IND vs PAK: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿದ ಸೂರ್ಯ – Kannada News | T20 World Cup 2026: India vs Pakistan Abhishek Sharma, Kuldeep Yadav Confirmed for Tomorrow’s Crucial Match

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬಹುನಿರೀಕ್ಷಿತ ಪಂದ್ಯ ನಾಳೆ, ಅಂದರೆ ಫೆಬ್ರವರಿ 15, 2026 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಕದನದಲ್ಲಿ ಗೆಲ್ಲುವ ತಂಡವು ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯುತ್ತದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಸಾಕಷ್ಟು ತಯಾರಿ ನಡೆಸುತ್ತಿವೆ. ಆದರೆ ಟೀಂ ಇಂಡಿಯಾಗೆ ಆಟಗಾರರ ಅಲಭ್ಯತೆ ದೊಡ್ಡ ಚಿಂತೆಯಾಗಿತ್ತು. ಆದರೀಗ ಅದೆಲ್ಲ ನಿವಾರಣೆಯಾದಂತೆ ಕಾಣುತ್ತಿದೆ. ಪಂದ್ಯಕ್ಕೂ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕ್ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ವಿವರಿಸಿದರು.

ಪಾಕ್ ವಿರುದ್ಧ ಆಡಲಿದ್ದಾರೆ ಅಭಿಷೇಕ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಬಳಿ, ನಾಳೆಯ ಪಂದ್ಯದಲ್ಲಿ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಆಡುತ್ತಾರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೂರ್ಯ, ‘ಅಭಿಷೇಕ್ ಶರ್ಮಾ ಗುಣಮುಖರಾಗಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದರು.

ವಾಸ್ತವವಾಗಿ ಅಮೆರಿಕ ವಿರುದ್ಧದ ಪಂದ್ಯದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅಭಿಷೇಕ್, ಅಂದಿನಿಂದ ತಂಡದಿಂದ ಹೊರಗುಳಿದಿದ್ದರು. ಇದೀಗ ಅವರು ಗುಣಮುಖರಾಗಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಅಭಿಷೇಕ್ ಆಗಮನ ತಂಡಕ್ಕೆ ಆನೆಬಲ ತಂದಿದೆ. ಏಕೆಂದರೆ ಅಭಿಷೇಕ್ ತಮ್ಮ ಹೊಡಿಬಡಿ ಆಟದ ಮೂಲಕ ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಾತ್ರವಲ್ಲದೆ ಇವರ ಜೊತೆಗಾರ ಇಶಾನ್ ಕಿಶನ್ ಕೂಡ ಅಮೋಘ ಫಾರ್ಮ್​ನಲ್ಲಿದ್ದು, ಇವರಿಬ್ಬರು ಒಟ್ಟಿಗೆ ಸೇರಿ ಪಾಕ್ ಬೌಲರ್​ಗಳ ಬೆಂಡೆತ್ತುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಕುಲ್ದೀಪ್ ಆಡುವುದು ಖಚಿತ

ಅಭಿಷೇಕ್ ಜೊತೆಗೆ ಪಾಕಿಸ್ತಾನದ ವಿರುದ್ಧ ಕುಲ್ದೀಪ್ ಯಾದವ್ ಕೂಡ ಆಡಲಿದ್ದಾರೆ ಎಂಬುದನ್ನು ಸೂರ್ಯ ಖಚಿತಪಡಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಕುಲ್ದೀಪ್ ಪ್ರದರ್ಶನ ಅದ್ಭುತವಾಗಿದ್ದು, ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ. ಮಾತ್ರವಲ್ಲದೆ ಕೊಲಂಬೊ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣದಿಂದಾಗಿ ಕುಲ್ದೀಪ್ ಯಾದವ್ ಆಡುವುದು ಖಚಿತವಾಗಿದೆ. ಹಾಗೆಯೇ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆಯ ಬಗ್ಗೆ ಸೂರ್ಯ ಸುಳಿವು ನೀಡಿದ್ದು, ‘ಸುಂದರ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಮತ್ತು ಆಡಲು ಸಿದ್ಧರಾಗಿದ್ದಾರೆ’ ಎಂದರು.

IND vs PAK: ವಿಮಾನ, ಹೋಟೆಲ್‌ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ

ಹ್ಯಾಂಡ್‌ಶೇಕ್ ಬಗ್ಗೆ ನೋಡೋಣ

ಇದೇ ವೇಳೆ ಪಾಕಿಸ್ತಾನದ ಆಟಗಾರರ ಜೊತೆಗೆ ಕೈಕುಲುಕುತ್ತೀರಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೂರ್ಯ, ‘ಟಾಸ್ ಸಮಯದಲ್ಲಿ ಹ್ಯಾಂಡ್‌ಶೇಕ್ ಬಗ್ಗೆ ನೋಡೋಣ, ಅದಕ್ಕೆ ಇನ್ನು ಸಮಯವಿದೆ. 24 ಗಂಟೆಗಳ ಕಾಲ ಕಾಯಿರಿ.’ ಎಂದಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:20 pm, Sat, 14 February 26

Source link

ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣ: ತೆರೆವಿಗೆ ಯತ್ನಿಸಿದ್ದಕ್ಕೆ ತಹಶೀಲ್ದಾರ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಹೈಡ್ರಾಮಾ – Kannada News | Chikkaballapur: Man Attempts Suicide Over Alleged Illegal House Evacuation, Leaves Death Note Against Tahsildar

