳ್ಳುವ, ಹಲವು ಆಸ್ಕರ್ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿರುವ ಮಾರ್ಟಿನ್ ಸ್ಕೊರ್ಸೆಸಿ ಸಹ ವಿದ್ಯಾರ್ಥಿ ದೆಸೆಯಲ್ಲೇ ಸತ್ಯಜಿತ್ ರೇ ಅವರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗ ಕ್ರಿಸ್ಟೊಫರ್ ನೋಲನ್ ಸಹ ತಾವು ಸತ್ಯಜಿತ್ ರೇ ಸಿನಿಮಾಗಳ ಅಭಿಮಾನಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಲ್ಹಾದ್ ಜೋಶಿ ಕುರಿತು ಸದನದಲ್ಲಿ ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು – Kannada News | Priyanka Gandhis Controversial Remarks On Pralhad Joshi in Parliament Session BJP demands apology

ನವದೆಹಲಿ, ಜುಲೈ 28: ಲೋಕಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ಮೋದಿ ಅವರು ಹೊಸ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿಯವರನ್ನು ಆಯ್ಕೆ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಅತ್ಯಾಚಾರಿಗಳ ಬಿಡುಗಡೆಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲಾಗಿದೆ. ಈ ನಿರ್ಧಾರದ ಮೂಲಕ ಪ್ರಧಾನಿಯವರು ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ನೀಡಿದ ಸಂದೇಶವೇನು? ಆ ಸಂದೇಶವು ಅತ್ಯಂತ ಸ್ಪಷ್ಟವಾಗಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರ್ಕಾರದ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದು ಸಾಬೀತಾಗಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.

ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದು ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿರುವ ಹೇಳಿಕೆಗಳು ‘ಚಾರಿತ್ರ್ಯ ವಧೆ’ಗೆ ಸಮನಾಗಿವೆ. ಅವರಿಂದ ಇಂತಹ ಭಾಷೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು. ಅವರು ಇಂತಹ ಭಾಷೆಯನ್ನು ಬಳಸಬಾರದು. ಅವರು ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಆ ಪಕ್ಷದ ಹಿರಿಯ ನಾಯಕಿಯಾಗಿದ್ದಾರೆ. ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಸದನದ ಘನತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ಸದನದ ಕ್ಷಮೆಯಾಚಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: ಹಾರ ಹಾಕಿ ಸನ್ಮಾನಿಸಲು ಧರ್ಮೇಂದ್ರ ಪ್ರಧಾನ್ ಪಾಕ್ ವಿರುದ್ಧ ಯುದ್ಧ ಗೆದ್ದು ಬಂದಿದ್ದಾರಾ?; ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಟೀಕೆ:

ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಸಾಕ್ಷಿಯನ್ನು ನೀಡುವಂತೆ ಬಿಜೆಪಿ ಒತ್ತಾಯಿಸಿತು. ಆಗ ಪ್ರಿಯಾಂಕಾ, ಆ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ ಎಂದು ಹೇಳಿದರು. ಕೊನೆಗೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಿಯಾಂಕಾ ಗಾಂಧಿಯ ಈ ಹೇಳಿಕೆಯನ್ನು ಸಂಸತ್ತಿನ ಕಲಾಪದಿಂದ ತೆಗೆದುಹಾಕಿದರು.

ಪ್ರಲ್ಹಾದ್ ಜೋಶಿ ಆಕ್ಷೇಪ:

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಮಾತನಾಡುವ ಮುನ್ನ ನೀವು ನಿಮ್ಮ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು” ಎಂದು ಹೇಳಿದ್ದಾರೆ. ಈ ಆರೋಪಗಳನ್ನು “ತಪ್ಪು ಮಾಹಿತಿ” ಎಂದು ತಳ್ಳಿಹಾಕಿರುವ ಪ್ರಲ್ಹಾದ್ ಜೋಶಿ, “ಸುಳ್ಳು ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನನ್ನ ವಿರುದ್ಧ ನೀಡಿದ ಸುಳ್ಳು ಹೇಳಿಕೆಗಾಗಿ ಪ್ರಿಯಾಂಕಾ ಗಾಂಧಿ ಕ್ಷಮೆಯಾಚಿಸಬೇಕು. ಅವರನ್ನು ಸಂಸತ್ತಿನಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರಧಾನ್ ಅವರನ್ನು ತೆಗೆದುಹಾಕಿ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿರಿ; ಸಂಸತ್​​ನಲ್ಲಿ ಅಖಿಲೇಶ್ ಯಾದವ್ ವ್ಯಂಗ್ಯ

ಮೋದಿ ಬಗ್ಗೆ ಪ್ರಿಯಾಂಕಾ ಲೇವಡಿ:

ಪ್ರಧಾನಿ ಮೋದಿಯವರ ‘ಇನ್‌ಸ್ಟಾಗ್ರಾಮ್ ರೀಲ್’ಗೆ ಪ್ರಿಯಾಂಕಾ ಗಾಂಧಿ ಟಾಂಗ್ ನೀಡಿದ್ದಾರೆ. ವಿದ್ಯಾರ್ಥಿ ಪ್ರತಿಭಟನೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ರೀಲ್ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವ್ಯಂಗ್ಯವಾಡಿದ್ದಾರೆ. “ಮಧ್ಯರಾತ್ರಿ ರೀಲ್ಸ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಪ್ರಧಾನಿಯವರು ಕ್ಯಾಮೆರಾದ ಆಂಗಲ್ ಬದಲಾಯಿಸುವ ಬದಲು ತಮ್ಮ ಮನಸ್ಸಿನ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Tue, 28 July 26

