‘ಬಟ್ವಾರಾ 1947’ ಟ್ರೇಲರ್: ಹಿಂದೂ-ಮುಸ್ಲಿಂ ಸೌಹಾರ್ದತೆಯ ಕಥೆಯಲ್ಲಿ ಸನ್ನಿ ಡಿಯೋಲ್ ಅಬ್ಬರ – Kannada News | Sunny Deol Batwara 1947 Movie Trailer Film Story CBFC A Certificate

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ (Sunny Deol) ಅಭಿನಯದ ಬಹುನಿರೀಕ್ಷಿತ ‘ಬಟ್ವಾರಾ 1947’ (Batwara 1947) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 1947ರ ಭಾರತ-ಪಾಕಿಸ್ತಾನ ವಿಭಜನೆಯ ಭೀಕರ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದ ಟ್ರೇಲರ್, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆಗಸ್ಟ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಆಮಿರ್ ಖಾನ್ (Aamir Khan) ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಸಿನಿಮಾದ ಕಥೆಯ ಬಗ್ಗೆ ವಿವರ ನೀಡಲಾಗಿದೆ.

‘ಬಟ್ವಾರಾ 1947’ ಸಿನಿಮಾದ ಕಥೆ:

ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ. ಆದರೆ, ಅದರ ಬೆನ್ನಲ್ಲೇ ದೇಶ ವಿಭಜನೆಯ ಬೆಂಕಿಯಲ್ಲಿ ಮನೆ-ಮಠ ಕಳೆದುಕೊಂಡು, ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ. ಸನ್ನಿ ಡಿಯೋಲ್ ಹಾಗೂ ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಪ್ರೀತಿ ಜಿಂಟಾ ಮತ್ತು ಮಗ ಕರಣ್ ಡಿಯೋಲ್ ಪಾಕಿಸ್ತಾನದ ಲಾಹೋರ್‌ಗೆ ವಲಸೆ ಹೋಗಿ, ಅಲ್ಲಿ ಅವರಿಗೆ ಹಂಚಿಕೆಯಾದ ಹೊಸ ಮನೆಗೆ ತೆರಳುತ್ತಾರೆ. ಅಲ್ಲಿ ಅವರನ್ನು ಅಲಿ ಫಜಲ್ ಸ್ವಾಗತಿಸುತ್ತಾರೆ.

ಆದರೆ, ಆ ಮನೆಯ ಮಹಡಿಯ ಮೇಲೆ ಹಿರಿಯ ಹಿಂದೂ ಮಹಿಳೆಯೊಬ್ಬರು (ಶಬಾನಾ ಅಜ್ಮಿ) ವಾಸಿಸುತ್ತಿದ್ದು, ತಮ್ಮ ಪಾರಂಪರಿಕ ಮನೆಯನ್ನು ತೊರೆಯಲು ನಿರಾಕರಿಸುತ್ತಾರೆ. ಅವರು ತಮ್ಮ ಕೋಣೆಯಲ್ಲಿ ಸಣ್ಣ ದೇವಾಲಯವನ್ನಿಟ್ಟುಕೊಂಡು ಪೂಜೆ ಮಾಡುವುದು ಸ್ಥಳೀಯ ಕೆಲವರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆಕೆಯನ್ನು ಮನೆಯಿಂದ ಹೊರಹಾಕಲು ಗಲಭೆ ಸೃಷ್ಟಿಯಾದಾಗ, ಸನ್ನಿ ಡಿಯೋಲ್ ಆ ತಾಯಿಯ ರಕ್ಷಣೆಗೆ ಗುರಾಣಿಯಾಗಿ ನಿಲ್ಲುತ್ತಾರೆ.

‘ಬಟ್ವಾರಾ 1947’ ಟ್ರೇಲರ್:

ಹಿಂದೂ ಮಹಿಳೆಯನ್ನು ಉಳಿಸಲು ಏಕಿಷ್ಟು ಹಠ ಎಂದು ಕೆಲವರು ಪ್ರಶ್ನಿಸಿದಾಗ, ಸನ್ನಿ ಡಿಯೋಲ್ ‘ಹಿಂದೂ ಮಹಿಳೆಯೇ? ಆಕೆ ಒಬ್ಬ ತಾಯಿ. ಆಕೆಗೆ ಹಿಂದೂ-ಮುಸ್ಲಿಂ ಎಂಬ ಹಣೆಪಟ್ಟಿ ಹಚ್ಚಬೇಡಿ. ನಮ್ಮ ಮೊದಲ ಧರ್ಮವೇ ತಾಯಿ. ನಾವು ಆಡುವ ಮೊದಲ ಮಾತು ಕೂಡ ತಾಯಿ’ ಎಂದು ಗರ್ಜಿಸುವ ಸಂಭಾಷಣೆಯು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಕಟ್ ಇಲ್ಲದೆ ‘A’ ಸರ್ಟಿಫಿಕೇಟ್:

ಈ ಸಿನಿಮಾದ ಮೂಲಕ ನಟಿ ಪ್ರೀತಿ ಜಿಂಟಾ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಚಿತ್ರಕ್ಕೆ ಎ.ಆರ್. ರಹಮಾನ್ ಸಂಗೀತ ಸಂಯೋಜಿಸಿದ್ದು, ಜಾವೇದ್ ಅಖ್ತರ್ ಗೀತರಚನೆ ಮಾಡಿದ್ದಾರೆ. ಈ ನಡುವೆ, ಸೆನ್ಸಾರ್ ಮಂಡಳಿಯು ಯಾವುದೇ ಕಟ್ ಇಲ್ಲದೇ ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಸನ್ನಿ ಡಿಯೋಲ್, ‘ಬಟ್ವಾರಾ 1947 ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಂದೂ ಕಟ್ ಇಲ್ಲದೆ ಎ ಸರ್ಟಿಫಿಕೇಟ್ ನೀಡಿದೆ. ಇದು ಪ್ರೀತಿ ಮತ್ತು ಮಾನವೀಯತೆಯ ಕುರಿತಾದ ಸಿನಿಮಾ. ಆಗಸ್ಟ್ 14ರ ವಿಭಜನೆಯ ನೆನಪಿನ ದಿನದಂದು ಚಿತ್ರಮಂದಿರಗಳಲ್ಲಿ ವೀಕ್ಷಿಸಿ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ಸಂಭಾವನೆ ಮಾತ್ರವಲ್ಲ, ಸನ್ನಿ ಡಿಯೋಲ್​ಗೆ ಸರ್ಕಾರದಿಂದ ಸಿಗ್ತಿದೆ ಪಿಂಚಣಿ

ಹಿಟ್ ಜೋಡಿಯ ಕಾಂಬಿನೇಷನ್:

90ರ ದಶಕದ ಸೂಪರ್ ಹಿಟ್ ನಟ-ನಿರ್ದೇಶಕ ಜೋಡಿಯಾದ ಸನ್ನಿ ಡಿಯೋಲ್ ಮತ್ತು ರಾಜ್‌ಕುಮಾರ್ ಸಂತೋಷಿ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಘಾತಕ್’, ‘ಘಾಯಲ್’ ಮತ್ತು ‘ದಾಮಿನಿ’ಯಂತಹ ಐಕಾನಿಕ್ ಸಿನಿಮಾಗಳನ್ನು ನೀಡಿದ್ದ ಈ ಜೋಡಿಯ ಹೊಸ ಚಿತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ‘ಬಟ್ವಾರಾ 1947’ ಚಿತ್ರವು ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡಿದವರ ಬಂಧನ, ಗೃಹ ಇಲಾಖೆಗೆ ಹೈಕೋರ್ಟ್ ತರಾಟೆ – Kannada News | Karnataka High court class to Police Department Over Arrested Who Gave Information Illegal Bangladeshi Immigrants

ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website

ಬೆಂಗಳೂರು, (ಜುಲೈ 28): ಬೆಂಗಳೂರಿನಲ್ಲಿ ನೆಲೆಸಿದ್ದ ಅಕ್ರಮ ಬಾಂಗ್ಲಾ ವಲಸಿಗರ (Illegal Bangladeshi Immigrants) ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಿದ್ದ ಬೆಳ್ಳಂದೂರು ಪೊಲೀಸರ ಕ್ರಮಕ್ಕೆ ಹೈಕೋರ್ಟ್ (Karnataka High court)  ತೀವ್ರ ಅಸಮಾಧಾನ ಹೊರಹಾಕಿದೆ. ನಾಗೇಂದ್ರ ಎಂಬುವರು ಜುಲೈ 22ರ ರಾತ್ರಿ 11.30ಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ದೂರು ನೀಡಿದ್ದರು. ಬಳಿಕ ಅಂದೇ 11.45ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ ಕೇಸ್ ದಾಖಲಿಸಿ ಬಂಧಿಸಲಾಗಿತ್ತು. ಈ ಪ್ರಕರಣ ರದ್ದುಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಬೆಳ್ಳಂದೂರು ಪೊಲೀಸರ ಈ ನಡೆಗೆ ಅಸಮಾಧಾನಗೊಂಡಿದೆ. ಇದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನೆಸಿ ಅರ್ಜಿದಾರರ ವಿರುದ್ಧದ ಕೇಸ್​ಗೆ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ?