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ನಿರ್ಮಾಣ ಹಂತದ ಮನೆ, ತಹಶೀಲ್ದಾರ್

ಚಿಕ್ಕಬಳ್ಳಾಪುರ, ಫೆಬ್ರವರಿ 14: ಆತನಿಗೆ ಹೆದ್ದಾರಿ ಬದಿಯೇ ಸ್ವಂತ ಜಮೀನಿದೆ. ಸ್ವಂತ ಜಮೀನಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ (land dispute) ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಇದರಿಂದ ಅಲ್ಲಿಯ ತಹಶೀಲ್ದಾರ್ ನಿರ್ಮಾಣ ಹಂತದ ಮನೆಯನ್ನು ತೆರೆವುಗೊಳಿಸುವುದಕ್ಕೆ ಮುಂದಾಗಿದ್ದೆ ತಡ, ಹೆದುರಿಸಲು ತಹಶೀಲ್ದಾರ್ ವಿರುದ್ದ ಡೆತ್‍ನೋಟ್ ಬರೆದಿಟ್ಟು, ಅಂಟಿಬಯೋಟಿಕ್ಸ್ ಮಾತ್ರೆಗಳನ್ನು ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿ (suicide attempt) ಹೈಡ್ರಾಮಾ ನಡೆಸಿರುವ ಘಟನೆ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಮಂಚೇನಹಳ್ಳಿ ತಾಲ್ಲೂಕಿನ ಗಿಡಗಾನಹಳ್ಳಿ ನಿವಾಸಿ ಜಿ.ರಾಧಾಕೃಷ್ಣ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ರಾಧಾಕೃಷ್ಣ ಹಾಗೂ ಇವರ ಪತ್ನಿ ಗ್ರಾಮಪಂಚಾಯ್ತಿಯಲ್ಲಿ ನೌಕರರಾಗಿದ್ದಾರೆ. ಇನ್ನು ಗಿಡಗಾನಹಳ್ಳಿ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ರಾಧಾಕೃಷ್ಣಗೆ ಸ್ವಂತ ಜಮೀನಿದೆ. ಸ್ವಂತ ಜಮೀನಿನ ಪಕ್ಕದಲ್ಲಿ ಸರ್ಕಾರಿ ಜಮೀನಿದೆ. ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಮಂಚೇನಹಳ್ಳಿ ತಹಶೀಲ್ದಾರ್ ಪೂರ್ಣಿಮಾ ನಿರ್ಮಾಣ ಹಂತದ ಮನೆಯನ್ನು ತೆರೆವುಗೊಳಿಸಲು ಮುಂದಾಗಿದ್ದರು. ಇದರಿಂದ ಕೆರಳಿದ ರಾಧಾಕೃಷ್ಣ ತಹಶೀಲ್ದಾರ್‍ರನ್ನು ಬೆದರಿಸಲು ತಹಶೀಲ್ದಾರ್ ವಿರುದ್ದವೇ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ

ಇನ್ನು ಗಿಡಗಾನಹಳ್ಳಿ ಹಾಗೂ ಬುದ್ದಿವಂತನಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ರಾಜ್ಯಸರ್ಕಾರ, ಸರ್ಕಾರಿ ಕಟ್ಟಡಗಳ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನನ್ನು ಕಾಯ್ದಿರಿಸಿದೆ. ಇದೇ ಜಮೀನಿನಲ್ಲಿ ರಾಧಾಕೃಷ್ಣ ಹಾಗೂ ಅವರ ಪತ್ನಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಸ್ಥಳೀಯ ಗೌಡಗೆರೆ ಗ್ರಾಮಪಂಚಾಯ್ತಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಂದಾಯ ಜಮೀನಿಗೆ ಖಾತೆ ಮಾಡಿ ಕಟ್ಟಡ ಪರವಾನಿಗೆ ನೀಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತನಿಖೆಗೆ ಸೂಚಿಸಿದ್ದಾರೆ. ಇದರಿಂದ ನಮ್ಮನ್ನು ಎದುರಿಸಲು ರಾಧಾಕೃಷ್ಣ ಮುಂದಾಗಿದ್ದಾರೆಂದು ಮಂಚೇನಹಳ್ಳಿ ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕಚೇರಿ ಬದಲು ಡಾಬಾದಲ್ಲಿ ಕೆಲಸ, ಎಣ್ಣೆ ಪಾರ್ಟಿ ಮಾಡುತ್ತಲೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್

ಆರ್ಥಿಕವಾಗಿ, ಸಾಮಾಜಿಕವಾಗಿ ಸುಸ್ಥಿತಿಯಲ್ಲಿರುವ ರಾಧಾಕೃಷ್ಣ ಕುಟುಂಬ ಸ್ವಂತ ಜಮೀನನ್ನು ಹೊರತುಪಡಿಸಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಲು ಯತ್ನಿಸಿದ್ದೆ ತಪ್ಪು. ಇಂತಹದರಲ್ಲಿ ಆತ್ಮಹತ್ಯೆ ಹೈಡ್ರಾಮಾ ಮಾಡಿರುವುದು ಇನ್ನು ತಪ್ಪು. ಏನೋ ಮಾಡಲು ಹೋಗಿ, ಏನೋ ಆದರೆ ಹೆಂಡತಿ, ಮಕ್ಕಳು ಬೀದಿಗೆ ಬೀಳಬೇಕಾಗುತ್ತೆ ಎನ್ನುತ್ತಾರೆ ಗ್ರಾಮಸ್ಥರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇನ್ನೂ ಮದುವೆ ಆಗದಿರಲು ಆ ಸಮಸ್ಯೆ ಕಾರಣ: ನಟಿ ಚಿತ್ರ ರೇಖಾ – Kannada News | Rekha Vedavyas talks about her personal life and marriage