Source link

ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ – Kannada News | Allu Arjun removed shoes before taking the gift

ನಟ ಅಲ್ಲು ಅರ್ಜುನ್ (Allu Arjun) ತಮ್ಮ ಅಭಿಮಾನಿಗಳ ಸಮಾವೇಶದಲ್ಲಿ ಭಾಗಿ ಆಗಿದ್ದರು. ಎಎಎಫ್​​ಎ (ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್) ವತಿಯಿಂದ ಈ ಸಮಾವೇಶ ಆಯೋಜಿಸಲಾಗಿತ್ತು. ನಟ ಅಲ್ಲು ಅರ್ಜುನ್ ಅವರು ಸಮಾವೇಶದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಹಲವಾರು ಮಂದಿ ಅಲ್ಲು ಅರ್ಜುನ್ ಅವರಿಗಾಗಿ ವಿಶೇಷ ಉಡುಗೊರೆಗಳನ್ನು ಸಹ ತಂದಿದ್ದರು. ಅವರಲ್ಲಿ ಒಬ್ಬರು ತಮ್ಮ ಊರಿನ ವಿಶೇಷವೆಂದು ದೇವತೆಗಳ ‘ಬಾಗಿನ’ ರೀತಿಯ ಉಡುಗೊರೆಯೊಂದನ್ನು ತಂದಿದ್ದ. ಈ ಉಡುಗೊರೆ ಸ್ವೀಕರಿಸುವ ಮುನ್ನ ನಟ ಅಲ್ಲು ಅರ್ಜುನ್ ತಾವು ಧರಿಸಿದ್ದ ಶೂಗಳನ್ನು ತೆಗೆದು ಉಡುಗೊರೆ ಸ್ವೀಕರಿಸಿದರು. ಅಲ್ಲು ಅರ್ಜುನ್ ಅವರ ಈ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನುಗ್ಗೆ ಸೊಪ್ಪು: ಹಾಲು-ಬಾಳೆಹಣ್ಣಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಈ ಸೊಪ್ಪಿನಲ್ಲಿದೆ ಅನೇಕ ಪ್ರಯೋಜನ! – Kannada News | Moringa Powder Benefits: Health Experts Explain the Real Facts

ಇತ್ತೀಚಿನ ದಿನಗಳಲ್ಲಿ “ಸೂಪರ್‌ಫುಡ್”ಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಆದರೆ ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ನುಗ್ಗೆ ಸೊಪ್ಪು (Moringa Leaves) ಪೌಷ್ಟಿಕಾಂಶಗಳ ಭಂಡಾರವಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯಾಧಾರಿತ ಪ್ರೋಟೀನ್‌ಗಳು ಸಮೃದ್ಧವಾಗಿದ್ದು, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಈ ಸೊಪ್ಪು ಕಾಯಿಲೆಗೆ ಔಷಧವಲ್ಲದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಇದು ಯಾವ ರೀತಿ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನುಗ್ಗೆ ಸೊಪ್ಪಿನಲ್ಲಿರುವ ಪ್ರಮುಖ ಪೌಷ್ಟಿಕಾಂಶಗಳು:

ವಿಟಮಿನ್ ಎ – ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ವಿಟಮಿನ್ ಸಿ – ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಇ – ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ
ಕ್ಯಾಲ್ಸಿಯಂ – ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಕಾರಿ
ಕಬ್ಬಿಣ (Iron) – ರಕ್ತಹೀನತೆ ತಡೆಗಟ್ಟಲು ನೆರವಾಗಬಹುದು
ಪೊಟ್ಯಾಸಿಯಂ – ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕಾರಿ
ಫೈಬರ್ – ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ
ಸಸ್ಯಾಧಾರಿತ ಪ್ರೋಟೀನ್ – ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ

ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು:

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ. ಇದರಿಂದ ಸಾಮಾನ್ಯ ವೈರಲ್ ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯ ಉತ್ತಮವಾಗಬಹುದು.

ರಕ್ತಹೀನತೆ ತಡೆಗಟ್ಟಲು ಸಹಕಾರಿ: ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವಿದ್ದು, ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ನೆರವಾಗಬಹುದು.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು: ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ನಂತಹ ಖನಿಜಾಂಶಗಳು ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ವಯೋವೃದ್ಧರಿಗೆ ಇದು ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ ಕಡಿಮೆಯಾಗಲು ಮತ್ತು ಜೀರ್ಣಾಂಗದ ಕಾರ್ಯ ಸುಧಾರಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ತಪ್ಪಿಸಿ

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯ ಸಂಯುಕ್ತಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಸಮತೋಲಿತ ಆಹಾರ ಮತ್ತು ವ್ಯಾಯಾಮದೊಂದಿಗೆ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಕಣ್ಣಿನ ಆರೋಗ್ಯ ಕಾಪಾಡುತ್ತದೆ: ವಿಟಮಿನ್ಎ ಮತ್ತು ಬೇಟಾ-ಕ್ಯಾರೋಟಿನ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ದೃಷ್ಟಿ ಚೆನ್ನಾಗಿರುತ್ತದೆ.

ಚರ್ಮ ಮತ್ತು ಕೂದಲಿನ ಆರೈಕೆ: ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿ.

ನುಗ್ಗೆ ಸೊಪ್ಪನ್ನು ಹೇಗೆ ಸೇವಿಸಬಹುದು?