ಬಾಂಗ್ಲಾ ಮೂಲದ ನಜ್ರೀನಾ ನೀಡಿದ್ದ ದೂರನ್ನು ರದ್ದುಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೊರ್ಟ್,  ಇದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ. ಗೃಹ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನೆಸಿದೆ. ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ? ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ ಎಂದು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ನೋಡಿ: ಬಿಜೆಪಿಗರಿಂದ ಸರ್ವೇ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಿಸಿಗರ ಜಾಲ ಪತ್ತೆ

ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ?

ಅಕ್ರಮ ವಲಸಿಗರನ್ನು ಸರ್ಕಾರ, ಪೊಲೀಸರೇ ಬೆಂಬಲಿಸುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳಿಗಿಂತ ವಲಸಿಗರೇ ಮುಖ್ಯವಾಗಿದ್ದಾರಾ? ದೇಶದ ಭದ್ರತೆಗೇ ಬೆದರಿಕೆಯಿದ್ದರೂ ವಲಸಿಗರನ್ನು ಬೆಂಬಲಿಸುತ್ತಿದ್ದೀರಾ? ವಲಸಿಗರನ್ನು ಹೊರಗೆ ಕಳಿಸಿ ಅಂದರೆ ದೂರು ನೀಡಿದವರ ಮೇಲೇ ಕೇಸ್. ಅಕ್ರಮ ವಲಸಿಗರ ಓಲೈಕೆ ನಿಲ್ಲಬೇಕು. ಅಕ್ರಮ ವಲಸಿಗರ ಗಡಿಪಾರಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್, ಖಡಕ್ ಸೂಚನೆ ನೀಡಿದೆ.

ಪೊಲೀಸರ ಕ್ರಮದ ಬಗ್ಗೆ ಆಗಸ್ಟ 6ರೊಳಗೆ ವಿವರಣೆ ನೀಡಲು ಸೂಚನೆ ನೀಡಿದೆ. ಅರ್ಜಿದಾರರ ಪರ ವಕೀಲ ಗಿರೀಶ್ ಭಾರದ್ವಾಜ್ ವಾದ ಮಂಡನೆ ಮಾಡಿದರು.

ಘಟನೆಯ ಹಿನ್ನೆಲೆ

ಡಾ. ನಾಗೇಂದ್ರಪ್ಪ ಅವರು ಕಳೆದ ಕೆಲವು ಸಮಯದಿಂದ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರ ಕುರಿತು ಮಾಹಿತಿಯನ್ನು ಕಲೆಹಾಕಿ ಅಧಿಕಾರಿಗಳಿಗೆ ನೀಡುತ್ತಿದ್ದರು. ದೇಶದ ಹಿತದೃಷ್ಟಿಯಿಂದ ತಾವು ಈ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಸಂಬಂಧ ಜುಲೈ 22ರ ರಾತ್ರಿ 11.30ಕ್ಕೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ದೂರು ನೀಡಿದ್ದರು. ಬಳಿಕ ಅಂದೇ 11.45ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ ಕೇಸ್ ದಾಖಲಿಸಿ ಬಂಧಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1695 ಬೆಲೆಯ ಎಲ್‌ಪಿಜಿ ಸಿಲಿಂಡರ್ 942 ರೂ.ಗೆ ಸಿಗುತ್ತಿರುವುದು ಹೇಗೆ? ಪೂರ್ತಿ ವಿವರ ಇಲ್ಲಿದೆ – Kannada News | How is an LPG cylinder priced at Rs 1,695 available for Rs 942? Here are the complete details

ನವದೆಹಲಿ, ಜುಲೈ 28: ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ಏರಿಕೆಯ ಸುದ್ದಿಗಳು ಸಹಜವಾಗಿಯೇ ಜನರಲ್ಲಿ ಕಳವಳವನ್ನುಂಟುಮಾಡುತ್ತವೆ. ಪ್ರತಿ ತಿಂಗಳು ಲಕ್ಷಾಂತರ ಕುಟುಂಬಗಳ ಬಜೆಟ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಅವಲಂಬಿಸಿರುತ್ತದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ತುಂಬಾ ದುಬಾರಿಯಾಗಿದ್ದರೂ ಭಾರತದಲ್ಲಿ ದೇಶೀಯ ಗ್ಯಾಸ್ ಸಿಲಿಂಡರ್‌ನ (LPG) ಬೆಲೆ ಇದ್ದಕ್ಕಿದ್ದಂತೆ ಏಕೆ ಹೆಚ್ಚಾಗುತ್ತಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆ ಬಗ್ಗೆ ಮಾಹಿತಿ ಇಲ್ಲಿದೆ.

ದೇಶದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ದೇಶೀಯ ಎಲ್‌ಪಿಜಿ ಒದಗಿಸಲು ಕೇಂದ್ರ ಸರ್ಕಾರವು ನಿರಂತರವಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಈ ನೆರವು ನೀಡದಿದ್ದರೆ, ದೇಶೀಯ ಅನಿಲ ಸಿಲಿಂಡರ್‌ನ ಬೆಲೆ ಪ್ರಸ್ತುತ ಬೆಲೆಗಿಂತ ಹೆಚ್ಚಿನದಾಗಿರುತ್ತದೆ ಎಂದು ಸರ್ಕಾರ ಹೇಳುತ್ತದೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಅನಿಲ ಬೆಲೆಗಳು ಹೆಚ್ಚಿದ್ದರೂ, ಅದರ ಸಂಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಸಂಸತ್ತಿನ ಪ್ರತಿಕ್ರಿಯೆಯ ಪ್ರಕಾರ, ಸರ್ಕಾರವು 2022-23ರಲ್ಲಿ ತೈಲ ಕಂಪನಿಗಳಿಗೆ 22,000 ಕೋಟಿ ರೂ.ಗಳ ಪರಿಹಾರವನ್ನು ನೀಡಿದೆ. 2025-26 ಮತ್ತು 2026-27 ವರ್ಷಗಳಿಗೆ ತಲಾ 30,000 ಕೋಟಿ ರೂ.ಗಳ ನಿಬಂಧನೆಯನ್ನು ಮಾಡಲಾಗಿದೆ.

ಸರ್ಕಾರಿ ತೈಲ ಕಂಪನಿಗಳು ಎಷ್ಟು ನಷ್ಟ ಅನುಭವಿಸುತ್ತವೆ?:

ತೈಲ ಕಂಪನಿಗಳ ಪೂರ್ಣ ನಷ್ಟವನ್ನು ಸರಿದೂಗಿಸಲು ಪರಿಹಾರ ಮಾತ್ರ ಸಾಕಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಜೂನ್ 30ರ ವೇಳೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಮಾರಾಟದಿಂದ 51,000 ಕೋಟಿಗೂ ಹೆಚ್ಚು ಒಟ್ಟು ನಷ್ಟವನ್ನು ಅನುಭವಿಸಿವೆ. 2026ರ ಜೂನ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಧಾರದ ಮೇಲೆ 14.2 ಕೆಜಿ ದೇಶೀಯ ಅನಿಲ ಸಿಲಿಂಡರ್‌ನ ಬೆಲೆ 1,695 ರೂ. ತಲುಪಿತ್ತು. ಆದರೆ ಅದೇ ಸಿಲಿಂಡರ್ ಅನ್ನು ಗ್ರಾಹಕರಿಗೆ 942 ರೂ.ಗೆ ಮಾರಾಟ ಮಾಡಲಾಯಿತು.

ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು

ಇದರರ್ಥ ಸರ್ಕಾರ ಮತ್ತು ತೈಲ ಕಂಪನಿಗಳು ಪ್ರತಿ ಸಿಲಿಂಡರ್‌ ಮೇಲೆ 700 ರೂ.ಗಿಂತ ಹೆಚ್ಚು ಹೊರೆಯನ್ನು ಹೊತ್ತುಕೊಂಡವು. 105 ಮಿಲಿಯನ್‌ಗಿಂತಲೂ ಹೆಚ್ಚು ಉಜ್ವಲ ಯೋಜನೆ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 300 ರೂ. ಸಬ್ಸಿಡಿ ನೀಡಿದ ನಂತರ, ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್‌ನ ಬೆಲೆ ಕೇವಲ 642 ರೂ. ಎಂದು ಸರ್ಕಾರ ಹೇಳಿದೆ. ಪ್ರತಿ ಮನೆಗೆ ನಿಯಮಿತವಾಗಿ ಮತ್ತು ಕೈಗೆಟುಕುವ ಅನಿಲ ಪೂರೈಕೆಯನ್ನು ನಿರ್ವಹಿಸುವುದು ತನ್ನ ಗುರಿಯಾಗಿದೆ ಎಂದು ಸರ್ಕಾರ ಹೇಳಿದೆ.

2022-23 ರಲ್ಲಿ, ಸರ್ಕಾರವು OMCಗಳಿಗೆ 22,000 ಕೋಟಿ ರೂ.ಗಳ ಪರಿಹಾರವನ್ನು ನೀಡಿತು. 2025-26 ಮತ್ತು 2026-27ರಲ್ಲಿ ತಲಾ 30 ಸಾವಿರ ಕೋಟಿ ರೂ.ಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. 2026ರ ಜೂನ್ 30ರ ಹೊತ್ತಿಗೆ, ತೈಲ ಕಂಪನಿಗಳು ದೇಶೀಯ ಎಲ್‌ಪಿಜಿಯಲ್ಲಿ 51 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನುಂಟುಮಾಡಿದ್ದವು.