ಇಸವಿ 2000 ರಲ್ಲಿ ಕನ್ನಡ ಚಿತ್ರರಂಗಕ್ಕೆ (Sandalwood) ಇಬ್ಬರು ರೇಖಾರ ಪರಿಚಯವಾಯ್ತು. ಒಬ್ಬರು ‘ಸ್ಪರ್ಷ’ ರೇಖಾ ಎನಿಸಿಕೊಂಡರೆ ಮತ್ತೊಬ್ಬರು ‘ಚಿತ್ರ’ ರೇಖಾ. ‘ಸ್ಪರ್ಷ’ ರೇಖಾ, ಸುದೀಪ್ ಮತ್ತು ದರ್ಶನ್ ಇಬ್ಬರೂ ನಾಯಕನಾಗಿ ನಟಿಸಿದ ಸಿನಿಮಾನಲ್ಲಿ ನಾಯಕಿ ಆಗಿ ನಟಿಸಿದ್ದರು. 2004 ರ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಸ್ಪರ್ಷ ರೇಖಾ, 2015 ರಿಂದ ಮತ್ತೆ ಸಕ್ರಿಯರಾಗಿದ್ದಾರೆ. ಬಿಗ್​​ಬಾಸ್​​ನಲ್ಲಿಯೂ ಇವರು ಭಾಗವಹಿಸಿದ್ದರು. ಆದರೆ ಚಿತ್ರ ರೇಖಾ ಅವರದ್ದು ಬೇರೆ ಕತೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದ ಕನ್ನಡತಿ ‘ಚಿತ್ರ’ ರೇಖಾ. 2014ರ ವರೆಗೆ ಸಕ್ರಿಯರಾಗಿದ್ದರು. ಆ ಬಳಿಕ ಹಠಾತ್ತನೆ ಚಿತ್ರರಂಗದಿಂದ ದೂರಾದರು. ರೇಖಾ ಮದುವೆ ಸಹ ಆಗಿಲ್ಲ, ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ರೇಖಾ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತೆರೆಯ ಮೇಲೆ ಹಾಡುತ್ತಾ, ಕುಣಿಯುತ್ತಾ ಖುಷಿಯಿಂದ ಕಾಣಿಸಿಕೊಳ್ಳುವ ನಟಿಯರ ಖಾಸಗಿ ಜೀವನದಲ್ಲಿ ಎಷ್ಟೆಲ್ಲ ನೋವುಗಳಿರುತ್ತವೆ ಎಂಬುದಕ್ಕೆ ರೇಖಾ ಅವರ ಜೀವನ ಉದಾಹರಣೆ. ಬೆಂಗಳೂರಿನವರಾದ ರೇಖಾ ವೇದವ್ಯಾಸ, ಚಿತ್ರರಂಗದಲ್ಲಿ ಸುಮಾರು ಒಂದು ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದರು. ಭಾರಿ ಬೇಡಿಕೆಯ ನಟಿ ಎನಿಸಿಕೊಂಡರು. ಆದರೆ ಅವರ ಖಾಸಗಿ ಜೀವನದಲ್ಲಿ ಉಂಟಾದ ಸಮಸ್ಯೆ, ನೋವುಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದವು.

ಕನ್ನಡದ ‘ಹುಚ್ಚ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ರೇಖಾ, ಬಳಿಕ ‘ಚಿತ್ರ’ ಸಿನಿಮಾನಲ್ಲಿ ನಟಿಸಿ ಚಿತ್ರ ರೇಖಾ ಎನಿಸಿಕೊಂಡರು. ತೆಲುಗಿನ ‘ಆನಂದಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಖಾ, ಅಲ್ಲಿಯೂ ಸಹ ಮೊದಲ ಸಿನಿಮಾನಲ್ಲಿಯೇ ಭಾರಿ ಯಶಸ್ಸು ಗಳಿಸಿದರು. ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದ ಈ ಸುಂದರಿ, 2012ರ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದರು. ಈ ಹಠಾತ್ ಕಣ್ಮರೆಯ ಹಿಂದೆ ದೊಡ್ಡದೊಂದು ನೋವಿನ ಕಥೆಯೇ ಇತ್ತು.

ಇದನ್ನೂ ಓದಿ:ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಇತ್ತೀಚಿನ ಸಂದರ್ಶನವೊಂದರಲ್ಲಿ ಭಾವುಕರಾಗಿ ಮಾತನಾಡಿರುವ ರೇಖಾ, ತಾನು ಸಿನಿಮಾದಿಂದ ದೂರ ಉಳಿಯಲು ಮುಖ್ಯ ಕಾರಣ ‘ಆರೋಗ್ಯದ ಸಮಸ್ಯೆ’ ಎಂದು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಏರುಪೇರಿನಿಂದ ಬಳಲುತ್ತಿದ್ದರಂತೆ. ಇದರಿಂದಾಗಿ ಅವರು ದೈಹಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು. ಇದೇ ಕಾರಣಕ್ಕೆ ಅವರು ಬಂದಂತಹ ಅನೇಕ ಸಿನಿಮಾ ಅವಕಾಶಗಳನ್ನು ಕೈಬಿಡಬೇಕಾಯಿತಂತೆ.

ರೇಖಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, “ಹಿಂದೆ ನನಗೆ ಮದುವೆಯ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ನಂತರ ಮನಸ್ಸು ಬದಲಾಗಿ ಮದುವೆಯಾಗೋಣ ಎಂದು ನಿರ್ಧರಿಸಿದೆ. ಆದರೆ ನನ್ನ ಇಂದಿನ ಪರಿಸ್ಥಿತಿ ಮತ್ತು ಆರೋಗ್ಯದ ಸ್ಥಿತಿಯನ್ನು ನೋಡಿ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ” ಎಂದು ಅತೀವ ನೋವಿನಿಂದ ಹೇಳಿಕೊಂಡಿದ್ದಾರೆ.

ಅಲ್ಲದೆ, “ಅವಸರಪಟ್ಟು ಮದುವೆಯಾಗಿ ವಿಚ್ಛೇದನದವರೆಗೆ ಹೋಗುವ ಸಂಬಂಧಗಳಿಗಿಂತ, ಸ್ವಲ್ಪ ತಡವಾದರೂ ಪರವಾಗಿಲ್ಲ ಒಬ್ಬ ಸರಿಯಾದ ಸಂಗಾತಿ ಸಿಗಲಿ ಎಂಬುದು ನನ್ನ ಅಭಿಪ್ರಾಯ. ಇಂದು ಚಿತ್ರರಂಗ ಸಂಪೂರ್ಣ ಬದಲಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ನಾನು ಇಂದಿಗೂ ಧೈರ್ಯವಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ದೇವರ ಕೃಪೆಯೇ ಕಾರಣ” ಎಂದು ಅವರು ಹೇಳಿದ್ದಾರೆ.

ತಾವು ಆರೋಗ್ಯ ಸಮಸ್ಯೆಯಿಂದ ಬಳಲಿರುವ ಬಗ್ಗೆ ಹೇಳಿಕೊಂಡಿರುವ ರೇಖಾ, ತಮಗೆ ಇದ್ದ ಸಮಸ್ಯೆ ಏನು ಎಂಬುದನ್ನು ಹೇಳಿಲ್ಲ. ಸದ್ಯ ರೇಖಾ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಹಾವು: ಬೆಚ್ಚಿಬಿದ್ದ ಜನ, ಮುಂದೇನಾಯ್ತು ನೋಡಿ – Kannada News | Mumbai Solapur Vande Bharat Train: Culprit Who Unleashed Snake in Toilet Arrested

ಮುಂಬೈ, ಫೆ.14: ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವನ್ನು ಬಿಟ್ಟು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ (RPF) ಕೊನೆಗೂ ಬಂಧಿಸಿದೆ. ಸುಮಾರು 50 ದಿನಗಳ ಸುದೀರ್ಘ ಹುಡುಕಾಟದ ನಂತರ ಆರೋಪಿಯನ್ನು ಮುಂಬ್ರಾದಲ್ಲಿ ಸೆರೆಹಿಡಿಯಲಾಗಿದೆ.ಈ ಘಟನೆಯು ಡಿಸೆಂಬರ್ 27, 2025 ರಂದು ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22225) ನಲ್ಲಿ ನಡೆದಿತ್ತು. ರೈಲಿನ ಕೋಚ್ C-16 ರ ಶೌಚಾಲಯದಲ್ಲಿ ಸುಮಾರು 2.5 ಅಡಿ ಉದ್ದದ ಇಂಡಿಯನ್ ರ್ಯಾಟ್ ಸ್ನೇಕ್ (Rat Snake) ಪತ್ತೆಯಾಗಿತ್ತು. ಇದರಿಂದ ಪ್ರಯಾಣಿಕರು ಭೀತಿಗೊಳಗಾಗಿದ್ದರು.

ಬಂಧಿತನನ್ನು ನಾಸಿಕ್ ಜಿಲ್ಲೆಯ ನಿವಾಸಿ ಜಗನ್ ಅರ್ಜುನ್ ಭಾಲೆ (37) ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಈತ ಠಾಣೆ ರೈಲ್ವೆ ನಿಲ್ದಾಣದಲ್ಲಿ ಚೀಲದೊಂದಿಗೆ ರೈಲು ಹತ್ತಿ ಶೌಚಾಲಯದ ಒಳಗೆ ಹಾವನ್ನು ಬಿಟ್ಟು ಕೆಳಗಿಳಿಯುವ ದೃಶ್ಯ ಸೆರೆಯಾಗಿದೆ. ವಿಚಾರಣೆ ವೇಳೆ ಆರೋಪಿ ತಾನು ಕೇವಲ “ಗೊಂದಲ ಮತ್ತು ಜನರಲ್ಲಿ ಆತಂಕ” ಸೃಷ್ಟಿಸಲು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವನ್ನು ಬಿಟ್ಟು ಪ್ರಯಾಣಿಕರಲ್ಲಿ ಭೀತಿ ಸೃಷ್ಟಿಸಿದ್ದ ಆರೋಪಿ ಜಗನ್ ಅರ್ಜುನ್ ಭಾಲೆಗೆ ಕಲ್ಯಾಣ್ ರೈಲ್ವೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಬಾಂಬ್​​ ಬೆದರಿಕೆ: ವಿಮಾನದ ಶೌಚಾಲಯದಲ್ಲಿ ಸಿಕ್ತು ಅಚ್ಚರಿಯ ಪತ್ರ

