ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ – Kannada News

ಆದಾಯ ತೆರಿಗೆ ರಿಟರ್ನ್Image Credit source: Shutterstock

ಆದಾಯ ತೆರಿಗೆ ಪಾವತಿಸುತ್ತಿರುವವರು, ತೆರಿಗೆ ಬಾಧ್ಯತೆ ಹೊಂದಿರುವವರೆಲ್ಲರೂ ಟ್ಯಾಕ್ಸ್ ರಿಟರ್ನ್ಸ್ (Income Tax Returns) ಸಲ್ಲಿಸುವುದು ಕಡ್ಡಾಯ. ವಿವಿಧ ವರ್ಗದ ತೆರಿಗೆ ಪಾವತಿದಾರರಿಗೆ ವಿವಿಧ ಐಟಿಆರ್ ಫಾರ್ಮ್​ಗಳಿವೆ. ಆದಾಯ ತೆರಿಗೆ ಇಲಾಖೆ ಖುದ್ದಾಗಿ ಐಟಿಆರ್ 1 ನಮೂನೆ (ITR-1 form) ಬಗ್ಗೆ ಮಾಹಿತಿ ನೀಡಿದೆ. ಅದರ ಬಳಕೆ ಯಾಕೆ, ಹೇಗೆ ಅರ್ಜಿ ತುಂಬಿಸಬೇಕು, ಹೇಗೆ ಸಲ್ಲಿಸಬೇಕು ಎನ್ನುವ ವಿವರಣೆ ಇರುವ ಮಾರ್ಗದರ್ಶಿ ವಿಡಿಯೋವೊಂದನ್ನು ಐಟಿ ಇಲಾಖೆ ಪೋಸ್ಟ್ ಮಾಡಿದೆ.

ಐಟಿಆರ್-1 ಯಾರು ಬಳಸಬಹುದು?

  • ಸಂಬಳ ಅಥವಾ ಪಿಂಚಣಿ ಆದಾಯ ಇರುವವರು
  • ಎರಡು ಮನೆಗಳನ್ನು ಹೊಂದಿರುವವರು
  • ಕುಟುಂಬ ಪಿಂಚಣಿ ಬರುತ್ತಿರುವವರು
  • 5,000 ರೂವರೆಗೆ ಕೃಷಿ ಆದಾಯ ಇರುವವರು
  • ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆ ಬಾಧ್ಯತೆ ಇರುವವರು (1.25 ಲಕ್ಷ ರೂವರೆಗೆ)
  • ಸೇವಿಂಗ್ಸ್ ಅಕೌಂಟ್​ನಿಂದ ಬಡ್ಡಿ, ಠೇವಣಿಗಳಿಂದ ಬಡ್ಡಿ, ಆದಾಯ ತೆರಿಗೆ ರೀಫಂಡ್​ನಿಂದ ಬಡ್ಡಿ ಇತ್ಯಾದಿ ಇತರ ಮೂಲಗಳಿಂದ ಆದಾಯ ಹೊಂದಿರವವರು.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಐಟಿಆರ್-1 ಅಥವಾ ಸಹಜ್ ಫಾರ್ಮ್ ಭರ್ತಿ ಮಾಡುವ ಹಂತ ಹಂತದ ಮಾರ್ಗದರ್ಶಿ

  • ಹಂತ 1: ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ (incometax.gov.in). ಇಲ್ಲಿ ಲಾಗಿನ್ ಆಗಿರಿ
  • ಹಂತ 2: ಹೋಮ್ ಪೇಜ್‌ನಲ್ಲಿ ಕಾಣಿಸಿದ e-File -> Income Tax Returns -> File Income Tax Return ಎಂಬ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಂತರದ ಪುಟದಲ್ಲಿ ಮೌಲ್ಯಮಾಪನ ವರ್ಷವನ್ನು (Assessment Year) 2026-27 ಎಂದು ಆಯ್ದುಕೊಂಡು, ಫೈಲಿಂಗ್ ಮೋಡ್ ಅನ್ನು Online ಎಂದು ಸೆಲೆಕ್ಟ್ ಮಾಡಬೇಕು.
  • ಹಂತ 4: ನೀವು ಈ ಮೊದಲೇ ರಿಟರ್ನ್ ಅನ್ನು ಸೇವ್ ಮಾಡಿದ್ದರೆ ‘Resume Filing’ ಅನ್ನು ಒತ್ತಿರಿ. ಇಲ್ಲದಿದ್ದರೆ ‘Start New Filing’ ಕ್ಲಿಕ್ ಮಾಡಿ.
  • ಹಂತ 5: ತನ್ನ ತೆರಿಗೆ ಸ್ಥಿತಿಯನ್ನು (Status) ‘Individual’ ಅಥವಾ ಬೇರೆ ಸೂಕ್ತವಾದುದನ್ನು ಆಯ್ಕೆ ಮಾಡಬೇಕು.
  • ಹಂತ 6: ಡ್ರಾಪ್‌ಡೌನ್ ಮೆನುವಿನಿಂದ ITR-1 (Sahaj) ಫಾರ್ಮ್ ಅನ್ನು ಆರಿಸಿಕೊಳ್ಳಬೇಕು.
  • ಹಂತ 7: ಒಂದು ವೇಳೆ ತನಗೆ ಯಾವ ಫಾರ್ಮ್ ಬೇಕು ಎಂದು ಗೊಂದಲವಿದ್ದರೆ, ‘Help me decide which ITR form to file’ ಆಯ್ಕೆ ಬಳಸಬಹುದು.
  • ಹಂತ 8: ಸ್ಕ್ರೀನ್ ಮೇಲೆ ಕಾಣುವ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿಯನ್ನು (Document Checklist) ಓದಿಕೊಂಡು, ‘Let’s get started’ ಬಟನ್ ಒತ್ತಬೇಕು.
  • ಹಂತ 9: ತೆರಿಗೆ ರಿಟರ್ನ್ ಸಲ್ಲಿಸುತ್ತಿರುವುದಕ್ಕೆ ಇರುವ ಸೂಕ್ತ ಕಾರಣವನ್ನು (ಉದಾಹರಣೆಗೆ: ಆದಾಯವು ತೆರಿಗೆ ವಿನಾಯಿತಿ ಮಿಗಿಲಾಗಿರುವುದು) ಆಯ್ಕೆ ಮಾಡಬೇಕು.
  • ಹಂತ 10: ಈಗ ಮೊದಲೇ ಭರ್ತಿಯಾದ (Pre-filled) ಡೇಟಾ ಇರುತ್ತದೆ. ಅದನ್ನು ತನ್ನ AIS (Annual Information Statement) ಮತ್ತು Form 26AS ಜೊತೆ ಎಚ್ಚರಿಕೆಯಿಂದ ಹೋಲಿಸಿ ನೋಡಿ, ಅಗತ್ಯ ತಿದ್ದುಪಡಿಗಳಿದ್ದರೆ ಮಾಡಬೇಕು.
  • ಹಂತ 11: ಆದಾಯ ಮತ್ತು ಕಡಿತಗಳ (Income and Deduction) ವಿವರಗಳನ್ನು ಆಯಾ ಸೆಕ್ಷನ್‌ಗಳ ಅಡಿಯಲ್ಲಿ ನಿಖರವಾಗಿ ದಾಖಲಿಸಬೇಕು.
  • ಹಂತ 12 (ಎ): ತೆರಿಗೆ ಲೆಕ್ಕಾಚಾರ (Tax Computation) ಪರಿಶೀಲಿಸಿ. ತೆರಿಗೆ ಬಾಕಿ ಇದ್ದರೆ ‘Pay Now’ ಕ್ಲಿಕ್ ಮಾಡಿ, ಆನ್‌ಲೈನ್ ಪಾವತಿ ಮುಗಿಸಿ ಮತ್ತೆ ಫೈಲಿಂಗ್ ಪುಟಕ್ಕೆ ಮರಳಬೇಕು.
  • ಹಂತ 12 (ಬಿ): ತೆರಿಗೆ ಬಾಕಿ ಇಲ್ಲದಿದ್ದರೆ ಅಥವಾ ರೀಫಂಡ್ ಬರುವುದಿದ್ದರೆ, ನೇರವಾಗಿ ಮುಂದಿನ ಹಂತಕ್ಕೆ ಹೋಗಬಹುದು.

ಪ್ರಮುಖ ಸೂಚನೆ: ಪಾವತಿಸಿರುವ ತೆರಿಗೆ ವಿವರಗಳು ಆಟೋ-ಪಾಪುಲೇಟ್ (ಸ್ವಯಂಚಾಲಿತವಾಗಿ ಅಪ್ಡೇಟ್) ಆಗದಿದ್ದರೆ, ‘Resume Filing’ ಮಾಡಿ, ‘Tax Paid’ ಸೆಕ್ಷನ್‌ಗೆ ಹೋಗಿ, ‘Add Another’ ಕ್ಲಿಕ್ ಮಾಡಿ ಮ್ಯಾನುಯಲ್ ಆಗಿ ವಿವರಗಳನ್ನು ತುಂಬಿ ಸೇವ್ ಮಾಡಬೇಕು.

  • ಹಂತ 13: ಎಲ್ಲವೂ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡು ಡಿಕ್ಲರೇಶನ್ (ಸ್ವಯಂ ಘೋಷಣೆ) ಒಪ್ಪಿ Validation ಗೆ ಸಾಗಬೇಕು.

ಇದನ್ನೂ ಓದಿ: ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್ರಸಾದ್ ಷಣ್ಮುಗಂ

ಇದನ್ನೂ ಗಮನಿಸಿ: ನೀವು ಫೈಲಿಂಗ್ ಸಲ್ಲಿಸಿದ ಬಳಿಕ ಸಿಸ್ಟಂನಿಂದ ವ್ಯಾಲಿಡೇಶನ್ ಪರಿಶೀಲನೆ ಆಗುತ್ತದೆ. ಯಾವುದಾದರೂ ತಪ್ಪು ಕಂಡರೆ ಮೆಸೇಜ್ ಪರಾಮರ್ಶಿಸಿ, ಅದು ನೀಡುವ ಸಲಹೆಯಂತೆ ಕ್ರಮ ತೆಗೆದುಕೊಳ್ಳಿ.