942 ರೂ.ಗೆ ಗ್ಯಾಸ್ ಸಿಲಿಂಡರ್ ಹೇಗೆ ಸಿಗುತ್ತದೆ?:

ಸರ್ಕಾರದ ಪ್ರಕಾರ, ಜೂನ್ 2026ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ LPG ಬೆಲೆ ತೀವ್ರವಾಗಿ ಏರಿತು. ಆ ಸಮಯದಲ್ಲಿ 14.2 ಕೆಜಿ ದೇಶೀಯ ಅನಿಲ ಸಿಲಿಂಡರ್‌ನ ಮಾರುಕಟ್ಟೆ ಆಧಾರಿತ ಬೆಲೆ 1,695 ರೂ. ತಲುಪಿತು. ಆದರೂ ಗ್ರಾಹಕರಿಗೆ 942 ರೂ. ಮಾತ್ರ ವಿಧಿಸಲಾಗುತ್ತಿತ್ತು. ಇದರರ್ಥ ಪ್ರತಿ ಸಿಲಿಂಡರ್‌ಗೆ 700 ರೂ.ಗಿಂತ ಹೆಚ್ಚಿನ ವ್ಯತ್ಯಾಸವನ್ನು ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಜಂಟಿಯಾಗಿ ಭರಿಸಿವೆ. ಇದರಿಂದಾಗಿ ಜನರು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯುತ್ತಿದ್ದಾರೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಷ್ಟು ಲಾಭ ಸಿಗುತ್ತದೆ?:

ಕೇಂದ್ರ ಸರ್ಕಾರದ ಪ್ರಕಾರ, ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಬರುವ 105 ಮಿಲಿಯನ್ ಕುಟುಂಬಗಳಿಗೆ ಕೈಗೆಟುಕುವ ಅಡುಗೆ ಅನಿಲವನ್ನು ಒದಗಿಸಲು ವಿಶೇಷ ಪರಿಹಾರವನ್ನು ನೀಡಲಾಗುತ್ತಿದೆ. ಸಾಮಾನ್ಯ ಗ್ರಾಹಕರಿಗೆ ಹೋಲಿಸಿದರೆ ಈ ಫಲಾನುಭವಿಗಳು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 300 ರೂ. ಹೆಚ್ಚುವರಿ ಸಬ್ಸಿಡಿ ಪಡೆಯುತ್ತಾರೆ. ಇದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿಯ ಹೆಚ್ಚಿದ ಬೆಲೆಯ ಗಮನಾರ್ಹ ಭಾಗವನ್ನು ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭರಿಸುತ್ತಿವೆ.

ಇದಕ್ಕಾಗಿಯೇ, ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ನಿಜವಾದ ಬೆಲೆ ಸಾಕಷ್ಟು ಹೆಚ್ಚಿದ್ದರೂ, ದೆಹಲಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳು ಕೇವಲ 642 ರೂ.ಗೆ ಪಡೆಯುತ್ತಿದ್ದಾರೆ. ಈ ವ್ಯವಸ್ಥೆಯು ಹಣದುಬ್ಬರದ ಈ ಯುಗದಲ್ಲಿ ಲಕ್ಷಾಂತರ ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲಿನ ಅಡುಗೆ ಅನಿಲದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಎಂದು ಸರ್ಕಾರ ಹೇಳುತ್ತದೆ.

ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ, ಉದ್ಯಮಿಗಳಿಗೆ ಬಿಗ್ ರಿಲೀಫ್

ಸರ್ಕಾರದ ಪ್ರಕಾರ, ದೇಶೀಯ LPG ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿವೆ. 2026ರಲ್ಲಿ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಅಂತಾರಾಷ್ಟ್ರೀಯ LPG ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಯಿತು. ಆದರೆ, ಸರ್ಕಾರವು ಪೂರ್ಣ ಪರಿಣಾಮವು ದೇಶೀಯ ಗ್ರಾಹಕರನ್ನು ತಲುಪದಂತೆ ತಡೆಯಿತು. ಇದರ ಪರಿಣಾಮವಾಗಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಡಿಮೆ ಬೆಲೆಗೆ ಸಿಲಿಂಡರ್‌ಗಳನ್ನು ಮಾರಾಟ ಮಾಡಬೇಕಾಯಿತು. ಜೂನ್ 30, 2026ರ ಹೊತ್ತಿಗೆ ಈ ನಷ್ಟವು 51,000 ಕೋಟಿ ರೂ.ಗಳನ್ನು ಮೀರಿತ್ತು.

ಭಾರತವು ತನ್ನ ಎಲ್‌ಪಿಜಿ ಅಗತ್ಯಗಳಲ್ಲಿ ಸರಿಸುಮಾರು 60% ಆಮದು ಮಾಡಿಕೊಳ್ಳುತ್ತದೆ. ಈ ಪೂರೈಕೆಯಲ್ಲಿ ಸರಿಸುಮಾರು 90% ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉಲ್ಬಣಗೊಂಡ ನಂತರ ಈ ಮಾರ್ಗದ ಮೂಲಕ ಪೂರೈಕೆಯಲ್ಲಿ ಪರಿಣಾಮ ಬೀರಿತು. ಇದರಿಂದ ಸರ್ಕಾರವು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಿತು, ಇತರ ದೇಶಗಳಿಂದ ಆಮದುಗಳನ್ನು ಪ್ರಾರಂಭಿಸಿತು, ದಾಸ್ತಾನುಗಳನ್ನು ಹೆಚ್ಚಿಸಿತು. ಬಿಕ್ಕಟ್ಟಿನ ಹೊರತಾಗಿಯೂ, ದೇಶೀಯ ಅನಿಲ ಪೂರೈಕೆ ನಿರಂತರವಾಗಿ ಮುಂದುವರೆದಿದೆ ಎಂದು ಸರ್ಕಾರ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲೆಲ್ಲೂ ಜೆನ್‌ ಝೀಗಳದ್ದೇ ಹವಾ; Gen-Z ಅಂದ್ರೆ ಯಾರು? ಈ ಪೀಳಿಗೆ ಏಕೆ ಇಷ್ಟೊಂದು ಪವರ್‌ಫುಲ್? – Kannada News | Who Is Gen Z generation? Why is this generation so powerful compared to others?

ಇಂದಿನ ಯುವ ಸಮೂಹ ಅದರಲ್ಲೂ ಈ ಜೆನ್‌ ಝೀ ಗಳು (Gen Z) ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದ್ದಾರೆ. ತಮ್ಮ ಮೋಜು-ಮಸ್ತಿಯ ಹೊರತಾಗಿ ತಪ್ಪುಗಳು ನಡೆದಾಗ ಅದನ್ನು ಧೈರ್ಯದಿಂದ ಪ್ರಶ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಸಮಾನತೆ, ಹಕ್ಕುಗಳ ಬಗ್ಗೆ ಧ್ವನಿಯೆತ್ತಿ ಮಾತನಾಡುತ್ತಿದ್ದಾರೆ. ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ನೇಪಾಳದ ಜೆನ್‌ ಝೀಗಳು ಅಲ್ಲಿನ ಭ್ರಷ್ಟಾಚಾರ ಮತ್ತು ಹಳೆಯ ರಾಜಕೀಯ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು, ಸರ್ಕಾರವನ್ನೇ ಬದಲಿಸಿದರು. ಇದನ್ನೇ ಪ್ರೇರಣೆಯನ್ನಾಗಿಟ್ಟುಕೊಂಡು ಭಾರತದಲ್ಲಿನ ಯುವ ಸಮುದಾಯ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿ, ಕೇಂದ್ರ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ. ಜೆನ್‌ ಝೀ ಗಳು ಈ ಪ್ರತಿಭಟನೆಯ ಯಶಸ್ಸಿಗೆ ಅತಿದೊಡ್ಡ ಕೊಡುಗೆ ನೀಡಿದವರು ಎಂದು ಹೇಳಬಹುದು. ಈ ಎರಡು ಘಟನೆಗಳು ಜನರೇಷನ್‌ ಝಡ್‌ ಪೀಳಿಗೆ ಎಷ್ಟು ಶಕ್ತಿಶಾಲಿ ಎಂಬುದನ್ನು ಜಗತ್ತಿಗೆ ತೋರಿಸಿವೆ. ಸರ್ಕಾರಗಳನ್ನೇ ಅಲ್ಲಾಡಿಸಿದ ಈ ಜನರೇಷನ್‌ ಝಡ್‌ ಯಾರು? ಈ ಯುವ ಪೀಳಿಗೆ ಏಕೆ ಇಷ್ಟೊಂದು ಪವರ್‌ ಫುಲ್‌ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಜನರೇಷನ್‌  ಝಡ್‌ ಯಾರು?