  • ನುಗ್ಗೆ ಸೊಪ್ಪಿನ ಪಲ್ಯ
  • ಸಾಂಬಾರ್ ಅಥವಾ ಸಾರು
  • ಸೂಪ್‌ನಲ್ಲಿ
  • ಚಪಾತಿ ಹಿಟ್ಟಿಗೆ ಸೇರಿಸಿ
  • ಸ್ಮೂಥಿಯಲ್ಲಿ ಸೇರಿಸಬಹುದು

ಯಾರು ಎಚ್ಚರಿಕೆಯಿಂದ ಸೇವಿಸಬೇಕು?

  • ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
  • ಮಧುಮೇಹದ ಔಷಧಿ ಸೇವಿಸುವವರು ವೈದ್ಯರ ಸಲಹೆ ಪಡೆದು ಆ ಬಳಿಕ ಸೇವಿಸುವುದು ಉತ್ತಮ.
  • ಕಡಿಮೆ ರಕ್ತದೊತ್ತಡ ಇರುವವರು ಅತಿಯಾಗಿ ಸೇವಿಸಬಾರದು.
  • ಥೈರಾಯ್ಡ್ ಅಥವಾ ದೀರ್ಘಕಾಲದ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸದ ಸೆಂಥಿಲ್ ವಿರುದ್ಧ ಆರೋಪ: ಶಾಸಕ ಜನಾರ್ದನ ರೆಡ್ಡಿಗೆ ಕೋರ್ಟ್ ಶಾಕ್ – Kannada News | Dharmasthala mass burial case: Court summons janardhan reddy for shashikanth sinthil defamation case

ಬೆಂಗಳೂರು, (ಜುಲೈ 28): ಧರ್ಮಸ್ಥಳದ ಬುರುಡೆ ಕೇಸ್​ನಲ್ಲಿ (dharmasthala mass burial case) ಮಾಜಿ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ (Sasikanth Senthil) ಅವರು ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ (gali janardhan reddy) ವಿರುದ್ಧ ಮಾನನಷ್ಟ ದಾಖಲಿಸಿದ್ದಾರೆ. ಸಸಿಕಾಂತ್ ಸೆಂಥಿಲ್ ಅವರ ಖಾಸಗಿ ದೂರು ಸ್ವೀಕರಿಸಿದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್, ಆಗಸ್ಟ್ 24ರಂದು ಖುದ್ದಾಗಿ ಹಾಜರಾಗುವಂತೆ ಜನಾರ್ದನ ರೆಡ್ಡಿ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ತಮಿಳುನಾಡಿ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ಅವರು ಧರ್ಮಸ್ಥಳದ ಬುರುಡೆ ಪ್ರಕರಣದ ಸೂತ್ರಧಾರರಾಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಸೆಂಥಿಲ್ ಅವರು ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡು ಪ್ರತಿವಾದಿ ಜನಾರ್ದನ ರೆಡ್ಡಿ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನ ಆಗಸ್ಟ್ 24ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ಗೆ ಬಿಗ್ ಟ್ವಿಸ್ಟ್: ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ, ಸಸಿಕಾಂತ್ ಸೆಂಥಿಲ್ ಆಪ್ತ ಎಂದ ಜನಾರ್ದನ ರೆಡ್ಡಿ

ರೆಡ್ಡಿ-ಸೆಂಥಿಲ್  ಆರೋಪ ಪ್ರತ್ಯಾರೋಪ

ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರದ ಹಿಂದಿನ ಮಾಸ್ಟರ್​ ಮೈಂಡ್​​ ಸಸಿಕಾಂತ್ ಸೆಂಥಿಲ್ ಅವರಾಗಿದ್ದಾರೆ ಎಂದು ಕಳೆದ ವರ್ಷ ಆಗಸ್ಟ್​ನಲ್ಲಿ ಜನಾರ್ದನ ರೆಡ್ಡಿ ಅವರು ಆರೋಪಿಸಿ, ತನಿಖೆ ಎದುರಿಸುವಂತೆ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೆಂಥಿಲ್, “ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಈ ಹಿಂದೆ ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳ ಕುರಿತು ಸಿಬಿಐಗೆ ದಾಖಲೆಗಳನ್ನು ಒದಗಿಸಿದ್ದೆ. ಅದಕ್ಕಾಗಿ ಈಗ ರೆಡ್ಡಿ ಅವರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದರು.

ಬಳಿಕ ಪ್ರತಿಕ್ರಿಯಿಸಿದ್ದ ಜನಾರ್ದನ ರೆಡ್ಡಿ , “ಸೆಂಥಿಲ್​ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ನನ್ನ ವಿರುದ್ಧದ ಪ್ರಕರಣಗಳು ಪ್ರಾರಂಭವಾದಾಗ ಕಾಂಗ್ರೆಸ್​​ ಸಂಸದರು ಸಹಾಯಕ ಆಯುಕ್ತರಾಗಿ ಎಂದಿಗೂ ಸೇವೆ ಸಲ್ಲಿಸಿರಲಿಲ್ಲ.ನನ್ನನ್ನು ಸೆಪ್ಟೆಂಬರ್​ 5, 2011 ರಂದು ಬಂಧಿಸಲಾಯ್ತು. ನನ್ನ ಬಂಧನದ ನಂತರ, ಅವರು ಬಳ್ಳಾರಿಯಲ್ಲಿ ಕರ್ತವ್ಯಕ್ಕೆ ಸೇರಿದರು. ನನ್ನ ಮತ್ತು ಸೆಂಥಿಲ್ ನಡುವೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್ – Kannada News | Actor Dhanveer visits jail to meet Darshan putting aside differences