  • ಹಂತ 14: ಆಂತರಿಕ ವ್ಯಾಲಿಡೇಶನ್ ಯಶಸ್ವಿಯಾದ ನಂತರ, ಇಡೀ ರಿಟರ್ನ್ ಅನ್ನು ಮತ್ತೊಮ್ಮೆ ಪರಿಶೀಲಿಸಲು ‘Preview’ ಕ್ಲಿಕ್ ಮಾಡಿ ನೋಡಿ, ನಂತರ ‘Proceed to Validation’ ಒತ್ತಬೇಕು.
  • ಹಂತ 15: ವ್ಯಾಲಿಡೇಶನ್ ಮುಗಿದ ತಕ್ಷಣ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Proceed to Verification’ ಮೇಲೆ ಕ್ಲಿಕ್ ಮಾಡಬೇಕು.
  • ಹಂತ 16: ಕೊನೆಯದಾಗಿ, ಸುಲಭವೆನಿಸಿದ ಇ-ವೆರಿಫಿಕೇಶನ್ ವಿಧಾನವನ್ನು (ಉದಾಹರಣೆಗೆ: ಆಧಾರ್ ಒಟಿಪಿ – Aadhaar OTP) ಆಯ್ದುಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಐಟಿ ಇಲಾಖೆ ಪೋಸ್ಟ್ ಮಾಡಿದ ವಿಡಿಯೋ

ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ಸೆಕ್ಷನ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸಲ್ಲಿಕೆಯಾದ ಬಳಿಕ “ನಿಮ್ಮ ITR-1 ಫೈಲಿಂಗ್ ಯಶಸ್ವಿಯಾಗಿದೆ” ಎಂಬ ಸಂದೇಶ ಪರದೆಯ ಮೇಲೆ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ! – Kannada News

ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸImage Credit source: @viral.humours/Instagram

ಕೇರಳದ 60 ವರ್ಷದ ವೃದ್ಧರೊಬ್ಬರ ಜೀವನದಲ್ಲಿ ನಡೆದಿರುವ ಘಟನೆ ಇಡೀ ದೇಶದ ಗಮನ ಸೆಳೆದಿದೆ. ತಾನು ನಿವೃತ್ತಿಯಾಗಬೇಕಾದ ವಯಸ್ಸಿನಲ್ಲಿ ಈ ವ್ಯಕ್ತಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ (Appointment Letter) ಕೈ ಸೇರಿದೆ. ಹೌದು, ಭರ್ತಿ 20 ವರ್ಷಗಳ ಹಿಂದೆ ಅವರು ಹಾಕಿದ್ದ ಅರ್ಜಿಗೆ ಈಗ ಸರ್ಕಾರ ಸ್ಪಂದಿಸಿದೆ. ಮಲಪ್ಪುರಂನ 60 ವರ್ಷದ ಅಬ್ದುಲ್ ಮಜೀದ್ ಎಂಬುವವರು ಭರ್ತಿ ಎರಡು ದಶಕಗಳ (20 ವರ್ಷ) ನಂತರ ಸರ್ಕಾರಿ ಕೆಲಸದ ನೇಮಕಾತಿ ಪತ್ರ ಪಡೆದಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಪತ್ರ ಬರುವಷ್ಟರಲ್ಲಿ ಅವರು ಸರ್ಕಾರಿ ಸೇವೆಗೆ ಸೇರಬೇಕಾದ ವಯಸ್ಸಿನ ಮಿತಿಯನ್ನೇ ದಾಟಿಹೋಗಿದ್ದಾರೆ.

2005 ರ ಪರೀಕ್ಷೆ, 2026 ರ ನೇಮಕಾತಿ:

ಅಬ್ದುಲ್ ಮಜೀದ್ ಅವರು 2005 ರಲ್ಲಿ ಕೇರಳ ಸಾರ್ವಜನಿಕ ಸೇವಾ ಆಯೋಗ (KPSC) ನಡೆಸಿದ್ದ ‘ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ’ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಶ್ರೇಣಿ ಪಟ್ಟಿ (Rank List) ಯಲ್ಲೂ ಸ್ಥಾನ ಪಡೆದಿದ್ದರು. ಸಾಮಾನ್ಯವಾಗಿ ಈ ರ್ಯಾಂಕ್ ಪಟ್ಟಿಗಳು 3 ವರ್ಷಗಳ ಕಾಲ ಮಾತ್ರ ಮಾನ್ಯವಾಗಿರುತ್ತವೆ. ಅದರಂತೆ ಇವರ ಪಟ್ಟಿಯ ಅವಧಿಯು 2008 ರಲ್ಲೇ ಮುಕ್ತಾಯಗೊಂಡಿತ್ತು.

ಆದರೆ ವ್ಯವಸ್ಥೆಯ ಆಮೆಗತಿಯ ಕೆಲಸ ಎಂತಹುದು ಎಂದರೆ, ರ್ಯಾಂಕ್ ಪಟ್ಟಿ ರದ್ದಾಗಿ 18 ವರ್ಷಗಳು ಕಳೆದ ನಂತರ, ಅಂದರೆ ಇತ್ತೀಚೆಗೆ (ಏಪ್ರಿಲ್ 24, 2026 ರಂದು) ಪಿಎಸ್‌ಸಿ ಮಜೀದ್ ಅವರಿಗೆ ನೇಮಕಾತಿಯ ಸಲಹಾ ಪತ್ರವನ್ನು (Advice Memo) ಕಳುಹಿಸಿದೆ. 20 ವರ್ಷಗಳ ಹಿಂದೆ ಬರೆದ ಪರೀಕ್ಷೆಗೆ ಈಗ ಕೆಲಸದ ಆಫರ್ ಬಂದಿರುವುದನ್ನು ನೋಡಿ ಮಜೀದ್ ದಂಗಾಗಿದ್ದಾರೆ.

ಕೈಗೆ ಬಂದರೂ ಬಾಯಿಗೆ ಬಾರದ ಉದ್ಯೋಗ:

ನೇಮಕಾತಿ ಪತ್ರ ಕೈ ಸೇರಿದಾಗ ಮಜೀದ್ ಅವರಿಗೆ ಅತೀವ ಸಂತೋಷವಾಗಿದ್ದರೂ, ಮರುಕ್ಷಣವೇ ಅದು ತೀವ್ರ ನಿರಾಶೆಗೆ ತಿರುಗಿತು. ಏಕೆಂದರೆ, ಅಧಿಕೃತ ದಾಖಲೆಗಳ ಪ್ರಕಾರ ಮೇ 27, 2026 ಕ್ಕೆ ಮಜೀದ್ ಅವರಿಗೆ ಭರ್ತಿ 60 ವರ್ಷ ತುಂಬಿದೆ. ನಿಯಮಗಳ ಪ್ರಕಾರ 60 ವರ್ಷ ದಾಟಿದ ವ್ಯಕ್ತಿ ಹೊಸದಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಲು ಅರ್ಹನಾಗಿರುವುದಿಲ್ಲ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಜನ್ಮ ದಿನಾಂಕದ ವ್ಯತ್ಯಾಸ:

ಪ್ರಸ್ತುತ ಉದ್ಯೋಗ ವಂಚಿತರಾಗಿರುವ ಮಜೀದ್ ಅವರಿಗೆ ಈಗ ಒಂದು ತಾಂತ್ರಿಕ ಅಂಶದಲ್ಲಿ ಸಣ್ಣ ಭರವಸೆ ಮೂಡಿದೆ. ಅವರ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯ ಪ್ರಕಾರ ಅವರ ಜನ್ಮ ದಿನಾಂಕ ಮೇ 27, 1966 ಎಂದು ದಾಖಲಾಗಿದೆ (ಅದರಂತೆ ಅವರಿಗೆ 60 ವರ್ಷ ತುಂಬಿದೆ). ಆದರೆ, ತಮ್ಮ ನಿಜವಾದ ಜನ್ಮ ದಿನಾಂಕ ಮೇ 27, 1967 ಎಂದು ಮಜೀದ್ ವಾದಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಇಲಾಖೆ ಇವರ ಈ ದಾಖಲೆಯನ್ನು ಪರಿಶೀಲಿಸಿ ಜನ್ಮ ದಿನಾಂಕವನ್ನು ಸರಿಪಡಿಸಿದರೆ, ಇವರಿಗೆ ಸದ್ಯ 59 ವರ್ಷ ತುಂಬಿದಂತಾಗುತ್ತದೆ. ಆಗ ಇನ್ನು ಕನಿಷ್ಠ ಒಂದು ವರ್ಷವಾದರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಇವರಿಗೆ ಕಾನೂನಾತ್ಮಕವಾಗಿ ಅರ್ಹತೆ ಸಿಗುತ್ತದೆ.

ಸಚಿವರ ಗಮನಕ್ಕೆ ಹೋದ ಅರ್ಜಿ:

ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಬ್ದುಲ್ ಮಜೀದ್ ಅವರು ಕೇರಳದ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕ ಮತ್ತು ವಕೀಲರಾದ ಎನ್. ಶಂಸುದ್ದೀನ್ ಅವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:53 am, Wed, 3 June 26

Source link

ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್​​ಗೆ ಒಲಿದ ಅದೃಷ್ಟ? – Kannada News

ಶಾಸಕ ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ?Image Credit source: deccanherald

ಬೆಂಗಳೂರು, ಜೂನ್​​ 03: ಡಿಸಿಎಂ, ಮಂತ್ರಿ ಸ್ಥಾನ ಸೇರಿ ಕೆಪಿಸಿಸಿ (KPCC) ಅಧ್ಯಕ್ಷಗಿರಿಗೂ ರಾಜ್ಯ ಕಾಂಗ್ರೆಸ್ (Congress)​​ ಪಾಳಯದಲ್ಲಿ ತೀವ್ರ ವೈಪೋಟಿ ನಡೆದಿತ್ತು. ಆದರೆ ಅದಕ್ಕೀಗ ತೆರೆಬಿದ್ದಿದೆ. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಫಿಕ್ಸ್​​ ಎನ್ನಲಾಗಿದ್ದು, ಮಂತ್ರಿ ಸ್ಥಾನದ ಜೊತೆ ಪಕ್ಷದ ಜವಾಬ್ದಾರಿ ಕೇಳಿದ್ದ ಸತೀಶ್ ಜಾರಕಿಹೊಳಿಗೆ ಭಾರಿ ನಿರಾಸೆಯಾಗಿದೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ವಹಿಸಿಕೊಳ್ಳುವಂತೆ ಹೈಕಮಾಂಡ್ ನಾಯಕರಿಂದಲೇ ಬಿ.ಕೆ. ಹರಿಪ್ರಸಾದ್‌ಗೆ ಫೋನ್‌ ಬಂದಿದ್ದು, ಹರಿಪ್ರಸಾದ್‌ಗೆ ಎಂಎಲ್‌ಸಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ತಿಳಿಸಿರುವ ಮಾಹಿತಿ ಇದೆ.

ಮುಖ್ಯಾಂಶಗಳು

  • ಕೆಪಿಸಿಸಿ ಅಧ್ಯಕ್ಷ ಯಾರೆಂಬುದನ್ನು ಫೈನಲ್​​ ಮಾಡಿದ ಹೈಕಮಾಂಡ್​​
  • ಬಿ.ಕೆ. ಹರಿಪ್ರಸಾದ್​​ ರಾಜ್ಯ ಕಾಂಗ್ರೆಸ್​​ ಮುಖ್ಯಸ್ಥರಾಗೋದು ನಿಶ್ಚಿತ?
  • ಶಾಸಕ ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ?