ಇಲ್ಲಿದೆ ನೋಡಿ ವಿಡಿಯೋ:

ರೈಲ್ವೆ ರಕ್ಷಣಾ ಪಡೆ (RPF) ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತನ ವಿರುದ್ಧ ರೈಲ್ವೆ ಕಾಯ್ದೆಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 145(ರೈಲಿನಲ್ಲಿ ಅಸಭ್ಯ ವರ್ತನೆ ಮತ್ತು ಜನರಿಗೆ ತೊಂದರೆ ನೀಡುವುದು) ಸೆಕ್ಷನ್ 147 (ರೈಲ್ವೆ ಆಸ್ತಿಯೊಳಗೆ ಅತಿಕ್ರಮ ಪ್ರವೇಶ)ಸೆಕ್ಷನ್ 153 (ರೈಲು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವುದು) ಸಿಸಿಟಿವಿ ಆಧಾರದ ಮೇಲೆ ಬಂಧಿತನಾಗಿರುವ ಈತ, ಕೇವಲ ಕುಚೇಷ್ಟೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಈಗ ಜೈಲಿಗಟ್ಟಲಾಗಿದ್ದು, ರೈಲ್ವೆ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:51 pm, Sat, 14 February 26

Source link

ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರದ ಸಾಧನೆಯ ಸಮಾವೇಶ; ಬಸವರಾಜ ಬೊಮ್ಮಾಯಿ ವ್ಯಂಗ್ಯ – Kannada News | Congress Celebration Corruption Samavesha in Haveri BJP Leader Basavaraj Bommai lashes out

ಬೆಂಗಳೂರು, ಫೆಬ್ರವರಿ 14: ಕರ್ನಾಟಕ ಸರ್ಕಾರ 1,000 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ (Congress) ಸಾಧನಾ ಸಮಾವೇಶ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಇಂದು ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಶೂನ್ಯ ಸಾಧನೆಯ ಸಮಾವೇಶ ಮಾಡಿದೆ. ಈ ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಜನರು ಬರಲು ಸಾಧ್ಯವಿಲ್ಲ ಎಂದು ಅರಿತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಇರುವ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡಿದ್ದಾರೆ” ಎಂದು ಟೀಕಿಸಿದ್ದಾರೆ.

“ನಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ನಾವು ಅಕ್ರಮ ಇದ್ದದ್ದನ್ನು ಸಕ್ರಮ ಮಾಡಿದ್ದೇವೆ. ಅದರ ಮುಖಾಂತರ ಸಾಲ ಸಿಗುವ ವ್ಯವಸ್ಥೆ ಮಾಡಿದ್ದೇವೆ. ಈಗ ಜನರ ಆಸ್ತಿಯನ್ನು ಅವರೇ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿ ಕಾಂಗ್ರೆಸ್ ಸರ್ಕಾರ ಬರಿದಾದ ಖಜಾನೆ ತುಂಬಲು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಾ ಶುಲ್ಕವನ್ನು ಬಡವರ ತಲೆ ಮೇಲೆ ಹೇರಿದೆ. ಒಬ್ಬ ಬಡವ 3-4 ಲಕ್ಷ ಕಟ್ಟುವ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆ ಮಾಡಲು ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇದು ಭ್ರಷ್ಟಾಚಾರದ ಸಾಧನೆಯ ಸಮಾವೇಶ. ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ಈ ಸರ್ಕಾರ ಕೊಡುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

“ಇದೇ ಜಾಗದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಯಾವುದೇ ಮನೆಗಳನ್ನು ಕಟ್ಟುವ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿಲ್ಲ. ಒಂದು ಸಾವಿರ ದಿವಸದ ವ್ಯರ್ಥ ಆಡಳಿತದ ಶೂನ್ಯ ಸಾಧನೆಯ ಈ ಸಮಾವೇಶವನ್ನು ಬಡವರು ಹಿಡಿ ಶಾಪ ಹಾಕುತ್ತಿರುವುದು ಸತ್ಯ. ಇದು ಅತ್ಯಂತ ಖಂಡನೀಯ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ವಿಮಾನ, ಹೋಟೆಲ್‌ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ – Kannada News | T20 World Cup Hype: India Pak Clash Drives Sky High Ad Rates, Flights and Hotel Costs