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರ ಆಪ್ತವಲಯದಲ್ಲಿ ನಟ ಧನ್ವೀರ್ ಗುರುತಿಸಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ದರ್ಶನ್ ಕುಟುಂಬದ ಜೊತೆ ಧನ್ವೀರ್ ಅವರಿಗೆ ಮನಸ್ತಾಪ ಉಂಟಾಗಿದೆ ಎಂಬ ಮಾತು ಕೇಳಿಬಂದಿತ್ತು. ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ಧನ್ವೀರ್ (Dhanveer) ಅವರು ಜೈಲಿನ ಬಳಿ ಸುಳಿದಿರಲಿಲ್ಲ. ಆದರೆ ಈಗ ವೈಮನಸ್ಸು ಮರೆತು ಮತ್ತೆ ಜೈಲಿಗೆ ಬಂದಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಲು ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಹೋಗಿರುವ ವಿಡಿಯೋ ಇಲ್ಲಿದೆ. ದರ್ಶನ್ ಅವರಿಗೆ ಜಾಮೀನು ಕೊಡಿಸಲು ಅವರ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟಿ ರಕ್ಷಿತಾ ಪ್ರೇಮ್ ಅವರು ಕೂಡ ಜೈಲಿಗೆ ಭೇಟಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

India Post: ಆಗಸ್ಟ್ 1ರಿಂದ ಹೊಸ ಸ್ಪೀಡ್ ಪೋಸ್ಟ್ ಶುಲ್ಕ ಜಾರಿ, ದಾಖಲೆ- ಪಾರ್ಸೆಲ್‌ಗೆ ಪ್ರತ್ಯೇಕ ವ್ಯಾಖ್ಯಾನ – Kannada News | India Post Revises Speed Post Tariffs from August 1; Clarifies Letter and Parcel Categories

ನವದೆಹಲಿ, ಜುಲೈ 28: ಮೊದಲ ಬಾರಿಗೆ ಅಂಚೆ ಇಲಾಖೆ (India Post) ದಾಖಲೆ (Document) ಎಂಬ ಪದಕ್ಕೆ ಅಧಿಕೃತ ವ್ಯಾಖ್ಯಾನ ನೀಡಿದ್ದು, ಪತ್ರಗಳು, ಮುದ್ರಿತ ವಸ್ತುಗಳು ಹಾಗೂ ಮರುಮಾರಾಟ ಮೌಲ್ಯವಿಲ್ಲದ ಉಚಿತ (Complimentary) ವಸ್ತುಗಳನ್ನು ದಾಖಲೆಗಳೆಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ. ಇವುಗಳಿಗೆ ಕಡಿಮೆ ಶುಲ್ಕ ವಿಧಿಸಲಾಗಲಿದ್ದು, ಉಳಿದ ಎಲ್ಲ ವಸ್ತುಗಳನ್ನು ಪಾರ್ಸೆಲ್ (Parcel) ವಿಭಾಗದಲ್ಲಿ ಇನ್ನು ಸಾಗಾಟ ನಡೆಯಲಿದೆ. ಇದರ ಜೊತೆಗೆ, ಚಿಲ್ಲರೆ (Retail) ಹಾಗೂ ಸಗಟು (Wholesale) ಗ್ರಾಹಕರಿಗಾಗಿ 24 ಸ್ಪೀಡ್ ಪೋಸ್ಟ್ ಮತ್ತು 48 ಸ್ಪೀಡ್ ಪೋಸ್ಟ್ ಸೇವೆಗಳ ಹೊಸ ದರಗಳನ್ನು ಪ್ರಕಟಿಸಲಾಗಿದೆ.

ದಾಖಲೆ ವಿಭಾಗಕ್ಕೆ ಸೇರುವ ವಸ್ತುಗಳು

ಹೊಸ ಅಧಿಸೂಚನೆ ಪ್ರಕಾರ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ವಿಮೆ (BFSI) ಕ್ಷೇತ್ರಕ್ಕೆ ಸಂಬಂಧಿಸಿದ ವೆಲ್ಕಮ್ ಕಿಟ್‌ಗಳು, ಪತ್ರಗಳು, ಪಾಸ್‌ಬುಕ್‌ಗಳು, ಚೆಕ್‌ಬುಕ್‌ಗಳು, ಬ್ಯಾಂಕ್ ವಿವರಗಳ ದಾಖಲೆಗಳು, ಪ್ಲಾಸ್ಟಿಕ್ ಕಾರ್ಡ್‌ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿಗಳನ್ನು ದಾಖಲೆ ಎಂದು ಪರಿಗಣಿಸಲಾಗುತ್ತದೆ. 500 ಗ್ರಾಂವರೆಗೆ ತೂಕವಿರುವ, ವಾಣಿಜ್ಯೇತರ ರಾಖಿ ಕವರ್‌ಗಳು, ಪ್ಯಾಕೆಟ್‌ಗಳು ಹಾಗೂ ಶುಭಾಶಯ ಪತ್ರಗಳನ್ನು ಸಹ ದಾಖಲೆ ವಿಭಾಗದಲ್ಲೇ ಸಾಗಿಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಸ್ತುಗಳು ಪಾರ್ಸೆಲ್ ವಿಭಾಗಕ್ಕೆ ಸೇರುತ್ತವೆ.

ಇದನ್ನೂ ಓದಿ: EPFO ಚಂದಾದಾರರ ಗಮನಕ್ಕೆ; UPI ಆಧಾರಿತ PF ಕ್ಲೇಮ್ ಸೌಲಭ್ಯ ಜಾರಿಗೆ ಮತ್ತಷ್ಟು ವಿಳಂಬ!