ಜನರೇಷನ್ ಝಡ್ (Gen-Z) ಎಂದರೆ ಸಾಮಾನ್ಯವಾಗಿ 1997 ಮತ್ತು 2012 ರ ನಡುವೆ ಜನಿಸಿದ ಜನರ ಪೀಳಿಗೆಯಾಗಿದೆ. ಇದು ತಂತ್ರಜ್ಞಾನ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ ಬೆಳೆದ ಯುವಜನರ ಗುಂಪು.  ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಯುಗದಲ್ಲಿ ಬೆಳೆದ ಪೀಳಿಗೆ ಇದಾಗಿದೆ.

ಜನರೇಷನ್ ಝಡ್  ಬಾಲ್ಯದಿಂದಲೂ ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಜಗತ್ತನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಸ್ವೀಕರಿಸಿದ ಪೀಳಿಗೆಯಾಗಿದೆ. ಈ ಪೀಳಿಗೆ ಸೋಷಿಯಲ್‌ ಮೀಡಿಯಾಗಳನ್ನು ಮೋಜು, ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯನ್ನಾಗಿ ಮಾತ್ರವಲ್ಲ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಹ ಬಳಸುತ್ತದೆ. ಹೌದು ಶಿಕ್ಷಣ, ವೃತ್ತಿ, ಮಾನಸಿಕ ಆರೋಗ್ಯ, ಪರಿಸರ, ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಪೀಳಿಗೆ ಮುಕ್ತವಾಗಿ ವ್ಯಕ್ತಪಡಿಸುತ್ತಿದೆ. ಇತ್ತೀಚಿಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧ ನಡೆದ ಜೆಜ್‌ ಝೀ ಗಳ ಪ್ರತಿಭಟನೆಯೇ ಇದಕ್ಕೆ ಸೂಕ್ತ ಉದಾಹರಣೆ.

ಜನರೇಷನ್ ಝಡ್ ಹೆಸರು ಹೇಗೆ ಬಂತು?

ಮಿಲೇನಿಯಲ್ಸ್ ಪೀಳಿಗೆಯನ್ನು ಜನರೇಷನ್ Y ಎಂದು ಕರೆಯಲಾಗುತ್ತಿದ್ದರಿಂದ, ನಂತರದ ಪೀಳಿಗೆಯನ್ನು ಇಂಗ್ಲಿಷ್ ವರ್ಣಮಾಲೆಯ ಮುಂದಿನ ಅಕ್ಷರವಾದ Z ಅನ್ನು ಆಧರಿಸಿ ಜನರೇಷನ್ Z ಎಂದು ಹೆಸರಿಸಲಾಯಿತು.

ಜನರೇಷನ್ ಝಡ್ ಪೀಳಿಗೆಯ ಚಿಂತನೆ ಏಕೆ ಭಿನ್ನವಾಗಿದೆ?

ಈ ಪೀಳಿಗೆಯು ಮಾಹಿತಿಯನ್ನು ಸಂಗ್ರಹಿಸಲು ಟಿವಿ ಅಥವಾ ಪತ್ರಿಕೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಮೂಲಗಳನ್ನು ಬಳಸುತ್ತದೆ. ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಲ್ಲಿ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಈ ಪೀಳಿಗೆಯವರು ತುಂಬಾನೇ ಸಕ್ರಿಯರಾಗಿದ್ದಾರೆ.  ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ಪೀಳಿಗೆಯ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಅವರು ಮಾಹಿತಿಯನ್ನು ಸಂಗ್ರಹಿಸಲು, ಕಲಿಯಲು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಲು ಈ ಮಾಧ್ಯಮವನ್ನು ವ್ಯಾಪಕವಾಗಿ ಬಳಸುತ್ತಾರೆ.

ಜನರೇಷನ್ ಝಡ್ ಜನರು ಪರಿಸರ, ಮಾನಸಿಕ ಆರೋಗ್ಯ, ಸಮಾನತೆ, ವೈವಿಧ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ವಿಷಯಗಳನ್ನು ಹಿಂದಿನ ಹಲವು ತಲೆಮಾರುಗಳಿಗಿಂತ ಹೆಚ್ಚು ಮುಕ್ತವಾಗಿ ಚರ್ಚಿಸುತ್ತಾರೆ.  ಅಲ್ಲದೆ‌ ಜೆನ್‌ ಝೀ ಗಳು ತುಂಬಾನೇ ಬುದ್ಧಿವಂತಿಕೆಯಿಂದ ಯೋಚಿಸುತ್ತಾರೆ.  ಈ ಪೀಳಿಗೆಯು ಕೇವಲ 9 ಟು 5 ಕೆಲಸಗಳನ್ನು ಅವಲಂಬಿಸುವುದಕ್ಕಿಂತ ಬಿಸಿನೆಸ್, ನವೋದ್ಯಮ, ಕಂಟೆಂಟ್‌ ಕ್ರೀಯೆಷನ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಇತರ ಹೊಸ ವೃತ್ತಿ ಆಯ್ಕೆಗಳತ್ತ ಆಕರ್ಷಿತವಾಗಿದೆ.

ಜನರೇಷನ್ ಝಡ್ ಅತ್ಯಂತ ಪ್ರಭಾವಶಾಲಿ ಪೀಳಿಗೆಯೇ?

ಬಾಂಗ್ಲಾದೇಶ, ನೇಪಾಳ ಮತ್ತು ಈಗ ಭಾರತದಲ್ಲಿ ನಡೆದ ಜೆನ್‌ ಝೀ ಚಳುವಳಿಗಳೇ ಈ ಪೀಳಿಗೆಯು ಎಷ್ಟೊಂದು ಪ್ರಭಾವಶಾಲಿ ಎಂಬುದನ್ನು ತೋರಿಸಿಕೊಟ್ಟಿದೆ. ಈ ಪೀಳಿಗೆಯ ಜನ ತಮಗಾಗಿ ಕೆಲಸ ಮಾಡುವುದು ಮಾತ್ರವಲ್ಲಸಾಮಾಜಿಕ ಬದಲಾವಣೆಗಳಿಗೂ ಸಹ ಶ್ರಮಿಸುತ್ತಿದ್ದಾರೆ.  ಒಟ್ಟಾರೆಯಾಗಿ, ಜೆನ್‌ ಝೀಗಳು ಒಗ್ಗಟ್ಟಾಗಿ ನಿಂತು  ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಜಗತ್ತನ್ನು ಸಕಾರಾತ್ಮಕವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.  ಮುಂಬರುವ ವರ್ಷಗಳಲ್ಲಿ ರಾಜಕೀಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಮಾರುಕಟ್ಟೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಜೆನ್‌ ಝೀ ಗಳ ಸಾಮಾರ್ಥ್ಯ ಪ್ರಭಾವ ಬೀರಲಿದೆ.

ಜನರೇಷನ್  ಝೆಡ್ ನಂತರದ ಪೀಳಿಗೆಯನ್ನು ಏನೆಂದು ಕರೆಯುತ್ತಾರೆ?

ಜನರೇಷನ್ Z ನಂತರದ ಪೀಳಿಗೆಯನ್ನು ಜನರೇಷನ್ ಆಲ್ಫಾ ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಆಸ್ಟ್ರೇಲಿಯಾದ ಸಂಶೋಧಕ ಮಾರ್ಕ್ ಮೆಕ್ರಿಂಡಲ್ 2008 ರಲ್ಲಿ ಸೃಷ್ಟಿಸಿದರು ಮತ್ತು ಇದು ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರ “ಆಲ್ಫಾ” ನಿಂದ ಬಂದಿದೆ. ಈ ಪೀಳಿಗೆಯವರು ಸಂಪೂರ್ಣವಾಗಿ 21 ನೇ ಶತಮಾನದಲ್ಲಿ ಜನಿಸಿದ ಮೊದಲನೆಯವರು. 2013 ರಿಂದ 2024 ರವರೆಗೆ ಜನಿಸಿದವರು ಜೆನ್‌ ಆಲ್ಫಾಗಳು. 2025 ರ ನಂತರ ಪ್ರಾರಂಭವಾಗುವ ಪೀಳಿಗೆಯನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತದೆ, ಇದು 2025 ರಿಂದ 2039 ರವರೆಗೆ ಇರುತ್ತದೆ.

ಈ ವಿಭಿನ್ನ ಪೀಳಿಗೆಗಳಿಗೆ ಹೆಸರು ಇಡುವುದು ಯಾರು?

ಈ ಪೀಳಿಗೆಗಳ  ಹೆಸರುಗಳನ್ನು ಯಾವುದೇ ಸರ್ಕಾರಿ ಸಂಸ್ಥೆ ಹೆಸರಿಸಿಲ್ಲ. ಸಮಾಜಶಾಸ್ತ್ರಜ್ಞರು ಮತ್ತು ಸಂಶೋಧಕರು ಅವುಗಳನ್ನು ನಿಯೋಜಿಸುತ್ತಾರೆ. ಜನರೇಷನ್ ಬೀಟಾ ಎಂಬ ಪದವನ್ನು ಪ್ರಸಿದ್ಧ ಸಮಾಜಶಾಸ್ತ್ರಜ್ಞ ಮಾರ್ಕ್ ಮೆಕ್‌ಕ್ರಿಂಡಲ್ ಸೃಷ್ಟಿಸಿದರು.