ಫೆಬ್ರವರಿ 15 ರಂದು ನಡೆಯುಲಿರುವ ಟಿ20 ವಿಶ್ವಕಪ್‌ (T20 World Cup) ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಈ ದಿನದಂದು ಭಾರತ ಮತ್ತು ಪಾಕಿಸ್ತಾನ (India vs Pakist) ನಡುವೆ ರೋಮಾಂಚಕಾರಿ ಪಂದ್ಯ ನಡೆಯಲಿದೆ. ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಎರಡೂ ದೇಶಗಳ ಕ್ರಿಕೆಟ್​ ಅಭಿಮಾನಿಗಳು ಇಲ್ಲಿಗೆ ಆಗಮಿಸಿದ್ದಾರೆ. ಇವರ ಜೊತೆಗೆ ಶ್ರೀಲಂಕಾದ ನಾಗರಿಕರು ಸಹ ಈ ಪಂದ್ಯವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಕೊಲಂಬೊಗೆ ತೆರಳುತ್ತಿರುವ ವಿಮಾನಗಳ ಟಿಕೆಟ್​ ಬೆಲೆ ದುಪ್ಪಟ್ಟಾಗಿದೆ. ಇದರ ಜೊತೆಗೆ ಕೊಲಂಬೊದಲ್ಲಿರುವ ಹೋಟೆಲ್​ಗಳ ರೂಂಗಳ ಬೆಲೆಯೂ ಗಗನಕ್ಕೇರಿದೆ.

ಹಾಗೆಯೇ ಜಾಹೀರಾತು ದರಗಳು ಸಹ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಾಹೀರಾತು ಸ್ಲಾಟ್‌ಗಳನ್ನು ಪಡೆಯಲು ಕಂಪನಿಗಳು ಭಾರಿ ಹಣವನ್ನು ಪಾವತಿಸುತ್ತಿವೆ. ವರದಿಯ ಪ್ರಕಾರ, ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ 10 ಸೆಕೆಂಡುಗಳ ಟಿವಿ ಜಾಹೀರಾತು ಸ್ಲಾಟ್‌ಗೆ 30 ರಿಂದ 40 ಲಕ್ಷ ರೂ.ಗಳ ದರವನ್ನು ವಿಧಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಹೀರಾತು ಸ್ಲಾಟ್‌ಗಳ ಬೆಲೆ ಶೇಕಡಾ 20 ರಿಂದ 25 ರಷ್ಟು ಹೆಚ್ಚಾಗಿದೆ. ಬ್ರಾಡ್‌ಕಾಸ್ಟರ್ ಜಿಯೋಸ್ಟಾರ್ ಇಡೀ ಪಂದ್ಯಾವಳಿಯಲ್ಲಿ ಜಾಹೀರಾತುಗಳಿಂದಲೇ ಸುಮಾರು 2000 ಕೋಟಿ ರೂ.ಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಜಾಹೀರಾತು ಸ್ಲಾಟ್ ಪಡೆಯಲು ಹೋರಾಟ

ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ಜಾಹೀರಾತು ದರಗಳು ಏರಿಕೆಯಾಗುತ್ತಿವೆ. ಇಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 15 ರಿಂದ 20 ಲಕ್ಷ ರೂ.ಗಳನ್ನು ತಲುಪಿದೆ. ಆಟೋಮೊಬೈಲ್, ಎಫ್‌ಎನ್‌ಸಿಜಿ, ಹಣಕಾಸು, ವಿಮೆ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಟಿ20 ವಿಶ್ವಕಪ್‌ನಲ್ಲಿ ಜಾಹೀರಾತು ನೀಡುವ ಕಂಪನಿಗಳಲ್ಲಿ ಎಮಿರೇಟ್ಸ್, ಅಮುಲ್, ಓಪನ್ ಎಐ, ಹುಂಡೈ, ಮಹೀಂದ್ರಾ & ಮಹೀಂದ್ರಾ ಮತ್ತು ಬ್ರಿಟಾನಿಯಾ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳು ಸೇರಿವೆ.

ವಿಮಾನ ಟಿಕೆಟ್​ಗಳು ದುಬಾರಿ

ಭಾರತದಿಂದ ಕೊಲಂಬೊಗೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ EaseMyTrip ಪ್ರಕಾರ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ರೌಂಡ್ ಟ್ರಿಪ್ ವಿಮಾನ ದರಗಳು ಶೇಕಡಾ 45 ರಿಂದ 50 ರಷ್ಟು ಹೆಚ್ಚಾಗಿದೆ. ಫೆಬ್ರವರಿ 15 ರ ವಾರಾಂತ್ಯದ ಕೊಲಂಬೊಗೆ ಬುಕಿಂಗ್‌ಗಳು ಮೂರು ದಿನಗಳಲ್ಲಿ ದ್ವಿಗುಣಗೊಂಡಿವೆ ಎಂದು ಮೇಕ್‌ಮೈಟ್ರಿಪ್ ಸ್ಪಷ್ಟಪಡಿಸಿದೆ. ಕ್ಲಿಯರ್ ಟ್ರಿಪ್ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದಿಂದಾಗಿ ಕೊಲಂಬೊಗೆ ಬುಕಿಂಗ್‌ಗಳು ಶೇಕಡಾ 65 ರಷ್ಟು ಹೆಚ್ಚಾಗಿದೆ.