ಇನ್ನು ಬಿ.ಕೆ. ಹರಿಪ್ರಸಾದ್​​ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್​​ ಮುಖ್ಯಮಂತ್ರಿ ಆಗಿವುದು ನಿಶ್ಚಿತವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್​​ ಮುಖ್ಯಸ್ಥನ ಪಟ್ಟಕ್ಕಾಗಿಯೂ ತೀವ್ರ ಪೈಪೋಟಿ ನಡೆದಿತ್ತು. ಆ ಪೈಕಿ ಮುಂಚೂಣಿಯಲ್ಲಿ ಸತೀಶ್​​ ಜಾರಕಿಹೊಳಿ ಹೆಸರು ಕೇಳಿಬಂದಿತ್ತು. ಹೀಗಿದ್ದರೂ ಸಚಿವ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷಗಿರಿ ಎರಡನ್ನೂ ಅವರು ಕೇಳಿರೋದು ಹೈಕಮಾಂಡ್​​ಗೆ ತಲೆನೋವಾಗಿ ಮಾರ್ಪಟ್ಟಿತ್ತು. ಈ ನಡುವೆ ರೇಸ್​​ಗೆ ಸರ್ಪ್ರೈಸ್​​ ಆಗಿ ಹರಿಪ್ರಸಾದ್​​ ಹೆಸರೂ ಕೇಳಿಬಂದಿತ್ತು. ಆದರೆ ಈಗ ಅವರೇ ಕೆಪಿಸಿಸಿ ಅಧ್ಯಕ್ಷರಾಗೋದು ಕನ್ಫರ್ಮ್​​ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟದಲ್ಲಿ ಪರಮೇಶ್ವರ್​ಗೆ ಮಾತ್ರ ಡಿಸಿಎಂ ಸ್ಥಾನ; ಏಕೈಕ DyCM ಆಗಿ ಪದಗ್ರಹಣ

ಸದ್ಯದ ಬೆಳವಣಿಗೆ ಬಗ್ಗೆ ಸತೀಶ್​​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ತನಗೆ ಪಕ್ಷ ಯಾವ ಜವಾಬ್ದಾರಿ ಕೊಡುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಧಿಕೃತವಾಗಿ ಮಾಹಿತಿ ಬರುವವರೆಗೂ ಕಾಯೋಣ. ಹೈಕಮಾಂಡ್ ಹೇಳಿದ್ದನ್ನ ನಾನೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು. ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ಬಗ್ಗೆ ಪೊಲೀಸ್ ತನಿಖೆ ಆಗ್ತಿದೆ. ನಿಜಾಂಶ ಹೊರ ಬರುತ್ತೆ ಎಂದಿದ್ದಾರೆ. ಅಲ್ಲದೆ ಡಾ.ಜಿ.ಪರಮೇಶ್ವರ್​​ ಅವರಿಗೆ ಡಿಸಿಎಂ ಸ್ಥಾನ ಸಿಕ್ಕರೆ ಒಳ್ಳೆಯದೆ. ಅವರು ಹಿರಿಯ ದಲಿತ ನಾಯಕರು ಎಂದೂ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು! – Kannada News

ಫುಟ್‌ಬಾಲ್ ಜಗತ್ತಿನ ಮಹಾಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ! ಈ ಬಾರಿಯ ಫಿಫಾ ವಿಶ್ವಕಪ್ (FIFA World cup 2026)​ ಕೇವಲ ತಂಡಗಳ ಸಂಖ್ಯೆಯಿಂದ ಮಾತ್ರವಲ್ಲ, ಆಟದ ನಿಯಮಗಳಿಂದಲೂ ಜಾಗತಿಕ ಗಮನ ಸೆಳೆಯುತ್ತಿದೆ. ಇಂಟರ್ನ್ಯಾಷನಲ್ ಫುಟ್‌ಬಾಲ್ ಅಸೋಸಿಯೇಷನ್ ಬೋರ್ಡ್ (IFAB) ಈ ಹೊಸ ನಿಯಮಗಳಿಗೆ ಅನುಮೋದನೆ ನೀಡಿದ್ದು, ಪಂದ್ಯಗಳ ವೇಗವನ್ನು ಹೆಚ್ಚಿಸಲು ಮತ್ತು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಈ ಬಾರಿ ಕಠಿಣ ನಿಯಮಗಳನ್ನು ಪರಿಚಯಿಸಲಾಗಿದೆ. ಆ ನಿಯಮಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ವಿಎಆರ್ (VAR) ವ್ಯಾಪ್ತಿ ವಿಸ್ತರಣೆ:

ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ವ್ಯವಸ್ಥೆಗೆ  ಹೆಚ್ಚಿನ ಅಧಿಕಾರ ನೀಡಲಾಗಿದೆ. ಮೈದಾನದಲ್ಲಿ ರೆಫರಿಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ, ಈ ಕೆಳಗಿನ ಸಂದರ್ಭಗಳಲ್ಲಿ VAR ಹಸ್ತಕ್ಷೇಪ ಮಾಡಬಹುದು:

  • ಎರಡನೇ ಹಳದಿ ಕಾರ್ಡ್ ಪರಿಶೀಲನೆ: ರೆಫರಿ ತಪ್ಪಾಗಿ ಎರಡನೇ ಹಳದಿ ಕಾರ್ಡ್ ನೀಡಿ ಆಟಗಾರನನ್ನು ಹೊರಹಾಕುವುದನ್ನು ತಡೆಯಲು VAR ಮರುಪರಿಶೀಲನೆ ನಡೆಸಬಹುದು.
  •  ಕಾರ್ನರ್ ಕಿಕ್ ರದ್ದು: ಆಫ್-ಸೈಡ್ ಅಥವಾ ರೆಫರಿ ತಪ್ಪಿನಿಂದ ಎದುರಾಳಿ ತಂಡಕ್ಕೆ ಸಿಕ್ಕ ಕಾರ್ನರ್ ಕಿಕ್ ಅನ್ನು ರದ್ದುಗೊಳಿಸಬಹುದು.
  •  ಪ್ರೀ-ರಿಸ್ಟಾರ್ಟ್ ಫೌಲ್ಸ್: ಸೆಟ್-ಪೀಸ್ (ಫ್ರೀ-ಕಿಕ್ ಅಥವಾ ಕಾರ್ನರ್) ಆರಂಭವಾಗುವ ಮುನ್ನವೇ ಆಟಗಾರರು ಮಾಡುವ ಫೌಲ್‌ಗಳನ್ನು ಪತ್ತೆಹಚ್ಚಬಹುದು.

ಸಮಯ ವ್ಯರ್ಥ ಮಾಡುವ ತಂತ್ರಗಳಿಗೆ ಬ್ರೇಕ್:

ಪಂದ್ಯದ ನಿಗದಿತ ಸಮಯವನ್ನು ಕಾಪಾಡಿಕೊಳ್ಳಲು ಈ ಬಾರಿ ಕಟ್ಟುನಿಟ್ಟಾದ ಕೌಂಟ್‌ಡೌನ್‌ ನಿಯಮಗಳನ್ನು ತರಲಾಗಿದೆ. ಈ ನಿಯಮಗಳ ಮೂಲಕ ರೆಫರಿ ತೆಗೆದುಕೊಳ್ಳಲಿರುವ ಕ್ರಮಗಳ ಪಟ್ಟಿ ಈ ಕೆಳಗಿನಂತಿದೆ:

  • 5 ಸೆಕೆಂಡ್ ರಿಸ್ಟಾರ್ಟ್ ಟೈಮರ್: ಗೋಲ್ ಕಿಕ್ ಮತ್ತು ಥ್ರೋ-ಇನ್ ಮಾಡುವಾಗ ರೆಫರಿಗಳು ಕೈ ಎತ್ತಿ 5 ಸೆಕೆಂಡುಗಳ ಕೌಂಟ್‌ಡೌನ್ ತೋರಿಸುತ್ತಾರೆ. ಥ್ರೋ-ಇನ್ ತಡವಾದರೆ ಚೆಂಡು ಎದುರಾಳಿ ತಂಡಕ್ಕೆ ಸಿಗುತ್ತದೆ. ಗೋಲ್ ಕಿಕ್ ತಡವಾದರೆ ಎದುರಾಳಿಗೆ ಕಾರ್ನರ್ ಕಿಕ್ ನೀಡಲಾಗುತ್ತದೆ.
  •  10 ಸೆಕೆಂಡ್ ಸಬ್‌ಸ್ಟಿಟ್ಯೂಷನ್: ಮೈದಾನದಿಂದ ಹೊರಹೋಗುವ ಆಟಗಾರ 10 ಸೆಕೆಂಡುಗಳ ಒಳಗೆ ಹತ್ತಿರದ ಬೌಂಡರಿ ಲೈನ್ ದಾಟಬೇಕು. ತಡ ಮಾಡಿದರೆ, ಹೊಸ ಆಟಗಾರ ಮೈದಾನಕ್ಕೆ ಬರಲು 1 ನಿಮಿಷ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ಆ ತಂಡ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ.

ಕಠಿಣ ಶಿಸ್ತು ಕ್ರಮಗಳು:

ಆಟಗಾರರು ಮೈದಾನದಲ್ಲಿ ತೋರುವ ಅಸಭ್ಯ ವರ್ತನೆಯನ್ನು ತಡೆಗಟ್ಟಲು ಈ ಬಾರಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಆ ನಿಯಮಗಳು ಯಾವುದೆಂದರೆ:

  • ಬಾಯಿ ಮುಚ್ಚಿಕೊಳ್ಳುವುದಕ್ಕೆ ನಿಷೇಧ: ರೆಫರಿ ಅಥವಾ ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಸುವಾಗ ಯಾವುದೇ ಆಟಗಾರ ಕೈ ಅಥವಾ ಜರ್ಸಿಯಿಂದ ಬಾಯಿ ಮುಚ್ಚಿಕೊಳ್ಳುವಂತಿಲ್ಲ. ಜನಾಂಗೀಯ ಅಥವಾ ನಿಂದನಾತ್ಮಕ ಪದಗಳನ್ನು ಮರೆಮಾಚುವುದನ್ನು ತಡೆಯಲು ಈ ನಿಯಮ ತರಲಾಗಿದ್ದು, ಇದನ್ನು ಉಲ್ಲಂಘಿಸಿದರೆ ನೇರ ‘ರೆಡ್ ಕಾರ್ಡ್’ ನೀಡಲಾಗುತ್ತದೆ.
  •  ಕ್ಯಾಪ್ಟನ್-ಓನ್ಲಿ ನಿಯಮ: ಕೇವಲ ತಂಡದ ನಾಯಕ ಮಾತ್ರ ರೆಫರಿ ಬಳಿ ಬಂದು ನಿರ್ಧಾರಗಳನ್ನು ಪ್ರಶ್ನಿಸಬಹುದು. ಉಳಿದ ಆಟಗಾರರು ರೆಫರಿಯನ್ನು ಮುತ್ತುವರಿದರೆ ತಕ್ಷಣ ಹಳದಿ ಕಾರ್ಡ್ ನೀಡಲಾಗುತ್ತದೆ.