ಚಿಲ್ಲರೆ ಗ್ರಾಹಕರಿಗೆ ಎಷ್ಟು ಶುಲ್ಕ?

ಚಿಲ್ಲರೆ (Retail) ಗ್ರಾಹಕರಿಗೆ ಈಗಿರುವ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ದಾಖಲೆ (Document) ವಿಭಾಗದ ಬಲ್ಕ್ ಬುಕ್ಕಿಂಗ್‌ಗಳಿಗೆ ಹೊಸ ದರಗಳನ್ನು ಅಧಿಸೂಚನೆ ಮಾಡಲಾಗಿದೆ. ಆಗಸ್ಟ್ 1ರಿಂದ 24 ಸ್ಪೀಡ್ ಪೋಸ್ಟ್ ಸೇವೆಯಡಿ, ಚಿಲ್ಲರೆ ಗ್ರಾಹಕರು ತೂಕ ಮತ್ತು ದೂರವನ್ನು ಆಧರಿಸಿ ಪ್ರತಿ ಪ್ಯಾಕೆಟ್‌ಗೆ ₹38 ರಿಂದ ₹186 ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ.

  • 50 ಗ್ರಾಂಗಿಂತ ಕಡಿಮೆ ತೂಕದ ಪ್ಯಾಕೆಟ್‌ಗಳಿಗೆ ಸ್ಥಳೀಯ ಅಂಚೆ ಶುಲ್ಕ ₹38, ದೇಶದ ಯಾವುದೇ ಭಾಗಕ್ಕೆ ಕಳುಹಿಸಲು ₹94 (ಜಿಎಸ್‌ಟಿ ಹೆಚ್ಚುವರಿ)
  • 51 ರಿಂದ 250 ಗ್ರಾಂ ತೂಕದ ಪ್ಯಾಕೆಟ್‌ಗಳಿಗೆ ₹118 ರಿಂದ ₹154 ವರೆಗೆ
  • 251 ರಿಂದ 500 ಗ್ರಾಂ ತೂಕದ ಪ್ಯಾಕೆಟ್‌ಗಳಿಗೆ ₹140 ರಿಂದ ₹186 ವರೆಗೆ ಪ್ರತಿ ಪ್ಯಾಕೆಟ್‌ಗೆ ಶುಲ್ಕ

ಸಗಟು ಗ್ರಾಹಕರಿಗೆ ಹೊಸ ಶುಲ್ಕ

ಸಗಟು (Wholesale) ಗ್ರಾಹಕರಿಗೆ 24 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಗೆ ₹38 ರಿಂದ ₹100 ಹಾಗೂ 48 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಗೆ ₹48 ರಿಂದ ₹72 ವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಅಂಚೆ ಇಲಾಖೆ ತಿಳಿಸಿರುವಂತೆ, 48 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಯಡಿ, ಚಿಲ್ಲರೆ ಗ್ರಾಹಕರು ತೂಕ ಮತ್ತು ದೂರವನ್ನು ಆಧರಿಸಿ ಪ್ರತಿ ಪ್ಯಾಕೆಟ್‌ಗೆ ₹61 ರಿಂದ ₹121 ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಸ್ತುತ 24 ಗಂಟೆಗಳ ಸ್ಪೀಡ್ ಪೋಸ್ಟ್ ಮತ್ತು 48 ಗಂಟೆಗಳ ಸ್ಪೀಡ್ ಪೋಸ್ಟ್ ಸೇವೆಗಳು ದೇಶದ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಮಾತ್ರ ಲಭ್ಯವಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾರ ಹಾಕಿ ಸನ್ಮಾನಿಸಲು ಧರ್ಮೇಂದ್ರ ಪ್ರಧಾನ್ ಪಾಕ್ ವಿರುದ್ಧ ಯುದ್ಧ ಗೆದ್ದು ಬಂದಿದ್ದಾರಾ?; ಕಾಂಗ್ರೆಸ್ ವಾಗ್ದಾಳಿ – Kannada News | BJP Garlanded Dharmendra Pradhan as if he won war with Pakistan Congress mp Gaurav Gogoi slams in Parliament

ನವದೆಹಲಿ, ಜುಲೈ 28: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಸತ್​​ಗೆ ಆಗಮಿಸಿದ ಅವರಿಗೆ ಹಾರ ಹಾಕಿ ಸ್ವಾಗತಿಸಲಾಯಿತು. ಈ ಬಗ್ಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಸಂಸದರು ಧರ್ಮೇಂದ್ರ ಪ್ರಧಾನ್ ಅವರನ್ನು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಮರಳಿದವರಂತೆ ಸಂಸತ್ತಿಗೆ ಸ್ವಾಗತಿಸಿದ್ದಾರೆ” ಎಂದು ಟೀಕಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ರಾಜೀನಾಮೆ ನೀಡಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಸಂಸತ್ತಿಗೆ ಆಗಮಿಸುತ್ತಿದ್ದಂತೆ, ಅವರನ್ನು “ಧರ್ಮೇಂದ್ರ ಪ್ರಧಾನ್ ಝಿಂದಾಬಾದ್” ಎಂಬ ಘೋಷಣೆಗಳೊಂದಿಗೆ ಬಿಜೆಪಿ ಸಂಸದರು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದರು. ಬಿಜೆಪಿ ಸಂಸದರು ಅವರನ್ನು ಸುತ್ತುವರೆದು, ಜೈಕಾರ ಹಾಕಿದರು. ಒಬ್ಬರು ಸಂಸದ ಧರ್ಮೇಂದ್ರ ಪ್ರಧಾನ್ ಅವರ ತಲೆಗೆ ಸಾಂಪ್ರದಾಯಿಕ ಟೋಪಿ ಹಾಕಿ, ಹೆಗಲಿಗೆ ಶಾಲು ಹೊದಿಸಿ ಸನ್ಮಾನಿಸಿದರು.