IND vs PAK: ಸೂಪರ್ ಸಂಡೇಯಂದು ಭಾರತ-ಪಾಕ್ ನಡುವೆ ಎರಡೆರಡು ಪಂದ್ಯ

ಹೋಟೆಲ್ ಬೆಲೆ ಗಗನಕ್ಕೇರಿದೆ

ಕೊಲಂಬೊದಲ್ಲಿ ಹೋಟೆಲ್ ರೂಮ್​ಗಳ ಬೆಲೆಗಳು ಕೂಡ ಗಗನಕ್ಕೇರಿವೆ. ನಗರದ ಮಧ್ಯಭಾಗದಲ್ಲಿರುವ ನಾಲ್ಕು ಮತ್ತು ಐದು ಸ್ಟಾರ್ ಹೋಟೆಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಪ್ರೀಮಿಯಂ ಹೋಟೆಲ್ ಕೊಠಡಿಗಳ ದರವೂ ಶೇಕಡಾ 20 ರಿಂದ 25 ರಷ್ಟು ದುಬಾರಿಯಾಗಿವೆ. ಪಂದ್ಯದ ಕಾರಣದಿಂದಾಗಿ ಕೊಲಂಬೊದ ಎಲ್ಲಾ ಹೋಟೆಲ್‌ಗಳು ಹೌಸ್‌ಫುಲ್ ಆಗಿವೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:53 pm, Sat, 14 February 26

Source link

Indian Army Recruitment: ಭಾರತೀಯ ಸೇನೆಯಲ್ಲಿ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ – Kannada News | Agnipath 2026: Indian Army Agniveer Recruitment Notification Out! Apply Now, Eligibility, CEE Dates

ಭಾರತೀಯ ಸೇನೆಯು 2026ರ ಅಗ್ನಿವೀರ್ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರಿಗೆ ಇದು ಮಹತ್ವದ ಅವಕಾಶವಾಗಿದೆ. ಫೆಬ್ರವರಿ 13ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 1ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಅಗ್ನಿವೀರ್ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಜೂನ್ 1ರಿಂದ ಜೂನ್ 15ರ ನಡುವೆ ನಡೆಯಲಿದೆ.

ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ವಿಭಿನ್ನವಾಗಿರುತ್ತದೆ. ಅಗ್ನಿವೀರ್ ಜನರಲ್ ಡ್ಯೂಟಿ (GD) ಹುದ್ದೆಗೆ 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಒಟ್ಟು ಶೇ.45 ಅಂಕ ಅಗತ್ಯವಿದೆ. ಅಗ್ನಿವೀರ್ ತಾಂತ್ರಿಕ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಇರಬೇಕು. ಕ್ಲರ್ಕ್/ಸ್ಟೋರ್‌ಕೀಪರ್ ಹುದ್ದೆಗೆ 12ನೇ ತರಗತಿಯಲ್ಲಿ ಒಟ್ಟು ಶೇ.60 ಅಂಕಗಳೊಂದಿಗೆ ಇಂಗ್ಲಿಷ್ ಮತ್ತು ಗಣಿತ ಅಥವಾ ಅಕೌಂಟ್ಸ್‌ನಲ್ಲಿ 50 ಅಂಕ ಅಗತ್ಯವಿದೆ. ಟ್ರೇಡ್ಸ್‌ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಶೇ.33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಮಹಿಳಾ ಮಿಲಿಟರಿ ಪೊಲೀಸ್ (GD) ಹುದ್ದೆಗೆ 10ನೇ ತರಗತಿಯಲ್ಲಿ ಶೇ.45 ಅಂಕ ಅಗತ್ಯವಿದೆ. ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಇರಬೇಕು. ಸಿಪಾಯಿ ಫಾರ್ಮಾ ಹುದ್ದೆಗೆ ಡಿ ಫಾರ್ಮಾ (ಶೇ.55) ಅಥವಾ ಬಿ ಫಾರ್ಮಾ (ಶೇ.50) ಹಾಗೂ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಅಗತ್ಯ. ಜೆಸಿಒ ಧಾರ್ಮಿಕ ಶಿಕ್ಷಕ ಹುದ್ದೆಗೆ ಸಂಬಂಧಿತ ಧರ್ಮ ಹಾಗೂ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ಅಗತ್ಯವಿದೆ.

ವಯೋಮಿತಿ:

ಅಗ್ನಿವೀರ್ ಜಿಡಿ, ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ಹುದ್ದೆಗಳಿಗೆ 17.5 ರಿಂದ 22 ವರ್ಷ ವಯೋಮಿತಿ ನಿಗದಿಯಾಗಿದೆ. ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 23 ವರ್ಷಗಳು. ಸಿಪಾಯಿ ಫಾರ್ಮಾ ಹುದ್ದೆಗೆ 19ರಿಂದ 25 ವರ್ಷ, ಜೆಸಿಒ ಧಾರ್ಮಿಕ ಶಿಕ್ಷಕ ಹುದ್ದೆಗೆ 25ರಿಂದ 34 ವರ್ಷ ವಯಸ್ಸಿನ ಮಿತಿ ಇದೆ. ವಯಸ್ಸನ್ನು ಜುಲೈ 1, 2027ರಂತೆ ಲೆಕ್ಕ ಹಾಕಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವು ಹಂತಗಳನ್ನು ಒಳಗೊಂಡಿದೆ. ಮೊದಲು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಡೆಯುತ್ತದೆ. ಬಳಿಕ ದೈಹಿಕ ಸದೃಢತಾ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ಸಾಮಾನ್ಯ ಹುದ್ದೆಗಳಿಗೆ ಕನಿಷ್ಠ ಎತ್ತರ 170 ಸೆಂ.ಮೀ ಅಗತ್ಯವಿದ್ದು, ಕ್ಲರ್ಕ್ ಹುದ್ದೆಗಳಿಗೆ 162 ಸೆಂ.ಮೀ ಎತ್ತರ ಬೇಕಾಗುತ್ತದೆ. ಎದೆಯ ಗಾತ್ರ 77 ಸೆಂ.ಮೀ ಮತ್ತು ಕನಿಷ್ಠ 5 ಸೆಂ.ಮೀ ವಿಸ್ತರಣೆ ಇರಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಅಗತ್ಯ. ದೇಶ ಸೇವೆ ಮಾಡುವ ಕನಸು ಹೊಂದಿರುವ ಯುವಕರಿಗೆ ಅಗ್ನಿವೀರ್ ನೇಮಕಾತಿ ಒಂದು ಮಹತ್ವದ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾವೇರಿ: ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ – Kannada News | Haveri: Woman missing case; SP reveals explosive information