ಆಟಗಾರರಿಗೆ ಕಡ್ಡಾಯ ಬ್ರೇಕ್:

ಈ ಬಾರಿಯ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಬೇಸಿಗೆಯಲ್ಲಿ. ಪಂದ್ಯಗಳನ್ನು ಆಯೋಜಿಸಲಿರುವ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಕೆಲವು ನಗರಗಳಲ್ಲಿ ತಾಪಮಾನವು 38°C (100°F) ಗಿಂತಲೂ ಹೆಚ್ಚಿರುತ್ತದೆ. ಹೀಗಾಗಿ ಕಡ್ಡಾಯ ಬ್ರೇಕ್ ನಿಯಮ ಜಾರಿಗೆ ತರಲಾಗಿದೆ. ಅದರಂತೆ ಈ ಬಾರಿ ಆಟಗಾರರಿಗೆ ಈ ಕೆಳಗಿನ ನಿಯಮಗಳು ಅನ್ವಯವಾಗಲಿದೆ:

  • ಕಡ್ಡಾಯ ಹೈಡ್ರೇಶನ್ ಬ್ರೇಕ್: ಹವಾಮಾನ ಹೇಗಿದ್ದರೂ ಪಂದ್ಯದ ಪ್ರತಿ ಅರ್ಧದ 22ನೇ ನಿಮಿಷದಲ್ಲಿ ಆಟಗಾರರಿಗೆ 3 ನಿಮಿಷಗಳ ಕಡ್ಡಾಯ ಡ್ರಿಂಕ್ಸ್​ ಬ್ರೇಕ್ ವಿರಾಮ ನೀಡಲಾಗುತ್ತದೆ.
  •  ಹೊರ ಹೊಗಲೇಬೇಕು: ಗಾಯದ ನೆಪದಲ್ಲಿ ಆಟವನ್ನು ನಿಲ್ಲಿಸುವ ಔಟ್‌ಫೀಲ್ಡ್ ಆಟಗಾರರು ಮೈದಾನದ ಹೊರಗೆ ಕನಿಷ್ಠ 60 ಸೆಕೆಂಡುಗಳ ಕಾಲ ಚಿಕಿತ್ಸೆ ಪಡೆಯಬೇಕು. ತಲೆಗೆ ಪೆಟ್ಟಾದಾಗ ಅಥವಾ ಗೋಲ್‌ಕೀಪರ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

48 ತಂಡಗಳ ಟೂರ್ನಮೆಂಟ್:

ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿಯಲಿವೆ. ಕಳೆದ ಬಾರಿ ಅಂದರೆ, ಖತಾರ್ ವಿಶ್ವಕಪ್​ನಲ್ಲಿ 32 ತಂಡಗಳು ಕಣಕ್ಕಿಳಿದಿದ್ದವು. ಇದೀಗ ತಂಡಗಳ ಸಂಖ್ಯೆ ಹೆಚ್ಚಳದೊಂದಿಗೆ ಟೂರ್ನಿಯ ಸ್ವರೂಪ ಬದಲಾಗಿದೆ. ಅದರಂತೆ ಈ ಬಾರಿ ಈ ಕೆಳಗಿನ ಸ್ವರೂಪದಲ್ಲಿ ಟೂರ್ನಿ ನಡೆಯಲಿದೆ..

  • 12 ಗ್ರೂಪ್: ಕಣಕ್ಕಿಳಿಯುವ 48 ತಂಡಗಳನ್ನು ಒಟ್ಟು 12 ಗುಂಪುಗಳಾಗಿ (Group A ರಿಂದ Group L) ವಿಂಗಡಿಸಲಾಗಿದೆ.
  • 4 ತಂಡಗಳ ಗ್ರೂಪ್: ಪ್ರತಿಯೊಂದು ಗುಂಪಿನಲ್ಲೂ ತಲಾ 4 ತಂಡಗಳು ಇರಲಿವೆ. ಪ್ರತಿ ತಂಡವು ತನ್ನ ಗುಂಪಿನ ಉಳಿದ ಮೂರು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡಲಿದೆ.
  • ಟಾಪ್ 2 ತಂಡಗಳು: ಪ್ರತಿ 12 ಗುಂಪುಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಒಟ್ಟು 24 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ.
  • 3ನೇ ಸ್ಥಾನದ ತಂಡ ಕ್ಕೂ ಚಾನ್ಸ್: ಎಲ್ಲಾ 12 ಗುಂಪುಗಳಲ್ಲಿ 3ನೇ ಸ್ಥಾನ ಪಡೆದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ 8 ತಂಡಗಳಿಗೆ ಮುಂದಿನ ಹಂತಕ್ಕೆ ಹೋಗಲು ಅವಕಾಶ ನೀಡಲಾಗುತ್ತದೆ. ಈ ತಂಡಗಳ ಪಾಯಿಂಟ್ಸ್​, ಗಳಿಸಿದ ಗೋಲು, ಗೋಲುಗಳ ವ್ಯತ್ಯಾಸವನ್ನು ಪರಿಗಣಿಸಿ ಈ 8 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
  • ನಾಕೌಟ್​ಗೆ 32 ತಂಡಗಳು: ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಒಟ್ಟು 32 ತಂಡಗಳು (24 + 8) ನಾಕೌಟ್ ಹಂತಕ್ಕೆ ಪ್ರವೇಶಿಸುತ್ತವೆ.

ಹೆಚ್ಚುವರಿ ನಾಕೌಟ್ ಹಂತ:

ಇಷ್ಟು ವರ್ಷ ಫಿಫಾ ವಿಶ್ವಕಪ್‌ನಲ್ಲಿ ಗುಂಪು ಹಂತ ಮುಗಿದ ತಕ್ಷಣ ‘ರೌಂಡ್ ಆಫ್ 16’ (ಪ್ರೀ-ಕ್ವಾರ್ಟರ್ ಫೈನಲ್) ನಡೆಯುತ್ತಿತ್ತು. ಆದರೆ ಈ ಬಾರಿ ಮೊಟ್ಟಮೊದಲ ಬಾರಿಗೆ ‘ರೌಂಡ್ ಆಫ್ 32’ ಹಂತವನ್ನು ಪರಿಚಯಿಸಲಾಗಿದೆ. ಅದರಂತೆ ಈ ಬಾರಿಯ ದ್ವಿತೀಯ ಸುತ್ತಿನಲ್ಲಿ ಪ್ರೀ-ಕ್ವಾರ್ಟರ್ ಫೈನಲ್ ಬದಲಿಗೆ 32 ತಂಡಗಳ ನಡುವೆ ನಾಕೌಟ್ ಪಂದ್ಯಗಳು ನಡೆಯಲಿವೆ.

  • 16 ಪಂದ್ಯಗಳು: ನಾಕೌಟ್ ಸುತ್ತಿನಲ್ಲಿ 32 ತಂಡಗಳ ನಡುವೆ ಒಟ್ಟು 16 ಪಂದ್ಯಗಳು ನಡೆಯಲಿವೆ.
  • ಡೈರೆಕ್ಟ್ ಔಟ್: ಈ ಹಂತದಲ್ಲಿ ಸೋತ 16 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಪ್ರೀ-ಕ್ವಾರ್ಟರ್ ಫೈನಲ್:

ನಾಕೌಟ್ ಸುತ್ತಿನಲ್ಲಿ ಗೆದ್ದ 16 ತಂಡಗಳು ರೌಂಡ್ ಆಫ್-16 ಅಥವಾ ಪ್ರೀ-ಕ್ವಾರ್ಟರ್ ಫೈನಲ್ ಫೈನಲ್​ನಲ್ಲಿ ಮುಖಾಮುಖಿಯಾಗಲಿವೆ.

ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್:

ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ 8 ತಂಡಗಳು ಕ್ವಾರ್ಟರ್ ಫೈನಲ್​ಗೆ ತಲುಪಲಿದೆ. ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ ನಾಲ್ಕು ತಂಡಗಳು ಸೆಮಿಫೈನಲ್​ಗೇರಲಿದೆ.

ಸೆಮಿ ಫೈನಲ್​:

ಕ್ವಾರ್ಟರ್ ಫೈನಲ್​ನಲ್ಲಿ ಗೆಲ್ಲುವ 4 ತಂಡಗಳು ಜುಲೈ 14, 2026 (ಮೊದಲ) ರಂದು ಮತ್ತ ಜುಲೈ 15, 2026  ರಂದು (ಎರಡನೇ) ಸೆಮಿಫೈನಲ್​ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್​ಗೇರಲಿದೆ. ಇನ್ನು ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಕಂಚಿನ ಪದಕಕ್ಕಾಗಿ ಜುಲೈ 18, 2026 ರಂದು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಯಿಂದ ರಾಜಸ್ಥಾನ್ ರಾಯಲ್ಸ್​ಗೆ 33.87 ಕೋಟಿ ರೂ. ಲಾಭ!

ಫೈನಲ್ ಮ್ಯಾಚ್:

ಈ ಬಾರಿಯ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯವು ಜುಲೈ 19, 2026 ರಂದು ಅಮೆರಿಕದ ಅತ್ಯಂತ ಪ್ರಸಿದ್ಧ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಜರುಗಲಿದೆ.

Source link

Video: ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರ; ಹೊಸ ಬಾಡಿಗೆ ಮನೆಯ ಬಗ್ಗೆ ಮಹಿಳೆ ಹೇಳಿದ್ದೇನು ಗೊತ್ತಾ? – Kannada News

ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಶಿಕ್ಷಣ, ಉದ್ಯೋಗ ಹುಟ್ಟೂರಿನಿಂದ ಅಪರಿಚಿತ ಊರಿಗೆ ತೆರಳುವುದು ಅನಿರ್ವಾಯವಾಗುತ್ತದೆ. ಆದರೆ ದಿನ ಕಳೆದಂತೆ ಅಪರಿಚಿತ ಊರು, ಅಲ್ಲಿನ ಜನರು ನಮ್ಮವರಾಗಿ ಬಿಡುತ್ತಾರೆ. ಇದೀಗ ಮಹಿಳೆಯೊಬ್ಬರು ಗುರಗಾಂವ್‌ನಿಂದ (Gurgaon) ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿನಲ್ಲಿರುವ ತನ್ನ ಹೊಸ ಅಪಾರ್ಟ್‌ಮೆಂಟ್‌ನನ್ನು ಆರಾಮದಾಯಕ ಸ್ಥಳವನ್ನಾಗಿ ಹೇಗೆ ಪರಿವರ್ತಿಸಿಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಈ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

karishma.koul.kakroo ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕರಿಷ್ಮಾ ಕೌಲ್ ಎಂಬ ಮಹಿಳೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ಗೆ  ನಮ್ಮ ಬೆಂಗಳೂರು, ನಮ್ಮ ಜೀವನದ ಮುಂದಿನ ತಾಣ. ಭವಿಷ್ಯ ಏನಾಗುತ್ತದೆ ಎಂದು ನೋಡಲು ಉತ್ಸುಕನಾಗಿದ್ದೇನೆ, ಹೊಸ ಕೆಫೆಗಳನ್ನು ಪ್ರಯತ್ನಿಸಲು ಉತ್ಸುಕನಾಗಿದ್ದೇನೆ, ಅದ್ಭುತ ಹವಾಮಾನಕ್ಕಾಗಿ ಉತ್ಸುಕನಾಗಿದ್ದೇನೆ, ಹೊಸ ಜನರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ, ಹೊಸ ನೆನಪುಗಳನ್ನು ಸೃಷ್ಟಿಸಲು ಉತ್ಸುಕನಾಗಿದ್ದೇನೆ ಎಂಬ ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ಗೆ ಸ್ವಾಗತ. 13 ವರ್ಷಗಳ ಕಾಲ ಗುರಗಾಂವ್‌ನಲ್ಲಿ ವಾಸಿಸಿದ ಬಳಿಕ, ನಾವು ನಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ, ನಮ್ಮ ಮೊದಲ ಮನೆಯನ್ನು ಬಿಟ್ಟು ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದೆವು. ನಮ್ಮ ಸ್ವಂತ ಮನೆಯಿಂದ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಳ್ಳುವುದು ದೊಡ್ಡ ಸವಾಲಲ್ಲ, ಬದಲಾಗಿ ಸಣ್ಣ ಜಾಗಕ್ಕೆ ಹೊಂದಿಕೊಳ್ಳುವುದು ಸಮಸ್ಯೆಯಾಗಿತ್ತು. ಮಲಗುವ ಕೋಣೆಯಲ್ಲಿ ವಾರ್ಡ್ರೋಬ್ ಹೊಂದಿದ್ದ 4 ಬಿಹೆಚ್ ಕೆ ಮನೆಯನ್ನು 3 ಬಿ ಹೆಚ್ ಕೆ ಮನೆಗೆ ಅಳವಡಿಸಬೇಕಾಗಿತ್ತು, ಇಲ್ಲಿ ಕೇವಲ ಎರಡು ಮಲಗುವ ಕೋಣೆಗಳಲ್ಲಿ ಮಾತ್ರ ವಾರ್ಡ್ರೋಬ್‌ಗಳಿವೆ ಎಂದು ಹೇಳಿದ್ದಾರೆ.

ಅದಕ್ಕಾಗಿ ನಾವು ಗುರಗಾಂವ್‌ನಲ್ಲಿರುವ ನಮ್ಮ ಮನೆಯ ಸಹಾಯಕಿ ಮತ್ತು ವಾಚ್ ಮ್ಯಾನ್ ಗೆ ನಮ್ಮಲ್ಲಿಂದ ಹೆಚ್ಚಿನ ವಸ್ತುಗಳನ್ನು ನೀಡಿದ್ದೆವು. ಈ ಬಾಡಿಗೆ ಮನೆ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು. ಈ ಬದಲಾವಣೆಯ ಹೊರತಾಗಿಯೂ, ಬಾಡಿಗೆ ಅಪಾರ್ಟ್ಮೆಂಟ್ ಅನ್ನು ಬೆಚ್ಚಗಿನ ಮತ್ತು ವೈಯಕ್ತಿಕವಾಗಿ  ಅನುಭವಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಅದು ನಮ್ಮ ಬಾಡಿಗೆ ಮನೆಯಾಗಿದ್ದರೂ, ಅದನ್ನು ನಮ್ಮ ಸ್ವಂತ ಮನೆಯಂತೆ ಅಲಂಕರಿಸುತ್ತೇವೆ. ಏಕೆಂದರೆ ಮನೆ ನಿಮ್ಮದೇ ಆಗಿರಲಿ ಅಥವಾ ಬಾಡಿಗೆಗೆ ಪಡೆದಿರಲಿ, ಅದು ಶಾಂತಿಯನ್ನು ನೀಡಬೇಕು. ಅದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿದ್ದಾರೆ. ಇದುವರೆಗೆ ಡ್ರಾಯಿಂಗ್ ರೂಮ್ ಮಾತ್ರ ಸಿದ್ಧವಾಗಿದ್ದು, ನನಗೆ ಹೊಸ ಮನೆಗೆ ಬಂದಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೀವನದ ಈ ಹೊಸ ಪ್ರಯಾಣವನ್ನು ಆರಂಭಿಸಿದ್ದಕ್ಕಾಗಿ ಮತ್ತು ನಿಮ್ಮ ಸೌಕರ್ಯ ವಲಯದಿಂದ ಹೊರಬಂದಿದ್ದಕ್ಕಾಗಿ ಅಭಿನಂದನೆಗಳು ಎಂದಿದ್ದಾರೆ. ಇನ್ನೊಬ್ಬರು, ವಾಹ್! ಬೆಂಗಳೂರಿಗೆ ಸ್ವಾಗತ. ನೀವು ಇಲ್ಲಿ ಅದ್ಭುತ ಅನುಭವವನ್ನು ಪಡೆಯುತ್ತೀರಿ. ನಿಮ್ಮ ಹೊಸ ಮನೆ ಮತ್ತು ನಗರದಲ್ಲಿ ಸಾಕಷ್ಟು ಅದ್ಭುತ ನೆನಪುಗಳನ್ನು ಸೃಷ್ಟಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸ ಮನೆಯನ್ನು ನಿಮ್ಮ ಮನೆಯನ್ನಾಗಿಸಲು ನೀವು ಹಾಕಿದ ಶ್ರಮವನ್ನು ನಾನು ಮೆಚ್ಚುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:31 am, Wed, 3 June 26

Source link

ಟಿಎಂಸಿಯಲ್ಲಿ ಒಡಕು: 59 ಶಾಸಕರ ಸಹಿಯೊಂದಿಗೆ ವಿಧಾನಸಭೆಗೆ ಆಗಮಿಸಿದ ಉಚ್ಚಾಟಿತ ಶಾಸಕ ರಿತಬ್ರತ ಬ್ಯಾನರ್ಜಿ – Kannada News

ಕೋಲ್ಕತಾ, ಜೂನ್ 03: ಪಶ್ಚಿಮ ಬಂಗಾಳ(West Bengal) ವಿಧಾನಸಭೆಯ ವಿರೋಧ ಪಕ್ಷದ ನಾಯಕರ ನೇಮಕಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಲಯದಲ್ಲಿ ಬುಧವಾರ ಭಾರಿ ರಾಜಕೀಯ ಚಟುವಟಿಕೆಗಳು ಕಂಡುಬಂದಿವೆ. ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಗುರುತಿಸುವಂತೆ ಟಿಎಂಸಿ ಹೈಕಮಾಂಡ್ ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ, ಪಕ್ಷದಿಂದ ಉಚ್ಚಾಟಿತಗೊಂಡಿರುವ ಶಾಸಕ ರಿತಬ್ರತ ಬ್ಯಾನರ್ಜಿ ಅವರು 59 ಶಾಸಕರ ಸಹಿಯೊಂದಿಗೆ ವಿಧಾನಸಭೆಗೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ, ಪಕ್ಷದ ಕಾರ್ಯವೈಖರಿ ಮತ್ತು ಪಕ್ಷದಲ್ಲಿ ಆಯ್ದ ಕೆಲವರ ಪ್ರಾಬಲ್ಯದ ವಿರುದ್ಧ ಹಲವಾರು ಪ್ರಮುಖ ಮುಖಗಳು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿವೆ.

ಮಹಾರಾಷ್ಟ್ರ ಶೈಲಿ ದಂಗೆಯ ವದಂತಿ ಸುಳ್ಳು
ಪಕ್ಷದ ಮಾಜಿ ವಕ್ತಾರ ರಿಜು ದತ್ತಾ ಅವರು ಮಾತನಾಡಿ, ಸುಮಾರು 50 ಟಿಎಂಸಿ ಶಾಸಕರು ರಹಸ್ಯವಾಗಿ ಸಭೆ ಸೇರಿ ಹೊಸ ಬಣ ರಚಿಸಿದ್ದಾರೆ. ಇವರು ಸೋಭಾಂದೇಬ್ ಅವರ ಬದಲಾಗಿ ರಿತಬ್ರತ ಬ್ಯಾನರ್ಜಿ ಅವರನ್ನು ನಾಯಕರನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಇದು ಟಿಎಂಸಿಯಲ್ಲಿ ಮಹಾರಾಷ್ಟ್ರ ಮಾದರಿಯ ಬಿರುಕು ಉಂಟಾಗಲಿದೆ ಎಂಬ ವದಂತಿಗಳಿಗೆ ಕಾರಣವಾಗಿತ್ತು.

ಮತ್ತಷ್ಟು ಓದಿ: ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ

ಆದರೆ, ಈ ಎಲ್ಲಾ ಹೇಳಿಕೆಗಳನ್ನು ಶಾಸಕರಾದ ರಿತಬ್ರತ ಬ್ಯಾನರ್ಜಿ ಬಲವಾಗಿ ನಿರಾಕರಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ಯಾವುದೇ ಬಂಡಾಯದ ಬಣ ಸೃಷ್ಟಿಯಾಗಿಲ್ಲ. ಇಂತಹ ವರದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ತಪ್ಪು ಮಾಹಿತಿ ಹರಡುವುದನ್ನು ಮುಂದುವರಿಸಿದರೆ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಘಟನೆ ಹಿನ್ನೆಲೆ ಏನು?
ಪಕ್ಷದ ಮುಖ್ಯ ಸಚೇತಕ ಮತ್ತು ಶಾಸಕಾಂಗ ನಾಯಕರ ನಾಮನಿರ್ದೇಶನಕ್ಕೆ ಸಂಬಂಧಿಸಿದ ಸಹಿ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಕ್ಕಾಗಿ ರಿತಬ್ರತ ಬ್ಯಾನರ್ಜಿ ಮತ್ತು ಸಹ ಶಾಸಕ ಸಂದೀಪನ್ ಸಹಾ ಅವರನ್ನು ಒಂದು ದಿನದ ಮುಂಚಿತವಾಗಿ ಪಕ್ಷದಿಂದ ಹೊರಹಾಕಲಾಗಿತ್ತು.