ಇದನ್ನೂ ಓದಿ: ದೇಶವನ್ನು ಮುನ್ನಡೆಸುವ ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು

ಈ ವಿಭಿನ್ನ ಪೀಳಿಗೆಗಳ ಅರ್ಥವೇನು?

ಸಮಾಜಶಾಸ್ತ್ರದಲ್ಲಿ, ಒಂದು ಪೀಳಿಗೆಯನ್ನು ಸರಿಸುಮಾರು 15 ರಿಂದ 20 ವರ್ಷಗಳ ಅಂತರದಲ್ಲಿ ಜನಿಸಿದ ಜನರ ಗುಂಪು ಎಂದು ವ್ಯಾಖ್ಯಾನಿಸಲಾಗಿದೆ. ಪ್ರತಿಯೊಂದು ಪೀಳಿಗೆಯೂ ಅದರ ಕಾಲದ ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳು ಮತ್ತು ಆರ್ಥಿಕ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ.

  • ಬೇಬಿ ಬೂಮರ್ಸ್ (1946–1964): ಎರಡನೇ ಮಹಾಯುದ್ಧದ ನಂತರ ಜನಿಸಿದ ಪೀಳಿಗೆ
  • ಜನರೇಷನ್ ಎಕ್ಸ್ (1965–1980): ಸಾಂಪ್ರದಾಯಿಕ ಮತ್ತು ಆಧುನಿಕ ಯುಗಗಳ ನಡುವಿನ ಪೀಳಿಗೆ
  • ಮಿಲೇನಿಯಲ್ಸ್ /ಜೆನ್ ವೈ (1981–1996): ಇಂಟರ್ನೆಟ್‌ನ ಆರಂಭಿಕ ಆಗಮನದೊಂದಿಗೆ ಬೆಳೆದ ಪೀಳಿಗೆ
  • ಜನರಲ್ ಝೆಡ್‌ / ಜೆನ್‌ ಝೀ (1997–2012): ಡಿಜಿಟಲ್ ಯುಗದಲ್ಲಿ ಹುಟ್ಟಿ ಬೆಳೆದ ಪೀಳಿಗೆ
  • ಜನರಲ್ ಆಲ್ಫಾ (2013 ರಿಂದ 2024): ಎಐ, ಸ್ಮಾರ್ಟ್ ಸಾಧನಗಳು ಮತ್ತು ಹೆಚ್ಚು ಡಿಜಿಟಲ್ ಪರಿಸರದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆ

ಇಷ್ಟೆಲ್ಲಾ ಪೀಳಿಗೆಗಳಿದ್ದರೂ ಇವುಗಳಲ್ಲಿ ಇಂದು ಹೆಚ್ಚು ಚರ್ಚಿಸಲ್ಪಡುವ ಪೀಳಿಗೆ ಎಂದರೆ ಅದು ಜನರೇಷನ್ ಝಡ್.

ಪ್ರತಿ ಪೀಳಿಗೆಗೂ ಹೆಸರಿಡುವ ಒಂದು ಸಾಮಾನ್ಯ ಪದ್ಧತಿ ಇದೆಯೇ?

ಪ್ರತಿ ಪೀಳಿಗೆಗಳಿಗೂ ಹೆಸರಿಡುವ ಪದ್ಧತಿ ಚಾಲ್ತಿಯಲ್ಲಿದೆ. ನೀವು ಆಗಾಗ್ಗೆ ಜೆನ್‌ ಝೀ, ಜೆನ್‌ ಆಲ್ಫಾ, ಜೆನ್‌ ಬೀಟಾ ಪದಗಳನ್ನು ಕೇಳಿರುತ್ತೀರಿ ಅಲ್ವಾ. ಈ ಪದಗಳು ನಮ್ಮ ಪೀಳಿಗೆಗಳನ್ನು ವಿವರಿಸುತ್ತವೆ. ಹಿಂದೆಲ್ಲಾ ಪ್ರತಿ 20 ವರ್ಷಗಳಿಗೊಮ್ಮೆ ಒಂದು ಪೀಳಿಗೆ ಬದಲಾಗುತ್ತಿತ್ತು, ಆದರೆ ಈಗ ತಂತ್ರಜ್ಞಾನದ ವೇಗ ಎಷ್ಟು ವೇಗವಾಗಿದೆ ಎಂದರೆ ಈ ಪೀಳಿಗೆಗಳ ಬದಲಾವಣೆಗಳು ಕೇವಲ 10 ರಿಂದ 11 ವರ್ಷಗಳಲ್ಲಿ ಸಂಭವಿಸುತ್ತಿವೆ. ಜನವರಿ 1, 2025 ರಿಂದ, ಜನರೇಷನ್ ಬೀಟಾ ಎಂಬ ಹೊಸ ಪೀಳಿಗೆ ಪ್ರಾರಂಭವಾಗಿದೆ. ಹಿಂದಿನ ತಲೆಮಾರುಗಳು ಪ್ರತಿ 20 ವರ್ಷಗಳಿಗೊಮ್ಮೆ ಬದಲಾಗುತ್ತಿದ್ದವು, ಆದರೆ ಈಗ ಈ ಬದಲಾವಣೆ ಕೇವಲ 11 ವರ್ಷಗಳಲ್ಲಿ ಸಂಭವಿಸುತ್ತಿವೆ. ಜನರೇಷನ್ ಝಡ್ (1997-2012) ನಂತರ ಜನರೇಷನ್ ಆಲ್ಫಾ (2013-2024), ಮತ್ತು ಈಗ, ಜನವರಿ 1, 2025 ರಿಂದ ಜನರೇಷನ್ ಬೀಟಾ ಪೀಳಿಗೆ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಜನಿಸಿದ ಮಕ್ಕಳನ್ನು ಜನರೇಷನ್‌ ಬೀಟಾ ಎಂದು ಕರೆಯಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮೂರು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಹೊನ್ನಾವರದಲ್ಲಿ ಅಧಿಕ ಮಳೆ – Kannada News | Karnataka Weather Update: IMD Issues Orange Alert for 3 Districts; Honnavar Records Highest Rainfall

ಬೆಂಗಳೂರು, ಜುಲೈ 28: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ (Rain) ಮತ್ತೆ ಚುರುಕು ಪಡೆದಿದ್ದು, ಹಲವು ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಗುತ್ತಿದೆ. ಈ ನಡುವೆ ರಾಜ್ಯಾದ್ಯ ಕೆಲವೆಡೆ ನಾಳೆ ಉತ್ತಮ ಮಳೆಯ ನಿರೀಕ್ಷೆ ಇದ್ದು ಕರಾವಳಿಯ ಎರಡು ಮತ್ತು ಮಲೆನಾಡು ಭಾಗದ ಒಟ್ಟು 3 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ-ಮಲೆನಾಡಲ್ಲಿ ಮಳೆ ಅಬ್ಬರ

ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ನಿರೀಕ್ಷಿಸಲಾಗಿದ್ದು, ಈ ಪೈಕಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಉತ್ತಮ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ಬಾಗಲಕೋಟೆ, ಬೀದರ್​​, ಗದಗ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ್ಲಿ ಗಂಟೆಗೆ 40-50 ಕಿ.ಮೀ. ವೇಗದ ಗಾಳಿಯ ಜೊತೆಗೆ ವರುಣಾರ್ಭಟ ಇರಲಿದೆ. ಹಾಗೆಯೇ ದಕ್ಷಿಣ ಒಳನಾಡಿನ, ಚಿಕ್ಕಮಗಳೂರಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಕೋಲಾರ, ಕೊಡಗು, ಮೈಸೂರು, ರಾಮನಗರ ಮತ್ತು ತುಮಕೂರಲ್ಲೂ ಮಳೆಯ ಸಾಧ್ಯತೆ ಇದೆ.

ಇದನ್ನೂ ಓದಿ: ಮಳೆ ಅಭಾವಕ್ಕೆ ತುಮಕೂರು ಮಂದಿ ಕಂಗಾಲು; ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು

ಹೊನ್ನಾವರದಲ್ಲಿ ಉತ್ತಮ ಮಳೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಗರಬಸ್ತಿಕೇರಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 102 ಮಿ.ಮೀ. ಮಳೆಯಾಗಿದೆ. ಸುಳ್ಯದ ದೇವಚಳ್ಳ ಮತ್ತು ಕಾರ್ಕಳದ ನೀರೆಯಲ್ಲಿ ತಲಾ 99 ಮಿ.ಮೀ, ತೀರ್ಥಹಳ್ಳಿಯ ಆಗುಂಬೆಯಲ್ಲಿ 81 ಮಿ.ಮೀ, ಶೃಂಗೇರಿಯ ಕಿಗ್ಗದಲ್ಲಿ 52 ಮಿ.ಮೀ, ಸಕಲೇಶಪುರದ ಹೊಗದಹಳ್ಳದಲ್ಲಿ 44 ಮಿ.ಮೀ ಮತ್ತು ವಿರಾಜಪೇಟೆಯ ಬಿರುನಾನಿಯಲ್ಲಿ 43 ಮಿ.ಮೀ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅತ್ತೆ ವಿರುದ್ಧ ಖುದ್ದು ವಾದ ಮಂಡಿಸಿದ ಸೊಸೆ: ದೋಸೆ ಅಕ್ಕಿ ಅನ್ನ, ಡೌ ಶ್ಯಾಂಪೂ ಒತ್ತಾಯ 498A ಅಡಿ ಕ್ರೌರ್ಯವೇ?; ಹೈಕೋರ್ಟ್ ತೀವ್ರ ಪ್ರಶ್ನೆ – Kannada News | 498A Cases: Karnataka HC Questions Definition of ‘Cruelty’ in Domestic Disputes

ಬೆಂಗಳೂರು ಜು. 28: ಅತ್ತೆಯ ವಿರುದ್ಧ ತಾವು ದಾಖಲಿಸಿದ್ದ 498ಎ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು (Stay) ತೆರವುಗೊಳಿಸುವಂತೆ ಕೋರಿ ಸೊಸೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, “ಸಂಸಾರದ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳನ್ನು ಅಪರಾಧ ಅಥವಾ 498ಎ ಅಡಿಯ ಕ್ರೌರ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವೇ?” ಎಂದು ತೀವ್ರವಾಗಿ ಪ್ರಶ್ನಿಸಿದೆ.