“ರಾಜೀನಾಮೆ ನೀಡಿದ ನಂತರ ಧರ್ಮೇಂದ್ರ ಪ್ರಧಾನ್ ಸಂಸತ್ತಿನ ಆವರಣಕ್ಕೆ ಬಂದಾಗ, ಬಿಜೆಪಿ ಸಂಸದರು ಅವರಿಗೆ ಹೂಮಾಲೆ ಹಾಕಿ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಬಂದವರಂತೆ ಸ್ವಾಗತಿಸಿದರು” ಎಂದು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026ರ ಮೇಲಿನ ಚರ್ಚೆಯ ವೇಳೆ ಗೌರವ್ ಗೊಗೋಯ್ ಟೀಕಿಸಿದರು.

ಇದನ್ನೂ ಓದಿ: ರಾಜೀನಾಮೆ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಬಂದ ಧರ್ಮೇಂದ್ರ ಪ್ರಧಾನ್, ಜಿಂದಾಬಾದ್ ಜಯಘೋಷದೊಂದಿಗೆ ಎನ್​ಡಿಎ ಸಂಸದರ ಸ್ವಾಗತ

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದರೂ, ಸಂಸತ್ತಿನಲ್ಲಿ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸನ್ಮಾನ ಮಾಡಿದ ಸರ್ಕಾರದ ನಡೆಗೆ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಮಾತನಾಡಿದ ಗೌರವ್ ಗೊಗೋಯ್, “21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಯಾರ ಅಧಿಕಾರಾವಧಿಯಲ್ಲಿ 21 ಮಕ್ಕಳು ಪ್ರಾಣ ಕಳೆದುಕೊಂಡರೋ ಆ ಸಚಿವರು ರಾಜೀನಾಮೆ ನೀಡಿದರು. ಆದರೆ, ಅವರು ಸದನಕ್ಕೆ ಬಂದಾಗ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಬಂದವರಂತೆ ಅವರಿಗೆ ಹೂಮಾಲೆ ಹಾಕಿದಿರಿ. ಗಡಿಯಲ್ಲಿ ವಿಜಯ ಸಾಧಿಸಿ ಬಂದಂತೆ ಅವರನ್ನು ಗೌರವಿಸಿದಿರಿ” ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ‘ಪ್ರಜಾಪ್ರಭುತ್ವದ ಗೆಲುವು’; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ

ಈ ವರ್ಷದ್ದು ಮಾತ್ರವಲ್ಲದೆ 2024ರ ನೀಟ್ ವಿವಾದವನ್ನು ಧರ್ಮೇಂದ್ರ ಪ್ರಧಾನ್ ನಿರ್ವಹಿಸಿದ ರೀತಿಯನ್ನು ಟೀಕಿಸಿದ ಕೂಡ ಗೌರವ್ ಗೊಗೋಯ್, ಅಂದಿನ ಶಿಕ್ಷಣ ಸಚಿವರು ಆರಂಭದಲ್ಲಿ ಯಾವುದೇ ತಪ್ಪು ನಡೆದಿರುವುದನ್ನು ನಿರಾಕರಿಸಿದ್ದರು. “2024ರಲ್ಲಿ ದೇಶಾದ್ಯಂತ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುನ್ನೆಲೆಗೆ ಬಂದಾಗ ಧರ್ಮೇಂದ್ರ ಪ್ರಧಾನ್ ಏನು ಹೇಳಿದರು ಗೊತ್ತೇ? ‘ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾಗಿದೆ? ಯಾವುದೇ ಪತ್ರಿಕೆಯೂ ಸೋರಿಕೆಯಾಗಿಲ್ಲ’ ಎಂದು ಪ್ರಶ್ನಿಸಿದ್ದರು. ಮೊದಲ ಎರಡೂವರೆ ತಿಂಗಳ ಕಾಲ ಯಾವುದೇ ಅಕ್ರಮಗಳು ನಡೆದಿಲ್ಲ ಮತ್ತು ತಾನು ಅತ್ಯುತ್ತಮ ಕೆಲಸ ಮಾಡಿದ್ದೇನೆಂಬುದೇ ಸರ್ಕಾರದ ನಿಲುವಾಗಿತ್ತು” ಎಂದು ಆರೋಪಿಸಿದರು.

ಅಲ್ಲದೆ, ಪರೀಕ್ಷಾ ಸೋರಿಕೆಯನ್ನು ಹೇಗೆ ಪರಿಹರಿಸಬೇಕು ಎಂಬುದರ ಗಮನ ಹರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು “ಇನ್‌ಸ್ಟಾಗ್ರಾಮ್ ಕಡೆಗೆ ಗಮನ ಹರಿಸಿ” ಎಂದು ಹೇಳುತ್ತಾರೆ ಎಂದು ಗೊಗೋಯ್ ಟೀಕಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಒಂದು ತಿಂಗಳಿಗೂ ಹೆಚ್ಚು ಕಾಲದ ಪ್ರತಿಭಟನೆಯ ನಂತರ, ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಯುವತಿಯರ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಕಂಗನಾ ರಣಾವತ್ – Kannada News | Kangana Ranaut calls young Hindu Women Generation Gutter Instagram Post over CJP Protest