ಇತ್ತೀಚಿನ ಚುನಾವಣಾ ಫಲಿತಾಂಶಗಳ ನಂತರ ಪಕ್ಷದಲ್ಲಿ ಆಯ್ದ ಕೆಲವರ ಪ್ರಾಬಲ್ಯದ ವಿರುದ್ಧ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ನಿಜವಾದರೂ, ಸದ್ಯಕ್ಕೆ ಟಿಎಂಸಿಯಲ್ಲಿ ಯಾವುದೇ ದೊಡ್ಡ ಒಡಕು ಮೂಡಿಲ್ಲ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪಕ್ಷದ ಹೈಕಮಾಂಡ್ ಹಾನಿ ನಿಯಂತ್ರಣ ಕ್ರಮಗಳಿಗೆ ಮುಂದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Ravi Gochar June: ಮಿಥುನ ರಾಶಿಗೆ ಸೂರ್ಯ ಸಂಚಾರ; 12ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ? – Kannada News

ಮಿಥುನ ರಾಶಿಗೆ ಸೂರ್ಯ ಸಂಚಾರImage Credit source: Pinterest

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನು ಆತ್ಮಕಾರಕ, ಅಧಿಕಾರ ಮತ್ತು ಆರೋಗ್ಯದ ಸಂಕೇತ. ರವಿಯು ಬುಧನ ಮನೆಯಾದ ಮಿಥುನ ರಾಶಿಗೆ ಪ್ರವೇಶಿಸುವಾಗ ಅತ್ಯಂತ ವಿಶಿಷ್ಟ ಹಾಗೂ ಪ್ರಭಾವಶಾಲಿಯಾಗುವನು. ಜೂನ್ ತಿಂಗಳಲ್ಲಿ ರವಿಯು ಮಿಥುನ ರಾಶಿಯಲ್ಲಿದ್ದು, ಶುಕ್ರನ ದ್ರೇಕ್ಕಾಣದಲ್ಲಿ ಕಲಾತ್ಮಕತೆ, ಆಕರ್ಷಣೆ ಮತ್ತು ಸಂಬಂಧಗಳ ಮೇಲೆ ಪ್ರಭಾವವನ್ನೂ, ರವಿಯ ಹೋರೆಯಲ್ಲಿ ಆತ್ಮವಿಶ್ವಾಸ, ತೇಜಸ್ಸು ಮತ್ತು ನಾಯಕತ್ವದ ವೃದ್ಧಿಯನ್ನೂ ಶನಿಯ ನವಾಂಶದಲ್ಲಿ ಶಿಸ್ತು, ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯತೆಯನ್ನೂ ಗುರುವಿನ ತ್ರಿಂಶಾಂಶದಲ್ಲಿ ಜ್ಞಾನ, ಧಾರ್ಮಿಕತೆ ಮತ್ತು ಸದ್ಬುದ್ಧಿಯ ರಕ್ಷಣೆಯನ್ನೂ, ಕುಜನ ದ್ವಾದಶಾಂಶದಲ್ಲಿ ಸಾಹಸಪ್ರವೃತ್ತಿ, ಆತುರ ಮತ್ತು ಭೌತಿಕ ಶಕ್ತಿಯನ್ನೂ ನೀಡುವನು.

​ಮೇಷ ರಾಶಿ:

ರವಿಯು ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಕುಜನ ದ್ವಾದಶಾಂಶವಿರುವುದರಿಂದ ನಿಮ್ಮ ಧೈರ್ಯ ಮತ್ತು ಸಾಹಸ ಪ್ರವೃತ್ತಿ ಹೆಚ್ಚಾಗಲಿದೆ. ಶುಕ್ರನ ದ್ರೇಕ್ಕಾಣವು ಒಡಹುಟ್ಟಿದವರೊಂದಿಗೆ ಸೌಹಾರ್ದತೆಯನ್ನು ನೀಡಿದರೆ, ಶನಿಯ ನವಾಂಶವು ಕಾರ್ಯಕ್ಷೇತ್ರದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ತಂದುಕೊಡುತ್ತದೆ. ಉದ್ಯೋಗದಲ್ಲಿ ಸಣ್ಣ ಪ್ರಯಾಣಗಳು ಲಾಭದಾಯಕವಾಗಲಿವೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.

​ವೃಷಭ ರಾಶಿ:

​ದ್ವಿತೀಯ ಭಾವದಲ್ಲಿ ರವಿಯ ಸ್ಥಿತಿಯಿದೆ. ಶುಕ್ರನ ದ್ರೇಕ್ಕಾಣವಿರುವುದರಿಂದ ಆರ್ಥಿಕವಾಗಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಆದರೆ ರವಿಯ ಹೋರೆ ಮತ್ತು ಶನಿಯ ನವಾಂಶದ ಕಾರಣದಿಂದಾಗಿ ಕುಟುಂಬದಲ್ಲಿ ಮಾತಿನ ಚಕಮಕಿ ಅಥವಾ ಕಠಿಣ ಮಾತುಗಳು ಬರುವ ಸಾಧ್ಯತೆಯಿದೆ. ಗುರುವಿನ ತ್ರಿಂಶಾಂಶವು ನಿಮ್ಮನ್ನು ಆರ್ಥಿಕ ಸಂಕಷ್ಟಗಳಿಂದ ರಕ್ಷಿಸುತ್ತದೆ. ಹೂಡಿಕೆಯಲ್ಲಿ ಜಾಗ್ರತೆ ಇರಲಿ.

​ಮಿಥುನ ರಾಶಿ:

​ನಿಮ್ಮದೇ ರಾಶಿಯಲ್ಲಿ ರವಿ ಇರಲಿದ್ದಾನೆ. ರವಿಯ ಹೋರೆಯ ಪ್ರಭಾವದಿಂದ ನಿಮ್ಮ ಗೌರವ, ಪ್ರತಿಷ್ಠೆ ಮತ್ತು ನಾಯಕತ್ವದ ಗುಣಗಳು ವೃದ್ಧಿಯಾಗಲಿವೆ. ಆದರೆ ಶನಿಯ ನವಾಂಶ ಮತ್ತು ಕುಜನ ದ್ವಾದಶಾಂಶವು ಮಾನಸಿಕ ಒತ್ತಡ, ಅಹಂಕಾರ ಮತ್ತು ತಲೆನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ನೀಡಬಹುದು. ಶುಕ್ರನ ದ್ರೇಕ್ಕಾಣವಿರುವುದರಿಂದ ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

​ಕರ್ಕಾಟಕ ರಾಶಿ:

​ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ರವಿಯ ಸಂಚಾರವಿದೆ. ವಿದೇಶಿ ಮೂಲಗಳಿಂದ ಅಥವಾ ದೂರದ ಪ್ರಯಾಣದಿಂದ ಲಾಭವಾಗುವ ಸಾಧ್ಯತೆಯಿದೆ. ಆದರೆ ಕೋರ್ಟು-ಕಚೇರಿ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಕುಜನ ದ್ವಾದಶಾಂಶ ಮತ್ತು ಶನಿಯ ನವಾಂಶವು ಅನಗತ್ಯ ಖರ್ಚುಗಳನ್ನು ಮತ್ತು ನಿದ್ರಾಹೀನತೆಯನ್ನು ಉಂಟುಮಾಡಬಹುದು. ಗುರುವಿನ ತ್ರಿಂಶಾಂಶದ ಪ್ರಭಾವದಿಂದ ಆಧ್ಯಾತ್ಮಿಕ ಚಿಂತನೆಗಳು ನೆಮ್ಮದಿ ನೀಡಲಿವೆ.

​ಸಿಂಹ ರಾಶಿ:

​ನಿಮ್ಮ ರಾಶ್ಯಾಧಿಪತಿಯಾದ ರವಿಯು ಏಕಾದಶ ಭಾವದಲ್ಲಿರುವುದು ಅತ್ಯಂತ ಶುಭದಾಯಕ. ಶುಕ್ರನ ದ್ರೇಕ್ಕಾಣ ಮತ್ತು ರವಿಯ ಹೋರೆಗಳು ಸಮಾಜದಲ್ಲಿ ಉತ್ತಮ ಕೀರ್ತಿ, ಧನಲಾಭ ಮತ್ತು ಮಿತ್ರರಿಂದ ಸಹಕಾರವನ್ನು ತಂದುಕೊಡುತ್ತವೆ. ಶನಿಯ ನವಾಂಶವು ಹಿರಿಯ ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತರಬಹುದು, ಆದರೆ ಗುರುವಿನ ತ್ರಿಂಶಾಂಶದ ಶುಭ ದೃಷ್ಟಿಯಿಂದಾಗಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಯ್ದಿರಿಸಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

​ಕನ್ಯಾ ರಾಶಿ:

​ದಶಮ ಭಾವದಲ್ಲಿ ರವಿಯು ದಿಗ್ದರ್ಶನವನ್ನು ಹೊಂದುತ್ತಾನೆ. ಉದ್ಯೋಗ ರಂಗದಲ್ಲಿ ಪ್ರಗತಿ, ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ಕುಜನ ದ್ವಾದಶಾಂಶವಿರುವುದರಿಂದ ಮೇಲಧಿಕಾರಿಗಳೊಂದಿಗೆ ವಾದವಿವಾದಗಳಿಗೆ ಇಳಿಯಬೇಡಿ. ಶನಿಯ ನವಾಂಶವು ಕೆಲಸದಲ್ಲಿ ವಿಳಂಬವನ್ನು ಉಂಟುಮಾಡಿದರೂ, ಅಂತಿಮವಾಗಿ ಯಶಸ್ಸು ನಿಮ್ಮದಾಗಲಿದೆ. ಶುಕ್ರನ ದ್ರೇಕ್ಕಾಣವು ಕೆಲಸದ ವಾತಾವರಣವನ್ನು ಆಹ್ಲಾದಕರವಾಗಿಸುತ್ತದೆ.

​ತುಲಾ ರಾಶಿ:

​ಭಾಗ್ಯ ಭಾವದಲ್ಲಿ ರವಿಯ ಸಂಚಾರವಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಗುರುವಿನ ತ್ರಿಂಶಾಂಶದ ಪ್ರಭಾವದಿಂದ ಪಿತೃ ಹಾಗೂ ಗುರುವಿನ ಆಶೀರ್ವಾದ ಲಭಿಸಲಿದೆ. ಶನಿಯ ನವಾಂಶವು ಉನ್ನತ ಶಿಕ್ಷಣ ಅಥವಾ ಭಾಗ್ಯೋದಯದಲ್ಲಿ ಕೆಲವು ಅಡೆತಡೆಗಳನ್ನು ತಂದರೂ, ಶುಕ್ರನ ದ್ರೇಕ್ಕಾಣವು ಕಲಾತ್ಮಕ ಹಾಗೂ ಸೃಜನಶೀಲ ರಂಗದಲ್ಲಿ ಇರುವವರಿಗೆ ಅಪಾರ ಕೀರ್ತಿಯನ್ನು ತಂದುಕೊಡುತ್ತದೆ. ಲಾಭದಾಯಕ ಪ್ರಯಾಣಗಳು ಒದಗಿಬರಲಿವೆ.