ಹಾವೇರಿ, ಫೆಬ್ರವರಿ 14: ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ಮದುವೆಗೆ ಬಂದಿದ್ದ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ ಪ್ರಿಯಾಂಕಾ (28) ನಾಪತ್ತೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಿಯಾಂಕಾ ನಾಪತ್ತೆಯಾದ ಸ್ಥಳದಲ್ಲಿ ಅವರ ಬಟ್ಟೆಗಳು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿವೆ. ಸದ್ಯ ಪೊಲೀಸರು ಪ್ರಸ್ತುತ ಎಲ್ಲಾ ತಾಂತ್ರಿಕ ವಿವರಗಳನ್ನು ಕಲೆಹಾಕುತ್ತಿದ್ದು, ಪ್ರಿಯಾಂಕಾರನ್ನು ಪತ್ತೆ ಹಚ್ಚಲು ವ್ಯಾಪಕ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಎಸ್​​ಪಿ ಶುಭಾನ್ವಿತಾ ಹೇಳಿದ್ದಿಷ್ಟು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | PM Modi Inaugurated Rs 3030 Crore Kumar Bhaskar Varma Setu over Brahmaputra River In Guwahati

ಗುವಾಹಟಿ, ಫೆಬ್ರವರಿ 14: ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿರುವ 6 ಪಥಗಳ ಎಕ್ಸ್‌ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಸೇತುವೆಯಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ (PM Modi in Assam) ಇಂದು ಉದ್ಘಾಟಿಸಿದರು. ಸುಮಾರು 3,030 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ ಗುವಾಹಟಿಯನ್ನು ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಇದು ಪ್ರಯಾಣದ ಸಮಯವನ್ನು 60 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಅಂದರೆ 7 ನಿಮಿಷಗಳಿಗೆ ಪ್ರಯಾಣದ ಸಮಯವನ್ನು ಇಳಿಸಿದೆ. ಈ ಸೇತುವೆಯು ಈಶಾನ್ಯ ಭಾರತದಲ್ಲಿ ಮೊದಲ ಎಕ್ಸ್‌ಟ್ರಾಡೋಸ್ಡ್ ರಚನೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಮಕ್ಕಳಿಗೆ ‘ಸರ್ಪ್ರೈಸ್’ ಕೊಟ್ಟ ಸಚಿವ ಜಮೀರ್: ಸ್ವಂತ ಖರ್ಚಿನಲ್ಲಿ 60 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ರೈಡ್ – Kannada News | Hampi Utsav Joy: 60 Govt School Kids Experience Helicopter Ride, Thanks to Minister

ಬಳ್ಳಾರಿ, ಫೆ.14: ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿದೆ. ದೂರದಿಂದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಪುಟಾಣಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಕಾಶದಲ್ಲಿ ಹಾರಾಡುವ ಅವಕಾಶ ಮಾಡಿಕೊಡುವ ಮೂಲಕ ದೊಡ್ಡ ‘ಸರ್ಪ್ರೈಸ್’ ನೀಡಿದ್ದಾರೆ. ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ನೋಡಲು ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳು ಕುತೂಹಲದಿಂದ ಬಂದಿದ್ದರು.ಈ ವೇಳೆ ಸ್ಥಳದಲ್ಲಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು ಮಕ್ಕಳ ಬಳಿ ತೆರಳಿ ಮಾತುಕತೆ ನಡೆಸಿದರು. “ನಿಮಗೂ ಹೆಲಿಕಾಪ್ಟರ್ ಹತ್ತಬೇಕಾ?” ಎಂದು ಸಚಿವರು ಕೇಳಿದ ತಕ್ಷಣ, ಮಕ್ಕಳು ಸಂಭ್ರಮದಿಂದ “ಹೌದು ಸರ್” ಎಂದು ಕೂಗಿದರು. ಮಕ್ಕಳ ಆಸೆಯನ್ನು ಕಂಡ ಸಚಿವರು ವಿಳಂಬ ಮಾಡದೆ, ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೀವನದಲ್ಲಿ ಒಮ್ಮೆಯಾದರೂ ವಿಮಾನ ಅಥವಾ ಹೆಲಿಕಾಪ್ಟರ್ ಏರಬೇಕು ಎಂಬ ಕನಸು ಹೊತ್ತಿದ್ದ ಬಡ ಕುಟುಂಬದ ಮಕ್ಕಳು ಆಕಾಶಕ್ಕೆ ಹಾರುತ್ತಿದ್ದಂತೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version