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಯುವ ಹಿಂದೂ (Hindu) ಮಹಿಳೆಯರನ್ನು ‘ಗಟಾರ ತಲೆಮಾರು’ ಎಂದು ಕರೆದಿದ್ದಾರೆ. ಅವರ ಈ ರೀತಿಯ ಹೇಳಿಕೆಗೆ ಜಿನ್ ಜಿ (Gen Z) ಯುವಕ-ಯುವತಿಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಜೆನ್ ಜಿ ಯುವತಿಯರ ಬಗ್ಗೆ ಕಂಗನಾ ಹೇಳಿಕೆ:

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಯುವ ಹಿಂದೂ ಮಹಿಳೆಯರ ನಡವಳಿಕೆ ಅತ್ಯಂತ ಆಘಾತಕಾರಿಯಾಗಿದೆ. ಸ್ವತಂತ್ರ ವೃತ್ತಿಪರ ಮಹಿಳೆಯರ ಜೀವನವನ್ನು ಅನುಕರಿಸಲು ಬಯಸುವ ಇವರು, ಆ ಸ್ವಾತಂತ್ರ್ಯವನ್ನು ಗಳಿಸಲು ಯಾವುದೇ ಶ್ರಮ ವಹಿಸುವುದಿಲ್ಲ. ನಿಜವಾದ ಸ್ವತಂತ್ರ ಮಹಿಳೆಯರು ಬಂಡಾಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ, ಅಸಂಪ್ರದಾಯಿಕ ವೃತ್ತಿಜೀವನವನ್ನು ಆಯ್ದುಕೊಳ್ಳುತ್ತಾರೆ ಮತ್ತು ತಮ್ಮ ಕ್ರಿಯೆಗಳಿಗೆ ತಾವೇ ಜವಾಬ್ದಾರರಾಗುತ್ತಾರೆ. ಅವರು ತಮ್ಮ ಹೆತ್ತವರ ಅಥವಾ ಕುಟುಂಬದ ವೆಚ್ಚದಲ್ಲಿ ಇದನ್ನು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಕಂಗನಾ ರಣಾವತ್ ಖಾರದ ಮಾತುಗಳು:

ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾದ ಭಾರತೀಯ ಮಹಿಳೆಯರನ್ನು ‘ಜೆನೆರೇಷನ್ ಗಟಾರ್’ ಎಂದು ಕಂಗನಾ ಕರೆದಿದ್ದಾರೆ. ‘ಅವರಿಂದ ಸಮಾಜಕ್ಕೆ ಅಥವಾ ವ್ಯವಸ್ಥೆಗೆ ಯಾವುದೇ ಕೊಡುಗೆಯಿಲ್ಲ. ಅವರು ಓದಿನಲ್ಲೂ ಉತ್ತಮರಲ್ಲ, ಅಷ್ಟು ಕನಿಷ್ಠ ಮಟ್ಟದಲ್ಲಿದ್ದಾರೆ ಹಾಗೂ ಭ್ರಷ್ಟರಾಗಿದ್ದಾರೆ. ಅವರಿಗೆ ಗೃಹಿಣಿಯರಾಗಲೂ ಅರ್ಹತೆಯಿಲ್ಲ. ಆದರೂ ಡ್ರಗ್ಸ್, ಮದ್ಯಪಾನ ಮತ್ತು ಹಲವರ ಜೊತೆಗಿನ ಲೈಂಗಿಕ ಸಂಬಂಧಗಳ ಸ್ವಾತಂತ್ರ್ಯವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ. ಹೆತ್ತವರ ಗಳಿಕೆಯಲ್ಲೇ ನಾಚಿಕೆಯಿಲ್ಲದೆ ಜೀವನ ನಡೆಸುತ್ತಾ, ನಿಜವಾಗಿ ಸ್ವತಂತ್ರರಾಗದೆ ಸ್ವತಂತ್ರ ಜೀವನಕ್ಕಾಗಿ ನಿರಂತರವಾಗಿ ಜಗಳವಾಡುತ್ತಾರೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸ್ವತಂತ್ರ ಜೀವನವನ್ನು ಕಷ್ಟಪಟ್ಟು ಗಳಿಸಿಕೊಳ್ಳಬೇಕು. ಯಾವುದೇ ಹೊಣೆಗಾರಿಕೆಯಿಲ್ಲದೆ ಸ್ವತಂತ್ರವಾಗಿ ಜೀವಿಸಲು ಯತ್ನಿಸಿದರೆ ನೀವು ಕೇವಲ ವಿಕೃತ ಜೀವಿಯಷ್ಟೇ. ಗಟಾರ್ ಚಾಪ್’ ಎಂದು ಕಂಗನಾ ರಣಾವತ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಾಕ್ಷಿ ಸಿನ್ಹಾ ಸಂಭ್ರಮ: ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ ನಟಿ

ಯುವಜನರ ವಿರುದ್ಧ ಕಂಗನಾ ಟೀಕೆ:

ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗಳನ್ನು ನೋಡಿದ ನಂತರ ತಮಗೆ ಡಿಜಿಟಲ್ ಡಿಟಾಕ್ಸ್ ಬೇಕಿದೆ ಎಂದು ಕಂಗನಾ ಇತ್ತೀಚೆಗಷ್ಟೇ ಹೇಳಿದ್ದರು. ಯುವಜನರ ಭಾಷೆ ಹಾಗೂ ವರ್ತನೆ ಕುರಿತು ಆಕ್ಷೇಪ ಎತ್ತಿದ್ದ ಅವರು, ‘ನೀವು ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತೀರಿ ಮತ್ತು ಅವುಗಳಂತೆಯೇ ವರ್ತಿಸುತ್ತೀರಿ’ ಎಂದಿದ್ದರು. ಕಂಗನಾ ಅವರ ಈ ಸರಣಿ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ 1991ರ ಮಾದರಿ ಕ್ರಾಂತಿ: ಸರ್ಕಾರಕ್ಕೆ ಕರವೇ ಎಚ್ಚರಿಕೆ – Kannada News | Cauvery Water Row: Karnataka Leaders Warn of Conflict Over Tamil Nadu Water Release