​ವೃಶ್ಚಿಕ ರಾಶಿ:

ಅಷ್ಟಮ ಭಾವದಲ್ಲಿ ರವಿಯ ಸ್ಥಿತಿಯಿದೆ. ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ಅದರಲ್ಲೂ ಕುಜನ ದ್ವಾದಶಾಂಶ ಮತ್ತು ಶನಿಯ ನವಾಂಶ ಇರುವುದರಿಂದ ರಕ್ತದೊತ್ತಡ, ಉಷ್ಣಬಾಧೆ ಅಥವಾ ವಾಹನ ಚಾಲನೆಯಲ್ಲಿ ಅಪಘಾತಗಳ ಬಗ್ಗೆ ಎಚ್ಚರಿಕೆ ಅಗತ್ಯ. ಗುರುವಿನ ತ್ರಿಂಶಾಂಶವು ವಿಮೆ ಅಥವಾ ಹಠಾತ್ ಧನಲಾಭದ ಮೂಲಕ ಆರ್ಥಿಕ ನೆರವು ನೀಡುತ್ತದೆ. ಸಾರ್ವಜನಿಕವಾಗಿ ವಾದವಿವಾದಗಳಿಂದ ದೂರವಿರಿ.

​ಧನು ರಾಶಿ:

​ಸಪ್ತಮ ಭಾವದಲ್ಲಿ ರವಿ ಇರಲಿದ್ದಾನೆ. ವೈವಾಹಿಕ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ರವಿಯ ಹೋರೆ ಮತ್ತು ಕುಜನ ದ್ವಾದಶಾಂಶದ ಕಾರಣದಿಂದಾಗಿ ಸಣ್ಣಪುಟ್ಟ ಅಹಂನ ಸಂಘರ್ಷಗಳು ಬರಬಹುದು. ಆದರೆ ಶುಕ್ರನ ದ್ರೇಕ್ಕಾಣ ಮತ್ತು ಗುರುವಿನ ತ್ರಿಂಶಾಂಶವು ಸಂಗಾತಿಯ ನಡುವಿನ ಪ್ರೀತಿಯನ್ನು ಕಾಪಾಡುತ್ತದೆ. ಸಾಮಾಜಿಕವಾಗಿ ನಿಮ್ಮ ಗೌರವಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ.

​ಮಕರ ರಾಶಿ:

​ಷಷ್ಠ ಭಾವದಲ್ಲಿ ರವಿ ಸಂಚರಿಸಲಿದ್ದಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಸಫಲತೆ ಕಾಣುವಿರಿ. ಶನಿಯ ನವಾಂಶವು ನಿಮ್ಮ ಸ್ವಂತ ರಾಶ್ಯಾಧಿಪತಿಯದ್ದೇ ಆಗಿರುವುದರಿಂದ ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ ಸಿಗುತ್ತದೆ. ಕುಜನ ದ್ವಾದಶಾಂಶವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ನೀಡುತ್ತದೆ. ಆದರೆ ಸಣ್ಣಪುಟ್ಟ ಸಾಲ ಅಥವಾ ಆರೋಗ್ಯದ ಏರುಪೇರುಗಳ ಬಗ್ಗೆ ಜಾಗ್ರತೆ ಇರಲಿ.

ಕುಂಭ ರಾಶಿ:

​ಪಂಚಮ ಭಾವದಲ್ಲಿ ರವಿಯ ಸಂಚಾರವಿದೆ. ಶನಿಯ ನವಾಂಶದ ಪ್ರಭಾವದಿಂದಾಗಿ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಆದಾಗ್ಯೂ, ಗುರುವಿನ ತ್ರಿಂಶಾಂಶದ ಬಲವಿರುವುದರಿಂದ ಜ್ಞಾನಾರ್ಜನೆಗೆ ಧಕ್ಕೆಯಾಗುವುದಿಲ್ಲ. ಶುಕ್ರನ ದ್ರೇಕ್ಕಾಣವು ಪ್ರೇಮ ಜೀವನದಲ್ಲಿ ಸುಧಾರಣೆಯನ್ನು ತರಲಿದೆ. ಷೇರು ಮಾರುಕಟ್ಟೆ ಅಥವಾ ಜೂಜಾಟಗಳಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುವಾಗ ಆತುರ ಬೇಡ.

​ಮೀನ ರಾಶಿ:

​ಚತುರ್ಥ ಭಾವದಲ್ಲಿ ರವಿ ಇರಲಿದ್ದಾನೆ. ರವಿಯ ಹೋರೆ ಮತ್ತು ಕುಜನ ದ್ವಾದಶಾಂಶದ ಪ್ರಭಾವದಿಂದಾಗಿ ಮನೆಯಲ್ಲಿ ಅಥವಾ ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ಅಶಾಂತಿ ಉಂಟಾಗಬಹುದು. ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಿ. ಆದರೆ ಗುರುವಿನ ತ್ರಿಂಶಾಂಶವು ನಿಮ್ಮ ರಾಶ್ಯಾಧಿಪತಿಯದ್ದೇ ಆಗಿರುವುದರಿಂದ ವಾಹನ ಅಥವಾ ಭೂಮಿ ಖರೀದಿಗೆ ಯೋಗ ಒದಗಿಬರಲಿದೆ. ಉದ್ಯೋಗದಲ್ಲಿ ಸ್ಥಿರತೆ ಇರಲಿದೆ.

ಜಾತಕದಲ್ಲಿ ರವಿಯ ಬಲ ಕಡಿಮೆ ಇರುವವರು ಪ್ರತಿದಿನ ಆದಿತ್ಯ ಹೃದಯ ಸ್ತೋತ್ರ ಪಠಿಸಿದರೆ ಮಾನಸಿಕ ಶಾಂತಿ ಮತ್ತು ಸಕಲ ಕಾರ್ಯ ಸಿದ್ಧಿಯಾಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲಂಗಾಣದಲ್ಲಿ ‘ಪೆದ್ದಿ’ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸಿಕ್ತು ಅನುಮತಿ: ಆದರೆ ಷರತ್ತು ಅನ್ವಯ

ರಾಮ್ ಚರಣ್ (Ram Charan) ನಟನೆಯ ದೊಡ್ಡ ಬಜೆಟ್ ಸಿನಿಮಾ ‘ಪೆದ್ದಿ’ ನಾಳೆ (ಜೂನ್ 4) ಬಿಡುಗಡೆ ಆಗುತ್ತಿದೆ. ಸಿನಿಮಾದ ಬಗ್ಗೆ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾ ಸಹ ಚೆನ್ನಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದ್ದು, ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಹಾಗೂ ಸಿನಿಮಾದಿಂದ ಒಳ್ಳೆಯ ಲಾಭ ಪಡೆದುಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ. ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ ಇನ್ನೂ ಹಲವೆಡೆ ಭರ್ಜರಿಯಾಗಿ ಪ್ರೀಮಿಯರ್ ಶೋ ಆಯೋಜಿಸಿದ್ದಾರೆ. ಆದರೆ ತೆಲುಗು ರಾಜ್ಯವಾದ ತೆಲಂಗಾಣದಲ್ಲಿ ‘ಪೆದ್ದಿ‘ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಮತ್ತು ಪ್ರೀಮಿಯರ್ ಶೋಗೆ ಅವಕಾಶ ಸಿಕ್ಕಿರಲಿಲ್ಲ. ‘ಪೆದ್ದಿ’ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸಾಕಷ್ಟು ವಿರೋಧವೂ ಇತ್ತು. ವಿರೋಧದ ನಡುವೆಯೂ ಇದೀಗ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಅನುಮತಿ ಧಕ್ಕಿದೆ.

ತೆಲಂಗಾಣದಲ್ಲಿ ಸಿನಿಮಾಗಳ ಪ್ರೀಮಿಯರ್ ಶೋ, ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಸಾಕಷ್ಟು ಚರ್ಚೆ ಕಳೆದ ಒಂದು ವರ್ಷದಿಂದಲೂ ನಡೆಯುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿ ಸಹ ಇದ್ದು, ನ್ಯಾಯಾಲಯ ಸಹ ಈ ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೆ ‘ಪೆದ್ದಿ’ ಚಿತ್ರತಂಡ ಸಹ ಟಿಕೆಟ್ ಬೆಲೆ ಹೆಚ್ಚಳಕ್ಕಾಗಿ ಅನುಮತಿ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಅದರ ವಿಚಾರಣೆಗೆ ಮುಂಚೆಯೇ ಅರ್ಜಿಯನ್ನು ಹಿಂಪಡೆದಿತ್ತು.

ಇದರ ಜೊತೆಗೆ ತೆಲಂಗಾಣದ ಸಿನಿಮಾ ಪ್ರದರ್ಶಕ ಹಾಗೂ ವಿತರಕರ ಸಂಘವು ರಾಜ್ಯದಲ್ಲಿ ‘ಪೆದ್ದಿ’ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೆಲ್ಲದರ ನಡುವೆಯೂ ಸಹ ಸರ್ಕಾರ ರಿಸ್ಕ್ ತೆಗೆದುಕೊಂಡು ‘ಪೆದ್ದಿ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಜೊತೆಗೆ ಪ್ರೀಮಿಯರ್ ಶೋಗಳ ಪ್ರದರ್ಶನಕ್ಕೂ ಸಹ ಅನುಮತಿ ನೀಡಿದೆ.

ಇದನ್ನೂ ಓದಿ:ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್

ಈ ಬಗ್ಗೆ ಆದೇಶವನ್ನೇ ಹೊರಡಿಸಿರುವ ಸರ್ಕಾರ, ಜೂನ್ 3 ರಂದು ಅಂದರೆ ಇಂದು ರಾತ್ರಿ 8 ಗಂಟೆಗೆ ಪ್ರೀಮಿಯರ್ ಶೋ ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ಪ್ರೀಮಿಯರ್ ಶೋಗೆ ಜಿಎಸ್​​ಟಿ ಸಹಿತ ಗರಿಷ್ಠ 600 ರೂಪಾಯಿ ಟಿಕೆಟ್ ನಿಗದಿ ಪಡಿಸಬಹುದು ಎಂದಿದೆ. ಅದಾದ ಬಳಿಕ ಸಿನಿಮಾ ಬಿಡುಗಡೆ ಆದ ದಿನದಿಂದ ಮುಂದಿನ 10 ದಿನಗಳ ವರೆಗೆ ಸಿಂಗಲ್ ಸ್ಕ್ರೀನ್​​ಗಳಲ್ಲಿ 100 ರೂಪಾಯಿ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ 125 ರೂಪಾಯಿ ಟಿಕೆಟ್ ದರವನ್ನು ಹೆಚ್ಚಿಸಲು ಹಾಗೂ ಪ್ರತಿದಿನ ಐದು ಶೋಗಳನ್ನು ಪ್ರದರ್ಶಿಸಲು ಸಹ ಅನುಮತಿ ನೀಡಲಾಗಿದೆ.