ಅರ್ಜಿದಾರ ಸೊಸೆಯು ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ಆದೇಶವನ್ನು ಕಾಯ್ದಿರಿಸಿದೆ. ತಮ್ಮ ದೂರಿನಲ್ಲಿ ಅತ್ತೆಯನ್ನು ‘ಟಾಕ್ಸಿಕ್ ಅತ್ತೆ’ ಎಂದು ಉಲ್ಲೇಖಿಸಿರುವ ಸೊಸೆ, ಅತ್ತೆ, ಅತ್ತೆಯ ಸಹೋದರ ಹಾಗೂ ಪತಿಯ ಸ್ನೇಹಿತನ ವಿರುದ್ಧ 498ಎ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆ ವೇಳೆ ಅವರು ಮಂಡಿಸಿದ ವಾದಗಳು ಇದೀಗ ಎಲ್ಲಡೆ ವೈರಲ್​ ಆಗಿದೆ.

ಪತಿಯ ಊಟ ಮುಗಿಯುವವರೆಗೆ ಅತ್ತೆ ನನಗೆ ಊಟ ನೀಡುತ್ತಿರಲಿಲ್ಲ. ಪತಿಗೆ ಬಿಸಿ ರಾಗಿ ಮುದ್ದೆ ಹಾಗೂ ಬಿಸಿ ದೋಸೆ ನೀಡಿದರೆ, ನನಗೆ ದಿನವೂ ದೋಸೆ ಅಕ್ಕಿಯ ಅನ್ನ ಮತ್ತು ದಾಲ್ ನೀಡುತ್ತಿದ್ದರು. ಸರಿಯಾದ ಪೌಷ್ಟಿಕಾಂಶಯುತ ಆಹಾರ ನೀಡದ ಕಾರಣ ನನಗೆ ಕೂದಲು ಉದುರಿದೆ. ಅಲ್ಲದೆ, ನಾನು ಬಳಸುತ್ತಿದ್ದ ‘ಮೀರಾ’ ಶ್ಯಾಂಪೂ ಬದಲಿಗೆ ‘ಡೌ (Dove)’ ಶ್ಯಾಂಪೂ ಬಳಸುವಂತೆ ಪತಿ ಒತ್ತಾಯಿಸುತ್ತಿದ್ದರು.

ಕಳೆದ ಒಂದು ತಿಂಗಳಿಂದ ಅತ್ತೆ ನನ್ನನ್ನು ಅಡುಗೆಮನೆಗೇ ಬಿಡುತ್ತಿಲ್ಲ. ಐದೂವರೆ ತಿಂಗಳ ಸಂಸಾರದಲ್ಲಿ ತೀವ್ರ ಕಿರುಕುಳ ನೀಡಿದ್ದು, ತವರು ಮನೆಯ ಮುಂದೆ ಬಂದು ತೆಗಳಿದ್ದಾರೆ ಎಂದು ವಾದಿಸಿದರು.

ಇದನ್ನೂ ಓದಿ: ಕಿವುಡ ತಂದೆಯ ಕನಸು ನನಸಾಗಿಸಿದ ಮಗ; AI ಎಂಜಿನಿಯರ್ ಆಗಿ 1.06 ಕೋಟಿ ರೂ. ಪ್ಯಾಕೇಜ್ ಪಡೆದ ಅಖಿಲೇಶ್

ಹೈಕೋರ್ಟ್​ನ ಗಂಭೀರ ಪ್ರಶ್ನೆ:

ಸೊಸೆಯ ಈ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಕಠಿಣ ಪ್ರಾಸಂಗಿಕ ಪ್ರಶ್ನೆಗಳನ್ನು ಎತ್ತಿತು. “ಇಂತಹ ಮನೆಯ ದೈನಂದಿನ ಸಾಮಾನ್ಯ ಸಮಸ್ಯೆಗಳನ್ನು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖಿಸಿ. ಆದರೆ ಇವೆಲ್ಲವನ್ನೂ ೪೯೮ಎ ಅಡಿಯ ಕ್ರೌರ್ಯ ಅಥವಾ ಅಪರಾಧ ಎನ್ನಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿತು. ಕ್ರೌರ್ಯ ಎಂಬುದು ದೂರುದಾರರ ವೈಯಕ್ತಿಕ ದೃಷ್ಟಿಕೋನದಲ್ಲಿರುವುದಲ್ಲ, ಅದು ಕಾನೂನಿನಲ್ಲಿ ನಿರ್ವಚಿಸಿರುವಂತಿರಬೇಕು. ಮನೆಯ ದೈನಂದಿನ ಘಟನೆಗಳನ್ನು ಅಪರಾಧ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟು, ಅರ್ಜಿಯ ಆದೇಶವನ್ನು ಕಾಯ್ದಿರಿಸಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Tue, 28 July 26

Source link

ವಿಶ್ವದ ಟಾಪ್ ಸಿನಿಮಾ ನಿರ್ದೇಶಕನಿಗೆ ಭಾರತದ ಈ ನಿರ್ದೇಶಕ ಅಚ್ಚು-ಮೆಚ್ಚು – Kannada News | Christopher Nolan Gives talks about India director Satyajit Ray

ಕ್ರಿಸ್ಟೊಫರ್ ನೋಲನ್, ಹಾಲಿವುಡ್​​ನ (Hollywood) ಸೂಪರ್ ಸ್ಟಾರ್ ನಟರನ್ನೂ ಮೀರಿಸಬಹುದಾದ ಅಪ್ಪಟ ಅಭಿಮಾನಿಗಳನ್ನು ಹೊಂದಿರುವ ನಿರ್ದೇಶಕ. ಹಾಲಿವುಡ್​​ನಲ್ಲಿ ಫ್ರಾಂಚೈಸ್ ಅಭಿಮಾನಿಗಳು ಬಹಳ ಹೆಚ್ಚು. ಅಂದರೆ ‘ಸ್ಪೈಡರ್ ಮ್ಯಾನ್’ ಅಭಿಮಾನಿಗಳು, ‘ಸೂಪರ್ ಮ್ಯಾನ್’ ಅಭಿಮಾನಿಗಳು, ‘ಮಿಷನ್ ಇಂಪಾಸಿಬಲ್’ ಅಭಿಮಾನಿಗಳು, ‘ಫಾಸ್ಟ್ ಆಂಡ್ ಫ್ಯೂರಿಯಸ್’ ಅಭಿಮಾನಿಗಳು ಹೀಗೆ. ಆದರೆ ಒಬ್ಬ ನಿರ್ದೇಶಕ ಯಾವುದೇ ರೀತಿಯ ಸಿನಿಮಾ ಮಾಡಿದರೂ ನೋಡಲು ವರ್ಷಗಳ ಗಟ್ಟಲೆ ಕಾದು ಕೂರುತ್ತಾರೆಂದರೆ ಅದು ಕ್ರಿಸ್ಟೊಫರ್ ನೋಲನ್​​ಗೆ ಮಾತ್ರ. ತಮ್ಮ ಭಿನ್ನ ನಿರೂಪಣಾ ಶೈಲಿಯಿಂದಲೇ ವಿಶ್ವದಾದ್ಯಂತ ನೂರಾರು ಕೋಟಿ ಅಭಿಮಾನಿಗಳನ್ನು ಗಳಿಸಿರುವ ಕ್ರಿಸ್ಟೊಫರ್ ನೋಲನ್​​ಗೆ ಭಾರತದ ನಿರ್ದೇಶಕರೊಬ್ಬರು ಅಚ್ಚುಮೆಚ್ಚು.

ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ತಿಂಗಳಾನುಗಟ್ಟಲೆ ಮುಂಗಡ ಬುಕಿಂಗ್ ಆಗಿದೆ ಈ ಸಿನಿಮಾ. ಬೆಂಗಳೂರಿನಲ್ಲಿ ಸಹ ಕೋರಮಂಗಲ ಐಮ್ಯಾಕ್ಸ್​​ನಲ್ಲಿ ಕಳೆದೊಂದು ವಾರದಿಂದಲೂ ಹೌಸ್​​ಫುಲ್ ಆಗುತ್ತಿರುವುದು ಮಾತ್ರವಲ್ಲ, ಮುಂದಿನ ಒಂದು ವಾರಕ್ಕೂ ಮುಂಗಡ ಬುಕಿಂಗ್ ಆಗಿ ಹೋಗಿದೆ. ಇಂಥಹಾ ನಿರ್ದೇಶಕ, ಭಾರತದ ಸಿನಿಮಾ ನಿರ್ದೇಶಕರೊಬ್ಬರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗಷ್ಟೆ ಕ್ರಿಸ್ಟೊಫರ್ ನೋಲನ್ ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ‘ಕ್ರೈಟೇರಿಯನ್ ಕ್ಲೋಸೆಟ್’ ಭೇಟಿ ನೀಡಿದ್ದರು. ಅಲ್ಲಿನ ಸಿನಿಮಾ ಸಂಗ್ರಹದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಭಾರತೀಯ ಸಿನಿಮಾ ಸರಣಿ ‘ದಿ ಅಪು ಟ್ರಿಲಜಿ’ಯನ್ನು ಕೈಗೆತ್ತಿಕೊಂಡು, ತಾವು ಮನೆಗೆ ಕೊಂಡೊಯ್ಯಲು ಬಯಸುವ ಚಲನಚಿತ್ರಗಳಲ್ಲಿ ‘ದಿ ಅಪು ಟ್ರೈಲಜಿ’ಯನ್ನು ಒಂದನ್ನಾಗಿ ಆಯ್ಕೆ ಮಾಡಿಕೊಂಡರು ಮತ್ತು ಅದರ ನಿರ್ದೇಶಕ ಸತ್ಯಜಿತ್ ರೇ ತಮ್ಮ ಮೇಲೆ ಬೀರಿರುವ ಪ್ರಭಾವದ ಬಗ್ಗೆಯೂ ಅವರು ಮಾತನಾಡಿದರು.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

‘ಕ್ರೈಟೇರಿಯನ್ ಕ್ಲೋಸೆಟ್’ ಪ್ರಪಂಚದಾದ್ಯಂತದ 1,000 ಕ್ಕೂ ಹೆಚ್ಚು ಶ್ರೇಷ್ಠ ಚಲನಚಿತ್ರಗಳ ಸಂಗ್ರಹವನ್ನು ಹೊಂದಿದೆ. ಚಲನಚಿತ್ರ ನಿರ್ದೇಶಕರು, ನಟರು ಮತ್ತು ಕಲಾವಿದರು ಈ ಸಂಗ್ರಹವನ್ನು ವೀಕ್ಷಿಸಲು ಮತ್ತು ತಮ್ಮ ಮೇಲೆ ಪ್ರಭಾವ ಬೀರಿದ ಚಲನಚಿತ್ರಗಳ ಕುರಿತು ಮಾತನಾಡಲು ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

‘ಕ್ರೈಟೇರಿಯನ್ ಕಲೆಕ್ಷನ್’ ಖುದ್ದು ಕ್ರಿಸ್ಟೊಫರ್ ಅವರ ವೀಡಿಯೊ ಅನ್ನು ಹಂಚಿಕೊಂಡಿದ್ದು, ನೊಲನ್ ಅವರು ಶೆಲ್ಫ್‌ಗಳನ್ನು ಪರಿಶೀಲಿಸುತ್ತಾ ಬಂದು ಅಂತಿಮವಾಗಿ ‘ದಿ ಅಪು ಟ್ರೈಲಜಿ’ ಬಳಿ ನಿಲ್ಲುತ್ತಾರೆ. ಆ ಚಲನಚಿತ್ರಗಳ ಬಗ್ಗೆ ಮಾತನಾಡುತ್ತಾ ಅವರು, ‘ಭಾರತದ ಅತ್ಯಂತ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ಅವರ ‘ಅಪು ಟ್ರೈಲಜಿ’ ಇದೆ. ಈ ತ್ರಿವಳಿ ಚಿತ್ರಗಳು ‘ಪಥೇರ್ ಪಾಂಚಾಲಿ’ಯೊಂದಿಗೆ ಪ್ರಾರಂಭವಾಗುತ್ತವೆ, ಇದು ಅತ್ಯದ್ಭುತ ಚಿತ್ರ. ಇದು ನನ್ನ ಮನಸ್ಸನ್ನು ಬೆರಗುಗೊಳಿಸಿತ್ತು. ನಾನು ಈ ಟ್ರೈಲಜಿಯ ಎರಡು ಮತ್ತು ಮೂರನೇ ಭಾಗಗಳನ್ನು ಇನ್ನೂ ನೋಡಿಲ್ಲ, ಹಾಗಾಗಿ ಇದನ್ನು ಪಡೆದುಕೊಂಡು ಕಥೆಯನ್ನು ಪೂರ್ಣಗೊಳಿಸಲು ನಾನು ತುಂಬ ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ಸತ್ಯಜಿತ್ ರೇ, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕ. ಜೀವಮಾನ ಸಾಧನೆಗೆ ಆಸ್ಕರ್ ಪಡೆದ ಏಕೈಕ ಭಾರತೀಯ ನಿರ್ದೇಶಕ. ಅವರು ಹಾಲಿವುಡ್​ನ ಹಲವು ಹೆಸರಾಂತ ಸಿನಿಮಾ ನಿರ್ದೇಶಕರ ಮೇಲೆ ಪ್ರಭಾವ ಬೀರಿದ್ದಾರೆ. ಹಾಲಿವುಡ್​​ನ ಟಾಪ್ ನಿರ್ದೇಶಕ ಎನಿಸಿಕೊಳ್ಳುವ, ಹಲವು ಆಸ್ಕರ್ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿರುವ ಮಾರ್ಟಿನ್ ಸ್ಕೊರ್ಸೆಸಿ ಸಹ ವಿದ್ಯಾರ್ಥಿ ದೆಸೆಯಲ್ಲೇ ಸತ್ಯಜಿತ್ ರೇ ಅವರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗ ಕ್ರಿಸ್ಟೊಫರ್ ನೋಲನ್ ಸಹ ತಾವು ಸತ್ಯಜಿತ್ ರೇ ಸಿನಿಮಾಗಳ ಅಭಿಮಾನಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಲ್ಹಾದ್ ಜೋಶಿ ಕುರಿತು ಸದನದಲ್ಲಿ ಪ್ರಿಯಾಂಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಪಟ್ಟು – Kannada News | Priyanka Gandhis Controversial Remarks On Pralhad Joshi in Parliament Session BJP demands apology

ನವದೆಹಲಿ, ಜುಲೈ 28: ಲೋಕಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ಮೋದಿ ಅವರು ಹೊಸ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿಯವರನ್ನು ಆಯ್ಕೆ ಮಾಡಿದ್ದಾರೆ. ಗರ್ಭಿಣಿ ಮಹಿಳೆಯ ಅತ್ಯಾಚಾರಿಗಳ ಬಿಡುಗಡೆಗೆ ಬೆಂಬಲ ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಲಾಗಿದೆ. ಈ ನಿರ್ಧಾರದ ಮೂಲಕ ಪ್ರಧಾನಿಯವರು ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ನೀಡಿದ ಸಂದೇಶವೇನು? ಆ ಸಂದೇಶವು ಅತ್ಯಂತ ಸ್ಪಷ್ಟವಾಗಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರ್ಕಾರದ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದು ಸಾಬೀತಾಗಿದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.

ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದು ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, “ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿರುವ ಹೇಳಿಕೆಗಳು ‘ಚಾರಿತ್ರ್ಯ ವಧೆ’ಗೆ ಸಮನಾಗಿವೆ. ಅವರಿಂದ ಇಂತಹ ಭಾಷೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಅವರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕಬೇಕು. ಅವರು ಇಂತಹ ಭಾಷೆಯನ್ನು ಬಳಸಬಾರದು. ಅವರು ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಆ ಪಕ್ಷದ ಹಿರಿಯ ನಾಯಕಿಯಾಗಿದ್ದಾರೆ. ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಸದನದ ಘನತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ, ಅವರು ಸದನದ ಕ್ಷಮೆಯಾಚಿಸಬೇಕು” ಎಂದಿದ್ದಾರೆ.

ಇದನ್ನೂ ಓದಿ: ಹಾರ ಹಾಕಿ ಸನ್ಮಾನಿಸಲು ಧರ್ಮೇಂದ್ರ ಪ್ರಧಾನ್ ಪಾಕ್ ವಿರುದ್ಧ ಯುದ್ಧ ಗೆದ್ದು ಬಂದಿದ್ದಾರಾ?; ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ಟೀಕೆ:

ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಸಾಕ್ಷಿಯನ್ನು ನೀಡುವಂತೆ ಬಿಜೆಪಿ ಒತ್ತಾಯಿಸಿತು. ಆಗ ಪ್ರಿಯಾಂಕಾ, ಆ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ ಎಂದು ಹೇಳಿದರು. ಕೊನೆಗೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಿಯಾಂಕಾ ಗಾಂಧಿಯ ಈ ಹೇಳಿಕೆಯನ್ನು ಸಂಸತ್ತಿನ ಕಲಾಪದಿಂದ ತೆಗೆದುಹಾಕಿದರು.