ಬೆಂಗಳೂರು, ಜು.28 : ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ (ಒಟ್ಟು 4.5 ಟಿಎಂಸಿ) ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಹಾಗೂ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಕುಡಿಯುವ ನೀರಿಗೂ ತೊಂದರೆಯಾಗಿರುವಾಗ ತಮಿಳುನಾಡಿಗೆ ನೀರು ಹರಿಸಿದರೆ 1991ರ ಮಾದರಿಯ ಕಾವೇರಿ ಸಂಘರ್ಷ ಎದುರಾಗಲಿದೆ ಹಾಗೂ ರಾಜ್ಯದಲ್ಲಿ ಬೆಂಕಿ ಬೀಳಲಿದೆ ಎಂದು ಹೋರಾಟಗಾರರು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಕಸ್ತೂರಿ ರಂಗನ್ ಬಣ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ರಾಜ್ಯ ಸರ್ಕಾರ ಜನ ಹಿತ ಬಲಿ ಕೊಟ್ಟು ತಮಿಳುನಾಡಿಗೆ ನೀರು ಬಿಟ್ಟರೆ 1991ರ ಮಾದರಿಯಲ್ಲೇ ಕ್ರಾಂತಿಕಾರಿ ಕಾವೇರಿ ಸಂಘರ್ಷ ನಡೆಯಲಿದೆ. ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ.” ಎಂದು ಹೇಳಿದ್ದಾರೆ.

ಸಿಡಬ್ಲ್ಯುಆರ್‌ಸಿ ನೇರವಾಗಿ ಆದೇಶಿಸುವ ಬದಲು ಕಾವೇರಿ ಜಲಾನಯನ ಪ್ರದೇಶಕ್ಕೆ ಸಮಿತಿ ಕಳುಹಿಸಿ, ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಆದೇಶ ನೀಡಬೇಕಿತ್ತು. ಮಳೆ ಇಲ್ಲದೆ ಮಂಡ್ಯ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡು ಕೇಂದ್ರದ ಮೇಲೆ ಒತ್ತಡ ತಂದು ನೀರು ಪಡೆಯಲು ಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ನೀರು ಹರಿಸಬಾರದು.

ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. “ಕಾವೇರಿ ಕೊಳ ಸಂಪೂರ್ಣ ಬತ್ತಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಟ್ಟರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳಲಿದೆ. ತಮಿಳುನಾಡು ಸಿಎಂ ಜೋಸೆಫ್ ವಿಜಯ್‌ ಅವರನ್ನು ಯಾತಕ್ಕಾಗಿ ಕರೆಸುತ್ತಿದ್ದಾರೆ? ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಜೆಂಡಾ ಏನು? ಮನೆ ಊಟಕ್ಕೆ ಕರೆಸುತ್ತಿದ್ದಾರೋ ಅಥವಾ ನೀರಿನ ವಿಚಾರಕ್ಕೋ ಸ್ಪಷ್ಟಪಡಿಸಲಿ. ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಿ ಸಭೆ ನಡೆಸಿ ಮುಂದಿನ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು CWRC ಆದೇಶ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಮರ

“ನಮ್ಮಲ್ಲೇ ನೀರಿಲ್ಲದಿರುವಾಗ ಒಂದು ಕ್ಯೂಸೆಕ್ ನೀರನ್ನೂ ಬಿಡಬಾರದು. ವಾಟಾಳ್ ನಾಗರಾಜ್, ನಾರಾಯಣ ಗೌಡ, ಸಾ.ರಾ. ಗೋವಿಂದು ಹಾಗೂ ರೈತ ಮುಖಂಡರೆಲ್ಲ ಸೇರಿ ಸಭೆ ನಡೆಸಿ ಕ್ರಾಂತಿಕಾರಿ ಹೋರಾಟ ಹೂಡುತ್ತೇವೆ” ಎಂದು ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಸಿದರು. ಇನ್ನು ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​​ ಶಾಸಕ ಗಣಿಗ ರವಿಕುಮಾರ್ ಅವರು “ನಮ್ಮ ಜನರಿಗೇ ನೀರಿಲ್ಲ. ನಾನು ಇತ್ತೀಚೆಗೆ ತಮಿಳುನಾಡಿನ ಚಿದಂಬರಂ ಬಳಿ ಪ್ರವಾಸದಲ್ಲಿದ್ದಾಗ ಕಾವೇರಿ ನೀರು ಅಪಾರ ಪ್ರಮಾಣದಲ್ಲಿ ಸಮುದ್ರಕ್ಕೆ ಹರಿದು ಪೋಲಾಗುತ್ತಿರುವುದನ್ನು ಕಂಡಿದ್ದೇನೆ. ಅವರ ಬಳಿ ಇರುವ ನೀರೇ ಸಮುದ್ರಕ್ಕೆ ಹೋಗುತ್ತಿರುವಾಗ ಮತ್ತೆ ನೀರು ಕೇಳುವುದು ಸರಿಯಲ್ಲ. ರಾಜ್ಯ ಸರ್ಕಾರ CWRC ಆದೇಶವನ್ನು ಯಾವುದೇ ಕಾರಣಕ್ಕೂ ಪಾಲಿಸಬಾರದು” ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version