ಆದರೆ ಇವುಗಳ ಜೊತೆಗೆ ಷರತ್ತೊಂದನ್ನು ಸರ್ಕಾರವು ವಿಧಿಸಿದ್ದು, ಈ ವಿಶೇಷ ಶೋಗಳಿಂದ ಗಳಿಸುವ ಲಾಭದ 20% ಹಣವನ್ನು ತೆಲುಗು ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ನೀಡಬೇಕು ಎಂದು ಸಹ ಹೇಳಿದೆ. ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಮುಂಚೆ ಮಾದಕ ವ್ಯಸನ ವಿರೋಧಿ ಜಾಗೃತಿ ಜಾಹೀರಾತುಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸೂಚಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಚಿತ್ರಕ್ಕೆ ಕಡಿಮೆ ಸಂಭಾವನೆ ಪಡೆದಿದ್ದ ರಣವೀರ್ ಸಿಂಗ್; ಆದ್ರೂ ಹರಿದುಬಂತು ಕೋಟಿ ಕೋಟಿ ಹಣ! – Kannada News

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರವೂ ಒಂದು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ. ಆದರೆ, ಈ ಚಿತ್ರಕ್ಕಾಗಿ ನಟ ರಣವೀರ್ ಸಿಂಗ್ ಅವರು ಆರಂಭದಲ್ಲಿ ತೀರಾ ಕಡಿಮೆ ಸಂಭಾವನೆಯನ್ನು ಪಡೆದಿದ್ದರು ಎಂಬ ಆಸಕ್ತಿದಾಯಕ ವಿಷಯವನ್ನು ಚಿತ್ರದ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಬಿಚ್ಚಿಟ್ಟಿದ್ದಾರೆ.

ಅತಿ ದೊಡ್ಡ ಬಜೆಟ್‌ನ ಈ ಚಿತ್ರದ ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಮತ್ತು ನಷ್ಟದ ಅಪಾಯವನ್ನು ಹಂಚಿಕೊಳ್ಳಲು ಚಿತ್ರತಂಡ ಒಂದು ವಿಶೇಷ ಬಿಸಿನೆಸ್ ಪ್ಲಾನ್ ಮಾಡಿತ್ತಂತೆ. ಜಿಯೋ ಸ್ಟುಡಿಯೋಸ್ ಮುಖ್ಯಸ್ಥೆ ಹಾಗೂ ಚಿತ್ರದ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಈ ಕುರಿತು ಮಾತನಾಡುತ್ತಾ, ‘ಧುರಂಧರ್ ಚಿತ್ರಕ್ಕಾಗಿ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಇಬ್ಬರೂ ಆರಂಭದಲ್ಲಿ ತೀರಾ ಕಡಿಮೆ ಮುಂಗಡ ಸಂಭಾವನೆಯನ್ನು ಪಡೆದುಕೊಳ್ಳಲು ಒಪ್ಪಿಕೊಂಡಿದ್ದರು. ಬದಲಿಗೆ, ಸಿನಿಮಾ ರಿಲೀಸ್ ಆದ ಬಳಿಕ ಬರುವ ಲಾಭದಲ್ಲಿ ಪಾಲು ಪಡೆಯುವ ‘ಬ್ಯಾಕೆಂಡ್ ಡೀಲ್’ ಮಾಡಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

‘ಈ ವಿಶೇಷ ಒಪ್ಪಂದದಿಂದಾಗಿ ರಣವೀರ್ ಸಿಂಗ್ ಅವರಿಗೆ ನಂತರ ಭರ್ಜರಿ ಲಾಭ ಸಿಕ್ಕಿತು. ಸಿನಿಮಾ ಸೂಪರ್ ಹಿಟ್ ಆದ ಕಾರಣ ನಮ್ಮೊಂದಿಗೆ ಅವರು ಕೂಡ ಕೋಟಿ ಕೋಟಿ ಹಣವನ್ನು ಮನೆಗೆ ಕೊಂಡೊಯ್ದರು. ಚಿತ್ರರಂಗದಲ್ಲಿ ಬಜೆಟ್ ನಷ್ಟದ ಅಪಾಯ ಮತ್ತು ಯಶಸ್ಸಿನ ಲಾಭ ಎರಡನ್ನೂ ಸಮನಾಗಿ ಹಂಚಿಕೊಳ್ಳಲು ಇಂತಹ ಒಪ್ಪಂದಗಳು ಸಹಕಾರಿಯಾಗುತ್ತವೆ’ ಎಂದು ಅವರು ವಿವರಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಸೃಷ್ಟಿಸಿದ ದಾಖಲೆಯ ಗಳಿಕೆ ಎಷ್ಟು?

ಕಡಿಮೆ ಸಂಭಾವನೆ ಪಡೆದಿದ್ದರೂ ರಣವೀರ್ ಸಿಂಗ್ ಅವರಿಗೆ ಈ ಚಿತ್ರದಿಂದ ಭಾರಿ ಮೊತ್ತದ ಲಾಭ ಸಿಗಲು ಕಾರಣ ಸಿನಿಮಾದ ಬೃಹತ್ ಕಲೆಕ್ಷನ್. ಹೌದು, ‘ಧುರಂಧರ್’ ಮತ್ತು ಅದರ ಮುಂದುವರಿದ ಭಾಗವಾದ ‘ಧುರಂಧರ್: ರಿವೆಂಜ್’ ಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿವೆ.

ಈ ಫ್ರಾಂಚೈಸಿಯ ಎರಡೂ ಭಾಗಗಳು ಸೇರಿ ವಿಶ್ವಾದ್ಯಂತ ಬರೋಬ್ಬರಿ 3,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕೊಳ್ಳೆಹೊಡೆದಿವೆ. ಈ ಅಪಾರ ಗಳಿಕೆಯಿಂದಾಗಿ ‘ಧುರಂಧರ್’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಮತ್ತು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕಮರ್ಷಿಯಲ್ ಸಿನಿಮಾಗಳ ಸಾಲಿಗೆ ಸೇರಿದೆ.

ಇದನ್ನೂ ಓದಿ: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್; ‘ನನಗೂ ಹೀಗೇ ಆಗಿತ್ತು’ ಎಂದ ನಟಿ

ಆರಂಭದಲ್ಲಿ ಒಂದೇ ಸಿನಿಮಾವಾಗಿ ತೆರೆಗೆ ಬರಬೇಕಿದ್ದ ಈ ಚಿತ್ರ, ನಂತರ ಕಥೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ ಎರಡು ಭಾಗಗಳಾಗಿ ಬಿಡುಗಡೆಯಾಯಿತು. ಅಂತಿಮವಾಗಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದರಿಂದ ರಣವೀರ್ ಸಿಂಗ್ ಸೇರಿದಂತೆ ಇಡೀ ಚಿತ್ರತಂಡ ಭರ್ಜರಿ ಲಾಭ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಂಗಾರು ಆಗಮನಕ್ಕೆ ದಿನಗಣನೆ: ಜೂನ್ 4 ರಂದು ಕೇರಳ ಪ್ರವೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ – Kannada News

ನವದೆಹಲಿ, ಜೂನ್ 03: ದೇಶಾದ್ಯಂತ ಮಳೆ(Rain)ಯ ಕಣ್ಣಾ ಮುಚ್ಚಾಲೆ ಶುರುವಾಗಿದೆ. ಕೆಲವೆಡೆ ಮಳೆ ವಿಪರೀತವಾಗಿದ್ದರೆ ಇನ್ನೂ ಕೆಲವೆಡೆ ಒಮ್ಮೆಯೂ ಮಳೆಯೇ ಆಗಿಲ್ಲ.ಬಿಸಿಲ ಬೇಗೆಯಿಂದ ಕಂಗಾಲಾಗಿರುವ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ತಂಪು ಸುದ್ದಿ ನೀಡಿದೆ. ನೈಋತ್ಯ  ಮುಂಗಾರು ಜೂನ್ 4 ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಾರು ಆರಂಭದ ಬೆನ್ನಲ್ಲೇ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂದಿನ 6 ರಿಂದ 7 ದಿನಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಕೇರಳ ತಲುಪಬೇಕಿದ್ದ ಮುಂಗಾರು ಈ ಬಾರಿ ಸಣ್ಣ ಬದಲಾವಣೆಗಳನ್ನು ಕಂಡಿದೆ. ಹವಾಮಾನ ಇಲಾಖೆಯು ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತದೆ.

ಸದ್ಯ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ದಟ್ಟವಾದ ಮೋಡಗಳು ಕವಿದಿದ್ದರೂ, ಅರಬ್ಬಿ ಸಮುದ್ರದ ಮೇಲೆ ಬೀಸಬೇಕಾದ ಪಶ್ಚಿಮ ಮಾರುತಗಳ (Westerly winds) ವೇಗ ಇನ್ನು ಅಗತ್ಯ ಮಟ್ಟವನ್ನು ತಲುಪಿಲ್ಲ. ಈ ತಾಂತ್ರಿಕ ಕಾರಣಗಳಿಂದಾಗಿ ಆರಂಭದ ದಿನಾಂಕವನ್ನು ಮೇ 26 ರಿಂದ ಜೂನ್ 4 ಕ್ಕೆ ಪರಿಷ್ಕರಿಸಲಾಗಿದ್ದರೂ, ಜೂನ್ 8 ರೊಳಗಿನ ಆಗಮನವನ್ನು ಹವಾಮಾನ ತಜ್ಞರು ‘ಸಾಮಾನ್ಯ ಅವಧಿ’ ಎಂದೇ ಪರಿಗಣಿಸುತ್ತಾರೆ.

ಪೋಸ್ಟ್

ಮುಂಗಾರು ಪ್ರವೇಶದ ಪ್ರಭಾವದಿಂದಾಗಿ ಕೇರಳದ ಹಲವು ಜಿಲ್ಲೆಗಳಿಗೆ ಈಗಾಗಲೇ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಜೂನ್ 7 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬಹುದು.

ಮತ್ತಷ್ಟು ಓದಿ:

ಜೂನ್ 4 ರಂದು ಕೇರಳ ಪ್ರವೇಶಿಸಲಿರುವ ಈ ಮಾರುತಗಳು ಕ್ರಮೇಣ ದೇಶದ ಇತರೆ ಭಾಗಗಳಿಗೆ ವ್ಯಾಪಿಸಲಿದ್ದು, ಜುಲೈ ಮೊದಲ ವಾರದ ವೇಳೆಗೆ ಇಡೀ ಭಾರತವನ್ನು ಆವರಿಸಲಿವೆ. ಇದರಿಂದಾಗಿ ಪ್ರಸ್ತುತ 45 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ಹೊಂದಿರುವ ಉತ್ತರ ಭಾರತದ ರಾಜ್ಯಗಳಿಗೂ ಶೀಘ್ರದಲ್ಲೇ ಬಿಸಿಲ ಬೇಗೆಯಿಂದ ಮುಕ್ತಿ ಸಿಗಲಿದೆ.

ಹವಾಮಾನದ ಬದಲಾವಣೆಗಳ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಸಾರ್ವಜನಿಕರು ಸ್ಥಳೀಯ ಹವಾಮಾನ ವರದಿಗಳನ್ನು ಗಮನಿಸಿ ಮುಂಜಾಗ್ರತೆ ವಹಿಸುವಂತೆ ಐಎಂಡಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version