ಪ್ರಲ್ಹಾದ್ ಜೋಶಿ ಆಕ್ಷೇಪ:

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಮಾತನಾಡುವ ಮುನ್ನ ನೀವು ನಿಮ್ಮ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು” ಎಂದು ಹೇಳಿದ್ದಾರೆ. ಈ ಆರೋಪಗಳನ್ನು “ತಪ್ಪು ಮಾಹಿತಿ” ಎಂದು ತಳ್ಳಿಹಾಕಿರುವ ಪ್ರಲ್ಹಾದ್ ಜೋಶಿ, “ಸುಳ್ಳು ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನನ್ನ ವಿರುದ್ಧ ನೀಡಿದ ಸುಳ್ಳು ಹೇಳಿಕೆಗಾಗಿ ಪ್ರಿಯಾಂಕಾ ಗಾಂಧಿ ಕ್ಷಮೆಯಾಚಿಸಬೇಕು. ಅವರನ್ನು ಸಂಸತ್ತಿನಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರಧಾನ್ ಅವರನ್ನು ತೆಗೆದುಹಾಕಿ ಪ್ರಧಾನ ಮಂತ್ರಿಯನ್ನು ಉಳಿಸಿಕೊಂಡಿರಿ; ಸಂಸತ್​​ನಲ್ಲಿ ಅಖಿಲೇಶ್ ಯಾದವ್ ವ್ಯಂಗ್ಯ

ಮೋದಿ ಬಗ್ಗೆ ಪ್ರಿಯಾಂಕಾ ಲೇವಡಿ:

ಪ್ರಧಾನಿ ಮೋದಿಯವರ ‘ಇನ್‌ಸ್ಟಾಗ್ರಾಮ್ ರೀಲ್’ಗೆ ಪ್ರಿಯಾಂಕಾ ಗಾಂಧಿ ಟಾಂಗ್ ನೀಡಿದ್ದಾರೆ. ವಿದ್ಯಾರ್ಥಿ ಪ್ರತಿಭಟನೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಮ್ ರೀಲ್ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವ್ಯಂಗ್ಯವಾಡಿದ್ದಾರೆ. “ಮಧ್ಯರಾತ್ರಿ ರೀಲ್ಸ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಪ್ರಧಾನಿಯವರು ಕ್ಯಾಮೆರಾದ ಆಂಗಲ್ ಬದಲಾಯಿಸುವ ಬದಲು ತಮ್ಮ ಮನಸ್ಸಿನ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Tue, 28 July 26

Source link

ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ – Kannada News | Allu Arjun removed shoes before taking the gift

ನಟ ಅಲ್ಲು ಅರ್ಜುನ್ (Allu Arjun) ತಮ್ಮ ಅಭಿಮಾನಿಗಳ ಸಮಾವೇಶದಲ್ಲಿ ಭಾಗಿ ಆಗಿದ್ದರು. ಎಎಎಫ್​​ಎ (ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್) ವತಿಯಿಂದ ಈ ಸಮಾವೇಶ ಆಯೋಜಿಸಲಾಗಿತ್ತು. ನಟ ಅಲ್ಲು ಅರ್ಜುನ್ ಅವರು ಸಮಾವೇಶದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಹಲವಾರು ಮಂದಿ ಅಲ್ಲು ಅರ್ಜುನ್ ಅವರಿಗಾಗಿ ವಿಶೇಷ ಉಡುಗೊರೆಗಳನ್ನು ಸಹ ತಂದಿದ್ದರು. ಅವರಲ್ಲಿ ಒಬ್ಬರು ತಮ್ಮ ಊರಿನ ವಿಶೇಷವೆಂದು ದೇವತೆಗಳ ‘ಬಾಗಿನ’ ರೀತಿಯ ಉಡುಗೊರೆಯೊಂದನ್ನು ತಂದಿದ್ದ. ಈ ಉಡುಗೊರೆ ಸ್ವೀಕರಿಸುವ ಮುನ್ನ ನಟ ಅಲ್ಲು ಅರ್ಜುನ್ ತಾವು ಧರಿಸಿದ್ದ ಶೂಗಳನ್ನು ತೆಗೆದು ಉಡುಗೊರೆ ಸ್ವೀಕರಿಸಿದರು. ಅಲ್ಲು ಅರ್ಜುನ್ ಅವರ ಈ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನುಗ್ಗೆ ಸೊಪ್ಪು: ಹಾಲು-ಬಾಳೆಹಣ್ಣಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಈ ಸೊಪ್ಪಿನಲ್ಲಿದೆ ಅನೇಕ ಪ್ರಯೋಜನ! – Kannada News | Moringa Powder Benefits: Health Experts Explain the Real Facts

ಇತ್ತೀಚಿನ ದಿನಗಳಲ್ಲಿ “ಸೂಪರ್‌ಫುಡ್”ಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಆದರೆ ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ನುಗ್ಗೆ ಸೊಪ್ಪು (Moringa Leaves) ಪೌಷ್ಟಿಕಾಂಶಗಳ ಭಂಡಾರವಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯಾಧಾರಿತ ಪ್ರೋಟೀನ್‌ಗಳು ಸಮೃದ್ಧವಾಗಿದ್ದು, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಈ ಸೊಪ್ಪು ಕಾಯಿಲೆಗೆ ಔಷಧವಲ್ಲದಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಇದು ಯಾವ ರೀತಿ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನುಗ್ಗೆ ಸೊಪ್ಪಿನಲ್ಲಿರುವ ಪ್ರಮುಖ ಪೌಷ್ಟಿಕಾಂಶಗಳು:

ವಿಟಮಿನ್ ಎ – ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ವಿಟಮಿನ್ ಸಿ – ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಇ – ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ
ಕ್ಯಾಲ್ಸಿಯಂ – ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಕಾರಿ
ಕಬ್ಬಿಣ (Iron) – ರಕ್ತಹೀನತೆ ತಡೆಗಟ್ಟಲು ನೆರವಾಗಬಹುದು
ಪೊಟ್ಯಾಸಿಯಂ – ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕಾರಿ
ಫೈಬರ್ – ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ
ಸಸ್ಯಾಧಾರಿತ ಪ್ರೋಟೀನ್ – ಸ್ನಾಯುಗಳ ಆರೋಗ್ಯ ಕಾಪಾಡುತ್ತದೆ

ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು:

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ. ಇದರಿಂದ ಸಾಮಾನ್ಯ ವೈರಲ್ ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯ ಉತ್ತಮವಾಗಬಹುದು.

ರಕ್ತಹೀನತೆ ತಡೆಗಟ್ಟಲು ಸಹಕಾರಿ: ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವಿದ್ದು, ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ನೆರವಾಗಬಹುದು.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು: ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ನಂತಹ ಖನಿಜಾಂಶಗಳು ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ವಯೋವೃದ್ಧರಿಗೆ ಇದು ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ ಕಡಿಮೆಯಾಗಲು ಮತ್ತು ಜೀರ್ಣಾಂಗದ ಕಾರ್ಯ ಸುಧಾರಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನುವುದನ್ನು ಆದಷ್ಟು ತಪ್ಪಿಸಿ

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಆಂಟಿಆಕ್ಸಿಡೆಂಟ್‌ಗಳು ಮತ್ತು ಸಸ್ಯ ಸಂಯುಕ್ತಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಸಮತೋಲಿತ ಆಹಾರ ಮತ್ತು ವ್ಯಾಯಾಮದೊಂದಿಗೆ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಕಣ್ಣಿನ ಆರೋಗ್ಯ ಕಾಪಾಡುತ್ತದೆ: ವಿಟಮಿನ್ಎ ಮತ್ತು ಬೇಟಾ-ಕ್ಯಾರೋಟಿನ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ದೃಷ್ಟಿ ಚೆನ್ನಾಗಿರುತ್ತದೆ.

ಚರ್ಮ ಮತ್ತು ಕೂದಲಿನ ಆರೈಕೆ: ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿ.

ನುಗ್ಗೆ ಸೊಪ್ಪನ್ನು ಹೇಗೆ ಸೇವಿಸಬಹುದು?

  • ನುಗ್ಗೆ ಸೊಪ್ಪಿನ ಪಲ್ಯ
  • ಸಾಂಬಾರ್ ಅಥವಾ ಸಾರು
  • ಸೂಪ್‌ನಲ್ಲಿ
  • ಚಪಾತಿ ಹಿಟ್ಟಿಗೆ ಸೇರಿಸಿ
  • ಸ್ಮೂಥಿಯಲ್ಲಿ ಸೇರಿಸಬಹುದು

ಯಾರು ಎಚ್ಚರಿಕೆಯಿಂದ ಸೇವಿಸಬೇಕು?

  • ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
  • ಮಧುಮೇಹದ ಔಷಧಿ ಸೇವಿಸುವವರು ವೈದ್ಯರ ಸಲಹೆ ಪಡೆದು ಆ ಬಳಿಕ ಸೇವಿಸುವುದು ಉತ್ತಮ.
  • ಕಡಿಮೆ ರಕ್ತದೊತ್ತಡ ಇರುವವರು ಅತಿಯಾಗಿ ಸೇವಿಸಬಾರದು.
  • ಥೈರಾಯ್ಡ್ ಅಥವಾ ದೀರ್ಘಕಾಲದ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version